ದಿನದ ಸುದ್ದಿ
ಯಾರು ಪ್ರಗತಿಪರರು? : ದಿನೇಶ್ ಅಮಿನ್ ಮಟ್ಟು
ನಾನು ಮುಸುಕಿನ ಗುದ್ದಾಟ ನಡೆಸಲು ಹೋಗುವುದಿಲ್ಲ, ಯಾರದೋ ಹೆಗಲ ಮೇಲೆ ಬಂದೂಕು ಇಡುವುದೂ ಇಲ್ಲ, ನನ್ನ ಅಭಿಪ್ರಾಯ ಮಂಡಿಸಲು ಥಿಯರಿಗಳ ಮೂಟೆಗಳನ್ನು ಉರುಳಿಸಿ ಯಾರನ್ನೂ ಗೊಂದಲಕ್ಕೀಡುಮಾಡುವುದೂ ಇಲ್ಲ. ನೇರವಾಗಿ ವಿಷಯಕ್ಕೆ ಬರ್ತೇನೆ.
ಪ್ರಗತಿಪರರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಬೇಕಲ್ಲಾ? ಮುಸುಕು ತೆಗೆದಿದ್ದೇನೆ, ಹೆಸರು ಬರ್ಕೊಳ್ಳಿ: ದೊರೆಸ್ವಾಮಿ, ದೇವನೂರ,ಚಂಪಾ, ಸುಬ್ಬಯ್ಯ ಬರಗೂರು, ಮರುಳಸಿದ್ದಪ್ಪ, ಸಿದ್ದರಾಮಯ್ಯ,ಗೋವಿಂದರಾವ್, , ಬಿಳಿಮಲೆ, ಅಸ್ಸಾದಿ, ಚೆನ್ನಿ, ಸಿದ್ದಯ್ಯ, ಕಾಳೇಗೌಡ, ಇಂಧೂಧರ, ಬಂಜಗೆರೆ, ರಹಮತ್, ಹುಳಿಯಾರ್, ರವಿವರ್ಮಕುಮಾರ್, ಗಣೇಶ್ ದೇವಿ, ವಿಜಯಮ್ಮ, ಮಾಲಗತ್ತಿ…ಪಟ್ಟಿ ಉದ್ದ ಇದೆ.
ಇವರ ಜತೆ ಜನನುಡಿ, ಮೇ ಸಾಹಿತ್ಯಮೇಳ, ನಾವು ನಮ್ಮಲ್ಲಿ, ಉಡುಪಿ-ಗುಬ್ಬಿ-ಗುಡಿಬಂಡೆ ಚಲೋ, ದಿಡ್ಡಳ್ಳಿ ಚಲೋ ಮೊದಲಾದ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಕನಸುಕಂಗಳ ಸಾವಿರಾರು ಯುವಕ-ಯುವತಿಯರಿದ್ದಾರೆ. ಈ ಪಟ್ಟಿಯಲ್ಲಿ ಎಡಪಕ್ಷಗಳ ಸದಸ್ಯರಾಗಿರುವವರನ್ನು ನಾನು ಸೇರಿಸಿಲ್ಲ. ಸದ್ಯ ಇಷ್ಟಕ್ಕೆ ನಿಲ್ಲಿಸ್ತೇನೆ.
ಮೊದಲನೆಯದಾಗಿ, ಇವರು ಜಾತ್ಯತೀತತೆಯ ರಕ್ಷಣೆಯ ಸೈದ್ಧಾಂತಿಕ ಗುತ್ತಿಗೆಯನ್ನು ಪಡೆದಿರುವುದು ಬಸವಣ್ಣ, ಗಾಂಧೀಜಿ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್ ಅವರಿಂದ ಹೊರತು ಕಾಂಗ್ರೆಸ್ ಪಕ್ಷದಿಂದ ಅಲ್ಲ.
ಇವರಲ್ಲಿ ಬಹುತೇಕ ಮಂದಿ 75-77ರ ಕಾಲದಲ್ಲಿ ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿಯನ್ನು ವಿರೋಧಿಸಿದವರು, 1989ರಲ್ಲಿ ರಾಜೀವ್ ಗಾಂಧಿಯವರ ವಿರುದ್ಧ ಸಿಡಿದೆದ್ದಿದ್ದ ಮತ್ತು ಮಂಡಲ್ ವರದಿ ಜಾರಿಗೆ ತಂದಿದ್ದ ವಿ.ಪಿ.ಸಿಂಗ್ ಪರವಾಗಿ ನಿಂತವರು. ಈ ಎರಡೂ ಸಂದರ್ಭಗಳಲ್ಲಿ ಜನಸಂಘ-ಬಿಜೆಪಿ ಕಾರ್ಯಕರ್ತರು ಇವರ ಜತೆಗಿದ್ದರು. ಆಗ ಯಾರೂ ಇವರಿಗೆ ಕೇಸರಿ ಬಣ್ಣ ಬಳಿಯಲಿಲ್ಲ, ಚಡ್ಡಿ ಹಾಕಲಿಲ್ಲ, ಗಂಜಿ ಗಿರಾಕಿ ಅನ್ನಲಿಲ್ಲ.
ಎರಡನೆಯದಾಗಿ, ಹಿಂದಿನ ಇತಿಹಾಸ ಬೇಡ, ಕಳೆದ ಐದು ವರ್ಷಗಳ ಅವಧಿಯಲ್ಲಿ ಇವರೆಲ್ಲರೂ ರಾಜ್ಯದಲ್ಲಿ ಕೋಮುವಾದದ ವಿರುದ್ಧದ ಮತ್ತು, ಜಾತ್ಯತೀತತೆಯನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಬಿಜೆಪಿ ವಿರುದ್ಧ ಮಾತ್ರವಲ್ಲ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಮಾತನಾಡಿದ್ದಾರೆ. ಹೌದು, ಸಿದ್ದರಾಮಯ್ಯನವರ ವಿಷಯದಲ್ಲಿ ಸಕಾರಣವಾಗಿ ಮೆದುವಾಗಿದ್ದರು.
ಈ ಮೆದು ಧೋರಣೆಯಿಂದ ಇವರು ಪಡೆದ ಲಾಭಗಳೇನು? ಐದು ವರ್ಷಗಳ ಅವಧಿಯಲ್ಲಿ ಇವರಲ್ಲಿ ಎಷ್ಟು ಮಂದಿಯ ಆದಾಯ ದುಪ್ಪಟ್ಟಾಯಿತು? ಎಷ್ಟುಮಂದಿ ಸರ್ಕಾರಿ ಮನೆ-ಸೈಟು ತೆಗೆದುಕೊಂಡರು? ಎಷ್ಟುಮಂದಿ ವಿಧಾನಪರಿಷತ್ ಗೆ ನಾಮಕರಣಗೊಂಡರು? ಎಷ್ಟುಮಂದಿ ತಮ್ಮ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಸ್ಪರ್ಧೆಗೆ ಟಿಕೆಟ್ ಕೊಡಿಸಿದರು? ಇವರನ್ನು ಕಾಂಗ್ರೆಸ್ ಪಕ್ಷದ ಜತೆ ಜೋಡಿಸಿ ಗೇಲಿ ಮಾಡುತ್ತಿರುವವರು ದಯವಿಟ್ಟು ಇವರು ಸರ್ಕಾರದಿಂದ ಪಡೆದಿರುವ ಲಾಭಗಳೇನು ಎನ್ನುವುದನ್ನು ತಿಳಿಸಿ.
ತಮ್ಮ ವಯಸ್ಸು-ಆರೋಗ್ಯವನ್ನು ಮರೆತು ಕೋಮುವಾದದ ವಿರುದ್ಧ ಏಕಾಂಗಿಗಳಾಗಿ ಹೋರಾಟಕ್ಕಿಳಿದಿರುವ ಒಬ್ಬ ಶ್ರೀನಿವಾಸ ಕಾರ್ಕಳ, ಒಬ್ಬ ಸುರೇಶ್ ಭಟ್ ಬಾಕ್ರಬೈಲ್, ಒಬ್ಬ ಸನತ್ ಕುಮಾರ ಬೆಳಗಲಿ ಸರ್ಕಾರದಿಂದ ಪಡೆದ ಲಾಭಗಳೇನು? ತನ್ನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ಪುರುಷೋತ್ತಮ ಬಿಳಿಮಲೆಯವರು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ದುಡ್ಡು ಬೇಡ ಎಂದವರು ಗೊತ್ತಾ?
ಹೌದು, ಇವರಲ್ಲಿ ಹೆಚ್ಚಿನವರು ಅಕಾಡೆಮಿ-ಪ್ರಾಧಿಕಾರದ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದಾರೆ. ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ವಿಶಾಲ ಅರ್ಥದಲ್ಲಿ ಸೈದ್ಧಾಂತಿಕ ಸಹಮತ ಹೊಂದಿರುವವರನ್ನು ಸಾಹಿತ್ಯ-ಸಾಂಸ್ಕೃತಿಕ ಸಂಘಟನೆಗಳಿಗೆ ನೇಮಕಮಾಡುತ್ತದೆ ಮತ್ತು ಆ ರೀತಿಯೇ ನೇಮಕ ಮಾಡಬೇಕು. ಇವರನ್ನು ಬಿಟ್ಟು ಭೈರಪ್ಪ, ಚಿದಾನಂದ ಮೂರ್ತಿ, ದೊಡ್ಡರಂಗೇಗೌಡರನ್ನು ನೇಮಕಮಾಡೋಕ್ಕಾಗುತ್ತಾ?
ಈ ರೀತಿ ನೇಮಕಗೊಂಡವರಲ್ಲಿ ಯಾರಾದರೂ ತಮ್ಮ ಸೈದ್ಧಾಂತಿಕ ಬದ್ದತೆಯಲ್ಲಿ ರಾಜಿ ಮಾಡಿಕೊಂಡ ಉದಾಹರಣೆಗಳಿದ್ದರೆ ತಿಳಿಸಿ. ಇವರಲ್ಲಿ ಯಾರಾದರೂ ತಮ್ಮ ಅರ್ಹತೆಯನ್ನು ಮೀರಿ ಸ್ಥಾನಮಾನ ಗಳಿಸಿದ್ದರೆ ಅದನ್ನೂ ತಿಳಿಸಿ.
ಪ್ರಗತಿಪರರು ಯಾರು ಎನ್ನುವ ವ್ಯಾಖ್ಯಾನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಸ್ವಾಮಿ. ಬಹಳ ಸರಳವಾಗಿದೆ. ಪ್ರಗತಿವಿರೋಧಿಗಳಲ್ಲದವರೆಲ್ಲರೂ ಪ್ರಗತಿಪರರೇ ಆಗಿರುತ್ತಾರೆ. ಪ್ರಗತಿ ಎಂದರೆ ಏನು ಎನ್ನುವ ಉಡಾಫೆ ಪ್ರಶ್ನೆ ಕೇಳಿದರೆ ಅದಕ್ಕೆ ನನ್ನ ಉತ್ತರ: ಬಸವ,ಗಾಂಧಿ,ಅಂಬೇಡ್ಕರ್, ಲೋಹಿಯಾ ಹೇಳಿರುವ ಪ್ರಗತಿ.
ಪ್ರಗತಿಪರರು ಪರಿಪೂರ್ಣರೇ? ಖಂಡಿತ ಅಲ್ಲ, ಮನುಷ್ಯ ಮಾತ್ರರಾದ ಅವರಲ್ಲಿಯೂ ಸಣ್ಣಪುಟ್ಟ ಆಸೆ, ಲೋಭ, ಸ್ವಾರ್ಥ, ಅಸೂಯೆಗಳಿರಬಹುದು. ಇವರ ನಡುವೆ ಪರಸ್ಪರ ಆಂತರಿಕ ಭಿನ್ನಾಭಿಪ್ರಾಯಗಳೂ ಇರಬಹುದು. ಹೀಗಿದ್ದರೂ ಫ್ಯಾಸಿಸಮ್, ಸರ್ವಾಧಿಕಾರ ಮತ್ತು ಕೋಮುವಾದದ ಪ್ರಶ್ನೆಗಳು ಎದುರಾದಾಗ ಭಿನ್ನತೆಗಳನ್ನೆಲ್ಲವನ್ನೂ ಮರೆತು ಒಂದಾಗಿ ಇವರು ಕೈಕೈ ಹಿಡಿದು ಬೀದಿಗಿಳಿದಿದ್ದಾರೆ. ದೇಶ-ಕಾಲದ ಕರೆಗೆ ತಕ್ಕ ಹಾಗೆ ತಮ್ಮ ಶತ್ರುಗಳನ್ನು ಅವರು ಬದಲಾಯಿಸಿಕೊಂಡಿದ್ದಾರೆ, ಅಷ್ಟೆ.
ಕಾಲದ ಚಕ್ರ ಒಂದು ಸುತ್ತು ಮುಗಿಸಿದೆ. ಕಾಂಗ್ರೆಸ್ ಜಾಗದಲ್ಲಿ ಬಿಜೆಪಿ ಬಂದು ನಿಂತಿದೆ. ಹಳೆಯ ಸರ್ವಾಧಿಕಾರಿ ಇಂದಿರಾಗಾಂಧಿಯ ಸ್ಥಾನದಲ್ಲಿ ಕೋಮುವಾದದ ವಿಷಯೇರಿಸಿಕೊಂಡ ಹೊಸ ಸರ್ವಾಧಿಕಾರಿ ಅಬ್ಬರಿಸುತ್ತಿದ್ದಾರೆ.ಸರ್ವಾಧಿಕಾರಕ್ಕೆ ಬಲಿಯಾದವರೇ ಸರ್ವಾಧಿಕಾರಿಯ ಭಕ್ತರಾಗಿರುವ ವಿಚಿತ್ರ ಪರಿಸ್ಥಿತಿಯಲ್ಲಿ ‘’ಮೆದುಳು ತೊಳೆಯಲು’’ ನಮಗೆ ಇನ್ನಷ್ಟು ಸಂಖ್ಯೆಯ ಪ್ರಗತಿಪರರು ಬೇಕು. ಸಾಧ್ಯವಾದರೆ ಈ ಪ್ರಯತ್ನಕ್ಕೆ ಇದಕ್ಕೆ ಕೈಜೋಡಿಸಿ. ಅದು ಬಿಟ್ಟು ಅಡ್ಡಗೋಡೆಯ ಮೇಲೆ ಕೂತು ಅವರತ್ತ ಕಲ್ಲೆಸೆದು, ಅವರ ಬಗ್ಗೆ ಇನ್ನಷ್ಟು ಸಂಶಯಗಳನ್ನು ಹುಟ್ಟುಹಾಕಿ ನೈತಿಕವಾಗಿ ಅವರು ಕುಸಿಯುವಂತೆ ಮಾಡುವ ಜನದ್ರೋಹದ ಕೆಲಸ ಮಾಡಬೇಡಿ
ಪ್ರಗತಿಪರರನ್ನು ಹಂಗಿಸಿ, ನಿಂದಿಸಿ ಮೂಲೆಗೆ ತಳ್ಳುವ ಈ ಹುನ್ನಾರ ಪ್ರಾರಂಭಿಸಿದವರು ಬಲಪಂಥೀಯ ಪಡೆ. ಈಗ ನಮ್ಮವರೇ ಕೆಲವರು ಆ ಖೆಡ್ಡಾದಲ್ಲಿ ಬಿದ್ದಿದ್ದಾರೆ. ಅರಿವಿಲ್ಲದೆ ಖೆಡ್ಡಾದಲ್ಲಿ ಬಿದ್ದಿದ್ದರೆ ಅವರನ್ನೂ ಎತ್ತಿ ನಮ್ಮೊಂದಿಗೆ ಕರೆದೊಯ್ಯೋಣ. ಎಲ್ಲವೂ ಅರಿವಿದ್ದು ಆ ಕಡೆಯಿಂದ ಸುಫಾ ರಿ ಪಡೆದಿದ್ದರೆ ಅವರವರ ಕರ್ಮ ನಾವೇನು ಮಾಡಲಾಗದು. ನಾವು ಅಂಪೈರ್ ಗಳಲ್ಲ, ಆಟಗಾರರು. ಗೆಲುವು ನಮ್ಮದೇ.
(ಇಷ್ಟು ಬರೆಯಲು ಸ್ಪೂರ್ತಿ ನೀಡಿದ N A Mahamad Ismail ಪೋಸ್ಟ್ ಗೆ ಋಣಿಯಾಗಿದ್ದೇನೆ)
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್ಪಿಯನ್ನು ಕ್ವಿಂಟಲ್ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್ಆರ್ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ5 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ4 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ2 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ2 days agoಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ2 days ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

