Connect with us

ಬಹಿರಂಗ

ಜಾತ್ರೆ-ಸಂತೆಯ ಬಯಲಲಿ ಮತಾಂಧತೆಯ ಕರಾಳ ನೆರಳು

Published

on

ಸಾಂದರ್ಭಿಕ ಚಿತ್ರ

ಮಂದಿರ ಮಸೀದಿ ಶಾಲೆಗಳನ್ನು ದಾಟಿ ಮತಾಂಧತೆ ಜನದಟ್ಟಣೆಯ ಸಂತೆಕಟ್ಟೆಗೆ ಬಂದು ನಿಂತಿದೆ

  • ನಾ ದಿವಾಕರ

ಕೋಮುವಾದದ ಕ್ಯಾನ್ವಾಸ್ ದೊಡ್ಡದು. ಈ ಜನವಿರೋಧಿ ಮನಸ್ಥಿತಿಯನ್ನು ಸಮಾಜದ ಅಂತರಂಗದಲ್ಲೇ ಸೃಷ್ಟಿಸುವ ಮತೀಯವಾದ ಮತ್ತು ಮತಾಂಧತೆಯ ಬೇರುಗಳು ಆಳಕ್ಕಿಳಿದಷ್ಟೂ ಮನುಜ ಸಮಾಜವನ್ನು ದ್ವೇಷದ ಬೃಹತ್ ವೃಕ್ಷಗಳು ಆವರಿಸುತ್ತಲೇ ಹೋಗುತ್ತವೆ.

ಜನಸಾಮಾನ್ಯರ ನಿತ್ಯ ಜೀವನದಲ್ಲಿ ಕನಿಷ್ಠ ಮಟ್ಟದ ಗಮನ ಸೆಳೆಯಬೇಕಾದ ಜಾತಿ, ಮತ, ಧರ್ಮದ ಆಚರಣೆಗಳು, ಸಮಾಜ ನಿರ್ಮಾಣದ ಮುಖ್ಯ ಭೂಮಿಕೆಯಾಗಿ ಪರಿವರ್ತನೆಯಾದಾಗ ಈ ಅಸ್ಮಿತೆಗಳ ಬೇರುಗಳು ಜನರ ಮನಸ್ಥಿತಿಯನ್ನೂ ಸಂಕುಚಿತಗೊಳಿಸುತ್ತಲೇ ಹೋಗುತ್ತದೆ. ಹೀಗೆ ಸಂಕುಚಿತಗೊಂಡ ಮನಸುಗಳೇ ಮತೀಯ ಶಕ್ತಿಗಳು ಬಿತ್ತುವ ದ್ವೇಷದ ಬೀಜಗಳಿಗೆ ಫಲವತ್ತಾದ ಭೂಮಿಕೆಯಾಗುತ್ತವೆ.

ತಮ್ಮ ಬದುಕು, ಬವಣೆ, ಸಂಕಷ್ಟಗಳೆಲ್ಲಕ್ಕೂ ಇಡೀ ಸಮಾಜವನ್ನು ನಿಯಂತ್ರಿಸುವ ಒಂದು ಕ್ರೂರ ಅರ್ಥವ್ಯವಸ್ಥೆ ಮತ್ತು ಈ ಕ್ರೌರ್ಯವನ್ನು ಸಮರ್ಥಿಸಿಕೊಂಡೇ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವಂತಹ ಮತ ಧರ್ಮಗಳ ಸಾಂಸ್ಥಿಕ ನೆಲೆಗಳು ಮೂಲ ಕಾರಣ ಎಂಬ ಸುಡುವಾಸ್ತವವನ್ನು ಜನರು ಅರ್ಥಮಾಡಿಕೊಳ್ಳದ ಹೊರತು ಈ ದ್ವೇಷ ಬೀಜಗಳಿಂದ

ಮೊಳಕೆಯೊಡೆಯುವ ಸಸಿಗಳನ್ನು ಕಿತ್ತೊಗೆಯಲಾಗುವುದಿಲ್ಲ. ಭಾರತದಲ್ಲಿ ಕೋಮುವಾದ ಮತ್ತು ಮತೀಯ ದ್ವೇಷದ ಬೀಜಗಳಿಗೆ ಶತಮಾನದಷ್ಟು ಇತಿಹಾಸವಿದೆ. ಹಿಂದೂ-ಮುಸ್ಲಿಂ ಸಮೀಕರಣವನ್ನು ಬದಿಗಿಟ್ಟು ನೋಡಿದಾಗಲೂ, ಈ ದೇಶದ ಇತಿಹಾಸದಲ್ಲಿ ಒಂದು ಇಡೀ ಜನಾಂಗ. ಅಸ್ಪೃತೆಯಂತಹ ಹೀನ ಆಚರಣೆಯಿಂದ ಇಂದಿಗೂ ಅಗೋಚರವಾಗಿ ಬಹಿಷ್ಕೃತವಾಗಿಯೇ ಬದುಕುತ್ತಿದೆ.

ಜನಸಮುದಾಯಗಳ ಮೇಲೆ ತನ್ನದೇ ಆದ ವಾರಸುದಾರಿಕೆ ಮತ್ತು ಹಕ್ಕೊತ್ತಾಯಗಳನ್ನು ಹೇರುತ್ತಾ, ಉತ್ತರದಾಯಿತ್ವ ಇಲ್ಲದ ಒಂದು ಶೋಷಕ ವ್ಯವಸ್ಥೆಯನ್ನು ಹೇರುವ ಮೂಲಕ ಭಾರತದ ವೈದಿಕಶಾಹಿ ಪರಂಪರೆಯು ಜಾತಿ ವ್ಯವಸ್ಥೆಯಂತಹ ಒಂದು ಕ್ರೂರ ಪೆಡಂಭೂತವನ್ನು ಸೃಷ್ಟಿಸಿದೆ.

ಮನುಷ್ಯನ ಹುಟ್ಟಿನ ಮೂಲದಿಂದಲೇ ಸೃಷ್ಟಿಸಲಾಗುವ ಕಂದರಗಳು ಅಂತಿಮ ಪಯಣದವರೆಗೂ ಮುಂದುವರೆಯುವಂತಹ ಒಂದು ವಿಕೃತ ವ್ಯವಸ್ಥೆಗೆ ಭಾರತೀಯರಾದ ನಾವು ಒಗ್ಗಿಹೋಗಿದ್ದೇವೆ. ತಮ್ಮ ಪಯಣ ಮುಗಿಸಿ ಇಹಲೋಕ ತ್ಯಜಿಸಿದ ನಂತರವೂ ತುಳಿತಕ್ಕೊಳಗಾದ, ಬಹಿಷ್ಕೃತ ಸಮುದಾಯದ ಜೀವಗಳು ಪತ್ಯೇಕತೆಯ ಶಿಕ್ಷೆಯನ್ನು ಅನುಭವಿಸಬೇಕಾದ ಒಂದು ದುರಂತ ಸನ್ನಿವೇಶವನ್ನು ಇಂದಿಗೂ ಭಾರತ ಎದುರಿಸುತ್ತಿದೆ.

ಸಾಮಾಜಿಕ ಬದುಕಿನ ಮತ್ತು ಸಾಂಸ್ಕೃತಿಕ ಹೆಜ್ಜೆಗಳ ಪ್ರತಿ ಹಂತದಲ್ಲೂ ಅನ್ಯರನ್ನು ಸೃಷ್ಟಿಸುತ್ತಾ ‘ ನಮ್ಮವರೆಂಬ ’ ಭದ್ರಕೋಟೆಗಳನ್ನು ನಿರ್ಮಿಸುವ ಒಂದು ಕ್ರೂರ ಜಾತಿ ವ್ಯವಸ್ಥೆ ಅತಿಮಾನುಷ ಶಕ್ತಿಗಳನ್ನು ಆರಾಧಿಸುತ್ತಲೇ ಸಮಾಜದ ಗರ್ಭದಲ್ಲಿ ಅಮಾನುಷತೆಯ ಬೀಜಗಳನ್ನು ಬಿತ್ತುತ್ತಾ ಬಂದಿದೆ.

ಈ ಭದ್ರಕೋಟೆಗಳೊಳಗೆ ತಮ್ಮದೇ ಆದ ಹಿತವಲಯವನ್ನು ಸೃಷ್ಟಿಸಿಕೊಳ್ಳುವ ಪ್ರತಿಯೊಂದು ಜಾತಿ ಸಮುದಾಯವೂ ಅನ್ಯ ಜಾತಿಯನ್ನು ಕೀಳೆಂದು ಭಾವಿಸುತ್ತಾ ಶೋಷಣೆಗೊಳಪಡಿಸುವುದು ಇಲ್ಲಿನ ಜಾತಿ ವ್ಯವಸ್ಥೆಯ ವೈಶಿಷ್ಟ್ಯ. ಭಾರತೀಯ ಸಮಾಜದಲ್ಲಿ ಶತಮಾನಗಳಿಂದ ತಮ್ಮ ಅಸ್ತಿತ್ವ ಕಂಡುಕೊಂಡಿರುವ ಜನಸಮುದಾಯಗಳು ತಮ್ಮ ಮತಶ್ರದ್ಧೆ ಮತ್ತು ಧಾರ್ಮಿಕ ಆಚರಣೆಗಳ ಕಾರಣಕ್ಕಾಗಿಯೇ ಈ ‘ ಅನ್ಯವರ್ಗ’ಕ್ಕೆ ಸೇರಿಬಿಡುತ್ತವೆ.

ಜಾತಿ ವ್ಯವಸ್ಥೆಯ ದೌರ್ಜನ್ಯಗಳಿಗೆ, ಅಸ್ಪೃಶ್ಯತೆಯಂತಹ ಅಮಾನುಷ ಹೀನ ಪದ್ಧತಿಗೆ ಕುರುಡಾಗಿರುವ ಸಮಾಜದಲ್ಲಿ ಈ ‘ ಅನ್ಯವರ್ಗ’ವನ್ನು ಸೃಷ್ಟಿಸುವುದು ಬಹಳ ಸುಲಭ ಎನ್ನುವುದನ್ನು ಈ ದೇಶದ ಸಾಂಸ್ಕೃತಿಕ ರಾಷ್ಟ್ರೀಯತೆಯ ರಾಜಕಾರಣ ನಿರೂಪಿಸಿದೆ.

ಇಡೀ ಸಮಾಜವನ್ನು ತನ್ನ ಬೌದ್ಧಿಕ ಆಧಿಪತ್ಯಕ್ಕೊಳಪಡಿಸುವ ಮೂಲಕ ಸಾಂಸ್ಕೃತಿಕ ನೆಲೆಯಲ್ಲಿ, ಸಾಮಾಜಿಕಾರ್ಥಿಕ ನೆಲೆಯಲ್ಲಿ ಪಾರಮ್ಯ ಸಾಧಿಸಲೆತ್ನಿಸುವ ಬಹುಸಂಖ್ಯಾವಾದದ ರಾಜಕೀಯ ಶಕ್ತಿಗಳು ಇಂದು ಈ ದೇಶದ ದಲಿತರನ್ನೂ, ಅಲ್ಪಸಂಖ್ಯಾತರನ್ನೂ, ಮಹಿಳೆಯರನ್ನೂ ಮತ್ತು ಅವಕಾಶವಂಚಿತ ಜನಸಮುದಾಯಗಳನ್ನೂ ಅಸ್ಮಿತೆಗಳ ಚೌಕಟ್ಟಿನಲ್ಲಿ ಬಂಧಿಸುವ ಪ್ರಯತ್ನ ಮಾಡುತ್ತಿವೆ.

ಈ ರಾಜಕೀಯ ಶಕ್ತಿಗಳನ್ನು ಹಿಂದುತ್ವ ರಾಜಕಾರಣ ಪ್ರಧಾನವಾಗಿ ಪ್ರತಿನಿಧಿಸುತ್ತದೆ. ಆದರೆ ಹಿಂದುತ್ವವನ್ನು ತಾತ್ವಿಕವಾಗಿ ಒಪ್ಪದ ರಾಜಕೀಯ ಶಕ್ತಿಗಳೂ ಸಹ ತಮ್ಮ ಸ್ಪಷ್ಟ ಧೋರಣೆಯನ್ನು ವ್ಯಕ್ತಪಡಿಸದೆ ಇರುವುದು ವಾಸ್ತವ.

ಈ ದ್ವೇಷ ರಾಜಕಾರಣದ ಒಂದು ಆಯಾಮವನ್ನು ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೇ ಮಾರಕವಾಗುವಂತಹ ಹಿಜಾಬ್ ವಿವಾದದಲ್ಲಿ ಕಂಡಿದ್ದೇವೆ. ಸಾಂವಿಧಾನಿಕ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣದ ಹಕ್ಕು ಮತ್ತು ಆದ್ಯತೆ, ಈ ಮೂರು ವಿಚಾರಗಳಲ್ಲಿ ಶಿಕ್ಷಣದ ಹಕ್ಕುಗಳಿಗಿಂತಲೂ ಧಾರ್ಮಿಕ ಸ್ವಾತಂತ್ರ್ಯವೇ ಪ್ರಧಾನವಾಗುವಂತಹ ಒಂದು ಭಾವನಾತ್ಮಕ ಸನ್ನಿವೇಶವನ್ನು ಸೃಷ್ಟಿಸಲಾಗಿದೆ.

ಶಾಲಾ ವ್ಯಾಸಂಗ ಮಾಡುವ ಎಳೆ ವಯಸ್ಸಿನ ಹೆಣ್ಣು ಮಕ್ಕಳು ಇಂದು ಮತೀಯವಾದದ ರಾಜಕೀಯ ಮೇಲಾಟಗಳಿಗೆ ಬಲಿಯಾಗುತ್ತಿರುವುದನ್ನು ಕಂಡೂ ಕಾಣದಂತಿದ್ದೇವೆ. ಸಮಾಜದಲ್ಲಿ ಢಾಳಾಗಿ ಕಾಣುತ್ತಿರುವ ಈ ಅಸೂಕ್ಷ್ಮತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಜಾಸತ್ತಾತ್ಮಕ ಧ್ವನಿಗಳು ಸದ್ದು ಮಾಡಬೇಕಿದೆ. ಆದರೆ ಮತಶ್ರದ್ಧೆ ಮತ್ತು ಧಾರ್ಮಿಕ ನಂಬಿಕೆಗಳೇ ಪ್ರಧಾನವಾಗಿ ಸದ್ದುಮಾಡುತ್ತಿದೆ.

ಈ ಸಂದರ್ಭದಲ್ಲೇ ಕೆಲವು ಹಿಂದೂ ಮೂಲಭೂತವಾದಿ ಸಂಘಟನೆಗಳು ಮುಸ್ಲಿಂ ಸಮುದಾಯದ ಆರ್ಥಿಕ ಬೆನ್ನೆಲುಬನ್ನು ಮುರಿಯುವ ಪ್ರಯತ್ನದಲ್ಲಿ ತೊಡಗಿವೆ. ಶಾಲಾವಲಯದಲ್ಲಿ ಸೌಹಾರ್ದ ವಾತಾವರಣವನ್ನು ಕಲುಷಿತಗೊಳಿಸಿ, ಮತಾಂಧತೆಯ ಮಾಲಿನ್ಯ ಹರಡಿದ ನಂತರ ಈಗ ಮತಾಂಧರ ದೃಷ್ಟಿ ಈ ದೇಶದ ಬಹುತ್ವ ಸಂಸ್ಕೃತಿಯ ಮೂಲ ಸೆಲೆ ಎಂದೇ ಹೇಳಬಹುದಾದ ಜಾತ್ರೆಗಳ ಮೇಲೆ ಬಿದ್ದಿದೆ.

ಭಾರತದಲ್ಲಿ ಜಾತ್ರೆಗಳಿಗೆ ಒಂದು ವಿಶಿಷ್ಟ ಸ್ಥಾನ ಇದೆ. ವೈದಿಕಶಾಹಿಯಿಂದ ಮುಕ್ತವಾದ ಶೂದ್ರ ಸಮುದಾಯದ ದೇವಾನುದೇವತೆಗಳೇ ಪ್ರಧಾನವಾಗಿರುವ ಸಾವಿರಾರು ಜಾತ್ರೆ, ರಥೋತ್ಸವಗಳು ಭಾರತದಲ್ಲಿ ನಡೆಯುತ್ತಲೇ ಇರುತ್ತವೆ. ಜನಪದ ಸಂಸ್ಕೃತಿಯಿಂದ ಉಗಮಿಸಿರುವ ನೂರಾರು ದೇವತೆಗಳು ಜನಸಾಮಾನ್ಯರ, ವಿಶೇಷವಾಗಿ ದುಡಿಯುವ ಜನತೆಯ ಸಾಂತ್ವನದ ನೆಲೆಗಳಾಗಿ ಕಂಡುಬರುತ್ತವೆ.

ತಮ್ಮ ಬದುಕಿನ ಸಂಕಷ್ಟಗಳಿಗೆ ಸಾಂತ್ವನ ಹೇಳುವ ಸಾಂಸ್ಕೃತಿಕ ನೆಲೆಗಳಾಗಿ ಈ ದೈವಗಳನ್ನು ಕಾಣುವ ಪರಿಶಿಷ್ಟ ಸಮುದಾಯಗಳು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ತಮ್ಮ ಸಾಮಾಜಿಕ-ಸಾಂಸ್ಕೃತಿಕ ಸೌಹಾರ್ದತೆಯನ್ನೂ ಸಾರುತ್ತಾ ಬಂದಿವೆ.

ಭಾರತದ ಬಹುತ್ವ ಸಂಸ್ಕೃತಿಯನ್ನು ಮತ್ತಾವ ಕ್ಷೇತ್ರದಲ್ಲಿ ಕಾಣಲಾಗದಿದ್ದರೂ, ಈ ಜಾತ್ರೆಗಳಲ್ಲಿ ಕಾಣಬಹುದು. ಜಾತಿ, ಮತ, ಧರ್ಮ, ಪಂಥ ಮತ್ತು ಭಾಷಿಕ ಅಸ್ಮಿತೆಗಳನ್ನೂ ಮರೆತು, ಸಾಮಾಜಿಕ ಅಂತಸ್ತು ಮತ್ತು ಸ್ಥಾನಮಾನಗಳನ್ನೂ ಬದಿಗೊತ್ತಿ, ಇಡೀ ಗ್ರಾಮ ಸಮುದಾಯ ಒಂದಾಗಿ ಆಚರಿಸುವ ಈ ಜಾತ್ರೆಗಳಲ್ಲಿ ಈ ದೇಶದ ಅಲ್ಪಸಂಖ್ಯಾತರೂ ಅವಿಭಾಜ್ಯ ಅಂಗವಾಗಿಯೇ ನಡೆದುಬಂದಿದ್ದಾರೆ.

ಪುರಿ ಜಗನ್ನಾಥ ದೇವಾಲಯದಿಂದ ಮೈಸೂರಿನ ಚಾಮುಂಡೇಶ್ವರಿಯವರಿಗೆ, ಕೋಲಾರದ ಕೋಲಾರಮ್ಮನಿಂದ ಕೊಲ್ಲೂರು ಮೂಕಾಂಬಿಕೆಯವರೆಗೆ ಈ ಶ್ರದ್ಧೆ ಮತ್ತು ನಂಬಿಕೆಗಳು ಸಾಮುದಾಯಿಕ, ಧಾರ್ಮಿಕ ಅಸ್ಮಿತೆಗಳ ಚೌಕಟ್ಟುಗಳನ್ನು ಭೇದಿಸಿ ಸೌಹಾರ್ದತೆಯ ದ್ಯೋತಕವಾಗಿ ಬೆಳೆದುಬಂದಿವೆ.

ಭಾರತದ ಉದ್ದಗಲಕ್ಕೂ ಕಂಡುಬರುವ ಸ್ಥಳೀಯ ನಂಬಿಕೆಗಳನ್ನಾಧರಿಸಿದ ಆಚರಣೆಗಳು ಜಾತ್ರೆಗಳ ರೂಪದಲ್ಲಿ, ಉತ್ಸವ, ರಥೋತ್ಸವದ ರೂಪದಲ್ಲಿ ಮತ್ತು ಸಾಮೂಹಿಕ ಹಬ್ಬಗಳ ರೂಪದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿವೆ. ವೈದಿಕ ಪರಂಪರೆಯ ಶ್ರೇಷ್ಠತೆಯ ಅಹಮಿಕೆ, ತಾರತಮ್ಯದ ಆಚರಣೆಗಳು ಮತ್ತು ಪಾರಮ್ಯದ ಹಂಗಿಲ್ಲದೆ ಬೆಳೆದುಬಂದಿರುವ ಈ ಜನಪದೀಯ ಸಾಂಸ್ಕೃತಿಕ ನೆಲೆಗಳು ಆಧುನಿಕ ಕಾಲಘಟ್ಟದಲ್ಲೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೇ ಬಂದಿವೆ.

ಸ್ಥಳೀಯ ಗ್ರಾಮ ದೇವತೆಗಳು, ಜನಪದೀಯ ಸಾಂಸ್ಕೃತಿಕ ವ್ಯಕ್ತಿ ಮತ್ತು ಘಟನೆಗಳು ಇಂತಹ ಜಾತ್ರೆಗಳಿಗೆ ಒಂದು ಸಾಂಸ್ಕೃತಿಕ ಸಮನ್ವಯದ ಬುನಾದಿಯನ್ನು ಒದಗಿಸುತ್ತಲೇ ಬಂದಿವೆ. ಭಾರತದ ಉಳಿದೆಲ್ಲಾ ಬೌದ್ಧಿಕ ವಲಯದಲ್ಲಿ ಆದಂತೆಯೇ ಈ ಜನಪದೀಯ ನೆಲೆಗಳಲ್ಲೂ ವೈದಿಕ ಪರಂಪರೆಯೇ ಆವರಿಸಿ, ಆಕ್ರಮಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದರ ಮೂಲ ಕಾರಣಗಳನ್ನು ಶೋಧಿಸಬೇಕಿದೆ.

ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ಸಾಂಸ್ಕೃತಿಕ ಸಮನ್ವಯದ ನೆಲೆಗಳಲ್ಲೂ ಜಾತಿ, ಮತ, ಪಂಥೀಯ ಗೋಡೆಗಳನ್ನು ನಿರ್ಮಿಸುವ ಪ್ರಯತ್ನವನ್ನು ಕೆಲವು ಮತಾಂಧ ಸಂಘಟನೆಗಳು ಮಾಡುತ್ತಿರುವುದು ಚಿಂತೆಗೀಡುಮಾಡುವ ವಿಚಾರವಾಗಿದೆ. ಬಹುತ್ವ ಭಾರತದ ಸಮನ್ವಯ ಸಂಸ್ಕೃತಿಯ ಮೂಲ ಸೆಲೆಯಂತೆ ಕಾಣುವ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿರುವ ಜಾತ್ರೆಗಳು ಮತ್ತು ಸಂತೆಮಾಳಗಳು ಇಂದಿಗೂ ಸಹ ಜನಸಮುದಾಯಗಳ ನಡುವೆ ಇರಬಹುದಾದ ತಾರತಮ್ಯದ ಗೋಡೆಗಳನ್ನು ಕೆಡವುತ್ತಾ ಒಂದು ಸೌಹಾರ್ದಯುತ ಸಮಾಜವನ್ನು ಕಟ್ಟುವುದರಲ್ಲಿ ನಿರತವಾಗಿವೆ.

ಈ ಮಾರುಕಟ್ಟೆ ತಾಣಗಳು ಶ್ರೀಮಂತಿಕೆಯಲ್ಲಿ ಮೆರೆಯುವ ಬಂಡವಳಿಗ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಬದಲಾಗಿ ತಮ್ಮ ನಿತ್ಯ ಬದುಕಿನ ಜೀವನೋಪಾಯದ ಮಾರ್ಗಗಳನ್ನು ಕಲ್ಪಿಸಿಕೊಳ್ಳುವ ತಾಣಗಳಾಗಿರುತ್ತವೆ. ಈ ಜಾತ್ರೆಗಳಲ್ಲಿ, ಸಂತೆಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ಯಾವುದೇ ಸಮುದಾಯದ ವ್ಯಕ್ತಿಗಾದರೂ ಅದು ಜೀವನೋಪಾಯದ ಮಾರ್ಗವಾಗಿರುತ್ತದೆಯೇ ಹೊರತು, ಬಂಡವಾಳಶೇಖರಣೆ ಅಥವಾ ಲಾಭ ಗಳಿಕೆಯ ದಂಧೆ ಆಗಿರುವುದಿಲ್ಲ. ಹಾಗಾಗಿಯೇ ಮಾರುಕಟ್ಟೆಯ ಸಹಜ ಪೈಪೋಟಿಯ ನಡುವೆಯೇ ಸಂತೆಗಳಲ್ಲಿ, ಜಾತ್ರೆಗಳಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ನಡೆಸುವವರ ನಡುವೆ ಒಂದು ಸಮನ್ವಯದ, ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಿರುತ್ತದೆ.

ಇಂತಹ ಒಂದು ಸಾಂಸ್ಕೃತಿಕ ಸಮನ್ವಯದ ವಾತಾವರಣವನ್ನು ಕಲುಷಿತಗೊಳಿಸಲು, ಮತಾಂಧತೆಯ ವಿಷಾನಿಲವನ್ನು ಹರಡುತ್ತಿರುವುದು ದುರಂತ. ಮೂಲತಃ ಶೂದ್ರಾದಿ ದೇವಾನುದೇವತೆಗಳು ಮತ್ತು ಜನಪದೀಯ ನಂಬಿಕೆಗಳನ್ನಾಧರಿಸಿದ ಈ ಜಾತ್ರೆಗಳಲ್ಲಿ ತನ್ನ ಬೇರುಗಳನ್ನು ಹರಡಲು ಯತ್ನಿಸುತ್ತಿರುವ ವೈದಿಕಶಾಹಿ ಪರಂಪರೆ ಅಲ್ಲಿ ತನ್ನದೇ ಆದ ಮಡಿವಂತಿಕೆ, ಪ್ರತ್ಯೇಕತೆ, ಶ್ರೇಷ್ಠತೆಯ ವ್ಯಸನಗಳನ್ನು ಪಸರಿಸಲು ಪ್ರಯತ್ನಿಸುತ್ತಿದೆ.

ಇದರ ಒಂದು ಭಾಗವಾಗಿಯೇ ಕೆಲವು ಹಿಂದೂ ಸಂಘಟನೆಗಳು, ಜಾತ್ರೆಗಳಲ್ಲಿ ಮುಸಲ್ಮಾನರ ಅಂಗಡಿ ಮುಗ್ಗಟ್ಟುಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸುತ್ತಿವೆ. ಮತೀಯ ಆಲೋಚನೆ ಮತ್ತು ಮತಾಂಧತೆಯಿಂದ ಮುಕ್ತವಾಗಿರುವ ಒಂದು ಸಮನ್ವಯದ ನೆಲದಲ್ಲಿ ಮತಾಂಧತೆಯ ವಿಷಬೀಜಗಳನ್ನು ಬಿತ್ತುವ ಮೂಲಕ, ಜನಸಮುದಾಯಗಳ ನಡುವೆ ತಾರತಮ್ಯದ, ಪ್ರತ್ಯೇಕತೆಯ ಗೋಡೆಗಳನ್ನು ನಿರ್ಮಿಸುವ ಇಂತಹ ಪ್ರಯತ್ನಗಳನ್ನು ಪ್ರಜ್ಞಾವಂತ ಸಮಾಜ ವಿರೋಧಿಸಲೇಬೇಕಿದೆ.

ದೇಶ ಸ್ವತಂತ್ರವಾಗಿ ಏಳು ದಶಕಗಳು ಕಳೆದರೂ ಇಂದಿಗೂ ದೇವಾಲಯದ ಆವರಣಗಳಲ್ಲಿ ಸಹಪಂಕ್ತಿ ಭೋಜನವನ್ನು ಕಾಣಲಾಗದ ದುರಂತ ಸನ್ನಿವೇಶವನ್ನು ನಾವು ನೋಡುತ್ತಿದ್ದೇವೆ. ದೇವಸ್ಥಾನಗಳಲ್ಲಿ, ಪೂಜಾ ಸ್ಥಳಗಳಲ್ಲಿ ಅಸ್ಪೃಶ್ಯತೆಯ ಆಚರಣೆಯೂ ಇಂದಿಗೂ ಜಾರಿಯಲ್ಲಿದೆ. ಅನ್ನ ಉಣ್ಣುವ ಜಾಗದಲ್ಲಿ ಪ್ರತ್ಯೇಕತೆಯ ಗೋಡೆಗಳನ್ನು ಕಟ್ಟುವುದರಲ್ಲಿ ನಿಷ್ಣಾತವಾಗಿರುವ ಶಕ್ತಿಗಳೇ ಇಂದು ಅನ್ನ ಸಂಪಾದಿಸುವ ಜಾಗಗಳಲ್ಲೂ ಬೇಲಿಗಳನ್ನು ನಿರ್ಮಿಸಲು ಮುಂದಾಗುತ್ತಿವೆ. ಜಾತ್ರೆಗಳಲ್ಲಿ ಮುಸಲ್ಮಾನರ ಅಂಗಡಿ ಮುಗ್ಗಟ್ಟುಗಳನ್ನು ನಿಷೇಧಿಸುವ ಆಗ್ರಹದ ಹಿಂದೆ, ಸಮನ್ವಯ ಸಂಸ್ಕೃತಿಯನ್ನು ಭಂಗಗೊಳಿಸುವ, ಸಾಂಸ್ಕೃತಿಕ ಸೌಹಾರ್ದತೆಯನ್ನು ಕದಡುವ ಕುತಂತ್ರ ಇರುವುದನ್ನು ಗಮನಿಸಬೇಕಿದೆ.

ಈ ಸಮನ್ವಯ ಸಂಸ್ಕೃತಿಯನ್ನು ಹಿಂದೂಗಳ ಜಾತ್ರೆಗಳಲ್ಲಿ ಕಾಣುವಂತೆಯೇ, ಕ್ರೈಸ್ತರ ಹಲವು ಹಬ್ಬ, ಉತ್ಸವಗಳಲ್ಲಿ, ಮುಸಲ್ಮಾನರ ಉರುಸ್, ಮೊಹರಂ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಕಾಣುತ್ತಲೇ ಬಂದಿದ್ದೇವೆ. ಜನಸಾಮಾನ್ಯರ ಬದುಕಿನ ಒಂದು ಭಾಗವಾಗಿಯೇ ಬೆಳೆದುಬಂದಿರುವ ಸ್ಥಳೀಯ ಮಾರುಕಟ್ಟೆಗಳು ಸದಾ ಸಮನ್ವಯತೆಯೊಂದಿಗೇ ನಡೆದುಬಂದಿವೆ. ಮದುವೆ, ಮುಂಜಿ, ನಾಮಕರಣ, ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಸಣ್ಣ ವ್ಯಾಪಾರದ ವಲಯ ಎಲ್ಲ ಮತ ಧರ್ಮಗಳನ್ನೂ ಪ್ರತಿನಿಧಿಸುತ್ತಲೇ ಬಂದಿದೆ. ಹೂ ಮಾರುವವರಿಂದ ಹಿಡಿದು, ಪೂಜಾ ಸಾಮಗ್ರಿಯನ್ನು ಮಾರುವವರವರೆಗೆ, ಧಾರ್ಮಿಕ ಆಚರಣೆಗಳ ಉಪಕರಣಗಳನ್ನು ಒದಗಿಸುವವರೆಗೆ, ಈ ಸಾಂಸ್ಕೃತಿಕ ಸಮನ್ವಯವನ್ನು ವ್ಯಾಪಾರಿ ವಲಯ ಕಾಪಾಡಿಕೊಂಡುಬಂದಿದೆ.

ಈ ಸಮನ್ವಯದ ನಡುವೆಯೇ ತಲೆದೋರುವ ಅಸ್ಪೃಶ್ಯತೆಯಂತಹ ಹೀನ ಆಚರಣೆಗಳನ್ನು ನಮ್ಮ ಸಮಾಜ ನಿರ್ಲಕ್ಷಿಸುತ್ತಾ ಬಂದಿರುವುದನ್ನೂ ಈ ಸಂದರ್ಭದಲ್ಲಿ ಮರೆಯುವಂತಿಲ್ಲ. ದೇವಸ್ಥಾನಗಳಲ್ಲಿ ಸಹಪಂಕ್ತಿ ಭೋಜನವನ್ನು ನಿರಾಕರಿಸುವ, ಮಡೆ ಸ್ನಾನದಂತಹ ಸಾಂಸ್ಕೃತಿಕ ದೌರ್ಜನ್ಯವನ್ನು ಪ್ರೋತ್ಸಾಹಿಸುವ ಒಂದು ಕ್ರೂರ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ತಾರತಮ್ಯದ ನೆಲೆಗಳು ಇಂದು ವಿಸ್ತೃತ ನೆಲೆಯಲ್ಲಿ ಅನಾವರಣಗೊಳ್ಳುತ್ತಿವೆ. ಈ ತಾರತಮ್ಯದ ನೆಲೆಗಳನ್ನು ಮತಾಂಧ ಶಕ್ತಿಗಳು ಆಕ್ರಮಿಸಿಕೊಂಡಷ್ಟೂ ಸಾಮಾಜಿಕ ಸೌಹಾರ್ದತೆ ನಾಶವಾಗುತ್ತಲೇ ಹೋಗುತ್ತದೆ. ಹಿಂದುತ್ವ ರಾಜಕಾರಣದ ಏಕಮುಖಿ ಸಂಸ್ಕೃತಿಯನ್ನು ಹೇರುವ ಹುನ್ನಾರಗಳಿಗೆ ಪೂರಕವಾಗಿಯೇ ಈ ಆಕ್ರಮಣಗಳೂ ನಡೆಯುತ್ತಿರುವುದು ಸ್ಪಷ್ಟ.

ಮಾರುಕಟ್ಟೆ ಆರ್ಥಿಕತೆಯ ದೃಷ್ಟಿಯಿಂದಲೂ ಮುಸಲ್ಮಾನರ ವ್ಯಾಪಾರ ನಿಷೇಧಿಸುವ ಪ್ರಯತ್ನಗಳು ಹಲವು ಪಲ್ಲಟಗಳಿಗೆ ಕಾರಣವಾಗುತ್ತವೆ. ಮುಸಲ್ಮಾನರ ಅಂಗಡಿಯಲ್ಲಿ ಬಿಕರಿಯಾಗುವ, ವಿನಿಮಯವಾಗುವ ಪದಾರ್ಥಗಳ ಹಿಂದೆ ಹಲವು ಹಿಂದೂ, ಕ್ರೈಸ್ತ ಸಮುದಾಯಗಳ ಶ್ರಮವೂ ಇರುತ್ತದೆ. ಬಿಕರಿಯಾಗುವ ಪದಾರ್ಥಗಳು ಮೂಲತಃ ಮಾನವ ಶ್ರಮದಿಂದ ಉತ್ಪಾದಿತವಾಗಿರುತ್ತವೆ. ಈ ಉತ್ಪಾದನೆಯ ಪ್ರಕ್ರಿಯೆಯಲ್ಲಿನ ಶ್ರಮವನ್ನು ಜಾತಿ, ಮತ, ಧರ್ಮದ ನೆಲೆಯಲ್ಲಿ ವಿಂಗಡಿಸಲು ಸಾಧ್ಯವಾಗುವುದೂ ಇಲ್ಲ.

ಆದರೆ ಒಂದು ನಿರ್ದಿಷ್ಟ ಮತದ ವ್ಯಾಪಾರಿಗಳಿಗೆ ನಿರ್ಬಂಧ ಹೇರುವುದರಿಂದ, ಉತ್ಪಾದನಾ ವಲಯದ ಸರಾಗ ವಹಿವಾಟುಗಳೂ ಪ್ರಕ್ಷುಬ್ಧವಾಗುತ್ತವೆ ಎಂಬ ವಾಸ್ತವವನ್ನು ನಾವು ಗ್ರಹಿಸಬೇಕಿದೆ. ರೇಷ್ಮೆ ಗೂಡು ತಯಾರಿಸುವವರು ಹಿಂದೂ ಆಗಿದ್ದರೆ, ನೂಲು ತೆಗೆಯುವವರು ಮುಸ್ಲಿಂ ಆಗಿರುತ್ತಾನೆ. ಸೀರೆ ನೇಯುವವನು ನೇಕಾರನಾಗಿರುತ್ತಾನೆ ಅದನ್ನ ಒಬ್ಬ ಮಾರ್ವಾಡಿಯೋ, ವೈಶ್ಯನೋ, ಮುಸಲ್ಮಾನನೋ ಮಾರಾಟ ಮಾಡುತ್ತಾನೆ. ಈ ಶ್ರಮಶಕ್ತಿಯ ವಾಹಿನಿಯೇ ಸಮಾಜದಲ್ಲಿ ಸಮನ್ವಯತೆ, ಸೌಹಾರ್ದತೆಯನ್ನು ಸಂರಕ್ಷಿಸಲು ಸಾಧ್ಯ.

ತಮ್ಮ ಶ್ರಮಶಕ್ತಿಯ ಮೂಲಕ ಸಮಾಜದ ವಿಭಿನ್ನ ಸಮುದಾಯಗಳನ್ನು ಬೆಸೆಯುವ ದುಡಿಯುವ ವರ್ಗಗಳಲ್ಲಿ ಜಾತಿ, ಮತ, ಧರ್ಮ ಅಥವಾ ಪಂಥೀಯ ಪ್ರಜ್ಞೆಯನ್ನು ಬೆಳೆಸುವುದರ ಬದಲು, ವರ್ಗಪ್ರಜ್ಞೆಯನ್ನು ಬೆಳೆಸಲು ಯತ್ನಿಸಿದ್ದರೆ ಬಹುಶಃ ಭಾರತ ಈ ದುಸ್ಥಿತಿಗೆ ತಲುಪುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ.

ತಮ್ಮ ಸಾಂಸ್ಕೃತಿಕ ಬೇರುಗಳನ್ನು ಅರಿತು, ತಮ್ಮ ಶ್ರಮಾಧಾರಿತ ಬದುಕಿನ ಮಾರ್ಗಗಳನ್ನು ಹಸನುಗೊಳಿಸುತ್ತಾ, ಜಾತಿ, ಮತ, ಧರ್ಮಗಳ ವಿಷಬೀಜಗಳನ್ನು ಕಿತ್ತೊಗೆದು ಬಹುತ್ವ ಭಾರತದ ಸಮನ್ವಯ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಈ ದೇಶದ ದುಡಿಯುವ ವರ್ಗಗಳ ಮೇಲಿದೆ.

ಜಾತಿ-ವರ್ಗ ತಾರತಮ್ಯಗಳಿಂದ ಹೊರತಾದ, ದೌರ್ಜನ್ಯಗಳಿಂದ ಮುಕ್ತವಾದ, ಅಸ್ಪೃಶ್ಯತೆ ಮತ್ತು ಪ್ರತ್ಯೇಕತೆಯಂತಹ ಹೀನ ಆಚರಣೆಗಳಿಂದಮುಕ್ತವಾದ,ಮತೀಯತೆ-ಮತಾಂಧತೆಯಂತಹ ವಿಷವಲಯದಿಂದ ಮುಕ್ತವಾದ, ಒಂದು ಮಾನವೀಯ ವಾತಾವರಣವನ್ನು ಸೃಷ್ಟಿಸುವ ಮೂಲಕ, ಇಂದು ಬಿತ್ತಲಾಗುತ್ತಿರುವ ಮತಾಂಧತೆಯ ವಿಷಬೀಜಗಳನ್ನು ನಿರ್ವೀರ್ಯಗೊಳಿಸಲು ಮುನ್ನಡೆಯಬೇಕಿದೆ. ಆಗಲೇ ಕರ್ನಾಟಕ ಅಥವಾ ಭಾರತ “ ಸರ್ವ ಜನಾಂಗದ ಶಾಂತಿಯ ತೋಟ” ಆಗಲು ಸಾಧ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ದಾವಣಗೆರೆ | ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿ ಪ್ರಶಸ್ತಿ ಪ್ರದಾನ

Published

on

ಸುದ್ದಿದಿನ,ದಾವಣಗೆರೆ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಕ ಸಾ ಪ ಮಾಜಿ ಅಧ್ಯಕ್ಷ ಪ್ರೊ . ಎಸ್ ಬಿ ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿನಿಧಿ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ತರಳಬಾಳು ಬಡಾವಣೆಯ ಅವರ ನಿವಾಸದಲ್ಲಿ ಜಿಲ್ಲಾ ಕ ಸಾ ಪ ಅಧ್ಯಕ್ಷ ಬಿ ವಾಮದೇವಪ್ಪ ಮತ್ತು ಪದಾಧಿಕಾರಿಗಳು ಇಂದು ಪ್ರದಾನ ಮಾಡಿ ಗೌರವಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು  ಅನುವಾದ ಸಾಹಿತ್ಯಕ್ಕಾಗಿ ನೀಡುವ 2023ರ ‘ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ ಪಶಸ್ತಿ’ ಗೆ  ಪ್ರೊ. ಎಸ್.ಬಿ.ರಂಗನಾಥ್  ಅನುವಾದಿಸಿದ ಖ್ಯಾತ ಲೇಖಕ ಶಶಿ ತರೂರು ಅವರ ‘ಕಗ್ಗತ್ತಲ ಕಾಲ’ ಕೃತಿಯು ಆಯ್ಕೆಯಾಗಿತ್ತು. ಶಶಿ ತರೂರ್ ಅವರ ಇಂಗ್ಲಿಷ್ An Era of Darkness ಎಂಬ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಇದನ್ನು ಪ್ರೊ. ರಂಗನಾಥ್ ಅವರು ಕೊರೊನಾ ಕಾಲದ ಲಾಕ್ ಡೌನ್‌ ಸಂದರ್ಭದಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. 2022ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಕೃತಿಯನ್ನು ಪ್ರಕಟಿಸಿತ್ತು.

ಪ್ರೊ. ರಂಗನಾಥ್ ಇದುವರೆಗೂ ‘ಪ್ರಜಾವಾಣಿ ‘ ಯ ಅಂಕಣ ಬರಹಗಳ ಸಂಗ್ರಹ ‘ಎಲೆಲೆ ಮಧುಬಾಲೆ’, ‘ಕಚಗುಳಿ(ಗೆ) ಕಾಲ’ ಸೇರಿದಂತೆ ಹತ್ತು ಕೃತಿಗಳ ಲೇಖಕರು. ಬಂಗಾಳಿಯ ಪ್ರಸಿದ್ಧ ಕಾದಂಬರಿಗಳಾದ ‘ಭುವನ್ ಸೋಮ್’ , ‘ಪ್ರತಿದ್ವಂದಿ’ ಮುಂತಾದ ಏಳು ಕೃತಿಗಳನ್ನು ಅನುವಾದಿಸಿದ್ದಾರೆ.  ಇವರ ‘ ಟಿಪ್ಪು ಸುಲ್ತಾನನ ಖಡ್ಗ’ ಕೃತಿಯು ಮೂರು ಮುದ್ರಣಗಳನ್ನು ಕಂಡಿದೆ. ಇತ್ತೀಚೆಗೆ ಅನುವಾದಿಸಿದ ನಿವೃತ್ತ ಐ ಎ ಎಸ್ ಅಧಿಕಾರಿ ಎಂ ಮದನಗೋಪಾಲ್ ಅವರ ‘ಕಾಮನ ಬಿಲ್ಲನು ಬಂಬತ್ತಿ’ ಕೃತಿಯು ರಾಯಚೂರಿನಲ್ಲಿ ಲೋಕಾರ್ಪಣೆಗೊಂಡಿತ್ತು.

ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪ್ರೊ.ಎಸ್.ಬಿ.ರಂಗನಾಥ್ ಅವರು ತಮ್ಮ ತೀವ್ರ ಅನಾರೋಗ್ಯದ ಕಾರಣದಿಂದ ಹಾಜರಿರಲು ಸಾಧ್ಯವಾಗಿರಲಿಲ್ಲ. ಈಗ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರ ನಿರ್ದೇಶನದ ಮೇರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಎಸ್.ಬಿ.ರಂಗನಾಥ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಪ್ರಶಸ್ತಿ ಫಲಕ ಮತ್ತು ಹತ್ತು ಸಾವಿರ ನಗದನ್ನು  ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ರಾಘವೇಂದ್ರ ನಾಯರ್, ಎಸ್ ಎಂ ಮಲ್ಲಮ್ಮ, ರುದ್ರಾಕ್ಷಿ ಬಾಯಿ ಪುಟ್ಟನಾಯಕ್, ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಕಾರ್ಯದರ್ಶಿಗಳಾದ ನಾಗರಾಜ ಸಿರಿಗೆರೆ, ದಾಗಿನಕಟ್ಟೆ ಪರಮೇಶ್ವರಪ್ಪ, ನಿರ್ದೇಶಕರಾದ ಷಡಾಕ್ಷರಪ್ಪ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ನಾಳೆ ಡಾ.ಅಂಬೇಡ್ಕರ್ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿ ಕಾರ್ಯಕ್ರಮ

Published

on

ಸುದ್ದಿದಿನ,ಭದ್ರಾವತಿ: ಆಕಾಶವಾಣಿ ಭದ್ರಾವತಿ ಕೇಂದ್ರದ 60ನೇ ವರ್ಷದ ವಜ್ರಮಹೋತ್ಸವದ ಅಂಗವಾಗಿ ಶಿವಮೊಗ್ಗದ ಕುವೆಂಪು ವಿ.ವಿ.ಯ ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ ಸಹಯೋಗದಲ್ಲಿ ವಿಶ್ವ ಮಾನವ ಡಾ. ಅಂಬೇಡ್ಕರ್ ಅವರ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿಯನ್ನು ಪ್ರಸಾರ ಮಾಡಲಿದ್ದು, ಜೂನ್ 11 ರಂದು ಬೆಳಗ್ಗೆ 7.15 ಕ್ಕೆ ಕುವೆಂಪು ವಿವಿಯ ಕುಲಪತಿ ಡಾ. ಶರತ್ ಅನಂತಮೂರ್ತಿ ಅವರ ಮುನ್ನುಡಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

ಈ ಸರಣಿಯಲ್ಲಿ ಒಟ್ಟು 52 ಕಾರ್ಯಕ್ರಮಗಳಿದ್ದು, ಪ್ರತೀ ಮಂಗಳವಾರ ಬೆಳಗ್ಗೆ 7.15 ಕ್ಕೆ ಪ್ರಸಾರ ಮಾಡಲಿದೆ. ಪ್ರಭಾವಿತ ಮಹನೀಯರ ಅನಿಸಿಕೆಯನ್ನು ಹಂಚಿಕೊಳ್ಳುವುದರೊಟ್ಟಿಗೆ ದೇಶವಿದೇಶದ ಕೇಳುಗರು ತಮ್ಮ ಮೇಲೆ ಅಂಬೇಡ್ಕರ್ ಅವರ ಪ್ರಭಾವನ್ನೂ ಆಕಾಶವಾಣಿಯಲ್ಲಿ ಹಂಚಿಕೊಳ್ಳಲು ವಾಟ್ಸ್ ಆಪ್ ಮೂಲಕ ಅವಕಾಶ ಕಲ್ಪಿಸಿದೆ.

ಕಾರ್ಯಕ್ರಮವು FM 103.05 ಹಾಗೂ MW 675 khz ನಲ್ಲಿ ಕೇಳುವುದರೊಟ್ಟಿಗೆ ಜಗತ್ತಿನಾದ್ಯಂತ Akashavani Bhadravathi live streaming ಮತ್ತು prasarbharati news on air app ನಲ್ಲಿ ಪ್ರಸಾರ ಸಮಯದಲ್ಲಿ ಹಾಗೂ Akashavani Bhadravati YouTube ನಲ್ಲಿ ಪ್ರಸಾರದ ನಂತವೂ ಕೇಳಬಹುದು ಎಂದು ಕಾರ್ಯಕ್ರಮದ ಮುಖ್ಯಸ್ಥ ಎಸ್.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಆತ್ಮಕತೆ | ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕನಾಗಿ : 1974-1976

Published

on

  • ರುದ್ರಪ್ಪ ಹನಗವಾಡಿ

1967ರಲ್ಲಿ ಎಸ್.ಎಸ್.ಎಲ್.ಸಿ. ಪಾಸು ಮಾಡಿದ ದಿನಗಳಿಂದಲೂ ಮುಂದಿನ ಕಲಿಕೆಗಾಗಿ ಮೈಸೂರಿಗೇ ಹೋಗಬೇಕೆಂದು ಕನಸು ಕಾಣುತ್ತಿದ್ದ ನನಗೆ ಅಲ್ಲಿಯೇ ಓದಿ ನಂತರ ಅಧ್ಯಾಪಕ ವೃತ್ತಿ ದೊರೆತದ್ದು ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರಿನ್ಸಿಪಾಲರಾದ ಎನ್. ಶಂಕರಲಿಂಗಯ್ಯನವರು, ರಾಜ್ಯಶಾಸ್ತ್ರದ ಪಾಠ ಮಾಡುತ್ತಿದ್ದರು. ಮತ್ತು ಆಡಳಿತಾಧಿಕಾರಿಯಾಗಿದ್ದ, ಜೆ. ಬಿಲ್ಲಯ್ಯನವರು ನಮ್ಮದೇ ಅರ್ಥಶಾಸ್ತ್ರ ವಿಷಯದಲ್ಲಿ ಅಧ್ಯಾಪಕರಾಗಿದ್ದವರು. ನಮ್ಮ ಅರ್ಥಶಾಸ್ತç ವಿಭಾಗದಲ್ಲಿ ಇಲಾಖಾ ಮುಖ್ಯಸ್ಥರಾಗಿದ್ದ ಪ್ರೊ. ಸಿದ್ದೇಗೌಡರು, ಮತ್ತು ಹರಿಚರಣ್ ನನಗೆ ಎರಡು ವರ್ಷಗಳ ಹಿಂದೆ ಗುರುಗಳಾಗಿದ್ದವರು, ಉಳಿದಂತೆ ಇನ್ನಿಬ್ಬರು ಮಹಿಳಾ ಅಧ್ಯಾಪಕರುಗಳು ಮತ್ತು ಎಂ.ಎ.ನಲ್ಲಿ ನನಗಿಂತ ಹಿರಿಯರಾಗಿದ್ದ ಕೆ.ಸಿ. ಬಸವರಾಜ್ ಕೂಡ ಅಧ್ಯಾಪಕರಾಗಿದ್ದರು.

ಬಿ.ಎ. ಮತ್ತು ಎಂ.ಎ. ತರಗತಿಗಳಲ್ಲಿ ಓದುವಾಗ ಪಠ್ಯಗಳಿಗಿಂತಲೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ನನಗೆ ಈಗ ಪಠ್ಯಕ್ರಮಕ್ಕನುಗುಣವಾಗಿ ಒಂದು ಗಂಟೆಗೆ ಬೇಕಾದ ತಯಾರಿಯೊಡನೆ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡುವುದು ಸವಾಲಿನ ಪ್ರಶ್ನೆಯಾಗಿತ್ತು. ಪ್ರತಿ ತರಗತಿಗಳಲ್ಲಿ 50-60 ವಿದ್ಯಾರ್ಥಿಗಳಿದ್ದು ಕೆಲವರು ನನಗಿಂತ ಹೆಚ್ಚಿನ ವಯಸ್ಸು ಮತ್ತು ದೈಹಿಕವಾಗಿ ಬಲವಾಗಿದ್ದವರು ಕೂಡ ಇದ್ದರು. ವಾರಕ್ಕೆ 16 ಗಂಟೆಗಳ ಪಾಠ ಮಾಡುವುದು ಎಲ್ಲ ಅಧ್ಯಾಪಕರಿಗೆ ನಿಗದಿಯಾಗಿತ್ತು. ಹೊಸ ಅಧ್ಯಾಪಕರುಗಳಿಗೆ ವಿಶೇಷವಾಗಿ ದ್ವಿತೀಯ ಮತ್ತು ಅಂತಿಮ ಬಿ.ಎ. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಅಧ್ಯಾಪಕರಿಗೆ ತಬ್ಬಿಬ್ಬು ಮಾಡುವುದು ನನಗೆ ಕೂಡ ಗೊತ್ತಿದ್ದ ವಿಷಯವಾಗಿತ್ತು. ಆ ಕಾರಣದಿಂದಲೇ ಸರಿರಾತ್ರಿಯರೆಗೆ ಓದಿಕೊಂಡು ಸಜ್ಜಾಗಿಯೇ ತರಗತಿಗಳಿಗೆ ಹೋಗುತ್ತಿದ್ದೆ. ನಿಜವಾದ ಅರ್ಥಶಾಸ್ತçದ ವಿದ್ಯಾರ್ಥಿಯಾಗಿದ್ದುದು, ನಾನು ಅಧ್ಯಾಪಕನಾಗಿ ಸೇರಿದ ಮೇಲೆಯೆ ಎಂದು ನನಗನ್ನಿಸತೊಡಗಿತು. ಪಾಠಗಳನ್ನು ಶಿಸ್ತಿನಿಂದ ಮಾಡಿಕೊಂಡು ಬರುತ್ತಿದ್ದ ಕಾಲದಲ್ಲಿ ಅಂತಿಮ ಬಿ.ಎ. ವಿದ್ಯಾರ್ಥಿಗಳ ತರಗತಿಗಳು ಜೂನಿಯರ್ ಮತ್ತು ಸೀನಿಯರ್ ಹಾಲ್‌ಗಳಲ್ಲಿ ನಡೆಯುತ್ತಿದ್ದವು. ಆಗ ಪ್ರತಿ ಪಿರಿಯಡ್‌ಗೆ ಹಾಜರಾತಿ ತೆಗೆದುಕೊಳ್ಳುವ ಪರಿಪಾಠವಿತ್ತು. ನಾನು ಹಾಜರಾತಿ ತೆಗೆದುಕೊಂಡು ಪಾಠ ಮಾಡಲು ಪ್ರಾರಂಭಿಸಿದಾಗ ಕೆಲವು ವಿದ್ಯಾರ್ಥಿಗಳು ನಾವು ತರಗತಿಯಿಂದ ಹೊರ ಹೋಗಲು ಅನುಮತಿ ನೀಡಬೇಕೆಂದು ಕೋರಿದರು. ಅದರ ಉದ್ದೇಶ ನಿಮ್ಮ ಪಾಠದ ಅಗತ್ಯವಿಲ್ಲ ಎನ್ನೋ ಧೋರಣೆಯಿಂದ ಕೇಳಿದ ಅವರಿಗೆ ನಾನು, ನೀವು ಹೊರಗೆ ಹೋದರೆ ನಿಮ್ಮ ಹಾಜರಾತಿ ದಾಖಲೆ ಪುಸ್ತಕದಲ್ಲಿ ಗೈರು ಹಾಜರಿ ಎಂದು ನಮೂದಿಸುವುದಾಗಿ ಹೇಳಿದೆ.

ಅದಕ್ಕೇನು ಉತ್ತರಿಸದೆ ಹಾಗೆ ಹೊರಗೆ ಹೋದ ಹುಡುಗರು, ಮಾರನೆಯ ದಿನ ಪ್ರಿನ್ಸಿಪಾಲರಾಗಿದ್ದ ಶಂಕರಲಿಂಗಯ್ಯನವರಿಗೆ ಹೋಗಿ ನಾನು ಮಾಡುವ ಪಾಠ ಅರ್ಥವಾಗುತ್ತಿಲ್ಲ ಎಂದೂ ಇವರ ಬದಲು ಬೇರೆ ಅಧ್ಯಾಪಕರನ್ನು ನೇಮಿಸಲು ಮೌಖಿಕವಾಗಿ ಕೇಳಿದ್ದರು. ಪ್ರಿನ್ಸಿಪಾಲರು ಅಲ್ಲೇ ಗದರಿಸಿ ಕಳಿಸುವುದನ್ನು ಬಿಟ್ಟು ನನ್ನನ್ನು ಕರೆಸಿ ಚರ್ಚಿಸಿದರು. ನಾನು ನಡೆದ ವಿಚಾರವನ್ನು ತಿಳಿಸಿದೆ. ಆಯ್ತು ನಾನೇ ನಾಳೆ ನಿಮ್ಮ ಕ್ಲಾಸಿಗೆ ಬರುವೆ ಎಂದು ಹೇಳಿದ ಅವರು ಬಂದು ಕೂತರು. ಅದೇನು ಅವರಿಗೆ ಅನ್ನಿಸಿತೋ, ಅಂತೂ ಕೊನೆಗೆ ಇನ್ನೂ ಹೇಗೆ ಪಾಠ ಮಾಡಬೇಕು ನಿಮಗೆ? ಎಂದು ವಿದ್ಯಾರ್ಥಿಗಳಿಗೆ ಕ್ಲಾಸಿನಲ್ಲಿ ಹೇಳಿ ಹೊರಟು ಹೋದರು.

ಆ ನಂತರ ಬೇರಾವ ಕ್ಲಾಸಿನಲ್ಲಿಯೂ ಈ ರೀತಿಯ ಘಟನೆಗಳು ನಡೆಯಲಿಲ್ಲ ದಿನ ಕಳೆದಂತೆ ನನ್ನ ಆತ್ಮವಿಶ್ವಾಸವೂ ಹೆಚ್ಚಿ ವಿದ್ಯಾರ್ಥಿಗಳು ಆತ್ಮೀಯತೆಯಿಂದ ಸ್ಪಂದಿಸಿ ಆಸಕ್ತಿಯಿಂದ ಕಲಿಯುತ್ತಿದ್ದರು. ನಾನು ತಾತ್ಕಾಲಿಕವಾಗಿ ಮಹೇಶನ ರೂಂನಿಂದ ಕಾಲೇಜಿಗೆ ಓಡಾಡುತ್ತಿದ್ದು ಬೇರೆ ಮನೆ ಅಥವಾ ಪ್ರತ್ಯೇಕ ರೂಮಿಗಾಗಿ ಸರಸ್ವತಿಪುರಂನಲ್ಲಿ ಹುಡುಕುತ್ತಿದ್ದೆ. ಈ ಮಧ್ಯೆ ನನಗೆ ಸೋಷಿಯಾಲಜಿ ವಿಭಾಗದಲ್ಲಿ ಸಂಶೋಧನ ಸಹಾಯಕನಾಗಿದ್ದಾಗ ಪರಿಚಯವಾಗಿದ್ದ ಡಾ. ಪಿ.ಕೆ. ಮಿಶ್ರಾಜಿ ಅವರು ( Director for South Indian Anthropoligical Survey of India ) ಅವರೂ ಕೂಡ ಅಮೇರಿಕನ್ ಸ್ನೇಹಿತರೊಬ್ಬರಿಗೆ ಮನೆಯನ್ನು ಹುಡುಕುತ್ತಿದ್ದರು. ಹೀಗೆ ನಾನೂ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿದ ಬಗ್ಗೆ ತಿಳಿಸಿ ಮನೆ ಹುಡುಕುತ್ತಿರುವ ವಿಷಯ ತಿಳಿಸಿದಾಗ ನೀವಿಬ್ಬರು ಯಾಕೆ ಒಟ್ಟಿಗೆ ಇರುವ ಬಗ್ಗೆ ಯೋಚಿಸಬಾರದು ಎಂದು ಸಲಹೆ ನೀಡಿದರು. ಅದರಂತೆ ನನಗೆ ಸರಸ್ವತಿಪುರಂನ 15ನೇ ಮುಖ್ಯರಸ್ತೆಯಲ್ಲಿ ಒಂದು ಸ್ವತಂತ್ರ ಮನೆ ಬಾಡಿಗೆಗೆ ಸಿಕ್ಕಿತು. 300 ರೂಗಳ ಬಾಡಿಗೆ ಮನೆ ನನ್ನ ಕಾಲೇಜಿಗೂ ಹತ್ತಿರವಾಗಿತ್ತು.

ನನ್ನ ಜೊತೆ ಪ್ರೊ. ಮಿಶ್ರಾಜಿ ಅವರಿಗೆ ಪರಿಚಿತರಾದ ಅಮೇರಿಕಾದ ಒರೆಗಾನ್ ವಿಶ್ವವಿದ್ಯಾಲಯದಿಂದ ಬಂದ ಪ್ರೊ. ಪಾಲ್ ಇ. ಸೈಮನ್ಸ್ ಅವರು ಖ್ಯಾತ ಮಾನವಶಾಸ್ತ್ರದ ಅಧ್ಯಾಪಕರಾಗಿದ್ದು, ಅವರು ನನ್ನೊಟ್ಟಿಗೆ ಇರಲು ಒಪ್ಪಿದರು. ಅವರು ಮೈಸೂರಿಗೆ ಮಂಗಗಳ ಸ್ವಭಾವಗಳ ಮೇಲೆ ಅಧ್ಯಯನ ಮಾಡಲು ಬಂದಿದ್ದರು. ಬೆಳಿಗ್ಗೆ 7 ಗಂಟೆಗೆ ಎದ್ದು ಕುಕ್ಕರಹಳ್ಳಿ ಕೆರೆ ಮೇಲೆ ಓಡಾಡುವ ಮಂಗಗಳ ಬಗ್ಗೆ ತನ್ನ ಕ್ಯಾಮರಾ ತೆಗೆದುಕೊಂಡು ಸೈಕಲ್‌ನಲ್ಲಿ ಹೊರ ಹೋಗಿ 9 ಗಂಟೆಗೆ ಬಂದು ಅವರು ಬೆಳಗಿನ ಉಪಹಾರ ಮಾಡುತ್ತಿದ್ದರು. ಮಧ್ಯಾಹ್ನ ಹಣ್ಣು ಮತ್ತು ಜ್ಯೂಸಿನಲ್ಲಿ ಕಾಲ ಕಳೆದು ಸಂಜೆ 7 ಗಂಟೆಗೆ ಊಟ ಮಾಡುತ್ತಿದ್ದರು. ಮಧ್ಯಾಹ್ನ ಓದು ಮತ್ತು ಬೆಳಗಿನ ಸಮಯದಲ್ಲಿ, ನೋಡಿ ಬಂದ ಮಂಗಗಳ ಬಗೆಗೆ ತನ್ನ ಅಬ್ಸರ್‌ವೇಷನ್‌ಗಳನ್ನು ನೋಟ್ಸ್ ಮಾಡುತ್ತಿದ್ದರು. ಅವರೇ ನಿಗದಿಪಡಿಸಿದ ಊಟಿಯಿಂದ ಬಂದಿದ್ದ ಅಡುಗೆ ಭಟ್ಟ ಚೆನ್ನಾಗಿ ತಿಂಡಿ ಊಟಗಳ ವ್ಯವಸ್ಥೆ ಮಾಡುತ್ತಿದ್ದ. ಮೊದಲ ದಿನ ರಾತ್ರಿ ಊಟ ಮಾಡುವ ಸಮಯಕ್ಕೆ ನಾನು ಬರುವುದು ತಡವಾಯಿತು. ಆತ 7 ಗಂಟೆಗೆ ಊಟ ಮಾಡಿ ಮುಗಿಸಿದ್ದ. ನನಗೆ ದೊಡ್ಡ ತಟ್ಟೆಯಲ್ಲಿ ಮಾಂಸಾಹಾರದ ಅಡುಗೆಯನ್ನು ಬಡಿಸಿಟ್ಟು ನನ್ನ ಮುಂದೆ ಹಿಡಿದು Hope this is sufficeint for you ? ಎಂದು ಕೇಳಿದರು. ನಾನು ಉಂಡು ಇನ್ನೊಬ್ಬರಿಗೂ ಆಗಿ ಮಿಗುವಷ್ಟು ಅದರಲ್ಲಿತ್ತು. ನಾನು ಬಾಡಿಗೆ ಮತ್ತು ವಿದ್ಯುತ್ ವೆಚ್ಚಗಳನ್ನು ನೋಡಿಕೊಂಡರೆೆ ಉಳಿದಂತೆ ಇತರೆ ಎಲ್ಲಾ ಖರ್ಚುಗಳು ಸೈಮನ್ಸ್ ನೋಡಿಕೊಳ್ಳುವಂತೆ ಮಾತಾಡಿ ಹಂಚಿಕೊಂಡಿದ್ದೆವು.

ತಿಂಗಳಲ್ಲಿ ಒಂದೆರಡು ಬಾರಿ ಗುಂಡ್ಲುಪೇಟೆ ಕಡೆ ಹೋಗಿ ಮಂಗಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದರು. ನಾನು ಅಮೆರಿಕನ್ ಜೊತೆ ಪ್ರತ್ಯೇಕ ಅಡುಗೆಯವನೊಬ್ಬನನ್ನು ಇರಿಸಿಕೊಂಡು ಊಟ ಉಪಚಾರ ನಡೆಯುತ್ತಿದ್ದುದರ ಬಗ್ಗೆ ನಮ್ಮ ಮೈಸೂರಿನ ಹಿರಿಕಿರಿ ಸ್ನೇಹಿತರು ವಿಶೇಷವೆಂಬಂತೆ ವಿಚಾರಿಸುತ್ತಿದ್ದರು. ನನ್ನ ಅನೇಕ ಸಮಾಜವಾದಿ ಯುವಜನ ಸಭಾ ಮತ್ತು ದಲಿತ ವಿದ್ಯಾರ್ಥಿ ಮಿತ್ರರು ನನ್ನಲ್ಲಿಗೆ ಬಂದಾಗ ನಮ್ಮಲ್ಲಿಯೇ ಊಟ ತಿಂಡಿ ಮಾಡಿಕೊಂಡು ಹೋಗುತ್ತಿದ್ದರು.

ನಾನು 1974 ಡಿಸೆಂಬರ್ 4 ರಂದು ಅಧ್ಯಾಪಕ ವೃತ್ತಿಗೆ ಸೇರಿದ್ದು, ಮಾರ್ಚ್ ಅಥವಾ ಏಪ್ರಿಲ್ ಶೈಕ್ಷಣಿಕ ವರ್ಷದ ಕೊನೆಯಲ್ಲಿ ರಿಲೀವ್ ಮಾಡುತ್ತಿದ್ದರು. ಸ್ಥಳೀಯ ಅಭ್ಯರ್ಥಿಯಾಗಿ ತೆಗೆದುಕೊಂಡ ಎಲ್ಲ ವಿಷಯದ ಅಧ್ಯಾಪಕರುಗಳಿಗೂ ಇದೇ ವ್ಯವಸ್ಥೆ ಆಗ ಜಾರಿಯಲ್ಲಿತ್ತು. ಅದರಲ್ಲಿ ಆರು ತಿಂಗಳಿಗಿಂತ ಹೆಚ್ಚು ದಿನ ಕೆಲಸ ಮಾಡಿದವರಿಗೆ ಶೈಕ್ಷಣಿಕವಾಗಿದ್ದ ರಜೆಯಲ್ಲೂ ಬೇಸಿಗೆಯ ಸಂಬಳ ನೀಡುತ್ತಿದ್ದರು. ನಾನು ಆರು ತಿಂಗಳಿಗಿAತಲೂ ಕಡಿಮೆ ಅವಧಿಗೆ ಕೆಲಸ ಮಾಡಿದ್ದ ಕಾರಣಕ್ಕೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸೇರಿಕೊಂಡಿದ್ದೆ. ಆ ಕಾರಣದಿಂದ ನನಗೆ ಮತ್ತೆ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಪುನರ್ ನೇಮಕವಾಗುವವರೆಗೂ ಸಂಬಳವಿರಲಿಲ್ಲ. ಸುಮಾರು 3-4 ತಿಂಗಳು ರಜೆ ಮತ್ತು ಖರ್ಚಿಗೆ ಹಣವಿಲ್ಲದೆ ಚಿಂತಿತನಾಗಿದ್ದಾಗ ಡಾ. ಮಿಶ್ರಾಜಿ ಅವರು ನನ್ನ ಸಹಾಯಕ್ಕೆ ಬಂದರು.

ಈ ಮೂರು ತಿಂಗಳ ಕಾಲ ನಾನು ಪಾಲ್ ಇ. ಸೈಮನ್ಸ್ ಅವರಿಗೆ ಅನುವಾದಕನಾಗಿ ಕೆಲಸಮಾಡಲು ಸೂಚಿಸಿದ್ದರು. ಅದಕ್ಕಾಗಿ ನನಗೆ ತಿಂಗಳಿಗೆ 500 ರೂ ಸಂಬಳವನ್ನು ನಿಗದಿಪಡಿಸಿದ್ದರು. ಅದೇನು ಕಟ್ಟುನಿಟ್ಟಿನ ಕೆಲವಲ್ಲದೆ, ಸೈಮನ್ಸ್ ಕೇಳುವ ವಿಷಯಗಳ ಕೆಲವು ಹಾಗೂ ಸ್ಥಳೀಯ ಪ್ರದೇಶದ ಬಗ್ಗೆ ಕೇಳಿದಾಗ ಕನ್ನಡದಲ್ಲಿ ವಿಷಯ ಸಂಗ್ರಹಿಸಿ ಇಂಗ್ಲಿಷ್‌ನಲ್ಲಿ ವಿವರಿಸಿ ಹೇಳುವಂತಹದ್ದಾಗಿತ್ತು. ಆಗ ಅದೊಂದು ಕಷ್ಟದ ಕೆಲಸವಾಗೇನೂ ನನಗೆ ಅನ್ನಿಸಿರಲಿಲ್ಲ. ಆದರೆ ಈ ಕೆಲಸ ನನಗೆ ಹಣದ ಬಿಕ್ಕಟ್ಟಿನಿಂದ ಪಾರು ಮಾಡಿತ್ತು. ಅದು ನನ್ನ ಬೇಸಿಗೆ ರಜೆಯಲ್ಲಿ ಸಿಗದ ಸಂಬಳದ ಕೊರತೆಯನ್ನು ಕೂಡ ನೀಗಿಸಿತ್ತು.
ಈ ಮಧ್ಯೆ ಮೂರು ತಿಂಗಳ ರಜೆಯಲ್ಲಿ ನಮ್ಮ ಊರಿಗೆ ಡಾ. ಮಿಶ್ರಾಜಿ ಅವರನ್ನು ಕರೆದುಕೊಂಡು ಹೋಗುವ ಅವಕಾಶವಾಯಿತು. 1975ರ ಬೇಸಿಗೆ ದಿನಗಳಲ್ಲಿ ನಮ್ಮೂರಿಗೆ ಹೊರಟಿದ್ದೆವು. 1975ರ ನಮ್ಮ ಊರಲ್ಲಿ ನಮಗಿದ್ದ ಒಂದು ಮಾಳಿಗೆ ಮನೆ, ದನ ಕರುಗಳನ್ನು ಕಟ್ಟಲು ಬೇರೆ ತಗಡಿನ ಮನೆ ಇದ್ದವು. ಬಂದ ಅತಿಥಿಗಳಿಗೆ ಅನುಕೂಲವಾಗಲೆಂದು ವಾಸ್ತವ್ಯಕ್ಕೆ ಪ್ರತ್ಯೇಕ ಕೊಠಡಿಗಳಾಗಲೀ, ಹಾಸಿಗೆ ದಿಂಬುಗಳಾಗಲೀ ಮನೆಯಲ್ಲಿರಲಿಲ್ಲ. ಆದರೂ ಅದಾವುದರ ಬಗ್ಗೆ ಚಿಂತಿಸದೆ ಅವರನ್ನು ನಮ್ಮ ಊರಿಗೆ ಕರೆದುಕೊಂಡು ಹೋಗಿದ್ದೆ. ರಾತ್ರಿಗೆ ಊರು ಸೇರಿದ್ದ ನಾವು ಮನೆಯಲ್ಲಿ ಊಟ ಮಾಡಿ ಪ್ರೊ. ಮಿಶ್ರಾಜಿ ಅವರಿಗೆ ನಮ್ಮ ಹೊರಗಿನ ಜಗಲಿಯ ಮೇಲೆ ಸೊಳ್ಳೆಪರದೆ ಕಟ್ಟಿ ಮಲಗುವ ವ್ಯವಸ್ಥೆ ಮಾಡಿದೆ. ಬೆಳಗಿನ ಅಗತ್ಯಗಳಿಗೆ ಅವರನ್ನು ಸೀದಾ ಕರೆದುಕೊಂಡು ನಮ್ಮೂರ ಹತ್ತಿರವೇ ಹರಿಯುತ್ತಿರುವ ಸೂಳೆಕೆರೆ ಹಳ್ಳಕ್ಕೆ ಹೋಗಿ ಬೆಳಗಿನ ಕಾರ್ಯಗಳನ್ನು ಮುಗಿಸಿಕೊಂಡು ಬಂದೆವು. ಮನೆಯಲ್ಲಿ ಮಾಡಿದ ತಿಂಡಿ ತಿಂದು ಊರಲ್ಲಿನ ಗೆಳೆಯರಾದ ದಾವಣಗೆರೆ ನಾಗರಾಜ, ಬಾರಿಕರ ಮಾಂತೇಶಿ, ಮತ್ತಿತರ ಗೆಳೆಯರ ಜೊತೆ ತೋಟಕ್ಕೆ ಹೋದೆವು.

ಪ್ರೊ. ಮಿಶ್ರಾಜಿ ಅವರು ಒಬ್ಬ ಸಮಾಜ ವಿಜ್ಞಾನಿ – ಸಂಶೋಧಕ ಹಾಗೂ ಸಾಮಾಜಿಕ ಸಮಸ್ಯೆಗಳ ಆಳವಾದ ಜ್ಞಾನ ಉಳ್ಳವರಾಗಿದ್ದರು. ಊರಲ್ಲಿನ ಸಾಮಾಜಿಕ ಶೈಕ್ಷಣಿಕ ಹಾಗೂ ಕೂಲಿ ಕಾರ್ಮಿಕರ ಸ್ಥಿತಿಗತಿಗಳನ್ನು ವಿಚಾರಿಸುತ್ತಾ ಸೂಕ್ಷö್ಮವಾಗಿ ಎಲ್ಲರನ್ನು ಗಮನಿಸುತ್ತಿದ್ದರು. ಡಿ. ನಾಗರಾಜು ನಾನು ಪ್ರಾಥಮಿಕ ಶಾಲೆಯಲ್ಲಿ ಸಹಪಾಠಿಯಾಗಿದ್ದು ಈಗ ಊರಲ್ಲಿಯೇ ವೀಳ್ಯದೆಲೆ ತೋಟ ಮಾಡಿಕೊಂಡು ಆರಾಮವಾಗಿದ್ದನು. ಅವರ ತೋಟದಲ್ಲಿ ತೆರೆದ ಬಾವಿಯಲ್ಲಿ ಮಿಶ್ರಾಜಿಯೂ ನಾನು ಸೇರಿದಂತೆ ನಾವೆಲ್ಲರು ಈಜಾಡಿದೆವು. ಆಗ ಹೊರಬಂದು ತೋಟದಲ್ಲಿನ ತೆಂಗಿನ ಮರಗಳಿಂದ ಇಳಿಸಿದ ತೆಂಗಿನ ಹೆಂಡವನ್ನು ಸವಿದೆವು. ಮನೆಯಿಂದ ರೊಟ್ಟಿ ಬುತ್ತಿಯನ್ನು ಅಲ್ಲಿಗೇ ತರಿಸಿದ್ದು, ವೀಳ್ಯದೆಲೆಯ ತೋಟದಲ್ಲಿ ಎಲ್ಲರೂ ಕೂತು ಊಟ ಮಾಡಿದೆವು. ಮಿಶ್ರಾಜಿ ಅವರು ಸಂತೋಷದಿಂದಲೇ ಇಡೀ ದಿನ ಕಳೆದರು. ಮಾತಿನ ಮಧ್ಯೆ ನಮ್ಮೂರಲ್ಲಿನ ಶ್ರೀಮಂತರು ಮತ್ತು ದೊಡ್ಡ ರೀತಿಯಲ್ಲಿ ಒಕ್ಕಲುತನ ಮಾಡುವ ಬಣಕಾರ ಸಿದ್ದಪ್ಪನವರನ್ನು ನೋಡುವ ಆಸೆ ವ್ಯಕ್ತಪಡಿಸಿದರು. ಪ್ರೊ. ಅವರನ್ನು ಅವರ ಮನೆಗೂ ಕರೆದುಕೊಂಡು ಹೋದೆ. ನಮ್ಮಪ್ಪನ ಬಹುದೊಡ್ಡ ವಿಶ್ವಾಸಿಕರಾಗಿದ್ದ ಬಣಕಾರ ಸಿದ್ದಪ್ಪನವರು ಮಿಶ್ರಾಜಿ ಅವರ ಜೊತೆ ಗ್ರಾಮೀಣ ಅರ್ಥವ್ಯವಸ್ಥೆಯ, ಕೂಲಿಕಾರ್ಮಿಕರ, ಹಬ್ಬಹರಿದಿನಗಳ ಕುರಿತು ದೀರ್ಘವಾಗಿ ಚರ್ಚಿಸಿದರು. ಕೊನೆಗೆ ಟೀ ಕುಡಿದು ಅವರ ಮನೆಯಿಂದ ವಾಪಸ್ ಬಂದೆವು.

 

ಸಂಜೆ ಸಮಯಕ್ಕೆ ನಮ್ಮೂರಿನಲ್ಲಿಯೇ ಹೊಸದಾಗಿ ಕಲಿತಿದ್ದ ಬ್ಯಾಂಡ್‌ಅನ್ನು ಅವರ ಮುಂದೆ ಬಾರಿಸಿದರು. ಆ ಕಾಲಕ್ಕೆ ದೇಶ ವಿದೇಶಗಳನ್ನು ಪ್ರವಾಸ ಮಾಡಿ ನಮ್ಮ ದೇಶದಲ್ಲಿನ ದಕ್ಷಿಣ ಭಾರತಕ್ಕೆ ಮಾನವಶಾಸ್ತçದ ಅಧ್ಯಯನಕ್ಕೆ ಮುಖ್ಯಸ್ಥರಾಗಿದ್ದ, ಜಾತಿಯಲ್ಲಿ ಅತ್ಯುನ್ನತವಾದ ಶ್ರೇಣಿಗೆ ಸೇರಿದ ಬ್ರಾಹ್ಮಣರಾಗಿದ್ದ ಪ್ರಾಧ್ಯಾಪಕರೊಬ್ಬರು ಯಾವ ಹಮ್ಮು ಬಿಮ್ಮುಗಳಿಲ್ಲದೆ ಸಾಮಾನ್ಯ ಹಳ್ಳಿಗೆ ಬಂದು ಊರಲ್ಲಿಯ, ನಮ್ಮ ಮನೆಯಲ್ಲಿಯೇ ಉಳಿದು ಹೋಗಿದ್ದು ನಮ್ಮೂರಿನ ಮತ್ತು ನನ್ನ ಜೀವನ ಕಾಲಘಟ್ಟದಲ್ಲಿ ಮರೆಯಲಾಗದ ಸವಿನೆನಪಾಗಿ ಉಳಿದಿದೆ. ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದಾಗಿ ಅಂದು ಪರಿಚಯವಾಗಿ, ನನಗೆ ಬೌದ್ಧಿಕ ಮತ್ತು ಆರ್ಥಿಕವಾಗಿ ಶಕ್ತಿ ನೀಡಿ, 50 ವರ್ಷಗಳ ನಂತರ ಇಂದಿಗೂ ನನ್ನ ಮಾರ್ಗದರ್ಶಕ ಗುರುಗಳಾಗಿ ಉಳಿದಿರುವುದು ನನ್ನ ಜೀವನದ ಭಾಗ್ಯವೆಂದೇ ಭಾವಿಸಿದ್ದೇನೆ. ಅವರು ಮಾಡಿದ ಯಾವ ಸಹಾಯವನ್ನೂ, ತಾನು ಮಾಡಿದೆನೆಂಬ ಅಹಂ ಎಲ್ಲೂ ಸುಳಿಯುವುದಿಲ್ಲ. ಅಂದು ನನಗೆ ಸಿಕ್ಕ ಈ ಪ್ರೊಫೆಸರ್ ನಂತರ ನನ್ನ ಸ್ನೇಹ ಬಳಗದ ಮಾದೇವ, ಅರ್ಕೇಶ, ಮಹೇಶ, ಭಕ್ತ, ಗೊಟ್ಟಿಗೆರೆ ಶಿವರಾಜು ಎಲ್ಲರಿಗೂ ಸ್ನೇಹದ ಗುರುಗಳಾಗಿ ಇಂದಿಗೂ ಉಳಿದಿದ್ದಾರೆ. ಈಗಲೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಿಗೆ ವಿಶೇಷ ಉಪನ್ಯಾಸಕರಾಗಿ ಹೋಗಿ ಬರುತ್ತಿರುವುದನ್ನ ನೋಡಿದರೆ ಆಶ್ಚರ್ಯವಾಗುತ್ತದೆ. ಅವರಿಗಿಂತ ಇಪ್ಪತ್ತು ವರ್ಷಗಳಷ್ಟು ಕಿರಿಯರಾದ ನಾವುಗಳು ಅವರನ್ನು ಇಂದಿಗೂ ಅನುಸರಿಸುತ್ತಾ ಜೀವನ ಸಾಗಿಸುತ್ತಿದ್ದೇವೆ.

ನಾನು ಅಧ್ಯಾಪಕನಾಗಿದ್ದ ಸಮಯದಲ್ಲಿ ಶೈಕ್ಷಣಿಕ ವರ್ಷ ಮುಗಿದು ಮೂರು ತಿಂಗಳ ರಜೆಯಲ್ಲಿ ಊರಿಗೆ ಹೋಗಿದ್ದೆ. ಆಗ ಪಾಲ್ ಇ. ಸೈಮನ್ಸ್ಗೆ ನಾನು ಅನುವಾದಕನಾಗಿ ಕೆಲಸವೊಂದನ್ನು ಮಾಡಲು ಪ್ರೊ. ಮಿಶ್ರಾಜಿ ಅವರು ಒಪ್ಪಿಸಿದ್ದರು ಎಂಬುದನ್ನು ಆಗಲೇ ಹೇಳಿದ್ದೇನೆ. ಅದನ್ನು ನಾನು ಮಾಡುತ್ತಿದ್ದೆನಾದರೂ ನನಗೆ ಪ್ರತಿ ತಿಂಗಳು ಮುಗಿದಾಕ್ಷಣ ಸಂಬಳ ನೀಡಿರಲಿಲ್ಲ. ಆದರೆ ನಾನು ನನ್ನ ಹಳ್ಳಿಯಲ್ಲಿ ಇರುವಾಗ ಮೂರು ತಿಂಗಳ ಒಟ್ಟು ಸಂಬಳ 1500 ರೂಪಾಯಿಗಳನ್ನು ನನ್ನ ವಿಳಾಸಕ್ಕೆ ಮನಿ ಆರ್ಡರ್ ಮುಖಾಂತರ ಕಳಿಸಿದ್ದರು. ನಮ್ಮೂರಿಗೆ ಆಗತಾನೆ ಹೊಸದಾಗಿ ಬಂದಿದ್ದ ಪೋಸ್ಟ್ ಆಫೀಸ್ ಮತ್ತು ಅದರ ಉಸ್ತುವಾರಿಯನ್ನು ನಮ್ಮ ಊರಿನ ಗೌಡ್ರ ಈರಣ್ಣ ಎಂಬುವವರು ನೋಡಿಕೊಳ್ಳುತ್ತಿದ್ದರು. ಅವರು ನನಗೆ ಬಂದ 1500ರೂಗಳಷ್ಟು ಮನಿ ಆರ್ಡರ್ ಹಣ ನೋಡಿ ಆಶ್ರ‍್ಯಗೊಂಡಿದ್ದರು. ಆಗ ನಮ್ಮೂರಿಗೆ ಹೆಚ್ಚೆಂದರೆ 50-100ರೂಗಳು ಎಂ.ಓ. ಗಳು ಬರುತ್ತಿದ್ದ ಕಾಲ. ಇಷ್ಟೊಂದು ಹಣ ಬರುವಷ್ಟು ಈ ಹುಡುಗ ಹೆಂಗೆ ಬೆಳೆದ ಎಂಬೆಲ್ಲ ಯೋಚನೆ ಮಾಡುತ್ತಾ ಊರಿಗೆಲ್ಲ ಸುದ್ದಿ ಮಾಡಿದ್ದ. ಆಗ ನಮ್ಮ ಅಪ್ಪ ಇನ್ನೂ ಸಕ್ರಿಯವಾಗಿ ಕೆಲಸ ಕಾರ್ಯ ಮಾಡುತ್ತಿದ್ದರು. ‘ಅದೇನಪ್ಪ ಅಷ್ಟೊಂದು ದುಡ್ಡು, ಕಳಿಸಿದರ‍್ಯಾರು?’ ಎಂದು ಅಪ್ಪ ಕೂಡ ಆಶ್ಚರ್ಯದಿಂದ ಕೇಳಿದ್ದರು. ಆಗ ಪಡೆದ 1500 ರೂಗಳನ್ನು ಎಂ.ಓ. ಮೂಲಕ ಬಂದು ನೀಡಿದ ಸಂತೋಷವನ್ನು ಅಳೆಯಲಾಗದು. ಎಲ್ಲ ಕೊರತೆಗಳ ಆಗರದಲ್ಲಿ ಹೋರಾಡುತ್ತಿದ್ದ ನನಗೆ ಅದೊಂದು ಯಾವ ಮಾಪಕದಿಂದಲೂ ಅಳಿಯಲಾಗದ ಶಕ್ತಿವರ್ಧಕ ಔಷಧಿಯಂತೆ ಹುರುಪು ನೀಡಿ ಊರಲ್ಲಿ ನನ್ನ ಗೌರವ ಬೆಳೆಸಿತ್ತು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending