Connect with us

ದಿನದ ಸುದ್ದಿ

ಸಿಎಂ ಮಗನ ಭ್ರಷ್ಟಾಚಾರದ ವೃತ್ತಾಂತ : ಪವರ್ ಟಿವಿ ಬಂದ್ ಹಿಂದಿನ ಒಳ ರಾಜಕೀಯ

Published

on

  • ದಿನೇಶ್ ಅಮೀನ್ ಮಟ್ಟು

ವರ್ ಟಿವಿ ಚಾನೆಲ್ ಗೆ ಸಂಬಂಧಿಸಿದ ಬೆಳವಣಿಗೆಗಳಲ್ಲಿ ಎರಡು ಭಾಗಗಳಿವೆ. ಮೊದಲನೆಯದು ಚಾನೆಲ್ ವರದಿ ಮಾಡಿರುವ ಭ್ರಷ್ಟಾಚಾರದ ಹಗರಣ, ಎರಡನೆಯದು ಟಿವಿ ಚಾನೆಲ್ ಪ್ರಸಾರವಾಗದಂತೆ ತಡೆಹಿಡಿದಿರುವ ಕ್ರಮ.

ಮುಖ್ಯಮಂತ್ರಿಯವರ ಕುಟುಂಬದವರು ಗುತ್ತಿಗೆದಾರರಿಂದ ಲಂಚ ವಸೂಲಿ ಮಾಡಿದ್ದಾರೆ ಎನ್ನುವುದು ಆರೋಪ. ಈ ಪ್ರಕರಣದಲ್ಲಿ ಮೂವರು ಪಾತ್ರಧಾರಿಗಳಿದ್ದಾರೆ. ಲಂಚ ಕೊಟ್ಟಿರುವ ಗುತ್ತಿಗೆದಾರ, ಲಂಚ ಪಡೆದಿರುವ ರಾಜಕಾರಣಿ ಮತ್ತು ವರದಿ ಮಾಡಿದ ಪತ್ರಕರ್ತ. ಅಧಿಕಾರಿಯೊಬ್ಬರು ಇದರಲ್ಲಿ ಪೋಷಕ ಪಾತ್ರದಲ್ಲಿದ್ದಾರೆ.

ಚಾನೆಲ್ ಭ್ರಷ್ಟಾಚಾರದ ಆರೋಪ ಮಾಡಿರುವುದು ಮುಖ್ಯಮಂತ್ರಿಯ ಮಗನ ವಿರುದ್ಧ. ಆದ್ದರಿಂದ ಮೇಲ್ನೋಟಕ್ಕೆ ಚಾನೆಲ್ ವರದಿ ಗುತ್ತಿಗೆದಾರನ ಪರ ಮತ್ತು ರಾಜಕಾರಣಿಯ ವಿರುದ್ಧ ಇದ್ದಂತೆ ಕಾಣಿಸುತ್ತಿತ್ತು. ವಿಚಿತ್ರವೆಂದರೆ ಪೊಲೀಸರಿಗೆ ದೂರು ನೀಡಿರುವುದು ರಾಜಕಾರಣಿ ಅಲ್ಲ, ಗುತ್ತಿಗೆದಾರ.

ಪತ್ರಿಕೆಯ ಮಾಲೀಕರು ತಿರುಚಿದ ದಾಖಲೆಗಳನ್ನು ತೋರಿಸಿ ಹಣವಸೂಲಿಗೆ ಪ್ರಯತ್ನಿಸಿದ್ದಾರೆ ಎನ್ನುವುದು ಗುತ್ತಿಗೆದಾರರ ದೂರು. ಆ ದೂರಿನನ್ವಯ ಸಿಸಿಬಿ ಪೊಲೀಸರು ಟಿವಿ ಚಾನೆಲ್ ಮಾಲೀಕರ ಮನೆಗೆ ವಿಚಾರಣೆಗೆ ಹೋಗಿದ್ದಾರೆ, ಚಾನೆಲ್ ನ ಕಚೇರಿಗೆ ಬಂದು ಅಲ್ಲಿನ ಕಂಪ್ಯೂಟರ್ ಗಳನ್ನು ವಶಕ್ಕೆ ತೆಗೆದುಕೊಂಡು ಜಾಲಾಡಿದ್ದಾರೆ.

ಕಾನೂನಿನ ದೃಷ್ಟಿಯಿಂದ ಈ ಹಂತದ ವರೆಗೆ ನಡೆದಿರುವುದು ವಿಚಾರಣೆಯ ಸಹಜ ಪ್ರಕ್ರಿಯೆ. ತಿರುಚಿದ ದಾಖಲೆಗಳ ಮೂಲ ಹುಡುಕಲು ಆರೋಪಿಗಳ ಕಂಪ್ಯೂಟರ್, ಮೊಬೈಲ್ ಗಳನ್ನು ವಶಕ್ಕೆ ಪಡೆಯುವುದು ಪೊಲೀಸ್ ವಿಚಾರಣೆಯ ಭಾಗ.ಪತ್ರಿಕೆ ಮತ್ತು ಚಾನೆಲ್ ಗಳ ಮಾಲೀಕರು ಇಲ್ಲವೇ ವರದಿಗಾರರ ವಿರುದ್ಧ ಆರೋಪ ಎದುರಾದಾಗ ಈ ರೀತಿಯ ವಿಚಾರಣೆ ಕರ್ನಾಟಕದಲ್ಲಿಯೇ ಅನೇಕ ಪ್ರಕರಣಗಳಲ್ಲಿ ನಡೆದಿವೆ.

ಎಡವಟ್ಟಾಗಿರುವುದು ಪ್ರಕರಣದ ಎರಡನೇ ಭಾಗದಲ್ಲಿ. ವಿಚಾರಣೆಗೆಂದು ಕಚೇರಿಗೆ ಹೋಗಿದ್ದ ಪೊಲೀಸರು ಒಂದು ಅತಿರೇಕದ ಹೆಜ್ಜೆ ಮುಂದಿಟ್ಟಿದ್ದಾರೆ. ಕಂಪ್ಯೂಟರ್ ಗಳನ್ನು ವಶಕ್ಕೆ ತೆಗೆದುಕೊಳ್ಳುವ ಜೊತೆಯಲ್ಲಿ ಚಾನೆಲ್ ಪ್ರಸಾರಕ್ಕೆ ಅತ್ಯಗತ್ಯವಾಗಿರುವ ಸರ್ವರ್ ಗಳನ್ನು ವಶಕ್ಕೆ ಪಡೆದಿದ್ದಾರೆ, ಅಷ್ಟು ಮಾತ್ರವಲ್ಲ ಫೇಸ್ ಬುಕ್, ಯುಟ್ಯೂಬ್ ಖಾತೆಗಳ ಪಾಸ್ ವರ್ಡ್ ಗಳನ್ನು ಬದಲಾಯಿಸಿದ್ದಾರೆ. ಚಾನೆಲ್ ಕಾರ್ಯನಿರ್ವಹಣೆಯನ್ನು ಸಂಪೂರ್ಣ ಸ್ಥಗಿತಗೊಳಿಸುವ ದುರುದ್ದೇಶದಿಂದಲೇ ಇದನ್ನು ಮಾಡಿದ್ದಾರೆ.

ಇಂತಹ ಕೆಲಸವನ್ನು ಪೊಲೀಸರು ತಾವಾಗಿಯೇ ಮಾಡುವುದಿಲ್ಲ. ಮೇಲಿನಿಂದ ಆದೇಶ ಬಂದರಷ್ಟೇ ಮಾಡುತ್ತಾರೆ. ಈ ಪ್ರಕರಣದಲ್ಲಿ ಆದೇಶ ಯಾರು ಕೊಟ್ಟಿರಬಹುದೆಂಬ ಬಗ್ಗೆ ಯಾರಿಗೂ ಸಂಶಯ ಇಲ್ಲ. ಅಧಿಕಾರ ಮತ್ತು ದುಡ್ಡಿನ ಮದವೇರಿದ ರಾಜಕಾರಣಿಗಳು ಸಾಮಾನ್ಯವಾಗಿ ಈ ರೀತಿ ತಮ್ಮ ಗೋರಿ ತಾವೇ ತೋಡಿಕೊಳ್ಳುತ್ತಾರೆ.

ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ನನಗೆ ನಿಜಕ್ಕೂ ಕನಿಕರ ಇದೆ. ಅವರು ಈ ರೀತಿ ಸೇಡಿಗೆ ಇಳಿಯುವವರಲ್ಲ. ಅದರಲ್ಲೂ ಪತ್ರಕರ್ತರನ್ನು ಎದುರುಹಾಕಿಕೊಳ್ಳಲು ಹೋಗುವವರಲ್ಲ.( ಅವರು ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ನಾನು ಹಲವಾರು ಅಂಕಣಗಳನ್ನು ಬರೆದಿದ್ದೆ. ಅವರೆಂದೂ ನೇರವಾಗಿ ಇಲ್ಲವೇ ಸಂಪಾದಕರ ಮೂಲಕ ನನ್ನ ಮೇಲೆ ಒತ್ತಡ ಹಾಕಿಲ್ಲ. ಅಂತಹ ಅಂಕಣಗಳು ಪ್ರಕಟವಾದ ದಿನ ಕೆಲವೊಮ್ಮೆ ಬೆಳಿಗ್ಗೆ ನನ್ನ ಹಿರಿಯ ಸಹದ್ಯೋಗಿಯಾಗಿದ್ದ ಅವರ ಮಾಧ್ಯಮ ಸಲಹೆಗಾರರು ನನಗೆ ಪೋನ್ ಮಾಡಿ ‘ದಿನೇಶ್ ಓದಿದೆ,ಚೆನ್ನಾಗಿದೆ’ ಎಂದಷ್ಟೇ ಹೇಳಿ ಪೋನ್ ಇಟ್ಟುಬಿಡುತ್ತಿದ್ದರು)

ಕಳೆದ ಬಾರಿ ಯಡಿಯೂರಪ್ಪನವರು ಜೈಲಿಗೆ ಹೋಗಿರುವುದು ಕೂಡಾ ಪೂರ್ಣವಾಗಿ ಅವರ ತಪ್ಪಿನಿಂದಲ್ಲ. ಈ ಪ್ರಕರಣದಲ್ಲಿಯೂ ಪವರ್ ಟಿವಿ ಮೇಲೆ ಅವರ ಮಗನ ಒತ್ತಡದಿಂದ ದಾಳಿಯಾಗಿದ್ದರೆ ಆ ಮಗನ ಬಗ್ಗೆ ನನಗೆ ಇನ್ನೂ ಹೆಚ್ಚು ಕನಿಕರ ಇದೆ. ಇದು ರಾಜಕೀಯದಲ್ಲಿ ಬೆಳೆಯಲು ಬಯಸುವ ಮಕ್ಕಳ ಲಕ್ಷಣ ಅಲ್ಲ. ಈ ದಾರಿಯಲ್ಲಿ ಅವರು ಬಹಳ ದೂರ ಖಂಡಿತ ಹೋಗಲಾರರು.

ಇವೆಲ್ಲದರ ನಡುವೆ ಈ ಪ್ರಕರಣದಲ್ಲಿ ನನಗೆ ಸುಲಭದಲ್ಲಿ ಅರ್ಥವಾಗದ ಕೆಲವು ಸಿಕ್ಕುಗಳಿವೆ. ಮೊದಲನೆಯದಾಗಿ, ಮಾಧ್ಯಮ ಸಂಸ್ಥೆಗಳ ಮಾಲೀಕರೇ ಸಂಪಾದಕರಾಗಿರುವ ಅನೇಕ ಉದಾಹರಣೆಗಳು ನಮ್ಮ ನಡುವೆ ಇರುವುದರಿಂದ ತಪ್ಪೆಂದು ಹೇಳಲಾಗುವುದಿಲ್ಲ. ಆದರೆ ಪವರ್ ಟಿವಿ ಚಾನೆಲ್ ನ ಮಾಲೀಕರು ತಮ್ಮನ್ನು ಸಂಪಾದಕರೆಂದು ಕರೆಸಿಕೊಂಡಿಲ್ಲ. ಚಾನೆಲ್ ಗೆ ಬೇರೆ ಸಂಪಾದಕರಿದ್ದಾರೆ.

ಹೀಗಿರುವಾಗ ಇಂತಹದ್ದೊಂದು ಮುಖ್ಯವಾದ ವರದಿಯನ್ನು ಅವರೇ ಪರದೆಯ ಮುಂದೆ ಬಂದು ಹೋರಾಟಗಾರನ ರೀತಿ ಪ್ರಸ್ತುತ ಪಡಿಸಿ ಅಬ್ಬರಿಸುತ್ತಿದ್ದುದು ನನಗೆ ವಿಚಿತ್ರವಾಗಿ ಕಂಡಿತ್ತು. ಯಾಕೆಂದರೆ ಮಾಲೀಕರಿಗೆ ಸಾಮಾನ್ಯವಾಗಿ ಬೇರೆ ವ್ಯವಹಾರಿಕವಾದ ಹಿತಾಸಕ್ತಿಗಳಿರುತ್ತವೆ. ಈ ಕಾರಣದಿಂದಾಗಿ ಚಾನೆಲ್ ಮಾಡಿರುವ ವರದಿ ಸತ್ಯನಿಷ್ಠವಾಗಿದ್ದರೂ ವೀಕ್ಷಕರಿಗೆ ಸಹಜವಾಗಿ ಕೆಲವು ಅನುಮಾನ ಮೂಡುತ್ತದೆ.

ಎರಡನೆಯದಾಗಿ, ತಮ್ಮ ಕಚೇರಿಯಲ್ಲಿ ಗಾಂಧಿ,ಅಂಬೇಡ್ಕರ್ ಜೊತೆ ಹೆಡಗೆವಾರ್ ಅವರ ಪೋಟೊಗಳನ್ನೂ ನೇತುಹಾಕಿರುವ ಪವರ್ ಟಿವಿ ಚಾನೆಲ್, ಸೆಕ್ಯುಲರ್, ಲಿಬರಲ್ ಚಾನೆಲ್ ಆಗಿರಲಿಲ್ಲ. ಕನ್ನಡದ ಉಳಿದ ಚಾನೆಲ್ ಗಿಂತ ಬಹಳ ಭಿನ್ನವಾಗಿ ಏನೂ ಇರಲಿಲ್ಲ. ಇತ್ತೀಚಿನ ಡಿ.ಜೆ.ಹಳ್ಳಿ, ಪಾದರಾಯನಪುರಕ್ಕೆ ಸಂಬಂಧಿಸಿದ ವರದಿಗಳನ್ನೇ ಗಮನಿಸಿರಬಹುದು.

ಇಂತಹ ಟಿವಿ ಚಾನೆಲ್ ಇದ್ದಕ್ಕಿದ್ದ ಹಾಗೆ ಮುಖ್ಯಮಂತ್ರಿ ಕುಟುಂಬದ ವಿರುದ್ಧ ತಿರುಗಿ ಬೀಳಲು ಏನು ಕಾರಣ? ಅದೂ ಯಡಿಯೂರಪ್ಪನವರ ಬದಲಾವಣೆಗಾಗಿ ಪಕ್ಷದೊಳಗಿಂದಲೇ ಪ್ರಯತ್ನಗಳು ನಡೆಯುತ್ತಿರುವ ಮತ್ತು ಈ ಬದಲಾವಣೆಯ ಸೂತ್ರವನ್ನು ದೆಹಲಿಯಲ್ಲಿ ಕೂತಿರುವ ಕರ್ನಾಟಕದ ನಾಯಕರೊಬ್ಬರು ಹಿಡ್ಕೊಂಡಿದ್ದಾರೆ ಎಂಬ ವರದಿಗಳು ಬರುತ್ತಿರುವ ಸಂದರ್ಭದಲ್ಲಿ.

ಮೂರನೆಯದಾಗಿ, ಪತ್ರಕರ್ತ/ರಾಜಕಾರಣಿ/ಶಿಕ್ಷಣ ತಜ್ಞರೆನಿಸಿಕೊಂಡಿರುವ ರವೀಂದ್ರ ರೇಷ್ಮೆಯವರ ಪಾತ್ರ. ಹೆಚ್ಚುಕಡಿಮೆ ಕಳೆದೊಂದು ದಶಕದಿಂದ ಬಿಜೆಪಿಯ ಜೊತೆ ಸೈದ್ಧಾಂತಿಕ ಸಹಮತವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಾ ಬಂದಿರುವವರು. ಬಿಎಸ್ ವೈ ಅವರು ಈ ಬಾರಿ ಮುಖ್ಯಮಂತ್ರಿಯಾದಾಗ ಅವರ ಸಂಭವನೀಯ ಮಾಧ್ಯಮ ಸಲಹೆಗಾರರ ಪಟ್ಟಿಯಲ್ಲಿ ಇವರ ಹೆಸರು ಕೂಡಾ ಕೇಳಿಬರುತ್ತಿತ್ತು.

ಹೀಗಿದ್ದವರು ಇದ್ದಕ್ಕಿದ್ದ ಹಾಗೆ ಬಿಎಸ್ ವೈ ಅವರ ವಿರುದ್ದದ ಭ್ರಷ್ಟಾಚಾರದ ಹೋರಾಟದಲ್ಲಿ ಕಣಕ್ಕಿಳಿಯಲು ಏನು ಕಾರಣ? ಬಿ.ಎಸ್.ಯಡಿಯೂರಪ್ಪನವರಾಗಲಿ, ಅವರ ಕುಟುಂಬವಾಗಲಿ ಕಳೆದ ಒಂದು ತಿಂಗಳಿನಿಂದ ಭ್ರಷ್ಟರಾದವರಲ್ಲವಲ್ಲ.

ಶ್ರೀರಾಮುಲು ಅವರ ಭ್ರಷ್ಟತೆಯನ್ನೇ ಸಹಿಸಿಕೊಂಡು ಅವರ ಜೊತೆ ಸೇರಿಕೊಂಡಿದ್ದ ರೇಷ್ಮೆ ಅವರು ದಿಡೀರನೇ ಭ್ರಷ್ಟಾಚಾರದ ವಿರುದ್ದದ ಉಗ್ರಹೋರಾಟಕ್ಕೆ ಇಳಿದಿರುವುದು ನನಗಂತು ಅಚ್ಚರಿ ಮೂಡಿಸಿದೆ. ಪ್ರಾಮಾಣಿಕವಾಗಿ ಇಂತಹದ್ದೊಂದು ಪರಿವರ್ತನೆ ಅವರಲ್ಲಿ ಆಗಿದ್ದರೆ ಅದನ್ನು ಸ್ವಾಗತಿಸುವವರಲ್ಲಿ ನಾನು ಮೊದಲಿಗ. ಅದನ್ನು ಮನವರಿಕೆ ಮಾಡಿಕೊಡುವ ಜವಾಬ್ದಾರಿ ಅವರಲ್ಲಿದೆ.

ಮಾಧ್ಯಮ ಸಂಸ್ಥೆಗಳ ಅದರಲ್ಲೂ ಮುಖ್ಯವಾಗಿ ಕನ್ನಡ ನ್ಯೂಸ್ ಚಾನೆಲ್ ಗಳ ಮಾಲೀಕರ ಬಗ್ಗೆ ನಾನೇನು ಮಾತನಾಡುವುದಿಲ್ಲ. ದುಡ್ಡು ಹಾಕಿದವರು ಯಾರೋ? ಮಾಲೀಕರೆಂದು ಕಾಣಿಸಿಕೊಳ್ಳುವವರು ಯಾರೋ? ಅವರಲ್ಲಿ ನಷ್ಟದ ಉದ್ಯಮವಾದ ಟಿವಿ ಚಾನೆಲ್ ಗಳಲ್ಲಿ ಬಂಡವಾಳ ಹಾಕುವ ಸಾರ್ವಜನಿಕ ಹಿತಾಸಕ್ತಿ ಯಾಕೆ ಉಕ್ಕಿ ಹರಿಯುತ್ತೋ ಒಂದೂ ನನಗೆ ಗೊತ್ತಾಗುವುದಿಲ್ಲ.

ಇವೆಲ್ಲ ಏನೇ ಇದ್ದರೂ ಪತ್ರಕರ್ತನನ್ನು ಸಾಯಿಸುವುದಷ್ಟೇ ಇಲ್ಲವೇ ಅದಕ್ಕಿಂತಲೂ ಹೀನ ಕೆಲಸ ಮಾಧ್ಯಮ ಸಂಸ್ಥೆಯನ್ನು ಸಾಯಿಸುವುದು. ಈ ದೃಷ್ಟಿಯಿಂದ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಕೊಲೆಗಡುಕ ಸರ್ಕಾರವೆಂದೇ ಹೇಳಬೇಕಾಗುತ್ತದೆ. ವ್ಯಕ್ತಿಯನ್ನು ಕೊಂದ ಪಾಪಕ್ಕೆ ಪರಿಹಾರ ಇಲ್ಲ, ಆದರೆ ಸಾಯಿಸಲು ಹೊರಟ ಸಂಸ್ಥೆಯನ್ನು ಬದುಕಿಸಲು ಸಾಧ್ಯ ಇದೆ.

ಈಗಲೂ ಕಾಲ ಮಿಂಚಿಲ್ಲ. ಬಿ.ಎಸ್.ಯಡಿಯೂರಪ್ಪನವರು ತಮ್ಮ ತಪ್ಪನ್ನು ಅರಿತುಕೊಂಡು ಚಾನೆಲ್ ಪ್ರಸಾರಕ್ಕೆ ಅವಕಾಶ ಮಾಡಿಕೊಡಬೇಕು ಅಳಿದುಳಿದ ಮಾನವನ್ನು ಉಳಿಸಿಕೊಳ್ಳಬೇಕು. ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ನೊಂದಿರುವ ,ಕಷ್ಟದಲ್ಲಿರುವ ಪವರ್ ಟಿವಿ ಚಾನೆಲ್ ನ ಪತ್ರಕರ್ತರೆಲ್ಲರ ಜೊತೆ ನಾನಿದ್ದೇನೆ. ಅಂದಹಾಗೆ ಈಗಿನ ಮುಖ್ಯಮಂತ್ರಿಗಳಿಗೊಬ್ಬರು ಮಾಧ್ಯಮ ಸಲಹೆಗಾರರಿದ್ದಾರಲ್ಲಾ, ಅವರೇನು ಮಾಡುತ್ತಿದ್ದಾರೆ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

Published

on

  • ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.

ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.

ಈ ಸಮಸ್ಯೆಗಳನ್ನು ಪರಿಹರಿಸಬೇಕಾಧ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.
ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ನಡೆಸುತ್ತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊAದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯç ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ.

ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿAತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.
ಮಾದಕ ವಸ್ತು ಬಳಸುವ ಆತಂಕದ ರಾಷ್ಟçಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡAತೆ ಯುವಜನತೆ ಹೆಚ್ಚಾಗಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ದುಶ್ಚಟಗಳ ಆರಂಭಕ್ಕೆ ಕಾರಣಗಳು

• ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.
• ಉಲ್ಲಾಸಕ್ಕಾಗಿ, ಫ್ಯಾಷನ್‌ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು
• ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು

• ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.
• ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.
• ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು.
• ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು
• ಸಮಾಜಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.
• ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.
• ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ.

ಪರಿಹಾರ ಕ್ರಮಗಳು

• ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೆ ಅದರಿಂದ ದೂರವಿರುವುದು.
• ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು.
• ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು.
• 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.
• ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಳಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.
• ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟçಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು.

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು.

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತ ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. (ಜೂನ್-26 ರಂದು ಅಂತರರಾಷ್ಟೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ ಈ ಲೇಖನ – ಡಾ. ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಕಾಲೇಜು,ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ

Published

on

ಸುದ್ದಿದಿನ,ಶಿವಮೊಗ್ಗ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜೂ. 29 ರ ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮೋ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಉಚಿತ ಪ್ರವೇಶ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ :08182-255293/ 9108235132/8151093747/ 9482023412 ಗಳ ಮೂಲಕ ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಟಿಇಟಿ ಪರೀಕ್ಷೆಗೆ ಸಕಲ ಸಿದ್ಧತೆ

Published

on

ಸುದ್ದಿದಿನ,ದಾವಣಗೆರೆ:ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿ ಜೂನ್ 30 ರಂದು ರಾಜ್ಯಾದ್ಯಂತ ನಡೆಯಲಿದ್ದು ದಾವಣಗೆರೆ ನಗರದ 19 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಟಿಇಟಿ ಪರೀಕ್ಷಾ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟಿಇಟಿ ಪರೀಕ್ಷೆಯನ್ನು ಯಾವುದೇ ಲೋಪ ದೋಷಗಳಿಗೆ ಅವಕಾಶ ಇಲ್ಲದಂತೆ ಪಾರದರ್ಶಕವಾಗಿ ನಡೆಸಬೇಕು. ಪರೀಕ್ಷಾ ಪಾವಿತ್ರ್ಯತೆ ಗೆ ಯಾವುದೇ ಧಕ್ಕೆಯಾಗದಂತೆ ನಡೆಸಲು ಕೇಂದ್ರದ ಅಧೀಕ್ಷಕರು ಗಳಿಗೆ ಸೂಚನೆ ನೀಡಿ ಕೇಂದ್ರದಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲು ತಿಳಿಸಿದರು.

ಜೂನ್ 30 ಭಾನುವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ 11 ಕೇಂದ್ರಗಳಲ್ಲಿ 3805 ಮತ್ತು ಮಧ್ಯಾಹ್ನ 2 ರಿಂದ ಸಂಜೆ 4.30 ವರೆಗೆ 19 ಕೇಂದ್ರಗಳಲ್ಲಿ 6150 ಅಭ್ಯರ್ಥಿಗಳು ಪರೀಕ್ಷೆ ಬರೆಯುವರು.

144 ಸೆಕ್ಷನ್ ಜಾರಿ. ಪರೀಕ್ಷಾ ಅವ್ಯವಹಾರ ಹಾಗೂ ಸುಗಮ ಪರೀಕ್ಷೆಗಾಗಿ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಇರುತ್ತದೆ. ಕೇಂದ್ರದ ಸುತ್ತಮುತ್ತ ಜೆರಾಕ್ಸ್ ಅಂಗಡಿ, ಇಂಟರ್ ನೆಟ್ ಸೆಂಟರ್ ಮುಚ್ಚಲು ಆದೇಶಿಸಲಾಗುತ್ತದೆ. ಮತ್ತು ಪರೀಕ್ಷಾ ಕೇಂದ್ರದೊಳಗೆ ಯಾವುದೇ ಮೊಬೈಲ್, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರುವಂತಿಲ್ಲ. ಕೇಂದ್ರದ ಪ್ರವೇಶಕ್ಕೂ ಮೊದಲು ತಪಾಸಣೆ ಮಾಡಿ ಪ್ರವೇಶ ನೀಡಬೇಕೆಂದು ಸೂಚಿಸಿದರು.

ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಡಯಟ್ ಪ್ರಾಂಶುಪಾಲರಾದ ಗೀತಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending