Connect with us

ಬಹಿರಂಗ

ರೈತ ಪ್ರತಿಭಟನೆಯ ಜಾಗತಿಕ ಆಯಾಮ

Published

on

 

  • ಮೂಲ : ಉತ್ಸಾ ಪಟ್ನಾಯಕ್( ಹಿಂದೂ ದಿನಪತ್ರಿಕೆ 30-12-20) ಅನುವಾದ : ನಾ ದಿವಾಕರ

ರೈತರೊಂದಿಗೆ ಮಾತುಕತೆಯನ್ನೂ ನಡೆಸದೆ, ಕೇಂದ್ರ ಸರ್ಕಾರ ಸಂಸತ್ತಿನಲ್ಲಿಯೂ ಚರ್ಚೆ ನಡೆಸದೆ ಅವಸರದಲ್ಲಿ ಜಾರಿಗೊಳಿಸಿರುವ ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯಲು ಆಗ್ರಹಿಸಿ ದೇಶದ ರೈತರು ನಡೆಸುತ್ತಿರುವ ಆಂದೋಲನ ಎರಡನೆ ತಿಂಗಳಿಗೆ ಕಾಲಿಟ್ಟಿದೆ. ರೈತರ ಈ ಆಂದೋಲನ ಚಾರಿತ್ರಿಕ ಮಹತ್ವ ಪಡೆದಿದೆ.

ರೈತಾಪಿಯ ಈ ಮುಷ್ಕರ ಕೇವಲ ಕನಿಷ್ಠ ಬೆಂಬಲ ಬೆಲೆಗೆ ಸೀಮಿತವಾದದ್ದಲ್ಲ. ಸಾರ್ವಜನಿಕ ಆಹಾರ ಧಾನ್ಯಗಳ ಸಾರ್ವಜನಿಕ ಸಂಗ್ರಹಣೆ ಮತ್ತು ವಿತರಣೆಯ ವ್ಯವಸ್ಥೆಯ ಉಳಿವಿಗೂ ಈ ಹೋರಾಟ ನಿರ್ಣಾಯಕವಾಗಿದೆ. ಭಾರತದ ಆಹಾರ ಕಣಜ ಎಂದೇ ಹೇಳಬಹುದಾದ ಉತ್ತರ ಭಾರತದ ಆಹಾರ ಧಾನ್ಯ ಉತ್ಪಾದನೆಯ ಆರ್ಥಿಕ ಸಕ್ಷಮತೆಯನ್ನು ಕಾಪಾಡದೆ ಹೋದಲ್ಲಿ ಇಡೀ ದೇಶದ ಸಾರ್ವಜನಿಕ ಆಹಾರ ಸಂಗ್ರಹಣೆ ವಿತರಣೆಯ ಪ್ರಕ್ರಿಯೆ ದುರ್ಬಲವಾಗುತ್ತದೆ. ಪ್ರಸ್ತುತ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಏನೇ ಕೊರತೆ, ಲೋಪದೋಷಗಳಿದ್ದರೂ ಇದು ದೇಶದ ಬಹುಸಂಖ್ಯೆಯ ಜನರಿಗೆ ಜೀವನಾಧಾರ ಒದಗಿಸುತ್ತಿರುವುದನ್ನು ಇಲ್ಲಿ ಗಮನಿಸಬೇಕಿದೆ.

ವಸಾಹತುಕಾಲ ಸ್ಥಿತಿಯ ಮರುನಿರ್ಮಾಣ

ಉತ್ತರದ ಔದ್ಯಮಿಕ ದೇಶಗಳಾದ ಅಮೆರಿಕ, ಕೆನಡಾ ಮತ್ತು ಐರೋಪ್ಯ ಸಂಘಟನೆಯ ರಾಷ್ಟ್ರಗಳಲ್ಲಿ ಅಲ್ಲಿನ ಗ್ರಾಹಕರಿಂದಲೇ ಹೆಚ್ಚಿನ ಬೇಡಿಕೆ ಇರುವ ಉಷ್ಣವಲಯದ ಮತ್ತು ಉಪ ಉಷ್ಣವಲಯದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ. ಆದರೆ ಈ ದೇಶಗಳ ಹವಾಮಾನಕ್ಕೆ ಅನುಗುಣವಾಗಿ ಅಲ್ಲಿನ ಏಕ ಬೆಳೆಯ ಭೂಮಿಯಲ್ಲಿ ಬೆಳೆಯಲಾಗುವ ಆಹಾರ ಧಾನ್ಯಗಳು ಮತ್ತು ಹೈನು ಉತ್ಪನ್ನಗಳು ಹೇರಳವಾಗಿ ಸಂಗ್ರಹವಾಗಿರುತ್ತವೆ.

ಈ ಧಾನ್ಯಗಳಿಗೆ ಮತ್ತು ಉತ್ಪನ್ನಗಳಿಗೆ ರಫ್ತು ಮಾರುಕಟ್ಟೆಯನ್ನು ಕಂಡುಕೊಳ್ಳುವುದು ಈ ದೇಶಗಳಿಗೆ ಅನಿವಾರ್ಯವಾಗಿರುತ್ತದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಈ ಶ್ರೀಮಂತ ರಾಷ್ಟ್ರಗಳು ಭಾರತ ಮತ್ತಿತರ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಿದ್ದು ಆಹಾರ ಧಾನ್ಯ ಸಂಗ್ರಹಣೆಯ ಪದ್ಧತಿಯನ್ನು ಕೈಬಿಡುವಂತೆ ಒತ್ತಾಯಿಸುತ್ತಿವೆ.

ಬದಲಾಗಿ ಈ ರಾಷ್ಟ್ರಗಳು ಶ್ರೀಮಂತ ರಾಷ್ಟ್ರಗಳಿಂದ ಆಹಾರಧಾನ್ಯಗಳನ್ನು ಆಮದು ಮಾಡಿಕೊಂಡು,ಇಲ್ಲಿನ ಆಹಾರ ಧಾನ್ಯ ಬೆಳೆಯುವ ಭೂಮಿಯನ್ನು ಗುತ್ತಿಗೆ ಕೃಷಿ ಪದ್ಧತಿಗೆ ಒಳಪಡಿಸಿ ರಫ್ತು ಬೆಳೆಗಳನ್ನು ಬೆಳೆಯುವಂತೆ ಒತ್ತಡ ಹೇರಲಾಗುತ್ತಿದೆ. ಈ ರೀತಿಯ ಒತ್ತಡಕ್ಕೆ ಕಾರಣವೇನೆಂದರೆ ಈ ಔದ್ಯಮಿಕ ರಾಷ್ಟ್ರಗಳಲ್ಲಿ ಭಾರತದಲ್ಲಿ ಬೆಳೆಯುವಂತಹ ಆಹಾರ ಧಾನ್ಯಗಳನ್ನು ಬೆಳೆಯಲಾಗುವುದಿಲ್ಲ. ಅಂದರೆ ವಸಾಹತು ಕಾಲಘಟ್ಟದ ಆರ್ಥಿಕ ಸನ್ನಿವೇಶವನ್ನು ಪುನರ್ ಸೃಷ್ಟಿಸುವತ್ತ ಔದ್ಯಮಿಕ ರಾಷ್ಟ್ರಗಳು ಮುನ್ನಡೆದಿವೆ.

1990ರ ದಶಕದಲ್ಲಿ ಫಿಲಿಪೈನ್ಸ್ ಮತ್ತು ಹತ್ತು ವರ್ಷಗಳ ನಂತರ ಆಫ್ರಿಕಾ ಖಂಡದ ಬೋಸ್ಟ್ವಾನಾ ದೇಶಗಳು ಈ ರೀತಿಯ ಒತ್ತಡಕ್ಕೆ ಬಲಿಯಾಗಿದ್ದವು. ಈ ಸಂದರ್ಭದಲ್ಲೇ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಧಾನ್ಯಗಳ ಬೆಳೆಯನ್ನು ಎಥನಾಲ್ ಉತ್ಪಾದನೆಗೆ ಬಳಸಲು ಆರಂಭಿಸಿದ್ದರ ಪರಿಣಾಮವಾಗಿ 2007ರ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆಗಳು ಗಗನಕ್ಕೇರಿದವು. ಆಹಾರ ಧಾನ್ಯಗಳಿಗಾಗಿ ಆಮದು ಪದಾರ್ಥಗಳನ್ನೇ ಅವಲಂಬಿಸಿದ್ದ 37 ದೇಶಗಳಲ್ಲಿ ಹಾಹಾಕಾರ ಉಂಟಾಗಿದ್ದು, ಆಹಾರಕ್ಕಾಗಿ ದಂಗೆಗಳು ಉಂಟಾಗಿದ್ದವು. ನಗರ ಪ್ರದೇಶದ ಜನರು ಹೆಚ್ಚಿನ ಬಡತನಕ್ಕೆ ನೂಕಲ್ಪಟ್ಟರು.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆಹಾರ ಭದ್ರತೆ ಅತ್ಯಂತ ಮಹತ್ವದ ಸಂಗತಿಯಾಗಿದ್ದು ಇದನ್ನು ಜಾಗತಿಕ ಮಾರುಕಟ್ಟೆಯ ನಿಯಂತ್ರಣಕ್ಕೆ ಒಪ್ಪಿಸುವುದು ಅಪಾಯಕಾರಿಯಾಗುತ್ತದೆ. ಆದಾಗ್ಯೂ ಆಹಾರ ಭದ್ರತೆಯನ್ನು ಸಾಧಿಸಲು ಈ ದೇಶಗಳ ಸಾರ್ವಜನಿಕ ಆಹಾರ ಸಂಗ್ರಹಗಳ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ಒಂದು ದಶಕದ ಹಿಂದೆಯಷ್ಟೇ ಭಾರತ ಈ ನಿಟ್ಟಿನಲ್ಲಿ ಜಾಗೃತವಾಗಿ ತನ್ನ ಆಹಾರ ಸಂಗ್ರಹವನ್ನು ಸಂರಕ್ಷಿಸಲು ಯಶಸ್ವಿಯಾಗಿತ್ತು.

2008ರ ಬೆಲೆ ಏರಿಕೆಗೂ ಮುನ್ನ ಆರು ವರ್ಷಗಳ ಕಾಲ ತಟಸ್ಥವಾಗಿದ್ದ ಬೆಂಬಲ ಬೆಲೆಗಳನ್ನು ಹೆಚ್ಚಿಸಲಾಗಿತ್ತು. ಆರ್ಥಿಕ ಪುನಶ್ಚೇತನದ ಪರಿಣಾಮ ಪಂಜಾಬ್ ನಲ್ಲಿ ಜಡಗಟ್ಟಿದ್ದ ಆಹಾರ ಧಾನ್ಯ ಉತ್ಪಾದನೆ ಹೆಚ್ಚಾಗಿತ್ತು. ಆದರೆ ಬಹುಸಂಖ್ಯೆಯ ಬಡಜನತೆಯನ್ನು “ ಬಡತನ ರೇಖೆಯ ಕೆಳಗಿರುವ ” ಪಡಿತರ ವ್ಯವಸ್ಥೆಯಿಂದ ಹೊರಗುಳಿಯುವಂತೆ ಮಾಡಿದ ಪರಿಣಾಮ ಆಹಾರ ಧಾನ್ಯಗಳ ಬಳಕೆ ಹೆಚ್ಚಾಗಲಿಲ್ಲ. 2016ರ ನೋಟು ರದ್ದತಿಯಿಂದ ಉಂಟಾದ ನಿರುದ್ಯೋಗ ಮತ್ತು 2020ರ ಕೋವಿದ್ ಪರಿಣಾಮದಿಂದ ಸೃಷ್ಟಿಯಾದ ಉದ್ಯೋಗ ಕೊರತೆ ಆಹಾರ ಧಾನ್ಯಗಳ ಒಟ್ಟಾರೆ ಬೇಡಿಕೆಯ ಪ್ರಮಾಣ ಚಾರಿತ್ರಿಕ ಕುಸಿತ ಕಾಣುವಂತೆ ಮಾಡಿವೆ.

ಭಾರತದ ರೈತಾಪಿ ಯಾವುದೇ ತರ್ಕಬದ್ಧ ಕಾರಣಗಳೇ ಇಲ್ಲದೆ ಅಪ್ರಾಮಾಣಿಕ ವ್ಯಾಪಾರದ ತಂತ್ರಗಾರಿಕೆಗಳಿಗೆ ಬಲಿಯಾಗಬೇಕಾಯಿತು. ಜಾಗತಿಕ ಬೆಲೆಗಳ ಏರುಪೇರುಗಳ ಪರಿಣಾಮ ಭಾರತದ ರೈತರು ತೀವ್ರ ಸಾಲದ ಹೊರೆಗೆ ಸಿಲುಕಿ ಸಂಕಷ್ಟಕ್ಕೀಡಾಗಬೇಕಾಯಿತು. ಪಂಜಾಬ್ ನ ಒಂದು ಗ್ರಾಮದಲ್ಲಿ ಆತ್ಮಹತ್ಯೆಯಿಂದ ತಮ್ಮ ಗಂಡಂದಿರನ್ನು ಕಳೆದುಕೊಂಡ 59 ವಿಧವೆಯರಿದ್ದಾರೆ.

ಅಭಿವೃದ್ಧಿ ಹೊಂದಿದ ದೇಶಗಳೊಡನೆ ಭಾರತ ಪೈಪೋಟಿ ನಡೆಸುವುದು ತರವಲ್ಲ. ಏಕೆಂದರೆ 1990ರ ದಶಕದಲ್ಲಿ ಈ ಶ್ರೀಮಂತ ರಾಷ್ಟ್ರಗಳು ತಮ್ಮ ಬೆಂಬಲ ಬೆಲೆ ಪದ್ಧತಿಯನ್ನು ಪರಿಷ್ಕರಿಸುವ ಮೂಲಕ ಅಲ್ಲಿನ ರೈತರಿಗೆ ಸಹಾಯಧನವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲು ಆರಂಭಿಸಿದ್ದವು.

ಅಂತಾರಾಷ್ಟ್ರೀಯ ಕೃಷಿ ಒಡಂಬಡಿಕೆಯ ಸಹಾಯಧನವನ್ನು ಕಡಿಮೆ ಮಾಡುವ ಒಪ್ಪಂದದ ಅನುಸಾರ ಈ ರೀತಿ ನೇರ ನಗದು ನೀಡುವುದು ನಿಯಮಗಳ ಉಲ್ಲಂಘನೆಯಾಗಿದ್ದರೂ, ಇದು ಒಡಂಬಡಿಕೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳದಂತೆ ಈ ದೇಶಗಳು ಎಚ್ಚರವಹಿಸಿದ್ದವು. ಇದರಿಂದ ಉಂಟಾಗಬಹುದಾದ ಪರಿಣಾಮವನ್ನು ಗಮನಿಸದೆಯೇ ಭಾರತ ಮತ್ತಿತರ ರಾಷ್ಟ್ರಗಳು ಈ ಒಡಂಬಡಿಕೆಗೆ ಸಹಿ ಹಾಕಿದ್ದವು.

ಅಮೆರಿಕದ 20 ಲಕ್ಷ ರೈತರಿಗೆ ನೀಡುವ ನೇರ ನಗದು ಸಹಾಯಧನದ ಪ್ರಮಾಣ ಆ ದೇಶದ ಒಟ್ಟು ಕೃಷಿ ಉತ್ಪನ್ನದ ಮೌಲ್ಯದಲ್ಲಿ ಅರ್ಧದಷ್ಟಾಗುತ್ತದೆ. ಇದಕ್ಕೆ ಅಮೆರಿಕದ ಬಜೆಟ್ ನ ಶೇ 1ರಷ್ಟು ನಿದಿ ಬಳಕೆಯಾಗುತ್ತದೆ. ಭಾರತದಲ್ಲಿ ಇದೇ ರೀತಿ ಒಟ್ಟು ಕೃಷಿ ಉತ್ಪಾದನಾ ಮೌಲ್ಯದ ಶೇ 25ರಷ್ಟು ಪ್ರಮಾಣವನ್ನು ಒಂದು ಕೋಟಿ 20 ಲಕ್ಷ ರೈತರಿಗೆ ಸಹಾಯಧನದ ರೂಪದಲ್ಲಿ ನೀಡಿದರೂ ಕೇಂದ್ರ ಬಜೆಟ್ ನಲ್ಲಿ ಶೇ 50ರಷ್ಟು ನಿಧಿಯ ಬಳಕೆಯಾಗುತ್ತದೆ. ಇದು ಆರ್ಥಿಕವಾಗಿ ಅಸಾಧ್ಯವಾಗಿದ್ದು ಆಡಳಿತ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸುತ್ತದೆ.

ಸಮರ್ಪಕ ಬೆಲೆಯ ನಿಷ್ಕರ್ಷೆ

ತಮಗೆ ಅಲ್ಪ ಪ್ರಮಾಣದ ನಗದು ಪಾವತಿ ಮಾಡುವುದನ್ನು ಭಾರತದ ರೈತರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ದೇಶದ ಸಮಸ್ತ ಜನತೆಗಾಗಿ ತಾವು ಬೆಳೆಯುವ ಆಹಾರ ಧಾನ್ಯಗಳಿಗೆ ಸಮರ್ಪಕವಾದ, ತರ್ಕಬದ್ಧವಾದ ಬೆಲೆ ನೀಡುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಹಾಗಾದಲ್ಲಿ ಮಾತ್ರ ರೈತರು ತಮ್ಮ ಬೇಸಾಯದ ವೆಚ್ಚವನ್ನು ಸರಿದೂಗಿಸಿ ಸಾಧಾರಣ ಬದುಕು ನಡೆಸಲು ಸಾಧ್ಯವಾಗುತ್ತದೆ.

ಭಾರತದ ಸಂದರ್ಭದಲ್ಲಿ ಬೆಂಬಲ ಬೆಲೆ ಪದ್ಧತಿಯೊಂದೇ ನ್ಯಾಯಯುತವಾಗಿ ಕಾಣುತ್ತದೆ. ಪಂಜಾಬ್ ನಲ್ಲಿ ಅಂತರ್ಜಲ ಕುಸಿಯುತ್ತಿರುವುದು ಆತಂಕಕಾರಿ ವಿಷಯವೇ ಆದರೂ ಇಲ್ಲಿ ನೂತನ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸುವುದು ಮುಖ್ಯವಾಗುತ್ತದೆ. ಕಡಿಮೆ ನೀರು ಬಳಕೆಯಾಗುವಂತಹ ಮಾದರಿಗಳನ್ನು ಬಳಸಬೇಕಾಗುತ್ತದೆ. ( ಕೃಷಿ ವಿಜ್ಞಾನಿಗಳು ಕಂಡುಹಿಡಿದಿರುವ Rice Intensification ಪದ್ಧತಿಯಲ್ಲಿ ಭತ್ತ ಬೆಳೆಯಲು ಹೆಚ್ಚಿನ ಸಾವಯವ ಗೊಬ್ಬರವನ್ನು ಬಳಸುವುದು ಮತ್ತು ಹೆಚ್ಚಿನ ಅಂತರದಲ್ಲಿ ಭತ್ತದ ನಾಟಿ ಮಾಡುವುದು, ಚೌಕಾಕಾರದಲ್ಲಿ ನಾಟಿ ಮಾಡುವುದರ ಮೂಲಕ ನಡುವೆ ಹೆಚ್ಚಿನ ಜಲಸಾಂದ್ರತೆಯನ್ನು ತಡೆಗಟ್ಟಿ, ತೇವಾಂಶವನ್ನು ಉಳಿಸಿಕೊಳ್ಳುವುದು, ಅಂತರ್ಜಲ ಸಂರಕ್ಷಣೆಯ ಒಂದು ವಿಧಾನವಾಗಿದೆ-ಅನುವಾದಕ)

ಅಂತಾರಾಷ್ಟ್ರೀಯ ಕೃಷಿ ಒಡಂಬಡಿಕೆಗಳಲ್ಲಿ ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳು ಅಸಂಬದ್ಧ ರೀತಿಯಲ್ಲಿ, ನಿಷ್ಪ್ರಮಾಣವಾದ ನಿಯಮಗಳನ್ನು ರೂಪಿಸಿದ್ದು, ಈ ನಿಯಮಗಳ ಅಡಿಯಲ್ಲೇ ಆಹಾರ ಧಾನ್ಯಗಳ ಬೆಂಬಲ ಬೆಲೆ ನಿರ್ಧರಿಸುವುದನ್ನೂ ಅಳವಡಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಒಂದು ನಿಯಮವಾಗಿದೆ.

2018ರಲ್ಲಿ ವಿಶ್ವ ವಾಣಿಜ್ಯ ಸಂಸ್ಥೆಗೆ ಭಾರತದ ವಿರುದ್ಧ ದೂರು ಸಲ್ಲಿಸಿದ್ದ ಅಮೆರಿಕ ಸರ್ಕಾರ, ಭಾರತದಲ್ಲಿ 1986-88ರ ಮೂಲ ಬೆಲೆಯನ್ನೇ ಆಧಾರವಾಗಿಟ್ಟುಕೊಂಡು, ಅಂದಿನ ಡಾಲರ್ ಮೌಲ್ 12.5 ರೂಗಳಿಗೆ ಅನುಗುಣವಾಗಿ ಭಾರತ 2013-14ರಲ್ಲಿ ಭತ್ತ ಮತ್ತು ಗೋಧಿಗೆ ಒಂದು ಕ್ವಿಂಟಾಲಿಗೆ ಕ್ರಮವಾಗಿ 235 ರೂ ಮತ್ತು 354 ರೂ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಕೋರಿತ್ತು. ಆದರೆ ಭಾರತದಲ್ಲಿ ಈ ವೇಳೆಗೆ ಬೆಂಬಲ ಬೆಲೆ ಕ್ರಮವಾಗಿ 1348 ರೂ ಮತ್ತು 1386 ರೂಗಳಷ್ಟಿತ್ತು.

ಕ್ವಿಂಟಲ್‍ಗೆ ಒಂದು ಸಾವಿರ ರೂ ಹೆಚ್ಚಾಗಿತ್ತು. ಇದನ್ನು 2013-14ರ ಭತ್ತ ಮತ್ತು ಗೋಧಿ ಉತ್ಪನ್ನದ ಒಟ್ಟು ಮೌಲ್ಯದೊಡನೆ ಗುಣಾಕಾರ ಮಾಡಿದರೆ ಇದು ಒಟ್ಟು ಉತ್ಪಾದನೆಯ ಶೇ 77 ಮತ್ತು ಶೇ 67ರಷ್ಟಾಗುತ್ತದೆ. ಈ ಲೆಕ್ಕಾಚಾರವನ್ನು ವಿಶ್ವ ವಾಣಿಜ್ಯ ಸಂಸ್ಥೆಯ ಮುಂದಿರಿಸಿದ್ದ ಅಮೆರಿಕ ಸರ್ಕಾರ , ಭಾರತದ ಈ ನೀತಿ ಅಂತಾರಾಷ್ಟ್ರೀಯ ಒಪ್ಪಂದದಲ್ಲಿ ನಿಗದಿಪಡಿಸಿರುವ ಗರಿಷ್ಟ ಶೇ 10ರಷ್ಟು ಬೆಂಬಲ ನೀಡುವ ನಿಯಮದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿತ್ತು.

ಎರಡು ತಿಂಗಳ ಹಿಂದೆ ಅಮೆರಿಕ ಭಾರತಕ್ಕೆ ಮತ್ತಷ್ಟು ಹೊಸ ಸವಾಲುಗಳನ್ನು ಹಾಕಿದೆ. ದುರ್ಬಲ ಅಭಿವೃದ್ಧಿಶೀಲ ದೇಶಗಳನ್ನು ನಿಯಂತ್ರಿಸುವ ಉದ್ದೇಶದಿಂದಲೇ ಕೃಷಿ ಒಡಂಬಡಿಕೆಯಲ್ಲಿ ಅಪ್ರಮಾಣಿಕವಾದ, ಅಸಂಬದ್ಧ ನಿಯಮಗಳನ್ನು ಅಳವಡಿಸಲಾಗಿದೆ.

ಭಾರತದ ರೈತರು ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ಆಹಾರ ಉತ್ಪನ್ನ ಮಾಡುತ್ತಿದ್ದು 2013-14ರಲ್ಲಿ 60.5ರಷ್ಟಿದ್ದ ಡಾಲರ್ ಮೌಲ್ಯಕ್ಕೆ ತುಲನೆ ಮಾಡಿದರೆ ಭಾರತ ನೀಡುತ್ತಿರುವ ಬೆಂಬಲ ಬೆಲೆ ಜಾಗತಿಕ ಬೆಲೆಗಳಿಗಿಂತಲೂ ಸಾಕಷ್ಟು ಕಡಿಮೆ ಪ್ರಮಾಣದಲ್ಲಿದೆ. ಅಂದರೆ ವಾಸ್ತವವಾಗಿ ಬೆಂಬಲ ಬೆಲೆ ನಕಾರಾತ್ಮಕವಾಗಿಯೇ ಕಂಡುಬರುತ್ತದೆ.

ಪ್ರಸ್ತುತ ಸಂದರ್ಭದಲ್ಲಿ ಜಾಗತಿಕ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ನೋಡಿದಾಗ ಭತ್ತ ಮತ್ತು ಗೋಧಿಯ ಬೆಲೆಗಳು ಚಾರಿತ್ರಿಕ ಕುಸಿತ ಕಂಡಿವೆ. ಇದೇ ವೇಳೆ ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶಗಳಲ್ಲಿ ಕೃಷಿ ಸಹಾಯಧನ ತೀವ್ರ ಹೆಚ್ಚಳ ಕಂಡಿದೆ. ಈ ಹಿನ್ನೆಲೆಯಲ್ಲೇ ಈ ದೇಶಗಳು ತಮ್ಮ ಕೃಷಿ ಉತ್ಪನ್ನಗಳನ್ನು ಭಾರತದಂತಹ ದೇಶಗಳ ಮಾರುಕಟ್ಟೆಗಳಲ್ಲಿ ತಂದು ಸುರಿಯಲು ಹತಾಶರಾಗಿವೆ.

ಈ ದೃಷ್ಟಿಯಿಂದ ನೋಡಿದಾಗ ಭಾರತದ ರೈತ ಸಂಘಟನೆಗಳು ತಾವು ವಿರೋಧಿಸುತ್ತಿರುವ ಮೂರು ಕೃಷಿ ಮಸೂದೆಗಳಿಂದ ಸ್ಥಳೀಯ ಉದ್ಯಮಿಗಳಿಗೆ ಹೆಚ್ಚು ಲಾಭವಾಗುತ್ತದೆ ಎನ್ನುವುದನ್ನು ಸರಿಯಾಗಿ ಗುರುತಿಸಿದ್ದು, ವಿದೇಶಿ ಕೃಷಿ ಉದ್ದಿಮೆಗಳು ಭಾರತದ ಕೃಷಿ ವ್ಯವಸ್ಥೆಗೆ ಮಾರಕವಾಗುವುದನ್ನೂ ಸಮರ್ಪಕವಾಗಿ ಗುರುತಿಸಿವೆ.

ಪಂಜಾಬ್ ಮತ್ತು ಹರಿಯಾಣದಲ್ಲಿ ಈಗಾಗಲೇ ರೈತರು ವಿದೇಶಿ ಕೃಷಿ ಉದ್ದಿಮೆಗಳೊಡನೆ ಗುತ್ತಿಗೆ ಕೃಷಿಯನ್ನು ನಡೆಸಿ ಅದರ ದುಷ್ಪರಿಣಾಮಗಳನ್ನು ಎದುರಿಸಿದ್ದಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಲೆ ಮತ್ತು ಗುಣಮಟ್ಟದ ಬಗ್ಗೆ ಒಪ್ಪಿತ ನಿಯಮಗಳನ್ನೂ ಉಲ್ಲಂಘಿಸುವ ಮೂಲಕ ರೈತರಿಗೆ ವಂಚಿಸುವ ಈ ಅಗೋಚರ ಖಾಸಗಿ ಕಾರ್ಪೋರೇಟ್ ಉದ್ದಿಮೆಗಳೊಡನೆ ತಾವು ಯಾವುದೇ ರೀತಿಯಲ್ಲೂ ವ್ಯವಹರಿಸಲು ಸಿದ್ಧರಾಗಿಲ್ಲ ಎಂದು ರೈತ ಸಮುದಾಯ ಸ್ಪಷ್ಟವಾಗಿ ಹೇಳಿದೆ.

ಎಷ್ಟೇ ಅದಕ್ಷತೆ ಇದ್ದರೂ, ಹಣ ಪಾವತಿಯಲ್ಲಿ ವಿಳಂಬ ಉಂಟಾದರೂ, ತಮ್ಮ ಉತ್ಪನ್ನಗಳನ್ನು ಸರ್ಕಾರಿ ಏಜೆಂಟರಿಗೆ ನಿಗದಿತ ಬೆಂಬಲ ಬೆಲೆಗೆ ಮಾರಾಟ ಮಾಡಲು ರೈತರು ಸಿದ್ಧರಾಗಿದ್ದಾರೆ. ನೂತನ ಕೃಷಿ ಕಾಯ್ದೆಗಳ ಅನುಸಾರ ಮಾರುಕಟ್ಟೆ ನಿಯಂತ್ರಣ ನಿಯಮಗಳನ್ನು ಸಡಿಲಗೊಳಿಸಿದರೆ ಕೃಷಿ ಕ್ಷೇತ್ರದಲ್ಲಿ ಸ್ಥಳೀಯ ಉದ್ದಿಮೆಗಳೊಡನೆ ವಿದೇಶಿ ಕೃಷಿ ಉದ್ದಿಮೆಗಳೂ ಪ್ರವೇಶಿಸುತ್ತವೆ, ಇದರಿಂದ ಕನಿಷ್ಟ ಬೆಂಬಲ ಬೆಲೆ ಪದ್ಧತಿಗೂ ಪೆಟ್ಟಾಗುವುದಲ್ಲದೆ, ಸಾರ್ವಜನಿಕ ಸಂಗ್ರಹಣೆಯ ಪದ್ಧತಿಯೂ ಇಲ್ಲವಾಗುತ್ತದೆ ಎನ್ನುವ ರೈತರ ಆತಂಕ ನ್ಯಾಯಯುತವಾಗಿದೆ.

ಸಹಾಯಧನ ಪಡೆಯುವ ವಿದೇಶಿ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವುದರಿಂದ ಭಾರತದಲ್ಲಿನ ಬಡ ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂದು ಹಲವು ಕೃಷಿ ವಿಶ್ಲೇಷಕರು ಪ್ರತಿಪಾದಿಸುತ್ತಾರೆ. ಆದರೆ ಈ ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳಲ್ಲಿ ಹಸಿರು ಇಂಧನ ಬಳಕೆಯ ಆಗ್ರಹ ಹೆಚ್ಚಾಗುತ್ತಿದ್ದು ಹೆಚ್ಚಿನ ಪ್ರಮಾಣದ ಆಹಾರ ಧಾನ್ಯಗಳನ್ನು ಎಥನಾಲ್ ಉತ್ಪಾದನೆಗೆ ಬಳಕೆಯಾಗುತ್ತದೆ ಎನ್ನುವ ವಾಸ್ತವಾಂಶವನ್ನು ಈ ತಜ್ಞರು ಮರೆಮಾಚುತ್ತಿದ್ದಾರೆ.

ಹಾಗಾಗಿ ಇಂದು ಕಡಿಮೆ ಬೆಲೆಯ ಆಹಾರ ಧಾನ್ಯಗಳ ಆಮದು ಪ್ರಕ್ರಿಯೆಗೆ ಅವಕಾಶ ನೀಡಿದರೆ ಮುಂಬರುವ ದಿನಗಳಲ್ಲಿ ಇದರಿಂದ ಭಾರತದ ರೈತರು ವಿನಾಶದ ಅಂಚಿಗೆ ತಲುಪುವುದೇ ಅಲ್ಲದೆ, ಬೆಲೆ ಏರಿಕೆ ತೀವ್ರವಾಗಿ ಈ ಹಿಂದೆ ಕೆಲವು ಅಭಿವೃದ್ಧಿಶೀಲ ದೇಶಗಳು ಎದುರಿಸಿದ್ದ ಸಂಕಷ್ಟಗಳನ್ನೇ ಭಾರತವೂ ಎದುರಿಸಬೇಕಾಗುತ್ತದೆ. ತಮ್ಮ ಬೆವರು ಹರಿಸಿ ವ್ಯವಸಾಯದಲ್ಲಿ ತೊಡಗಿರುವ ಭಾರತದ ರೈತಾಪಿಯ ಬಗ್ಗೆ ಕಾಳಜಿ ಇರುವ ಯಾರೇ ಆದರೂ ಈ ಕೃಷಿ ಮಸೂದೆಗಳನ್ನು ವಿರೋಧಿಸುವುದೇ ಅಲ್ಲದೆ, ಸ್ಥಳೀಯ ಮತ್ತು ವಿದೇಶಿ ಉದ್ಯಮಿಗಳ ಕುತಂತ್ರಗಳ ವಿರುದ್ಧ ದನಿ ಎತ್ತಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

Published

on

  • ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.

ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.

ಈ ಸಮಸ್ಯೆಗಳನ್ನು ಪರಿಹರಿಸಬೇಕಾಧ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.
ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ನಡೆಸುತ್ತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊAದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯç ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ.

ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿAತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.
ಮಾದಕ ವಸ್ತು ಬಳಸುವ ಆತಂಕದ ರಾಷ್ಟçಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡAತೆ ಯುವಜನತೆ ಹೆಚ್ಚಾಗಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ದುಶ್ಚಟಗಳ ಆರಂಭಕ್ಕೆ ಕಾರಣಗಳು

• ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.
• ಉಲ್ಲಾಸಕ್ಕಾಗಿ, ಫ್ಯಾಷನ್‌ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು
• ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು

• ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.
• ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.
• ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು.
• ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು
• ಸಮಾಜಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.
• ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.
• ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ.

ಪರಿಹಾರ ಕ್ರಮಗಳು

• ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೆ ಅದರಿಂದ ದೂರವಿರುವುದು.
• ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು.
• ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು.
• 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.
• ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಳಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.
• ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟçಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು.

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು.

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತ ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. (ಜೂನ್-26 ರಂದು ಅಂತರರಾಷ್ಟೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ ಈ ಲೇಖನ – ಡಾ. ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಕಾಲೇಜು,ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರೇಣುಕಾಸ್ವಾಮಿ ಕೊಲೆ ಮತ್ತು ಗಂಡುಹೆಣ್ಣಿನ ನಡುವಿನ ಸಂಬಂಧ

Published

on

  • ರಾಜೇಂದ್ರ ಬುರಡಿಕಟ್ಟಿ

ರೇಣುಕಾಸ್ವಾಮಿ ಕೊಲೆ ಕೇಸನ್ನು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವ ಅನೇಕ ಸ್ನೇಹಿತರು ಈ ಕೇಸಿನಲ್ಲಿ ಮೊದಲನೆಯ ಮತ್ತು ಎರಡನೆಯ ಆರೋಪಿಗಳೆಂದು ಹೆಸರಿಸಲ್ಪಟ್ಟ ದರ್ಶನ್ ಮತ್ತು ಪವಿತ್ರ ಗೌಡ ಅವರ ನಡುವಿನ ಸಂಬಂಧದ ಬಗ್ಗೆ ಅನಗತ್ಯವಾಗಿ ಚರ್ಚಿಸಿ ಪವಿತ್ರಗೌಡ ಅವರನ್ನು ‘ಇಟ್ಟುಕೊಂಡವಳು’ ಇತ್ಯದಿ ಪದಬಳಸಿ ಹಿಯ್ಯಾಳಿಸಿದ್ದಾರೆ.

ಒಂದು ಟಿವಿ ಚಾನೆಲ್ ನವರು ಅವರನ್ನು ‘ಸೆಕೆಂಡ್ ಹ್ಯಾಂಡ್ ಸುಂದರಿ’ ಎಂದೂ ಕರೆದದ್ದು ವರದಿಯಾಗಿದೆ. ಇದನ್ನು ಮಾಡುವ ಹಕ್ಕು ಯಾರಿಗೂ ಇಲ್ಲ. ನಮ್ಮ ವಿರೋಧ ಇರಬೇಕಾದದ್ದು ಅವರು ರೂಪಿಸಿದ್ದಾರೆ ಎನ್ನಲಾದ ಕೊಲೆಯ ಕೇಸಿನ ಬಗ್ಗೆಯೇ ಹೊರತು ಅವರಿಬ್ಬರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ.

ಗಂಡು ಹೆಣ್ಣಿನ ನಡುವಿನ ಸಂಬಂಧ ಎಂಬುದು ಅತ್ಯಂತ ಸಹಜವಾದದ್ದು. ಯಾರಿಗೆ ಯಾರ ಮೇಲೆ ಯಾವಾಗ ಆಕರ್ಷಣೆ ಉಂಟಾಗಿ ಸಂಬಂಧಗಳು ಬೆಸೆದುಕೊಳ್ಳುತ್ತವೆ ಎಂಬುದನ್ನು ಹೇಳಲಾಗದು. ಇದಕ್ಕೆ ‘ನೈತಿಕ’ ‘ಅನೈತಿಕ’ ಎಂಬ ಹಣೆಪಟ್ಟಿ ಹಚ್ಚಿ ಗೌರವಿಸುವ ಅಥವಾ ಅವಹೇಳನ ಮಾಡುವ ಕ್ರಮ ಸರಿಯಾದದ್ದಲ್ಲ. ಪ್ರತಿಯೊಬ್ಬರಿಗೂ ಆಯ್ಕೆಗಳಿರುತ್ತವೆ. ತಮಗೆ ಬೇಕಾದ ಗಂಡನ್ನು ಅಥವಾ ಹೆಣ್ಣನ್ನು ಆಯ್ದುಕೊಳ್ಳುವ ಅವರೊಡನೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವಿದೆ. ಎಲ್ಲರಿಗೂ ಇದೆ. ಅದನ್ನು ಪ್ರಶ್ನಿಸುವ ಹಕ್ಕು ಇತರರಿಗೆ ಇಲ್ಲ. ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧವು ದೇಶದ ಕಾನೂನಿನ ಪ್ರಕಾರವೂ ಅಪರಾಧವಲ್ಲ.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಯ ಸಾಹಿತಿ ಡಾ. ಶಿವರಾಮ ಕಾರಂತರು ತಮ್ಮ ಅನೇಕ ಕಾದಂಬರಿಗಳ ಮೂಲಕ ಇದಕ್ಕೆ ಸಂಬಂಧಿಸಿದಂತೆ ಒಂದು ತಾತ್ವಿಕತೆಯನ್ನು ನಮಗೆ ರೂಪಿಸಿಕೊಡುತ್ತಾರೆ. ಅದೆಂದರೆ ‘ಲೈಂಗಿಕ ಸುಖ ಎನ್ನುವುದು ಮನುಷ್ಯನ ಬದುಕು ಮನುಷ್ಯನಿಗೆ ನೀಡುವ ಅತ್ಯಂತ ಸುಖದ ಸಂಗತಿಗಳಲ್ಲಿ ಒಂದು. ಅದರಿಂದ ಯಾರೂ ವಂಚಿತರಾಗಬಾರದು. ಪರಸ್ಪರ ಒಪ್ಪಿಕೊಂಡ ಗಂಡು ಹೆಣ್ಣುಗಳ ನಡುವಿನ ಲೈಂಗಿಕ ಸಂಬಂಧದಲ್ಲಿ ಒಂದು ಚೆಲುವು ಇರುತ್ತದೆ. ಇಂತಹ ಒಂದು ಒಳ್ಳೆಯ ಸಂಬಂಧಕ್ಕೆ ಮದುವೆ ಎಂಬುದು ಒಂದು ‘ಪೂರ್ವಾಗತ್ಯ’ವಾಗಬೇಕಿಲ್ಲ. ಗಂಡುಹೆಣ್ಣಿನ ನಡುವಿನ ಒಂದು ಒಳ್ಳೆಯ ಸಂಬಂಧವು ವಿವಾಹದ ಒಳಗೂ ಇರಬಹುದು; ಹೊರಗೂ ಇರಬಹುದು. ಅದೇ ರೀತಿ ಒಂದು ಕೆಟ್ಟ ಸಂಬಂಧವು ವಿವಾಹದ ಒಳಗೂ ಇರಬಹುದು ಹೊರಗೂ ಇರಬಹುದು. ವಿವಾಹದ ಚೌಕಟ್ಟಿನ ಒಳಗಿನ ಒಂದು ಕೆಟ್ಟ ಸಂಬಂಧಕ್ಕಿಂತ ವಿವಾಹದ ಚೌಕಟ್ಟಿನ ಹೊರಗಿನ ಒಳ್ಳೆಯ ಸಂಬಂಧ ಬೆಲೆಯುಳ್ಳದ್ದು.

ಹೀಗಾಗಿ ಯಾರೊಡನೆ ಎಂತಹ ಸಂಬಂಧ ಇಟ್ಟುಕೊಳ್ಳಬೇಕು ಎಂಬುದು ಅವರವರ ವೈಯಕ್ತಿಕ ವಿಚಾರ. ಅದರಲ್ಲಿ ಇತರರು ತಲೆಹಾಕುವುದು ಅವಿವೇಕತನ. ‘ಮದುವೆ ಎಂಬುದು ಏಳೇಳು ಜನ್ಮಗಳ ಸಂಬಂಧ’ ಏನೇ ಆದರೂ ಅದರ ಗೆರೆದಾಟಿ ಬೇರೆಯವರೊಡನೆ ಲೈಂಗಿಕ ಸಂಬಂಧ ಇಟ್ಟುಕೊಳ್ಳಬಾರದು’ ಎನ್ನುವವರು ಹಾಗೆಯೇ ಇರಬಹುದು. ಅದಕ್ಕೂ ಅವರಿಗೆ ಸ್ವಾತಂತ್ರ್ಯವಿದೆ. ಆದರೆ ಮದುವೆಯ ಚೌಕಟ್ಟಿನ ಹೊರಗಿನ ಸಂಬಂಧಗಳನ್ನು ಟೀಕಿಸುವ ಸ್ವಾತಂತ್ರ್ಯ ಹಕ್ಕು ಅವರಿಗಿಲ್ಲ. ಈ ವಿಷಯದಲ್ಲಿ ನಮ್ಮ ಆಲೋಚನಾ ಕ್ರಮ ಸಾಕಷ್ಟು ಬದಲಾಗಬೇಕಿದೆ. ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವಿನ ಸಂಬಂಧ ಎಂಥದ್ದೇ ಇರಲಿ ಅದು ಅವರಿಬ್ಬರಿಗೂ ಸಂತೋಷವನ್ನು ಕೊಡುತ್ತಿದ್ದರೆ ಅದನ್ನು ಕಂಡು ನಾವು ಸಂತೋಷ ಪಡಬೇಕೆ ಹೊರತು ಹೊಟ್ಟೆಕಿಚ್ಚು ಪಡಬಾರದು. ಅದನ್ನು ಗೌರವಿಸುವುದನ್ನು ನಾವು ಮೊದಲು ಕಲಿಯಬೇಕು. ಈ ಹಿನ್ನಲೆಯಲ್ಲಿ ನಮ್ಮ ವಿರೋಧವಿರಬೇಕಾದದ್ದು ಅವರಿಬ್ಬರು ಸೇರಿ ವ್ಯಕ್ತಿಯೊಬ್ಬರ ಕೊಲೆಮಾಡಿದ್ದಾರೆ ಎನ್ನಲಾದ ವಿಚಾರಕ್ಕೆ ಹೊರತು ಅವರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ. ಇಂತದ್ದೇ ವಿಚಾರವನ್ನು ಬೇರೆ ರೀತಿಯಲ್ಲಿ ಹೇಳಿರುವ ಸುಹಾಸಿನಿ ಶ್ರೀ Suhasini Shree ಅವರ ಒಂದು ಪೋಸ್ಟನ್ನೂ ಆಸಕ್ತಿ ಇರುವವರು ಗಮನಿಸಬಹುದು.(ರಾಬು (23-06-2024)
(ರಾಜೇಂದ್ರ ಬುರಡಿಕಟ್ಟಿ ಅವರ ಫೇಸ್ ಬುಕ್ ಬರೆಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇವರೇ ನೋಡಿ ಟ್ವೀಟ್ಟರ್, ಪೇಸ್ಬುಕ್ ಮೀಮ್ಸ್ ಸ್ಟಾರ್ ಕ್ಸೇವಿಯರ್ ಉರ್ಫ್ ಓಂಪ್ರಕಾಶ್

Published

on

  • ~ ಸಿದ್ದು ಸತ್ಯಣ್ಣನವರ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದವರಿಗೆ ನೋಡಿದ ಕೂಡಲೇ ನಗು ಉಕ್ಕಿಸಿ, ಉಲ್ಲಸಿತಗೊಳಿಸುವ ಕ್ಸೇವಿಯರ್ ಮೀಮ್ಸ್ ಗಳ ಪರಿಚಯ ಇದ್ದೇ ಇರುತ್ತದೆ. ಕ್ಸೇವಿಯರ್ ಎಂದರೆ ಯಾರು? ಎಂದು ಹೆಸರೇಳಿದರೆ ಗೊತ್ತಾಗದಿರುವವರು ಅವರ ಫೋಟೊ ನೋಡಿದರೆ ಕೂಡಲೇ ಮುಖದ ಮೇಲೆ ನಗು ಮೂಡಿರುತ್ತದೆ.

ತುಂಟ ಕಾಮೆಂಟ್ ಹಾಗೂ ಹಾಸ್ಯದ ತಿರುಳುಗಳ ಪೋಸ್ಟ್ ಮೂಲಕ ಗಮನ ಸೆಳೆಯುವ‌ ಕ್ಸೇವಿಯರ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಸ್ಯಪ್ರಜ್ಞೆಯಿಂದ ಸಾಕಷ್ಟು ಪ್ರಸಿದ್ಧ. ಕ್ಸೇವಿಯರ್ ಹೆಸರಿನಿಂದ ಜನಪ್ರಿಯರಾದ ಇವರ ನಿಜವಾದ ಹೆಸರು ಓಂಪ್ರಕಾಶ್. ಅಸಂಖ್ಯ ಟ್ವೀಟರ್, ಫೇಸ್ಬುಕ್ ಪ್ರೋಫೈಲ್ ಗಳಲ್ಲಿ ಓಂಪ್ರಕಾಶ್ ಅವರ ಫೋಟೊ ಕ್ಸೇವಿಯರ್ ಎಂದೇ ಹಂಚಲ್ಪಟ್ಟಿದೆ.

ಮೀಮ್ಸ್ ಸ್ಟಾರ್ ಎಂದೇ ಪ್ರಖ್ಯಾತರಾಗಿರುವ ಇವರು ಮಧ್ಯವಯಸ್ಕ ಭಾರತೀಯರು ಹೆಚ್ಚಾಗಿ ಇಷ್ಟಪಡುವ ದಪ್ಪಮೀಸೆಯ ಫೋಟೊ ಹೊಂದಿರುವ ಪ್ರೋಫೈಲ್ ಮೂಲಕ ಟ್ವೀಟ್ಟರ್ ಮತ್ತು ಫೇಸ್ಬುಕ್ಕಿನ ಸಾಕಷ್ಟು ಟ್ರೋಲ್, ಮೀಮ್ ಪೇಜುಗಳಲ್ಲಿ ಕಾಣಸಿಗುತ್ತಾರೆ. ಕ್ಸೇವಿಯರ್ ಅಂಕಲ್, ಕ್ಸೇವಿಯರ್ ಮೀಮ್ಸ್, ಕ್ಸೇವಿಯರ್ ಪಾಂಡಾ, ಕ್ಸೇವಿಯರ್ ಮಿಮ್ ಬಾಯ್ ಹೀಗೆ ಇವರ ಹೆಸರಿನ ಮೂಲಕ ಸಾವಿರಾರು ಮೀಮ್ಸ್ ಮೇಕಿಂಗ್ ಪ್ರೋಫೈಲ್ ಗಳು ಲಕ್ಷಾಂತರ ಹಿಂಬಾಲಕರನ್ನು ಹೊಂದಿವೆ. ಮೀಮ್ಸ್ ಗಾಗಿಯೇ ವಿನ್ಯಾಸಗೊಳಿಸಲಾಗಿರುವ, ವಿದೇಶಗಳಲ್ಲೂ ಕೋಟ್ಯಂತರ ಜನರು ಹಿಂಬಾಲಿಸುವ 9gag ಎಂಬ ವೆಬ್ಸೈಟಿನಲ್ಲಿ ಇವರ ಸಾಕಷ್ಟು ಮೀಮ್ಸ್ ಗಳು ಜನಪ್ರಿಯವಾಗಿವೆ. ಫೇಸ್ಬುಕ್, ಟ್ವಿಟ್ಟರ್ ಬಳಸುವವರಿಗೆ ಕ್ಸೇವಿಯರ್ ಹಾಸ್ಯಪ್ರಜ್ಞೆ ಎಂಥದ್ದು ಎಂಬುದನ್ನ ಕೇಳಿದರೆ ನಗುವೇ ಅವರ ಉತ್ತರವಾಗಿರುತ್ತದೆ ಎಂಬುದಕ್ಕೆ ಸಹ ಚೆಂದದ ಮೀಮ್ ಒಂದಿದೆ.

ಕಾನ್ಪುರ ಐಐಟಿ ಸಿಬ್ಬಂದಿಯಾದ ಓಂಪ್ರಕಾಶ್ ಅವರು ಅಲ್ಲಿನ ಭೌತಶಾಸ್ತ್ರ ವಿಭಾಗದ ತಾಂತ್ರಿಕ ಮೇಲ್ವಿಚಾರಕ ಹುದ್ದೆಯಲ್ಲಿದ್ದಾರೆ. ಕ್ಸೇವಿಯರ್ ಎಂದು ಅವರು ಪ್ರಸಿದ್ಧರಾಗಲು ಕಾರಣ ಅವರ ಅಪರಿಮಿತ ಹಾಸ್ಯಪ್ರಜ್ಞೆಯ ‘ಪಕಾಲು ಪಾಪಿಟೋ’ ಎಂಬ ಕಾಲ್ಪನಿಕ ಗುಮಾಸ್ತನ ಪಾತ್ರವನ್ನು ಸೃಷ್ಟಿಸಿದ್ದಕ್ಕಾಗಿ. ಆ ಗುಮಾಸ್ತನ ಮೊದಲ ಟ್ವೀಟ್ ಟ್ವೀಟ್ಟರಿನಲ್ಲಿ ಹೆಚ್ಚುಕಡಿಮೆ 18 ಸಾವಿರ ರೀಟ್ವೀಟ್ ಆಗಿತ್ತು.

ಟ್ವೀಟ್ಟರ್ ನಿಯಮಗಳ ತಾಂತ್ರಿಕ ಕಾರಣಗಳಿಂದ ಸುಮಾರು ಲಕ್ಷ ಹಿಂಬಾಲಕರಿದ್ದ ಈ ಅಕೌಂಟ್ ಸ್ಥಗಿತಗೊಂಡಿತು. ನಂತರ ಕಾಮಿಕ್ ಮೀಮ್ ಗಳಿಂದ ಆರಂಭದಲ್ಲಿ ಪ್ರಸಿದ್ಧರಾಗಿದ್ದ ಓಂಪ್ರಕಾಶ್ ಅವರು ಕೊನೆಗೆ ಕ್ಸೇವಿಯರ್ ಹೆಸರಿನ ಮೂಲಕ ಮೀಮ್ ಪ್ರಿಯರಿಗೆ ಮನೆಮಾತಾದರು. ಓಂಪ್ರಕಾಶ್ ಅವರು ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಕ್ರಮವಾಗಿ 1.4 ಮಿಲಿಯನ್ ಹಾಗೂ 3 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ‘ಪಕಾಲು ಪಾಪಿಟೋ’ ಅಕೌಂಟ್ ತಾಂತ್ರಿಕವಾಗಿ ಸ್ಥಗಿತಗೊಂಡ ಕಾರಣ ಕ್ಸೇವಿಯರ್ ಎಂಬ ಹೆಸರಿನ ತಮಾಷೆಯ ಮೀಮ್ಸ್ ಮೂಲಕ ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟ್ಟರ್ ಎಲ್ಲ ಕಡೆಗಳಲ್ಲಿ ಕಾಣಿಸುತ್ತಾರೆ. ( ಸಿದ್ದು ಸತ್ಯಣ್ಣನವರ್ ಅವರ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending