ಲೈಫ್ ಸ್ಟೈಲ್
ಪರಿಸರ ಪಾಠ
ಅಂದು ಮುಂಜಾನೆ ಬೇಗನೆ ಎದ್ದು , ಪರಿಸರ ಅಧ್ಯಯನ ಶಿಬಿರಕ್ಕೆ ಹೋಗಲು ತಯಾರಾದೆ.ಕಳೆದ ಶೈಕ್ಷಣಿಕ ಸಾಲಿನಲ್ಲಿ ನಮ್ಮ ಕಾಲೇಜಿನ ವತಿಯಿಂದ ನಮ್ಮನ್ನು ಬಂಡಿಪುರ ಅರಣ್ಯಕ್ಕೆ ಕರೆದೊಯ್ದಿದ್ದರು . ಈ ಭಾರಿ ಭದ್ರಾ ಅಭಯಾರಣ್ಯಕ್ಕೆ ಹೊರಟಿದ್ದೆವು. ಅಂದು ಮಂಜಿನ ಬೆಳಗ್ಗೆ ಸುಮಾರು ಒಂದು ತಾಸು ನಗರದ ಬೀದಿ ಬೀದಿಗಳಲ್ಲಿ ನನ್ನ ಸ್ನೇಹಿತರು ತಂಗಿದ್ದ ತಾಣವನ್ನೇ ಹುಡುಕಿದೆ. ಹಲವು ಕಟ್ಟಡಗಳ ನಡುವೆ ಅವರಿದ್ದ ಕಟ್ಟಡ ಮರೆಯಾಗಿತ್ತು.
ಹೇಗೋ ನಮ್ಮ ವಿಭಾಗದ ಮೇಷ್ಟ್ರಿಗೆ ಕರೆ ಮಾಡಿ ಶಿಬಿರಕ್ಕೆ ಹೋಗಲೆಂದು ಹೊರಟ್ಟಿದ್ದ ಬಸ್ ಬಳಿ ತಲುಪಿದೆ. ಸಮಯ ಐದಕ್ಕೆ ಸರಿಯಾಗಿ ಹಾಸನದಿಂದ ಭದ್ರಾ ಅಭಯಾರಣ್ಯಕ್ಕೆ ನಮ್ಮ ಬಂಡಿ ಸಾಗಿತು. ಇನ್ನು ಚಂದಿರ ಸರಿದಿರದ ಕಾರಣ ನಾವೆಲ್ಲರೂ ನಿದ್ದೆಗೆ ಜಾರಿದೆವು. ದಾರಿ ಹರಿದಂತೆ ಪಯಣದ ಹುಮ್ಮಸ್ಸಿಗಾಗಿ ಡಿ.ಜೆ. ಹಾಡಿಗೆ ಹೆಜ್ಜೆ ಹಾಕ ತೊಡಗಿದೆವು., ಸಮಯ-ಹಾದಿ ಕಳದದ್ದೆ ತಿಳಿಯಲಿಲ್ಲ….!ಸುಮಾರು ಒಂಬತ್ತು ಮೂವತಕ್ಕೆ ಸರಿಯಾಗಿ ಲಕ್ಕವಳ್ಳಿ ತಲುಪಿದೆವು .
ಅರಣ್ಯಕ್ಕೆ ಹೋದಾಕ್ಷಣ ನಮ್ಮೊಳಗೆ ಮೌನ ಆವರಿಸಿತು. ಪರಿಸರದ ಬಗ್ಗೆ , ಕುತೂಹಲ , ಏಕಾಗ್ರತೆ ಹೆಚ್ಚಾಯಿತು, ನಾವೆಲ್ಲರೂ ನಮ್ಮ ಜಂಗಮವಾಣಿಗಳನ್ನು ಬಂದ್ ಮಾಡಿ ಶಿಬಿರದ ಉದ್ಘಾಟನಾ ಕಾರ್ಯಕ್ರದಲ್ಲಿ ಭಾಗಿಯಾದೆವು . ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದು ಸರ್ವೆ ಸಾಮಾನ್ಯ ಅದೇ ನೈಜ್ಯ ಶಾಲೆಯಾದ ಪರಿಸರದೊಂದಿಗೆ ಕಲಿಯುವುದು ಸಾಕಷ್ಟಿದೆ ಎಂಬುದು ನನಗರಿವಾಯಿತು. ಅಲ್ಲಿನ ಸ್ಥಳೀಯ ಪರಿಸರ ತಜ್ಞರೊಬ್ಬರು ಶಿಬಿರವನ್ನು ಉದ್ಘಾಟಿಸಿ ಭದ್ರಾ ಅಭಯಾರಣ್ಯದಲ್ಲಿರುವ ಸಸ್ಯ ಸಂಕುಲದ ಬಗ್ಗೆ ಪರಿಚಯಿಸಿದರು. ವಿಧ ವಿಧ ಬಗೆಯ ಕೀಟ , ಪ್ರಾಣಿ , ಪಕ್ಷಿ , ಹೂಗಳ ಬಗ್ಗೆ ಮಾಹಿತಿ ನೀಡಿದರು. ಬರೀ ಪಠ್ಯಕ್ರಮಕ್ಕೆ ಸೀಮಿತವಾಗಿ ಕಲಿತುತ್ತಿರುವ ನಮಗೆ ಪಠ್ಯೇತ್ತರ ಪಾಠಗಳನ್ನು ಆಲಿಸುವುದು ಬಹಳ ಹಿತಕರವೆನ್ನಿಸಿತು.
ನಂತರ ಅರಣ್ಯದ ವೈಶಿಷ್ಟ್ಯತೆಯ ಕುರಿತು ವಿಡಿಯೋ ತೋರಿಸುತ್ತಾ ಸಿಗ್ನೇಚರ್ ಎಂಬ ಜೇಡರ ಹುಳಿವಿನ ಬಗ್ಗೆ ವಿವರಿಸಿದರು. ಈ ಜೇಡ ಬಲೆಯಲ್ಲಿ ಒಂದು ರೀತಿಯ ಬಿಳಿ ಗೆರೆ ಹೆಣೆದಿರುತ್ತದೆ ಎಂದು ತಿಳಿಸಿದರು. ಅದಾದ ಮೇಲೆ ಹೀಗೆ ಸಫಾರಿ ಹೋಗಲು ಹೊರಡುವ ಮುನ್ನ ಅತ್ತಿತ್ತ ಸುತ್ತಾಡುತ್ತಾ ಇದ್ದಾಗ ಅಲ್ಲಿಯೇ ಲೈಟು ಕಂಬಕ್ಕೆ ಬಲೆಯೊಂದು ಹೆಣೆದಿತ್ತು . ಅದು ತಜ್ಞರು ವಿವರಿಸಿದ ಸಿಗ್ನೇಚರ್ ಜೇಡ ಒಂದು ರೀತಿಯ ಅಪರೂಪದ ಕೀಟವಾಗಿತ್ತು.ಅದರ ವೈಶಿಷ್ಟ್ಯತೆ ಹಾಗು ಕುಶಲತೆಯನ್ನು ಕಂಡು ಅಚ್ಚರಿಯಾಯಿತು.
ನಮ್ಮನ್ನು ಸಫಾರಿ ಕರೆದುಕೊಂಡು ಹೋದರು. ಸಫಾರಿಯಲ್ಲಿ ಮೊದಮೊದಲು ಖಾಲಿ ಕಾಡು ಕಾಣಿಸಿತಾದರೂ ಮುಂದೆ ದಾರಿ ಸವೆದಂತೆ ಲಂಗೂರ್, ಸಾಂಬಾರ್, ಕಾಡು ಎಮ್ಮೆ- ಕೋಣ , ಗುಳ್ಳೇ ನರಿ , ವಿಶಿಷ್ಟ ಕೆಂಪು ಬಾಲದ ಅಳಿಲು , ಉಲಿವ ನವಿಲು , ಉಡ, ಕಾಡು ಹಂದಿ ಎಲ್ಲವೂ ನೋಡಲು ಸಿಕ್ಕವು. ಆ ರಾತ್ರಿ ಸಫಾರಿಯಿಂದ ವಾಪ್ಪಸ್ಸಾದಾಗ ಮೇಷ್ಟ್ರು ಹೇಳಿದ ಮಾತಿನಂತೆ ಇಡೀ ರಾತ್ರಿ ಅನುಭವ ಲೇಖನ ವನ್ನು ಬರೆಯುತ್ತಿದ್ದವು.ಅಲ್ಲಿನ ಚಳಿಗೆ ನಿದ್ದೆಗೆ ಜಾರಿದ್ದೆ ಅರಿವಾಗಲಿಲ್ಲ. ಬೆಳಗಾದಾಗ ಭದ್ರಾ ನದಿಯ ಹಿನ್ನೋಟ ನಮ್ಮೆಲ್ಲರ ಕಣ್ ಸೆಳೆಯಿತು . ಬಂದ್ ಮಾಡಿದ್ದ ಮೊಬೈಲ್ ಗಳ ತೆಗೆದುಕೊಂಡು ಸುಂದರ ಪಟಗಳ ತೆಗೆಯುವಲ್ಲಿ-ತೆಗೆದುಕೊಳ್ಲುವಲ್ಲಿ ನಿರತರಾದೆವು . ಮುಂದೆ ನಮ್ಮ ಪಯಣ ಹತ್ತಿರದ ಸಕ್ಕರೆಬೈಲು ಆನೆ ಶಿಬಿರಕ್ಕೆ ಭೇಟಿ ನೀಡಿದೆವು . ಅಲ್ಲಿ ಆನೆಗಳಿಗೆ ತಾಲೀಮು ಮಾಡುತ್ತಿದ್ದದ್ದನ್ನು ಹತ್ತಿರದಿಂದ ಗಮನಿಸಿದೆವು.
ಮಾವುತರ ಆದೇಶದಂತೆ ಆನೆಗಳು ಶಿಸ್ತು ಭದ್ದವಾಗಿ ವರ್ತಿಸುತ್ತಿದ್ದವು, ಮಕ್ಕಳಂತೆ ಚೆಂಡಾಟ ಆಡುತ್ತಾ, ಪ್ರವಾಸಿಗರಿಗೆ ಸೊಂಡಿಲಲ್ಲಿ ನಮಿಸುತ್ತಾ ಲವಲವಿಕೆಯಿಂದ ಇದ್ದವು. ಮನುಷ್ಯನ ದುರಾಸೆಯಿಂದಾಗಿಯೇ ಎಷ್ಟೋ ಕಾಡು ನಾಶವಾಗುತ್ತದೆ. ಪ್ರಾಣಿಗಳು ನಾಡಿಗೆ ಬಂದು ದಾಳಿ ಮಾಡಲು ಕೆಲವೊಮ್ಮೆ ಮಾನವನೇ ಕಾರಣಕರ್ತರಾಗಿದ್ದಾನೆ. ಇಂತಹ ವಿಚಾರಗಳನ್ನು ನಾವೂ ಪರಿಸರದೊಳಗೆ ಪರಿಸರ ಜೀವಿಯಾದಾಗ ಮಾತ್ರ ಅರಿವಾಗುತ್ತದೆ ಹೊರತು ಕಾಂಕ್ರೀಟ್ ಕಾಡೊಳಗೆ ಬಾವಿ ಕಪ್ಪೆಗಳಂತೆ ಇದ್ದರೆ ಪ್ರಕೃತಿಯ ಬಗ್ಗೆ ಕಿಂಚಿತ್ತು ತಿಳಿಯಲಾಗುವುದಿಲ್ಲ.
ಸಕ್ಕರೆಬೈಲಿನಲ್ಲಿ ಸಂವೇದನೀಯ ವಿಚಾರಗಳು ಮಸ್ತಕದಲ್ಲಿ ಮೂಡಿದವು. ಮಧ್ಯಾಹ್ನ ನಮ್ಮ ನಾಡಿನ ಹೆಮ್ಮೆಯ ಕವಿ ಮನೆಗೆ (ಕುಪ್ಪಳಿಯ ಕವಿಶೈಲಕ್ಕೆ) ಭೇಟಿ ನೀಡಿದೆವು . ಮನೆಯಲ್ಲಿ ಹೆಜ್ಜೆ ಹಾಕುತ್ತಾ ಹೋದಂತೆ ಪುರಾತನ ಬದುಕಿನ ಶೈಲಿಯ ಬಗ್ಗೆ ಕುತೂಹಲ ಮೂಡಿತು. ಹೇಮಾವತಿ ಅಮ್ಮನವರ ಅಡುಗೆ ಮನೆಯ ಸಾಮಗ್ರಿಗಳನ್ನು ಕಂಡು ಅವರು ಪಡುತ್ತಿದ್ದ ಶ್ರಮ ಕಾಯಕ ಕಣ್ಮುಂದೆ ಗೋಚರಿಸಿತು. ಅಂದಿನ ಬದುಕಿನ ಶೈಲಿ , ಸಂಸ್ಕøತಿಯನ್ನು ಗಮನಿಸಿ ಕನಿಷ್ಟ ಪದ್ಧತಿ, ಬದುಕಿನ ಅಚ್ಚುಕಟ್ಟುತನವನ್ನು ಅಳವಡಿಸಿಕೊಳ್ಳಬೇಕಿನಿಸಿತು. ನಂತರ ಪ್ರವಾಸಿಗರ ಅನಿಸಿಕೆ ಪುಸ್ತಕದಲ್ಲಿ ಕವಿಮನೆ ನನ್ನ ಕನಸು ಎಂದು ಬರೆದೆ. ತೇಜಸ್ವಿಯವರ ಸಮಾಧಿಯ ಬಳಿ ಹೋಗುವ ಮುನ್ನ ಕವಿ ಶೈಲದ ಗುಡ್ಡದಲ್ಲಿ ಕುಳಿತು ಕುವೆಂಪುರವರ ಒಂದೆರಡು ಭಾವಗೀತೆಗಳನ್ನು ಧ್ಯಾನಸ್ತಳಾಗಿ ಹಾಡಿದೆ. ಮನಸ್ಸಿಗೆ ನೆಮ್ಮದಿಯಾಯಿತು, ಮನ ನಿರಾಳವಾಯಿತು.
ತೇಜಸ್ವಿಯವರು ಗತಿಸಿದ ದಿನ ನಾನು ಚಿಕ್ಕವಳಿದ್ದೆ ನನ್ನಪ್ಪ(ಎನ್ಕೆ),ಅಪ್ಪನ ಸ್ನೇಹಿತರಾದ ಎಸ್. ಗಂಗಾಧರಯ್ಯ ಮತ್ತು ಇನ್ನಿತ್ತರ ಜೊತೆ ಅವರ ಕೊನೆ ಭಾರಿ ನೋಡಲು ಹೋಗಿದ್ದೆವು . ಅದು ಮುಸುಕು ಮುಸುಕು ನೆನಪು ಅದಾದ ಬಳಿಕ ಅವರ ಸಮಾಧಿಯ ನೋಡುವ ಅವಕಾಶ ಒದಗಿರಲಿಲ್ಲ…..ಜಾತಿ – ಧರ್ಮವ ಮೀರಿದ ಮನುಜರಾಗಿದ್ದ ತೇಜಸ್ವಿಯವರು ಪ್ರಕೃತಿಯ ಒಡಲಿನಲ್ಲಿ ದೀರ್ಘಕಾಲ ವಿಶ್ರಮಿಸುತ್ತಿರುವುದ ಕಂಡ ಒಂದು ರೀತಿಯ ಸಾತ್ವಿಕ ಭಾವ ಮೂಡಿತು. ಬದುಕಿದರೆ
ಕುವೆಂಪು,ತೇಜಸ್ವಿಯವರಂತೆ ಆದರ್ಶ ಬದುಕನ್ನು ಜೀವಿಸಬೇಕೆಂದು ನಿರ್ಧರಿಸಿದೆ.ಮಾನವ ನಿರ್ಮಿತ ಕಟ್ಟುಪಾಡುಗಳನ್ನು ಮೀರಿ ನಿಷ್ಕಲ್ಮಶ ಮನಸ್ಸಿನಿಂದ ಇರುವ ಕಾಲ ಒಳಿತು ಮಾಡುವತ್ತ ಸಾಗೋಣ ಎನಿಸಿತು.
-ಸಂಘಮಿತ್ರೆ ಹೆಚ್.ಎಸ್.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ರಿಲೀಸ್ಗೂ ಮುನ್ನ ಧರ್ಮಸ್ಥಳದತ್ತ ರಾಕಿಂಗ್ ಸ್ಟಾರ್ ಯಶ್; ‘ಟಾಕ್ಸಿಕ್’ ಗೆಲುವಿಗಾಗಿ ವಿಶೇಷ ಪೂಜೆ
ಚೆನ್ನೈ ಪ್ರೀ-ರಿಲೀಸ್ ಕಾರ್ಯಕ್ರಮದ ಬಳಿಕ ನೇರವಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಯಶ್; ಕೆಜಿಎಫ್-2 ಬಳಿಕ ಮತ್ತೊಮ್ಮೆ ಹಳೆಯ ಸಂಪ್ರದಾಯ ಮುಂದುವರಿಕೆ
- ಟಾಕ್ಸಿಕ್ ರಿಲೀಸ್ಗೂ ಮುನ್ನ ಧರ್ಮಸ್ಥಳದಲ್ಲಿ ಯಶ್!
- ಮಂಜುನಾಥನ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ
ಸುದ್ದಿದಿನ,ಮಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 26ರಂದು ಚಿತ್ರ ತೆರೆಗೆ ಬರಲಿದ್ದು, ಬಿಡುಗಡೆಗೂ ಮುನ್ನ ಯಶ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಿನ್ನೆ ಚೆನ್ನೈನಲ್ಲಿ ನಡೆದ ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ಕಾರ್ಯಕ್ರಮ ಮುಗಿದ ಬಳಿಕ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದ್ದಾರೆ. ಇಂದು ಧರ್ಮಸ್ಥಳಕ್ಕೆ ಆಗಮಿಸಿದ ಅವರು, ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.
http://Visit : www.suddidina.com
ರಿಲೀಸ್ಗೂ ಮುನ್ನ ದೇವರ ದರ್ಶನದ ಸಂಪ್ರದಾಯ
ಸಿನಿಮಾ ಬಿಡುಗಡೆಗೂ ಮುನ್ನ ದೇವಸ್ಥಾನಗಳಿಗೆ ತೆರಳಿ ದೇವರ ಆಶೀರ್ವಾದ ಪಡೆಯುವುದು ಯಶ್ ಅವರಲ್ಲಿ ಹಿಂದಿನಿಂದಲೂ ಕಂಡುಬರುವ ಸಂಪ್ರದಾಯ. ‘ಕೆಜಿಎಫ್: ಚಾಪ್ಟರ್ 2’ ಬಿಡುಗಡೆಯ ಮುನ್ನವೂ ಯಶ್ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಇದೀಗ ‘ಟಾಕ್ಸಿಕ್’ ಬಿಡುಗಡೆಗೂ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡುವ ಮೂಲಕ ತಮ್ಮ ಆ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.
ಯಶ್ ಸೂರ್ಯ ದೇವಸ್ಥಾನಕ್ಕೂ ಭೇಟಿ ನೀಡಿ ಹರಕೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿಯೂ ಇದೆ. ಹೀಗಾಗಿ ಸಿನಿಮಾ ಬಿಡುಗಡೆಗೂ ಮುನ್ನ ಯಶ್ ಅವರ ದೇವಸ್ಥಾನ ಭೇಟಿ ಅಭಿಮಾನಿಗಳ ಗಮನ ಸೆಳೆದಿದೆ.
ಟಾಕ್ಸಿಕ್ ಮೇಲೆ ಭಾರಿ ನಿರೀಕ್ಷೆ
ಗೀತು ಮೋಹನ್ದಾಸ್ ನಿರ್ದೇಶನದ ‘ಟಾಕ್ಸಿಕ್’ ಪ್ಯಾನ್ ಇಂಡಿಯಾ ಆಕ್ಷನ್ ಥ್ರಿಲ್ಲರ್ ಆಗಿದ್ದು, ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡಿದೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೂ ಚಿತ್ರ ಡಬ್ ಆಗಿದೆ.
ಯಶ್ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ನಯನತಾರಾ ಸೇರಿದಂತೆ ಬಹುಭಾಷಾ ತಾರೆಯರ ದೊಡ್ಡ ಬಳಗವೇ ಇದೆ. ಹೀಗಾಗಿ ಕನ್ನಡ ಮಾತ್ರವಲ್ಲದೆ ದಕ್ಷಿಣ ಹಾಗೂ ಉತ್ತರ ಭಾರತದ ಮಾರುಕಟ್ಟೆಗಳಲ್ಲೂ ಚಿತ್ರದ ಮೇಲೆ ಭಾರಿ ನಿರೀಕ್ಷೆ ಮೂಡಿದೆ.
ಬೆಂಗಳೂರಿನಲ್ಲಿ ಟಿಕೆಟ್ ದರಕ್ಕೆ ಶಾಕ್!
‘ಟಾಕ್ಸಿಕ್’ ಅಡ್ವಾನ್ಸ್ ಬುಕ್ಕಿಂಗ್ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಕೆಲವು ಪ್ರೀಮಿಯಂ ಥಿಯೇಟರ್ಗಳಲ್ಲಿ ಟಿಕೆಟ್ ದರ ₹3,600ರ ಗಡಿ ತಲುಪಿರುವುದು ಗಮನ ಸೆಳೆದಿದೆ. ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ರೆಕ್ಲೈನರ್ ಟಿಕೆಟ್ಗಳು ₹700ರಿಂದ ₹1,600ರವರೆಗೆ ಲಭ್ಯವಿದ್ದರೆ, ಕೆಲವು ಪ್ರೀಮಿಯಂ ಸ್ಕ್ರೀನ್ಗಳಲ್ಲಿ ದರ ಇನ್ನಷ್ಟು ಹೆಚ್ಚಾಗಿದೆ.
ಸಾಕ್ನಿಲ್ಕ್ ವರದಿಯ ಪ್ರಕಾರ, ಅಡ್ವಾನ್ಸ್ ಬುಕ್ಕಿಂಗ್ ಆರಂಭವಾದ ಎರಡು ದಿನಗಳಲ್ಲಿ ‘ಟಾಕ್ಸಿಕ್’ ಸುಮಾರು ₹18.73 ಕೋಟಿ ಮುಂಗಡ ಬುಕ್ಕಿಂಗ್ ದಾಖಲಿಸಿದೆ ಎನ್ನಲಾಗಿದೆ. ಟಿಕೆಟ್ ದರ ಏರಿಕೆಯ ನಡುವೆಯೂ ಬುಕ್ಕಿಂಗ್ ವೇಗ ಕುಂದಿಲ್ಲ.
ರಿಲೀಸ್ಗೂ ಮುನ್ನ ಧರ್ಮಸ್ಥಳದತ್ತ ರಾಕಿಂಗ್ ಸ್ಟಾರ್ ಯಶ್; ‘ಟಾಕ್ಸಿಕ್’ ಗೆಲುವಿಗಾಗಿ ವಿಶೇಷ ಪೂಜೆ
ನಾಳೆ ತೆರೆಗೆ ‘ಟಾಕ್ಸಿಕ್’
ಯಶ್ ಮತ್ತು ಗೀತು ಮೋಹನ್ದಾಸ್ ಕಥೆ ಬರೆದಿರುವ ಈ ಚಿತ್ರವು ಭಿನ್ನ ಕಥಾಹಂದರ ಹಾಗೂ ಭರ್ಜರಿ ಆಕ್ಷನ್ ಮೂಲಕ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆ ಮೂಡಿಸಿದೆ. ಈಗ ಧರ್ಮಸ್ಥಳದ ಸನ್ನಿಧಿಯಲ್ಲಿ ಯಶ್ ಪಡೆದ ಆಶೀರ್ವಾದದ ಬೆನ್ನಲ್ಲೇ, ನಾಳೆ ‘ಟಾಕ್ಸಿಕ್’ ಬಾಕ್ಸ್ ಆಫೀಸ್ನಲ್ಲಿ ಹೇಗೆ ಸದ್ದು ಮಾಡಲಿದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ದಿನದ ಸುದ್ದಿ
₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
ರಾಜಾಜಿನಗರದಲ್ಲಿ ಬಿಡಿಎ ಭರ್ಜರಿ ಕಾರ್ಯಾಚರಣೆ: 13,000 ಚದರ ಅಡಿ ಜಾಗ ವಶಕ್ಕೆ
- 13,000 ಚದರ ಅಡಿ ಪ್ರದೇಶ ತೆರವು; ಪೊಲೀಸ್ ಭದ್ರತೆಯಲ್ಲಿ ಬಿಡಿಎ ಕಾರ್ಯಾಚರಣೆ
ನಿವೇಶನ 13 ಮತ್ತು 17ರಲ್ಲಿ ಅನಧಿಕೃತ ನಿರ್ಮಾಣ ತೆರವು; ಪೊಲೀಸ್ ಸಹಕಾರದಲ್ಲಿ ಕಾರ್ಯಾಚರಣೆ
ಸುದ್ದಿದಿನ,ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ನಿರ್ಮಾಣಗಳ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ರಾಜಾಜಿನಗರ ಬಡಾವಣೆಯ ಇಂಡಸ್ಟ್ರೀಯಲ್ ಸಬರ್ಬ್ 2ನೇ ಹಂತದಲ್ಲಿ ಮಹತ್ವದ ತೆರವು ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಸುಮಾರು ₹25 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಾಧಿಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಪೀಣ್ಯ ಗ್ರಾಮದ ಸರ್ವೆ ನಂಬರ್ 79 ಮತ್ತು 70ರಲ್ಲಿ ಬರುವ ಇಂಡಸ್ಟ್ರೀಯಲ್ ಸಬರ್ಬ್, 2ನೇ ಹಂತ, ರಾಜಾಜಿನಗರ ಬಡಾವಣೆಯ ನಿವೇಶನ ಸಂಖ್ಯೆ 13 ಮತ್ತು 17ರಲ್ಲಿ ಈ ಕಾರ್ಯಾಚರಣೆ ನಡೆದಿದೆ. ಸುಮಾರು 13,000 ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಕಟ್ಟಡ ಹಾಗೂ ನಿರ್ಮಾಣಗಳನ್ನು ತೆರವುಗೊಳಿಸಿ, ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ.
http://Visit : www.suddidina.com
ಅನಧಿಕೃತ ನಿರ್ಮಾಣಕ್ಕೆ ಬಿಡಿಎ ಬ್ರೇಕ್:
ಬಿಡಿಎಗೆ ಸೇರಿದ ಅಥವಾ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಜಾಗಗಳಲ್ಲಿ ನಿಯಮಬಾಹಿರವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ತೆರವು ಕಾರ್ಯಾಚರಣೆಯ ಬಳಿಕ ಆಸ್ತಿಯನ್ನು ಪ್ರಾಧಿಕಾರದ ನೇರ ಸುಪರ್ದಿಗೆ ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಗಳ ಸಂರಕ್ಷಣೆಗೆ ಬಿಡಿಎ ಕೈಗೊಳ್ಳುತ್ತಿರುವ ಕ್ರಮಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.
ಸುಮಾರು ₹25 ಕೋಟಿ ಮೌಲ್ಯದ ಆಸ್ತಿ ಇರುವುದರಿಂದ, ಈ ಕಾರ್ಯಾಚರಣೆ ನಗರದ ಆಸ್ತಿ ಸಂರಕ್ಷಣೆ ಹಾಗೂ ಅನಧಿಕೃತ ನಿರ್ಮಾಣಗಳ ನಿಯಂತ್ರಣದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ದೊಡ್ಡ ಪ್ರಮಾಣದ ಭೂಮಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ನಡೆಸಿದರೆ ಯಾವುದೇ ಕಾರಣಕ್ಕೂ ಅದನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಈ ಕ್ರಮ ನೀಡಿದೆ.
https://x.com/BDAOfficialGok/status/2092121239175512436?s=20
ಬಹು ಇಲಾಖೆಗಳ ಸಮನ್ವಯದಲ್ಲಿ ಕಾರ್ಯಾಚರಣೆ:
ತೆರವು ಕಾರ್ಯಾಚರಣೆಯನ್ನು ಬಿಡಿಎಯ ವಲಯ ಆಯುಕ್ತರು, ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-1, ಕಾರ್ಯನಿರತ ಆರಕ್ಷಕ ಪಡೆ, ಪಶ್ಚಿಮ ವಿಭಾಗದ ಅಭಿಯಂತರರು ಹಾಗೂ ಸರ್ವೆಯರ್ಗಳು ಒಳಗೊಂಡ ತಂಡ ಕೈಗೊಂಡಿತು. ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಅಡಚಣೆ ಉಂಟಾಗದಂತೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಸ್ಥಳ ಪರಿಶೀಲನೆ, ನಿರ್ಮಾಣ ತೆರವು ಹಾಗೂ ಜಾಗದ ಸ್ವಾಧೀನ ಪ್ರಕ್ರಿಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಪೂರ್ಣಗೊಳಿಸಿದರು. ಕಾರ್ಯಾಚರಣೆ ಬಳಿಕ ತೆರವುಗೊಳಿಸಲಾದ ಪ್ರದೇಶವನ್ನು ಬಿಡಿಎ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ನಗರದ ಭೂ ಸಂಪತ್ತಿನ ರಕ್ಷಣೆಗೆ ಕಠಿಣ ಹೆಜ್ಜೆ
ಬೆಂಗಳೂರು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಹಾಗೂ ಪ್ರಾಧಿಕಾರಕ್ಕೆ ಸೇರಿದ ಜಾಗಗಳ ಮೇಲೆ ಅಕ್ರಮ ನಿರ್ಮಾಣಗಳು ನಡೆಯದಂತೆ ನಿಗಾ ವಹಿಸುವುದು ಪ್ರಮುಖ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಕೈಗೊಂಡಿರುವ ₹25 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳುವ ಕ್ರಮ, ಅನಧಿಕೃತ ನಿರ್ಮಾಣಗಳ ವಿರುದ್ಧದ ಕಾರ್ಯಾಚರಣೆಗೆ ಮತ್ತಷ್ಟು ಬಲ ನೀಡಿದೆ.
ಬೆಂಗಳೂರು ನಗರದ ಭೂ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ಬಿಡಿಎಯ ಈ ತೆರವು ಕಾರ್ಯಾಚರಣೆ, ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶವಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳು ಮುಂದುವರಿಯುವ ಸಾಧ್ಯತೆ ಇದೆ.

ದಿನದ ಸುದ್ದಿ
ಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
‘ನನ್ನ ಖಾತಾ ನನ್ನ ಹಕ್ಕು’ ಮುಗಿದರೂ ಸಂಕಷ್ಟ ಮುಗಿಯಲಿಲ್ಲ: 7.50 ಲಕ್ಷ ಆಸ್ತಿಗಳಲ್ಲಿ ಎ-ಖಾತೆ ಸಿಕ್ಕಿದ್ದು 20 ಸಾವಿರಕ್ಕೆ ಮಾತ್ರ!
- ಗಡುವು ಮುಕ್ತಾಯ, ಇನ್ನು ಬಿ-ಖಾತೆಯಿಂದ ಎ-ಖಾತೆಗೆ 100% ಶುಲ್ಕ?
- ಶೇ.2ಕ್ಕೆ ಇಳಿದ ಶುಲ್ಕದ ಬಳಿಕ ಅರ್ಜಿ ಹೆಚ್ಚಾದರೂ, ತಾಂತ್ರಿಕ ಸಮಸ್ಯೆಯಿಂದ ಜನರಿಗೆ ಸಂಕಷ್ಟ
- 7.50 ಲಕ್ಷ ಬಿ-ಖಾತೆ ಆಸ್ತಿಗಳ ಪೈಕಿ ಕೇವಲ 90 ಸಾವಿರ ಅರ್ಜಿಗಳು, 20 ಸಾವಿರಕ್ಕಷ್ಟೇ ಎ-ಖಾತೆ ಭಾಗ್ಯ
ಸುದ್ದಿದಿನ,ಬೆಂಗಳೂರು: ‘ಮನೆ ನಮ್ಮದು, ಖಾತೆಯೂ ನಮ್ಮ ಹಕ್ಕು’ ಎಂಬ ನಿರೀಕ್ಷೆಯೊಂದಿಗೆ ಎ-ಖಾತೆ ಪಡೆಯಲು ಮುಂದಾದ ಬೆಂಗಳೂರಿನ ಸಾವಿರಾರು ಆಸ್ತಿ ಮಾಲೀಕರಿಗೆ ಇದೀಗ ನಿರಾಸೆ ಎದುರಾಗಿದೆ. ರಾಜ್ಯ ಸರ್ಕಾರದ ಆರನೇ ಗ್ಯಾರಂಟಿ ಯೋಜನೆಯ ಭಾಗವಾಗಿ ಆರಂಭಿಸಿದ್ದ ‘ನನ್ನ ಖಾತಾ ನನ್ನ ಹಕ್ಕು’ ಕಾರ್ಯಕ್ರಮದ ಗಡುವು ಮುಕ್ತಾಯಗೊಂಡಿದ್ದು, ಯೋಜನೆಯ ಅನುಷ್ಠಾನದಲ್ಲಿ ಎದುರಾದ ತಾಂತ್ರಿಕ ಸಮಸ್ಯೆ ಹಾಗೂ ಅಧಿಕಾರಿಗಳ ವಿಳಂಬದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು ನಗರದಲ್ಲಿ ಸುಮಾರು 7.50 ಲಕ್ಷ ಬಿ-ಖಾತೆ ಆಸ್ತಿಗಳಿವೆ ಎನ್ನಲಾಗಿದ್ದು, ಈ ಪೈಕಿ ಕೇವಲ 90 ಸಾವಿರ ಆಸ್ತಿ ಮಾಲೀಕರು ಮಾತ್ರ ಎ-ಖಾತೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅರ್ಜಿ ಸಲ್ಲಿಸಿದವರಿಗೂ ತಕ್ಷಣ ಪರಿಹಾರ ಸಿಗಲಿಲ್ಲ. ಅಧಿಕಾರಿಗಳ ಪ್ರಕ್ರಿಯೆ ವಿಳಂಬದಿಂದಾಗಿ ಇದುವರೆಗೆ ಕೇವಲ 20 ಸಾವಿರ ಆಸ್ತಿಗಳಿಗೆ ಮಾತ್ರ ಎ-ಖಾತೆ ಮಂಜೂರಾಗಿದೆ. ಇನ್ನೂ 60 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ.
ಶುಲ್ಕ ಕಡಿತದ ಬಳಿಕ ಹೆಚ್ಚಿದ ನಿರೀಕ್ಷೆ
ಆರಂಭದಲ್ಲಿ ಎ-ಖಾತೆ ಪಡೆಯಲು ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ಶುಲ್ಕ ವಿಧಿಸಲು ಸರ್ಕಾರ ನಿರ್ಧರಿಸಿತ್ತು. ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶುಲ್ಕವನ್ನು ಶೇ.2ಕ್ಕೆ ಇಳಿಸಲಾಯಿತು. ಶುಲ್ಕ ಕಡಿಮೆಯಾದ ಬಳಿಕ ಎ-ಖಾತೆ ಪಡೆಯುವ ಆಸಕ್ತಿಯೂ ಹೆಚ್ಚಾಯಿತು. ಆದರೆ, ಇದೇ ಸಂದರ್ಭದಲ್ಲಿ ಮತ್ತೊಂದು ಸಮಸ್ಯೆ ಎದುರಾಯಿತು. ಅರ್ಜಿ ಸಲ್ಲಿಸಲು ಬಳಸುತ್ತಿದ್ದ ಜಿಬಿಎ ವೆಬ್ಸೈಟ್ನಲ್ಲಿ ಸರ್ವರ್ ಡೌನ್, ತಾಂತ್ರಿಕ ದೋಷ ಮತ್ತು ಮೂಲಸೌಕರ್ಯ ಕೊರತೆ ಕಾಣಿಸಿಕೊಂಡಿದ್ದರಿಂದ ಅನೇಕ ಆಸ್ತಿ ಮಾಲೀಕರು ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಪರದಾಡಿದರು. ಅರ್ಜಿ ಸಲ್ಲಿಸಿದವರಲ್ಲೂ ಹಲವರ ಅರ್ಜಿಗಳು ಅಧಿಕಾರಿಗಳ ಪರಿಶೀಲನೆಗಾಗಿ ಬಾಕಿ ಉಳಿದಿವೆ.
ಗಡುವು ಮುಗಿದ ಬಳಿಕ ಶುಲ್ಕದ ಹೊರೆ?
ಈಗ ‘ನನ್ನ ಖಾತಾ ನನ್ನ ಹಕ್ಕು’ ಯೋಜನೆಯ ಗಡುವು ಮುಕ್ತಾಯಗೊಂಡಿರುವುದರಿಂದ, ಮುಂದಿನ ದಿನಗಳಲ್ಲಿ ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತಿಸಿಕೊಳ್ಳುವವರು ಪೂರ್ಣ ಪ್ರಮಾಣದ ಶೇ.100 ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಇದರಿಂದ ಈಗಾಗಲೇ ಅರ್ಜಿ ಸಲ್ಲಿಸಿ ಅಧಿಕಾರಿಗಳ ಅನುಮೋದನೆಗಾಗಿ ಕಾಯುತ್ತಿರುವ 60 ಸಾವಿರಕ್ಕೂ ಹೆಚ್ಚು ಆಸ್ತಿ ಮಾಲೀಕರಲ್ಲಿ ಆತಂಕ ಹೆಚ್ಚಾಗಿದೆ. “ಶುಲ್ಕ ವಸೂಲಿಗೆ ಸರ್ಕಾರ ತೋರಿದ ವೇಗವನ್ನು, ಜನರಿಗೆ ತಾಂತ್ರಿಕ ನೆರವು ನೀಡುವಲ್ಲಿ ತೋರಲಿಲ್ಲ” ಎಂಬ ಆಕ್ರೋಶವೂ ಕೇಳಿಬರುತ್ತಿದೆ.
ಈಗ ಎಲ್ಲರ ಕಣ್ಣು ಸರ್ಕಾರದತ್ತ ನೆಟ್ಟಿದೆ. ಗಡುವು ವಿಸ್ತರಣೆಯಾಗುತ್ತದೆಯೇ? ಬಾಕಿ ಅರ್ಜಿಗಳಿಗೆ ವಿಶೇಷ ಅವಕಾಶ ಸಿಗುತ್ತದೆಯೇ? ಅಥವಾ ಸಾವಿರಾರು ಜನರು ಶೇ.100 ಶುಲ್ಕದ ಹೊರೆ ಹೊರುವಂತಾಗುತ್ತದೆಯೇ? ಎಂಬ ಪ್ರಶ್ನೆಗಳಿಗೆ ಸರ್ಕಾರದ ಮುಂದಿನ ನಿರ್ಧಾರವೇ ಉತ್ತರ ನೀಡಬೇಕಿದೆ.

-
ದಿನದ ಸುದ್ದಿ7 days agoಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
-
ದಿನದ ಸುದ್ದಿ5 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ಅಂತರಂಗ3 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ17 hours agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ20 hours agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ
-
ದಿನದ ಸುದ್ದಿ22 hours agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ
-
ದಿನದ ಸುದ್ದಿ17 hours agoಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ
-
ದಿನದ ಸುದ್ದಿ18 hours agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ







