Connect with us

ದಿನದ ಸುದ್ದಿ

ಕೊರೋನಾ ನೋಡುವುದು ಜಾತಿ – ಧರ್ಮವನ್ನಲ್ಲ, ಬದಲಿಗೆ..!?

Published

on

ರಡನೇ ಮಹಾ ಯುದ್ಧದ ಬಗ್ಗೆ ನಾವೆಲ್ಲಾ ಸಾಕಷ್ಟು ವಿಚಾರಗಳನ್ನು ತಿಳಿದಿದ್ದೇವೆ. ವಿಶ್ವ ಕಂಡ ಘನಘೋರವಾದ ಆ ಯುದ್ಧದ ಸನ್ನಿವೇಶದಲ್ಲಿ ಇಡೀ ಜಗತ್ತು ತಲ್ಲಣಗೊಂಡಿತ್ತು. ಜಗತ್ತಿನ ಸಾರ್ವಭೌಮತ್ವಕ್ಕಾಗಿ ಒಂದೆಡೆ ಅಮೆರಿಕಾ ಮತ್ತೊಂದೆಡೆ ರಷ್ಯಾ ಪರಸ್ಪರ ಬಣಗಳನ್ನು ರಚಿಸಿಕೊಂಡ ಬಳಿಕ ಬಿಗಡಾಯಿಸಿದ ಯುದ್ಧದ ಪರಿಸ್ಥಿತಿ, ಬಲಿ ತೆಗೆದುಕೊಂಡ ಜೀವಗಳ ಸಂಖ್ಯೆ ಅಸಂಖ್ಯಾತ. ದೃಷ್ಟಿ ಹಾಯಿಸಿದಷ್ಟೂ ಹೆಣಗಳ ರಾಶಿ, ಗಾಯಾಳುಗಳ ಚೀರಾಟ, ಆರ್ತನಾದ. ಎಲ್ಲೆಲ್ಲೂ ಸ್ಮಶಾನ ಸದೃಶ ವಾತಾವರಣ. ಪ್ರಸ್ತುತ ಜಗತ್ತಿನಲ್ಲೂ ಯುದ್ಧವೊಂದು ನಡೆಯುತ್ತಿದೆ.

ಹಾಲಿ ಬಂದು ವಕ್ಕರಿಸಿರುವ ಕೊರೋನಾ ಎಂಬ ಪೀಡೆ ಅಘೋಷಿತ ಹಾಗೂ ಶಸ್ತ್ರರಹಿತ ಮೂರನೇ ಮಹಾ ಯುದ್ಧದ ವಾತಾವರಣವನ್ನು ನಿರ್ಮಿಸಿದೆ. ಗಡಿಗಳಿಗಾಗಿ, ಶಸ್ತ್ರಾಸ್ತ್ರಗಳಿಗಾಗಿ, ದೊಡ್ಡ ದೊಡ್ಡ ಭೂಪಟಗಳಿಗಾಗಿ ಹೋರಾಡಿದ ರಾಷ್ಟ್ರಗಳಾದಿಯಾಗಿ ಇಂದು ಇಡೀ ಜಗತ್ತೇ ಒಂದು ಬಣ, ಇದರ ವಿರೋಧಿ ಬಣವೇ ಕೊರೋನಾ ಎಂಬ ಮಹಾಮಾರಿ ಮತ್ತು ಸಂಹಾರಿ ವೈರಸ್. ಹೀಗೆ ತನ್ನ ಶಕ್ತಿ, ಪರಾಕ್ರಮಗಳನ್ನು ತೋರಿಸಲು ಹೊರಟಿದ್ದ ರಾಷ್ಟ್ರಗಳೆಲ್ಲ ಇಂದು ಸಂಪೂರ್ಣ ಸ್ತಬ್ಧವಾಗಿವೆ.

ಇಡೀ ವಿಶ್ವವನ್ನೇ ಕ್ಷಣ ಮಾತ್ರದಲ್ಲಿ ಬಲಿ ತೆಗೆದುಕೊಳ್ಳುವ ಶಸ್ತ್ರಗಳು, ಪರಮಾಣು ಬಾಂಬ್‍ಗಳು ಬದಿಗಿರಲಿ, ಪ್ರಾಣ ಉಳಿಸಿಕೊಳ್ಳಲು ಅಗತ್ಯವಾದ ಕನಿಷ್ಠ ಆಕ್ಸಿಜನ್ ಮಾಸ್ಕ್‍ಗಳನ್ನೂ ಸಹ ಸಜ್ಜುಗೊಳಿಸಲಾಗದೆ ಕೆಲವು ರಾಷ್ಟ್ರಗಳು ಇಂದು ನಲುಗುತ್ತಿವೆ. ಹೀಗೆ ಅತ್ಯಂತ ವೇಗವಾಗಿ ರಣಕೇಕೆ ಹಾಕುತ್ತಾ ದಾಂಗುಡಿ ಇಡುತ್ತಿರುವ ಕೊರೋನಾದ ಭೀಕರತೆಯನ್ನ ನೋಡಿದಾಗ ಮನುಷ್ಯನ ಜೀವನ ನೀರಿನ ಮೇಲೆ ಗುಳ್ಳೆಯಂತೆ ಎಂಬ ಮಾತು ಸತ್ಯವೆನಿಸುತ್ತಿದೆ.

ಇಂದೂ – ಅಂದೂ ಅಲಿಪ್ತ ನೀತಿ

ಮಹಾ ಯುದ್ಧದ ನಂತರ ಜರುಗಿದ ಶೀತಲ ಯುದ್ಧದ ಸಂದರ್ಭದಲ್ಲಿ ಜಗತ್ತಿನಲ್ಲಿ ಮತ್ತದೇ ಬಣಗಳ ಗೋಳು. ಆಗ ತಾನೇ ಸ್ವತಂತ್ರ್ಯ ಪಡೆದುಕೊಂಡಿದ್ದ ನಮ್ಮ ದೇಶ ಅಂತಹ ಸಂದರ್ಭದಲ್ಲಿ ಜಗತ್ತಿನೊಂದಿಗೆ ವ್ಯವಹರಿಸಲು ಬಳಸಿದ ದಾಳವೇ ಈ ಅಲಿಪ್ತ ನೀತಿ. ಶಾಂತಿಪ್ರಿಯರಾದ ಭಾರತೀಯರು, ಅಂದು ಯಾವುದೇ ಯುದ್ಧೋತ್ಸಾಹಿಗಳ ಗುಂಪು ಸೇರದೇ, ಬದಲಾದ ಸನ್ನಿವೇಶದಲ್ಲಿ ಅವರಿಂದ ಅನೇಕ ಪ್ರಯೋಜನಗಳನ್ನು ಪಡೆದಿದ್ದು ನಿಜ. ಕೊರೋನಾ ಸಮರದ ಸನ್ನಿವೇಶದಲ್ಲಿ ಭಾರತದ ಹೆಜ್ಜೆ ಇಂದು ಅದೇ ಆಗಿದೆ.

ವಿಪರ್ಯಾಸವೆಂಬಂತೆ ನಮ್ಮ ಸಂಶೋಧನೆಯಿಂದಾದ ಅನೇಕ ಜೀವ ರಕ್ಷಕ ಔಷಧಿಗಳಿಗಾಗಿ ಇಂದು ಆರ್ಥಿಕವಾಗಿ ಅತ್ಯಂತ ಬಲಿಷ್ಠವಾಗಿರುವ ರಾಷ್ಟ್ರಗಳೆಲ್ಲಾ ದುಂಬಾಲು ಬಿದ್ದಿವೆ. ಭಾರತ ಮಾತ್ರ ಇಂದಿಗೂ ಏಕಾಂಗಿಯಾಗಿಯೇ ಕೊರೋನಾ ವಿರುದ್ಧ ತೊಡೆ ತಟ್ಟಿದೆ. ಅಲ್ಲದೇ ಅನೇಕ ರಾಷ್ಟ್ರಗಳ ಕೈಯನ್ನೂ ಹಿಡಿಯುತ್ತಿದೆ. ಬದುಕು, ಬದುಕಲು ಬಿಡು ಎಂಬಂತೆ ಈ ಔದಾರ್ಯವಂತ ರಾಷ್ಟ್ರದ ಗುಣ ಇದೀಗ ಮತ್ತೊಮ್ಮೆ ಸಾಬೀತಾಗಿದೆ.

ರೇಸ್‍ನಲ್ಲಿ ಗೆಲುವು ಯಾರಿಗೆ?

ಕೆಲವು ದಿನಗಳ ಹಿಂದೆ ಇಡೀ ಮನುಕುಲವೇ ಕಾಲಿಗೆ ಚಕ್ರಕಟ್ಟಿಕೊಂಡಂತೆ ಕಾಲದ ಪರಿವೇ ಇಲ್ಲದೆ ಅದೆಲ್ಲಿಗೆ ರೇಸ್ ಓಡುತ್ತಿತ್ತೋ ತಿಳಿಯದು. ಇದೀಗ ಕೊರೋನಾ ಆ ಚಕ್ರಕ್ಕೊಂದು ಬ್ರೇಕ್ ಹಾಕಿದೆ. ಬೆಳ್ಳಂಬೆಳಗ್ಗೆಯೇ ಕಿವಿಗಡಚಿಕ್ಕುವ ಕಾರ್ಖಾನೆಗಳ ಸದ್ದು, ಇನ್ನೊಂದೆಡೆ ಜೀವನ ಕಟ್ಟಿಕೊಳ್ಳಲು ಹೊರಟ ಕೋಟ್ಯಾಂತರ ಮಂದಿಯ ವಾಹನಗಳ ದಂಡು, ಅಲ್ಲಲ್ಲಿ ಸಾತ್ವಿಕರು, ಆಸ್ತಿಕರು, ಒಂದಷ್ಟು ಸಮಾಜಮುಖೀ ಚಿಂತನೆಯುಳ್ಳವರ ಸಮೂಹ, ಮಗದೊಮ್ಮೆ ಸಂಪತ್ತಿನ ಶೇಖರಣೆಯ ಹಪಹಪಿಗೆ ಬಿದ್ದ ಸ್ವಾರ್ಥಿಗಳ ಹಿಂಡು, ಮಗ್ಗುಲಿಗೆ ಹೊರಳಿದರೆ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ದಗಲ್ಬಾಜಿ, ಭೂಗತ ಲೋಕ, ಪಾಪಿಗಳ ಕೂಪ.

ಅಬ್ಬಬ್ಬಾ ! ಇದಾಗಿತ್ತಾ ಜಗತ್ತಿನ ಓಟ? ಆದರೀಗ ಇದನ್ನೆಲ್ಲಾ ಹಿಂದಿಕ್ಕಿ ಆರ್ಭಟಿಸುತ್ತಾ, ಕೇಕೇ ಹಾಕುತ್ತಾ ನಾಗಾಲೋಟದಿಂದ ಓಡುತ್ತಿರುವುದು ಕೊರೋನಾ ಮಾತ್ರ ! ಈ ರನ್ನಿಂಗ್ ರೇಸ್ ನಿಜಕ್ಕೂ ಭೀಕರ ಹಾಗೂ ಆಘಾತಕಾರಿ. ಸ್ನೇಹ, ಸಂಬಂಧಗಳ ಮೌಲ್ಯವನ್ನು ಮರೆತು ಸಾಗುತ್ತಿದ್ದ ಯಂತ್ರ ‘ಮಾನವ’ರಂತಹ ಜೀವಿಗಳ ಜೀವ ಹಿಂಡಲು ಬಂದಿರುವ ಈ ಸಾವಿನ ಓಟದಲ್ಲಿ ಸದ್ಯಕ್ಕಂತೂ ಗೆಲುವು ಸಾಧಿಸುತ್ತಿರುವುದು ಕೊರೋನಾ ಮಾತ್ರ ಎಂಬುದು ಕಟು ಸತ್ಯ. ಹೀಗೂ ಪಂದ್ಯ ಗೆಲ್ಲಬಹುದೆಂದು ತಿಳಿಸುತ್ತಿದೆ ಈ ನಂಜು. “ಮಾನವ ಜನ್ಮ ಬಹು ದೊಡ್ಡದು, ಅದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ” ಎಂದು ಇದಕ್ಕೇ ಹೇಳಿರುವುದು ದಾಸ ಶ್ರೇಷ್ಠರು.

ಶಸ್ತ್ರಾಸ್ತ್ರಗಳಿಗಿಂತ ಔಷಧಿಯೇ ಮುಖ್ಯವಾಗಿದೆ

ಅಮೆರಿಕಾದ ಮಾಜಿ ಅಧ್ಯಕ್ಷರಾದ ಐಸನ್ ಹೋವರ್ ಶಸ್ತ್ರಾಸ್ತ್ರ ಪೈಪೋಟಿಯನ್ನು ಕುರಿತು ಹೀಗೆ ವ್ಯಾಖ್ಯಾನಿಸುತ್ತಾರೆ “ಈ ಜಗತ್ತು ಶಸ್ತ್ರಾಸ್ತ್ರಗಳ ತಯಾರಿಕೆಗೆ ಸುರಿಯುತ್ತಿರುವ ಭಾರೀ ಪ್ರಮಾಣದ ಹಣ ಮೇಧಾವಿ ವಿಜ್ಞಾನಿಗಳ ಜ್ಞಾನವನ್ನು, ಮಕ್ಕಳ ಸುಂದರ ಭವಿಷ್ಯದ ಕನಸನ್ನು, ಕಾರ್ಮಿಕರ ಶ್ರಮವನ್ನು ಪೋಲು ಮಾಡುತ್ತಿದೆ”. ಪ್ರಸ್ತುತ ಜಗತ್ತಿನ ಪರಿಸ್ಥಿತಿ ನೋಡಿದರೆ ಇದು ನಿಜವೆನಿಸುತ್ತದೆ. ಇದೀಗ ಜಗತ್ತಿನೆಲ್ಲೆಡೆ ಜೀವ ರಕ್ಷಕ ಔಷಧಿಗಳ ತೀವ್ರ ಕೊರತೆ ಎದುರಾಗಿದೆ. ದೇಶಗಳು ತಮ್ಮ ರಕ್ಷಣೆಯ ವಿಚಾರ ಬಂದಾಗ ಕೆಲವು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ನಿಜ.

ಆದರೆ ಅವು ಗುಣಾತ್ಮಕ ಮತ್ತು ಪ್ರಮಾಣಾತ್ಮಕವಾಗಿರಬೇಕಷ್ಟೆ. ಹೀಗಾಗಿ ಇಂದು ಜಗತ್ತಿನೆಲ್ಲೆಡೆ ಶಸ್ತ್ರಾಸ್ತ್ರಗಳಿಗಿಂತ ತುರ್ತಾಗಿ ಅಗತ್ಯವಿರುವ ಔಷಧಿಗಳನ್ನ ಅಭಿವೃದ್ಧಿಪಡಿಸುವ ಹೊಣೆ ಕೇಳಿಬರುತ್ತಿದೆ. ಹಾಲಿ ಜಗತ್ತಿನಲ್ಲಿ ಕೊರೋನಾ ವೈರಸ್‍ಗಿಂತ ದೊಡ್ಡ ಅಸ್ತ್ರ ಯಾವುದೂ ಇಲ್ಲವೆನ್ನುವಂತಾಗಿದೆ. ಸಮಸ್ತ ವಿಶ್ವದಲ್ಲಿಂದು ಕೊರೋನಾ ಯುದ್ಧ ಮಾಡುತ್ತಿದೆ. ಈ ಯುದ್ಧ ಗೆಲ್ಲಲು ಬೇಕಿರುವುದು ಭಾರೀ ಅನಾಹುತ ಸೃಷ್ಟಿಸಬಲ್ಲ ಪರಮಾಣು ಬಾಂಬ್ ಅಥವಾ ಕಿಲೋಮೀಟರ್‍ಗಟ್ಟಲೆ ಚಿಮ್ಮುವ ಕ್ಷಿಪಣಿಗಳಲ್ಲ. ಬದಲಿಗೆ ಜೀವ ರಕ್ಷಕ ಔಷಧಗಳು, ಶಸ್ತ್ರ ಹಿಡಿದು ಹೋರಾಡುವ ಸೈನಿಕರಲ್ಲ; ಪ್ರಾಣ ಉಳಿಸಬಲ್ಲ ವೈದ್ಯ ಸಮೂಹ.

ಇತಿಹಾಸ ಮರುಕಳಿಸುತ್ತಿದೆ

ನಮ್ಮ ಹಿಂದೂಸ್ಥಾನದ ಅವಿಭಾಜ್ಯದ ಅಂಗಗಳಾದ ವೇದೋಪನಿಷತ್ತುಗಳ ಬಗ್ಗೆ ನಮಗೆಲ್ಲಾ ತಿಳಿದೇ ಇದೆ. ವೇದಗಳ ಕಾಲದ ಜನರು ಅತ್ಯಂತ ಸಾತ್ವಿಕರು, ದೈವ ಭಕ್ತಿಯುಳ್ಳವರು, ಪರಸ್ಪರ ಸಹಕಾರ ಮನೋಭಾವ ಉಳ್ಳವರೂ ಆಗಿದ್ದರು. ಅಂದಿನ ಅವರ ಜೀವನ ಪದ್ಧತಿ, ವಿದ್ಯಾಭ್ಯಾಸ, ಧಾರ್ಮಿಕ ಆಚರಣೆಗಳು, ಸ್ನಾನ, ಮಡಿ, ಮೈಲಿಗೆ, ಸಂಪ್ರದಾಯಗಳು, ಪುಷ್ಟಿ ಕೊಡುತ್ತಿದ್ದ ಆಹಾರ ಪದ್ಧತಿ, ವಿಹಾರ ಎಲ್ಲವೂ ವಿಶಿಷ್ಟ ಹಾಗೂ ವಿಭಿನ್ನ. ನಮಗೆ ಅರಿವಿದ್ದಂತೆ ಅವರೆಲ್ಲಾ ನಿಸರ್ಗದ ಆರಾಧಕರಾಗಿದ್ದರು.

ಜೀವ ಜಗತ್ತು ತತ್ತರಿಸುವ ಹೋಗಿರುವ ಸದರಿ ಕೊರೊನಾ ಕಾಲದಲ್ಲಿ ಜನತೆಗೆ ಇಂದು ಎಲ್ಲಿಲ್ಲದ ದೈವ ಭಕ್ತಿ, ಶುಚಿತ್ವದ ಅರಿವು, ದೇಸೀ ಆಹಾರದತ್ತ ಆಸಕ್ತಿ, ಹೀಗೆ ನಾನ ಬಗೆಯ ಪರಿಕಲ್ಪನೆಗಳತ್ತ ಮನಸ್ಸು ಹಾಯುತ್ತಿದೆ. ದುರದೃಷ್ಟವಶಾತ್ ಇಂತಹ ಯೋಚನೆ ಹಾಗೂ ಯೋಜನೆಗಳು ಎಂದೋ ಬರಬೇಕಿತ್ತಷ್ಟೇ. ಇತಿಹಾಸ ಮರುಕಳಿಸುತ್ತದೆ ಎಂಬ ಪ್ರಸಿದ್ಧ ಹೇಳಿಕೆಗೆ ಇಂದು ಜೀವ ಬಂದಂತಾಗಿದೆ. ಜೀವನ ಶೈಲಿಯ ಬಗ್ಗೆ ಇರಬೇಕಾದ ಕಿಂಚಿತ್ ಪ್ರಜ್ಞೆಯನ್ನೂ ಮರೆತಿದ್ದ ಮನುಷ್ಯರಿಗಿಂದು ಕೊರೋನಾ ಒಂದು ಪಾಠ ಕಲಿಸುತ್ತಿರುವುದಂತೂ ಸತ್ಯ.

ಕೊರೋನಾ ಒಂದೆಡೆ ತನ್ನ ಸಾವಿನ ಗಂಟೆಯನ್ನು ಬಾರಿಸುತ್ತಲೇ ಸಾಗುತ್ತಿದೆ ಮತ್ತೊಂದೆಡೆ ಜಂಕ್ ಫುಡ್‍ಗಳ ಮೊರೆ ಹೋಗಿ ಸಣ್ಣ ವಯಸ್ಸಿನಲ್ಲೇ ಇಹಲೋಕ ಯಾತ್ರೆ ಮಾಡುತ್ತಿದ್ದ ಅನೇಕ ಜನರ ಪ್ರಾಣವನ್ನೂ ಉಳಿಸುತ್ತಿದೆ. ಒಂದರ್ಥದಲ್ಲಿ ಕೊರೋನಾ ಅತ್ಯಂತ ಕ್ರೂರಿಯೂ ಹೌದು, ಅದರ ವಿರುದ್ಧ ಹೋಗದವರಿಗೆ ಪರೋಕ್ಷವಾಗಿ ರಕ್ಷಕನೂ ಹೌದು !

ಸಮರ ಸೇನಾನಿಗಳಿಗೊಂದು ಸೆಲ್ಯೂಟ್

ಜಗತ್ತನ್ನು ಕಿತ್ತು ತಿನ್ನುತ್ತಿರುವ ಕೊರೋನಾ ವೈರಸ್ಸನ್ನು ಬಡಿದೋಡಿಸುವಲ್ಲಿ ಶ್ರಮಿಸುತ್ತಿರುವ ವೈದ್ಯರು, ರಕ್ಷಣೆಗೆ ನಿಂತಿರುವ ಪೊಲೀಸರು ಮತ್ತು ಇಡೀ ಜಗತ್ತಿಗೆ ಅನ್ನವನಿಕ್ಕುತ್ತಿರುವ ನಮ್ಮ ಅನ್ನದಾತರ ಪಾತ್ರ ಅತ್ಯಂತ ಶ್ಲಾಘನೀಯ. ಒಂದಡೆ ತಮ್ಮ ಜೀವ ಹಾಗೂ ಜೀವನವನ್ನೇ ಪಣಕ್ಕಿಟ್ಟು ಕೋಟ್ಯಾಂತರ ಸೋಂಕಿತರನ್ನು ಶುಶ್ರೂಷೆ ಮಾಡುತ್ತಿರುವ ವೈದ್ಯ ಸಮೂಹ, ಇನ್ನೊಂದೆಡೆ ಹಗಲಿರುಳೆನ್ನದೆ ಸೋಂಕು ತಗಲುದಂತೆ ಇಡೀ ಜಗತ್ತನ್ನೇ ನಿಯಂತ್ರಿಸುತ್ತಿರುವ ಪೊಲೀಸ್ ಸಮೂಹ, ಮಗದೊಂದೆಡೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ನಿಸ್ವಾರ್ಥವಾಗಿ ಇಡೀ ಜಗಕ್ಕೇ ಅನ್ನವನಿಕ್ಕುತ್ತಿರುವ ರೈತ ಬಾಂಧವರನ್ನು ಈ ಭೂ ಖಂಡ ಎಂದಿಗೂ ಮರೆಯುವಂತಿಲ್ಲ.

ತಲ್ಲಣಗೊಂಡಿರುವ ಜಗತ್ತಿಗೆ ನಿಜಕ್ಕೂ
ಮಾತೃವಿನಂತೆ ಸಾಂತ್ವನ ಹೇಳುತ್ತಿದೆ ಈ ಸಮುದಾಯ. ವೈದ್ಯ ತಂದೆ ತಾಯಿಯನ್ನೂ ಮುಟ್ಟದೆ ರೋಧಿಸುತ್ತಿರುವ ಪುಟಾಣಿಗಳ ಕರುಳು ಹಿಂಡುವ ದೃಶ್ಯ, ಮನೆ ಮಠ ಎಲ್ಲವನ್ನೂ ಮರೆತು, ಕೊನೆಗೆ ತಮ್ಮ ರಕ್ಷಣೆಯ ಬಗ್ಗೆಯೂ ಚಿಂತಿಸದೆ ಎಡಬಿಡದೆ ದುಡಿಯುತ್ತಿರುವ ಪೊಲೀಸರ ಕಾರ್ಯ ನಿಜಕ್ಕೂ ಸ್ತುತ್ಯಾರ್ಹ. ಒಂದು ವೇಳೆ ವೈದ್ಯರೇನಾದರೂ ಸುಮ್ಮನಾದರೆ ಮಣ್ಣು ಸೇರಬೇಕಾಗುತ್ತದೆ, ಹಾಗೆಯೇ ನಮ್ಮೆಲ್ಲರ ಅನ್ನದಾತ ಕೈ ಚೆಲ್ಲಿ ಕುಳಿತರೆ ಮಣ್ಣು ತಿನ್ನಬೇಕಾಗುತ್ತದೆ.

ಇವರೊಟ್ಟಿಗೆ ಕೊರೋನಾ ನಿರ್ಮೂಲನಕ್ಕಾಗಿ ಸೆಣಸಾಡುತ್ತಿರುವ ಅನೇಕ ದಾದಿಯರು, ಆರೋಗ್ಯ ಕಾರ್ಯಕರ್ತರು, ಸಫಾಯಿ ಕರ್ಮಚಾರಿಗಳು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಜ ಸೇವೆಗೈಯುತ್ತಿರುವ ಸಮಾಜ ಸೇವಕರು, ಚಾಲಕರು ಇನ್ನಿತರರಿಗೂ ಈ ಮೂಲಕ ಗೌರವವನ್ನು ಸಲ್ಲಿಸೋಣ.ಸಂಪೂರ್ಣ ಜಗತ್ತಿಗೇ ಕೊರೊನಾ ಬೀಗ ಹಾಕಿರುವ ಈ ಸಂದರ್ಭದಲ್ಲಿ ನಾವು ಇಂದು ನಿಜಕ್ಕೂ ಇವರನ್ನೆಲ್ಲಾ ದೇವರಿಗಿಂತಲೂ ಮಿಗಿಲಾಗಿ ಆರಾಧಿಸಬೇಕಿದೆ ಮತ್ತು ಅವರ ವೃತ್ತಿಗಳನ್ನು ಮರ್ಯಾದಿಸಬೇಕಿದೆ.

ಇನ್ನೂ ಕಲಿಯಬೇಕಿದೆ ಜಾತ್ಯಾತೀತ ಹಾಗೂ ಧರ್ಮಾತೀತ ಪಾಠ

ಶತಮಾನಗಳ ಹಿಂದೆಯೇ ನಮ್ಮ ಈ ಜಗತ್ತು ಕಂಡ ಮಹಾನ್ ದಾರ್ಶನಿಕರಾದ ಆಚಾರ್ಯ ಸಮುದಾಯ, ಬುದ್ಧ, ಬಸವಣ್ಣ, ಮಹಾವೀರ, ಅಂಬೇಡ್ಕರ್ ಹಾಗೂ ಅನೇಕ ದಾಸವರೇಣ್ಯರು ವಿವಿಧ ಬಗೆಯ ಸಮಾನತೆಯ ಬಗ್ಗೆ ಮಾತನಾಡಿದ್ದರು. ಇವರಲ್ಲದೆ ಅನೇಕ ಕವಿಗಳು, ಬುದ್ಧಿಜೀವಿಗಳು, ಸಮಾಜ ಸುಧಾರಕರು, ಸಂವಿಧಾನಗಳು, ಸರ್ಕಾರಗಳು ಇದನ್ನೇ ಸಾರಿ ಹೇಳಿರುವುದು ಅತಿಶಯೋಕ್ತಿಯೇನಲ್ಲ. ಆದರೆ ಮನುಷ್ಯ ಜೀವಿ ಇದನ್ನೆಲ್ಲಾ ಮರೆತು ತನ್ನದೇ ಆದ ಹಮ್ಮು-ಬಿಮ್ಮುಗಳೊಂದಿಗೆ ಸಾಗುತ್ತಿದ್ದ.

ಕುಲಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲಯನೇನಾದರು ಬಲ್ಲಿರಾ? ಎಂಬ ದಾಸ ವಾಣಿಯನ್ನು ಮರೆತು ಸಾಗುತ್ತಿದ್ದ. ಆದರೆ ಈಗ ಆರ್ಭಟಿಸುತ್ತಿರುವ ಕೊರೋನಾ ಪೀಡೆಗೆ ಜಾತಿ, ಮತ, ಧರ್ಮ ಯಾವುದೂ ಲೆಕ್ಕಕ್ಕಿಲ್ಲ. ಅದರ ಉದ್ದೇಶ ಅತ್ಯಂತ ಕ್ರೂರವಾದ ಬಲಿಯಷ್ಟೇ. ಅಂತಹ ಅನಪೇಕ್ಷಿತ ಮತ್ತು ದುರಂತಕಾರಿ ತತ್ವಗಳನ್ನು ಬದಿಗಿಟ್ಟು ಇಂದು ಎಲ್ಲರೂ ಸೇರಿ ಕೊರೋನಾ ವಿರುದ್ಧದ ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಬೇಕಿದೆ. ನೆನಪಿರಲಿ, ಕೊರೋನಾ ನೋಡುವುದು ಜಾತಿ ಅಥವಾ ಧರ್ಮವನ್ನಲ್ಲ, ಬದಲಿಗೆ ಮನುಷ್ಯನ ಚರ್ಮ !! ಸೋಂಕಿತರ ಸ್ಪರ್ಶವಾಯಿತೆಂದರೆ ಸಾಕು, ಆಯಸ್ಸು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಾಗುತ್ತದೆ.

ಈಗಲಾದರೂ ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ ಜೈನರುದ್ಯಾನ ಎಂಬ ಕುವೆಂಪುರವರ ಗೀತೆಯ ಸಾರವನ್ನು ತಿಳಿಯಬೇಕಿದೆ ಹಾಗೂ ಅದೇ ಹಾದಿಯಲ್ಲಿ ಅರಿತು ನಡೆಯಬೇಕಿದೆ. ಎಲ್ಲೆಡೆ ಇಂದು ಇದೇ ದನಿ ಮಾರ್ದನಿಗೊಳ್ಳಬೇಕಿದೆ. ಜೀವ ಉಳಿಸಲು ಹೊರಟಿರುವ ವೈದ್ಯರು, ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತೆಯರ ಮೇಲಿನ ದೌರ್ಜನ್ಯಗಳು ನಿಲ್ಲಬೇಕಿದೆ. ಅಂತಹ ವಿಚ್ಛಿದ್ರಕಾರಿ ಗುಂಪುಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಲೂ ಬೇಕಿದೆ. ಇಲ್ಲವಾದಲ್ಲಿ ಇಷ್ಟು ವರ್ಷಗಳ ಕಾಲವಿದ್ದ ನಾಗರೀಕ ಸಮಾಜ ಇದೇನಾ? ಎಂಬ ಪ್ರಶ್ನೆ ಉದ್ಭವಿಸದೆ ಇರಲಾರದು.

ನಿಲ್ಲಬೇಕಿದೆ ಪ್ರತಿಭಾ ಪಲಾಯನ

ಬದುಕುವುದಕ್ಕಾಗಿ ಹಣ ಬೇಕೇ ಹೊರತು, ಹಣಕ್ಕಾಗಿಯೇ ಬದುಕಬಾರದೆಂಬುದು ಅತ್ಯಂತ ಜನಪ್ರಿಯವಾದ ಮಾತು. ಮನುಷ್ಯನ ಆಯಸ್ಸು ಕ್ಷೀಣಿಸುತ್ತಿರುವ ಈ ಜಾಯಮಾನದ ಮನುಷ್ಯರು ಈ ಮಾತನ್ನು ಮರೆತು ಸಾಗುತ್ತಿದ್ದಾರೆ. ಹೆತ್ತ ತಾಯಿ, ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂಬಂತೆ ಮಾತೃ ಭೂಮಿಯ ಋಣ ತೀರಿಸಲು ಇರುವ ಏಕೈಕ ಅವಕಾಶವೇ ಪ್ರತಿಭಾ ಪಲಾಯನವನ್ನು ಮಾಡದಿರುವುದು.

ಅಖಂಡ ಹಿಂದೂಸ್ಥಾನಕ್ಕೆ ಸೇರಿದ ಸಾವಿರಾರು ಮಂದಿ ವೈದ್ಯರು, ವಿಜ್ಞಾನಿಗಳು, ಶಿಕ್ಷಕರು, ಕೌಶಲ್ಯಗಾರರು ಇನ್ನಿತರರು ದೇಶ ತೊರೆದು ಹೋಗಿ, ಪರದೇಶಗಳಲ್ಲಿ ಜೀವನ ಕಟ್ಟಿಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ ಭಾರತದ ಉಪಖಂಡಕ್ಕೆ ಇಂತವರ ಅಗತ್ಯತೆ ತುಂಬಾ ಇದೆ. ಅವರೆಲ್ಲಾ ಇಲ್ಲೇ ಇದ್ದುಕೊಂಡು ಮಾತೃ ಭೂಮಿಗೆ ಸೇವೆ ಸಲ್ಲಿಸುವ ಕೈಂಕರ್ಯ ಮಾಡಿದ್ದರೆ ಈ ವೇಳೆಗೆ ನಮ್ಮ ದೇಶದ ಕೀರ್ತಿ ಇನ್ನಷ್ಟು ವಿಸ್ತರಿಸಿ, ವ್ಯಾಪಿಸುತ್ತಿತ್ತು. ಹಿರಿಯೊಬ್ಬರು ಹೇಳಿದ್ದು ನೆನಪು, “ಇಂದಿನ ಶಿಕ್ಷಣ ಪದ್ಧತಿ, ಭವಿಷ್ಯದಲ್ಲಿ ಹೇಗೆ ಕೂಲಿ ಮಾಡಿ ಜೀವನ ಸಾಗಿಸಬೇಕೆಂಬುದನ್ನಷ್ಟೇ ತಿಳಿಸುತ್ತಿದೆ” ಇಂತಹ ಅಪವಾದಗಳನ್ನು ದೂರ ಮಾಡಿ ಹೆಚ್ಚಿನ ಪ್ರಮಾಣದ ಆರ್ಥಿಕ ಚಟುವಟಿಕೆ ಮಾಡುವ ಮಂದಿಯ ಜೊತೆಜೊತೆಗೇ ಈ ಹೆಮ್ಮೆಯ ರಾಷ್ಟವನ್ನು ಬೌದ್ಧಿಕವಾಗಿಯೂ ಕಟ್ಟಿ ಬೆಳೆಸುವ ಪಟುಗಳ ಅಗತ್ಯ ನಮಗಿಂದು ಇದೆ.

ವಿಪರ್ಯಾಸವೆಂಬಂತೆ ನಮ್ಮ ದೇಶವನ್ನು
ಧಿಕ್ಕರಿಸಿ ಹೋದ ಲಕ್ಷಾಂತರ ಜನರು ಇಂದು ಪ್ರಾಣ ಉಳಿಸಿಕೊಳ್ಳಲು ಪರದೇಶಗಳಿಂದ ಪುನಃ ತಾಯ್ನಾಡಿಗೆ ಮರಳುವಂತಾಗಿದೆ. ಅವಕಾಶಗಳು ಬೇಕೆಂದರೆ ಅವುಗಳನ್ನು ನಾವುಗಳೇ ಸೃಷ್ಟಿಸಿಕೊಳ್ಳಬೇಕೇ ಹೊರತು, ಪಲಾಯನ ಮಾಡುವುದು ಸರಿಯಾದ ಧೋರಣೆಯಲ್ಲ. ಈ ಹಿನ್ನೆಲೆಯಲ್ಲಿ ಇನ್ನಾದರೂ ಪ್ರತಿಭಾ ಪಲಾಯನ ನಿಂತು ಜಗತ್ತಿನ ಮುಂಚೂಣಿ ರಾಷ್ಟ್ರಗಳು ನಮ್ಮತ್ತ ತಿರುಗಿ ನೋಡುವಂತೆ ಮಾಡುವ ಕಾಲ ಸನ್ನಿಹಿತವಾಗಬೇಕಿದೆ.

ಆಗಿಂದಾಗ್ಗೆ ಬೇಕಿದೆ ಸ್ವಯಂಪ್ರೇರಿತ ಲಾಕ್‍ಡೌನ್

ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳು ಇಂದು ನಮ್ಮ ಲಾಕ್‍ಡೌನ್ ನಿಲುವನ್ನು ಅಂಗೀಕರಿಸಿ ನಮ್ಮದೇ ಹಾದಿಯನ್ನು ತುಳಿಯುತ್ತಿವೆ. ಇಂದಿನ ಸ್ಮಶಾನ ಸದೃಶ ವಾತಾವರಣದಲ್ಲಿ ಕೊರೋನಾಕ್ಕೆ ‘ಛೀಮಾರಿ’ ಹಾಕಲು ಲಾಕ್‍ಡೌನ್ ಒಂದೇ ನಿಜವಾದ ಔಷಧಿಯಾಗಿದೆ. ಇದರಿಂದ ನಮಗೆ ಅನಾನುಕೂಲಗಳು ಹೆಚ್ಚು ಆಗಿದ್ದರೂ, ನಮ್ಮ ಹೆಮ್ಮೆಯ ಪ್ರಧಾನಿಯವರಾದ ಮೋದಿಯವರು ಹೇಳಿದಂತೆ ಇಂದು ನಾವು ಜೀವ ಉಳಿಸಿಕೊಂಡರೆ ಮುಂದೆ ಜೀವನ ಎನ್ನುವಂತಾಗಿದೆ. ಒಂದೆಡೆ ಕೊರೋನಾದಿಂದ ಸಾವು ಹೆಚ್ಚುತ್ತಲೂ ಇದೆ, ಮತ್ತೊಂದೆಡೆ ವಿಶ್ವವೇ ಹೊಸ ಚಿಗುರೊಡೆದಂತೆ ಭಾಸವಾಗುತ್ತಿದೆ.ಪ್ರಕೃತಿ ಮಾತೆ ನಳನಳಿಸುತ್ತಿದ್ದಾಳೆ.

ಪ್ರತಿನಿತ್ಯ ನಡೆಯುತ್ತಿದ್ದ ದರೋಡೆ, ಕೊಲೆ. ಅತ್ಯಾಚಾರಗಳು, ಭೀಕರ ಅಪಘಾತಗಳು, ಅಗಣಿತ ಪ್ರಮಾಣದ ವಾಯು ಮಾಲಿನ್ಯ, ಜಲಮಾಲಿನ್ಯ, ಶಬ್ಧಮಾಲಿನ್ಯಗಳು ನಿಂತು ಜಗತ್ತಿನ ನಯನಗಳು ತೆರೆದುಕೊಂಡಿವೆ. ನಮಗೂ ಬದುಕಲು ಬಿಡಿ ಎಂದು ಕೂಗುತ್ತಿದ್ದ ಕೋಟ್ಯಂತರ ಜೀವಿಗಳು ಇಂದು ಸಮಾಧಾನಿಸುತ್ತಿವೆ. ಆದ್ದರಿಂದ ಇಂತಹ ಲಾಕ್‍ಡೌನ್‍ನ್ನು ಆಗಿಂದಾಗ್ಗೆ ನಾವೇ ಮಾಡಿಕೊಂಡಲ್ಲಿ ಈ ಭೂ ಗ್ರಹ ಇನ್ನೊಂದಷ್ಟು ದಿನ ಉಳಿದು ಬೆಳೆಯಲು ಸಾಧ್ಯವಾಗುತ್ತದೆ. ಸಕಲ ಚರಾಚರಗಳ ನಾಶವೂ ತಪ್ಪುತ್ತದೆ. ಅಂತೆಯೇ ಮುಂದಿನ ಪೀಳಿಗೆಯವರಿಗೂ ಈ ಭೂ ಗ್ರಹವನ್ನು ಹಸ್ತಾಂತರಿಸಲು ಕಾರಣವಾಗುತ್ತದೆ.

ಕುಮಾರಸ್ವಾಮಿ.ವಿ.ಕೆ
ಹವ್ಯಾಸಿ ಬರಹಗಾರರು, ವಿರುಪಾಪುರ,
ಸುಗ್ಗನಹಳ್ಳಿ ಅಂಚೆ, ತಿಪ್ಪಸಂದ್ರ ಹೋಬಳಿ,
ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ.
ಮೊಬೈಲ್ : 9113906120, 9740840678

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

Published

on

ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.

ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)

AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.

ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್‌ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.

ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್‌ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.

ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.

ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ

Published

on

ಸುದ್ದಿದಿನ,ದಾವಣಗೆರೆ:ಮಾರ್ಚ್ 18 ರಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಹೆಚ್ಚಿಸಲು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಜಿಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಉಪ ಪ್ರಾಂಶುಪಾಲರನ್ನು ಉದ್ದೇಶಿಸಿ ಮಾತನಾಡಿದರು.

ಪ್ರಸ್ತುತ ಎಸ್.ಎಸ್.ಎಲ್.ಸಿ ಎರಡು ಪೂರ್ವಭಾವಿ ಪರೀಕ್ಷೆಗಳು ನಡೆದಿದ್ದು ಶೇ. 18 ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್ ನೀಡಿ ವಿವರಣೆಯನ್ನು ಪಡೆಯಬೇಕು, ಎಸ್.ಎಸ್.ಎಲ್.ಸಿ ಗೆ ಪ್ರವೇಶ ಪಡೆದು ಪರೀಕ್ಷೆಗೆ ಗೈರಾಗಿರುವ ಮಕ್ಕಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಮನೆಮನೆ ಭೇಟಿ, ಅವರನ್ನು ಮತ್ತೇ ಶಾಲೆಗೆ ಕರೆತರಲು ಕ್ರಮವಹಿಸಬೇಕು ಎಂದು ತಿಳಿಸಿದರು.

ಡಿಡಿಪಿಐ ಕೊಟ್ರೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 21,863 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪ್ರವೇಶ ಪಡೆದಿದ್ದಾರೆ, ವಿವಿಧ ಕಾರಣಗಳಿಂದ 378 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿಲ್ಲ. ಅಂತಿಮವಾಗಿ 21,400 ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಿದ್ದಾರೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಗೆ 20,129 ವಿದ್ಯಾರ್ಥಿಗಳು ಹಾಜರಾಗಿದ್ದು, 1,353 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.

ಕಡಿಮೆ ಹಾಜರಾತಿ (75% ಕ್ಕಿಂತ ಕಡಿಮೆ) ಮತ್ತು ಪರೀಕ್ಷೆಯ ಬಗ್ಗೆ ಆಸಕ್ತಿ ಇಲ್ಲದಿರುವುದು ಗೈರುಹಾಜರಿಗೆ ಮುಖ್ಯ ಕಾರಣಗಳಾಗಿವೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ 49% ಬಂದಿದೆ. ಎರಡನೇ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಫಲಿತಾಂಶ 68% ಕ್ಕೆ ಏರಿಕೆಯಾಗಿದೆ, ಆದರೆ 1,460 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಗೈರುಹಾಜರಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಪೋಷಕರ ಮನವೊಲಿಸಿ ಅವರನ್ನು ಶಾಲೆಗೆ ಕರೆತರುವಂತೆ ಕ್ರಮವಹಿಸಲಾಗಿದೆ, ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸುವುದು ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ತಿಳಿಸಿಕೊಡುವುದು.

ಮಂಡಳಿಯಿAದ ನೀಡಲಾದ 4 ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು 2 ಪೂರ್ವಸಿದ್ಧತಾ ಪರೀಕ್ಷಾ ಪತ್ರಿಕೆಗಳು ಸೇರಿದಂತೆ ಒಟ್ಟು 6 ಪ್ರಶ್ನೆ ಪತ್ರಿಕೆಗಳನ್ನು ಪದೇ ಪದೇ ಬಿಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು. ಅನುತ್ತೀರ್ಣರಾಗುವ ಸಾಧ್ಯತೆ ಇರುವ ಸುಮಾರು 1,400 ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ಹರಿಸಿ ಅವರು ತೇರ್ಗಡೆಯಾಗುವಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಶಿಕ್ಷಕರು ಅತಿ ಮುಖ್ಯವಾಗಿ ಗೈರುಹಾಜರಾಗಿರೋ ಮಕ್ಕಳನ್ನ ಶಾಲೆಗೆ ಕರೆತರಬೇಕು, ಮನೆ ಮನೆ ಭೇಟಿ ಮಾಡಿ ಪಾಲಕ ಪೋಷಕರಿಗೆ ಮನವೊಲಿಸಿ, ಶಿಕ್ಷಣ ಇಲಾಖೆ ನೀಡಿರುವ ಬ್ಲೂಪ್ರಿಂಟ್ ಪ್ರಕಾರ ಮಕ್ಕಳನ್ನು ಸಿದ್ದಗೊಳಿಸಿ, ಪ್ರಶ್ನೆ ಪತ್ರಿಕೆಗಳನ್ನ ಪದೇ ಪದೇ ಬಿಡಿಸೋದರ ಮೂಲಕ ಮಕ್ಕಳಲ್ಲಿ ಒಂದು ಆತ್ಮವಿಶ್ವಾಸ ತುಂಬಬೇಕು , ಗೈರಾಗಿರುವ ವಿದ್ಯಾರ್ಥಿಗಳ ಸಂಖ್ಯೆ 1,400 ಇದೆ, ಆ ವಿದ್ಯಾರ್ಥಿಗಳು ಉತ್ತೀರ್ಣರಾದರೆ ಒಂದು ಉತ್ತಮ ಫಲಿತಾಂಶವನ್ನ ನಿರೀಕ್ಷೆ ಮಾಡಬಹುದು, ಮಕ್ಕಳಿಗೆ ಪಾಠದ ಜೊತೆಗೆ ಆಟಕ್ಕೂ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಸಿಇಒ ಗಿತ್ತೇ ಮಾಧವ ವಿಠಲ್ ರಾವ್, ಡಯಟ್ ಪ್ರಾಂಶುಪಾಲರಾದ ಗೀತಾ, ಜಿಲ್ಲೆಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ

Published

on

ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್‌ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.

ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್‌ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.

ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.

ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.

ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್‌ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್‌ನಾಯ್ಕ್.

ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending