ಲೈಫ್ ಸ್ಟೈಲ್
ಕ್ಷಯರೋಗ; ಒಂದು ಸವಾಲು
ಕ್ಷಯರೋಗ (Tuberculosis) ಎನ್ನುವುದು ಜನಸಾಮಾನ್ಯರಲ್ಲಿ ಕೇಳಲ್ಪಡುವ ಒಂದು ಸಾಮಾನ್ಯ ಸಾಂಕ್ರಾಮಿಕ ಖಾಯಿಲೆ. ಒಬ್ಬರಿಂದೊಬ್ಬರಿಗೆ ಸುಲಭವಾಗಿಯೇ ಹರಡುವ ಈ ಖಾಯಿಲೆ, ಇಡೀ ಪ್ರಪಂಚದಲ್ಲಿ, ಅದರಲ್ಲೂಭಾರತದಲ್ಲಿ ಆರೋಗ್ಯ ಕ್ಷೇತ್ರದ ಅತೀ ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ. ಕಾರಣ, ಬೇರೆ ಯಾವುದೇ ಸಾಂಕ್ರಾಮಿಕ ರೋಗಕ್ಕಿಂತ ಅತೀ ಹೆಚ್ಚು ಜನರನ್ನು ಮರಣಕ್ಕೀಡು ಮಾಡುವ ಖಾಯಿಲೆ ಇದಾಗಿದೆ.
2014 ನೇ ಸಾಲಿನ ಅಂಕಿಅಂಶಗಳಲ್ಲಿ ಹೇಳುವುದಾದರೆ ಭಾರತದಲ್ಲಿ 28.4ಲಕ್ಷ ಜನಪ್ರತಿವರ್ಷ ಕ್ಷಯರೋಗಕ್ಕೀಡಾಗುತ್ತಿದ್ದಾರೆ ಹಾಗೂ 5.1ಲಕ್ಷ ರೋಗಿಗಳು ಮರಣಕ್ಕೀಡಾಗುತ್ತಿದ್ದಾರೆ. ಇನ್ನೂ ಸೂಕ್ಷ್ಮವಾಗಿ ಹೇಳುವುದಾದರೆ ಭಾರತದಲ್ಲಿ ಪ್ರತಿದಿನ 6000ಕ್ಕೂ ಅಧಿಕ ಜನ ಕ್ಷಯರೋಗಕ್ಕೆ ತುತ್ತಾಗುತ್ತಿದ್ದಾರೆ ಮತ್ತು 600ಕ್ಕೂ ಹೆಚ್ಚು ರೋಗಿಗಳು ಸಾಯುತ್ತಿದ್ದಾರೆ ಅಂದರೆ ಪ್ರತೀ 5 ನಿಮಿಷಗಳಿಗೆ 2 ರೋಗಿಗಳು ಮರಣಕ್ಕೀಡಾಗುತ್ತಿದ್ದಾರೆ.
ಕ್ಷಯರೋಗವು ಮೈಕೊಬ್ಯಾಕ್ಟೀರಿಯಂ ಟ್ಯೂಬರ್ಕುಲೊಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಮುಖ್ಯವಾಗಿ ಶ್ವಾಸಕೋಶಗಳಿಗೆ ಹಾನಿಮಾಡುವ ಈ ಖಾಯಿಲೆ, ಮುಂದೆ ಇತರ ಅಂಗಾಂಗಗಳಿಗೂ ಹಾನಿ ಮಾಡಬಲ್ಲದು.
ಸೋಂಕು ಹರಡುವ ರೀತಿ: ಕೆಮ್ಮು, ಸೀನು ಅಥವಾ ಉಗುಳಿನಲ್ಲಿರುವ ಹನಿಗಳೊಳಗಿರುವ ರೋಗಾಣು ಮೂಲಕ ಒಬ್ಬರಿಂದೊಬ್ಬರಿಗೆ ಹರಡುತ್ತದೆ.
ಶ್ವಾಸಕೋಶ ಕ್ಷಯರೋಗದ ಗುಣಲಕ್ಷಣಗಳು
- 2 ವಾರಗಳಿಗೂ ಹೆಚ್ಚು ಕೆಮ್ಮು
- 2ವಾರಗಳಿಗೂ ಹೆಚ್ಚು ಜ್ವರ
- ತೂಕ ಕಡಿಮೆಯಾಗುವುದು
ಕಫದಲ್ಲಿ ರಕ್ತ ಎದೆಯ ಎಕ್ಸ್ರೇದಲ್ಲಿ ಯಾವುದೇ ಅಸ್ವಾಭಾವಿಕ ಲಕ್ಷಣ
ಕ್ಷಯದ ಪರಿಣಾಮಗಳು
- ಮೊದಮೊದಲು ಶ್ವಾಸಕೋಶಗಳಿಗಷ್ಟೇ ಸೀಮಿತವಾಗಿ ಶುರುವಾಗುವ ಕ್ಷಯ, ಮುಂದೆ ಮಿದುಳು, ಬೆನ್ನುಮೂಳೆ, ಸಣ್ಣಕರುಳು, ದೊಡ್ಡಕರುಳು, ಹೀಗೆ ವಿವಿಧ ಅಂಗಾಂಗಗಳಿಗೆ ಹರಡಬಲ್ಲದು.
- ಹೆಚ್.ಐ.ವಿ. ಸೋಕು ಇರುವ ವ್ಯಕ್ತಿಗಳಿಗೆ ಸುಲಭವಾಗಿ ಈ ಸೋಂಕು ಅಂಟಿಕೊಂಡು, ವ್ಯಕ್ತಿಯ ರೋಗನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ.
- ಜೊತೆಯಲ್ಲಿ ಅಪೌಷ್ಟಿಕತೆಯೂ ಇದ್ದಲ್ಲಿ, ರೋಗಾಣು ಬೇಗನೇ ಎಲ್ಲಾ ಅಂಗಾಂಗಗಳನ್ನು ಆವರಿಸಿಕೊಳ್ಳುತ್ತದೆ.
ಕಂಡು ಹಿಡಿಯುವ ವಿಧಾನ
- ಕಫ ಪರೀಕ್ಷೆ
- ಎಕ್ಸ್ರೇ
- ರಕ್ತ ಪರೀಕ್ಷೆ
ಚಿಕಿತ್ಸೆ: ಕ್ಷಯರೋಗದ ಚಿಕಿತ್ಸೆಯಲ್ಲಿ ಮುಖ್ಯವಾಗಿ 5 ರೀತಿಯ ಧಾತುಗಳನ್ನೊಳಗೊಂಡ ಮಾತ್ರೆಗಳನ್ನು ನೀಡಲಾಗುತ್ತದೆ
- ಐಸೊನಿಯಾಝಿಡ್
- ರಿಫಾಂಪಿಸಿನ್
- ಪೈರಝಿನಮೈಡ್
- ಎಥಾಂಬುಟಾಲ್
- ಸ್ಟ್ರೆಪ್ಟೊಮೈಸಿನ್
ಈ ಎಲ್ಲಾ ಮಾತ್ರೆಗಳನ್ನು ವಿವಿಧ ಕಾಂಬಿನೇಷನ್ಗಳಲ್ಲಿ ಪ್ರತಿದಿನದಂತೆ ಸೇವಿಸಬೇಕಾಗುತ್ತದೆ.
ಕ್ಷಯರೋಗಿಗಳನ್ನು ಚಿಕಿತ್ಸಾ ನಿಟ್ಟಿನಲ್ಲಿ ಮುಖ್ಯವಾಗಿ ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ.
- ಹೊಸದಾಗಿ ಕಂಡುಹಿಡಿಯಲ್ಪಟ್ಟ ರೋಗಿಗಳು: ಇವರು 2+4 ತಿಂಗಳು, ಒಟ್ಟು 6 ತಿಂಗಳ ಕಾಲ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ
- ಮೊದಲು ಚಿಕಿತ್ಸೆ ಪಡೆದಿದ್ದ ರೋಗಿಗಳು: ಇವರು 2+1+5 ತಿಂಗಳು, ಒಟ್ಟು 8 ತಿಂಗಳ ಕಾಲ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ
ಆದರೆ ಈ ಸುದೀರ್ಘ ಚಿಕಿತ್ಸಾ ಅವಧಿಗೆ ಕೆಲ ರೋಗಿಗಳು ಒಗ್ಗಿಕೊಳ್ಳದೆ ಮಧ್ಯದಲ್ಲೇ ಕೈಬಿಡುವ ಸಾಧ್ಯತೆಗಳಿರುತ್ತವೆ. ಪರಿಣಾಮ ಈ ಮೇಲೆ ತಿಳಿಸಿರುವ ಮಾತ್ರೆಗಳಿಗೆ ದೇಹದಲ್ಲಿ ಪ್ರತಿರೋಧ ಬೆಳೆದು ಈ ಮೇಲಿನ ಯಾವುದೇ ಮಾತ್ರೆಗಳಿಗೂ ರೋಗಿ ಸ್ಪಂದಿಸದೇ ಹೋಗುವ ಸಂದರ್ಭಗಳೂ ಇರುತ್ತವೆ. ಇದಕ್ಕೆ Multidrug resistant TB and XDR TB ಎಂದು ಕರೆಯಲಾಗುತ್ತದೆ. ಅಂಥ ಸಂದರ್ಭಗಳಲ್ಲಿ ಈ ಮಾತ್ರೆಗಳ ಜೊತೆಗೆ ಇನ್ನೂ ಹೆಚ್ಚಿನ ಇಂಜೆಕ್ಟೆಬಲ್ ಧಾತುಗಳನ್ನೂ ನೀಡಲಾಗುತ್ತದೆ. ಆದರೆ ಆ ಚಿಕಿತ್ಸಾ ಅವಧಿ 18 ರಿಂದ 24 ತಿಂಗಳ ವರೆಗೂ ವಿಸ್ತಾರವಾಗುವ ಸಾಧ್ಯತೆಗಳೂ ಇರುತ್ತವೆ.
- ಕ್ಷಯದ ಜೊತೆಗೆ ಸುಲಭವಾಗಿ ಕೆಲವೊಂದು ಖಾಯಿಲೆಗಳು ಬಹುಬೇಗ ಆವರಿಸಿಕೊಳ್ಳುತ್ತವೆ. ಅವೆಂದರೆ,
- ಹೆಚ್ಐವಿ ಸೋಂಕು: ಶೇ.80 ರಷ್ಟು ಸಂದರ್ಭಗಳಲ್ಲಿ ಹೆಚ್ಐವಿ – ಕ್ಷಯರೋಗ ಪರಸ್ಪರ ಹೊಂದಿಕೊಂಡು (Co-infection) ಒಂದನ್ನೊಂದು ಬಹುಬೇಗ ಆವರಿಸಿಕೊಳ್ಳುತ್ತವೆ.
- ಮಧುಮೇಹ
- ಅಪೌಷ್ಟಿಕತೆ
ಕ್ಷಯ ಬರದಂತೆ ತಡೆಗಟ್ಟಲು ಕ್ರಮಗಳು
- ಕ್ಷಯ ಹೊಂದಿರುವ ರೋಗಿಗಳೊಡನೆ ಸಂಪರ್ಕದಿಂದ ದೂರ ಇರುವುದು. ಒಂದು ವೇಳೆ ಆ ರೀತಿ ಉಂಟಾದರೆ ತಕ್ಷಣವೇ ವೈದ್ಯರ ಸಲಹೆ ಪಡೆದು, ಅವಶ್ಯಕತೆಯಿದ್ದರೆ ಚಿಕಿತ್ಸೆಯನ್ನೂ ಶುರು ಮಾಡುವುದು.
- ಕೈಗಳ ಮತ್ತು ದೇಹದ ಸ್ವಚ್ಛತೆ ಕಾಪಾಡಿಕೊಳ್ಳುವುದು
ಮಾಂಸಾಹಾರಿ ಸೇವಿಸುವವರು, ಪದಾರ್ಥಗಳನ್ನು ಚೆನ್ನಾಗಿ ಬೇಯಿಸಿಕೊಂಡು ಸೇವಿಸಬೇಕು. - ಧೂಮಪಾನ, ಮದ್ಯಪಾನಗಳಿಗೆ ಕಡಿವಾಣ ಹಾಕಬೇಕು.
- ಆಗಾಗ್ಗೆ ಉಸಿರಾಟ ತೊಂದರೆ ಇರುವವರು ವೈದ್ಯರ ಬಳಿ ಸಮಾಲೋಚನೆ ಪಡೆದು ಬಹುಬೇಗ ಸೂಕ್ತ ಚಿಕಿತ್ಸೆ ಪಡೆಯಬೇಕು
- ಪ್ರಮುಖವಾಗಿ ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಮತ್ತು ನೀರು ಸೇವಿಸುವುದು
ಕ್ಷಯ ಹೊಂದಿರುವವರು ಅನುಸರಿಸಬೇಕಾದ ಅಂಶಗಳು - ಕ್ಷಯರೋಗಿ ಎಂದು ಗೊತ್ತಾದ ದಿನದಿಂದಲೇ ಅದನ್ನು ಅರಿತುಕೊಂಡು ವೈದ್ಯರ ಸಲಹೆ ಮೇರೆಗೆ ಚಾಚೂತಪ್ಪದೆ ಸಮಯಕ್ಕೆ ಸರಿಯಾಗಿ ಅವಧಿ ಮುಗಿಯುವವರೆಗೂ ಪ್ರತಿದಿನವೂ ಔಷಧಗಳನ್ನು ಸೇವಿಸಲು ಮಾನಸಿಕವಾಗಿ ಸಿದ್ಧರಾಗಬೇಕು
- ಕ್ಷಯ ಬರದಂತೆ ತಡೆಗಟ್ಟಲು ಮೇಲೆ ನೀಡಿರುವ ಕ್ರಮಗಳನ್ನು ಅನುಸರಿಸುವುದು
ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗು ಎರಡಕ್ಕೂ ಕರ್ಚೀಫ್ನಿಂದ ಮರೆಮಾಡಿಕೊಳ್ಳಬೇಕು. - ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಯ ಜೊತೆ ಇರುವಾಗ ಅಥವಾ ವ್ಯವಹರಿಸುವಾಗ ಅವರಿಗೆ ರೋಗ ಹರಡದಂತೆ ಗಮನ ಹರಿಸುವುದು ಪ್ರತಿ ರೋಗಿಯ ಆದ್ಯ ಕರ್ತವ್ಯ.
- ಚಿಕಿತ್ಸೆ ಶುರು ಮಾಡಿದ ಸ್ವಲ್ಪ ದಿನಗಳಾದ ಮೇಲೆ ಕೆಲವೊಮ್ಮೆ ಆ ಮಾತ್ರೆಗಳಿಂದಲೂ ಅಡ್ಡಪರಿಣಾಮಗಳಾಗುವುದುಂಟು. ಅದಕ್ಕೆ ವೈದ್ಯರನ್ನು ದೂಷಿಸದೇ, ಸೂಕ್ತ ಸಮಾಲೋಚನೆ ಪಡೆಯುವುದು.
ಚಿಕಿತ್ಸಾ ಗುರಿ
ವಿಶ್ವ ಆರೋಗ್ಯ ಸಂಸ್ಥೆಯು 2020ರ ವೇಳೆಗೆ 2015ರಲ್ಲಿದ್ದ ಕ್ಷಯರೋಗಿಗಳ ಸಂಖ್ಯೆಯಲ್ಲಿ ಶೇ.35 ಹಾಗೂ ಕ್ಷಯದಿಂದ ಸಂಭವಿಸುವ ಪ್ರಮಾಣದಲ್ಲಿ ಶೇ.20ರಷ್ಟು ಕಡಿಮೆ ಮಾಡುವ ಹಾಗೂ 2035ರ ವೇಳೆಗೆ ಕ್ರಮವಾಗಿ ಶೇ.95 ಹಾಗೂ ಶೇ.90ರಷ್ಟು ಕಡಿಮೆ ಮಾಡುವ ಗುರಿ (End TB Strategy)ಹೊಂದಿದೆ. ಇವೆಲ್ಲವನ್ನು ಸಾಧಿಸಬೇಕಾದರೆ ಈ ಮೇಲೆ ತಿಳಿಸಿರುವ ಎಲ್ಲಾ ಅಂಶಗಳನ್ನು ಗಮನದಲ್ಲಿಡಬೇಕಿರುವುದು ಅತ್ಯವಶ್ಯಕ.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ದಿನದ ಸುದ್ದಿ
ಸಾಮಾಜಿಕ ಬದಲಾವಣೆಗೆ ಮಾದರಿಯಾಗಬೇಕಿದ್ದ ಯೋಜನೆಗೆ ದಾಖಲೆ, ಅನುದಾನ ಕೊರತೆ ಅಡ್ಡಿ; ಸಾವಿರಾರು ಅರ್ಜಿಗಳು ಬಾಕಿ
ಸುದ್ದಿದಿನ,ಶಿವಮೊಗ್ಗ: ಜಾತಿ-ಧರ್ಮದ ಕಟ್ಟುಪಾಡುಗಳನ್ನು ಮೀರಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವ ದಂಪತಿಗಳಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯೇ ಇದೀಗ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದೆ. ಸಮಾಜದ ವಿರೋಧವನ್ನು ಎದುರಿಸಿ ಹೊಸ ಬದುಕು ಕಟ್ಟಿಕೊಳ್ಳುವ ದಂಪತಿಗಳಿಗೆ ನೆರವಾಗಬೇಕಿದ್ದ ಯೋಜನೆಯಲ್ಲಿ ಹಣ ಬಿಡುಗಡೆ ವಿಳಂಬವಾಗುತ್ತಿದ್ದು, ಅರ್ಹ ಫಲಾನುಭವಿಗಳು ಸರ್ಕಾರದ ನೆರವಿಗಾಗಿ ಕಾಯುವಂತಾಗಿದೆ.
| ಹೈಲೈಟ್ಸ್: |
|
http://Visit : www.suddidina.com
ಅಂತರ್ಜಾತಿ ವಿವಾಹಕ್ಕೆ ಎಷ್ಟು ಪ್ರೋತ್ಸಾಹಧನ?
ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಪುರುಷ ಬೇರೆ ಜಾತಿಯ ಮಹಿಳೆಯನ್ನು ವಿವಾಹವಾದರೆ ₹2.50 ಲಕ್ಷ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಮಹಿಳೆ ಬೇರೆ ಜಾತಿಯ ಪುರುಷನನ್ನು ವಿವಾಹವಾದರೆ ₹3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.
ಆದರೆ, ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಹಣ ಪಾವತಿ ಮಾತ್ರ ಅದೇ ವೇಗದಲ್ಲಿ ನಡೆಯುತ್ತಿಲ್ಲ. 2025-26ನೇ ಸಾಲಿನಲ್ಲಿ 5,612 ಅರ್ಜಿಗಳು ಸಲ್ಲಿಕೆಯಾಗಿದ್ದು, 1,615 ಅರ್ಜಿಗಳಿಗೆ ಮೊದಲ ಹಂತದ ಪ್ರೋತ್ಸಾಹಧನಕ್ಕೆ ಅನುಮೋದನೆ ದೊರೆತಿದೆ. ಆದರೆ ಕೇವಲ 39 ಫಲಾನುಭವಿಗಳಿಗೆ ಮಾತ್ರ ಹಣ ಪಾವತಿಯಾಗಿದ್ದು, 3,997 ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. 909 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿಯಾಗಿವೆ.
ಹೊಸ ಸಾಲಿನಲ್ಲೂ ಅದೇ ಕಥೆ
2026-27ನೇ ಸಾಲಿನಲ್ಲಿ ಇದುವರೆಗೆ 2,194 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 61 ಅರ್ಜಿಗಳಿಗೆ ಅನುಮೋದನೆ ದೊರೆತಿದ್ದರೂ, ಮೊದಲ ಕಂತಿನ ಹಣ ಯಾರಿಗೂ ಪಾವತಿಯಾಗಿಲ್ಲ. 392 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿ ಉಳಿದಿವೆ.
ಅನುದಾನ ಹೆಚ್ಚಳವಾಗದಿರುವುದು ದೊಡ್ಡ ಸಮಸ್ಯೆ
ಅಂತರ್ಜಾತಿ ವಿವಾಹಗಳ ಸಾಮಾಜಿಕ ಸ್ವೀಕಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಏರಿಕೆಯಾಗಿದೆ. ಆದರೆ, ಅರ್ಜಿಗಳ ಸಂಖ್ಯೆಗೆ ಅನುಗುಣವಾಗಿ ಯೋಜನೆಯ ಅನುದಾನ ಹೆಚ್ಚಳವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಹಿಂದಿನ ವರ್ಷದ ಅರ್ಜಿಗಳೇ ಬಾಕಿ ಉಳಿಯುತ್ತಿರುವಾಗ ಹೊಸ ಅರ್ಜಿಗಳ ವಿಲೇವಾರಿಯೂ ವಿಳಂಬವಾಗುತ್ತಿದೆ.
2018-19ರಲ್ಲಿ ₹64.27 ಕೋಟಿ, 2019-20ರಲ್ಲಿ ₹90.42 ಕೋಟಿ, 2020-21ರಲ್ಲಿ ₹99.9 ಕೋಟಿ, 2021-22ರಲ್ಲಿ ₹171.84 ಕೋಟಿ ಹಾಗೂ 2022-23ರಲ್ಲಿ ₹94.62 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ ವಾರ್ಷಿಕವಾಗಿ ಬರುತ್ತಿರುವ ಅರ್ಜಿಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಈ ಮೊತ್ತ ಸಾಕಾಗುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿದೆ.
2026-27ನೇ ಸಾಲಿನ ಈವರೆಗಿನ ಅಂತರ್ಜಾತಿ ಪ್ರೋತ್ಸಾಹಧನ ಯೋಜನೆಯ ವಿವರ
- 2026-27ನೇ ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳು: 2,194
- ಮೊದಲ ಕಂತಿಗೆ ಅನುಮೋದನೆ: 61
- ಪ್ರೋತ್ಸಾಹ ಧನ ಪಾವತಿ: 00
- ಅಪೂರ್ಣ ಅರ್ಜಿಗಳು: 392
- ತಿರಸ್ಕಾರಗೊಂಡ ಅರ್ಜಿಗಳು: 02
ಸಾಮಾಜಿಕ ಧೈರ್ಯಕ್ಕೆ ಆರ್ಥಿಕ ಬೆಂಬಲ ಬೇಕಿದೆ
ಅಂತರ್ಜಾತಿ ವಿವಾಹದ ನಿರ್ಧಾರ ಕೈಗೊಳ್ಳುವ ಜೋಡಿಗಳು ಕೆಲವೊಮ್ಮೆ ಕುಟುಂಬದ ವಿರೋಧ, ಸಾಮಾಜಿಕ ಒತ್ತಡ, ಬಹಿಷ್ಕಾರ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಪ್ರೋತ್ಸಾಹಧನ ಕೇವಲ ಹಣಕಾಸಿನ ನೆರವಲ್ಲ; ಅದು ಹೊಸ ದಂಪತಿಗಳ ನಿರ್ಧಾರಕ್ಕೆ ಸಾಮಾಜಿಕ ಬೆಂಬಲದ ಸಂಕೇತವೂ ಹೌದು.
ಆದರೆ ಅರ್ಜಿ ಸಲ್ಲಿಸಿ ಅನುಮೋದನೆಗಾಗಿ, ನಂತರ ಹಣಕ್ಕಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾದರೆ ಯೋಜನೆಯ ಮೂಲ ಉದ್ದೇಶವೇ ದುರ್ಬಲವಾಗುತ್ತದೆ. ಹೀಗಾಗಿ ಬಾಕಿ ಅರ್ಜಿಗಳ ತ್ವರಿತ ವಿಲೇವಾರಿ, ದಾಖಲೆ ಪ್ರಕ್ರಿಯೆ ಸರಳೀಕರಣ ಹಾಗೂ ಅಗತ್ಯ ಅನುದಾನ ಹೆಚ್ಚಳಕ್ಕೆ ಸರ್ಕಾರ ಗಮನಹರಿಸಬೇಕಿದೆ.

ದಿನದ ಸುದ್ದಿ
ಅಪೌಷ್ಟಿಕತೆ ನಿವಾರಣೆಗೆ ಹೊಸ ಹೆಜ್ಜೆ; ಶಾಲೆ ಮುಗಿಯುವ ಮುನ್ನ ಮಕ್ಕಳಿಗೆ ಪೌಷ್ಟಿಕ ತಿನಿಸು
ಸುದ್ದಿದಿನ,ಹೂವಿನಹಡಗಲಿ: ಗಣಿ ಚಟುವಟಿಕೆಗಳಿಂದ ಬಾಧಿತ ಪ್ರದೇಶಗಳ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆ ಸುಧಾರಣೆಗೆ ಕರ್ನಾಟಕ ಗಣಿ ಮತ್ತು ಪರಿಸರ ಪುನಸ್ಥಾಪನೆ ನಿಗಮ (ಕೆಎಂಆರ್ಸಿಇ) ಹೊಸ ಹೆಜ್ಜೆ ಇಟ್ಟಿದೆ. ವಿಜಯನಗರ, ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಶೀಘ್ರದಲ್ಲೇ ಸಂಜೆ ಸ್ನ್ಯಾಕ್ಸ್ ವಿತರಿಸುವ ಯೋಜನೆ ರೂಪಿಸಲಾಗಿದೆ.
ಈ ಸಂಬಂಧ ನಾಲ್ಕು ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳ ಮೂಲಕ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ರವಾನೆಯಾಗಿದ್ದು, ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ಧತೆ ಆರಂಭಿಸಲಾಗಿದೆ. ಹೂವಿನಹಡಗಲಿ ತಾಲೂಕಿನಲ್ಲಿ ಈಗಾಗಲೇ ಮುಖ್ಯಗುರುಗಳ ಸಭೆ ನಡೆಸಿ ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಗಿದೆ.
http://Visit : www.suddidina.com
ಅಪೌಷ್ಟಿಕತೆ ತಡೆಗೆ ಪೌಷ್ಟಿಕ ಆಹಾರ
ಗಣಿ ಬಾಧಿತ ಪ್ರದೇಶಗಳಲ್ಲಿ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕ ಆಹಾರ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸಂಜೆ ಸಮಯದಲ್ಲಿ ಮಕ್ಕಳಿಗೆ ನೆನೆಸಿದ ಶೇಂಗಾ, ಮೊಳಕೆಯೊಡೆದ ಹೆಸರುಕಾಳು, ಚಕ್ಕಿ ಸೇರಿದಂತೆ ವಿವಿಧ ಪೌಷ್ಟಿಕ ಆಹಾರಗಳನ್ನು ನೀಡಲು ಉದ್ದೇಶಿಸಲಾಗಿದೆ. ಕೆಲವು ದಿನಗಳಲ್ಲಿ ಮೂಸಂಬಿ, ಕಿತ್ತಳೆ, ಸಪೋಟ ಮತ್ತಿತರ ಹಣ್ಣುಗಳನ್ನೂ ವಿತರಿಸುವ ವ್ಯವಸ್ಥೆ ಇರಲಿದೆ.
ಮಕ್ಕಳಲ್ಲಿ ಕಂಡುಬರುತ್ತಿರುವ ಅಪೌಷ್ಟಿಕತೆ ಹಾಗೂ ಪೌಷ್ಟಿಕಾಂಶದ ಕೊರತೆ ನಿವಾರಣೆಗೆ ಪೂರಕವಾಗುವಂತೆ ಈ ಯೋಜನೆ ರೂಪಿಸಲಾಗಿದೆ. ಶಾಲೆಯಲ್ಲಿ ಶಿಕ್ಷಣದ ಜತೆಗೆ ಮಕ್ಕಳ ಆರೋಗ್ಯಕ್ಕೂ ಆದ್ಯತೆ ನೀಡುವ ಪ್ರಯತ್ನ ಇದಾಗಿದೆ.
24,352 ಮಕ್ಕಳಿಗೆ ಪ್ರಯೋಜನ
ಹೂವಿನಹಡಗಲಿ ತಾಲೂಕಿನಲ್ಲಿ 138 ಸರ್ಕಾರಿ ಪ್ರಾಥಮಿಕ ಹಾಗೂ 27 ಪ್ರೌಢಶಾಲೆಗಳ ಒಟ್ಟು 24,352 ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಯೋಜನೆಗಾಗಿ ಕೆಎಂಆರ್ಸಿಇ ವತಿಯಿಂದ ₹10.64 ಕೋಟಿಗೂ ಹೆಚ್ಚು ಮೊತ್ತದ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಮೂರು ವರ್ಷಗಳ ಅವಧಿಗೆ ಒಟ್ಟು ಸುಮಾರು ₹33 ಕೋಟಿ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು, ಅಡುಗೆದಾರರು ಮತ್ತು ಸಹಾಯಕಿಯರ ವೆಚ್ಚಕ್ಕೂ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ. ಇದರಿಂದ ಯೋಜನೆ ಕೇವಲ ತಾತ್ಕಾಲಿಕ ಕ್ರಮವಾಗದೆ ನಿರಂತರವಾಗಿ ನಡೆಯುವ ನಿರೀಕ್ಷೆ ಮೂಡಿದೆ.
SATS ಮಾಹಿತಿ ಅಪ್ಡೇಟ್ ಸವಾಲು
ಆದರೆ ಯೋಜನೆ ಅನುಷ್ಠಾನಕ್ಕೆ ವಿದ್ಯಾರ್ಥಿಗಳ ನಿಖರ ಸಂಖ್ಯೆಯೇ ಪ್ರಮುಖ ಆಧಾರವಾಗಿದ್ದು, SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿ ಅಪ್ಡೇಟ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಪ್ರವೇಶ, ಶಾಲೆ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಬದಲಾವಣೆಯಾಗಿರುವುದರಿಂದ ಅಂತಿಮ ಪಟ್ಟಿ ಸಿದ್ಧಪಡಿಸುವುದು ಸವಾಲಾಗಿದೆ.
ಸೆಪ್ಟೆಂಬರ್ 5ರೊಳಗೆ ಮಾಹಿತಿ ನವೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ನಂತರ ಸಂಜೆ ಸ್ನ್ಯಾಕ್ಸ್ ವಿತರಣೆಗೆ ವೇಗ ಸಿಗುವ ಸಾಧ್ಯತೆಯಿದೆ.
ಶಿಕ್ಷಕರಿಗೆ ಹೆಚ್ಚುವರಿ ಹೊರೆ?
ಯೋಜನೆಯ ಉದ್ದೇಶ ಉತ್ತಮವಾಗಿದ್ದರೂ, ಅನುಷ್ಠಾನದ ಹೊಣೆಗಾರಿಕೆ ಶಿಕ್ಷಕರ ಮೇಲೆಯೇ ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ. ಈಗಾಗಲೇ ಎಐ ಹಾಜರಾತಿ, ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು ಹಾಗೂ ವಿವಿಧ ಡಿಜಿಟಲ್ ದಾಖಲೆಗಳ ನಿರ್ವಹಣೆಯಲ್ಲಿ ಶಿಕ್ಷಕರು ನಿರತರಾಗಿದ್ದಾರೆ. ನೆಟ್ವರ್ಕ್ ಸಮಸ್ಯೆಯೂ ಕೆಲವೊಮ್ಮೆ ತೊಂದರೆ ನೀಡುತ್ತಿದೆ.
ಶಾಲೆ ಮುಗಿಯುವ ವೇಳೆಯಲ್ಲಿ ಸ್ನ್ಯಾಕ್ಸ್ ವಿತರಣೆ, ದಾಖಲಾತಿ ಮತ್ತು ಮೇಲ್ವಿಚಾರಣೆ ಮತ್ತೊಂದು ಜವಾಬ್ದಾರಿಯಾಗಬಹುದು ಎಂಬುದು ಶಿಕ್ಷಕರ ಅಭಿಪ್ರಾಯ. ಹೀಗಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ತಲುಪಿಸುವ ಯೋಜನೆಯ ಜತೆಗೆ ಶಿಕ್ಷಕರ ಮೇಲಿನ ಆಡಳಿತಾತ್ಮಕ ಒತ್ತಡ ಕಡಿಮೆ ಮಾಡುವ ವ್ಯವಸ್ಥೆಯೂ ಅಗತ್ಯವಾಗಿದೆ.
ವಾರದ ಆರು ದಿನಗಳಲ್ಲಿ ವಿವಿಧ ಪೌಷ್ಟಿಕ ತಿನಿಸುಗಳು ಹಾಗೂ ಶನಿವಾರ ಹಣ್ಣು ವಿತರಿಸುವ ಉದ್ದೇಶವಿದ್ದು, ಸರಕಾರದ ಅಂತಿಮ ಸೂಚನೆ ಬಂದ ಬಳಿಕ ಯೋಜನೆಗೆ ಚಾಲನೆ ಸಿಗಲಿದೆ.

ಕ್ರೀಡೆ
ಕಲ್ಲು-ಮುಳ್ಳಿನ ದಾರಿಯಲ್ಲೂ ನಿಲ್ಲದ ಹೆಜ್ಜೆ; ತಾಯಿಯ ಛಲಕ್ಕೆ ಮ್ಯಾರಥಾನ್ನಲ್ಲಿ ಪ್ರಥಮ ಸ್ಥಾನ
ಸುದ್ದಿದಿನ,ಮುಂಬಯಿ: ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು ಕೆಲವೊಮ್ಮೆ ಮನುಷ್ಯನನ್ನು ಕುಗ್ಗಿಸುತ್ತವೆ. ಆದರೆ ತಾಯಿಯೊಬ್ಬಳಿಗೆ ಮಕ್ಕಳ ಭವಿಷ್ಯದ ಕನಸು ದೊಡ್ಡದಾಗಿದ್ದರೆ, ಆಕೆಯ ಮುಂದೆ ನೋವು, ಬಡತನ, ಅಡೆತಡೆ ಯಾವುದೂ ನಿಲ್ಲುವುದಿಲ್ಲ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನ 47 ವರ್ಷದ ರಮಾಬಾಯಿ ರಣವೀರ್ ಅವರ ಕಥೆ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಪತಿಯ ಅಕಾಲಿಕ ಅಗಲಿಕೆಯ ಬಳಿಕ ಇಬ್ಬರು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಹೋರಾಟ ನಡೆಸುತ್ತಿರುವ ರಮಾಬಾಯಿ, ಬರಿಗಾಲಿನಲ್ಲಿ ಮ್ಯಾರಥಾನ್ ಓಡಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
http://Visit : www.suddidina.com
ಕೂಲಿ ಕೆಲಸದಿಂದ ಅಡುಗೆ ಕೆಲಸದವರೆಗೆ
ಮುಂಬಯಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡ ಬಳಿಕ ರಮಾಬಾಯಿ ಕುಟುಂಬದ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಮ್ಮ ಹೆಗಲ ಮೇಲೆ ಹೊತ್ತರು. ಗದ್ದೆಗಳಲ್ಲಿ ಕೂಲಿ ಕೆಲಸ ಮಾಡುತ್ತಾ ಮಕ್ಕಳನ್ನು ಬೆಳೆಸಿದ ಅವರು, ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಅಂಬಾಜೋಗೈನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವೊಂದರಲ್ಲಿ ಅಡುಗೆ ಕೆಲಸಕ್ಕೂ ಸೇರಿದರು.
ದಿನವಿಡೀ ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಸೇರಿದಂತೆ ದುಡಿಮೆಯ ನಡುವೆಯೂ ಅವರ ಮನಸ್ಸಿನಲ್ಲಿದ್ದದ್ದು ಒಂದೇ ಕನಸು—ತಮ್ಮ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸ್ವಾವಲಂಬಿಗಳನ್ನಾಗಿ ಮಾಡುವುದು.
₹3 ಸಾವಿರಕ್ಕಾಗಿ ಆರಂಭವಾದ ಓಟ
ಮಕ್ಕಳ ವಿದ್ಯಾಭ್ಯಾಸದ ಅಗತ್ಯಕ್ಕೆ ಪುಸ್ತಕಗಳನ್ನು ಖರೀದಿಸಲು ಹಣ ಬೇಕಾಗಿತ್ತು. ಇದೇ ಸಂದರ್ಭದಲ್ಲಿ ‘ಅಮೃತ್ ದೌಡ್’ ಮ್ಯಾರಥಾನ್ ಕುರಿತು ಅವರಿಗೆ ಮಾಹಿತಿ ದೊರೆಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹3 ಸಾವಿರ ನೀಡಲಾಗುತ್ತದೆ ಎಂಬುದು ತಿಳಿದ ತಕ್ಷಣ ರಮಾಬಾಯಿ ಓಟದಲ್ಲಿ ಭಾಗವಹಿಸಲು ನಿರ್ಧರಿಸಿದರು.
ಯುವಕರು ಟ್ರ್ಯಾಕ್ಸೂಟ್ ಮತ್ತು ಶೂ ಧರಿಸಿ ಓಟಕ್ಕೆ ಸಜ್ಜಾಗಿದ್ದರೆ, ರಮಾಬಾಯಿ ಮಾತ್ರ ಸಾಮಾನ್ಯ ಸೀರೆಯಲ್ಲೇ ಸ್ಪರ್ಧೆಯ ಕಣಕ್ಕಿಳಿದರು. ಆರಂಭದಲ್ಲಿ ಕಾಲಿಗೆ ಚಪ್ಪಲಿ ಇದ್ದರೂ ಓಟದ ವೇಗ ಹೆಚ್ಚಾದಂತೆ ಅದು ಜಾರಲಾರಂಭಿಸಿತು.
ಚಪ್ಪಲಿ ಬಿಟ್ಟು ಬರಿಗಾಲಿನಲ್ಲಿ ಓಟ
ಗುರಿ ಮುಟ್ಟಬೇಕೆಂಬ ಛಲದ ಮುಂದೆ ಚಪ್ಪಲಿ ಅಡ್ಡಿಯಾಗಬಾರದು ಎಂದು ನಿರ್ಧರಿಸಿದ ರಮಾಬಾಯಿ, ಚಪ್ಪಲಿಯನ್ನು ಕೈಗೆತ್ತಿಕೊಂಡು ಬರಿಗಾಲಿನಲ್ಲೇ ಓಡತೊಡಗಿದರು. ರಸ್ತೆಯ ಕಲ್ಲು-ಮುಳ್ಳುಗಳು ಕಾಲಿಗೆ ಚುಚ್ಚಿದರೂ ಅವರು ಓಟ ನಿಲ್ಲಿಸಲಿಲ್ಲ.
ಸೀರೆಯ ಅಂಚನ್ನು ಸರಿಪಡಿಸಿಕೊಳ್ಳುತ್ತಾ, ನೋವನ್ನು ಮರೆತು ಗುರಿಯತ್ತ ಮುನ್ನುಗ್ಗಿದ ಅವರು ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿ ಮೊದಲಿಗರಾಗಿ ಫಿನಿಶ್ ಲೈನ್ ತಲುಪಿದರು. ಈ ಗೆಲುವಿನ ಹಿಂದೆ ಬಹುಮಾನದ ಹಣಕ್ಕಿಂತಲೂ ದೊಡ್ಡದಾದ ಒಂದು ಕನಸು—ಮಕ್ಕಳ ಭವಿಷ್ಯ—ಇತ್ತು.
ತಾಯಿಯ ಹಾದಿಯಲ್ಲೇ ಮಗಳ ಗೆಲುವು
ಈ ಮ್ಯಾರಥಾನ್ನಲ್ಲಿ ರಮಾಬಾಯಿಯ ಮಗಳು ಪೂಜಾ ಕೂಡ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುವುದು ವಿಶೇಷ. ತಾಯಿಯ ಪರಿಶ್ರಮದಿಂದ ಪ್ರೇರಣೆ ಪಡೆದ ಪೂಜಾ, ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿಯಾಗುವ ಸಂಕಲ್ಪ ಮಾಡಿದ್ದಾರೆ. ಮತ್ತೊಬ್ಬ ಮಗಳು ಬ್ಯಾಂಕಿಂಗ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಪೂಜಾಳ ಪರಿಶ್ರಮ ಮತ್ತು ರಮಾಬಾಯಿಯ ತ್ಯಾಗವನ್ನು ಗಮನಿಸಿದ ತರಬೇತಿ ಅಕಾಡೆಮಿಯ ನಿರ್ದೇಶಕರು ಪೂಜಾಳ ಶಿಕ್ಷಣ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಿದ್ದಾರೆ. ಹೀಗಾಗಿ ಒಂದು ಮ್ಯಾರಥಾನ್ ಗೆಲುವು ಕೇವಲ ₹3 ಸಾವಿರದ ಬಹುಮಾನಕ್ಕೆ ಸೀಮಿತವಾಗದೆ, ಕುಟುಂಬದ ಭವಿಷ್ಯಕ್ಕೆ ಹೊಸ ಆಶಾಕಿರಣವನ್ನೇ ಮೂಡಿಸಿದೆ.

-
ದಿನದ ಸುದ್ದಿ6 days agoಬಿಜೆಪಿ ರೈತ ಮೋರ್ಚಾದಿಂದ ಬಂದ್ಗೆ ಕರೆ; ಹಲವು ವೃತ್ತಗಳಲ್ಲಿ ಟೈರ್ಗೆ ಬೆಂಕಿ, ಬೆಂಕಿ ನಂದಿಸಿದ ಪೊಲೀಸರು
-
ದಿನದ ಸುದ್ದಿ6 days agoಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಸಿಹಿಸುದ್ದಿ: 4,744 ತಾಂತ್ರಿಕೇತರ ಹಾಗೂ ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಸಿದ್ಧತೆ
-
ದಿನದ ಸುದ್ದಿ6 days agoಮೈಸೂರು ದಸರಾದಲ್ಲಿ ಕಂಬಳದ ಕಳೆ: ಕೋಣಗಳ ಓಟಕ್ಕೆ ಭರದ ಸಿದ್ಧತೆ, ಪರಿಸರ ವಿವಾದವೂ ತೀವ್ರ
-
ಕ್ರೀಡೆ6 days agoಕಲ್ಲು-ಮುಳ್ಳಿನ ದಾರಿಯಲ್ಲೂ ನಿಲ್ಲದ ಹೆಜ್ಜೆ; ತಾಯಿಯ ಛಲಕ್ಕೆ ಮ್ಯಾರಥಾನ್ನಲ್ಲಿ ಪ್ರಥಮ ಸ್ಥಾನ
-
ದಿನದ ಸುದ್ದಿ6 days agoಅಪೌಷ್ಟಿಕತೆ ನಿವಾರಣೆಗೆ ಹೊಸ ಹೆಜ್ಜೆ; ಶಾಲೆ ಮುಗಿಯುವ ಮುನ್ನ ಮಕ್ಕಳಿಗೆ ಪೌಷ್ಟಿಕ ತಿನಿಸು
-
ದಿನದ ಸುದ್ದಿ6 days agoGold Silver Price Today: ಚಿನ್ನದ ಬೆಲೆ ಮತ್ತೆ ಏರಿಕೆ; ಬೆಳ್ಳಿ ದರದಲ್ಲಿ ₹5,000 ಕುಸಿತ, ಬೆಂಗಳೂರಿನ ಇಂದಿನ ದರ ಎಷ್ಟು?
-
ದಿನದ ಸುದ್ದಿ6 days agoSeptember 1 Rules Change: ಸೆ.1ರಿಂದ ಬದಲಾದ 6 ಪ್ರಮುಖ ನಿಯಮಗಳು; ವಿಮಾನ ಪ್ರಯಾಣದಿಂದ ತೆರಿಗೆ, LPG, ಗೋಲ್ಡ್ ಬಾಂಡ್ವರೆಗೆ ಹೊಸ ರೂಲ್ಸ್!
-
ದಿನದ ಸುದ್ದಿ5 days agoಮಹಿಳೆಯರ ಉಚಿತ ಪ್ರಯಾಣದ ನಡುವೆ ನಿಗಮಗಳಿಗೆ ಹಣಕಾಸಿನ ಸಂಕಷ್ಟ; ವೇತನ, ಡೀಸೆಲ್ ಖರೀದಿಗೂ ಎದುರಾಗುತ್ತಿದೆ ಒತ್ತಡ




