ಭಾವ ಭೈರಾಗಿ
ನನ್ನವ್ವ ನೆನಪಾಗುತ್ತಾಳೆ..!
ಮೊನ್ನೆ ಮೊನ್ನೆ ತಾನೆ ಇಂಗ್ಲೀಷಿನ ಮದರ್ಸ್ ಡೇ ಎಂಬ ತೋರಿಕೆಯ ಹಬ್ಬವನ್ನು ಜಗತ್ತಿನ ತುಂಬಾ ಆಚರಿಸಲಾಯಿತು. ಈ ಹಬ್ಬ ಬಂದಾಗಲೆಲ್ಲಾ ಪ್ರತಿಯೊಬ್ಬರೂ ತಮ್ಮ ತಮ್ಮ ತಾಯಂದಿರನ್ನು ಬಹಳ ಗೌರವಯುತವಾಗಿ ವರ್ಣಿಸಿ ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಗಳಲ್ಲಿ ಅವರ ಫೋಟೋಗಳನ್ನ ಹಾಕಿಕೊಂಡು ಅವರ ಪ್ರೀತಿಯನ್ನು ಮೆರೆದರು. ನಿಜ ಅಮ್ಮ ಎಂದರೆ ಈ ಜಗತ್ತು. ಸಾರಿ…ನಾನು ಒಬ್ಬ ಹಳ್ಳಿಯನಾದ್ದರಿಂದ ಈ ಅಮ್ಮಾ ಎಂಬ ಪದವು ನನಗೆ ನಗರಗಳ ಅಜ್ಜಿಯನ್ನು ನೆನಪಿಸುತ್ತದೆ. ಅಚ್ಚ ಕನ್ನಡದಲ್ಲಿ ಅವ್ವ ಎಂದು ಕರೆದರೆ ನನಗೆ ಮೃಷ್ಠಾನ್ನ ಸವಿದಂತಾಗುತ್ತದೆ.
ಈ ಮದರ್ಸ್ ಡೇ ಯ ಬಗ್ಗೆ ನನಗೆ ಎಳ್ಳಷ್ಟೂ ಆಸಕ್ತಿ ಇಲ್ಲ. ಏಕೆಂದರೆ ನಾವು ಚಿಕ್ಕಂದಿನಿಂದಲೂ ಹಳ್ಳಿಯಲ್ಲೇ ಬೆಳೆದುದ್ದರಿಂದ ಅದರ ಗಾಳಿ ಗಂಧವೂ ನಮಗೆ ಸೋಕಿರಲಿಲ್ಲ. ಇತ್ತೀಚಿಗೆ ನಗರಕ್ಕೆ ಬಂದ ಮೇಲೆ ಅದರ ಹೆಸರನ್ನು ಕೇಳಿದ್ದು. ಹಾಗೆ ಕೇಳಿದಾಗಲೆಲ್ಲಾ ನನಗೆ ಮುಜುಗರವಾಗುತ್ತದೆ. ತಾಯಂದಿರ ದಿನ ಅಂತ ಏತಕ್ಕಾಗಿ ಮಾಡಬೇಕು..? ಎನಿಸುತ್ತದೆ. ಏಕೆಂದರೆ ಯಾರದೋ ಜಯಂತಿಯನ್ನು ಆಚರಿಸುವ ರೀತಿಯಲ್ಲಿ ಸಂಭ್ರಮಿಸುತ್ತಾರೆ.ಅದು ತಪ್ಪು, ಅವ್ವನನ್ನು ಪ್ರತಿ ದಿನವೂ ಪೂಜಿಸಬೇಕು , ಪ್ರತಿ ಕ್ಷಣವೂ ಪ್ರೀತಿಸಬೇಕು ಹಾಗಾದಾಗ ಮಾತ್ರ ನಾವು ನಮ್ಮವ್ವನಿಗೆ ಗೌರವಕೊಟ್ಟಂತಾಗುತ್ತದೆ. ಅವಳ ತ್ಯಾಗ ಅನನ್ಯ. ಮಕ್ಕಳ ಮತ್ತು ಗಂಡನ ಒಳಿತಿಗಾಗಿ ತನ್ನ ಸರ್ವಸ್ವವನ್ನೇ ಧಾರೆ ಎರೆದ ಮಹಾಮಾಯಿ.ಅಂತಹವಳನ್ನು ವರ್ಷಕ್ಕೆ ಒಮ್ಮೆ ನೆನಪಿಸಿಕೊಂಡರೆ ಅವಳಿಗೆ ಬೆಲೆ ಕಡಿಮೆಯಾದಂತಾಗುತ್ತದೆ. ಅವ್ವ ಅಥವಾ ಹೆಣ್ಣು ದೇವರ ಸೃಷ್ಟಿಯಲ್ಲಿ ಎಷ್ಟು ಸಹನಾಮೂರ್ತಿ ಎಂಬುದಕ್ಕೆ ಒಂದು ಕಿರು ಕಥೆಯನ್ನು ಹೇಳಲು ಬಯಸುತ್ತೇನೆ.
ಒಮ್ಮೆ ತನ್ನ ತಾಯಿ ಅಳುತ್ತಿದ್ದನ್ನ ನೋಡಿದ ಒಬ್ಬ ಪುಟ್ಟ ಹುಡುಗ ” ಅಮ್ಮ ಯಾಕಮ್ಮ ಅಳುತ್ತಿದ್ದೀಯ” ಎಂದು ಕೇಳಿದಾಗ ತಾಯಿಯು “ನಾನು ಹೆಣ್ಣಾಗಿ ಹುಟ್ಟಿದ ತಪ್ಪಿಗೆ ಎಂದು ಹೇಳುತ್ತಾಳೆ. ಆ ಮಗುವಿಗೆ ಸರಿಯಾದ ಉತ್ತರ ಸಿಗದೆ ಅಲ್ಲೇ ಕುಳಿತಿದ್ದ ತನ್ನ ತಂದೆಯನ್ನು “ಅಪ್ಪಾ ಅಮ್ಮ ಏಕೆ ಅಳುತ್ತಿದ್ದಾಳೆ ” ತಂದೆಯೂ ಕೂಡ ” ಅವಳು ಹೆಣ್ಣಾಗಿ ಹುಟ್ಟಿರುವುದರಿಂದ “. ಆ ಹುಡುಗನಿಗೆ ಅಪ್ಪನಿಂದಲೂ ಸರಿಯಾದ ಉತ್ತರ ಸಿಗದ ಕಾರಣ ದೇವರನ್ನೇ ಕೇಳೋಣವೆಂದು ದೇವರಿಗೆ ಕರೆ ಮಾಡುತ್ತಾನೆ. ಕರೆಯನ್ನು ಸ್ವೀಕರಿಸಿದ ದೇವರು ” ಮಗು ಏನು ನಿನ್ನ ಪ್ರಶ್ನೆ ನನಗೆ ಕರೆ ಮಾಡಿದ ಉದ್ದೇಶವೇನು” ಎಂಬ ಪ್ರೀತಿಯ ಮಾತಿಗೆ ಆ ಹುಡುಗನು ” ದೇವರೇ ನನ್ನ ಅಮ್ಮ ಅಳುತ್ತಿದ್ದಳು ಏಕೆ ಎಂದು ಕೇಳಿದರೆ ಹೆಣ್ಣಾಗಿ ಹುಟ್ಟಿದ ತಪ್ಪಿಗೆ ಎಂಬ ಉತ್ತರ ನನಗೆ ಸಮಾಧಾನ ತರದ ನಿಮಿತ್ತ ನಿನ್ನಿಂದ ಆ ಉತ್ತರವನ್ನು ನಿರೀಕ್ಷಿಸುವೆ” ಹುಡುಗನ ಆ ಮುಗ್ಧ ಮಾತಿಗೆ ದೇವರು ನಗುತ್ತ ” ನೋಡು ಮಗು ನಾನು ಹೆಣ್ಣನ್ನು ವಿಶಿಷ್ಟವಾಗಿ ಸೃಷ್ಟಿಸಿದೆ.
ಲೋಕದ ಭಾರವನ್ನು ಹೊರಲು ಆಕೆಯ ಭುಜಗಳನ್ನು ಬಲಗೊಳಿಸಿದೆ. ಅಂತೆಯೇ ಸಮಾಧಾನವನ್ನು ಕೊಡಲು ಸೌಮ್ಯತೆಯನ್ನು ಕೊಟ್ಟೆ. ಮಗುವಿನ ಜನನದ ನೋವನ್ನು ತಾಳಲು ಅದರಂತೆ, ಮಕ್ಕಳಿಂದ ಹಲವಾರು ಬಾರಿ ಬಾರಿ ತಿರಸ್ಕಾರಗಳನ್ನು ಸಹಿಸಿಕೊಳ್ಳಲು ಆಂತರಿಕ ಶಕ್ತಿಯನ್ನು ತುಂಬಿದೆ. ಕುಟುಂಬದಲ್ಲಿ ಎಂತಹ ನೋವು ದುಃಖಗಳಿದ್ದರೂ ಎಲ್ಲವನ್ನೂ ತಾಳಿಕೊಂಡು ಮುನ್ನಡೆಯಲು ಸ್ಥಿರಮನಸ್ಸನ್ನು ಕೊಟ್ಟೆನು. ಯಾವುದೇ ಪರಿಸ್ಥಿತಿಯಲ್ಲಾದರೂ ಸ್ವಂತ ಮಕ್ಕಳು ಕಷ್ಟವನ್ನು ಕೊಟ್ಟರೂ, ಯಾವುದನ್ನು ಯೋಚಿಸದೆ ಅವರನ್ನು ಇನ್ನೂ ಹೆಚ್ಚಾಗಿ ಪ್ರೀತಿಸಲು ಸೂಕ್ಷ್ಮತೆಯನ್ನು ಕೊಟ್ಟೆನು. ಅಷ್ಟೇ ಅಲ್ಲದೆ ತನ್ನ ಗಂಡನಿಗೆ ಸಹಕಾರಿಯಾಗಿ ಅದರಂತೆ ಅವನ ತಪ್ಪುಗಳನ್ನು ಕ್ಷಮಿಸಿ, ಅವನ ಹೃದಯವನ್ನು ಕಾಪಾಡಲು ಫಲವನ್ನು ಕೊಟ್ಟೆನು. ಕೊನೆಯದಾಗಿ ಕಣ್ಣೀರನ್ನು ಅಳಲು ಕೊಟ್ಟೆನು ” ಈ ವಿಸ್ತಾರವಾದ ನುಡಿಗಳನ್ನು ಅಸಲಿಸಿದ ಹುಡುಗ ಧನ್ಯನೆಂಬಂತೆ ಪ್ರಣಾಮಗಳನ್ನು ಮಾಡಿದನು.
ಈ ಕಥೆಯಲ್ಲಿ ದೇವರು ಹೇಳಿದ ಮಾತುಗಳು ಎಷ್ಟು ಸತ್ಯವಲ್ಲವೇ..?. ಗಂಡಿಗಿಂತ ಹೆಚ್ಚು ಬಲಶಾಲಿ ಹೆಣ್ಣೇ ಅಲ್ಲವೇ..?. ಅವಳ ಅಃತಕರಣ, ಕರುಣೆಗೆ ಬೆಲೆ ಇರುವುದೇ. ಪ್ರಪಂಚದ ಯಾವುದೇ ದೇಶದಲ್ಲಿ ಸಿಗದ ಅತ್ಯುನ್ನತ ಸ್ಥಾನ ನಮ್ಮ ಭಾರತ ದೇಶದ ನಾರಿಯರಿಗೆ ಸಿಕ್ಕಿದೆ. ಇಲ್ಲಿ ಅವರನ್ನು ವಿಶೇಷ ಗೌರವದಿಂದ ಕಾಣುತ್ತಾರೆ. ತಾಯಿಯನ್ನು ನಾವು ದೇವರೆಂದು ಪೂಜಿಸುತ್ತೇವೆ. ದೊಡ್ಡವರು ಹೇಳುವಂತೆ ” ದೇವರು ಎಲ್ಲ ಕಡೆ ಇರಲಾಗುವುದಿಲ್ಲವೆಂದು ತಾಯಿಯನ್ನು ಸೃಷ್ಠಿ ಮಾಡಿದನಂತೆ “. ಹೌದು ನಮಗೆ ಬೇಕು ಬೇಡಗಳನ್ನು ಅರ್ಥಮಾಡಿಕೊಂಡು ನಾವು ಬೇಕು ಎನ್ನುವ ಮೊದಲೇ ನೀಡಿರುತ್ತಾಳೆ. ಮಕ್ಕಳಿಗಾಗಿ ತನ್ನ ಆಸೆಗಳನ್ನೆಲ್ಲಾ ತ್ಯಾಗಮಾಡಿ, ತನ್ನ ಸ್ವಾರ್ಥಗಳನ್ನ ಅಡಗಿಸಿಕೊಂಡು ಜೀವನವನ್ನು ಮೀಸಲಿಡುತ್ತಾಳೆ. ಮನೆಯೇ ಮೊದಲ ಪಾಠಶಾಲೆ ಅಮ್ಮನೇ ಮೊದಲ ಗುರು ಎಂಬ ಮಾತನ್ನು ನಾವು ಕೇಳುತ್ತಲೇ ಬೆಳೆದಿದ್ದೇವೆ. ಸಾವಿರ ಗುರುಗಳಿಗೆ ಒಬ್ಬ ತಾಯಿ ಸಮಾನಳು. ತಿಳಿದವರು ಹೇಳುತ್ತಾರೆ ನೂಲಿನಂತೆ ಸೀರೆ ತಾಯಿಯಂತೆ ಮಗಳು. ಈ ಗಾದೆ ಎಷ್ಟು ಸಮಂಜಸವಾಗಿದೆಯಲ್ಲವೇ.
ಮನೆಯಲ್ಲಿ ಕಲಿತ ವಿನಯ ವಿದ್ಯೆ ಯಾವ ವಿಶ್ವವಿದ್ಯಾನಿಲಯದಿಂದಲೂ ಕಲಿಯಲು ಸಾಧ್ಯವಿಲ್ಲ. ಅಮ್ಮ ಎನ್ನುವವಳು ಕೂಲಿ ಇಲ್ಲದ ಕೆಲಸದಂತವಳಾಗಿದ್ದಾಳೆ. ಬೆಳಿಗ್ಗೆಯಿಂದ ಸಂಜೆವರೆಗೆ ಮನೆಗಾಗಿ, ಮಕ್ಕಳಿಗಾಗಿ, ಗಂಡನಿಗಾಗಿ ದುಡಿದು ದಣಿವಾಗಿದ್ದರೂ, ಶಾಲೆಯಿಂದ ಬಂದ ಮಕ್ಕಳನ್ನ ಮತ್ತು ಕೆಲಸದಿಂದ ಬಂದ ಗಂಡನ ಮುಖವನ್ನು ನೋಡಿದ ಕೂಡಲೇ ತನ್ನ ಆಯಾಸವನ್ನೆಲ್ಲಾ ಮರೆತು ಬಿಡುತ್ತಾಳೆ. ಮಗಳು ಎದೆಯತ್ತರಕ್ಕೆ ಬೆಳೆದು ಜಡೆಯನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದ ದಿನದಿಂದ ಅವಳು ತನ್ನ ಆಸೆ ಆಕಾಂಕ್ಷೆಗಳನ್ನು ಬದಿಗಿರಿಸಿ ಮಗಳ ಬೆಳವಣಿಗೆಯ ಬಗ್ಗೆ ಅವಳ ಇಷ್ಟಕಷ್ಟದ ಬಗ್ಗೆ ಗಮನ ಹರಿಸುತ್ತಾಳೆ. ಅವಳ ಅಲಂಕಾರದ ಬಗ್ಗೆ ಚಿಂತಿಸುತ್ತಾಳೆ. ತಾನು ಹೂವನ್ನು ಮುಡಿಯುತ್ತಿದ್ದನ್ನು ನಿಲ್ಲಿಸಿ ಮಗಳಿಗೇ ಮುಡಿಸಿ ಸಂತಸ ಪಡುತ್ತಾಳೆ. ಕೂಲಿ ನಾಲಿಗೆ ಹೋದಾಗ ಒಡತಿಯರು ತಿಂಡಿ, ಊಟ, ಹಣ್ಣುಹಂಪಲು ಕೊಟ್ಟರೆ ತಾನು ತಿನ್ನದೆ ಸೆರಗಲ್ಲಿ ಬಚ್ಚಿಟ್ಟು ತಂದು ಮಕ್ಕಳಿಗೆ ತಿನಿಸುತ್ತಾಳೆ. ಇದೇ ಕಾರಣಕ್ಕೆ ನನ್ನವ್ವ ನನಗೆ ನೆನಪಾಗುತ್ತಾಳೆ.
ಇದೇ ಜೂನ್ 3 ನೇ ತಾರೀಖಿಗೆ ನನ್ನವ್ವನ ಪರಿನಿರ್ವಾಣವಾಗಿ ಸಪ್ತ ಸಂವತ್ಸರಗಳು ಕಳೆಯುತ್ತದೆ. ಹೀಗ್ಗೆ ಹತ್ತು ವರ್ಷಗಳ ಹಿಂದೆ ನನ್ನ ಮದುವೆ ವಿಚಾರವಾಗಿ ನನಗೂ ನನ್ನವ್ವನಿಗೂ ಒಂದು ಸಣ್ಣ ಜಗಳ ಆಗುತ್ತದೆ. ಆಗ ನನಗೆ ಇಪ್ಪತ್ತೆಂಟರ ಹರೆಯ. ಮದುವೆ ಆಗುವ ವಯಸ್ಸು. ಮನೆಯಲ್ಲಿ ನಾನು ನನ್ಮವ್ವ ಇಬ್ಬರೇ ಇದ್ದದ್ದು. ನಾನು ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದೆ. ಊರಲ್ಲಿ ಒಬ್ಬಳೇ ಇದ್ದ ಕಾರಣ ಮದುವೆ ಮಾಡಿಕೋ ಎಂದು ಒತ್ತಾಯ ಮಾಡುತ್ತಿದ್ದಳು. ಏಕೆಂದರೆ ನನ್ನಣ್ಣಂದಿರಿಬ್ಬರಿಗೆ ಇಪ್ಪತ್ತೈನೆಯ ವಯಸ್ಸಿಗೆ ಮದುವೆ ಮಾಡಿ ಮುಗಿಸಿದ್ದಳು. ಒಂಟಿ ಹೆಂಗಸು ಗಂಡನ ಕಳೆದುಕೊಂಡು ಕೂಲಿ ನಾಲಿ ಮಾಡಿ ಸಮಾಜದಲ್ಲಿ ಎಲ್ಲರಂತೆ ಬದುಕಬೇಕು ಎಂದು ಸ್ವಾಭಿಮಾನದಿಂದ ಜೀವಿಸುತ್ತಿದ್ದಳು. ನನ್ನ ಅಪ್ಪ ನಾನು ಒಂದು ವರ್ಷದ ಮಗುವಾಗಿದ್ದಾಗ ತೀರಿಕೊಂಡರಂತೆ.
ಅವರ ಮುಖದ ಛಾಯೆಯನ್ನೇ ನಾನು ಗಮನಿಸಿರಲಿಲ್ಲ. ನನ್ನವ್ವನೇ ಗಂಡಸಿನಂತೆ ನಿಂತು ಎಲ್ಲವನ್ನೂ ನಿಭಾಯಿಸುತ್ತಿದ್ದಳು. ಆಗಲೇ ವಯಸ್ಸು ಅರವತ್ತರ ಆಸುಪಾಸಿನಲ್ಲಿತ್ತು. ಅದೇ ಕಾರಣಕ್ಕೆ ನಾನಿರುವಾಗಲೇ ನಿನಗೂ ಮದುವೆ ಮಾಡಿ ಕಣ್ತುಂಬಿಕೊಳ್ಳುವೆ ಎಂದು ಒತ್ತಾಯಿಸತೊಡಗಿದಳು. ನಾನೋ ನನ್ನವ್ವನಿಗೆ ” ಅವ್ವ ನನಗೆ ಇನ್ನೂ ಸ್ವಲ್ಪ ದಿವಸಗಳ ಕಾಲ ಮದುವೆ ಬೇಡ ಚನ್ನಾಗಿರುವ ಹುಡುಗಿ ಸಿಕ್ಕ ಮೇಲೆ ಆಗುತ್ತೇನೆ ” ಎನ್ನುತ್ತಿದ್ದಾಗ ” ಅಲ್ಲಕಡ ಕೂಸೆ ಅಂದ ಚಂದ ಕಟ್ಕಂಡು ಯಾನ್ ಮಾಡಿಯಾ ಕೊಳ್ಬ ಊದಕ್ಕ ಎರಡು ತುಟಿ ಇದ್ರ ಸಾಕಾಲ್ವ ಅವ್ಳೇನ ಕುಂಡುಸ್ಕಂಡು ನೆಕ್ಕಿಯಾ. ಇಲ್ಲಾ ನಾ ಸತ್ತ ಮೇಲ ಯಾನಾದರೂ ಮದುವೆ ಆದಯಾ “. ಈ ಮಾತು ಆ ದಿವಸಗಳಲ್ಲಿ ನನಗೆ ತಮಾಷೆ ಎನಿಸಿದ್ದರೂ ಪ್ರತಿವರ್ಷದ ಅವಳ ಪರಿನಿರ್ವಾಣದ ದಿನದಂದು ದುಃಖ ಉಕ್ಕುಕ್ಕಿ ಬರುತ್ತದೆ. ಯಾಕೆಂದರೆ ಅದಾವ ಘಳಿಗೆಯಲ್ಲಿ ಹೇಳಿದಳೋ ನಾ ಸತ್ತ ಮೇಲೆ ಮದುವೆ ಆಗುತ್ತೀಯ ಎಂದು ಹಾಗೇ ಆಗಿಹೋಯಿತು. ನನ್ನ ಮದುವೆಗೆ ಇನ್ನೂ ಹದಿನೈದು ದಿನಗಳು ಬಾಕಿ ಇರುವಾಗಲೇ ನನ್ನವ್ವ ನನ್ನನ್ನು ಬಿಟ್ಟು ಇಹಲೋಹ ತ್ಯಜಿಸಿದಳು.
ಕಿರಿ ಮಗನ ಕಂಡರೆ ಬಲು ಪ್ರೀತಿ ಎಂದು ಎಲ್ಲರೂ ಹೇಳುತ್ತಿದ್ದರು. ಅದರಂತೆಯೇ ನನ್ನವ್ವ ನನ್ನ ಇಷ್ಟಕಷ್ಟವನ್ನೆಲ್ಲಾ ತಿಳಿದುಕೊಂಡು ನಾನೇನು ಯೋಚಿಸುತ್ತೇನೆ ಎಂಬುದನ್ನು ಆಲೋಚಿಸಿಬಿಡುತ್ತಿದ್ದಳು. ನನ್ನ ಮದುವೆಗೆ ಹುಡುಗಿ ನೋಡಿ ಬಂದು ನನಗೆ ಒಪ್ಪಿಗೆ ಎಂದು ಹೇಳಿದಾಗ ಬಹಳ ಹರ್ಷ ವ್ಯಕ್ತಪಡಿಸಿದಳು. ಹೂ ಮುಡಿಸುವ ಶಾಸ್ತ್ರದ ದಿನ ಮೆಚ್ಚಿ ಭಾವಿ ಸೊಸೆಗೆ ಅವಳ ಕೈಯಿಂದ ಇನ್ನೂರು ರೂಪಾಯಿಗಳನ್ನು ಪ್ರೀತಿಯಿಂದ ನೀಡಿದಳು. ಅದನ್ನು ಈಗಲೂ ನನ್ನ ಮಡದಿ ಅತ್ತೆಯ ನೆನಪಿಗೆ ಜೋಪಾನವಾಗಿ ಇಟ್ಟುಕೊಂಡಿದ್ದಾಳೆ. ನಾನು ನಾಲ್ಕು ವರ್ಷದವನಿದ್ದಾಗ ತುಂಬಾ ತುಂಟ ಮತ್ತು ಹಠಮಾರಿಯಂತೆ. ಆದರೆ ಊಟದ ವಿಷಯದಲ್ಲಿ ಏನೋ ಕೊಟ್ಟರೂ ಬೇಡ ಎನ್ನುತ್ತಿರಲಿಲ್ಲ ಎಂದು ಆಗಾಗ ನನ್ನವ್ವ ಹೇಳುತ್ತಿದ್ದಳು. ಬಹುಶಃ ಈಗಲೂ ಹಾಗೆಯೇ ಊಟದ ವಿಷಯದಲ್ಲಿ ಯಾವುದೇ ಭೇದಬಾವಲಿಲ್ಲ.
ಆದರೆ ಹಠಮಾರಿತನ ಮತ್ತು ತುಂಟುತನ ಮಾತ್ರ ಇಲ್ಲ. ನಮ್ಮ ಸಂಬಂಧಿಕರ ಮಕ್ಕಳು ತಿಂಡಿಯನ್ನು ತಿನ್ನುತ್ತಿದ್ದರೆ ನನಗೂ ಬೇಕು ಎಂದು ನನ್ನವ್ವನಿಗೆ ದಂಬಾಲು ಬೀಳುತ್ತಿದ್ದೆ. ಪಾಪ ಅವಳೋ ಬಡವಿ ಬಡತನದಲ್ಲಿ ಬೇಯತ್ತಿದ್ದಳು. ಎಲ್ಲಿಂದ ತಿಂಡಿಗಳನ್ನು ನನಗೆ ಕೊಡಿಸಲು ಸಾಧ್ಯ. ಅಡುಗೆ ಮಾಡುವಾಗ ಅವಳ ಕೊರಳುಗಳನ್ನು ಬಳಸಿ ಅಳುತ್ತಿದ್ದ ನೋಡಿ ರಾಗಿ ಮುದ್ದೆಯನ್ನು ಒಂದಿಸುವಾಗ ಬಿಸಿ ಬಿಸಿಯಾಗಿ ತೆಗೆದು ಚಿಕ್ಕ ಗೊಂಬೆಯಂತೆ ಮಾಡಿ ಅದಕ್ಕೆ ಹರಳು ಉಪ್ಪನ್ನು ಬೆರೆಸಿ ಮಿದ್ದಿಸಿ ಕೊಟ್ಟು ಬಿಡುತ್ತಿದ್ದಳು. ಅದೇ ನನಗೆ ತಿಂಡಿ ತೀರ್ಥ, ಹಣ್ಣು ಹಂಪಲುಗಳು. ಆ ಚಿಕ್ಕಗೊಂಬೆಯಂಥ ರಾಗಿ ಮುದ್ದೆಯನ್ನು ಕಡಿಯುತ್ತ ಸಂತೋಷಪಡುತ್ತಿದ್ದೆ. ಅದೇ ತಾಯಿಯ ಪ್ರೀತಿ, ಮಮತೆ. ಮಕ್ಕಳನ್ನು ಹೇಗೆ ನಿಭಾಯಿಸಬೇಕು ಎಂದು ಅವಳಿಗೆ ತಿಳಿದಿರುತ್ತದೆ.
ನನಗೆ ಹತ್ತು ವರ್ಷಗಳು ಇರಬಹುದು ಒಮ್ಮೆ ನನ್ನವ್ವ ನಮ್ಮ ಊರಿಂದ ಸ್ವಲ್ಪ ದೂರದಲ್ಲೇ ಇದ್ದ ನಮ್ಮ ಗದ್ದೆಗೆ ನೀರು ಬಿಡಲೆಂದು ರಾತ್ರಿಯ ವೇಳೆ ನನ್ನನ್ನು ಕರೆದುಕೊಂಡು ಹೋದಳು. ನೀರು ಕಡಲಿನ ತುಂಬ ಹರಿಯುತ್ತ ಗದ್ದೆಗೆ ನುಗ್ಗುತ್ತಿತ್ತು.ರಾತ್ರಿ ಸುಮಾರು ಹನ್ನೊಂದು ಗಂಟೆಯ ಸಮಯ. ನನಗೆ ನಿದ್ರೆಯ ಮಂಪರು ತೂಕಡಿಕೆ ಬರುತ್ತಿತ್ತು. ನೀರು ಬಿಡುವ ಆತುರದಲ್ಲಿದ್ದ ನನ್ನವ್ವ ನನ್ನ ಕಷ್ಟವನ್ನು ನೋಡಿ ಅಲ್ಲೇ ಸ್ವಲ್ಪ ಅಗಲವಾದ ಕಟ್ಟೆಯ ಮೇಲೆ ಮಲಗಿಸಿದಳು. ನಿದಿರೆಯಲ್ಲಿ ನೀರಿನ ಚಿಕ್ಕ ಕಾಲುವೆಯೊಳಗೆ ಉರುಳಿಬಿಟ್ಟಿದ್ದೆ.ಮೈತುಂಬಾ ಕಂಬಳಿ ಹೊದಿಸಿದ್ದರಿಂದ ನನಗೆ ನೀರಿಗೆ ಉರುಳಿದ್ದು ಗೊತ್ತಾಗಿರಲಿಲ್ಲ. ನನ್ನ ಅದೃಷ್ಟ ಅಷ್ಟರೊಳಗೆ ನನ್ನವ್ವ ಅದೇ ಸಮಯಕ್ಕೆ ಬಂದು ನೋಡಿದ್ದಾಳೆ ನಾನು ಕಾಣದ ಭಯದಲ್ಲಿ ಕಡಲನ್ನು ನೋಡಿದ್ದಾಳೆ ಏನೋ ತೇಲುತ್ತಿದೆ ಎಂದು ಮುಂದೆ ಬಂದು ನೋಡಿ ಗಾಬರಿಯಿಂದ ಎತ್ತಿಕೊಂಡು ಗೊಳೋ ಅಂತ ಅಳುತ್ತಿದ್ದಳು.
ಅದೇ ಕೊನೆ ಇನ್ನೆಂದೂ ನನ್ನನ್ನು ಕರೆದುಕೊಂಡು ಹೋಗಲಿಲ್ಲ. ಇಲ್ಲಿ ನನ್ನವ್ವನ ಎದೆಗಾರಿಕೆ ಮತ್ತು ಧೈರ್ಯವನ್ನು ಅನಾವರಣಗೊಳಿಸಲು ಹೇಳಿದಂತದ್ದು. ಹೆಣ್ಣಾಗಿದ್ದರೂ ಗಂಡಸಿನಂತೆ ಹಗಲು ರಾತ್ರಿಗಳೆನ್ನದೆ ದುಡಿದು ನಮ್ಮನ್ನು ಈ ಸ್ಥಾನಕ್ಕೆ ತಂದಿದ್ದಾಳೆ. ಆದರೆ ಈ ಸಮಯದಲ್ಲಿ ನಮ್ಮ ಜೊತೆ ಇದ್ದು ಸಂತೋಷ ಪಡಲು ಅವಳಿಲ್ಲ ಅವಳು ಈಗ ಬರೀ ನೆನಪು ಮಾತ್ರ. ಈಗ ನನ್ನ ಮಡದಿ ತುಂಬು ಗರ್ಭಿಣಿ ಅವಳ ಹಾರೈಕೆಗೆ ಯಾರ ಒತ್ತಾಸೆಯೂ ನಮಗೆ ಸರಿಯಾಗಿ ಸಿಗುತ್ತಿಲ್ಲ. ಅದೇ ನನ್ನವ್ವ ಇದ್ದರೆ ಎಷ್ಟು ಪ್ರೀತಿಯಿಂದ ಸೊಸೆ ಮತ್ತು ಮೊಮ್ಮಗುವನ್ನು ಹಾರೈಕೆ ಮಾಡುತ್ತಿದ್ದಳೋ…? ನಮಗೆ ಆ ಅದೃಷ್ಟವಿಲ್ಲ. ಅಮ್ಮ ಇರುವಾಗ ಅವಳ ಬೆಲೆ ತಿಳಿಯುವುದಿಲ್ಲ. ಇಲ್ಲದಾಗ ಬಹಳ ಕಾಡುತ್ತಾಳೆ.
–ಮಹದೇವ್ ಬಿಳುಗಲಿ
9611339024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಮಣ್ಣ ಮಕ್ಕಳು
- ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.
ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.
ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು
ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.
ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.
- ಬಸವರಾಜ ಹೂಗಾರ
ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.
ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.
- ಡಾ.ರಹಮತ್ ತರೀಕೆರೆ
ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.
- ಬಿ.ಶ್ರೀನಿವಾಸ,ಕೃತಿ ಲೇಖಕ
ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.
ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.
“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.
ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.
ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.
ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ
- ಡಾ.ರಾಮಚಂದ್ರ ಹಂಸನೂರು, ಬೆಟಗೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ