ಭಾವ ಭೈರಾಗಿ
ನನ್ನವ್ವ ನೆನಪಾಗುತ್ತಾಳೆ..!

ಮೊನ್ನೆ ಮೊನ್ನೆ ತಾನೆ ಇಂಗ್ಲೀಷಿನ ಮದರ್ಸ್ ಡೇ ಎಂಬ ತೋರಿಕೆಯ ಹಬ್ಬವನ್ನು ಜಗತ್ತಿನ ತುಂಬಾ ಆಚರಿಸಲಾಯಿತು. ಈ ಹಬ್ಬ ಬಂದಾಗಲೆಲ್ಲಾ ಪ್ರತಿಯೊಬ್ಬರೂ ತಮ್ಮ ತಮ್ಮ ತಾಯಂದಿರನ್ನು ಬಹಳ ಗೌರವಯುತವಾಗಿ ವರ್ಣಿಸಿ ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಗಳಲ್ಲಿ ಅವರ ಫೋಟೋಗಳನ್ನ ಹಾಕಿಕೊಂಡು ಅವರ ಪ್ರೀತಿಯನ್ನು ಮೆರೆದರು. ನಿಜ ಅಮ್ಮ ಎಂದರೆ ಈ ಜಗತ್ತು. ಸಾರಿ…ನಾನು ಒಬ್ಬ ಹಳ್ಳಿಯನಾದ್ದರಿಂದ ಈ ಅಮ್ಮಾ ಎಂಬ ಪದವು ನನಗೆ ನಗರಗಳ ಅಜ್ಜಿಯನ್ನು ನೆನಪಿಸುತ್ತದೆ. ಅಚ್ಚ ಕನ್ನಡದಲ್ಲಿ ಅವ್ವ ಎಂದು ಕರೆದರೆ ನನಗೆ ಮೃಷ್ಠಾನ್ನ ಸವಿದಂತಾಗುತ್ತದೆ.
ಈ ಮದರ್ಸ್ ಡೇ ಯ ಬಗ್ಗೆ ನನಗೆ ಎಳ್ಳಷ್ಟೂ ಆಸಕ್ತಿ ಇಲ್ಲ. ಏಕೆಂದರೆ ನಾವು ಚಿಕ್ಕಂದಿನಿಂದಲೂ ಹಳ್ಳಿಯಲ್ಲೇ ಬೆಳೆದುದ್ದರಿಂದ ಅದರ ಗಾಳಿ ಗಂಧವೂ ನಮಗೆ ಸೋಕಿರಲಿಲ್ಲ. ಇತ್ತೀಚಿಗೆ ನಗರಕ್ಕೆ ಬಂದ ಮೇಲೆ ಅದರ ಹೆಸರನ್ನು ಕೇಳಿದ್ದು. ಹಾಗೆ ಕೇಳಿದಾಗಲೆಲ್ಲಾ ನನಗೆ ಮುಜುಗರವಾಗುತ್ತದೆ. ತಾಯಂದಿರ ದಿನ ಅಂತ ಏತಕ್ಕಾಗಿ ಮಾಡಬೇಕು..? ಎನಿಸುತ್ತದೆ. ಏಕೆಂದರೆ ಯಾರದೋ ಜಯಂತಿಯನ್ನು ಆಚರಿಸುವ ರೀತಿಯಲ್ಲಿ ಸಂಭ್ರಮಿಸುತ್ತಾರೆ.ಅದು ತಪ್ಪು, ಅವ್ವನನ್ನು ಪ್ರತಿ ದಿನವೂ ಪೂಜಿಸಬೇಕು , ಪ್ರತಿ ಕ್ಷಣವೂ ಪ್ರೀತಿಸಬೇಕು ಹಾಗಾದಾಗ ಮಾತ್ರ ನಾವು ನಮ್ಮವ್ವನಿಗೆ ಗೌರವಕೊಟ್ಟಂತಾಗುತ್ತದೆ. ಅವಳ ತ್ಯಾಗ ಅನನ್ಯ. ಮಕ್ಕಳ ಮತ್ತು ಗಂಡನ ಒಳಿತಿಗಾಗಿ ತನ್ನ ಸರ್ವಸ್ವವನ್ನೇ ಧಾರೆ ಎರೆದ ಮಹಾಮಾಯಿ.ಅಂತಹವಳನ್ನು ವರ್ಷಕ್ಕೆ ಒಮ್ಮೆ ನೆನಪಿಸಿಕೊಂಡರೆ ಅವಳಿಗೆ ಬೆಲೆ ಕಡಿಮೆಯಾದಂತಾಗುತ್ತದೆ. ಅವ್ವ ಅಥವಾ ಹೆಣ್ಣು ದೇವರ ಸೃಷ್ಟಿಯಲ್ಲಿ ಎಷ್ಟು ಸಹನಾಮೂರ್ತಿ ಎಂಬುದಕ್ಕೆ ಒಂದು ಕಿರು ಕಥೆಯನ್ನು ಹೇಳಲು ಬಯಸುತ್ತೇನೆ.
ಒಮ್ಮೆ ತನ್ನ ತಾಯಿ ಅಳುತ್ತಿದ್ದನ್ನ ನೋಡಿದ ಒಬ್ಬ ಪುಟ್ಟ ಹುಡುಗ ” ಅಮ್ಮ ಯಾಕಮ್ಮ ಅಳುತ್ತಿದ್ದೀಯ” ಎಂದು ಕೇಳಿದಾಗ ತಾಯಿಯು “ನಾನು ಹೆಣ್ಣಾಗಿ ಹುಟ್ಟಿದ ತಪ್ಪಿಗೆ ಎಂದು ಹೇಳುತ್ತಾಳೆ. ಆ ಮಗುವಿಗೆ ಸರಿಯಾದ ಉತ್ತರ ಸಿಗದೆ ಅಲ್ಲೇ ಕುಳಿತಿದ್ದ ತನ್ನ ತಂದೆಯನ್ನು “ಅಪ್ಪಾ ಅಮ್ಮ ಏಕೆ ಅಳುತ್ತಿದ್ದಾಳೆ ” ತಂದೆಯೂ ಕೂಡ ” ಅವಳು ಹೆಣ್ಣಾಗಿ ಹುಟ್ಟಿರುವುದರಿಂದ “. ಆ ಹುಡುಗನಿಗೆ ಅಪ್ಪನಿಂದಲೂ ಸರಿಯಾದ ಉತ್ತರ ಸಿಗದ ಕಾರಣ ದೇವರನ್ನೇ ಕೇಳೋಣವೆಂದು ದೇವರಿಗೆ ಕರೆ ಮಾಡುತ್ತಾನೆ. ಕರೆಯನ್ನು ಸ್ವೀಕರಿಸಿದ ದೇವರು ” ಮಗು ಏನು ನಿನ್ನ ಪ್ರಶ್ನೆ ನನಗೆ ಕರೆ ಮಾಡಿದ ಉದ್ದೇಶವೇನು” ಎಂಬ ಪ್ರೀತಿಯ ಮಾತಿಗೆ ಆ ಹುಡುಗನು ” ದೇವರೇ ನನ್ನ ಅಮ್ಮ ಅಳುತ್ತಿದ್ದಳು ಏಕೆ ಎಂದು ಕೇಳಿದರೆ ಹೆಣ್ಣಾಗಿ ಹುಟ್ಟಿದ ತಪ್ಪಿಗೆ ಎಂಬ ಉತ್ತರ ನನಗೆ ಸಮಾಧಾನ ತರದ ನಿಮಿತ್ತ ನಿನ್ನಿಂದ ಆ ಉತ್ತರವನ್ನು ನಿರೀಕ್ಷಿಸುವೆ” ಹುಡುಗನ ಆ ಮುಗ್ಧ ಮಾತಿಗೆ ದೇವರು ನಗುತ್ತ ” ನೋಡು ಮಗು ನಾನು ಹೆಣ್ಣನ್ನು ವಿಶಿಷ್ಟವಾಗಿ ಸೃಷ್ಟಿಸಿದೆ.
ಲೋಕದ ಭಾರವನ್ನು ಹೊರಲು ಆಕೆಯ ಭುಜಗಳನ್ನು ಬಲಗೊಳಿಸಿದೆ. ಅಂತೆಯೇ ಸಮಾಧಾನವನ್ನು ಕೊಡಲು ಸೌಮ್ಯತೆಯನ್ನು ಕೊಟ್ಟೆ. ಮಗುವಿನ ಜನನದ ನೋವನ್ನು ತಾಳಲು ಅದರಂತೆ, ಮಕ್ಕಳಿಂದ ಹಲವಾರು ಬಾರಿ ಬಾರಿ ತಿರಸ್ಕಾರಗಳನ್ನು ಸಹಿಸಿಕೊಳ್ಳಲು ಆಂತರಿಕ ಶಕ್ತಿಯನ್ನು ತುಂಬಿದೆ. ಕುಟುಂಬದಲ್ಲಿ ಎಂತಹ ನೋವು ದುಃಖಗಳಿದ್ದರೂ ಎಲ್ಲವನ್ನೂ ತಾಳಿಕೊಂಡು ಮುನ್ನಡೆಯಲು ಸ್ಥಿರಮನಸ್ಸನ್ನು ಕೊಟ್ಟೆನು. ಯಾವುದೇ ಪರಿಸ್ಥಿತಿಯಲ್ಲಾದರೂ ಸ್ವಂತ ಮಕ್ಕಳು ಕಷ್ಟವನ್ನು ಕೊಟ್ಟರೂ, ಯಾವುದನ್ನು ಯೋಚಿಸದೆ ಅವರನ್ನು ಇನ್ನೂ ಹೆಚ್ಚಾಗಿ ಪ್ರೀತಿಸಲು ಸೂಕ್ಷ್ಮತೆಯನ್ನು ಕೊಟ್ಟೆನು. ಅಷ್ಟೇ ಅಲ್ಲದೆ ತನ್ನ ಗಂಡನಿಗೆ ಸಹಕಾರಿಯಾಗಿ ಅದರಂತೆ ಅವನ ತಪ್ಪುಗಳನ್ನು ಕ್ಷಮಿಸಿ, ಅವನ ಹೃದಯವನ್ನು ಕಾಪಾಡಲು ಫಲವನ್ನು ಕೊಟ್ಟೆನು. ಕೊನೆಯದಾಗಿ ಕಣ್ಣೀರನ್ನು ಅಳಲು ಕೊಟ್ಟೆನು ” ಈ ವಿಸ್ತಾರವಾದ ನುಡಿಗಳನ್ನು ಅಸಲಿಸಿದ ಹುಡುಗ ಧನ್ಯನೆಂಬಂತೆ ಪ್ರಣಾಮಗಳನ್ನು ಮಾಡಿದನು.
ಈ ಕಥೆಯಲ್ಲಿ ದೇವರು ಹೇಳಿದ ಮಾತುಗಳು ಎಷ್ಟು ಸತ್ಯವಲ್ಲವೇ..?. ಗಂಡಿಗಿಂತ ಹೆಚ್ಚು ಬಲಶಾಲಿ ಹೆಣ್ಣೇ ಅಲ್ಲವೇ..?. ಅವಳ ಅಃತಕರಣ, ಕರುಣೆಗೆ ಬೆಲೆ ಇರುವುದೇ. ಪ್ರಪಂಚದ ಯಾವುದೇ ದೇಶದಲ್ಲಿ ಸಿಗದ ಅತ್ಯುನ್ನತ ಸ್ಥಾನ ನಮ್ಮ ಭಾರತ ದೇಶದ ನಾರಿಯರಿಗೆ ಸಿಕ್ಕಿದೆ. ಇಲ್ಲಿ ಅವರನ್ನು ವಿಶೇಷ ಗೌರವದಿಂದ ಕಾಣುತ್ತಾರೆ. ತಾಯಿಯನ್ನು ನಾವು ದೇವರೆಂದು ಪೂಜಿಸುತ್ತೇವೆ. ದೊಡ್ಡವರು ಹೇಳುವಂತೆ ” ದೇವರು ಎಲ್ಲ ಕಡೆ ಇರಲಾಗುವುದಿಲ್ಲವೆಂದು ತಾಯಿಯನ್ನು ಸೃಷ್ಠಿ ಮಾಡಿದನಂತೆ “. ಹೌದು ನಮಗೆ ಬೇಕು ಬೇಡಗಳನ್ನು ಅರ್ಥಮಾಡಿಕೊಂಡು ನಾವು ಬೇಕು ಎನ್ನುವ ಮೊದಲೇ ನೀಡಿರುತ್ತಾಳೆ. ಮಕ್ಕಳಿಗಾಗಿ ತನ್ನ ಆಸೆಗಳನ್ನೆಲ್ಲಾ ತ್ಯಾಗಮಾಡಿ, ತನ್ನ ಸ್ವಾರ್ಥಗಳನ್ನ ಅಡಗಿಸಿಕೊಂಡು ಜೀವನವನ್ನು ಮೀಸಲಿಡುತ್ತಾಳೆ. ಮನೆಯೇ ಮೊದಲ ಪಾಠಶಾಲೆ ಅಮ್ಮನೇ ಮೊದಲ ಗುರು ಎಂಬ ಮಾತನ್ನು ನಾವು ಕೇಳುತ್ತಲೇ ಬೆಳೆದಿದ್ದೇವೆ. ಸಾವಿರ ಗುರುಗಳಿಗೆ ಒಬ್ಬ ತಾಯಿ ಸಮಾನಳು. ತಿಳಿದವರು ಹೇಳುತ್ತಾರೆ ನೂಲಿನಂತೆ ಸೀರೆ ತಾಯಿಯಂತೆ ಮಗಳು. ಈ ಗಾದೆ ಎಷ್ಟು ಸಮಂಜಸವಾಗಿದೆಯಲ್ಲವೇ.
ಮನೆಯಲ್ಲಿ ಕಲಿತ ವಿನಯ ವಿದ್ಯೆ ಯಾವ ವಿಶ್ವವಿದ್ಯಾನಿಲಯದಿಂದಲೂ ಕಲಿಯಲು ಸಾಧ್ಯವಿಲ್ಲ. ಅಮ್ಮ ಎನ್ನುವವಳು ಕೂಲಿ ಇಲ್ಲದ ಕೆಲಸದಂತವಳಾಗಿದ್ದಾಳೆ. ಬೆಳಿಗ್ಗೆಯಿಂದ ಸಂಜೆವರೆಗೆ ಮನೆಗಾಗಿ, ಮಕ್ಕಳಿಗಾಗಿ, ಗಂಡನಿಗಾಗಿ ದುಡಿದು ದಣಿವಾಗಿದ್ದರೂ, ಶಾಲೆಯಿಂದ ಬಂದ ಮಕ್ಕಳನ್ನ ಮತ್ತು ಕೆಲಸದಿಂದ ಬಂದ ಗಂಡನ ಮುಖವನ್ನು ನೋಡಿದ ಕೂಡಲೇ ತನ್ನ ಆಯಾಸವನ್ನೆಲ್ಲಾ ಮರೆತು ಬಿಡುತ್ತಾಳೆ. ಮಗಳು ಎದೆಯತ್ತರಕ್ಕೆ ಬೆಳೆದು ಜಡೆಯನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದ ದಿನದಿಂದ ಅವಳು ತನ್ನ ಆಸೆ ಆಕಾಂಕ್ಷೆಗಳನ್ನು ಬದಿಗಿರಿಸಿ ಮಗಳ ಬೆಳವಣಿಗೆಯ ಬಗ್ಗೆ ಅವಳ ಇಷ್ಟಕಷ್ಟದ ಬಗ್ಗೆ ಗಮನ ಹರಿಸುತ್ತಾಳೆ. ಅವಳ ಅಲಂಕಾರದ ಬಗ್ಗೆ ಚಿಂತಿಸುತ್ತಾಳೆ. ತಾನು ಹೂವನ್ನು ಮುಡಿಯುತ್ತಿದ್ದನ್ನು ನಿಲ್ಲಿಸಿ ಮಗಳಿಗೇ ಮುಡಿಸಿ ಸಂತಸ ಪಡುತ್ತಾಳೆ. ಕೂಲಿ ನಾಲಿಗೆ ಹೋದಾಗ ಒಡತಿಯರು ತಿಂಡಿ, ಊಟ, ಹಣ್ಣುಹಂಪಲು ಕೊಟ್ಟರೆ ತಾನು ತಿನ್ನದೆ ಸೆರಗಲ್ಲಿ ಬಚ್ಚಿಟ್ಟು ತಂದು ಮಕ್ಕಳಿಗೆ ತಿನಿಸುತ್ತಾಳೆ. ಇದೇ ಕಾರಣಕ್ಕೆ ನನ್ನವ್ವ ನನಗೆ ನೆನಪಾಗುತ್ತಾಳೆ.
ಇದೇ ಜೂನ್ 3 ನೇ ತಾರೀಖಿಗೆ ನನ್ನವ್ವನ ಪರಿನಿರ್ವಾಣವಾಗಿ ಸಪ್ತ ಸಂವತ್ಸರಗಳು ಕಳೆಯುತ್ತದೆ. ಹೀಗ್ಗೆ ಹತ್ತು ವರ್ಷಗಳ ಹಿಂದೆ ನನ್ನ ಮದುವೆ ವಿಚಾರವಾಗಿ ನನಗೂ ನನ್ನವ್ವನಿಗೂ ಒಂದು ಸಣ್ಣ ಜಗಳ ಆಗುತ್ತದೆ. ಆಗ ನನಗೆ ಇಪ್ಪತ್ತೆಂಟರ ಹರೆಯ. ಮದುವೆ ಆಗುವ ವಯಸ್ಸು. ಮನೆಯಲ್ಲಿ ನಾನು ನನ್ಮವ್ವ ಇಬ್ಬರೇ ಇದ್ದದ್ದು. ನಾನು ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದೆ. ಊರಲ್ಲಿ ಒಬ್ಬಳೇ ಇದ್ದ ಕಾರಣ ಮದುವೆ ಮಾಡಿಕೋ ಎಂದು ಒತ್ತಾಯ ಮಾಡುತ್ತಿದ್ದಳು. ಏಕೆಂದರೆ ನನ್ನಣ್ಣಂದಿರಿಬ್ಬರಿಗೆ ಇಪ್ಪತ್ತೈನೆಯ ವಯಸ್ಸಿಗೆ ಮದುವೆ ಮಾಡಿ ಮುಗಿಸಿದ್ದಳು. ಒಂಟಿ ಹೆಂಗಸು ಗಂಡನ ಕಳೆದುಕೊಂಡು ಕೂಲಿ ನಾಲಿ ಮಾಡಿ ಸಮಾಜದಲ್ಲಿ ಎಲ್ಲರಂತೆ ಬದುಕಬೇಕು ಎಂದು ಸ್ವಾಭಿಮಾನದಿಂದ ಜೀವಿಸುತ್ತಿದ್ದಳು. ನನ್ನ ಅಪ್ಪ ನಾನು ಒಂದು ವರ್ಷದ ಮಗುವಾಗಿದ್ದಾಗ ತೀರಿಕೊಂಡರಂತೆ.
ಅವರ ಮುಖದ ಛಾಯೆಯನ್ನೇ ನಾನು ಗಮನಿಸಿರಲಿಲ್ಲ. ನನ್ನವ್ವನೇ ಗಂಡಸಿನಂತೆ ನಿಂತು ಎಲ್ಲವನ್ನೂ ನಿಭಾಯಿಸುತ್ತಿದ್ದಳು. ಆಗಲೇ ವಯಸ್ಸು ಅರವತ್ತರ ಆಸುಪಾಸಿನಲ್ಲಿತ್ತು. ಅದೇ ಕಾರಣಕ್ಕೆ ನಾನಿರುವಾಗಲೇ ನಿನಗೂ ಮದುವೆ ಮಾಡಿ ಕಣ್ತುಂಬಿಕೊಳ್ಳುವೆ ಎಂದು ಒತ್ತಾಯಿಸತೊಡಗಿದಳು. ನಾನೋ ನನ್ನವ್ವನಿಗೆ ” ಅವ್ವ ನನಗೆ ಇನ್ನೂ ಸ್ವಲ್ಪ ದಿವಸಗಳ ಕಾಲ ಮದುವೆ ಬೇಡ ಚನ್ನಾಗಿರುವ ಹುಡುಗಿ ಸಿಕ್ಕ ಮೇಲೆ ಆಗುತ್ತೇನೆ ” ಎನ್ನುತ್ತಿದ್ದಾಗ ” ಅಲ್ಲಕಡ ಕೂಸೆ ಅಂದ ಚಂದ ಕಟ್ಕಂಡು ಯಾನ್ ಮಾಡಿಯಾ ಕೊಳ್ಬ ಊದಕ್ಕ ಎರಡು ತುಟಿ ಇದ್ರ ಸಾಕಾಲ್ವ ಅವ್ಳೇನ ಕುಂಡುಸ್ಕಂಡು ನೆಕ್ಕಿಯಾ. ಇಲ್ಲಾ ನಾ ಸತ್ತ ಮೇಲ ಯಾನಾದರೂ ಮದುವೆ ಆದಯಾ “. ಈ ಮಾತು ಆ ದಿವಸಗಳಲ್ಲಿ ನನಗೆ ತಮಾಷೆ ಎನಿಸಿದ್ದರೂ ಪ್ರತಿವರ್ಷದ ಅವಳ ಪರಿನಿರ್ವಾಣದ ದಿನದಂದು ದುಃಖ ಉಕ್ಕುಕ್ಕಿ ಬರುತ್ತದೆ. ಯಾಕೆಂದರೆ ಅದಾವ ಘಳಿಗೆಯಲ್ಲಿ ಹೇಳಿದಳೋ ನಾ ಸತ್ತ ಮೇಲೆ ಮದುವೆ ಆಗುತ್ತೀಯ ಎಂದು ಹಾಗೇ ಆಗಿಹೋಯಿತು. ನನ್ನ ಮದುವೆಗೆ ಇನ್ನೂ ಹದಿನೈದು ದಿನಗಳು ಬಾಕಿ ಇರುವಾಗಲೇ ನನ್ನವ್ವ ನನ್ನನ್ನು ಬಿಟ್ಟು ಇಹಲೋಹ ತ್ಯಜಿಸಿದಳು.
ಕಿರಿ ಮಗನ ಕಂಡರೆ ಬಲು ಪ್ರೀತಿ ಎಂದು ಎಲ್ಲರೂ ಹೇಳುತ್ತಿದ್ದರು. ಅದರಂತೆಯೇ ನನ್ನವ್ವ ನನ್ನ ಇಷ್ಟಕಷ್ಟವನ್ನೆಲ್ಲಾ ತಿಳಿದುಕೊಂಡು ನಾನೇನು ಯೋಚಿಸುತ್ತೇನೆ ಎಂಬುದನ್ನು ಆಲೋಚಿಸಿಬಿಡುತ್ತಿದ್ದಳು. ನನ್ನ ಮದುವೆಗೆ ಹುಡುಗಿ ನೋಡಿ ಬಂದು ನನಗೆ ಒಪ್ಪಿಗೆ ಎಂದು ಹೇಳಿದಾಗ ಬಹಳ ಹರ್ಷ ವ್ಯಕ್ತಪಡಿಸಿದಳು. ಹೂ ಮುಡಿಸುವ ಶಾಸ್ತ್ರದ ದಿನ ಮೆಚ್ಚಿ ಭಾವಿ ಸೊಸೆಗೆ ಅವಳ ಕೈಯಿಂದ ಇನ್ನೂರು ರೂಪಾಯಿಗಳನ್ನು ಪ್ರೀತಿಯಿಂದ ನೀಡಿದಳು. ಅದನ್ನು ಈಗಲೂ ನನ್ನ ಮಡದಿ ಅತ್ತೆಯ ನೆನಪಿಗೆ ಜೋಪಾನವಾಗಿ ಇಟ್ಟುಕೊಂಡಿದ್ದಾಳೆ. ನಾನು ನಾಲ್ಕು ವರ್ಷದವನಿದ್ದಾಗ ತುಂಬಾ ತುಂಟ ಮತ್ತು ಹಠಮಾರಿಯಂತೆ. ಆದರೆ ಊಟದ ವಿಷಯದಲ್ಲಿ ಏನೋ ಕೊಟ್ಟರೂ ಬೇಡ ಎನ್ನುತ್ತಿರಲಿಲ್ಲ ಎಂದು ಆಗಾಗ ನನ್ನವ್ವ ಹೇಳುತ್ತಿದ್ದಳು. ಬಹುಶಃ ಈಗಲೂ ಹಾಗೆಯೇ ಊಟದ ವಿಷಯದಲ್ಲಿ ಯಾವುದೇ ಭೇದಬಾವಲಿಲ್ಲ.
ಆದರೆ ಹಠಮಾರಿತನ ಮತ್ತು ತುಂಟುತನ ಮಾತ್ರ ಇಲ್ಲ. ನಮ್ಮ ಸಂಬಂಧಿಕರ ಮಕ್ಕಳು ತಿಂಡಿಯನ್ನು ತಿನ್ನುತ್ತಿದ್ದರೆ ನನಗೂ ಬೇಕು ಎಂದು ನನ್ನವ್ವನಿಗೆ ದಂಬಾಲು ಬೀಳುತ್ತಿದ್ದೆ. ಪಾಪ ಅವಳೋ ಬಡವಿ ಬಡತನದಲ್ಲಿ ಬೇಯತ್ತಿದ್ದಳು. ಎಲ್ಲಿಂದ ತಿಂಡಿಗಳನ್ನು ನನಗೆ ಕೊಡಿಸಲು ಸಾಧ್ಯ. ಅಡುಗೆ ಮಾಡುವಾಗ ಅವಳ ಕೊರಳುಗಳನ್ನು ಬಳಸಿ ಅಳುತ್ತಿದ್ದ ನೋಡಿ ರಾಗಿ ಮುದ್ದೆಯನ್ನು ಒಂದಿಸುವಾಗ ಬಿಸಿ ಬಿಸಿಯಾಗಿ ತೆಗೆದು ಚಿಕ್ಕ ಗೊಂಬೆಯಂತೆ ಮಾಡಿ ಅದಕ್ಕೆ ಹರಳು ಉಪ್ಪನ್ನು ಬೆರೆಸಿ ಮಿದ್ದಿಸಿ ಕೊಟ್ಟು ಬಿಡುತ್ತಿದ್ದಳು. ಅದೇ ನನಗೆ ತಿಂಡಿ ತೀರ್ಥ, ಹಣ್ಣು ಹಂಪಲುಗಳು. ಆ ಚಿಕ್ಕಗೊಂಬೆಯಂಥ ರಾಗಿ ಮುದ್ದೆಯನ್ನು ಕಡಿಯುತ್ತ ಸಂತೋಷಪಡುತ್ತಿದ್ದೆ. ಅದೇ ತಾಯಿಯ ಪ್ರೀತಿ, ಮಮತೆ. ಮಕ್ಕಳನ್ನು ಹೇಗೆ ನಿಭಾಯಿಸಬೇಕು ಎಂದು ಅವಳಿಗೆ ತಿಳಿದಿರುತ್ತದೆ.
ನನಗೆ ಹತ್ತು ವರ್ಷಗಳು ಇರಬಹುದು ಒಮ್ಮೆ ನನ್ನವ್ವ ನಮ್ಮ ಊರಿಂದ ಸ್ವಲ್ಪ ದೂರದಲ್ಲೇ ಇದ್ದ ನಮ್ಮ ಗದ್ದೆಗೆ ನೀರು ಬಿಡಲೆಂದು ರಾತ್ರಿಯ ವೇಳೆ ನನ್ನನ್ನು ಕರೆದುಕೊಂಡು ಹೋದಳು. ನೀರು ಕಡಲಿನ ತುಂಬ ಹರಿಯುತ್ತ ಗದ್ದೆಗೆ ನುಗ್ಗುತ್ತಿತ್ತು.ರಾತ್ರಿ ಸುಮಾರು ಹನ್ನೊಂದು ಗಂಟೆಯ ಸಮಯ. ನನಗೆ ನಿದ್ರೆಯ ಮಂಪರು ತೂಕಡಿಕೆ ಬರುತ್ತಿತ್ತು. ನೀರು ಬಿಡುವ ಆತುರದಲ್ಲಿದ್ದ ನನ್ನವ್ವ ನನ್ನ ಕಷ್ಟವನ್ನು ನೋಡಿ ಅಲ್ಲೇ ಸ್ವಲ್ಪ ಅಗಲವಾದ ಕಟ್ಟೆಯ ಮೇಲೆ ಮಲಗಿಸಿದಳು. ನಿದಿರೆಯಲ್ಲಿ ನೀರಿನ ಚಿಕ್ಕ ಕಾಲುವೆಯೊಳಗೆ ಉರುಳಿಬಿಟ್ಟಿದ್ದೆ.ಮೈತುಂಬಾ ಕಂಬಳಿ ಹೊದಿಸಿದ್ದರಿಂದ ನನಗೆ ನೀರಿಗೆ ಉರುಳಿದ್ದು ಗೊತ್ತಾಗಿರಲಿಲ್ಲ. ನನ್ನ ಅದೃಷ್ಟ ಅಷ್ಟರೊಳಗೆ ನನ್ನವ್ವ ಅದೇ ಸಮಯಕ್ಕೆ ಬಂದು ನೋಡಿದ್ದಾಳೆ ನಾನು ಕಾಣದ ಭಯದಲ್ಲಿ ಕಡಲನ್ನು ನೋಡಿದ್ದಾಳೆ ಏನೋ ತೇಲುತ್ತಿದೆ ಎಂದು ಮುಂದೆ ಬಂದು ನೋಡಿ ಗಾಬರಿಯಿಂದ ಎತ್ತಿಕೊಂಡು ಗೊಳೋ ಅಂತ ಅಳುತ್ತಿದ್ದಳು.
ಅದೇ ಕೊನೆ ಇನ್ನೆಂದೂ ನನ್ನನ್ನು ಕರೆದುಕೊಂಡು ಹೋಗಲಿಲ್ಲ. ಇಲ್ಲಿ ನನ್ನವ್ವನ ಎದೆಗಾರಿಕೆ ಮತ್ತು ಧೈರ್ಯವನ್ನು ಅನಾವರಣಗೊಳಿಸಲು ಹೇಳಿದಂತದ್ದು. ಹೆಣ್ಣಾಗಿದ್ದರೂ ಗಂಡಸಿನಂತೆ ಹಗಲು ರಾತ್ರಿಗಳೆನ್ನದೆ ದುಡಿದು ನಮ್ಮನ್ನು ಈ ಸ್ಥಾನಕ್ಕೆ ತಂದಿದ್ದಾಳೆ. ಆದರೆ ಈ ಸಮಯದಲ್ಲಿ ನಮ್ಮ ಜೊತೆ ಇದ್ದು ಸಂತೋಷ ಪಡಲು ಅವಳಿಲ್ಲ ಅವಳು ಈಗ ಬರೀ ನೆನಪು ಮಾತ್ರ. ಈಗ ನನ್ನ ಮಡದಿ ತುಂಬು ಗರ್ಭಿಣಿ ಅವಳ ಹಾರೈಕೆಗೆ ಯಾರ ಒತ್ತಾಸೆಯೂ ನಮಗೆ ಸರಿಯಾಗಿ ಸಿಗುತ್ತಿಲ್ಲ. ಅದೇ ನನ್ನವ್ವ ಇದ್ದರೆ ಎಷ್ಟು ಪ್ರೀತಿಯಿಂದ ಸೊಸೆ ಮತ್ತು ಮೊಮ್ಮಗುವನ್ನು ಹಾರೈಕೆ ಮಾಡುತ್ತಿದ್ದಳೋ…? ನಮಗೆ ಆ ಅದೃಷ್ಟವಿಲ್ಲ. ಅಮ್ಮ ಇರುವಾಗ ಅವಳ ಬೆಲೆ ತಿಳಿಯುವುದಿಲ್ಲ. ಇಲ್ಲದಾಗ ಬಹಳ ಕಾಡುತ್ತಾಳೆ.
–ಮಹದೇವ್ ಬಿಳುಗಲಿ
9611339024
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮಣ್ಣ ಮಕ್ಕಳು

- ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.
ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.
ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು

ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.
ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.
- ಬಸವರಾಜ ಹೂಗಾರ
ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.
ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.
- ಡಾ.ರಹಮತ್ ತರೀಕೆರೆ
ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.
- ಬಿ.ಶ್ರೀನಿವಾಸ,ಕೃತಿ ಲೇಖಕ
ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.
ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.
“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.
ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.
ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.
ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ
- ಡಾ.ರಾಮಚಂದ್ರ ಹಂಸನೂರು, ಬೆಟಗೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಂತಃಕರಣೆಯ ಹುಡುಕುತ್ತಾ..

- ಬಿ.ಶ್ರೀನಿವಾಸ
ಒಂದು ಊರಿನ ಮೌನ ಅರ್ಥವಾಗಬೇಕಾದರೆ, ದುಃಖ ಅರ್ಥವಾಗಬೇಕಾದರೆ ನಾವು ಏನನ್ನು ಮಾಡಬೇಕು? ನಾವು ಹೇಗೆ ಬದುಕಬೇಕು? ಗಾಯಗೊಂಡ ಬೆಟ್ಟ-ಗುಡ್ಡ ,ನದಿ ತೊರೆಗಳ ಬತ್ತಿಹೋದ ನೆಲದ ಕಣ್ಣಿಂದ ಪ್ರಾಣಿ-ಪಕ್ಷಿಗಳ ಆ ದೈನೇಸಿ ನೋಟಗಳಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ? ಪ್ರೀತಿ ,ಸಹಾನುಭೂತಿ ಗಳನ್ನು ಕಳೆದುಕೊಂಡವರು ಮಾತ್ರ ನಮ್ಮ ಸುತ್ತಮುತ್ತಲ ಬದುಕು ನರಕ ಸದೃಶವಾಗಿದ್ದರೂ ನೆಮ್ಮದಿಯಿಂದ ಉಣ್ಣ ಬಲ್ಲರು. ನಿದ್ರಿಸಬಲ್ಲರು, ಬರೆಯಬಲ್ಲರು.
ಬಳ್ಳಾರಿ ಜಿಲ್ಲೆಯ ಸೊಂಡೂರು ಮತ್ತು ಸುತ್ತಮುತ್ತಲಿನ ಪ್ರದೇಶದ ಬಹುತೇಕ ಹಳ್ಳಿಗಳು ರೋಗಗ್ರಸ್ತ ಪೀಡಿತರಂತೆ ಕಾಣುತ್ತಿವೆ .ಕಳೆದ ದಶಕದ ಅವಧಿಯೊಂದರಲ್ಲಿ ನಡೆದ ಗಣಿಗಾರಿಕೆಯಿಂದಾಗಿ ಇಡೀ ಪ್ರದೇಶ ಶಾಶ್ವತ ಬರಪೀಡಿತ ಪ್ರದೇಶವಾಗಿ ಬಿಟ್ಟಿದೆ. ಅದಿರು ಸಾಗಾಣಿಕೆಯ ಹೆಚ್ಚಳದಿಂದಾಗಿ ಕಾರ್ಬನ್ ಡೈಯಾಕ್ಸೈಡ್ ಆಸ್ಫೋಟಿಸಿದೆ. ಅಪರೂಪದ ಗಿಡ-ಮರಗಳು, ಪಕ್ಷಿಗಳು ,ಅಳಿವಿನಂಚಿಗೆ ತಳ್ಳಲ್ಪಟ್ಟಿವೆ.
ಶಾಲೆಗಳು ಮಕ್ಕಳಿಲ್ಲದೆ ಮುಚ್ಚಲ್ಪಟ್ಟವು. ಅದಿರು ಹೊತ್ತ ಲಾರಿಗಳಲ್ಲಿ ಮಕ್ಕಳ ಅಕ್ಷರಗಳನ್ನು ತುಂಬಿ ಕಳುಹಿಸಲಾಯಿತು. ಜನರು ಇಂತಹ ಬದುಕಿಗೆ ಹೊಂದಿಕೊಳ್ಳದೆ ಅನ್ಯ ಮಾರ್ಗವೇ ಇರಲಿಲ್ಲ. ಸತತ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ನಡೆದ ಗಣಿಗಾರಿಕೆಯಿಂದಾಗಿ ಜನರ ಸಾಕ್ಷರತೆಯ ಪ್ರಮಾಣ ಮತ್ತು ಜೀವನಾಯುಷ್ಯ ಪ್ರಮಾಣ ಪಾತಾಳಕ್ಕೆ ಕುಸಿದಿದೆ . ರಕ್ತಹೀನತೆಯಿಂದ ಬಳಲುವ ಮಹಿಳೆಯರ ಸಂಖ್ಯೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಗಿಂತಲೂ ಜಾಸ್ತಿಯಾಗಿದೆ. 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವು ಅಧಿಕವಾಗಿದೆ.
ಇಲ್ಲಿನ ಸಂಪನ್ಮೂಲ ಇರುವುದೇ ತಮ್ಮ ಭೋಗ ವಿಲಾಸಕ್ಕೆ ಎಂದು ರಾಜಕೀಯವರ್ಗ,ಉದ್ಯಮಿಗಳು ಮತ್ತು ಕೆಲ ಆಡಳಿತಶಾಹಿ ಅಧಿಕಾರಿಗಳು ತಿಳಿದುಕೊಂಡಿದ್ದರು ಬಳ್ಳಾರಿ ಜಿಲ್ಲೆ ಇರುವುದೇ ಲೋಲುಪತೆ ಗೋಸ್ಕರ ಇಲ್ಲಿ ಹಣವೊಂದಿದ್ದರೆ ಏನೆಲ್ಲಾ ಸಾಧಿಸಬಹುದು ಮತಗಳನ್ನು ಮತದಾರರನ್ನು ಕೊಂಡುಕೊಳ್ಳಬಹುದು, ರಾಜಕೀಯ ಚುನಾವಣಾ ಪ್ರಚಾರಕ್ಕೆ ದಿನವೊಂದಕ್ಕೆ ಲಕ್ಷದಂತೆ ತಿಂಗಳುಗಟ್ಟಲೆ ಪ್ರಚಾರ ಮಾಡಿದ ಸಿನಿತಾರೆಯರಿಗೇನೂ ಕಡಿಮೆ ಇಲ್ಲ.ಸಂಪನ್ಮೂಲಗಳ ಹಗಲು ದರೋಡೆ ರಾಜಾರೋಷವಾಗಿ ನಡೆದುಹೋಯಿತು.
ಈ ಊರುಗಳಲ್ಲಿ ಬುಡುಬುಡುಕಿಯವರಿದ್ದರು, ಹಗಲುವೇಷಗಾರರು, ನಕ್ಕುನಗಿಸುವ ಹಾಡುಗಾರರು, ಬಯಲಾಟದವರು,ಕುರ್ರಮಾಮುಡು ವಸ್ತುನ್ನಾಡು…ಟಿಮ್ ಟಿಮ್….ಎನ್ನುತ್ತ ಬರುವವರು,ಗಿಣಿಶಾಸ್ತ್ರ ಹೇಳುವವರು ,ಬಣ್ಣಬಣ್ಣದ ಹರಳು ಮಾರುವ ಮಹಾ ಗಟ್ಟಿಗಿತ್ತಿಯರು, ಕಾಡಿನ ಗರ್ಭ ಹೊಕ್ಕು ಒಣ ಮರದ ಕಟ್ಟಿಗೆ ತಂದು, ಹೊತ್ತು ಮಾರಿ ಜೀವಿಸುವ ಲಂಬಾಣಿ ಯಾಡಿಗಳಿದ್ದರು. ಜೊತೆಗೆ ಅವರ ಉಡಿಗಳಲ್ಲಿ ಕಾರಿ, ಕವಳಿ,ಪುಟ್ಲಾಸು, ಬಿಕ್ಕಿ ಹಣ್ಣಿನಂತಹ ಹಣ್ಣುಗಳು ಇರುತ್ತಿದ್ದವು.
ಆಹಾರ ಸಂಪಾದನೆಯ ಬೇರೆ ಮೂಲಗಳೇ ಗೊತ್ತಿಲ್ಲದ ಇವರಿಗೆ ಭಿಕ್ಷೆಯೊಂದೇ ಉಳಿದಿರುವ ಮಾರ್ಗ. ಇವರುಗಳೆಲ್ಲಾ ಸಮಾಜದ ಕಣ್ಣಿನಲ್ಲಿ ಅಪರಾಧಿಗಳಂತೆ ಕಾಣುತ್ತಿರುವುದು ಪರಿಸ್ಥಿತಿಯ ವ್ಯಂಗ್ಯ .ಇವರನ್ನು ಇವರ ಕಲೆಯನ್ನು ಗೌರವಿಸುವ ಒಂದು ಸಮುದಾಯವೇ ನಾಶವಾಗಿಹೋಯಿತು.ರೊಕ್ಕಾ ಕೊಟ್ಟರೆ ಏನು ಬೇಕಾದುದನ್ನು ಪಡೆಯಬಹುದೆಂಬ ಅಹಂ-ಭಾವಹೀನ ಮನುಷ್ಯರನ್ನು ಸೃಷ್ಟಿಸುತ್ತಾ ನಡೆದಿದೆ.
ಸೊಂಡೂರು -ಬಳ್ಳಾರಿ ಜಿಲ್ಲೆಯ ಮಲೆನಾಡು .ಪುಟ್ಟ ಕಾಶ್ಮೀರ. ಬೆಟ್ಟ ಗುಡ್ಡಗಳಿಂದ ಆವೃತವಾದ ಸುಂದರನಾಡು .ಅತಿ ಫಲವತ್ತಾದ ಮಣ್ಣು ತುಂಬಿದ ನೆಲ. ಜಲಮೂಲಗಳುಳ್ಳ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ, ಸೊಂಡೂರಿನ ಸುತ್ತಮುತ್ತ ಸುಮಾರು 40 ಕಿಲೋಮೀಟರ್ ಉದ್ದದ, 15 ಕಿಲೋಮೀಟರುಗಳಷ್ಟು ಅಗಲದ ಬೆಟ್ಟಗಳಲ್ಲಿ ಕಬ್ಬಿಣ, ತಾಮ್ರ ಮತ್ತು ಮ್ಯಾಂಗನೀಸ್ ಅದಿರಿನ ಗಣಿಗಳಿವೆ. ಇಲ್ಲಿ ದೊರೆಯುವ ಹೆಮಟೈಟ್ ಉತ್ತಮ ದರ್ಜೆಯ ಕಬ್ಬಿಣದ ಅದಿರು. ಹಾಗೆಯೇ ಮ್ಯಾಂಗನೀಸ್ ಕೂಡ ಡೇರಸ್ ಫಿಲೈಟ್ ಎಂಬ ಕಲ್ಲುಗಳಲ್ಲಿ ಹೇರಳವಾಗಿ ದೊರೆಯುತ್ತದೆ.
ಇದೇ ರೀತಿಯ ಸಂಪತ್ತು ಬೇರೆ ಕಡೆಗಳಲ್ಲಿ ಸಿಗುವುದಿಲ್ಲ ಎಂದಲ್ಲ. ವಿಶ್ವದರ್ಜೆಯ ಶ್ರೇಷ್ಠ ಮಟ್ಟದ ಮ್ಯಾಂಗನೀಸ್ ಅದಿರಿನ ನಿಕ್ಷೇಪಗಳು ಸುಬ್ರಾಯನಹಳ್ಳಿ ,ರಾಮಘಡಗಳಂತಹ ಹಳ್ಳಿಗಳ ಶಿಖರಗಳಲ್ಲಿ ದೊರೆಯುತ್ತವೆ. ಈ ಅದಿರಿನ ವಿಶೇಷವೆಂದರೆ ಬಹುತೇಕ ಅದಿರುಗಳಲ್ಲಿ ಸೇರಿಹೋಗಿರುವ ಫಾಸ್ಪೇಟ್ ಮತ್ತು ಸಲ್ಫರ ನಿಗದಿತ ಅಂಶಕ್ಕಿಂತ ಕಡಿಮೆ ಇರುವುದರಿಂದ ಇಲ್ಲಿನ ಮ್ಯಾಂಗನೀಸ್ ವಿಶ್ವ ಪ್ರಸಿದ್ಧವಾಗಿದೆ ಹಾಗಾಗಿ ಇಲ್ಲಿನ ಅದಿರಿಗೆ ವಿಶೇಷ ಬೇಡಿಕೆ.
ಬಳ್ಳಾರಿ ಜಿಲ್ಲೆಯ ಸೊಂಡೂರು ಕೇವಲ ಒಂದು ಊರು,ಪ್ರದೇಶ ಆಗಿರಬಹುದು .ಆದರೆ ಆತ ಊರಿನ ದುರಂತ ಇಡೀ ಪ್ರಪಂಚವನ್ನೇ ಪ್ರತಿನಿಧಿಸುವುದರ ಸಂಕೇತ. ಗಣಿಗಾರಿಕೆ ಆರಂಭವಾದಾಗಲೇ ಊರಿನ ಅವನತಿಯ ಆರಂಭವಾಯಿತು. ಯಥೇಚ್ಛವಾಗಿ ಗಣಿಗಾರಿಕೆಗೆ ಸರ್ಕಾರವೇ ಅನುಮತಿ ನೀಡುವಾಗ ಅದರ ಹೆಸರಿನಲ್ಲಿ ರಾಜಕಾರಣಿಗಳು ಅಕ್ರಮ ಗಣಿಗಾರಿಕೆ ನಡೆಸುವಾಗಲಂತೂ ಊರು ಆಹುತಿಯಾಗಿ ಬಿಟ್ಟಿತ್ತು. ಮನುಷ್ಯರು ಕೂಲಿಯ ಯಂತ್ರಗಳಾಗಿ ಹೋದರು.
ಮನುಷ್ಯನೇ ಸಂಶೋಧಿಸಿದ ಮೂಲ ಕಸುಬುಗಳಾದ ಕೃಷಿ ,ಬಡಗಿತನ, ಕ್ರೀಡೆ ಹಾಗೂ ಮೈಥುನಗಳು ಸಹ ಕೇವಲ ಯಾಂತ್ರಿಕವೆಂಬಂತೆ ಆಗಿಹೋದವು.ಎಷ್ಟೋ ದಿನಗಟ್ಟಲೆ,ತಿಂಗಳುಗಟ್ಟಲೆ, ಗಣಿಗಾರಿಕೆ ಬೆಟ್ಟಗಳ ತುತ್ತತುದಿಯಲ್ಲಿ ನಡೆಯುತ್ತಿತ್ತು.ಕೂಲಿಯವರೂ ಅಷ್ಟೂ ದಿನಗಳ ಕಾಲ ಅಲ್ಲಿಯೇ ಇರಬೇಕಾಗುತ್ತಿತ್ತು. ಕೂಲಿಯ ಹೆಣ್ಣು ಗಂಡುಗಳು ಅದಿರಿನ ನಿಕ್ಷೇಪದ ಬಯಲಿನಲ್ಲಿಯೇ ಮೈಥುನಕ್ಕಿಳಿದುಬಿಡುತ್ತಿದ್ದರು.ಮಕ್ಕಳು ಉಣ್ಣುವ ಅನ್ನದಲ್ಲಿ ಕೆಂಪುಧೂಳು ಸೇರಿಸಿಯೇ ಉಣ್ಣಬೇಕಾಗುತ್ತತ್ತು. ಕಂಟೇನರುಗಳಲ್ಲಿಯೇಇವರ ಜೀವನ ಮುಗಿದುಹೋಗಿರುತ್ತಿತ್ತು.ಮನುಷ್ಯ ಹೀಗೂ ಬದುಕಬಲ್ಲ ಎಂಬುದನ್ನು ಯಾರೂ ಕೂಡ ಯೋಚಿಸಲಿಲ್ಲ.
ಗಣಿ ಸಾವ್ಕಾರಗಳು ಸಾಮಾನ್ಯ ಜನರ ಕಣ್ಣಿಗೆ ಇಂದಿಗೂ ವೈಭೋಗದ ತುಣುಕುಗಳ ಹಾಗೆ ಕಾಣಿಸುತ್ತಿದ್ದಾರೆ. ಜನರನ್ನು ,ಅವರ ಗಮನವನ್ನು ಬೇರೆಡೆಗೆ ಸೆಳೆಯದಂತೆ ಎಷ್ಟು ಪ್ರಯತ್ನಗಳು ನಡೆದಿರುತ್ತವೆ ಎಂದರೆ, ಊರಿನಲ್ಲಿ ಎಲೆಕ್ಷನ್ ಇರಲಿ ,ಇಲ್ಲದಿರಲಿ ,ಧಣಿ- ರಾಜಕಾರಣಿಯ ವಿವಿಧ ರೀತಿಯ ಬಣ್ಣಬಣ್ಣದ ಕಟೌಟುಗಳು ದಾರಿಯುದ್ದಕ್ಕೂ ರಾರಾಜಿಸುತ್ತವೆ. ಪ್ರತಿವಾರವೂ ಕಟೌಟ್ಗಳು ಬದಲಾಗುತ್ತಲೇ ಇರುತ್ತದೆ.
ಇನ್ನು ಕೆಲ ಸಾಹುಕಾರ ಗಳಂತೂ ತಾವೇ ಆಧುನಿಕ ಶ್ರೀ ಕೃಷ್ಣದೇವರಾಯ ಎಂದು ಭಾವಿಸಿ ,ಅವನಂತೆಯೇ ವೇಷಧರಿಸಿ ನಿಂತು ಬೃಹತ್ ಕಟೌಟುಗಳನ್ನು ನಗರದ ವಿವಿಧ ಕಡೆಗಳಲ್ಲಿ ನಿಲ್ಲಿಸಲಾಯಿತು.ಬಳ್ಳಾರಿಯ ಗಣಿಧಣಿಗಳದ್ದೂ ಇನ್ನೊಂದು ರೀತಿ.ಮುಂಜಾನೆಯ ಟಿಫನ್ನಿಗೆ ಬೆಂಗಳೂರಿನ ಎಂ.ಟಿ.ಆರ್.ಹೋಟೆಲ್ಲಿಗೆ ಹೆಲಿಕಾಪ್ಟರ್ ನಲ್ಲಿ ಹೋದರೆ,ಅದಕ್ಕೂ ಮುನ್ನ ಹೆಲಿಕಾಪ್ಟರ್ ನಲ್ಲಿ ಹೈದರಾಬಾದ್ ವರೆಗೂ ವಾಕಿಂಗ್ ಹೋಗುವವರಿದ್ದರು.ವಿಮಾನದಲ್ಲಿ ಮಧ್ಯಾನ್ಹದ ಊಟಕ್ಕೆ ಬೊಂಬಾಯಿಗೆ ಹೋಗುತ್ತಿದ್ದರು.ರಾತ್ರಿ ಮತ್ತೆಲ್ಲಿಗೋ…!ಎಷ್ಟೋ ಜನ ಸಿನಿಮಾದವರು ರಾತ್ರೋರಾತ್ರಿ ಬಂದುಹೋಗುವುದನ್ನು ನೋಡಿದವರು ಇದ್ದರು.
ಲೋಲುಪತೆಗೆ ಜನರ ಬದುಕನ್ನೆ ಆಹುತಿ ತೆಗೆದುಕೊಂಡ ಧಣಿಗಳು,ಕೊನೆಗೆ ಜನರು ತಮ್ಮ ಕಡೆಗೆ ದೃಷ್ಟಿ ಹರಿಸಲೆಂದು ಸದಾ ಒಂದಿಲ್ಲೊಂದು ಸುದ್ದಿಯಿಂದ ಜನರನ್ನು ಭ್ರಮಾಲೋಕದಲ್ಲಿ ತಿರುಗುವಂತೆ ನೋಡಿಕೊಂಡರು.”ಸಾಮೂಹಿಕ ಮದುವೆ”ಗಳಂತಹ ಕೃತ್ರಿಮ ಕಾರ್ಯಕ್ರಮಗಳಿಗೆ ಕೈ ಹಾಕಿದರು.ಆ ಮೂಲಕ ಅಲ್ಲಿ ಬಂದ ವಧು-ವರರಿಗೆ ತಾಳಿ- ಬಟ್ಟೆ ಕೊಡುವುದರ ಮೂಲಕ “ದಾನಶೂರ”ರು ಎನಿಸಿಕೊಂಡರು.ಆದರೆ ಇಂತಹ ವಿವಾಹಗಳು ಹೆಸರಿನಲ್ಲಿ ಜನರು ಪ್ರಶ್ನೆ ಕೇಳುವುದನ್ನು,ಆಲೋಚನೆಯನ್ನೆ ಮಾಡದಿರುವ ಹಾಗೆ,ಅರ್ಥಮಾಡಿಕೊಳ್ಳುವ ಅವರು ಗುಣವನ್ನೆ ನಾಶಪಡಿಸಲಾಯಿತು.ಇಂತಹ ಗಣಿಧಣಿಗಳ ಭಿಕ್ಷೆಗೆ ಕೆಲ ಮಠಾಧೀಶರು ಕೈಚಾಚಿದರು.
ಜನರ ಬದುಕು ಕುಸಿಯಲು ಎಷ್ಟೊಂದು ಜನ ಒಂದಾದರು?
ನೆನೆಸಿಕೊಂಡರೆ ರೋಷ ಆವೇಶವೂ ಅಂತಕರುಣೆಯೂ ಒಟ್ಟಿಗೆಉಕ್ಕಿಬರುತ್ತದೆ.
ಜಿಲ್ಲೆಯ ಗಡಿಪ್ರದೇಶದ ಒಂದು ಬಹುಮುಖ್ಯವಾದ ಹಳ್ಳಿ ಕಮ್ಮತ್ತೂರು. ಈ ಊರಿನಲ್ಲಿ ನಡೆದಷ್ಟು ಗಣಿಗಾರಿಕೆ ಮತ್ತು ಡಿಪ್ಪಿಂಗ್ ಬೇರೆಲ್ಲೂ ನಡೆದಿರಲಿಕ್ಕಿಲ್ಲ .ಊರಿನ ಮನೆ ಗಳಿಗಿಂತಲೂ ಅಧಿಕವಾದ ಸ್ಟಾಕ್ ಯಾರ್ಡ್ಗಳು ನಿರ್ಮಾಣವಾದವು. ಧೂಳಿನಿಂದಾಗಿ ಮತ್ತು ವಿಪರೀತ ಶಬ್ದದಿಂದಾಗಿ ಅಸ್ತಮಕ್ಕೆ, ಕಿವುಡುತನಕ್ಕೆ ಬಲಿಯಾದವರಿಗೆ ಲೆಕ್ಕವಿಲ್ಲ. ಅಪರಿಮಿತ ಗಣಿಗಾರಿಕೆಯ ಪ್ರಭಾವದಿಂದಾಗಿ ಆಕ್ಸಿಜನ್ ಪ್ರಮಾಣ ಕುಸಿತ ಕಂಡಿತು. ಇಡೀ ಊರಿಗೆ ಊರೇ ಐಸಿಯುನಲ್ಲಿ ಇರುವಂತೆ ಭಾಸವಾಗುತ್ತಿದೆ.ಇಂತಹ ಎಷ್ಟೋ ಹಳ್ಳಿಗಳು ಉಸಿರಾಡಲು ಕಷ್ಟಪಡುತ್ತಿವೆ.
ಒಂದು ಕಾಲದ ರೈತ ಹೊಲ, ಗದ್ದೆ, ಮಣ್ಣನ್ನು ಪೂಜಿಸುತ್ತಿದ್ದ. ಆರಾಧಿಸುತ್ತಿದ್ದ .ಗುಡ್ಡಬೆಟ್ಟ ಸೂರ್ಯ ಚಂದ್ರ ತಾರೆಯರೇ ಆತನ ದೇವರುಗಳಾಗಿದ್ದವು. ದುಡಿಮೆಯೇ ಆತನ ಸಂಪತ್ತು. ಇಂತಹ ಕುಟುಂಬಗಳು ಇಲ್ಲದ, ಪ್ರಕೃತಿಯೂ ಇಲ್ಲದ ,ಅಭಿಶಾಪದ ಊರುಗಳಲ್ಲಿ ಶಾಪಗ್ರಸ್ತರಂತೆ ಮತ್ತೊಮ್ಮೆ ಯುದ್ಧಕ್ಕೆ ಹೊರಟ ಕೆಂಪು ಸೈನಿಕರಂತೆ ಇಲ್ಲಿನ ಜನ ಕಾಣಿಸುತ್ತಾರೆ.
ಎಲ್ಲಾ ಮುಗಿದ ಮೇಲೆ ಊರ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ದಿನಾಂಕ: 6 -10-2016 ರಂದು ಸರ್ಕಾರ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ ಆದೇಶಿಸಿತು.
ಕಾಲವೀಗ ತಣ್ಣಗೆ ನಿಶ್ಯಬ್ದ..!
ಯಾರದ್ದೋ ಹೆಣವೊಂದು ಸದ್ದಿಲ್ಲದೆ ಬಿದ್ದುಕೊಂಡಿರುವ, ಇನ್ನೂ ಯಾರೋ ಬರುವವರಿದ್ದಾರೆ ಎಂದು ಹೆಣವನ್ನು ಎತ್ತದೆ, ಕಾದು ಕುಳಿತಿರುವಂತೆ ಸೊಂಡೂರಿನ ಬೀದಿಗಳಿವೆ.
ಬಡತನದ ರೇಖೆಗಳನ್ನೆಲ್ಲಾ ಮೈಮೇಲೆ ಹೊದ್ದು ಕುಳಿತವರಂತೆ ಕಾಣುವ ಮುದುಕರು ,ಸಾಯಲಿಕ್ಕೂ ಆಗದೆ ಬದುಕಲೂ ಆಗಿದೆ, ದುಸ್ಥಿತಿಗೆ ಕಾರಣವನ್ನು ಹುಡುಕುತ್ತಿರುವವರ ಹಾಗೆ ಹಣೆಗೆ ಕೈ ಹಚ್ಚಿ ಕುಳಿತ ದೃಶ್ಯಗಳು ಹೃದಯವನ್ನು ಕಲಕುತ್ತದೆ .ಇದು ನಾಗರಿಕ ಸಮಾಜವೊಂದು ತನ್ನದೇ ಊರಿನ ಸಮುದಾಯವನ್ನು ಚಿತ್ರಹಿಂಸೆಗೆ ಒಳಪಡಿಸಿದ ಹಾಗೆ.ನಾನು ಕಂಡು ಮಾತನಾಡಿಸಿದರವಲ್ಲಿ ” ನನ್ನ ಹಣೆಬರಹ…ನೋಡಪಾ, ಅಲಸಂದಿ,ಅವರೆ,ಜ್ವಾಳ,ನವಣಿ,
ಸಜ್ಜಿ ಬೆಳೀತಿದ್ದೆ. ಏಪೆಂಪ್ಸಿಗೆ ಹಾಕಿ ರೊಕ್ಕ ಎಣಿಸ್ಕಂಡು ಬರ್ತಿದ್ದೆ.ಮಕ್ಕಳು ಮೀರಿ ಎಲ್ಲ ಆರಾಮಾಗಿದ್ವಿ…ಮೈನ್ಸು ಮೈನ್ಸೂ ಅಂತಂದು ಮೈಯೆಲ್ಲಾ ತಗಂಬುಡ್ತು ನನ್ನಪ್ಪನೆ” ಎಂದು ವಿಷಾದದಿಂದ ಹೇಳುತ್ತಾರೆ.
ದೂರದ ಊರುಗಳ ಗೆಳೆಯರಿಗೆ ಸೊಂಡೂರು ಎನ್ನುವುದು ಸುಂದರ ಸ್ವಪ್ನದ ಹಾಗೆ, ಕಾಡುತ್ತಲೇ ಇರುತ್ತದೆ. ಗಣಿಗಾರಿಕೆಯಿಂದ ರಾಜ್ಯ,ದೇಶ ವ್ಯಾಪಿ ಸುದ್ದಿಯಾಗಿ, ಅಂತರಾಷ್ಟ್ರೀಯ ಪ್ರಖ್ಯಾತಿಯನ್ನು ಗಳಿಸಿಬಿಟ್ಟಿತು. ಈಗಲೂ ‘ಚುನಾವಣೆ ‘ಎಂಬ ಶಬ್ದ ಕೇಳಿದರೆ ಸಾಕು, ಜನರ ಕಣ್ಣಲ್ಲಿ ಹೊಳಪು ಮೂಡುತ್ತದೆ. ಬಾಯಲ್ಲಿ ನೀರೂರುತ್ತದೆ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ ಎಂದು ನಾವು ಭಾವಿಸಿದ್ದು ,ಇಲ್ಲಿ ಅಣಕದಂತೆ ಭಾಸವಾಗುತ್ತಿದೆ.
*******
ಆದರೆ ,ಅಭಿವೃದ್ಧಿಯ ದೃಷ್ಟಿಯಿಂದ ಹೊರಗಿನ ಪ್ರಪಂಚಕ್ಕೆ ಸಾಕಷ್ಟು ಶ್ರೀಮಂತ, ಎಲ್ಲಾ ಬ್ರಾಂಡೆಡ್ ಕಂಪನಿಗಳ ಅಂಗಡಿಗಳಿರುವ ಹೊಸಪೇಟೆ-ಬಳ್ಳಾರಿಯಂತಹ ಊರುಗಳಲ್ಲಿ ಸ್ಟಾರ್ ಹೋಟೆಲ್ಗಳು ನಡೆಯುತ್ತಿವೆ. ಸೊಂಡೂರಿನ ಗಾಂಧಿ ಕರಕುಶಲ ಕೈಗಾರಿಕಾ ಕೇಂದ್ರಕ್ಕೂ ಬೀಗ ಬಿದ್ದಿದೆ.
ಹೌದು, ಅಭಿವೃದ್ಧಿಯೆಂದರೆ ಈ ಪ್ರದೇಶಗಳ ಜನತೆ ಹಸಿವಿನಿಂದ ಸ್ವಾತಂತ್ರ್ಯ ಪಡೆದಿದ್ದಾರೆಯೆ ?ಲಿಂಗ ಅಸಮಾನತೆಯಿಂದ ಸಾಮಾಜಿಕ ಅಸಮಾನತೆಯ,ಅವಮಾನಳಿಂದ ಸ್ವಾತಂತ್ರ್ಯ ಪಡೆದಿದ್ದಾರೆಯೆ ?ಎನ್ನುವ ಅಮರ್ತ್ಯಸೇನರು ಕೇಳುವ ಪ್ರಶ್ನೆಗಳನ್ನು ಕೇಳಿಕೊಂಡರೆ…ಎಲ್ಲಾ ಪ್ರಶ್ನೆಗಳಿಗೂ “ಇಲ್ಲ”ಎಂಬ ರೆಡಿ ಉತ್ತರ ದೊರಕುವುದು.
ಈ ಎಲ್ಲಾ ಸ್ವಾತಂತ್ರ್ಯಗಳನ್ನು ಯಾರೋ ಕೊಡಲು ಸಾಧ್ಯವಿಲ್ಲ.ಅವರು ಪಡೆದುಕೊಳ್ಳುವ ಸಾಮರ್ಥ್ಯವನ್ನು ನಿರ್ಮಾಣ ಮಾಡುವುದು ನಮ್ಮ ನಿಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ.
***
ವಯಸ್ಸಾಗಿ ಮುದುಕರಾದಾಗ ಮೂಲೆಯಲ್ಲಿ ಎಲ್ಲೋ ಒಂದು ಕಡೆ ಕುಳಿತು ಅಂತರ್ಮುಖಿಗಳಾಗಿಬಿಡುವುದು ವಯೋಸಹಜ ಗುಣ. ಆದರಿಲ್ಲಿ ಮಕ್ಕಳೂ ಅಂತರ್ಮುಖಿಗಳಾದರೆ… ?ಕಥೆಗಳು ಬೆಂಕಿಯ ಕೆನ್ನಾಲಗೆ ಹಾಗೆ ಸುಡುತ್ತಿವೆ. ಈ ಜನಗಳು ಅನುಭವಿಸಿದ, ಅನುಭವಿಸುತ್ತಿರುವ ಕರಾಳ ನೋವುಗಳನ್ನು ಹಿಡಿದಿಡಲು ಒಂದು ಜೀವನ ಸಾಕಾಗುವುದಿಲ್ಲ ಎನಿಸುತ್ತಿದೆ.
ಇಲ್ಲಿನ ಎಲ್ಲಾ ಅಕ್ಷರಗಳು ವರ್ತಮಾನದ ಒತ್ತಡಗಳಿಂದಲೇ ಬಂದಿರುವುವು ಎಂದೇ ಭಾವಿಸಿದ್ದೇನೆ. ಹಿಂದಿನಿಂದಲೂ ನನ್ನನ್ನು ಕಾಡುತ್ತಿದ್ದ ಘಟನೆಗಳು, ನಂತರದಲ್ಲಿ ಗಣಿಗಾರಿಕೆಯೆಂಬ ಪೀಕ್ ಅವಧಿಯಲ್ಲಿನ ಘಟನೆಗಳು ,ಜನರ ಬದುಕು, ನಂತರದ ದಿನಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಬೀದಿಪಾಲಾದ ಕುಟುಂಬಗಳ ರೋದನವನ್ನು ಕೆಲಮಟ್ಟಿಗಾದರೂ ತಿಳಿಸಬೇಕಿತ್ತು.
ಬರಹಗಾರನೊಬ್ಬ ಯಾಕೆ ಬರೆಯುತ್ತಾನೆ ಎಂಬುದನ್ನು ಪೂರ್ಣ ಅರ್ಥಮಾಡಿಸಿದ್ದು ಈ ಬರಹಗಳೆ.ಎದೆಯ ಮೂಲೆಯಲ್ಲಿ ಅಡಗಿದ್ದ ಭಾವಗಳು ಕಾಡಿದಾಗಲೆಲ್ಲ ಸಣ್ಣ ಸಣ್ಣ ಚೀಟಿಗಳಲ್ಲಿ ಬರೆದು,ಇತ್ತೀಚೆಗೆ ಮೊಬೈಲಿನಲ್ಲಿ ಟೈಪಿಸಿ ಕೊಂಡು ನಿರಾಳವಾಗುತ್ತಿದ್ದೆ.ಬಹಳ ವರ್ಷಗಳ ಹಿಂದಿನಿಂದಲೂ ಹಿಡಿದಿಟ್ಟುಕೊಂಡಿದ್ದ ಕರಾಳ ಸತ್ಯಗಳನ್ನು ಬರೆಯುವಾಗ ಕಣ್ಣು ಮುಂಜಾದದ್ದು,ಎದೆ ಭಾರವಾದದ್ದೂ ಇದೆ.ಸಾಮಾನ್ಯ ಕೃಷಿಕನೋರ್ವ ಕಣ್ಣೆದುರೇ ಹುಚ್ಚನಾಗಿ ತಿರುಗಾಡುವಾಗ ತುಂಬಾ ಡಿಸ್ಟರ್ಬ್ ಆಗಿದ್ದಿದೆ.
ಹೀಗೆ ನನ್ನನ್ನು ,ಡಿಸ್ಟರ್ಬ್ ಮಾಡಿದ ಈ ಭಾವಗಳು ನನ್ನ ಎದೆಯಿಂದ ಹಾರಿ ಹೀಗೆ ಹೊರಬರುವ ತನಕವೂ ಸಮಾಧಾನವಿದ್ದಿಲ್ಲ.ನಾನು ಸಾಮಾಜಿಕ ಜವಾಬ್ದಾರಿಯೊಂದಿಗೆ ನನಗನಿಸಿದ ಭಾವಗಳನ್ನು ಹೊರಹಾಕಿರುವೆ…..ನಿಟ್ಟುಸಿರಿನೊಂದಿಗೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
