Connect with us

ದಿನದ ಸುದ್ದಿ

ಕೋವಿಡ್ ನಂತರದ ಭಾರತ

Published

on

  • ಕೇಸರಿ ಹರವೂ

‘ಕೋರೋನಾದೊಂದಿಗೆ ಬದುಕುವುದನ್ನು ಕಲಿಯಿರಿ’ ಎನ್ನುವ ಸಂದೇಶ ನಮ್ಮ ಪ್ರಭುತ್ವದಿಂದ ರವಾನೆಯಾಗಿದೆ. ಇದರರ್ಥ ಕೋರೋನಾ ನಮ್ಮಲ್ಲಿ ಇನ್ನೂ ಒಂದಷ್ಟು ಕಾಲ ಕಾಡುತ್ತಲೇ ಇರುತ್ತದೆ ಎಂದು. ಇದು ಜಾಗತಿಕವಾಗಿಯೂ ನಿಜ. ಹಾಗಾಗಿ ನಮ್ಮಲ್ಲೂ ನಿಜ. ಆದರೆ ಅನೇಕ ರಾಷ್ಟ್ರಗಳು, ವಿಜ್ಞಾನಿಗಳು ಇದನ್ನು ಹೇಳಿ ಹಲವು ವಾರಗಳೇ ಆದವು. ನಮ್ಮ ದೇಶ ಈಗ ಹೇಳುವುದಕ್ಕೆ ಕೆಲವು ಕಾರಣಗಳಿವೆ.

ಈ ಸಂದೇಶ ನಾವು ಕೋರೋನಾವನ್ನು ಪೂರ್ತಿಯಾಗಿ ಹಿಮ್ಮೆಟ್ಟಿಸುವಲ್ಲಿ, ಸೋಂಕು ತಡೆಯುವಲ್ಲಿ ವಿಫಲರಾಗಿದ್ದೇವೆ ಎಂದೂ ಹೇಳುತ್ತದೆ. ನಮ್ಮಲ್ಲಿ ಸೋಂಕು ತೀರಾ ಕಡಿಮೆ ಪ್ರಮಾಣದಲ್ಲಿ ಇದ್ದಾಗಲೇ ಎಂಟು ವಾರಗಳ ಕಾಲ ಲಾಕ್ಡೌನ್ ಹೇರಿ ಕಾಲಹರಣ ಮಾಡಲಾಯಿತು. ಈಗ ಸೋಂಕು exponential ಆಗಿ ಹರಡುವುದಕ್ಕೆ ಆರಂಭವಾಗಿದೆ.

ನಿಜಕ್ಕೂ ಲಾಕ್ಡೌನ್ ಅವಶ್ಯ ಎಂದು ವೈಜ್ಞಾನಿಕವಾಗಿ ಎನಿಸಿದ್ದರೆ ಅದನ್ನು ಈಗ ಜಾರಿಗೊಳಿಸಬೇಕಿತ್ತು. ಈಗಲೂ ಅದು ದೇಶದಾದ್ಯಂತ ಬೇಕಿಲ್ಲ ಎಂದೇ ಹಲವು ತಜ್ಞರು ಹೇಳುತ್ತಾರೆ. ಆದರೆ ನಾವು ಇನ್ನಷ್ಟು ದಿನ ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಸಾಧ್ಯವೇ ಇಲ್ಲದಂತಾ ಪರಿಸ್ಥಿತಿಯಲ್ಲಿ ಸಮುದಾಯ ಹರಡುವಿಕೆಗೆ ತಯಾರಾಗಿ ಲಾಕ್ಡೌನ್ ಅನ್ನು ಕ್ರಮೇಣ ಸಡಿಲಿಸಲು ಆರಂಭಿಸಿದ್ದೇವೆ.

ಪ್ರಭುತ್ವ ಈಗ ಹೇಳಿರುವ ಈ ಹೇಳಿಕೆ ನಮ್ಮನ್ನು ಈ ಎಂಟು ವಾರಗಳ ಲಾಕ್ಡೌನಿನಲ್ಲಿ ದೇಶದಲ್ಲಿ ನಡೆದ ವಿದ್ಯಮಾನಗಳನ್ನು ಮತ್ತೊಮ್ಮೆ ನೋಡಲು ತೊಡಗಿಸುತ್ತದೆ. ಈ ನೋಟ ನಮ್ಮ ದೇಶ ಇನ್ನುಮುಂದೆ ಹೇಗೆ ಸಾಗುತ್ತದೆ ಎನ್ನುವುದಕ್ಕೆ ಕೆಲವು ಸುಳಿವುಗಳನ್ನೂ ಕೊಡುತ್ತದೆ.

ಲಾಕ್ಡೌನಿನ ಮೂಲ ಉದ್ದೇಶವನ್ನು ಸಾಕಷ್ಟು ವಿಫಲಗೊಳಿಸಿದ್ದರೂ, ಪ್ರಭುತ್ವ ತನ್ನ ಕೆಲವು ಉದ್ದೇಶಗಳನ್ನು ಈಡೇರಿಸಿಕೊಂಡಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರೋಧೀ ಹೋರಾಟದ ಕಾವನ್ನು ಬಹುತೇಕ ತಣ್ಣಗಾಗಿಸುವಲ್ಲಿ ಅದು ಸಫಲವಾಗಿದೆ. ಹೋರಾಟ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದು, ಜಗತ್ತಿನಾದ್ಯಂತ ಪೌರತ್ವ ತಿದ್ದುಪಡಿಯ ವಿರುದ್ಧ ದನಿಯೆದ್ದಿದ್ದಾಗ, ಆ ಮುಜುಗರದಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿದ್ದ ಪ್ರಭುತ್ವ ಪ್ರತಿಯೊಬ್ಬರಲ್ಲೂ ಮಹಾಮಾರಿಯ ಸಾಂಕ್ರಾಮಿಕದ ಆತಂಕದ ವಾತಾವರಣವನ್ನು ಹುಟ್ಟಿಹಾಕಿತು. ಲಾಕ್ಡೌನ್ ಒಂದೇ ಪರಿಹಾರ ಎಂದು ಅದನ್ನು ಹೇರಿ, ಪರ ಮತ್ತು ವಿರೋಧಿಗಳೆಲ್ಲರೂ ಸಹಕರಿಸುವಂತೆ ಮಾಡುವಲ್ಲಿ ಅದು ಯಶಸ್ವಿಯಾಯಿತು. ಮತ್ತೊಮ್ಮೆ ದೇಶದಲ್ಲಿ ಆ ಮಟ್ಟಕ್ಕೆ ಕಾವು ಏರಲು ದೊಡ್ಡ ಸಂಕಲ್ಪ ಮತ್ತು ಸಮಯ ಎರಡೂ ಬೇಕು.

ಸೋಂಕು ಹರಡುವಿಕೆಗೆ ಮುಸ್ಲಿಮರೇ ಮುಖ್ಯ ಕಾರಣ ಎಂದು ಜನರ ಮನಸ್ಸಿನಲ್ಲಿ ಯಶಸ್ವಿಯಾಗಿ ಬಿತ್ತಿ ತನ್ನ ಮುಸ್ಲಿಂ ವಿರೋಧೀ ನೀತಿಯನ್ನು ಅದು ಸಮರ್ಥಿಸಿಕೊಂಡಿದೆ. ಇದು ತನ್ನ ದೀರ್ಘಕಾಲದ ನೀತಿಗಳಲ್ಲಿ ಒಂದು. ಕೊರೋನಾ ಇದನ್ನು ಸುಲಭದಲ್ಲಿ ಸಾಧ್ಯವಾಗಿಸಿದ್ದು ಆ ನೀತಿಗೆ ಒದಗಿಬಂದ ದೊಡ್ಡ ಲಾಭ. ಇಂದು ಮಾವಿನ ಫಸಲು ಕೊಳ್ಳುವ ವರ್ತಕರಿಂದ ಹಿಡಿದು, ಬೇರೆಬೇರೇ ಕಸುಬುಗಳಿಗೆ ಹಳ್ಳಿಗಳಿಗೆ ಬರುತ್ತಿದ್ದ ಮುಸ್ಲಿಮರನ್ನು ಜನ ಕಾಣುತ್ತಿರುವ ರೀತಿಯೇ ಬೇರೆಯಾಗಿದೆ. ಸಾಮಾಜಿಕ ಅಂತರದ ಪರಾಕಾಷ್ಟೆ ಇದು.

ಪರಿಷ್ಕೃತ ಕರಡು ಕಾರ್ಮಿಕ ನೀತಿ ಲೋಕಸಭೆಯಲ್ಲಿ ಮಂಡನೆಯಾಗಿತ್ತು. ಬಲಪಂಥೀಯ ಬಿಎಮ್ಮೆಸ್’ನಿಂದ ಹಿಡಿದು ಎಲ್ಲ ಕಾರ್ಮಿಕ ಸಂಘಟನೆಗಳಿಂದ ಈ ನೀತಿಗೆ ದೊಡ್ಡ ವಿರೋಧವಿದ್ದು, ಅದು ಪಾಸ್ ಆಗುವುದು ಅತ್ಯಂತ ಕಠಿಣವಾಗಿತ್ತು. ಲಾಕ್ಡನ್ ಸಡಿಲಗೊಳಿಸುತ್ತಿರುವ ಈ ಸಂದರ್ಭದಲ್ಲಿ ಕಾರ್ಮಿಕರನ್ನು ಹೇಗೆ ನಡೆಸಿಕೊಳ್ಳುತ್ತಿವೆ ದೇಶದ ಮತ್ತು ರಾಜ್ಯಗಳ ಪ್ರಭುತ್ವಗಳು ಎನ್ನುವುದು ನಮ್ಮ ಕಣ್ಣಮುಂದೆಯೇ ಇದೆ.

ಇನ್ನೂ ಮೇಲಾಗಿ, ಆರು ರಾಜ್ಯಗಳು ಕಾರ್ಮಿಕ ಹಕ್ಕುಗಳನ್ನು ಮೂರು ವರ್ಷಗಳ ಕಾಲ ಅಮಾನತಿನಲ್ಲಿಟ್ಟಿವೆ. ಕಾರ್ಮಿಕರ ಎಲ್ಲ ಹಕ್ಕುಗಳನ್ನೂ, ಇದ್ದ ಅಲ್ಪ ಭದ್ರತೆಯನ್ನೂ ಒಂದೇ ಏಟಲ್ಲಿ ತೊಡೆದುಹಾಕುವಂತೆ ಮಾಡಿತು ಈ ಕೊರೋನಾ. ಆರ್ಥಿಕತೆಯ ಚೇತರಿಕೆಗಾಗಿ ಈ ಕ್ರಮ ಅತ್ಯಗತ್ಯ ಎಂದು ಬಿಂಬಿಸುವ ಪ್ರಯತ್ನ ನೇರವಾಗಿ ಕಾಣುತ್ತದೆ.

ಇದು ನಮ್ಮ ಕಾರ್ಪೊರೇಟ್ ಧಣಿಗಳಿಗೆ ಬಹುದೊಡ್ಡ ಕೊಡುಗೆಯಾಗಿ ಬರಲಿದೆ. ಬಹಳ ಹಿಂದಿನಿಂದಲೇ ಕೆಲವು ಅನುಕೂಲಕರ ವಾತಾರಣಗಳನ್ನು ಬಯಸಿದ್ದ ಕಾರ್ಪೋರೇಟುಗಳಿಗೆ ಈಗ ಲೀಲಾಜಾಲವಾಗಿ ತಮ್ಮ ಕಾರ್ಮಿಕ ನೀತಿಗಳನ್ನು ಬದಲಿಸಿಕೊಂಡು ಲಾಭ ಬಡಿಯುವ ಅವಕಾಶ ಒದಗಿ ಬಂದಿದೆ. ಈ ಲಾಭ ನಮ್ಮ ಪರಿಸರ, ಭೂಬಳಕೆ, ಕಾರ್ಮಿಕ ನೀತಿ, ಮಾನವ ಸಂಬಂಧಗಳ ಮೇಲೆ ದೊಡ್ಡ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜನರ ಅನುಭವದಲ್ಲಿದ್ದ ಅಲ್ಪಸ್ವಲ್ಪ ಸಂಪನ್ಮೂಲಗಳೂ ಕಾರ್ಪೊರೇಟ್ಗಳ ಪಾಲಾಗಲಿದ್ದು, ನಾವು ಕಾರ್ಪೊರೇಟ್ಗಳ ಮುಂದೆ ಇನ್ನಷ್ಟು ಕೈಚಾಚಿ ಬದುಕುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ.

‘ಕೋರೋನಾ ನಮಗೆ ಪಾಠ ಕಲಿಸಿದೆ. ಜಾಗತೀಕರಣ, ಬಂಡವಾಳಶಾಹೀ ಅರ್ಥವ್ಯವಸ್ಥೆ ಎಲ್ಲಕ್ಕೂ ಉತ್ತರವಲ್ಲ ಎನ್ನುವುದನ್ನು ಜಗತ್ತು ಕಲಿತಿದೆ. ನಮ್ಮ ಜಗತ್ತು ಸಮಾಜಸ್ನೇಹಿಯಾಗಿ, ಪರಿಸರ ಸ್ನೇಹಿಯಾಗಿ ಬದಲಾಗಲಿದೆ’ ಎನ್ನುವ ಆಶಾವಾದ ಕೆಲವರದು. ಆದರೆ, ಕಾರ್ಮಿಕರ ಹಕ್ಕುಗಳನ್ನು ಅಮಾನತಿನಲ್ಲಿಟ್ಟಿರುವ ಕ್ರಮವೊಂದೇ ಸಾಕು ಕೋವಿಡ್ ನಂತರದ ಆರ್ಥಿಕತೆ ಅದಕ್ಕೆ ತದ್ವಿರುದ್ಧವಾಗಿ ತಯಾರಾಗುವುದಕ್ಕೆ. ಕೊರೋನಾದಂಥಾ ಸಾಂಕ್ರಾಮಿಕವನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರಗಳಿಗೆ ಶಕ್ತಿ ಸಾಲುವುದಿಲ್ಲ, ಖಾಸಗೀ ವ್ಯವಸ್ಥೆಯೂ ದೊಡ್ಡದಾಗಿ ಸಜ್ಜುಗೊಳ್ಳಬೇಕು ಎನ್ನುವ ಹೊಸ ವಾದ ಹುಟ್ಟಲಿದೆ.

ಆ ವಾದವನ್ನು ನಮ್ಮ ಪ್ರಭುತ್ವಗಳೂ ಒಪ್ಪಿಕೊಳ್ಳುತ್ತವೆ. ಅದೇ ಕಾರಣಕ್ಕಾಗಿ ಅಲ್ಲದಿದ್ದರೂ ತಮ್ಮ ಅನುಕೂಲಕ್ಕಾಗಿ ಶಕ್ತಿಕೇಂದ್ರಗಳು ಒಪ್ಪುತ್ತವೆ. ಅಲ್ಲಿಂದ ಮುಂದೆ ಖಾಸಗೀ ಶಿಕ್ಷಣ, ಆರೋಗ್ಯ ಸೇವೆ, ಸಂಪರ್ಕ, ಸಾಗಣೆ, ಆಹಾರ ಸರಬರಾಜು ಎಲ್ಲ ಕ್ಷೇತ್ರಗಳಿಗೂ ಇದು ವಿಸ್ತರಿಸುತ್ತದೆ. ಇವೆಲ್ಲವೂ ಇನ್ನಷ್ಟು ವಿಸ್ತರಣೆಯಾಗಲಿವೆ ಮತ್ತು ದುಬಾರಿಯಾಗಲಿವೆ. ಸಾವಿರ ಕಿಮೀ ಗಟ್ಟಲೆ ನಡೆಯುವವರು, ರೈಲಿನ ಕೆಳಗೆ ಸಾಯುವ ಗುಂಪುಗಳು ಸಾಮಾನ್ಯವಾಗಲಿವೆ.

ಇವೆಲ್ಲವನ್ನೂ ಪ್ರಭುತ್ವ ಜನತೆಗೆ ಒಪ್ಪಿಸಿ ಮುನ್ನಡೆಯುತ್ತಿರಬೇಕಾಗುತ್ತದೆ. ಹಾಗಾದರೆ ಏನು ಮಾಡಬೇಕು? ಸರ್ಜಿಕಲ್ ಸ್ಟ್ರೈಕ್, ಪುಲ್ವಾಮಾ, ಮುಂತಾದವು ಈಗ ಸಾಲುವುದಿಲ್ಲ. ದೇಶದ ಗಡಿಗಳನ್ನು ರಕ್ಷಿಸುವ ಜೊತೆಗೆ ಕಳಕೊಂಡ ಆಕ್ರಮಿತ ಪ್ರದೇಶಗಳನ್ನು ಮತ್ತೆ ವಶಮಾಡಿಕೊಳ್ಳಬೇಕು. ದೇಶಭಕ್ತರು ಯಾರೂ ಇದನ್ನು ಬೇಡ ಎನ್ನಲಾರರು. ಬದಲಿಗೆ ಒಕ್ಕೊರಳಿನಿಂದ ಜೈ ಎಂದೇ ಅಂದಾರು.

ಈಗಾಗಲೇ ಗೂಗಲ್ ತನ್ನ ಮ್ಯಾಪಿನಲ್ಲಿ LOC ಅಳಿಸಿಹಾಕಿದೆ. ಅದರ ಹಿಂದಿನ ಒತ್ತಡ ಏನಿರಬಹುದು ಲೆಕ್ಕ ಹಾಕಿ. ಭಾರತೀಯರಾದ ನಮಗೆ ಇದು ಅತ್ಯಂತ ಸ್ವಾಗತಾರ್ಹ ವಿಚಾರ. ನಮ್ಮ ಹವಾಮಾನ ಇಲಾಖೆ POKಯ ಪೂರ್ಣ ಹವಾಮಾನ ವರದಿಯನ್ನು ಕೊಡಲು ಶುರು ಮಾಡಿದೆ. ಯುದ್ಧ ಸಾಮಗ್ರಿಗಳ ಹೊಸ ಒಪ್ಪಂದಗಳು ನಮ್ಮಲ್ಲಿ ಆಗ್ತಿವೆ. ಯುದ್ಧೋನ್ಮಾದವನ್ನು ಉಣಬಡಿಸಲು ಪ್ರಯತ್ನ ನಡೆಯುತ್ತಿದೆಯೇ? ಅಥವಾ ಯುದ್ಧಕ್ಕೇ ತಯಾರಿ ನಡೆಯುತ್ತಿದೆಯೇ? ಯೋಚಿಸಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ| ಗುರುಕುಲ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ; ಶೇ. 98 ಅಂಕಗಳೊಂದಿಗೆ ಮದಿಹಾ ಅಗ್ರಸ್ಥಾನ

Published

on

ಸುದ್ದಿದಿನ,ದಾವಣಗೆರೆ: 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಪ್ರತಿಷ್ಠಿತ ಶಾಲೆಗಲ್ಲಿ ಒಂದಾದ ಗುರುಕುಲ ಶಾಲೆ (Gurukul School) ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಮ್ಮೆ ತನ್ನ ವರ್ಚಸ್ಸನ್ನು ಸಾಬೀತುಪಡಿಸಿದೆ. ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿನಿ ಮದಿಹಾ ಸಾಧನೆಯ ಶಿಖರದಲ್ಲಿ

ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಮದಿಹಾ ಅವರು ಒಟ್ಟು ಶೇ. 98 ಅಂಕಗಳನ್ನು ಗಳಿಸುವ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಸಾಧನೆಗೈದಿದ್ದಾರೆ. ಈಕೆಯ ಸಾಧನೆಯು ಸಹಪಾಠಿಗಳಿಗೆ ಮತ್ತು ಕಿರಿಯ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. ಅಲ್ಲದೇ ಕುಶಾಲ್‌ ಶೇ. 97 ದ್ವಿತೀಯ ಹಾಗೂ ಸಮರ್ಥ್‌ 95.5 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಗಮನ ಸೆಳೆದ ಫಲಿತಾಂಶ: ಈ ಬಾರಿಯ ಫಲಿತಾಂಶದಲ್ಲಿ ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತಿದೆ.

ಡಿಸ್ಟಿಂಕ್ಷನ್ ಸಾಧಕರು: 15 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಥಮ ಶ್ರೇಣಿ: ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಉತ್ತಮ ಫಲಿತಾಂಶ: ಉಳಿದ ಎಲ್ಲಾ ವಿದ್ಯಾರ್ಥಿಗಳು ಸಹ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಶಾಲೆಯು ನೂರಕ್ಕೆ ನೂರರಷ್ಟು ಫಲಿತಾಂಶದತ್ತ ದಾಪುಗಾಲು ಹಾಕಿದೆ.

ಯಶಸ್ಸಿನ ಹಿಂದಿನ ಶಕ್ತಿ:

ವಿದ್ಯಾರ್ಥಿಗಳ ಈ ಭವ್ಯ ಸಾಧನೆಗೆ ಶಾಲೆಯ ವ್ಯವಸ್ಥಿತ ಮಾರ್ಗದರ್ಶನವೇ ಕಾರಣ ಎಂದು ಆಡಳಿತ ಮಂಡಳಿ ತಿಳಿಸಿದೆ. ಶಾಲಾ ಕಾರ್ಯದರ್ಶಿ ಅಬ್ದುಲ್ ಸರ್ ಅವರ ನಿರಂತರ ಮಾರ್ಗದರ್ಶನ, ಆಡಳಿತ ಮಂಡಳಿಯ ಬೆಂಬಲ, ಮುಖ್ಯೋಪಾಧ್ಯಾಯರ ಸಮರ್ಥ ನಾಯಕತ್ವ ಹಾಗೂ ಶಿಕ್ಷಕ ವೃಂದದವರ ಅವಿರತ ಪರಿಶ್ರಮ ಈ ಯಶಸ್ಸಿಗೆ ಬುನಾದಿಯಾಗಿದೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಶಾಲಾ ಕಾರ್ಯದರ್ಶಿ ಅಬ್ದುಲ್‌, “ವಿದ್ಯಾರ್ಥಿಗಳ ಏಕಾಗ್ರತೆ, ಪೋಷಕರ ಸಹಕಾರ ಮತ್ತು ಶಿಕ್ಷಕರ ಬೋಧನಾ ಶೈಲಿಯಿಂದ ಈ ಮೈಲಿಗಲ್ಲು ಸಾಧ್ಯವಾಗಿದೆ. ಈ ಯಶಸ್ಸು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಇನ್ನಷ್ಟು ಉನ್ನತ ಗುರಿಗಳನ್ನು ತಲುಪಲು ಪ್ರೇರಣೆಯಾಗಲಿ,” ಎಂದು ಹಾರೈಸಿದ್ದಾರೆ.
ಶಾಲೆಯ ಈ ಸಾಧನೆಗೆ ಪೋಷಕರು ಮತ್ತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭಕೋರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ; ಬಿಜೆಪಿ ಷಡ್ಯಂತ್ರ ಬಯಲು : ಕವಿತಾ ಚಂದ್ರಶೇಖರ್ ಕಿಡಿ

Published

on

ಸುದ್ದಿದಿನ,ದಾವಣಗೆರೆ: ಬಿಜೆಪಿಯು ಪಂಚರಾಜ್ಯಗಳ ಚುನಾವಣೆಗಮನದಲ್ಲಿಟ್ಟುಕೊಂಡು ತರಾತುರಿಯಲ್ಲಿ ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆ ಮಾಡಲು ಹೋಗಿ ಮುಖಭಂಗಕ್ಕೀಡಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕವಿತಾ ಚಂದ್ರಶೇಖರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಹುನ್ನಾರ ದೇಶದ ಜನರ ಮುಂದೆ ಬಯಲಾಗಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಮಹಿಳೆಯರ ವಿರೋಧಿ ಕಾಂಗ್ರೆಸ್ ಪಕ್ಷ ಎಂದು ಹೇಳುತ್ತಿರುವ ಬಿಜೆಪಿಯು ಮಹಿಳೆಯರ ಭಾವನೆ ಜೊತೆ ಚೆಲ್ಲಾಟ ಆಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಸುದ್ದಿಗೋಷ್ಟಿಯಲ್ಲಿ ಪ್ರಶ್ನಿಸಿದ್ದಾರೆ.

ಪ್ರತಿಪಕ್ಷಗಳು ಡಿಲಿಮಿಟೇಶನ್ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆಯೇ ವಿನಾಃ ಮಹಿಳಾ ಮೀಸಲಾತಿ ಮಸೂದೆಗಲ್ಲ. ಕೇಂದ್ರ ಸರ್ಕಾರವು ಪ್ರಾಮಾಣಿಕವಾಗಿದ್ದರೆ 2023 ರ ಕಾನೂನನ್ನು ಜಾರಿಗೆ ತರಬೇಕು.

ನಾರಿ ಶಕ್ತಿ ವಂದನ ಚೌಕಟ್ಟು ಎಂದು ವ್ಯಾಪಕವಾಗಿ ಕರೆಯಲ್ಪಡುವ 2023ರ ಕಾನೂನು, ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಯ ಅನುಷ್ಠಾನವನ್ನು ಹೊಸ ಜನಗಣತಿಯನ್ನು ಪೂರ್ಣಗೊಳಿಸಿ ನಂತರ ಡಿಲಿಮಿಟೇಶನ್ ಬಗ್ಗೆ ಚರ್ಚಿಸಿ
ಅನುಷ್ಠಾನಗೊಳಿಸಲಿ. ಅದನ್ನು ಬಿಟ್ಟು ವಿನಾಕಾರಣ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಸೋಲಾಗಿರುವುದು “ಪ್ರಜಾಪ್ರಭುತ್ವದ ಗೆಲುವು. ಭಾರತದ ಒಕ್ಕೂಟ ರಚನೆ ಬದಲಾಯಿಸಲು ಮುಂದಾಗಿದ್ದಕ್ಕೆ ತಕ್ಕ ಶಾಸ್ತಿಯಾಗಿದೆ. ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಪಿತೂರಿಗೆ ತಕ್ಕ ಉತ್ತರ ನೀಡಲಾಗಿದೆ. ಇದು ಸಂವಿಧಾನಕ್ಕೆ ಸಿಕ್ಕ ಗೆಲುವು, ದೇಶಕ್ಕೆ, ವಿರೋಧ ಪಕ್ಷದ ಒಗ್ಗಟ್ಟಿಗೆ ಸಿಕ್ಕ ಗೆಲುವು.

ಉತ್ತರ ಭಾರತದಲ್ಲಿ ಹೆಚ್ಚು ಸ್ಥಾನಗಳನ್ನು ಸೃಷ್ಟಿಸಿ ಹೇಗಾದರೂ ಅಧಿಕಾರದಲ್ಲಿ ಉಳಿಯಬೇಕೆಂಬ ಬಿಜೆಪಿಯ ಪಿತೂರಿ ಜನರಿಗೆ ಅರ್ಥವಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಡಿಮೆ ಸ್ಥಾನ ಆಗುವ ಆತಂಕ ಇದೆ. ಯಾವುದೇ ರೀತಿಯಲ್ಲಿಯೂ ಚರ್ಚಿಸದೇ ಏಕಾಏಕಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಜಾರಿಗೆ ಮುಂದಾಗಿದ್ದೇಕೆ ಎಂದು ಕವಿತಾ ಚಂದ್ರಶೇಖರ್
ಪ್ರಶ್ನಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್ ಎಸ್ ಎಲ್ ಸಿ ಫಲಿತಾಂಶ | ಭರತ್ ಜಿ ರಾಜ್ಯಕ್ಕೆ ಪ್ರಥಮ ; ನನ್ನ ಕ್ಷೇತ್ರದ ವಿದ್ಯಾರ್ಥಿ ಸಾಧನೆಗೆ ಸಲ್ಯೂಟ್ ಶಾಸಕ ಕೆ.ಎಸ್.ಬಸವಂತಪ್ಪ ಹರ್ಷ

Published

on

ಸುದ್ದಿದಿನ,ದಾವಣಗೆರೆ:ಇವತ್ತು ನನಗೆ ಬಹಳ ಸಂತೋಷದ ದಿನ. ನನ್ನ ಕ್ಷೇತ್ರದ ಕಬ್ಬಳ ಗ್ರಾಮದ ಒಬ್ಬ ರೈತ ಕುಟುಂಬದಿಂದ ಬಂದ ಜಿ.ಭರತ್ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 625ಕ್ಕೆ 625 ಅಂಕ ಪಡೆದಿರುವುದು ನನಗೆ ಬಹಳ ಹೆಮ್ಮೆ ತಂದಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಶಾಲೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಜಿ.ಭರತ್ ಮತ್ತು ಪೋಷಕರನ್ನು ಅಭಿನಂದಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ವಿದ್ಯಾರ್ಥಿ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಸಂತಸದ ವಿಷಯ. ವಿದ್ಯಾ ಲಕ್ಷ್ಮಿ ಶಾಲೆಯವರು ಬಹಳ ಪ್ರಾಮಾಣಿಕವಾಗಿ ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸಿ ಅವರನ್ನು ಉನ್ನತ ಮಟ್ಟಕ್ಕೆ ತರಲು ಶ್ರಮಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

ನಮಗೆ ಮೊದಲ ಆದ್ಯತೆ ದೇಗುಲಗಳಿಗಿಂತ ಶಾಲೆಗಳಿಗೆ ಇರಬೇಕು. ಇಂತಹ ಶಾಲೆಯೆಂಬ ದೇಗುಲದಿಂದ ಹೊರ ಬರುವ ಭರತ್‌ನಂತಹ ಮಕ್ಕಳು ಮುಂದಿನ ದಿನಗಳಲ್ಲಿ ಈ ದೇಶದ ಉನ್ನತ ಅಧಿಕಾರಿಗಳಾಗಿ ಅಥವಾ ವಿಜ್ಞಾನಿಗಳಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending