Connect with us

ದಿನದ ಸುದ್ದಿ

ಮತ್ತಿ ಗ್ರಾಮ ಪಂಚಾಯಿತಿಯಿಂದ ನನಗೆ ನ್ಯಾಯ ಕೊಡಿಸಿ : ಬಿ. ನಾಗರತ್ನಮ್ಮ ಮನವಿ

Published

on

ನನ್ನ ಹೆಸರು ಬಿ. ನಾಗರತ್ನಮ್ಮ. 76ರ ವಯೋವೃದ್ಧೆಯಾದ ನಾನು ಪ್ರಸ್ತುತ ದಾವಣಗೆರೆ ವಿನೋಬನಗರದ ಬಾಡಿಗೆ ಮನೆ ನಿವಾಸಿ. 2008 ರಲ್ಲಿ ಆಧ್ಯಾತ್ಮ ಮಂದಿರ ನಿರ್ಮಾಣದ ಉದ್ದೇಶದಿಂದ ದಾವಣಗೆರೆ ತಾಲ್ಲೂಕು ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ತಿಮ್ಮಪ್ಪನ ಕ್ಯಾಂಪ್ ನಲ್ಲಿ ಸರ್ಕಾರಿ ಜಾಗದಲ್ಲಿ ಖಾತಾ ಸಂಖ್ಯೆ 154/1 , 30 x 40 ಅಳತೆಯ ನಿವೇಶನ ಮಂಜೂರು ಮಾಡಿಸಿಕೊಂಡು, ಈವರೆಗೂ ನಿವೇಶನ ಕಂದಾಯ ಪಾವತಿಸುತಿದ್ದೇನೆ.

ಆದರೆ ಆಗಿನ ಗ್ರಾಪಂ ಅಧಿಕಾರಿಗಳು ತೋರಿಸಿದ್ದ ಜಾಗದಲ್ಲಿ ಈಗ ನನ್ನ ಹೆಸರಿಗೆ ಜಾಗವೇ ಇಲ್ಲ. ನನ್ನ ಖಾತಾ ಎಕ್ಸಾಟ್ರಕ್ಷನ್ ನಲ್ಲಿ ನಮೂದಿಸಿರುವ ಚಕ್ಕುಬಂದಿ ಪ್ರಕಾರ ನನಗೆ ತೋರಿಸಿರುವ ಅಳತೆಯ ಜಾಗವೇ ಇಲ್ಲ. ಹಕ್ಕುಪತ್ರವನ್ನು ಸಹ ನೀಡಿಲ್ಲ. 76 ವರ್ಷದ ಇಳಿವಯಸ್ಸಿನ ನಾನು ಈ ಸಂಬಂಧ ಹಲವಾರು ವರ್ಷ ಅಲೆದಾಡಿ ಸಾಕಾಗಿ ಬೇಸತ್ತು ಹೋಗಿದೆ. ಅತ್ತ ಕಂದಾಯದ ಹಣ ಮತ್ತು ಅಧಿಕಾರಿಗಳ ಬಳಿ ಅಡ್ಡಾಡಿದ ಪ್ರಯಾಣದ ವೆಚ್ಚ ಎರಡೂ ಸಹ ನೀರಿನಲ್ಲಿ ಹೋಮ ಆದಂತಾಗಿ ಕಂಗಾಲಾಗಿದ್ದೇನೆ.

ಈ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಕಂದಾಯ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಹಾಗೂ ಮಾಧ್ಯಮ ಬಂಧುಗಳು ಮತ್ತಿ ಗ್ರಾಪಂನಿಂದ ನನಗೆ ನ್ಯಾಯ ದೊರಕಿಸಿಕೊಡಬೇಕಾಗಿ ಈ ಮೂಲಕ ಕಳಕಳಿಯ ಪ್ರಾರ್ಥನೆ.

ವಿವರ

ನನ್ನ ದೀಕ್ಷಾ ಗುರುಗಳ ಹೆಸರಿನಲ್ಲಿ ” ಪೂಜ್ಯ ಶ್ರೀ ಕೆ. ಎನ್ ಸ್ವಾಮಿ ಅವಧೂತರ ಆಧ್ಯಾತ್ಮ ಮಂದಿರದ ” ಮೂಲಕ 40 ವರ್ಷಗಳಿಂದ ಆಧ್ಯಾತ್ಮ ಸೇವೆಯಲ್ಲಿ ತೊಡಗಿರುವ ನಾನು ಗುರುಗಳಿಂದ ಕಲಿತ ಬ್ರಹ್ಮ ಜ್ಞಾನ, ಕಾಲಜ್ಞಾನ, ಕಾಲನಿರ್ಣಯ, ಸಾಂಖ್ಯಾ ತಾರಕ, ಛಾಯಾಪುರುಷ ಲಕ್ಷಣ ಇತ್ಯಾದಿ ಆಧ್ಯಾತ್ಮ ಬೋಧನೆ ಮೂಲಕ ಆತ್ಮೋನ್ನತಿಯ ಸೇವೆಯಲ್ಲಿ ತೊಡಗಿದ್ದೇನೆ. ಅಲ್ಲದೆ ವಿಷಜಂತು ಕಡಿದವರಿಗೆ ಗಿಡಮೂಲಿಕೆಯ ಔಷಧ ನೀಡಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದವರ ಜೀವ ಉಳಿಸುವ ಕೈಂಕರ್ಯವನ್ನೂ ಹಲವು ವರ್ಷಗಳಿಂದ ಮಾಡುತ್ತಲೇ ಇದ್ದೇನೆ.

ವೃದ್ಧಾಪ್ಯದ ಕಾರಣ ಒಂದು ಕಡೆ ನೆಲೆನಿಂತು ಈ ಸೇವೆಯನ್ನು ಸುಗಮವಾಗಿ ನೆರವೇರಿಸಿಕೊಂಡು ಹೋಗುವ ಸಂಕಲ್ಪದೊಂದಿಗೆ 2008 ರಲ್ಲಿ ಪರಿಚಿತರೊಬ್ಬರ ಸಹಕಾರದೊಂದಿಗೆ ಅರ್ಜಿ ಸಲ್ಲಿಸಿ ಆಗ ಬಿಲ್ ಕಲೆಕ್ಟರ್ ಆಗಿದ್ದ ನಾಗರಾಜ್ ಎಂಬುವರು ತೋರಿಸಿದ ಅನ್ವಯ ಮತ್ತಿಯಿಂದ 2 ಕಿಮೀ ದೂರದಲ್ಲಿರುವ ತಿಮ್ಮಪ್ಪನ ಕ್ಯಾಂಪ್ ನ ಶ್ರೀ ಸಿದ್ಧಾರೂಢ ಆಶ್ರಮದ ಪಕ್ಕ ತಾತ್ಕಾಲಿಕವಾಗಿ ಮುಂಡದ ಕಟ್ಟಿಗೆಯ ನೆರೆಕೆ ಮನೆ ನಿರ್ಮಿಸಿಕೊಂಡು ಒಬ್ಬಂಟಿಯಾಗಿ ಸೇವಾ ಕಾರ್ಯ ಮುಂದುವರಿಸುತಲಿದ್ದೆ .

ಆಗ ಆ ಸ್ಥಳ ನಿರ್ಜನ ಪ್ರದೇಶವಾಗಿತ್ತು. ನಮ್ಮ ಆಶ್ರಮ ಬಿಟ್ಟರೆ ಬೇರಾವ ಮನೆಗಳೂ ಇರಲಿಲ್ಲ. 2013ನೇ ಇಸವಿಯಲ್ಲಿ ಒಮ್ಮೆ ನನಗೆ ಅತೀವ ವಾಂತಿ, ಭೇದಿ, ಜ್ವರ ಉಂಟಾದ ಕಾರಣ ನನ್ನ ಚಿಕ್ಕ ಮಗಳಾದ ಶ್ರೀಮತಿ ಕಲ್ಪನಾ ನನ್ನನ್ನು ದಾವಣಗೆರೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಸುಶ್ರೂಷೆ ಮಾಡಿಸಿದಳು. ವಯಸ್ಸಾದ ನೀನು ಮತ್ತಿ ಕ್ಯಾಂಪ್ ನಲ್ಲಿ ಒಬ್ಬಂಟಿಗಳಾಗಿ ಇರುವುದು ಬೇಡ.

ವಾರಕ್ಕೊಮ್ಮೆ ತಿಮ್ಮಪ್ಪನ ಕ್ಯಾಂಪ್ ಗೆ ಹೋಗಿ ಸೇವಾ ಕಾರ್ಯ ಮುಗಿಸಿ ಬಾ ಎಂದು ಒತ್ತಾಯಿಸಿ ಕೆಲವು ದಿನಗಳ ಕಾಲ ತನ್ನೊಂದಿಗೆಯೇ ಇರಿಸಿಕೊಂಡಳು. ಹಾಗಾಗಿ ಅಂದಿನಿಂದ ನಾನು ವಾರಕ್ಕೆ ಒಂದೆರಡು ಬಾರಿ ಅಲ್ಲಿಗೆ ಹೋಗಿ ಬರತೊಡಗಿದೆ. ಆದರೆ 2014 ರಲ್ಲಿ ಒಂದು ದಿನ ಇದ್ದಕ್ಕಿದ್ದ ಹಾಗೇ ತಿಮ್ಮಪ್ಪನ ಕ್ಯಾಂಪ್ ನ ಸಿದ್ಧಾರೂಢ ಮಠದ ಪಕ್ಕ ಇದ್ದ ನನ್ನ ನೆರಕೆ ಮನೆ ಕಾಣೆಯಾಗಿತ್ತು. ಯಾರು ಕೆಡವಿದ್ದಾರೆಂದು ಪತ್ತೆಯಾಗಲೇ ಇಲ್ಲ. ಈ ವಿಚಾರವನ್ನು ಮತ್ತಿ ಗ್ರಾಮ ಪಂಚಾಯಿತಿಗೆ ತಿಳಿಸಿದರೆ ನಾವೆಲ್ಲಾ ಸರಿಪಡಿಸುತ್ತೇವೆ ಎಂದು ತಿಳಿಸಿದರೆ ಹೊರತು ಸಮಸ್ಯೆ ನಿವಾರಣೆಯಾಗಲಿಲ್ಲ.

ಅಂದಿನಿಂದ ಪ್ರಯತ್ನಿಸುತ್ತಲೇ ಇದ್ದ ನಾನು 2020 ರಲ್ಲಿ ಕಂದಾಯ ಪಾವತಿಸಲು ಮತ್ತಿ ಗ್ರಾಪಂ ಗೆ ತೆರಳಿದ ಸಮಯದಲ್ಲಿ ಇನ್ನು ಮುಂದೆ ಭಕ್ತರ ಸಹಾಯದೊಂದಿಗೆ ನಾನು ತಿಮ್ಮಪ್ಪನ ಕ್ಯಾಂಪ್ ನಲ್ಲಿಯೇ ನೆಲೆಸಿ ಆಧ್ಯಾತ್ಮ ಸೇವೆ ಮಾಡುವುದಾಗಿ ತೀರ್ಮಾನಿಸಿ ” ಈ ಸ್ವತ್ತಿಗೆ ” ಅರ್ಜಿ ಹಾಕುವ ಕುರಿತು ಮಾಹಿತಿ ಕೇಳಿದಾಗ ಸತ್ಯಾಂಶ ಬೆಳಕಿಗೆ ಬಂದಿತು.

ಆಗ ನಾವು ಜಾಗ ಅಳತೆ ಮಾಡಿ ಕೊಡುವಂತೆ ಅರ್ಜಿ ಹಾಕಿದೆವು. ಆದರೆ ನಿಮ್ಮ ಜಾಗ ಎಲ್ಲಿದೆ ನೀವೇ ತೋರಿಸಿ ಎಂದು ಕೇಳುವ ಮತ್ತಿ ಗ್ರಾಪಂ ಅಧಿಕಾರಿಗಳು , ನಾವು ಇಲ್ಲಿ ಮಂಜೂರು ಮಾಡಿರುವ ಎಲ್ಲರಿಗೂ ಹಕ್ಕುಪತ್ರ ನೀಡಿದ್ದೇವೆ. ನಿಮ್ಮ ಹೆಸರಿನಲ್ಲಿ ನಿವೇಶನ ಮಂಜೂರು ಆಗಿದ್ದಲ್ಲಿ ನಿಮಗೂ ಹಿಂದಿನ ಅಧಿಕಾರಿಗಳು ಹಕ್ಕು ಪತ್ರ ನೀಡಿರಬೇಕಲ್ಲವೇ.

ಹಕ್ಕುಪತ್ರ ತೋರಿಸದಿದ್ದರೆ ನಾವು ಎಲ್ಲಿಂದ ತಂದು ಕೊಡಬೇಕು ಎಂದು ನಮ್ಮನ್ನೇ ಅನುಮಾನಿಸುವ ರೀತಿ ಈಗಿನ ಅಧಿಕಾರಿಗಳು ಪ್ರಶ್ನಿಸಿ ವಾಪಸ್ ಕಳುಹಿಸಿದ್ದಾರೆ. ಅದರೆ ನಾನು ಹಲವಾರು ವರ್ಷಗಳಿಂದ ಮತ್ತಿ ಗ್ರಾಪಂ ಅಧಿಕಾರಿಗಳ ಬಳಿ ಹೋಗಿ ಸತತವಾಗಿ ಪ್ರಯತ್ನಿಸಿದರೂ ಅಂದಿನ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ಮುಂದೆ ತಳ್ಳುತ್ತಲೇ ಬಂದರು.

ನಮ್ಮ ಹೆಸರಿನಲ್ಲಿ ಜಾಗವೇ ಇಲ್ಲವೆಂದ ಮೇಲೆ ಈವರೆಗೂ ಪ್ರತಿವರ್ಷ ಕಂದಾಯ ಪಾವತಿಸಿಕೊಂಡದ್ದು ಹೇಗೆ ? ವಯೋವೃದ್ಧಳಾದ ನಾನು ಇದಕ್ಕಾಗಿ ಹಲವಾರು ವರ್ಷಗಳಿಂದ ವಿವಿಧ ಕಚೇರಿ ಮತ್ತು ಅಧಿಕಾರಿಗಳ ಬಳಿ ಅಲೆದಾಡಿ ಸೋತು ಹೋಗಿದ್ದೇನೆ. ಅಲ್ಲದೆ ವಿಪರೀತ ಹಣ ಕೂಡ ಖರ್ಚು ಮಾಡಿಕೊಂಡಿದ್ದೇನೆ. ಅಲ್ಲದೆ ನನ್ನ ನಂಬಿಕೆ, ವಿಶ್ವಾಸ, ಆಧ್ಯಾತ್ಮಿಕ ಸೇವೆಯ ಕನಸಿಗೆ ಕೊಡಲಿ ಪೆಟ್ಟು ಬಿದ್ದಿದೆ. ಈ ಮೋಸಕ್ಕೆ ಮನನೊಂದು ಹೈರಾಣಾಗಿದೆ.

ಈಗ ನನಗೆ ನ್ಯಾಯ ಬೇಕು. ಮತ್ತಿ ಗ್ರಾಮ ಪಂಚಾಯಿತಿಯು ಖಾತೆಯಲ್ಲಿ ತೋರಿಸಿರುವ ನಿವೇಶನದ ಹಕ್ಕುಪತ್ರ ನೀಡಬೇಕು. ಅಲ್ಲಿ ನೆಲೆಸಿ ನನ್ನ ಕನಸಿನ ಕೂಸಾದ ನನ್ನ ಗುರುಗಳ ಹೆಸರಿನ ಆಧ್ಯಾತ್ಮ ಮಂದಿರ ನಿರ್ಮಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು.

ಸನ್ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಮೇಲಧಿಕಾರಿಗಳು ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಹಾಗೂ ಮಾಧ್ಯಮ ಬಂಧುಗಳು ವಯೋವೃದ್ಧಳ ಈ ಸಮಸ್ಯೆ ನಿವಾರಣೆಗೆ ಸಹಕರಿಸಬೇಕಾಗಿ ಕೋರಿಕೆ. ಶೀಘ್ರ ಪರಿಹಾರ ಲಭಿಸದಿದ್ದರೆ ಮತ್ತಿ ಗ್ರಾಮ ಪಂಚಾಯಿತಿ ಮುಂದೆ ಅಮರಣಾಂತ ಧರಣಿ ನಡೆಸಲಾಗುವುದು.

ಇಂತಿ ತಮ್ಮ ವಿಶ್ವಾಸಿ
ಬಿ. ನಾಗರತ್ನಮ್ಮ
ಮೊ.ನಂ : 9741458905

ಸುದ್ದಿದಿನ.ಕಾಂ | ವಾಟ್ಸಾಪ್ | 9980346243

ದಿನದ ಸುದ್ದಿ

ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಹೆಚ್. ಕೇಶವ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ಶಿವಮೊಗ್ಗ:ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾದ ಹುದ್ದೆಗಳನ್ನು ಇಲಾಖಾ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ನಿರ್ಲಕ್ಷ್ಯ ತೋರಿದ ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇಲ್ಲಿಯ ಜಂಟಿ ನಿರ್ದೇಶಕರಾದ ಶ್ರೀ ಕೇಶವ ಹೆಚ್. ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ 2022ನೇ ಸಾಲಿನಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ಅರ್ಥಶಾಸ್ತç (ಎಸ್.ಟಿ), ರಾಜ್ಯಶಾಸ್ತç (ಎಸ್.ಸಿ), ಗ್ರಂಥಪಾಲಕರು (ಎಸ್.ಟಿ) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇಲ್ಲಿ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾದ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರಿಗೆ ದಿನಾಂಕ: 24-11-2025 ರಂದು ಅರ್ಜಿ ಸಲ್ಲಿಸಿ, ಬ್ಯಾಕ್ ಲಾಗ್ ನೇಮಕಾತಿಯ ಬಗ್ಗೆ ತನಿಖೆ ನಡೆಸಿ, ತನಿಖಾ ವರದಿಯನ್ನು ನೀಡುವಂತೆ ಕೋರಲಾಗಿತ್ತು.

ಅರ್ಜಿ ಸಲ್ಲಿಸಿ ಒಂದು ತಿಂಗಳಾದರೂ ಯಾವುದೇ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ಜ್ಞಾಪನ ನೀಡಿ 7 ದಿನಗಳ ಒಳಗಾಗಿ ತನಿಖಾ ವರದಿಯನ್ನು ನೀಡುವಂತೆ ವಿನಂತಿಸಲಾಗಿತ್ತು. ಆದರೆ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರು ಅರ್ಜಿ ಸಲ್ಲಿಸಿ 2 ತಿಂಗಳಾದರೂ ಕನಿಷ್ಠ ಹಿಂಬರಹವನ್ನಾದರೂ ನೀಡದೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕರ್ತವ್ಯ ಲೋಪ ಎಸಗಿದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.

ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ  ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Continue Reading

Trending