Connect with us

ಭಾವ ಭೈರಾಗಿ

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ..!

Published

on

ಹೃದಯದ ರಾಜ,

ಹೌದು ಕಣೋ ನಾನು ನಿನ್ನನ್ನು ಹೀಗಂತಲೇ ಕರೆಯುತ್ತಿದ್ದದ್ದು. ಹಾಗೆ ಕರೆದಾಗಲೆಲ್ಲಾ ನಾನೇ ನಿನ್ನ ರಾಣಿ, ಈ ಜಗವೇ ನಮ್ಮ ರಾಜ್ಯ, ನಾವಿಬ್ಬರೇ ಅರಸನ ಮನೆಯವರು, ನಾವು ಹೇಳಿದಂತೆ ಪ್ರಜೆಗಳೆಲ್ಲಾ ಕೇಳಬೇಕು ಎಂಬೆಲ್ಲಾ ಅತಿಯಾದ ಹುಚ್ಚು ಕಲ್ಪನೆಗಳಲ್ಲಿ ಬೀಗುತ್ತಿದ್ದೆ. ಆದರೆ ನಿನ್ನನ್ನು ಇಷ್ಟ ಪಡುತ್ತಿದ್ದದ್ದು ಮಾತ್ರ ಸುಳ್ಳಲ್ಲ. ವ್ಯವಸ್ಥಿತ ಮನೆಯ ಸುತ್ತಲೂ ಗೋಡೆ, ಒಳಗೆ ಯಾರೂ ಬರಬಾರದೆಂದು ಕಬ್ಬಿಣದ ಗೇಟಿಗೆ ದಪ್ಪನೆಯ ಬೀಗ, ರಾತ್ರಿ ಎಂಟರ ನಂತರ ಯಾರೂ ಹೊರ ಹೋಗುವಂತಿರಲಿಲ್ಲ. ತಡವಾದರೆ ಕರೆ ಮಾಡಿ ತಿಳಿಸಿರಬೇಕು, ಬಸ್ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದರು. ಇದು ನನ್ನಪ್ಪನ ಆಜ್ಞೆ. ಇದು ಮಕ್ಕಳ ಮೇಲಿನ ಅತಿಯಾದ ಪ್ರೀತಿಯೋ ಅಥವಾ ಮಕ್ಕಳೆಂಬ ಮಮಕಾರವೋ ಗೊತ್ತಿಲ್ಲ.ಹದ್ದಿನ ಕಣ್ಣಿನಂತೆ ನಮ್ಮನ್ನ ನೋಡಿಕೊಳ್ಳುತ್ತಿದ್ದರು.

ಅಂಥ ಮನೆಯಲ್ಲಿನ ತೋಟದ ಮಲ್ಲಿಗೆಯ ಮರದ ಬಳ್ಳಿಯ ಎಲೆ ಮರೆಯಲ್ಲಿ ಇಣುಕುತಿದ್ದವಳು ನಾನು. ಯಾರಿಗೂ ಕಾಣದೆ ಅರಳಿ ನಿಂತ ಮಲ್ಲಿಗೆಯ ಹೂವಿನಂತಿದ್ದೆ. ಅದಾವ ಮಾಯದಲಿ ನೀ ಗಿಡದಿಂದ ಕಿತ್ತುಕೊಂಡೆಯೋ ಗೊತ್ತಿಲ್ಲ. ಶಿವನ ಪೂಜೆಗೆ ಅರ್ಪಿತವಾಗಬೇಕೆಂದಿದ್ದವಳು ನಾನು. ನಿನ್ನ ಪ್ರೀತಿಯ ಅಪ್ಪುಗೆಯಲಿ ಕರಗಿ ಜಾರಿ ಪಾದಕ್ಕೆ ಸೇರಿದಾಗ ನೀನೇ ನನ್ನ ಶಿವನಂತೆ ಕಂಡಿದ್ದೆ. ಆಗಲೇ ನನ್ನ ಜನ್ಮ ಸಾರ್ಥಕ ಎಂದೆನಿಸಿತು. ನಿನ್ನ ಮೇಲಿನ ಪ್ರೀತಿ ದುಪ್ಪಟವಾಯಿತು.

ಒಮ್ಮೊಮ್ಮೆ ನೀ ಫೋನಿನಲ್ಲಿ ಸಿಗದೆ ಬೇಸರವಾದಾಗ ನನ್ನೊಳಗೆ ನಾನೇ “ನಾ ಹೇಗೆ ಇವನಿಗೆ ಸೇರಿದೆ.. ? , ಯಾವ ಮಾಯರೂಪ ಇವನನ್ನು ಇಷ್ಟ ಪಡುವಂತೆ ಮಾಡಿತು..?. ಕಾಲೇಜಾಯಿತು ಮನೆಯಾಯಿತು ಎಂಬ ಅಮ್ಮನ ನುಡಿಯನ್ನ ಚಾಚೂ ತಪ್ಪದೆ ಪಾಲಿಸುತ್ತಿದ್ದವಳು ನಾನು. ಕಾಲೇಜಿನಲ್ಲಿ, ನಮ್ಮೂರಿನಲ್ಲಿ ಅದೆಷ್ಟೋ ಸ್ಪುರದ್ರೂಪಿ ಯುವಕರು ಈ ಮಲ್ಲಿಗೆಯ ಸುವಾಸನೆಯ ನೆತ್ತಿಗೇರಿಸಿಕೊಳ್ಳಲು ಹರಸಾಹಸ ಪಟ್ಟರೂ ದಕ್ಕದವಳು ಅದ್ಹೇಗೆ , ನೀ ಮಾತ್ರ ನನ್ನ ಹೃದಯದ ಅಂತಃಪುರದೊಳಗೆ ಮಯೂರವರ್ಮನಂತೆ ಚಾಣಾಕ್ಷತೆಯಿಂದ ನುಗ್ಗಿಬಿಟ್ಟಿದ್ದೆ…?. ಇನ್ನೂ ಅರ್ಥವಾಗದೇ ಪ್ರಶ್ನೆಯಾಗೇ ಉಳಿದಿದೆ ನನಗೆ. ಅತಿಯಾದ ಅಕ್ಕರೆ, ಮುದ್ದುತನ, ಕೆಟ್ಟ ಕಣ್ಣುಗಳು ಬೀಳಬಾರದೆಂಬ ರಕ್ಷಣೆಯ ಭರವಸೆಯಿಂದಲೋ ಏನೋ ಬುದ್ಧ ರಾಜ್ಯ ತೊರೆದು ಹೋಗಲು ಪ್ರೇರೇಪಿಸಿರಬೇಕು.

ಮನೆಬಿಟ್ಟು ಹೋದ ಅವರೊಬ್ಬ ಜಗತ್ತಿಗೆ ಜ್ಞಾನಿಗಳಾದರು, ಮಾರ್ಗದರ್ಶಕರಾದರು. ಅಂತೆಯೇ ನಮ್ಮ ಮನೆಯ ಕಟ್ಟು ನಿಟ್ಟಿನ ವಾತಾವರಣವೇ ಹೊರ ಬಂದು ನಿನ್ನನ್ನು ಪ್ರೀತಿಸಲು ಪ್ರೇರೇಪಿಸಿರಬೇಕು. ಅಪ್ಪನ ಗದರಿಕೆಗೆ ಹೆದರಿ ಮಾತೇ ಆಡುತ್ತಿರಲಿಲ್ಲ. ಅಮ್ಮನೋ ಅಪ್ಪನ ಮಾತಿಗೆ ಎದುರಾಡದೆ ಹಾಕಿದ ಗೆರೆಯಲ್ಲೇ ನಡೆಯುತ್ತಿದ್ದಳು.ನಮ್ಮ ಇಷ್ಟ ಕಷ್ಟದ ಬಗ್ಗೆ ಒಮ್ಮೆಯೂ ಪ್ರೀತಿಯಿಂದ ಮಾತನಾಡಿರಲಿಲ್ಲ. ಅಕ್ಕ ಪಕ್ಜದವರ ಜೊತೆನೂ ಹೆಚ್ಚು ಬೆರೆಯಲು ಬಿಡುತ್ತಿರಲಿಲ್ಲ. ಅಷ್ಟು ಬಿಗಿಯಾಗಿತ್ತು ನಮ್ಮ ಮನೆ. ಮಧ್ಯಮ ವರ್ಗದ ಸಂಸಾರ ನಮ್ಮದು. ಹಾಗೆಂದು ಎಂದೂ ಉಪವಾಸ ಬೀಳಿಸಿದವರಲ್ಲ ನನ್ನಪ್ಪ. ಹಗಲು ರಾತ್ರಿಗಳೆನ್ನದೆ ದುಡಿದು ಸಲಹುತ್ತಿದ್ದರು.

ಇಂಥ ವೇಳೆ ಓದು ಮುಗಿದ ನನಗೆ ಅಪ್ಪನ ಕಷ್ಟವನ್ನು ಸ್ವಲ್ಪ ನೀಗಿಸಲು ಮುಂದಾದೆ. ಅಪ್ಪ ಅಮ್ಮ ಇಬ್ಬರಿಗೂ ಹೇಗೋ ಒಪ್ಪಿಸಿ ಸ್ನೇಹಿತೆಯೊಂದಿಗೆ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿಕೊಂಡೆ. ಊರು ಬಿಟ್ಟು ಬಂದದ್ದು ಒಂದು ಕಡೆ ನನಗೆ ಸ್ವಾತಂತ್ರ್ಯ ಸಿಕ್ಕಿತು ಎನಿಸಿದರೆ, ಅಷ್ಟು ವರ್ಷಗಳಿಂದ ಜೊತೆಗಿದ್ದ ಅಪ್ಪ ಅಮ್ಮನನ್ನು ಬಿಟ್ಟು ಇರಬೇಕಲ್ಲ ಎಂದು ಇನ್ನೊಂದೆಡೆ. ಒಳ್ಳೆ ಕೆಲಸವೇನೋ ಸಿಕ್ಕಿತು, ಆರಂಭದಲ್ಲಿ ಕಸಿವಿಸಿ ಎನಿಸಿದರೂ ತದನಂತರ ಹೊಂದಿಕೊಳ್ಳಬೇಕಾಯಿತು.

ಹೀಗ್ಗೆ ಹತ್ತು ವರ್ಷಗಳ ಹಿಂದೆ ನಡೆದ ಘಟನೆಯೊಂದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಹೀರೋ ಹೋಂಡಾ ಫ್ಯಾಶನ್ ಬೈಕ್ ಹೊಸತು, ಕಂಪನಿಯವರು ಆಗ ತಾನೆ ಚಾಲನೆ ಕೊಟ್ಟಿದ್ದ ಹೊಸ ಬ್ರಾಂಡ್, ಜರ್ರ್….ನೆ ಬಂದು ನೀನು ಆಫೀಸಿನ ಎದುರು ನಿಲ್ಲಿಸಿದೆ. ಆ ಶಬ್ಧಕ್ಕೆ ಮೆಟ್ಟಿಲುಗಳ ಹತ್ತುತ್ತಿದ್ದವಳು ಒಮ್ಮೆ ತಿರುಗಿ ನೋಡಿದೆ. ಬೈಕ್ ನಿಂದ ಇಳಿದವನೇ ಹೆಲ್ಮೆಟ್ ತೆಗೆದು ಬಾಜಿಗರ್ ಸಿನಿಮಾದಲ್ಲಿ ಶಾರುಖ್ ಖಾನ್ ಒದರುವಂತೆ ನಿನ್ನ ತಲೆಯನ್ನೊಮ್ಮೆ ಒದರಿದೆ. ನಿನ್ನ ಅನಿಸಿಕೆಗೆ ತಕ್ಕಂತೆ ಆ ನಿನ್ನ ನೀಳಕೂದಲು ಅದರ ಜಾಗವನ್ನು ಸಲೀಸಾಗಿ ಕೂರಿತು. ಸಾಲದೆಂಬಂತೆ ಕೈಯಬೆರಳುಗಳಿಂದ ಹಿಂದಕ್ಕೆ ಸರಿಸಿದಾಗಲಂತೂ ಅದಕ್ಕೆ ಮೆರಗು ಬಂತು. ಎತ್ತರದ ನಿಲುವು, ಸುಂದರ ವದನ, ಸದೃಢ ಮೈಕಟ್ಟು, ಬ್ಲೂ ಜೀನ್ಸ್ ಪ್ಯಾಂಟ್ ಗೆ ಸರಿಹೊಂದುವ ಟೀ ಶರ್ಟ್, ಹುಡುಕಿದರೂ ಎಳ್ಳಷ್ಟೂ ಕೊಂಕಿರದ ದೇಹ ಸೌಂದರ್ಯ, ಸಿನಿಮಾ ಹೀರೋಗಳಿಗೆ ಇರಬೇಕಾದ ಎಲ್ಲಾ ಸ್ವಭಾವ, ಗುಣಲಕ್ಷಣಗಳು ನಿನ್ನಲ್ಲಿದ್ದವು.ನಿನ್ನ ಕಣ್ಣ ಕಾಂತಿಗೆ ಒಮ್ಮೆ ಅವಾಕ್ಕಾದೆ. ಬಹುಶಃ ನಾ ಸೋತಿದ್ದು ನಿನಗೆ ಅಂದೇ ಇರಬೇಕು. ಇಷ್ಟೆಲ್ಲಾ ನಡೆದದ್ದು ಎರಡು ನಿಮಿಷದಲ್ಲಿ ಮಾತ್ರ. ಆ ಎರಡು ನಿಮಿಷ ನನ್ನ ಮನಸ್ಸನ್ನೇ ಪ್ರಫುಲ್ಲಗೊಳಿಸಿತ್ತು. ಬಂದವನೆ ಸರಸರನೆ ಮೆಟ್ಟಿಲುಗಳ ಹತ್ತಿ ನನ್ನನ್ನೇ ಹಿಂದಿಕ್ಕಿ ಹೊರಟು ಬಿಟ್ಟೆ. ಇಲ್ಲೊಬ್ಬಳು ಹುಡುಗಿ ನಿಂತಿದ್ದಾಳೆ, ಅವಳ ಮುಖವನ್ನೊಮ್ಮೆಯಾದರೂ ನೋಡೋಣ ಎನಿಸಲೇ ಇಲ್ಲ ನಿನಗೆ. ಆವಾಗಲೇ ನಿರ್ಧರಿಸಿದೆ ನೀನೇ ನನಗೆ ಸರಿಯಾದ ಜೋಡಿಯೆಂದು.

ಕಂಪನಿ ಸೇರಿ ಮೂರು ತಿಂಗಳಾದರೂ ಒಮ್ಮೆಯೂ ನೋಡದಿದ್ದವನು ಯಾರಿವನು..? ಎಂಬ ಪ್ರಶ್ನೆ ಗುನುಗುತ್ತಲೇ ಎರಡನೇ ಮಹಡಿ ಮೆಟ್ಟಿಲುಗಳ ಹತ್ತಿದ್ದೇ ನೆನಪಿಲ್ಲ. ಸಿನಿಮಾಗಳಲ್ಲಿ ಹೀರೋಗಳನ್ನ ನೋಡಿ ಎಂಜಾಯ್ ಮಾಡುತ್ತಿದ್ದವಳು, ಅಂದು ಮಾತ್ರ ನೀನೇ ನನ್ನ ಹೀರೋ ಎನಿಸಿಬಿಟ್ಟಿತು. ಆ ಸಮಯದಲ್ಲಿ ಪ್ರೇಮಲೋಕ ಸಿನಿಮಾದ ಯಾರಿವನು….? ಈ ಮನ್ಮಥನೂ…ಎಂಬ ಹಾಡು ನನಗರಿವಿಲ್ಲದಂತೆ ನಾಲಿಗೆಯಲ್ಲಿ ನಲಿಯುತ್ತಿತ್ತು.

ನೆನಪಿರಬಹುದು ಅಂದು ಸೋಮವಾರ, ವಾರದ ಮೊದಲ ದಿನ ನಾನು ಅಲ್ಲಿ ರಿಸಪ್ಸನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರಿಂದ ನಮ್ಮ ಬಾಸ್ ಗೆ ಹಿಂದಿನ ವಾರದ ಹಾಜರಾತಿ ಪುಸ್ತಕ, ಕಂಪನಿಯ ಕೆಲಸಗಾರರ ಒಳ ಬರುವ ಮತ್ತು ಹೊರ ಹೋಗುವ ಸಮಯದ ಪುಸ್ತಕವನ್ನು ತೋರಿಸುವುದು ರೂಢಿ. ಅಂತೆಯೇ ಬಹಳ ನಿಷ್ಠೆಯಿಂದ ಮತ್ತು ಗಂಭೀರವಾಗಿ ಎಲ್ಲವನ್ನೂ ಸಿದ್ಧಗೊಳಿಸುತ್ತಿದ್ದೆ. ಗಡುಸು ಧ್ವನಿಯೊಂದು ” ಹಲೋ ಎಕ್ಸ್ ಕ್ಯೂಸ್ ಮಿ ಮೈ ನೇಮ್ ಇಸ್ ಅಶೋಕ್, ಕ್ಯಾನು ಪ್ಲೀಸ್ ಎಂಟರ್ ಮೈ ನೇಮ್ ಇನ್ ಸ್ಟಾಫ್ ರಿಜಿಸ್ಟರ್ , ಐಯಾಮ್ ನ್ಯೂಲಿ ಜಾಯ್ನ್ಡ್ ” ಯಾರಪ್ಪ ಇದು ಬರೀ ಇಂಗ್ಲೀಷೇ ಮಾತನಾಡುತ್ತಾನೆ ಅಂತ ತಲೆ ಎತ್ತಿ ನೋಡಿದೆ. ನನಗೆ ಇದು ಕನಸೋ ಇಲ್ಲ ನನಸೋ ಅನುಸಿಬಿಟ್ಟಿತು.

ಮೊನ್ನೆ ಬಿರುಗಾಳಿಯಂತೆ ಹೋದವನು ಇಂದು ತಂಗಾಳಿಯಂತೆ ಬಂದು ನಿಂತಿದ್ದಾನಲ್ಲ ಅಂತ ತುಂಬಾ ಖುಷಿಯಾಯಿತು.
ಯಾರಿವನು ಎಂದು ತಲೆ ಕೆಡಿಸಿಕೊಂಡಿದ್ದಕ್ಕೆ ಅಂದು ಉತ್ತರ ಸಿಕ್ಕಿತ್ತು. ಎರಡು ಅಡಿಯ ಅಂತರದಲ್ಲಿ ಮುಖಾಮುಖಿಯಲ್ಲಿದ್ದೆವು. ಕಳೆದ ಭೇಟಿಯಲ್ಲಿ ಸ್ಪಷ್ಟವಾಗಿ ನೋಡದಿದ್ದ ಆ ನಿನ್ನ ಚಂದಿರನಂತ ವದನವನ್ನು ಅಂದು ಹಾಗೇ ದಿಟ್ಟಿಸುತ್ತ ನಿಂತುಬಿಟ್ಟಿದ್ದೆ. ಚಿಗುರು ಮೀಸೆ, ಸೊಂಪಾಗಿ ಬೆಳೆದ ಕುರುಚಲು ಗಡ್ಡ ಮತ್ತದೇ ಜೀನ್ಸ್ ಪ್ಯಾಂಟ್, ಅರ್ಧ ತೋಳಿನ ಫಾರ್ಮಲ್ ಚೆಕ್ಸ್ ಶರ್ಟ್ ನಿನ್ನ ಅಂದಕ್ಕೆ ಮೆರಗು ಕೊಟ್ಟಿತ್ತು.

“ಹಲೋ ಏನಾಯಿತು” ಎಂದಾಗಲೇ ನಾನು ನಿಧಾನಿಸಿ ಎಚ್ಚರವಾಗಿ ಸಾರಿ… ಎಸ್ ಪ್ಲೀಸ್ , ಮೈನೇಮ್ ಇಸ್ ಆಶಾ ಎಂದು ನನ್ನ ನಾಮಾಂಕಿತವನ್ನ ಪರಿಚಯ ಮಾಡಿಕೊಂಡೆ. ನಿನ್ನ ಹೆಸರು ಅಶೋಕ್ ಎಂದಾಗಲೇ ನಾನು ಎಚ್ಚೆತ್ತುಕೊಳ್ಳಬೇಕಿತ್ತು ನೀನು ನನಗೆ ಸಿಗುವವನಲ್ಲ ಎಂದು. ಏಕೆಂದರೆ ಹೃದಯ ಗೀತೆ ಸಿನಿಮಾದಲ್ಲಿ ಅಶೋಕ್ ಆಶಾ ಎಂಬ ಎರಡು ಕ್ಯಾರೆಕ್ಟರ್ ಗಳು ಕೊನೆಗೂ ಒಂದಾಗುವುದೇ ಇಲ್ಲ. ಅರುಣ ಎಂಬ ಇನ್ನೊಂದು ಕ್ಯಾರೆಕ್ಟರ್ ಅಶೋಕನಿಗೆ ಜೋಡಿಯಾಗುತ್ತದೆ. ಕಾಕತಾಳೀಯ ನೋಡು ಆ ಸಿನಿಮಾದಂತೆಯೇ ನಮ್ಮ ಜೀವನವು ಆಗಿ ಹೋಯಿತು. ನಾವು ಒಂದಾಗಲು ಸಾಧ್ಯವೇ ಆಗಲಿಲ್ಲ…..ನೀನು ಮಾತನಾಡುವ ಇಂಗ್ಲೀಷ್ ಎಷ್ಟು ಸ್ಪಷ್ಟವಾಗಿರುತ್ತಿತ್ತು ಎಂದರೆ ನುರಿತ ಇಂಗ್ಲೀಷ್ ಪ್ರೊಫೆಸರ್ ರೀತಿ ಇರುತ್ತಿತ್ತು.

ಆ ನಿನ್ನ ನಿರರ್ಗಳ ಮಾತನ್ನು ಕೇಳುತ್ತಲೇ ಇರಬೇಕು ಎನಿಸುತ್ತಿತ್ತು. ಬಹುಶಃ ಆ ಒಂದು ಮಾಯವೂ ಕೂಡ ನಿನ್ನಲ್ಲಿ ನಾ ಬಂಧಿಯಾಗಲು ಪ್ರೇರಣೆಯಾಗಿರಬಹುದು….. ಸರಿ..ನನ್ನ ಪರಿಚಯವನ್ನು ನಾನೇ ಮಾಡಿಕೊಂಡಾಗಲಾದರೂ ಸ್ವಲ್ಪ ನಗಬಾರದಿತ್ತೆ…? ಮುಖವನ್ನು ಊದಿಸಿಕೊಂಡವನಂತೇ ಇದ್ದೆ.” ಆಯ್ತಾ ನಾ ಹೊರಡಬೇಕು ” ಎಂದು ನನ್ನನ್ನು ನೋಯಿಸಿದಂತ್ತಿತ್ತು. ಏಕೆಂದರೆ ಇನ್ನೂ ಸ್ವಲ್ಪ ಸಮಯ ಇಲ್ಲೇ ಇರಲಿ ಎಂಬ ಹಂಬಲ. “ಆಯ್ತು ” ಎನ್ನುವಷ್ಟರಲ್ಲಿ ಹೊರಟೇ ಬಿಡೋದೆ…?. ” ಹೋಗು ಹೋಗು..ಎಲ್ಲೋಗ್ತೀಯ ಊರಿಗೆ ಬಂದೋಳು ನೀರಿಗೆ ಬರೋದಿಲ್ವ” ಎಂದು ಮನಸೊಳಗೇ ಹೇಳಿಕೊಂಡು ಕಾರ್ಯಮಗ್ನಳಾದೆ. ಅಂದಿನಿಂದ ದಿನಾ ಬರುವೆ ಹೋಗುವೆ. ನನಗಂತೂ ಧೈರ್ಯವಿಲ್ಲ ನಿನ್ನ ಜೊತೆ ಮಾತನಾಡಲು. ನೀ ಬಂದಾಗಲಂತೂ ಕೋಗಿಲೆಗೆ ಮಾವು ಚಿಗುರಿದಾಗ ಎಷ್ಟು ಸಂತೋಷ ಪಡುತ್ತದೋ, ಬೆಳದಿಂಗಳ ಕಂಡ ನವಿಲು ಹೇಗೆ ಗರಿಬಿಚ್ಚಿ ಕುಣಿಯುತ್ತದೋ ಹಾಗೆ ಆಗುತ್ತಿತ್ತು ನನಗೆ. ನಿನ್ನನ್ನು ನೋಡುವುದೇ ನನ್ನ ಭಾಗ್ಯವೆನಿಸುತ್ತಿತ್ತು.

ಅಂದು ದಸರಾ ಪೂಜೆ, ಹಬ್ಬಕ್ಕಿಂತ ಎರಡುದಿನ ಮುಂಚಿತವಾಗಿಯೇ ಮಾಡುತ್ತಿದ್ದರು. ನಾನು ರಿಸೆಪ್ಷನಿಸ್ಟ್ ಆಗಿದ್ದರಿಂದ ಎಲ್ಲರಂತೆ ನಾನೂ ತುಸು ಹೆಚ್ಚಾಗೇ ಮೇಕಪ್ ಮಾಡಿಕೊಂಡು ಒಂದೊಳ್ಳೆ ಮೆರೂನ್ ಬಣ್ಣದ ರೇಷಿಮೆ ಸೀರೆಗೆ ಕುಚ್ಚು ಹಾಕಿಸಿ ಅದಕ್ಕೊಪ್ಪುವ ಆಭರಣಗಳನ್ನು ಹಾಕಿಕೊಂಡು ಬಂದಿದ್ದೆ. ಅದಕ್ಕೆ ವಾರಗಳ ತಯಾರಿ ಇತ್ತು. ನೀನೋ ಹೇಗೇ ಇದ್ದರೂ ಸುಂದರವಾಗಿದ್ದೀಯ, ಆಕರ್ಷಿತನಾಗಿದ್ದೀಯ ನಿನ್ನ ಸೆಳೆಯಲು ಸ್ವಲ್ಪ ಪ್ರಯತ್ನ ಮಾಡೋಣ ಎಂದು. ಇಷ್ಟು ದಿವಸ ಜೀನ್ಸ್ ಹಾಕುತ್ತಿದ್ದವನು ಅಂದು ಮಾತ್ರ ನೀನು ಫಾರ್ಮಲ್ ಶರ್ಟ್ ಮತ್ತು ಪ್ಯಾಂಟ್ ಧರಿಸಿ, ಕಪ್ಪು ಬಣ್ಣದ ಶೂ, ಮೇಲೊಂದು ಬ್ಲೇಜರ್ ಹಾಕಿ, ಕಣ್ಣಿಗೆ ಗ್ಲಾಸ್ ಧರಿಸಿ ಒಳಗೆ ಎಂಟ್ರಿ ಕೊಟ್ಟೆ ನೋಡು…ಕಳೆದೋದೆ ನಾನು ಆ ನಿನ್ನ ನೋಟಕ್ಕೆ. ಅದ್ಯಾವ ತಾಯಿ ಹೆತ್ತ ಮಗನೋ ನೀನು ಎನಿಸಿದ್ದು ಸುಳ್ಳಲ್ಲ. ಅಷ್ಟು ಜನರ ಗುಂಪಲ್ಲಿ ನನಗೆ ಕಾಣುತ್ತಿದ್ದದ್ದು ನೀನೊಬ್ಬನೇ. ನಿನ್ನಂದನೇ ನನ್ನ ಕಣ್ಣು ತುಂಬಿಹೋಗಿತ್ತು. ಪೂಜೆ ಪುನಸ್ಕಾರಗಳು ನಡೆಯುತ್ತಿತ್ತು. ಆದರೆ ಅದ್ಯಾವ ಪರಿಜ್ಞಾನವೂ ನನಗಿರಲಿಲ್ಲ.

ಇವತ್ತಾದರೂ ನಿನ್ನ ಜೊತೆ ಮನಬಿಚ್ಚಿ ಮಾತನಾಡಲೇ ಬೇಕು ಎನಿಸಿಬಿಟ್ಟಿತ್ತು. ಪೂಜೆ ಏನೋ ಸರಾಗವಾಗಿ, ಸುಸೂತ್ರವಾಗಿ ಮುಗಿಯಿತು. ಆದರೆ ನನ್ನ ದೇವರ ಪೂಜೆನೇ ಇನ್ನೂ ಮಾಡಲಿಲ್ಲವಲ್ಲ , ವರವನ್ನು ಕೇಳಲೇ ಇಲ್ಲವಲ್ಲ ಎಂದುಕೊಳ್ಳುವಷ್ಟರಲ್ಲಿ ನನ್ನ ಗೆಳತಿಯೊಬ್ಬಳು ಒಂದು ಫೋಟೋ ತೆಗೆದುಕೊಳ್ಳೋಣವೆಂದು ಅಣಿಯಾಗುತ್ತಿದ್ದೆವು. ಆಕಸ್ಮಾತ್ ನಮ್ಮ ಬಳಿಗೆ ನೀನು ಬಂದೆ. ನನ್ನ ಗೆಳತಿಗೆ ನನ್ನ ಮನದಾಸೆ ಅರಿತಿತ್ತು ಎನಿಸುತ್ತದೆ.” ಸರ್ ನಿಮ್ಮ ಜೊತೆ ಒಂದು ಫೋಟೋ ತೆಗೆದುಕೊಳ್ಳುತ್ತೇವೆ ನಿಂತುಕೊಳ್ಳಿ” ಎಂದೇ ಬಿಟ್ಟಳು. ನೀನು ಅರೆ ಮನಸ್ಸಿನಿಂದಲೋ ಅಥವಾ ಒಳ್ಳೆ ಮನಸ್ಸಿನಿಂದಲೋ “ವೈ ನಾಟ್” ಎಂದೇ ಬಿಟ್ಟೆ. ಫೋಟೋ ತೆಗೆಯಬೇಕು ಸರಿ ತೆಗೆಯಲು ಯಾರಿರಲಿಲ್ಲ. ನನ್ನ ಗೆಳತಿನೇ ಮೊಬೈಲ್ ಎತ್ತಿಕೊಂಡು ನಮ್ಮಿಬ್ಬರನ್ನು ಜೊತೆಮಾಡಿ ನಿಲ್ಲಿಸಿಯೇ ಬಿಟ್ಟಳು. ರೋಗಿ ಬಯಸಿದ್ದು ವೈದ್ಯ ಹೇಳಿದ್ದು ಎರಡೂ ಒಂದೇ ಆಗಿಹೋಗಿತ್ತು.” ಸ್ಮೈಲ್” ಎಂದು ಮೂರು ನಾಲ್ಕು ಕ್ಲಿಕ್ಕಿಸಿ ಬಿಟ್ಟಳು. ಓಕೆ ಸರ್ ಆಯ್ತು ಎಂದು ಫೋಟೋ ನೋಡುತ್ತಲೇ “ಸರ್ ಡೋಂಟ್ ಮೈಂಡ್ ನಿಮ್ಮಿಬ್ಬರದು ಒಳ್ಳೆ ಜೋಡಿ ” ಎಂದು ನೇರವಾಗಿಯೇ ಹೇಳಿಬಿಡೋದೆ. ನೀನೋ ಹುಸಿನಗುತ ಅಲ್ಲಿಂದ ಜಾರಿಕೊಂಡೆ. ಆದರೆ ನಿಜವಾಗಿ ಜಾರಿದ್ದು ನಾನು. ನಿನ್ನ ಮೋಹದ ಆಳದೊಳಕ್ಕೆ ಜಾರಿ ಬಿದ್ದಿದ್ದವಳು ನಾನು.

ನನ್ನ ಹುಚ್ಚು ಎಷ್ಟಿತ್ತೆಂದರೆ ಅಂದು ತೆಗೆದಿದ್ದ ಜೋಡಿ ಫೋಟೋವನ್ನ ನನ್ನ ಮೊಬೈಲ್ ನ ಸ್ಕ್ರೀನ್ ಸೇವರ್ ಗೆ ಹಾಕಿಕೊಂಡಿದ್ದೆ. ಅದ ನೋಡಿದ ಅದೆಷ್ಟೋ ಗೆಳತಿಯರು ಯಾವಾಗ ಮದುವೆಯಾಯಿತು ಎಂದು ಛೇಡಿಸುವಂತೆ ಕಾಲೆಳೆಯುತ್ತಿದ್ದರು. ಮನಸ್ಸಿನೊಳಗೆ ಸಂತೋಷ ಭರಿತವಾಗಿದ್ದರೂ ಮೇಲು ನೋಟಕ್ಕೆ ಛೆ…ಹೋಗ್ರೇ ಎಂದು ಮೂದಲಿಸುವಂತೆ ಹೇಳಿಬಿಡುತ್ತಿದ್ದೆ. ಗೆಳತಿ ಅಂದು ಹೇಳಿದ ಮಾತು ನನ್ನ ಮನಸ್ಸನ್ನೇ ವಿಚಲಿತಗೊಳಿಸಿತ್ತು. ಅವಳು ಹೇಳಿದ ಮಾತು ನಿಜವಾದರೆ ಹೇಗಿರುತ್ತದೆ ಜೀವನ, ಬೆಸ್ಟ್ ಜೋಡಿ ಅವಾರ್ಡ್ ಸಿಗಬಹುದೇ ಎಂದೆಲ್ಲಾ ಯೋಚಿಸುತ್ತಲೇ ಇದ್ದೆ. ಒಂದು ಮುಖ್ಯವಾದ ವಿಷಯ ನಾನು ನಿನ್ನ ಮೂರ್ತಿಯನ್ನು ನನ್ನ ಹೃದಯದ ಗುಡಿಯಲ್ಲಿಟ್ಟು ಪೂಜೆ ಮಾಡುತ್ತಿದ್ದದ್ದು, ಮನಸಿನ ಭಾವನೆಗಳು ಇದಾವುದನ್ನೂ ನನ್ನ ಗೆಳತಿಯ ಜೊತೆಗೆ ಹಂಚಿಕೊಂಡವಳಲ್ಲ. ಸದ್ದಿಲ್ಲದೇ ಅರಳಿದ ನಿಶಬ್ಧದ ಪ್ರೀತಿ ನನ್ನದು.

ನಮ್ಮ ಪ್ರಥಮ ಖಾಸಗಿ ಭೇಟಿಯ ಬಗ್ಗೆ ಹೇಳಲೇಬೇಕು. ಅಂದು ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಆಫೀಸಿಗೆ ರಜಾ ಇತ್ತು. ನನ್ನ ಗೆಳತಿ ಲಾಲ್ ಬಾಗ್ ಗೆ ಹೋಗೋಣ ಎಂದು ಒತ್ತಾಯಿಸಿದಳು. ನನಗೂ ಬೆಂಗಳೂರು ಹೊಸದಾಗಿತ್ತು ಮತ್ತು ಅದೂ ಅಲ್ಲದೆ ಲಾಲ್ ಬಾಗ್ ಎಂದು ಹೆಸರು ಮಾತ್ರ ಕೇಳಿದ್ದೆ, ನೋಡಿರಲಿಲ್ಲ. ನಾನೂ ಆಸೆಯಿಂದ ಅವಳಿಗೆ ಹಸಿರು ನಿಶಾನೆ ತೋರಿಸಿಬಿಟ್ಟೆ. ಮನಸೊಳಗೆ ನೀನು ಜೊತೆಯಲ್ಲಿ ಬಂದಿದ್ದರೆ ಚನ್ನಾಗಿರುತ್ತಿತ್ತು ಎನಿಸಿದರೂ ಮತ್ತೊಂದು ಭಾವ ಅದೆಲ್ಲಾ ದೂರದ ಮಾತು ಎಂದು ನನಗೆ ನಿರಾಶೆಗೊಳುಸುತ್ತಿತ್ತು. ಅದೇ ಚಿಂತೆಯಲ್ಲಿ ಮುಳುಗಿ ಹೋಗಿದ್ದ ನನಗೆ ” ಇಳಿಯಮ್ಮ ಲಾಲ್ ಬಾಗ್ ಬಂತು” ಎಂದಾಗ ವಾಸ್ತವತೆಗೆ ಬಂದು ಪ್ರವೇಶ ದ್ವಾರದ ಕಡೆ ಹೊರಟೆವು. ನಮ್ಮೂರಿನ ಸಂತೆ, ಜಾತ್ರೆಗೆ ಹೋಗಿ ರೂಢಿಯಿದ್ದ ನನಗೆ ಅದೇ ದೊಡ್ಡದು ಎನಿಸಿತ್ತು. ಆದರೆ ಲಾಲ್ ಬಾಗ್ ನೋಡಿ ಇದು ಸಮುದ್ರ ಎನಿಸಿಬಿಟ್ಟಿತ್ತು. ಎಲ್ಲೆಲ್ಲಿ ಮೋಡಿದರೂ ಜನ ಕಾಲಿಡಲು ಜಾಗವೇ ಇರುತ್ತಿರಲಿಲ್ಲ. ಅಷ್ಟೊಂದು ಜನಸಾಗರವೇ ತುಂಬಿಹೋಗಿತ್ತು. ಊರಿನಲ್ಲಿ ಅಪ್ಪನ ಬೆರಳ ಹಿಡಿದು ಜಾತ್ರೆಗೆ ಹೋಗುತ್ತಿದ್ದವಳು, ನನಗೆ ಅದು ಬೇಕು ಇದು ಬೇಕು ಎಂದು ಕೇಳಿ ತೆಗೆಸಿಕೊಳ್ಳುತ್ತಿದ್ದೆ. ಇಂದು ಪ್ರಥಮವಾಗಿ ನಾನೇ ಏನು ಬೇಕಾದರೂ ತೆಗೆದುಕೊಳ್ಳುವ ನಿರ್ಧಾರವಿತ್ತು. ಆದರೆ ಅದೇಕೋ ಅಪ್ಪ ನನಗೆ ತುಂಬಾ ನೆನಪಾಗಿ ಹೋಗಿದ್ದ.

ಲಾಲ್ ಬಾಗ್ ಒಳಗಿನ ಕೆರೆಯಲ್ಲಿ ವಿಹಾರಕ್ಕೆಂದು ಜನ ತುಂಬಿದ್ದರು. ನನಗೂ ಒಮ್ಮೆ ಅದರಲ್ಲಿ ಕೂರಬೇಕು ಎನಿಸಿತ್ತು. ಗೆಳತಿಗೆ ಒತ್ತಾಯಿಸಿ ಹೋದೆವು. ಒಂದು ಬೋಟಿನಲ್ಲಿ ಇಬ್ಬರಿಗೇ ಅವಕಾಶವಿರುತ್ತಿತ್ತು. ಯಾರೋ ಅಪರಿಚಿತರು ಮೊದಲೇ ಕುಳಿತಿದ್ದರಿಂದ ಇನ್ನೊಬ್ಬರು ಕೂರಬಹುದಿತ್ತು. ನನ್ನ ಗೆಳತಿಯನ್ನೇ ಮೊದಲು ಕೂರಿಸಿ ಕಳುಹಿಸಿದೆ. ನಂತರ ನಾನು ಹೋಗೋಣವೆಂದು. ಅದೃಷ್ಟ ನೋಡು ನನ್ನ ಹಿಂದೆಯೇ ನೀನು ನಿಂತಿರೋದೇ..” ಹಾಯ್…ಏನು ಒಬ್ಬರೇ ಬಂದಿದ್ದೀರ..? ” ಎಂಬ ನಿನ್ನ ಪ್ರಶ್ನೆಗೆ ಕಣ್ಣಲ್ಲಿ ಅರಳಿದ ಆಸೆಯೊಂದಿಗೆ ನಗು ಮೊಗದಿಂದ ” ಇಲ್ಲ ನನ್ನ ಸ್ನೇಹಿತೆ ಜೊತೆ ಬಂದಿದ್ದೇನೆ. ಅವಳು ಬೋಟಿಂಗ್ ಹೋಗಿದ್ದಾಳೆ. ನಾವಿಬ್ಬರೂ ಜೊತೆ ಹೋಗೋಣ ” ಎಂದು ನಾನೇ ನಿನಗೆ ಆಹ್ವಾನವಿಟ್ಟೆ. ಅದೇನೋ ಅಂದು ನೀನೂ ಒಳ್ಳೆಯ ಮೂಡಿನಲ್ಲಿದ್ದೆ ಅನಿಸುತ್ತೆ ಹೋಗೋಣವೆಂದುಬಿಟ್ಟೆ. ನನ್ನ ಗಳತಿ ಬಂದ ತಕ್ಷಣ ನಾವಿಬ್ಬರೇ ಕುಳಿತು ಹೊರಟೆವು.

ಅಂದು ನನ್ನ ಜೀವನದ, ಪ್ರೇಮದ ಮೊದಲ ಹೆಜ್ಜೆಯಾಗಿತ್ತು. ಒಂದು ಹುಡುಗನ ಜೊತೆ ಏಕಾಂಗಿ ಪ್ರಯಾಣ ಅದಾಗಿತ್ತು. ” ನನಗೆ ನೀರನ್ನು ಕಂಡರೆ ಭಯ. ನಿಮ್ಮನ್ನು ಹಿಡಿದುಕೊಳ್ಳಬಹುದುದೇ ..? ” ಎಂದು ಕೇಳಿದಾಗ ಓಕೆ ಅಂದು ಬಿಟ್ಟಿದ್ದೆ. ನನ್ನ ಖುಷಿಯ ಕೇಳಬೆಕೇ ನಿನ್ನ ತೋಳ ಒಳಗೆ ನನ್ನ ಕೈಗಳನು ತೂರಿಸಿ ಬಂಧಿಮಾಡಿಬಿಟ್ಟೆ. ಪುರುಷನ ಪ್ರಥಮ ಸ್ಪರ್ಶಕ್ಕೆ ನನ್ನ ಹೆಣ್ತನದ ಆಸೆಗಳು ಗರಿಗೆದರಿ ಕುಣಿಯಲಾರಂಭಿಸಿದವು.ಮೈಯೆಲ್ಲಾ ನಡುಗುವಂತಾಗಿ ನಾಚಿಕೆ ಕೇಕೆ ಹಾಕುತ್ತಿತ್ತು. ತೋಳ ಬಂಧನವನ್ನು ಮೆಲ್ಲನೆ ಎಳೆದುಕೊಳ್ಳೋಣ ಎನಿಸಿತ್ತು. ಆದರೆ ಬಯಸದೆ ಬಂದ ಭಾಗ್ಯವನ್ನು ಬಿಡಬಾರದು ಎಂದು ತೀರ್ಮಾನಿಸಿದ್ದೆ. ನೀನು ನೋಡಲೆಂದೇ ಒಮ್ಮೊಮ್ಮೆ ನನ್ನ ಮೊಬೈಲನ್ನು ತೆಗೆದು ನಮ್ಮಿಬ್ಬರ ಜೋಡಿ ಫೋಟೋವನ್ನ ಕಾಣುವಂತೆ ಇಡುತ್ತಿದ್ದೆ. ಆದರೆ ನೀನು ಮಾತ್ರ ಏನು ಗೊತ್ತೇ ಇಲ್ಲವೇನೋ ಎಂಬಂತೆ ನಟಿಸುತ್ತಿದ್ದೆ. ಇಬ್ಬರೂ ಜಿದ್ದಿಗೆ ಬಿದ್ದವರಂತೆ ಮೌನವಾಗಿದ್ದೆವು. ತುಂಬಿದ ಯೌವ್ವನದ ರಸಭರಿತ ಹೆಣ್ಣೊಂದು ಬಳಿ ಇದೆ, ತೋಳ ತೆಕ್ಕೆಯಲಿ ಬಂಧನವಾಗಿದ್ದಾಳೆ ಏನಾದರೂ ಮಾತನಾಡೋಣ ಎನಿಸಲೇ ಇಲ್ಲ ನಿನಗೆ. ಆ ಕಡೆ ಈ ಕಡೆ ಪ್ರಕೃತಿಯನ್ನೇ ದಿಟ್ಟಿಸುತ್ತಿದ್ದೆ. ನಾನು ಹೆಣ್ಣು ದುಡುಕಬಾರದು ಎಂದು ಎಷ್ಟೇ ಪ್ರಯತ್ನ ಪಟ್ಟರೂ ಕೊನೆಗೆ ನಾನೇ ಮೌನ ಮುರಿದು ” ಯಾಕೆ ಮೌನವಾಗಿದ್ದೀರ …,? ಏನಾದರೂ ಮಾತನಾಡಿ…ಸುಮ್ಮನೆ ಕೂರಲು ಬೇಸರವಾಗುವುದಿಲ್ಲವೇ…? ಎಂದು ನಾನೇ ಮೌನ ಮುರಿದು ಕೇಳಿಯೇಬಿಟ್ಟೆ. ” ಹಾಗೇನಿಲ್ಲಾ ನೀವೇ ಮಾತನಾಡಿ. ನಾನು ಹೆಚ್ಚಿಗೆ ಮಾತನಾಡಿ ಅಭ್ಯಾಸವಿಲ್ಲ” ಇದು ನಿನ್ನ ಉತ್ತರವಾಗಿತ್ತು. ವಿಧಿಯಿಲ್ಲದೆ ನನ್ನ ಮನದಾಳದ ಮಾತನ್ನ ನಾಚಿಕೆಯಿಂದ ತಲೆತಗ್ಗಿಸಿ “ನನಗೆ ನೀವಂದ್ರೆ ಇಷ್ಟ, ಯಾವಾಗಲೂ ನಿಮ್ಮ ಜೊತೆ ಹೀಗೆ ಇರಬೇಕು ಎನಿಸುತ್ತದೆ ನನ್ನ ಈ ಪ್ರೇಮ ನಿವೇದನೆಯನ್ನ ಒಪ್ಪಿಕೊಳ್ಳುವಿರಾ..?” ಎಂದು ಒಂದೇ ಸಮನೆ ಒಪ್ಪಿಸಿಬಿಟ್ಟೆ. ” ದಯವಿಟ್ಟು ಕ್ಷಮಿಸಿ ಸದ್ಯಕ್ಕೆ ನಾನು ಏನನ್ನೂ ಹೇಳಲಾರೆ.

ಸ್ವಲ್ಪ ದಿನಗಳ ಕಾಲಾವಕಾಶ ಬೇಕು ಎಂದುಬಿಟ್ಟೆ. ಆ ಹೊತ್ತಿನಲ್ಲಿ ನಿನ್ನ ನೀರಸವಾದ ಉತ್ತರಕ್ಕೆ ಬೇಸರವೇನು ತರಲಿಲ್ಲವಿದ್ದರೂ “ಪರವಾಗಿಲ್ಲ ಯೋಚಿಸಿ ಉತ್ತರಿಸಿ” ಎನ್ನುವಷ್ಟರಲ್ಲಿ ಬೋಟಿನಿಂದ ಇಳಿಯಬೇಕಾದ ಅನಿವಾರ್ಯತೆ ಬಂತು. ಅಷ್ಟರಲ್ಕಾಗಲೇ ಸಮಯ ಎರಡನ್ನು ದಾಟಿತ್ತು. ನಿನಗೆ ಏನನಿಸಿತೋ ಏನೋ ಊಟ ಮಾಡೋಣವೆಂದು ಅಲ್ಲೇ ಇದ್ದ ಮೊಬೈಲ್ ಹೋಟೆಲ್ ಗೆ ನೀನೇ ಕರೆದೊಯ್ದೆ. ನನಗೆ ಒಂದು ಮೂಲೆಯಲ್ಲಿ ಒಪ್ಪಿಕೊಂಡರೆ ಎಷ್ಟು ಚನ್ನಾಗಿರಬಹುದು ಎಂದು ಮುಂದಿನದನ್ನು ಲೆಕ್ಕ ಹಾಕುತ್ತಿದ್ದೆ.ಊಟ ಮುಗಿಸಿ ಬೈ ಹೇಳಿ ಹೊರಟೇಬಿಟ್ಟೆ.

ಮನೆಗೆ ಬಂದವಳೇ ಸ್ವಲ್ಪ ಮೌನಿಯಾದೆ. ನಾನು ಏನಾದರೂ ತಪ್ಪು ಮಾಡಿದೆನೇ..? ಹಾಗೆ ಹೇಳಬಾರದಿತ್ತೇ..? ನನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಅವರು..? ಎಂಬೆಲ್ಲಾ ಪ್ರಶ್ನೆಗಳು ಕಾಡಲಾರಂಭಿಸಿದವು. ಇಷ್ಟಪಟ್ಟಿದ್ದು ಸಿಗಬೇಕಂದ್ರೆ ರಿಸ್ಕ್ ತೆಗೆದುಕೊಂಡರೂ ಪರವಾಗಿಲ್ಲ ಎಂದು ನಾನೇ ಸಮಾಧಾನ ಪಟ್ಟುಕೊಂಡೆ. ನನ್ನ ಮೌನದ ವಾತಾವರಣವನ್ನು ಗಮನಿಸಿದ ನನ್ನ ಗೆಳತಿ “ಲಾಲ್ ಬಾಗ್ ಗೆ ಹೋಗಿ ಬಂದಾಗಿನಿಂದ ನಿನ್ನಲ್ಲೇನೋ ಬದಲಾವಣೆ ಕಾಣಿಸುತ್ತಾ ಇದೆ ಏನಾಯಿತು..? ” ಎಂಬ ಅನುಮಾನದ ಪ್ರಶ್ನೆ ಕೇಳಲಾರಂಭಿಸಿದಳು.ಏನೋ ಸಬೂಬು ಹೇಳಿ ಮರೆಸಿಬಿಟ್ಟಿದ್ದೆ.

ಡಿಸೆಂಬರ್ 30 ನೇ ತಾರೀಖು ನೀನು ಎಂದಿನಂತೆ ಸ್ಮಾರ್ಟ್ ಆಗಿ ನಗುಮುಖದೊಂದಿಗೆ ನನ್ನ ಬಳಿ ಬಂದು ನಿಂತೆ. ಆ ರೀತಿಯ ನಗುವನ್ನು ನಾನು ಅಲ್ಲಿಯವರೆಗೂ ನೋಡಿಯೇ ಇರಲಿಲ್ಲ. ಹುಬ್ಬಿನ ಸನ್ನೆಯಲ್ಲೇ ಏನು ವಿಶೇಷ ಎಂಬಂತೆ ನಟಿಸಿದೆ. ” ನಾಳೆ ನಿಮಗೊಂದು ಸರ್ ಪ್ರೈಜ್ ನೀಡುತ್ತೇನೆ ಗೆಟ್ ರೆಡಿ ಟು ಗೊ ಬ್ರಿಗೇಡ್ ರೋಡ್ ಟು ಸೆಲೆಬ್ರೇಟ್ ನ್ಯೂ ಇಯರ್” ಎಂದು ಹೊರಟುಬಿಟ್ಟೆ. ನಾನು ತಲೆ ಕೆಡಿಸಿಕೊಂಡು ಯೋಚಿಸುತ್ತಾ ಕುಳಿತೆ. ಆಮೇಲೆ ಗೊತ್ತಾಯಿತು ನಾಳಿದ್ದು ನ್ಯೂ ಇಯರ್ ಇರುವುದರಿಂದ ಕರೆಯುತ್ತಿದ್ದಾರೆಂದು. ಆದರೆ ಸರ್ ಪ್ರೈಜ್ ಏನು ಎಂಬುದರೆ ಬಗ್ಗೆ ಕುತೂಹಲ ಹೆಚ್ಚಾಯಿತು. ಅದೇ ಗುಂಗಿನಲ್ಲಿ ರಾತ್ರಿ ಸರಿಯಾಗಿ ನಿದ್ರೆನೇ ಬಾರಲಿಲ್ಲ. ಮಾರನೆಯ ದಿನ ಸಂತೋಷದಿಂದ ಆಫೀಸಿಗೆ ಬೇಗ ಹೊರಟು ಬಂದೆ. ಎಲ್ಲಾ ಕೆಲಸಗಳನ್ನು ಬೇಗ ಮುಗಿಸಿ ಸಂಜೆ ಐದಕ್ಕೆ ನೀನೇ ಬಂದು ನನ್ನ ಕರೆದುಕೊಂಡು ಹೋದೆ. ಅಲ್ಲೊಂದು ಗೊಂದಲ ಎರಡೂ ಕಡೆ ಕೂರಬೇಕೆ, ಒಂದು ಕಡೆ ಕೂರಬೇಕೆಂದು. ಕೊನೆಗೆ ನೀನೇ ಎರಡು ಕಡೆ ಕೂರಲು ತಿಳಿಸಿದೆ.

ಅದು ಎರಡನೆ ಬಾರಿ ನಿನ್ನ ಜೊತೆ ಹೊರಟಿದ್ದು. ರಸ್ತೆಯಲ್ಲಿ ಹೋಗುವಾಗ ಅದೆಷ್ಟೋ ಪ್ರೇಮಿಗಳನ್ನ ಬೈಕಲ್ಲಿ ಹೋಗುವುದನ್ನ ನೋಡಿದ್ದೆ. ಹಿಂದಿನ ಸೀಟಿನಲ್ಲಿ ಕುಳಿತ ಹುಡುಗಿ ಅವಳ ಪ್ರಿಯತಮನನ್ನು ಹಿಂದಿನಿಂದ ಬಾಚಿ ತಬ್ಬಿ ಹಿಡಿದಿರುವುದನ್ನೂ ನೋಡಿದ್ದೆ. ಹಾಗೆ ನೋಡಿದಾಗ ನಾನೂ ಹೀಗೆ ಹೋಗುವುದು ಯಾವಾಗ ಎನಿಸಿದ್ದು ಸುಳ್ಳಲ್ಲ. ಆ ಆಸೆ ಈಗ ಈಡೇರುತ್ತದೆ ಎಂದುಕೊಳ್ಳುವಾಗಲೇ ಧೈರ್ಯಮಾಡಿ ನಿನ್ನೆಗಲ ಮೇಲೆ ಕೈ ಇಟ್ಟೇಬಿಟ್ಟೆ. ನೀನು ಮರುಮಾತನಾಡದೆ ನಿನ್ನಷ್ಷಕ್ಕೆ ಬೈಕ್ ಓಡಿಸುತ್ತಿದ್ದೆ.

ಬ್ರಿಗೇಡ್ ರೋಡ್ ತುಂಬ ಜನಜಂಗುಳಿ. ಎಲ್ಲಿ ನೋಡಿದರೂ ಹೊಸ ವರ್ಷದ ಆಚರಣೆಗೆಂದು ಬಂದ ಜನರು. ಅದರಲ್ಲಿ ಪ್ರೇಮಿಗಳೇ ಹೆಚ್ಚು. ಅದು ನನಗೆ ಹೊಸತು ಇದರ ಯಾವ ಗಂಧ ಗಾಳಿಯೂ ಗೊತ್ತಿರಲಿಲ್ಲ. ಅಲ್ಲಿ ನಿನ್ನ ಕೈಬೆರಳನ್ನೇ ಹಿಡಿದುಕೊಂಡು ಪುಟ್ಟ ಮಗುವಿನಂತೆ ನಿನ್ನ ಹಿಂದೆಯೇ ಬರುತ್ತಿದ್ದೆ. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಗಳೆಲ್ಲವನ್ನು ಒಮ್ಮೆ ಸುತ್ತು ಹಾಕಿ ಬರುವಷ್ಟರಲ್ಲಿ ರಾತ್ರಿ ಹನ್ನೊಂದರ ಸಮಯ. ಜಗಮಗಿಸುವ ಬಣ್ಣದ ಲೈಟುಗಳು, ಕುಣಿಯಲೆಂದೇ ಹುಚ್ಚೆಬ್ಬಿಸುವಂಥ ಹಾಡುಗಳು ಗುಯ್ ಗುಡುತ್ತಿದ್ದವು. ಹನ್ನೆರಡು ಗಂಟೆ ಆಗುತ್ತಿದ್ದಂತೇ ಎಲ್ಲರೂ ಹರ್ಷೋದ್ಘಾರದಿಂದ ” ಹ್ಯಾಪಿ ನ್ಯೂ ಇಯರ್ ” ಎಂದು ಕೂಗಲಾರಂಭಿಸಿದರು. ಆದರೆ ನೀನು ಮಾತ್ರ ನನ್ನ ಕೈಹಿಡಿದು ಮುಂಗೈಯಿಗೆ ಮುತ್ತಿಟ್ಡು ” ಐ ಲವ್ ಯು ” ಎಂದುಬಿಟ್ಟೆ. ನನಗೆ ಆ ಕ್ಷಣದ ಸಂತೋಷವನ್ನು ಹೇಳಿಕೊಳ್ಳಲಾಗುತ್ತಿರಲಿಲ್ಲ. ಮೌನಿಯಾದೆ, ಕಣ್ಣಲ್ಲಿ ಪನ್ನೀರು ಬಂತು. ಇವತ್ತಿಗೆ ನನ್ನ ಬಹುದಿನದ ಕನಸು ಈಡೇರಿತು ಎಂದು ಮನದೊಳಗೆ ಹರ್ಷಿತಗೊಂಡೆ.

ಅಂದಿನಿಂದ ನನ್ನ ಹೃದಯದ ಅರಮನೆಗೆ ನೀನೇ ಅಧಿಪತಿಯಾದೆ. ನಾನಿನ್ನ ದಾಸಿಯಾದೆ. ನನ್ನ ಇಷ್ಟ ಕಷ್ಟ ಎಲ್ಲವನ್ನೂ ಕೇಳುತ್ತಿದ್ದೆ. ನನ್ನನ್ನು ಸಂತೋಷಗೊಳುಸುವುದೇ ನಿನ್ನ ಕಾಯಕವಾಗಿ ಹೋಗಿತ್ತು. ನಿನ್ನ ಮಾತಿಗೆ , ಪ್ರೀತಿಗೆ ಸಂಪೂರ್ಣ ಶರಣಾಗಿ ಹೋಗಿದ್ದೆ. ಇಷ್ಟೆಲ್ಲಾ ನಡೆದರೂ ಒಮ್ಮೆಯೂ ನೀನು ಸಂಯಮ ಮೀರಲಿಲ್ಲ. ಅಸಭ್ಯವಾಗಿ ವರ್ತಿಸಲಿಲ್ಲ. ನಿನ್ನ ಆ ಗುಣನೇ ಇರಬೇಕು ನಾನಿಂದು ಇಷ್ಟು ಹೊಗಳಲು. ಒಮ್ಮೆ ನನ್ನಪ್ಪನಿಂದ ಕರೆ ಬಂತು ಊರಿಗೆ ಬೇಗನೆ ಬರಬೇಕೆಂದು. ಏನೋ ಗಾಢವಾದ ವಿಷಯವಿರಬೇಕೆಂದು ನಿನಗೂ ಹೇಳದೆ ಹೊರಟು ಬಿಟ್ಟೆ. ಆಮೇಲೆ ತಿಳಿಯಿತು ನನ್ನ ಮದುವೆಯ ಸಲುವಾಗಿ ಎಂದು. ನನ್ನಪ್ಪನ ಆಸೆ, ಕನಸಿನ ಮುಂದೆ ನನ್ನ ಪ್ರೀತಿ ಚಿಕ್ಕದೆನಿಸಿತು. ಮರು ಮಾತನಾಡದೆ ಒಪ್ಪಿಕೊಂಡೆ. ಆದರೆ ನಿನ್ನ ಜೊತೆ ಕಳೆದ ಆ ಒಂದೊಂದು ಕ್ಷಣಕ್ಕೆ, ಅನುಭವಕ್ಕೆ ಏನೆಂದು ಹೆಸರಿಟ್ಟು ಕರೆಯಲಿ. ಹೌದು ಈ ನೆನಪುಗಳೇ ಹಾಗೆ ಬೇಡವೆಂದರೂ ಅಕ್ಷಿ ಪಟಲದ ಮುಂದೆ ಬಂದು ಹಳೆಯ ಪಾತ್ರಗಳು ನಟಿಸುತ್ತಾ ಹೋಗುತ್ತವೆ. ಮತ್ತೆ ಕಾಣದಾಗುತ್ತವೆ.

ಮತ್ತೊಮ್ಮೆ ನಿನ್ನನ್ನು ಹೃದಯದ ರಾಜ ಎನ್ನುತ ಮುಗಿಸುತ್ತಿರುವೆ. ನೀ ಎಲ್ಲೇ ಇದ್ದರೂ ಸುಖವಾಗಿರೆಂದು ಆಶಿಸುತ್ತೇನೆ.

ಇಂತಿ ನಿನ್ನ ಪ್ರೇಮದಾಸಿ

ಮಹದೇವ್ ಬಿಳುಗಲಿ
9611339024

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ‘ಎಳೆ’ ತಂದರೋ..!

Published

on

  • ನವೀನ್ ಸಾಗರ್, ಬೆಂಗಳೂರು

ಸಿನಿಮಾ ಹಾಡುಗಳು ಕವನಗಳು ಎಲ್ಲ ಗದ್ಯಗಳಷ್ಟು ನೇರ ಸಲೀಸು ಅಲ್ಲ. ಹೇಳಬೇಕಿರೊದನ್ನು ಗದ್ಯಗಳ ಹಾಗೆ ಸೀದಾಸಾದಾವಾಗಿ ಕವನಗಳು, ಸಿನಿಗೀತೆಗಳು ಹೇಳುವುದಿಲ್ಲ. ಹಾಗೆ ಹೇಳಿಬಿಟ್ಟರೆ ಅವು ಕವನ/ಹಾಡು/ಪದ್ಯಗಳೇ ಅಲ್ಲ!!!

ಹಾಡು ಅಂದರೆ ಅಲ್ಲಿ ಉಪಮೆಗಳು ಗೂಢಾರ್ಥಗಳು ದ್ವಂದ್ವಾರ್ಥಗಳು(ದ್ವಂದ್ವಾರ್ಥ ಅಂದ್ರೆ ಅಶ್ಲೀಲ ಮಾತ್ರವೇ ಅಲ್ಲ), ಎರಡುಮೂರು ವಿಚಾರಗಳನ್ನು ಹೇಳಬಲ್ಲ ಒಂದೇ ಒಂದು ಸಾಲು, ಇನ್ಯಾವತ್ತೋ ರೆಲೆವೆಂಟ್ ಅನಿಸಬಲ್ಲ ಕಲ್ಪನೆಗಳು ಏನೇನೋ ತುಂಬಿಹೋಗಿರುತ್ತವೆ. ಅದಕ್ಕೊಂದು ಮೂಡ್ ಇರುತ್ತೆ.

ಒಬ್ಬೊಬ್ಬ ಓದುಗನಲ್ಲಿ ಒಂದೊಂದು ಭಾವ ಹುಟ್ಟಿಸಬಲ್ಲ ಶಕ್ತಿ ಕವಿತೆಗಳಿಗಿರುತ್ತದೆ. ನನಗೆ ರೊಮ್ಯಾಂಟಿಕ್ ಅನಿಸುವ ಗೀತೆಯೊಂದು ಇನ್ನೊಬ್ಬನಿಗೆ ವಿರಹಗೀತೆ ಅನಿಸಬಹುದು. ನನಗೆ ಲಾಲಿ ಹಾಡೆನಿಸುವ ಗೀತೆಯೊಂದು ಇನ್ಯಾರಿಗೋ ಜಾಲಿ ಗೀತೆ ಅನಿಸಬಹುದು. ಇನ್ನೊಬ್ರಿಗೆ ಶೋಕಗೀತೆ ಅನಿಸೋ ಗೀತೆಯಲ್ಲಿ ನನಗೇನೋ ತುಂಟತನ ಕಾಣಿಸಬಹುದು. ಸಭ್ಯಗೀತೆ ಅನಿಸುವ ಹಾಡೊಂದು ಸಾಲುಸಾಲಲ್ಲೂ ಡಬಲ್ ಮೀನಿಂಗ್ ತುಂಬ್ಕೊಂಡಿದೆಯಲ್ಲ ಅನಿಸಬಹುದು. ಗ್ರಹಿಕೆ ಮೂಡು ವಯಸ್ಸು ಸಂದರ್ಭ ಇವೆಲ್ಲದರ ಮೇಲೆ ಹಾಡೊಂದು ನಮ್ಮನ್ನು ತಲುಪೋ ಬಗೆ ಬದಲಾಗುತ್ತಾ ಹೋಗುತ್ತದೆ‌. ಅಷ್ಟಾಗಿಯೂ ಅಸಲಿಗೆ ಅದನ್ನು ಬರೆದ ಕವಿಯ ಯೋಚನೆ ನಾವು ಗ್ರಹಿಸಿದ್ದೆಲ್ಲಕ್ಕಿಂತ ಭಿನ್ನವಾಗಿದ್ದಿನ್ನೇನೋ ಇದ್ದರೂ ಇರಬಹುದು.

ಹಲವು ಬಾರಿ ಕವಿಗೆ ತನ್ನ ಗೀತೆ ತಾನಂದುಕೊಂಡ ಭಾವದಲ್ಲೇ ರೀಚ್ ಆಗಿದೆ ಅನ್ನೋ ಖುಷಿ ತೃಪ್ತಿ ಸಿಗುತ್ತದೆ. ಕೆಲವು ಬಾರಿ .. ಅರೆ ಬರೆಯುವಾಗ ನಾನೇ ಹೀಗೊಂದು ಗೂಡಾರ್ಥದ ಬಗ್ಗೆ ಯೋಚಿಸಿರಲಿಲ್ಲ. ಕೇಳುಗ ಇದಕ್ಕೆ ಇನ್ನೊಂದು ಆಯಾಮವನ್ನೇ ಕೊಟ್ಟುಬಿಟ್ಟನಲ್ಲ ಅಂತ ಅಚ್ಚರಿಯಾಗಬಹುದು. ಕೆಲವೊಮ್ಮೆ ತನಗೇ ಗೊತ್ತಿಲ್ಲದ ಅರ್ಥ ಹುಟ್ಟಿಸಿ ತನ್ನನ್ನು ಕೇಳುಗರು ಮೇಲೇರಿಸಿ ಕೂರಿಸಿದಾಗ, ಈ ಕ್ರೆಡಿಟ್ ಬಿಟ್ಟುಕೊಡಲಿಷ್ಟ ಪಡದ ಕರಪ್ಟ್ ಮನಸು.. ಹೌದೌದು ನಾನು ಹೀಗೆ ಎರಡರ್ಥ ಹುದುಗಿಸಿ‌ಈ ಸಾಲು ಬರೆದಿದ್ದೆ ಎಂದು ಧ್ವನಿಗೂಡಿಸುತ್ತದೆ. ಅದೇ ವಿವಾದಕ್ಕೋ ಅವಹೇಳನಕ್ಕೋ ಕಾರಣವಾದರೆ .. ಇಲ್ಲ ನಾನು ಬರೆದದ್ದು ಈ ಅರ್ಥದಲ್ಲಿ ಅಂತ ಸೇಫ್ಟಿ ಮೋಡ್ ಗೂ ಹೋಗುತ್ತದೆ. ಹಾಡು/ಕವಿತೆಗಳಿಗೆ ಈ ವ್ಯಾಖ್ಯಾನದ ಮೂಲಕ ಬಚಾವಾಗುವ ಇಮೇಜ್ ರೂಪಿಸಿಕೊಳ್ಳುವ ಅವಕಾಶವಿರುತ್ತದೆ‌. ಗದ್ಯಗಳಿಗೆ ಆ ಪ್ರಿವೆಲೇಜ್ ಇರೋದಿಲ್ಲ.

ಸಂಭ್ರಮ ಚಿತ್ರದಲ್ಲಿ ಹಂಸಲೇಖ … “ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರೋ…” ಗೀತೆಯಲ್ಲಿ ” ಎಳೆ” ಪದವನ್ನು ಎರಡರ್ಥ ಬರುತ್ತದೆಂದೇ ಬಳಸಿದರೋ ಬರೆದ ಮೇಲೆ ಎರಡರ್ಥ ಕೇಳುಗರ ಗ್ರಹಿಕೆಗೆ ಬಂತೋ ಎಂಬ ಪ್ರಶ್ನೆಯಂತೆ ಇದು. ಹಂಸ ಲೇಖಾವ್ರು ಪ್ರೀತಿಯ ’ಎಳೆ’ಯ ಬಗ್ಗೆ ಬರೆದಿರಬಹುದು. ಅಥವಾ ಎಳೆದು ತಂದರೋ ಎಂದು ಕೇಳಿಯೂ ಬರೆದಿರಬಹುದು. ಅಥವಾ ಅವರಿಗಿರೋ ಪನ್ ಸೆನ್ಸ್ ಗೆ ಈ ಎರಡೂ ಅರ್ಥ ಬರಲಿ ಅಂತಲೇ ಎಳೆ ಎಂಬ ಪದ ಬಳಸಿರಬಹುದು. ಈ ಥರದ ಸಾಕಷ್ಟು ಉದಾಹರಣೆ ಸಿಗುತ್ತದೆ. ಸಾಹಿತ್ಯ ಗಮನಿಸಲು ಶುರು ಮಾಡಿದಾಗ ಇಂಥ ಖುಷಿ ಅನುಭೂತಿಗಳು ಸಿಗಲಾರಂಭಿಸುತ್ತವೆ. ರಿಸರ್ಚಿನಂಥ ಖುಷಿ

ಹಂಸಲೇಖರ … “ಈ ಹರಯದ ನರಕೊಳಲಲಿ ಇವೆ ಸರಿಗಮ ಹೊಳ್ಳೆಗಳು… ಈ ಮದನನ ಕಿರುಬೆರಳಲಿ ನವಿರೇಳದೆ ಗುಳ್ಳೆಗಳು..” ಈ ಸಾಲು ಕೇವಲ ಕಮರ್ಶಿಯಲ್ ಮ್ಯೂಸಿಕಲ್ ಸಾಂಗ್ ಆಗಿ ನಮ್ಮ ಕಿವಿ ತಲುಪಿದಾಗ ಗುನುಗುವ ಸಾಲಾಗುತ್ತದೆ ಅಷ್ಟೆ. ಅರೆ ಹರಯದ ನರಕೊಳಲು ಅಂದ್ರೆ ಏನು… ಮದನನ ಕಿರುಬೆರಳು ಅಂದ್ರೆ.. ? ಸಾಮಾನಿಗೆ ಇಷ್ಟು ಸಭ್ಯಶೃಂಗಾರರೂಪ ಕೊಟ್ಟು ಹೇಳಿರೋದಾ ಅನಿಸಿದಾಗ.. ಶೃಂಗಾರ ಅಡಗಿರೋ‌ ಸಾಲಾದರೂ ಜೋರಾಗಿ ಹೇಳೋಕೆ ಮನಸು ಹಿಂಜರಿಯುತ್ತದೆ.

ಸಾಹಿತ್ಯ ಅಷ್ಟಾಗಿ ಗಮನಿಸದ ವಯಸ್ಸಲ್ಲಿ… “ಮೈಯ್ಯಲ್ಲಿ ಏಳುತಿದೆ ಮನ್ಮಥ‌ನ ಅಂಬುಗಳು.. ಜುಮ್ ಜುಮ್ ಜುಮ್..” ಅನ್ನೋ ಸಾಲು ಸಂಕ್ರಾಂತಿ ಗೀತೆ ಎಂಬಂತೆ ಬಂದು ಹೋಗುತ್ತಿತ್ತು.

ಆದರೆ ಆನಂತರ ಸಾಹಿತ್ಯವಾಗಿ ಗಮನಿಸಿದಾಗ.‌ ಆಹಾ ರೋಮಾಂಚನವನ್ನು.. ಮೈರೋಮ ನಿಮಿರುವುದನ್ನು ಮನ್ಮಥನ ಬಾಣಕ್ಕೆ ಹೋಲಿಸಿದ್ದಾರಲ್ಲ ಅನಿಸಿ ನಿಜಕ್ಕೂ ಜುಮ್ ಅನಿಸಿತ್ತು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿದರೆ.. ಮೈಯಲ್ಲಿ ಏಳುತಿದೆ ಮನ್ಮಥನ ಅಂಬು ಅಂದ್ರೆ.. ಒನ್ಸಗೇನ್ ಸಾಮಾನಿರಬಹುದಾ ಅನಿಸದಿರದು.

ಸದಾಶಿವಂಗೆ ಅದೇ ಗ್ಯಾನ ಅಂದ್ಕೋಬೇಡಿ..

ನೆನಪಿರಲಿ ಚಿತ್ರದ ಅಜಂತಾ ಎಲ್ಲೋರಾ ಗೀತೆಯಲ್ಲಿ ಬರುವ… “ಮಂದವಾಗಿ ಬಳುಕೋವಂಥ ನಾರಿ ಇವಳ
ಅಂದ ನೋಡಿ ನಿಂತಾಗ..ಚಂದ ನೋಡಿ ನಿಂತಾಗ..
ಯಾರೊ ನೀನು ಎಂದು ಕೇಳುತಾವೆ..
ಇವಳ ಪೊಗರಿನ ಹೃದಯಪಾಲಕಿಯರು..
ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ…”

ಈ ಸಾಲುಗಳು ತನ್ನ ರಿದಮಿಕ್ ಮ್ಯೂಸಿಕ್ ಹಾಗೂ ಸುಲಲಿತವಾಗಿ ಲಘುಗುರು ಇಟ್ಟು ಬರೆದಂಥ ಪದಗಳ‌ ಆಟದಿಂದ ಮಜವಾಗಿ ಹಾಡಿಸಿಕೊಂಡು ಬಿಡ್ತವೆ. ಆದರೆ ಯಾವತ್ತೋ ಆರಾಮಾಗಿ ಸಾಹಿತ್ಯ ಕೇಳ್ತಾ ಇದ್ದರೆ.. ಆಹಾ ..ಹಂಸಲೇಖರ ರಸಿಕಕಲ್ಪನೆಗಳಿಗೆ ಮಿತಿಯೇ ಇಲ್ಲವಾ ಅನಿಸಿಬಿಡುತ್ತದೆ.

ಯಾರೋ ನೀನು ಎಂದು ಕೇಳುತಾವೆ ಇವಳ “ಪೊಗರಿನ ಹೃದಯ ಪಾಲಕಿಯರು” ಎಂದು ಅವರು ರೆಫರ್ ಮಾಡ್ತಿರೋದು ಆ ಹೆಣ್ಣಿನ ಸ್ತನಗಳ ಬಗ್ಗೆ ಅಂತ ಅರ್ಥವಾದಾಗ ಮತ್ತೊಮ್ಮೆ ಈ ಸಾಂಗ್ ಕೊಡುವ ಅನುಭೂತಿಯೇ ವಿಭಿನ್ನ. “ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ” ಎಂದು ಮುಂದುವರಿಸಿ ಆ ಸಾಲಿಗೆ ಇನ್ನಷ್ಟು ರಸಿಕತೆ ತುಂಬುತ್ತಾರೆ ಹಂಸ್.

ಗಡಿಬಿಡಿಗಂಡ ಚಿತ್ರದ…. ಮುದ್ದಾಡೆಂದಿದೆ ಮಲ್ಲಿಗೆ ಹೂ ಗೀತೆಯಲ್ಲಿ……. ನಾಯಕಿ”ಎದೆಯ ಸೆರಗ ಮೋಡದಲ್ಲಿ ನೀನೇ ಚಂದ್ರನೀಗ….” ಅಂದರೆ…. ನಾಯಕ” ಹೃದಯ ಮೇರುಗಿರಿಗಳಲ್ಲಿ… ಕರಗಬಹುದೆ ಈಗ” ಅಂತಾನೆ. “ಮುಡಿಯಲಿ ಮಲ್ಲಿಗೆಯ ಮುಡಿದವಳ ಮೊದಲುಮುಡಿಯಬೇಕು.. ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು…” ಅಂತ ನಾಯಕಿ ತನ್ನನ್ನು ಮೊದಲು ರಮಿಸು ಅಂತ ಒತ್ತಾಯಿಸುತ್ತಿದ್ದರೆ………… ನಾಯಕ ..” ಮನಸಿನ ಮಧುವಿನ ಮಹಲೊಳಗೆ … ಮದನ ಮಣಿಯಬೇಕು… ಸುರತಿಯ ಪರಮಾನ್ನ ಹಿತಮಿತವಿರಬೇಕು” ಅಂತ ಆಕೆಯ ಮೇಲಿರೋ ಮೋಹದ ಜೊತೆಜೊತೆಗೆ ಪ್ರತಿದಿನ ಬೇಡ ಫ್ರೀಡಮ್ಮು ವೀಕ್ಲಿ ಒನ್ಸು ಜುಮ್ ಜುಮ್ಮು” ಅಂತ ದೂರ ಹೋಗೋ ಪ್ರಯತ್ನ ಕೂಡ ಮಾಡುತ್ತಾನೆ.

ಇದು ಕೂಡ ಹೆಣ್ಣು ತನ್ನ ಗಂಡನ್ನು ಸೆಕ್ಸಿಗಾಗಿ ಕರೆಯುವ ಗೀತೆಯೇ ಆದರೂ… ತನ್ನ ಕ್ಲಾಸಿಕಲ್ ಟ್ಯೂನ್ ನಿಂದ ಚೆಂದದ ಪದಜೋಡಣೆಯಿಂದ… ಈ ಹಾಡು ಕೊಂಚವೂ ಅಶ್ಲೀಲ ಅನಿಸೋದೇ ಇಲ್ಲ. ಅಶ್ಲೀಲ ಅನಿಸಿದರೂ ಓಕೆ ಎಂದು ಬರೆದಾಗ.. ರಾತ್ರಿ ಆಯ್ತು ಮಲಗೋಣ ಇಂದು ನಮ್ಮ ಸೋಭಾನ… ಅಥವಾ ಕಾಯಿ ಕಾಯಿ ನುಗ್ಗೇಕಾಯಿ ಮಹಿಮೆಗೆ ರಾತ್ರಿಯೆಲ್ಲ ನಿದ್ದೆಯಿಲ್ಲ ಕಣ್ಣಿಗೆ.. ನೆಲ್ಲಿಕಾಯಿ ಆಸೆಗೆ ಬಿಟ್ಟು ಬಂದೆ ಹಾಸಿಗೆ ಅಂತ ಸ್ವಲ್ಪ ನೇರವಾಗಿಬಿಡುತ್ತಾರೆ ಹಂಸಲೇಖ.

ಇವೆಲ್ಲ ಸಾಹಿತ್ಯವನ್ನು ಗಮನಿಸುವಾಗ ಅರ್ಥವಾಗುತ್ತಾ ಹೋಗುವ ಅಪಾರಾರ್ಥಗಳು. ತೂಗುಮಂಚದ “ಹಮ್ಮನುಸಿರಬಿಟ್ಟಳು ಎಂಬುದು ಅಮ್ಮನುಸಿರ ಬಿಟ್ಟಳು ಎಂದಾಗಿದ್ದು ಅದನ್ನು ಲಾಲಿಹಾಡೆಂದು ತಪ್ಪು ತಿಳಿದುದರ ಪರಿಣಾಮ ಎಂದು ಹಿಂದೊಮ್ಮೆ ಬರೆದಿದ್ದು ನಿಮಗೆ ನೆನಪಿರಬಹುದು.

ಇನ್ನು ಡಬಲ್ ಮೀನಿಂಗೇ ಹುಡುಕಬೇಕು ಅಂದರೆ ಪ್ರತಿ ಗೀತೆಯೂ ಬೇರೆಯೇ ಅರ್ಥ ಕೊಡಬಲ್ಲ ಕೆಪಾಸಿಟಿ ಹೊಂದಿರುತ್ತದೆ. ಅದು ನಾವು ಆ ಗೀತೆಯನ್ನು ಬಿಂಬಿಸೋಕೆ ಹೊರಟಿರುವ ರೀತಿಯ ಮೇಲೆ ಡಿಪೆಂಡು. ಎಂಥ ಸಭ್ಯಸಾಲನ್ನೂ.. ಕವಿಗೇ ಶಾಕ್ ಆಗುವ ಹಾಗೆ ಡಬಲ್ ಮೀನಿಂಗ್ ಆಗಿಸಬಹುದು. ಆ ಉದಾಹರಣೆ ಈ ಬರಹದಲ್ಲಿ ಬೇಡ. ಮುಂದೆಂದಾದರೂ ಬರೆಯೋಣ.

ಇದೆಲ್ಲ ಬರೆಯೋಕೆ ಹೊರಟಿದ್ದಕ್ಕೆ ಪ್ರೇರಣೆ ಅಣ್ಣಯ್ಯ ಚಿತ್ರದ ಒಂದು ಸಾಂಗ್. ಅಣ್ಣಯ್ಯ ಬಂದು ಹೋಗಿ ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಟೈಮಾಯ್ತು. ರವಿಚಂದ್ರನ್ ಸಿನಿಮಾಗಳು ಸಾಫ್ಟ್ ಪೋರ್ನ್ ಸಿನಿಮಾಗಳಂತೆ ಭಾಸವಾಗುತ್ತಿದ್ದ ನಮ್ಮ ಏಜಿನ ದಿನಗಳವು. ರವಿಚಂದ್ರನ್ ಸಿನಿಮಾಗಳನ್ನು ನೋಡೋದು ಕಾಶೀನಾಥ್ ಸಿನಿಮಾ ನೋಡೋಷ್ಟೇ ಪಾಪ ಎಂಬಷ್ಟು ಮಡಿವಂತಿಕೆ ದಿನಗಳವು. ಆದರೆ ನಮ್ಮ ಪಾಲಿಗೆ ಆಗ ರವಿಮಾಮಾ ಲವ್ ರೊಮ್ಯಾನ್ಸ್ ಶೃಂಗಾರಗಳಿಗೆ ಗಾಡ್. ಆತ ಹೀರೋಯಿನ್ ಎದೆಯ ಮೇಲೆ ಮುಖವಿಟ್ಟು ಒರಗಿದರೆ ನಮಗೆ ರಸಸ್ಫೋಟ ಆಗುತ್ತಿತ್ತು. ಕುತ್ತಿಗೆಗೊಂದು ಮುತ್ತಿಟ್ಟು ತುದಿಬೆರಳುಗಳನ್ನು ಕತ್ತು ಮತ್ತು ಎದೆಯ ನಡುವೆ ಒಮ್ಮೆ ಆಡಿಸಿದ ಅಂದರೆ ಕೊಳಲು ಲಂಬಕೋನವಾಗುತ್ತಿತ್ತು.

ಆತ ಸೆರಗು ಸರಿಸಿ ಹೊಕ್ಕಳಿಗೊಮ್ಮೆ ಮುತ್ತಿಟ್ಟರೆ ಮುಗಿದೇಹೋಯ್ತು ಊರಸ್ನಾಯುಗಳು ಬಿಗಿಯಾಗಿ ಹೋಗುತ್ತಿದ್ದವು. ಅಂದು ಹಂಸಲೇಖ ಗೀತೆಗಳು ರವಿಚಂದ್ರನ್ ನ ಪಿಚ್ಚರೈಸೇಷನ್ನಲ್ಲಿ ಕಳೆದುಹೋಗಿಬಿಡುತ್ತಿದ್ದವು. ಅಥವಾ ಸಾಹಿತ್ಯ ಸಂಗೀತ ಎಲ್ಲದರಾಚೆಗೆ ನಮಗೆ ಆ ರೊಮ್ಯಾನ್ಸೇ ಹೆಚ್ಚು ಆಕರ್ಷಿಸಿಬಿಡುತ್ತಿತ್ತು. ಕ್ಯಾಸೆಟಲ್ಲಿ ಹಾಡುಗಳನ್ನು ಕೇಳಿ ಸಿನಿಮಾಗೆ ಹೋದಾಗ ಗೀತೆಗಳು ಆಡಿಯೋಗಿಂತ ವಿಡಿಯೋವಾಗಿ ತೃಪ್ತಿಕೊಟ್ಟು ಕಳಿಸುತ್ತಿದ್ದವು. ಆದರೆ ಆನಂತರ ಸಾಹಿತ್ಯ ಗಮನಿಸುವ ಮೆಚುರಿಟಿ, ಸಾಹಿತ್ಯದಲ್ಲಿರುವ ಇಮ್ಯಾಜಿನೇಷನ್ ಪವರ್ ಆಸ್ವಾಧಿಸುವ ಮನಸ್ಥಿತಿ ಎಲ್ಲ ಬಂದಾಗ.. ರವಿ ಚಂದ್ರನ್ ಹಂಸಲೇಖರ ಗೀತೆಗೆ ಹತ್ತು ಪರ್ಸೆಂಟಷ್ಟೂ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ ಅನಿಸಿಬಿಟ್ಟಿದೆ. ಹಾಗಂತ ಹಂಸಲೇಖರ ಸಾಹಿತ್ಯಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಿತ್ತಾ? ಖಂಡಿತ ಇಲ್ಲ. ಯಥಾವತ್ ನ್ಯಾಯ ಸಲ್ಲಿಸಲು ಹೋದದ್ದೇ ಆದರೆ ಆ ಸಾಂಗ್ ನ ಪಿಚ್ಚರೈಸೇಷನ್ ಕಾಮಸೂತ್ರವಾಗಿ ಹೋಗುವಷ್ಟು ಹಾಟ್ ಆಗಿಬಿಡುತ್ತಿತ್ತು.

ಆ ಗೀತೆಗಳು ಪಿಚ್ಚರೈಸ್ ಆಗದೆಯೇ ಇಮ್ಯಾಜಿನೇಷನ್ನಲ್ಲೇ ಉಳಿದುಬಿಟ್ಟಿದ್ದರೆ ಎಷ್ಟು ಚೆಂದವಿತ್ತು ಅನಿಸಿದ್ದೂ ಇದೆ. ಸತ್ಯ ಏನಂದರೆ ರವಿಚಂದ್ರನ್ ಸಲ್ಲಿಸಿದಷ್ಟು ನ್ಯಾಯವನ್ನು ಹಂಸಲೇಖರ ಗೀತೆಗೆ ಇನ್ಯಾರೂ ಸಲ್ಲಿಸಲು ಸಾಧ್ಯವಾಗಲಿಲ್ಲ. ರೊಮ್ಯಾಂಟಿಕ್ ಗೀತೆಗಳಲ್ಲಿ ಮಾತ್ರವಲ್ಲ… ಬೇರೆ ಗಂಭೀರ/ಸ್ಯಾಡ್/ಫಿಲಾಸಫಿಕಲ್/ಕ್ರಾಂತಿ ಯಾವ ಗೀತೆಗಳಿಗೂ ವಿಶ್ಯುಯಲಿ ನ್ಯಾಯ ಸಿಕ್ಕಿಲ್ಲ. ಇದು ಹಂಸಲೇಖ ಮಾತ್ರ ಅಲ್ಲ.. ಬಹುತೇಕ ಸಾಹಿತಿಗಳ ಮನಸಿನ ಮೂಲೆಯ ಅಸಮಾಧಾನ ಹಾಗೂ ನೋಡುಗರ ಅಸಂತೃಪ್ತಿ. ಮೊನ್ನೆ ನಾನು ಶೇರ್ ಮಾಡಿಕೊಂಡ ” ಸುಮ್ಮನೆ ಹೀಗೆ ನಿನ್ನನೇ …:” ಎಂಬ ಅಮರ್ ಚಿತ್ರದ ಗೀತೆಯಾದರೂ ಅಷ್ಟೆ. ಅಷ್ಟು ಗಾಢ ಸಾಲುಗಳ ಗೀತೆಗೆ ಅಂಬರೀಶ್ ಪುತ್ರನಿಂದ ಕಲ್ಲುಬಂಡೆಯಂಥ ಅಭಿನಯ. ಇಡೀ ಹಾಡನ್ನು ಲಾಂಗ್ ಶಾಟ್ ಗಳಲ್ಲಿ ತೆಗೆದು ಪ್ರಕೃತಿ ಸೌಂದರ್ಯ ತೋರಿಸಿ ಮುಗಿಸಿದ್ದಾರೆ ನಾಗಶೇಖರ್. ಸಾಹಿತ್ಯಕ್ಕೆ ಸಂಗೀತ ಸಲ್ಲಿಸುವಷ್ಟು ನ್ಯಾಯವನ್ನು ದೃಶ್ಯರೂಪ ಸಲ್ಲಿಸಲು ಸಾಧ್ಯವಿಲ್ಲ. ಬೆಟರ್ ನಾವು ಹಾಡುಗಳನ್ನು ನಮ್ಮ ಇಮ್ಯಾಜಿನೇಷನ್ ಗೆ ತಕ್ಕಂತೆ ಕಣ್ಮುಚ್ಚಿಕೊಂಡು ಮನಸ್ಸಿನೊಳಗೇ ಚಿತ್ರಿಸಿಕೊಂಡುಬಿಡುವುದು.

ಬ್ಯಾಕ್ ಟು ಅಣ್ಣಯ್ಯ ಚಿತ್ರದ ಆ ಸಾಂಗ್ : ಇಷ್ಟು ವರ್ಷದಲ್ಲಿ ಈ ಹಾಡನ್ನು ಕಮ್ಮಿ ಅಂದ್ರೂ ಒಂದು ಸಾವಿರ ಸಲ ಕೇಳಿರುತ್ತೇನೆ. ಹಿಟ್ ಆಲ್ಪಮ್ ಆಗಿರುವ ಅದರ ಕಡಿಮೆ ಪಾಪ್ಯುಲರ್ ಗೀತೆ ಅದು.

“ಅ ಹಾಗೆ ಪ್ರೇಮಿ ಓಹೋ.. ಒ ಹೋಗೆ ಪ್ರೇಮಿ ಆಹಾ…”
ಈ ಹಾಡಿನ ಚಿತ್ರಣ ನಿಮ್ಮನ್ನು ಸಾಹಿತ್ಯ ಗಮನಿಸದಷ್ಟು ಸೆಳೆದುಕೊಳ್ಳುತ್ತದೆ ಕಾರಣ. ರವಿಚಂದ್ರನ್ ಮಧುಬಾಲಾ ಕೆಮಿಸ್ಟ್ರಿ! ಆದರೆ ಅದ್ಯಾಕೋ ಗೀತೆ ತುಂಬ ಅಟ್ರಾಕ್ಟಿವ್ ಅನಿಸಿರಲಿಲ್ಲ. ಕಮಾನು ಡಾರ್ಲಿಂಗ್, ಅಣ್ಣಯ್ಯ ಅಣ್ಣಯ್ಯ ಬಾರೋ, ರಾಗಿ ಹೊಲದಾಗೆ ಖಾಲಿ ಗುಡಿಸಲು ಈ ಗೀತೆಗಳು ಕೊಟ್ಟ ಕಿಕ್ …. ಈ ಅ ಹಾಗೆ ಪ್ರೇಮಿ ಓಹೋ… ಒ ಹೋಗೆ ಪ್ರೇಮಿ ಆಹಾ ಗೀತೆ ನೀಡಿರಲಿಲ್ಲ.

ಹೌದು ನಾನು ಈ ಹಾಡನ್ನು ಕೇಳಿಸಿಕೊಳ್ತಾ ಇದ್ದದ್ದೇ ಹೀಗೆ. ಮೊನ್ನೆಯ ತನಕವೂ…ಆದರೆ ಮೊನ್ನೆ ಯಾಕೋ ಮತ್ತೊಮ್ಮೆ ಕೇಳಿಸಿಕೊಂಡಾಗ.. ಅರೆ ಇಪ್ಪತ್ತೈದು ವರ್ಷ ತಪ್ಪಾಗಿ ತಿಳಿದುಕೊಂಡು ತಪ್ಪಾಗೇ ಹಾಡಿಕೊಂಡೆನಲ್ಲ ಅಂತ ಮೈತುಂಬ ಗಿಲ್ಟು

ಆ ಸಾಂಗ್ ಇರೋದು ಹೀಗೆ…

”ಆಹಾ’ಗೆ ಪ್ರೇಮಿ “ಓಹೋ”
” ಓಹೋ”ಗೆ ಪ್ರೇಮಿ ” ಆಹಾ”

ನನ್ನ ಹಾಗೆ ಅದೆಷ್ಟು ಜನ ಯಾಮಾರಿದ್ದೀರೋ ಗೊತ್ತಿಲ್ಲ. ಅಥವಾ ನಾನೊಬ್ನೇ ಹೀಗೆ ತಪ್ಪಾಗಿ ಕೇಳಿಸಿಕೊಂಡವ್ನೋ ಗೊತ್ತಿಲ್ಲ

ಈ ಗೀತೆಯ ವಿಶೇಷ ಏನಂದ್ರೆ ಹಂಸಲೇಖ. ಆಹಾ ಮತ್ತು ಓಹೋ ಎಂಬ ಎರಡು ಪದಗಳನ್ನೇ ಪ್ರೇಮಿಗಳನ್ನಾಗಿಸಿದ್ದಾರೆ

ಆಹಾಗೆ ಓಹೋ ಪ್ರೇಮಿ… ಓಹೋಗೆ ಆಹಾ ಪ್ರೇಮಿ!
ಅದು ಇಬ್ಬರು ಪ್ರ‍ೇಮಿಗಳ ಹೆಸರು!

ಈಗ ಈ ಹಾಡೊಮ್ಮೆ ಕೇಳಿನೋಡಿ…
ಅದು ಸೌಂಡಾಗೋದೇ ಬೇರೆ ಥರ!

ಅದ್ಯಾಕೆ ಆಹಾ ಓಹೋ ಎಂಬ ಪದಗಳು ಇಲ್ಲಿ ಪಾತ್ರಗಳಾದವು ಅಂತ ಸಿನಿಮಾ ತೆರೆದು ನೋಡಿದೆ. ಈ ಹಾಡು ಆರಂಭವಾಗುವ ಮುನ್ನ ಅಣ್ಣಯ್ಯ ಯಾವುದೋ ಫೈಟಿಂಗಲ್ಲಿ ಒದೆ ತಿಂದು ಬೆನ್ನಿಗೆ ಕಾಶಿ ಕೈಲಿ ಬಿಸಿ ಮಸಾಜ್ ಮಾಡಿಸಿಕೊಳ್ತಾ ಇರ್ತಾನೆ. ಅವನ ಇಮ್ಯಾಜಿನೇಷನಲ್ಲಿ ನಾಯಕಿ ಬಂದು ಕಾಶಿಯ ಬದಲು ಮಸಾಜ್ ಮಾಡ್ತಿರೋ ಹಾಗೆ ಒಂದು ಟ್ವಿಸ್ಟು.. ಇಮ್ಯಾಜಿನೇಷನಲ್ಲೇ ಅವಳೊಂದಿಗೆ ಮಾತಾಡ್ತಾ.. ಆಕೆ ಬಿಸಿ ಶಾಖ ಕೊಟ್ಟಾಗ ಒಮ್ಮೆ ನಾಯಕ ಆಹಾ ಅಂತಾನೆ.. ಇನ್ನೊಮ್ಮೆ ಓಹೋ ಎಂದು ಬಿಗಿಯುಸಿರು ಬಿಡುತ್ತಾನೆ. ಆಗ ಹುಟ್ಟುವ ಹಾಡಿದು. ಡ್ರೀಮ್ ಸಾಂಗ್ ನಲ್ಲಿ ಟೆಕ್ಸ್ಟ್ ಕೂಡ ಬರುತ್ತದೆ ಆಹಾ ಓಹೋ ಅಂತ!

ಸ್ಕ್ರಿಪ್ಟ್ ಜೊತೆ ದೃಶ್ಯರಚನೆ ಜೊತೆ ಗೀತ ಸಾಹಿತಿ ಕನೆಕ್ಟ್ ಆದಾಗ ಇಂಥ ಅದ್ಭುತಗಳು, ಮಜಗಳು, ಕ್ರಿಯೇಟಿವ್ ಐಡಿಯಾಗಳು ಹುಟ್ಟುತ್ತವೆ. ಹಂಸಲೇಖ ಎಲ್ಲೋ ಕೂತು ಹಾಡುಬರೆದುಕೊಟ್ಟು ಸಂಗೀತ ಮಾಡಿಕೊಡ್ತಿರಲಿಲ್ಲ. ಸಿನಿಮಾದೊಂದಿಗೆ ಪ್ರೀ ಪ್ರೊಡಕ್ಷನ್ನಿಂದ ರೀರೆಕಾರ್ಡಿನ ತನಕ ಜರ್ನಿ ಮಾಡ್ತಿದ್ರು ಅನ್ನೋದಕ್ಕೆ ಇದೊಂದು ಸಾಕ್ಷಿ. ಅವರಿಬ್ಬರ ಕಾಂಬಿನೇಷನ್ ಯಾಕೆ ಆ ಪರಿ ಕ್ಲಿಕ್ ಆಗುತ್ತಿತ್ತು ಅನ್ನೋದಕ್ಕೂ ಇದೊಂದು ಪುರಾವೆ. ( ಬರಹ : ನವೀನ್ ಸಾಗರ್ ; ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಉಸಿರು

Published

on

ಮೂಲ : ಜಲಾಲುದ್ದೀನ್ ರೂಮಿ, ಕನ್ನಡಕ್ಕೆ : ಡಾ.ಎಚ್.ಎಸ್.ಅನುಪಮಾ

ನಾ ಕ್ರೈಸ್ತನಲ್ಲ, ಯಹೂದಿ, ಮುಸಲ್ಮಾನ, ಹಿಂದುವೂ ಅಲ್ಲ ಬೌದ್ಧ, ಸೂಫಿ, ಝೆನ್ ಧರ್ಮದವನೂ ಅಲ್ಲ

ಪಂಥ ಪರಂಪರೆಯವನಲ್ಲ, ಮೂಡಲದವನಲ್ಲ ಪಡುವಣದವನಲ್ಲ, ಕಡಲೊಳಗಿನಿಂದೆದ್ದು ಬಂದವನಲ್ಲ

ನೆಲದಿಂದುದ್ಭವಿಸಲಿಲ್ಲ, ಸಹಜ ಸೃಷ್ಟಿಯಲ್ಲ, ದೈವಿಕವಲ್ಲ ಪಂಚಭೂತಗಳಿಂದಾದವನಲ್ಲ, ನಾ ಎಂಬುದೇ ಇಲ್ಲ

ಇಹದಲೂ ಪರದಲ್ಲೂ ನನ್ನ ಕುರುಹಿಲ್ಲ ಆಡಂ ಈವರ ವಂಶದ ಕುಡಿಯಲ್ಲ

ಯಾವ ವಂಶಾವಳಿಯೂ ನನಗಿಲ್ಲ, ನೆಲೆಯಿರದವ ಕಾಯವಲ್ಲ, ಆತ್ಮವೂ ಅಲ್ಲ, ನಿಶ್ಲೇಷದ ಶೇಷ

ನಾ ಪ್ರೇಮಿಯವ, ಲೋಕವೆರೆಡನೊಂದೇ ಆಗಿ ಕಂಡವ ಕರೆವುದು ಪ್ರೇಮ ನನ್ನ, ಅರಿತುಕೊಳುವುದು ತನ್ನ ತಾ..

ಮೊದಲ, ಕೊನೆಯ, ಹೊರ, ಒಳ
ಎಲ್ಲವೂ ಪ್ರೇಮ, ಪ್ರೇಮ, ಬರೀ ಪ್ರೇಮ
ಅದು ಪ್ರಾಣ, ಅದೇ ಉಸಿರು.

ಉಸಿರಾಡು ಮನುಜ.

(ಈ ಕವಿತೆಯನ್ನು ಲಡಾಯಿ ಪ್ರಕಾಶನ ಗದಗ ಇವರು ಪ್ರಕಟಿಸಿರುವ ‘ಉರಿಯ ಕುಡಿಯ ನಟ್ಟ ನಡುವೆ‘ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಜಲಾಲುದ್ದೀನ್ ರೂಮಿಯ ಕವಿತೆಗಳನ್ನು ಕನ್ನಡಕ್ಕೆ ಡಾ.ಎಚ್.ಎಸ್. ಅನುಪಮ ಅವರು ಅನುವಾದಿಸಿರುವ ಕೃತಿ ಇದಾಗಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಆತ್ಮಕತೆ | ತುರ್ತು ಪರಿಸ್ಥಿತಿ ಮತ್ತು ನಮ್ಮೂರಿನ ಭೂ ಹೋರಾಟ

Published

on

  • ರುದ್ರಪ್ಪ ಹನಗವಾಡಿ

ದೇಶದಾದ್ಯಂತ ತುರ್ತುಪರಿಸ್ಥಿತಿ ಇತ್ತು. ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನಗಳು ನಿಗದಿಯಂತೆ ನಡೆಯುತ್ತಿದ್ದವು. ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾಂಗ್ರೆಸ್ ವಿರೋಧಿ ರಾಜಕೀಯ ನಾಯಕರನ್ನು ಬಂಧಿಸಿ ಜೈಲಿನಲ್ಲಿರಿಸಿದ್ದರು. ಇಂದಿರಾ ಗಾಂಧಿಯವರ 20 ಅಂಶದ ಕಾರ್ಯಕ್ರಮಗಳು ವಿಶೇಷವಾಗಿ ದಲಿತ ಹಿಂದುಳಿದವರ ಪರವಾಗಿದ್ದುದನ್ನು ಮುಖ್ಯಮಂತ್ರಿ ದೇವರಾಜ ಅರಸು ಅವರು ಒತ್ತಿ ಹೇಳುತ್ತಿದ್ದರು ಮತ್ತು ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಂಡು ರಾಜ್ಯಾಡಳಿತವನ್ನು ನಡೆಸುತ್ತಿದ್ದರು.

ದೇವರಾಜ ಅರಸು ಅವರು ಕರ್ನಾಟಕದಲ್ಲಿ ಹಿಂದೆಂದೂ ನೀಡಿರದಿದ್ದ ವಿಶೇಷ ಸವಲತ್ತುಗಳನ್ನು ದಲಿತರು, ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ನೀಡುತ್ತಿದ್ದರು. ಹಾಗೆ ಹೇಳುತ್ತಲೂ ಇದ್ದರು. ಅದು ನಿಜವೂ ಆಗಿತ್ತು. ಆದರೆ ನಾವೆಲ್ಲ ತುರ್ತುಪರಿಸ್ಥಿತಿಯ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೆವು.

ನಮ್ಮ ಊರಿನಲ್ಲಿ ವೀರಭದ್ರ ದೇವರ ಚಾಕರಿ (ಮ್ಯಾಳ) ಮಾಡುತ್ತಿದ್ದ ಕಾರಣ ಹದಿನೇಳು ಎಕರೆ ವೀರಭದ್ರ ದೇವರ ಹೆಸರಿನಲ್ಲಿದ್ದುದನ್ನು ನಮ್ಮ ಎಲ್ಲ ಆರು ಕುಟುಂಬಗಳಿಗೆ ಊರಿನ ಪ್ರಮುಖರು ನಾವಿನ್ನು ಹುಟ್ಟುವ ಮುಂಚೆಯೇ ಹಂಚಿ ಕೊಟ್ಟಿದ್ದರು. ಅದರಲ್ಲಿ ಅಪ್ಪನಿಗೆ ಸುಮಾರು ನಾಲ್ಕು ಎಕರೆಯಷ್ಟನ್ನು ನೀಡಿದ್ದು ಸಾಗುವಳಿ ಮಾಡಿಕೊಂಡು ಬರುತ್ತಿದ್ದೆವು. ಈ ನಡುವೆ ಭೂಸುಧಾರಣಾ ಕಾನೂನು ಜಾರಿ ಮಾಡುವ ಬಗ್ಗೆ ಅರಸು ಸರ್ಕಾರ ವಿಶೇಷವಾಗಿ ಭೂನ್ಯಾಯ ಮಂಡಳಿಯನ್ನು ರಚಿಸಿತ್ತು. ಇದನ್ನರಿತ ನಮ್ಮವರೆಲ್ಲ ಸೇರಿ ನಮ್ಮ ಅಣ್ಣ ತಿಪ್ಪಣ್ಣನ ಪ್ರಯತ್ನದಿಂದ ಸರ್ಕಾರ ರಚಿಸಿದ್ದ ಭೂನ್ಯಾಯ ಮಂಡಳಿಯ ಮುಂದೆ ಎಲ್ಲ ಆರು ಜನರೂ ತಮಗೆ ಭೂಮಿಯ ಹಕ್ಕು ನೀಡಲು ನಮೂನೆ 7ರ ಅರ್ಜಿ ಸಲ್ಲಿಸಿದ್ದರು.

ಭೂನ್ಯಾಯ ಮಂಡಳಿಯ ಮುಂದೆ ಅರ್ಜಿ ಹಾಕಿದ ವಿಷಯ ಊರಲ್ಲಿ ದೊಡ್ಡ ಅಸಮಾಧಾನದ ಕಿಚ್ಚನ್ನು ಮೂಡಿಸಿತ್ತು. ಈ ನಡುವೆ ನಮಗಾಗಿ ಕೊಟ್ಟಿದ್ದ 17 ಎಕರೆಯಲ್ಲಿ ಮಧ್ಯ ಭಾಗದಲ್ಲಿ 4 ಎಕರೆಯನ್ನು ಕಬಳಿಸುವಷ್ಟು ರಾಷ್ಟ್ರೀಯ ಹೆದ್ದಾರಿಯು ದಾವಣಗೆರೆಯಿಂದ ಹುಬ್ಬಳ್ಳಿವರೆಗೆ ಬೈಪಾಸ್ ರಸ್ತೆಗಾಗಿ ಸರ್ಕಾರ ವಶಪಡಿಸಿಕೊಂಡಿತ್ತು. ಸರ್ಕಾರದಿಂದ ನೀಡಿದ ನಾಲ್ಕು ಎಕರೆ ಪರಿಹಾರದ ಹಣವನ್ನು ಕೂಡ ದೇವಸ್ಥಾನದವರೇ ತೆಗೆದುಕೊಂಡಿದ್ದರು. ಉಳಿದಿದ್ದ 13 ಎಕರೆಯಲ್ಲಿ ಮತ್ತೆ ಪುನಃ ಮರು ಹಂಚಿಕೆ ಮಾಡಿಕೊಂಡು ಆರು ಜನರು ಸುಮಾರು ಎರಡೆರಡು ಎಕರೆಗಳಷ್ಟು ಸಾಗುವಳಿ ಮಾಡುತ್ತಿದ್ದರು.
ದೇವಸ್ಥಾನ ಧರ್ಮದರ್ಶಿ ಕಮಿಟಿಯಲ್ಲಿ ಊರಿನ ಹಿರಿಯರಿದ್ದರೂ ಉಳಿದಿರುವ ಭೂಮಿಯನ್ನು ನಮ್ಮವರಿಂದ ಬಿಡಿಸುವುದು ಮತ್ತು ಪ್ರತಿ ಮಂಗಳವಾರ ಗುಡಿಯಲ್ಲಿ ಮಾಡುತ್ತಿರುವ ಮ್ಯಾಳಗಳನ್ನು ನಿಲ್ಲಿಸಬೇಕೆಂದು ಚರ್ಚೆ ಆಗ ಊರಲ್ಲಿ ನಡೆಯುತ್ತಿತ್ತು. ಅವರೆಲ್ಲರ ಚರ್ಚೆಗಳ ಮಧ್ಯೆ ಮ್ಯಾಳದವರು ನಿಲ್ಲಿಸದೆ ಪ್ರತಿ ಮಂಗಳವಾರ ತಪ್ಪಿಸದೆ ಗುಡಿಗೆ ಹೋಗಿ ಎಂದಿನಂತೆ ಮ್ಯಾಳ ಮಾಡಿ ಬರುತ್ತಿದ್ದರು.

ನಮ್ಮೂರ ಚಲುವಾದಿಗಳಿಗೆ ಈ ರೀತಿಯ ಧೈರ್ಯವಿರಲಿಲ್ಲ. ಇವೆಲ್ಲದರ ಹಿಂದಿನ ಯೋಜಕ ಮೈಸೂರಲ್ಲಿ ಓದುತ್ತಿರುವ ಹುಡುಗ ನಾನೇ ಎಂದು ಊರವರು ಮಾತಾಡಿಕೊಂಡರು. ಅವನು ಊರಿಗೆ ಯಾವ ದಾರಿಯಲ್ಲಿ ಬರುತ್ತಾನೋ ಕಾದು ಕುಳಿತು ಕಾಲು ಮುರಿಯಬೇಕೆಂಬ ಯೋಜನೆ ಕೂಡ ಹಾಕಿಕೊಂಡಿದ್ದರಂತೆ. ಆದರೆ ಏಕಾಂಗಿಯಾಗಿ ಓಡಾಡುತ್ತಿದ್ದ ನನಗೆ ಒಳಗೊಳಗೆ ಅಳುಕು ಇದ್ದರೂ ನಾನೇನು ತಪ್ಪು ಮಾಡುತ್ತಿಲ್ಲ ಎಂಬ ತಿಳುವಳಿಕೆ ಧರ‍್ಯ ನೀಡುತ್ತಿತ್ತು. ಆದರೆ ಊರಿಗೆ ಬಂದು ಹೊರಗೆ ಓಡಾಡುತ್ತಿದ್ದರೆ ನಮ್ಮವರೆಲ್ಲ ದೂರದಲ್ಲಿದ್ದುಕೊಂಡೇ ನನ್ನನ್ನು ಊರಲ್ಲಿರುವ ತನಕ ವಿಶೇಷವಾಗಿ ಕವರ್ ಮಾಡುತ್ತಿದ್ದರು.

ಇದಕ್ಕೂ ಮುಂಚೆ ನಾನಿನ್ನು ಬಿ.ಎ.ನಲ್ಲಿ ಓದುತ್ತಿರುವಾಗ ಸರ್ಕಾರದ ವತಿಯಿಂದ ನಮ್ಮ ಮನೆಯ ಹತ್ತಿರದಲ್ಲೇ ಸಾರ್ವಜನಿಕರಿಗಾಗಿ ಕುಡಿಯಲು ಒಂದು ತೆರೆದ ಬಾವಿಯನ್ನು ತೆಗೆದಿದ್ದರು. ಊರಲ್ಲಿದ್ದ ಎರಡು ಬಾವಿಗಳಿಂದ ನೀರು ಸೇದುತ್ತಿದ್ದ ಮೇಲ್ಜಾತಿಗಳ ಜನರಿಂದ ನಮ್ಮವರೆಲ್ಲ ಹೊಯ್ ನೀರು ತರುತ್ತಿದ್ದರು. ಅಂದರೆ ಮೇಲ್ಜಾತಿಯವರಿಂದ ನೀರು ಸೇದಿ ಇವರ ಕೊಡಗಳಿಗೆ ನೀರು ಹಾಕಬೇಕು, ಆಗ ಇವರ ಮನೆಗಳಿಗೆ ತೆಗೆದುಕೊಳ್ಳಬೇಕು. 1936ರಲ್ಲಿ ಸರ್ಕಾರ ನಮಗೊಂದು ರಂಗಜ್ಜನ ಮಠದ ಹತ್ತಿರ ಬಾವಿ ತೆಗೆಸಿತ್ತು. ಅದು ನಮ್ಮ ಮನೆಗಳಿಗೆ ಅರ್ಧ ಕಿಲೋಮೀಟರ್ ದೂರದಲ್ಲಿತ್ತು. ಆದರೆ ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ.

ಮನೆಯ ಹತ್ತಿರವಿರುವ ಬಾವಿಯನ್ನು ವಿಧ್ಯುಕ್ತವಾಗಿ ಉದ್ಘಾಟಿಸುವ ಮುನ್ನ ನಾನು ನಮ್ಮಲ್ಲಿದ್ದ ಹಸುವಿನ ಜೊತೆ ಆ ಹೊಸ ಬಾವಿಯಿಂದ ನೀರು ಸೇದಿ ಅದಕ್ಕೆ ಕುಡಿಸಿ ನಾನು ಅಲ್ಲೇ ಸ್ನಾನ ಮಾಡಿಕೊಂಡು ಬರುತ್ತಿದ್ದೆ. ನಾನಿರುವಾಗ ಯಾರೂ ಮಾತಾಡದೆ ಇದ್ದವರು, ನಾನು ಮೈಸೂರಿಗೆ ವಾಪಸ್ ಓದಲು ಹೋದಾಕ್ಷಣ ಮಾರನೆ ದಿನ ನಮ್ಮ ಮನೆಯ ಹೆಣ್ಣು ಮಕ್ಕಳು ನೀರಿಗೆ ಹೋದಾಗ ಹಗ್ಗ ಕೊಡಪಾನಗಳನ್ನು ಕಿತ್ತು ಬಿಸಾಕಿ ನೀರು ಸೇದಲು ಬಿಟ್ಟಿರಲಿಲ್ಲ. ಆಗಿನ್ನು ಅಪ್ಪ ಇದ್ದ. ‘ನೀನು ಊರ ಉಸಾಬರಿಗೆ ಬರಬೇಡ ನಿನ್ನ ಓದು ನೀನು ಮಾಡಿಕೊಂಡು ಸುಮ್ಮನಿರು’ ಎಂದು ಪತ್ರ ಬರೆಸಿ ಸಮಾಧಾನ ಹೇಳಿದ್ದ. ಆದರೂ ನಾನು ಆಗಿರುವ ಅವಮಾನದ ಬಗ್ಗೆ ಚಿಂತಿಸುತ್ತಿದ್ದಾಗ ಒಂದು ದಿನ ಮೈಸೂರಿಗೆ ಬಂದಿದ್ದ ಕಂದಾಯ ಮಂತ್ರಿಗಳಾಗಿದ್ದ ಬಸವಲಿಂಗಪ್ಪನವರ ಹತ್ತಿರ ಹೋಗಿ, ನಮ್ಮೂರಲ್ಲಿ ಸಾರ್ವಜನಿಕ ಬಾವಿಯಿಂದ ನೀರು ಸೇದಲು ಲಿಂಗಾಯತರು ತೊಂದರೆ ಕೊಡುತ್ತಿರುವ ಬಗ್ಗೆ ಹೇಳಿದೆ.

ಅವರು ಅದನ್ನು ಮನಸ್ಸಿನಲ್ಲಿಕೊಂಡು ಬೆಂಗಳೂರಿಗೆ ವಾಪಸಾಗಿದ್ದರು. ನಮ್ಮೂರ ಛರ‍್ಮನ್ ಬಸಪ್ಪನವರು ಮತ್ತು ನಮ್ಮ ಹರಿಹರದವರೇ ಬಿ. ಬಸವಲಿಂಗಪ್ಪನವರು ಮೊದಲಿಂದಲೂ ಬಳಕೆಯಲ್ಲಿದ್ದವರಾಗಿದ್ದರು. ಛರ‍್ಮನ್ ಬಸಪ್ಪನವರು ಇನ್ನು ನಮ್ಮ ಊರಿನವರೊಡನೆ ಬೆಂಗಳೂರಲ್ಲಿ ತಮ್ಮ ಯಾವುದೋ ಕೆಲಸಕ್ಕೆ ಭೇಟಿ ಮಾಡಿದಾಗ ನಾನು ಹೇಳಿದ ವಿಷಯವನ್ನು ಪ್ರಸ್ತಾಪಿಸಿ, ‘ನೀವೇನು ಹೆಂಡ ಕುಡಿಯೋದಿಲ್ಲವಾ? ಮಾಂಸ ತಿನ್ನೋದಿಲ್ವಾ’ ಎಂದೆಲ್ಲಾ ಕೇಳಿ ‘ಬಸವಣ್ಣ ಏನು ಹೇಳಿದ್ದಾನೆ ಗೊತ್ತಾ? ಅದನ್ನ ಪಾಲಿಸೋದು ಬಿಟ್ಟು, ಸರ್ಕಾರ ಕಟ್ಟಿಸಿದ ಬಾವಿಯ ನೀರು ಸೇದಲು ಅಡ್ಡಿಪಡಿಸಬಾರದೆಂದು ಗರ್ಜನೆ ಹಾಕಿ ತಾಕೀತು ಮಾಡಿ ಕಳಿಸಿದ್ದರು.

ನಮ್ಮೂರ ಛರ‍್ಮನ್ ಬಸಪ್ಪನವರು ಬಹಳ ದಿನಗಳ ಕಾಲ ನಮ್ಮೂರ ಛರ‍್ಮನ್‌ರಾಗಿ ಎಲ್ಲರ ಜೊತೆ ಒಳ್ಳೆಯ ಸಂಬಂಧವಿಟ್ಟುಕೊಂಡಿದ್ದರು. ಆದರೆ ಊರ ಸಮಷ್ಟಿಯ ಸಮಸ್ಯೆಗಳು ಬಂದಾಗ ಧೈರ್ಯವಾಗಿ ಒಬ್ಬರೇ ತೀರ್ಮಾನ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಆದರೆ ಬೆಂಗಳೂರಿನಿಂದ ಬಂದವರೇ ಯಾರು ನಿಮಗೆ ನೀರು ತರಲು ಅಡ್ಡಿಪಡಿಸಿದವರು ಎಂದು ಹೇಳಿ ಅವರೇ ನಮ್ಮ ಕೇರಿಗೆ ಬಂದು ನಮ್ಮವರನ್ನೇ ನೀರು ಸೇದಿಕೊಳ್ಳಲು ಹೇಳಿದ್ದರು. ಊರಲ್ಲಿ ವಿರೋಧಿಸಿದವರಿಗೆ ಸರ್ಕಾರದಿಂದ ಆದೇಶವಾಗಿದೆ ಎಂದೆಲ್ಲ ಹೇಳಿ ಬಾಯಿ ಮುಚ್ಚಿಸಿದ್ದರು. ಛರ‍್ಮನ್ ಬಸಪ್ಪನವರು ಸುಮಾರು 20 ವರ್ಷಗಳ ಕಾಲ ಛರ‍್ಮನ್‌ರಾಗಿದ್ದರು. ಯಾರಿಗೂ ಕೇಡು ಬಯಸುವ ವ್ಯಕ್ತಿಯಾಗಿರಲಿಲ್ಲ. ಇದೇ ಸಮಸ್ಯೆ ಬೇರೆಯವರ ಕೈಗೆ ಬಿದ್ದಿದ್ದರೆ, ಏನೆಲ್ಲಾ ಅನಾಹುತ ಮಾಡುತ್ತಿದ್ದರೋ ಊಹಿಸಲೂ ಅಸಾಧ್ಯ.

ಈ ಹಿನ್ನೆಲೆಯಲ್ಲಿ ಈಗ ಊರ ಮಟ್ಟದಲ್ಲಿ ಮತ್ತೊಂದು ಮಹತ್ತರವಾದ ಸಮಸ್ಯೆಯಾಗಿ ಎದ್ದು ಕೂತಿತ್ತು. ಅದು ಭೂ ನ್ಯಾಯ ಮಂಡಳಿಗೆ ಅರ್ಜಿ ಫಾರಂ ಹಾಕಿದ್ದು. ಹರಿಹರದಲ್ಲಿ ನಡೆಸುತ್ತಿದ್ದ ಭೂನ್ಯಾಯ ಮಂಡಳಿಯ ಮುಂದೆ ಹಾಜರಾಗಬೇಕು. ನಮ್ಮವರೆಲ್ಲ ದೇವಸ್ಥಾನದ ಧರ್ಮದರ್ಶಿಗಳ ಜೊತೆಗೆ ಮಾತಾಡಿಕೊಂಡು ಅವರು ತರುತ್ತಿದ್ದ ಟ್ರಾಕ್ಟರ್‌ನಲ್ಲಿ ಕೂತು ಹೋಗುತ್ತಿದ್ದರು. ನಮ್ಮ ಅಣ್ಣ ತಿಪ್ಪಣ್ಣ ಮಾತ್ರ ಅವರ ಜೊತೆಗೆ ಹೋಗುತ್ತಿರಲಿಲ್ಲ. ಅವರ ಜೊತೆ ಇರುವಾಗ, ನೀವು ಹೇಳಿದ ಹಾಗೆ ಸಾಕ್ಷಿ ಹೇಳುತ್ತೇವೆಂದು ಅವರ ಹತ್ತಿರವೇ ಬೀಡಿ ಕೇಳಿ ಸೇದಿಕೊಳ್ಳುತ್ತಿದ್ದರು. `ಇದೆಲ್ಲ ನಮ್ಮ ಹುಡುಗನ ಕೆಲಸ, ನಮಗ್ಯಾಕಣ್ಣ ದೇವರ ಜಮೀನು’ ಎಂದೆಲ್ಲ ಅವರ ಜೊತೆಯೇ ತಾಳ ಹಾಕುತ್ತ ಇದ್ದರು. ನಾನು ಊರಿಗೆ ಹೋದಾಗ ಯಾವಾಗ ತೀರ್ಮಾನಿಸಲಾಗುತ್ತದೆ ಎಂದು ಬಂದು ಗುಟ್ಟಾಗಿ ನನ್ನ ಬಳಿ ಕೇಳುತ್ತಿದ್ದರು. ನಮ್ಮವರೆಲ್ಲರ ಅದೃಷ್ಟವೋ ಎನ್ನುವಂತೆ ನನಗೆ 1969-1972ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಕೆ.ಎಂ. ಶಂಕರಲಿಂಗೇಗೌಡರನ್ನು ದಾವಣಗೆರೆ ಭೂನ್ಯಾಯ ಮಂಡಳಿಯ ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿತ್ತು. ನಾನು ನಮ್ಮ ಊರಿನ ಸ್ಥಿತಿಯನ್ನೆಲ್ಲ್ಲ ಅವರಿಗೆ ವಿವರಿಸಿ, ನಮಗೆ ಆದಷ್ಟು ಬೇಗ ಇತ್ಯರ್ಥಗೊಳಿಸಿಕೊಡಬೇಕೆಂದು ಅವರಲ್ಲಿ ವಿನಂತಿಸಿದೆ. ನಾನು ಹೋಗಿ ವಿನಂತಿಸಿದ 3-4 ತಿಂಗಳಲ್ಲಿ ನಮ್ಮವರೆಲ್ಲರ ಹೆಸರಿಗೆ ಭೂನ್ಯಾಯ ಮಂಡಳಿಯಲ್ಲಿ 1976ರ ವರ್ಷದ ಮಧ್ಯ ಭಾಗದಲ್ಲಿ ಭೂನ್ಯಾಯ ಮಂಡಳಿಯಿಂದ ತೀರ್ಮಾನಿಸಲಾಗಿತ್ತು.

ಆ ಸಂದರ್ಭದಲ್ಲಿ ಹೆಚ್. ಶಿವಪ್ಪನವರು ಹರಿಹರ ತಾಲ್ಲೂಕು ಶಾಸಕರು ಮತ್ತು ಭೂನ್ಯಾಯ ಮಂಡಳಿಯ ಸದಸ್ಯರಾಗಿದ್ದರು. ಅವರು ನಮಗೆಲ್ಲ ಜಮೀನು ನೋಂದಾಯಿಸುವ ಪ್ರಕರಣದಲ್ಲಿ ವಿರೋಧಿಸದೆ ಸಹಕಾರ ನೀಡಿದ್ದನ್ನು ನಾನು ನೆನಪಿಸಿಕೊಳ್ಳಬೇಕು. ಆದೇಶ ನೀಡುವ ಸಮಯದಲ್ಲಿ ದೇವಸ್ಥಾನದ ಧರ್ಮದರ್ಶಿಗಳು, ಭೂನ್ಯಾಯ ಮಂಡಳಿಯ ಅಧ್ಯಕ್ಷರ ಎದುರೇ ‘ಊರಿಗೆ ರ‍್ರಲೇ ನೋಡಿಕೊಳ್ಳುತ್ತೇವೆ’ ಎನ್ನೋ ಧಮ್ಕಿ ಹಾಕಿದಾಗ, ಅಧ್ಯಕ್ಷರು ‘ನಿಮ್ಮನ್ನೆಲ್ಲ ಪೊಲೀಸ್ ಕರೆಸಿ ಈಗಲೇ ಜೈಲಿಗೆ ಕಳಿಸುತ್ತೇನೆಂದು ಹೇಳಿ ಎಚ್ಚರಿಕೆ ನೀಡಿದರೆಂದು ನಮ್ಮವರೆಲ್ಲ ನನ್ನ ಬಳಿ ಸಂತೋಷದಿಂದ ಎಲ್ಲ ಮುಗಿದ ಮೇಲೆ ಹೇಳಿಕೊಂಡಿದ್ದರು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ಕ್ರೀಡೆ23 hours ago

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ...

ದಿನದ ಸುದ್ದಿ24 hours ago

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ...

ದಿನದ ಸುದ್ದಿ24 hours ago

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ....

ದಿನದ ಸುದ್ದಿ1 day ago

HEAVY RAIN | ಮೂರು ದಿನ ಭಾರೀ ಮಳೆ ; ಆರೆಂಜ್ ಅಲರ್ಟ್ ಘೋಷಣೆ

ಸುದ್ದಿದಿನಡೆಸ್ಕ್:ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ವ್ಯಾಪಕ ಮಳೆಯಾಗಲಿದೆ ಎಂದು ಆರೆಂಜ್ ಅಲರ್ಟ್ ಹವಾಮಾನ ಇಲಾಖೆ ಘೋಷಿಸಿದೆ. ಇಂದು ಮತ್ತು ನಾಳೆ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ,...

ದಿನದ ಸುದ್ದಿ1 day ago

ಇಂದು – ನಾಳೆ ಹಾವೇರಿ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿದಿನಡೆಸ್ಕ್:ಇಂದು ಮತ್ತು ನಾಳೆ, ಹಾವೇರಿ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉತ್ತರಕಡ ಜಿಲ್ಲೆಯ ಶಾಲೆ ಹಾಗೂ ಪದವಿ ಪೂರ್ವ, ಐಟಿಐ ಮತ್ತು...

ದಿನದ ಸುದ್ದಿ1 day ago

ಯುವಕರಿಗೆ ಶಿಕ್ಷಣ, ಕೌಶಲ್ಯ ಹೆಚ್ಚಿಸುವ ‘ಮಾದರಿ ಕೌಶಲ್ಯ ಸಾಲ ಯೋಜನೆ’ಗೆ ಚಾಲನೆ

ಸುದ್ದಿದಿನಡೆಸ್ಕ್:ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ನವದೆಹಲಿಯಲ್ಲಿ ನಿನ್ನೆ ‘ಮಾದರಿ ಕೌಶಲ್ಯ ಸಾಲ ಯೋಜನೆ’ಗೆ ಚಾಲನೆ ನೀಡಿದರು. ಸಮಾರಂಭ ಉದ್ದೇಶಿಸಿ ಮಾತನಾಡಿದ...

ದಿನದ ಸುದ್ದಿ1 day ago

ಇಂದು ಕಾರ್ಗಿಲ್ ವಿಜಯ ದಿವಸ್ ; ಯೋಧರ ಸ್ಮರಣೆ

ಸುದ್ದಿದಿನಡೆಸ್ಕ್:ಇಂದು ಕಾರ್ಗಿಲ್ ವಿಜಯ್ ದಿವಸ್. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ...

ದಿನದ ಸುದ್ದಿ2 days ago

ದಾವಣಗೆರೆ | ನಾಳೆ ಎಲ್ಲೆಲ್ಲಿ ಕರೆಂಟ್ ಕಟ್..

ಸುದ್ದಿದಿನ,ದಾವಣಗೆರೆ:ಜಲಸಿರಿ ಕಾಮಗಾರಿ ಪ್ರಯುಕ್ತ ಜುಲೈ 26 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಎಫ್.15 ರಂಗನಾಥ ಫೀಡರ್ ವ್ಯಾಪ್ತಿಯ ವಿದ್ಯಾನಗರ ಕೊನೆ ಬಸ್ ನಿಲ್ದಾಣದಿಂದ...

ದಿನದ ಸುದ್ದಿ2 days ago

ದಾವಣಗೆರೆ | ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕ ಅದಾಲತ್

ಸುದ್ದಿದಿನ,ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕ್...

ದಿನದ ಸುದ್ದಿ2 days ago

ದಾವಣಗೆರೆ ಜಿಲ್ಲೆಯಲ್ಲಿ ವಾಡಿಕೆಗಿಂತ ಈ ಬಾರಿ ಹೆಚ್ಚು ಮಳೆ

ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರಿನಲ್ಲಿ ವಾಡಿಕೆಗಿಂತ 41 ಮಿ.ಮೀ ಹೆಚ್ಚು ಮಳೆಯಾಗಿದೆ. 2024 ರ ಜನವರಿಯಿಂದ ಜುಲೈ 23 ರ ವರೆಗಿನ...

Trending