Connect with us

ನೆಲದನಿ

ಕಾಯಕ ಜೀವಿಗಳ ಚಳುವಳಿಯಲ್ಲಿ ಬುದ್ಧಪ್ರಜ್ಞೆ

Published

on

  • ಪ್ರೊ.ಹೆಚ್.ಲಿಂಗಪ್ಪ

ಕ್ರಿ.ಪೂ.ಐದನೆಯ ಶತಮಾನದ ಪೂರ್ವದಲ್ಲಿ ಏಷ್ಯಾದ ಮಹಾಬೆಳಕಾದ ಬುದ್ಧ ಮತ್ತು ಮಹಾವೀರರು ಶ್ರವಣ ಪರಂಪರೆಯ ಸಾಧಕರಿವರು. ಬ್ರಾಹ್ಮಣ್ಯದ ಬೌದ್ಧ ಧರ್ಮ ಭಾರತದಿಂದ ಏಷ್ಯಾಪೂರ್ವ ದೇಶಗಳಿಗೆ ವಲಸೆ ಹೋತ್ತು. ಜೈನ ಧರ್ಮ ದೇಶದಲ್ಲಿ ಜೀರ್ಣವಾಯಿತು. ವೈದಿಕ ಕದಂಬಬಾಹುಗಳಿಗೆ ಸಿಲುಕಿ ನರಳಿತು.

ಬಹು ಕಾಲದಿಂದಲೂ ವಲಸೆ ಪ್ರವೃತ್ತಿಯು ನಿರಂತರವಾಗಿ ನಡೆಯುತ್ತಾ ಬಂದಿದೆ. ಮಧ್ಯ ಏಷಿಯಾದಿಂದ ಹಲವು ಜನಾಂಗವು ವಲಸೆ ಬಂದಿದೆ. ಅವರ ಬಣ್ಣ, ಆಕಾರ, ಎತ್ತರ ಮತ್ತು ಮೈಕಟ್ಟು ಭಿನ್ನವಾಗಿದೆ. ಉತ್ತರದಲ್ಲಿ ಈ ಜನಾಂಗವು. ದಕ್ಷಿಣದಲ್ಲಿ ದ್ರಾವಿಡ ಮೂಲದವರು ನೆಲೆಸಿಕೊಂಡ ಅಖಂಡ ಭಾರತವಾಗಿದೆ. ಈ ರೀತಿಯಲ್ಲಿ ಬಣ್ಣದ ಆಧಾರದ ಮೇಲೆ ಮೂರು ಜನಾಂಗವಿರುವ ಭಾರತ ದೇಶ ನಮ್ಮದು!

ಆದ್ದರಿಂದ ಯಾರು ಆರ್ಯರು? ಯಾರು ಶೂದ್ರರು? ಎಂಬುದಾಗಿ ಸುದೀರ್ಘವಾದ ಸಂಶೋಧನೆಗಳು ನಡೆದುಕೊಂಡು ಬಂದಿವೆ. ಸಂಶೋಧನೆ ಮೂಲ ಸಾರ ಅರಿತರೆ ಭಾರತೀಯರಾದ ನಮಗೆ ನಮ್ಮೊಳಗೆಯಿರುವ ಕಿಚ್ಚಿಗೆ ಮುಲಾಮು ದೊರೆತಂತಾಗುತ್ತದೆ. ಜನಪರವಾದ ವಿಚಾರಗಳ ದಾಸೋಹದ ಮಾರ್ಗಗಳಾದ ಬುದ್ಧಮಾರ್ಗ-ಬಸವಮಾರ್ಗ ಮತ್ತು ಅಂಬೇಡ್ಕರ್ ಮಾರ್ಗಗಳು ನೆಲೆಕಂಡಿವೆ. ಇವು ಎಂದೂ ಮಾಸದ-ಇಂಗದ ಬತ್ತದ ವಿಚಾರ ಪರತೆಗಳು, ಸಮಾನತೆಯ ಬೀಜ ಬಿತ್ತಿ, ಸಮಾನತೆಯ ಬೆಳೆಯ ಬೆಳೆದು ಸಾಮರಸ್ಯದ ತೋರಣ ಕಟ್ಟಿದ್ದಾರೆ.

ಅವರಲ್ಲಿ ಪ್ರಮುಖರಾದ12ನೇ ಶತಮಾನದ ಬಸವಣ್ಣ ಸಾಮಾಜಿಕ ಕ್ರಾಂತಿಗೆ ಮುನ್ನೆಲೆಯಾಗುತ್ತಾರೆ. ಕನ್ನಡದ ನೆಲ, ಜಲ, ಭಾಷೆಯ ಬಗ್ಗೆ ಸರಳವಾಗಿ ಚಿಂತಿಸಿದ್ದು ಬಸವಣ್ಣ ಆಂದೋಲನವೊಂದರ ನಾಯಕರಾಗುತ್ತಾರೆ. ಕನ್ನಡ ಭಾಷೆಯಲ್ಲಿ, ದೇಶ-ಭಾಷೆಗಳ ಈ ಪರಿಮಿತಿ ಕಾರಣವಾಗಿ ನ್ಯಾಯವಾಗಿ ಸಿಗಬೇಕಾದ ಜಾಗತಿಕ ಪ್ರಸಿದ್ಧಿ ಸಿಕ್ಕಿಲ್ಲವಾದರೂ, ಇವರನ್ನು ಕುರಿತು ಹುಟ್ಟಿದಷ್ಟು ಸಾಹಿತ್ಯ ಕನ್ನಡದಲ್ಲಿ ಯಾರನ್ನು ಕುರಿತು ಹುಟ್ಟಿದಷ್ಟು ಬೇರೆಯವರಿಗೆ ಸಲ್ಲಿಕೆಯಾಗಿಲ್ಲ. ಇವನಷ್ಟು ಪ್ರಭಾವವನ್ನು ನಾಡಿನ ಯಾವ ಅನುಭಾವಿಕ ಪುರುಷನಿಲ್ಲಾ!

ಬಸವನ ವಚನಗಳ-ಚಿಂತನೆ ಒಂದು ಅಪೂರ್ವ ವಿಚಾರವಾಗಿತ್ತು. ವಚನವೆಂದರೆ ಪ್ರಜ್ಞೆ, ಆತ್ಮಸಾಕ್ಷಿಯ ಮಾತು ಎಂದು ಅರ್ಥ. ನಡೆ-ನುಡಿ ಮಾತ್ರ ಕಲಾತ್ಮಕವಾಗಿದ್ದುದು ರಚನೆಯಾಗಿ, ನಡೆದಂತೆ ನುಡಿದ ಆತ್ಮ ಸಾಕ್ಷಿ ವಾಣಿ ‘ವಚನ’ವೆನಿಸುತ್ತದೆ. ವಚನಗಳು ಪಂಡಿತ ಪಾಮರ ಸಾಹಿತ್ಯವಲ್ಲ. ಅನುಭಾವಿಗಳ ಸಾಹಿತ್ಯ, ಅವರು ಜೀವಿಸುರುವಾಗಲೇ ತಮ್ಮ ವಿಚಾರಗಳನ್ನು ಬರೆದು ಹೃದಯದಿಂದ ಹೃದಯಕ್ಕೆ ಮನಮುಟ್ಟವಂತೆ ಬಿಡಿ ಮಾತುಗಳ ಮೂಲಕ ಅನುಭವವೇದ್ಯವಾದ ವಿಚಾರಗಳ ಬುದ್ಧಪ್ರಜ್ಞೆಯ ಕಣಜವಾಗಿವೆ.

ನಾಡಿನ ಚರಿತ್ರೆಯಲ್ಲಿ ಇದೊಂದು ಜನಪರ ಆಂದೋಲನ, ನಮ್ಮ ನಾಡಿನ ಚರಿತ್ರೆಯಲ್ಲಿ ಒಂದು ವಿಶಿಷ್ಟ ಘಟನೆಯಾಗಿದೆ. ಆಂದೋಲನದ ನೇರ ಧ್ವನಿ, ವಚನ ಸಾಹಿತ್ಯ ಅದರಲ್ಲೂ ವರ್ಣಭೇದ, ವರ್ಗಭೇದ, ಲಿಂಗಭೇದ, ನಿರಾಕರಣೆಗಳಂಥ ವಿಚಾರಗಳು ಸ್ಫೋಟಗೊಂಡುದು ಲಕ್ಷಿತ ಸಂಗತಿಯಾಗಿವೆ. ಇಲ್ಲಿ ಪುರುಷರಷ್ಟೇ ಪ್ರಧಾನವಾಗಿ ಮಹಿಳೆಯರೂ, ಕುಲಜರಷ್ಟೇ ಪ್ರಧಾನವಾಗಿ ಅಂತ್ಯಜರೂ, ಪ್ರಭುಗಳಷ್ಟೇ ಪ್ರಧಾನವಾಗಿ ಪ್ರಜೆಗಳು ಬಾಳಿದರು. ಹಾಗೂ ಬರೆದದ್ದು ಕೂಡಾ ಚಾರಿತ್ರಿಕ ಸತ್ಯ. ವಚನ ವಾಙ್ಮಯ ನಮ್ಮ ಪರಂಪರೆಯ ಅಪೂರ್ವ ಸಾಹಿತ್ಯಿಕ ಸೃಷ್ಟಿಯಾಗಿದೆ. ಅತ್ಮಕಲ್ಯಾಣದೊಂದಿಗೆ ಸಮಾಜ ಕಲ್ಯಾಣವನ್ನು ಕಾರ್ಯಗತಗೊಳಿಸಲು ಹೋರಾಡಿ ಮಡಿದ ಹುತಾತ್ಮರ ಸಾಹಿತ್ಯವಿದು. ಅಂದು ಬಸವಣ್ಣ ಸುಮಾರು ಒಂದು ಸಾವಿರಾರು ನಾಲ್ಕು ನೂರು ಆರು (1406) ವಚನಗಳನ್ನು ಜನಮುಖಿಯಾಗಿ ರಚಿಸಿದ್ದಾರೆ.

ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಯುದ್ಧಗಳು ಜರುಗಿವೆ. ಇವುಗಳ ನಡುವೆ ಅನಂತವಾದ ವಿಭಜನೆಗಳು ಮನುಷ್ಯ ಸಮಾಜವನ್ನು ಸೀಳಿ-ಸೀಳಿ ಅಣಕಿಸುವ ರೀತಿಯಲ್ಲಿ ಅಸಮಾನತೆಯ ವಿಷಬೀಜ ಬಿತ್ತುತ್ತಿವೆ. ಭಾರತೀಯವಾದ ಸಂದರ್ಭದಲ್ಲಿ ಹಿಂದೂ ಹಾಗೂ ಅದರ ವರ್ಣವ್ಯವಸ್ಥೆಯ ಕಾರಣದಿಂದ ಸಮಾಜಶಾಸ್ತçಜ್ಞರ ಅಧ್ಯಯನದಿಂದ ಶ್ರೇಣೀಕರಣಗೊಂಡ ಜಾತಿಗಳು ಸುಮಾರು ಇಂದು ಆರು ಸಾವಿರಕ್ಕೂ ಅಧಿಕ ಜಾತಿ ಮತ್ತು ಉಪ-ಜಾತಿಗಳು ಸೃಷ್ಟಿಯಾಗಿ ಇಡೀ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಯ ಅಸಮಾನತೆಯ ತಲ್ಲಣ ತಲೆದೋರಿದೆ.

ಜಾತಿ ವ್ಯವಸ್ಥೆಗೆ ಪ್ರಬಲವಾದ ಆಕರ ಮೂಲ ವೈದಿಕ ಪರಂಪರೆಯಾಗಿದೆ! ವೈದಿಕ ಪರಂಪರೆಯ ಜೊತೆಗೆ ಪರಂಪರೆಯ ಮಾರ್ಗವು, ಚಾರ್ವಾಕ ಪರಂಪರೆಯು, ಬಸವಾದಿ ಶರಣರ ಜಂಗಮ ಗುಣಗಳು, ಸಂತರಾಮದೇವ, ತುಕಾರಾಮ, ಕಬೀರ, ತುಳಸೀದಾಸ, ಮೀರಾಬಾಯಿ, ರೈದಾಸ, ಸಂತಶಿಶುನಾಳ ಷರೀಫ್ ಮುಂತಾದ ಅಪರೂಫದ ಭಕ್ತಿ ಪರಂಪರೆ ಕಂಡುಬರುತ್ತದೆ.

ಅದರಂತೆ ಹನ್ನೆರಡನೆಯ ಶತಮಾನದ ಬಸವಾದಿ ಶರಣರ ವಚನಗಳು ಬದುಕಿನ ಜೀವದುಸಿರಾಗಿ ಸಮಾಜವನ್ನು ಹೇಗೆ ಅಂತರ್‌ಗತವಾಗಿ ಬೆಸೆಯುತ್ತಿದ್ದವು ಎಂಬುದು ಕೂಡಾ ಮುಖ್ಯ ಸಂಗತಿಯಾಗಿದೆ. ವ್ಯಕ್ತಿತ್ವದ ವಿಕಾಸದಿಂದ ತಮ್ಮ ಹುಟ್ಟಿನ ಕಲ್ಮಶವನ್ನು ಕಳೆದುಕೊಂಡು ಮನದ ಮಲಿನತೆಯನ್ನು ಅಳಿದು ಶ್ರೇಷ್ಠರಾಗಿದ್ದಾರೆ. ತಾವು ಬದುಕಿ ಇತರರು ಬದುಕಲು ಅವಕಾಶ ಕಲ್ಪಿಸಿದ್ದಾರೆ. ಸರ್ವ ಸಮಾನತೆಯನ್ನು ಬಿಂಬಿಸುವುದೇ ಶರಣರ ಜೀವನದ ಪರಮ ಧ್ಯೇಯ. ನಿಜವಾಗಿಯೂ ದಲಿತ ವರ್ಗದಲ್ಲಿ ಜನ್ಮವೆತ್ತಿ ಸದ್ಗುರುಗಳ ಉಪದೇಶಾಮೃತದಿಂದ ಮೇಲೆದ್ದು, ಶ್ರೇಷ್ಠ ತತ್ವಜ್ಞಾನಿಯಾಗಿ, ಜೀವನ ಚೇತೋಹಾರಿ, ಸ್ಫೂರ್ತಿದಾಯಕ.

ಇವರಂತೆ ದಲಿತವರ್ಗದಲ್ಲಿ ಜನಿಸಿದ ಗುರುಮಾತೆ ಅಕ್ಕನಾಗಲಾಂಬಿಕೆ, ಅಕ್ಕಮಹಾದೇವಿ ಜೀವನಧಾರೆ, ಸತ್ಯಕ್ಕ, ಆಯ್ದಕ್ಕ ಲಕ್ಕಮ್ಮ, ಕಾಲಣ್ಣಿಯ ಕಾಮಮ್ಮ, ಸೂಳೆ ಸಂಕವ್ವೆ, ಕೊಟ್ಟಣ ಸೋಮಮ್ಮ, ಕದಿರ ರೆಮ್ಮವ್ವೆ, ಕೊಟ್ಟಣದ ಸೋಮಮ್ಮ, ಕಾಳೆವ್ವೆ, ಗಣೇಶ್ ಮಸಣಯ್ಯಗಳ ಪುಣ್ಯಸ್ತಿç, ಈಡಿಗರ ಶರಣೆ ಅಕ್ಕಮ್ಮ, ದುಗ್ಗಳೆ, ಗೊಗ್ಗವ್ವೆ, ಬೊಂತಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಮೋಳಿಗೆ ಮಹಾದೇವಿ, ಅಮುಗೆ ರಾಯಮ್ಮ, ಬಸವಣ್ಣ, ಅಲ್ಲಮ, ಚನ್ನಬಸವಣ್ಣ, ಅಂಬಿಗರ ಚೌಡಯ್ಯ, ಚೆನ್ನಯ್ಯ, ಧೂಳಯ್ಯ, ಹರಳಯ್ಯ, ಕಕ್ಕಯ್ಯ, ಶಿವನಾಗಿದೇವ, ಮಡಿವಾಳ ಮಾಚಯ್ಯ, ಹಡಪದ ಅಪ್ಪಣ್ಣ, ನುಲಿಯ ಚಂದಯಕ್ಯ, ಉರಿಲಿಮಗದೇವ, ಉರಿಲಿಂಗಪೆದ್ದಿ ಮುಂತಾದವರು ಪ್ರಮುಖವಾಗಿ ನಿಲ್ಲುತ್ತಾರೆ.

ಆ ಕಾಲದ ಸಾಮಾಜಿಕ ಜೀವನದಲ್ಲಿ ಕಂಡುಬಂದ ಮೂಢನಂಬಿಕೆಗಳನ್ನು ಡಾಂಬಿಕ ಆಚರಣೆಗಳನ್ನು, ಅಜ್ಞಾನವನ್ನು ಪ್ರತಿಭಟಿಸಿ, ಪರಿಶುದ್ಧವಾದ ಜೀವನವನ್ನು ರೂಪಿಸುವುದಕ್ಕೆ ಕಾರಣರಾದರು. ಧರ್ಮ, ಸಮಾಜ, ಸಾಹಿತ್ಯ ಈ ಮೂರು ಅಂಶದಲ್ಲಿ ಏಕಕಾಲಕ್ಕೆ ಕ್ರಾಂತಿಯೆಬ್ಬಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಅದರಲ್ಲಿ ವಿಶೇಷವಾಗಿ ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಇಂಥವರು ನಿರ್ದಾಕ್ಷಿಣ್ಯವಾದ ಕಟುವಚನಗಳನ್ನು ರಚಿಸಿದ್ದಾರೆ. ಅಂದಿನ ಹದಗೆಟ್ಟು ಸಾಮಾಜಿಕ ಜಾತಿವ್ಯವಸ್ಥೆ ಭೀಕರವಾದ ರೋಗಕ್ಕೆ ಎಲ್ಲಾ ಕಾಲಮಾನಕ್ಕೆ ಅನ್ವಯವಾಗುವಂತಹ ವಿಚಾರಗಳನ್ನು ಅರುವಿದ್ದಾರೆ.

ಅಂಬಿಗರ ಚೌಡಯ್ಯನ ವಚನಗಳು ಚಾಟಿ ಏಟಿನಂತೆ ಎಲ್ಲರನ್ನು ಗಾಸಿಗೊಳಿಸಿ ಹೊಡೆದೆಬ್ಬಿಸುತ್ತವೆ. ಪ್ರತಿಯೊಬ್ಬರಲ್ಲಿಯ ಕುಂದು ಕೊರತೆಗಳನ್ನು ನಿರ್ಧಾಕ್ಷಿಣ್ಯವಾಗಿ ಎತ್ತಿ ತೋರಿಸುತ್ತವೆ. ಅವನ ವಚನಗಳ ಮೇಲಿಂದ ಚೌಡಯ್ಯನು ಕಟು ಶಿವಭಕ್ತನಾಗಿದ್ದ. ಕೊಂಚವೂ ಅತ್ತಿತ್ತ ಅಲುಗದೆ ನೇರವಾಗಿ ಶಿವಭಕ್ತರತ್ತ ಸಾಗುವಂಥ ಅದ್ವಿತೀಯ ಶರಣನಾಗಿದ್ದನೆಂಬುದು ಆತನ (398) ಮುನ್ನೂರ ತೊಂಭತ್ತೆAಟು ವಚನಗಳು ಸಮಾಜವನ್ನು ವೈಚಾರಿಕವಾಗಿ ಮೆರೆಯುವಂತೆ ಅವರ ವಚನದಲ್ಲಿ ವಿಜೃಂಭಿಸಿದ್ದಾರೆ.

ವರ್ತಮಾನದ ದಿನಮಾನದಲ್ಲಿ ಭೌದ್ಧಿಕವಾಗಿ ಬೆಳೆದ ರಾಜಕಾರಣಿಗಳು, ಮಠಾಧೀಶರು, ಮುಲ್ಲಾಗಳು, ಪಾದ್ರಿಗಳು, ಚಿಂತಕರು ಅವರದೇ ಆದ ಬ್ಯಾರಿಕೇಡ್ ಹಾಕಿಕೊಂಡು ವ್ಯವಸ್ಥೆಯನ್ನು ಅನುಸಂಧಾನ ಮೂಲಕ ಬೆಸೆಯುವ ಪ್ರಯತ್ನದ ವಿರುದ್ಧ ಕಂಕಣ ಕಟ್ಟಿದ್ದಾರೆ. ನಾನು ಆರಂಭಿಕವಾಗಿ ಕಕೇಶಿಯನ್, ಮಂಗೋಲಿಯನ್, ದ್ರಾವಿಡ ಮೂಲ ಜನಾಂಗವನ್ನು ಗುರುತಿಸುವುದು ಇದೇ ಕಾರಣಕ್ಕೆ. ಆದರೆ ಇಂದು ಜಾತಿ ಮತ್ತು ಧರ್ಮಭೇದದ ವಿಷಬೀಜಕ್ಕೆ, ವಿಷ ಗೊಬ್ಬರ, ವಿಷದ ಔಷಧಿ ಮತ್ತು ಮಲಿನಗೊಂಡ ನೀರು ಎರೆದು ಮತಾಂಧತೆಯ ದೆವ್ವ ಗುಣಿತವನ್ನು ಕಾಣುವ ದುರದೃಷ್ಟ ಸಂಗತಿ ಒದಗಿಬಂದಿದೆ.

ನಮ್ಮ ಸಂಸ್ಕೃತಿ ಪರಾಕಾಷ್ಠೆಯ ಮುಗಿಲು ಮುಟ್ಟಿದರೂ ಜಾತಿಯೆಂಬ ಅರ್ಬುದ ರೋಗಕ್ಕೆ ಸಿಲುಕಿ ನರಳುತ್ತಿದೆ. ಪ್ರಜಾಪ್ರಭುತ್ವದ ಆಶಯ ಎಲ್ಲಾ ಕಾಲದಲ್ಲಿ ನೆಲೆಸಿರುತ್ತದೆ. ಸಾಮಾಜಿಕ ಅಸಮಾನತೆಯು ಶತ-ಶತಮಾನಗಳ ಯಾನ ಮುಂದುರೆದೆಯಿದೆ? ಅದರಲ್ಲೂ ಸಮಗ್ರಭಾಗವಾದ ತಳ ಸಮುದಾಯಗಳ ಅಲಕ್ಷಿತ ಜಾತಿಯ ಅನುಭಾವದ ವಚನಕಾರರು ಸಮಾಜವಿಜ್ಞಾನಿಗಳ ನಡೆಯಂತೆ ಮುಂದಾಗಿದ್ದಾರೆ.

ಅವರ ನಡೆ-ನುಡಿಯಲ್ಲಿ ಯಾವ ವ್ಯತ್ಯಾಸವಿಲ್ಲದ ಬದುಕಿನ, ಕ್ಲೇಶಭಾವ ತೋರದ ಅನುಭಾವಿ ವಚನಕಾರ ದಂಡು-ಹಿಂಡಾಗಿರುವುದನ್ನು ಅನುಭವ ಮಂಟಪದಲ್ಲಿ ವಿಜೃಂಭಿಸಿರುವುದು ಅವರವರ ಜಾತಿಯ ಮೂಲಕ ಪ್ರವೇಶ ಹೊಂದಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಸರ್ವಸಮಾನತೆಯ ಚಳುವಳಿಯಿಂದ ಪ್ರೇರಿತರಾಗಿ ಬಸವನೆಂಬ ಮಹಾವೃಕ್ಷದ ನೆರಳಲ್ಲಿ ಆಶ್ರಯ ಪಡೆದು ಸೇರಿದವರಲ್ಲಿ “ಘನವಂತ ಅಂಬಿಗರ ಚೌಡಯ್ಯ” ಆದ್ಯ ವಚನಕಾರರಾಗಿದ್ದರು. ಎಲ್ಲಾ ಕಾಲಗಳಲ್ಲಿ ಕೂಡಾ ಹೀನ ಜನಾಂಗದವರು ಇದ್ದರು, ಆದರೆ ಅವರಾರು ಮಾನಸಿಕವಾಗಿ ಹೀನರಾಗಿದ್ದಿರಲಿಲ್ಲಾ. ಅಂಥವರನ್ನು ಅವರಿಗೆ ಮಾನವ ಲಿಂಗದೀಕ್ಷೆಯನ್ನು ಬಸವಣ್ಣ ದಯಪಾಲಿಸಿದ್ದರು.

ಅರಮನೆ-ಗುರುಮನೆ-ದೇವಸ್ಥಾನಗಳಿಂದ ದೂರವೇ ಉಳಿದಿದ್ದರು. ಅವರೆಲ್ಲಾ ಜಾತ್ಯಾತೀತ ನೆಲೆಯಲ್ಲಿ ಸಮಾಜ ನಿರ್ಮಾಣಕ್ಕಾಗಿ ಮೇಲು-ಕೀಳನ್ನದೇ, ಸರ್ವರಿಗೂ ಒಳ್ಳೆಯದು ಮಾಡುವ ಮೂಲಕ – “ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲ ಸಂಗನ ಶರಣರೆ, ಕುಲಜನರು ಎಂದು ಸಾರಿದರು” ಅಂದು ದಲಿತ ಕುಲದವರೆಲ್ಲರೂ ಬಸವನ ತತ್ವಕ್ಕೆ ಆಕರ್ಷಿತರಾದರೆಂದರೆ ಅದೇನು ಯಾವ ಅತಿಶಯೋಕ್ತಿ ಎನಿಸುವುದಿಲ್ಲ. ಬಸವಣ್ಣನವರಂತೆ ಬ್ರಾಹ್ಮಣ ಕುಲದಲ್ಲಿ ಜನಿಸಿದವರೂ ಬಸವತತ್ವವನ್ನು ತಪ್ಪದೆ ಒಪ್ಪಿ ಪರಿಪಾಲಿಸಿ ಆತನ ವಿಚಾರಪಥವನ್ನು ಅರಿತ ಅನೇಕ ಘನವಂತ ಅನುಬಾವಿ ಶರಣ-ಶರಣೆಯರಿದ್ದರು.

ಶರಣ ಸಾಹಿತ್ಯದಲ್ಲಿ ಸರ್ವಜ್ಞವಾಣಿಯಿಂದ ಮೆರೆದ ವ್ಯಕ್ತಿ ಅಂಬಿಗರ ಚೌಡಯ್ಯ ಆ ಕಾಲಘಟ್ಟದ ವೈಚಾರಿಕ ಪ್ರಭೆಯಾಗಿದ್ದರು. ಅವರ ಚಿಂತನೆಯನ್ನು ಮಾಡಿದ ಬಂಡಾಯದ ಬಾವುಟ ಹಿಡಿದವರು. ಬದುಕೇ ಸ್ವರ್ಗ, ಆದರೆ ನಡೆಯುವ ಮಾರ್ಗ ನರಕವಾಗಬಾರದು. ಅದು ಮೂಢನಂಬಿಕೆ, ಅಜ್ಞಾನ, ಕಂದಾಚಾರ ದೇವರು, ಅಂಧಶ್ರದ್ಧೆ ಎಲ್ಲವನ್ನೂ ತಿರಸ್ಕರಿಸಿದ ಅಪರೂಪದ ಮೇರು ವ್ಯಕ್ತಿತ್ವದ ಪ್ರತಿಭೆ. “ಭೂತಕಾಲದ ಚರಿತ್ರೆಯನ್ನು ವರ್ತಮಾನ ಕಾಲದಲ್ಲಿ ಅವಲೋಕಿಸುವುದು ಬಹುಮುಖ್ಯ”.
ಈ ಹೊತ್ತಿನ ಅಂಬೇಡ್ಕರ್ ಮಾರ್ಗವು ಕೂಡ ಬಸವನ ವಿಚಾರಗಳನ್ನು ಅನುಸಂಧಾನದ ರೂಪದಲ್ಲಿ ಮುಂದುವರೆದಿದೆ.

ಆದ್ದರಿಂದ ಅಂಬೇಡ್ಕರ್ ಮಾತಿನಲ್ಲಿ “ಇತಿಹಾಸ ಅರಿಯದವ ಇತಿಹಾಸ ಸೃಷ್ಟಿಸಲಾರ, ಅಂದರೆ ಗತಕಾಲದ ಘಟನೆಯು ಇತಿಹಾಸವನ್ನು ವರ್ತಮಾನದ ಕನ್ನಡಿ ಸಹಾಯದಿಂದ ನೋಡಬೇಕಾಗುತ್ತದೆ” ಆದಕಾರಣ ಅಂಬಿಗರ ಚೌಡಯ್ಯ ಅವರ ಚಿಂತನ-ಮಂಥನ, ಅಗ್ನಿ-ನೀರಿನಂತೆ ನೋಡಿದಾಗ ಜಗತ್ತಿನ ದೇಶಗಳು ನಾಗರೀಕರಣದ ಕಾರಣದಿಂದ ಸಮೀಪವಾಗುತ್ತದೆ. ನಾಗರೀಕ ಸಾಧನವಿಲ್ಲದಲ್ಲಿ ದೇಶದ ಮೂಲೆ-ಮೂಲೆಗಳಿಂದ ಬಂದ ಶರಣರ ದಂಡು-ಹಿAಡಾಗಿ ಒಂದು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ಬಹುದೊಡ್ಡ ಸಾಮಾಜಿಕ ಚರಿತ್ರೆಯನ್ನು ಕನ್ನಡ ನಾಡಿನಲ್ಲಿ ಬರೆದಿದ್ದು ಅದ್ಭುತವಾದ ಶಕ್ತಿಯೆಂದು ಪರಿಗ್ರಹಿಸಬಹುದು!

ಹೀಗೆ ಶರಣ-ಶರಣೆಯರು ಮಾಡಿದ ಸೇವೆ ಅನಂತವಾದುದು. ಅವರು ಚಿಂತಿಸಿದ ವಿಚಾರಪಥ ಜನಮಾನಸದಲ್ಲಿ ಬೆರೆತು ಪರಿವರ್ತನಾಶೀಲರಾಗಿದ್ದು, ಜಾತಿಯ ಮೋಹಕ್ಕೆ ಹಿಂಬು ನೀಡಿದವರಲ್ಲ, ಆದರೆ ಇಂದು ಅದು ಬೇರೆಯೇ ಆಗಿದೆ. ಆದಕಾರಣ ಈಗಾಗಲೇ ದಮನಿತ ಸಮುದಾಯಗಳಲ್ಲಿ ಜನಿಸಿದ ಬುದ್ಧಪ್ರಜ್ಞೆಯ ಅನುಭಾವಿಗಳನ್ನು ಕುರಿತು ಚರ್ಚಿಸಿದ್ದೇನೆ.

ವಚನಗಳ ಆಶಯವೇ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗಿರುವಂತವು, ಜೊತೆಗೆ ಅವರು ಜನಸಾಮಾನ್ಯರಾಗಿದ್ದವರು. ಚಳುವಳಿಯ ನಾಯಕ ಬಸವಣ್ಣ ಆಗಿದ್ದರು, ಅವರು ಎಂದು ನಾಯಕರಾಗಿರಲಿಲ್ಲ. ಅವರದು ಒಂದು ರೀತಿಯ ಕಿಂಗ್ ಮೇಕರ್‌ರಾಗಿದ್ದವರು. ಅವರುಗಳಲ್ಲಿ ಅಲ್ಲಮ, ಸಿದ್ಧರಾಮ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ, ಮಾಚಯ್ಯ, ಚನ್ನಯ್ಯ, ಧೂಳಯ್ಯ, ಹರಳಯ್ಯ ಮತ್ತು ಚನ್ನಬಸವನಂತಹ ಅನುಭಾವಿ ವಚನಕಾರರು ಚಳುವಳಿಯ ಪ್ರಮುಖ ನಾಯಕರಾಗಿದ್ದವರು ಎಂಬ ಸಂಗತಿಯನ್ನು ಬಸವಣ್ಣ ತನ್ನ ವಚನದಲ್ಲಿ ವಿಶ್ಲೇಷಿಸಿದ್ದಾರೆ.

ಬಸವಣ್ಣನವರ ಬದುಕು ಪಾರದರ್ಶಕವಾಗಿತ್ತು. ಅವರು ಬದುಕಿದ್ದನ್ನೇ ಬರೆದರು. ಬರೆದದ್ದನ್ನೇ ಉಪದೇಶಿಸಿದರು. ಅವರ ಬದುಕೇ ಒಂದು ಉಪದೇಶವಾಗಿತ್ತು. ಆದರೆ ಇಂದು ಉಪದೇಶವೇ ಬದುಕಿನ ಬಂಡವಾಳವಾಗುತ್ತದೆ. ನಮ್ಮ ಕೆಲವು ಧರ್ಮಾಧಿಕಾರಿಗಳ, ಮಠಾಧೀಶರ ನಿತ್ಯ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ. ಈ ಮಾತು ಉತ್ಪೆçÃಕ್ಷೆ ಎನಿಸುವುದಿಲ್ಲ. ಜನರಲ್ಲಿ ನೈತಿಕಪ್ರಜ್ಞೆ ಬೆಳಸಿ, ಸಮಾಜ ಸಂಘಟನೆ ಮಾಡಬೇಕಾಗಿದ್ದ ಈ ಗುರು ವರ್ಗದವರೇ ವಾಮಮಾರ್ಗಿಗಳಾಗಿ ಅಧಿಕಾರಕ್ಕಾಗಿ ಕಿತ್ತಾಡುವವರನ್ನು ನೋಡುತ್ತೇವೆ. ಜೊತೆಗೆ ಅನುಭಾವ ಪರಂಪರೆಗೆ ಮೋಸವೆಸಗುತ್ತಿದ್ದಾರೆ. ಬಡವರ ತೆರಿಗೆಯ ಅನ್ನವನ್ನು ಕೈಚಾಚಿ ಬೇಡುತ್ತಾರೆ. ಇದು ರೀತಿಯಲ್ಲಿ ಸಾಮಾಜಿಕ ದ್ರೋಹ ಹಾಗೂ ಕಲ್ಯಾಣದ ಚಿಂತನೆಗೆ ಎಳ್ಳು-ನೀರನ್ನು ಇವರೇ ಬಿಡಲು ಮುಂದಾಗಿದ್ದಾರೆ.

ಬದುಕಿನ ಬೆಳಕಾದ, ಮಹಾಬೆಳಕಾದ ಬುದ್ಧ, ಮಹಾವೀರ ಮತ್ತು ಬಸವನ ತತ್ವಗಳನ್ನು ಇವತ್ತಿನ ಸಮಾಜ ಸರಿಯಾಗಿ ಅರ್ಥಮಾಡಿಕೊಂಡರೆ ಯುದ್ಧ ಭೀತಿಯೂ ಬರದು. ಬುದ್ಧನು ಚಿಂತನೆಯಂತೆ ಮನುಕುಲದ ಮುಂದೆ ಎರಡು ಪ್ರಶ್ನೆಗಳೂ “ಯುದ್ಧ ಮತ್ತು ಬುದ್ಧ” ನಾವು ಬುದ್ಧನನ್ನು ಆಯ್ಕೆ ಮಾಡಿಕೊಂಡರೆ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗುತ್ತದೆ. ಅಂತಹ ಸುಂದರ ಕನಸಿನ ಬುದ್ಧನೊಂದಿಗೆ ಸಂವಾದಕ್ಕೆ ಇಳಿದರೆ, ಅದರ ಪಾತಳಿಯ ಅಂಶಗಳು ತ್ವೊರೆಯಂತೆ ಚಿಮ್ಮಿ ಹರಿಯುತ್ತದೆ!

ಬುದ್ಧ ಚಿಂತಿಸಿದ ಅತ್ಯಂತ ಸರಳವಾದ ವಿಚಾರಗಳು ಎಲ್ಲಾ ಕಾಲದಲ್ಲಿ ಅಳವಡಿಸಿಕೊಳ್ಳಲು ಯಾವ ಆತಂಕವಿಲ್ಲಾ. ಬುದ್ಧನ ಜೀವ ಪರ, ಮಾನವ ಪರ, ಕಲ್ಯಾಣ ಪರವಾದ ಚಿಂತನೆಗಳಾದ ಶೀಲ, ಸಮಾಧಿ ಮತ್ತು ಪ್ರಜ್ಞೆ ಈ ಮೂರು ಬುದ್ಧನ ಶ್ರೇಷ್ಠಮಟ್ಟದ ಚಿಂತನೆಗಳು. ಇವುಗಳಲ್ಲಿ ಒಂದನ್ನು ಬಿಟ್ಟು ಇನ್ನೊಂದನ್ನು ಸ್ವತಂತ್ರವಾಗಿ ಸಾಧಿಸಲು ಹೊರಟರೆ ಗುರಿಮುಟ್ಟಲು ಸಾಧ್ಯವಾಗುವುದಿಲ್ಲ. ಪೂರ್ಣಮಟ್ಟದ ಶೀಲವನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಧಿ ತಲುಪಲು ಸಾಧ್ಯ. ಸಮಾಧಿ ಸಿದ್ಧಿಸದೆ ಪ್ರಜ್ಞೆ ಮೂಡುವುದಿಲ್ಲ.

ಪ್ರಜ್ಞೆ ಇಲ್ಲದೆ ನಿರ್ವಾಣದ ಪರಮ ಶಾಂತಿ ದೊರೆಯುದಿಲ್ಲ. ಶೀಲವೆಂದರೆ ಒಳ್ಳೆಯ ನಡೆತೆ, ಒಳ್ಳೆಯ ಚಾರಿತ್ರ್ಯ , ಸಮಸ್ತ ಜೀವ ಸಂಕುಲದ ಒಳಿತಿಗಾಗಿ ಚಿಂತನೆ ಮತ್ತು ಪ್ರಯತ್ನ ಎಂದು ಅರ್ಥ. ಸಮಾಧಿ ಎಂದರೆ ಧ್ಯಾನಭ್ಯಾಸದಲ್ಲಿ ಸಾಧಿಸುವ ಸ್ಥಿರ ಚಿತ್ತದ ಏಕಾಗ್ರತೆ. ಪ್ರಜ್ಞೆ ಎಂದರೆ ಸಮಾಧಿ ಸ್ಥಿತಿಯಲ್ಲಿ ದೊರೆಯುವ ಇಂದ್ರಿಯಾತೀತವಾದ ಜ್ಞಾನವೆಂದು ಅರ್ಥ.

ಇವು ಸಕಲ ಜೀವ ಸಂಕಲ್ಪಕ್ಕೂ ಅನ್ವಯವಾಗುತ್ತದೆ. ಹಾಗಾಗಿ ಬೌದ್ಧ ಧರ್ಮ ಪ್ರತಿಯೊಬ್ಬ ಕೂಡ ಪಂಚಶೀಲಗಳನ್ನು ತಪ್ಪದೆ ಪಾಲಿಸಬೇಕೆಂದು ಉಪದೇಶಿಸುತ್ತದೆ. ಕೊಲೆ, ಕಳ್ಳತನ, ಸುಳ್ಳು, ವ್ಯಭಿಚಾರ ಮತ್ತು ಮಧ್ಯಪಾನ ಇವುಗಳನ್ನು ಸಂಪೂರ್ಣವಾಗಿ ತ್ಯಜಿಸುವುದು. ಹೀಗೆ ಸಮಾಜದ ಮೂಲ ಘಟಕವಾದ ವ್ಯಕ್ತಿಶೀಲವಂತನಾದರೆ ಸಮಾಜವು ಶಾಂತಿಯಿಂದ, ನೆಮ್ಮದಿಯಿಂದ ಜೀವಿಸುತ್ತದೆ. ಸಮಾಜವು ಉತ್ತಮವಾದರೆ ರಾಷ್ಟç ಮತ್ತು ಜಗತ್ತು ಹಿಂಸೆ, ಶೋಷಣೆ ಇಲ್ಲದೆ ಶಾಂತಿ ನೆಮ್ಮದಿಯಿಂದಿರುತ್ತದೆ.

ಧ್ಯಾನಮಾರ್ಗದಿಂದ ಸಮಾಧಿ ಸ್ಥಿತಿಯನ್ನು ಹೊಂದುವುದರಿAದ ಮನಸ್ಸು ಪರಿಶುದ್ಧವಾಗುತ್ತದೆ. ಲೋಭ, ಮೋಹ, ದ್ವೇಷ, ಅಸೂಯೆ, ಅಹಂಕಾರ, ಕ್ರೌರ್ಯ ಮುಂತಾದ ದುರ್ಗಣಗಳನ್ನು ಧ್ಯಾನದ ಮೂಲಕ ನಾಶಮಾಡಿ ಸಮಚಿತ್ತವನ್ನು ಹೊಂದುವುದು. ತಮ್ಮ ಸಾಕ್ಷಾತ್ಕಾರಕ್ಕೆ ಅತ್ಯಂತ ಮುಖ್ಯವಾಗುವುದು. ಈ ರೀತಿಯಾಗಿ ಬುದ್ಧನು ತಾನು ಕಂಡುಹಿಡಿದ ಅನುಸರಿಸಿದ ಅಷ್ಟಾಂಗ ಮಾರ್ಗವನ್ನು ಅಭ್ಯಾಸ ಮಾಡಿದರೆ ಸಕಲ ದುಃಖಗಳಿಂದ ಮುಕ್ತಿ ಹೊಂದಿ ಬುದ್ಧನು ಅನುಭವಿಸಿದ ಪರಿಮಶಾಂತಿಯ ನಿರ್ವಾಣ ಸುಖವನ್ನು ಅನುಭವಿಸಿ ಹರಹಂತ ಸ್ಥಿತಿಯನ್ನು ತಲುಪಬಹುದೆಂದು ತಿಳಿಸಿದರು.

ವಚನ ಸಾಹಿತ್ಯ ಸುಲಭ, ಸರಳ, ಸುಸ್ಪಷ್ಟ ಎಂಬ ಸಂಗತಿಗಳಿಂದ ಕೂಡಿದೆ. ಇವು ವೈವಿಧ್ಯ ಮತ್ತು ವೈರುಧ್ಯಗಳ, ಲೋಕದೃಷ್ಟಿ, ಲೋಕಾನುಭಾವದ ಪರಿಣಾಮವಾಗಿ ಕಸುಬುದಾರರಿಗೆ ಹಾಗೂ ಮಹಿಳೆಯರು ಸೇರಿದಂತೆ ವಿವಿಧ ಕುಲ ಕಸುಬಗಳ ಜನರ, ಅವರ-ಅವರ ನಡುವೆಯೇ ಎತ್ತರದ ವಿಚಾರ ಪಥವನ್ನು ಮುಕ್ತವಾಗಿ ಸಾಮಾಜಿಕ ನೆಲೆಯಲ್ಲಿ ಮಂಡಿಸುತ್ತಿದ್ದರು.

ಅವರುಗಳಲ್ಲಿ ಪ್ರಮುಖವಾಗಿ ಅಧ್ಯಾತ್ಮಿಕ ಸಮಾನತೆಯ ಆದರ್ಶದ ನೆಲೆಯಲ್ಲಿ ಅಕ್ಕಿ ಆರಿಸುವರು, ಕಸಗುಡಿಸುವರು, ಕಟ್ಟಿಗೆ ಮಾರುವರು, ಜೋಡು ತಯಾರಿಸುವರು, ಬಟ್ಟೆ ತೊಳೆಯುವರು, ಹಡಪದ ಕೆಲಸ ಮಾಡುವವರು, ಅಗ್ಗ-ಕಣ್ಣಿ ಮತ್ತು ಕೃಷಿಯ ಪರಿಕರಗಳನ್ನು ರಾಟೆಯ ಕೆಲಸ, ಬಡಿಗೆ ಜಾತಿಯ, ಶುದ್ಧ-ಸಿದ್ಧ ಪ್ರಸಾದ ತಯಾರಿಸುವ, ಹೆಂಡದ ಮತ್ತನ್ನು ಬಿಡಿಸಿ, ಜ್ಞಾನದ ಮತ್ತನ್ನು ಕುಡಿಸಿ ಪಂಚಶೀಲವನ್ನು ನೆನಪಿಸುವ, ಧೂಪದ ಕಾಯಕ, ಸುಖ ಬೋಗವನ್ನು ತೊರೆದ ಬೊಂತಾದೇವಿ ಕಾಶ್ಮೀರದ ರಾಜನ ಮಗಳು, ಬುದ್ಧನ ಅರಮನೆ ತೊರೆದಂತೆ ಕಟ್ಟಿಗೆ ಮಾರುವ ಮಹಾದೇವಿ ರಾಯಮ್ಮ ನೆಯ್ಗೆಯ ಕಾಯಕ. ಕಾಯಕದ ಹಿಂಡು-ದಂಡಾಗಿರುವುದನ್ನು ಜಾತಿ ಮೂಲದ ವಚನಕಾರ ಮೂಲಕ ಸಾಮಾಜಿಕ ಅಸಮಾನತೆ ಮತ್ತು ಜಾತಿವಿನಾಶದ ಹೋರಾಟಗಳಿಗೆ ಸ್ಫೂರ್ತಿ ತುಂಬುವ ಪ್ರಾಚೀನ ವಿಚಾರಧಾರೆಗಳೆಂದು ನೆನೆಯಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

Trending