ಭಾವ ಭೈರಾಗಿ
ಕಥೆ | ಕಣ್ಣೀರು

- ತೆಲುಗು ಮೂಲ:ಶ್ರೀನಿವಾಸ್ ದರೆಗೋನಿ, ಕನ್ನಡಕ್ಕೆ: ಡಾ.ಶಿವಕುಮಾರ್ ಕಂಪ್ಲಿ
ಅದು ನಗರದಿಂದ ದೂರವಿದ್ದ ಇಂಜಿನಿಯರಿಂಗ್ ಕಾಲೇಜು. ಅದರ ಪಕ್ಕದಲ್ಲೇ ಹೈವೇ ಡಾಬ.ಎಂದಿನಂತೆಯೇ ವಿದ್ಯಾರ್ಥಿಗಳ ಗಿಜಿ ಗಿಜಿ ಎನಿಸುವ ಕೇಕೆ ಕೋಲಾಹಲಗಳಿಂದ ತುಂಬಿಕೊಂಡಿತ್ತು.ಸುಜಿತ್ ಮತ್ತು ಆತನ ನಾಲ್ಕು ಜನ ಸ್ನೇಹಿತರು ಡಾಬದ ಒಂದು ಮೂಲೆಯಲ್ಲಿ ಕೂತುಕೊಂಡಿದ್ದಾರೆ.
ಅವರ ಭವಿಷ್ಯತ್ತಿನಂತೆಯೇ… ಬಾಟಲುಗಳು ಖಾಲಿಯಾಗುತ್ತಲಿವೆ.ಬೆರಳನಡುವೆ ಸಿಲುಕಿಕೊಂಡ ಸಿಗರೇಟುಗಳು ಹೊಗೆಗಳನ್ನು ಕಕ್ಕುತ್ತಾ ಬೂದಿಯಾಗುತ್ತಿವೆ.
“ಸುಜು… ಈ ಟ್ರೀಟ್ ಗಳೊಳಗೆ ಮಜವೇ ಹೋಗಿದೆ ಕಣೋ… ..ದಿನಾ… ಕಾಲೇಜಿಗೆ ಬಂದೊಡನೆ ಡಾಬದೊಳಗೆ ಕುಳಿತು ಗುಂಡು ಹಾಕಿ ಮನೆಗೆ ಹೋಗುವುದು … ಮಾಮೂಲಿ ತಾನೇ..! ಮಗಾ.. ಏನೋ ಹೊಸತು ಬೇಕೆಂಬಂತೆ ಮನಸ್ಸು ತಿವಿಯುತ್ತಿದೆ ಅಲ್ಲವೇ? ” ಅಂದನು ರೋಷನ್. “ಮತ್ತೇನೋ… ಹೊಸತು? ಏನ್ ಮಾಡೋಣ?” ಬಾಟಲು ಕೆಳಗಿಡುತ್ತ ಸುಜಿತ್ ಕೇಳಿದ.
“ ನನ್ನ ಹತ್ರ ಕಿಕ್ ನೀಡೋ ಐಡಿಯಾ ಇದೆ.ಕೇಳ್ತೀನಿ ಅಂದ್ರೆ ಹೇಳ್ತೀನಪ್ಪಾ”. ಆಸಕ್ತಿ ಹುಟ್ಟಿಸುವಂತೆ ಮುಂದಕ್ಕೆ ಬಾಗುತ್ತಾ ಹೇಳಿದ ರೋಷನ್. “ಕಿಕ್ ಸಂಗತಿನಾ!? ಮೊದಲು ಹೇಳು.. …ನಾವು ಸ್ವಲ್ಪ ನೋಡೋಣ” ಅಂದ ಸುಜಿತ್.
“ನೋಡ್ರೋ..ಇಲ್ಲಿಂದ ನಾವು ಐದೂ ಜನ ಬೈಕ್ ರೈಡ್ ಮಾಡೋಣ, ಸಿಟಿಗೆ ಹತ್ತಿರದ ರಿಂಗ್ ರೋಡ್ ಕೆಫೆ ಸೇರಬೇಕು ! ಯಾರು ಲಾಸ್ಟೋ.. ಅವನೇ ಲೂಜರ್!.ನಾಳೆಯ ಟ್ರೀಟ್ ಆತನದೇ!! ..ಹಾ..ಸರಿನಾ!?” ಅಂತ ರೋಷನ್ ಎಲ್ಲರ ಮುಖವನ್ನ ನೋಡಿದ.
“ ನಾವು ಈಗಲೇ ಸಖತ್ ಡ್ರಿಂಕ್ಸ ಮಾಡಿದ್ದೇವೆ …! ಇಂತಹ ಪರಿಸ್ಥಿತಿಯಲ್ಲಿ ಬೈಕ್ ರೇಸ್ ಅಂದ್ರೆ ಅಪಾಯಕಾರಿ ಕಣೋ ಮಾಮ!” ಅಂದನು ಖಾದರ್.
“ಅರ್ರೇ..ಖಾದರ ಮಾಮಾ! ನೀನು ಸುಮ್ಮನಿರಪ್ಪಾ. ನನಗೆ ಹೊಸ ಹೊಸ ಕಿಕ್ ಬೇಕು ಅಷ್ಟೇ…ಎಲ್ಲರು ಗಾಡಿ ತಗೀರೋ..!!” ಅಂತ ಉತ್ಸಾಹದಿಂದ ಎದ್ದ ಸುಜಿತ್.
* * *
ಸುಜಿತ್ ಬೈಕ್ ಗೊಯ್ ಗುಟ್ಟುತ್ತ ನುಗ್ಗಿಹೋಯ್ತು.
ಕೈ ಯೊಳಗಿನ ಇಂಪೋರ್ಟೆಡ್ ವಾಚಿನ ಡಿಜಿಟಲ್ ಅಂಕೆಗಿಂತಲೂ ವೇಗವಾಗಿ…
ಗುಂಡಿಗೆಯ ಲಯಕ್ಕಿಂತಲೂ ವೇಗವಾಗಿ ಅದು ಓಡತೊಡಗಿತು…
ಧೋ..ಗುಟ್ಟಿ ಸುರಿವ ಮಳೆಹನಿಗಳ ಚಿಟ ಪಟ ಸದ್ದಾಗತೊಡಗಿತು. ಬೈಕ್ ಇನ್ನಷ್ಟೂ ಜೋರಾಯಿತು.
ಎಣ್ಣೆ ಏರಿಸಿದಮತ್ತು ಅವರ ಬುದ್ದಿಯನ್ನ ಬಾಚಿಕೊಂಡಿತು. ಹೈವೇ ಮೇಲೆ ಭಾರವಾಗಿ ಹೋಗುತ್ತಿದ್ದ ಒಂದೊಂದೂ ವಾಹನವನ್ನೂ … ಓವರ್ ಟೇಕ್ ಮಾಡುತ್ತ… ಹನಿಗಳ ಮಧ್ಯೆ!!! ರಣರಂಗದಲ್ಲಿ ನುಗ್ಗಿ ಖಡ್ಗ ಪ್ರಹಾರ ಮಾಡುತ್ತಿರುವವನಂತೆ ರಸ್ತೆಯಲ್ಲಿ ನುಗ್ಗುತ್ತಿದ್ದ ಸುಜಿತ್.
ದೂರದಲ್ಲಿ ಮಹಿಳೆಯೊಬ್ಬಳು ರಸ್ತೆ ದಾಟುತ್ತಿದ್ದಳು. ಅಷ್ಟರೊಳಗೇ.. ಮಳೆ ಹನಿಯೊಂದು ಕಣ್ಣಿಗೆ ಟಪಕ್ಕನೇ.. ಬಿತ್ತು. ಕಣ್ಣು ರೆಪ್ಪೆ ಪಟ್ಟನೇ ಮುಚ್ಚಿಕೊಂಡಿತು. ಆ… ಒಂದೇ ಕ್ಷಣ!!! ಮುಗುಚಿ ಅಷ್ಟು ದೂರ ಬಿದ್ದ! ಚೇತರಿಸಿಕೊಂಡು ಕಣ್ಣು ಬಿಟ್ಟ !. ಆಗಲೇ ಆತನ ಊಹೆಗೂ ಮೀರಿದ ಅಪಘಾತವಾಗಿಬಿಟ್ಟಿತ್ತು!
***
ವೇಗವಾಗಿ ನುಗ್ಗಿದ ಬೈಕ್ ಆ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮಕ್ಕೆ ಆಕೆ ಹಾಗೇ.. ರಸ್ತೆ ಪಕ್ಕಕ್ಕೆ ಹೊರಳಿ ಬಿದ್ದಳು!!! ರಸ್ತೆ ಅಂಚಿನ ಕಲ್ಲಿಗೆ ಆಕೆಯ ತಲೆ ಬಲವಾಗಿ ಅಪ್ಪಳಿಸಿತು!
ಮುಂದೇನಾಯಿತೋ… ಅರ್ಥವಾಗಲಿಲ್ಲ…?
ಬೈಕ್ ನಿಯಂತ್ರಿಸಲು ಪ್ರಯತ್ನಿಸಿದ್ದೂ..
ತಾನೂ ಬೈಕ್ ನಿಂದ ನೂರಡಿ ದೂರದ ಪೊದೆಯೊಳಗೆ ಎಸೆಯಲ್ಪಟ್ಟಿದ್ದು….
ಆ ಧೋ..ಮಳೆಯೊಳಗೆ ಆತನನ್ನ ಯಾರೂ ನೋಡಲಿಲ್ಲ.
ಮೈ ಕೈಗಳು ಕೆತ್ತಿ ಹೋಗಿ ಭುಜಗಳ ಚರ್ಮ ಸೀಳಿಕೊಂಡು,ನೋವು ನೂರ್ಮಡಿಸುತಿತ್ತು! ಕುಡಿದ ಮತ್ತು ಇಳಿದೇ ಬಿಟ್ಟಿತು.!
ರಸ್ತೆ ಬದಿಯಲ್ಲಿ ರಕ್ತದ ಮಡುವಿನೊಳಗೆ ಆ ಮಹಿಳೆಯ ಜೀವ ಕೊನೆಯುಸಿರೊಳಗೆ ಹೊಯ್ದಾಡುತ್ತಿದೆ. ಎಲ್ಲಿಂದಲೋ ಬಂದ.. ಒಂದು ನಾಲ್ಕೈದು ಜನ ನಿಂತರು.
ಅನತಿದೂರದಲ್ಲೇ… ಶಿಲೆಯಂತೆ ಕುಳಿತ ಸುಜಿತ್.
ಅಷ್ಟರೊಳಗೆ ಇನ್ನೂ ಹತ್ತಾರು ಮಂದಿ ಸೇರಿಕೊಂಡರು.
ಮೆಲ್ಲಗೆ ಕಾಲೆಳೆಯುತ್ತ ಹೋಗಿ ತಾನೂ ಅವರ ಮಧ್ಯೆ ನಿಂತ!.
ಅಂಬುಲೆನ್ಸ ಬಂತು.ಹೋಯಿತು.
ಜನರ ಗುಂಪು ಆತನನ್ನ ಮಳೆಯಲ್ಲಿ ಗಮನಿಸಲೇ ಇಲ್ಲ!!!.
ಮೆಲ್ಲಗೆ ಮುರಿದ ಶಿಲುಬೆಯಂತಹ ಆ ಬೈಕ್ ಬಳಿ ಹೊರಟ.
* * *
ಆಸ್ಪತ್ರೆಯ ವರಾಂಡದೊಳಗೆ ಸುಜಿತ್ ಕುಳಿತಿದ್ದಾನೆ.ಆತನ ಆ ಪರಿಸ್ಥಿತಿ ಮೆದುಳಿಗೂ ಶರೀರಕ್ಕೂ ಸಂಬಂಧವಿಲ್ಲದಂತಾಗಿದೆ.ಮಳೆಯೊಳಗೆ ನೆನೆದು ಮುದ್ದೆಯಾದರೂ… ಬಾಡಿಹೋದ ಕಂಗಳಲ್ಲಿ ಆತ ಏನನ್ನೋ… ನಿಸ್ತೇಜವಾಗಿ ನೋಡುತ್ತಿದ್ದಾನೆ.
ಎರಡು ತುಟಿಗಳ ಮಧ್ಯದಿಂದ ‘ಅಮ್ಮಾ..ಅಮ್ಮಾ..’ ಅಂತ ಹೊರಗೆ ಕೇಳಿಸಲಾರದ ಭಾವವೇನೋ ಮಂದ್ರವಾಗಿ ಹೊರಬರಲು ಪ್ರಯತ್ನಿಸುತ್ತಿದೆ.
“ಓ-ನೆಗೆಟಿವ್ ಬ್ಲಡ್ ಬೇಕಾಗಿದೆ. ಪೇಷಂಟ್ ಬಂಧುಗಳ್ಯಾರಾದರೂ ಇದ್ದಾರಾ..?” ಡಾಕ್ಟರ್ ಕೇಳಿದರು.
“ಬಂಧುಗಳಾರೂ ಇಲ್ಲ ಸರ್. ನಾವು ಕೊಡುತ್ತೇವೆ. ಸರಿಹೋದರೆ ತೆಗೆದುಕೊಳ್ಳಿ” ಅಂತ ಒಂದಿಬ್ಬರು ಮುಂದೆ ಬಂದರು.
ಸುಜಿತ್ ಭಾವ ರಹಿತ ಸ್ಥಿತಿಯೊಳಗೆ ಆದೃಶ್ಯವನ್ನ ಹಾಗೇ ನೋಡುತ್ತಲೇ ಇದ್ದ. “ಕೇಸ್ ಯಾವುದು..?” ಯಾರೋ ಕೇಳಿದರು. “ಲಾರಿ.. ಗುದ್ದಿ ಹೊರಟು ಹೋದಂತಿದೆ ಸಾರ್..
ಸ್ಪಾಟ್’ಗೆ ಸ್ವಲ್ಪ ದೂರದೊಳಗೆ ಇನ್ನೊಂದು ಯಾಕ್ಸಿಡೆಂಟ್ ಆಗಿದೆ. ಡ್ರೈವರ್ ಸ್ಪಾಟ್ ಡೆಡ್!” ಯರೋ ಉತ್ತರಿಸಿದರು.
* * *
“ ಸುಜಿತ್…ಸುಜಿತ್…” ವಸುಧಾ ಅಡಿಗೆ ಮನೆಯಿಂದ ಗಟ್ಟಿಗೆ ಕೂಗುತ್ತಿದ್ದಾಳೆ. ” ಏನು ಇವನು..? ರಾತ್ರಿಯೇ ಬಂದ. ಹೊತ್ತೇರಿದರೂ ಇನ್ನೂ ಎದ್ದಿಲ್ಲವಲ್ಲ” ಎನ್ನುತ್ತ ಸುಜಿತ್ ಕೋಣೆಯೊಳಕ್ಕೆ ಬಂದಳು. ‘ಕಂದಾ..ಸುಜೀ’ ಅಂತ ತಟ್ಟಿ ಎಬ್ಬಿಸಿದಳು. ಬಲವಂತವಾಗಿ ಕಣ್ಣುತೆರೆದ.
ಸುಜಿತ್ ಕಣ್ಣುಗಳು ಅಗ್ನಿಗೋಳದಂತಾಗಿವೆ!
“ಏನೋ ಏನಾಯ್ತು ?, ರಾತ್ರಿಯೆಲ್ಲ ನಿದ್ದೆಗೆಟ್ಟಿಯೇನು?” ಕೇಳಿದಳಾಕೆ.
ಮೌನವಾಗಿಯೇ.. ತಾಯಿ ಕಡೆಗೊಮ್ಮೆ ನೋಡಿದನಾತ.
“ನಾ ಮಾತಾಡುತ್ತಲೇ ಇದ್ದೀನಿ.ನೀ.. ಯಾಕೋ ಮಾತಾಡುತ್ತಿಲ್ಲ?” ಅಂತ ವಸುಧ ಪ್ರೇಮದಿಂದ ಕೂದಲು ನೇವರಿಸಿದಳು.
“ ಏನು ಇಲ್ಲಮ್ಮಾ ಅನ್ನುವಂತೆ ..ತಾಯಿ ಭುಜದ ಮೇಲೆ ಹಾಗೇ ತಲೆಯಾನಿಸಿದ. “ಸರಿ ಟಿಫಿನ್,ಮಾಡುವಂತೆ ಏಳೋ”ಅಂದಳು.
* * *
ಹರಳುರಿದಂತೆ ನಗು ನಗುತ್ತಾ ಕಿಚಾಯಿಸುತ್ತಿದ್ದ ಅದೇ ಹುಡುಗ ಡೈನಿಂಗ್ ಟೇಬಲ್ ಬಳಿ ಯಾಂತ್ರಿಕವಾಗಿ ಟಿಫಿನ್ ಮಾಡುತ್ತಿದದ್ದನ್ನ ನೋಡಿ… “ಏನೋ ಕಂದಾ..ಕಾಲೇಜಿನೊಳಗೆ ಏನಾದ್ರು ಸಮಸ್ಯೆನಾ?, ಸ್ನೇಹಿತರೊಂದಿಗೆ ಗಲಾಟೆ ಮಾಡಿಕೊಂಡೆಯಾ? ಅಂತ ಡೈನಿಂಗ್ ಟೇಬಲ್ ಕುರ್ಚಿಯನ್ನ ಎಳೆದುಕೊಳ್ಳುತ್ತ ಪಕ್ಕದಲ್ಲೇ ಕುಳಿತು ಕೇಳಿದಳು.
“ಏನೂ ಇಲ್ಲ ಮಮ್ಮಿ” ತೇಲಿಸಿ ಉತ್ತರಿಸಿದ.
“ಡ್ಯಾಡಿ ಏನಾದರೂ ಬೈದರಾ?” ಅಂತ ಮತ್ತೆ ಮೆತ್ತಗೆ ಕೇಳಿದಳು.
ಹುಹೂ…
ಮತ್ತೆ ಮೌನವೇ ಉತ್ತರ!
“ಈ ಸೆಮಿಸ್ಟರನೊಳಗೆ ಮಾಕ್ರ್ಸುಗಳೇನಾದರೂ ಕಡಿಮೆ ಬಂದಿವೆಯೇನೋ?”ತುಂಟತನದಿಂದಲೇ ರೇಗಿಸಿದಳು.
“ಸ್ವಲ್ಪತ್ತು ನನ್ನನ್ನ ಹೀಗೇ ಬಿಡು ಮಮ್ಮೀ..ಪ್ಲೀಜ್!” ಅಂದನು ಸುಜಿತ್ ಪ್ರಾರ್ಥಿಸುವಂತೆ..
* * *
ನೀರವವಾದ ಬಾಲ್ಕಾನಿಯ ಬಳಿ ಹೋಗಿ ಹೊರಗಿನ ಶೂನ್ಯವನ್ನು ನೋಡುತ್ತಾ ಒಂಟಿ ಹಕ್ಕಿಯಂತೆಯೇ ಕುಳಿತ.
ಎದುರಲ್ಲಿ ಪ್ರೈಮರಿ ಶಾಲೆ,
ಗೇಟ್ ಬಳಿ ತಾಯಂದಿರು ಮಕ್ಕಳಿಗಾಗಿ ಕಾಯುತ್ತಿದ್ದಾರೆ.
ಗೇಟು ತೆರೆದು ಎರಡು ಹೆಜ್ಜೆ ಇಟ್ಟರೆ ಸಾಕು… ಅಷ್ಟೂ ಜನರ ನಡುವೆ ಆ ಮಕ್ಕಳು ಅವರ ಅಮ್ಮನನ್ನ ಹುಡುಕಿ ಕೊಳ್ಳುತ್ತಾರೆ. ಅವರ ಅಮ್ಮ ಕಂಡೊಡನೇ ‘ಯಾವುದೋ ತಿಳಿಯದ ಬೆಳಕು ಅವರ ಕಣ್ಣೊಳಗೆ. ಓಡೋಡಿ ಬಂದು ಅಮ್ಮಾ … ಅಂತ ಅಪ್ಪಿ ಕೊಳ್ಳುತ್ತಾರೆ.
ಅಮ್ಮಂದಿರು ಅವರ ಬಾಕ್ಸ ತೆರೆದು ಊಟ ಮಾಡಿದ್ದಾರೋ.. ಇಲ್ಲವೋ.. ಅಂತ ಆತುರದಿಂದ ನೋಡುತ್ತಾರೆ. ದಿನ ಅಮ್ಮ ತರುವ ಚಾಕೋಲೇಟ್ಗಾಗಿ ಮಕ್ಕಳ ಕಣ್ಣು ಹುಡುಕುತ್ತವೆ… ತಮಗಾಗಿ ಯಾರೂ ನೋಡಲು ಬಾರದ ಮಕ್ಕಳು..ಮೌನದಿಂದ…ಯಾರದೋ ಕೈ ಹಿಡಿದು ಆಟೋ ಕಡೆ ನಡೆಯುತ್ತಿದ್ದಾರೆ.
ಸುಜಿತ್ ಆ ಕಡೆಗೇ ನೋಡುತ್ತಾ ಕುಳಿತ.
ಅಮ್ಮನನ್ನ ಕಂಡ ಮಕ್ಕಳ ಮುಖದೊಳಗಿನ ಆನಂದ. ಒಂಟಿಯಾಗಿ ಹೋಗುತ್ತಿರುವ ಮಕ್ಕಳ ಮುಖದೊಳಗಿನ ಮೌನ,ಕತ್ತಲು-ಬೆಳಕು ಪಕ್ಕ ಪಕ್ಕದಲ್ಲೇ ಹೊರಟಂತಿವೆ.
ಅಮ್ಮ… ಅಮ್ಮನಿಲ್ಲದೇ ಹೋದ್ರೆ…!? ಮನೋಮಂಥನ..
ಅಷ್ಟರೊಳಗೆ ಹಿಂದಿನಿಂದ ಸುಜಿತ್ ಅಮ್ಮ ಬಂದಳು.
“ಹೊಸ ಅವರೆಕಾಯಿ ಸಾಂಬರ್ ಕಣೋ.. ರುಚಿನೋಡಿ ಹೇಳು ಹೇಗಿದೆ? ಅಂತ..” ಎನ್ನುತ್ತ ಅನ್ನ ಕಲಸಿದ ತುತ್ತನ್ನ ಸುಜಿತ್ ಬಾಯೊಳಗಿಟ್ಟಳಾಕೆ.
ಸುಜಿತ್ ಕಣ್ಣ ಕಂಬನಿ.
“ ಏನಾಯ್ತು ಮಗನೇ, ಖಾರ ಜಾಸ್ತಿಯಾಯ್ತಾ..?” ತುಂಬಿದ ಸ್ವರದೊಳಗೆ ನೀರು ಕೊಡುತ್ತಾ ಕೇಳಿದಳಾಕೆ.
ಇಲ್ಲ ಅನ್ನುವಂತೆ ತಲೆಯಾಡಿಸಿದ.
“ ಯಾಕೋ ಮುಂಜಾನೆಯಿಂದ ಏನೂ ಮಾತಾಡುತ್ತಿಲ್ಲ?,ಸರಿಯಾಗಿ ಊಟ ಮಾಡುತ್ತಿಲ್ಲ!. ಏನಾಯ್ತು ನಿಂಗೆ?” ಸಿಡುಕಿನಿಂದಲೇ ಕೇಳಿದಳು ವಸುಧ.
ಏನೂ ಹೇಳಲಾಗದಂತಹ ಭಾವ ಆವರಿಸಿತಾಗ, ಎಲ್ಲವನ್ನೂ ಗಮನಿಸುತ್ತ..ಆಸೆಗಳನ್ನ ತೀರಿಸೋ ಅಮ್ಮ ನನಗಿದ್ದಾಳೆ. ಅಮ್ಮನ ಪ್ರೇಮ ಎಷ್ಟು ದೊಡ್ಡದೋ ನನಗೇ ಗೊತ್ತು. ನನಗೆ ಜ್ವರ ಬಂದ್ರೆ ಅಮ್ಮನಿಗೂ ಜ್ವರ ಏರುತ್ತೆ. ಮನೆಗೆ ಬರುವುದು ಲೇಟಾದರೆ ಅಮ್ಮನಿಗಾಗುವ ಪರದಾಟ, ರಿಜಲ್ಟು ಬಂದರೆ ಅಮ್ಮ ಆಚರಿಸುವ ಖುಷಿಯ ಹಬ್ಬ! ನಾನು ಇಂಜಿನಿಯರಿಂಗಿಗೆ ಬಂದರೂ.. ಈಗಲೂ ಮನೆಗೆ ಬರುವವರೆಗೆ ಎದುರು ನೋಡುವ ಅಮ್ಮ… ಅವೆಲ್ಲಾ ತನಗೇ… ಆಗುವ ಸ್ವಯಂ ಖುಷಿಯ ಆನಂದದ ಅನುಭೂತಿಗಳು.
ಯಾಕೋ ಆ..ಅಮ್ಮನಂತವಳೇ. ನೆನಪಿಗೆ ಬರುತ್ತಿದ್ದಾಳೆ.
ಮತ್ತೆ ಆಕೆಯ ಕುಟುಂಬ..?
ಆಕೆಯ ಮಕ್ಕಳು..??
ಅವರ ಪರಿಸ್ಥಿತಿ? ಏನೇನೋ…!? ತಲೆತುಂಬಾ ಪ್ರಶ್ನೆಗಳೆದ್ದು ಕೋಲಾಹಲವೆಬ್ಬಿಸುತ್ತಿವೆ.
* * *
ಮರುದಿನವೇ ಆಕೆಯ ವಿಳಾಸ ಪತ್ತೆ ಹಚ್ಚಿ ತನ್ನ ಬೈಕ್ ಅವರ ಮನೆ ಮುಂದೆ ನಿಲ್ಲಿಸಿದ. ಮನೆಯ ಒಳಗಿನಿಂದ ಅಳು!!! ಹೃದಯ ಹಿಂಡುವಂತೆ ಕೇಳಿಸುತ್ತಿದೆ. ಮೆಲ್ಲಗೆ ಒಳಗೆ ಹೋದ.
ಹಾಲಿನ ಮಧ್ಯದಲ್ಲಿ ಆಕೆಯ ಮೃತ ದೇಹವನ್ನಿಟ್ಟಿದ್ದಾರೆ!
ಬಹುಶಃ ಪಕ್ಕ ಕುಳಿತವನು ಗಂಡನಿರಬೇಕು. ಕೊನೆಯ ತನಕ ಜೊತೆಯಾಗಿರುತ್ತೇನೆಂದು ಭಾಷೆ ನೀಡಿ ನೆರವೇರಿಸದಾದ ಆತನ ನಿಸ್ಸಹಾಯಕತೆಯನ್ನ ಆತನ ನಿರ್ಜೀವ ಕಣ್ಣುಗಳು ತೋರುತ್ತಿವೆ.
ಅಪ್ಪನ ಭುಜದ ಮೇಲೆ ತಲೆಯಿಟ್ಟ ಮಗಳ ಕಣ್ಣುಗಳು ಅಮ್ಮನನ್ನೇ ನೋಡುತ್ತಿವೆ. ಅಮ್ಮ ಹಾಗೆ ನಿಸ್ತೇಜವಾಗಿ ಮಲಗಿರುವುದನ್ನ ಜೀರ್ಣಿಸಿಕೊಳ್ಳಲಾಗದೇ ಹೋಗಿದ್ದಾಳೆ ಆ ಮಗಳು. ಮನಸ್ಸಿಗೆ ಚೂರಿ ಹಾಕುವಂತಹ ಆಕೆಯ ಸದ್ದಿರದ ಕಣ್ಣೀರ ನದಿಯಲ್ಲಿ ತಾನೂ ಹೆಣವಾಗಿ ತೇಲುವಂತಾಯಿತು.
* * *
ಚಿರನಿದ್ರೆಗೆ ಜಾರಿದ ಆಕೆಯ ಕಣ್ಣೊಳಗೆ ಎಂಥೆಂತಹ ಬಯಕೆಗಳಿದ್ದವೋ! ಎಷ್ಟು ದುಃಖಗಳು,ಎಷ್ಟು ನೋವುಗಳು,ಎಷ್ಟು ಕನಸುಗಳು, ಎಷ್ಟು ನೆನಪುಗಳು, ಎಷ್ಟು ಊಹೆಗಳನ್ನ ತುಂಬಿಕೊಂಡಿದ್ದವೋ… ಎಲ್ಲವನ್ನ ಹಾಗೇ…ಬಿಟ್ಟುಕೊಟ್ಟು ಹೋಗುತ್ತಿದ್ದಾಳೆ.
ಇಲ್ಲ. ಇಲ್ಲ. ನಾನೇ ಆಕೆಯನ್ನ ಜೀವ ಸಮಾಧಿ ಮಾಡಿದೆ!
ಈ ಲೋಕಕ್ಕೆ ಒಬ್ಬ ಅಮ್ಮನನ್ನ ದೂರ ಮಾಡಿದೆ.
ವಯಸ್ಸು, ದುಡ್ಡು ನೀಡಿದ ಮದದಿಂದ ಒಬ್ಬ ಅಮ್ಮನನ್ನ ಬಲಿತೆಗೆದುಕೊಂಡೆ. ಮನಸ್ಸು ದಹಿಸುತ್ತಿದೆ, ತನ್ನ ಮೇಲೆ ತನಗೇ ಭರಿಸಲಾಗದ ಆಕ್ರೋಶ. ಅಂಕೆಗೆ ಬಾರದ ತನ್ನ ಮನಸ್ಸಿನ ಮೇಲೆ ಅಸಹ್ಯ ಭಾವ.
ಆಕೆಯನ್ನ..ಅಮ್ಮಾ .. ಅಂತ ಕರೆಯ ಬೇಕೆನಿಸಿದೆ.. ಆದರೆ ಗಂಟಲೊಳಗಿಂದ ಶಬ್ದವೇ ಏಳುತ್ತಿಲ್ಲ!. ಆ ಶಬ್ದ ತನ್ನ ಗುಂಡಿಗೆಗೆ ಮಾತ್ರ ಕೇಳುತ್ತಿದೆ. ಆ…ಅಮ್ಮನ ಜೀವ ಹೊತ್ತೊಯ್ಯಲಿಕ್ಕಾಗಿ ಬಂದೆರಗಿದ ಹಾಳು ಮುಗಿಲ ಹನಿಗಳಂತೆ. ಮನಸ್ಸು ಕರಗಿ ಸದ್ದಿರದೇ…ಕಣ್ಣೀರ ಕಟ್ಟೆಯೊಡೆಯುತ್ತಿದೆ.
ನಾ..ಏನಾದರೂ ಮಾಡಬೇಕು.
ಹೌದು,
ಇಂತಹ ಅಮ್ಮಂದಿರು ಈ ಲೋಕದಿಂದ ದೂರವಾಗದಂತೆ ಉಳಿಯಲು ಏನಾದರೊಂದು ಇನ್ನು ಮೇಲೆ ನಾನು ಮಾಡಬೇಕು. ಆ ನಿರ್ಧಾರದ ನಂತರ ಸುಜಿತ್ ಮನಸ್ಸಿನೊಳಗೆ ಏನೋ ಪ್ರಶಾಂತತೆ ಮೂಡಿತು.
ನಿರಾಳತೆ ಹುಟ್ಟಿತು.
* * *
ಅದು ಶಿಲ್ಪ ಕಲಾ ವೇದಿಕೆ ..
ಸನ್ಮಾನ ಸಭೆ ನಡೆಯುತ್ತಿದೆ.
ಡಿ.ಜಿ.ಪಿ. ಮಾತಾಡುತ್ತಿದ್ದಾರೆ. “ ರಸ್ತೆಯ ಮೇಲೆ ಅಪಘಾತವಾಗಿ ,ಅಪಘಾತಕ್ಕೀಡಾದವರು ರಕ್ತದ ಮಡುವಿನಲ್ಲೇ ಬಿದ್ದಿದ್ದಾರೆ. ಯಾರೂ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ. ಅವರ ದಾರಿಯಲ್ಲಿ ಅವರು ಹೋಗುತ್ತಿದ್ದಾರೆ. ಅಂತವರೊಳಗೇ… ಕೆಲವು ಜನ ಕಾಲೇಜು ವಿದ್ಯಾರ್ಥಿಗಳು ಕೊನೆಯ ಉಸಿರಾಟದಿಂದ ಒದ್ದಾಡುತ್ತಿದ್ದವರನ್ನ ತಕ್ಷಣವೇ ಆಸ್ಪತ್ರೆಗೆ ಸೇರಿಸುತಿದ್ದಾರೆ.
ಕೆಲವರು ಪೋಲೀಸರಿಗೆ,ಕೆಲವರು ಆಸ್ಪತ್ರೆಗೆ ವಿಷಯವನ್ನ ಮುಟ್ಟಿಸಿದರೆ,ಇನ್ನ ಕೆಲವರು ಅವರ ಬಂಧುಗಳನ್ನ ಕರೆತರುವ ಜವಾಬ್ದಾರಿ ವಹಿಸಿಕೊಳ್ಳುತಿದ್ದಾರೆ.ಮತ್ತೆ ಕೆಲವರು ಚಿಕಿತ್ಸೆಗಾಗಿ ಅಗತ್ಯವಾದ ರಕ್ತ,ಔಷಧಿಗಳ ಅಗತ್ಯಗಳನ್ನ ಪೂರೈಸುತ್ತಿದ್ದಾರೆ. ಇವೆಲ್ಲಾ ನಿಮಿಷಗಳೊಳಗೆ ನಡೆದು ಹೋಗುತ್ತವೆ. ಇಂತಹವೆಲ್ಲಾ ಕಥೆಗಳೊಳಗೆ ಕಲ್ಪನೆಗಳೊಳಗೆ ನಡೆಯುವುದು ಅಂದು ಕೊಂಡಿರಲ್ಲವೇ!? ಆದರೆ ಇದು ವಾಸ್ತವ. ಇವುಗಳೆಲ್ಲದರ ಹಿಂದೆ ಇರುವವರು ಒಬ್ಬೇ ಒಬ್ಬ ವ್ಯಕ್ತಿ. ಅಂದರೆ ನೀವು ನಂಬುತ್ತೀರಾ? ಡಿ.ಜಿ.ಪಿ.ಹೇಳುವುದನ್ನ ನಿಲ್ಲಿಸಿದರು.
ಆಡಿಟೋರಿಯಂ ನೊಳಗೆ ಗಾಢವಾದ ನಿಶ್ಯಬ್ದ,
ಎಲ್ಲರೂ ವೇದಿಕೆಯ ಕಡೆ ನೋಡುತ್ತಿದ್ದಾರೆ. ಹೌದು, ಒಬ್ಬ ವ್ಯಕ್ತಿಯೇ!… ಎಷ್ಟೋ ಜನರಿಗೆ ಆತ ಪ್ರಾಣದಾತನಾಗಿದ್ದಾನೆ.
ಈಗ ಆತನನ್ನ ನಿಮ್ಮೆಲ್ಲರಿಗೆ ಪರಿಚಯಿಸುತ್ತಿದ್ದೇನೆ.ಎಂದರು ಡಿ.ಜಿ.ಪಿ. ಅಭಿನಂದನೆ ತುಂಬಿದ ಸ್ವರದಿಂದ.. ಡಿ.ಜಿ.ಪಿ.ಯ ಕಣ್ ಸನ್ನೆಯನ್ನ ಅನುಸರಿಸಿ… ವೇದಿಕೆ ಮೇಲೆ ಎಲ್ಲರ ಮುಂದಕ್ಕೆ ಬಂದನು ಆ ಯುವಕ..
ಆವನೇ ..ಸುಜಿತ್!
ಚಪ್ಪಾಳೆಗಳು ಮಾರ್ಮೊಳಗಿದವು!… ಡಿ.ಜಿ.ಪಿ.ಯವರ ಅಣತಿಯಂತೆ ಸುಜಿತ್ ಗಂಟಲು ಸರಿಪಡಿಸಿಕೊಂಡ.. ಮೈಕ್ ಮುಂದಕ್ಕೆ ಬಂದು “ ಮನುಷ್ಯನ ಪ್ರಾಣದ ಬೆಲೆಯೆಂದರೆ.. ಒಂದು ಬದುಕು..,ಒಂದು ಕುಟುಂಬ,..ಒಂದು..ಸಮಾಜ ಭರಿಸಲಾಗದ ಸಂಬಂಧ !..
ಹೌದು.. ಒಂದು ಪ್ರಾಣ ಹೋದರೆ ಒಂದು ಕುಟುಂಬವೇ ಕೊಚ್ಚಿ ಹೋದಂತೆ, ಒಂದು ಮನೆಯೇ ಕುಸಿದು ಬಿದ್ದಂತೆ.ಒಂದು ಸಮಾಜದ ಹಲವು ಅನುಬಂಧ,ಹಲವು ಆಪ್ಯಾಯತೆಗಳೇ.. ಚದುರಿ ಹೋದಂತೆ. ಇವು ಯಾವವೂ.. ಹಣ ನೀಡಿ ಕೊಳ್ಳುವಂತವಲ್ಲ…
ನಿರ್ಲಕ್ಷ ಬೇಡ…
ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ.
ಹೌದು ನಾನು ಈ ಆಲೋಚನೆ ಮಾಡಿಯೇ…
ಇಂತಹ ದೃಶ್ಯ ನನ್ನ ಮನಸ್ಸಿಗೆ ನಾಟಿಯೇ…
ನಾನು ಈ ಪ್ರಜೆಕ್ಟನ್ನ ಶುರು ಮಾಡಿದೆ. ನನ್ನ ಹಿಂದೆ ಎಷ್ಟೋ ಜನ ಜೊತೆಯಾಗಿ ನಿಂತರು. ಯಾರೂ ರಸ್ತೆಗಳ ಮೇಲೆ ನಿರ್ಲಕ್ಷದಿಂದ ನುಗ್ಗ ಬೇಡಿ. ನಿಮಗೆ ಶಿರಬಾಗಿ ಕೈ ಮುಗಿಯುತ್ತೇನೆ.ಹೋದ ಜೀವ ಮರಳಿ ಬಾರದು.ಈ ಜೀವ ಇರುವತನಕ ಜೀವಗಳನ್ನು ಉಳಿಸುವ ಪ್ರಯತ್ನ ನಮ್ಮದು.
ಒಂದು ನಿರ್ಲಕ್ಷದ ಬೆಲೆಯೇನು..
ಅದೆಷ್ಟು ಗಾಯ ಮಾಡುತ್ತದೋ… ನನ್ನ ಮನಸ್ಸಿಗೇ.. ಗೊತ್ತು.
ಎನ್ನುತ್ತಾ… ಸುಜಿತ್ ಕಣ್ಣು ತುಂಬಿಕೊಂಡನು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು

ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.
ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.
- ಬಸವರಾಜ ಹೂಗಾರ
ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.
ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.
- ಡಾ.ರಹಮತ್ ತರೀಕೆರೆ
ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.
- ಬಿ.ಶ್ರೀನಿವಾಸ,ಕೃತಿ ಲೇಖಕ
ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.
ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.
“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.
ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.
ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.
ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ
- ಡಾ.ರಾಮಚಂದ್ರ ಹಂಸನೂರು, ಬೆಟಗೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಂತಃಕರಣೆಯ ಹುಡುಕುತ್ತಾ..

- ಬಿ.ಶ್ರೀನಿವಾಸ
ಒಂದು ಊರಿನ ಮೌನ ಅರ್ಥವಾಗಬೇಕಾದರೆ, ದುಃಖ ಅರ್ಥವಾಗಬೇಕಾದರೆ ನಾವು ಏನನ್ನು ಮಾಡಬೇಕು? ನಾವು ಹೇಗೆ ಬದುಕಬೇಕು? ಗಾಯಗೊಂಡ ಬೆಟ್ಟ-ಗುಡ್ಡ ,ನದಿ ತೊರೆಗಳ ಬತ್ತಿಹೋದ ನೆಲದ ಕಣ್ಣಿಂದ ಪ್ರಾಣಿ-ಪಕ್ಷಿಗಳ ಆ ದೈನೇಸಿ ನೋಟಗಳಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ? ಪ್ರೀತಿ ,ಸಹಾನುಭೂತಿ ಗಳನ್ನು ಕಳೆದುಕೊಂಡವರು ಮಾತ್ರ ನಮ್ಮ ಸುತ್ತಮುತ್ತಲ ಬದುಕು ನರಕ ಸದೃಶವಾಗಿದ್ದರೂ ನೆಮ್ಮದಿಯಿಂದ ಉಣ್ಣ ಬಲ್ಲರು. ನಿದ್ರಿಸಬಲ್ಲರು, ಬರೆಯಬಲ್ಲರು.
ಬಳ್ಳಾರಿ ಜಿಲ್ಲೆಯ ಸೊಂಡೂರು ಮತ್ತು ಸುತ್ತಮುತ್ತಲಿನ ಪ್ರದೇಶದ ಬಹುತೇಕ ಹಳ್ಳಿಗಳು ರೋಗಗ್ರಸ್ತ ಪೀಡಿತರಂತೆ ಕಾಣುತ್ತಿವೆ .ಕಳೆದ ದಶಕದ ಅವಧಿಯೊಂದರಲ್ಲಿ ನಡೆದ ಗಣಿಗಾರಿಕೆಯಿಂದಾಗಿ ಇಡೀ ಪ್ರದೇಶ ಶಾಶ್ವತ ಬರಪೀಡಿತ ಪ್ರದೇಶವಾಗಿ ಬಿಟ್ಟಿದೆ. ಅದಿರು ಸಾಗಾಣಿಕೆಯ ಹೆಚ್ಚಳದಿಂದಾಗಿ ಕಾರ್ಬನ್ ಡೈಯಾಕ್ಸೈಡ್ ಆಸ್ಫೋಟಿಸಿದೆ. ಅಪರೂಪದ ಗಿಡ-ಮರಗಳು, ಪಕ್ಷಿಗಳು ,ಅಳಿವಿನಂಚಿಗೆ ತಳ್ಳಲ್ಪಟ್ಟಿವೆ.
ಶಾಲೆಗಳು ಮಕ್ಕಳಿಲ್ಲದೆ ಮುಚ್ಚಲ್ಪಟ್ಟವು. ಅದಿರು ಹೊತ್ತ ಲಾರಿಗಳಲ್ಲಿ ಮಕ್ಕಳ ಅಕ್ಷರಗಳನ್ನು ತುಂಬಿ ಕಳುಹಿಸಲಾಯಿತು. ಜನರು ಇಂತಹ ಬದುಕಿಗೆ ಹೊಂದಿಕೊಳ್ಳದೆ ಅನ್ಯ ಮಾರ್ಗವೇ ಇರಲಿಲ್ಲ. ಸತತ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ನಡೆದ ಗಣಿಗಾರಿಕೆಯಿಂದಾಗಿ ಜನರ ಸಾಕ್ಷರತೆಯ ಪ್ರಮಾಣ ಮತ್ತು ಜೀವನಾಯುಷ್ಯ ಪ್ರಮಾಣ ಪಾತಾಳಕ್ಕೆ ಕುಸಿದಿದೆ . ರಕ್ತಹೀನತೆಯಿಂದ ಬಳಲುವ ಮಹಿಳೆಯರ ಸಂಖ್ಯೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಗಿಂತಲೂ ಜಾಸ್ತಿಯಾಗಿದೆ. 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವು ಅಧಿಕವಾಗಿದೆ.
ಇಲ್ಲಿನ ಸಂಪನ್ಮೂಲ ಇರುವುದೇ ತಮ್ಮ ಭೋಗ ವಿಲಾಸಕ್ಕೆ ಎಂದು ರಾಜಕೀಯವರ್ಗ,ಉದ್ಯಮಿಗಳು ಮತ್ತು ಕೆಲ ಆಡಳಿತಶಾಹಿ ಅಧಿಕಾರಿಗಳು ತಿಳಿದುಕೊಂಡಿದ್ದರು ಬಳ್ಳಾರಿ ಜಿಲ್ಲೆ ಇರುವುದೇ ಲೋಲುಪತೆ ಗೋಸ್ಕರ ಇಲ್ಲಿ ಹಣವೊಂದಿದ್ದರೆ ಏನೆಲ್ಲಾ ಸಾಧಿಸಬಹುದು ಮತಗಳನ್ನು ಮತದಾರರನ್ನು ಕೊಂಡುಕೊಳ್ಳಬಹುದು, ರಾಜಕೀಯ ಚುನಾವಣಾ ಪ್ರಚಾರಕ್ಕೆ ದಿನವೊಂದಕ್ಕೆ ಲಕ್ಷದಂತೆ ತಿಂಗಳುಗಟ್ಟಲೆ ಪ್ರಚಾರ ಮಾಡಿದ ಸಿನಿತಾರೆಯರಿಗೇನೂ ಕಡಿಮೆ ಇಲ್ಲ.ಸಂಪನ್ಮೂಲಗಳ ಹಗಲು ದರೋಡೆ ರಾಜಾರೋಷವಾಗಿ ನಡೆದುಹೋಯಿತು.
ಈ ಊರುಗಳಲ್ಲಿ ಬುಡುಬುಡುಕಿಯವರಿದ್ದರು, ಹಗಲುವೇಷಗಾರರು, ನಕ್ಕುನಗಿಸುವ ಹಾಡುಗಾರರು, ಬಯಲಾಟದವರು,ಕುರ್ರಮಾಮುಡು ವಸ್ತುನ್ನಾಡು…ಟಿಮ್ ಟಿಮ್….ಎನ್ನುತ್ತ ಬರುವವರು,ಗಿಣಿಶಾಸ್ತ್ರ ಹೇಳುವವರು ,ಬಣ್ಣಬಣ್ಣದ ಹರಳು ಮಾರುವ ಮಹಾ ಗಟ್ಟಿಗಿತ್ತಿಯರು, ಕಾಡಿನ ಗರ್ಭ ಹೊಕ್ಕು ಒಣ ಮರದ ಕಟ್ಟಿಗೆ ತಂದು, ಹೊತ್ತು ಮಾರಿ ಜೀವಿಸುವ ಲಂಬಾಣಿ ಯಾಡಿಗಳಿದ್ದರು. ಜೊತೆಗೆ ಅವರ ಉಡಿಗಳಲ್ಲಿ ಕಾರಿ, ಕವಳಿ,ಪುಟ್ಲಾಸು, ಬಿಕ್ಕಿ ಹಣ್ಣಿನಂತಹ ಹಣ್ಣುಗಳು ಇರುತ್ತಿದ್ದವು.
ಆಹಾರ ಸಂಪಾದನೆಯ ಬೇರೆ ಮೂಲಗಳೇ ಗೊತ್ತಿಲ್ಲದ ಇವರಿಗೆ ಭಿಕ್ಷೆಯೊಂದೇ ಉಳಿದಿರುವ ಮಾರ್ಗ. ಇವರುಗಳೆಲ್ಲಾ ಸಮಾಜದ ಕಣ್ಣಿನಲ್ಲಿ ಅಪರಾಧಿಗಳಂತೆ ಕಾಣುತ್ತಿರುವುದು ಪರಿಸ್ಥಿತಿಯ ವ್ಯಂಗ್ಯ .ಇವರನ್ನು ಇವರ ಕಲೆಯನ್ನು ಗೌರವಿಸುವ ಒಂದು ಸಮುದಾಯವೇ ನಾಶವಾಗಿಹೋಯಿತು.ರೊಕ್ಕಾ ಕೊಟ್ಟರೆ ಏನು ಬೇಕಾದುದನ್ನು ಪಡೆಯಬಹುದೆಂಬ ಅಹಂ-ಭಾವಹೀನ ಮನುಷ್ಯರನ್ನು ಸೃಷ್ಟಿಸುತ್ತಾ ನಡೆದಿದೆ.
ಸೊಂಡೂರು -ಬಳ್ಳಾರಿ ಜಿಲ್ಲೆಯ ಮಲೆನಾಡು .ಪುಟ್ಟ ಕಾಶ್ಮೀರ. ಬೆಟ್ಟ ಗುಡ್ಡಗಳಿಂದ ಆವೃತವಾದ ಸುಂದರನಾಡು .ಅತಿ ಫಲವತ್ತಾದ ಮಣ್ಣು ತುಂಬಿದ ನೆಲ. ಜಲಮೂಲಗಳುಳ್ಳ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ, ಸೊಂಡೂರಿನ ಸುತ್ತಮುತ್ತ ಸುಮಾರು 40 ಕಿಲೋಮೀಟರ್ ಉದ್ದದ, 15 ಕಿಲೋಮೀಟರುಗಳಷ್ಟು ಅಗಲದ ಬೆಟ್ಟಗಳಲ್ಲಿ ಕಬ್ಬಿಣ, ತಾಮ್ರ ಮತ್ತು ಮ್ಯಾಂಗನೀಸ್ ಅದಿರಿನ ಗಣಿಗಳಿವೆ. ಇಲ್ಲಿ ದೊರೆಯುವ ಹೆಮಟೈಟ್ ಉತ್ತಮ ದರ್ಜೆಯ ಕಬ್ಬಿಣದ ಅದಿರು. ಹಾಗೆಯೇ ಮ್ಯಾಂಗನೀಸ್ ಕೂಡ ಡೇರಸ್ ಫಿಲೈಟ್ ಎಂಬ ಕಲ್ಲುಗಳಲ್ಲಿ ಹೇರಳವಾಗಿ ದೊರೆಯುತ್ತದೆ.
ಇದೇ ರೀತಿಯ ಸಂಪತ್ತು ಬೇರೆ ಕಡೆಗಳಲ್ಲಿ ಸಿಗುವುದಿಲ್ಲ ಎಂದಲ್ಲ. ವಿಶ್ವದರ್ಜೆಯ ಶ್ರೇಷ್ಠ ಮಟ್ಟದ ಮ್ಯಾಂಗನೀಸ್ ಅದಿರಿನ ನಿಕ್ಷೇಪಗಳು ಸುಬ್ರಾಯನಹಳ್ಳಿ ,ರಾಮಘಡಗಳಂತಹ ಹಳ್ಳಿಗಳ ಶಿಖರಗಳಲ್ಲಿ ದೊರೆಯುತ್ತವೆ. ಈ ಅದಿರಿನ ವಿಶೇಷವೆಂದರೆ ಬಹುತೇಕ ಅದಿರುಗಳಲ್ಲಿ ಸೇರಿಹೋಗಿರುವ ಫಾಸ್ಪೇಟ್ ಮತ್ತು ಸಲ್ಫರ ನಿಗದಿತ ಅಂಶಕ್ಕಿಂತ ಕಡಿಮೆ ಇರುವುದರಿಂದ ಇಲ್ಲಿನ ಮ್ಯಾಂಗನೀಸ್ ವಿಶ್ವ ಪ್ರಸಿದ್ಧವಾಗಿದೆ ಹಾಗಾಗಿ ಇಲ್ಲಿನ ಅದಿರಿಗೆ ವಿಶೇಷ ಬೇಡಿಕೆ.
ಬಳ್ಳಾರಿ ಜಿಲ್ಲೆಯ ಸೊಂಡೂರು ಕೇವಲ ಒಂದು ಊರು,ಪ್ರದೇಶ ಆಗಿರಬಹುದು .ಆದರೆ ಆತ ಊರಿನ ದುರಂತ ಇಡೀ ಪ್ರಪಂಚವನ್ನೇ ಪ್ರತಿನಿಧಿಸುವುದರ ಸಂಕೇತ. ಗಣಿಗಾರಿಕೆ ಆರಂಭವಾದಾಗಲೇ ಊರಿನ ಅವನತಿಯ ಆರಂಭವಾಯಿತು. ಯಥೇಚ್ಛವಾಗಿ ಗಣಿಗಾರಿಕೆಗೆ ಸರ್ಕಾರವೇ ಅನುಮತಿ ನೀಡುವಾಗ ಅದರ ಹೆಸರಿನಲ್ಲಿ ರಾಜಕಾರಣಿಗಳು ಅಕ್ರಮ ಗಣಿಗಾರಿಕೆ ನಡೆಸುವಾಗಲಂತೂ ಊರು ಆಹುತಿಯಾಗಿ ಬಿಟ್ಟಿತ್ತು. ಮನುಷ್ಯರು ಕೂಲಿಯ ಯಂತ್ರಗಳಾಗಿ ಹೋದರು.
ಮನುಷ್ಯನೇ ಸಂಶೋಧಿಸಿದ ಮೂಲ ಕಸುಬುಗಳಾದ ಕೃಷಿ ,ಬಡಗಿತನ, ಕ್ರೀಡೆ ಹಾಗೂ ಮೈಥುನಗಳು ಸಹ ಕೇವಲ ಯಾಂತ್ರಿಕವೆಂಬಂತೆ ಆಗಿಹೋದವು.ಎಷ್ಟೋ ದಿನಗಟ್ಟಲೆ,ತಿಂಗಳುಗಟ್ಟಲೆ, ಗಣಿಗಾರಿಕೆ ಬೆಟ್ಟಗಳ ತುತ್ತತುದಿಯಲ್ಲಿ ನಡೆಯುತ್ತಿತ್ತು.ಕೂಲಿಯವರೂ ಅಷ್ಟೂ ದಿನಗಳ ಕಾಲ ಅಲ್ಲಿಯೇ ಇರಬೇಕಾಗುತ್ತಿತ್ತು. ಕೂಲಿಯ ಹೆಣ್ಣು ಗಂಡುಗಳು ಅದಿರಿನ ನಿಕ್ಷೇಪದ ಬಯಲಿನಲ್ಲಿಯೇ ಮೈಥುನಕ್ಕಿಳಿದುಬಿಡುತ್ತಿದ್ದರು.ಮಕ್ಕಳು ಉಣ್ಣುವ ಅನ್ನದಲ್ಲಿ ಕೆಂಪುಧೂಳು ಸೇರಿಸಿಯೇ ಉಣ್ಣಬೇಕಾಗುತ್ತತ್ತು. ಕಂಟೇನರುಗಳಲ್ಲಿಯೇಇವರ ಜೀವನ ಮುಗಿದುಹೋಗಿರುತ್ತಿತ್ತು.ಮನುಷ್ಯ ಹೀಗೂ ಬದುಕಬಲ್ಲ ಎಂಬುದನ್ನು ಯಾರೂ ಕೂಡ ಯೋಚಿಸಲಿಲ್ಲ.
ಗಣಿ ಸಾವ್ಕಾರಗಳು ಸಾಮಾನ್ಯ ಜನರ ಕಣ್ಣಿಗೆ ಇಂದಿಗೂ ವೈಭೋಗದ ತುಣುಕುಗಳ ಹಾಗೆ ಕಾಣಿಸುತ್ತಿದ್ದಾರೆ. ಜನರನ್ನು ,ಅವರ ಗಮನವನ್ನು ಬೇರೆಡೆಗೆ ಸೆಳೆಯದಂತೆ ಎಷ್ಟು ಪ್ರಯತ್ನಗಳು ನಡೆದಿರುತ್ತವೆ ಎಂದರೆ, ಊರಿನಲ್ಲಿ ಎಲೆಕ್ಷನ್ ಇರಲಿ ,ಇಲ್ಲದಿರಲಿ ,ಧಣಿ- ರಾಜಕಾರಣಿಯ ವಿವಿಧ ರೀತಿಯ ಬಣ್ಣಬಣ್ಣದ ಕಟೌಟುಗಳು ದಾರಿಯುದ್ದಕ್ಕೂ ರಾರಾಜಿಸುತ್ತವೆ. ಪ್ರತಿವಾರವೂ ಕಟೌಟ್ಗಳು ಬದಲಾಗುತ್ತಲೇ ಇರುತ್ತದೆ.
ಇನ್ನು ಕೆಲ ಸಾಹುಕಾರ ಗಳಂತೂ ತಾವೇ ಆಧುನಿಕ ಶ್ರೀ ಕೃಷ್ಣದೇವರಾಯ ಎಂದು ಭಾವಿಸಿ ,ಅವನಂತೆಯೇ ವೇಷಧರಿಸಿ ನಿಂತು ಬೃಹತ್ ಕಟೌಟುಗಳನ್ನು ನಗರದ ವಿವಿಧ ಕಡೆಗಳಲ್ಲಿ ನಿಲ್ಲಿಸಲಾಯಿತು.ಬಳ್ಳಾರಿಯ ಗಣಿಧಣಿಗಳದ್ದೂ ಇನ್ನೊಂದು ರೀತಿ.ಮುಂಜಾನೆಯ ಟಿಫನ್ನಿಗೆ ಬೆಂಗಳೂರಿನ ಎಂ.ಟಿ.ಆರ್.ಹೋಟೆಲ್ಲಿಗೆ ಹೆಲಿಕಾಪ್ಟರ್ ನಲ್ಲಿ ಹೋದರೆ,ಅದಕ್ಕೂ ಮುನ್ನ ಹೆಲಿಕಾಪ್ಟರ್ ನಲ್ಲಿ ಹೈದರಾಬಾದ್ ವರೆಗೂ ವಾಕಿಂಗ್ ಹೋಗುವವರಿದ್ದರು.ವಿಮಾನದಲ್ಲಿ ಮಧ್ಯಾನ್ಹದ ಊಟಕ್ಕೆ ಬೊಂಬಾಯಿಗೆ ಹೋಗುತ್ತಿದ್ದರು.ರಾತ್ರಿ ಮತ್ತೆಲ್ಲಿಗೋ…!ಎಷ್ಟೋ ಜನ ಸಿನಿಮಾದವರು ರಾತ್ರೋರಾತ್ರಿ ಬಂದುಹೋಗುವುದನ್ನು ನೋಡಿದವರು ಇದ್ದರು.
ಲೋಲುಪತೆಗೆ ಜನರ ಬದುಕನ್ನೆ ಆಹುತಿ ತೆಗೆದುಕೊಂಡ ಧಣಿಗಳು,ಕೊನೆಗೆ ಜನರು ತಮ್ಮ ಕಡೆಗೆ ದೃಷ್ಟಿ ಹರಿಸಲೆಂದು ಸದಾ ಒಂದಿಲ್ಲೊಂದು ಸುದ್ದಿಯಿಂದ ಜನರನ್ನು ಭ್ರಮಾಲೋಕದಲ್ಲಿ ತಿರುಗುವಂತೆ ನೋಡಿಕೊಂಡರು.”ಸಾಮೂಹಿಕ ಮದುವೆ”ಗಳಂತಹ ಕೃತ್ರಿಮ ಕಾರ್ಯಕ್ರಮಗಳಿಗೆ ಕೈ ಹಾಕಿದರು.ಆ ಮೂಲಕ ಅಲ್ಲಿ ಬಂದ ವಧು-ವರರಿಗೆ ತಾಳಿ- ಬಟ್ಟೆ ಕೊಡುವುದರ ಮೂಲಕ “ದಾನಶೂರ”ರು ಎನಿಸಿಕೊಂಡರು.ಆದರೆ ಇಂತಹ ವಿವಾಹಗಳು ಹೆಸರಿನಲ್ಲಿ ಜನರು ಪ್ರಶ್ನೆ ಕೇಳುವುದನ್ನು,ಆಲೋಚನೆಯನ್ನೆ ಮಾಡದಿರುವ ಹಾಗೆ,ಅರ್ಥಮಾಡಿಕೊಳ್ಳುವ ಅವರು ಗುಣವನ್ನೆ ನಾಶಪಡಿಸಲಾಯಿತು.ಇಂತಹ ಗಣಿಧಣಿಗಳ ಭಿಕ್ಷೆಗೆ ಕೆಲ ಮಠಾಧೀಶರು ಕೈಚಾಚಿದರು.
ಜನರ ಬದುಕು ಕುಸಿಯಲು ಎಷ್ಟೊಂದು ಜನ ಒಂದಾದರು?
ನೆನೆಸಿಕೊಂಡರೆ ರೋಷ ಆವೇಶವೂ ಅಂತಕರುಣೆಯೂ ಒಟ್ಟಿಗೆಉಕ್ಕಿಬರುತ್ತದೆ.
ಜಿಲ್ಲೆಯ ಗಡಿಪ್ರದೇಶದ ಒಂದು ಬಹುಮುಖ್ಯವಾದ ಹಳ್ಳಿ ಕಮ್ಮತ್ತೂರು. ಈ ಊರಿನಲ್ಲಿ ನಡೆದಷ್ಟು ಗಣಿಗಾರಿಕೆ ಮತ್ತು ಡಿಪ್ಪಿಂಗ್ ಬೇರೆಲ್ಲೂ ನಡೆದಿರಲಿಕ್ಕಿಲ್ಲ .ಊರಿನ ಮನೆ ಗಳಿಗಿಂತಲೂ ಅಧಿಕವಾದ ಸ್ಟಾಕ್ ಯಾರ್ಡ್ಗಳು ನಿರ್ಮಾಣವಾದವು. ಧೂಳಿನಿಂದಾಗಿ ಮತ್ತು ವಿಪರೀತ ಶಬ್ದದಿಂದಾಗಿ ಅಸ್ತಮಕ್ಕೆ, ಕಿವುಡುತನಕ್ಕೆ ಬಲಿಯಾದವರಿಗೆ ಲೆಕ್ಕವಿಲ್ಲ. ಅಪರಿಮಿತ ಗಣಿಗಾರಿಕೆಯ ಪ್ರಭಾವದಿಂದಾಗಿ ಆಕ್ಸಿಜನ್ ಪ್ರಮಾಣ ಕುಸಿತ ಕಂಡಿತು. ಇಡೀ ಊರಿಗೆ ಊರೇ ಐಸಿಯುನಲ್ಲಿ ಇರುವಂತೆ ಭಾಸವಾಗುತ್ತಿದೆ.ಇಂತಹ ಎಷ್ಟೋ ಹಳ್ಳಿಗಳು ಉಸಿರಾಡಲು ಕಷ್ಟಪಡುತ್ತಿವೆ.
ಒಂದು ಕಾಲದ ರೈತ ಹೊಲ, ಗದ್ದೆ, ಮಣ್ಣನ್ನು ಪೂಜಿಸುತ್ತಿದ್ದ. ಆರಾಧಿಸುತ್ತಿದ್ದ .ಗುಡ್ಡಬೆಟ್ಟ ಸೂರ್ಯ ಚಂದ್ರ ತಾರೆಯರೇ ಆತನ ದೇವರುಗಳಾಗಿದ್ದವು. ದುಡಿಮೆಯೇ ಆತನ ಸಂಪತ್ತು. ಇಂತಹ ಕುಟುಂಬಗಳು ಇಲ್ಲದ, ಪ್ರಕೃತಿಯೂ ಇಲ್ಲದ ,ಅಭಿಶಾಪದ ಊರುಗಳಲ್ಲಿ ಶಾಪಗ್ರಸ್ತರಂತೆ ಮತ್ತೊಮ್ಮೆ ಯುದ್ಧಕ್ಕೆ ಹೊರಟ ಕೆಂಪು ಸೈನಿಕರಂತೆ ಇಲ್ಲಿನ ಜನ ಕಾಣಿಸುತ್ತಾರೆ.
ಎಲ್ಲಾ ಮುಗಿದ ಮೇಲೆ ಊರ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ದಿನಾಂಕ: 6 -10-2016 ರಂದು ಸರ್ಕಾರ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ ಆದೇಶಿಸಿತು.
ಕಾಲವೀಗ ತಣ್ಣಗೆ ನಿಶ್ಯಬ್ದ..!
ಯಾರದ್ದೋ ಹೆಣವೊಂದು ಸದ್ದಿಲ್ಲದೆ ಬಿದ್ದುಕೊಂಡಿರುವ, ಇನ್ನೂ ಯಾರೋ ಬರುವವರಿದ್ದಾರೆ ಎಂದು ಹೆಣವನ್ನು ಎತ್ತದೆ, ಕಾದು ಕುಳಿತಿರುವಂತೆ ಸೊಂಡೂರಿನ ಬೀದಿಗಳಿವೆ.
ಬಡತನದ ರೇಖೆಗಳನ್ನೆಲ್ಲಾ ಮೈಮೇಲೆ ಹೊದ್ದು ಕುಳಿತವರಂತೆ ಕಾಣುವ ಮುದುಕರು ,ಸಾಯಲಿಕ್ಕೂ ಆಗದೆ ಬದುಕಲೂ ಆಗಿದೆ, ದುಸ್ಥಿತಿಗೆ ಕಾರಣವನ್ನು ಹುಡುಕುತ್ತಿರುವವರ ಹಾಗೆ ಹಣೆಗೆ ಕೈ ಹಚ್ಚಿ ಕುಳಿತ ದೃಶ್ಯಗಳು ಹೃದಯವನ್ನು ಕಲಕುತ್ತದೆ .ಇದು ನಾಗರಿಕ ಸಮಾಜವೊಂದು ತನ್ನದೇ ಊರಿನ ಸಮುದಾಯವನ್ನು ಚಿತ್ರಹಿಂಸೆಗೆ ಒಳಪಡಿಸಿದ ಹಾಗೆ.ನಾನು ಕಂಡು ಮಾತನಾಡಿಸಿದರವಲ್ಲಿ ” ನನ್ನ ಹಣೆಬರಹ…ನೋಡಪಾ, ಅಲಸಂದಿ,ಅವರೆ,ಜ್ವಾಳ,ನವಣಿ,
ಸಜ್ಜಿ ಬೆಳೀತಿದ್ದೆ. ಏಪೆಂಪ್ಸಿಗೆ ಹಾಕಿ ರೊಕ್ಕ ಎಣಿಸ್ಕಂಡು ಬರ್ತಿದ್ದೆ.ಮಕ್ಕಳು ಮೀರಿ ಎಲ್ಲ ಆರಾಮಾಗಿದ್ವಿ…ಮೈನ್ಸು ಮೈನ್ಸೂ ಅಂತಂದು ಮೈಯೆಲ್ಲಾ ತಗಂಬುಡ್ತು ನನ್ನಪ್ಪನೆ” ಎಂದು ವಿಷಾದದಿಂದ ಹೇಳುತ್ತಾರೆ.
ದೂರದ ಊರುಗಳ ಗೆಳೆಯರಿಗೆ ಸೊಂಡೂರು ಎನ್ನುವುದು ಸುಂದರ ಸ್ವಪ್ನದ ಹಾಗೆ, ಕಾಡುತ್ತಲೇ ಇರುತ್ತದೆ. ಗಣಿಗಾರಿಕೆಯಿಂದ ರಾಜ್ಯ,ದೇಶ ವ್ಯಾಪಿ ಸುದ್ದಿಯಾಗಿ, ಅಂತರಾಷ್ಟ್ರೀಯ ಪ್ರಖ್ಯಾತಿಯನ್ನು ಗಳಿಸಿಬಿಟ್ಟಿತು. ಈಗಲೂ ‘ಚುನಾವಣೆ ‘ಎಂಬ ಶಬ್ದ ಕೇಳಿದರೆ ಸಾಕು, ಜನರ ಕಣ್ಣಲ್ಲಿ ಹೊಳಪು ಮೂಡುತ್ತದೆ. ಬಾಯಲ್ಲಿ ನೀರೂರುತ್ತದೆ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ ಎಂದು ನಾವು ಭಾವಿಸಿದ್ದು ,ಇಲ್ಲಿ ಅಣಕದಂತೆ ಭಾಸವಾಗುತ್ತಿದೆ.
*******
ಆದರೆ ,ಅಭಿವೃದ್ಧಿಯ ದೃಷ್ಟಿಯಿಂದ ಹೊರಗಿನ ಪ್ರಪಂಚಕ್ಕೆ ಸಾಕಷ್ಟು ಶ್ರೀಮಂತ, ಎಲ್ಲಾ ಬ್ರಾಂಡೆಡ್ ಕಂಪನಿಗಳ ಅಂಗಡಿಗಳಿರುವ ಹೊಸಪೇಟೆ-ಬಳ್ಳಾರಿಯಂತಹ ಊರುಗಳಲ್ಲಿ ಸ್ಟಾರ್ ಹೋಟೆಲ್ಗಳು ನಡೆಯುತ್ತಿವೆ. ಸೊಂಡೂರಿನ ಗಾಂಧಿ ಕರಕುಶಲ ಕೈಗಾರಿಕಾ ಕೇಂದ್ರಕ್ಕೂ ಬೀಗ ಬಿದ್ದಿದೆ.
ಹೌದು, ಅಭಿವೃದ್ಧಿಯೆಂದರೆ ಈ ಪ್ರದೇಶಗಳ ಜನತೆ ಹಸಿವಿನಿಂದ ಸ್ವಾತಂತ್ರ್ಯ ಪಡೆದಿದ್ದಾರೆಯೆ ?ಲಿಂಗ ಅಸಮಾನತೆಯಿಂದ ಸಾಮಾಜಿಕ ಅಸಮಾನತೆಯ,ಅವಮಾನಳಿಂದ ಸ್ವಾತಂತ್ರ್ಯ ಪಡೆದಿದ್ದಾರೆಯೆ ?ಎನ್ನುವ ಅಮರ್ತ್ಯಸೇನರು ಕೇಳುವ ಪ್ರಶ್ನೆಗಳನ್ನು ಕೇಳಿಕೊಂಡರೆ…ಎಲ್ಲಾ ಪ್ರಶ್ನೆಗಳಿಗೂ “ಇಲ್ಲ”ಎಂಬ ರೆಡಿ ಉತ್ತರ ದೊರಕುವುದು.
ಈ ಎಲ್ಲಾ ಸ್ವಾತಂತ್ರ್ಯಗಳನ್ನು ಯಾರೋ ಕೊಡಲು ಸಾಧ್ಯವಿಲ್ಲ.ಅವರು ಪಡೆದುಕೊಳ್ಳುವ ಸಾಮರ್ಥ್ಯವನ್ನು ನಿರ್ಮಾಣ ಮಾಡುವುದು ನಮ್ಮ ನಿಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ.
***
ವಯಸ್ಸಾಗಿ ಮುದುಕರಾದಾಗ ಮೂಲೆಯಲ್ಲಿ ಎಲ್ಲೋ ಒಂದು ಕಡೆ ಕುಳಿತು ಅಂತರ್ಮುಖಿಗಳಾಗಿಬಿಡುವುದು ವಯೋಸಹಜ ಗುಣ. ಆದರಿಲ್ಲಿ ಮಕ್ಕಳೂ ಅಂತರ್ಮುಖಿಗಳಾದರೆ… ?ಕಥೆಗಳು ಬೆಂಕಿಯ ಕೆನ್ನಾಲಗೆ ಹಾಗೆ ಸುಡುತ್ತಿವೆ. ಈ ಜನಗಳು ಅನುಭವಿಸಿದ, ಅನುಭವಿಸುತ್ತಿರುವ ಕರಾಳ ನೋವುಗಳನ್ನು ಹಿಡಿದಿಡಲು ಒಂದು ಜೀವನ ಸಾಕಾಗುವುದಿಲ್ಲ ಎನಿಸುತ್ತಿದೆ.
ಇಲ್ಲಿನ ಎಲ್ಲಾ ಅಕ್ಷರಗಳು ವರ್ತಮಾನದ ಒತ್ತಡಗಳಿಂದಲೇ ಬಂದಿರುವುವು ಎಂದೇ ಭಾವಿಸಿದ್ದೇನೆ. ಹಿಂದಿನಿಂದಲೂ ನನ್ನನ್ನು ಕಾಡುತ್ತಿದ್ದ ಘಟನೆಗಳು, ನಂತರದಲ್ಲಿ ಗಣಿಗಾರಿಕೆಯೆಂಬ ಪೀಕ್ ಅವಧಿಯಲ್ಲಿನ ಘಟನೆಗಳು ,ಜನರ ಬದುಕು, ನಂತರದ ದಿನಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಬೀದಿಪಾಲಾದ ಕುಟುಂಬಗಳ ರೋದನವನ್ನು ಕೆಲಮಟ್ಟಿಗಾದರೂ ತಿಳಿಸಬೇಕಿತ್ತು.
ಬರಹಗಾರನೊಬ್ಬ ಯಾಕೆ ಬರೆಯುತ್ತಾನೆ ಎಂಬುದನ್ನು ಪೂರ್ಣ ಅರ್ಥಮಾಡಿಸಿದ್ದು ಈ ಬರಹಗಳೆ.ಎದೆಯ ಮೂಲೆಯಲ್ಲಿ ಅಡಗಿದ್ದ ಭಾವಗಳು ಕಾಡಿದಾಗಲೆಲ್ಲ ಸಣ್ಣ ಸಣ್ಣ ಚೀಟಿಗಳಲ್ಲಿ ಬರೆದು,ಇತ್ತೀಚೆಗೆ ಮೊಬೈಲಿನಲ್ಲಿ ಟೈಪಿಸಿ ಕೊಂಡು ನಿರಾಳವಾಗುತ್ತಿದ್ದೆ.ಬಹಳ ವರ್ಷಗಳ ಹಿಂದಿನಿಂದಲೂ ಹಿಡಿದಿಟ್ಟುಕೊಂಡಿದ್ದ ಕರಾಳ ಸತ್ಯಗಳನ್ನು ಬರೆಯುವಾಗ ಕಣ್ಣು ಮುಂಜಾದದ್ದು,ಎದೆ ಭಾರವಾದದ್ದೂ ಇದೆ.ಸಾಮಾನ್ಯ ಕೃಷಿಕನೋರ್ವ ಕಣ್ಣೆದುರೇ ಹುಚ್ಚನಾಗಿ ತಿರುಗಾಡುವಾಗ ತುಂಬಾ ಡಿಸ್ಟರ್ಬ್ ಆಗಿದ್ದಿದೆ.
ಹೀಗೆ ನನ್ನನ್ನು ,ಡಿಸ್ಟರ್ಬ್ ಮಾಡಿದ ಈ ಭಾವಗಳು ನನ್ನ ಎದೆಯಿಂದ ಹಾರಿ ಹೀಗೆ ಹೊರಬರುವ ತನಕವೂ ಸಮಾಧಾನವಿದ್ದಿಲ್ಲ.ನಾನು ಸಾಮಾಜಿಕ ಜವಾಬ್ದಾರಿಯೊಂದಿಗೆ ನನಗನಿಸಿದ ಭಾವಗಳನ್ನು ಹೊರಹಾಕಿರುವೆ…..ನಿಟ್ಟುಸಿರಿನೊಂದಿಗೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಪಿಟೀಲು ಬಿಟ್ಟು ಏಳುತ್ತಿಲ್ಲ

- ಸಂತೋಷ್ ಉಂಡಾಡಿ
ರೋಮ್ ಹೊತ್ತಿ ಉರಿಯುತ್ತಿರುವಾಗ
ನೀರೊ ಪಿಟೀಲು ನುಡಿಸುತ್ತಿದ್ದನಂತೆ
ಪ್ರಜೆಗಳು ಸಂಭ್ರಮಿಸುತಿದ್ದರಂತೆ
ಇಲ್ಲಿಯೂ ಹಾಗೆ..!!
ಹೊತ್ತಿ ಉರಿಯುತಿದೆ ರಾಜ್ಯ
ದ್ವೇಷ ಕಾರುತಿವೆ ಮನಸುಗಳು
ಆದರೆ ನಮ್ಮ ನೀರೊ..!!!
ದಾಡಿ ನೀವಿಕೊಳ್ಳುತ್ತಿದ್ದಾನೆ, ವೇಷ ಬದಲಿಸುತ್ತಿದ್ದಾನೆ ನವಿಲಿಗೆ ಅಕ್ಕಿ ತಿನ್ನಿಸುತ್ತಾ ಹಾಯಾಗಿ ಕುಳಿತಿದ್ದಾನೆ..!!
ಮುಂದಿನ ಚುನಾವಣೆಗಾಗಿ ತಯಾರಿ ನಡೆಸಿದ್ದಾನೆ
ಸಮರ ಸೇನಾನಿ, ಹುಡುಕುತ್ತಿದ್ದಾನೆ ಹೊಸ ಕತೆಯ
ಹಾವಭಾವಕ್ಕೆನೂ ಕಮ್ಮಿಯಿಲ್ಲ, ಆವೇಶಕ್ಕೂ ಕೊರತೆ ಇಲ್ಲ..!!!
ಹೊಗಳು ಭಟರು, ವಂದಿಮಾಗಧರು
ಪುಂಖಾನುಪುಂಖವಾಗಿ, ಜಯಕಾರ ಹಾಕುತ್ತಿದ್ದಾರೆ
ಅಗ್ನಿ ಜ್ವಾಲೆಗಳು ಮಾತ್ರ ನಿಲ್ಲುತ್ತಿಲ್ಲ..!!!
ಕರುಣೆ ಒಲವುಗಳ ಮಾತೇ ಇಲ್ಲ.
ಸತ್ಯದ ದಹನ ಮಾತ್ರ ನಿತ್ಯ ನಿರಂತರ
ಆದರೂ ನಮ್ಮ ನೀರೊ ಪಿಟೀಲು ಬಿಟ್ಟು ಏಳುತ್ತಿಲ್ಲ, ನವಿಲು ನರ್ತಿಸುತ್ತಿಲ್ಲ…!!!
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ11 hours ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ1 day ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ12 hours ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ
-
ದಿನದ ಸುದ್ದಿ43 mins ago
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ