Connect with us

ಲೈಫ್ ಸ್ಟೈಲ್

ಮದುವೆ ಎಂದರೆ ಹೆಣ್ಣು-ಗಂಡಿನ ದೈಹಿಕ ಸುಖವಲ್ಲ ಅದು ಕುಟುಂಬ ಕುಟುಂಬಗಳ ಮನಸ್ಸಿನ ಸಂಬಂಧ

Published

on

  • ಶಿವಾನಂದ ಕಲಬುರಗಿ

ರಸ ಜನನ ವಿರಸ ಮರಣ ಸಮರಸವೇ ಜೀವನ ಬೇಂದ್ರೆಯವರ ದಿವ್ಯ ವಾಣಿಯಂತೆ ಬದುಕಬೇಕೆಂದರೆ ಮನೆಯೇ ಮೊದಲ ಪಾಠಶಾಲೆ ಆಗಬೇಕು. ತಾಯಿಯೇ ಮೊದಲ ಗುರು ಆಗಬೇಕಾಗಿದೆ. ನೂಲಿನಂತೆ ಸೀರೆ ತಾಯಿಯಂತೆ ಮಗಳು ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಸುಳ್ಳಿಗೆ ಸುಖವಿಲ್ಲ ಸತ್ಯಕ್ಕೆ ಸಾವಿಲ್ಲ.

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಸು. ಎಂಬ ಗಾದೆ ಮಾತಿನಂತೆ ಮದುವೆ ಎಂಬುದು ಗಂಡು ಹೆಣ್ಣಿನ ದೈಹಿಕ ಸುಖವಲ್ಲ ಕುಟುಂಬ ಕುಟುಂಬಗಳ ನಡುವಿನ ಮನಸ್ಸಿನ ಸಂಬಂಧ. ಮದುವೆ ಏಳೇಳು ಜನ್ಮದ ಅನುಬಂಧ ಹೆಣ್ಣಿಗೊಂದು ಗಂಡು ಗಂಡಿಗೊಂದು ಹೆಣ್ಣು ಪ್ರಪಂಚದ ಸೃಷ್ಟಿಯಲ್ಲಿ ಇದ್ದೇ ಇರುತ್ತದೆ. ಬಡವರ ಮನೆಯ ಹೆಣ್ಣು ತಂದುಕೊಳ್ಳಬೇಕು ಶ್ರೀಮಂತರ ಮನೆಗೆ ಹೆಣ್ಣು ಕೊಡಬೇಕು. ಇದು ಲೋಕ ರೂಢಿಯ ಸಿದ್ಧಾಂತ.

ಋಣಾನುಬಂಧದ ಸಂಬಂಧ ಕೂಡಿಬಂದಾಗ ಮದುವೆಯೆಂಬ ಶುಭಕಾರ್ಯ ನೆರವೇರುತ್ತದೆ. ಮದುವೆಯಾದ ನವದಂಪತಿಗಳು ಪರಸ್ಪರ ಸ್ನೇಹಭಾವದಿಂದ ಅರಿತು ಬಾಳಬೇಕು. ಯಾರು ಹೆಚ್ಚಲ್ಲ ಯಾರು ಕಡಿಮೆಯೂ ಅಲ್ಲ ಗಂಡನಾದವನು ತನ್ನ ಹೆಂಡತಿಯಲ್ಲಿ ತನ್ನ ಸೋದರಿಯರ ಪ್ರೀತಿ ಕಾಣಬೇಕು. ಹೆಂಡತಿಯಾದವಳು ತನ್ನ ಗಂಡನಲ್ಲಿ ಸಹೋದರನ ಪ್ರೀತಿ ಕಾಣಬೇಕು. ಸೊಸೆಯಾದವಳು ತನ್ನ ಅತ್ತೆಯಲ್ಲಿ ತನ್ನ ತಾಯಿಯ ಪ್ರೀತಿ ಕಾಣಬೇಕು. ಅತ್ತೆಯಾದವಳು ತನ್ನ ಸೊಸೆಯಲ್ಲಿ ತನ್ನ ಮಗಳ ಪ್ರೀತಿ ಕಾಣಬೇಕು. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ. ಕಾಲಾಯ ತಸ್ಮೈ ನಮಃ ಎಂಬ ಮಾತಿನೊಂದಿಗೆ ಅರ್ಥಪೂರ್ಣವಾಗಿ ಬಾಳಬೇಕು.

ಗಂಡ-ಹೆಂಡತಿ ಇಬ್ಬರೂ ಒಂದು ನಾಣ್ಯದ ಎರಡು ಮುಖಗಳಂತೆ. ಎರಡರಲ್ಲಿ ಒಂದು ಇಲ್ಲದಿದ್ದರೂ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಹೆಣ್ಣು ಜಗದ ಕಣ್ಣು ಎಂದು ಬಿಂಬಿಸಲಾಗುತ್ತದೆ. ನಿಸರ್ಗದ ಶಕ್ತಿಯ ಜೊತೆಗೆ ಹೆಣ್ಣನ್ನು ಹೋಲಿಸುತ್ತೇವೆ. ಜನನ ಮತ್ತು ಮರಣಕ್ಕೂ ನಿಸರ್ಗವೇ ಹೇಗೆ ಕಾರಣವೋ ಹಾಗೆಯೇ ಹೆಣ್ಣು ಕೂಡ ಜನನ ಮರಣದ ನಡುವಿನ ವಿಸ್ಮಯ ಶಕ್ತಿ.

ಹೆಣ್ಣು ವಂಶವನ್ನು ಉದ್ಧಾರ ಮಾಡುವವಳು ಮನೆ ಬೆಳಗುವವಳು ಮನೆಯ ಮಹಾಲಕ್ಷ್ಮಿ ಸೌಭಾಗ್ಯವತಿ ಸುಕಾಂತೆ ಸಕಲ ಸಂಪನ್ನದಾತೆ ಮನೆ ಬೆಳಗುವ ನಂದದೀಪ ಎಂದು ಹೀಗೆ ನಾನಾ ರೀತಿಯಲ್ಲಿ ಅವಳನ್ನು ನಾಮಪದಿಂದ ಗುಣವಾಚಕವಾಗಿ ಪರಿವರ್ತಿಸಿ ಗೌರವಿಸಲಾಗಿದೆ. ಆದರೆ ಈ ಮೇಲಿನ ಎಲ್ಲಾ ಗುಣಗಾನವು ಎಲ್ಲಾ ಹೆಣ್ಣಿನಲ್ಲಿ ಸಾಧಾರಣವಾಗಿ ಕಂಡುಕೊಳ್ಳಲು ಕಷ್ಟಸಾಧ್ಯ. ಸಮಾಜದಲ್ಲಿನ ಬಹುತೇಕ ಸಂಸಾರಗಳಲ್ಲಿ ಗಂಡು-ಹೆಣ್ಣಿನ ಮಧ್ಯೆ ಹೊಂದಾಣಿಕೆ ಇಲ್ಲದೆ ಪವಿತ್ರವಾದ ಮದುವೆಯೆಂಬ ಸಂಬಂಧ ಕ್ಷಣಾರ್ಧದಲ್ಲಿ
ಕಡ್ಡಿ ಮುರಿದಂತೆ ಮುರಿದು ಬೀಳುತ್ತವೆ.

ಇದಕ್ಕೆಲ್ಲ ಕಾರಣ ಗಂಡ-ಹೆಂಡತಿಯರ ಮಧ್ಯ ಹೊಂದಾಣಿಕೆಯ ಎಂಬ ಆತ್ಮವಿಶ್ವಾಸ ಕೊರತೆಯಿಂದ. ನಾವು ಬಳಸುವ ಭಾಷೆ ಇತರರ ಹೃದಯವನ್ನು ಕಲಕಬೇಕು. ಮಾತು ಮೃತ್ಯುವಾಗದೆ ಮೃದುವಾಗಿ ಮನಸ್ಸಿಗೆ ನೆಮ್ಮದಿಯನ್ನು ನೀಡುವಂತಿರಬೇಕು. ಕಪಟತನ ಮೋಸ ವಂಚನೆ ಸುಳ್ಳು ತಮ್ಮ ಆಭರಣವನ್ನಾಗಿ ಮಾಡಿಕೊಂಡು ಮಾತನಾಡುವ ಅಹಂಕಾರಿಗಳು ಸಮಾಜದಲ್ಲಿ ಬೇಕಾದಷ್ಟು ಸಂಖ್ಯೆಯಲ್ಲಿದ್ದಾರೆ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು. ಆದ್ದರಿಂದ ಅರಿತು ನಡೆಯಬೇಕು ಮರೆತು ನಡೆಯಬಾರದು. ಅರಿವೇ ಗುರು ವಾಗುತ್ತದೆ ಮರುವು ಶಿಕ್ಷೆಯಾಗುತ್ತದೆ.

ನಾವು ನಡೆದು ಬಂದ ಹಾದಿ ಎಂದೆಂದಿಗೂ ಮರೆಯಬಾರದು. ಜೀವನದಲ್ಲಿ ಕಷ್ಟ ಸುಖಗಳನ್ನು ಸಮಾನವಾಗಿ ಸವಿಯಬೇಕು. ನಾನು ನನ್ನದು ನನ್ನಿಂದಲೇ ಎಂಬ ಅಹಂಕಾರ ನಮ್ಮ ವ್ಯಕ್ತಿತ್ವವನ್ನೇ ನಾಶಮಾಡುತ್ತದೆ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಬಹಳ ಮುಖ್ಯವಾಗುತ್ತದೆ. ಸಮಾಜದಲ್ಲಿ ಅಲ್ಪಸುಖಿಗಳು ಸಾಮಾನ್ಯವಾಗಿ ಕಾಣುತ್ತೇವೆ. ಒಂದು ದಿನದ ಗಂಜಿ ಕಾಣದ ಅದೆಷ್ಟೋ ಕುಟುಂಬಗಳಿಗೆ ತದನಂತರ ಬಂದ ಶ್ರೀಮಂತಿಕೆಯಿಂದ ತಮ್ಮ ಇಂದಿನ ಆದಿಯನ್ನು ಮರೆತುಬಿಡುತ್ತಾರೆ. ಹೇಳೋದು ಅದಕ್ಕಾಗಿಯೇ ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದನಂತೆ. ಶ್ರೀಮಂತಿಕೆ ನೆತ್ತಿಗೇರಿದಾಗ ಬಸವನ ಹಾಲಿನಿಂದ ಕುಂಡಿ ತೊಳೆದನಂತೆ. ಬಡತನ ಸಿರಿತನ ಗೋಡೆ ಮೇಲಿನ ನೆರಳಿನಂತೆ.

ಒಂದು ತುತ್ತು ಅನ್ನ ಸಿಕ್ಕರೆ ತೊಡೆಯ ಮರೆಮಾಡಿ ಉಣ್ಣಬೇಕು ಎಂಬ ಅನುಭವದ ಮಾತು ನಮ್ಮ ಹಿರಿಯರು ನಮಗೆ ನಿರ್ದೇಶನ ಮಾಡಿದ್ದಾರೆ. ನಮ್ಮ ದೇಹವೆಂಬುದು ತುಂಬಿದ ಬಂಡಿಯಂತೆ ನಮ್ಮ ಕಾಲುಗಳು ಚಕ್ರದಂತೆ ನಡೆಯುವಾಗ ಜಾಗೃತಿಯಿಂದ ಹೆಜ್ಜೆ ಇಡಬೇಕು . ನಮ್ಮ ಪಂಚೇಂದ್ರಿಯಗಳು ಚಂಚಲಕ್ಕೆ ಸಿಕ್ಕಿಕೊಳ್ಳದಂತೆ ಹತೋಟಿಯಲ್ಲಿ ಹಿಡಿದುಕೊಳ್ಳುವುದೇ ಸಾಧನೆ. ಪ್ರತಿಯೊಬ್ಬ ಮನುಷ್ಯನು ತಮ್ಮ ಆತ್ಮ ಅವಲೋಕನದಿಂದ ಬದುಕಬೇಕು. ವಿಚಾರಾತ್ಮಕವು ಮತ್ತು ವಿಮರ್ಶಾತ್ಮಕವೂ ನಮ್ಮ ಸತ್ಯಾ ಅನ್ವೇಷಣೆಯ ಪಥದಲ್ಲಿ ಸಾಗುವಂತೆ ನೋಡಿಕೊಳ್ಳಬೇಕು.

ಮನುಷ್ಯ ಧರ್ಮ ದಲ್ಲಿ ಪಾಲಿಸಬೇಕಾದ ಬಹುದೊಡ್ಡ ಧರ್ಮ ಎಂದರೆ ಹಸಿದವನಿಗೆ ಅನ್ನ ನೀಡುವುದು, ಸೋತವನಿಗೆ ಸ್ಫೂರ್ತಿ ನೀಡಿ ಗೆಲುವಿನ ಕನಸುಗಳನ್ನು ಬಿತ್ತುವುದು, ಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯ ಮಾಡುವುದು. ಪರೋಪಕಾರಿಯಾಗಿ ಬದುಕುವುದು , ಮನುಷ್ಯರನ್ನು ಮನುಷ್ಯರೇ ಪ್ರೀತಿಸುವದೇ ಮನುಷ್ಯನ ಒಳಮರ್ಮ. ಪ್ರತಿಯೊಬ್ಬರೂ ತಮ್ಮ ಕಾಯಕದಲ್ಲಿ ಪ್ರಾಮಾಣಿಕತೆ ಸದಾಚಾರ ಹೊಂದಿರುವುದೇ ಧರ್ಮ. ನೀ ದೇವನಾದರೆ ಎನ್ನನೇಕೆ ಸಲಹೇ ಎಂದು ಅಲ್ಲಮ ದೇವರನ್ನು ಪ್ರಶ್ನಿಸುತ್ತಾನೆ. ನಮ್ಮ ಆತ್ಮವೇ ಪರಮಾತ್ಮ ನಮ್ಮ ಸದಾಚಾರವೇ ಸಕಲ ಸೌಭಾಗ್ಯ ನಮ್ಮ ಮಾತುಗಳಿಗೆ ಸತ್ಯವೇ ಸದಾ ಭೂಷಣ ಸತ್ಯವನ್ನು ನುಡಿಯುವುದು. ಸತ್ಯ ಮತ್ತು ಸುಳ್ಳು ಮನುಷ್ಯನ ವ್ಯಕ್ತಿತ್ವವನ್ನು ಅನಾವರಣಮಾಡುತ್ತವೆ. ಮದುವೆಯೆಂಬುದು ಗಂಡು-ಹೆಣ್ಣುಗಳ ಭಾವ ಸಂಬಂಧದಲ್ಲಿ ಲೀನವಾಗುವುದು.

ಸಾಮಾನ್ಯವಾಗಿ ಪ್ರತಿಯೊಂದು ಹೆಣ್ಣು ತಾನು ಮದುವೆಯಾದ ಗಂಡನೊಂದಿಗೆ ಸಂತೋಷದಿಂದ ಇರಬೇಕೆಂದರೆ ಇಬ್ಬರು ಕುಳಿತು ಆಲೋಚಿಸಿ ಪರಸ್ಪರ ಒಬ್ಬರನ್ನೊಬ್ಬರು ಆತ್ಮಸಾಕ್ಷಿಯಾಗಿ ಅರ್ಥಮಾಡಿಕೊಳ್ಳುವುದರಲ್ಲಿ ಸಂತೋಷವನ್ನು ಕಾಣಬೇಕು . ಹೆಣ್ಣಿಗೆ ಗಂಡನ ಶಾಶ್ವತ ಡಾಕ್ಟರ್ ರಾಜ್ ಅವರ ಒಂದು ಹಾಡು ನೆನಪಿಸುತ್ತಾ
ಬಂದು ಕೊಡಿಸೋ ಸೀರೆ ಬಣ್ಣ ಹೋಗುವವರಿಗೆ ತಂದೆ ಕೊಡಿಸೋ ಸೀರೆ ಮದುವೆಯಾಗುವವರೆಗೆ ತಾಯಿ ಕೊಡಿಸುವ ಸೀರೆ ತಾಯಿ ಆಗುವವರೆಗೆ ಗಂಡ ಕೊಡಿಸುವ ಸೀರೆ ಹೆಣ್ಣಿನ ಕುಂಕುಮ ಇರುವವರೆಗೆ ಮಣ್ಣಿನ ಮಮತೆ ಇರುವವರೆಗೂ. ಕೊಟ್ಟ ಹೆಣ್ಣು ಕುಲದ ಹೊರಗು.

ಎಷ್ಟೇ ಪ್ರೀತಿ ಪ್ರೇಮ ವಿಶ್ವಾಸ ಅನನ್ಯತೆಯಿಂದ ಇದ್ದರೂ ಗಂಡ-ಹೆಂಡತಿಯರ ಮಧ್ಯೆ ಒಂದಿಲ್ಲ ಒಂದು ಕಾರಣಕ್ಕೆ ಆಗಾಗ ಸಂಸಾರದಲ್ಲಿ ಜಂಜಾಟಗಳು ಗಲಾಟೆ ಗದ್ದಲಗಳು ಜಗಳಗಳು ಸರ್ವೇ ಸಾಮಾನ್ಯ. ತಮ್ಮಿಬ್ಬರ ಮಧ್ಯೆ ಆದ ಕ್ಷಣಿಕದ ಕಲಹ ತನ್ನ ತವರುಮನೆಗೆ ಎಂದು ದೂರು ನೀಡಬಾರದು. ಗಂಡ ಹೆಂಡರ ಜಗಳ ಗಂಧ ತೀಡಿದಂಗ.

ಗಂಡ ಹೆಂಡರ ಜಗಳ ಉಂಡು ಮಲಗುವತನಕ ಗಂಡ ಹೆಂಡರ ಜಗಳ ಕುಂಡಿ ತಿರುಗುವತನಕ ಅಂತಹ ಪವಿತ್ರವಾದ ತಮ್ಮ ಸಂಬಂಧವನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ. ಚಾಡಿ ಹೇಳಿ ಸಂಸಾರ ಕೆಡಿಸಿಕೊಳ್ಳಬಾರದು. ಕನಕದಾಸರು ಹೇಳುತ್ತಾರೆ. ತಾಯಿ-ತಂದೆ ಇರುವವರೆಗೂ ತವರುಮನೆ. ತಂದೆ ತಾಯಿ ಇಲ್ಲದ ತವರು ಮನೆ ನೀರಿಲ್ಲದ ಕೆರೆಗೆ ಕರು ನೀರಿಗಾಗಿ ಧಾವಿಸಿ ಬಂದಂತೆ. ತಾಯಿ ಇದ್ದರೆ ತವರೆಚ್ಚು ತಂದೆ ಇದ್ದರೆ ಬಳಗ ಹೆಚ್ಚು ಸಾವಿರದಾಗೆಚ್ಚು ಪತಿ ಪುರುಷ. ಗಂಜಿಯ ಕುಡಿದರೂ ಗಂಡನ ಮನೆ ಲೇಸು ಅಂಗಿನ ಬಾನ ತವರೂರು.

ಆಸರಿಕೆ ಬ್ಯಾಸರಿಕೆ ಕಳಿಲ್ಯಾಕಂತ ತವರು ಮನೆಗೆ ಹೋದರೆ ಒಮ್ಮನದ ಜೋಳ ಒಳ್ಮುಂದೆ ಇಟ್ಟರಾ ಅಣ್ಣನ ಮಡದಿಯರು. ಹೆಣ್ಣಿಗೆ ತವರು ಸ್ಥಿರವಲ್ಲ ಕಟ್ಟಿದ ಬುತ್ತಿ ಹೊಟ್ಟಿದ ಬಣವೆ ಶಾಶ್ವತವಲ್ಲ. ಸತಿ-ಪತಿಗಳ ಇಬ್ಬರು ಸಂಸಾರದಲ್ಲಿ ಹಾಲು ಸಕ್ಕರೆಯಂತೆ ಕೂಡಿಬಾಳಿದರೆ ಬದುಕೆ ಒಂದು ನಂದನವನ. ಸತಿಪತಿಗಳಲ್ಲಿ ಒಂದಾಗದ ಭಕ್ತಿ ಹಿತವಪ್ಪುದು ಶಿವಂಗೆ . ಆ ಶಿವನೇ ಅರ್ಧನಾರೇಶ್ವರ ಸತಿ-ಪತಿಯರ ಧರ್ಮ ಎಲ್ಲಾ ಧರ್ಮಗಳಿಗಿಂತಲೂ ಅತ್ಯಂತ ಶ್ರೇಷ್ಠ ಧರ್ಮ. ಹೆಣ್ಣಿಗೆ ಪತಿಯೇ ಪರದೈವ ಗಂಡ ಎಂಬ ದೈವಶಕ್ತಿ ಪತಿವ್ರತೆ ಅನುಸೂಯೆ ತನ್ನ ಪತಿಯ ಪಾದ ಪೂಜದ ನೀರಿನಿಂದ ಪವಾಡ ಮೆರೆದಿದ್ದಾಳೆ. ಪಾರ್ವತಿ ಲಕ್ಷ್ಮಿ ಸರಸ್ವತಿ ಲೋಕಕ್ಕೆ ಮೂರು ಜನ ಪತಿವ್ರತೆಯರು ಎಂದು ತಮಗೆ ತಾವೇ ಬಿರುದು ತಂದುಕೊಂಡಿದ್ದರು.

ತಮಗಿಂತಲೂ ಅನುಸೂಯೆ ಪತಿವ್ರತೆ ಎಂದು ವರ್ತಮಾನ ತಿಳಿದು. ಮೂವರು ತಲೆಗೆ ಬಟ್ಟೆ ಕಟ್ಟಿಕೊಂಡು ತಮ್ಮ ಗಂಡಂದಿರು ಬರುವುದರಲ್ಲಿ ಮಂಚದ ಮೇಲೆ ಬಿಮ್ಮನೆ ಮಲಗಿದ್ದರು. ಸತಿಯರ ಮಲಗಿದ್ದ ಕಾರಣ ಕೇಳಿದ ಬ್ರಹ್ಮ ವಿಷ್ಣು ಮಹೇಶ್ವರರು ದಿಗ್ಭ್ರಾಂತರಾಗುತ್ತಾರೆ. ಮೂರು ಜನ ತಮ್ಮ ಗಂಡಂದಿರಿಗೆ ಚಾಡಿ ಹೇಳುತ್ತಾರೆ. ಲೋಕಕ್ಕೆ ದೊಡ್ಡವರಾದ ನೀವು ನಮಗಾದ ಅಪಮಾನವನ್ನು ಸರಿಪಡಿಸಬೇಕು. ಕೂಡಲೇ ಅನುಸೂಯೆಯ ಅರಮನೆಗೆ ಹೋಗಿ ಅವಳ ಪತಿವ್ರತೆಯನ್ನು ಪರೀಕ್ಷಿಸಬೇಕು ಎಂದು ಸವಾಲು ಹಾಕುತ್ತಾರೆ. ಹೆಂಡತಿಯರ ಮಾತು ಕೇಳಿದ ಬ್ರಹ್ಮ ವಿಷ್ಣು ಮಹೇಶ್ವರರು ಮಾರುವೇಷ ತೊಟ್ಟು ಋಷಿಮುನಿಗಳಾಗಿ ಅನುಸೂಯೆ ಅರಮನೆಯ ಬಾಗಿಲ ಮುಂದೆ ನಿಂತು ಭವತಿ ಭಿಕ್ಷಾಂದೇಹಿ ಎಂದು ಕೂಗುತ್ತಾರೆ. ಅರಮನೆಯ ಒಳಗೆ ಪತಿಯ ಸೇವೆ ಮಾಡುತ್ತಿದ್ದ ಅನುಸೂಯೆ ಹೊರಬಂದು ಸ್ವಾಮಿ ವೇಷಧರಿಸಿದ ಪೂಜ್ಯರನ್ನು ನೋಡಿ ಸಂತೋಷ ಪಡುತ್ತಾಳೆ. ಕೈ ಕಾಲು ತೊಳೆದುಕೊಳ್ಳಲು ಮೀಸಲು ನೀರು ತಂದು ನೀಡಿದಳು. ಒಳಗೆ ರತ್ನಗಂಬಳಿಯ ಗದ್ದಿಗೆ ಹಾಸಿ ಒಳಗೆ ಬನ್ನಿ ಎಂದು ವಿನಂತಿಸಿದಳು.

ಅವಳಲ್ಲಿನ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಎಲ್ಲ ವರ್ತಮಾನ ತನ್ನ ಪತಿರಾಯನಿಗೆ ಹೇಳಿದಳು. ಬಂದಂತಹ ಸ್ವಾಮಿಗಳಲ್ಲಿ ಒಬ್ಬರು ನಮಗೆ ಹಸಿವಾಗಿದೆ ಊಟ ಬಡಿಸು ಎಂದು ಬೇಡಿಕೊಳ್ಳುತ್ತಾರೆ. ಗುರುಗಳ ಆಸೆಯನ್ನು ಪೂರೈಸುವ ಹುಮ್ಮಸ್ಸಿನಲ್ಲಿ ತಮಗೇನು ಊಟಬೇಕು ಹೇಳಿದರೆ ಭಕ್ತಿಯಿಂದ ಮಾಡುತ್ತೇನೆ . ತಾವು ಸಂತೃಪ್ತಿಯಿಂದ ಹಾರೈಸಬೇಕು . ನಮಗೆ ಬೇಕಾದ ಆಹಾರವನ್ನು ಸಿದ್ದ ಪಡಿಸಬಲ್ಲೆಯಾ ಎಂದು ಅಪಹಾಸ್ಯ ಮಾಡುತ್ತಾರೆ. ತಮಗೇನು ಬೇಕು ಮಹಾಪ್ರಭು ತಾವು ಆಸೆಪಟ್ಟದನ್ನೆ ಮಾಡಿ ಬಡಿಸುತ್ತೇನೆ ಎಂದು ಒಪ್ಪಿಕೊಳ್ಳುತ್ತಾಳೆ.

ಹಾಗಾದರೆ ಉಸುಕಿನ ಉಸುಳಿ ಬಸಿಯಬೇಕು ಎಂದು ಹೇಳುತ್ತಾರೆ. ಆಗಲಿ ಎಂದು ಅಡುಗೆ ಮನೆಯವ ಒಳಗೆ ಬಂದು ನೀರು ಕಾಯಿಸಲು ಹಿಟ್ಟು ಬೊಗಸೆ ಮರಳನ್ನು ತಂದು ಪಾತ್ರೆಯಲ್ಲಿ ಹಾಕುತ್ತಾಳೆ. ಆಮೇಲೆ ಗಂಡನ ಪಾದ ಪೂಜೆಯ ಧೂಳಿನ ನೀರು ಅಡುಗೆ ಮಾಡಿದ ಪಾತ್ರೆಯ ಮೇಲೆ ಸಿಂಪಡಿಸಿದಾಗ ಪಾಯಸವಾಗುತ್ತದೆ. ಹೊಟ್ಟೆ ತುಂಬ ಊಟ ಮಾಡಿದ ಋಷಿಮುನಿಗಳು ಹಲಗೆ ತೊಟ್ಟಿಲಲ್ಲಿ ಮಲಗುವ ಇಂಗಿತವನ್ನು ವ್ಯಕ್ತಪಡಿಸುತ್ತಾರೆ. ಅವರ ಆಸೆಯಂತೆ ಹಲಗೆ ತೊಟ್ಟಿಲಿನಲ್ಲಿ ಹಾಸಿಗೆ ಹಾಸಿ ಮಲಗಲು ವಿನಂತಿಸಿದಾಗ ಅಪಹಾಸ್ಯ ಮಾಡುತ್ತಾರೆ.

ಗಂಡನ ಪಾದ ಪೂಜೆದ ಧೂಳಿನ ನೀರು ಮೂವರು ಋಷಿಗಳ ಮೇಲೆ ಸಿಂಪಡಿಸಿದಾಗ ವರ್ಷದ ಕೂಸುಗಳಾಗಿ ಬದಲಾಗುತ್ತಾರೆ. ಅಂತ ಅಗಾಧವಾದ ಶಕ್ತಿ ಗಂಡ-ಹೆಂಡತಿಯರಲ್ಲಿ ಅಡಗಿದೆ.
ದಿನಪೂರ್ತಿ ತಮ್ಮ ಗಂಡಂದಿರು ಬರುವ ಹಾದಿಯನ್ನೇ ಕಾಯುತ್ತಾರೆ. ಭಯಗೊಂಡು ಸರಸ್ವತಿ ಪಾರ್ವತಿ ಲಕ್ಷ್ಮಿಯವರು ಮಾರುವೇಷ ಧರಿಸಿ ಭವತಿ ಭಿಕ್ಷಾಂದೇಹಿ ಎಂದು ಅನುಸೂಯೆ ಅವರ ಮನೆಗೆ ಬರುತ್ತಾರೆ. ಅವರನ್ನು ಪ್ರೀತಿಯಿಂದ ಸ್ವಾಗತಿಸಿದ ಅನುಷಾದೇವಿಗೆ ಅಪಹಾಸ್ಯದ ಮಾತುಗಳಿಂದ ನಾವು ಕುಂದ್ರಲೂ ನಿಂದ್ರಲೂ ಬಂದಿಲ್ಲ ನಮ್ಮ ಗಂಡಂದಿರನ್ನು ಹುಡುಕಿಕೊಂಡು ಬಂದಿದ್ದೇವೆ. ಅವರನ್ನು ನಮಗೆ ಒಪ್ಪಿಸು ಎಂದು ವಿನಂತಿಸುತ್ತಾರೆ.

ಅದಕ್ಕೆ ಪತಿವ್ರತೆಯರಾದ ನೀವು ನಿಮ್ಮ ನಿಮ್ಮ ಗಂಡಂದಿರನ್ನು ನೀವೇ ಕರೆದುಕೊಂಡು ಹೋಗಿ ಎಂದು ಅಲಗಿ ತೊಟ್ಟಿಲಲ್ಲಿ ಮಲಗಿದ್ದ ಕೂಸುಗಳನ್ನು ತೋರಿಸುತ್ತಾಳೆ. ಬ್ರಹ್ಮ ವಿಷ್ಣು ಮಹೇಶ್ವರರು ಒಂದು ವರ್ಷದ ಮಕ್ಕಳಾಗಿ ಒಂದೇ ಮುಖದ ಒಂದೇ ಉಡುಗೆ ತೊಟ್ಟು ಮಲಗಿರುವುದನ್ನು ನೋಡಿ ಸರಸ್ವತಿ ಪಾರ್ವತಿ ಲಕ್ಷ್ಮಿಯವರು ಲೋಕಕ್ಕೆ ನೀನೇ ಮಹಾಪತಿವ್ರತೆ ಎಂದು ಅನುಷಾದೇವಿಯವರ ಕಾಲಿಗೆ ಎರಗುತ್ತಾರೆ. ತಮ್ಮಲ್ಲಿರುವ ಅಹಂಕಾರದ ಬುದ್ಧಿ ಅರಿವಾಗಿ ಅನುಷಾದೇವಿಯವರಿಗೆ ಶರಣಾಗುತ್ತಾರೆ. ಮತ್ತೊಂದು ಉದಾಹರಣೆ ಎಂದರೆ ಜಮದಗ್ನಿಯ ರೂಪ ಸೌಂದರ್ಯಕ್ಕೆ ಮರುಳಾದ ರೇಣುಕಾದೇವಿ ಜಮದಗ್ನಿ ಋಷಿಯನ್ನು ಮದುವೆಯಾಗಲು ಅಪೇಕ್ಷೆ ಪಡುತ್ತಾರೆ.

ಜಮದಗ್ನಿ ಮಹಾಋಷಿಗಳು ಬೇಡ ಎಂದು ಹೇಳಿದರು ಕೇಳದ ರೇಣುಕಾ ಮದುವೆಯಾಗುತ್ತಾರೆ. ಗಂಡನ ಪೂಜೆಗೆ ಮೀಸಲು ನೀರು ತರಲು ಉಸುಕಿನ ಕೊಡವ ಮಾಡಿ ಹಾವಿನ ಸಿಂಬಿ ಮಾಡಿ ನದಿಯ ನೀರಿಗೆ ಹೋಗಿ ಬಿಂದಿಗೆಯಲ್ಲಿ ನೀರು ತುಂಬಿಕೊಂಡು ಬರುವಾಗ ಒಬ್ಬ ಪುರುಷನನ್ನು ನೋಡಿ ಕಾಮೋದ್ರೇಕದ ಭಾವನೆಯ ಮೂಡಿದಾಗ ಪರ ಪುರುಷರನ್ನು ನೋಡಿದ ಶಾಪಕ್ಕೆ ಬಲಿಯಾಗುತ್ತಾಳೆ. ಹಾವಿನ ಸಿಂಬೆ ಹರಿದುಹೋಗುತ್ತದೆ ಮರಳಿನ ಬಿಂದಿಗೆ ಹೊಡೆದು ಹೋಗುತ್ತದೆ.

ಜಮದಗ್ನಿಯ ಕೋಪಕ್ಕೆ ಗುರಿಯಾಗುತ್ತಾಳೆ. ರೇಣುಕಾ ದೇವಿಗೆ ಜಮದಗ್ನಿ ಶಾಪ ಕೊಡುತ್ತಾರೆ. ಶಾಪ ವಿಮೋಚನೆಗಾಗಿ ರೇಣುಕರಾಜ ಜಮದಗ್ನಿಯ ಋಷಿಯ ಪಾದದ ಪೂಜೆಯ ನೀರು ತಂದು ಕುಷ್ಟರೋಗದಿಂದ ಬಳಲುತ್ತಿರುವ ರೇಣುಕಾದೇವಿಯ ಮೈಮೇಲೆ ಸಿಂಪಡಿಸಿದಾಗ ರೋಗದಿಂದ ಗುಣಮುಖಳಾದ ಘಟನೆಗಳು ಪುರಾಣಗಳಲ್ಲಿ ನೋಡುತ್ತೇವೆ.
ಇಂತಹ ಪವಿತ್ರವಾದ ಪತಿಯ ಮತ್ತು ಸತಿಯ ಶಕ್ತಿಯನ್ನು ಅರ್ಥಮಾಡಿಕೊಂಡು ಬಾಳಿದರೆ ಬದುಕು ಬಂಗಾರವಾಗಿ ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬದುಕಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

Published

on

ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.

23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.

ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending