ದಿನದ ಸುದ್ದಿ
‘ನ್ಯೂಸ್ನೇಶನ್’ ಸಂದರ್ಶನ : ‘ಅಚ್ಛೇ ದಿನ್’ ಗೆ ತಕ್ಕ ಸಮಾರೋಪ..!
ಮೇ 11 ರಂದು, ಈ ಬಾರಿಯ ಸಾರ್ವತ್ರಿಕ ಚುನಾವಣೆಗಳ 6ನೇ ಘಟ್ಟದಲ್ಲಿ ದೇಶದ ರಾಜಧಾನಿ ದಿಲ್ಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳ ಮತದಾರರು ತಾವು ಮರುದಿನ ಯಾರಿಗೆ ಮತನೀಡಬೇಕು ಎಂದು ಯೋಚಿಸುತ್ತಿರುವ ಸಮಯದಲ್ಲಿ , ‘ನ್ಯೂಸ್ ನೇಶನ್’ ಎಂಬೊಂದು ಸುದ್ದಿ ವಾಹಿನಿ ಪ್ರಸಾರ ಮಾಡಿರುವ ಪ್ರಧಾನ ಮಂತ್ರಿಗಳ ಸಂದರ್ಶನ ಈಗ ಇಡೀ ದೇಶದ ಗಮನ ಸೆಳೆದಿದೆ-ಮುಖ್ಯವಾಗಿ ಬಾಲಾಕೋಟ್ ‘ವಾಯು ಪ್ರಹಾರ’ದ ಕೀರ್ತಿ ತನ್ನದಾಗಿಸಿಕೊಳ್ಳುವ ಭರದಲ್ಲಿ ಪ್ರಧಾನಿಗಳು ಪ್ರದರ್ಶಿಸಿದ ಮೋಡಗಳು ಮತ್ತು ರಾಡಾರ್ ಕುರಿತಂತೆ ‘ಪಂಡಿತರನ್ನು ಬೆರಗಾಗಿಸಿದ’ ತನ್ನ ‘ಕಚ್ಚಾ ಜಾಣ್ಮೆ’ಯಿಂದಾಗಿ.
ಆದರೆ ಈ ಸಂದರ್ಶನದ ಹೆಚ್ಚುಗಾರಿಕೆ ಅಷ್ಟೇ ಅಲ್ಲ, ಒಂದರ್ಥದಲ್ಲಿ, ಬಹಳ ಸಮಯದ ನಂತರ ಕೇಂದ್ರದಲ್ಲಿ, ಕೇವಲ 31% ಮತಗಳಿಂದಲೇ ಆದರೇನಂತೆ, ಸ್ಪಷ್ಟ ಬಹುಮತ ಪಡೆದ ಒಂದು ಪಕ್ಷದ ನೇತೃತ್ವದ ‘ಮಜಬೂತ್’ ಸರಕಾರದ ಐದು ವರ್ಷಗಳ ಆಳ್ವಿಕೆಯ ಒಂದು ಸಾರಾಂಶವನ್ನು ಈ ಸಂದರ್ಶನ ದೇಶದ ಮುಂದೆ ಇಟ್ಟಿದೆ ಎನ್ನಬಹುದು.
ರಾಡಾರ್ಗಳು ಮತ್ತು ಮೋಡಗಳು ಮಾತ್ರವೇ ಈ ‘ಐತಿಹಾಸಿಕ’ ಎನ್ನಬಹುದಾದ ಸಂದರ್ಶನದ ‘ಹೈಲೈಟ್’ ಅಲ್ಲ ಎಂಬುದು ಈಗ ಜನಜನಿತವಾಗಿದೆ. “ತಾವು ಹಣದ ಪರ್ಸ್ ಇಟ್ಟುಕೊಳ್ಳುತ್ತೀರಾ?” ಎಂಬ ಸಂದರ್ಶಕರುಗಳ ಅಮೋಘ ಪ್ರಶ್ನೆಯನ್ನು ಉತ್ತರಿಸುತ್ತ ಜೇಬಲ್ಲಿ ಹಣವೇ ಇಲ್ಲದಿರುವಾಗ ಪರ್ಸ್ ಏಕೆ ಎಂದರು. 2001ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿ ಸರಕಾರವನ್ನು ಸೇರುವ ವರೆಗೆ, ಅಂದರೆ ಸುಮಾರು 50ವರ್ಷ ವಯಸ್ಸಿನ ವರೆಗೆ ಅವರಿಗೆ ಏನೇನೂ ಆದಾಯವಿರಲಿಲ್ಲವಂತೆ, ಸರಕಾರಕ್ಕೆ ಬಂದಾಗಲೇ ಅಧಿಕಾರಿಗಳು ಅವರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದರಂತೆ. ಹಾಗಿದ್ದರೆ ಅದುವರೆಗೆ ಆರೆಸ್ಸೆಸ್ನ ಸಂಘಟನಾ ಕೆಲಸ ಮಾಡುತ್ತಿದ್ದ ಅವರಿಗೆ ಸಂಘಟನೆ ಏನೂ ಕೊಡುತ್ತಿರಲಿಲ್ಲವೇ ಎಂದು ಹಲವರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
1988ರಲ್ಲೇ ಅವರು ಡಿಜಿಟಲ್ ಕ್ಯಾಮರಾ ಬಳಸಿದ್ದರು, ಟಚ್ ಸ್ಕರೀನ್ ಟ್ಯಾಬ್ಲೆಟ್ ಬಳಿಸಿದ್ದರು, ಇ ಮೇಲ್ ಕೂಡ ಬಳಸುತ್ತಿದ್ದರು ಎಂಬ ಸಂಗತಿಗಳ ಮೇಲೆ ಸಂದರ್ಶನದ ವೇಳೆಯಲ್ಲಿ ಅವರು ಬೆಳಕು ಚೆಲ್ಲಿದರು. ಆ ವೇಳೆಗೆ ಇವೆಲ್ಲ ಭಾರತದಲ್ಲಿ ಬಳಕೆಗೇ ಬಂದಿರಲಿಲ್ಲ ಎಂದು ಕೆಲವು ಪರಿಣಿತರು ಹೇಳುತ್ತಿದ್ದಾರೆ. 1988ರಲ್ಲಿ ಡಿಜಿಟಲ್ ಕ್ಯಾಮರಾದ ತಂತ್ರಜ್ಞಾನ ರೂಪುಗೊಂಡಿತ್ತಷ್ಟೇ, ಅದ್ದರಿಂದ ಅಂತಹ ಕ್ಯಾಮರಾಗಳು ಎಲ್ಲೋ ಕೆಲವು ಇದ್ದು ದುಬಾರಿಯಾಗಿದ್ದವು.10-15 ಲಕ್ಷ ರೂ.ಗಳಷ್ಟು. ಇ ಮೇಲ್ ಬಳಕೆಗೆ ಬಂದದ್ದು 1990ರ ದಶಕದ ನಂತರವೇ. ಚಿಕ್ಕಾಸೂ ಜೇಬಿನಲ್ಲಿರದ ಇವರು ಅದನ್ನೆಲ್ಲ ಹೇಗೆ ಪಡೆದಿರಬಹುದು ಎಂದು ಇನ್ನು ಕೆಲವರು ಬೆರಗಾಗಿದ್ದಾರೆ.
ಬಹುಶಃ ಇವೆಲ್ಲದಕ್ಕೂ ಉತ್ತರದ ಹೊಳಹು ಸಿಕ್ಕಿದ್ದು ಸಂದರ್ಶಕರು ‘ತಾವು ಕಳೆದ ಐದು ವರ್ಷಗಳಲ್ಲಿ ಏನಾದರೂ ಬರೆದಿದ್ದೀರಾ’, ಅಂದರೆ ಕವನ ಬರೆದಿದ್ದೀರಾ ಎಂದು ಕೇಳಿದಾಗ. ಹೌದು, ಇವತ್ತಷ್ಟೇ ಒಂದು ಕವನವನ್ನು ಬರೆದಿದ್ದೇನೆ ಎಂದರು ಮಾನ್ಯ ಪ್ರಧಾನಿಗಳು. ಹಿಂದಿನ ಬಿಜೆಪಿ ಪ್ರಧಾನಿಗಳಂತೆ ಇವರೂ ಕವನ ಬರೆಯುತ್ತಾರೆ ಎಂಬುದು ಬಹಳಷ್ಟು ಮಂದಿಗೆ ಆಶ್ಚರ್ಯವಾದ್ದು ಆಗಲೇ. ಮತ್ತು ಈ ಸಂದರ್ಶನದ ನಿಜ ಚಿತ್ರದ ಆ ಹೊಳಹು ಸಿಕ್ಕಿದ್ದು ಕೂಡ ಆಗಲೇ.
ಕವನ ಓದಿ ಎಂದು ಸಂದರ್ಶಕರು ಹೇಳಿದಾಗ ಪ್ರಧಾನಿಗಳು ಅಲ್ಲಿದ್ದ ಸೇವಕರಿಂದ ತನ್ನ ಫೈಲ್ ಕೇಳಿ ಪಡೆಯುತ್ತಾರೆ, ಒಂದು ಕಾಗದವನ್ನು ಎತ್ತಿಕೊಳ್ಳುತ್ತಾರೆ, ಅದನ್ನು ತೋರಿಸಿ ಎನ್ನುತ್ತಾರೆ ಸಂದರ್ಶಕರು, ಇಲ್ಲ ಅದು ಕೈಬರಹದಲ್ಲಿದೆ, ತನ್ನ ಕೈಬರಹ ಸೊಟ್ಟ-ಸೊಟ್ಟಗಾಗಿದೆ ಎನ್ನುತ್ತಾರೆ. ಈ ವೇಳೆಗೆ ಅವರು ನೋಡುತ್ತಿದ್ದ ಕಾಗದದ ದೃಶ್ಯ ಸಂದರ್ಶನ ನೋಡುತ್ತಿರುವವರಿಗೂ ಕಾಣುತ್ತದೆ. ಆದರೆ ಅಲ್ಲಿ ಕಾಣಿಸುವುದು ಕೈಬರಹದ ಕವನವಲ್ಲ, ಮುದ್ರಿತ ಕವನ, ಅಲ್ಲದೆ ಸಂದರ್ಶಕರು ಕೇಳಿದ ಪ್ರಶ್ನೆಯೂ ಅಲ್ಲಿ ಕಾಣುತ್ತದೆ. ಅದರ ಮುಂದೆ 27 ಎಂದಿದೆ. ಅಂದರೆ 27ನೇ ಪ್ರಶ್ನೆ.
ಈ ಐದು ವರ್ಷಗಳಲ್ಲಿ ಎಂದೂ ಪತ್ರಿಕಾ ಸಮ್ಮೇಳನ ನಡೆಸಿಯೇ ಇರದ ದಾಖಲೆ ನಿರ್ಮಿಸಿರುವ ಈ ಪ್ರಧಾನಿಗಳ ಸಂದರ್ಶನಗಳು ಅಲ್ಲೋ-ಇಲ್ಲೋ ನಡೆದಿವೆ. ಚುನಾವಣೆಗಳು ಹತ್ತಿರ ಬಂದ ಮೇಲೆ ತುಸು ಹೆಚ್ಚಾಗಿವೆ. ಆದರೆ ಇವೆಲ್ಲವೂ ಸಹಾನುಭೂತಿಪರ ಸಂದರ್ಶಕರು ನಡೆಸಿದ್ದು, ಅಂದರೆ ಪ್ರಧಾನ ಮಂತ್ರಿಗಳಿಗೆ ಇಷ್ಟವಾಗುವ ಪ್ರಶ್ನೆಗಳನ್ನು ಮಾತ್ರ ಕೇಳುವ ‘ಸಹೃದಯ’ ಪತ್ರಕರ್ತರದ್ದು. ಅವೆಲ್ಲವೂ ‘ಸ್ಕ್ರಿಪ್ಟೆಡ್’ ಸಂದರ್ಶನಗಳು ಎನ್ನಲಾಗುತ್ತಿತ್ತು. ಅಂದರೆ ಅವರು ಮೊದಲೇ ಪ್ರಶ್ನೆಗಳನ್ನು ಕಳಿಸುತ್ತಾರೆ, ಪ್ರಧಾನಿಗಳ ಕಚೇರಿ ಅವುಗಳಲ್ಲಿ ಉತ್ತರಿಸುವ ಪ್ರಶ್ನೆಗಳನ್ನು ಆಯ್ದು ಕಳಿಸುತ್ತದೆ, ಪತ್ರಕರ್ತರು ಅವನ್ನೇ ಕೇಳುತ್ತಾರೆ. ಆದರೆ ಇದು ಕೇವಲ ಊಹೆಯಾಗಿರುತ್ತಿತ್ತು, ಪ್ರಧಾನಿಗಳ ಬಗ್ಗೆ ಅಸೂಯೆ ಇರುವವರ ಅಪಪ್ರಚಾರ ಇರಬಹುದು ಎಂದೂ ಭಾವಿಸಲಾಗಿತ್ತು.
ಆದರೆ ಈ ಸಂದರ್ಶನ ಅದನ್ನು ದೃಢಪಡಿಸಿದೆ ಎಂದು ಬಹಳಷ್ಟು ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ. ಅದೇನೇ ಇರಲಿ, ಬಾಲಾಕೋಟ್ ವಿಮಾನ ದಾಳಿಯ ಬಗ್ಗೆ ಹೇಳಿದ್ದು ಚುನಾವಣೆಯ ಸಂದರ್ಭದಲ್ಲಿ ಅರ್ಥವಾಗುತ್ತದೆ, ಆದರೆ ಉಳಿದವುಗಳು- ಪರ್ಸ್ ಇಲ್ಲದಿರುವುದು, ಡಿಜಿಟಲ್ ಕ್ಯಾಮರಾ, ಇ-ಮೇಲ್, ಟ್ಯಾಬ್ಲೆಟ್ ಮತ್ತು ಈ ಮುದ್ರಿತ ಕವನ, ಈ ಮೇಲ್ನೋಟಕ್ಕೆ ಸುಳ್ಳಿರಬಹುದು ಎಂದೇ ಸಂದೇಹ ಮೂಡಿಸುವ ವಿಚಾರಗಳು ಯಾಕೆ ಬೇಕಿತ್ತು ಎಂಬ ಪ್ರಶ್ನೆ ಹಲವರಲ್ಲಿ ಎದ್ದಿದೆ.
ಆದರೆ ಕಳೆದ ಐದು ವರ್ಷಗಳಲ್ಲಿ ಒಂದೊಂದಾಗಿ ಆಶ್ವಾಸನೆಗಳು ಜುಮ್ಲಾಗಳಾಗಿ ಬಿಟ್ಟದ್ದು, ಮತ್ತು ನಡುನಡುವೆ ಸಮಾರಂಭಗಳಲ್ಲಿ, ಪ್ರತಿಪಕ್ಷಗಳನ್ನು ಟೀಕಿಸುವ ಸಂದರ್ಭಗಳಲ್ಲಿ, ವಿಶೇಷವಾಗಿ ಚುನಾವಣೆಗಳ ಸಂದರ್ಭದಲ್ಲಿ, ಹೊಮ್ಮಿ ಬಂದು ಆಮೇಲೆ ಶುದ್ಧ ಸುಳ್ಳುಗಳು ಒಂದು ದೃಢಪಟ್ಟಿದ್ದು(ಉದಾ: ಯಾವ ಕಾಂಗ್ರೆಸ್ ಮುಖಂಡರೂ ಭಗತ್ ಸಿಂಗ್ರನ್ನು ಜೈಲಿನಲ್ಲಿ ಭೇಟಿಯಾಗಿರಲಿಲ್ಲ!) ನೆನಪಿರುವವರಿಗೆ ಇದರಿಂದ ಆಶ್ಚರ್ಯವಾಗಲಿಕ್ಕಿಲ್ಲ.
ಆದರೂ, ಬಾಲಾಕೋಟ್ ವಾಯುದಾಳಿಗೆ ಆದೇಶ ನೀಡಿದ ಪರಿಯ ಬಗ್ಗೆ ಅವರು ಹೇಳಿರುವುದು ನಿಜವೇನು, ನಿಜವಾಗಿದ್ದರೆ ಪರಿಣಿತರಾರೂ ಅದು ತಪ್ಪು ಎಂದು ಹೇಳುವ ಧೈರ್ಯ ತೋರಲಿಲ್ಲವೇ, ದೇಶದ ಭದ್ರತೆಯಂತಹ ಗಹನವಾದ ಪ್ರಶ್ನೆಗಳಲ್ಲಿ ಇಂತಹ ‘ಕಚ್ಚಾ ಜಾಣ್ಮೆ’ ಮತ್ತು ಪರಿಣಿತರ ಮೌನ ಅಪಾಯಕಾರಿಯಲ್ಲವೇ ಎಂದು ಹಲವರಿಗೆ ಆತಂಕ ಉಂಟಾಗಿದೆ. ನೋಟುರದ್ಧತಿಯ ಅನುಭವ ನಮ್ಮ ಮುಂದಿದೆ ಎನ್ನುತ್ತಾರೆ ಅವರು. ಈ ಬಾಲಾಕೋಟ್ ವಾಯುದಾಳಿಯನ್ನು ಮಳೆ ಸುರಿಯುತ್ತಿದ್ದಾಗ ಮಾಡಿದ್ದರಿಂದಲೇ ನಮ್ಮ ಯುದ್ಧವಿಮಾನಗಳು ಹೊತ್ತಿದ್ದ ಒಂದು ಕ್ಷಿಪಣಿ ಕೆಲಸ ಮಾಡದೆ ಈ ದಾಳಿಯ ನಿಜವಾದ ಫಲಿತಾಂಶ ನಮಗೆ ತಿಳಿಯದಂತೆ ಆಗಿರಬಹುದೇ ಎಂದೂ ಕೆಲವು ರಕ್ಷಣಾ ಪರಿಣಿತರು ಊಹಿಸುತ್ತಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.
( ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ದೇಸಾಯಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದಿಂದ ವಿತರಣೆಯಾದ ಟೂಲ್ಕಿಟ್ಗಳನ್ನು ನಿಯಮಾನುಸಾರ ವಿತರಣೆ ಮಾಡದೆ ವಂಚಿಸಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ಮಾಹಿತಿ ಕೋರಲಾಗಿತ್ತು.
ಪ್ರಾಚಾರ್ಯರು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿ ಫಾರ್ ಸಹಿಯೊಂದಿಗೆ ಹಿಂಬರಹ ನೀಡಲಾಗಿರುತ್ತದೆ. ಮಾಹಿತಿ ಅಧಿಕಾರಿ, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿರುವ ಫಾರ್ ಸಹಿಯೇ ಪ್ರಾಚಾರ್ಯರ ಹೆಸರಿನ ಪತ್ರದಲ್ಲಿ ನಮೂದಾಗಿರುತ್ತದೆ. ಸದರಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾಚಾರ್ಯರೇ ಆಗಿರುತ್ತಾರೆ.
ಹೀಗಿರುವಾಗ ಪಾಚಾರ್ಯರ ಮುದ್ರೆ ಇರುವಲ್ಲಿ ಫಾರ್ ಎಂಬುದಾಗಿ ನಮೂದಿಸಿ ಸಹಿ ಮಾಡಿ, ಮಾಹಿತಿ ಅಧಿಕಾರಿ ಎಂಬ ಮುದ್ರೆಗೆ ಫಾರ್ ಬಳಸದೆ ಸಹಿ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.
ಆದರೆ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳ್ಳಿ ಇವರಿಗೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಇಲಾಖಾ ತನಿಖೆ ನಡೆಸದೆ ಕಾಲ ವಿಳಂಬ ಮಾಡುತ್ತಿರುವ ಚಿತ್ರದುರ್ಗ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಅಮರ್ನಾಥ್ ಜೈನ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ 06 ಅರ್ಜಿ ಸಲ್ಲಿಸಿ, ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಉಪವಿಭಾಗಗಳಿಗೆ ಬಿಡುಗಡೆಯಾದ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿದ್ದರು.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ಸದರಿ ಪ್ರಕರಣವನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿದ್ದರು.
ನಿಯಮಾನುಸಾರ ಇಲಾಖೆ ತನಿಖೆ ನಡೆಸದೆ ಕಾಲ ವಿಳಂಬ ಮಾಡುವ ಉದ್ದೇಶದಿಂದ 6 ತಾಲ್ಲೂಕು ಉಪ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಆದೇಶ ಹೊರಡಿದ್ದು, ಇದರಂತೆ ವಕೀಲ ಡಾ.ಕೆ.ಎ.ಓಬಳಪ್ಪ ಇವರು ಎಲ್ಲಾ ಉಪವಿಭಾಗಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿದಾಗ ದಾಖಲೆಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ.
ಈ ಬಗ್ಗೆ ಕಾರ್ಯಪಾಲಕ ಅಭಿಯಂತರರಿಗೆ ದೂರು ನೀಡಿದರೂ ನಿರ್ಲಕ್ಷö್ಯ ತೋರಿದ ಕಾರಣ, ಕರ್ತವ್ಯ ಲೋಪದ ಅಡಿಯಲ್ಲಿ ಕಾರ್ಯಪಾಲಕ ಅಭಿಯಂತರರಾದ ಅಮರ್ನಾಥ್ ಜೈನ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ1 day agoದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

