Connect with us

ನೆಲದನಿ

ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ..!

Published

on

  • ಪಿ. ಲಂಕೇಶ್

ಈತ ನನ್ನನ್ನು ಚಕಿತಗೊಳಿಸುತ್ತಾನೆ. ಮತ್ತೆ ಮತ್ತೆ ನನ್ನ ಮನಸ್ಸಿಗೆ ಬಂದು ಹೊಸ ಹೊಸ ತಿಳಿವಳಿಕೆಗೆ ಕಾರಣವಾಗುವ ಈತನನ್ನು ನಿಮ್ಮೊಂದಿಗೆ ನೆನೆಯಲು ಯತ್ನಿಸುತ್ತೇನೆ. ಈತ ಪ್ರಖ್ಯಾತ ಗುರುವಾಗಿದ್ದ; ಸಾವಿರಾರು ಮೈಲುಗಳಿಂದ ದೊರೆಗಳು, ಸೇನಾನಿಗಳು ಬಂದು ಈತನನ್ನು ನೋಡಿ ಗೌರವಿಸುತ್ತಿದ್ದರು. ಈತ ಜನಕ್ಕೆ ಉಪದೇಶ ನೀಡುತ್ತಿದ್ದ.

ಹಾಗೆ ನೋಡಿದರೆ ಈತನಿಗೆ ದಿನದ ವೇಳೆಯೇ ಸಾಕಾಗುತ್ತಿರಲಿಲ್ಲ. ಆದರೆ ಎಂದೋ ನೋಡಿದ ಸಾಮಾನ್ಯನೊಬ್ಬನಿಗೆ ಕಾಯಿಲೆಯಾದರೆ, ಯಾವುದೇ ತೊಂದರೆಯಾದರೆ ಈತ ಹತ್ತಾರು ಮೈಲಿ ನಡೆದುಹೋಗಿ ಆತನನ್ನು ಕಂಡು ಆರೈಕೆ ಮಾಡುತ್ತಿದ್ದ; ಅವನ ತೊಂದರೆಗಳಿಗೆ ಪರಿಹಾರ ಹುಡುಕುತ್ತಿದ್ದ. ಒಮ್ಮೆ ಈತನ ಆಶ್ರಮದ ಮುದಿ ರೋಗಿಯೊಬ್ಬನನ್ನು ಯಾರೂ ಸರಿಯಾಗಿ ನೋಡಿಕೊಳ್ಳಲಿಲ್ಲ. ತನ್ನ ಕೆಲಸಗಳ ನಡುವೆ ಆ ಕಡೆ ಗಮನ ಹರಿಸದಿದ್ದಕ್ಕೆ ಗುರುವಿಗೆ ತನ್ನ ಬಗ್ಗೆ ಬೇಸರವಾಯಿತು. ಆ ಮುದಿ ರೋಗಿಯನ್ನು ತಾನೇ ಉಪಚರಿಸಿ ನೋಡಿಕೊಂಡ. ಅದು ತನ್ನೆಲ್ಲಾ ಉಪದೇಶಕ್ಕಿಂತ ಮುಖ್ಯವಾದದ್ದೆಂದು ಈ ಮನುಷ್ಯ ತಿಳಿದಿದ್ದ.

ನೀವು ಊಹಿಸಿರಬಹುದಾದಂತೆ ಈತ ಗೌತಮ. ಈತನ ಬಗ್ಗೆ ಕತೆಗಳನ್ನು ಕೇಳುತ್ತಾ ಈತನ ಉಪದೇಶಗಳನ್ನು ಓದುತ್ತಾ ನಾವೆಲ್ಲ ಈ ಗೌತಮ ಅಥವಾ ಸಿದ್ಧಾರ್ಥ ಎಂಬ ಮನುಷ್ಯನ ಬಗ್ಗೆ ದಡ್ಡುಗಟ್ಟಿದ್ದೇವೆ; ಈತ ಇನ್ನೊಬ್ಬ ಮಹಾತ್ಮ ಎಂದು ತಿಳಿದು ನಿರ್ಲಕ್ಷಿಸಲು ಬೇಕಾದ ಗೌರವವನ್ನು ಮಾತ್ರ ಇಟ್ಟುಕೊಂಡು ಸುಮ್ಮನಾಗುತ್ತೇವೆ. ಆದರೆ ಕೇವಲ ಮನುಷ್ಯನಾಗಿ ಈತನ ನಡವಳಿಕೆ ಅಚ್ಚರಿ ಹುಟ್ಟಿಸುತ್ತದೆ; ನನ್ನ ಅಚ್ಚರಿಯನ್ನು ಮಾತ್ರ ಇಲ್ಲಿ ವಿವರಿಸುತ್ತೇನೆ.

ವೈಶಾಖ ಶುದ್ಧ ಪೂರ್ಣಿಮೆಯಂದು ಚೆನ್ನನೊಂದಿಗೆ ಈತ ಅರಮನೆಯನ್ನು ಬಿಟ್ಟಿದ್ದು ಓದಿದ್ದೇವೆ. ಹೀಗೆ ಅರಮನೆ, ಅದರ ಸಂಪತ್ತು ಸುಖವನ್ನೆಲ್ಲ ಬಿಟ್ಟು ಹೊರಟಿದ್ದು ಈತನ ಉನ್ನತ ಗುಣ ತೋರುತ್ತದೆ ಎಂದು ಹೇಳುತ್ತಾರೆ. ಆದರೆ ನನಗೆ ಈ ಗೌತಮನ ಸಾಮಾನ್ಯತೆಯೇ ಇಲ್ಲಿ ಕಂಡುಬರುತ್ತದೆ. ಯಾಕೆಂದರೆ ಈತ ಹುಟ್ಟಿದಾಗಲೇ ಈತನ ತಂದೆ ಶುದ್ಧೋದನನ ಪುರೋಹಿತರು ಗೌತಮನೊಬ್ಬ ಮಹಾತ್ಮನಾಗುವ ಬಗ್ಗೆ, ಮಹಾನ್ ಗುರುವಾಗುವ ಬಗ್ಗೆ ಹೇಳಿದ್ದರಂತೆ; ಒಳಗೊಳಗೇ ಗೌತಮನ ಬಗ್ಗೆ ಭಕ್ತಿಯನ್ನಿಟ್ಟುಕೊಂಡಿದ್ದ ದೊರೆ ಗೌತಮ ಸಂನ್ಯಾಸಿಯಾದಾನೆಂದು ಹೆದರಿ ಆತನನ್ನು ರಾಜಭೋಗದಲ್ಲಿ ಇಟ್ಟಿದ್ದನಂತೆ.

ಇದು ನಿಜವಾದರೆ ಗೌತಮ ಅರಮನೆ ಬಿಡುವ ಅಗತ್ಯವಿರಲಿಲ್ಲ; ಆತನು ಮಹಾನ್ ಗುರುವಾಗುವುದು ಮೊದಲೇ ನಿಶ್ಚಿತವಾಗಿದ್ದರೆ ಅದಕ್ಕಾಗಿ ಗೌತಮ ಪ್ರಯತ್ನಿಸಬೇಕಾದ ಅಗತ್ಯವಿರಲಿಲ್ಲ. ಇಲ್ಲಿ ಗೌತಮನ ಸಹಜ ಕುತೂಹಲ, ಮನುಕುಲದ ದುರಂತದ ಬಗ್ಗೆ ಕಾಳಜಿ ಕಂಡುಬರುತ್ತದೆ. ಅರಮನೆ ಏನೂ ಗೊತ್ತಿಲ್ಲದ, ಏನೂ ಗೊತ್ತಾಗದಂತೆ ಇರುವ ಜಾಗವಾಗುತ್ತದೆ. ಆತ ಅರಿವು ಹುಡುಕಿ ಹೊರಡುತ್ತಾನೆ. ಇಲ್ಲಿ ಕೂಡ ಒಂದು ಪ್ರಶ್ನೆ ಏಳುತ್ತದೆ, ಗೌತಮ ದೊರೆಯಾಗಿ ಮನುಷ್ಯರಿಗೆ ನೆರವಾಗಲು ಆಗುತ್ತಿರಲಿಲ್ಲವೇ? ಆದರೆ ದೊರೆ ಮನುಷ್ಯರ ಯಾವುದೇ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಆಗುವುದಿಲ್ಲ ಎಂಬುದು ಗೌತಮನಿಗೆ ಗೊತ್ತಾಗಿದೆ. ರೋಗ, ಮುಪ್ಪು , ಸಾವುಗಳಿಗೆ ಉತ್ತರ ಹುಡುಕಿ ಹೊರಟ ಗೌತಮನ ದಾರಿ ಮತ್ತು ಮುಟ್ಟಿದ ಗುರಿ ವಿಚಿತ್ರವಾದ ಅರ್ಥಗಳಿಂದ ಕೂಡಿದೆ.

ಗೌತಮ ಅರಮನೆಯನ್ನು ಬಿಟ್ಟವನು ಕಾಡಿಗೆ ಹೋಗಲಿಲ್ಲ; ಮನುಷ್ಯರಲ್ಲಿಗೆ ಹೋದ. ಅನೇಕ ವಿದ್ವಾಂಸರನ್ನು, ವಿದ್ಯಾಲಯಗಳನ್ನು ಎಡತಾಕಿದ. ಅವರೊಂದಿಗೆ ಚರ್ಚಿಸಿ ಕಲಿಯಲು ಯತ್ನಿಸಿದ. ಅಲ್ಲಿಂದ ಅಧ್ಯಾತ್ಮದ ಗುರುಗಳನ್ನು ಕಂಡು ವಿನಯಪೂರ್ವಕವಾಗಿ ಕಲಿಯಲು ಯತ್ನಿಸಿದ. ಅವರಲ್ಲಿ ಕಲಿತಾಗ ಅವರನ್ನು “ಮುಂದೇನು?” ಎಂದು ಕೇಳಿದ.

ಆ ಅಧ್ಯಾತ್ಮದ ಗುರುಗಳು ತಮ್ಮ ಸಾಧನೆ ಅಷ್ಟಕ್ಕೇ ಮುಗಿಯಿತು, ಗೌತಮ ಈಗ ಅವರ ಸಮಾನ ಎಂದು ಹೇಳಿದರು. ಗೌತಮನಿಗೆ ತೃಪ್ತಿಯಾಗಲಿಲ್ಲ. ಮತ್ತೆ ಹುಡುಕಿ ಹೊರಟ. ಯಾರೋ ಅವನಿಗೆ ಸತ್ಯವನ್ನು ಕಾಣಲು ದೇಹದಂಡನೆಯ ಅಗತ್ಯದ ಬಗ್ಗೆ ಹೇಳಿದರು. ಊಟ, ನಿದ್ರೆಗಳನ್ನು ತ್ಯಜಿಸಿ ಹಠವಾದಿಯಂತೆ ಧ್ಯಾನಿಸತೊಡಗಿದ. ಅನೇಕ ವರ್ಷಗಳ ಬಳಿಕ ಗೌತಮ ತನ್ನ ಈ ಹಂತದ ಬಗ್ಗೆ ತಣ್ಣಗೆ, ನಸು ಹಾಸ್ಯದಿಂದ, ವಿಷಾದದಿಂದ ಹೇಳುತ್ತಿದ್ದ:

“ಆ ದಿನಗಳಲ್ಲಿ ನನ್ನ ಕೈಕಾಲುಗಳೆಲ್ಲ ಒಣಗಿದ ಬಳ್ಳಿಯಂತೆ, ಗಂಟುಗಂಟಾದ ಪುರಲೆಗಳಂತೆ ಆಗಿದ್ದವು; ನನ್ನ ಪುಷ್ಠ ಎಮ್ಮೆಯ ಗೊರಸಿನಂತೆ ಆಗಿತ್ತು; ನನ್ನ ಬೆನ್ನುಹುರಿ ಬಾಗಿದ ಚೆಂಡಿನ ಸರದಂತಾಗಿತ್ತು; ನನ್ನ ಎದೆಯ ಮೂಳೆಗಳು ಪಾಳುಬಿದ್ದ ಗುಡಿಸಲಿನಂತಾಗಿದ್ದವು; ನನ್ನ ಕಣ್ಣುಗಳು ತಮ್ಮ ಗುಳಿಯಲ್ಲಿ ಆಳವಾದ ಬಾವಿಯ ನೀರಿನಂತೆ ಕಾಣುತ್ತಿದ್ದವು; ನನ್ನ ತಲೆ ಬಿಸಿಲುಗಾಳಿಗೆ ಒಣಗಿದ ಸೋರೆಕಾಯಿಯಂತೆ ಆಗಿತ್ತು… ನನ್ನ ಹೊಟ್ಟೆಯ ಚರ್ಮ ಬೆನ್ನಿಗೆ ಅಂಟಿಕೊಂಡಿತ್ತು; ಬಹಿರ್ದೆಸೆಗೆ ಹೋಗಿ ಕೂತರೆ ಮುಖದ ಮೇಲೆ ನೆಲಕ್ಕೆ ಬಿದ್ದುಬಿಡುತ್ತಿದ್ದೆ; ನನ್ನ ಕೈಕಾಲುಗಳನ್ನು ತುರಿಸಿಕೊಂಡರೆ ಕೂದಲು ತಮ್ಮ ಬೇರು ಸಮೇತ ಕಿತ್ತುಕೊಂಡು ಬರುತ್ತಿದ್ದವು…”

ಈ ಸ್ಥಿತಿಯಿಂದ ಗೌತಮನಿಗೆ ಜ್ಞಾನೋದಯವಾಗಲಿಲ್ಲ. ಈ ಬಗೆಯ ದೇಹದಂಡನೆಯನ್ನು ಬಿಟ್ಟ, ಸುಜಾತ ಎಂಬ ಹೆಣ್ಣುಮಗಳು ಆತನಿಗೆ ಊಟ ನೀಡಿದಳು. ಅವನು ಸಹಜ ಮನುಷ್ಯನಂತೆ ಬದುಕುತ್ತ ಧ್ಯಾನಿಸಲು ಆರಂಭಿಸಿದಾಗ ಅವನ ಜೊತೆಗಾರರು ಕೆಲವರು ಆಕ್ಷೇಪಿಸಿ ಹೊರಟುಹೋದರು; ಗೌತಮ ಏಕಾಂಗಿಯಾಗಿ ಸತ್ಯ ಹುಡುಕತೊಡಗಿದ. ಮನುಷ್ಯ ತನ್ನ ಬಡತನ, ರೋಗ, ಸಾವು, ನೋವು, ಅನ್ಯಾಯಗಳನ್ನು ಗೆಲ್ಲುವ ಸಾಧ್ಯತೆಗಳನ್ನು ಹುಡುಕತೊಡಗಿದ. ನಿರ್ವಾಣ, ಮೋಕ್ಷ ಸಾಧ್ಯವೇ ಎಂದು ನೋಡಿದ. ದೇವರ ಅಸ್ತಿತ್ವಕ್ಕಾಗಿ ತಡಕಾಡಿದ.

ಹುಟ್ಟಿದಂತೆಯೇ ವೈಶಾಖ ಶುದ್ಧ ಪೂರ್ಣಿಮೆಯಂದು ಗೌತಮನಿಗೆ ಉತ್ತರ ದೊರಕಿತು. ಅದನ್ನು ಜ್ಞಾನೋದಯ ಎಂದು ಅನೇಕರು ಕರೆದರು. ಹಾಗೆ ಗೌತಮ ಎಂದೂ ಹೇಳಿಕೊಳ್ಳಲಿಲ್ಲ. ನಾನು ಕೂಡ ಅದನ್ನು ಜ್ಞಾನೋದಯ ಎಂದು ಕರೆಯದೆ ಮನುಷ್ಯನ ದುಃಖಕ್ಕೆ ಇರಬಹುದಾದ ಉತ್ತರ ಎಂದು ಕರೆಯಲು ಆಶಿಸುತ್ತೇನೆ.

ಯಾಕೆಂದರೆ ಗೌತಮನಲ್ಲಿ ಜ್ಞಾನೋದಯವಾದ ಒಂದೇ ಒಂದು ಸೂಚನೆ ಇದ್ದದ್ದು ಆತನ ಪ್ರಶಾಂತತೆಯಲ್ಲಿ; ಮನುಷ್ಯನ ಬಗ್ಗೆ ತಿಳಿವಳಿಕೆಯಲ್ಲಿ. “ದೇವರು ಇದ್ದಾನೆಯೆ?” ಎಂಬ ಪ್ರಶ್ನೆಗೆ ಗೌತಮನಲ್ಲಿ ಉತ್ತರವಿರಲಿಲ್ಲ. “ಆತ್ಮ ಎಂಬುದು ಇದೆಯೇ?” ಎಂಬುದಕ್ಕೆ ಆತನಲ್ಲಿ ಉತ್ತರವಿರಲಿಲ್ಲ. ತನಗೆ ಗೊತ್ತಿಲ್ಲದ್ದನ್ನು ಹೇಳಲು ನಿರಾಕರಿಸುವ ಗೌತಮನ ಜ್ಞಾನೋದಯ ಮನುಷ್ಯನ ಬದುಕಿನ ವಿವರಗಳನ್ನು ಒಳಗೊಂಡಿತ್ತು.

ಸಂನ್ಯಾಸ, ಧ್ಯಾನ, ತಪಸ್ಸುಗಳು ಸಾಮಾನ್ಯ ಮನುಷ್ಯನಲ್ಲಿ ಗೌರವದ ಜೊತೆಗೆ ಅಂಜಿಕ ಹುಟ್ಟಿಸುತ್ತವೆ. ಅವೆಲ್ಲ ತನ್ನಿಂದ ಸಾಧ್ಯವಾಗುವುದಿಲ್ಲ, ತನ್ನ ಸಣ್ಣಪುಟ್ಟ ಸಂತೋಷಗಳೊಂದಿಗೆ ಹೊಂದಿಕೊಳ್ಳುವುದಿಲ್ಲ ಎಂದುಕೊಳ್ಳುವ ಗೌತಮ ನಂತರ ಅವನ್ನೆಲ್ಲ ಹೊಕ್ಕು ಪರೀಕ್ಷಿಸಿ ಹೊರಬಂದ ಮೇಲೆ ಒಂದು ಘಟನೆ ನಡೆಯುತ್ತದೆ.

ಗೌತಮ ಉಪವಾಸ, ದೇಹದಂಡನೆ ಇತ್ಯಾದಿಗಳನ್ನು ಬಿಟ್ಟೊಡನೆ ಅವನನ್ನು ಬಿಟ್ಟು ಹೊರಟುಹೋದ ಗೆಳೆಯರನ್ನು ಕಾಣುತ್ತಾನೆ, ತನಗೆ ಮನುಷ್ಯನ ದುರಂತಕ್ಕೆ ಉತ್ತರ ದೊರಕಿದೆ ಎಂದು ಹೇಳುತ್ತಾನೆ. ಆ ಗೆಳೆಯರು ನಂಬುವುದಿಲ್ಲ, “ಎಲ್ಲರಂತೆ ಬದುಕಿದ ನಿನಗೆ ಜ್ಞಾನೋದಯವಾಗಿರುವುದು ಸಾಧ್ಯವಿಲ್ಲ” ಎಂದು ಹೇಳುತ್ತಾರೆ.

ಗೌತಮ ಏನು ಹೇಳಿದರೂ ನಂಬುವುದಿಲ್ಲ, ಆಗ ಗೌತಮ ಅನ್ಯೋನ್ಯತೆಯಿಂದ, “ನನ್ನ ಧ್ವನಿ ಮುಂಚಿನಂತಿದೆಯೇ? ನನ್ನ ಮಾತು ಬೇರೆ ಥರ ಎನಿಸುವುದಿಲ್ಲವೆ?” ಎಂದು ಕೇಳುತ್ತಾನೆ. ಆಗ ಅವರಿಗೆ ಗೌತಮನಲ್ಲಿ ಏನೋ ಹೊಸತು ಗೋಚರವಾಗುತ್ತದೆ. ಗೌತಮನ ಜೊತೆಗಾರಿಕೆಯಲ್ಲಿ ಆತನ ತಿಳಿವಳಿಕೆಯ ಅರಿವಾಗುತ್ತದೆ.

ದೇಶದ ಉದ್ದಗಲಕ್ಕೆ ಓಡಾಡಿದ ಸಿದ್ಧಾರ್ಥ ಜನಕ್ಕೆ ಬೋಧಿಸುತ್ತಿದ್ದುದು ಸರಳವಾಗಿತ್ತು. ‘ಆಶೆಯೇ ದುಃಖಕ್ಕೆ ಮೂಲ’ ಎಂದು ಹೇಳುತ್ತಿದ್ದ. ನೀತಿ, ವಿನಯ, ಪ್ರಾಮಾಣಿಕತೆಯನ್ನು ಬೋಧಿಸುತ್ತಿದ್ದ. ಒಮ್ಮೆ “ತಪ್ಪಿತಸ್ಥರನ್ನು ಶಿಕ್ಷಿಸುವುದರಿಂದ ಅಪರಾಧ ಕಮ್ಮಿಯಾಗುವುದಿಲ್ಲ” ಎಂದು ಹೇಳಿದ. ಅದರ ಬಗ್ಗೆ ವಿವರಣೆ ಕೇಳಿದಾಗ ಸಿದ್ಧಾರ್ಥ ಯಾವುದೇ ಪವಾಡದ ಬಗ್ಗೆ, ದೇವರನ್ನು ಕುರಿತ ಭಯದ ಬಗ್ಗೆ ಹೇಳಲಿಲ್ಲ. “ಬಡತನದ ನಿವಾರಣೆಯಾದರೆ ಮಾತ್ರ ಅಪರಾಧ, ಕ್ರೌರ್ಯ, ಅನ್ಯಾಯಗಳು ಹೋಗುತ್ತವೆ” ಎಂದು ಹೇಳಿದ. “ಶ್ರೀಮಂತರಾದರೆ?” ಎಂದು ಕೇಳಿದರೂ ಸಿದ್ಧಾರ್ಥ ಶ್ರೀಮಂತರ ದಾಹ, ಸ್ವಾರ್ಥ, ಶೋಷಣೆಯ ಬಗ್ಗೆ ಹೇಳುತ್ತಿದ್ದ. ಈತನ ಬೋಧನೆ ಎಲ್ಲರಿಗೆ ಗೊತ್ತಿರುವುದರಿಂದ ಇಲ್ಲಿ ಮತ್ತೆ ಹೇಳಬೇಕಿಲ್ಲ.

ಆದರೆ ಸರಿಯಾಗಿ ಎರಡೂವರೆ ಸಾವಿರ ವರ್ಷದ ಹಿಂದೆ ಬದುಕಿದ್ದ ಈ ಮನುಷ್ಯನ ವ್ಯಕ್ತಿತ್ವ ನೋಡಿ. ಅರಮನೆ, ದೇವಾಲಯಗಳನ್ನು ಬಿಟ್ಟು ನಿರ್ವಾಣವನ್ನು ಕಂಡುಕೊಳ್ಳಲು ಹೊರಟ ಈತ ದೇವರನ್ನು ತಲುಪಲಿಲ್ಲ. ಮನುಷ್ಯರನ್ನು ತಲುಪಿದ. ಅದು ಪ್ರೀತಿಯ ಮೂಲಕ, ನಿರ್ಮೋಹದ ನೋಟದ ಮೂಲಕ. ಸಿದ್ಧಾರ್ಥನಿಗೆ ವಯಸ್ಸಾದಂತೆಲ್ಲ ಆತನ ಸಹಜತೆ ಕೂಡ ಬೆಳೆಯುತ್ತಿತ್ತು.

ಗಾಢ ವ್ಯಾಮೋಹ, ದುಃಖ, ಸಾವುನೋವು, ವಿರಹಗಳ ಬಲೆಯಲ್ಲಿ ಬಿದ್ದ ಮನುಷ್ಯನ ಅಸಹಾಯಕ ಸ್ಥಿತಿಗೆ ಪರಿಹಾರವಾಗಿ ಈತನಲ್ಲಿ ಅಪಾರ ಪ್ರೀತಿ ಮಾತ್ರ ಇತ್ತು. ಲಕ್ಷಾಂತರ ಶಿಷ್ಯರು, ಅಭಿಮಾನಿಗಳನ್ನು ಪಡೆದಿದ್ದ ಬುದ್ಧ ಶಿಸ್ತಿಗೆ, ದಕ್ಷತೆಗೆ ಪ್ರಖ್ಯಾತನಾಗಿದ್ದ. ಈತನ ಆಶ್ರಮಗಳು ನಡೆಯುತ್ತಿದ್ದ ಬಗೆಯನ್ನು, ಈತನ ಅನುಯಾಯಿಗಳ ಜೀವನ ಕ್ರಮವನ್ನು ಗಮನಿಸಿದ ರಾಜನೊಬ್ಬ, “ನನ್ನೆಲ್ಲ ಸೈನ್ಯ, ಶಕ್ತಿ ಬಳಸಿದರೂ ಪ್ರಜೆಗಳಲ್ಲಿ ಈ ಶಿಸ್ತು ತರಲಾಗುತ್ತಿಲ್ಲ” ಅಂದ. ಅದಕ್ಕೆ ಸಿದ್ಧಾರ್ಥ, “ವಿಶ್ವಾಸ, ಪ್ರೀತಿ ಇದ್ದಲ್ಲಿ ಮಾತ್ರ ಶಿಸ್ತು ಸಾಧ್ಯ” ಎಂದು ಹೇಳಿದ.

ಸಿದ್ಧಾರ್ಥ ಜ್ಞಾನಿಯಾಗಿದ್ದ, ವಿದ್ವಾಂಸನಾಗಿರಲಿಲ್ಲ. ಗೊಡ್ಡು ಪಾಂಡಿತ್ಯ ಕಂಡು ವಿಸ್ಮಿತನಾಗುತ್ತಿದ್ದ. ಪ್ರಖಾಂಡ ಪಂಡಿತನೊಬ್ಬ ತನ್ನ ಪಾಂಡಿತ್ಯದಿಂದ ಎಲ್ಲರಿಗೂ ಮುಖಭಂಗ ಮಾಡುವುದರಲ್ಲಿ ನಿಷ್ಣಾತನಾಗಿದ್ದ. ಆತ ಸಿದ್ಧಾರ್ಥನನ್ನು ವಾದದಲ್ಲಿ ಸೋಲಿಸುವ ಸಲುವಾಗಿ ಬಂದು “ಬ್ರಾಹ್ಮಣನ ಮುಖ್ಯ ಲಕ್ಷಣಗಳೇನು?” ಎಂದು ಕೇಳಿದ. ಆಗ ಬುದ್ಧ ಗಂಭೀರವಾಗಿ, “ನೀಚತನದಿಂದ ಮುಕ್ತನಾದವನು, ಪರಿಶುದ್ಧ ಹೃದಯವುಳ್ಳವನು ಮತ್ತು ಇತರರ ಮುಖಭಂಗ ಮಾಡದಿರುವವನು” ಅಂದು ನಸುನಕ್ಕ.

ಗೌತಮನ ಮನುಷ್ಯತ್ವ, ಹಾಸ್ಯ, ರಸಿಕತೆ, ಭೂತದಯೆ, ಜೀವನ ಪ್ರೇಮವನ್ನು ಒಳಗೊಂಡಿತ್ತು. ಆತ ತಾನು ಕಂಡ ನದಿ, ಬೆಟ್ಟ, ಕಾಡುಗಳನ್ನು, ತನ್ನ ಪ್ರೀತಿಯ ಸ್ಥಳಗಳನ್ನು ಕುರಿತು ಭಾವುಕನಾಗಿ ಮಾತನಾಡುತ್ತಿದ್ದ. ಅನೇಕ ಸಲ ನೀನು ಈ ಭೂಮಿಯಲ್ಲಿ ಸ್ವರ್ಗ ಕಾಣಬೇಕೆಂದಿದ್ದರೆ ಈ ಜಿಲ್ಲೆಯ ಗಿರಿಜನರ ಹೆಣ್ಣುಮಕ್ಕಳನ್ನು ನೋಡು- ಎಂದು ಹೇಳಬಲ್ಲವನಾಗಿದ್ದ.

ಮುಖ್ಯವಾಗಿ ಈ ಸತ್ಯಶೋಧಕ ಸಿದ್ಧಾರ್ಥನ ಎದುರು ಜನ ಯಕ್ಷಿಣಿಗಾಗಿ, ಪವಾಡಕ್ಕಾಗಿ ಸೇರುತ್ತಿರಲಿಲ್ಲ. ಆತನ ಪ್ರೀತಿಯ ಸಂಗಕ್ಕಾಗಿ, ಆತನ ತಾಯ್ತನಕ್ಕಾಗಿ ಸೇರುತ್ತಿದ್ದರು. ನೊಂದ, ಅನ್ಯಾಯಕ್ಕೊಳಗಾದ, ಕ್ರೌರ್ಯದಲ್ಲಿ ಬೆಂದವರೆಲ್ಲ ಅಲ್ಲಿ ಪ್ರೀತಿ ಎಂಬ ಜ್ಞಾನದಲ್ಲಿ ಸ್ವಸ್ಥರಾಗುತ್ತಿದ್ದರು.

ಈಗ ಕೇಳಿಕೊಳ್ಳಿ. ಆತ ಇದಕ್ಕಾಗಿ ತನ್ನ ರಾಜ್ಯ ಬಿಟ್ಟಿದ್ದು ಸರಿಯೆ? ಆಡಳಿತಗಾರನಾಗಿ ಏನನ್ನಾದರೂ ಸಾಧಿಸಲು ಆಗುತ್ತಿರಲಿಲ್ಲವೆ? ಇದಕ್ಕೆ ನನ್ನಲ್ಲಿ ಒಂದು ಸಣ್ಣ ಉತ್ತರವಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ, ನೆಹರೂ, ಪಟೇಲರೆಲ್ಲ ಸಂಭ್ರಮದಿಂದ ಕೂಗಾಡುತ್ತಿದ್ದ ದಿನ ಗಾಂಧೀಜಿ ಕಲ್ಕತ್ತಾದಲ್ಲಿ ಒಬ್ಬೊಂಟಿಯಾಗಿ ಓಡಾಡುತ್ತಿದ್ದರು.

ಎರಡೂವರೆ ಸಾವಿರ ವರ್ಷಗಳ ಬಳಿಕ ಬುದ್ಧನ ಅಂಶಗಳನ್ನು ಪಡೆದು ಬಂದ ಗಾಂಧಿ ಪ್ರಧಾನಿಯಾಗಿ ಆಗಲಿ, ರಾಷ್ಟ್ರಾಧ್ಯಕ್ಷರಾಗಿ ಆಗಲೀ ಅಧಿಕಾರ ಸ್ವೀಕರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆ ಬಾಪುವಿನದು ಕೂಡ ಬುದ್ಧನ ದಾರಿಯಾಗಿತ್ತು.

ಈತ ಕೂಡ ಸತ್ಯವನ್ನು, ದೇವರನ್ನು ಹುಡುಕುತ್ತಾ ಹೋಗಿ, ಬದುಕಿನ ವಿರೋಧಾಭಾಸಗಳನ್ನು, ಜೀವಸೆಲೆಗಳನ್ನು ಹುಡುಕುತ್ತಾ ಹೋಗಿ ಸರಳ ಕಾಣ್ಕೆಯನ್ನು ಕಂಡುಕೊಂಡಿದ್ದರು. ಈಶ್ವರನಿಗಾಗಿ ಹುಡುಕಾಟದಿಂದಾಗಿಯೇ ನಿರೀಶ್ವರವಾದಿಯ ನಿಷ್ಠುರತೆಯನ್ನೂ, ದುರಂತ ಪ್ರಜ್ಞೆಯನ್ನೂ ಪಡೆದುಕೊಂಡಿದ್ದರು. ಸಿದ್ಧಾರ್ಥನಂತೆಯೇ ಕನಿಷ್ಠ ಜೀವಿಯಲ್ಲೂ ಗಾಢ ಪ್ರೀತಯನ್ನು ಇಟ್ಟಿದ್ದ ಗಾಂಧಿ ಮನುಷ್ಯ ತನಗಾಗಿ ಸೃಷ್ಟಿಸಿಕೊಂಡಿರುವ ಜಾತಿ, ಮೂಢನಂಬಿಕೆ, ಕ್ರೌರ್ಯ, ಅಸಹಾಯಕತೆಯನ್ನು ಕಂಡು ತಮ್ಮ ಸರಳ ಸಿದ್ಧಾಂತಗಳನ್ನು ರೂಪಿಸಿಕೊಂಡಿದ್ದರು.

ಸಿದ್ಧಾರ್ಥನನ್ನು ಆತನ ಕಾಣ್ಕೆಯೊಂದಿಗೇ ಹೊರಗಟ್ಟಿದ್ದ ಭಾರತೀಯ ಗಾಂಧಿಯನ್ನೂ ಇಟ್ಟುಕೊಳ್ಳಲಿಕ್ಕಿಲ್ಲ. ಅಂದರೆ ಅವರ ಪ್ರೇಮವನ್ನು, ತಾಯ್ತನವನ್ನು, ಸರಳ ನೆಮ್ಮದಿಯನ್ನು. ಯಾವ ಅಧಿಕಾರದ ಗದ್ದುಗೆಯೂ, ಸೈನ್ಯದ ಆರ್ಭಟವೂ ಮನುಕುಲಕ್ಕೆ ನೀಡಲಾರದ ಕಾಣಿಕೆ ಇದು.

(ಡಿಸೆಂಬರ್ 28, 1986)-ಟೀಕೆ-ಟಿಪ್ಪಣಿ ಪುಸ್ತಕದಿಂದ (ಸಂಪುಟ-01, 1991)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಆತ್ಮಕತೆ | ತುರ್ತು ಪರಿಸ್ಥಿತಿ ಮತ್ತು ನಮ್ಮೂರಿನ ಭೂ ಹೋರಾಟ

Published

on

  • ರುದ್ರಪ್ಪ ಹನಗವಾಡಿ

ದೇಶದಾದ್ಯಂತ ತುರ್ತುಪರಿಸ್ಥಿತಿ ಇತ್ತು. ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನಗಳು ನಿಗದಿಯಂತೆ ನಡೆಯುತ್ತಿದ್ದವು. ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾಂಗ್ರೆಸ್ ವಿರೋಧಿ ರಾಜಕೀಯ ನಾಯಕರನ್ನು ಬಂಧಿಸಿ ಜೈಲಿನಲ್ಲಿರಿಸಿದ್ದರು. ಇಂದಿರಾ ಗಾಂಧಿಯವರ 20 ಅಂಶದ ಕಾರ್ಯಕ್ರಮಗಳು ವಿಶೇಷವಾಗಿ ದಲಿತ ಹಿಂದುಳಿದವರ ಪರವಾಗಿದ್ದುದನ್ನು ಮುಖ್ಯಮಂತ್ರಿ ದೇವರಾಜ ಅರಸು ಅವರು ಒತ್ತಿ ಹೇಳುತ್ತಿದ್ದರು ಮತ್ತು ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಂಡು ರಾಜ್ಯಾಡಳಿತವನ್ನು ನಡೆಸುತ್ತಿದ್ದರು.

ದೇವರಾಜ ಅರಸು ಅವರು ಕರ್ನಾಟಕದಲ್ಲಿ ಹಿಂದೆಂದೂ ನೀಡಿರದಿದ್ದ ವಿಶೇಷ ಸವಲತ್ತುಗಳನ್ನು ದಲಿತರು, ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ನೀಡುತ್ತಿದ್ದರು. ಹಾಗೆ ಹೇಳುತ್ತಲೂ ಇದ್ದರು. ಅದು ನಿಜವೂ ಆಗಿತ್ತು. ಆದರೆ ನಾವೆಲ್ಲ ತುರ್ತುಪರಿಸ್ಥಿತಿಯ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೆವು.

ನಮ್ಮ ಊರಿನಲ್ಲಿ ವೀರಭದ್ರ ದೇವರ ಚಾಕರಿ (ಮ್ಯಾಳ) ಮಾಡುತ್ತಿದ್ದ ಕಾರಣ ಹದಿನೇಳು ಎಕರೆ ವೀರಭದ್ರ ದೇವರ ಹೆಸರಿನಲ್ಲಿದ್ದುದನ್ನು ನಮ್ಮ ಎಲ್ಲ ಆರು ಕುಟುಂಬಗಳಿಗೆ ಊರಿನ ಪ್ರಮುಖರು ನಾವಿನ್ನು ಹುಟ್ಟುವ ಮುಂಚೆಯೇ ಹಂಚಿ ಕೊಟ್ಟಿದ್ದರು. ಅದರಲ್ಲಿ ಅಪ್ಪನಿಗೆ ಸುಮಾರು ನಾಲ್ಕು ಎಕರೆಯಷ್ಟನ್ನು ನೀಡಿದ್ದು ಸಾಗುವಳಿ ಮಾಡಿಕೊಂಡು ಬರುತ್ತಿದ್ದೆವು. ಈ ನಡುವೆ ಭೂಸುಧಾರಣಾ ಕಾನೂನು ಜಾರಿ ಮಾಡುವ ಬಗ್ಗೆ ಅರಸು ಸರ್ಕಾರ ವಿಶೇಷವಾಗಿ ಭೂನ್ಯಾಯ ಮಂಡಳಿಯನ್ನು ರಚಿಸಿತ್ತು. ಇದನ್ನರಿತ ನಮ್ಮವರೆಲ್ಲ ಸೇರಿ ನಮ್ಮ ಅಣ್ಣ ತಿಪ್ಪಣ್ಣನ ಪ್ರಯತ್ನದಿಂದ ಸರ್ಕಾರ ರಚಿಸಿದ್ದ ಭೂನ್ಯಾಯ ಮಂಡಳಿಯ ಮುಂದೆ ಎಲ್ಲ ಆರು ಜನರೂ ತಮಗೆ ಭೂಮಿಯ ಹಕ್ಕು ನೀಡಲು ನಮೂನೆ 7ರ ಅರ್ಜಿ ಸಲ್ಲಿಸಿದ್ದರು.

ಭೂನ್ಯಾಯ ಮಂಡಳಿಯ ಮುಂದೆ ಅರ್ಜಿ ಹಾಕಿದ ವಿಷಯ ಊರಲ್ಲಿ ದೊಡ್ಡ ಅಸಮಾಧಾನದ ಕಿಚ್ಚನ್ನು ಮೂಡಿಸಿತ್ತು. ಈ ನಡುವೆ ನಮಗಾಗಿ ಕೊಟ್ಟಿದ್ದ 17 ಎಕರೆಯಲ್ಲಿ ಮಧ್ಯ ಭಾಗದಲ್ಲಿ 4 ಎಕರೆಯನ್ನು ಕಬಳಿಸುವಷ್ಟು ರಾಷ್ಟ್ರೀಯ ಹೆದ್ದಾರಿಯು ದಾವಣಗೆರೆಯಿಂದ ಹುಬ್ಬಳ್ಳಿವರೆಗೆ ಬೈಪಾಸ್ ರಸ್ತೆಗಾಗಿ ಸರ್ಕಾರ ವಶಪಡಿಸಿಕೊಂಡಿತ್ತು. ಸರ್ಕಾರದಿಂದ ನೀಡಿದ ನಾಲ್ಕು ಎಕರೆ ಪರಿಹಾರದ ಹಣವನ್ನು ಕೂಡ ದೇವಸ್ಥಾನದವರೇ ತೆಗೆದುಕೊಂಡಿದ್ದರು. ಉಳಿದಿದ್ದ 13 ಎಕರೆಯಲ್ಲಿ ಮತ್ತೆ ಪುನಃ ಮರು ಹಂಚಿಕೆ ಮಾಡಿಕೊಂಡು ಆರು ಜನರು ಸುಮಾರು ಎರಡೆರಡು ಎಕರೆಗಳಷ್ಟು ಸಾಗುವಳಿ ಮಾಡುತ್ತಿದ್ದರು.
ದೇವಸ್ಥಾನ ಧರ್ಮದರ್ಶಿ ಕಮಿಟಿಯಲ್ಲಿ ಊರಿನ ಹಿರಿಯರಿದ್ದರೂ ಉಳಿದಿರುವ ಭೂಮಿಯನ್ನು ನಮ್ಮವರಿಂದ ಬಿಡಿಸುವುದು ಮತ್ತು ಪ್ರತಿ ಮಂಗಳವಾರ ಗುಡಿಯಲ್ಲಿ ಮಾಡುತ್ತಿರುವ ಮ್ಯಾಳಗಳನ್ನು ನಿಲ್ಲಿಸಬೇಕೆಂದು ಚರ್ಚೆ ಆಗ ಊರಲ್ಲಿ ನಡೆಯುತ್ತಿತ್ತು. ಅವರೆಲ್ಲರ ಚರ್ಚೆಗಳ ಮಧ್ಯೆ ಮ್ಯಾಳದವರು ನಿಲ್ಲಿಸದೆ ಪ್ರತಿ ಮಂಗಳವಾರ ತಪ್ಪಿಸದೆ ಗುಡಿಗೆ ಹೋಗಿ ಎಂದಿನಂತೆ ಮ್ಯಾಳ ಮಾಡಿ ಬರುತ್ತಿದ್ದರು.

ನಮ್ಮೂರ ಚಲುವಾದಿಗಳಿಗೆ ಈ ರೀತಿಯ ಧೈರ್ಯವಿರಲಿಲ್ಲ. ಇವೆಲ್ಲದರ ಹಿಂದಿನ ಯೋಜಕ ಮೈಸೂರಲ್ಲಿ ಓದುತ್ತಿರುವ ಹುಡುಗ ನಾನೇ ಎಂದು ಊರವರು ಮಾತಾಡಿಕೊಂಡರು. ಅವನು ಊರಿಗೆ ಯಾವ ದಾರಿಯಲ್ಲಿ ಬರುತ್ತಾನೋ ಕಾದು ಕುಳಿತು ಕಾಲು ಮುರಿಯಬೇಕೆಂಬ ಯೋಜನೆ ಕೂಡ ಹಾಕಿಕೊಂಡಿದ್ದರಂತೆ. ಆದರೆ ಏಕಾಂಗಿಯಾಗಿ ಓಡಾಡುತ್ತಿದ್ದ ನನಗೆ ಒಳಗೊಳಗೆ ಅಳುಕು ಇದ್ದರೂ ನಾನೇನು ತಪ್ಪು ಮಾಡುತ್ತಿಲ್ಲ ಎಂಬ ತಿಳುವಳಿಕೆ ಧರ‍್ಯ ನೀಡುತ್ತಿತ್ತು. ಆದರೆ ಊರಿಗೆ ಬಂದು ಹೊರಗೆ ಓಡಾಡುತ್ತಿದ್ದರೆ ನಮ್ಮವರೆಲ್ಲ ದೂರದಲ್ಲಿದ್ದುಕೊಂಡೇ ನನ್ನನ್ನು ಊರಲ್ಲಿರುವ ತನಕ ವಿಶೇಷವಾಗಿ ಕವರ್ ಮಾಡುತ್ತಿದ್ದರು.

ಇದಕ್ಕೂ ಮುಂಚೆ ನಾನಿನ್ನು ಬಿ.ಎ.ನಲ್ಲಿ ಓದುತ್ತಿರುವಾಗ ಸರ್ಕಾರದ ವತಿಯಿಂದ ನಮ್ಮ ಮನೆಯ ಹತ್ತಿರದಲ್ಲೇ ಸಾರ್ವಜನಿಕರಿಗಾಗಿ ಕುಡಿಯಲು ಒಂದು ತೆರೆದ ಬಾವಿಯನ್ನು ತೆಗೆದಿದ್ದರು. ಊರಲ್ಲಿದ್ದ ಎರಡು ಬಾವಿಗಳಿಂದ ನೀರು ಸೇದುತ್ತಿದ್ದ ಮೇಲ್ಜಾತಿಗಳ ಜನರಿಂದ ನಮ್ಮವರೆಲ್ಲ ಹೊಯ್ ನೀರು ತರುತ್ತಿದ್ದರು. ಅಂದರೆ ಮೇಲ್ಜಾತಿಯವರಿಂದ ನೀರು ಸೇದಿ ಇವರ ಕೊಡಗಳಿಗೆ ನೀರು ಹಾಕಬೇಕು, ಆಗ ಇವರ ಮನೆಗಳಿಗೆ ತೆಗೆದುಕೊಳ್ಳಬೇಕು. 1936ರಲ್ಲಿ ಸರ್ಕಾರ ನಮಗೊಂದು ರಂಗಜ್ಜನ ಮಠದ ಹತ್ತಿರ ಬಾವಿ ತೆಗೆಸಿತ್ತು. ಅದು ನಮ್ಮ ಮನೆಗಳಿಗೆ ಅರ್ಧ ಕಿಲೋಮೀಟರ್ ದೂರದಲ್ಲಿತ್ತು. ಆದರೆ ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ.

ಮನೆಯ ಹತ್ತಿರವಿರುವ ಬಾವಿಯನ್ನು ವಿಧ್ಯುಕ್ತವಾಗಿ ಉದ್ಘಾಟಿಸುವ ಮುನ್ನ ನಾನು ನಮ್ಮಲ್ಲಿದ್ದ ಹಸುವಿನ ಜೊತೆ ಆ ಹೊಸ ಬಾವಿಯಿಂದ ನೀರು ಸೇದಿ ಅದಕ್ಕೆ ಕುಡಿಸಿ ನಾನು ಅಲ್ಲೇ ಸ್ನಾನ ಮಾಡಿಕೊಂಡು ಬರುತ್ತಿದ್ದೆ. ನಾನಿರುವಾಗ ಯಾರೂ ಮಾತಾಡದೆ ಇದ್ದವರು, ನಾನು ಮೈಸೂರಿಗೆ ವಾಪಸ್ ಓದಲು ಹೋದಾಕ್ಷಣ ಮಾರನೆ ದಿನ ನಮ್ಮ ಮನೆಯ ಹೆಣ್ಣು ಮಕ್ಕಳು ನೀರಿಗೆ ಹೋದಾಗ ಹಗ್ಗ ಕೊಡಪಾನಗಳನ್ನು ಕಿತ್ತು ಬಿಸಾಕಿ ನೀರು ಸೇದಲು ಬಿಟ್ಟಿರಲಿಲ್ಲ. ಆಗಿನ್ನು ಅಪ್ಪ ಇದ್ದ. ‘ನೀನು ಊರ ಉಸಾಬರಿಗೆ ಬರಬೇಡ ನಿನ್ನ ಓದು ನೀನು ಮಾಡಿಕೊಂಡು ಸುಮ್ಮನಿರು’ ಎಂದು ಪತ್ರ ಬರೆಸಿ ಸಮಾಧಾನ ಹೇಳಿದ್ದ. ಆದರೂ ನಾನು ಆಗಿರುವ ಅವಮಾನದ ಬಗ್ಗೆ ಚಿಂತಿಸುತ್ತಿದ್ದಾಗ ಒಂದು ದಿನ ಮೈಸೂರಿಗೆ ಬಂದಿದ್ದ ಕಂದಾಯ ಮಂತ್ರಿಗಳಾಗಿದ್ದ ಬಸವಲಿಂಗಪ್ಪನವರ ಹತ್ತಿರ ಹೋಗಿ, ನಮ್ಮೂರಲ್ಲಿ ಸಾರ್ವಜನಿಕ ಬಾವಿಯಿಂದ ನೀರು ಸೇದಲು ಲಿಂಗಾಯತರು ತೊಂದರೆ ಕೊಡುತ್ತಿರುವ ಬಗ್ಗೆ ಹೇಳಿದೆ.

ಅವರು ಅದನ್ನು ಮನಸ್ಸಿನಲ್ಲಿಕೊಂಡು ಬೆಂಗಳೂರಿಗೆ ವಾಪಸಾಗಿದ್ದರು. ನಮ್ಮೂರ ಛರ‍್ಮನ್ ಬಸಪ್ಪನವರು ಮತ್ತು ನಮ್ಮ ಹರಿಹರದವರೇ ಬಿ. ಬಸವಲಿಂಗಪ್ಪನವರು ಮೊದಲಿಂದಲೂ ಬಳಕೆಯಲ್ಲಿದ್ದವರಾಗಿದ್ದರು. ಛರ‍್ಮನ್ ಬಸಪ್ಪನವರು ಇನ್ನು ನಮ್ಮ ಊರಿನವರೊಡನೆ ಬೆಂಗಳೂರಲ್ಲಿ ತಮ್ಮ ಯಾವುದೋ ಕೆಲಸಕ್ಕೆ ಭೇಟಿ ಮಾಡಿದಾಗ ನಾನು ಹೇಳಿದ ವಿಷಯವನ್ನು ಪ್ರಸ್ತಾಪಿಸಿ, ‘ನೀವೇನು ಹೆಂಡ ಕುಡಿಯೋದಿಲ್ಲವಾ? ಮಾಂಸ ತಿನ್ನೋದಿಲ್ವಾ’ ಎಂದೆಲ್ಲಾ ಕೇಳಿ ‘ಬಸವಣ್ಣ ಏನು ಹೇಳಿದ್ದಾನೆ ಗೊತ್ತಾ? ಅದನ್ನ ಪಾಲಿಸೋದು ಬಿಟ್ಟು, ಸರ್ಕಾರ ಕಟ್ಟಿಸಿದ ಬಾವಿಯ ನೀರು ಸೇದಲು ಅಡ್ಡಿಪಡಿಸಬಾರದೆಂದು ಗರ್ಜನೆ ಹಾಕಿ ತಾಕೀತು ಮಾಡಿ ಕಳಿಸಿದ್ದರು.

ನಮ್ಮೂರ ಛರ‍್ಮನ್ ಬಸಪ್ಪನವರು ಬಹಳ ದಿನಗಳ ಕಾಲ ನಮ್ಮೂರ ಛರ‍್ಮನ್‌ರಾಗಿ ಎಲ್ಲರ ಜೊತೆ ಒಳ್ಳೆಯ ಸಂಬಂಧವಿಟ್ಟುಕೊಂಡಿದ್ದರು. ಆದರೆ ಊರ ಸಮಷ್ಟಿಯ ಸಮಸ್ಯೆಗಳು ಬಂದಾಗ ಧೈರ್ಯವಾಗಿ ಒಬ್ಬರೇ ತೀರ್ಮಾನ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಆದರೆ ಬೆಂಗಳೂರಿನಿಂದ ಬಂದವರೇ ಯಾರು ನಿಮಗೆ ನೀರು ತರಲು ಅಡ್ಡಿಪಡಿಸಿದವರು ಎಂದು ಹೇಳಿ ಅವರೇ ನಮ್ಮ ಕೇರಿಗೆ ಬಂದು ನಮ್ಮವರನ್ನೇ ನೀರು ಸೇದಿಕೊಳ್ಳಲು ಹೇಳಿದ್ದರು. ಊರಲ್ಲಿ ವಿರೋಧಿಸಿದವರಿಗೆ ಸರ್ಕಾರದಿಂದ ಆದೇಶವಾಗಿದೆ ಎಂದೆಲ್ಲ ಹೇಳಿ ಬಾಯಿ ಮುಚ್ಚಿಸಿದ್ದರು. ಛರ‍್ಮನ್ ಬಸಪ್ಪನವರು ಸುಮಾರು 20 ವರ್ಷಗಳ ಕಾಲ ಛರ‍್ಮನ್‌ರಾಗಿದ್ದರು. ಯಾರಿಗೂ ಕೇಡು ಬಯಸುವ ವ್ಯಕ್ತಿಯಾಗಿರಲಿಲ್ಲ. ಇದೇ ಸಮಸ್ಯೆ ಬೇರೆಯವರ ಕೈಗೆ ಬಿದ್ದಿದ್ದರೆ, ಏನೆಲ್ಲಾ ಅನಾಹುತ ಮಾಡುತ್ತಿದ್ದರೋ ಊಹಿಸಲೂ ಅಸಾಧ್ಯ.

ಈ ಹಿನ್ನೆಲೆಯಲ್ಲಿ ಈಗ ಊರ ಮಟ್ಟದಲ್ಲಿ ಮತ್ತೊಂದು ಮಹತ್ತರವಾದ ಸಮಸ್ಯೆಯಾಗಿ ಎದ್ದು ಕೂತಿತ್ತು. ಅದು ಭೂ ನ್ಯಾಯ ಮಂಡಳಿಗೆ ಅರ್ಜಿ ಫಾರಂ ಹಾಕಿದ್ದು. ಹರಿಹರದಲ್ಲಿ ನಡೆಸುತ್ತಿದ್ದ ಭೂನ್ಯಾಯ ಮಂಡಳಿಯ ಮುಂದೆ ಹಾಜರಾಗಬೇಕು. ನಮ್ಮವರೆಲ್ಲ ದೇವಸ್ಥಾನದ ಧರ್ಮದರ್ಶಿಗಳ ಜೊತೆಗೆ ಮಾತಾಡಿಕೊಂಡು ಅವರು ತರುತ್ತಿದ್ದ ಟ್ರಾಕ್ಟರ್‌ನಲ್ಲಿ ಕೂತು ಹೋಗುತ್ತಿದ್ದರು. ನಮ್ಮ ಅಣ್ಣ ತಿಪ್ಪಣ್ಣ ಮಾತ್ರ ಅವರ ಜೊತೆಗೆ ಹೋಗುತ್ತಿರಲಿಲ್ಲ. ಅವರ ಜೊತೆ ಇರುವಾಗ, ನೀವು ಹೇಳಿದ ಹಾಗೆ ಸಾಕ್ಷಿ ಹೇಳುತ್ತೇವೆಂದು ಅವರ ಹತ್ತಿರವೇ ಬೀಡಿ ಕೇಳಿ ಸೇದಿಕೊಳ್ಳುತ್ತಿದ್ದರು. `ಇದೆಲ್ಲ ನಮ್ಮ ಹುಡುಗನ ಕೆಲಸ, ನಮಗ್ಯಾಕಣ್ಣ ದೇವರ ಜಮೀನು’ ಎಂದೆಲ್ಲ ಅವರ ಜೊತೆಯೇ ತಾಳ ಹಾಕುತ್ತ ಇದ್ದರು. ನಾನು ಊರಿಗೆ ಹೋದಾಗ ಯಾವಾಗ ತೀರ್ಮಾನಿಸಲಾಗುತ್ತದೆ ಎಂದು ಬಂದು ಗುಟ್ಟಾಗಿ ನನ್ನ ಬಳಿ ಕೇಳುತ್ತಿದ್ದರು. ನಮ್ಮವರೆಲ್ಲರ ಅದೃಷ್ಟವೋ ಎನ್ನುವಂತೆ ನನಗೆ 1969-1972ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಕೆ.ಎಂ. ಶಂಕರಲಿಂಗೇಗೌಡರನ್ನು ದಾವಣಗೆರೆ ಭೂನ್ಯಾಯ ಮಂಡಳಿಯ ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿತ್ತು. ನಾನು ನಮ್ಮ ಊರಿನ ಸ್ಥಿತಿಯನ್ನೆಲ್ಲ್ಲ ಅವರಿಗೆ ವಿವರಿಸಿ, ನಮಗೆ ಆದಷ್ಟು ಬೇಗ ಇತ್ಯರ್ಥಗೊಳಿಸಿಕೊಡಬೇಕೆಂದು ಅವರಲ್ಲಿ ವಿನಂತಿಸಿದೆ. ನಾನು ಹೋಗಿ ವಿನಂತಿಸಿದ 3-4 ತಿಂಗಳಲ್ಲಿ ನಮ್ಮವರೆಲ್ಲರ ಹೆಸರಿಗೆ ಭೂನ್ಯಾಯ ಮಂಡಳಿಯಲ್ಲಿ 1976ರ ವರ್ಷದ ಮಧ್ಯ ಭಾಗದಲ್ಲಿ ಭೂನ್ಯಾಯ ಮಂಡಳಿಯಿಂದ ತೀರ್ಮಾನಿಸಲಾಗಿತ್ತು.

ಆ ಸಂದರ್ಭದಲ್ಲಿ ಹೆಚ್. ಶಿವಪ್ಪನವರು ಹರಿಹರ ತಾಲ್ಲೂಕು ಶಾಸಕರು ಮತ್ತು ಭೂನ್ಯಾಯ ಮಂಡಳಿಯ ಸದಸ್ಯರಾಗಿದ್ದರು. ಅವರು ನಮಗೆಲ್ಲ ಜಮೀನು ನೋಂದಾಯಿಸುವ ಪ್ರಕರಣದಲ್ಲಿ ವಿರೋಧಿಸದೆ ಸಹಕಾರ ನೀಡಿದ್ದನ್ನು ನಾನು ನೆನಪಿಸಿಕೊಳ್ಳಬೇಕು. ಆದೇಶ ನೀಡುವ ಸಮಯದಲ್ಲಿ ದೇವಸ್ಥಾನದ ಧರ್ಮದರ್ಶಿಗಳು, ಭೂನ್ಯಾಯ ಮಂಡಳಿಯ ಅಧ್ಯಕ್ಷರ ಎದುರೇ ‘ಊರಿಗೆ ರ‍್ರಲೇ ನೋಡಿಕೊಳ್ಳುತ್ತೇವೆ’ ಎನ್ನೋ ಧಮ್ಕಿ ಹಾಕಿದಾಗ, ಅಧ್ಯಕ್ಷರು ‘ನಿಮ್ಮನ್ನೆಲ್ಲ ಪೊಲೀಸ್ ಕರೆಸಿ ಈಗಲೇ ಜೈಲಿಗೆ ಕಳಿಸುತ್ತೇನೆಂದು ಹೇಳಿ ಎಚ್ಚರಿಕೆ ನೀಡಿದರೆಂದು ನಮ್ಮವರೆಲ್ಲ ನನ್ನ ಬಳಿ ಸಂತೋಷದಿಂದ ಎಲ್ಲ ಮುಗಿದ ಮೇಲೆ ಹೇಳಿಕೊಂಡಿದ್ದರು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಡೋಜೆ ಡಾ. ಕಮಲಾ ಹಂಪನಾಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಗಣ್ಯರಿಂದ ಅಂತಿಮ ನಮನ

Published

on

ಸುದ್ದಿದಿನ,ಬೆಂಗಳೂರು:ಹಿರಿಯ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವೀಂದ್ರ ಕಲಾಕ್ಷೇತ್ರದಲ್ಲಿ ಪಡೆದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಸಾಹಿತಿ ಹಂಪನಾ ಮತ್ತು ಬರಗೂರು ರಾಮಚಂದ್ರಪ್ಪ ಸೇರಿ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಈ ವೇಳೆ, ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡದ ಉತ್ತಮ ಸಾಹಿತಿಯನ್ನು ಕಳೆದುಕೊಂಡಿದ್ದೇವೆ, ಕಮಲಾ ಹಂಪನಾ, ಬೋಧಕರಾಗಿ, ಸಂಶೋಧಕರಾಗಿ, ಸಾಹಿತಿಯಾಗಿ ಕನ್ನಡ ಭಾಷೆಗಾಗಿ ಬಹಳ ಶ್ರಮಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಂಪನಾ ಮತ್ತು ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಡೋಜೆ ಕಮಲಾ ಹಂಪನ ನಿಧನ ; ಮೆಡಿಕಲ್ ಕಾಲೇಜಿಗೆ ದೇಹದಾನ : ಗಣ್ಯರ ಸಂತಾಪ

Published

on

ಸುದ್ದಿದಿನಡೆಸ್ಕ್:ಕನ್ನಡದ ಖ್ಯಾತ ಸಾಹಿತಿ ನಾಡೋಜೆ ಕಮಲ ಹಂಪನಾ (89) ಅವರು ಇಂದು ರಾಜಾಜಿನಗರದ ಮನೆಯಲ್ಲಿ ಮಲಗಿದ್ದಲ್ಲಿಯೇ ಅಸುನೀಗಿದ್ದಾರೆ. ಅವರು ಪ್ರಾಧ್ಯಾಪಕರಾಗಿ, ಬಹಳಷ್ಟು ಪ್ರಾಚೀನ ಕೃತಿಗಳ ಅನುಸಂಧಾನಕಾರರಾಗಿ ಸೇವೆ ಸಲ್ಲಿಸಿದ್ದಾರೆ.

ಹಂಪನಾ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥ ಮಾಡಲಾಗಿದ್ದು, ಬಳಿಕ ಮೃತರ ಆಸೆಯಂತೆ ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ.

ಸಿಎಂ ಸಂತಾಪ


ಹಿರಿಯ ಸಾಹಿತಿ ಡಾ.ಕಮಲ ಹಂಪನಾ ಅವರ ಅನಿರೀಕ್ಷಿತ ಸಾವಿನಿಂದ ದು:ಖಿತನಾಗಿದ್ದೇನೆ.

ಸಾಹಿತ್ಯ ಕೃಷಿಯ ಜೊತೆ ಸಂಶೋಧನೆ ಮತ್ತು ಬೋಧನೆಗಳಿಂದಲೂ ಜನಪ್ರಿಯರಾಗಿದ್ದ ಡಾ.ಕಮಲಾ ಅವರದ್ದು ಸರ್ವರಿಗೂ ಒಳಿತನ್ನು ಬಯಸಿದ ಜೀವ.

ಡಾ.ಹಂಪ ನಾಗರಾಜಯ್ಯ ಮತ್ತವರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.
ಮೃತರ ಆತ್ಮಕ್ಕೆ ಶಾಂತಿ ಕೋರುವೆ.


ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending