ಭಾವ ಭೈರಾಗಿ
ಏನೆಂದು ಹೆಸರಿಡಲಿ ಈ ಚಂದ ಅನುಭವಕೆ..!
ಹೃದಯದ ರಾಜ,
ಹೌದು ಕಣೋ ನಾನು ನಿನ್ನನ್ನು ಹೀಗಂತಲೇ ಕರೆಯುತ್ತಿದ್ದದ್ದು. ಹಾಗೆ ಕರೆದಾಗಲೆಲ್ಲಾ ನಾನೇ ನಿನ್ನ ರಾಣಿ, ಈ ಜಗವೇ ನಮ್ಮ ರಾಜ್ಯ, ನಾವಿಬ್ಬರೇ ಅರಸನ ಮನೆಯವರು, ನಾವು ಹೇಳಿದಂತೆ ಪ್ರಜೆಗಳೆಲ್ಲಾ ಕೇಳಬೇಕು ಎಂಬೆಲ್ಲಾ ಅತಿಯಾದ ಹುಚ್ಚು ಕಲ್ಪನೆಗಳಲ್ಲಿ ಬೀಗುತ್ತಿದ್ದೆ. ಆದರೆ ನಿನ್ನನ್ನು ಇಷ್ಟ ಪಡುತ್ತಿದ್ದದ್ದು ಮಾತ್ರ ಸುಳ್ಳಲ್ಲ. ವ್ಯವಸ್ಥಿತ ಮನೆಯ ಸುತ್ತಲೂ ಗೋಡೆ, ಒಳಗೆ ಯಾರೂ ಬರಬಾರದೆಂದು ಕಬ್ಬಿಣದ ಗೇಟಿಗೆ ದಪ್ಪನೆಯ ಬೀಗ, ರಾತ್ರಿ ಎಂಟರ ನಂತರ ಯಾರೂ ಹೊರ ಹೋಗುವಂತಿರಲಿಲ್ಲ. ತಡವಾದರೆ ಕರೆ ಮಾಡಿ ತಿಳಿಸಿರಬೇಕು, ಬಸ್ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದರು. ಇದು ನನ್ನಪ್ಪನ ಆಜ್ಞೆ. ಇದು ಮಕ್ಕಳ ಮೇಲಿನ ಅತಿಯಾದ ಪ್ರೀತಿಯೋ ಅಥವಾ ಮಕ್ಕಳೆಂಬ ಮಮಕಾರವೋ ಗೊತ್ತಿಲ್ಲ.ಹದ್ದಿನ ಕಣ್ಣಿನಂತೆ ನಮ್ಮನ್ನ ನೋಡಿಕೊಳ್ಳುತ್ತಿದ್ದರು.
ಅಂಥ ಮನೆಯಲ್ಲಿನ ತೋಟದ ಮಲ್ಲಿಗೆಯ ಮರದ ಬಳ್ಳಿಯ ಎಲೆ ಮರೆಯಲ್ಲಿ ಇಣುಕುತಿದ್ದವಳು ನಾನು. ಯಾರಿಗೂ ಕಾಣದೆ ಅರಳಿ ನಿಂತ ಮಲ್ಲಿಗೆಯ ಹೂವಿನಂತಿದ್ದೆ. ಅದಾವ ಮಾಯದಲಿ ನೀ ಗಿಡದಿಂದ ಕಿತ್ತುಕೊಂಡೆಯೋ ಗೊತ್ತಿಲ್ಲ. ಶಿವನ ಪೂಜೆಗೆ ಅರ್ಪಿತವಾಗಬೇಕೆಂದಿದ್ದವಳು ನಾನು. ನಿನ್ನ ಪ್ರೀತಿಯ ಅಪ್ಪುಗೆಯಲಿ ಕರಗಿ ಜಾರಿ ಪಾದಕ್ಕೆ ಸೇರಿದಾಗ ನೀನೇ ನನ್ನ ಶಿವನಂತೆ ಕಂಡಿದ್ದೆ. ಆಗಲೇ ನನ್ನ ಜನ್ಮ ಸಾರ್ಥಕ ಎಂದೆನಿಸಿತು. ನಿನ್ನ ಮೇಲಿನ ಪ್ರೀತಿ ದುಪ್ಪಟವಾಯಿತು.
ಒಮ್ಮೊಮ್ಮೆ ನೀ ಫೋನಿನಲ್ಲಿ ಸಿಗದೆ ಬೇಸರವಾದಾಗ ನನ್ನೊಳಗೆ ನಾನೇ “ನಾ ಹೇಗೆ ಇವನಿಗೆ ಸೇರಿದೆ.. ? , ಯಾವ ಮಾಯರೂಪ ಇವನನ್ನು ಇಷ್ಟ ಪಡುವಂತೆ ಮಾಡಿತು..?. ಕಾಲೇಜಾಯಿತು ಮನೆಯಾಯಿತು ಎಂಬ ಅಮ್ಮನ ನುಡಿಯನ್ನ ಚಾಚೂ ತಪ್ಪದೆ ಪಾಲಿಸುತ್ತಿದ್ದವಳು ನಾನು. ಕಾಲೇಜಿನಲ್ಲಿ, ನಮ್ಮೂರಿನಲ್ಲಿ ಅದೆಷ್ಟೋ ಸ್ಪುರದ್ರೂಪಿ ಯುವಕರು ಈ ಮಲ್ಲಿಗೆಯ ಸುವಾಸನೆಯ ನೆತ್ತಿಗೇರಿಸಿಕೊಳ್ಳಲು ಹರಸಾಹಸ ಪಟ್ಟರೂ ದಕ್ಕದವಳು ಅದ್ಹೇಗೆ , ನೀ ಮಾತ್ರ ನನ್ನ ಹೃದಯದ ಅಂತಃಪುರದೊಳಗೆ ಮಯೂರವರ್ಮನಂತೆ ಚಾಣಾಕ್ಷತೆಯಿಂದ ನುಗ್ಗಿಬಿಟ್ಟಿದ್ದೆ…?. ಇನ್ನೂ ಅರ್ಥವಾಗದೇ ಪ್ರಶ್ನೆಯಾಗೇ ಉಳಿದಿದೆ ನನಗೆ. ಅತಿಯಾದ ಅಕ್ಕರೆ, ಮುದ್ದುತನ, ಕೆಟ್ಟ ಕಣ್ಣುಗಳು ಬೀಳಬಾರದೆಂಬ ರಕ್ಷಣೆಯ ಭರವಸೆಯಿಂದಲೋ ಏನೋ ಬುದ್ಧ ರಾಜ್ಯ ತೊರೆದು ಹೋಗಲು ಪ್ರೇರೇಪಿಸಿರಬೇಕು.
ಮನೆಬಿಟ್ಟು ಹೋದ ಅವರೊಬ್ಬ ಜಗತ್ತಿಗೆ ಜ್ಞಾನಿಗಳಾದರು, ಮಾರ್ಗದರ್ಶಕರಾದರು. ಅಂತೆಯೇ ನಮ್ಮ ಮನೆಯ ಕಟ್ಟು ನಿಟ್ಟಿನ ವಾತಾವರಣವೇ ಹೊರ ಬಂದು ನಿನ್ನನ್ನು ಪ್ರೀತಿಸಲು ಪ್ರೇರೇಪಿಸಿರಬೇಕು. ಅಪ್ಪನ ಗದರಿಕೆಗೆ ಹೆದರಿ ಮಾತೇ ಆಡುತ್ತಿರಲಿಲ್ಲ. ಅಮ್ಮನೋ ಅಪ್ಪನ ಮಾತಿಗೆ ಎದುರಾಡದೆ ಹಾಕಿದ ಗೆರೆಯಲ್ಲೇ ನಡೆಯುತ್ತಿದ್ದಳು.ನಮ್ಮ ಇಷ್ಟ ಕಷ್ಟದ ಬಗ್ಗೆ ಒಮ್ಮೆಯೂ ಪ್ರೀತಿಯಿಂದ ಮಾತನಾಡಿರಲಿಲ್ಲ. ಅಕ್ಕ ಪಕ್ಜದವರ ಜೊತೆನೂ ಹೆಚ್ಚು ಬೆರೆಯಲು ಬಿಡುತ್ತಿರಲಿಲ್ಲ. ಅಷ್ಟು ಬಿಗಿಯಾಗಿತ್ತು ನಮ್ಮ ಮನೆ. ಮಧ್ಯಮ ವರ್ಗದ ಸಂಸಾರ ನಮ್ಮದು. ಹಾಗೆಂದು ಎಂದೂ ಉಪವಾಸ ಬೀಳಿಸಿದವರಲ್ಲ ನನ್ನಪ್ಪ. ಹಗಲು ರಾತ್ರಿಗಳೆನ್ನದೆ ದುಡಿದು ಸಲಹುತ್ತಿದ್ದರು.
ಇಂಥ ವೇಳೆ ಓದು ಮುಗಿದ ನನಗೆ ಅಪ್ಪನ ಕಷ್ಟವನ್ನು ಸ್ವಲ್ಪ ನೀಗಿಸಲು ಮುಂದಾದೆ. ಅಪ್ಪ ಅಮ್ಮ ಇಬ್ಬರಿಗೂ ಹೇಗೋ ಒಪ್ಪಿಸಿ ಸ್ನೇಹಿತೆಯೊಂದಿಗೆ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿಕೊಂಡೆ. ಊರು ಬಿಟ್ಟು ಬಂದದ್ದು ಒಂದು ಕಡೆ ನನಗೆ ಸ್ವಾತಂತ್ರ್ಯ ಸಿಕ್ಕಿತು ಎನಿಸಿದರೆ, ಅಷ್ಟು ವರ್ಷಗಳಿಂದ ಜೊತೆಗಿದ್ದ ಅಪ್ಪ ಅಮ್ಮನನ್ನು ಬಿಟ್ಟು ಇರಬೇಕಲ್ಲ ಎಂದು ಇನ್ನೊಂದೆಡೆ. ಒಳ್ಳೆ ಕೆಲಸವೇನೋ ಸಿಕ್ಕಿತು, ಆರಂಭದಲ್ಲಿ ಕಸಿವಿಸಿ ಎನಿಸಿದರೂ ತದನಂತರ ಹೊಂದಿಕೊಳ್ಳಬೇಕಾಯಿತು.
ಹೀಗ್ಗೆ ಹತ್ತು ವರ್ಷಗಳ ಹಿಂದೆ ನಡೆದ ಘಟನೆಯೊಂದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಹೀರೋ ಹೋಂಡಾ ಫ್ಯಾಶನ್ ಬೈಕ್ ಹೊಸತು, ಕಂಪನಿಯವರು ಆಗ ತಾನೆ ಚಾಲನೆ ಕೊಟ್ಟಿದ್ದ ಹೊಸ ಬ್ರಾಂಡ್, ಜರ್ರ್….ನೆ ಬಂದು ನೀನು ಆಫೀಸಿನ ಎದುರು ನಿಲ್ಲಿಸಿದೆ. ಆ ಶಬ್ಧಕ್ಕೆ ಮೆಟ್ಟಿಲುಗಳ ಹತ್ತುತ್ತಿದ್ದವಳು ಒಮ್ಮೆ ತಿರುಗಿ ನೋಡಿದೆ. ಬೈಕ್ ನಿಂದ ಇಳಿದವನೇ ಹೆಲ್ಮೆಟ್ ತೆಗೆದು ಬಾಜಿಗರ್ ಸಿನಿಮಾದಲ್ಲಿ ಶಾರುಖ್ ಖಾನ್ ಒದರುವಂತೆ ನಿನ್ನ ತಲೆಯನ್ನೊಮ್ಮೆ ಒದರಿದೆ. ನಿನ್ನ ಅನಿಸಿಕೆಗೆ ತಕ್ಕಂತೆ ಆ ನಿನ್ನ ನೀಳಕೂದಲು ಅದರ ಜಾಗವನ್ನು ಸಲೀಸಾಗಿ ಕೂರಿತು. ಸಾಲದೆಂಬಂತೆ ಕೈಯಬೆರಳುಗಳಿಂದ ಹಿಂದಕ್ಕೆ ಸರಿಸಿದಾಗಲಂತೂ ಅದಕ್ಕೆ ಮೆರಗು ಬಂತು. ಎತ್ತರದ ನಿಲುವು, ಸುಂದರ ವದನ, ಸದೃಢ ಮೈಕಟ್ಟು, ಬ್ಲೂ ಜೀನ್ಸ್ ಪ್ಯಾಂಟ್ ಗೆ ಸರಿಹೊಂದುವ ಟೀ ಶರ್ಟ್, ಹುಡುಕಿದರೂ ಎಳ್ಳಷ್ಟೂ ಕೊಂಕಿರದ ದೇಹ ಸೌಂದರ್ಯ, ಸಿನಿಮಾ ಹೀರೋಗಳಿಗೆ ಇರಬೇಕಾದ ಎಲ್ಲಾ ಸ್ವಭಾವ, ಗುಣಲಕ್ಷಣಗಳು ನಿನ್ನಲ್ಲಿದ್ದವು.ನಿನ್ನ ಕಣ್ಣ ಕಾಂತಿಗೆ ಒಮ್ಮೆ ಅವಾಕ್ಕಾದೆ. ಬಹುಶಃ ನಾ ಸೋತಿದ್ದು ನಿನಗೆ ಅಂದೇ ಇರಬೇಕು. ಇಷ್ಟೆಲ್ಲಾ ನಡೆದದ್ದು ಎರಡು ನಿಮಿಷದಲ್ಲಿ ಮಾತ್ರ. ಆ ಎರಡು ನಿಮಿಷ ನನ್ನ ಮನಸ್ಸನ್ನೇ ಪ್ರಫುಲ್ಲಗೊಳಿಸಿತ್ತು. ಬಂದವನೆ ಸರಸರನೆ ಮೆಟ್ಟಿಲುಗಳ ಹತ್ತಿ ನನ್ನನ್ನೇ ಹಿಂದಿಕ್ಕಿ ಹೊರಟು ಬಿಟ್ಟೆ. ಇಲ್ಲೊಬ್ಬಳು ಹುಡುಗಿ ನಿಂತಿದ್ದಾಳೆ, ಅವಳ ಮುಖವನ್ನೊಮ್ಮೆಯಾದರೂ ನೋಡೋಣ ಎನಿಸಲೇ ಇಲ್ಲ ನಿನಗೆ. ಆವಾಗಲೇ ನಿರ್ಧರಿಸಿದೆ ನೀನೇ ನನಗೆ ಸರಿಯಾದ ಜೋಡಿಯೆಂದು.
ಕಂಪನಿ ಸೇರಿ ಮೂರು ತಿಂಗಳಾದರೂ ಒಮ್ಮೆಯೂ ನೋಡದಿದ್ದವನು ಯಾರಿವನು..? ಎಂಬ ಪ್ರಶ್ನೆ ಗುನುಗುತ್ತಲೇ ಎರಡನೇ ಮಹಡಿ ಮೆಟ್ಟಿಲುಗಳ ಹತ್ತಿದ್ದೇ ನೆನಪಿಲ್ಲ. ಸಿನಿಮಾಗಳಲ್ಲಿ ಹೀರೋಗಳನ್ನ ನೋಡಿ ಎಂಜಾಯ್ ಮಾಡುತ್ತಿದ್ದವಳು, ಅಂದು ಮಾತ್ರ ನೀನೇ ನನ್ನ ಹೀರೋ ಎನಿಸಿಬಿಟ್ಟಿತು. ಆ ಸಮಯದಲ್ಲಿ ಪ್ರೇಮಲೋಕ ಸಿನಿಮಾದ ಯಾರಿವನು….? ಈ ಮನ್ಮಥನೂ…ಎಂಬ ಹಾಡು ನನಗರಿವಿಲ್ಲದಂತೆ ನಾಲಿಗೆಯಲ್ಲಿ ನಲಿಯುತ್ತಿತ್ತು.
ನೆನಪಿರಬಹುದು ಅಂದು ಸೋಮವಾರ, ವಾರದ ಮೊದಲ ದಿನ ನಾನು ಅಲ್ಲಿ ರಿಸಪ್ಸನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರಿಂದ ನಮ್ಮ ಬಾಸ್ ಗೆ ಹಿಂದಿನ ವಾರದ ಹಾಜರಾತಿ ಪುಸ್ತಕ, ಕಂಪನಿಯ ಕೆಲಸಗಾರರ ಒಳ ಬರುವ ಮತ್ತು ಹೊರ ಹೋಗುವ ಸಮಯದ ಪುಸ್ತಕವನ್ನು ತೋರಿಸುವುದು ರೂಢಿ. ಅಂತೆಯೇ ಬಹಳ ನಿಷ್ಠೆಯಿಂದ ಮತ್ತು ಗಂಭೀರವಾಗಿ ಎಲ್ಲವನ್ನೂ ಸಿದ್ಧಗೊಳಿಸುತ್ತಿದ್ದೆ. ಗಡುಸು ಧ್ವನಿಯೊಂದು ” ಹಲೋ ಎಕ್ಸ್ ಕ್ಯೂಸ್ ಮಿ ಮೈ ನೇಮ್ ಇಸ್ ಅಶೋಕ್, ಕ್ಯಾನು ಪ್ಲೀಸ್ ಎಂಟರ್ ಮೈ ನೇಮ್ ಇನ್ ಸ್ಟಾಫ್ ರಿಜಿಸ್ಟರ್ , ಐಯಾಮ್ ನ್ಯೂಲಿ ಜಾಯ್ನ್ಡ್ ” ಯಾರಪ್ಪ ಇದು ಬರೀ ಇಂಗ್ಲೀಷೇ ಮಾತನಾಡುತ್ತಾನೆ ಅಂತ ತಲೆ ಎತ್ತಿ ನೋಡಿದೆ. ನನಗೆ ಇದು ಕನಸೋ ಇಲ್ಲ ನನಸೋ ಅನುಸಿಬಿಟ್ಟಿತು.
ಮೊನ್ನೆ ಬಿರುಗಾಳಿಯಂತೆ ಹೋದವನು ಇಂದು ತಂಗಾಳಿಯಂತೆ ಬಂದು ನಿಂತಿದ್ದಾನಲ್ಲ ಅಂತ ತುಂಬಾ ಖುಷಿಯಾಯಿತು.
ಯಾರಿವನು ಎಂದು ತಲೆ ಕೆಡಿಸಿಕೊಂಡಿದ್ದಕ್ಕೆ ಅಂದು ಉತ್ತರ ಸಿಕ್ಕಿತ್ತು. ಎರಡು ಅಡಿಯ ಅಂತರದಲ್ಲಿ ಮುಖಾಮುಖಿಯಲ್ಲಿದ್ದೆವು. ಕಳೆದ ಭೇಟಿಯಲ್ಲಿ ಸ್ಪಷ್ಟವಾಗಿ ನೋಡದಿದ್ದ ಆ ನಿನ್ನ ಚಂದಿರನಂತ ವದನವನ್ನು ಅಂದು ಹಾಗೇ ದಿಟ್ಟಿಸುತ್ತ ನಿಂತುಬಿಟ್ಟಿದ್ದೆ. ಚಿಗುರು ಮೀಸೆ, ಸೊಂಪಾಗಿ ಬೆಳೆದ ಕುರುಚಲು ಗಡ್ಡ ಮತ್ತದೇ ಜೀನ್ಸ್ ಪ್ಯಾಂಟ್, ಅರ್ಧ ತೋಳಿನ ಫಾರ್ಮಲ್ ಚೆಕ್ಸ್ ಶರ್ಟ್ ನಿನ್ನ ಅಂದಕ್ಕೆ ಮೆರಗು ಕೊಟ್ಟಿತ್ತು.
“ಹಲೋ ಏನಾಯಿತು” ಎಂದಾಗಲೇ ನಾನು ನಿಧಾನಿಸಿ ಎಚ್ಚರವಾಗಿ ಸಾರಿ… ಎಸ್ ಪ್ಲೀಸ್ , ಮೈನೇಮ್ ಇಸ್ ಆಶಾ ಎಂದು ನನ್ನ ನಾಮಾಂಕಿತವನ್ನ ಪರಿಚಯ ಮಾಡಿಕೊಂಡೆ. ನಿನ್ನ ಹೆಸರು ಅಶೋಕ್ ಎಂದಾಗಲೇ ನಾನು ಎಚ್ಚೆತ್ತುಕೊಳ್ಳಬೇಕಿತ್ತು ನೀನು ನನಗೆ ಸಿಗುವವನಲ್ಲ ಎಂದು. ಏಕೆಂದರೆ ಹೃದಯ ಗೀತೆ ಸಿನಿಮಾದಲ್ಲಿ ಅಶೋಕ್ ಆಶಾ ಎಂಬ ಎರಡು ಕ್ಯಾರೆಕ್ಟರ್ ಗಳು ಕೊನೆಗೂ ಒಂದಾಗುವುದೇ ಇಲ್ಲ. ಅರುಣ ಎಂಬ ಇನ್ನೊಂದು ಕ್ಯಾರೆಕ್ಟರ್ ಅಶೋಕನಿಗೆ ಜೋಡಿಯಾಗುತ್ತದೆ. ಕಾಕತಾಳೀಯ ನೋಡು ಆ ಸಿನಿಮಾದಂತೆಯೇ ನಮ್ಮ ಜೀವನವು ಆಗಿ ಹೋಯಿತು. ನಾವು ಒಂದಾಗಲು ಸಾಧ್ಯವೇ ಆಗಲಿಲ್ಲ…..ನೀನು ಮಾತನಾಡುವ ಇಂಗ್ಲೀಷ್ ಎಷ್ಟು ಸ್ಪಷ್ಟವಾಗಿರುತ್ತಿತ್ತು ಎಂದರೆ ನುರಿತ ಇಂಗ್ಲೀಷ್ ಪ್ರೊಫೆಸರ್ ರೀತಿ ಇರುತ್ತಿತ್ತು.
ಆ ನಿನ್ನ ನಿರರ್ಗಳ ಮಾತನ್ನು ಕೇಳುತ್ತಲೇ ಇರಬೇಕು ಎನಿಸುತ್ತಿತ್ತು. ಬಹುಶಃ ಆ ಒಂದು ಮಾಯವೂ ಕೂಡ ನಿನ್ನಲ್ಲಿ ನಾ ಬಂಧಿಯಾಗಲು ಪ್ರೇರಣೆಯಾಗಿರಬಹುದು….. ಸರಿ..ನನ್ನ ಪರಿಚಯವನ್ನು ನಾನೇ ಮಾಡಿಕೊಂಡಾಗಲಾದರೂ ಸ್ವಲ್ಪ ನಗಬಾರದಿತ್ತೆ…? ಮುಖವನ್ನು ಊದಿಸಿಕೊಂಡವನಂತೇ ಇದ್ದೆ.” ಆಯ್ತಾ ನಾ ಹೊರಡಬೇಕು ” ಎಂದು ನನ್ನನ್ನು ನೋಯಿಸಿದಂತ್ತಿತ್ತು. ಏಕೆಂದರೆ ಇನ್ನೂ ಸ್ವಲ್ಪ ಸಮಯ ಇಲ್ಲೇ ಇರಲಿ ಎಂಬ ಹಂಬಲ. “ಆಯ್ತು ” ಎನ್ನುವಷ್ಟರಲ್ಲಿ ಹೊರಟೇ ಬಿಡೋದೆ…?. ” ಹೋಗು ಹೋಗು..ಎಲ್ಲೋಗ್ತೀಯ ಊರಿಗೆ ಬಂದೋಳು ನೀರಿಗೆ ಬರೋದಿಲ್ವ” ಎಂದು ಮನಸೊಳಗೇ ಹೇಳಿಕೊಂಡು ಕಾರ್ಯಮಗ್ನಳಾದೆ. ಅಂದಿನಿಂದ ದಿನಾ ಬರುವೆ ಹೋಗುವೆ. ನನಗಂತೂ ಧೈರ್ಯವಿಲ್ಲ ನಿನ್ನ ಜೊತೆ ಮಾತನಾಡಲು. ನೀ ಬಂದಾಗಲಂತೂ ಕೋಗಿಲೆಗೆ ಮಾವು ಚಿಗುರಿದಾಗ ಎಷ್ಟು ಸಂತೋಷ ಪಡುತ್ತದೋ, ಬೆಳದಿಂಗಳ ಕಂಡ ನವಿಲು ಹೇಗೆ ಗರಿಬಿಚ್ಚಿ ಕುಣಿಯುತ್ತದೋ ಹಾಗೆ ಆಗುತ್ತಿತ್ತು ನನಗೆ. ನಿನ್ನನ್ನು ನೋಡುವುದೇ ನನ್ನ ಭಾಗ್ಯವೆನಿಸುತ್ತಿತ್ತು.
ಅಂದು ದಸರಾ ಪೂಜೆ, ಹಬ್ಬಕ್ಕಿಂತ ಎರಡುದಿನ ಮುಂಚಿತವಾಗಿಯೇ ಮಾಡುತ್ತಿದ್ದರು. ನಾನು ರಿಸೆಪ್ಷನಿಸ್ಟ್ ಆಗಿದ್ದರಿಂದ ಎಲ್ಲರಂತೆ ನಾನೂ ತುಸು ಹೆಚ್ಚಾಗೇ ಮೇಕಪ್ ಮಾಡಿಕೊಂಡು ಒಂದೊಳ್ಳೆ ಮೆರೂನ್ ಬಣ್ಣದ ರೇಷಿಮೆ ಸೀರೆಗೆ ಕುಚ್ಚು ಹಾಕಿಸಿ ಅದಕ್ಕೊಪ್ಪುವ ಆಭರಣಗಳನ್ನು ಹಾಕಿಕೊಂಡು ಬಂದಿದ್ದೆ. ಅದಕ್ಕೆ ವಾರಗಳ ತಯಾರಿ ಇತ್ತು. ನೀನೋ ಹೇಗೇ ಇದ್ದರೂ ಸುಂದರವಾಗಿದ್ದೀಯ, ಆಕರ್ಷಿತನಾಗಿದ್ದೀಯ ನಿನ್ನ ಸೆಳೆಯಲು ಸ್ವಲ್ಪ ಪ್ರಯತ್ನ ಮಾಡೋಣ ಎಂದು. ಇಷ್ಟು ದಿವಸ ಜೀನ್ಸ್ ಹಾಕುತ್ತಿದ್ದವನು ಅಂದು ಮಾತ್ರ ನೀನು ಫಾರ್ಮಲ್ ಶರ್ಟ್ ಮತ್ತು ಪ್ಯಾಂಟ್ ಧರಿಸಿ, ಕಪ್ಪು ಬಣ್ಣದ ಶೂ, ಮೇಲೊಂದು ಬ್ಲೇಜರ್ ಹಾಕಿ, ಕಣ್ಣಿಗೆ ಗ್ಲಾಸ್ ಧರಿಸಿ ಒಳಗೆ ಎಂಟ್ರಿ ಕೊಟ್ಟೆ ನೋಡು…ಕಳೆದೋದೆ ನಾನು ಆ ನಿನ್ನ ನೋಟಕ್ಕೆ. ಅದ್ಯಾವ ತಾಯಿ ಹೆತ್ತ ಮಗನೋ ನೀನು ಎನಿಸಿದ್ದು ಸುಳ್ಳಲ್ಲ. ಅಷ್ಟು ಜನರ ಗುಂಪಲ್ಲಿ ನನಗೆ ಕಾಣುತ್ತಿದ್ದದ್ದು ನೀನೊಬ್ಬನೇ. ನಿನ್ನಂದನೇ ನನ್ನ ಕಣ್ಣು ತುಂಬಿಹೋಗಿತ್ತು. ಪೂಜೆ ಪುನಸ್ಕಾರಗಳು ನಡೆಯುತ್ತಿತ್ತು. ಆದರೆ ಅದ್ಯಾವ ಪರಿಜ್ಞಾನವೂ ನನಗಿರಲಿಲ್ಲ.
ಇವತ್ತಾದರೂ ನಿನ್ನ ಜೊತೆ ಮನಬಿಚ್ಚಿ ಮಾತನಾಡಲೇ ಬೇಕು ಎನಿಸಿಬಿಟ್ಟಿತ್ತು. ಪೂಜೆ ಏನೋ ಸರಾಗವಾಗಿ, ಸುಸೂತ್ರವಾಗಿ ಮುಗಿಯಿತು. ಆದರೆ ನನ್ನ ದೇವರ ಪೂಜೆನೇ ಇನ್ನೂ ಮಾಡಲಿಲ್ಲವಲ್ಲ , ವರವನ್ನು ಕೇಳಲೇ ಇಲ್ಲವಲ್ಲ ಎಂದುಕೊಳ್ಳುವಷ್ಟರಲ್ಲಿ ನನ್ನ ಗೆಳತಿಯೊಬ್ಬಳು ಒಂದು ಫೋಟೋ ತೆಗೆದುಕೊಳ್ಳೋಣವೆಂದು ಅಣಿಯಾಗುತ್ತಿದ್ದೆವು. ಆಕಸ್ಮಾತ್ ನಮ್ಮ ಬಳಿಗೆ ನೀನು ಬಂದೆ. ನನ್ನ ಗೆಳತಿಗೆ ನನ್ನ ಮನದಾಸೆ ಅರಿತಿತ್ತು ಎನಿಸುತ್ತದೆ.” ಸರ್ ನಿಮ್ಮ ಜೊತೆ ಒಂದು ಫೋಟೋ ತೆಗೆದುಕೊಳ್ಳುತ್ತೇವೆ ನಿಂತುಕೊಳ್ಳಿ” ಎಂದೇ ಬಿಟ್ಟಳು. ನೀನು ಅರೆ ಮನಸ್ಸಿನಿಂದಲೋ ಅಥವಾ ಒಳ್ಳೆ ಮನಸ್ಸಿನಿಂದಲೋ “ವೈ ನಾಟ್” ಎಂದೇ ಬಿಟ್ಟೆ. ಫೋಟೋ ತೆಗೆಯಬೇಕು ಸರಿ ತೆಗೆಯಲು ಯಾರಿರಲಿಲ್ಲ. ನನ್ನ ಗೆಳತಿನೇ ಮೊಬೈಲ್ ಎತ್ತಿಕೊಂಡು ನಮ್ಮಿಬ್ಬರನ್ನು ಜೊತೆಮಾಡಿ ನಿಲ್ಲಿಸಿಯೇ ಬಿಟ್ಟಳು. ರೋಗಿ ಬಯಸಿದ್ದು ವೈದ್ಯ ಹೇಳಿದ್ದು ಎರಡೂ ಒಂದೇ ಆಗಿಹೋಗಿತ್ತು.” ಸ್ಮೈಲ್” ಎಂದು ಮೂರು ನಾಲ್ಕು ಕ್ಲಿಕ್ಕಿಸಿ ಬಿಟ್ಟಳು. ಓಕೆ ಸರ್ ಆಯ್ತು ಎಂದು ಫೋಟೋ ನೋಡುತ್ತಲೇ “ಸರ್ ಡೋಂಟ್ ಮೈಂಡ್ ನಿಮ್ಮಿಬ್ಬರದು ಒಳ್ಳೆ ಜೋಡಿ ” ಎಂದು ನೇರವಾಗಿಯೇ ಹೇಳಿಬಿಡೋದೆ. ನೀನೋ ಹುಸಿನಗುತ ಅಲ್ಲಿಂದ ಜಾರಿಕೊಂಡೆ. ಆದರೆ ನಿಜವಾಗಿ ಜಾರಿದ್ದು ನಾನು. ನಿನ್ನ ಮೋಹದ ಆಳದೊಳಕ್ಕೆ ಜಾರಿ ಬಿದ್ದಿದ್ದವಳು ನಾನು.
ನನ್ನ ಹುಚ್ಚು ಎಷ್ಟಿತ್ತೆಂದರೆ ಅಂದು ತೆಗೆದಿದ್ದ ಜೋಡಿ ಫೋಟೋವನ್ನ ನನ್ನ ಮೊಬೈಲ್ ನ ಸ್ಕ್ರೀನ್ ಸೇವರ್ ಗೆ ಹಾಕಿಕೊಂಡಿದ್ದೆ. ಅದ ನೋಡಿದ ಅದೆಷ್ಟೋ ಗೆಳತಿಯರು ಯಾವಾಗ ಮದುವೆಯಾಯಿತು ಎಂದು ಛೇಡಿಸುವಂತೆ ಕಾಲೆಳೆಯುತ್ತಿದ್ದರು. ಮನಸ್ಸಿನೊಳಗೆ ಸಂತೋಷ ಭರಿತವಾಗಿದ್ದರೂ ಮೇಲು ನೋಟಕ್ಕೆ ಛೆ…ಹೋಗ್ರೇ ಎಂದು ಮೂದಲಿಸುವಂತೆ ಹೇಳಿಬಿಡುತ್ತಿದ್ದೆ. ಗೆಳತಿ ಅಂದು ಹೇಳಿದ ಮಾತು ನನ್ನ ಮನಸ್ಸನ್ನೇ ವಿಚಲಿತಗೊಳಿಸಿತ್ತು. ಅವಳು ಹೇಳಿದ ಮಾತು ನಿಜವಾದರೆ ಹೇಗಿರುತ್ತದೆ ಜೀವನ, ಬೆಸ್ಟ್ ಜೋಡಿ ಅವಾರ್ಡ್ ಸಿಗಬಹುದೇ ಎಂದೆಲ್ಲಾ ಯೋಚಿಸುತ್ತಲೇ ಇದ್ದೆ. ಒಂದು ಮುಖ್ಯವಾದ ವಿಷಯ ನಾನು ನಿನ್ನ ಮೂರ್ತಿಯನ್ನು ನನ್ನ ಹೃದಯದ ಗುಡಿಯಲ್ಲಿಟ್ಟು ಪೂಜೆ ಮಾಡುತ್ತಿದ್ದದ್ದು, ಮನಸಿನ ಭಾವನೆಗಳು ಇದಾವುದನ್ನೂ ನನ್ನ ಗೆಳತಿಯ ಜೊತೆಗೆ ಹಂಚಿಕೊಂಡವಳಲ್ಲ. ಸದ್ದಿಲ್ಲದೇ ಅರಳಿದ ನಿಶಬ್ಧದ ಪ್ರೀತಿ ನನ್ನದು.
ನಮ್ಮ ಪ್ರಥಮ ಖಾಸಗಿ ಭೇಟಿಯ ಬಗ್ಗೆ ಹೇಳಲೇಬೇಕು. ಅಂದು ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಆಫೀಸಿಗೆ ರಜಾ ಇತ್ತು. ನನ್ನ ಗೆಳತಿ ಲಾಲ್ ಬಾಗ್ ಗೆ ಹೋಗೋಣ ಎಂದು ಒತ್ತಾಯಿಸಿದಳು. ನನಗೂ ಬೆಂಗಳೂರು ಹೊಸದಾಗಿತ್ತು ಮತ್ತು ಅದೂ ಅಲ್ಲದೆ ಲಾಲ್ ಬಾಗ್ ಎಂದು ಹೆಸರು ಮಾತ್ರ ಕೇಳಿದ್ದೆ, ನೋಡಿರಲಿಲ್ಲ. ನಾನೂ ಆಸೆಯಿಂದ ಅವಳಿಗೆ ಹಸಿರು ನಿಶಾನೆ ತೋರಿಸಿಬಿಟ್ಟೆ. ಮನಸೊಳಗೆ ನೀನು ಜೊತೆಯಲ್ಲಿ ಬಂದಿದ್ದರೆ ಚನ್ನಾಗಿರುತ್ತಿತ್ತು ಎನಿಸಿದರೂ ಮತ್ತೊಂದು ಭಾವ ಅದೆಲ್ಲಾ ದೂರದ ಮಾತು ಎಂದು ನನಗೆ ನಿರಾಶೆಗೊಳುಸುತ್ತಿತ್ತು. ಅದೇ ಚಿಂತೆಯಲ್ಲಿ ಮುಳುಗಿ ಹೋಗಿದ್ದ ನನಗೆ ” ಇಳಿಯಮ್ಮ ಲಾಲ್ ಬಾಗ್ ಬಂತು” ಎಂದಾಗ ವಾಸ್ತವತೆಗೆ ಬಂದು ಪ್ರವೇಶ ದ್ವಾರದ ಕಡೆ ಹೊರಟೆವು. ನಮ್ಮೂರಿನ ಸಂತೆ, ಜಾತ್ರೆಗೆ ಹೋಗಿ ರೂಢಿಯಿದ್ದ ನನಗೆ ಅದೇ ದೊಡ್ಡದು ಎನಿಸಿತ್ತು. ಆದರೆ ಲಾಲ್ ಬಾಗ್ ನೋಡಿ ಇದು ಸಮುದ್ರ ಎನಿಸಿಬಿಟ್ಟಿತ್ತು. ಎಲ್ಲೆಲ್ಲಿ ಮೋಡಿದರೂ ಜನ ಕಾಲಿಡಲು ಜಾಗವೇ ಇರುತ್ತಿರಲಿಲ್ಲ. ಅಷ್ಟೊಂದು ಜನಸಾಗರವೇ ತುಂಬಿಹೋಗಿತ್ತು. ಊರಿನಲ್ಲಿ ಅಪ್ಪನ ಬೆರಳ ಹಿಡಿದು ಜಾತ್ರೆಗೆ ಹೋಗುತ್ತಿದ್ದವಳು, ನನಗೆ ಅದು ಬೇಕು ಇದು ಬೇಕು ಎಂದು ಕೇಳಿ ತೆಗೆಸಿಕೊಳ್ಳುತ್ತಿದ್ದೆ. ಇಂದು ಪ್ರಥಮವಾಗಿ ನಾನೇ ಏನು ಬೇಕಾದರೂ ತೆಗೆದುಕೊಳ್ಳುವ ನಿರ್ಧಾರವಿತ್ತು. ಆದರೆ ಅದೇಕೋ ಅಪ್ಪ ನನಗೆ ತುಂಬಾ ನೆನಪಾಗಿ ಹೋಗಿದ್ದ.
ಲಾಲ್ ಬಾಗ್ ಒಳಗಿನ ಕೆರೆಯಲ್ಲಿ ವಿಹಾರಕ್ಕೆಂದು ಜನ ತುಂಬಿದ್ದರು. ನನಗೂ ಒಮ್ಮೆ ಅದರಲ್ಲಿ ಕೂರಬೇಕು ಎನಿಸಿತ್ತು. ಗೆಳತಿಗೆ ಒತ್ತಾಯಿಸಿ ಹೋದೆವು. ಒಂದು ಬೋಟಿನಲ್ಲಿ ಇಬ್ಬರಿಗೇ ಅವಕಾಶವಿರುತ್ತಿತ್ತು. ಯಾರೋ ಅಪರಿಚಿತರು ಮೊದಲೇ ಕುಳಿತಿದ್ದರಿಂದ ಇನ್ನೊಬ್ಬರು ಕೂರಬಹುದಿತ್ತು. ನನ್ನ ಗೆಳತಿಯನ್ನೇ ಮೊದಲು ಕೂರಿಸಿ ಕಳುಹಿಸಿದೆ. ನಂತರ ನಾನು ಹೋಗೋಣವೆಂದು. ಅದೃಷ್ಟ ನೋಡು ನನ್ನ ಹಿಂದೆಯೇ ನೀನು ನಿಂತಿರೋದೇ..” ಹಾಯ್…ಏನು ಒಬ್ಬರೇ ಬಂದಿದ್ದೀರ..? ” ಎಂಬ ನಿನ್ನ ಪ್ರಶ್ನೆಗೆ ಕಣ್ಣಲ್ಲಿ ಅರಳಿದ ಆಸೆಯೊಂದಿಗೆ ನಗು ಮೊಗದಿಂದ ” ಇಲ್ಲ ನನ್ನ ಸ್ನೇಹಿತೆ ಜೊತೆ ಬಂದಿದ್ದೇನೆ. ಅವಳು ಬೋಟಿಂಗ್ ಹೋಗಿದ್ದಾಳೆ. ನಾವಿಬ್ಬರೂ ಜೊತೆ ಹೋಗೋಣ ” ಎಂದು ನಾನೇ ನಿನಗೆ ಆಹ್ವಾನವಿಟ್ಟೆ. ಅದೇನೋ ಅಂದು ನೀನೂ ಒಳ್ಳೆಯ ಮೂಡಿನಲ್ಲಿದ್ದೆ ಅನಿಸುತ್ತೆ ಹೋಗೋಣವೆಂದುಬಿಟ್ಟೆ. ನನ್ನ ಗಳತಿ ಬಂದ ತಕ್ಷಣ ನಾವಿಬ್ಬರೇ ಕುಳಿತು ಹೊರಟೆವು.
ಅಂದು ನನ್ನ ಜೀವನದ, ಪ್ರೇಮದ ಮೊದಲ ಹೆಜ್ಜೆಯಾಗಿತ್ತು. ಒಂದು ಹುಡುಗನ ಜೊತೆ ಏಕಾಂಗಿ ಪ್ರಯಾಣ ಅದಾಗಿತ್ತು. ” ನನಗೆ ನೀರನ್ನು ಕಂಡರೆ ಭಯ. ನಿಮ್ಮನ್ನು ಹಿಡಿದುಕೊಳ್ಳಬಹುದುದೇ ..? ” ಎಂದು ಕೇಳಿದಾಗ ಓಕೆ ಅಂದು ಬಿಟ್ಟಿದ್ದೆ. ನನ್ನ ಖುಷಿಯ ಕೇಳಬೆಕೇ ನಿನ್ನ ತೋಳ ಒಳಗೆ ನನ್ನ ಕೈಗಳನು ತೂರಿಸಿ ಬಂಧಿಮಾಡಿಬಿಟ್ಟೆ. ಪುರುಷನ ಪ್ರಥಮ ಸ್ಪರ್ಶಕ್ಕೆ ನನ್ನ ಹೆಣ್ತನದ ಆಸೆಗಳು ಗರಿಗೆದರಿ ಕುಣಿಯಲಾರಂಭಿಸಿದವು.ಮೈಯೆಲ್ಲಾ ನಡುಗುವಂತಾಗಿ ನಾಚಿಕೆ ಕೇಕೆ ಹಾಕುತ್ತಿತ್ತು. ತೋಳ ಬಂಧನವನ್ನು ಮೆಲ್ಲನೆ ಎಳೆದುಕೊಳ್ಳೋಣ ಎನಿಸಿತ್ತು. ಆದರೆ ಬಯಸದೆ ಬಂದ ಭಾಗ್ಯವನ್ನು ಬಿಡಬಾರದು ಎಂದು ತೀರ್ಮಾನಿಸಿದ್ದೆ. ನೀನು ನೋಡಲೆಂದೇ ಒಮ್ಮೊಮ್ಮೆ ನನ್ನ ಮೊಬೈಲನ್ನು ತೆಗೆದು ನಮ್ಮಿಬ್ಬರ ಜೋಡಿ ಫೋಟೋವನ್ನ ಕಾಣುವಂತೆ ಇಡುತ್ತಿದ್ದೆ. ಆದರೆ ನೀನು ಮಾತ್ರ ಏನು ಗೊತ್ತೇ ಇಲ್ಲವೇನೋ ಎಂಬಂತೆ ನಟಿಸುತ್ತಿದ್ದೆ. ಇಬ್ಬರೂ ಜಿದ್ದಿಗೆ ಬಿದ್ದವರಂತೆ ಮೌನವಾಗಿದ್ದೆವು. ತುಂಬಿದ ಯೌವ್ವನದ ರಸಭರಿತ ಹೆಣ್ಣೊಂದು ಬಳಿ ಇದೆ, ತೋಳ ತೆಕ್ಕೆಯಲಿ ಬಂಧನವಾಗಿದ್ದಾಳೆ ಏನಾದರೂ ಮಾತನಾಡೋಣ ಎನಿಸಲೇ ಇಲ್ಲ ನಿನಗೆ. ಆ ಕಡೆ ಈ ಕಡೆ ಪ್ರಕೃತಿಯನ್ನೇ ದಿಟ್ಟಿಸುತ್ತಿದ್ದೆ. ನಾನು ಹೆಣ್ಣು ದುಡುಕಬಾರದು ಎಂದು ಎಷ್ಟೇ ಪ್ರಯತ್ನ ಪಟ್ಟರೂ ಕೊನೆಗೆ ನಾನೇ ಮೌನ ಮುರಿದು ” ಯಾಕೆ ಮೌನವಾಗಿದ್ದೀರ …,? ಏನಾದರೂ ಮಾತನಾಡಿ…ಸುಮ್ಮನೆ ಕೂರಲು ಬೇಸರವಾಗುವುದಿಲ್ಲವೇ…? ಎಂದು ನಾನೇ ಮೌನ ಮುರಿದು ಕೇಳಿಯೇಬಿಟ್ಟೆ. ” ಹಾಗೇನಿಲ್ಲಾ ನೀವೇ ಮಾತನಾಡಿ. ನಾನು ಹೆಚ್ಚಿಗೆ ಮಾತನಾಡಿ ಅಭ್ಯಾಸವಿಲ್ಲ” ಇದು ನಿನ್ನ ಉತ್ತರವಾಗಿತ್ತು. ವಿಧಿಯಿಲ್ಲದೆ ನನ್ನ ಮನದಾಳದ ಮಾತನ್ನ ನಾಚಿಕೆಯಿಂದ ತಲೆತಗ್ಗಿಸಿ “ನನಗೆ ನೀವಂದ್ರೆ ಇಷ್ಟ, ಯಾವಾಗಲೂ ನಿಮ್ಮ ಜೊತೆ ಹೀಗೆ ಇರಬೇಕು ಎನಿಸುತ್ತದೆ ನನ್ನ ಈ ಪ್ರೇಮ ನಿವೇದನೆಯನ್ನ ಒಪ್ಪಿಕೊಳ್ಳುವಿರಾ..?” ಎಂದು ಒಂದೇ ಸಮನೆ ಒಪ್ಪಿಸಿಬಿಟ್ಟೆ. ” ದಯವಿಟ್ಟು ಕ್ಷಮಿಸಿ ಸದ್ಯಕ್ಕೆ ನಾನು ಏನನ್ನೂ ಹೇಳಲಾರೆ.
ಸ್ವಲ್ಪ ದಿನಗಳ ಕಾಲಾವಕಾಶ ಬೇಕು ಎಂದುಬಿಟ್ಟೆ. ಆ ಹೊತ್ತಿನಲ್ಲಿ ನಿನ್ನ ನೀರಸವಾದ ಉತ್ತರಕ್ಕೆ ಬೇಸರವೇನು ತರಲಿಲ್ಲವಿದ್ದರೂ “ಪರವಾಗಿಲ್ಲ ಯೋಚಿಸಿ ಉತ್ತರಿಸಿ” ಎನ್ನುವಷ್ಟರಲ್ಲಿ ಬೋಟಿನಿಂದ ಇಳಿಯಬೇಕಾದ ಅನಿವಾರ್ಯತೆ ಬಂತು. ಅಷ್ಟರಲ್ಕಾಗಲೇ ಸಮಯ ಎರಡನ್ನು ದಾಟಿತ್ತು. ನಿನಗೆ ಏನನಿಸಿತೋ ಏನೋ ಊಟ ಮಾಡೋಣವೆಂದು ಅಲ್ಲೇ ಇದ್ದ ಮೊಬೈಲ್ ಹೋಟೆಲ್ ಗೆ ನೀನೇ ಕರೆದೊಯ್ದೆ. ನನಗೆ ಒಂದು ಮೂಲೆಯಲ್ಲಿ ಒಪ್ಪಿಕೊಂಡರೆ ಎಷ್ಟು ಚನ್ನಾಗಿರಬಹುದು ಎಂದು ಮುಂದಿನದನ್ನು ಲೆಕ್ಕ ಹಾಕುತ್ತಿದ್ದೆ.ಊಟ ಮುಗಿಸಿ ಬೈ ಹೇಳಿ ಹೊರಟೇಬಿಟ್ಟೆ.
ಮನೆಗೆ ಬಂದವಳೇ ಸ್ವಲ್ಪ ಮೌನಿಯಾದೆ. ನಾನು ಏನಾದರೂ ತಪ್ಪು ಮಾಡಿದೆನೇ..? ಹಾಗೆ ಹೇಳಬಾರದಿತ್ತೇ..? ನನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಅವರು..? ಎಂಬೆಲ್ಲಾ ಪ್ರಶ್ನೆಗಳು ಕಾಡಲಾರಂಭಿಸಿದವು. ಇಷ್ಟಪಟ್ಟಿದ್ದು ಸಿಗಬೇಕಂದ್ರೆ ರಿಸ್ಕ್ ತೆಗೆದುಕೊಂಡರೂ ಪರವಾಗಿಲ್ಲ ಎಂದು ನಾನೇ ಸಮಾಧಾನ ಪಟ್ಟುಕೊಂಡೆ. ನನ್ನ ಮೌನದ ವಾತಾವರಣವನ್ನು ಗಮನಿಸಿದ ನನ್ನ ಗೆಳತಿ “ಲಾಲ್ ಬಾಗ್ ಗೆ ಹೋಗಿ ಬಂದಾಗಿನಿಂದ ನಿನ್ನಲ್ಲೇನೋ ಬದಲಾವಣೆ ಕಾಣಿಸುತ್ತಾ ಇದೆ ಏನಾಯಿತು..? ” ಎಂಬ ಅನುಮಾನದ ಪ್ರಶ್ನೆ ಕೇಳಲಾರಂಭಿಸಿದಳು.ಏನೋ ಸಬೂಬು ಹೇಳಿ ಮರೆಸಿಬಿಟ್ಟಿದ್ದೆ.
ಡಿಸೆಂಬರ್ 30 ನೇ ತಾರೀಖು ನೀನು ಎಂದಿನಂತೆ ಸ್ಮಾರ್ಟ್ ಆಗಿ ನಗುಮುಖದೊಂದಿಗೆ ನನ್ನ ಬಳಿ ಬಂದು ನಿಂತೆ. ಆ ರೀತಿಯ ನಗುವನ್ನು ನಾನು ಅಲ್ಲಿಯವರೆಗೂ ನೋಡಿಯೇ ಇರಲಿಲ್ಲ. ಹುಬ್ಬಿನ ಸನ್ನೆಯಲ್ಲೇ ಏನು ವಿಶೇಷ ಎಂಬಂತೆ ನಟಿಸಿದೆ. ” ನಾಳೆ ನಿಮಗೊಂದು ಸರ್ ಪ್ರೈಜ್ ನೀಡುತ್ತೇನೆ ಗೆಟ್ ರೆಡಿ ಟು ಗೊ ಬ್ರಿಗೇಡ್ ರೋಡ್ ಟು ಸೆಲೆಬ್ರೇಟ್ ನ್ಯೂ ಇಯರ್” ಎಂದು ಹೊರಟುಬಿಟ್ಟೆ. ನಾನು ತಲೆ ಕೆಡಿಸಿಕೊಂಡು ಯೋಚಿಸುತ್ತಾ ಕುಳಿತೆ. ಆಮೇಲೆ ಗೊತ್ತಾಯಿತು ನಾಳಿದ್ದು ನ್ಯೂ ಇಯರ್ ಇರುವುದರಿಂದ ಕರೆಯುತ್ತಿದ್ದಾರೆಂದು. ಆದರೆ ಸರ್ ಪ್ರೈಜ್ ಏನು ಎಂಬುದರೆ ಬಗ್ಗೆ ಕುತೂಹಲ ಹೆಚ್ಚಾಯಿತು. ಅದೇ ಗುಂಗಿನಲ್ಲಿ ರಾತ್ರಿ ಸರಿಯಾಗಿ ನಿದ್ರೆನೇ ಬಾರಲಿಲ್ಲ. ಮಾರನೆಯ ದಿನ ಸಂತೋಷದಿಂದ ಆಫೀಸಿಗೆ ಬೇಗ ಹೊರಟು ಬಂದೆ. ಎಲ್ಲಾ ಕೆಲಸಗಳನ್ನು ಬೇಗ ಮುಗಿಸಿ ಸಂಜೆ ಐದಕ್ಕೆ ನೀನೇ ಬಂದು ನನ್ನ ಕರೆದುಕೊಂಡು ಹೋದೆ. ಅಲ್ಲೊಂದು ಗೊಂದಲ ಎರಡೂ ಕಡೆ ಕೂರಬೇಕೆ, ಒಂದು ಕಡೆ ಕೂರಬೇಕೆಂದು. ಕೊನೆಗೆ ನೀನೇ ಎರಡು ಕಡೆ ಕೂರಲು ತಿಳಿಸಿದೆ.
ಅದು ಎರಡನೆ ಬಾರಿ ನಿನ್ನ ಜೊತೆ ಹೊರಟಿದ್ದು. ರಸ್ತೆಯಲ್ಲಿ ಹೋಗುವಾಗ ಅದೆಷ್ಟೋ ಪ್ರೇಮಿಗಳನ್ನ ಬೈಕಲ್ಲಿ ಹೋಗುವುದನ್ನ ನೋಡಿದ್ದೆ. ಹಿಂದಿನ ಸೀಟಿನಲ್ಲಿ ಕುಳಿತ ಹುಡುಗಿ ಅವಳ ಪ್ರಿಯತಮನನ್ನು ಹಿಂದಿನಿಂದ ಬಾಚಿ ತಬ್ಬಿ ಹಿಡಿದಿರುವುದನ್ನೂ ನೋಡಿದ್ದೆ. ಹಾಗೆ ನೋಡಿದಾಗ ನಾನೂ ಹೀಗೆ ಹೋಗುವುದು ಯಾವಾಗ ಎನಿಸಿದ್ದು ಸುಳ್ಳಲ್ಲ. ಆ ಆಸೆ ಈಗ ಈಡೇರುತ್ತದೆ ಎಂದುಕೊಳ್ಳುವಾಗಲೇ ಧೈರ್ಯಮಾಡಿ ನಿನ್ನೆಗಲ ಮೇಲೆ ಕೈ ಇಟ್ಟೇಬಿಟ್ಟೆ. ನೀನು ಮರುಮಾತನಾಡದೆ ನಿನ್ನಷ್ಷಕ್ಕೆ ಬೈಕ್ ಓಡಿಸುತ್ತಿದ್ದೆ.
ಬ್ರಿಗೇಡ್ ರೋಡ್ ತುಂಬ ಜನಜಂಗುಳಿ. ಎಲ್ಲಿ ನೋಡಿದರೂ ಹೊಸ ವರ್ಷದ ಆಚರಣೆಗೆಂದು ಬಂದ ಜನರು. ಅದರಲ್ಲಿ ಪ್ರೇಮಿಗಳೇ ಹೆಚ್ಚು. ಅದು ನನಗೆ ಹೊಸತು ಇದರ ಯಾವ ಗಂಧ ಗಾಳಿಯೂ ಗೊತ್ತಿರಲಿಲ್ಲ. ಅಲ್ಲಿ ನಿನ್ನ ಕೈಬೆರಳನ್ನೇ ಹಿಡಿದುಕೊಂಡು ಪುಟ್ಟ ಮಗುವಿನಂತೆ ನಿನ್ನ ಹಿಂದೆಯೇ ಬರುತ್ತಿದ್ದೆ. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಗಳೆಲ್ಲವನ್ನು ಒಮ್ಮೆ ಸುತ್ತು ಹಾಕಿ ಬರುವಷ್ಟರಲ್ಲಿ ರಾತ್ರಿ ಹನ್ನೊಂದರ ಸಮಯ. ಜಗಮಗಿಸುವ ಬಣ್ಣದ ಲೈಟುಗಳು, ಕುಣಿಯಲೆಂದೇ ಹುಚ್ಚೆಬ್ಬಿಸುವಂಥ ಹಾಡುಗಳು ಗುಯ್ ಗುಡುತ್ತಿದ್ದವು. ಹನ್ನೆರಡು ಗಂಟೆ ಆಗುತ್ತಿದ್ದಂತೇ ಎಲ್ಲರೂ ಹರ್ಷೋದ್ಘಾರದಿಂದ ” ಹ್ಯಾಪಿ ನ್ಯೂ ಇಯರ್ ” ಎಂದು ಕೂಗಲಾರಂಭಿಸಿದರು. ಆದರೆ ನೀನು ಮಾತ್ರ ನನ್ನ ಕೈಹಿಡಿದು ಮುಂಗೈಯಿಗೆ ಮುತ್ತಿಟ್ಡು ” ಐ ಲವ್ ಯು ” ಎಂದುಬಿಟ್ಟೆ. ನನಗೆ ಆ ಕ್ಷಣದ ಸಂತೋಷವನ್ನು ಹೇಳಿಕೊಳ್ಳಲಾಗುತ್ತಿರಲಿಲ್ಲ. ಮೌನಿಯಾದೆ, ಕಣ್ಣಲ್ಲಿ ಪನ್ನೀರು ಬಂತು. ಇವತ್ತಿಗೆ ನನ್ನ ಬಹುದಿನದ ಕನಸು ಈಡೇರಿತು ಎಂದು ಮನದೊಳಗೆ ಹರ್ಷಿತಗೊಂಡೆ.
ಅಂದಿನಿಂದ ನನ್ನ ಹೃದಯದ ಅರಮನೆಗೆ ನೀನೇ ಅಧಿಪತಿಯಾದೆ. ನಾನಿನ್ನ ದಾಸಿಯಾದೆ. ನನ್ನ ಇಷ್ಟ ಕಷ್ಟ ಎಲ್ಲವನ್ನೂ ಕೇಳುತ್ತಿದ್ದೆ. ನನ್ನನ್ನು ಸಂತೋಷಗೊಳುಸುವುದೇ ನಿನ್ನ ಕಾಯಕವಾಗಿ ಹೋಗಿತ್ತು. ನಿನ್ನ ಮಾತಿಗೆ , ಪ್ರೀತಿಗೆ ಸಂಪೂರ್ಣ ಶರಣಾಗಿ ಹೋಗಿದ್ದೆ. ಇಷ್ಟೆಲ್ಲಾ ನಡೆದರೂ ಒಮ್ಮೆಯೂ ನೀನು ಸಂಯಮ ಮೀರಲಿಲ್ಲ. ಅಸಭ್ಯವಾಗಿ ವರ್ತಿಸಲಿಲ್ಲ. ನಿನ್ನ ಆ ಗುಣನೇ ಇರಬೇಕು ನಾನಿಂದು ಇಷ್ಟು ಹೊಗಳಲು. ಒಮ್ಮೆ ನನ್ನಪ್ಪನಿಂದ ಕರೆ ಬಂತು ಊರಿಗೆ ಬೇಗನೆ ಬರಬೇಕೆಂದು. ಏನೋ ಗಾಢವಾದ ವಿಷಯವಿರಬೇಕೆಂದು ನಿನಗೂ ಹೇಳದೆ ಹೊರಟು ಬಿಟ್ಟೆ. ಆಮೇಲೆ ತಿಳಿಯಿತು ನನ್ನ ಮದುವೆಯ ಸಲುವಾಗಿ ಎಂದು. ನನ್ನಪ್ಪನ ಆಸೆ, ಕನಸಿನ ಮುಂದೆ ನನ್ನ ಪ್ರೀತಿ ಚಿಕ್ಕದೆನಿಸಿತು. ಮರು ಮಾತನಾಡದೆ ಒಪ್ಪಿಕೊಂಡೆ. ಆದರೆ ನಿನ್ನ ಜೊತೆ ಕಳೆದ ಆ ಒಂದೊಂದು ಕ್ಷಣಕ್ಕೆ, ಅನುಭವಕ್ಕೆ ಏನೆಂದು ಹೆಸರಿಟ್ಟು ಕರೆಯಲಿ. ಹೌದು ಈ ನೆನಪುಗಳೇ ಹಾಗೆ ಬೇಡವೆಂದರೂ ಅಕ್ಷಿ ಪಟಲದ ಮುಂದೆ ಬಂದು ಹಳೆಯ ಪಾತ್ರಗಳು ನಟಿಸುತ್ತಾ ಹೋಗುತ್ತವೆ. ಮತ್ತೆ ಕಾಣದಾಗುತ್ತವೆ.
ಮತ್ತೊಮ್ಮೆ ನಿನ್ನನ್ನು ಹೃದಯದ ರಾಜ ಎನ್ನುತ ಮುಗಿಸುತ್ತಿರುವೆ. ನೀ ಎಲ್ಲೇ ಇದ್ದರೂ ಸುಖವಾಗಿರೆಂದು ಆಶಿಸುತ್ತೇನೆ.
ಇಂತಿ ನಿನ್ನ ಪ್ರೇಮದಾಸಿ
–ಮಹದೇವ್ ಬಿಳುಗಲಿ
9611339024
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243



