ನೆಲದನಿ
ನುಡಿಯ ಒಡಲು | ಭಾಷಿಕ ಕ್ರಿಯೆ ಮತ್ತು ಮನುಷ್ಯ ಘನತೆ
- ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕ, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಮನುಷ್ಯ ಘನತೆ ಎಂಬೀ ಪರಿಕಲ್ಪನೆಯು ಹಲವು ಭಾಷಿಕ ಕ್ರಿಯೆಗಳನ್ನು ಸೂಚಿಸುತ್ತದೆ. ಇದು ಗ್ರಹಿಕೆಯ ಹಲವು ಸಾಧ್ಯತೆಗಳನ್ನು ಏಕಕಾಲಕ್ಕೆ ಪ್ರಚುರಪಡಿಸುತ್ತದೆ. ವಿವಿಧ ಸಂದರ್ಭಗಳಲ್ಲಿ ವಿಭಿನ್ನ ಮತ್ತು ವೈವಿಧ್ಯಮಯ ಅರ್ಥಗಳನ್ನು ಇದು ಕಂಡರಿಸುತ್ತದೆ. ವಿಟ್ಗೆನ್ಸ್ಟೈನ್ ತನ್ನ ಫಿಲಾಸಫಿಕಲ್ ಇನ್ವೆಸ್ಟಿಗೇಷನ್ನಲ್ಲಿ ಚರ್ಚಿಸಿದಂತೆ, ಒಂದು ಪದ ಅಥವಾ ಪರಿಕಲ್ಪನೆಯ ಅರ್ಥವನ್ನು ಅರ್ಥಮಾಡಿಕೊಳ್ಳಲು ‘ಆವೊಂದು ಪದವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತನ್ನಷ್ಟಕ್ಕೆ ಗ್ರಹಿಸಲು ಸಾಧ್ಯವಿಲ್ಲ.ಅಂದರೆ ಒಂದೊಂದು ಪದವು ಆಯಾ ಭಾಷಿಕ ಸಮುದಾಯದಲ್ಲಿ ಹೇಗೆ ಬಳಕೆಯಾಗುತ್ತದೆ ಮತ್ತು ಸಾಂದರ್ಭಿಕವಾಗಿ ಅರ್ಥಗಳು ಹೇಗೆ ವಿಕಾಸಗೊಳ್ಳುತ್ತವೆ ಎಂಬುದನ್ನು ಅನುಸರಿಸುವುದು ಅವಶ್ಯ ಎಂದು ಹೇಳುತ್ತಾನೆ’. ಪ್ರತಿಯೊಬ್ಬ ಭಾಷಿಕನ ಪದ, ಧ್ವನಿಗಳ ಉಚ್ಚಾರಣೆ, ಮಾತಿನ ವರಸೆಗಳಲ್ಲಿ ಉಂಟಾಗುವ ವ್ಯತ್ಯಾಸಗಳು, ಅವುಗಳಿಗೆ ಅರ್ಥಗಳನ್ನು ರೂಪಿಸುವಲ್ಲಿ ಇಷ್ಟೊಂದು ಪ್ರಮಾಣದಲ್ಲಿ ವ್ಯತ್ಯಾಸಗಳು ಉಂಟಾಗುವುದಿಲ್ಲ. ಹಾಗಾಗಿ ಒಬ್ಬ ವ್ಯಕ್ತಿಯ ಭಾಷಿಕ ಸನ್ನಿವೇಶ ಮತ್ತು ಅದರ ಬಳಕೆಯನ್ನು ನೋಡಿ ಇದರಿಂದ ಮತ್ತೊಬ್ಬ ವ್ಯಕ್ತಿಯು ಕಲಿಯಬೇಕು ಎಂಬ ಅಭಿಮತವು ಇಲ್ಲಿ ವ್ಯಕ್ತವಾಗುತ್ತದೆ.
ಈ ವಾದವು ಕೇವಲ ಅರ್ಥ ವಿಕಾಸಗೊಳ್ಳುವ ಬಗೆಗೆ ಮತ್ತು ಅದರ ವ್ಯಾಪ್ತಿಗೆ ಮಾತ್ರ ಸಂಬಂಧಿಸಿದೆ ಹೊರತು ಇಡಿಯಾಗಿ ಭಾಷೆಯ ಕಲಿಕೆ ಮತ್ತು ಗ್ರಹಿಕೆಯ ನೆಲೆಗಳಲ್ಲಿ ಈ ‘ಅರ್ಥ’ ಎನ್ನುವ ಪರಿಕಲ್ಪನೆ ಭಿನ್ನವಾಗಿರುತ್ತದೆ ಎನ್ನುವುದು ಗಮನಾರ್ಹ. ಇರಲಿ ‘ಈ ಟಿಪ್ಪಣಿಯಲ್ಲಿ ವಿಟ್ಗೆನ್ಸ್ಟೈನಿಯನ್ ವಿಧಾನವನ್ನು ಅನ್ವಯಿಸುವ ಮೂಲಕ, ಮನುಷ್ಯ ಘನತೆ ಎನ್ನುವ ಈ ಪರಿಕಲ್ಪನೆಯು ಹೇಗೆ ವಿಭಿನ್ನ ಅರ್ಥಗಳನ್ನು ಹೊಂದಿರುತ್ತದೆ ಹಾಗೂ ಆ ವಿಭಿನ್ನ ಭಾಷಿಕ ನೆಲೆಗಳನ್ನು ಮನಗಾಣಲು ಮತ್ತು ಪರಿಕಲ್ಪಿಸಲು ಹೇಗೆ ಸಾಧ್ಯ ಎನ್ನುವುದನ್ನು ಬಿಡಿಸಿನೋಡುವ ಪ್ರಯತ್ನವನ್ನು ಮಾಡಲಾಗುತ್ತದೆ.
ಈ ಮೇಲೆ ಹೇಳಿದ ಮಾತುಗಳು ಕೆಲವೊಮ್ಮೆ ವಿರೋಧಾಭಾಸವಾಗಿ ಕಾಣಬಹುದು. ಆದರೆ ಭಾಷಾತತ್ವಶಾಸ್ತ್ರೀಯ ಹಿನ್ನಲೆಯಲ್ಲಿ ಈ ಕುರಿತು, ಘನತೆಯ ಜಿಜ್ಞಾಸೆಯನ್ನು ಸಾಮಾಜಿಕ ವಿವೇಕದ ನೆಲೆಯನ್ನಾಗಿ ಪರಿಭಾವಿಸುವ ಜರೂರು ಏನೆಂಬುದು ಇಲ್ಲಿ ಮಹತ್ವದ ನಿಲುವು ಆಗುತ್ತದೆ.
ಆದ್ದರಿಂದ ಮನುಷ್ಯ ಘನತೆಯ ವಿನ್ಯಾಸಕ್ಕೆ ಸಂಬಂಧಿಸಿದ ಬಿಕ್ಕಟ್ಟುಗಳು ನಮಗೇಕೆ ಮುಖ್ಯವಾಗುತ್ತವೆ ಅಂದರೆ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸ್ವಾಯತ್ತತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಅಸ್ಮಿತೆಯ ಹಕ್ಕುಗಳು ಹಾಗೂ ಸಂಪನ್ಮೂಲಗಳಲ್ಲಿ ಪಾಲುದಾರಿಕೆ, ಜ್ಞಾನ ಪ್ರಸಾರಣ ಹಾಗೂ ಜ್ಞಾನ ಉತ್ಪಾದನೆ ಮೊದಲಾದವು ಈ ಘನತೆ ಎಂಬ ವಿದ್ಯಮಾನಕ್ಕೆ ಸಂಬಂಧಿಸಿರುತ್ತವೆ.
ಯಾವುದೇ ಒಂದು ಪದದ ಸಂದರ್ಭವನ್ನು ಬದಲಾಯಿಸುವುದರಿಂದ ಅದು ತನ್ನ ಅರ್ಥದ ಆಯಾಮವನ್ನು ಬದಲಿಸುತ್ತದೆ. ಇದು ಬಹುತೇಕ ಸನ್ನಿವೇಶದಲ್ಲಿ ತಪ್ಪು ತಿಳಿವಳಿಕೆಯನ್ನು ಉಂಟುಮಾಡುವುದು ದಿಟ. ಆದರೆ ಈ ಬದಲಾವಣೆ ಆಯಾ ವ್ಯಕ್ತಿ ಇಲ್ಲವೇ ಸಮುದಾಯದ ಆಶೋತ್ತರಗಳನ್ನು ಎತ್ತಿಹಿಡಿಯುವುದಕ್ಕೆ ಒತ್ತಾಸೆಯಾಗಿರುವುದಿಲ್ಲ. ಬದಲಾಗಿ ಸಾಮಾಜಿಕ ಕಳಂಕವನ್ನು ಆರೋಪಿಸುವ, ಕೀಳರಿಮೆಯನ್ನು ಮೂಡಿಸುವ ಹಾಗೂ ಆತ್ಮಬಲಬನ್ನು ಕುಗ್ಗಿಸುವ ಹುನ್ನಾರವನ್ನೂ ಪ್ರಚೋದಿಸುತ್ತವೆ.
ಆದ್ದರಿಂದ ಭಾಷಿಕ ಬಳಕೆಯ ಬಗೆಗಳು ನಿರ್ದಿಷ್ಟ ಉದ್ದೇಶಕ್ಕೆ ಪೂರಕವಾಗಿಯೇ ನೆಲೆಗೊಳ್ಳುತ್ತವೆ ಎಂದು ಹೇಳುವುದು ದುಸ್ತರ. ಅರ್ಥಗಳನ್ನು ಹೇಗೆ ಪ್ರಚುರಪಡಿಸಲಾಗುತ್ತದೆ ಎನ್ನುವುದೇ ಭಾಷಾತತ್ವಶಾಸ್ತ್ರೀಯ ಬಹುಮುಖ್ಯ ಬಿಕ್ಕಟ್ಟಾಗಿರುತ್ತದೆ. ವಸ್ತುಸ್ಥಿತಿ, ಸತ್ಯ, ಸುಳ್ಳು, ವಾಸ್ತವ, ಆರೋಪ, ಪ್ರತ್ಯಾರೋಪ, ಮುಖಸ್ತುತಿ, ಮುಖಹೀನತೆ ಇತ್ಯಾದಿ ವಿಭಿನ್ನ ಭಾಷಿಕ ಕ್ರಿಯೆಗಳು ನೆಲೆಗೊಳ್ಳುವುದು ಕೇವಲ ಸಾಮಾಜಿಕ ರಚನೆ ಇಲ್ಲವೇ ಕಟ್ಟೋಣಗಳಾಗಿ ಮಾತ್ರ. ಸೂಚಕ ಹಾಗೂ ಸೂಚಿತಗಳ ನಡುವಣ ಸಂಘರ್ಷವನ್ನು ತಾತ್ವಿಕವಾಗಿ ವಿಶ್ಲೇಷಿಸಲು ಸಾಧ್ಯವಿಲ್ಲದ ಸನ್ನಿವೇಶದಲ್ಲಿ, ಆಯಾ ಸನ್ನಿವೇಶಕ್ಕೆ ತೋಚಿದಂತೆ ವ್ಯಾಖ್ಯಾನಿಸಲಾಗುವುದು.
ಇವತ್ತಿನ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ನಿರೂಪಣೆಗಳನ್ನು ವ್ಯಾಖ್ಯಾನಿಸುವ ಮಹನೀಯರು ಬಹುತೇಕವಾಗಿ ತಮ್ಮ ಮೂಗಿನ ನೇರಕ್ಕೆ ನಿರ್ದಿಷ್ಟಗೊಳಿಸಿ ಅರ್ಥೈಸುತ್ತಾರೆ. ಅದನ್ನೇ ವಸ್ತುನಿಷ್ಠವೆಂದೋ, ತಾತ್ವಿಕವೆಂದೋ ಇಲ್ಲವೇ ಸಾಮಾಜಮುಖಿಯೆಂದೋ ಬಿಂಬಿಸಿ, ತಮ್ಮೀ ನಿಲುವುಗಳಿಗೆ ಸಮ್ಮತಿಸದವರನ್ನು ಅಪಹಾಸ್ಯ ಮಾಡುವ ಹಾಗೂ ಅವರು ನಂಬಿದ ತತ್ವಗಳನ್ನೇ ಅನೈತಿಕಗೊಳಿಸುವ ದಾರ್ಷ್ಟ್ಯತನವನ್ನು ತೋರಿಸುತ್ತಾರೆ. ಸಮುದಾಯದ ಪರವಾಗಿರುವುದೆಂದರೆ, ತಮ್ಮದೇ ನಿಲುವುಗಳನ್ನು ತಾವೇ ಮಾನ್ಯಮಾಡಿಕೊಂಡು, ಇತರರು ನಂಬಿದ ಮೌಲ್ಯಗಳನ್ನು ಅಪಮೌಲ್ಯಗೊಳಿಸುವುದಲ್ಲ.
ಬದಲಾಗಿ ಯಾವುದು ಸಮಾಜಕ್ಕೆ ಒಳಿತನ್ನು ಬಯಸುವ ವಿನ್ಯಾಸವಾಗಿದೆ ಅನ್ನುವುದನ್ನು ಬಿಡಿಸಿ ಹೇಳುವ ವಿಧಾನವಾಗಿರುತ್ತದೆ. ಹಾಗೂ ಈ ವಿದ್ಯಮಾನದ ನೆಲೆಗಳನ್ನು ಪುಷ್ಟಿಕರಿಸುವ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಭಿನ್ನತೆಗಳನ್ನೂ ಮೀರಿ ಪರಸ್ಪರ ಸಹಮತವನ್ನು ಹೊಂದಿರಬೇಕಾಗುತ್ತದೆ. ಇಂತಹ ಒಂದೊಂದು ಚಿಂತನೆಗೆ ಘನತೆಯು ಸಿಗಬೇಕೆಂದರೆ, ಸಾಮಾಜಿಕ, ಸಾಂಸ್ಕೃತಿಕ ಸಹಭಾಗಿತ್ವದ ಅವಶ್ಯಕತೆ ಇರುತ್ತದೆ. ಏಕೆಂದರೆ ಭಾರತದಂತಹ ದೇಶಗಳು ಏಕಕಾಲದಲ್ಲಿಯೇ ಹಲವು ಕಾಲಗಳಲ್ಲಿ ಬದುಕಿರುತ್ತಾರೆ.
ಇವರ ಲೋಕಗ್ರಹಿಕೆ, ಬದುಕಿನ ಮುನ್ನೋಟಗಳು ಮತ್ತು ಸಮಸಮಾಜ ಕಟ್ಟುವ ಯೋಚನಾಲಹರಿ ಒಂದೇ ಆಗಿರುವುದಿಲ್ಲ. ಹಾಗಾಗಿಯೇ ಕುವೆಂಪು, ಬೇಂದ್ರೆ, ಮಾಸ್ತಿ, ಪುತಿನ ಮೊದಲಾದವರು ಒಂದು ತಲೆಮಾರಿನ ಸಂವೇದನೆಯೊಳಗಿನ ಬಹುತ್ವವನ್ನು ನಿರೂಪಿಸಿದರೆ, ಲಂಕೇಶ್, ತೇಜಸ್ವಿ ಹಾಗೂ ಅನಂತಮೂರ್ತಿ ಇವರೆಲ್ಲರೂ ಸಮಕಾಲೀನವಾಗಿದ್ದರೂ, ಅವರ ಲೋಕಗ್ರಹಿಕೆ ಮತ್ತು ಸಾಮಾಜಿಕ ಭಾಷಾಶಾಸ್ತ್ರೀಯ ನಿಲುವುಗಳು ಪರಸ್ಪರ ಭಿನ್ನವಾಗಿವೆ. ಇವುಗಳನ್ನು ದೇವನೂರ ಅಥವಾ ಸಿದ್ದಲಿಂಗಯ್ಯ ಅವರುಗಳಿಗೆ ಮುಖಾಮುಖಿ ಮಾಡಿ, ಮೌಲ್ಯನಿರ್ಣಯಗಳನ್ನು ಕೈಗೊಂಡರೆ, ಏನೆಲ್ಲ ಅಪಚಾರಗಳು ಘಟಿಸಬಹುದು.
ವಚನಕಾರರ ಗ್ರಹಿಕೆಗಳನ್ನು ಪರಿಶೀಲಿಸಿದರೆ ಭಾರತದ ಸಮುದಾಯಗಳ ಬಹುಳತೆಯ ವಿನ್ಯಾಸಗಳು ನಮಗೆ ಮನನವಾಗುತ್ತವೆ. ಇದೇ ಬಗೆಯ ವಿಭಿನ್ನ ನಿಲುವುಗಳನ್ನು ವೈದೇಹಿ, ಗೀತಾ ನಾಗಭೂಷಣ, ನಾಗವೇಣಿ ಅವರ ಸಾಹಿತ್ಯಕ ನಿರೂಪಣೆಗಳಲ್ಲಿ ಕಾಣಬಹುದು. ಘನತೆಯ ಪ್ರಶ್ನೆಯಿರುವುದು ಈ ವೈವಿಧ್ಯತೆಗಳನ್ನು ಮಾನ್ಯಮಾಡುವ ರಾಜಕಾರಣದ ಪರಿಣಾಮಗಳ ಆಧಾರದ ಮೇಲೆ ಇತ್ಯರ್ಥವಾಗುತ್ತದೆ.
ಚರ್ಚೆ, ಸಂವಾದ, ದಿನನಿತ್ಯದ ಮಾತುಕತೆ ಹಾಗೂ ಅಭಿಪ್ರಾಯಗಳ ಮಂಡನೆಯಲ್ಲಿ ಪ್ರಯೋಗಿಸುವ ಭಾಷಿಕ ಸಂಗತಿಗಳು ನಮ್ಮನ್ನು ಗೊಂದಲಕ್ಕೀಡುಮಾಡುತ್ತವೆ. ಇದಕ್ಕೆ ಬಹುಮುಖ್ಯ ಕಾರಣವೇ ಪದ ಬಳಕೆಯ ನೆಲೆಗಳು. ಅಂದರೆ ನಾವು ನೇರವಾಗಿ ಮಾತನಾಡುವಾಗ ಅಥವಾ ಭೇಟಿಯಾದಾಗ ಅವುಗಳ ಅರ್ಥ ಸಾಧ್ಯತೆಗಳು ಏಕರೂಪವಾಗಿ ಕಾಣಿಸಿಕೊಳ್ಳುವುದು ಸಹಜ. ಆದರೆ ಈ ಸಹಜತೆಯನ್ನು ಗ್ರಹಿಕೆಯ ಸಾಧ್ಯತೆಯನ್ನಾಗಿ ತಿಳಿಯಲು ಆಗುವುದಿಲ್ಲ. ಏಕೆಂದರೆ, ಅರ್ಥದ ನೆಲೆಗಳು ಮಾತ್ರ ಏಕರೂಪಿಯಾಗಿರುವುದಿಲ್ಲ. ಜೊತೆಗೆ ಅವುಗಳನ್ನು ಗ್ರಹಿಸುವ ವಿಧಾನಗಳು ಕೂಡ ಇದಕ್ಕೆ ಒತ್ತಾಸೆಯಾಗುತ್ತವೆ.
ಒಂದು ಪದದ ಅರ್ಥ ನಿಶ್ಚಿತವಾಗಿರುವುದಿಲ್ಲ ಎಂದರೆ ಆ ಪದದ ಮೂಲಕ ಸಾಧಿತವಾಗುವ ಅರ್ಥವೂ ನಿಶ್ಚಿತವಾಗಿರುವುದಿಲ್ಲ. ಆಯಾ ಸನ್ನಿವೇಶಗಳ ಆಧಾರದ ಮೇಲೆ ಇವುಗಳ ಅರ್ಥ ಸಾಧ್ಯತೆಗಳು ಮೈದಾಳುತ್ತವೆ. ಸೂಚಕ (ಸಿಗ್ನಿಫೈರ್) ಮತ್ತು ಸೂಚಿತಗಳ (ಸಿಗ್ನಿಫೈಯ್ಡ್) ನಡುವಣ ನಂಟಸ್ತಿಕೆ ನೇರವಾಗಿರುವುದಿಲ್ಲ. ಅದು ನಿರಂತರವಾಗಿ ವಿಕಾಸಶೀಲವಾಗಿರುತ್ತದೆ. ಇದೊಂದು ಬಗೆಯಲ್ಲಿ ಅನಂತಲೀಲೆ. ಬರಹದ ಸನ್ನಿವೇಶದಲ್ಲಿ ಅರ್ಥದ ಅನಿಶ್ಚಿತತೆ ಇನ್ನೂ ವ್ಯಾಪಕವಾಗಿರುತ್ತದೆ. ಹಾಗಾಗಿ ಬರಹದ ನಿರೂಪಣೆಗಳಲ್ಲಿ ಸನ್ನಿವೇಶಗಳನ್ನು ನಿರ್ಧರಿಸುವ ಮೂಲಕ ಅರ್ಥಗಳನ್ನು ನಿಶ್ಚಯಿಸಲಾಗುತ್ತದೆ.
ಬರಹದಲ್ಲಿ ಮೈದಾಳಿದ ನಿರೂಪಣೆಗಳು ಅತ್ಯಂತ ಸಂದಿಗ್ದವೂ ಹಾಗೂ ಅಸ್ಪಷ್ಟವೂ ಆಗಿರುತ್ತವೆ. ಈ ಬಿಕ್ಕಟ್ಟಿನಲ್ಲಿ ಸೂಕ್ತ ಅರ್ಥಗಳು ಮೈದಾಳದೇ ಹೋದರೆ ಅಪಚಾರ ಮತ್ತು ಅಪಾಯಗಳೂ ತಲೆಯೆತ್ತುತ್ತವೆ. ಅರ್ಥಗಳ ಏಕರೂಪಿತನವೇ ಇಂತಹ ಸಾಮಾಜಿಕ ಅಪಚಾರ ಹಾಗೂ ಸಾಂಸ್ಕೃತಿಕ ಅಪಾಯಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಸುಲಭವಾಗಿ ಹೇಳಬಹುದು ಆದರೆ ಇದು ವಾಸ್ತವವಲ್ಲ. ಈ ಅರ್ಥಗಳನ್ನು ರೂಪಿಸುವ ಸಾಮಾಜಿಕ ಹೊಣೆಗಾರಿಕೆ ಯಾರಿಗೂ ಸೇರದಿದ್ದರೂ, ಅದನ್ನು ತಮ್ಮ ಕೈವಸಮಾಡಿಕೊಳ್ಳುವ ಹಿತಾಸಕ್ತಿ ಕೆಲವು ವರ್ಗ, ಜಾತಿ ಹಾಗೂ ಧರ್ಮದವರಿಗೆ ಇರುತ್ತದೆ.
ಅರ್ಥದ ವಿಭಿನ್ನತೆ ಭಾಷೆಯಲ್ಲಿ ನೆಲೆನಿಂತಿರುವುದಿಲ್ಲ. ಅದು ಆಯಾ ಭಾಷೆಯ ಜನರ ಗ್ರಹಿಕೆಯಲ್ಲಿ ಅಂತಸ್ಥವಾಗಿರುತ್ತದೆ. ಯಾವ ನುಡಿ ಸಮುದಾಯವೂ ಈ ಗ್ರಹಿಕೆಯನ್ನು ಪ್ರಜಾಸತ್ತಾತ್ಮಕಗೊಳಿಸುವ ತುಡಿತವನ್ನು ಹೊಂದಿರಲಾವು. ಸಾಮಾಜಿಕ ಮತ್ತು ರಾಜಕಿಯ ಪ್ರಾಬಲ್ಯ ಹೊಂದಿದ ಜಾತಿ ವರ್ಗಗಳು, ಈ ಅರ್ಥೈಸುವಿಕೆಯನ್ನು ನಿಯಂತ್ರಿಸುತ್ತವೆ. ಈ ವಾಸ್ತವವನ್ನು ಅರಿಯದ ಹಿಪೋಕ್ರ್ಯಾಟ್ ಚಿಂತಕರೂ, ಇದೇ ಟ್ರ್ಯಾಪ್ನಿಲ್ಲಿ ಬಿದ್ದುಕೊಂಡು, ಯಾರ ಪರವಾಗಿರಬೇಕಿತ್ತೋ, ಅವರನ್ನೇ ಅಪಮಾನಿಸುವ ಹುನ್ನಾರದಲ್ಲಿ ಭಾಗಿಯಾಗುತ್ತಾರೆ. ಯಾವುದು ಮನುಷ್ಯ ಘನತೆಯನ್ನು ಎತ್ತಿಹಿಡಿಯುವ ಸಾಧನವಾಗಬೇಕಿತ್ತೋ, ಅದನ್ನೇ ತಮ್ಮ ಕೀಳಭಿರುಚಿಗೆ ಬಳಸಿಕೊಂಡು, ಸಮುದಾಯಗಳ ಹಿತವನ್ನು ನಿರ್ಲಕ್ಷಿಸಿ, ತಮ್ಮ ಹಿರಿಮೆಯನ್ನು ಮೆರೆಯುತ್ತಾರೆ.
ಸಾಹಿತ್ಯ ಪಠ್ಯಗಳ ವಿಶ್ಲೇಷಣೆಯನ್ನೇ, ಸಾಮಾಜಿಕ ವಿಜ್ಞಾನಗಳ ಸನ್ನಿವೇಶದಲ್ಲಿ ಅನುಸರಿಸಲು ಸಾಧ್ಯವಿಲ್ಲ. ಅಥವಾ ಸಾಮಾಜಿಕ ವಿಜ್ಞಾನಗಳ ವಿಶ್ಲೇಷಣಾ ಪರಿಕರಗಳನ್ನು ನೇರವಾಗಿ ಸಾಹಿತ್ಯಕ್ಕೆ ಒಗ್ಗಿಸಿಕೊಂಡು, ಸಾಹಿತ್ಯವನ್ನು ಅರಿಯುವುದು ಸೂಕ್ತವಲ್ಲ. ಕಾರಣವಿಷ್ಟೆ, ಅರ್ಥದ ವ್ಯಾಪ್ತಿ ಮತ್ತು ಆಯಾಮಗಳು ಆಯಾ ತಿಳಿವಿನ ವಲಯಗಳಿಗೆ ತಕ್ಕಂತೆ ಭಿನ್ನವಾಗಿರುತ್ತವೆ. ಈ ಭಿನ್ನತೆಯೇ ಘನತೆಯ ವೈಶಿಷ್ಟ್ಯವಾಗಿದೆ. ಭಿನ್ನತೆಯೆಂಬುದು ಮೇಲು-ಕೀಳುಗಳನ್ನು ತೀರ್ಮಾನಿಸುವ ಬಗೆಯಲ್ಲ.
ಹಾಗೂ ಬೈನರಿ ಇಲ್ಲವೇ ಡೈಕಾಟಮಿಗಳನ್ನು ರೂಪಿಸುವ ತಂತ್ರವೂ ಅಲ್ಲ. ಇದುವೇ ವ್ಯಕ್ತಿ, ಸಮೂಹ ಹಾಗೂ ದೇಶಗಳ ಘನತೆಯನ್ನು ಅರಿಯುವ ಕ್ರಮವಾಗಿದೆ. ಯಾವುದೇ ವ್ಯಕ್ತಿಯ ಇಲ್ಲವೇ ಸಮೂಹದ ಘನತೆಯನ್ನು ಕೇವಲ ಸಾಪೇಕ್ಷಿತವಾಗಿ ತೀರ್ಮಾನಿಸಿದರೆ, ಘನತೆಯೆಂಬ ವಿದ್ಯಮಾನವೇ ನಗೆಪಾಟಲಿಗೆ ಈಡಾಗುತ್ತದೆ. ಉದಾಹರಣೆಗೆ ಒಡಲಾಳದಲ್ಲಿ ಬರುವ ಕಡಲೆಕಾಯಿ ಪ್ರಸಂಗ, ಕುಸಮಬಾಲೆಯ ಎಳೆನೀರಿನ ಪ್ರಸಂಗವನ್ನು ಸರಳರೇಖಾತ್ಮಕ ಗ್ರಹಿಕೆಯಲ್ಲಿ ವಿಶ್ಲೇಷಿಸಿದರೆ, ಆ ಪಾತ್ರಗಳು ಕೇವಲ ಅನೈತಿಕತೆಯ ರೂಪಕವಾಗಿ ಕಾಣುತ್ತವೆ.
ಈ ಎರಡೂ ಪ್ರಸಂಗಗಳ ಹಿಂದಿನ ಸಾಮಾಜಿಕ, ರಾಜಕೀಯ ಹುನ್ನಾರಗಳು ಏನೆಂದು ಬಿಡಿಸಿನೋಡದೇ, ಅವುಗಳನ್ನು ಸಮ್ಮತಿಸುವ ಇಲ್ಲವೇ ಅವುಗಳೊಟ್ಟಿಗೆ ಒಂದು ಬಗೆಯ ತಾದ್ಯಾತ್ಮತೆಯನ್ನು ಹೊಂದಲು ಸಾಧ್ಯವಿಲ್ಲ. ಆದರೆ ಸಾಮಾಜಿಕ ವಿಜ್ಞಾನಗಳ ಹಿನ್ನಲೆಯಲ್ಲಿ ಇವೆರಡೂ ಪ್ರಸಂಗಗಳನ್ನು ವಿಶ್ಲೇಷಣೆ ಮಾಡಿದರೆ, ಗ್ರಹಿಕೆಯ ಸಾಧ್ಯತೆಗಳು ಬೇರೆಯಾಗಿರುತ್ತವೆ.
ಸಾಹಿತ್ಯ ಮತ್ತು ಸಮಾಜ ವಿಜ್ಞಾನಗಳ ನಡುವಿನ ಈ ವಿಶ್ಲೇಷಣೆಯ ಶೈಲಿ ಮತ್ತು ಮಾದರಿ ಬದಲಾದ ತಕ್ಷಣ ಮನುಷ್ಯ ಘನತೆಯ ಕಲ್ಪನೆ ಬದಲಾಗುವುದಿಲ್ಲ. ಆದರೆ ಈ ಘನತೆಯನ್ನು ಅರಿಯುವ ಸಾಧ್ಯತೆ ಇನ್ನಷ್ಟು ವಿಸ್ತಾರಗೊಳ್ಳುತ್ತದೆ. ಅಂಬೇಡ್ಕರ್, ಟ್ಯಾಗೋರ್, ಟಾಲ್ಸ್ಟಾಯ್, ಕುವೆಂಪು ಮತ್ತು ಗಾಂಧಿ ಅವರ ಚಿಂತನೆಗಳಲ್ಲಿ ಮೈದಾಳುವ ಮನುಷ್ಯ ಘನತೆಯ ನೆಲೆಗಳು ಹೀಗೆ ಸಾಹಿತ್ಯ, ಸಮಾಜವಿಜ್ಞಾನಗಳ ಸಾಧ್ಯತೆಗಳಿಂದ ಪ್ರಕಟಗೊಂಡಿವೆ.
ತಾತ್ವಿಕವಾಗಿ ಇಲ್ಲವೇ ತತ್ವಶಾಸ್ತ್ರೀಯ ನೆಲೆಯಲ್ಲಿ ಮನುಷ್ಯ ಘನತೆಯನ್ನು ಕುರಿತು ಚರ್ಚಿಸುವಾಗ, ಎರಡು ಬಗೆಯ ಸಮಸ್ಯೆಗಳನ್ನು ಎದುರಿಸುತ್ತೇವೆ. ಮನುಷ್ಯ ಘನತೆಯಂತಹ ಪರಿಕಲ್ಪನೆಗಳು ಸಹಜವಾಗಿ ಅಸ್ಪಷ್ಟವೂ ಹಾಗೂ ಸಂದಿಗ್ದವೂ ಆಗಿರುತ್ತವೆ. ಈ ಅಸ್ಪಷ್ಟ ಮತ್ತು ಸಂದಿಗ್ದತೆ ಇವೆರಡೂ ಭಾಷಿಕ ಕ್ರಿಯೆಯಲ್ಲಿ ನೆಲೆಗೊಳ್ಳುತ್ತವೆ. ಹಾಗಾಗಿ ಘನತೆಯನ್ನು ವ್ಯಾಖ್ಯಾನಿಸುವುದು ಅತ್ಯಂತ ದುಸ್ತರವಾದ ಕೆಲಸವಾಗಿದೆ.
ಯಾವುದನ್ನು ನಿಖರವಾಗಿ ಮತ್ತು ಸ್ಪಷ್ಟವಾಗಿ ಭಾಷೆಯೊಳಗೆ ವ್ಯಾಖ್ಯಾನಿಸಲು ಸಾಧ್ಯವೋ, ಅದು ಬಹುತೇಕವಾಗಿ ನಮ್ಮ ಗ್ರಹಿಕೆ ಮತ್ತು ಸಾಮಾಜಿಕ ಅನುಭವದಲ್ಲಿ ಸಹಜ ನಡೆಯಾಗಿರುತ್ತದೆ. ನಮ್ಮ ಗ್ರಹಿಕೆಗೆ ಎಟುಕದ ಯಾವುದೇ ಕಲ್ಪನೆ, ಪರಿಕಲ್ಪನೆ ಅಥವಾ ಅನುಭವು ಭಾಷೆಯಲ್ಲಿ ಸ್ಪಷ್ಟವಾಗಿಯೂ ಮತ್ತು ನಿಖರವಾಗಿಯೂ ವ್ಯಕ್ತವಾಗಲಾರದು. ಮನುಷ್ಯನ ಘನತೆಯ ಕಲ್ಪನೆ ಯಾಕೇ ಇಷ್ಟೊಂದು ಸಂಕೀರ್ಣವಾಗಿ ತೋರುತ್ತದೆ? ಈ ಸಂಕೀರ್ಣತೆಗೆ ಒತ್ತಾಸೆಯಾಗುವ ಭಾಷಿಕ ಮತ್ತು ಸಾಂಸ್ಕೃತಿಕ ಸವಾಲುಗಳಾವವು? ಎನ್ನುವುದಾದರೆ, ಮನುಷ್ಯ ತನ್ನ ಬದುಕಿನಲ್ಲಿ ರೂಪಿಸಿಕೊಳ್ಳುವ ಅನುಭವ ಮತ್ತು ಗ್ರಹಿಕೆ, ಇವುಗಳ ನಡುವೇ ಸಂಘರ್ಷವೊಂದು ಏರ್ಪಟ್ಟರೆ, ಇವೆರಡೂ ವಿದ್ಯಮಾನಗಳನ್ನು ಪ್ರತಿನಿಧಿಸುವ ಹಾಗೂ ಸಂಕಥನಗೊಳಿಸುವ ವಿನ್ಯಾಸಗಳು ಸ್ಪಷ್ಟವಾಗಿ ನೆಲೆನಿಲ್ಲಲಾರವು.
ಏಕೆಂದರೆ, ಮನುಷ್ಯ ಘನತೆಯನ್ನು ಪರಿಕಲ್ಪಿಸುವ ಹಾಗೂ ವ್ಯಾಖ್ಯಾನಿಸುವ ಭಾಷಿಕ ಕ್ರಿಯೆಗಳು ಮುಖ್ಯವಾಗಿ, ಗ್ರಹಿಕೆ ಮತ್ತು ಅಭಿವ್ಯಕ್ತಿಯ ವಿನ್ಯಾಸಗಳನ್ನು ಹೇಗೆ ಮಾನಸಿಕ ನಕ್ಷೆಯಲ್ಲಿ ಸಾಕಾರಗೊಳಿಸಲಾಗುತ್ತದೆ ಮತ್ತು ಅರ್ಥ ಸಾಧ್ಯತೆಗಳನ್ನು ನೆಲೆಗೊಳಿಸಲಾಗುತ್ತದೆ ಎಂಬ ಮಾನಸಿಕ ಪ್ರಕ್ರಿಯೆಗಳನ್ನು ಆಧರಿಸಿರುತ್ತವೆ. ಭಾಷಿಕ ಕ್ರಿಯೆ ಮತ್ತು ಮಾನಸಿಕ ನಕ್ಷೆಗಳ ನಡುವೆ ಪರಸ್ಪರ ಹೊಂದಾಣಿಕೆ ಏರ್ಪಡದಿದ್ದರೆ, ಸಂವಹನ ಕ್ರಿಯೆ ಸುಲಲಿತವಾಗಿ ನೆರವೇರಲಾರದು.
ಭಾಷೆ ಮತ್ತು ಮನಸ್ಸುಗಳ ನಡುವಿನ ವಿನ್ಯಾಸಗಳು ಹೇಗೆ ವ್ಯವಹರಿಸುತ್ತವೆ ಎನ್ನುವ ತಿಳಿವಳಿಕೆ ದಕ್ಕಿದರೆ ಮಾತ್ರ, ಸಾಮಾಜಿಕ ಸಾಂಗತ್ಯ ಮತ್ತು ನಂಟಸ್ತಿಕೆ ಸುಲಭವಾಗುತ್ತದೆ. ಪದಗಳ ಅರ್ಥದ ವಿನ್ಯಾಸಗಳು ಸೂಪ್ತವಾಗಿ ನಮ್ಮ ಮಾನಸಿಕ ರಚನೆಗಳಾಗಿ ಕಾರ್ಯನಿರ್ವಹಿಸಿದರೂ, ಅವುಗಳು ಅಭಿವ್ಯಕ್ತಿಗೊಳ್ಳುವಾಗೆಲ್ಲ ಕೇವಲ ಮಾನಸಿಕ ಸೂಪ್ತರಚನೆಯ ಭಾಗವಾಗಿ ಮಾತ್ರ ಇರುವುದಿಲ್ಲ. ಬದಲಾಗಿ ನಮ್ಮ ಜಾಗ್ರತ ಪ್ರಜ್ಞೆಯನ್ನು ಪ್ರತಿನಿಧಿಸುವ ಸೂಚಕಗಳಾಗುತ್ತವೆ. ಈ ಸೂಚಕಗಳು ತಮ್ಮೊಳಗೆಯೇ ಸೂಚಿತಗಳನ್ನೂ ಹೊಂದಿರುತ್ತವೆ. ಆದರೆ ರಾಜಕೀಯ ಆಯಾಮಗಳನ್ನು ಬಲವಾಗಿ ನೆಮ್ಮಿರುವ, ಯಾವುದೇ ಪರಿಕಲ್ಪನೆ ಅಥವಾ ಪರಿಭಾಷೆ ಬಹುತೇಕವಾಗಿ ಅಸ್ಪಷ್ಟ ಕಲ್ಪನೆಯಾಗಿರುತ್ತದೆ ಎಂದು ಇಲ್ಲಿ ವಾದಿಸಬಹುದು.
ಮನುಷ್ಯ ಘನತೆಯ ಈ ಪರಿಕಲ್ಪನೆಯು ಕಾನೂನು, ನೈತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯ ನೆಲೆಯಾಗಿ ಹೆಚ್ಚು ಹೆಚ್ಚು ಪ್ರಚಲಿತಗೊಳ್ಳುತ್ತದೆ. ತಾತ್ವಿಕ ಸಂಕಥನಗಳಲ್ಲಿ ಘನತೆ ಎನ್ನುವುದು ಒಂದು ಮಂತ್ರದಂತೆ ಕಾಣಿಸುತ್ತದೆ. ಆದರೆ, ಇಂತಹ ಪರಿಕಲ್ಪನೆಯನ್ನು ಸೃಜಿಸುವ ಹಾಗೂ ನೆಲೆಗೊಳಿಸುವ ಭಾಷಿಕ ಕ್ರಿಯೆಗಳು ಎಷ್ಟು ವ್ಯಾಪಕವಾಗಿ ವ್ಯಾಖ್ಯಾನಿಸಲ್ಪಡುತ್ತವೋ ಅಷ್ಟೊಂದು ಸಂಕೀರ್ಣತೆಗೆ ಒಳಗಾಗುತ್ತವೆ.
ಹಾಗಾಗಿ ಅದರ ಅರ್ಥಗಳು ಅಸ್ಪಷ್ಟ ಮತ್ತು ಮಸುಕಾಗಿ ತೋರುತ್ತವೆ. ಈ ಟಿಪ್ಪಣಿಯ ಉದ್ದೇಶವೇನೆಂದರೆ, ಮನುಷ್ಯ ಘನತೆ ಎಂಬೀ ಪರಿಕಲ್ಪನೆಯನ್ನು ಪರಿಭಾವಿಸುವ ವಿಧಾನಗಳು ಹೇಗೆ ಭಾಷೆಯ ನಿರೂಪಣೆಗಳಲ್ಲಿ ವಿಕಾಸಗೊಳ್ಳುತ್ತವೆ ಹಾಗೂ ಅರ್ಥಗಳನ್ನು ಮಾನಸಿಕ ನಕ್ಷೆಯ ಸಾಧ್ಯತೆಗಳನ್ನಾಗಿಸುವ ಬಗೆಗಳಾವವು? ಎಂಬ ತಾತ್ವಿಕ ಚರ್ಚೆಯನ್ನು ಬೆಳೆಸುವುದಾಗಿದೆ. ಪರಿಭಾಷೆ ಮತ್ತು ಅದರ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ, ಘನತೆ ಎನ್ನುವುದು ನೈತಿಕ, ದಾರ್ಶನಿಕ ಮತ್ತು ಸಂವಿಧಾನಾತ್ಮಕ ಗ್ರಹಿಕೆಯಾಗಿದೆ. ವಿಭಿನ್ನ ಭಾಷಾ ಬಳಕೆಯ ವಲಯಗಳಲ್ಲಿ ವಿಭಿನ್ನ ಅರ್ಥಗಳು ಈ ಪರಿಕಲ್ಪನೆಯನ್ನು ಸುತ್ತುವರೆದಿವೆ.
ಇದುವರೆಗೂ ಮಾಡಿದ ವಿಶ್ಲೇಷಣೆಗಳ ಪ್ರಕಾರ ಮನುಷ್ಯ ಘನತೆಯ ಅರ್ಥಗಳನ್ನು ಸಾಮಾಜಿಕ ರಚನೆ ಎಂದು ಹೇಳಬಹುದು. ಇಲ್ಲಿ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂದರ್ಭಗಳು ಪ್ರಧಾನ ಪಾತ್ರವನ್ನು ವಹಿಸುತ್ತವೆ. ವಾಸ್ತವದಲ್ಲಿ ಮನುಷ್ಯ ಘನತೆಗೆ ಯಾವುದೇ “ನಿಜವಾದ” ಅರ್ಥವಿಲ್ಲ. ವಿಭಿನ್ನಸ್ತರಗಳಲ್ಲಿ ಈ ಪರಿಕಲ್ಪನೆಯ ಅರ್ಥವು ನಿರ್ಧಾರವಾಗುತ್ತದೆ. ಆದರೆ ಆಯಾ ಸಾಮಾಜಿಕ ಸ್ತರಗಳಿಗೆ ಅನುಗುಣವಾಗಿ ಈ ವಿಭಿನ್ನತೆಯು ಕೆಲವುಸಲ ಗಹನವಾಗಿ ಮತ್ತೇ ಕೆಲವುಸಲ ಅತ್ಯಂತ ತೆಳುವಾಗಿ ನಮಗೆ ತೋರುತ್ತದೆ.
ಈ ವಿನ್ಯಾಸಗಳು ಸಾಮಾಜಿಕ-ಸಾಂಸ್ಕೃತಿಕವಾಗಿ ನಿರ್ಧರಿಸಲಾಗುತ್ತವೆ. ಕಾನೂನುಬದ್ಧ ಪರಿಭಾಷೆಯಲ್ಲಿ ‘ಘನತೆ’ ಎಂಬೀ ಪದ ಬಳಕೆಯು ಮಾನವಹಕ್ಕು ಮತ್ತು ಕಾನೂನುಗಳ ಚೌಕಟ್ಟನ್ನು ಪಡೆದುಕೊಳ್ಳುತ್ತದೆ. ಇದೊಂದು ಬಗೆಯಲ್ಲಿ ಸಮರ್ಥನೀಯ ನಿಲುವು ಆಗಿರುತ್ತದೆ. ನೈತಿಕ-ತಾತ್ವಿಕ ಪರಿಭಾಷೆಗೆ ಹೋಲಿಸಿ ನೋಡಿದರೆ, ಒಂದು ಕಡೆ ದೃಷ್ಟಿಕೋನಕ್ಕೆ ಸಂಬಂಧಿಸಿದ ನಿಲುವಾಗಿ ಕಾಣುತ್ತದೆ. ಮತ್ತೊಂದಡೆ ಅಪಮಾನಕ್ಕೆ ಸಂಬಂಧಿಸಿದ ವಿನ್ಯಾಸವಾಗಿ ಕಾಣಿಸುತ್ತದೆ. ಏಕೆಂದರೆ ಅಪಮಾನದ ಚರಿತ್ರೆಯನ್ನು ಹೊಂದಿದವರಲ್ಲಿ ಮಾತ್ರ ಘನತೆಯ ಬಯಕೆ ದೊಡ್ಡಾಗಿರುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980234243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ದಿನದ ಸುದ್ದಿ2 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
-
ಅಂತರಂಗ4 hours agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ19 hours agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್



