ಭಾವ ಭೈರಾಗಿ
ಕಥೆ | ಕಣ್ಣೀರು
- ತೆಲುಗು ಮೂಲ:ಶ್ರೀನಿವಾಸ್ ದರೆಗೋನಿ, ಕನ್ನಡಕ್ಕೆ: ಡಾ.ಶಿವಕುಮಾರ್ ಕಂಪ್ಲಿ
ಅದು ನಗರದಿಂದ ದೂರವಿದ್ದ ಇಂಜಿನಿಯರಿಂಗ್ ಕಾಲೇಜು. ಅದರ ಪಕ್ಕದಲ್ಲೇ ಹೈವೇ ಡಾಬ.ಎಂದಿನಂತೆಯೇ ವಿದ್ಯಾರ್ಥಿಗಳ ಗಿಜಿ ಗಿಜಿ ಎನಿಸುವ ಕೇಕೆ ಕೋಲಾಹಲಗಳಿಂದ ತುಂಬಿಕೊಂಡಿತ್ತು.ಸುಜಿತ್ ಮತ್ತು ಆತನ ನಾಲ್ಕು ಜನ ಸ್ನೇಹಿತರು ಡಾಬದ ಒಂದು ಮೂಲೆಯಲ್ಲಿ ಕೂತುಕೊಂಡಿದ್ದಾರೆ.
ಅವರ ಭವಿಷ್ಯತ್ತಿನಂತೆಯೇ… ಬಾಟಲುಗಳು ಖಾಲಿಯಾಗುತ್ತಲಿವೆ.ಬೆರಳನಡುವೆ ಸಿಲುಕಿಕೊಂಡ ಸಿಗರೇಟುಗಳು ಹೊಗೆಗಳನ್ನು ಕಕ್ಕುತ್ತಾ ಬೂದಿಯಾಗುತ್ತಿವೆ.
“ಸುಜು… ಈ ಟ್ರೀಟ್ ಗಳೊಳಗೆ ಮಜವೇ ಹೋಗಿದೆ ಕಣೋ… ..ದಿನಾ… ಕಾಲೇಜಿಗೆ ಬಂದೊಡನೆ ಡಾಬದೊಳಗೆ ಕುಳಿತು ಗುಂಡು ಹಾಕಿ ಮನೆಗೆ ಹೋಗುವುದು … ಮಾಮೂಲಿ ತಾನೇ..! ಮಗಾ.. ಏನೋ ಹೊಸತು ಬೇಕೆಂಬಂತೆ ಮನಸ್ಸು ತಿವಿಯುತ್ತಿದೆ ಅಲ್ಲವೇ? ” ಅಂದನು ರೋಷನ್. “ಮತ್ತೇನೋ… ಹೊಸತು? ಏನ್ ಮಾಡೋಣ?” ಬಾಟಲು ಕೆಳಗಿಡುತ್ತ ಸುಜಿತ್ ಕೇಳಿದ.
“ ನನ್ನ ಹತ್ರ ಕಿಕ್ ನೀಡೋ ಐಡಿಯಾ ಇದೆ.ಕೇಳ್ತೀನಿ ಅಂದ್ರೆ ಹೇಳ್ತೀನಪ್ಪಾ”. ಆಸಕ್ತಿ ಹುಟ್ಟಿಸುವಂತೆ ಮುಂದಕ್ಕೆ ಬಾಗುತ್ತಾ ಹೇಳಿದ ರೋಷನ್. “ಕಿಕ್ ಸಂಗತಿನಾ!? ಮೊದಲು ಹೇಳು.. …ನಾವು ಸ್ವಲ್ಪ ನೋಡೋಣ” ಅಂದ ಸುಜಿತ್.
“ನೋಡ್ರೋ..ಇಲ್ಲಿಂದ ನಾವು ಐದೂ ಜನ ಬೈಕ್ ರೈಡ್ ಮಾಡೋಣ, ಸಿಟಿಗೆ ಹತ್ತಿರದ ರಿಂಗ್ ರೋಡ್ ಕೆಫೆ ಸೇರಬೇಕು ! ಯಾರು ಲಾಸ್ಟೋ.. ಅವನೇ ಲೂಜರ್!.ನಾಳೆಯ ಟ್ರೀಟ್ ಆತನದೇ!! ..ಹಾ..ಸರಿನಾ!?” ಅಂತ ರೋಷನ್ ಎಲ್ಲರ ಮುಖವನ್ನ ನೋಡಿದ.
“ ನಾವು ಈಗಲೇ ಸಖತ್ ಡ್ರಿಂಕ್ಸ ಮಾಡಿದ್ದೇವೆ …! ಇಂತಹ ಪರಿಸ್ಥಿತಿಯಲ್ಲಿ ಬೈಕ್ ರೇಸ್ ಅಂದ್ರೆ ಅಪಾಯಕಾರಿ ಕಣೋ ಮಾಮ!” ಅಂದನು ಖಾದರ್.
“ಅರ್ರೇ..ಖಾದರ ಮಾಮಾ! ನೀನು ಸುಮ್ಮನಿರಪ್ಪಾ. ನನಗೆ ಹೊಸ ಹೊಸ ಕಿಕ್ ಬೇಕು ಅಷ್ಟೇ…ಎಲ್ಲರು ಗಾಡಿ ತಗೀರೋ..!!” ಅಂತ ಉತ್ಸಾಹದಿಂದ ಎದ್ದ ಸುಜಿತ್.
* * *
ಸುಜಿತ್ ಬೈಕ್ ಗೊಯ್ ಗುಟ್ಟುತ್ತ ನುಗ್ಗಿಹೋಯ್ತು.
ಕೈ ಯೊಳಗಿನ ಇಂಪೋರ್ಟೆಡ್ ವಾಚಿನ ಡಿಜಿಟಲ್ ಅಂಕೆಗಿಂತಲೂ ವೇಗವಾಗಿ…
ಗುಂಡಿಗೆಯ ಲಯಕ್ಕಿಂತಲೂ ವೇಗವಾಗಿ ಅದು ಓಡತೊಡಗಿತು…
ಧೋ..ಗುಟ್ಟಿ ಸುರಿವ ಮಳೆಹನಿಗಳ ಚಿಟ ಪಟ ಸದ್ದಾಗತೊಡಗಿತು. ಬೈಕ್ ಇನ್ನಷ್ಟೂ ಜೋರಾಯಿತು.
ಎಣ್ಣೆ ಏರಿಸಿದಮತ್ತು ಅವರ ಬುದ್ದಿಯನ್ನ ಬಾಚಿಕೊಂಡಿತು. ಹೈವೇ ಮೇಲೆ ಭಾರವಾಗಿ ಹೋಗುತ್ತಿದ್ದ ಒಂದೊಂದೂ ವಾಹನವನ್ನೂ … ಓವರ್ ಟೇಕ್ ಮಾಡುತ್ತ… ಹನಿಗಳ ಮಧ್ಯೆ!!! ರಣರಂಗದಲ್ಲಿ ನುಗ್ಗಿ ಖಡ್ಗ ಪ್ರಹಾರ ಮಾಡುತ್ತಿರುವವನಂತೆ ರಸ್ತೆಯಲ್ಲಿ ನುಗ್ಗುತ್ತಿದ್ದ ಸುಜಿತ್.
ದೂರದಲ್ಲಿ ಮಹಿಳೆಯೊಬ್ಬಳು ರಸ್ತೆ ದಾಟುತ್ತಿದ್ದಳು. ಅಷ್ಟರೊಳಗೇ.. ಮಳೆ ಹನಿಯೊಂದು ಕಣ್ಣಿಗೆ ಟಪಕ್ಕನೇ.. ಬಿತ್ತು. ಕಣ್ಣು ರೆಪ್ಪೆ ಪಟ್ಟನೇ ಮುಚ್ಚಿಕೊಂಡಿತು. ಆ… ಒಂದೇ ಕ್ಷಣ!!! ಮುಗುಚಿ ಅಷ್ಟು ದೂರ ಬಿದ್ದ! ಚೇತರಿಸಿಕೊಂಡು ಕಣ್ಣು ಬಿಟ್ಟ !. ಆಗಲೇ ಆತನ ಊಹೆಗೂ ಮೀರಿದ ಅಪಘಾತವಾಗಿಬಿಟ್ಟಿತ್ತು!
***
ವೇಗವಾಗಿ ನುಗ್ಗಿದ ಬೈಕ್ ಆ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮಕ್ಕೆ ಆಕೆ ಹಾಗೇ.. ರಸ್ತೆ ಪಕ್ಕಕ್ಕೆ ಹೊರಳಿ ಬಿದ್ದಳು!!! ರಸ್ತೆ ಅಂಚಿನ ಕಲ್ಲಿಗೆ ಆಕೆಯ ತಲೆ ಬಲವಾಗಿ ಅಪ್ಪಳಿಸಿತು!
ಮುಂದೇನಾಯಿತೋ… ಅರ್ಥವಾಗಲಿಲ್ಲ…?
ಬೈಕ್ ನಿಯಂತ್ರಿಸಲು ಪ್ರಯತ್ನಿಸಿದ್ದೂ..
ತಾನೂ ಬೈಕ್ ನಿಂದ ನೂರಡಿ ದೂರದ ಪೊದೆಯೊಳಗೆ ಎಸೆಯಲ್ಪಟ್ಟಿದ್ದು….
ಆ ಧೋ..ಮಳೆಯೊಳಗೆ ಆತನನ್ನ ಯಾರೂ ನೋಡಲಿಲ್ಲ.
ಮೈ ಕೈಗಳು ಕೆತ್ತಿ ಹೋಗಿ ಭುಜಗಳ ಚರ್ಮ ಸೀಳಿಕೊಂಡು,ನೋವು ನೂರ್ಮಡಿಸುತಿತ್ತು! ಕುಡಿದ ಮತ್ತು ಇಳಿದೇ ಬಿಟ್ಟಿತು.!
ರಸ್ತೆ ಬದಿಯಲ್ಲಿ ರಕ್ತದ ಮಡುವಿನೊಳಗೆ ಆ ಮಹಿಳೆಯ ಜೀವ ಕೊನೆಯುಸಿರೊಳಗೆ ಹೊಯ್ದಾಡುತ್ತಿದೆ. ಎಲ್ಲಿಂದಲೋ ಬಂದ.. ಒಂದು ನಾಲ್ಕೈದು ಜನ ನಿಂತರು.
ಅನತಿದೂರದಲ್ಲೇ… ಶಿಲೆಯಂತೆ ಕುಳಿತ ಸುಜಿತ್.
ಅಷ್ಟರೊಳಗೆ ಇನ್ನೂ ಹತ್ತಾರು ಮಂದಿ ಸೇರಿಕೊಂಡರು.
ಮೆಲ್ಲಗೆ ಕಾಲೆಳೆಯುತ್ತ ಹೋಗಿ ತಾನೂ ಅವರ ಮಧ್ಯೆ ನಿಂತ!.
ಅಂಬುಲೆನ್ಸ ಬಂತು.ಹೋಯಿತು.
ಜನರ ಗುಂಪು ಆತನನ್ನ ಮಳೆಯಲ್ಲಿ ಗಮನಿಸಲೇ ಇಲ್ಲ!!!.
ಮೆಲ್ಲಗೆ ಮುರಿದ ಶಿಲುಬೆಯಂತಹ ಆ ಬೈಕ್ ಬಳಿ ಹೊರಟ.
* * *
ಆಸ್ಪತ್ರೆಯ ವರಾಂಡದೊಳಗೆ ಸುಜಿತ್ ಕುಳಿತಿದ್ದಾನೆ.ಆತನ ಆ ಪರಿಸ್ಥಿತಿ ಮೆದುಳಿಗೂ ಶರೀರಕ್ಕೂ ಸಂಬಂಧವಿಲ್ಲದಂತಾಗಿದೆ.ಮಳೆಯೊಳಗೆ ನೆನೆದು ಮುದ್ದೆಯಾದರೂ… ಬಾಡಿಹೋದ ಕಂಗಳಲ್ಲಿ ಆತ ಏನನ್ನೋ… ನಿಸ್ತೇಜವಾಗಿ ನೋಡುತ್ತಿದ್ದಾನೆ.
ಎರಡು ತುಟಿಗಳ ಮಧ್ಯದಿಂದ ‘ಅಮ್ಮಾ..ಅಮ್ಮಾ..’ ಅಂತ ಹೊರಗೆ ಕೇಳಿಸಲಾರದ ಭಾವವೇನೋ ಮಂದ್ರವಾಗಿ ಹೊರಬರಲು ಪ್ರಯತ್ನಿಸುತ್ತಿದೆ.
“ಓ-ನೆಗೆಟಿವ್ ಬ್ಲಡ್ ಬೇಕಾಗಿದೆ. ಪೇಷಂಟ್ ಬಂಧುಗಳ್ಯಾರಾದರೂ ಇದ್ದಾರಾ..?” ಡಾಕ್ಟರ್ ಕೇಳಿದರು.
“ಬಂಧುಗಳಾರೂ ಇಲ್ಲ ಸರ್. ನಾವು ಕೊಡುತ್ತೇವೆ. ಸರಿಹೋದರೆ ತೆಗೆದುಕೊಳ್ಳಿ” ಅಂತ ಒಂದಿಬ್ಬರು ಮುಂದೆ ಬಂದರು.
ಸುಜಿತ್ ಭಾವ ರಹಿತ ಸ್ಥಿತಿಯೊಳಗೆ ಆದೃಶ್ಯವನ್ನ ಹಾಗೇ ನೋಡುತ್ತಲೇ ಇದ್ದ. “ಕೇಸ್ ಯಾವುದು..?” ಯಾರೋ ಕೇಳಿದರು. “ಲಾರಿ.. ಗುದ್ದಿ ಹೊರಟು ಹೋದಂತಿದೆ ಸಾರ್..
ಸ್ಪಾಟ್’ಗೆ ಸ್ವಲ್ಪ ದೂರದೊಳಗೆ ಇನ್ನೊಂದು ಯಾಕ್ಸಿಡೆಂಟ್ ಆಗಿದೆ. ಡ್ರೈವರ್ ಸ್ಪಾಟ್ ಡೆಡ್!” ಯರೋ ಉತ್ತರಿಸಿದರು.
* * *
“ ಸುಜಿತ್…ಸುಜಿತ್…” ವಸುಧಾ ಅಡಿಗೆ ಮನೆಯಿಂದ ಗಟ್ಟಿಗೆ ಕೂಗುತ್ತಿದ್ದಾಳೆ. ” ಏನು ಇವನು..? ರಾತ್ರಿಯೇ ಬಂದ. ಹೊತ್ತೇರಿದರೂ ಇನ್ನೂ ಎದ್ದಿಲ್ಲವಲ್ಲ” ಎನ್ನುತ್ತ ಸುಜಿತ್ ಕೋಣೆಯೊಳಕ್ಕೆ ಬಂದಳು. ‘ಕಂದಾ..ಸುಜೀ’ ಅಂತ ತಟ್ಟಿ ಎಬ್ಬಿಸಿದಳು. ಬಲವಂತವಾಗಿ ಕಣ್ಣುತೆರೆದ.
ಸುಜಿತ್ ಕಣ್ಣುಗಳು ಅಗ್ನಿಗೋಳದಂತಾಗಿವೆ!
“ಏನೋ ಏನಾಯ್ತು ?, ರಾತ್ರಿಯೆಲ್ಲ ನಿದ್ದೆಗೆಟ್ಟಿಯೇನು?” ಕೇಳಿದಳಾಕೆ.
ಮೌನವಾಗಿಯೇ.. ತಾಯಿ ಕಡೆಗೊಮ್ಮೆ ನೋಡಿದನಾತ.
“ನಾ ಮಾತಾಡುತ್ತಲೇ ಇದ್ದೀನಿ.ನೀ.. ಯಾಕೋ ಮಾತಾಡುತ್ತಿಲ್ಲ?” ಅಂತ ವಸುಧ ಪ್ರೇಮದಿಂದ ಕೂದಲು ನೇವರಿಸಿದಳು.
“ ಏನು ಇಲ್ಲಮ್ಮಾ ಅನ್ನುವಂತೆ ..ತಾಯಿ ಭುಜದ ಮೇಲೆ ಹಾಗೇ ತಲೆಯಾನಿಸಿದ. “ಸರಿ ಟಿಫಿನ್,ಮಾಡುವಂತೆ ಏಳೋ”ಅಂದಳು.
* * *
ಹರಳುರಿದಂತೆ ನಗು ನಗುತ್ತಾ ಕಿಚಾಯಿಸುತ್ತಿದ್ದ ಅದೇ ಹುಡುಗ ಡೈನಿಂಗ್ ಟೇಬಲ್ ಬಳಿ ಯಾಂತ್ರಿಕವಾಗಿ ಟಿಫಿನ್ ಮಾಡುತ್ತಿದದ್ದನ್ನ ನೋಡಿ… “ಏನೋ ಕಂದಾ..ಕಾಲೇಜಿನೊಳಗೆ ಏನಾದ್ರು ಸಮಸ್ಯೆನಾ?, ಸ್ನೇಹಿತರೊಂದಿಗೆ ಗಲಾಟೆ ಮಾಡಿಕೊಂಡೆಯಾ? ಅಂತ ಡೈನಿಂಗ್ ಟೇಬಲ್ ಕುರ್ಚಿಯನ್ನ ಎಳೆದುಕೊಳ್ಳುತ್ತ ಪಕ್ಕದಲ್ಲೇ ಕುಳಿತು ಕೇಳಿದಳು.
“ಏನೂ ಇಲ್ಲ ಮಮ್ಮಿ” ತೇಲಿಸಿ ಉತ್ತರಿಸಿದ.
“ಡ್ಯಾಡಿ ಏನಾದರೂ ಬೈದರಾ?” ಅಂತ ಮತ್ತೆ ಮೆತ್ತಗೆ ಕೇಳಿದಳು.
ಹುಹೂ…
ಮತ್ತೆ ಮೌನವೇ ಉತ್ತರ!
“ಈ ಸೆಮಿಸ್ಟರನೊಳಗೆ ಮಾಕ್ರ್ಸುಗಳೇನಾದರೂ ಕಡಿಮೆ ಬಂದಿವೆಯೇನೋ?”ತುಂಟತನದಿಂದಲೇ ರೇಗಿಸಿದಳು.
“ಸ್ವಲ್ಪತ್ತು ನನ್ನನ್ನ ಹೀಗೇ ಬಿಡು ಮಮ್ಮೀ..ಪ್ಲೀಜ್!” ಅಂದನು ಸುಜಿತ್ ಪ್ರಾರ್ಥಿಸುವಂತೆ..
* * *
ನೀರವವಾದ ಬಾಲ್ಕಾನಿಯ ಬಳಿ ಹೋಗಿ ಹೊರಗಿನ ಶೂನ್ಯವನ್ನು ನೋಡುತ್ತಾ ಒಂಟಿ ಹಕ್ಕಿಯಂತೆಯೇ ಕುಳಿತ.
ಎದುರಲ್ಲಿ ಪ್ರೈಮರಿ ಶಾಲೆ,
ಗೇಟ್ ಬಳಿ ತಾಯಂದಿರು ಮಕ್ಕಳಿಗಾಗಿ ಕಾಯುತ್ತಿದ್ದಾರೆ.
ಗೇಟು ತೆರೆದು ಎರಡು ಹೆಜ್ಜೆ ಇಟ್ಟರೆ ಸಾಕು… ಅಷ್ಟೂ ಜನರ ನಡುವೆ ಆ ಮಕ್ಕಳು ಅವರ ಅಮ್ಮನನ್ನ ಹುಡುಕಿ ಕೊಳ್ಳುತ್ತಾರೆ. ಅವರ ಅಮ್ಮ ಕಂಡೊಡನೇ ‘ಯಾವುದೋ ತಿಳಿಯದ ಬೆಳಕು ಅವರ ಕಣ್ಣೊಳಗೆ. ಓಡೋಡಿ ಬಂದು ಅಮ್ಮಾ … ಅಂತ ಅಪ್ಪಿ ಕೊಳ್ಳುತ್ತಾರೆ.
ಅಮ್ಮಂದಿರು ಅವರ ಬಾಕ್ಸ ತೆರೆದು ಊಟ ಮಾಡಿದ್ದಾರೋ.. ಇಲ್ಲವೋ.. ಅಂತ ಆತುರದಿಂದ ನೋಡುತ್ತಾರೆ. ದಿನ ಅಮ್ಮ ತರುವ ಚಾಕೋಲೇಟ್ಗಾಗಿ ಮಕ್ಕಳ ಕಣ್ಣು ಹುಡುಕುತ್ತವೆ… ತಮಗಾಗಿ ಯಾರೂ ನೋಡಲು ಬಾರದ ಮಕ್ಕಳು..ಮೌನದಿಂದ…ಯಾರದೋ ಕೈ ಹಿಡಿದು ಆಟೋ ಕಡೆ ನಡೆಯುತ್ತಿದ್ದಾರೆ.
ಸುಜಿತ್ ಆ ಕಡೆಗೇ ನೋಡುತ್ತಾ ಕುಳಿತ.
ಅಮ್ಮನನ್ನ ಕಂಡ ಮಕ್ಕಳ ಮುಖದೊಳಗಿನ ಆನಂದ. ಒಂಟಿಯಾಗಿ ಹೋಗುತ್ತಿರುವ ಮಕ್ಕಳ ಮುಖದೊಳಗಿನ ಮೌನ,ಕತ್ತಲು-ಬೆಳಕು ಪಕ್ಕ ಪಕ್ಕದಲ್ಲೇ ಹೊರಟಂತಿವೆ.
ಅಮ್ಮ… ಅಮ್ಮನಿಲ್ಲದೇ ಹೋದ್ರೆ…!? ಮನೋಮಂಥನ..
ಅಷ್ಟರೊಳಗೆ ಹಿಂದಿನಿಂದ ಸುಜಿತ್ ಅಮ್ಮ ಬಂದಳು.
“ಹೊಸ ಅವರೆಕಾಯಿ ಸಾಂಬರ್ ಕಣೋ.. ರುಚಿನೋಡಿ ಹೇಳು ಹೇಗಿದೆ? ಅಂತ..” ಎನ್ನುತ್ತ ಅನ್ನ ಕಲಸಿದ ತುತ್ತನ್ನ ಸುಜಿತ್ ಬಾಯೊಳಗಿಟ್ಟಳಾಕೆ.
ಸುಜಿತ್ ಕಣ್ಣ ಕಂಬನಿ.
“ ಏನಾಯ್ತು ಮಗನೇ, ಖಾರ ಜಾಸ್ತಿಯಾಯ್ತಾ..?” ತುಂಬಿದ ಸ್ವರದೊಳಗೆ ನೀರು ಕೊಡುತ್ತಾ ಕೇಳಿದಳಾಕೆ.
ಇಲ್ಲ ಅನ್ನುವಂತೆ ತಲೆಯಾಡಿಸಿದ.
“ ಯಾಕೋ ಮುಂಜಾನೆಯಿಂದ ಏನೂ ಮಾತಾಡುತ್ತಿಲ್ಲ?,ಸರಿಯಾಗಿ ಊಟ ಮಾಡುತ್ತಿಲ್ಲ!. ಏನಾಯ್ತು ನಿಂಗೆ?” ಸಿಡುಕಿನಿಂದಲೇ ಕೇಳಿದಳು ವಸುಧ.
ಏನೂ ಹೇಳಲಾಗದಂತಹ ಭಾವ ಆವರಿಸಿತಾಗ, ಎಲ್ಲವನ್ನೂ ಗಮನಿಸುತ್ತ..ಆಸೆಗಳನ್ನ ತೀರಿಸೋ ಅಮ್ಮ ನನಗಿದ್ದಾಳೆ. ಅಮ್ಮನ ಪ್ರೇಮ ಎಷ್ಟು ದೊಡ್ಡದೋ ನನಗೇ ಗೊತ್ತು. ನನಗೆ ಜ್ವರ ಬಂದ್ರೆ ಅಮ್ಮನಿಗೂ ಜ್ವರ ಏರುತ್ತೆ. ಮನೆಗೆ ಬರುವುದು ಲೇಟಾದರೆ ಅಮ್ಮನಿಗಾಗುವ ಪರದಾಟ, ರಿಜಲ್ಟು ಬಂದರೆ ಅಮ್ಮ ಆಚರಿಸುವ ಖುಷಿಯ ಹಬ್ಬ! ನಾನು ಇಂಜಿನಿಯರಿಂಗಿಗೆ ಬಂದರೂ.. ಈಗಲೂ ಮನೆಗೆ ಬರುವವರೆಗೆ ಎದುರು ನೋಡುವ ಅಮ್ಮ… ಅವೆಲ್ಲಾ ತನಗೇ… ಆಗುವ ಸ್ವಯಂ ಖುಷಿಯ ಆನಂದದ ಅನುಭೂತಿಗಳು.
ಯಾಕೋ ಆ..ಅಮ್ಮನಂತವಳೇ. ನೆನಪಿಗೆ ಬರುತ್ತಿದ್ದಾಳೆ.
ಮತ್ತೆ ಆಕೆಯ ಕುಟುಂಬ..?
ಆಕೆಯ ಮಕ್ಕಳು..??
ಅವರ ಪರಿಸ್ಥಿತಿ? ಏನೇನೋ…!? ತಲೆತುಂಬಾ ಪ್ರಶ್ನೆಗಳೆದ್ದು ಕೋಲಾಹಲವೆಬ್ಬಿಸುತ್ತಿವೆ.
* * *
ಮರುದಿನವೇ ಆಕೆಯ ವಿಳಾಸ ಪತ್ತೆ ಹಚ್ಚಿ ತನ್ನ ಬೈಕ್ ಅವರ ಮನೆ ಮುಂದೆ ನಿಲ್ಲಿಸಿದ. ಮನೆಯ ಒಳಗಿನಿಂದ ಅಳು!!! ಹೃದಯ ಹಿಂಡುವಂತೆ ಕೇಳಿಸುತ್ತಿದೆ. ಮೆಲ್ಲಗೆ ಒಳಗೆ ಹೋದ.
ಹಾಲಿನ ಮಧ್ಯದಲ್ಲಿ ಆಕೆಯ ಮೃತ ದೇಹವನ್ನಿಟ್ಟಿದ್ದಾರೆ!
ಬಹುಶಃ ಪಕ್ಕ ಕುಳಿತವನು ಗಂಡನಿರಬೇಕು. ಕೊನೆಯ ತನಕ ಜೊತೆಯಾಗಿರುತ್ತೇನೆಂದು ಭಾಷೆ ನೀಡಿ ನೆರವೇರಿಸದಾದ ಆತನ ನಿಸ್ಸಹಾಯಕತೆಯನ್ನ ಆತನ ನಿರ್ಜೀವ ಕಣ್ಣುಗಳು ತೋರುತ್ತಿವೆ.
ಅಪ್ಪನ ಭುಜದ ಮೇಲೆ ತಲೆಯಿಟ್ಟ ಮಗಳ ಕಣ್ಣುಗಳು ಅಮ್ಮನನ್ನೇ ನೋಡುತ್ತಿವೆ. ಅಮ್ಮ ಹಾಗೆ ನಿಸ್ತೇಜವಾಗಿ ಮಲಗಿರುವುದನ್ನ ಜೀರ್ಣಿಸಿಕೊಳ್ಳಲಾಗದೇ ಹೋಗಿದ್ದಾಳೆ ಆ ಮಗಳು. ಮನಸ್ಸಿಗೆ ಚೂರಿ ಹಾಕುವಂತಹ ಆಕೆಯ ಸದ್ದಿರದ ಕಣ್ಣೀರ ನದಿಯಲ್ಲಿ ತಾನೂ ಹೆಣವಾಗಿ ತೇಲುವಂತಾಯಿತು.
* * *
ಚಿರನಿದ್ರೆಗೆ ಜಾರಿದ ಆಕೆಯ ಕಣ್ಣೊಳಗೆ ಎಂಥೆಂತಹ ಬಯಕೆಗಳಿದ್ದವೋ! ಎಷ್ಟು ದುಃಖಗಳು,ಎಷ್ಟು ನೋವುಗಳು,ಎಷ್ಟು ಕನಸುಗಳು, ಎಷ್ಟು ನೆನಪುಗಳು, ಎಷ್ಟು ಊಹೆಗಳನ್ನ ತುಂಬಿಕೊಂಡಿದ್ದವೋ… ಎಲ್ಲವನ್ನ ಹಾಗೇ…ಬಿಟ್ಟುಕೊಟ್ಟು ಹೋಗುತ್ತಿದ್ದಾಳೆ.
ಇಲ್ಲ. ಇಲ್ಲ. ನಾನೇ ಆಕೆಯನ್ನ ಜೀವ ಸಮಾಧಿ ಮಾಡಿದೆ!
ಈ ಲೋಕಕ್ಕೆ ಒಬ್ಬ ಅಮ್ಮನನ್ನ ದೂರ ಮಾಡಿದೆ.
ವಯಸ್ಸು, ದುಡ್ಡು ನೀಡಿದ ಮದದಿಂದ ಒಬ್ಬ ಅಮ್ಮನನ್ನ ಬಲಿತೆಗೆದುಕೊಂಡೆ. ಮನಸ್ಸು ದಹಿಸುತ್ತಿದೆ, ತನ್ನ ಮೇಲೆ ತನಗೇ ಭರಿಸಲಾಗದ ಆಕ್ರೋಶ. ಅಂಕೆಗೆ ಬಾರದ ತನ್ನ ಮನಸ್ಸಿನ ಮೇಲೆ ಅಸಹ್ಯ ಭಾವ.
ಆಕೆಯನ್ನ..ಅಮ್ಮಾ .. ಅಂತ ಕರೆಯ ಬೇಕೆನಿಸಿದೆ.. ಆದರೆ ಗಂಟಲೊಳಗಿಂದ ಶಬ್ದವೇ ಏಳುತ್ತಿಲ್ಲ!. ಆ ಶಬ್ದ ತನ್ನ ಗುಂಡಿಗೆಗೆ ಮಾತ್ರ ಕೇಳುತ್ತಿದೆ. ಆ…ಅಮ್ಮನ ಜೀವ ಹೊತ್ತೊಯ್ಯಲಿಕ್ಕಾಗಿ ಬಂದೆರಗಿದ ಹಾಳು ಮುಗಿಲ ಹನಿಗಳಂತೆ. ಮನಸ್ಸು ಕರಗಿ ಸದ್ದಿರದೇ…ಕಣ್ಣೀರ ಕಟ್ಟೆಯೊಡೆಯುತ್ತಿದೆ.
ನಾ..ಏನಾದರೂ ಮಾಡಬೇಕು.
ಹೌದು,
ಇಂತಹ ಅಮ್ಮಂದಿರು ಈ ಲೋಕದಿಂದ ದೂರವಾಗದಂತೆ ಉಳಿಯಲು ಏನಾದರೊಂದು ಇನ್ನು ಮೇಲೆ ನಾನು ಮಾಡಬೇಕು. ಆ ನಿರ್ಧಾರದ ನಂತರ ಸುಜಿತ್ ಮನಸ್ಸಿನೊಳಗೆ ಏನೋ ಪ್ರಶಾಂತತೆ ಮೂಡಿತು.
ನಿರಾಳತೆ ಹುಟ್ಟಿತು.
* * *
ಅದು ಶಿಲ್ಪ ಕಲಾ ವೇದಿಕೆ ..
ಸನ್ಮಾನ ಸಭೆ ನಡೆಯುತ್ತಿದೆ.
ಡಿ.ಜಿ.ಪಿ. ಮಾತಾಡುತ್ತಿದ್ದಾರೆ. “ ರಸ್ತೆಯ ಮೇಲೆ ಅಪಘಾತವಾಗಿ ,ಅಪಘಾತಕ್ಕೀಡಾದವರು ರಕ್ತದ ಮಡುವಿನಲ್ಲೇ ಬಿದ್ದಿದ್ದಾರೆ. ಯಾರೂ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ. ಅವರ ದಾರಿಯಲ್ಲಿ ಅವರು ಹೋಗುತ್ತಿದ್ದಾರೆ. ಅಂತವರೊಳಗೇ… ಕೆಲವು ಜನ ಕಾಲೇಜು ವಿದ್ಯಾರ್ಥಿಗಳು ಕೊನೆಯ ಉಸಿರಾಟದಿಂದ ಒದ್ದಾಡುತ್ತಿದ್ದವರನ್ನ ತಕ್ಷಣವೇ ಆಸ್ಪತ್ರೆಗೆ ಸೇರಿಸುತಿದ್ದಾರೆ.
ಕೆಲವರು ಪೋಲೀಸರಿಗೆ,ಕೆಲವರು ಆಸ್ಪತ್ರೆಗೆ ವಿಷಯವನ್ನ ಮುಟ್ಟಿಸಿದರೆ,ಇನ್ನ ಕೆಲವರು ಅವರ ಬಂಧುಗಳನ್ನ ಕರೆತರುವ ಜವಾಬ್ದಾರಿ ವಹಿಸಿಕೊಳ್ಳುತಿದ್ದಾರೆ.ಮತ್ತೆ ಕೆಲವರು ಚಿಕಿತ್ಸೆಗಾಗಿ ಅಗತ್ಯವಾದ ರಕ್ತ,ಔಷಧಿಗಳ ಅಗತ್ಯಗಳನ್ನ ಪೂರೈಸುತ್ತಿದ್ದಾರೆ. ಇವೆಲ್ಲಾ ನಿಮಿಷಗಳೊಳಗೆ ನಡೆದು ಹೋಗುತ್ತವೆ. ಇಂತಹವೆಲ್ಲಾ ಕಥೆಗಳೊಳಗೆ ಕಲ್ಪನೆಗಳೊಳಗೆ ನಡೆಯುವುದು ಅಂದು ಕೊಂಡಿರಲ್ಲವೇ!? ಆದರೆ ಇದು ವಾಸ್ತವ. ಇವುಗಳೆಲ್ಲದರ ಹಿಂದೆ ಇರುವವರು ಒಬ್ಬೇ ಒಬ್ಬ ವ್ಯಕ್ತಿ. ಅಂದರೆ ನೀವು ನಂಬುತ್ತೀರಾ? ಡಿ.ಜಿ.ಪಿ.ಹೇಳುವುದನ್ನ ನಿಲ್ಲಿಸಿದರು.
ಆಡಿಟೋರಿಯಂ ನೊಳಗೆ ಗಾಢವಾದ ನಿಶ್ಯಬ್ದ,
ಎಲ್ಲರೂ ವೇದಿಕೆಯ ಕಡೆ ನೋಡುತ್ತಿದ್ದಾರೆ. ಹೌದು, ಒಬ್ಬ ವ್ಯಕ್ತಿಯೇ!… ಎಷ್ಟೋ ಜನರಿಗೆ ಆತ ಪ್ರಾಣದಾತನಾಗಿದ್ದಾನೆ.
ಈಗ ಆತನನ್ನ ನಿಮ್ಮೆಲ್ಲರಿಗೆ ಪರಿಚಯಿಸುತ್ತಿದ್ದೇನೆ.ಎಂದರು ಡಿ.ಜಿ.ಪಿ. ಅಭಿನಂದನೆ ತುಂಬಿದ ಸ್ವರದಿಂದ.. ಡಿ.ಜಿ.ಪಿ.ಯ ಕಣ್ ಸನ್ನೆಯನ್ನ ಅನುಸರಿಸಿ… ವೇದಿಕೆ ಮೇಲೆ ಎಲ್ಲರ ಮುಂದಕ್ಕೆ ಬಂದನು ಆ ಯುವಕ..
ಆವನೇ ..ಸುಜಿತ್!
ಚಪ್ಪಾಳೆಗಳು ಮಾರ್ಮೊಳಗಿದವು!… ಡಿ.ಜಿ.ಪಿ.ಯವರ ಅಣತಿಯಂತೆ ಸುಜಿತ್ ಗಂಟಲು ಸರಿಪಡಿಸಿಕೊಂಡ.. ಮೈಕ್ ಮುಂದಕ್ಕೆ ಬಂದು “ ಮನುಷ್ಯನ ಪ್ರಾಣದ ಬೆಲೆಯೆಂದರೆ.. ಒಂದು ಬದುಕು..,ಒಂದು ಕುಟುಂಬ,..ಒಂದು..ಸಮಾಜ ಭರಿಸಲಾಗದ ಸಂಬಂಧ !..
ಹೌದು.. ಒಂದು ಪ್ರಾಣ ಹೋದರೆ ಒಂದು ಕುಟುಂಬವೇ ಕೊಚ್ಚಿ ಹೋದಂತೆ, ಒಂದು ಮನೆಯೇ ಕುಸಿದು ಬಿದ್ದಂತೆ.ಒಂದು ಸಮಾಜದ ಹಲವು ಅನುಬಂಧ,ಹಲವು ಆಪ್ಯಾಯತೆಗಳೇ.. ಚದುರಿ ಹೋದಂತೆ. ಇವು ಯಾವವೂ.. ಹಣ ನೀಡಿ ಕೊಳ್ಳುವಂತವಲ್ಲ…
ನಿರ್ಲಕ್ಷ ಬೇಡ…
ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ.
ಹೌದು ನಾನು ಈ ಆಲೋಚನೆ ಮಾಡಿಯೇ…
ಇಂತಹ ದೃಶ್ಯ ನನ್ನ ಮನಸ್ಸಿಗೆ ನಾಟಿಯೇ…
ನಾನು ಈ ಪ್ರಜೆಕ್ಟನ್ನ ಶುರು ಮಾಡಿದೆ. ನನ್ನ ಹಿಂದೆ ಎಷ್ಟೋ ಜನ ಜೊತೆಯಾಗಿ ನಿಂತರು. ಯಾರೂ ರಸ್ತೆಗಳ ಮೇಲೆ ನಿರ್ಲಕ್ಷದಿಂದ ನುಗ್ಗ ಬೇಡಿ. ನಿಮಗೆ ಶಿರಬಾಗಿ ಕೈ ಮುಗಿಯುತ್ತೇನೆ.ಹೋದ ಜೀವ ಮರಳಿ ಬಾರದು.ಈ ಜೀವ ಇರುವತನಕ ಜೀವಗಳನ್ನು ಉಳಿಸುವ ಪ್ರಯತ್ನ ನಮ್ಮದು.
ಒಂದು ನಿರ್ಲಕ್ಷದ ಬೆಲೆಯೇನು..
ಅದೆಷ್ಟು ಗಾಯ ಮಾಡುತ್ತದೋ… ನನ್ನ ಮನಸ್ಸಿಗೇ.. ಗೊತ್ತು.
ಎನ್ನುತ್ತಾ… ಸುಜಿತ್ ಕಣ್ಣು ತುಂಬಿಕೊಂಡನು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
-
ದಿನದ ಸುದ್ದಿ4 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ದಿನದ ಸುದ್ದಿ2 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
-
ದಿನದ ಸುದ್ದಿ14 hours agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್


