Connect with us

ದಿನದ ಸುದ್ದಿ

ದಲಿತ ರಾಜಕೀಯ – ದಲಿತ ಚಳವಳಿಯ ಚಿಲ್ಲರೆ ಅಂಗಡಿಗಳ ಜೋರು ವ್ಯಾಪಾರದ ಈ ಕಾಲದಲ್ಲಿ

Published

on

  • ಬಿ.ಎಲ್.ರಾಜು, ಪ್ರಾಧ್ಯಾಪಕರು, ಸಾಗರ

ನಾವು ನಮಗೆ ಕೇಳಿಕೊಳ್ಳಲೇಬೇಕಾದ ಕೆಲವು ಪ್ರಶ್ನೆಗಳು ನನ್ನನ್ನು ಕಾಡುತ್ತಿವೆ. ಭೂಮಿ, ಬಂಡವಾಳ ಮತ್ತು ರಾಜಕೀಯಾಧಿಕಾರಗಳನ್ನು ಮೇಲ್ಜಾತಿಗಳ ಶಾಶ್ವತ ಕಬ್ಜಾದಲ್ಲಿರಿಸಿ ಸೃಷ್ಟಿಸಲಾಗಿರುವಂತದ್ದು ಜಾತಿವ್ಯವಸ್ಥೆ. ಇದೊಂದು ಶುದ್ದ ರಾಜಕೀಯ- ಆರ್ಥಿಕ ಸಂಚು. ಆದರೆ ಅದು ಕಾರ್ಯಾಚರಣೆ ಮಾಡುವುದು ಸಮಾಜದಲ್ಲಿ. ಸಾಮಾಜಿಕ ಕ್ರಿಯೆಗಳ ಮೂಲಕ ಆ ರಾಜಕೀಯ ಆರ್ಥಿಕ ವ್ಯವಸ್ಥೆಗಳು ತಮ್ಮ ಶಕ್ತಿ- ಸಂಪನ್ಮೂಲಗಳನ್ನು ಕೆಳಜಾತಿಗಳಿಗೆ ನಿರಾಕರಿಸುತ್ತವೆ. ಅದರ ಭಾಗವಾಗಿ ಮಡಿ, ಮೈಲಿಗೆ, ಮೇಲು ಕೀಳು, ಶುದ್ಧ ಅಶುದ್ದ ಪರಿಕಲ್ಪನೆಗಳನ್ನು ಗ್ರಹಿಸಬೇಕು.

ಆ ರಾಜಕೀಯ ಆರ್ಥಿಕ ಶಕ್ತಿ ಸಂಪನ್ಮೂಲಗಳ ಮೇಲೆ ದಲಿತರು ಹಿಡಿತ ಸಾಧಿಸಲು ಎಲ್ಲಿಯವರೆಗೆ ಸಾಧ್ಯವಿಲ್ಲವೊ ಅಲ್ಲಿಯವರೆಗೆ ಜಾತಿ ತಾರತಮ್ಯಗಳು ಸಾಯುವುದಿಲ್ಲ. ಜಾತಿ ವ್ಯವಸ್ಥೆ ನಿರಂತರವಾಗಿ ಮುಂದುವರೆಯುತ್ತದೆ.

ಭೂಮಿ ಬಂಡವಾಳ ರಾಜಕೀಯಾಧಿಕಾರಗಳ ನಿರಂತರ ನಿರಾಕರಣೆಗೆ ಒಳಗಾದ ಈ ದೇಶದ ಸಾವಿರಾರು ತಬ್ಬಲಿ ಕೆಳಜಾತಿ ಸಮುದಾಯಗಳಿಗೆ ಬಿಡುಗಡೆಯ ದಾರಿಯನ್ನು ತೋರಿದ್ದು ಬಾಬಾಸಾಹೇಬರು. ಅವರು ತಮ್ಮ ಚಿಂತನೆ, ಕ್ರಿಯೆ ಮತ್ತು ಹೋರಾಟಗಳ ಮೂಲಕ ರೂಢಿಸಿಕೊಟ್ಟ ಜ್ಞಾನಮಾರ್ಗವೇ ದಲಿತರ ಬಿಡುಗಡೆಯ ದಾರಿ. ಇದೇ ದಾರಿಯಲ್ಲಿ ಹೋಗಿದ್ದರೆ ತಳಸಮುದಾಯಗಳು 21 ನೇ ಶತಮಾನದ ಸವಾಲುಗಳನ್ನೆದುರಿಸಲು ಸಜ್ಜಾದ ಜ್ಞಾನಸಮುದಾಯಗಳಾಗಿ ಮೇಲೇಳುವ ಎಲ್ಲಾ ಅವಕಾಶಗಳಿದ್ದವು.

ಆದರೆ ಜ್ಞಾನ ಮಾರ್ಗವನ್ನು ಬಲವಾಗಿ ಅಪ್ಪಿಕೊಂಡು ಮುನ್ನಡೆಯಬೇಕಿದ್ದ ದಲಿತ ಸಮುದಾಯಗಳು ಆತ್ಮವಂಚನೆಯ ವಿರಾಟ್ ಕಾಲಘಟ್ಟದಲ್ಲಿವೆ. ಸವಲತ್ತುಗಳನ್ನ ಪಡೆದುಕೊಂಡ ದಲಿತರಲ್ಲಿನ ಮಧ್ಯಮ ಮತ್ತು ಮೇಲ್ವರ್ಗಗಳು, ಜಾತಿವ್ಯವಸ್ಥೆಯಲ್ಲಿರುವ ಮೇಲ್ಜಾತಿಗಳ ಎಲ್ಲಾ ವ್ಯಸನಗಳನ್ನು ತಮ್ಮದನ್ನಾಗಿಸಿಕೊಂಡಿವೆ. ಆ ವ್ಯಸನಗಳನ್ನೇ ತಮ್ಮ ಶ್ರೇಷ್ಟತೆಯ ಗುರುತುಗಳನ್ನಾಗಿ ಮಾಡಿಕೊಂಡಿವೆ. ಈ ಎರಡೂ ವರ್ಗಗಳಿಗೆ ಬಾಬಾಸಾಹೇಬರು ಕಟ್ಟಿಕೊಟ್ಟ ಮೌಲ್ಯಗಳಾಗಲಿ, ತೋರಿದ ಜ್ಞಾನಮಾರ್ಗವಾಗಲಿ, ಆಧ್ಯಾತ್ಮದ ದಾರಿಯಾಗಲಿ ಬೇಕಿಲ್ಲದ ಸ್ಥಿತಿಗೆ ಬಂದು ನಿಂತಿವೆ. ತಮ್ಮ ಶೋಷಕ ವ್ಯವಸ್ಥೆಯು ಕಟ್ಟಿಕೊಟ್ಟ ಮನುಪ್ರಣೀತ ಆಚರಣೆ, ಸಂಪ್ರದಾಯಗಳಲ್ಲೆ ಸುಖಿಸುತ್ತಿವೆ. ಇದೊಂತರ ಸ್ಟಾಕ್ ಹೋಂ ಸಿಂಡ್ರೋಪಮ್. ಶೋಷಕನನ್ನೆ ಮೆಚ್ಚಿ ಅನುಕರಿಸುವುದು.

ಇದೇ ದಲಿತ ಮಧ್ಯಮ, ಮೇಲ್ವರ್ಗಗಳು ತಮ್ಮ ಅಹಮ್ಮಿಗೆ, ಅನುಕೂಲಕ್ಕೆ, ಸವಲತ್ತುಗಳಿಗೆ ಏಟುಬಿದ್ದಾಗ ಮಾತ್ರ ಅಂಬೇಡ್ಕರರ ಸಂವಿಧಾನದ ಆಸರೆ ಪಡೆಯುತ್ತವೆ.

ಸಂಖ್ಯೆಯಲ್ಲಿ ಬಹುಸಂಖ್ಯಾತರಾದ ದಲಿತರ ಕೆಳ/ಬಡವರ್ಗ ತನ್ನ ಅಸ್ಥಿತ್ವಕ್ಕಾಗಿ ಅನ್ನ, ಸೂರು, ಬಟ್ಟೆಗಳಂತ ಪ್ರಾಥಮಿಕ ಅವಶ್ಯಕತೆಗಳಿಗಾಗಿ ಸಂವಿಧಾನ ಜಾರಿಗೆ ಬಂದು 75 ವರ್ಷಗಳ ನಂತರವೂ ಹೆಣಗಾಡುತ್ತಲೇ ಇವೆ. ಈಗಲೂ ಅವು ಅತ್ಯಂತ ಹೀನಾಯ & ಅನಾಥ ಸ್ಥಿತಿಯಲ್ಲಿವೆ.

ಭಾರತದ ಮಟ್ಟಿಗೆ ತುಂಬಾ ಅತ್ಯಂತ ವೈಚಾರಿಕ ಮಾನವೀಯತೆಯ ನೆಲೆಗಟ್ಟನ್ನ ಪ್ರತಿಪಾದಿಸಿ, ಪ್ರಜಾಪ್ರಭುತ್ವದ ಆತ್ಯಂತಿಕ ಆದರ್ಶಗಳನ್ನು ಸಂವಿಧಾನಕ್ಕೆ ಅಳವಡಿಸಿದ ಬಾಬಾಸಾಹೇಬರ ಚಿಂತನಾಧಾರೆ ಭಾರತೀಯರಿಗೆ ಧಾರಾಳವಾಗಿ ಹರಿದುಬಂದದ್ದು ಅವರ ಮಹಾಪರಿನಿಬ್ಬಾಣದ ನಂತರವೆ.. ಅದರಲ್ಲೂ ಎಪ್ಪತ್ತರ ದಶಕದಲ್ಲಿ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಪ್ರೊ. ಬಿ. ಕೃಷ್ಣಪ್ಪನವರು ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿದ ನಂತರ.

ಪ್ರೊ. ಬಿ.ಕೆ.ಯವರು ಬಾಬಾಸಾಹೇಬರ ಚಿಂತನೆಯನ್ನು ತನ್ನ ಭಾಷಣ, ಹಾಡು, ಹೋರಾಟ, ಪ್ರತಿಭಟನೆಗಳ ಭಾಗವಾಗಿಸಿಕೊಂಡು ರಾಜ್ಯದ ಪ್ರತಿ ದಲಿತರ ಕೇರಿಗೆ ಕೊಂಡೊಯ್ದರು. ಸಾವಿರಾರು ವರ್ಷ ಅಸ್ಪೃಶ್ಯತೆಯ ಕಳಂಕ ಹೊತ್ತು ಗುಲಾಮಗಿರಿಯಲ್ಲೇ ಉಸಿರಾಡಿಕೊಂಡಿದ್ದ ಜನರ ನರನಾಡಿಗಳಿಗೆ ಬಾಬಾಸಾಹೇಬರ ಚಿಂತನೆಯನ್ನು ತುಂಬಿದರು, ಆ ಮೂಲಕ ರಾಜಕೀಯ ಪ್ರಜ್ಞೆ ಮತ್ತು ಪ್ರತಿಭಟನೆಯ ಕೆಚ್ಚನ್ನು ಜಾಗೃತಗೊಳಿಸಿದರು.

ದಲಿತರ ನೋವಿಗಷ್ಟೇ ಅಲ್ಲ, ಹಿಂದುಳಿದ ವರ್ಗಗಳ ಪಾಲಿಗೂ ಭರವಸೆ ತುಂಬಿದವರು ಪ್ರೊ. ಬಿ.ಕೆ.
ಆ ಹೊತ್ತಿಗೆ ಎಚ್ಚೆತ್ತ ದಲಿತ ಅಕ್ಷರಸ್ಥ ತಲೆಮಾರು ಪ್ರೊ. ಬಿ. ಕೃಷ್ಣಪ್ಪನವರ ಹೋರಾಟದ ಸಾಗರಕ್ಕೆ ಹರಿದು ಬಂತು. ಅವರ ಅದಮ್ಯ ಹೋರಾಟದ ಕುಲುಮೆಯಲ್ಲಿ ಕವಿಗಳಾಗಿ, ಹೋರಾಟಗಾರರಾಗಿ, ಸಾಹಿತಿಗಳಾಗಿ, ಯುವ ಮುಂದಾಳುಗಳಾಗಿ ಮೇಲೆದ್ದರು. ಅಷ್ಟರಮಟ್ಟಿಗೆ ಸ್ಥಗಿತಕೊಂಡಿದ್ದ ರಾಜ್ಯದ ರಾಜಕಾರಣವನ್ನು ಬೆಚ್ಚಿಬೀಳಿಸಿದ್ದು, ಫ್ಯೂಡಲ್ ಶಕ್ತಿಗಳನ್ನು ಬಗ್ಗಿಸಿದ್ದ ಪ್ರೊ. ಬಿ. ಕೃಷ್ಣಪ್ಪ ದಲಿತ ಚಳವಳಿ ಕರ್ನಾಟಕದ ಚೆರಿತ್ರೆಯನ್ನು ಇನ್ನೊಂದು ಮಗ್ಗುಲಿಗೆ ಹೊರಳಿಸಿದರು.

ಬಿ. ಕೆ. ಯವರ ನಂತರ ಬಂದ ದಲಿತ ರಾಜಕಾರಣಿಗಳು ಮತ್ತು ಹೋರಾಟದ ದಾರಿಗೆ ನುಸುಳಿದ ಅವಕಾಶವಾದಿಗಳಿಬ್ಬರೂ ಸೇರಿ ಪ್ರೊ. ಬಿ.ಕೆ.ಕಟ್ಟಿದ ದಲಿತ ಚಳವಳಿಯನ್ನು ಒಳಜಾತಿಗಳ ಆಧಾರದ ಮೇಲೆ ಹತ್ತಾರು ಬಣಗಳಾಗಿ ಒಡೆದರು. ಅವರ ವಯಕ್ತಿಕ ದರ್ದುಗಳ ನಿವಾರಣೆಗೆ ಚಳವಳಿಯನ್ನು ಬಲಿಕೊಟ್ಟರು. ದಲಿತರ ಮೇಲಿ ದೌರ್ಜನ್ಯಗಳು ಮಿತಿಮೀರಿದ ಹೊತ್ತಲ್ಲೆ ಈ ದಲಿತ ರಾಜಕಾರಣ-ಚಳವಳಿಯ (ನ)ಕಲಿಗಳು ತಮ್ಮ ಹೊಟ್ಟೆ ತುಂಬಿಸಿಕೊಂಡರು.

ಪ್ರೊ. ಬಿ. ಕೆ. ಯವರೇ ಕೊನೆ..
ಆನಂತರ ರಾಜ್ಯದ ಯಾವ ಮೂಲೆಯಿಂದಲಾದರೂ ಸರಿ, ಅಖಂಡ ದಲಿತ ಸಮುದಾಯದ ಏಳಿಗೆಗೆ ಬದ್ಧನಾದ ಒಬ್ಬನೇ ಒಬ್ಬ ರಾಜಕೀಯ ನಾಯಕನಾಗಲಿ, ಅಖಂಡ ದಲಿತ ಚಳವಳಿಗೆ ಕಟಿಬದ್ಧನಾದ ಒಬ್ಬ ಚಳವಳಿಗಾರನಾಗಲಿ ಈ ಹೊತ್ತಿಗೂ ಹುಟ್ಟಿಬರಲಿಲ್ಲ. ದಲಿತ ರಾಜಕಾರಣ ಮತ್ತು ದಲಿತ ಚಳವಳಿಗಳು ಈಗ ಕೇವಲ ಒಳಜಾತಿಗಳ ಮೇಲಾಟಗಳು ಮಾತ್ರ. ಅಂಬೇಡ್ಕರರು ಕೇವಲ ಒಂದು ಫೋಟೊ ಆಗುವುದು ಮತ್ತು ಬಿ.ಕೆ.ಯವರನ್ನು ಒಂದು ಹೆಸರನ್ನಾಗಿಸಿ ಮರೆವಿಗೆ ಸರಿಸುವುದು ಅವರ ಹಿಡನ್ ಅಜೆಂಡಾ.

ಇದನ್ನು ಸರಳವಾಗಿ ರೂಪಕಾತ್ಮಕವಾಗಿ ಹೇಳುವುದಾದರೆ ದಲಿತರ ಬೀದಿಗಳಲ್ಲಿ ರಾಜಕೀಯ ಮತ್ತು ಚಳವಳಿಗಳ ಚಿಲ್ಲರೆ ಅಂಗಡಿಗಳು ತಲೆ ಎತ್ತಿವೆ. ಒಂದೊಂದು ಅಂಗಡಿಯಲ್ಲಿ ಒಂದೊಂದು ವ್ಯಾಪಾರ. ಲಾಭವೇ ವ್ಯಾಪಾರದ ಅಂತಿಮ ಗುರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ

Published

on

ಸುದ್ದಿದಿನಡೆಸ್ಕ್:ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕದ ಕಡಿತದಿಂದ ತೊಂದರೆಗೊಳಗಾಗದಂತೆ ನಾಳೆ ಮತ್ತು ಇದೇ 15ರ ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್ ಕೌಂಟರ್‌ಗಳು ತೆರೆದಿರಲಿವೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕ ಕಡಿತದಿಂದ ತೊಂದರೆಗೆ ಒಳಗಾಗಬಾರದು ಹಾಗೂ ಆನ್‌ಲೈನ್ ಪೇಮೆಂಟ್ ಬಳಸದವರ ಅನಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬಿಲ್ ಬಂದ 30 ದಿನದೊಳಗೆ ವಿದ್ಯುತ್ ಶುಲ್ಕ ಪಾವತಿಸದಿದ್ದಲ್ಲಿ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಿದ್ದು, ಸೆಪ್ಟೆಂಬರ್ 1ರಿಂದಲೇ ಈ ನಿಯಮ ಜಾರಿಯಾಗಿದೆ ಎಂದು ಹೇಳಿದೆ.

ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂಪಾಯಿ ಗಳಿಗಿಂತ ಅಧಿಕವಾಗಿದ್ದಲ್ಲಿ, ಅಂತಹ ಸ್ಥಾಪನಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ಗೃಹ ಜ್ಯೋತಿಯೋಜನೆ ಅಡಿ ಶೂನ್ಯ ಬಿಲ್ ಪಡೆಯುತ್ತಿರುವ ಗ್ರಾಹಕರ ಹಿಂಬಾಕಿ ಶೂನ್ಯವಿದ್ದಲ್ಲಿ ಈ ಬಗ್ಗೆ ಚಿಂತಿಸಬೇಕಿಲ್ಲ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ

Published

on

ಸುದ್ದಿದಿನಡೆಸ್ಕ್:ಹತ್ತು ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿ, ನಿರ್ಣಯ ತೆಗೆದುಕೊಳ್ಳಲು ಸೆಪ್ಟೆಂಬರ್ 17ಕ್ಕೆ ಸಂಪುಟ ಸಭೆ ನಡೆಯಲಿದೆ.

ಜಿಲ್ಲೆಯ ಮಿನಿ ವಿಧಾನಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಬಗ್ಗೆ ವಿಶೇಷ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈ ಹಿಂದೆ 2014ರ ನವೆಂಬರ್ 28ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ

Published

on

ಸುದ್ದಿದಿನಡೆಸ್ಕ್:ಇಂದು ಗಣೇಶ ಚತುರ್ಥಿ, ದೇಶ ಸೇರಿ ನಾಡಿನದ್ಯಂತ ಹಿಂದೂ ಸಂಪ್ರದಾಯದಲ್ಲಿ ನಾಡಿನ ಜನತೆ ತಮ್ಮ ಒಳಿತಿಗಾಗಿ, ಜ್ಞಾನ ಸಮೃದ್ಧಿಗಾಗಿ ಶಿವನ ಪುತ್ರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ ಅದರಂತೆ ಬೆಂಗಳೂರು ಜನತೆ ಮನೆ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನ ಮೂರ್ತಿಗಳನ್ನು ಜಲ ಮೂಲಗಳಲ್ಲಿ ವಿಸರ್ಜಿಸಲು ಬೆಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇನ್ನೂ ಗಣೇಶ ಚತುರ್ಥಿ ವಿಶೇಷವಾಗಿ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತ್ತೆ ಅನೇಕ ಸಚಿವರು ಹಾಗೂ ಗಣ್ಯರು ಶುಭ ಹಾರೈಸಿದ್ದಾರೆ.

ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮದ್ಯಪಾನಾಸಕ್ತರು ಗಲಭೆಮಾಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ ನಿಯಮಗಳಡಿ ಇಂದಿನಿಂದ ಉಡುಪಿ ಜಿಲ್ಲೆಯಾದ್ಯಂತ ಹಾಗೂ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಇದೇ 9 ಮತ್ತು ಸೆಪ್ಟೆಂಬರ್ 11 ರಂದು ಮಧ್ಯಾಹ್ನ 2 ರಿಂದ ಮದ್ಯರಾತ್ರಿ 12.00 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ನೈಸರ್ಗಿಕವಾಗಿ ತಯಾರಿಸಿದ ಮಣ್ಣಿನ ಗಣೇಶನ ವಿಗ್ರಹಗಳನ್ನು ಮಾತ್ರ ಬಳಸುವ ಮೂಲಕ ಕೆರೆ, ನದಿ ಮೂಲಗಳು ಕಲುಷಿತಗೊಳಿಸದಂತೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending