Connect with us

ಭಾವ ಭೈರಾಗಿ

ಕತೆ | ಮತ್ತೆ ಮಳೆ

Published

on

ಹರೀಶ್ ಬೇದ್ರೆ
  • ಜಿ. ಹರೀಶ್ ಬೇದ್ರೆ

ಒಂದು ಊಟ ತಂದುಕೊಡೊಕೆ ಎರಡು ಗುಂಟೆ ಬೇಕಾ?
ಸರ್, ಜೋರಾಗಿ ಮಳೆ ಬರುತ್ತಿದೆ.,. ಹಾಗಾಗಿ…
ಅದಕ್ಕಂತ ಎಕ್ಸ್ಟ್ರಾ ದುಡ್ಡು ತೆಗೆದುಕೊಂಡಿಲ್ವಾ, ತಗೊಂಡ ಮೇಲೆ ಸರಿಯಾದ ಟೈಮಿಗೆ ಬರಬೇಕು.

ಸರಿಯಾಗಿ ಕೆಲಸ ಮಾಡೊ ಯೋಗ್ಯತೆ ಇಲ್ಲದ ಮೇಲೆ ಇಂತ ಕೆಲಸಕ್ಕೆ ಬರಬಾರದು. ಆ ಪಾರ್ಸೆಲ್ ಕೊಡು ಎಂದು ಡೆಲಿವರಿ ಬಾಯ್ ಕೊಡುವ ಮುನ್ನವೇ ಅವನ ಕೈಯಿಂದ ಪಾರ್ಸೆಲ್ ಕಿತ್ತುಕೊಂಡು, ಕೆಟ್ಟದಾಗಿ ಬೈಯುತ್ತಾ ಆ ವ್ಯಕ್ತಿ ಮನೆಯೊಳಗೆ ಹೋದ.

ಗಿರೀಶ್ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯಾಗಿ ಕೆಲಸಕ್ಕೆ ಸೇರಿಕೊಂಡು ಒಂದು ವರ್ಷದ ಮೇಲಾಗಿದೆ. ಎಲ್ಲೋ ಅಪರೂಪಕ್ಕೆ ಒಮ್ಮೆ ತಡವಾದಾಗ ಯಾಕಪ್ಪಾ ಲೇಟ್ ಎಂದು ಮಾಮೂಲಿಯಂತೆ ಕೇಳಿದ್ದಿದೆ. ಯಾರೂ ಇಂದಿನಂತೆ ಬೈದಿರಲಿಲ್ಲ. ಇದು ಗಿರೀಶನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತಾದರೂ . ಪಾಪ ತುಂಬಾ ಹಸಿದಿದ್ದರೇನೊ ಅದಕ್ಕೆ ಹಾಗೆ ಮಾತನಾಡಿರಬೇಕು ಹೋಗಲಿ ಬಿಡು ಎಂದುಕೊಂಡರೂ ಮನಸ್ಸು ಸಮಾಧಾನವಾಗಲಿಲ್ಲ.

ಶಿವಮೊಗ್ಗದಲ್ಲಿ ಆಷಾಢ ಆರಂಭವಾದ ಮೊದಲನೇ ದಿನದಿಂದಲೇ ಆರಂಭವಾದ ಮಳೆ ಹದಿನೈದು ದಿನಗಳಾದರೂ ಬಿಡದೆ ಸುರಿಯುತ್ತಿತ್ತು. ಈ ದಿನವಂತೂ ವರುಣದೇವ, ಭೂತಾಯಿಯ ಮೇಲೆ ಇನ್ನಿಲ್ಲದಂತೆ ದೌರ್ಜನ್ಯ ನಡೆಸುತ್ತಿರುವ ಮನುಷ್ಯರಿಗೆ ಸರಿಯಾದ ಪಾಠ ಕಲಿಸಲೇಬೇಕೆಂಬ ಹಠಕ್ಕೆ ಬಿದ್ದವನಂತೆ ರುದ್ರರೂಪ ತಾಳಿದ್ದ. ಜೋರಾದ ಮಳೆಯ ಜೊತೆಗೆ ಗುಡುಗು ಸಿಡಿಲಿನ ಆರ್ಭಟವೂ ಜಾಸ್ತಿಯಾಗಿತ್ತು. ಬರಿಯ ಮಳೆಯಾಗಿದ್ದರೆ ಗಿರೀಶನಿಗೆ ನಿಗಧಿತ ವೇಳೆಯಲ್ಲಿ ಆರ್ಡರ್ ತಲುಪಿಸಲು ಯಾವ ತೊಂದರೆಯೂ ಇರಲಿಲ್ಲ.

ಆದರೆ ವಿಚಿತ್ರ ಗುಡುಗು ಸಿಡಿಲುಗಳ ಅಬ್ಬರ ಇದ್ದಿದ್ದರಿಂದ ಎರೆಡೆರಡು ಕಡೆ ನಿಂತು ಬರಬೇಕಾಯಿತು. ಊಟದ ಆರ್ಡರ್ ಕೊಟ್ಟ ವ್ಯಕ್ತಿಯ ಮನೆಗೂ ಹೊಟೇಲಿಗೂ ಆರು ಕಿಲೋಮೀಟರ್ ಅಂತರವಿತ್ತು. ಮನೆ ಇದ್ದದ್ದು ಹೊಸ ಬಡಾವಣೆಯಲ್ಲಿ, ಅಲ್ಲಿ ಮನೆಗಳು ವಿರಳ ಹಾಗೂ ನಿಲ್ಲಲು ಎಲ್ಲೂ ಜಾಗ ಇರದ ಕಾರಣ ಒಂದು ಕಡೆ ಸ್ವಲ್ಪ ಜಾಸ್ತಿ ಹೊತ್ತೆ ನಿಂತು ಮಳೆಯ ಆರ್ಭಟ ಕಡಿಮೆಯಾಗಲಿ ಎಂದು ಕಾದಿದ್ದ. ಅದೇ ತಪ್ಪಾಗಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಳ್ಳುವಂತಾಯಿತು.

ಇದೇ ಯೋಚನೆಯಲ್ಲಿ ನಿಧಾನವಾಗಿ ಬೈಕ್ ಚಲಿಸುತ್ತಾ ಬರುವಾಗ ಮಳೆ ಜೋರಾಗಿ ಪಕ್ಕದಲ್ಲೇ ಸಿಡಿಲು ಬಡಿದ ಅನುಭವವಾಗಿ ಇಹಲೋಕಕ್ಕೆ ಬಂದು ಹತ್ತಿರದಲ್ಲಿ ಎಲ್ಲಾದರೂ ನಿಲ್ಲಲು ಜಾಗ ಇದೇಯೆ ಎಂದು ನೋಡುತ್ತಾ ಬರುವಾಗ ಚಿಕ್ಕದೊಂದು ಮನೆಯಲ್ಲೇ ಅಂಗಡಿ ಮಾಡಿಕೊಂಡಿರುವುದು ಕಣ್ಣಿಗೆ ಬಿತ್ತು. ಸೀದಾ ಅಲ್ಲಿಗೆ ಬಂದು ನಿಂತ. ಅಂಗಡಿಯ ಮುಂಭಾಗದಲ್ಲಿ ಮಳೆ ಬಿಸಿಲಿಗೆ ಅಡ್ಡವಾಗಿ ಏನೂ ಹಾಕಿರದ ಕಾರಣ ನೆನೆಯುವುದು ತಪ್ಪಲಿಲ್ಲ. ಆದರೂ ಅಲ್ಲೇ ನಿಂತಿದ್ದ, ಅಂಗಡಿಯೊಳಗೆ ಇರಚಲು ಬಡಿಯುತ್ತಿದ್ದರಿಂದ ಹೇಳೋಣವೆಂದು ಬಗ್ಗಿ ನೋಡಿದರೆ ಒಳಗಡೆ ಹೆಂಗಸೊಬ್ಬಳು ಕಂಡಳು. ಇವನು ಇರಚಲು ಬಡಿಯುತ್ತಿದೆ ಎಂದು ಕೂಗಿದನ್ನು ಕೇಳಿ ಹೆಂಗಸು ಯಾರೋ ಏನೋ ಕೊಳ್ಳಲು ಬಂದಿರಬೇಕೆಂದು ಬಂದು ಏನು ಬೇಕು ಎಂದು ಕೇಳಿದಳು. ಇವನು ನನಗೇನು ಬೇಡ, ಮಳೆ ಅಂಗಡಿ ಒಳಗೂ ಬಿದ್ದು ಸಾಮಾನುಗಳು ಹಾಳಾಗುತ್ತಿವೆ ಎಂದು ಹೇಳಲು ಕರೆದೆ ಎಂದ.

ಆಗ ಗಮನಿಸಿದ ಹೆಂಗಸು ಹೌದಲ್ಲವೆ ಎಂದು ಬಾಗಿಲು ಮುಂದೆ ಎಳೆದಳು. ಇವನು ಅಲ್ಲಿಯೇ ನಿಂತಿದ್ದನ್ನು ನೋಡಿ, ಒಳಗೆ ಬನ್ನಿ ಎಂದು ಪಕ್ಷದ ಬಾಗಿಲು ತೆರೆದಳು. ಇವನು ಪರವಾಗಿಲ್ಲ ಎಂದು ಹೇಳಲು ಹೊರಟ ಕ್ಷಣದಲ್ಲೇ ಮತ್ತೊಂದು ಸಿಡಿಲು ಬಡಿಯಿತು. ಆಗ ಏನನ್ನು ಹೇಳದೆ ಒಳಹೋಗಿ ಬಾಗಿಲ ಬಳಿಯೇ ನಿಂತು ಮಳೆಯ ನೋಡತೊಡಗಿದ. ಕಣ್ಣು ಮಳೆ ನೋಡುತ್ತಿದ್ದರೆ, ಮನಸು ಬೈದ ವ್ಯಕ್ತಿಯ ಬಗ್ಗೆ ಯೋಚಿಸುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಆ ಅಂಗಡಿಯಾಕೆ ತಿನ್ನಲು ಕಾರಮಂಡಕ್ಕಿ ಕೊಟ್ಟು ಕುಡಿಯಲು ಬಿಸಿಯಾದ ಕಾಫಿ ಕೊಟ್ಟಳು. ಇವನು ಬೇಡ ಎನ್ನದೆ ತಿಂದು, ಕುಡಿದ. ಅಷ್ಟು ಹೊತ್ತಿಗೆ ಮಳೆಯ ರಭಸ ಕಡಿಮೆಯಾದ್ದರಿಂದ ಬರುತ್ತೇನೆ ಎಂದು ಹೇಳಿ ಹೊರಟ.

ಒಂದು ವಾರದ ನಂತರ ಮತ್ತೆ ಅದೇ ಬಡಾವಣೆಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿಗೆ ಹೋಗುವಾಗ, ತಕ್ಷಣ ಆ ದಿನ ಒಳಕರೆದು ಉಪಚರಿಸಿದ ಹೆಂಗಸಿನ ನೆನಪಾಗಿ, ಬರುವಾಗ ಅವಳನ್ನು ಮಾತನಾಡಿಸಿಯೇ ಬರುವುದೆಂದು ತೀರ್ಮಾನಿಸಿದ. ದಾರಿಯುದ್ದಕ್ಕೂ ಹೋಗುವಾಗ ಅವಳ ಬಗ್ಗೆ ನೆನಪಿಸಿಕೊಂಡರೆ ಏನೂ ನೆನಪಾಗಲಿಲ್ಲ. ಅವಳು ಹೇಗಿದ್ದಾಳೆ, ಮುಖ ಹೇಗಿದೆ, ತಾನು ತಿಂದಿದ್ದು ಏನು ಏನೊಂದೂ ನೆನಪಾಗಲಿಲ್ಲ. ಆಗ ಆ ಕ್ಷಣದಲ್ಲಿ ಅವನ ಮನಸ್ಸು ಪೂರ್ತಿ ಬೈದ ವ್ಯಕ್ತಿಯ ಬಗ್ಗೆಯೆ ಗಿರಕಿ ಹೊಡೆಯುತ್ತಿದ್ದರಿಂರ ಬೇರೆ ಕಡೆ ಗಮನ ಹೋಗಿರಲಿಲ್ಲ.

ಇಂದು ಬಂದಾಗ ನೋಡಿದರೆ ಅದೊಂದು ಪುಟ್ಟ ಅಂಗಡಿ. ಅಲ್ಲಿ ಬೀಡಿ ಸಿಗರೇಟು ತಂಬಾಕು, ಎಲೆ ಅಡಿಕೆ, ಸ್ವಲ್ಪ ಕುರುಕಲು ತಿಂಡಿಗಳ ಜೊತೆಗೆ ಕಾರಮಂಡಕ್ಕಿ, ಮಿರ್ಚಿ ಮಾತ್ರ ಸಿಗುತ್ತಿತ್ತು. ಮೂವತ್ತರ ಆಸುಪಾಸಿನ ಮಹಿಳೆ ಅದನ್ನು ನಡೆಸುತ್ತಿದ್ದಳು. ಇವನನ್ನು ನೋಡಿದ ಆ ಮಹಿಳೆ ಹಿಂದಿನ ಗುರುತು ಹಿಡಿಯದೆ ಏನು ಬೇಕು ಎಂದು ಕೇಳಿದಳು. ಅದಕ್ಕೆ ಗಿರೀಶ್ ಅಂದಿನ ಘಟನೆ ವಿವರಿಸಿ, ನೀವೇ ಅಲ್ಲವೇ ಇದ್ದಿದ್ದು ಎಂದ. ಹೌದು, ಆದರೆ ಅವತ್ತು ನೀವು ರೈನ್ ಕೋಟ್, ಹೆಲ್ಮೆಟ್ ಹಾಕಿದ್ದರಿಂದ ಗೊತ್ತಾಗಲಿಲ್ಲ ಎಂದಳು.

ಅವಳ ಹಾಗೂ ಅಂಗಡಿಯ ಪರಿಸ್ಥಿತಿ ನೋಡಿದಾಗ, ಅಂದು ತಾನು ದುಡ್ಡು ಕೊಡದೆ ಹೋಗಿದ್ದು ತಪ್ಪಾಯಿತು ಎನಿಸಿ, ಅವತ್ತು ಯಾವುದೋ ಮೂಡಲ್ಲಿ ಹಣ ಕೊಡಲಿಲ್ಲ, ಎಷ್ಟಾಗಿತ್ತು ಎಂದ. ಅದಕ್ಕವಳು ಬೇಡ ಎಂದು ಹಣ ಪಡೆಯಲಿಲ್ಲ. ಅಂದಿನಿಂದ ಗಿರೀಶ್ ಆ ಕಡೆ ಹೋದಾಗಲೆಲ್ಲಾ ತಪ್ಪದೇ ಈ ಅಂಗಡಿಗೆ ಬಂದು ಹಣ ಕೊಟ್ಟು ಕಾಫಿ ಕುಡಿದು ನಾಲ್ಕು ಮಾತನಾಡಿ ಹೋಗುತ್ತಿದ್ದ. ಯಾವಾಗ ಬಂದರೂ ಅಲ್ಲಿ ಆ ಹೆಂಗಸು ಮತ್ತು ಎರಡು ಮೂರು ವರ್ಷದ ಮಗು ಮಾತ್ರ ಇರುವುದನ್ನು ಗಮನಿಸಿ, ಕುತೂಹಲ ತಡೆಯಲಾರದೆ, ಮನೆಯಲ್ಲಿ ಮತ್ತೆ ಯಾರಿದ್ದಾರೆ ಎಂದು ಕೇಳಿದ. ಅದಕ್ಕವಳು ನಾನು ನನ್ನ ಮಗಳು ಇಬ್ಬರೇ ಎಂದಳು. ಏಕೆ ಎಂದಾಗ, ವರ್ಷದ ಹಿಂದೆ ನನ್ನ ಯಜಮಾನರು ಕೊವಿಡ್ ನಿಂದ ಹೋದರು ಹಾಗಾಗಿ ಎಂದಳು. ಇವನು ಮತ್ತೆ ಏನನ್ನು ಕೇಳಲಿಲ್ಲ.. ನಂತರ ತಿಳಿದಿದ್ದೆಂದರೆ, ಗಂಡ ಇರುವವರೆಗೂ ಅವನ ಕುಟುಂಬದವರೊಂದಿಗೆ ಬದುಕು ಚೆನ್ನಾಗಿಯೇ ಇತ್ತು. ಆತ ಹೋದನಂತರ ಆಸ್ತಿಯ ಸಲುವಾಗಿ, ಇವಳಿಗೆ ಈ ಪುಟ್ಟ ಮನೆ, ನಾಲ್ಕು ಬಿಡಿಗಾಸು ಕೊಟ್ಟು ಹೊರಹಾಕಿದ್ದಾರೆಂದು.

ಇವಳು ತನ್ನ ಮನೆಯವರಿಗೆ ಹೊರೆಯಾಗಬಾರದೆಂದು ಇಲ್ಲಿಗೆ ಮಗಳೊಂದಿಗೆ ಬಂದು ಬದುಕು ಕಟ್ಟೀಕೊಂಡಿದ್ದಾಳೆ ಎಂದು.
ಅದೊಂದು ದಿನ ಗಿರೀಶನಿಗೆ, ಆತನ ತಂದೆಗೆ ಹುಷಾರಿಲ್ಲ ಎಂದು ಕರೆ ಬಂದು ಊರಿಗೆ ಹೋದ. ಅಲ್ಲಿಗೆ ಹೋದ ಎರಡನೆ ದಿನ ತಾಯಿ, ಗಿರೀಶನನ್ನು ಕೂರಿಸಿಕೊಂಡು, ಆದದ್ದು ಆಗಿ ಹೋಯಿತು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ನೀನೂ ಕೊರಗುತ್ತಾ ನಮಗೂ ಕೊರಗುವಂತೆ ಏಕೆ ಮಾಡ್ತಿಯಾ? ನಿನ್ನ ತಂದೆ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಹೀಗಾಗಿರುವುದು ಎಂದು ಹೇಳುವಾಗಲೇ ಗಿರೀಶನ ಗೆಳೆಯನು ಬಂದ.

ಅವನು ಗಿರೀಶನನ್ನು ಹೊರಗೆ ಕರೆದುಕೊಂಡು ಹೋಗಿ, ನೋಡು ನಿನಗೇನು ಮಹಾ ವಯಸ್ಸಾಗಿಲ್ಲ, ಮೊದಲನೇ ಸಂಬಂಧ ಅಲ್ಲದಿದ್ದರೂ ಎರಡನೇ ಸಂಬಂಧವಾದರೂ ನೋಡು. ಅವರಿಗೂ ಒಂದು ಬದುಕು ಸಿಗುತ್ತದೆ, ನಿನ್ನ ಬದುಕಿಗೂ ಆಧಾರ ಸಿಕ್ಕಂತೆ ಆಗುತ್ತದೆ. ಜೊತೆಗೆ ನಿನ್ನ ತಂದೆ ತಾಯಿಗೆ ನೆಮ್ಮದಿ ಸಿಗುತ್ತದೆ ಯೋಚಿಸು ಎಂದ.
ಗಿರೀಶನಿಗೆ ಈಗ ಮೂವತ್ತೈದು ವರ್ಷ, ಅವನಿಗೆ ಮದುವೆಯಾಗಿ ಆರು ವರ್ಷವಾದರೂ ಮಕ್ಕಳಾಗಿರಲಿಲ್ಲ. ಅದಕ್ಕಾಗಿ ಹರಕೆ ಹೊತ್ತು ತೀರಿಸಲು ತನ್ನ ಊರಿಂದ ಹದಿನೈದು ಕಿಲೋಮೀಟರ್ ದೂರದಲ್ಲಿ ಇರುವ ಮನೆದೇವರಿಗೆ ಬೈಕಿನಲ್ಲಿ ಹೆಂಡತಿಯೊಂದಿಗೆ ಹೋಗುವಾಗ, ಎದುರಿನಿಂದ ವೇಗವಾಗಿ ಬಂದ ವಾಹನದಿಂದ ತಪ್ಪಿಸಿಕೊಳ್ಳಲು ಹೋಗಿ, ಬೈಕ್ ಸಮೇತ ಕೆರೆಯಲ್ಲಿ ಬಿದ್ದಿದ್ದರು.

ಅಲ್ಪಸ್ವಲ್ಪ ಈಜು ಬರುತ್ತಿದ್ದ ಗಿರೀಶ್ ಕಷ್ಟಪಟ್ಟು ದಡ ಸೇರಿದ. ಆದರೆ ಆತನ ಹೆಂಡತಿ ಬದುಕಿ ಉಳಿಯಲಿಲ್ಲ. ಊರಲ್ಲೇ ಇದ್ದರೆ ಹೆಂಡತಿಯ ನೆನಪು ಬಹಳ ಕಾಡುತ್ತದೆ, ಅವಳ ಸಾವಿಗೆ ತಾನೇ ಕಾರಣ ಎಂದು ಕೊರಗುವಂತೆ ಆಗುತ್ತದೆ ಎನ್ನುವ ಕಾರಣಕ್ಕೆ ತನ್ನ ಊರು ಬಿಟ್ಟು ಶಿವಮೊಗ್ಗ ಸೇರಿದ್ದ. ಇಷ್ಟು ದಿನ ಯಾರು ಏನೇ ಹೇಳಿದ್ದರೂ ಮರುಮದುವೆಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಈಗ, ತಂದೆಯ ಅನಾರೋಗ್ಯ, ತಾಯಿಯ ಮಾತು, ಜೊತೆಗೆ ಗೆಳೆಯ, ವಿಧವೆ, ವಿಚ್ಜೇದಿತೆ, ಕೈಲಾಗದವರಿಗೆ ಮದುವೆಯಾಗಿ ಹೊಸ ಬದುಕು ಕೊಡಬಾರದೇಕೆ ಎನ್ನುವ ಮಾತು ಮತ್ತೊಂದು ದಿಕ್ಕಿನಲ್ಲಿ ಯೋಚಿಸುವಂತೆ ಮಾಡಿತು.

ಅದಕ್ಕಾಗಿಯೆ ಗಿರೀಶ್, ಅಪ್ಪ ನನಗೆ ಯೋಚಿಸಲು ಸ್ವಲ್ಪ ದಿನ ಅವಕಾಶ ಕೊಡು ಹೇಳುತ್ತೇನೆ ಎಂದು ಶಿವಮೊಗ್ಗಕ್ಕೆ ಬಂದ. ಅದೇ ದಿನ ಹೊಸ ಬಡಾವಣೆಯ ಆರ್ಡರ್ ಸಿಕ್ಕಿತು. ವಾಡಿಕೆಯಂತೆ ಡೆಲಿವರಿ ಕೊಟ್ಟು ಕಾಫಿ ಕುಡಿಯಲು ಬಂದ. ಅದೇನೋ ಗೊತ್ತಿಲ್ಲ, ಆಂದು ಆ ಅಂಗಡಿಯ ಮಹಿಳೆ ಬಹಳ ವಿಶೇಷವಾಗಿ ಕಂಡಳು. ಸಂಜೆ ಮನೆಗೆ ಬಂದವನು ಏನೋ ಯೋಚಸಿ ಗೆಳೆಯನಿಗೆ ಕರೆ ಮಾಡಿ, ಅಂಗಡಿಯ ಮಹಿಳೆಯ ವಿಷಯವನ್ನು ಅವನಿಗೆ ತಿಳಿಸಿ, ಅವಳು ಒಪ್ಪಿದರೆ ಅವಳಿಗೆ ಮದುವೆಯಾಗಿ, ಅವಳ ಮಗುವಿಗೆ ತಂದೆಯಾಗಲು ಬಯಸಿರುವೆ. ಇದಕ್ಕೆ ಅಪ್ಪ ಅಮ್ಮನ ಒಪ್ಪಿಗೆ ಇದೇಯಾ ನೀನೇ ಕೇಳಿ ತಿಳಿಸು. ಆಮೇಲೆ ನಾನು ಅವಳ ಬಳಿ ಮಾತನಾಡುವೆ ಎಂದ ಗಿರೀಶ್. ಸಮಯ ನೋಡಿ ನಿನ್ನ ತಂದೆ ತಾಯಿಯರ ಜೊತೆ ಮಾತನಾಡಿ ತಿಳಿಸುವೆ ಎಂದ ಗೆಳೆಯ. ಗಿರೀಶ್, ಗೆಳೆಯನಿಂದ ಬರುವ ಕರೆಗೆ ಕಾಯುತ್ತಿದ್ದಾನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

ದಿನದ ಸುದ್ದಿ

ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ‘ಎಳೆ’ ತಂದರೋ..!

Published

on

  • ನವೀನ್ ಸಾಗರ್, ಬೆಂಗಳೂರು

ಸಿನಿಮಾ ಹಾಡುಗಳು ಕವನಗಳು ಎಲ್ಲ ಗದ್ಯಗಳಷ್ಟು ನೇರ ಸಲೀಸು ಅಲ್ಲ. ಹೇಳಬೇಕಿರೊದನ್ನು ಗದ್ಯಗಳ ಹಾಗೆ ಸೀದಾಸಾದಾವಾಗಿ ಕವನಗಳು, ಸಿನಿಗೀತೆಗಳು ಹೇಳುವುದಿಲ್ಲ. ಹಾಗೆ ಹೇಳಿಬಿಟ್ಟರೆ ಅವು ಕವನ/ಹಾಡು/ಪದ್ಯಗಳೇ ಅಲ್ಲ!!!

ಹಾಡು ಅಂದರೆ ಅಲ್ಲಿ ಉಪಮೆಗಳು ಗೂಢಾರ್ಥಗಳು ದ್ವಂದ್ವಾರ್ಥಗಳು(ದ್ವಂದ್ವಾರ್ಥ ಅಂದ್ರೆ ಅಶ್ಲೀಲ ಮಾತ್ರವೇ ಅಲ್ಲ), ಎರಡುಮೂರು ವಿಚಾರಗಳನ್ನು ಹೇಳಬಲ್ಲ ಒಂದೇ ಒಂದು ಸಾಲು, ಇನ್ಯಾವತ್ತೋ ರೆಲೆವೆಂಟ್ ಅನಿಸಬಲ್ಲ ಕಲ್ಪನೆಗಳು ಏನೇನೋ ತುಂಬಿಹೋಗಿರುತ್ತವೆ. ಅದಕ್ಕೊಂದು ಮೂಡ್ ಇರುತ್ತೆ.

ಒಬ್ಬೊಬ್ಬ ಓದುಗನಲ್ಲಿ ಒಂದೊಂದು ಭಾವ ಹುಟ್ಟಿಸಬಲ್ಲ ಶಕ್ತಿ ಕವಿತೆಗಳಿಗಿರುತ್ತದೆ. ನನಗೆ ರೊಮ್ಯಾಂಟಿಕ್ ಅನಿಸುವ ಗೀತೆಯೊಂದು ಇನ್ನೊಬ್ಬನಿಗೆ ವಿರಹಗೀತೆ ಅನಿಸಬಹುದು. ನನಗೆ ಲಾಲಿ ಹಾಡೆನಿಸುವ ಗೀತೆಯೊಂದು ಇನ್ಯಾರಿಗೋ ಜಾಲಿ ಗೀತೆ ಅನಿಸಬಹುದು. ಇನ್ನೊಬ್ರಿಗೆ ಶೋಕಗೀತೆ ಅನಿಸೋ ಗೀತೆಯಲ್ಲಿ ನನಗೇನೋ ತುಂಟತನ ಕಾಣಿಸಬಹುದು. ಸಭ್ಯಗೀತೆ ಅನಿಸುವ ಹಾಡೊಂದು ಸಾಲುಸಾಲಲ್ಲೂ ಡಬಲ್ ಮೀನಿಂಗ್ ತುಂಬ್ಕೊಂಡಿದೆಯಲ್ಲ ಅನಿಸಬಹುದು. ಗ್ರಹಿಕೆ ಮೂಡು ವಯಸ್ಸು ಸಂದರ್ಭ ಇವೆಲ್ಲದರ ಮೇಲೆ ಹಾಡೊಂದು ನಮ್ಮನ್ನು ತಲುಪೋ ಬಗೆ ಬದಲಾಗುತ್ತಾ ಹೋಗುತ್ತದೆ‌. ಅಷ್ಟಾಗಿಯೂ ಅಸಲಿಗೆ ಅದನ್ನು ಬರೆದ ಕವಿಯ ಯೋಚನೆ ನಾವು ಗ್ರಹಿಸಿದ್ದೆಲ್ಲಕ್ಕಿಂತ ಭಿನ್ನವಾಗಿದ್ದಿನ್ನೇನೋ ಇದ್ದರೂ ಇರಬಹುದು.

ಹಲವು ಬಾರಿ ಕವಿಗೆ ತನ್ನ ಗೀತೆ ತಾನಂದುಕೊಂಡ ಭಾವದಲ್ಲೇ ರೀಚ್ ಆಗಿದೆ ಅನ್ನೋ ಖುಷಿ ತೃಪ್ತಿ ಸಿಗುತ್ತದೆ. ಕೆಲವು ಬಾರಿ .. ಅರೆ ಬರೆಯುವಾಗ ನಾನೇ ಹೀಗೊಂದು ಗೂಡಾರ್ಥದ ಬಗ್ಗೆ ಯೋಚಿಸಿರಲಿಲ್ಲ. ಕೇಳುಗ ಇದಕ್ಕೆ ಇನ್ನೊಂದು ಆಯಾಮವನ್ನೇ ಕೊಟ್ಟುಬಿಟ್ಟನಲ್ಲ ಅಂತ ಅಚ್ಚರಿಯಾಗಬಹುದು. ಕೆಲವೊಮ್ಮೆ ತನಗೇ ಗೊತ್ತಿಲ್ಲದ ಅರ್ಥ ಹುಟ್ಟಿಸಿ ತನ್ನನ್ನು ಕೇಳುಗರು ಮೇಲೇರಿಸಿ ಕೂರಿಸಿದಾಗ, ಈ ಕ್ರೆಡಿಟ್ ಬಿಟ್ಟುಕೊಡಲಿಷ್ಟ ಪಡದ ಕರಪ್ಟ್ ಮನಸು.. ಹೌದೌದು ನಾನು ಹೀಗೆ ಎರಡರ್ಥ ಹುದುಗಿಸಿ‌ಈ ಸಾಲು ಬರೆದಿದ್ದೆ ಎಂದು ಧ್ವನಿಗೂಡಿಸುತ್ತದೆ. ಅದೇ ವಿವಾದಕ್ಕೋ ಅವಹೇಳನಕ್ಕೋ ಕಾರಣವಾದರೆ .. ಇಲ್ಲ ನಾನು ಬರೆದದ್ದು ಈ ಅರ್ಥದಲ್ಲಿ ಅಂತ ಸೇಫ್ಟಿ ಮೋಡ್ ಗೂ ಹೋಗುತ್ತದೆ. ಹಾಡು/ಕವಿತೆಗಳಿಗೆ ಈ ವ್ಯಾಖ್ಯಾನದ ಮೂಲಕ ಬಚಾವಾಗುವ ಇಮೇಜ್ ರೂಪಿಸಿಕೊಳ್ಳುವ ಅವಕಾಶವಿರುತ್ತದೆ‌. ಗದ್ಯಗಳಿಗೆ ಆ ಪ್ರಿವೆಲೇಜ್ ಇರೋದಿಲ್ಲ.

ಸಂಭ್ರಮ ಚಿತ್ರದಲ್ಲಿ ಹಂಸಲೇಖ … “ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರೋ…” ಗೀತೆಯಲ್ಲಿ ” ಎಳೆ” ಪದವನ್ನು ಎರಡರ್ಥ ಬರುತ್ತದೆಂದೇ ಬಳಸಿದರೋ ಬರೆದ ಮೇಲೆ ಎರಡರ್ಥ ಕೇಳುಗರ ಗ್ರಹಿಕೆಗೆ ಬಂತೋ ಎಂಬ ಪ್ರಶ್ನೆಯಂತೆ ಇದು. ಹಂಸ ಲೇಖಾವ್ರು ಪ್ರೀತಿಯ ’ಎಳೆ’ಯ ಬಗ್ಗೆ ಬರೆದಿರಬಹುದು. ಅಥವಾ ಎಳೆದು ತಂದರೋ ಎಂದು ಕೇಳಿಯೂ ಬರೆದಿರಬಹುದು. ಅಥವಾ ಅವರಿಗಿರೋ ಪನ್ ಸೆನ್ಸ್ ಗೆ ಈ ಎರಡೂ ಅರ್ಥ ಬರಲಿ ಅಂತಲೇ ಎಳೆ ಎಂಬ ಪದ ಬಳಸಿರಬಹುದು. ಈ ಥರದ ಸಾಕಷ್ಟು ಉದಾಹರಣೆ ಸಿಗುತ್ತದೆ. ಸಾಹಿತ್ಯ ಗಮನಿಸಲು ಶುರು ಮಾಡಿದಾಗ ಇಂಥ ಖುಷಿ ಅನುಭೂತಿಗಳು ಸಿಗಲಾರಂಭಿಸುತ್ತವೆ. ರಿಸರ್ಚಿನಂಥ ಖುಷಿ

ಹಂಸಲೇಖರ … “ಈ ಹರಯದ ನರಕೊಳಲಲಿ ಇವೆ ಸರಿಗಮ ಹೊಳ್ಳೆಗಳು… ಈ ಮದನನ ಕಿರುಬೆರಳಲಿ ನವಿರೇಳದೆ ಗುಳ್ಳೆಗಳು..” ಈ ಸಾಲು ಕೇವಲ ಕಮರ್ಶಿಯಲ್ ಮ್ಯೂಸಿಕಲ್ ಸಾಂಗ್ ಆಗಿ ನಮ್ಮ ಕಿವಿ ತಲುಪಿದಾಗ ಗುನುಗುವ ಸಾಲಾಗುತ್ತದೆ ಅಷ್ಟೆ. ಅರೆ ಹರಯದ ನರಕೊಳಲು ಅಂದ್ರೆ ಏನು… ಮದನನ ಕಿರುಬೆರಳು ಅಂದ್ರೆ.. ? ಸಾಮಾನಿಗೆ ಇಷ್ಟು ಸಭ್ಯಶೃಂಗಾರರೂಪ ಕೊಟ್ಟು ಹೇಳಿರೋದಾ ಅನಿಸಿದಾಗ.. ಶೃಂಗಾರ ಅಡಗಿರೋ‌ ಸಾಲಾದರೂ ಜೋರಾಗಿ ಹೇಳೋಕೆ ಮನಸು ಹಿಂಜರಿಯುತ್ತದೆ.

ಸಾಹಿತ್ಯ ಅಷ್ಟಾಗಿ ಗಮನಿಸದ ವಯಸ್ಸಲ್ಲಿ… “ಮೈಯ್ಯಲ್ಲಿ ಏಳುತಿದೆ ಮನ್ಮಥ‌ನ ಅಂಬುಗಳು.. ಜುಮ್ ಜುಮ್ ಜುಮ್..” ಅನ್ನೋ ಸಾಲು ಸಂಕ್ರಾಂತಿ ಗೀತೆ ಎಂಬಂತೆ ಬಂದು ಹೋಗುತ್ತಿತ್ತು.

ಆದರೆ ಆನಂತರ ಸಾಹಿತ್ಯವಾಗಿ ಗಮನಿಸಿದಾಗ.‌ ಆಹಾ ರೋಮಾಂಚನವನ್ನು.. ಮೈರೋಮ ನಿಮಿರುವುದನ್ನು ಮನ್ಮಥನ ಬಾಣಕ್ಕೆ ಹೋಲಿಸಿದ್ದಾರಲ್ಲ ಅನಿಸಿ ನಿಜಕ್ಕೂ ಜುಮ್ ಅನಿಸಿತ್ತು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿದರೆ.. ಮೈಯಲ್ಲಿ ಏಳುತಿದೆ ಮನ್ಮಥನ ಅಂಬು ಅಂದ್ರೆ.. ಒನ್ಸಗೇನ್ ಸಾಮಾನಿರಬಹುದಾ ಅನಿಸದಿರದು.

ಸದಾಶಿವಂಗೆ ಅದೇ ಗ್ಯಾನ ಅಂದ್ಕೋಬೇಡಿ..

ನೆನಪಿರಲಿ ಚಿತ್ರದ ಅಜಂತಾ ಎಲ್ಲೋರಾ ಗೀತೆಯಲ್ಲಿ ಬರುವ… “ಮಂದವಾಗಿ ಬಳುಕೋವಂಥ ನಾರಿ ಇವಳ
ಅಂದ ನೋಡಿ ನಿಂತಾಗ..ಚಂದ ನೋಡಿ ನಿಂತಾಗ..
ಯಾರೊ ನೀನು ಎಂದು ಕೇಳುತಾವೆ..
ಇವಳ ಪೊಗರಿನ ಹೃದಯಪಾಲಕಿಯರು..
ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ…”

ಈ ಸಾಲುಗಳು ತನ್ನ ರಿದಮಿಕ್ ಮ್ಯೂಸಿಕ್ ಹಾಗೂ ಸುಲಲಿತವಾಗಿ ಲಘುಗುರು ಇಟ್ಟು ಬರೆದಂಥ ಪದಗಳ‌ ಆಟದಿಂದ ಮಜವಾಗಿ ಹಾಡಿಸಿಕೊಂಡು ಬಿಡ್ತವೆ. ಆದರೆ ಯಾವತ್ತೋ ಆರಾಮಾಗಿ ಸಾಹಿತ್ಯ ಕೇಳ್ತಾ ಇದ್ದರೆ.. ಆಹಾ ..ಹಂಸಲೇಖರ ರಸಿಕಕಲ್ಪನೆಗಳಿಗೆ ಮಿತಿಯೇ ಇಲ್ಲವಾ ಅನಿಸಿಬಿಡುತ್ತದೆ.

ಯಾರೋ ನೀನು ಎಂದು ಕೇಳುತಾವೆ ಇವಳ “ಪೊಗರಿನ ಹೃದಯ ಪಾಲಕಿಯರು” ಎಂದು ಅವರು ರೆಫರ್ ಮಾಡ್ತಿರೋದು ಆ ಹೆಣ್ಣಿನ ಸ್ತನಗಳ ಬಗ್ಗೆ ಅಂತ ಅರ್ಥವಾದಾಗ ಮತ್ತೊಮ್ಮೆ ಈ ಸಾಂಗ್ ಕೊಡುವ ಅನುಭೂತಿಯೇ ವಿಭಿನ್ನ. “ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ” ಎಂದು ಮುಂದುವರಿಸಿ ಆ ಸಾಲಿಗೆ ಇನ್ನಷ್ಟು ರಸಿಕತೆ ತುಂಬುತ್ತಾರೆ ಹಂಸ್.

ಗಡಿಬಿಡಿಗಂಡ ಚಿತ್ರದ…. ಮುದ್ದಾಡೆಂದಿದೆ ಮಲ್ಲಿಗೆ ಹೂ ಗೀತೆಯಲ್ಲಿ……. ನಾಯಕಿ”ಎದೆಯ ಸೆರಗ ಮೋಡದಲ್ಲಿ ನೀನೇ ಚಂದ್ರನೀಗ….” ಅಂದರೆ…. ನಾಯಕ” ಹೃದಯ ಮೇರುಗಿರಿಗಳಲ್ಲಿ… ಕರಗಬಹುದೆ ಈಗ” ಅಂತಾನೆ. “ಮುಡಿಯಲಿ ಮಲ್ಲಿಗೆಯ ಮುಡಿದವಳ ಮೊದಲುಮುಡಿಯಬೇಕು.. ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು…” ಅಂತ ನಾಯಕಿ ತನ್ನನ್ನು ಮೊದಲು ರಮಿಸು ಅಂತ ಒತ್ತಾಯಿಸುತ್ತಿದ್ದರೆ………… ನಾಯಕ ..” ಮನಸಿನ ಮಧುವಿನ ಮಹಲೊಳಗೆ … ಮದನ ಮಣಿಯಬೇಕು… ಸುರತಿಯ ಪರಮಾನ್ನ ಹಿತಮಿತವಿರಬೇಕು” ಅಂತ ಆಕೆಯ ಮೇಲಿರೋ ಮೋಹದ ಜೊತೆಜೊತೆಗೆ ಪ್ರತಿದಿನ ಬೇಡ ಫ್ರೀಡಮ್ಮು ವೀಕ್ಲಿ ಒನ್ಸು ಜುಮ್ ಜುಮ್ಮು” ಅಂತ ದೂರ ಹೋಗೋ ಪ್ರಯತ್ನ ಕೂಡ ಮಾಡುತ್ತಾನೆ.

ಇದು ಕೂಡ ಹೆಣ್ಣು ತನ್ನ ಗಂಡನ್ನು ಸೆಕ್ಸಿಗಾಗಿ ಕರೆಯುವ ಗೀತೆಯೇ ಆದರೂ… ತನ್ನ ಕ್ಲಾಸಿಕಲ್ ಟ್ಯೂನ್ ನಿಂದ ಚೆಂದದ ಪದಜೋಡಣೆಯಿಂದ… ಈ ಹಾಡು ಕೊಂಚವೂ ಅಶ್ಲೀಲ ಅನಿಸೋದೇ ಇಲ್ಲ. ಅಶ್ಲೀಲ ಅನಿಸಿದರೂ ಓಕೆ ಎಂದು ಬರೆದಾಗ.. ರಾತ್ರಿ ಆಯ್ತು ಮಲಗೋಣ ಇಂದು ನಮ್ಮ ಸೋಭಾನ… ಅಥವಾ ಕಾಯಿ ಕಾಯಿ ನುಗ್ಗೇಕಾಯಿ ಮಹಿಮೆಗೆ ರಾತ್ರಿಯೆಲ್ಲ ನಿದ್ದೆಯಿಲ್ಲ ಕಣ್ಣಿಗೆ.. ನೆಲ್ಲಿಕಾಯಿ ಆಸೆಗೆ ಬಿಟ್ಟು ಬಂದೆ ಹಾಸಿಗೆ ಅಂತ ಸ್ವಲ್ಪ ನೇರವಾಗಿಬಿಡುತ್ತಾರೆ ಹಂಸಲೇಖ.

ಇವೆಲ್ಲ ಸಾಹಿತ್ಯವನ್ನು ಗಮನಿಸುವಾಗ ಅರ್ಥವಾಗುತ್ತಾ ಹೋಗುವ ಅಪಾರಾರ್ಥಗಳು. ತೂಗುಮಂಚದ “ಹಮ್ಮನುಸಿರಬಿಟ್ಟಳು ಎಂಬುದು ಅಮ್ಮನುಸಿರ ಬಿಟ್ಟಳು ಎಂದಾಗಿದ್ದು ಅದನ್ನು ಲಾಲಿಹಾಡೆಂದು ತಪ್ಪು ತಿಳಿದುದರ ಪರಿಣಾಮ ಎಂದು ಹಿಂದೊಮ್ಮೆ ಬರೆದಿದ್ದು ನಿಮಗೆ ನೆನಪಿರಬಹುದು.

ಇನ್ನು ಡಬಲ್ ಮೀನಿಂಗೇ ಹುಡುಕಬೇಕು ಅಂದರೆ ಪ್ರತಿ ಗೀತೆಯೂ ಬೇರೆಯೇ ಅರ್ಥ ಕೊಡಬಲ್ಲ ಕೆಪಾಸಿಟಿ ಹೊಂದಿರುತ್ತದೆ. ಅದು ನಾವು ಆ ಗೀತೆಯನ್ನು ಬಿಂಬಿಸೋಕೆ ಹೊರಟಿರುವ ರೀತಿಯ ಮೇಲೆ ಡಿಪೆಂಡು. ಎಂಥ ಸಭ್ಯಸಾಲನ್ನೂ.. ಕವಿಗೇ ಶಾಕ್ ಆಗುವ ಹಾಗೆ ಡಬಲ್ ಮೀನಿಂಗ್ ಆಗಿಸಬಹುದು. ಆ ಉದಾಹರಣೆ ಈ ಬರಹದಲ್ಲಿ ಬೇಡ. ಮುಂದೆಂದಾದರೂ ಬರೆಯೋಣ.

ಇದೆಲ್ಲ ಬರೆಯೋಕೆ ಹೊರಟಿದ್ದಕ್ಕೆ ಪ್ರೇರಣೆ ಅಣ್ಣಯ್ಯ ಚಿತ್ರದ ಒಂದು ಸಾಂಗ್. ಅಣ್ಣಯ್ಯ ಬಂದು ಹೋಗಿ ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಟೈಮಾಯ್ತು. ರವಿಚಂದ್ರನ್ ಸಿನಿಮಾಗಳು ಸಾಫ್ಟ್ ಪೋರ್ನ್ ಸಿನಿಮಾಗಳಂತೆ ಭಾಸವಾಗುತ್ತಿದ್ದ ನಮ್ಮ ಏಜಿನ ದಿನಗಳವು. ರವಿಚಂದ್ರನ್ ಸಿನಿಮಾಗಳನ್ನು ನೋಡೋದು ಕಾಶೀನಾಥ್ ಸಿನಿಮಾ ನೋಡೋಷ್ಟೇ ಪಾಪ ಎಂಬಷ್ಟು ಮಡಿವಂತಿಕೆ ದಿನಗಳವು. ಆದರೆ ನಮ್ಮ ಪಾಲಿಗೆ ಆಗ ರವಿಮಾಮಾ ಲವ್ ರೊಮ್ಯಾನ್ಸ್ ಶೃಂಗಾರಗಳಿಗೆ ಗಾಡ್. ಆತ ಹೀರೋಯಿನ್ ಎದೆಯ ಮೇಲೆ ಮುಖವಿಟ್ಟು ಒರಗಿದರೆ ನಮಗೆ ರಸಸ್ಫೋಟ ಆಗುತ್ತಿತ್ತು. ಕುತ್ತಿಗೆಗೊಂದು ಮುತ್ತಿಟ್ಟು ತುದಿಬೆರಳುಗಳನ್ನು ಕತ್ತು ಮತ್ತು ಎದೆಯ ನಡುವೆ ಒಮ್ಮೆ ಆಡಿಸಿದ ಅಂದರೆ ಕೊಳಲು ಲಂಬಕೋನವಾಗುತ್ತಿತ್ತು.

ಆತ ಸೆರಗು ಸರಿಸಿ ಹೊಕ್ಕಳಿಗೊಮ್ಮೆ ಮುತ್ತಿಟ್ಟರೆ ಮುಗಿದೇಹೋಯ್ತು ಊರಸ್ನಾಯುಗಳು ಬಿಗಿಯಾಗಿ ಹೋಗುತ್ತಿದ್ದವು. ಅಂದು ಹಂಸಲೇಖ ಗೀತೆಗಳು ರವಿಚಂದ್ರನ್ ನ ಪಿಚ್ಚರೈಸೇಷನ್ನಲ್ಲಿ ಕಳೆದುಹೋಗಿಬಿಡುತ್ತಿದ್ದವು. ಅಥವಾ ಸಾಹಿತ್ಯ ಸಂಗೀತ ಎಲ್ಲದರಾಚೆಗೆ ನಮಗೆ ಆ ರೊಮ್ಯಾನ್ಸೇ ಹೆಚ್ಚು ಆಕರ್ಷಿಸಿಬಿಡುತ್ತಿತ್ತು. ಕ್ಯಾಸೆಟಲ್ಲಿ ಹಾಡುಗಳನ್ನು ಕೇಳಿ ಸಿನಿಮಾಗೆ ಹೋದಾಗ ಗೀತೆಗಳು ಆಡಿಯೋಗಿಂತ ವಿಡಿಯೋವಾಗಿ ತೃಪ್ತಿಕೊಟ್ಟು ಕಳಿಸುತ್ತಿದ್ದವು. ಆದರೆ ಆನಂತರ ಸಾಹಿತ್ಯ ಗಮನಿಸುವ ಮೆಚುರಿಟಿ, ಸಾಹಿತ್ಯದಲ್ಲಿರುವ ಇಮ್ಯಾಜಿನೇಷನ್ ಪವರ್ ಆಸ್ವಾಧಿಸುವ ಮನಸ್ಥಿತಿ ಎಲ್ಲ ಬಂದಾಗ.. ರವಿ ಚಂದ್ರನ್ ಹಂಸಲೇಖರ ಗೀತೆಗೆ ಹತ್ತು ಪರ್ಸೆಂಟಷ್ಟೂ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ ಅನಿಸಿಬಿಟ್ಟಿದೆ. ಹಾಗಂತ ಹಂಸಲೇಖರ ಸಾಹಿತ್ಯಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಿತ್ತಾ? ಖಂಡಿತ ಇಲ್ಲ. ಯಥಾವತ್ ನ್ಯಾಯ ಸಲ್ಲಿಸಲು ಹೋದದ್ದೇ ಆದರೆ ಆ ಸಾಂಗ್ ನ ಪಿಚ್ಚರೈಸೇಷನ್ ಕಾಮಸೂತ್ರವಾಗಿ ಹೋಗುವಷ್ಟು ಹಾಟ್ ಆಗಿಬಿಡುತ್ತಿತ್ತು.

ಆ ಗೀತೆಗಳು ಪಿಚ್ಚರೈಸ್ ಆಗದೆಯೇ ಇಮ್ಯಾಜಿನೇಷನ್ನಲ್ಲೇ ಉಳಿದುಬಿಟ್ಟಿದ್ದರೆ ಎಷ್ಟು ಚೆಂದವಿತ್ತು ಅನಿಸಿದ್ದೂ ಇದೆ. ಸತ್ಯ ಏನಂದರೆ ರವಿಚಂದ್ರನ್ ಸಲ್ಲಿಸಿದಷ್ಟು ನ್ಯಾಯವನ್ನು ಹಂಸಲೇಖರ ಗೀತೆಗೆ ಇನ್ಯಾರೂ ಸಲ್ಲಿಸಲು ಸಾಧ್ಯವಾಗಲಿಲ್ಲ. ರೊಮ್ಯಾಂಟಿಕ್ ಗೀತೆಗಳಲ್ಲಿ ಮಾತ್ರವಲ್ಲ… ಬೇರೆ ಗಂಭೀರ/ಸ್ಯಾಡ್/ಫಿಲಾಸಫಿಕಲ್/ಕ್ರಾಂತಿ ಯಾವ ಗೀತೆಗಳಿಗೂ ವಿಶ್ಯುಯಲಿ ನ್ಯಾಯ ಸಿಕ್ಕಿಲ್ಲ. ಇದು ಹಂಸಲೇಖ ಮಾತ್ರ ಅಲ್ಲ.. ಬಹುತೇಕ ಸಾಹಿತಿಗಳ ಮನಸಿನ ಮೂಲೆಯ ಅಸಮಾಧಾನ ಹಾಗೂ ನೋಡುಗರ ಅಸಂತೃಪ್ತಿ. ಮೊನ್ನೆ ನಾನು ಶೇರ್ ಮಾಡಿಕೊಂಡ ” ಸುಮ್ಮನೆ ಹೀಗೆ ನಿನ್ನನೇ …:” ಎಂಬ ಅಮರ್ ಚಿತ್ರದ ಗೀತೆಯಾದರೂ ಅಷ್ಟೆ. ಅಷ್ಟು ಗಾಢ ಸಾಲುಗಳ ಗೀತೆಗೆ ಅಂಬರೀಶ್ ಪುತ್ರನಿಂದ ಕಲ್ಲುಬಂಡೆಯಂಥ ಅಭಿನಯ. ಇಡೀ ಹಾಡನ್ನು ಲಾಂಗ್ ಶಾಟ್ ಗಳಲ್ಲಿ ತೆಗೆದು ಪ್ರಕೃತಿ ಸೌಂದರ್ಯ ತೋರಿಸಿ ಮುಗಿಸಿದ್ದಾರೆ ನಾಗಶೇಖರ್. ಸಾಹಿತ್ಯಕ್ಕೆ ಸಂಗೀತ ಸಲ್ಲಿಸುವಷ್ಟು ನ್ಯಾಯವನ್ನು ದೃಶ್ಯರೂಪ ಸಲ್ಲಿಸಲು ಸಾಧ್ಯವಿಲ್ಲ. ಬೆಟರ್ ನಾವು ಹಾಡುಗಳನ್ನು ನಮ್ಮ ಇಮ್ಯಾಜಿನೇಷನ್ ಗೆ ತಕ್ಕಂತೆ ಕಣ್ಮುಚ್ಚಿಕೊಂಡು ಮನಸ್ಸಿನೊಳಗೇ ಚಿತ್ರಿಸಿಕೊಂಡುಬಿಡುವುದು.

ಬ್ಯಾಕ್ ಟು ಅಣ್ಣಯ್ಯ ಚಿತ್ರದ ಆ ಸಾಂಗ್ : ಇಷ್ಟು ವರ್ಷದಲ್ಲಿ ಈ ಹಾಡನ್ನು ಕಮ್ಮಿ ಅಂದ್ರೂ ಒಂದು ಸಾವಿರ ಸಲ ಕೇಳಿರುತ್ತೇನೆ. ಹಿಟ್ ಆಲ್ಪಮ್ ಆಗಿರುವ ಅದರ ಕಡಿಮೆ ಪಾಪ್ಯುಲರ್ ಗೀತೆ ಅದು.

“ಅ ಹಾಗೆ ಪ್ರೇಮಿ ಓಹೋ.. ಒ ಹೋಗೆ ಪ್ರೇಮಿ ಆಹಾ…”
ಈ ಹಾಡಿನ ಚಿತ್ರಣ ನಿಮ್ಮನ್ನು ಸಾಹಿತ್ಯ ಗಮನಿಸದಷ್ಟು ಸೆಳೆದುಕೊಳ್ಳುತ್ತದೆ ಕಾರಣ. ರವಿಚಂದ್ರನ್ ಮಧುಬಾಲಾ ಕೆಮಿಸ್ಟ್ರಿ! ಆದರೆ ಅದ್ಯಾಕೋ ಗೀತೆ ತುಂಬ ಅಟ್ರಾಕ್ಟಿವ್ ಅನಿಸಿರಲಿಲ್ಲ. ಕಮಾನು ಡಾರ್ಲಿಂಗ್, ಅಣ್ಣಯ್ಯ ಅಣ್ಣಯ್ಯ ಬಾರೋ, ರಾಗಿ ಹೊಲದಾಗೆ ಖಾಲಿ ಗುಡಿಸಲು ಈ ಗೀತೆಗಳು ಕೊಟ್ಟ ಕಿಕ್ …. ಈ ಅ ಹಾಗೆ ಪ್ರೇಮಿ ಓಹೋ… ಒ ಹೋಗೆ ಪ್ರೇಮಿ ಆಹಾ ಗೀತೆ ನೀಡಿರಲಿಲ್ಲ.

ಹೌದು ನಾನು ಈ ಹಾಡನ್ನು ಕೇಳಿಸಿಕೊಳ್ತಾ ಇದ್ದದ್ದೇ ಹೀಗೆ. ಮೊನ್ನೆಯ ತನಕವೂ…ಆದರೆ ಮೊನ್ನೆ ಯಾಕೋ ಮತ್ತೊಮ್ಮೆ ಕೇಳಿಸಿಕೊಂಡಾಗ.. ಅರೆ ಇಪ್ಪತ್ತೈದು ವರ್ಷ ತಪ್ಪಾಗಿ ತಿಳಿದುಕೊಂಡು ತಪ್ಪಾಗೇ ಹಾಡಿಕೊಂಡೆನಲ್ಲ ಅಂತ ಮೈತುಂಬ ಗಿಲ್ಟು

ಆ ಸಾಂಗ್ ಇರೋದು ಹೀಗೆ…

”ಆಹಾ’ಗೆ ಪ್ರೇಮಿ “ಓಹೋ”
” ಓಹೋ”ಗೆ ಪ್ರೇಮಿ ” ಆಹಾ”

ನನ್ನ ಹಾಗೆ ಅದೆಷ್ಟು ಜನ ಯಾಮಾರಿದ್ದೀರೋ ಗೊತ್ತಿಲ್ಲ. ಅಥವಾ ನಾನೊಬ್ನೇ ಹೀಗೆ ತಪ್ಪಾಗಿ ಕೇಳಿಸಿಕೊಂಡವ್ನೋ ಗೊತ್ತಿಲ್ಲ

ಈ ಗೀತೆಯ ವಿಶೇಷ ಏನಂದ್ರೆ ಹಂಸಲೇಖ. ಆಹಾ ಮತ್ತು ಓಹೋ ಎಂಬ ಎರಡು ಪದಗಳನ್ನೇ ಪ್ರೇಮಿಗಳನ್ನಾಗಿಸಿದ್ದಾರೆ

ಆಹಾಗೆ ಓಹೋ ಪ್ರೇಮಿ… ಓಹೋಗೆ ಆಹಾ ಪ್ರೇಮಿ!
ಅದು ಇಬ್ಬರು ಪ್ರ‍ೇಮಿಗಳ ಹೆಸರು!

ಈಗ ಈ ಹಾಡೊಮ್ಮೆ ಕೇಳಿನೋಡಿ…
ಅದು ಸೌಂಡಾಗೋದೇ ಬೇರೆ ಥರ!

ಅದ್ಯಾಕೆ ಆಹಾ ಓಹೋ ಎಂಬ ಪದಗಳು ಇಲ್ಲಿ ಪಾತ್ರಗಳಾದವು ಅಂತ ಸಿನಿಮಾ ತೆರೆದು ನೋಡಿದೆ. ಈ ಹಾಡು ಆರಂಭವಾಗುವ ಮುನ್ನ ಅಣ್ಣಯ್ಯ ಯಾವುದೋ ಫೈಟಿಂಗಲ್ಲಿ ಒದೆ ತಿಂದು ಬೆನ್ನಿಗೆ ಕಾಶಿ ಕೈಲಿ ಬಿಸಿ ಮಸಾಜ್ ಮಾಡಿಸಿಕೊಳ್ತಾ ಇರ್ತಾನೆ. ಅವನ ಇಮ್ಯಾಜಿನೇಷನಲ್ಲಿ ನಾಯಕಿ ಬಂದು ಕಾಶಿಯ ಬದಲು ಮಸಾಜ್ ಮಾಡ್ತಿರೋ ಹಾಗೆ ಒಂದು ಟ್ವಿಸ್ಟು.. ಇಮ್ಯಾಜಿನೇಷನಲ್ಲೇ ಅವಳೊಂದಿಗೆ ಮಾತಾಡ್ತಾ.. ಆಕೆ ಬಿಸಿ ಶಾಖ ಕೊಟ್ಟಾಗ ಒಮ್ಮೆ ನಾಯಕ ಆಹಾ ಅಂತಾನೆ.. ಇನ್ನೊಮ್ಮೆ ಓಹೋ ಎಂದು ಬಿಗಿಯುಸಿರು ಬಿಡುತ್ತಾನೆ. ಆಗ ಹುಟ್ಟುವ ಹಾಡಿದು. ಡ್ರೀಮ್ ಸಾಂಗ್ ನಲ್ಲಿ ಟೆಕ್ಸ್ಟ್ ಕೂಡ ಬರುತ್ತದೆ ಆಹಾ ಓಹೋ ಅಂತ!

ಸ್ಕ್ರಿಪ್ಟ್ ಜೊತೆ ದೃಶ್ಯರಚನೆ ಜೊತೆ ಗೀತ ಸಾಹಿತಿ ಕನೆಕ್ಟ್ ಆದಾಗ ಇಂಥ ಅದ್ಭುತಗಳು, ಮಜಗಳು, ಕ್ರಿಯೇಟಿವ್ ಐಡಿಯಾಗಳು ಹುಟ್ಟುತ್ತವೆ. ಹಂಸಲೇಖ ಎಲ್ಲೋ ಕೂತು ಹಾಡುಬರೆದುಕೊಟ್ಟು ಸಂಗೀತ ಮಾಡಿಕೊಡ್ತಿರಲಿಲ್ಲ. ಸಿನಿಮಾದೊಂದಿಗೆ ಪ್ರೀ ಪ್ರೊಡಕ್ಷನ್ನಿಂದ ರೀರೆಕಾರ್ಡಿನ ತನಕ ಜರ್ನಿ ಮಾಡ್ತಿದ್ರು ಅನ್ನೋದಕ್ಕೆ ಇದೊಂದು ಸಾಕ್ಷಿ. ಅವರಿಬ್ಬರ ಕಾಂಬಿನೇಷನ್ ಯಾಕೆ ಆ ಪರಿ ಕ್ಲಿಕ್ ಆಗುತ್ತಿತ್ತು ಅನ್ನೋದಕ್ಕೂ ಇದೊಂದು ಪುರಾವೆ. ( ಬರಹ : ನವೀನ್ ಸಾಗರ್ ; ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಉಸಿರು

Published

on

ಮೂಲ : ಜಲಾಲುದ್ದೀನ್ ರೂಮಿ, ಕನ್ನಡಕ್ಕೆ : ಡಾ.ಎಚ್.ಎಸ್.ಅನುಪಮಾ

ನಾ ಕ್ರೈಸ್ತನಲ್ಲ, ಯಹೂದಿ, ಮುಸಲ್ಮಾನ, ಹಿಂದುವೂ ಅಲ್ಲ ಬೌದ್ಧ, ಸೂಫಿ, ಝೆನ್ ಧರ್ಮದವನೂ ಅಲ್ಲ

ಪಂಥ ಪರಂಪರೆಯವನಲ್ಲ, ಮೂಡಲದವನಲ್ಲ ಪಡುವಣದವನಲ್ಲ, ಕಡಲೊಳಗಿನಿಂದೆದ್ದು ಬಂದವನಲ್ಲ

ನೆಲದಿಂದುದ್ಭವಿಸಲಿಲ್ಲ, ಸಹಜ ಸೃಷ್ಟಿಯಲ್ಲ, ದೈವಿಕವಲ್ಲ ಪಂಚಭೂತಗಳಿಂದಾದವನಲ್ಲ, ನಾ ಎಂಬುದೇ ಇಲ್ಲ

ಇಹದಲೂ ಪರದಲ್ಲೂ ನನ್ನ ಕುರುಹಿಲ್ಲ ಆಡಂ ಈವರ ವಂಶದ ಕುಡಿಯಲ್ಲ

ಯಾವ ವಂಶಾವಳಿಯೂ ನನಗಿಲ್ಲ, ನೆಲೆಯಿರದವ ಕಾಯವಲ್ಲ, ಆತ್ಮವೂ ಅಲ್ಲ, ನಿಶ್ಲೇಷದ ಶೇಷ

ನಾ ಪ್ರೇಮಿಯವ, ಲೋಕವೆರೆಡನೊಂದೇ ಆಗಿ ಕಂಡವ ಕರೆವುದು ಪ್ರೇಮ ನನ್ನ, ಅರಿತುಕೊಳುವುದು ತನ್ನ ತಾ..

ಮೊದಲ, ಕೊನೆಯ, ಹೊರ, ಒಳ
ಎಲ್ಲವೂ ಪ್ರೇಮ, ಪ್ರೇಮ, ಬರೀ ಪ್ರೇಮ
ಅದು ಪ್ರಾಣ, ಅದೇ ಉಸಿರು.

ಉಸಿರಾಡು ಮನುಜ.

(ಈ ಕವಿತೆಯನ್ನು ಲಡಾಯಿ ಪ್ರಕಾಶನ ಗದಗ ಇವರು ಪ್ರಕಟಿಸಿರುವ ‘ಉರಿಯ ಕುಡಿಯ ನಟ್ಟ ನಡುವೆ‘ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಜಲಾಲುದ್ದೀನ್ ರೂಮಿಯ ಕವಿತೆಗಳನ್ನು ಕನ್ನಡಕ್ಕೆ ಡಾ.ಎಚ್.ಎಸ್. ಅನುಪಮ ಅವರು ಅನುವಾದಿಸಿರುವ ಕೃತಿ ಇದಾಗಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಆತ್ಮಕತೆ | ತುರ್ತು ಪರಿಸ್ಥಿತಿ ಮತ್ತು ನಮ್ಮೂರಿನ ಭೂ ಹೋರಾಟ

Published

on

  • ರುದ್ರಪ್ಪ ಹನಗವಾಡಿ

ದೇಶದಾದ್ಯಂತ ತುರ್ತುಪರಿಸ್ಥಿತಿ ಇತ್ತು. ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನಗಳು ನಿಗದಿಯಂತೆ ನಡೆಯುತ್ತಿದ್ದವು. ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾಂಗ್ರೆಸ್ ವಿರೋಧಿ ರಾಜಕೀಯ ನಾಯಕರನ್ನು ಬಂಧಿಸಿ ಜೈಲಿನಲ್ಲಿರಿಸಿದ್ದರು. ಇಂದಿರಾ ಗಾಂಧಿಯವರ 20 ಅಂಶದ ಕಾರ್ಯಕ್ರಮಗಳು ವಿಶೇಷವಾಗಿ ದಲಿತ ಹಿಂದುಳಿದವರ ಪರವಾಗಿದ್ದುದನ್ನು ಮುಖ್ಯಮಂತ್ರಿ ದೇವರಾಜ ಅರಸು ಅವರು ಒತ್ತಿ ಹೇಳುತ್ತಿದ್ದರು ಮತ್ತು ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಂಡು ರಾಜ್ಯಾಡಳಿತವನ್ನು ನಡೆಸುತ್ತಿದ್ದರು.

ದೇವರಾಜ ಅರಸು ಅವರು ಕರ್ನಾಟಕದಲ್ಲಿ ಹಿಂದೆಂದೂ ನೀಡಿರದಿದ್ದ ವಿಶೇಷ ಸವಲತ್ತುಗಳನ್ನು ದಲಿತರು, ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ನೀಡುತ್ತಿದ್ದರು. ಹಾಗೆ ಹೇಳುತ್ತಲೂ ಇದ್ದರು. ಅದು ನಿಜವೂ ಆಗಿತ್ತು. ಆದರೆ ನಾವೆಲ್ಲ ತುರ್ತುಪರಿಸ್ಥಿತಿಯ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೆವು.

ನಮ್ಮ ಊರಿನಲ್ಲಿ ವೀರಭದ್ರ ದೇವರ ಚಾಕರಿ (ಮ್ಯಾಳ) ಮಾಡುತ್ತಿದ್ದ ಕಾರಣ ಹದಿನೇಳು ಎಕರೆ ವೀರಭದ್ರ ದೇವರ ಹೆಸರಿನಲ್ಲಿದ್ದುದನ್ನು ನಮ್ಮ ಎಲ್ಲ ಆರು ಕುಟುಂಬಗಳಿಗೆ ಊರಿನ ಪ್ರಮುಖರು ನಾವಿನ್ನು ಹುಟ್ಟುವ ಮುಂಚೆಯೇ ಹಂಚಿ ಕೊಟ್ಟಿದ್ದರು. ಅದರಲ್ಲಿ ಅಪ್ಪನಿಗೆ ಸುಮಾರು ನಾಲ್ಕು ಎಕರೆಯಷ್ಟನ್ನು ನೀಡಿದ್ದು ಸಾಗುವಳಿ ಮಾಡಿಕೊಂಡು ಬರುತ್ತಿದ್ದೆವು. ಈ ನಡುವೆ ಭೂಸುಧಾರಣಾ ಕಾನೂನು ಜಾರಿ ಮಾಡುವ ಬಗ್ಗೆ ಅರಸು ಸರ್ಕಾರ ವಿಶೇಷವಾಗಿ ಭೂನ್ಯಾಯ ಮಂಡಳಿಯನ್ನು ರಚಿಸಿತ್ತು. ಇದನ್ನರಿತ ನಮ್ಮವರೆಲ್ಲ ಸೇರಿ ನಮ್ಮ ಅಣ್ಣ ತಿಪ್ಪಣ್ಣನ ಪ್ರಯತ್ನದಿಂದ ಸರ್ಕಾರ ರಚಿಸಿದ್ದ ಭೂನ್ಯಾಯ ಮಂಡಳಿಯ ಮುಂದೆ ಎಲ್ಲ ಆರು ಜನರೂ ತಮಗೆ ಭೂಮಿಯ ಹಕ್ಕು ನೀಡಲು ನಮೂನೆ 7ರ ಅರ್ಜಿ ಸಲ್ಲಿಸಿದ್ದರು.

ಭೂನ್ಯಾಯ ಮಂಡಳಿಯ ಮುಂದೆ ಅರ್ಜಿ ಹಾಕಿದ ವಿಷಯ ಊರಲ್ಲಿ ದೊಡ್ಡ ಅಸಮಾಧಾನದ ಕಿಚ್ಚನ್ನು ಮೂಡಿಸಿತ್ತು. ಈ ನಡುವೆ ನಮಗಾಗಿ ಕೊಟ್ಟಿದ್ದ 17 ಎಕರೆಯಲ್ಲಿ ಮಧ್ಯ ಭಾಗದಲ್ಲಿ 4 ಎಕರೆಯನ್ನು ಕಬಳಿಸುವಷ್ಟು ರಾಷ್ಟ್ರೀಯ ಹೆದ್ದಾರಿಯು ದಾವಣಗೆರೆಯಿಂದ ಹುಬ್ಬಳ್ಳಿವರೆಗೆ ಬೈಪಾಸ್ ರಸ್ತೆಗಾಗಿ ಸರ್ಕಾರ ವಶಪಡಿಸಿಕೊಂಡಿತ್ತು. ಸರ್ಕಾರದಿಂದ ನೀಡಿದ ನಾಲ್ಕು ಎಕರೆ ಪರಿಹಾರದ ಹಣವನ್ನು ಕೂಡ ದೇವಸ್ಥಾನದವರೇ ತೆಗೆದುಕೊಂಡಿದ್ದರು. ಉಳಿದಿದ್ದ 13 ಎಕರೆಯಲ್ಲಿ ಮತ್ತೆ ಪುನಃ ಮರು ಹಂಚಿಕೆ ಮಾಡಿಕೊಂಡು ಆರು ಜನರು ಸುಮಾರು ಎರಡೆರಡು ಎಕರೆಗಳಷ್ಟು ಸಾಗುವಳಿ ಮಾಡುತ್ತಿದ್ದರು.
ದೇವಸ್ಥಾನ ಧರ್ಮದರ್ಶಿ ಕಮಿಟಿಯಲ್ಲಿ ಊರಿನ ಹಿರಿಯರಿದ್ದರೂ ಉಳಿದಿರುವ ಭೂಮಿಯನ್ನು ನಮ್ಮವರಿಂದ ಬಿಡಿಸುವುದು ಮತ್ತು ಪ್ರತಿ ಮಂಗಳವಾರ ಗುಡಿಯಲ್ಲಿ ಮಾಡುತ್ತಿರುವ ಮ್ಯಾಳಗಳನ್ನು ನಿಲ್ಲಿಸಬೇಕೆಂದು ಚರ್ಚೆ ಆಗ ಊರಲ್ಲಿ ನಡೆಯುತ್ತಿತ್ತು. ಅವರೆಲ್ಲರ ಚರ್ಚೆಗಳ ಮಧ್ಯೆ ಮ್ಯಾಳದವರು ನಿಲ್ಲಿಸದೆ ಪ್ರತಿ ಮಂಗಳವಾರ ತಪ್ಪಿಸದೆ ಗುಡಿಗೆ ಹೋಗಿ ಎಂದಿನಂತೆ ಮ್ಯಾಳ ಮಾಡಿ ಬರುತ್ತಿದ್ದರು.

ನಮ್ಮೂರ ಚಲುವಾದಿಗಳಿಗೆ ಈ ರೀತಿಯ ಧೈರ್ಯವಿರಲಿಲ್ಲ. ಇವೆಲ್ಲದರ ಹಿಂದಿನ ಯೋಜಕ ಮೈಸೂರಲ್ಲಿ ಓದುತ್ತಿರುವ ಹುಡುಗ ನಾನೇ ಎಂದು ಊರವರು ಮಾತಾಡಿಕೊಂಡರು. ಅವನು ಊರಿಗೆ ಯಾವ ದಾರಿಯಲ್ಲಿ ಬರುತ್ತಾನೋ ಕಾದು ಕುಳಿತು ಕಾಲು ಮುರಿಯಬೇಕೆಂಬ ಯೋಜನೆ ಕೂಡ ಹಾಕಿಕೊಂಡಿದ್ದರಂತೆ. ಆದರೆ ಏಕಾಂಗಿಯಾಗಿ ಓಡಾಡುತ್ತಿದ್ದ ನನಗೆ ಒಳಗೊಳಗೆ ಅಳುಕು ಇದ್ದರೂ ನಾನೇನು ತಪ್ಪು ಮಾಡುತ್ತಿಲ್ಲ ಎಂಬ ತಿಳುವಳಿಕೆ ಧರ‍್ಯ ನೀಡುತ್ತಿತ್ತು. ಆದರೆ ಊರಿಗೆ ಬಂದು ಹೊರಗೆ ಓಡಾಡುತ್ತಿದ್ದರೆ ನಮ್ಮವರೆಲ್ಲ ದೂರದಲ್ಲಿದ್ದುಕೊಂಡೇ ನನ್ನನ್ನು ಊರಲ್ಲಿರುವ ತನಕ ವಿಶೇಷವಾಗಿ ಕವರ್ ಮಾಡುತ್ತಿದ್ದರು.

ಇದಕ್ಕೂ ಮುಂಚೆ ನಾನಿನ್ನು ಬಿ.ಎ.ನಲ್ಲಿ ಓದುತ್ತಿರುವಾಗ ಸರ್ಕಾರದ ವತಿಯಿಂದ ನಮ್ಮ ಮನೆಯ ಹತ್ತಿರದಲ್ಲೇ ಸಾರ್ವಜನಿಕರಿಗಾಗಿ ಕುಡಿಯಲು ಒಂದು ತೆರೆದ ಬಾವಿಯನ್ನು ತೆಗೆದಿದ್ದರು. ಊರಲ್ಲಿದ್ದ ಎರಡು ಬಾವಿಗಳಿಂದ ನೀರು ಸೇದುತ್ತಿದ್ದ ಮೇಲ್ಜಾತಿಗಳ ಜನರಿಂದ ನಮ್ಮವರೆಲ್ಲ ಹೊಯ್ ನೀರು ತರುತ್ತಿದ್ದರು. ಅಂದರೆ ಮೇಲ್ಜಾತಿಯವರಿಂದ ನೀರು ಸೇದಿ ಇವರ ಕೊಡಗಳಿಗೆ ನೀರು ಹಾಕಬೇಕು, ಆಗ ಇವರ ಮನೆಗಳಿಗೆ ತೆಗೆದುಕೊಳ್ಳಬೇಕು. 1936ರಲ್ಲಿ ಸರ್ಕಾರ ನಮಗೊಂದು ರಂಗಜ್ಜನ ಮಠದ ಹತ್ತಿರ ಬಾವಿ ತೆಗೆಸಿತ್ತು. ಅದು ನಮ್ಮ ಮನೆಗಳಿಗೆ ಅರ್ಧ ಕಿಲೋಮೀಟರ್ ದೂರದಲ್ಲಿತ್ತು. ಆದರೆ ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ.

ಮನೆಯ ಹತ್ತಿರವಿರುವ ಬಾವಿಯನ್ನು ವಿಧ್ಯುಕ್ತವಾಗಿ ಉದ್ಘಾಟಿಸುವ ಮುನ್ನ ನಾನು ನಮ್ಮಲ್ಲಿದ್ದ ಹಸುವಿನ ಜೊತೆ ಆ ಹೊಸ ಬಾವಿಯಿಂದ ನೀರು ಸೇದಿ ಅದಕ್ಕೆ ಕುಡಿಸಿ ನಾನು ಅಲ್ಲೇ ಸ್ನಾನ ಮಾಡಿಕೊಂಡು ಬರುತ್ತಿದ್ದೆ. ನಾನಿರುವಾಗ ಯಾರೂ ಮಾತಾಡದೆ ಇದ್ದವರು, ನಾನು ಮೈಸೂರಿಗೆ ವಾಪಸ್ ಓದಲು ಹೋದಾಕ್ಷಣ ಮಾರನೆ ದಿನ ನಮ್ಮ ಮನೆಯ ಹೆಣ್ಣು ಮಕ್ಕಳು ನೀರಿಗೆ ಹೋದಾಗ ಹಗ್ಗ ಕೊಡಪಾನಗಳನ್ನು ಕಿತ್ತು ಬಿಸಾಕಿ ನೀರು ಸೇದಲು ಬಿಟ್ಟಿರಲಿಲ್ಲ. ಆಗಿನ್ನು ಅಪ್ಪ ಇದ್ದ. ‘ನೀನು ಊರ ಉಸಾಬರಿಗೆ ಬರಬೇಡ ನಿನ್ನ ಓದು ನೀನು ಮಾಡಿಕೊಂಡು ಸುಮ್ಮನಿರು’ ಎಂದು ಪತ್ರ ಬರೆಸಿ ಸಮಾಧಾನ ಹೇಳಿದ್ದ. ಆದರೂ ನಾನು ಆಗಿರುವ ಅವಮಾನದ ಬಗ್ಗೆ ಚಿಂತಿಸುತ್ತಿದ್ದಾಗ ಒಂದು ದಿನ ಮೈಸೂರಿಗೆ ಬಂದಿದ್ದ ಕಂದಾಯ ಮಂತ್ರಿಗಳಾಗಿದ್ದ ಬಸವಲಿಂಗಪ್ಪನವರ ಹತ್ತಿರ ಹೋಗಿ, ನಮ್ಮೂರಲ್ಲಿ ಸಾರ್ವಜನಿಕ ಬಾವಿಯಿಂದ ನೀರು ಸೇದಲು ಲಿಂಗಾಯತರು ತೊಂದರೆ ಕೊಡುತ್ತಿರುವ ಬಗ್ಗೆ ಹೇಳಿದೆ.

ಅವರು ಅದನ್ನು ಮನಸ್ಸಿನಲ್ಲಿಕೊಂಡು ಬೆಂಗಳೂರಿಗೆ ವಾಪಸಾಗಿದ್ದರು. ನಮ್ಮೂರ ಛರ‍್ಮನ್ ಬಸಪ್ಪನವರು ಮತ್ತು ನಮ್ಮ ಹರಿಹರದವರೇ ಬಿ. ಬಸವಲಿಂಗಪ್ಪನವರು ಮೊದಲಿಂದಲೂ ಬಳಕೆಯಲ್ಲಿದ್ದವರಾಗಿದ್ದರು. ಛರ‍್ಮನ್ ಬಸಪ್ಪನವರು ಇನ್ನು ನಮ್ಮ ಊರಿನವರೊಡನೆ ಬೆಂಗಳೂರಲ್ಲಿ ತಮ್ಮ ಯಾವುದೋ ಕೆಲಸಕ್ಕೆ ಭೇಟಿ ಮಾಡಿದಾಗ ನಾನು ಹೇಳಿದ ವಿಷಯವನ್ನು ಪ್ರಸ್ತಾಪಿಸಿ, ‘ನೀವೇನು ಹೆಂಡ ಕುಡಿಯೋದಿಲ್ಲವಾ? ಮಾಂಸ ತಿನ್ನೋದಿಲ್ವಾ’ ಎಂದೆಲ್ಲಾ ಕೇಳಿ ‘ಬಸವಣ್ಣ ಏನು ಹೇಳಿದ್ದಾನೆ ಗೊತ್ತಾ? ಅದನ್ನ ಪಾಲಿಸೋದು ಬಿಟ್ಟು, ಸರ್ಕಾರ ಕಟ್ಟಿಸಿದ ಬಾವಿಯ ನೀರು ಸೇದಲು ಅಡ್ಡಿಪಡಿಸಬಾರದೆಂದು ಗರ್ಜನೆ ಹಾಕಿ ತಾಕೀತು ಮಾಡಿ ಕಳಿಸಿದ್ದರು.

ನಮ್ಮೂರ ಛರ‍್ಮನ್ ಬಸಪ್ಪನವರು ಬಹಳ ದಿನಗಳ ಕಾಲ ನಮ್ಮೂರ ಛರ‍್ಮನ್‌ರಾಗಿ ಎಲ್ಲರ ಜೊತೆ ಒಳ್ಳೆಯ ಸಂಬಂಧವಿಟ್ಟುಕೊಂಡಿದ್ದರು. ಆದರೆ ಊರ ಸಮಷ್ಟಿಯ ಸಮಸ್ಯೆಗಳು ಬಂದಾಗ ಧೈರ್ಯವಾಗಿ ಒಬ್ಬರೇ ತೀರ್ಮಾನ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಆದರೆ ಬೆಂಗಳೂರಿನಿಂದ ಬಂದವರೇ ಯಾರು ನಿಮಗೆ ನೀರು ತರಲು ಅಡ್ಡಿಪಡಿಸಿದವರು ಎಂದು ಹೇಳಿ ಅವರೇ ನಮ್ಮ ಕೇರಿಗೆ ಬಂದು ನಮ್ಮವರನ್ನೇ ನೀರು ಸೇದಿಕೊಳ್ಳಲು ಹೇಳಿದ್ದರು. ಊರಲ್ಲಿ ವಿರೋಧಿಸಿದವರಿಗೆ ಸರ್ಕಾರದಿಂದ ಆದೇಶವಾಗಿದೆ ಎಂದೆಲ್ಲ ಹೇಳಿ ಬಾಯಿ ಮುಚ್ಚಿಸಿದ್ದರು. ಛರ‍್ಮನ್ ಬಸಪ್ಪನವರು ಸುಮಾರು 20 ವರ್ಷಗಳ ಕಾಲ ಛರ‍್ಮನ್‌ರಾಗಿದ್ದರು. ಯಾರಿಗೂ ಕೇಡು ಬಯಸುವ ವ್ಯಕ್ತಿಯಾಗಿರಲಿಲ್ಲ. ಇದೇ ಸಮಸ್ಯೆ ಬೇರೆಯವರ ಕೈಗೆ ಬಿದ್ದಿದ್ದರೆ, ಏನೆಲ್ಲಾ ಅನಾಹುತ ಮಾಡುತ್ತಿದ್ದರೋ ಊಹಿಸಲೂ ಅಸಾಧ್ಯ.

ಈ ಹಿನ್ನೆಲೆಯಲ್ಲಿ ಈಗ ಊರ ಮಟ್ಟದಲ್ಲಿ ಮತ್ತೊಂದು ಮಹತ್ತರವಾದ ಸಮಸ್ಯೆಯಾಗಿ ಎದ್ದು ಕೂತಿತ್ತು. ಅದು ಭೂ ನ್ಯಾಯ ಮಂಡಳಿಗೆ ಅರ್ಜಿ ಫಾರಂ ಹಾಕಿದ್ದು. ಹರಿಹರದಲ್ಲಿ ನಡೆಸುತ್ತಿದ್ದ ಭೂನ್ಯಾಯ ಮಂಡಳಿಯ ಮುಂದೆ ಹಾಜರಾಗಬೇಕು. ನಮ್ಮವರೆಲ್ಲ ದೇವಸ್ಥಾನದ ಧರ್ಮದರ್ಶಿಗಳ ಜೊತೆಗೆ ಮಾತಾಡಿಕೊಂಡು ಅವರು ತರುತ್ತಿದ್ದ ಟ್ರಾಕ್ಟರ್‌ನಲ್ಲಿ ಕೂತು ಹೋಗುತ್ತಿದ್ದರು. ನಮ್ಮ ಅಣ್ಣ ತಿಪ್ಪಣ್ಣ ಮಾತ್ರ ಅವರ ಜೊತೆಗೆ ಹೋಗುತ್ತಿರಲಿಲ್ಲ. ಅವರ ಜೊತೆ ಇರುವಾಗ, ನೀವು ಹೇಳಿದ ಹಾಗೆ ಸಾಕ್ಷಿ ಹೇಳುತ್ತೇವೆಂದು ಅವರ ಹತ್ತಿರವೇ ಬೀಡಿ ಕೇಳಿ ಸೇದಿಕೊಳ್ಳುತ್ತಿದ್ದರು. `ಇದೆಲ್ಲ ನಮ್ಮ ಹುಡುಗನ ಕೆಲಸ, ನಮಗ್ಯಾಕಣ್ಣ ದೇವರ ಜಮೀನು’ ಎಂದೆಲ್ಲ ಅವರ ಜೊತೆಯೇ ತಾಳ ಹಾಕುತ್ತ ಇದ್ದರು. ನಾನು ಊರಿಗೆ ಹೋದಾಗ ಯಾವಾಗ ತೀರ್ಮಾನಿಸಲಾಗುತ್ತದೆ ಎಂದು ಬಂದು ಗುಟ್ಟಾಗಿ ನನ್ನ ಬಳಿ ಕೇಳುತ್ತಿದ್ದರು. ನಮ್ಮವರೆಲ್ಲರ ಅದೃಷ್ಟವೋ ಎನ್ನುವಂತೆ ನನಗೆ 1969-1972ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಕೆ.ಎಂ. ಶಂಕರಲಿಂಗೇಗೌಡರನ್ನು ದಾವಣಗೆರೆ ಭೂನ್ಯಾಯ ಮಂಡಳಿಯ ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿತ್ತು. ನಾನು ನಮ್ಮ ಊರಿನ ಸ್ಥಿತಿಯನ್ನೆಲ್ಲ್ಲ ಅವರಿಗೆ ವಿವರಿಸಿ, ನಮಗೆ ಆದಷ್ಟು ಬೇಗ ಇತ್ಯರ್ಥಗೊಳಿಸಿಕೊಡಬೇಕೆಂದು ಅವರಲ್ಲಿ ವಿನಂತಿಸಿದೆ. ನಾನು ಹೋಗಿ ವಿನಂತಿಸಿದ 3-4 ತಿಂಗಳಲ್ಲಿ ನಮ್ಮವರೆಲ್ಲರ ಹೆಸರಿಗೆ ಭೂನ್ಯಾಯ ಮಂಡಳಿಯಲ್ಲಿ 1976ರ ವರ್ಷದ ಮಧ್ಯ ಭಾಗದಲ್ಲಿ ಭೂನ್ಯಾಯ ಮಂಡಳಿಯಿಂದ ತೀರ್ಮಾನಿಸಲಾಗಿತ್ತು.

ಆ ಸಂದರ್ಭದಲ್ಲಿ ಹೆಚ್. ಶಿವಪ್ಪನವರು ಹರಿಹರ ತಾಲ್ಲೂಕು ಶಾಸಕರು ಮತ್ತು ಭೂನ್ಯಾಯ ಮಂಡಳಿಯ ಸದಸ್ಯರಾಗಿದ್ದರು. ಅವರು ನಮಗೆಲ್ಲ ಜಮೀನು ನೋಂದಾಯಿಸುವ ಪ್ರಕರಣದಲ್ಲಿ ವಿರೋಧಿಸದೆ ಸಹಕಾರ ನೀಡಿದ್ದನ್ನು ನಾನು ನೆನಪಿಸಿಕೊಳ್ಳಬೇಕು. ಆದೇಶ ನೀಡುವ ಸಮಯದಲ್ಲಿ ದೇವಸ್ಥಾನದ ಧರ್ಮದರ್ಶಿಗಳು, ಭೂನ್ಯಾಯ ಮಂಡಳಿಯ ಅಧ್ಯಕ್ಷರ ಎದುರೇ ‘ಊರಿಗೆ ರ‍್ರಲೇ ನೋಡಿಕೊಳ್ಳುತ್ತೇವೆ’ ಎನ್ನೋ ಧಮ್ಕಿ ಹಾಕಿದಾಗ, ಅಧ್ಯಕ್ಷರು ‘ನಿಮ್ಮನ್ನೆಲ್ಲ ಪೊಲೀಸ್ ಕರೆಸಿ ಈಗಲೇ ಜೈಲಿಗೆ ಕಳಿಸುತ್ತೇನೆಂದು ಹೇಳಿ ಎಚ್ಚರಿಕೆ ನೀಡಿದರೆಂದು ನಮ್ಮವರೆಲ್ಲ ನನ್ನ ಬಳಿ ಸಂತೋಷದಿಂದ ಎಲ್ಲ ಮುಗಿದ ಮೇಲೆ ಹೇಳಿಕೊಂಡಿದ್ದರು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending