Connect with us

ಸಿನಿ ಸುದ್ದಿ

“ಎನ್ನು ನಿಂಟೆ ಮೊಯ್ದೀನ್” | ಮೊಯ್ದೀನ್-ಕಾಂಚನಾ ಅಮರ ಪ್ರೇಮ ಕಥೆ

Published

on

  • ರುದ್ರು ಪುನೀತ್ ಆರ್. ಸಿ

ಮೊನ್ನೆ ಸ್ನೇಹಿತರೊಬ್ಬರು “ಎನ್ನು ನಿಂಟೆ ಮೊಯ್ದೀನ್” ಸಿನೆಮಾದ ಬಗ್ಗೆ ಬರೆದಿದ್ದನ್ನು ಬಿ.ಎಂ.ಬಶೀರ್ ರವರು ಶೇರ್ ಮಾಡಿಕೊಂಡಿದ್ದರು. ಅದನ್ನು ಓದುತ್ತಿದ್ದಂತೆ ಇಡೀ ಸಿನೆಮಾದ ಆ ದೃಶ್ಯಗಳು ಕಣ್ಣ ಮುಂದೆಯೇ ಪ್ಲೇ ಆಗುತ್ತಿದ್ದವು. ಅದು ನೈಜ ಕಥೆ ಎಂದು ಗೊತ್ತಾಗುತ್ತಿದ್ದಂತೆ ಕಣ್ಣುಗಳು ತೇವವಾದವು. ಆ ಕ್ಷಣಕ್ಕೆ ಆ ಸಿನೆಮಾ ನೋಡಲೇಬೇಕೆನ್ನಿಸಿತು, ತಕ್ಷಣವೇ Hotstar ನಲ್ಲಿ ಇಡೀ ಸಿನೆಮಾ ನೋಡಿದೆ..

ನಿಜ ಹೇಳ್ತೇನೆ ನಂಗೆ ಮಲೆಯಾಳಿ ಬರೋದಿಲ್ಲ, ಅರ್ಥವೂ ಆಗೋದಿಲ್ಲ. 2015 ರಲ್ಲಿ ರಿಲೀಸ್ ಆಗಿರುವ ಆ ಸಿನೆಮಾಗೆ Hotstar ನಲ್ಲಿ Subtitles ಕೂಡ ಇಲ್ಲ. ಇಡೀ ಸಿನೆಮಾದಲ್ಲಿ ಅವರ ಸಂಬಾಷಣೆ ಏನೇನೂ ಅರ್ಥವಾಗಲಿಲ್ಲ, ನೈಜ ಕಥೆಗೆ ಜೀವ ತುಂಬಿರುವ ಪೃತ್ವಿರಾಜ್ ಮತ್ತು ಪಾರ್ವತಿ ಮೆನನ್ ರ ಅಭಿನಯ ಮತ್ತು ಕಣ್ಣುಗಳಲ್ಲೇ ನಟಿಸಿ ಭಾವನೆಗಳನ್ನು ವ್ಯಕ್ತಪಡಿಸುವ ಈ ಅಮರ ಪ್ರೇಮಕಥೆಯನ್ನು ಅರ್ಥಮಾಡಿಕೊಳ್ಳಲು ನನಗೆ ನಿಜಕ್ಕೂ ಭಾಷೆಯ ಅವಶ್ಯಕತೆ ಬೀಳಲಿಲ್ಲ.

ಇಲ್ಲಿ ಮೊಯ್ದೀನ್ ಮುಸಲ್ಮಾನ ಮತ್ತು ಕಾಂಚನಾ ಹಿಂದೂ ಧರ್ಮದ ಹುಡುಗಿ. ಈ ಲವ್ ಜಿಹಾದ್ ಎನ್ನುವ ರಾಜಕೀಯ ತಂತ್ರ ಆಗ ಇರಲಿಲ್ಲವಾದ್ದರಿಂದ ಅವರ ಪ್ರೇಮಕ್ಕೆ ಲವ್ ಜಿಹಾದ್ ಎನ್ನುವ ಕಳಂಕ ಅಂಟಿಕೊಳ್ಳಲಿಲ್ಲ.. ಮೊಯ್ದೀನ್ ಮತ್ತು ಕಾಂಚನಾಳ ಪ್ರೀತಿಗೆ ಅಡ್ಡವಾಗಿದ್ದು ಧರ್ಮವೇ ಎನ್ನುವುದು ಸತ್ಯ. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದ ವಿಷಯ ತಿಳಿಯುತ್ತಿದ್ದಂತೆ ಕಾಂಚನಾಳ ಸಂಪ್ರದಾಯಸ್ಥ ತಂದೆ ಮತ್ತು ಚಿಕ್ಕಪ್ಪ ಕಾಂಚನಾಳನ್ನು ಕಾಲೇಜು ಬಿಡಿಸಿ ಗೃಹಬಂದನದಲ್ಲಿ ಇರಿಸುತ್ತಾರೆ.

ಈ ಕಡೆ ಮೊಯ್ದೀನ್ ನ ತಂದೆ ಒಮ್ಮೆ ಬಂದೂಕಿನಿಂದ ಕೊಲ್ಲುವುದಾಗಿ ಯತ್ನಿಸಿ, ಎರಡನೇ ಬಾರಿ ಮೊಯ್ದೀನ್ ನನ್ನು ಚಾಕುವಿನಿಂದ ನಡುರಸ್ತೆಯಲ್ಲಿ ಹಲವು ಬಾರಿ ಇರಿದು, ನನ್ನ ಮಗನನ್ನು ನಾನೇ ಕೊಲೆ ಮಾಡಿದೆ ಎಂದು ಸೀದಾ ಪೊಲೀಸ್ ಠಾಣೆಗೆ ಹೋಗುತ್ತಾರೆ. ಅದೃಷ್ಟವಶಾತ್ ಬದುಕುಳಿದ ಮೊಯ್ದೀನ್ ಕೋರ್ಟ್ ಕಟಕಟೆಯಲ್ಲಿ ನಿಂತು ನನ್ನನ್ನು ಯಾರೂ ಕೊಲೆ ಮಾಡಲು ಯತ್ನಿಸಿಲ್ಲ ನಾನೇ ಬಿದ್ದು ಗಾಯ ಮಾಡಿಕೊಂಡಿದ್ದು ಎಂದು ಹೇಳಿ ತಂದೆಯನ್ನು ಶಿಕ್ಷೆಯಿಂದ ಪಾರುಮಾಡುತ್ತಾರೆ.

ಭೇಟಿಯಾಗುವ ಯಾವ ಅವಕಾಶಗಳು ಇಲ್ಲದಿದ್ದರೂ ಗುಪ್ತ ಪತ್ರಗಳ ಮೂಲಕವೇ ಇವರ ಪ್ರೀತಿಯು ಎರಡು ದಶಕಗಳ ಕಾಲ ಜೀವಂತವಾಗಿತ್ತು. ಆದರೆ ಈ ನಿಷ್ಕಲ್ಮಶ ಪ್ರೀತಿ ಸಾಂಪ್ರದಾಯವಾದಿಗಳಾದ ಎರಡೂ ಕುಟುಂಬದವರಿಗೆ ಕಾಣಲಿಲ್ಲ ಎನ್ನುವುದೇ ನೋವಿನ ಸಂಗತಿ. ಇವರ ಗೊಡವೆಯೇ ಬೇಡ ನಾವಿಬ್ಬರು ಎಲ್ಲಾದರೂ ದೂರ ಹೋಗಿ ಬದುಕೋಣ ಎಂದು ನಿರ್ಧಾರ ಮಾಡಿ, ಊರು ಬಿಟ್ಟು ಹೋಗುವ ಎಲ್ಲಾ ತಯಾರಿ ಮಾಡಿಕೊಂಡು ಒಂದು ದಿನ ರಾತ್ರಿ ಕಾಂಚನಾಳ ಬರುವಿಕೆಗಾಗಿ ಅವರ ಮನೆಯ ತುಸು ದೂರದಲ್ಲೇ ಕಾರಿನಲ್ಲಿ ಕೂತು ಕಾಂಚನಾಳಿಗೆ ಕಾಯುತ್ತ ನಿಂತಿದ್ದ ಮೊಯ್ದೀನ್. ಜೀವಂತವಿದ್ದಾಗ ತಮ್ಮ ಪ್ರೀತಿಗೆ ನಖಶಿಕಾಂತ ವಿರೋಧಿಯಾಗಿದ್ದ ಮೊಯ್ದೀನ್ ನ ತಂದೆ ಕೊನೆಯುಸಿರೆಳೆದಿದ್ದಾರೆ ಎನ್ನುವ ಆ ಕ್ಷಣದ ಸುದ್ದಿಯೂ ಅವತ್ತು ಪಾಪ ಈ ಪ್ರೇಮಿಗಳಿಗೆ ಮುಳುವಾಯಿತು.

ಇತ್ತ ಕಾಂಚನಾಳನ್ನು ಬೇರೆಯವರೊಂದಿಗೆ ಮದುವೆ ಮಾಡಿಸಲು ಪ್ರಯತ್ನಿಸುವ ಅವರ ಮನೆಯವರ ಯಾವ ತಂತ್ರಗಾರಿಕೆಯೂ ಕಾಂಚನಾಳ ಹಠದ ಮುಂದೆ ನಿಲ್ಲೋದಿಲ್ಲ.
ಕೊನೆಗೆ ಈ ದೇಶವೇ ಬಿಟ್ಟು ಎಲ್ಲಾದರೂ ಹೋಗಿ ಬದುಕು ಕಟ್ಟಿಕೊಳ್ಳೋಣ ಎಂದು ಪ್ರೇಮಿಗಳು ನಿರ್ಧರಿಸುತ್ತಾರೆ. ಕಾಂಚನಾಳ ಮಾವನ ಮಗನೂ ಕೂಡ ಕಾಂಚನಾಳನ್ನು ಪ್ರೀತಿಸುತ್ತಿರುತ್ತಾನೆ. ತಮ್ಮ ಪ್ರೀತಿಯ ಬಗ್ಗೆ, ಮೊಯ್ದೀನ್ ನನ್ನು ಬಿಟ್ಟು ಬೇರಾರಿಗೂ ನಾನು ಮನಸ್ಸು ಕೊಡಲಾರೆ ಎಂದು ಎಲ್ಲವನ್ನು ಆತನಲ್ಲಿ ಬಿಡಿಸಿ ಹೇಳಿದಾಗ ಅವರ ಪ್ರೀತಿಯ ಆಳವನ್ನು ಅರ್ಥೈಸಿಕೊಂಡ ಕಾಂಚನಾಳ ಮಾವನ ಮಗ ಅವರನ್ನು ಸಪೋರ್ಟ್ ಮಾಡುತ್ತಾನೆ. ಪಾಸ್ಪೋರ್ಟ್ ಮಾಡಿಸುವುದಕ್ಕಾಗಿ ಆತನೇ ಹೋಗಿ ಕಾಂಚನಾಳ ಫೋಟೋವನ್ನು ಮೊಯ್ದೀನ್ ಗೆ ಕೊಟ್ಟು ಬರುತ್ತಾನೆ.

ಪಾಸ್ ಪೋರ್ಟ್ ಆಫೀಸಿಗೆ ಹೋಗಿ ಪಾಸ್ಪೋರ್ಟ್ ಕಲೆಕ್ಟ್ ಮಾಡಿದ ಕ್ಷಣಕ್ಕೆ ಮೊಯ್ದೀನ್ ಗೆ ಆಗುವ ಸಂತೋಷಕ್ಕೆ ಪಾರವೇ ಇರಲಿಲ್ಲ. ಪಾಸ್ಪೋರ್ಟ್ ಜೇಬಿಗಿಳಿಸಿಕೊಂಡು ದೋಣಿಯಲ್ಲಿ ನದಿ ದಾಟುವ ವೇಳೆ, ಇಡೀ ದೋಣಿ ತುಂಬಾ ಸುಮಾರು ಹತ್ತಿಪ್ಪತ್ತು ಜನರಿದ್ದರೂ, ಆತನ ಮನಸ್ಸು ಮಾತ್ರ ಮಾರನೇ ದಿನ ತಾನು ಮತ್ತು ಕಾಂಚನಾ ದೂರದೂರಿಗೆ ಹೋಗಿ ಸ್ವತಂತ್ರ ಹಕ್ಕಿಗಳಾಗಿ ಯಾರ ಗೊಡವೆಯೂ ಇಲ್ಲದೆ ಬದುಕುವ ಆ ಮುಂಬರುವ ಕ್ಷಣಗಳನ್ನು ಊಹಿಸಿಕೊಳ್ಳುತ್ತಿರುವುದು ಆತನ ಆ ಮುಗ್ದ ನಗು ಹೇಳುತ್ತಿತ್ತು.

ಇತ್ತ ಕಾಂಚನಾ ತನ್ನ ಬಟ್ಟೆ, ಒಡವೆ, ಲಗೇಜುಗಳನ್ನು ಪ್ಯಾಕ್ ಮಾಡುತ್ತಾ, ನಾಳೆ ನನಗೆ ಈ ಪಂಜರದಿಂದ ಮುಕ್ತಿ ಸಿಗುತ್ತದೆ, ನನ್ನ ಇನಿಯನ ಜೊತೆ ನನ್ನಿಚ್ಛೆಯಂತೆ ಸ್ವತಂತ್ರವಾಗಿ ಬದುಕುವ ಅವಕಾಶ ದೊರೆಯುತ್ತದೆ ಎನ್ನುವ ನೂರಾರು ಕನಸುಗಳೊಂದಿಗೆ ಪ್ರತೀ ಕ್ಷಣವನ್ನು ಆನಂದಿಸುತ್ತಾ ನಾಳೆಯನ್ನು ಕಾಯುತ್ತಿರುತ್ತಾಳೆ. ಇವರ ಪ್ರೀತಿಯನ್ನು ಕವಿಗಳು ವರ್ಣಿಸುವ ಹಾಗೆ ವರ್ಣಿಸಲು ನನಗೆ ಪದಗಳು ಸಿಗುತ್ತಿಲ್ಲ. ಆದರೆ ಈ ಸಿನೆಮಾ(ನೈಜ ಕಥೆ)ದ ಬಗ್ಗೆ ಬರೆಯುವಾಗಲೂ ಆ ಮುಕ್ಕತ್ತೆ ಪೆಣ್ಣೆ ಹಾಡು ಮತ್ತು ಸಂಗೀತ ಕಿವಿಯಲ್ಲೇ ಕೇಳಿಸುತ್ತಿದೆ.

ಪ್ರೀತಿ ಎನ್ನುವುದು ಎರಡು ವ್ಯಕ್ತಿಗಳ ನಡುವೆ ಆಗುವಂತದ್ದಲ್ಲ ಅದು ಎರಡು ಮನುಸ್ಸುಗಳ ನಡೆವೆ ಬೆಸೆಯುವಂತದ್ದು..
ಪ್ರೀತಿ ಎನ್ನುವುದು ಧರ್ಮ,ಜಾತಿ,ಮತ,ಪಂಥವನ್ನು ಮೀರಿದ್ದು. ಪ್ರೀತಿಗೆ ಕಣ್ಣಿಲ್ಲ, ಪ್ರೀತಿಗೆ ಬಣ್ಣವೂ ಇಲ್ಲ. ಪ್ರೀತಿಗೆ ಎರಡು ಮನುಸ್ಸುಗಳ ನಡುವೆ ಬೆಸೆದುಕೊಳ್ಳುವ ಒಂದು ಸಣ್ಣ ತರಂಗವಿರುತ್ತೆ, ಅದಕ್ಕೆ ಗಾತ್ರವೂ ಇಲ್ಲ ತೂಕವೂ ಇಲ್ಲ.
ಧರ್ಮ,ಜಾತಿ,ಮತ,ಪಂಥಗಳ ಗೊಡವೆಗಳಿಗೆ ಸಿಕ್ಕಿ ಸಂಪ್ರದಾಯವಾದಕ್ಕೆ ಬಲಿಯಾಗಿರುವ ಆ ಕುಟುಂಬಗಳಿಗೆ ಮೊಯ್ದೀನ್ ಮತ್ತು ಕಾಂಚನಾಳ ನಡುವೆ ಇರುವ ಪ್ರೀತಿ ಎಂತದ್ದು ಎಂದು ತಿಳಿಯುವುದಾದರು ಹೇಗೆ.

ಧರ್ಮ ಮತ್ತು ಸಂಪ್ರದಾಯಕ್ಕೆ ಅಂಟಿಕೊಂಡಿರುವ ಇವರಿಬ್ಬರ
ಕುಟುಂಬಗಳಿಗೆ ಇವರ ನೈಜ ಪ್ರೀತಿ ತಿಳಿಯಲಿಲ್ಲ ನಿಜ ಆದರೆ ಪ್ರಕೃತಿಗೂ ತಿಳಿಯಲಿಲ್ಲವೇ? ಪ್ರಶಾಂತವಾಗಿ ಹರಿಯುತ್ತಿದ್ದ ಆ ನದಿ ದಡದಲ್ಲಿಯೇ ಅಲ್ಲವೇ ಇವರ ಪ್ರೀತಿ ಶುರುವಾಗಿದ್ದು, ದೈಹಿಕವಾಗಿ ದೂರವಿದ್ದರೂ ಪ್ರೀತಿಯನ್ನೇ ಅಲ್ಲವೇ ಈ ಪ್ರೇಮಿಗಳು ಉಸಿರಾಡುತ್ತಿದ್ದಿದ್ದು ಹಾಗಾಗಿ ಆ ಗಾಳಿಗೂ ತಿಳಿಯಲಿಲ್ಲವೇ, ಕಿಟಕಿಯಿಂದ ಆಚೆ ಕೈಹಾಕಿ ಬೀಳುವ ಮಳೆಹನಿಯ ಜೊತೆಯಲ್ಲಿಯೇ ಅಲ್ಲವೇ ಆಕೆ ತನ್ನ ಪ್ರೇಮವೇದನೆಯನ್ನು ಹಂಚಿಕೊಳ್ಳುತ್ತಿದ್ದಿದ್ದು’ ಮಳೆ ಹನಿಗೂ ತಿಳಿಯದಾಯಿತೇ..

ದೋಣಿಯಲ್ಲಿ ನದಿ ದಾಟುವ ವೇಳೆ ವಿಪರೀತ ಗಾಳಿ ಮಳೆಗೆ ದೋಣಿ ಮಗುಚಿ ಬಿದ್ದಿತು. ಮೊಯ್ದೀನ್ ನನ್ನು ಸೇರಿ ಅದರಲ್ಲಿದ್ದ ವೃದ್ಧರು, ಮಕ್ಕಳು, ಮಹಿಳೆಯರು ಈಜು ಬಾರದವರು ನೀರಿನಲ್ಲಿ ಮುಳುಗುತ್ತಿದ್ದರು. ಈಜು ಬರುವವರು ಮುಳುಗುತ್ತಿದ್ದವರನ್ನು ರಕ್ಷಿಸಲು ಮುಂದಾದರು. ಮೊಯ್ದೀನ್ ನೀರಿನಲ್ಲಿ ಮುಳುಗಿ ಅನೇಕರನ್ನು ಹೊರಗೆಳೆದು ತಂದು ದೋಣಿಗೆ ಬಿಟ್ಟರು, ಕೊನೆಯ ಬಾರಿ ಮುಳುಗಿ ಮಗುವೊಂದನ್ನು ಹೊರಗೆಳೆದು ತರುವ ಸಮಯದಲ್ಲಿ ಸುಳಿಗೆ ಸಿಲುಕಿಕೊಂಡ ಮೊಯ್ದೀನ್ ಎಷ್ಟೇ ಕಷ್ಟ ಪಟ್ಟರು ಅದರಿಂದ ತಪ್ಪಿಸಿಕೊಂಡು ಹೊರಬರಲಾಗದೆ ಮುಳುಗಿ ಪ್ರಾಣ ಬಿಟ್ಟರು.

ಇತ್ತ ಮೊಯ್ದೀನ್ ನೀರುಪಾಲಾದ ಸುದ್ದಿ ತಿಳಿದ ಮೊಯ್ದೀನ್ ತಾಯಿಯ ನದಿ ದಡದಲ್ಲಿ ನಿಂತು ಸುರಿಸುತ್ತಿದ್ದ ಕಣ್ಣೀರು ಅದೇ ನದಿ ಸೇರುತ್ತಿತ್ತು, ಮೊಯ್ದೀನ್ ಸ್ನೇಹಿತರ ವೇದನೆ ಮುಗಿಲು ಮುಟ್ಟಿತ್ತು. ಪೊಲಿಟಿಕಲ್ ಆಕ್ಟಿವಿಸ್ಟ್ ಆಗಿದ್ದ ಮೊಯ್ದೀನ್ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದ. ಸುದ್ದಿ ತಿಳಿಯುತ್ತಿದ್ದಂತೆ ಕಾಂಚನಾ ಎದೆ ಒಡೆದುಕೊಂಡು ಅತ್ತಳು, ಗೋಳಾಡಿದಳು, ಅನೇಕ ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದಳು, ಕೊನೆಗೆ ಮೊಯ್ದೀನ್ ನ ತಾಯಿ ಕಾಂಚನಾಳನ್ನು ಭೇಟಿಯಾಗಿ ಆಕೆಯನ್ನು ಸೊಸೆಯಾಗಿ ಸ್ವೀಕರಿಸಿದಳು.

ಕಾಂಚನಾ ತನ್ನ ಅತ್ತೆಯೊಂದಿಗೆ ಗಂಡನ ಮನೆ ಸೇರುವ ಸಮಯ ಕೊನೆಯಲ್ಲಿ ಬರುವ ಆ ಸೀನ್ ನಿಜಕ್ಕೂ ಕಣ್ಣಾಲಿಗಳನ್ನು ಮತ್ತೊಮ್ಮೆ ತೇವಗೊಳಿಸಿತು. ಗಂಡನ ಮನೆಯ ಹೊಸ್ತಿಲು ದಾಟುತ್ತಿದ್ದಂತೆ ಹಿಂದೆ ತಿರುಗಿ ನೋಡುವ ಆ ಸಮಯದಲ್ಲಿ ಕಾಂಚನಾ ಮತ್ತು ಮೊಯ್ದೀನ್ ನ ಆ ನೋವು ತುಂಬಿದ ನಗು ಈಗಲೂ ಕಣ್ಣಮುಂದೆಯೇ ಇದೆ. ಪಾತ್ರಕ್ಕೆ ಜೀವತುಂಬಿದ ಪೃಥ್ವಿರಾಜ್ ಮತ್ತು ಪಾರ್ವತಿ ಮೆನನ್ ರ ನಟನೆಗೆ ಒಂದು ದೊಡ್ಡ ಸಲ್ಯೂಟ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ

Published

on

ವಿದ್ಯಾನಾಯ್ಕ್ ಅರೇಹಳ್ಳಿ

ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ.

ಮುಖ್ಯ ಪಾತ್ರದಲ್ಲಿ ಅರ್ಜುನ್ ಚೌಹಾಣ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವತ್ಥ್ ಮತ್ತು ಇತರರು ಕಾಣಿಸಿಕೊಂಡಿದ್ದು, ಮೈಸೂರು ರಾಜು ಅವರು ಕಥೆ, ಚಿತ್ರಕಥೆ, ನೃತ್ಯ, ನಿರ್ದೇಶನದಲ್ಲಿ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.
ನಾಗರತ್ನಮ್ಮ ಚಿತ್ರದ ನಿರ್ಮಾಪಕರು ಆಗಿದ್ದು, ಲಕ್ಷ್ಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಎ. ಟಿ. ರವೀಶ್ ಸಂಗೀತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳಲಿದೆ, ಅರವಿಂದ್ ರಾಜ್ ಅವರ ಸಂಕಲನ, ರಾಮನಾಥ್ ರಾಜ್ ಛಾಯಾಗ್ರಹಣಾವಿದೆ ಎನ್ನುತ್ತಾರೆ ಚಿತ್ರದ ನಾಯಕ ಅರ್ಜುನ್ ಚೌಹಾಣ್.

ಅರ್ಜುನ್ ಚೌಹಾಣ್ ಕೇವಲ ಸಿನಿಮಾಗಳಲ್ಲದೆ, ಬಂಜಾರ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಂಜಾರ ಹವೇಲಿ ಎಂಬ ರಿಯಾಲಿಟಿ ಶೋ ಅನ್ನು ಕೂಡ ಯಶಸ್ವಿಯಾಗಿ ನಡೆಸಿ, ನಿರ್ದೇಶಿಸಿದ್ದಾರೆ. ಅದಲ್ಲದೆ ಈ ಹಿಂದೆ ರುದ್ರಾಕ್ಷಿಪುರ, ಸ್ವಚ್ಛ ಕರ್ನಾಟಕ, ಉತ್ತರ, ನಾಕುತಂತಿ, ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದು, ಉತ್ತರ ಮತ್ತು ನಾಕುತಂತಿ ರಿಲೀಸ್ ಆಗಬೇಕಿದೆ.

ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿರುವ ಅರ್ಜುನ್ ಚೌಹಾಣ್ ಚಿಕ್ಕ ವಯಸ್ಸಿನಿಂದಲೇ ಬೆಳ್ಳಿಪರದೆಯ ಮೇಲೆ ಹೀರೊ ಆಗಬೇಕೆಂಬ ದೊಡ್ಡ ಕನಸನ್ನು ಹೊತ್ತು ಸಿನಿರಂಗಕ್ಕೆ ಬಂದ ಬಂಜಾರ ಸಮುದಾಯದ ಪ್ರತಿಭೆ. ತಾವೊಬ್ಬ ನಟನಾಗಬೇಕು ಎಂಬ ಹಂಬಲದಿಂದ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.

ನಾಯಕ ನಟನಾಗಿ ​ರುದ್ರಾಕ್ಷಿಪುರ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಇವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.

ಇನ್ನು 2022ರಲ್ಲಿ ​ಸ್ವಚ್ಛ ಕರ್ನಾಟಕ ಎಂಬ ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರಂತಹ ಗಣ್ಯರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದದ್ದು ಇವರ ಪ್ರತಿಭೆಗೆ ರಹದಾರಿ ಸೃಷ್ಟಿಸಿದಂತಾಗಿತ್ತು. ಇದೀಗ ​ಕುಚುಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪರಿಶ್ರಮ ಮತ್ತು ಫಿಟ್ನೆಸ್

ಪರಿಶ್ರಮ ಮತ್ತು ಫಿಟ್ನೆಸ್ ಗೆ ಮಹತ್ವ ಕೊಡುವ ಅರ್ಜುನ್ ಸಿನಿಮಾಗಳಲ್ಲಿ ಹೀರೊ ಆಗಲು ಬೇಕಾದ ದೈಹಿಕ ಕಸರತ್ತು, ಸಿಕ್ಸ್ ಪ್ಯಾಕ್ ಬಾಡಿ ಟ್ರಾನ್ಸ್‌ಫಾರ್ಮೇಶನ್ ಮತ್ತು ನಟನಾ ಕೌಶಲಗಳಿಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ.

ಆಲ್ಬಮ್ ಸಾಂಗ್ಸ್ ಮತ್ತು ಶಾರ್ಟ್ ಫಿಲ್ಮ್ಸ್

ಕುಚುಕು ನಾಯಕ ನಟ ಚೌಹಾಣ್

ಕೇವಲ ಬೆಳ್ಳಿಪರದೆ ಮಾತ್ರವಲ್ಲದೆ, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ‘ಸೇ ನೋ ಟು ಗಾಂಜಾ’ದಂತಹ ಜಾಗೃತಿ ಮೂಡಿಸುವ ಆಲ್ಬಮ್ ಹಾಡುಗಳು ಮತ್ತು ಕಿರುಚಿತ್ರಗಳಲ್ಲೂ ಭಾಗಿಯಾಗಿದ್ದಾರೆ.
​ಕನ್ನಡ ಚಿತ್ರರಂಗದಲ್ಲಿ ಹೊಸಬರಾಗಿ ಬಂದು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಸಿದ್ದಗಂಗಾ ಶಾಲೆಯಲ್ಲಿ ಅರಳಿದ ಪ್ರತಿಭೆ

ಸಿದ್ದಗಂಗಾ ಶಾಲೆಯಲ್ಲಿ ತಮ್ಮ ನಟನೆಯ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಅರ್ಜುನ್ ಚೌಹಾಣ್. ಶಾಲೆಯಲ್ಲಿ ಓದುತ್ತಿರುವ ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲಿ ಕಥೆ, ಕವನ ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಇದು ನಮಗೆ ವರದಾನವಾಗಿ ನಮ್ಮ ಸ್ನೇಹಿತರೆಲ್ಲ ಸೇರಿ ನಾವೇ ನಾಟಕ, ಕಥೆ ಕವನ ರಚಿಸಿ ಪ್ರದರ್ಶನ ಮಾಡುತ್ತಿದ್ದೆವು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.

ಬಂಜಾರ ಹವೇಲಿಯ ಹರಿಕಾರ

ಬಂಜಾರ ಹವೇಲಿ ಅನ್ನೋದು ಬಂಜಾರ (ಲಂಬಾಣಿ) ಸಮುದಾಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮೊದಲ ರಿಯಾಲಿಟಿ ಶೋ. ಇದು ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋ ಆಗಿದ್ದು, ವಿವಿಧ ಕ್ಷೇತ್ರಗಳ (ಸಿನಿಮಾ, ಟಿವಿ ಮತ್ತು ಸಾಮಾನ್ಯ ಜೀವನ) ಸ್ಪರ್ಧಿಗಳು ಒಂದೇ ಸೂರಿನಡಿ ವಾಸಿಸುತ್ತಾ ವಿವಿಧ ಆಟಗಳು ಮತ್ತು ಸವಾಲುಗಳಲ್ಲಿ ಸ್ಪರ್ಧಿಸುತ್ತಾರೆ.

​ಬಂಜಾರ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಶೋನ ಮುಖ್ಯ ಉದ್ದೇಶವಾಗಿದೆ.

ಒಟ್ಟಾರೆಯಾಗಿ ಹಲವು ಅಡೆತಡೆಗಳನ್ನು ತಮ್ಮ ಜೀವನದಲ್ಲಿ ಎದುರಿಸಿ ತಾನು ಕಂಡ ಕನಸನ್ನು ನನಸು ಮಾಡಿಕೊಂಡು ತನ್ನೊಟ್ಟಿಗೆ ಇತರರನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಬಂಜಾರ ಸಮುದಾಯದ ಅರ್ಜುನ್ ಚೌಹಾಣ್ ಅವರಿಗೆ ಪ್ರೇಕ್ಷಕರ ಬೆಂಬಲ ಮತ್ತು ಆಶೀರ್ವಾದ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ. ಕುಟುಂಬ ಪರಿಹಾರ ಸಮೇತ ಚಿತ್ರಮಂದಿರಕ್ಕೆ ಬಂದು ಹಾರೈಸಿ ಎಂದು ವಿನಂತಿದ್ದಾರೆ ಕುಚುಕು ಚಿತ್ರದ ನಾಯಕ ನಟ ಅರ್ಜುನ್ ಚೌಹಾಣ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು

Published

on

ಸುದ್ದಿದಿನ ಡೆಸ್ಕ್:ಆರಂಭಿಕ ಜೀವನ – 1978ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್ ಅವರು ಕಾಲೇಜು ದಿನಗಳಿಂದಲೇ ಕಲೆಯತ್ತ ಒಲವು ಹೊಂದಿದ್ದರು.

ಚಲನಚಿತ್ರ ರಂಗ – 2005ರಲ್ಲಿ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಅವರು, 2007ರಲ್ಲಿ ಪುನೀತ್ ರಾಜ್‌ಕುಮಾರ್ ಅವರ ‘ಮಿಲನ’ ಚಿತ್ರದಲ್ಲಿ ಹೇಮಂತ್ ಎಂಬ ವಿಲನ್ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದರು.

ಇತ್ತೀಚಿನ ಜನಪ್ರಿಯತೆ – ‘ಲವ್ ಮಾಕ್ಟೇಲ್’ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟ-ನಿರ್ಮಾಪಕರಾಗಿ ದೊಡ್ಡ ಹೆಸರು ಮಾಡಿದ್ದರು.

ದಿಲೀಪ್ ರಾಜ್ ಅವರ ಸಾವು ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟ. ಇವರ ಈ ಹಠಾತ್ ನಿಧನವು ಒತ್ತಡದ ಜೀವನಶೈಲಿ ಮತ್ತು ಆರೋಗ್ಯದ ಕಡೆಗೆ ನಾವು ನೀಡಬೇಕಾದ ಹೆಚ್ಚಿನ ಗಮನದ ಬಗ್ಗೆ ಎಚ್ಚರಿಕೆ ನೀಡುವಂತಿದೆ.

Continue Reading

ದಿನದ ಸುದ್ದಿ

ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು

Published

on

ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್‌ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ ಕಲಾವಿದ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಈ ಸಾವಿನ ಹಿಂದೆ ಒಂದು ಬೇಸರದ ಸಂಗತಿಯೂ ಅಡಗಿದೆ, ಅದೇನೆಂದರೆ ಅವರ ಆರೋಗ್ಯದ ಕುರಿತು ತೋರಿದ ಒಂದು ನಿರ್ಲಕ್ಷ್ಯ!

ನಟ ನಿರ್ಮಾಪಕ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ಸ್ಯಾಂಡಲ್‌ವುಡ್ ದಿಗ್ಭ್ರಮೆಗೊಂಡಿದೆ. ಕೆಲವು ದಿನಗಳ ಹಿಂದೆ ಗೋವಾ ಪ್ರವಾಸದಲ್ಲಿದ್ದಾಗಲೇ ಅವರಿಗೆ ಆಗಾಗ ಎದೆನೋವು ಕಾಣಿಸಿಕೊಂಡಿತ್ತು, ಆದರೆ ಪ್ರವಾಸದ ಖುಷಿಯಲ್ಲಿದ್ದ ಅವರು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.. ಬೆಂಗಳೂರಿಗೆ ಮರಳಿದ ನಂತರ ಇಂದು ವೈದ್ಯಕೀಯ ತಪಾಸಣೆಗೆ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು;

ತಪಾಸಣೆಗೆ ಹೋಗುವ ಮುನ್ನವೇ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಕುಮಾರಸ್ವಾಮಿ ಲೇಔಟ್‌ನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೆ ಇಂದು ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ನಟ ದಿಲೀಪ್ ರಾಜ್ ಅವರು ಕೆಲವೇ ದಿನಗಳ ಹಿಂದೆ ಗೋವಾಗೆ ಪ್ರವಾಸ ತೆರಳಿದ್ದರು.

ಅಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಅಂದೇ ಹೃದಯವು ಅಪಾಯದ ಮುನ್ಸೂಚನೆ ನೀಡಿದ್ದರೂ, ದಿಲೀಪ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದರು. ಗೋವಾ ಟ್ರಿಪ್‌ನಲ್ಲಿದ್ದಾಗಲೇ ಆಗಾಗ ನೋವು ಕಾಣಿಸಿಕೊಂಡರೂ, ಅವರು ಅದನ್ನು ಕೇರ್ ಮಾಡಿರಲಿಲ್ಲ.

ಬೆಂಗಳೂರಿಗೆ ಮರಳಿದ ನಂತರ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ವಿಪರ್ಯಾಸವೆಂದರೆ, ಇಂದು ಅವರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು ಮತ್ತು ಅದಕ್ಕಾಗಿ ವೈದ್ಯರ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ನಿನ್ನೆ ರಾತ್ರಿ ಕೂಡ ಧಾರಾವಾಹಿ ಕಲಾವಿದರ ಜೊತೆ ಫೋನ್‌ನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ನಟನಿಗೆ, ಮಧ್ಯರಾತ್ರಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಏಕಾಏಕಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending