Connect with us

ಬಹಿರಂಗ

ದುಸ್ತರ ಬದುಕು ದುರ್ಭರ ಹಾದಿಯಲ್ಲಿ ಹೊಸ ಸಂವತ್ಸರದ ಸಂಭ್ರಮ

Published

on

ಸಾಂದರ್ಭಿಕ ಚಿತ್ರ

ಶ್ರಮಜೀವಿಗಳ ಬದುಕನ್ನು ಕರಾಳ ಕೂಪಕ್ಕೆ ತಳ್ಳುತ್ತಿರುವ ದುಷ್ಟ ವ್ಯವಸ್ಥೆಯಲ್ಲಿ ಎಂತಹ ಸಂಭ್ರಮ ?

  • ನಾ ದಿವಾಕರ

ಭಾರತದ ಪರಂಪರೆಯಲ್ಲಿ ನವ ಸಂವತ್ಸರದ ಆರಂಭವಾಗುವುದು ಯುಗಾದಿಯೊಂದಿಗೆ. ಇಂದು ದೇಶಾದ್ಯಂತ ಹಿಂದೂಗಳು ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಾ, ನವ ಸಂವತ್ಸರವನ್ನು ಸ್ವಾಗತಿಸುತ್ತಾರೆ. ಹಬ್ಬ ಎಂಬ ಪರಿಕಲ್ಪನೆಯೇ ಜನಸಂಸ್ಕೃತಿಯ ಒಡಲಿನಲ್ಲಿ ಮೂಡಿರುವ ಒಂದು ವಿದ್ಯಮಾನ.

ಸಾರ್ವತ್ರಿಕವಾಗಿ ಒಂದು ಜನ ಸಮುದಾಯ ತನ್ನೊಳಗಿನ ಎಲ್ಲ ವೈರುಧ್ಯಗಳನ್ನೂ ಮರೆತು, ತನ್ನ ಆಂತರ್ಯದೊಳಗೆ ಅಡಗಿರಬಹುದಾದ ಎಲ್ಲ ಕಲ್ಮಶಗಳನ್ನೂ ತೊಡೆದುಹಾಕಿ, ಸಮಸ್ತ ಮಾನವ ಕೋಟಿ ಒಂದೇ ಎಂಬ ಭಾವನಾತ್ಮಕ ಸಂದೇಶದೊಡನೆ ಸಾರ್ವಜನಿಕವಾಗಿ ಆಚರಿಸುವುದು ಯಾವುದೇ ಹಬ್ಬದ ವಿಶೇಷ. ವೈದಿಕಶಾಹಿಯ ಸ್ವಾಧೀನಕ್ಕೊಳಪಟ್ಟು ಭಾರತದ ಅನೇಕಾನೇಕ ಹಬ್ಬದ ಆಚರಣೆಗಳು ತಮ್ಮ ಮೂಲ ಅರ್ಥವನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲೇ ಭಾರತ ಮತ್ತೊಂದು ಯುಗಾದಿಯನ್ನು ಆಚರಿಸುತ್ತಿದೆ.

ಹಬ್ಬದ ಪರಿಕಲ್ಪನೆಯೇ ಸಾಪೇಕ್ಷವಾದುದು. ಹಬ್ಬದ ಆಚರಣೆಯೂ ಸಹ ಸಾಮಾಜಿಕ ಶ್ರೇಣೀಕರಣಕ್ಕೆ ಅನುಗುಣವಾಗಿಯೇ ನಡೆಯುತ್ತದೆ. ತನ್ನ ನಿತ್ಯ ಬದುಕಿನ ಬವಣೆಗಳನ್ನೇ ನೀಗಿಸಲು ಸಾಧ್ಯವಾಗದ ಒಂದು ದುಡಿಮೆಯ ಜೀವಕ್ಕೆ ಹಬ್ಬ ಎನ್ನುವುದು ವಿಶೇಷ ಎನಿಸುವುದಿಲ್ಲ.

ಹಸಿರು ತೋರಣ, ಸುಂದರ ರಂಗೋಲಿ, ಬಾಳೆಲೆಯ ಊಟ ಈ ಸಂಭ್ರಮಗಳು ಸಮಾಜದ ಮೇಲ್ ಸ್ತರದ ಸಮುದಾಯಗಳಿಗೆ ಲಭ್ಯವಾಗುವ ಸವಲತ್ತುಗಳಷ್ಟೇ. ಆದರೂ ಕಡುಬಡತನ ಎದುರಿಸುವ ಕುಟುಂಬಗಳೂ ಹಬ್ಬವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತವೆ. ಹೊಸ ವರ್ಷವನ್ನು ಸ್ವಾಗತಿಸುವ ಯುಗಾದಿ ಈ ಬಡಜನತೆಯ ಪಾಲಿಗೆ ಹೊಸತನ್ನೇನೂ ತರುವುದಿಲ್ಲ. ಹಾಗೆಯೇ ಗತಿಸಿದ ವರುಷದ ಸಂಕಷ್ಟಗಳ ನಿವಾರಣೆಯೂ ಆಗುವುದಿಲ್ಲ.

ತಮ್ಮ ಜೀವನೋಪಾಯದ ಮಾರ್ಗಗಳು ಕಠಿಣವಾಗುತ್ತಿರುವುದನ್ನು ಮೌನಸಮ್ಮತಿಯೊಂದಿಗೆ ಎದುರಿಸುತ್ತಲೇ, ಶ್ರಮ ಶೋಷಣೆಯ ಮೂಲ, ಸ್ವರೂಪ ಮತ್ತು ಕಾರಣಗಳನ್ನು ಅರಿಯದ ಶ್ರಮಜೀವಿಗಳು ಶೊಷಕ ಸಮಾಜದ ಪರಿಚಾರಕರೊಡನೆ ಮುಖಾಮುಖಿಯಾಗುತ್ತಾ ಬದುಕು ಸವೆಸುತ್ತಾರೆ. “ ಸಮಸ್ತ ಜನಕೋಟಿಗೂ ಯುಗಾದಿಯ ಶುಭಾಶಯಗಳು ” ಎಂದು ಸಾರ್ವಜನಿಕವಾಗಿ ಕೋರುವ ಪ್ರತಿಯೊಂದು ಮನಸಿಗೂ ಹೊಳೆಯಬೇಕಾದ ಒಂದು ವಾಸ್ತವ ಎಂದರೆ, ಈ ಸಮಸ್ತ ಜನಕೋಟಿಯಲ್ಲಿ ಬಹುಪಾಲು ಜನರಿಗೆ ಬದುಕು ಹಸನಾಗಿರುವುದಿಲ್ಲ. ಅವರ ಭೂತ ಮತ್ತು ವರ್ತಮಾನದಂತೆಯೇ ಭವಿಷ್ಯವೂ ಅದೇ ಶೋಷಕ ಸಮಾಜದ ಕ್ರೂರ ವ್ಯವಸ್ಥೆಗೆ ಬಲಿಯಾಗಿ ಕರಾಳ ದಿನಗಳನ್ನು ಎದುರಿಸುತ್ತಿರುತ್ತದೆ.

ಹೊಸ ವರ್ಷದ ಆಗಮನವನ್ನು ಸ್ವಾಗತಿಸುವ ಮುನ್ನ, ನಮ್ಮ ಸುತ್ತಲಿನ ಮಾನವ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಒಮ್ಮೆ ಗಮನಿಸಿದಾಗ, ನಮಗೆ ಎಂತಹ ಹೊಸ ವರ್ಷದ ಅವಶ್ಯಕತೆ ಇದೆ ಎನ್ನುವುದೂ ಮನದಟ್ಟಾಗುತ್ತದೆ. ಜಾತಿ, ಮತ, ಧರ್ಮ,ಪಂಥ, ಲಿಂಗ ಹೀಗೆ ಅಸ್ಮಿತೆಗಳ ಚೌಕಟ್ಟುಗಳಲ್ಲಿ ಜನಸಾಮಾನ್ಯರನ್ನು ಬಂಧಿಸಿಟ್ಟು, ತನ್ನ ಬೆವರಿನ ದುಡಿಮೆಯಿಂದಲೇ ಅನ್ನ ಉಣ್ಣುವ ಶ್ರಮಜೀವಿಯ ಊಟದ ತಟ್ಟೆಯಲ್ಲೂ ತಾರತಮ್ಯದ ವಿಷಬೀಜಗಳನ್ನು ಉಣಬಡಿಸುವ ಒಂದು ವಿಕೃತ ಸಾಂಸ್ಕೃತಿಕ ವಿದ್ಯಮಾನವನ್ನು ನಾವು ಕಾಣುತ್ತಿದ್ದೇವೆ. ಪ್ರೀತಿ, ಆದರ, ವಾತ್ಸಲ್ಯ, ಸೋದರತ್ವ ಮತ್ತು ಮಾನವ ಪ್ರೀತಿಯನ್ನು ಪೋಷಿಸಬೇಕಾದ ಸಾಂಸ್ಥಿಕ ವೇದಿಕೆಗಳು, ಜನಸಾಮಾನ್ಯರ ನಡುವೆ ದ್ವೇಷ, ಮತ್ಸರ, ಅಸೂಯೆ ಮತ್ತು ತಾರತಮ್ಯದ ವಿಷಬೀಜಗಳನ್ನು ಬಿತ್ತುತ್ತಿರುವುದನ್ನು ನೋಡುತ್ತಿದ್ದೇವೆ.

ಶ್ರಮಿಕರ ಬದುಕನ್ನು ಹೊರಗಿಟ್ಟು ಮಾನವ ಸಮಾಜ ಯಾವುದೇ ಸಂದರ್ಭವನ್ನೂ ಸಂಭ್ರಮಿಸಲಾಗುವುದಿಲ್ಲ. ಯುಗಾದಿಯ ಹೊಸವರ್ಷಾಚರಣೆಯನ್ನೂ ಸಹ. ಇಂದು ದೇಶದ ರಾಷ್ಟ್ರಪತಿ, ಪ್ರಧಾನಿಯಿಂದ ಹಿಡಿದು ಗ್ರಾಮಪಂಚಾಯತ್ ಸದಸ್ಯನವರೆಗೂ ಎಲ್ಲ ಹಂತದ ಜನಪ್ರತಿನಿಧಿಗಳೂ ಜನತೆಗೆ ಹೊಸ ವರ್ಷಾಚರಣೆಯ ಶುಭಾಶಯಗಳನ್ನು ಕೋರುತ್ತಾರೆ.

ಈ ಯಾಂತ್ರಿಕ ಸಂದೇಶಗಳು ಕೋಟ್ಯಂತರ ಜನರನ್ನು ತಲುಪುತ್ತವೆ. ಮನುಜ ಸಮಾಜವನ್ನು ಒಂದುಗೂಡಿಸಲು ನೆರವಾಗುವ ಈ ಸಂದೇಶಗಳು ಭಾವನಾತ್ಮಕ ದೃಷ್ಟಿಯಿಂದ ಅಪ್ಯಾಯಮಾನವೆನಿಸಿದರೂ, ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಅನ್ಯ ಮತ ದ್ವೇಷದ ಆಂತರಿಕ ಬೇಗುದಿಯು ಇಡೀ ಸಮಾಜವನ್ನು ಒಳಗಿನಿಂದಲೇ ಕ್ಯಾನ್ಸರ್ ರೋಗದಂತೆ ಹರಡಿ ಶಿಥಿಲಗೊಳಿಸುತ್ತಿರುವುದನ್ನು ಗಮನಿಸಿದಾಗ, ಈ ಸಂದೇಶಗಳು ನಾಟಕೀಯ ಎನಿಸಿಬಿಡುತ್ತವೆ.

75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರ ಪ್ರಪ್ರಥಮ ಬಾರಿಗೆ ಭಾರತದಲ್ಲಿ ಜನಸಾಮಾನ್ಯರು ನಿತ್ಯ ಸೇವಿಸುವ ಆಹಾರ ಮತ್ತು ಬಳಸುವ ವಸ್ತುಗಳು, ಸಾಂಸ್ಥಿಕವಾಗಿ ನಿರ್ದೇಶಿಸಲ್ಪಡುತ್ತಿವೆ. ಯಾರು ಏನನ್ನು ತಿನ್ನಬೇಕು, ಯಾವ ಆಹಾರವನ್ನು ತ್ಯಜಿಸಬೇಕು, ಯಾವುದನ್ನು ತಿರಸ್ಕರಿಸಬೇಕು, ಯಾರಿಂದ ಪಡೆಯಬೇಕು, ಯಾರಿಗೆ ನೀಡಬೇಕು, ತಿನ್ನುವ ಆಹಾರದಲ್ಲಿ ಏನಿರಬೇಕು-ಏನಿರಬಾರದು, ಯಾವ ಸಮಯದಲ್ಲಿ ಏನು ತಿನ್ನಬೇಕು, ಹೀಗೆ ಮನುಷ್ಯ ತನ್ನ ಸಹಜ ಬದುಕಿನಲ್ಲಿ ತನ್ನದೇ ಆದ ವ್ಯಕ್ತಿಗತ ಸ್ವಾತಂತ್ರ್ಯದೊಂದಿಗೆ ಅನುಸರಿಸಬೇಕಾದ ಆಹಾರ ಪದ್ಧತಿ ಇಂದು ನಿರ್ದೇಶಿತವಾಗುತ್ತಿದೆ.

ಧಾರ್ಮಿಕ ಗ್ರಂಥಗಳಿಂದ ನಿರ್ದೇಶಿತರಾಗಿ ತಮ್ಮ ಬದುಕನ್ನು ರೂಪಿಸಿಕೊಂಡಿರುವ ಮತನಿಷ್ಠರೂ ಸಹ ಈಗ ನೂತನ ಧಾರ್ಮಿಕ ವ್ಯಾಖ್ಯಾನಕಾರರ ನಿರ್ದೇಶನಗಳಿಗೆ ಮಾನ್ಯತೆ ನೀಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ.

ಆಹಾರ ಮನುಷ್ಯನ ಸ್ವಾಭಾವಿಕ ಹಕ್ಕು. ಅದನ್ನು ಸಾಂವಿಧಾನಿಕ ಹಕ್ಕು ಎಂದು ಭಾವಿಸಬೇಕಿಲ್ಲ. ಮನುಷ್ಯ ತಾನು ಬೆಳೆದ ಪರಿಸರದಲ್ಲಿ ರೂಢಿಸಿಕೊಂಡು ಬಂದ ಆಹಾರ ಪದ್ಧತಿಯನ್ನೇ ಜೀವನದುದ್ದಕ್ಕೂ ಅನುಸರಿಸುವುದು ನೈಸರ್ಗಿಕವಾಗಿ ಸಹಜ ಪ್ರಕ್ರಿಯೆ. ಈ ಆಹಾರ ಪದ್ಧತಿಗಳು ಜಾತಿ-ಮತಗಳ ಚೌಕಟ್ಟಿನಲ್ಲಿ ತಮ್ಮದೇ ಆದ ವಿಶಿಷ್ಟ ಸ್ವರೂಪವನ್ನು ಪಡೆದುಕೊಂಡಿದ್ದರೆ ಅದು ಸಾಮುದಾಯಿಕ ಪ್ರಶ್ನೆಯಾಗುತ್ತದೆ.

ಒಂದು ನಿರ್ದಿಷ್ಟ ಜಾತಿ ಅಥವಾ ಮತದ ಚೌಕಟ್ಟಿನಲ್ಲೂ ಆಹಾರ ಸೇವನೆ ಎನ್ನುವುದು ವ್ಯಕ್ತಿಗತ ಆಯ್ಕೆಯಾಗಿಯೇ ಉಳಿಯುತ್ತದೆ. ಈ ನೈಸರ್ಗಿಕ ಹಕ್ಕನ್ನು ಭಾರತದ ಸಂವಿಧಾನ ಕಾಪಾಡುತ್ತದೆ. ಇಂದು ಈ ಸಾಂವಿಧಾನಿಕ ಮಾನ್ಯತೆ ಮತ್ತು ನೈಸರ್ಗಿಕ ಹಕ್ಕು ಎರಡೂ ಸಹ ಸಾಂಸ್ಕೃತಿಕ ಕಾವಲುಪಡೆಗಳಿಂದ ದಾಳಿಗೊಳಗಾಗುತ್ತಿದೆ.

ಜನಸಾಮಾನ್ಯರು ಎಂತಹ ಆಹಾರ ಸೇವಿಸಬೇಕು ಎನ್ನುವುದಕ್ಕಿಂತಲೂ ಇಂದು ಚರ್ಚೆಗೊಳಗಾಗಬೇಕಿರುವುದು, ಎಷ್ಟು ಜನರು ತಮಗೆ ಬೇಕೆನಿಸಿದ ಆಹಾರವನ್ನು ಸೇವಿಸುವ ಶಕ್ತಿ ಹೊಂದಿದ್ದಾರೆ ಎಂಬ ಪ್ರಶ್ನೆ. ಏಕೆಂದರೆ ಭಾರತದ ಅರ್ಥವ್ಯವಸ್ಥೆ ಬಡಜನತೆಯ ಪಾಲಿಗೆ, ಶ್ರಮಜೀವಿಗಳ ಪಾಲಿಗೆ ಕರಾಳ ದಿನಗಳನ್ನು ರೂಪಿಸುತ್ತಿದೆ.

ಈ ಸಂದರ್ಭದಲ್ಲಿ, ತನ್ನ ಆಹಾರಕ್ಕಾಗಿ ಮನುಷ್ಯ ಕೊಲ್ಲುವ ಪ್ರಾಣಿಯಲ್ಲಿ ರಕ್ತದಂಶ ಇರಬೇಕೋ ಬೇಡವೋ ಎಂಬ ಪ್ರಶ್ನೆಗಿಂತಲೂ ನಮ್ಮನ್ನು ಕಾಡಬೇಕಿರುವುದು ದೇಶದ ಬಹುಸಂಖ್ಯೆಯ ಜನತೆಗೆ ತಮಗೆ ಅಗತ್ಯವಿರುವಷ್ಟು ಮಾಂಸಾಹಾರವನ್ನೋ, ಸಸ್ಯಾಹಾರವನ್ನೋ ಕೊಳ್ಳುವ ಸಾಮರ್ಥ್ಯ ಉಳಿದಿದೆಯೇ ಎಂಬ ಪ್ರಶ್ನೆ.

ಯೂನಿಸೆಫ್‍ನ ಒಂದು ವರದಿಯ ಪ್ರಕಾರ ಭಾರತದಲ್ಲಿ ಕುಂಠಿತ ಬೆಳವಣಿಗೆಯ ಮಕ್ಕಳ ಸಂಖ್ಯೆ ನಾಲ್ಕು ಕೋಟಿಗೂ ಮೀರಿದೆ. ಐದು ವರ್ಷಕ್ಕೆ ಮುನ್ನವೇ ಸಾವನ್ನಪ್ಪುವ ಮಕ್ಕಳಲ್ಲಿ ಶೇ 69ರಷ್ಟು ಮಕ್ಕಳು ಅಪೌಷ್ಟಿಕತೆಯಿಂದಲೇ ಸಾಯುತ್ತಿದ್ದಾರೆ. ಒಕ್ಕೂಟ ಸರ್ಕಾರದ ಅಧಿಕೃತ ಮಾಹಿತಿಯ ಅನುಸಾರವೇ ಭಾರತದಲ್ಲಿ 33 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 107 ರಾಷ್ಟ್ರಗಳ ಪೈಕಿ 94ನೆಯ ಸ್ಥಾನದಲ್ಲಿದೆ. ಇವೆಲ್ಲವನ್ನೂ ಕಲ್ಪಿತ ಅಥವಾ ಸೃಷ್ಟಿಸಲ್ಪಟ್ಟ ಅಂಕಿಅಂಶಗಳೆಂದು ಸರ್ಕಾರಗಳು ಅಲ್ಲಗಳೆದರೂ, ಏರುತ್ತಿರುವ ಆಹಾರ ಪದಾರ್ಥಗಳ ಬೆಲೆಗಳು, ನಗರಗಳಲ್ಲಿ ಹೆಚ್ಚುತ್ತಿರುವ ಕೊಳೆಗೇರಿಗಳು, ತಮ್ಮ ನಾಳಿನ ಬದುಕಿಗಾಗಿ ಹೋರಾಡುತ್ತಿರುವ ವಲಸೆ ಕಾರ್ಮಿಕರು, ಬಡತನದ ಬರ್ಬರತೆಯನ್ನು ಢಾಳಾಗಿ ಪ್ರದರ್ಶಿಸುತ್ತವೆ.

ನಿಕೃಷ್ಟ ಜೀವನ ನಡೆಸುತ್ತಿರಬಹುದಾದ ಈ ಶ್ರಮಜೀವಿ ವರ್ಗಗಳಿಗೆ ಹಲಾಲ್ ಮತ್ತು ಜಟ್ಕಾ ವಿವಾದಗಳು ಅಪ್ರಸ್ತುತವಾಗಿಬಿಡುತ್ತವೆ. ಏರುತ್ತಿರುವ ಆಹಾರ ಪದಾರ್ಥಗಳ ಬೆಲೆಗಳಿಂದ ತತ್ತರಿಸುತ್ತಿರುವ ಶ್ರಮಜೀವಿ ವರ್ಗಗಳಿಗೆ, ಅನೌಪಚಾರಿಕ ಕ್ಷೇತ್ರದ ದಿನಗೂಲಿ ನೌಕರರಿಗೆ ತಾವು ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶ ಎಷ್ಟಿದೆ ಎಂಬ ಚಿಂತೆ ಇರುವುದಿಲ್ಲ.

ಅಥವಾ ಅದರಲ್ಲಿ ರಕ್ತದಂಶ ಇದೆಯೋ ಇಲ್ಲವೋ ಎಂಬ ಜಿಜ್ಞಾಸೆಯೂ ಇರುವುದಿಲ್ಲ. ಸಸ್ಯಾಹಾರಿಗಳಾದರೂ ತಮ್ಮ ಆಹಾರದಲ್ಲಿ ಕಬ್ಬಿಣಾಂಶ ಎಷ್ಟಿದೆ ಎಂಬ ಪರಿವೆ ಇರುವುದಿಲ್ಲ. ದೇಶದ ಸುಭದ್ರ ಬುನಾದಿಗೆ ತಮ್ಮ ಬೆವರು ಸುರಿಸಿ ದುಡಿಯುವ ಈ ಶ್ರಮಜೀವಿ ವರ್ಗಗಳು ತಮ್ಮ ಜಾತಿ-ಮತ-ಧರ್ಮದ ಅಸ್ಮಿತೆಗಳನ್ನು ಮೀರಿ ಜೀವನ ಸವೆಸುತ್ತಿರುತ್ತಾರೆ.

ಈ ವರ್ಗದ ಜನತೆಗೆ, ಆಹಾರ ವಂಚಿತರಿಗೆ, ಅವಕಾಶವಂಚಿತರಿಗೆ, ಸೌಲಭ್ಯವಂಚಿತರಿಗೆ ಮತ್ತು ಹಕ್ಕು ವಂಚಿತ ಜನಸಮುದಾಯಗಳಿಗೆ “ ಹೊಸ ವರ್ಷಾಚರಣೆ ”ಯ ಸಂದೇಶವನ್ನು ನೀಡುವ ಮುನ್ನ ಉಳ್ಳವರ ಮನಸ್ಸಿನಲ್ಲಿ ಕೊಂಚಮಟ್ಟಿಗಾದರೂ ಪಾಪಪ್ರಜ್ಞೆ ಮೂಡಬೇಕಲ್ಲವೇ ? ಶೇ 50ರಷ್ಟು ಅಪರಾಧದ ಹಿನ್ನೆಲೆಯುಳ್ಳವರನ್ನು, ಶೇ 90ರಷ್ಟು ಕೋಟ್ಯಧಿಪತಿಗಳನ್ನು ಶಾಸನಸಭೆಗಳಿಗೆ ಆಯ್ಕೆ ಮಾಡಿ ಕಳುಹಿಸುವ ಸಾರ್ವಭೌಮ ಜನತೆಗೆ ತಮ್ಮ ಆಹಾರ ಸ್ವಾತಂತ್ರ್ಯವನ್ನೂ ನಿರಾಕರಿಸಲಾಗುತ್ತಿರುವ ಹೊತ್ತಿನಲ್ಲಿ, ಆಳುವ ಸರ್ಕಾರಗಳು ಸೌಹಾರ್ದತೆ ಮತ್ತು ಸಾಂತ್ವನದ ಸಂದೇಶವನ್ನು ನೀಡುವುದು ಹೇಗೆ ಸಾಧ್ಯವಾದೀತು ?

ಈ ನಡುವೆಯೇ ಹಬ್ಬವನ್ನು ಜನತೆಗಿಂತಲೂ ಹೆಚ್ಚಾಗಿ ಸಂಭ್ರಮಿಸುವ ಮಾರುಕಟ್ಟೆ ತನ್ನ ಬಾಹುಗಳನ್ನು ಎಲ್ಲ ದಿಕ್ಕುಗಳಲ್ಲೂ ಚಾಚುತ್ತಾ, ಜನರ ಬಳಿ ಉಳಿದಿರಬಹುದಾದ ಅಲ್ಪಸ್ವಲ್ಪ ಸಂಪನ್ಮೂಲಗಳನ್ನೂ ದೋಚಲು ಯೋಚಿಸುತ್ತಿರುತ್ತದೆ. ಈ ಮಾರುಕಟ್ಟೆಯನ್ನು ಪೋಷಿಸುವ ಸಲುವಾಗಿಯೇ ಮಾಧ್ಯಮಗಳು, ಅಧಿಕಾರ ರಾಜಕಾರಣದ ಪ್ರತಿನಿಧಿಗಳು ಒಂದು ಆಕರ್ಷಕ ಜಗತ್ತನ್ನು ಸೃಷ್ಟಿಸಲು ಯತ್ನಿಸುತ್ತಿರುತ್ತಾರೆ.

ಹಬ್ಬದ ದಿನದ ಮಾರುಕಟ್ಟೆಯ ಚಿತ್ರಣವನ್ನೇ ಜನಸಾಮಾನ್ಯರ ಬದುಕಿನ ಹಿತ ಗಳಿಗೆ ಎಂದು ಬಿಂಬಿಸುವ ಮೂಲಕ ಒಂದು ಕಲ್ಪಿತ ಸುಖಿ ಸಮಾಜವನ್ನು ನಾವು ಆನಂದಿಸುತ್ತಿದ್ದೇವೆ. ಆದರೆ ಜನದಟ್ಟಣೆಯ ಮಾರುಕಟ್ಟೆಯ ನಡುವೆಯೂ ಹಸಿದ ಹೊಟ್ಟೆಗಳು ಹೇರಳವಾಗಿರುತ್ತವೆ, ನೊಂದ ಜೀವಗಳು ಅಪಾರ ಸಂಖ್ಯೆಯಲ್ಲಿರುತ್ತವೆ, ಬೆಂದ ಉದರಗಳು ಬೇಕಾದಷ್ಟಿರುತ್ತವೆ.

ಈ ಜೀವಗಳ ಒಡಲಿಗೆ ಬೆಂಕಿ ಇಡಲೆಂದೇ ಮತಾಂಧ ಶಕ್ತಿಗಳು ವ್ಯಾಪಾರ ವಹಿವಾಟುಗಳಲ್ಲೂ ಮತೀಯ ಅಸ್ಮಿತೆಗಳ ಗೋಡೆಗಳನ್ನು ನಿರ್ಮಿಸುವ ಮೂಲಕ, ಆಹಾರ ಪದ್ಧತಿಯ ಮೇಲೆ ದಾಳಿ ನಡೆಸುತ್ತಿವೆ. ದ್ವೇಷ, ಅಸೂಯೆ, ಮತ್ಸರ ಮತ್ತು ತಾರತಮ್ಯಗಳ ಹೊಸ ಆಯಾಮಗಳನ್ನು ಶೋಧಿಸುತ್ತಲೇ ಶ್ರಮಜೀವಿಗಳ ಜಗತ್ತನ್ನು ಅಡ್ಡಡ್ಡಲಾಗಿ ಸೀಳುವ ಅಮಾನುಷ ಪ್ರಯತ್ನಗಳ ನಡುವೆಯೇ ಭಾರತ ಮತ್ತೊಂದು ಯುಗಾದಿಯನ್ನು ಸಂಭ್ರಮಿಸುತ್ತಿದೆ.

ಈ ಸಂಭ್ರಮಾಚರಣೆ ಸಾತ್ವಿಕ ನೆಲೆಯಲ್ಲಿ ಅರ್ಥಪೂರ್ಣವಾಗಿ ಕಂಡರೂ ತಾತ್ವಿಕ ನೆಲೆಯಲ್ಲಿ ಚಿಂತನಾರ್ಹವೆನಿಸುವುದಿಲ್ಲವೇ ? ಈ ಆತ್ಮಾವಲೋಕನದೊಂದಿಗೇ ಯುಗಾದಿಯನ್ನು ಸ್ವಾಗತಿಸೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

Published

on

  • ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.

ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.

ಈ ಸಮಸ್ಯೆಗಳನ್ನು ಪರಿಹರಿಸಬೇಕಾಧ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.
ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ನಡೆಸುತ್ತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊAದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯç ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ.

ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿAತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.
ಮಾದಕ ವಸ್ತು ಬಳಸುವ ಆತಂಕದ ರಾಷ್ಟçಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡAತೆ ಯುವಜನತೆ ಹೆಚ್ಚಾಗಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ದುಶ್ಚಟಗಳ ಆರಂಭಕ್ಕೆ ಕಾರಣಗಳು

• ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.
• ಉಲ್ಲಾಸಕ್ಕಾಗಿ, ಫ್ಯಾಷನ್‌ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು
• ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು

• ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.
• ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.
• ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು.
• ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು
• ಸಮಾಜಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.
• ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.
• ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ.

ಪರಿಹಾರ ಕ್ರಮಗಳು

• ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೆ ಅದರಿಂದ ದೂರವಿರುವುದು.
• ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು.
• ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು.
• 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.
• ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಳಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.
• ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟçಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು.

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು.

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತ ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. (ಜೂನ್-26 ರಂದು ಅಂತರರಾಷ್ಟೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ ಈ ಲೇಖನ – ಡಾ. ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಕಾಲೇಜು,ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರೇಣುಕಾಸ್ವಾಮಿ ಕೊಲೆ ಮತ್ತು ಗಂಡುಹೆಣ್ಣಿನ ನಡುವಿನ ಸಂಬಂಧ

Published

on

  • ರಾಜೇಂದ್ರ ಬುರಡಿಕಟ್ಟಿ

ರೇಣುಕಾಸ್ವಾಮಿ ಕೊಲೆ ಕೇಸನ್ನು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವ ಅನೇಕ ಸ್ನೇಹಿತರು ಈ ಕೇಸಿನಲ್ಲಿ ಮೊದಲನೆಯ ಮತ್ತು ಎರಡನೆಯ ಆರೋಪಿಗಳೆಂದು ಹೆಸರಿಸಲ್ಪಟ್ಟ ದರ್ಶನ್ ಮತ್ತು ಪವಿತ್ರ ಗೌಡ ಅವರ ನಡುವಿನ ಸಂಬಂಧದ ಬಗ್ಗೆ ಅನಗತ್ಯವಾಗಿ ಚರ್ಚಿಸಿ ಪವಿತ್ರಗೌಡ ಅವರನ್ನು ‘ಇಟ್ಟುಕೊಂಡವಳು’ ಇತ್ಯದಿ ಪದಬಳಸಿ ಹಿಯ್ಯಾಳಿಸಿದ್ದಾರೆ.

ಒಂದು ಟಿವಿ ಚಾನೆಲ್ ನವರು ಅವರನ್ನು ‘ಸೆಕೆಂಡ್ ಹ್ಯಾಂಡ್ ಸುಂದರಿ’ ಎಂದೂ ಕರೆದದ್ದು ವರದಿಯಾಗಿದೆ. ಇದನ್ನು ಮಾಡುವ ಹಕ್ಕು ಯಾರಿಗೂ ಇಲ್ಲ. ನಮ್ಮ ವಿರೋಧ ಇರಬೇಕಾದದ್ದು ಅವರು ರೂಪಿಸಿದ್ದಾರೆ ಎನ್ನಲಾದ ಕೊಲೆಯ ಕೇಸಿನ ಬಗ್ಗೆಯೇ ಹೊರತು ಅವರಿಬ್ಬರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ.

ಗಂಡು ಹೆಣ್ಣಿನ ನಡುವಿನ ಸಂಬಂಧ ಎಂಬುದು ಅತ್ಯಂತ ಸಹಜವಾದದ್ದು. ಯಾರಿಗೆ ಯಾರ ಮೇಲೆ ಯಾವಾಗ ಆಕರ್ಷಣೆ ಉಂಟಾಗಿ ಸಂಬಂಧಗಳು ಬೆಸೆದುಕೊಳ್ಳುತ್ತವೆ ಎಂಬುದನ್ನು ಹೇಳಲಾಗದು. ಇದಕ್ಕೆ ‘ನೈತಿಕ’ ‘ಅನೈತಿಕ’ ಎಂಬ ಹಣೆಪಟ್ಟಿ ಹಚ್ಚಿ ಗೌರವಿಸುವ ಅಥವಾ ಅವಹೇಳನ ಮಾಡುವ ಕ್ರಮ ಸರಿಯಾದದ್ದಲ್ಲ. ಪ್ರತಿಯೊಬ್ಬರಿಗೂ ಆಯ್ಕೆಗಳಿರುತ್ತವೆ. ತಮಗೆ ಬೇಕಾದ ಗಂಡನ್ನು ಅಥವಾ ಹೆಣ್ಣನ್ನು ಆಯ್ದುಕೊಳ್ಳುವ ಅವರೊಡನೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವಿದೆ. ಎಲ್ಲರಿಗೂ ಇದೆ. ಅದನ್ನು ಪ್ರಶ್ನಿಸುವ ಹಕ್ಕು ಇತರರಿಗೆ ಇಲ್ಲ. ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧವು ದೇಶದ ಕಾನೂನಿನ ಪ್ರಕಾರವೂ ಅಪರಾಧವಲ್ಲ.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಯ ಸಾಹಿತಿ ಡಾ. ಶಿವರಾಮ ಕಾರಂತರು ತಮ್ಮ ಅನೇಕ ಕಾದಂಬರಿಗಳ ಮೂಲಕ ಇದಕ್ಕೆ ಸಂಬಂಧಿಸಿದಂತೆ ಒಂದು ತಾತ್ವಿಕತೆಯನ್ನು ನಮಗೆ ರೂಪಿಸಿಕೊಡುತ್ತಾರೆ. ಅದೆಂದರೆ ‘ಲೈಂಗಿಕ ಸುಖ ಎನ್ನುವುದು ಮನುಷ್ಯನ ಬದುಕು ಮನುಷ್ಯನಿಗೆ ನೀಡುವ ಅತ್ಯಂತ ಸುಖದ ಸಂಗತಿಗಳಲ್ಲಿ ಒಂದು. ಅದರಿಂದ ಯಾರೂ ವಂಚಿತರಾಗಬಾರದು. ಪರಸ್ಪರ ಒಪ್ಪಿಕೊಂಡ ಗಂಡು ಹೆಣ್ಣುಗಳ ನಡುವಿನ ಲೈಂಗಿಕ ಸಂಬಂಧದಲ್ಲಿ ಒಂದು ಚೆಲುವು ಇರುತ್ತದೆ. ಇಂತಹ ಒಂದು ಒಳ್ಳೆಯ ಸಂಬಂಧಕ್ಕೆ ಮದುವೆ ಎಂಬುದು ಒಂದು ‘ಪೂರ್ವಾಗತ್ಯ’ವಾಗಬೇಕಿಲ್ಲ. ಗಂಡುಹೆಣ್ಣಿನ ನಡುವಿನ ಒಂದು ಒಳ್ಳೆಯ ಸಂಬಂಧವು ವಿವಾಹದ ಒಳಗೂ ಇರಬಹುದು; ಹೊರಗೂ ಇರಬಹುದು. ಅದೇ ರೀತಿ ಒಂದು ಕೆಟ್ಟ ಸಂಬಂಧವು ವಿವಾಹದ ಒಳಗೂ ಇರಬಹುದು ಹೊರಗೂ ಇರಬಹುದು. ವಿವಾಹದ ಚೌಕಟ್ಟಿನ ಒಳಗಿನ ಒಂದು ಕೆಟ್ಟ ಸಂಬಂಧಕ್ಕಿಂತ ವಿವಾಹದ ಚೌಕಟ್ಟಿನ ಹೊರಗಿನ ಒಳ್ಳೆಯ ಸಂಬಂಧ ಬೆಲೆಯುಳ್ಳದ್ದು.

ಹೀಗಾಗಿ ಯಾರೊಡನೆ ಎಂತಹ ಸಂಬಂಧ ಇಟ್ಟುಕೊಳ್ಳಬೇಕು ಎಂಬುದು ಅವರವರ ವೈಯಕ್ತಿಕ ವಿಚಾರ. ಅದರಲ್ಲಿ ಇತರರು ತಲೆಹಾಕುವುದು ಅವಿವೇಕತನ. ‘ಮದುವೆ ಎಂಬುದು ಏಳೇಳು ಜನ್ಮಗಳ ಸಂಬಂಧ’ ಏನೇ ಆದರೂ ಅದರ ಗೆರೆದಾಟಿ ಬೇರೆಯವರೊಡನೆ ಲೈಂಗಿಕ ಸಂಬಂಧ ಇಟ್ಟುಕೊಳ್ಳಬಾರದು’ ಎನ್ನುವವರು ಹಾಗೆಯೇ ಇರಬಹುದು. ಅದಕ್ಕೂ ಅವರಿಗೆ ಸ್ವಾತಂತ್ರ್ಯವಿದೆ. ಆದರೆ ಮದುವೆಯ ಚೌಕಟ್ಟಿನ ಹೊರಗಿನ ಸಂಬಂಧಗಳನ್ನು ಟೀಕಿಸುವ ಸ್ವಾತಂತ್ರ್ಯ ಹಕ್ಕು ಅವರಿಗಿಲ್ಲ. ಈ ವಿಷಯದಲ್ಲಿ ನಮ್ಮ ಆಲೋಚನಾ ಕ್ರಮ ಸಾಕಷ್ಟು ಬದಲಾಗಬೇಕಿದೆ. ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವಿನ ಸಂಬಂಧ ಎಂಥದ್ದೇ ಇರಲಿ ಅದು ಅವರಿಬ್ಬರಿಗೂ ಸಂತೋಷವನ್ನು ಕೊಡುತ್ತಿದ್ದರೆ ಅದನ್ನು ಕಂಡು ನಾವು ಸಂತೋಷ ಪಡಬೇಕೆ ಹೊರತು ಹೊಟ್ಟೆಕಿಚ್ಚು ಪಡಬಾರದು. ಅದನ್ನು ಗೌರವಿಸುವುದನ್ನು ನಾವು ಮೊದಲು ಕಲಿಯಬೇಕು. ಈ ಹಿನ್ನಲೆಯಲ್ಲಿ ನಮ್ಮ ವಿರೋಧವಿರಬೇಕಾದದ್ದು ಅವರಿಬ್ಬರು ಸೇರಿ ವ್ಯಕ್ತಿಯೊಬ್ಬರ ಕೊಲೆಮಾಡಿದ್ದಾರೆ ಎನ್ನಲಾದ ವಿಚಾರಕ್ಕೆ ಹೊರತು ಅವರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ. ಇಂತದ್ದೇ ವಿಚಾರವನ್ನು ಬೇರೆ ರೀತಿಯಲ್ಲಿ ಹೇಳಿರುವ ಸುಹಾಸಿನಿ ಶ್ರೀ Suhasini Shree ಅವರ ಒಂದು ಪೋಸ್ಟನ್ನೂ ಆಸಕ್ತಿ ಇರುವವರು ಗಮನಿಸಬಹುದು.(ರಾಬು (23-06-2024)
(ರಾಜೇಂದ್ರ ಬುರಡಿಕಟ್ಟಿ ಅವರ ಫೇಸ್ ಬುಕ್ ಬರೆಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇವರೇ ನೋಡಿ ಟ್ವೀಟ್ಟರ್, ಪೇಸ್ಬುಕ್ ಮೀಮ್ಸ್ ಸ್ಟಾರ್ ಕ್ಸೇವಿಯರ್ ಉರ್ಫ್ ಓಂಪ್ರಕಾಶ್

Published

on

  • ~ ಸಿದ್ದು ಸತ್ಯಣ್ಣನವರ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದವರಿಗೆ ನೋಡಿದ ಕೂಡಲೇ ನಗು ಉಕ್ಕಿಸಿ, ಉಲ್ಲಸಿತಗೊಳಿಸುವ ಕ್ಸೇವಿಯರ್ ಮೀಮ್ಸ್ ಗಳ ಪರಿಚಯ ಇದ್ದೇ ಇರುತ್ತದೆ. ಕ್ಸೇವಿಯರ್ ಎಂದರೆ ಯಾರು? ಎಂದು ಹೆಸರೇಳಿದರೆ ಗೊತ್ತಾಗದಿರುವವರು ಅವರ ಫೋಟೊ ನೋಡಿದರೆ ಕೂಡಲೇ ಮುಖದ ಮೇಲೆ ನಗು ಮೂಡಿರುತ್ತದೆ.

ತುಂಟ ಕಾಮೆಂಟ್ ಹಾಗೂ ಹಾಸ್ಯದ ತಿರುಳುಗಳ ಪೋಸ್ಟ್ ಮೂಲಕ ಗಮನ ಸೆಳೆಯುವ‌ ಕ್ಸೇವಿಯರ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಸ್ಯಪ್ರಜ್ಞೆಯಿಂದ ಸಾಕಷ್ಟು ಪ್ರಸಿದ್ಧ. ಕ್ಸೇವಿಯರ್ ಹೆಸರಿನಿಂದ ಜನಪ್ರಿಯರಾದ ಇವರ ನಿಜವಾದ ಹೆಸರು ಓಂಪ್ರಕಾಶ್. ಅಸಂಖ್ಯ ಟ್ವೀಟರ್, ಫೇಸ್ಬುಕ್ ಪ್ರೋಫೈಲ್ ಗಳಲ್ಲಿ ಓಂಪ್ರಕಾಶ್ ಅವರ ಫೋಟೊ ಕ್ಸೇವಿಯರ್ ಎಂದೇ ಹಂಚಲ್ಪಟ್ಟಿದೆ.

ಮೀಮ್ಸ್ ಸ್ಟಾರ್ ಎಂದೇ ಪ್ರಖ್ಯಾತರಾಗಿರುವ ಇವರು ಮಧ್ಯವಯಸ್ಕ ಭಾರತೀಯರು ಹೆಚ್ಚಾಗಿ ಇಷ್ಟಪಡುವ ದಪ್ಪಮೀಸೆಯ ಫೋಟೊ ಹೊಂದಿರುವ ಪ್ರೋಫೈಲ್ ಮೂಲಕ ಟ್ವೀಟ್ಟರ್ ಮತ್ತು ಫೇಸ್ಬುಕ್ಕಿನ ಸಾಕಷ್ಟು ಟ್ರೋಲ್, ಮೀಮ್ ಪೇಜುಗಳಲ್ಲಿ ಕಾಣಸಿಗುತ್ತಾರೆ. ಕ್ಸೇವಿಯರ್ ಅಂಕಲ್, ಕ್ಸೇವಿಯರ್ ಮೀಮ್ಸ್, ಕ್ಸೇವಿಯರ್ ಪಾಂಡಾ, ಕ್ಸೇವಿಯರ್ ಮಿಮ್ ಬಾಯ್ ಹೀಗೆ ಇವರ ಹೆಸರಿನ ಮೂಲಕ ಸಾವಿರಾರು ಮೀಮ್ಸ್ ಮೇಕಿಂಗ್ ಪ್ರೋಫೈಲ್ ಗಳು ಲಕ್ಷಾಂತರ ಹಿಂಬಾಲಕರನ್ನು ಹೊಂದಿವೆ. ಮೀಮ್ಸ್ ಗಾಗಿಯೇ ವಿನ್ಯಾಸಗೊಳಿಸಲಾಗಿರುವ, ವಿದೇಶಗಳಲ್ಲೂ ಕೋಟ್ಯಂತರ ಜನರು ಹಿಂಬಾಲಿಸುವ 9gag ಎಂಬ ವೆಬ್ಸೈಟಿನಲ್ಲಿ ಇವರ ಸಾಕಷ್ಟು ಮೀಮ್ಸ್ ಗಳು ಜನಪ್ರಿಯವಾಗಿವೆ. ಫೇಸ್ಬುಕ್, ಟ್ವಿಟ್ಟರ್ ಬಳಸುವವರಿಗೆ ಕ್ಸೇವಿಯರ್ ಹಾಸ್ಯಪ್ರಜ್ಞೆ ಎಂಥದ್ದು ಎಂಬುದನ್ನ ಕೇಳಿದರೆ ನಗುವೇ ಅವರ ಉತ್ತರವಾಗಿರುತ್ತದೆ ಎಂಬುದಕ್ಕೆ ಸಹ ಚೆಂದದ ಮೀಮ್ ಒಂದಿದೆ.

ಕಾನ್ಪುರ ಐಐಟಿ ಸಿಬ್ಬಂದಿಯಾದ ಓಂಪ್ರಕಾಶ್ ಅವರು ಅಲ್ಲಿನ ಭೌತಶಾಸ್ತ್ರ ವಿಭಾಗದ ತಾಂತ್ರಿಕ ಮೇಲ್ವಿಚಾರಕ ಹುದ್ದೆಯಲ್ಲಿದ್ದಾರೆ. ಕ್ಸೇವಿಯರ್ ಎಂದು ಅವರು ಪ್ರಸಿದ್ಧರಾಗಲು ಕಾರಣ ಅವರ ಅಪರಿಮಿತ ಹಾಸ್ಯಪ್ರಜ್ಞೆಯ ‘ಪಕಾಲು ಪಾಪಿಟೋ’ ಎಂಬ ಕಾಲ್ಪನಿಕ ಗುಮಾಸ್ತನ ಪಾತ್ರವನ್ನು ಸೃಷ್ಟಿಸಿದ್ದಕ್ಕಾಗಿ. ಆ ಗುಮಾಸ್ತನ ಮೊದಲ ಟ್ವೀಟ್ ಟ್ವೀಟ್ಟರಿನಲ್ಲಿ ಹೆಚ್ಚುಕಡಿಮೆ 18 ಸಾವಿರ ರೀಟ್ವೀಟ್ ಆಗಿತ್ತು.

ಟ್ವೀಟ್ಟರ್ ನಿಯಮಗಳ ತಾಂತ್ರಿಕ ಕಾರಣಗಳಿಂದ ಸುಮಾರು ಲಕ್ಷ ಹಿಂಬಾಲಕರಿದ್ದ ಈ ಅಕೌಂಟ್ ಸ್ಥಗಿತಗೊಂಡಿತು. ನಂತರ ಕಾಮಿಕ್ ಮೀಮ್ ಗಳಿಂದ ಆರಂಭದಲ್ಲಿ ಪ್ರಸಿದ್ಧರಾಗಿದ್ದ ಓಂಪ್ರಕಾಶ್ ಅವರು ಕೊನೆಗೆ ಕ್ಸೇವಿಯರ್ ಹೆಸರಿನ ಮೂಲಕ ಮೀಮ್ ಪ್ರಿಯರಿಗೆ ಮನೆಮಾತಾದರು. ಓಂಪ್ರಕಾಶ್ ಅವರು ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಕ್ರಮವಾಗಿ 1.4 ಮಿಲಿಯನ್ ಹಾಗೂ 3 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ‘ಪಕಾಲು ಪಾಪಿಟೋ’ ಅಕೌಂಟ್ ತಾಂತ್ರಿಕವಾಗಿ ಸ್ಥಗಿತಗೊಂಡ ಕಾರಣ ಕ್ಸೇವಿಯರ್ ಎಂಬ ಹೆಸರಿನ ತಮಾಷೆಯ ಮೀಮ್ಸ್ ಮೂಲಕ ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟ್ಟರ್ ಎಲ್ಲ ಕಡೆಗಳಲ್ಲಿ ಕಾಣಿಸುತ್ತಾರೆ. ( ಸಿದ್ದು ಸತ್ಯಣ್ಣನವರ್ ಅವರ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending