Connect with us

ಭಾವ ಭೈರಾಗಿ

ಕಥೆ | ಜೀವಧ್ವನಿ

Published

on

  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ಬೆಟ್ಟದ ತುತ್ತತುದಿಗೆ ಚಿಮ್ಮುತ್ತಾ ನೀರು ತನ್ನೊಳಗಿನ ಅಳಲನ್ನೆಲ್ಲಾ ತೋಡಿಕೊಳ್ಳತೊಡಗಿತು. ಮೋಡದೊಳಗಿಂದ ತೂರಿಬಂದು ಭೂಮಿಗೆ ಸುರಿದು ನದಿಯಾಗಿ ಹರಿಯುತ್ತಾ ಸಾಗರದವರೆಗೆ ತಲುಪಿಕೊಳ್ಳುವವರೆಗೆ ಎದುರುಗೊಳ್ಳುವ ತರಹೇವಾರಿ ಸಂಕಟಗಳನ್ನು ನಿವೇದಿಸಿಕೊಳ್ಳತೊಡಗಿತು.

ನೀಲಾಕಾಶದೆತ್ತರಕ್ಕೆ ಚಿಮ್ಮುತ್ತಲೇ ತನ್ನನ್ನು ಅರ್ಥಮಾಡಿಕೊಳ್ಳುವವರು ಯಾರಾದರೂ ಇದ್ದಾರಾ ಎಂದು ಪ್ರಶ್ನಿಸತೊಡಗಿತು. ಬಾವಿ, ಕೆರೆ, ಸಮುದ್ರ ಎಲ್ಲಿಯೂ ತಾನು ನೆಮ್ಮದಿಯಾಗಿಲ್ಲ ಎಂಬುದನ್ನು ಸಾರಿ ಸಾರಿ ಹೇಳತೊಡಗಿತು. ತಾನು ಖಾಲಿಯಾಗುತ್ತಾ ಭೂಮಿಯನ್ನು ಬರಡಾಗಿಸುವ ಎಚ್ಚರಿಸುವ ಎಲ್ಲ ಬಗೆಯ ತಂತ್ರಗಳನ್ನು ತೂರಿದರೂ ನರರ ಅತಿರೇಕಗಳು ಮುಂದುವರೆಯುತ್ತಿರುವುದರ ಬಗೆಗಿನ ಒಡಲಾಳದ ಬೇಗೆಯನ್ನು ವ್ಯಕ್ತಪಡಿಸುತ್ತಲೇ ಇತ್ತು.

ಸಮುದ್ರದ ದಂಡೆಯ ಕಡೆಗೆ ನುಗ್ಗುತ್ತಾ ಅಲೆಗಳ ಮೂಲಕ ಆರ್ಭಟಿಸಿದರೂ ಪ್ರಯೋಜನವಾಗದ ಕುರಿತು ಬೇಸರಿಸಿಕೊಳ್ಳುತ್ತಿತ್ತು. ಕೆಲಕಾಲ ಭೂಮಿಗೆ ಹನಿಯಾಗಿ ಬಾರದೇ ಎಲ್ಲೋ ಅಡಗಿ ಕುಳಿತುಕೊಂಡರೂ ಜಗತ್ತು ಮತ್ತಷ್ಟು ಕಠಿಣವಾಗುತ್ತಿರುವುದು ಅರಿವಿಗೆ ಬರುತ್ತಲೇ ಇತ್ತು. ಇವೆಲ್ಲವುಗಳ ನಡುವೆಯೇ ತನ್ನೊಳಗಿನ ಸೃಷ್ಟಿಪರ ಬದ್ಧತೆ ಈಗಲೂ ಮುಂದುವರೆಯುತ್ತಿರುವುದರ ಬಗ್ಗೆ ಒಂದಷ್ಟು ಹೆಮ್ಮೆಯ ಭಾವವೂ ಆಗಾಗ ಮಿಂಚಿ ಮಾಯವಾಗುತ್ತಿತ್ತು.

ತನ್ನ ಇರುವಿನೊಂದಿಗಿನ ಜಗದ ಅಸ್ತಿತ್ವದ ಬಗ್ಗೆ ನೆನಪಿಸಿಕೊಂಡು ಖುಷಿಯಾಗುತ್ತಿತ್ತು. ಜಗವನ್ನು ಶುದ್ಧವಾಗಿಸುವ ಜವಾಬ್ದಾರಿ ಸಿಕ್ಕಿರುವುದೇ ತನ್ನ ಹೆಚ್ಚುಗಾರಿಕೆ ಎಂಬ ಭಾವ ಒಡಲುಗೊಳ್ಳುತ್ತಿತ್ತು. ತಕ್ಷಣವೇ ತನ್ನನ್ನು ಯಾರೋ ಮತ್ತೆ ಮತ್ತೆ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂಬ ಆತಂಕ ಆವರಿಸಿಕೊಳ್ಳುತ್ತಿತ್ತು. ತನ್ನನ್ನೇ ಇಲ್ಲವಾಗಿಸುವ ಹುನ್ನಾರಗಳು ಜಗದಾದ್ಯಂತ ನಡೆಯುತ್ತಿರುವ ಸುಳಿವುಗಳು ಗಮನಕ್ಕೆ ಬಂದಾಗಲಂತೂ ಭಯಭೀತಗೊಳ್ಳುತ್ತಿತ್ತು. ತನ್ನ ವಿರುದ್ಧ ಸಮರ ಸಾರುವ ಮತ್ತು ತನ್ನನ್ನು ಉಳಿಸಿಕೊಳ್ಳುವ ಇರಾದೆಯನ್ನು ಬೆಂಬಲಿಸುವ ಎರಡು ಬಗೆಯ ವೈಚಿತ್ರ್ಯವು ಒಗಟೆನ್ನಿಸುತ್ತಿತ್ತು.

ತಾನು ಇಲ್ಲವಾದರೇನಂತೆ, ಸೃಷ್ಟಿ ಮತ್ತೊಂದನ್ನು ರೂಪಿಸಬಹುದು ಎಂಬ ಸಮಾಧಾನವನ್ನೂ ತಂದುಕೊಳ್ಳುತ್ತಿತ್ತು. ತನ್ನೊಳಗಿನ ಚಲನೆಯ ಯಾನವನ್ನು ಮುಂದುವರೆಸಿಕೊಳ್ಳಬೇಕೆಂಬ ಆಶಾವಾದ ಎಂದೂ ಬಿಟ್ಟುಕೊಡಬಾರದು ಎಂದುಕೊಳ್ಳುತ್ತಿತ್ತು. ಬಹುಹಿಂದಿನಿಂದಲೂ ಸಿಹಿ-ಕಹಿಯ ಜೊತೆಗಿನ ಪ್ರಯಾಣದ ಅನಿವಾರ್ಯತೆಯನ್ನು ಕಂಡುಕೊಳ್ಳುತ್ತಾ ತನ್ನೊಳಗೆ ಚೈತನ್ಯವನ್ನು ರೂಪಿಸಿಕೊಳ್ಳುತ್ತಿತ್ತು.

ತೀರಾ ಇತ್ತೀಚೆಗಂತೂ ತನಗೆ ಮಾತು ಬಾರದ್ದರ ಬಗೆಗೆ ಕೊರಗಿಕೊಳ್ಳುತ್ತಿತ್ತು. ‘ಮಾತು ಬಾರದಿದ್ದರೇನಂತೆ, ಹರಿಯುವಾಗ ನಿನ್ನೊಳಗಿನ ನಿನಾದ ನಿನ್ನನ್ನು ಸಂಗೀತ ಜಗತ್ತಿನ ಶ್ರೇಷ್ಠ ಪ್ರತಿನಿಧಿಯನ್ನಾಗಿಸಿದೆ’ ಎಂದು ಆತ್ಮಸಾಕ್ಷಿ ಹೇಳಿದಾಕ್ಷಣ ಸಂತಸಗೊಳ್ಳುತ್ತಿತ್ತು. ಧುಮ್ಮಿಕ್ಕುವ ಜೀವಂತಿಕೆಯ ದನಿಯ ಭಾಷೆಯೇ ನಿನ್ನದಾಗಿರುವಾಗ ಮಾತಿನ ಸೀಮಿತ ಚೌಕಟ್ಟಿನ ಹಂಗೇಕೆ ನಿನಗೆ? ಎಂಬ ಪ್ರಶ್ನೆ ಎದುರುಗೊಳ್ಳುತ್ತಿತ್ತು. ಜಗತ್ತನ್ನು ನಾನೂ ಒಂದಿಷ್ಟು ನೋಡಬೇಕಿತ್ತು ಎಂದುಕೊಂಡಾಗಲೆಲ್ಲಾ ಕೋಟಿಕೋಟಿ ಜೀವರಾಶಿಗಳಿಗೆ ಇಂಬುಗೊಟ್ಟ ಹೆಗ್ಗಳಿಕೆಯೇ ನಿನ್ನೊಂದಿಗಿರುವಾಗ ಕಣ್ಣುಗಳನ್ನು ಹೊಂದುವ ಯಕಃಶ್ಚಿತ್ ಆಸೆ ಅತ್ಯಂತ ಸಣ್ಣದು ಎಂಬ ಒಳಸಾಂತ್ವನ ತೂರಿಬರುತ್ತಿತ್ತು.

ಸ್ಪರ್ಶಮಾತ್ರದಿಂದ ಜೀವಸಂಕುಲಕ್ಕೆ ಹಿತಾನುಭವ ನೀಡಿದಾಗಿನ ಪರಿಣಾಮಗಳನ್ನು ಗೊತ್ತುಮಾಡಿಕೊಳ್ಳುವ ಇರಾದೆ ಒಳಗೊಳಗೆ ಮೂಡಿದಾಗಲೆಲ್ಲಾ ಪ್ರತಿಫಲಾಪೇಕ್ಷೆ ಸಲ್ಲದು ಎಂಬ ಎಚ್ಚರ ಗೋಚರವಾಗಿಬಿಡುತ್ತಿತ್ತು. ಚಿಗುರಿಸುವ ತನ್ನೊಳಗಿನ ಶಕ್ತಿಯ ಸ್ವರೂಪವನ್ನು ಸ್ವತಃ ತಿಳಿದುಕೊಳ್ಳುವ ಶತಪ್ರಯತ್ನ ನಡೆಸುವಾಗ ಪ್ರಾಕೃತಿಕ ನಿಯುಕ್ತಿಯಿಂದ ವಿಮುಖಗೊಳ್ಳಕೂಡದು ಎಂಬ ಅಂತರಂಗದ ತಾಕೀತು ಸರಿಹಾದಿಯಲ್ಲಿರಿಸುತ್ತಿತ್ತು.
ಹೀಗೆ ಯೋಚಿಸುತ್ತಿರುವಾಗಲೇ ನನ್ನಿರುವೇ ಇಲ್ಲವಾಗಿಬಿಟ್ಟರೆ ಹೇಗೆ ಎಂಬುದು ಹೊಳೆಯಿತು.

ಆಗಲಾದರೂ ಮನುಷ್ಯರೆನ್ನಿಸಿಕೊಂಡವರೆಲ್ಲರೂ ಒಂದಾಗಿಬಿಡಬಹುದು ಎಂಬ ಆಶಾವಾದವು ಚಿಗುರೊಡೆಯಿತು. ತಕ್ಷಣವೇ ನಾನಿಲ್ಲದಿದ್ದರೆ ಮನುಷ್ಯ ಸೇರಿದಂತೆ ಸಕಲ ಜೀವಸಂಕುಲವೇ ಇಲ್ಲವಾಗಿಬಿಡುತ್ತದೆ ಎಂಬುದು ಅರಿವಿಗೆ ಬಂತು. ಹೀಗೆಲ್ಲಾ ನೀರು ತನ್ನೊಳಗೆ ಅಲ್ಲೋಲಕಲ್ಲೋಲ ಅಲೆಗಳನ್ನೆಬ್ಬಿಸಿಕೊಳ್ಳುತ್ತಿರುವುದಕ್ಕೆ ಕಾರಣಗಳೂ ಇವೆ. ನನ್ನ ಮೇಲೆ ಹಕ್ಕು ಸ್ಥಾಪಿಸಿಕೊಂಡವರೆಲ್ಲರೂ ಮತ್ತೊಬ್ಬರ ಮೇಲೆ ಪ್ರಾಬಲ್ಯ ಮೆರೆಯುವ ಸಂಕೇತವಾಗಿಸಿಕೊಂಡಿದ್ದರ ನೆನಪು ನೀರಿನಾಳದಲ್ಲೆಲ್ಲೋ ಈಗಲೂ ಇದೆ.

ನನ್ನನ್ನು ಒಬ್ಬರು ಮುಟ್ಟಿದರೆ ಸರಿ, ಮತ್ತೊಬ್ಬರು ಮುಟ್ಟಿದರೆ ಅಪವಿತ್ರ, ಮೈಲಿಗೆ ಎಂಬ ಸಂಕುಚಿತೆಯ ಪಳೆಯುಳಿಕೆ ಮತ್ತಷ್ಟು ಉತ್ಸಾಹ ಗಳಿಸಿಕೊಳ್ಳುತ್ತಿರುವ ಸುಳಿವುಗಳು ಸಿಗುತ್ತಿದ್ದವು. ದಣಿವಾರಿಸಿಕೊಳ್ಳುವಾಗ ಜೀವಗಳಿಗೆ ಸಾಥಿಯಾಗಿರುವ ಬಗ್ಗೆ ಧನ್ಯತೆ ಇರಿಸಿಕೊಳ್ಳುವ ಕಾಲಕ್ಕೆ ಮನುಜನೆಂಬೋ ಮನುಜನಿಂದ ಎದುರುಗೊಳ್ಳುವ ಸಂಕಟಗಳನ್ನು ನೆನೆದು ವ್ಯಥೆಯ ತೆಕ್ಕೆಗೀಡಾಗುತ್ತಿತ್ತು. ಆ ಕ್ಷಣಕ್ಕೆ ಇವರೆಲ್ಲರಿಗೆ ಪಾಠ ಕಲಿಸಬೇಕು ಎಂದುಕೊಳ್ಳುತ್ತಿತ್ತು.

ಒಂದು ತಿಂಗಳ ಕಾಲ ಕಣ್ಮರೆಯಾಗಬೇಕು ಎಂಬ ಠರಾವು ತೆಗೆದುಕೊಳ್ಳುತ್ತಿತ್ತು. ಸೂರ್ಯನ ಶಾಖವ ಎದುರುಗೊಂಡು ಅದೃಶ್ಯಗೊಳ್ಳಬಹುದು ಎಂದು ಲೆಕ್ಕ ಹಾಕುತ್ತಿತ್ತು. ಈ ಕಾರಣಕ್ಕಾಗಿಯೇ ತನ್ನೊಳಗೆ ಮಂಕು ಕವಿದು ಭೂಮಿತಾಯಿಯ ಗರ್ಭದೊಳಗೆ ಅಡಗಿ ಕುಳಿತುಕೊಂಡಾಗ ಜೀವಜಗದೊಳಗೆ ಏನೆಲ್ಲಾ ತಳಮಗಳಾಗುತ್ತಿದ್ದವು.

ಮನುಜನೆಡೆಗಿನ ಅಸಮಾಧಾನಕ್ಕೆ ಉಳಿದ ಜೀವಸಂಕುಲವ ಇಕ್ಕಟ್ಟಿಗೆ ಸಿಲುಕಿಸುವುದು ಸರಿಯಲ್ಲ ಎಂಬ ವಿವೇಚನೆ ಹೊಳೆದು ಮತ್ತೆ ನೆಲದ ಮೇಲಿನ ತನ್ನ ನಡಿಗೆಯನ್ನು ಮುಂದುವರೆಸುತ್ತಿತ್ತು. ಮೋಡದೊಳಗಿನ ಹನಿಗಳ ಬಳಗವನ್ನು ಸೇರಿಕೊಂಡು ಮತ್ತೆ ನೆಲದೆಡೆಗೆ ಪ್ರಯಾಣ ಬೆಳೆಸುವ ತನ್ನ ಎಂದಿನ ದಿನಚರಿಯನ್ನು ಚಾಲ್ತಿಯಿರಿಸಿಕೊಳ್ಳುತ್ತಿತ್ತು.

ಆದರೂ ಈ ಮನುಜಲೋಕ ತನ್ನೊಳಗೆ ಏನೆಲ್ಲಾ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿದೆಯಲ್ಲಾ ಎಂಬ ಬಗೆಗಿನ ಕೊರಗಂತೂ ಕರಗುತ್ತಲೇ ಇರಲಿಲ್ಲ. ತಾನು ಹರಿಯುವ ನೆಲದ ಮೇಲೆಲ್ಲಾ ಮನುಷ್ಯನ ಹೆಜ್ಜೆಗುರುತುಗಳು ಅಮ್ಮನ ಮಡಿಲಲ್ಲಿ ಆಡುವ ಮಗುವಿನ ಮುಗ್ಧತೆಯನ್ನು ಸಂಕೇತಿಸುವ ಬದಲು ಮತ್ತೆ ಮತ್ತೆ ಸವಾಲೆಸೆಯುತ್ತಿದ್ದವು.

ತನ್ನೊಳಗೆ ವಿಷ ಬೆರೆಸುವ ಅವನ ಆಟಾಟೋಪದಿಂದ ಮೈಯೆಲ್ಲಾ ಉರಿದಂತಾಗುತ್ತದೆ. ಹರಿಯುವೆಡೆಯೆಲ್ಲೆಲ್ಲಾ ಇರುವ ಜೀವಗಳು ಕ್ರಮೇಣ ಜೀವ ಕಳೆದುಕೊಳ್ಳುತ್ತವೆ. ಹರಿಯುವುದಕ್ಕೆ ಬೇಕಾದ ತಳಪಾಯದ ಗರ್ಭಕ್ಕೇ ಕನ್ನ ಹಾಕಿ ದೋಚುವ ಅವನ ವಿಲಕ್ಷಣ ಸ್ವಭಾವದ ಬಗ್ಗೆ ವಿಪರೀತ ಸಿಟ್ಟಿದ್ದರೂ ತನ್ನೊಳಗಿನ ಮಾತೃತ್ವ ಅವನ ವಿರುದ್ಧ ದ್ವೇಷದ ಭಾವ ತಳೆಯುವುದಕ್ಕೆ ಬಿಡುತ್ತಿರಲಿಲ್ಲ.

ತನ್ನನ್ನು ಪೂಜಿಸಿ ದೈವತ್ವದ ಪಟ್ಟ ಕಟ್ಟುವ ಇದೇ ಮನುಜಕುಲದವರಿಂದಲೇ ತನಗೆ ಮತ್ತೆ ಮತ್ತೆ ಸಂಕಷ್ಟ ಬಂದೊದಗುತ್ತಿರುವುದನ್ನು ನೆನೆದು ವಿಸ್ಮಯಗೊಳ್ಳುತ್ತಿತ್ತು. ತನ್ನನ್ನು ಪ್ರೋಕ್ಷಿಸಿ ಮಂತ್ರದ ಉದ್ಘೋಷ ಮೊಳಗಿಸಿ ದೊಡ್ಡ ದೊಡ್ಡ ಬಂಗಲೆಗಳನ್ನು ಪ್ರವೇಶಿಸುವ ಮನುಷ್ಯರ ನಡವಳಿಕೆಗಳು ವಿಚಿತ್ರವೆನ್ನಿಸುತ್ತಿದ್ದವು. ಪ್ರೋಕ್ಷಣೆಯ ಬೆಂಬಲದಿಂದ ಬಣ್ಣಬಣ್ಣದ ಗೋಡೆಗಳಿಗೆ ಅಪ್ಪಳಿಸಿದಾಗ ಅವುಗಳೊಳಗೆ ಅವಿತು ಕುಳಿತ ಮರಳಿನ ಕಣಗಳು ರೋಧಿಸುತ್ತಿರುವುದು ಕೇಳುತ್ತಿತ್ತು.

ಸಿಮೆಂಟಿನ ಕಬಂಧ ಬಾಹುವಿನಲ್ಲಿ ಬಿಗಿಯಲ್ಪಟ್ಟು ನನ್ನೊಳಗೆ ಉಸಿರುಗಟ್ಟುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಿರುವುದನ್ನು ಆಲಿಸುತ್ತಿತ್ತು. ಪೂಜಾಕಳಸಗಳೊಳಗಿದ್ದಾಗ ಕೆಳಗಿನಿಂದಲೂ ಆ ಕಣಗಳು ಒಟ್ಟಾಗಿ ನಮ್ಮೆಲ್ಲರನ್ನೂ ನಿನ್ನ ಹರಿವಿನ ಯಾನದಲ್ಲಿ ಸೇರಿಸಿಕೊಂಡುಬಿಡು, ಈ ಗೃಹಬಂಧನಕ್ಕೊಳಗಾಗಿ ಅಸ್ತಿತ್ವವೇ ಇಲ್ಲವಾಗಿದೆ ಎಂದು ಕೂಗುತ್ತಿದ್ದವು.

ನೆಲದಮ್ಮನ ಸಹನೆಯ ಮುಂದೆ ತನಗೆದುರಾಗುತ್ತಿರುವ ಸಂಕಟಗಳು ಏನೂ ಅಲ್ಲ ಎಂದುಕೊಂಡ ಕಾರಣಕ್ಕಾಗಿಯೇ ಮನುಷ್ಯರಲ್ಲದ ಮನುಷ್ಯರ ಅತಿರೇಕಗಳನ್ನು ತಡೆದುಕೊಳ್ಳುವುದಕ್ಕೆ ಸಾಧ್ಯವಾಗಿತ್ತು. ಆದರೆ, ಇದೇಬಗೆಯ ಆಲೋಚನೆ ಮೋಡಗಳಿಗೆ ಬರುತ್ತಲೇ ಇರಲಿಲ್ಲ. ಅವುಗಳದ್ದೇನಿದ್ದರೂ ನೇರನಿಷ್ಠುರ ನಿಲುವು. ಅಯ್ಯೋ ಎಂದು ಕೊರಗುವಂಥ ಸ್ವಭಾವ ಅವುಗಳದ್ದಲ್ಲ. ಜಗದ ಉದ್ದಗಲ ಇದ್ದ ಮರಗಳ ಮಾರಣಹೋಮಕ್ಕೆ ಕಾರಣವಾಗಿರುವ ಅವರಿಗೆ ಪಾಠ ಕಲಿಸುವ ಹಠ.

ಈ ಹಠದ ಕಾರಣಕ್ಕಾಗಿಯೇ ಅವು ಸ್ಥಗಿತಗೊಳ್ಳುತ್ತಿದ್ದವು. ಕಣ್ಮರೆಯಾಗುತ್ತಿದ್ದವು. ಅವುಗಳ ನೆರವಿಲ್ಲದೇ ತನಗೆ ಸ್ವತಂತ್ರ ಅಸ್ತಿತ್ವವಿಲ್ಲ ಎಂಬುದು ನೀರಿಗೆ ತಿಳಿದಿರುವುದರಿಂದ ಏನೂ ಮಾಡುವಂತಿರಲಿಲ್ಲ. ಒಮ್ಮೊಮ್ಮೆ ಅವುಗಳ ಸಿಟ್ಟು ಹೇಗಿರುತ್ತದೆಂದರೆ ದಿಢೀರನೆ ಪ್ರತ್ಯಕ್ಷಗೊಂಡು ತನ್ನನ್ನು ಸೆಳೆದುಕೊಂಡು ಒಂದೇ ಸಮನೆ ನೆಲಕ್ಕಪ್ಪಳಿಸಿ ಸಕಲ ಜೀವರಾಶಿ ದಿಗಿಲುಗೊಳ್ಳುವಂತಾಗುತ್ತದೆ.

ಇದರ ಅಂತರಾಳವೆಲ್ಲವನ್ನೂ ಬಲ್ಲ ರಾಮು ಸುಮ್ಮನಿರುತ್ತಿರಲಿಲ್ಲ. ಅದಕ್ಕೆ ಕನ್ನಡಿ ಹಿಡಿಯುವ ಹಂಬಲ ಅವನದ್ದು. ಇವನ ಊರಿನವರೆಲ್ಲರೂ ತನ್ನನ್ನು ಗಂಗೆಯ ಹೆಸರಿನಲ್ಲಿ ಕರೆಯುತ್ತಿದ್ದರು. ಅವರೆಲ್ಲರಿಗೆ ಗಂಗೆಯಾದರೆ ಇವನಿಗೆ ಬರೀ ಹೆಸರಿನಿಂದ ಕರೆಯುವ ವ್ಯಕ್ತಿತ್ವವಷ್ಟೇ ಅಲ್ಲ. ತನ್ನೊಳಗೆ ಜೀವಂತಿಕೆಯನ್ನು ನೆಲೆಗೊಳಿಸಿದ ಮಾತೃತ್ವದ ಆದರ್ಶ. ರಾಮು ಎಂಬ ಮನುಷ್ಯ ದೇಹಿ ನದಿಯ ಸ್ವರೂಪದ ತನ್ನೊಂದಿಗೆ ಏರ್ಪಡಿಸಿಕೊಂಡ ಮಾತುಕತೆ ಉಳಿದ ಯಾವ ಜೀವಿಗಳಿಗೂ ಸಾಧ್ಯವಾಗಿರಲಿಲ್ಲ. ಇವನು ಬಂದನೆಂದರೆ ಆಯಿತು.

ಗಂಗೆಗೆ ಖುಷಿಯಾಗುತ್ತಿತ್ತು. ನರಲೋಕದ ಬಗ್ಗೆ ಇದ್ದ ಎಲ್ಲ ಬಗೆಯ ತಪ್ಪುಕಲ್ಪನೆಗಳನ್ನು ಇವನೊಬ್ಬನ ಮಗುವಿನಂಥ ಸ್ಪರ್ಶ ಇಲ್ಲವಾಗಿಸಿಬಿಡುತ್ತಿತ್ತು. ಗಂಗೆಯ ಮಾತೃತ್ವದ ಕಾರಣಕ್ಕಾಗಿಯೇ ಸೃಷ್ಟಿಯ ವಿಶೇಷತೆಯ ಬಗ್ಗೆ ರಾಮುವಿನಲ್ಲಿ ಹೆಮ್ಮೆಯ ಭಾವಗಳಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಹೇಳಬೇಕಾದ ವಿಷಯ ಮತ್ತೊಂದಿದೆ. ಮನುಷ್ಯಲೋಕದ ಎರಡು ಜೀವಗಳು ಒಂದಾಗಿ ಅವುಗಳ ಮೂಲಕ ಜನ್ಮವೆತ್ತಿದ ನರಶಿಶುಗಳನ್ನು ತನ್ನೆಡೆಗೆ ಎಸೆದಾಗ ಅವುಗಳ್ಯಾವುವೂ ಬದುಕಿರಲಿಲ್ಲ. ಬದುಕುತ್ತಲೂ ಇರಲಿಲ್ಲ.

ಮನುಷ್ಯಲೋಕ ಹೆಸರಿಸಿಕೊಂಡ ಜಾತಿ, ಧರ್ಮಗಳ ಕಟ್ಟಳೆಗಳ ನೆಪದಲ್ಲಿ ಅತ್ಯಂತ ಕ್ರೂರವಾಗಿ ತನ್ನೆಡೆಗೆ ಎಸೆದಾಗ ತಾನು ಆ ಅಮಾಯಕ ಶಿಶುಗಳನ್ನು ತೇಲಿಸುವ ಪ್ರಯತ್ನ ನಡೆಸುತ್ತಿದ್ದೆನಾದರೂ ಆ ರಾಕ್ಷಸರು ಮತ್ತೆ ಧುಮುಕಿ ನನ್ನೊಳಗೆ ಮುಳುಗಿಸಿಬಿಡುತ್ತಿದ್ದರು. ಅವುಗಳ ಉಸಿರುಗಟ್ಟಿಸುತ್ತಿದ್ದರು. ಅವು ಸಾಯುವವರೆಗೂ ಬಿಡುತ್ತಿರಲಿಲ್ಲ. ಅಷ್ಟೇ ಅಲ್ಲ, ಅವುಗಳಿಗೆ ಜನ್ಮ ನೀಡಿದ ಹೆತ್ತವರ ಜಾತಿ ಮರ್ಯಾದೆಯನ್ನು ಕೆಡಿಸಿದ್ದೀರಿ ಎಂಬ ಆಪಾದನೆ ಹೊರಿಸಿ ನನ್ನ ಮೇಲೆ ಎಸೆದು ಮುಳುಗಿಸಿಬಿಡುತ್ತಿದ್ದರು.

ತನಗೋ ಮತ್ತೆ ಮತ್ತೆ ಪಾಪಪ್ರಜ್ಞೆ ಕಾಡುತ್ತಲೇ ಇತ್ತು. ಕೊಲೆಗೀಡಾದ ಈ ಅಮಾಯಕರ ರಕ್ತ ನದಿಯ ರೂಪದ ತನ್ನೊಳಗೆ ಬೆರೆತಾಗ ತನ್ನ ಅಸ್ತಿತ್ವದ ಬಗೆಗೇ ಜಿಗುಪ್ಸೆಯ ಭಾವ ಗಂಗೆಯನ್ನು ಮತ್ತೆ ಮತ್ತೆ ಆವರಿಸಿಕೊಂಡದ್ದೂ ಇದೆ. ಆದರೆ, ಇವನೊಬ್ಬನನ್ನು ಬದುಕಿಸಿದ ಒಂದಷ್ಟು ತೃಪ್ತಿ ಗಂಗೆಗಿದೆ. ಮುಂಚಿನ ಯಾರನ್ನೂ ಉಳಿಸಿಕೊಳ್ಳಲಾಗದ ಈ ಗಂಗೆ ರಾಮುವನ್ನು ಉಳಿಸಿಕೊಂಡ ಘಳಿಗೆ ಆಕೆಯೊಳಗೇ ವಿಸ್ಮಯವನ್ನುಂಟುಮಾಡಿದೆ.

ಪ್ರಕೃತಿಯೇ ಯಾವುದೋ ಮಹತ್ವದ ಉದ್ದೇಶಕ್ಕಾಗಿ ಈ ಕೂಸನ್ನು ಉಳಿಸಿರಬಹುದು ಎಂದುಕೊಳ್ಳುತ್ತಿದ್ದಳು. ಅಂದು ಇವನ ಹೆತ್ತವರನ್ನು ನನ್ನೆಡೆಗೆ ನೂಕಿ ಸಾಯಿಸಿದ ನಂತರ ಇವನ ದೇಹವನ್ನೂ ಎಸೆದುಬಿಟ್ಟಿದ್ದರು. ಅದ್ಯಾವುದೋ ಚೈತನ್ಯಶಕ್ತಿ ನನ್ನೊಳಗೆ ಧುಮುಕಿದ ಅನುಭವವಾಗಿತ್ತು. ಆ ಕ್ಷಣಕ್ಕೆ ಆ ಪುಟ್ಟ ಶಿಶುದೇಹ ನನ್ನಿರುವಿನ ನೆಲದಾಳದೊಳಕ್ಕಿಳಿದರೂ ಮುಳುಗಲೇ ಇಲ್ಲ. ಒಂದಷ್ಟು ಮುಂದಕ್ಕೆ ಹೋಗಿ ತೇಲಿಬಿಟ್ಟಿತು. ಬಹುದೂರ ಹೋಗುತ್ತಲೇ ದಡ ಸೇರಿಕೊಂಡುಬಿಟ್ಟಿತು.

ಆಗಲೇ ಅದು ಹೊಸಹುಟ್ಟು ಪಡೆದದ್ದು. ಅಲ್ಲಿಂದಲೇ ಗಂಗೆಗೆ ಅದರೊಂದಿಗೆ ಕರುಳಬಳ್ಳಿಯ ನಂಟು ಶುರುವಾಗಿತ್ತು. ಆಗಿನಿಂದಲೂ ಗಂಗೆ ಮತ್ತು ರಾಮು ಇಬ್ಬರೂ ಪರಮಾಪ್ತ ಆತ್ಮಗಳ ಹಾಗೆ ನಂಟನ್ನು ಬೆಸೆದುಕೊಂಡಿದ್ದಾರೆ. ಬಾಲ್ಯದಿಂದ ಹಿಡಿದು ಇಲ್ಲಿಯವರೆಗೆ ಸದಾ ಹರಿವ ಅಂತಃಕರಣದ ಗುಣದೊಂದಿಗೆ ಆಕೆ ಇವನನ್ನು ಆರೈಕೆ ಮಾಡಿದ್ದಾಳೆ. ಒಡಲಬೇಗೆಯ ಕಾರಣಕ್ಕಾಗಿಯೇ ಧುಮ್ಮಿಕ್ಕಿದ ಕಣ್ಣಹನಿಗಳನ್ನು ಒರೆಸಿ ಸಾಂತ್ವನ ಹೇಳಿದ್ದಾಳೆ.

ಹೆಜ್ಜೆಹೆಜ್ಜೆಗೂ ಬಡತನವು ಮತ್ತೆ ಮತ್ತೆ ಮುಖಾಮುಖಿಯಾಗಿಸಿದ ಅವಮಾನದ ತಾಪಗಳನ್ನು ನೀಗಿಸಿದ್ದಾಳೆ. ಊಟ ಇಲ್ಲದೇ ಹೊಟ್ಟೆ ಚುರುಗುಟ್ಟುವಾಗಲೆಲ್ಲಾ ಅವಳ ಅಮೃತಧಾರೆ ಜೀವನಪ್ರೀತಿಯನ್ನು ಹೆಚ್ಚಿಸಿದೆ. ದಣಿವಾರಿಸಿದ್ದಾಳೆ. ಊರಿಗೆ ಊರೇ ಬರಗಾಲದ ಹೊಡೆತಕ್ಕೆ ಸಿಲುಕಿದಾಗಲೆಲ್ಲಾ ಯಾವತ್ತೂ ಬತ್ತದ ತನ್ನ ಎಂದಿನ ಉತ್ಸಾಹಿ ನಡಿಗೆಯೊಂದಿಗೆ ಸ್ಫೂರ್ತಿ ತುಂಬಿದ್ದಾಳೆ. ಊರಿನವರ ಎಲ್ಲ ಬಗೆಯ ಸುಖ-ದುಃಖಗಳ ಸಾಕ್ಷಿಯಾಗಿ ಜೀವಂತಿಕೆಯನ್ನು ಮೆರೆದಿದ್ದಾಳೆ.

ಗಂಗೆಯೊಂದಿಗೆ ಮಾತನಾಡುವುದೆಂದರೆ ರಾಮುವಿಗೆ ಎಲ್ಲಿಲ್ಲದ ಖುಷಿ. ದಂಡೆಯ ಮೇಲೆ ನಿಂತುಕೊAಡು ಚೈತನ್ಯದ ಸಂಕೇತದಂತೆ ಕಂಗೊಳಿಸುವ ಅವಳೊಂದಿಗಿನ ಮೌನಸಂವಾದ ಆಂತರ್ಯದಲ್ಲಿ ಮೂಡಿಸುವ ತರಹೇವಾರಿ ಆಲೋಚನೆಗಳ ಅಲೆಗಳ ಅನುಭೂತಿಯಲ್ಲಿ ಮಿಂದೆದ್ದು ಕೃತಾರ್ಥನಾಗುವ ಅವನ ಭಾವಸಮೃದ್ಧಿಯನ್ನು ಅಷ್ಟು ಸುಲಭವಾಗಿ ಮಾತಿನಲ್ಲಿ ಹೇಳಲಾಗದು. ಇಷ್ಟಕ್ಕೂ ಅವನು ಹುಟ್ಟಿದ ಘಳಿಗೆಯೇ ಇಡೀ ಹೆತ್ತವರಿಗೆ ನಿರಾಳತೆಯನ್ನು ತಂದುಕೊಟ್ಟಿತ್ತು.

ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕಾಗಿಯೇ ಸದಾ ಕೊಲ್ಲಲು ತವಕಿಸುತ್ತಿದ್ದ ಮನೆಯವರ ಕಣ್ಣು ತಪ್ಪಿಸಿ ದೂರದೂರ ಓಡಿಬಂದಿದ್ದ ಇವನ ಅಪ್ಪ-ಅಮ್ಮನ ಬದುಕಿನಲ್ಲಿ ಹೊಸ ಆಶಾವಾದದ ಬೆಳಕನ್ನು ಬೆಳಗಿಸಿದ್ದ ಮಗನಿವನು. ತಮ್ಮ ಜಾತಿಯವರನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾಗಿದ್ದು ಅಮ್ಮನ ಕಡೆಯವರೂ, ತಮ್ಮ ಧರ್ಮಕ್ಕೆ ಸೇರದವಳ ಜೊತೆಯಾಗಿ ಮರ್ಯಾದೆ ಹರಾಜು ಹಾಕಿದನು ಎಂದು ಅಪ್ಪನ ಕಡೆಯವರೂ ಕಿಚ್ಚಿನಿಂದ ಕುದಿದು ಕೊಲ್ಲಲು ಪ್ರಯತ್ನಿಸಿದ್ದರು.

ಅವರಿಂದ ತಪ್ಪಿಸಿಕೊಳ್ಳುತ್ತ ಇವರಿಬ್ಬರೂ ಬಹುದೂರ ಸಾಗಿದ್ದರು. ತಮ್ಮ ಪಾಡಿಗೆ ತಾವು ಬದುಕು ಕಟ್ಟಿಕೊಳ್ಳುವ ಸಂಕಲ್ಪ ಗಟ್ಟಿಗೊಳಿಸಿಕೊಂಡಿದ್ದರು. ಇದೇ ಘಳಿಗೆಯಲ್ಲಿಯೇ ಹುಟ್ಟಿದ್ದ ಮಗು ಅವರ ಖುಷಿಯನ್ನು ಇಮ್ಮಡಿಗೊಳಿಸಿತ್ತು. ಅದಕ್ಕಾಗಿಯೇ ಜಗತ್ತಿನ ಎಲ್ಲ ಬಗೆಯ ವಿಕಾರಗಳನ್ನು ಎದುರಿಸಿಬಿಡುವ ಛಲವನ್ನು ತೊಟ್ಟಿದ್ದರು. ಹೀಗಿರುವಾಗಲೇ ಮತ್ತೆ ಇಬ್ಬರ ಮನೆಯವರ ಕಡೆಯವರು ಬೆನ್ನತ್ತಿ ತುಂಬಿ ಹರಿಯುತ್ತಿದ್ದ ಗಂಗೆಯೊಳಗೆ ಮುಳುಗಿಸಿಬಿಟ್ಟಿದ್ದರು.

ತನ್ನಪ್ಪ, ಅಮ್ಮನನ್ನು ಕೊಂದು ಇದೇ ಗಂಗೆಯ ಮಡಿಲಿಗೆ ನೂಕಿಬಿಟ್ಟಿದ್ದರು ಎಂಬ ಸತ್ಯ ಗೊತ್ತಾಗಿನಿಂದಲಂತೂ ರಾಮು ಅತ್ಯಂತ ಭಾವುಕನಾಗಿ ಇವಳ ಹತ್ತಿರ ಬರುತ್ತಿದ್ದ. ತನನ್ನು ಉಳಿಸಿ ಕಾಪಾಡಿದ ಅವಳ ತಾಯ್ತನಕ್ಕೆ ಬೆರಗಾಗಿದ್ದ. ಯಾರೂ ಇಲ್ಲ ಎಂಬ ಅನಾಥ ಭಾವ ಗಾಢವಾಗಿ ಬೇರೂರಿದ ತಕ್ಷಣವೇ ಅವನು ಗಂಗೆಯ ಮುಂದೆ ನಿಂತು ನಿರಾಳವಾಗುವ ವಿಮುಕ್ತಿಯ ಅದ್ಭುತಮಾರ್ಗವನ್ನು ಕಂಡುಕೊಂಡಿದ್ದ. ಅದು ಅವನಿಗೆ ಅದ್ಭುತ ಮಾರ್ಗವಾಗಿದ್ದರೂ ಉಳಿದವರೆಲ್ಲರಿಗೂ ವಿಚಿತ್ರವೆನ್ನಿಸಿತ್ತು.
ವಿಚಿತ್ರವಾಗಿ ಕಾಣಿಸಿದ್ದಕ್ಕೂ ಕಾರಣವಿದೆ.

ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬೀಳುವ ಸಂಪ್ರದಾಯಗಳೊಂದಿಗಿದ್ದವರನ್ನು ನಾರ್ಮಲ್ ಎಂತಲೂ, ಉಳಿದೆಲ್ಲರಿಗಿಂತ ಭಿನ್ನವಾಗಿರುವುದಕ್ಕೆ ಪ್ರಯತ್ನಿಸುವವರನ್ನು ಅಬ್‌ನಾರ್ಮಲ್ ಎಂದು ಪರಿಗಣಿಸುವ ಜಾಯಮಾನವೇ ಜಗದ ಅಲಿಖಿತ ನಿಯಮವಾದಾಗ ವಿನೂತನವಾದದ್ದೂ ಹಲವರಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಈ ಮನುಷ್ಯ ಇಷ್ಟು ಭಾವುಕ ಆದರೆ ಹೇಗೆ ಎಂಬ ತಿವಿತದ ಮಾತುಗಳೂ ಬೋನಸ್‌ನ ರೂಪದಲ್ಲಿ ಹೊಡೆತ ನೀಡುತ್ತವೆ.

ಮೌನವಾಗಿ ನಿಲ್ಲುವುದಂತೆ, ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವುದಂತೆ, ಮದುವೆಯಿಲ್ಲ, ಮಕ್ಕಳಿಲ್ಲ, ಈ ವಯಸ್ಸಿಗೇ ಹೀಗೆ ಆಡಿದರೆ ಮುದುಕನಾದ ಮೇಲೆ ಏನಾಗಿರುತ್ತಾನೋ? ಎನ್ನುವ ಕೊಂಕುನುಡಿಗಳೂ ಮತ್ತಷ್ಟು ಘಾಸಿಗೊಳಿಸುತ್ತವೆ. “ಅಲ್ಲೆಲ್ಲಾ ಹೋಗಿ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಹುಡುಕಿ ತೆಗೆಯುವುದು, ಪ್ಲಾಸ್ಟಿಕ್ ಬಾಟಲ್‌ಗಳನ್ನು ಆಯುವುದು, ಗಂಗೆಯ ಗರ್ಭವನ್ನು ಸೀಳುವ ದೊಡ್ಡ ದೊಡ್ಡ ಯಂತ್ರಗಳ ಗಾಡಿಗಳವರ ಗಾಡಿಗಳವರ ಹತ್ತಿರ ಹೋಗಿ ವಾಗ್ವಾದಕ್ಕಿಳಿಯುವುದು, ಅವರು ಇವನನ್ನು ನಿರ್ಲಕ್ಷಿಸಿದಾಗ ಸನ್ನಿವೇಶ ಬಿಗಡಾಯಿಸುವುದು….” ಇವೆಲ್ಲವೂ ಜನರಿಗೆ ವಿಚಿತ್ರವಾಗಿ ಕಾಣಿಸಿದ್ದವು. ಇಲ್ಲದ ಉಸಾಬರಿ ಇವನಿಗ್ಯಾಕೋ ಎಂಬ ಟೀಕೆಗಳು ಅವನ ಸ್ವಭಾವವನ್ನು ‘ವಿಚಿತ್ರ’ ಎಂಬ ಅಪವ್ಯಾಖ್ಯಾನದ ವ್ಯಾಪ್ತಿಗೆ ತಂದು ನಿಲ್ಲಿಸಿದ್ದವು.

ಬೇವೂರಿನವರ ಪ್ರಯಾಣ, ವ್ಯಾಪಾರ-ವಹಿವಾಟು, ಸರಕು-ಸಾಗಣೆಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ದೊಡ್ಡದಾದ ಸೇತುವೆ ಕಟ್ಟುವ ಯೋಚನೆ ಪ್ರಸ್ತಾಪವಾದಾಗ ಈ ಹುಡುಗ ರಾಮು ಭಾರೀ ಆಘಾತವಾಗಿದೆ ಎನ್ನುವ ಹಾಗೆ ತಗಾದೆ ತೆಗೆದಿದ್ದ. ನೂರಾರು ಕಿಲೋಮೀಟರ್ ದೂರ ಇರುವ ಊರುಗಳವರ ಪ್ರಯೋಜನಕ್ಕಾಗಿ ಅಣೆಕಟ್ಟು ಕಟ್ಟಲು ಯೋಜನೆ ರೂಪಿಸುತ್ತಿದ್ದಾಗ ಇದೇ ಹುಡುಗ ಬಂಡಾಯದ ಧ್ವನಿ ಎತ್ತಿದ್ದ.

ಜನದಟ್ಟಣೆ ಹೆಚ್ಚಿದಂತೆಲ್ಲಾ ಊರೆಂಬೋ ಊರು ತನ್ನತನವನ್ನು ಕಳೆದುಕೊಂಡು ಕೃತಕತೆಯನ್ನು ಹೊದ್ದುಕೊಳ್ಳುವಾಗಲೆಲ್ಲಾ ಸಿಡಿಮಿಡಿಗೊಳ್ಳುತ್ತಲೇ ಇದ್ದ. ಇಂಥ ಸಂದರ್ಭಗಳಲ್ಲೆಲ್ಲಾ ‘ಒಳ್ಳೇ ಹುಚ್ಚನ ಸಹವಾಸವಾಯಿತಲ್ಲಾ’ ಎಂದುಕೊಳ್ಳುತ್ತಿದ್ದರೇ ಹೊರತು ಅವನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಗೊಡವೆಗೇ ಹೋಗಲಿಲ್ಲ. ಫಲವತ್ತಾದ ಜಮೀನುಗಳನ್ನು ದೊಡ್ಡ ದೊಡ್ಡ ಕಂಪನಿಗಳು ದೊಡ್ಡ ಮೊತ್ತದ ಆಮಿಷವೊಡ್ಡಿ ಖರೀದಿಸುವಾಗಲೆಲ್ಲಾ ಇವನ ವಿರೋಧವನ್ನು ಹುಚ್ಚುತನದ ಪರಮಾವಧಿ ಎಂದು ಪರಿಗಣಿಸಿದವರೇ ಹೆಚ್ಚು.

ಇವನು ತುಂಗೆಯ ಪ್ರೇಮಕ್ಕೆ ಬಿದ್ದಾಗ ಗಂಗೆಯೇ ಮಧುರಭಾವಗಳ ಪ್ರವಹಿಸುವುದಕ್ಕೆ ವೇದಿಕೆಯಾಗಿದ್ದಾಳೆ. ಗಂಗೆಯ ಸಾನಿಧ್ಯದಲ್ಲೇ ತುಂಗೆಯೊಂದಿಗಿನ ಪ್ರೇಮದ ಭಾವಗಳನ್ನು ಹೊರಗೆಡಹಿದವನು ಇವನು. ಗಂಗೆಯೊಬ್ಬಳನ್ನು ಬಿಟ್ಟು ಈ ಜಗತ್ತಿನಲ್ಲಿ ಮತ್ತಿನ್ಯಾರೂ ಇಲ್ಲ ಎಂಬ ನಿರ್ಧಾರಕ್ಕೆ ಬರುವುದಕ್ಕೆ ಮುನ್ನ ತುಂಗೆಯ ಮಾಧುರ್ಯ ಅವನ ಬದುಕಿನಲ್ಲಿ ಪ್ರವೇಶಿಸಿತ್ತು. ಜಗತ್ತಿನಲ್ಲಿರುವವರು ಬಹುವಾಗಿ ಇಷ್ಟಪಡುವ ಯಾವ ಲಕ್ಷಣಗಳೂ ಇಲ್ಲದಿದ್ದರೂ ತುಂಗೆಯ ಪ್ರೇಮಕ್ಕೆ ಪಾತ್ರನಾದದ್ದು ಹೇಗೆ ಎಂಬ ಅಚ್ಚರಿ ಒಳಗೊಳಗೇ ಇದೆ.

ಒಂದು ಜೀವಕ್ಕೆ ಮತ್ತೊಂದು ಜೀವ ಇದ್ದೇ ಇರುತ್ತದೆ ಎಂಬ ಜಗದ ವೇದಾಂತವನ್ನು ದೃಢಪಡಿಸುವಂತೆಯೇ ತುಂಗೆ ತನ್ನನ್ನು ಸೆಳೆದಿದ್ದಾಳೆ ಎಂದೆನ್ನಿಸಿ ಆ ಕ್ಷಣದ ಖುಷಿಯನ್ನು ಅನುಭವಿಸುತ್ತಾನೆ ಅವನು. ಮನುಷ್ಯರೆನ್ನಿಸಿಕೊಂಡವರ ದಗಲ್ಬಾಜಿತನದ ಎಲ್ಲ ಬಗೆಯ ಅನುಭವಗಳಿಂದ ಹೈರಾಣಾದ ಸಂದರ್ಭದಲ್ಲಿ ಗಂಗೆಯ ಭೇಟಿಯಾಗಿತ್ತು. “ನೀನೇ ಕಣ್ಣೀರೊರೆಸಿಕೊಳ್ಳಬೇಕು, ಒರೆಸುವ ಮನುಷ್ಯ ಕೈಗಳೆಡೆಗಿನ ನಿರೀಕ್ಷೆ ಲಾಭದೊಪ್ಪಂದದ ಲೆಕ್ಕಾಚಾರದ ಬೆಳೆ ತೆಗೆದುಬಿಟ್ಟೀತು ಜೋಕೆ?” ಯಾರದ್ದೋ ಮಾತನ್ನು ಉದ್ಧರಿಸಿ ಯಾವಾಗಲೂ ಎಚ್ಚರಿಸುತ್ತಿದ್ದ ಗಂಗೆಯ ಮಾತುಗಳನ್ನು ಮತ್ತೆ ಮತ್ತೆ ದೃಢಪಡಿಸುತ್ತಿದ್ದ ಪ್ರಸಂಗಗಳು ನಡೆಯುತ್ತಲೇ ಇದ್ದವು.

ಅವುಗಳು ತೀವ್ರವಾಗಿ ಘಾಸಿಗೊಳಿಸಿದ್ದ ವೇಳೆ ತುಂಗೆ ಕಂಡಿದ್ದಳು. ಅಷ್ಟೇ ಅಲ್ಲ, ತನ್ನೊಂದಿಗೆ ಮಾತಿಗೆ ನಿಂತು ಮೊದಲ ನೋಟದಲ್ಲೇ ಸೆಳೆದಿದ್ದಳು. ಮೊದಲ ನೋಟವೆಂದರೆ ಅದು ಮೊದಲ ಸ್ಪರ್ಶದ ಕಥೆಯೇ ಹೌದು. ಅದಕ್ಕೆ ಮಳೆಯೇ ಮುನ್ನುಡಿಯಾಗಿದ್ದನ್ನು ಪ್ರಾಸಂಗಿಕ ಎಂದು ಗುರುತಿಸಬಹುದಾದರೂ ಪ್ರಕೃತಿಯ ಮಧುರ ಕುಮ್ಮಕ್ಕು ಎನ್ನುವುದೇ ಸೂಕ್ತವೇನೋ. ತುಂಗೆಯ ಭೇಟಿ ಜನ್ಮಜನ್ಮಾಂತರಗಳಲ್ಲಿ ಜೊತೆಯಾಗಿ ಬದುಕುವ ಸಂಕಲ್ಪವನ್ನು ಮೂಡಿಸಿತ್ತು.

ಡಾಕ್ಟರು, ಇಂಜಿನಿಯರಿಗಳಿಗಿದ್ದಷ್ಟು ಮಾರ್ಕೆಟ್ಟು ಬರಹಗಾರರಿಗೆಲ್ಲಿದೆ ಎಂಬ ಚುಚ್ಚುಮಾತುಗಳೇ ಕೇಳಿಬರುತ್ತಿದ್ದ ಕಾಲದಲ್ಲಿ ‘ಅವರಿಗಷ್ಟೇ ಅಲ್ಲ, ನಮ್ಮಂಥವರಿಗೂ ಬೆಲೆ ಇದ್ದೇ ಇದೆ’ ಎನ್ನುವ ಆಶಾವಾದ ಮೂಡಿಸುವ ಹಾಗೆ ತುಂಗೆ ಅವನೊಳಗೆ ಮೂಡಿಬಂದಿದ್ದಳು. ಸಿಟಿಯೊಂದರ ಕೆಟ್ಟ ಗಾಳಿಯ ನಡುವೆ ಬದುಕು ಹೊರೆಯುವುದಕ್ಕಾಗಿ ಕೆಲಸ ಮಾಡುತ್ತಿದ್ದ ರಾಮುವಿಗೆ ಮರಳಿ ಊರಿಗೆ ವಾಪಸ್ಸಾಗಿ ಉಳಿಯುವ ತವಕ.

ಹಾಗಾದರೆ, ತನಗೆ ಅತ್ಯಂತ ಇಷ್ಟವಾದ ಬರೆಯುವ ಕೆಲಸಕ್ಕೆ ಊರಲ್ಲಿ ಬೆಲೆಯಿಲ್ಲ. ಸಿಟಿಯಲ್ಲಿದ್ದರೆ ಮಾತ್ರ ಸಂಬಳದ ನೆರವು. ಅವತ್ಯಾವತ್ತೋ ರಾಮು ತನ್ನೂರಿನ ಗಂಗೆಯ ಹರಿವ ನಾದನಿನಾದ ಸೌಂದರ್ಯದ ಬಗ್ಗೆ ಬರೆದ ಬರಹವನ್ನು ಪತ್ರಿಕೆಗೆ ಕಳುಹಿಸಿದ್ದ. ಆ ಪತ್ರಿಕೆಯವರು ಇವನ ಬರೆವ ಪ್ರತಿಭೆಯನ್ನು ಗುರುತಿಸಿ ಕೆಲಸಕ್ಕೆ ನೇಮಿಸಿಕೊಂಡಿದ್ದರು.

ಆ ದೊಡ್ಡ ಮಹಾನಗರದಲ್ಲಿ ಸುದ್ದಿಪತ್ರಿಕೆಯ ಬರೆಯುವ ಕೆಲಸಕ್ಕೆ ಸೇರಿಕೊಂಡ ನಂತರ ರಾಮುವಿನೊಳಗಿನ ಕವಿಮನಸ್ಸನ್ನು ಘಾಸಿಗೊಳಿಸುವ ಅನೇಕಾನೇಕ ಅನುಭವಗಳು ಮತ್ತೆ ಮತ್ತೆ ಆಕ್ರಮಣಗೈಯ್ಯುತ್ತಲೇ ಇದ್ದವು. ಆ ದೊಡ್ಡ ಸಿಟಿ ಮಳೆಯ ಪ್ರವಾಹಕ್ಕೀಡಾಗಿ ತೊಂದರೆಗಳನ್ನೆದುರಿಸಿದ್ದ ನಂತರ ಬಹಳ ವಿಸ್ತಾರವಾದ ತನಿಖಾ ವರದಿ ಸಿದ್ಧಪಡಿಸಿದ್ದ. ಈ ಹಿಂದೆ ಇದ್ದ ಕೆರೆಗಳನ್ನು ಇಲ್ಲವಾಗಿಸಿ ದೊಡ್ಡ ದೊಡ್ಡ ಅಪಾರ್ಟುಮೆಂಟುಗಳಿಗಾಗಿ ಜಾಗವನ್ನು ಮಾರಾಟ ಮಾಡಿದ ಜಾಲವನ್ನು ಪತ್ತೆ ಹಚ್ಚಿ ಎಲ್ಲಿಂದ ಎಲ್ಲಿಯವರೆಗೆ ಲಿಂಕ್ ಇದೆ ಎನ್ನುವುದನ್ನು ಆಧಾರಸಹಿತ ಪ್ರಸ್ತುತಪಡಿಸಿದ್ದ. ಈ ವರದಿಯಿಂದಾಗಿ ಸಿಎಮ್ಮು ಗಾದಿ ಅಲ್ಲಾಡತೊಡಗಿತ್ತು.

ವಿರೋಧ ಪಕ್ಷಗಳವರು ಇದನ್ನೇ ಅಸ್ತ್ರವಾಗಿಸಿಕೊಂಡು ರಾಜೀನಾಮೆ ಆಗ್ರಹಿಸತೊಡಗಿದ್ದರು. ಮುಜುಗರದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆಡಳಿತ ಪಕ್ಷದವರೇ ಬಲವಂತವಾಗಿ ರಾಜೀನಾಮೆ ಕೊಡಿಸಿ ಮತ್ತೊಬ್ಬ ಅಪಾಯಕಾರಿ ಮನುಷ್ಯನನ್ನು ಸಿಎಂ ಪಟ್ಟದಲ್ಲಿ ಕೂರಿಸಿಬಿಟ್ಟಿದ್ದರು. ಆತ ಅಧಿಕಾರಕ್ಕೆ ಬಂದ ತಕ್ಷಣವೇ ತನ್ನೂರಿನ ಸಮೀಪದಲ್ಲಿ ಭೂಗರ್ಭವನ್ನು ಸೀಳಿ ಜಲದ ಸಿರಿಯನ್ನು ದೋಚುವ ಯೋಜನೆಯನ್ನು ದೊಡ್ಡ ದೊಡ್ಡ ಕಂಪನಿಗಳೊಂದಿಗೆ ಶಾಮೀಲಾಗಿ ಅಂಗೀಕರಿಸಿಬಿಟ್ಟಿದ್ದ.

ವಿರೋಧ ಪಕ್ಷಗಳವರು ಉಸಿರೆತ್ತದಂತೆ ಹಣದ ಆಮಿಷಕ್ಕೀಡುಮಾಡಿ ಖುರ್ಚಿಯನ್ನು ಭದ್ರಪಡಿಸಿಕೊಂಡಿದ್ದ. ಈ ಬಗ್ಗೆ ಇಂಚಿಂಚು ಮಾಹಿತಿ ಸಂಗ್ರಹಿಸಿ ರಾಮು ಬರೆದ ಸುದ್ದಿಗಳು ಆಳುವವರಿಗೆ ಕಿರಿಕಿರಿಯನ್ನುಂಟುಮಾಡಿದ್ದವು. ಆಮೇಲೇನಾಯ್ತೋ ಏನೋ. ಇದಕ್ಕೆ ಸಂಬಂಧಿಸಿದ ವಿವಿಧ ತೆರನಾದ ಬರಹಗಳು ತದನಂತರ ಪ್ರಕಟವಾಗಲೇ ಇಲ್ಲ.

ಪ್ರಕಟವಾಗದೇ ಇರುವುದರ ಬಗ್ಗೆ ಸಂಪಾದಕರು ಸಮಜಾಯಿಷಿ ನೀಡಲೂ ಇಲ್ಲ. ಆ ಪಕ್ಷದ ಭಾರೀ ಆಸಾಮಿಯೇ ಪತ್ರಿಕೆಗೆ ಬಂಡವಾಳ ಹಾಕಿದ್ದನಾದ್ದರಿಂದ ಇಂಥ ವರದಿಗಳು ಬರದಂತೆ ನೋಡಿಕೊಳ್ಳುವ ಮುಂಚೂಣಿ ಜವಾಬ್ದಾರಿ ನಿರ್ವಹಿಸಿ ಸಿಎಂ ಖುರ್ಚಿ ಅಲುಗಾಡದಂತೆ ನೋಡಿಕೊಂಡಿದ್ದ.

ಖುದ್ದು ಸಿಎಂ ಮಗನೇ ನಿಂತುಕೊಂಡು ವಿವಿಧ ಕಡೆಗೆ ಹರಿವ ನೀರಿನ ನೆಲದ ನೆಲೆಗಳನ್ನು ಬಗೆದು ಅಕ್ರಮ ಧಂಧೆಯಲ್ಲಿದ್ದುದನ್ನೂ, ಜೀವಜಲದ ಸಲೆಗಳನ್ನು ಇಲ್ಲವಾಗಿಸಿ ಹರಿವ ಚಲನೆಯ ಶಕ್ತಿಯನ್ನು ಇಲ್ಲವಾಗಿಸುತ್ತಿರುವ ಹುನ್ನಾರಗಳನ್ನು ಕಾಣಿಸುವ ಎಲ್ಲ ಪ್ರಯತ್ನಗಳೂ ನಿಷ್ಪ್ರಯೋಜಕ ಜಕವೆನ್ನಿಸಿದ್ದವು. ಆದರೂ ಛಲಬಿಡದೇ ಬರಹಗಳನ್ನು ಅನಾಮಿಕ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೇಲಿಬಿಡುತ್ತಿದ್ದ.

ಆದರೆ, ಅಲ್ಲಿರುವವರೆಲ್ಲರೂ ಸದ್ಯದ ಖುಷಿಯ ಅಮಲಲ್ಲಿ ಭವಿಷ್ಯವನ್ನೇ ಮರೆತವಾದ್ದರಿಂದ ಪೂರಕ ಬೆಂಬಲ ಸಿಗುತ್ತಲೇ ಇರಲಿಲ್ಲ. ಫೇಸ್ಬುಕ್‌ನಲ್ಲಿ ಏನಾದರೂ ಈ ಬಗ್ಗೆ ಬರೆದರೆ ‘ಹೀಗೆ ಯೋಚಿಸುವವರನ್ನು ಅನ್ನ, ನೀರಿಲ್ಲದ ಕಡೆಗೆ ಬಿಟ್ಟು ಬರಬೇಕು, ಆವಾಗಲೇ ಇವರಿಗೆ ಬುದ್ಧಿಬರೋದು’ ಅಂತ ಅತ್ಯಂತ ಕೆಟ್ಟದಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದವು. ಪ್ರಬಲರ ಪರವಾದ ಆರಾಧನೆಯ ಭಕ್ತಿ ಭಾವಗಳ ಪ್ರದರ್ಶನ ಹಿಂದೆಂದಿಗಿಂತಲೂ ಹೆಚ್ಚಾಗುತ್ತಲೇ ಇತ್ತು.

ಆ ದೊಡ್ಡ ಸಿಟಿಯಲ್ಲಿದ್ದವರು ಮನುಷ್ಯ ಸಂಬಂಧಗಳ ಸೊಗಡನ್ನೇ ಮರೆತು ಬದುಕನ್ನೇ ಯಾಂತ್ರಿಕಗೊಳಿಸಿಕೊಂಡು ಕಳೆದುಹೋಗಿದ್ದುದು ಅನುಭವಕ್ಕೆ ಬರುತ್ತಲೇ ಇತ್ತು. ಆದರೂ ರಾಮುವಿನೊಳಗೆ ಒಂದಷ್ಟೂ ವ್ಯಥೆಯಿರಲಿಲ್ಲ. ಮನುಷ್ಯ ಜನುಮದ ಸಾರ್ಥಕತೆ ಇರುವುದು ಸಮಾಜಕ್ಕಾಗಿ ಬದುಕನ್ನು ಮೀಸಲಿಟ್ಟಾಗಲೇ ಎಂಬುದನ್ನು ಗುರುಹಿರಿಯರು ಇವನೊಳಗೆ ಬೇರೂರಿಸಸಿಬಿಟ್ಟಿದ್ದರಿಂದ ಜಗತ್ತಿನ ಎಲ್ಲ ಬಗೆಯ ಊನಗಳ ಪ್ರವಾಹದ ವಿರುದ್ಧ ಈಜುವಂಥ ಅದಮ್ಯ ವಿಶ್ವಾಸವನ್ನು ತನ್ನದಾಗಿಸಿಕೊಂಡಿದ್ದ.

ಹಳೆಯದರೊಂದಿಗಿನ ನೆನಪುಗಳಿಂದ ದೂರವಾಗಬಾರದು ಎಂಬ ಕಾರಣದಿಂದಲೇ ತನ್ನೂರಿಗೆ ಮರಳುತ್ತಿದ್ದ ಇವನು ಈ ಗಂಗೆಯ ಮಡಿಲಿನಡೆಗೆ ಮತ್ತೆ ಮತ್ತೆ ವಾಪಸ್ಸಾಗುತ್ತಿದ್ದ. ತನ್ನ ಪ್ರಾಮಾಣಿಕ ಪ್ರಯತ್ನಗಳಿಗೆ ಪೂರಕವಾದ ವಾತಾವರಣ ಇಲ್ಲ ಎಂಬ ಸತ್ಯ ಗೊತ್ತಾಗುತ್ತಲೇ ಮನಸ್ಸು ಬೇಸರಿಸಿಕೊಂಡು ಕುಳಿತುಕೊಳ್ಳುತ್ತಿರಲಿಲ್ಲ. ಹಾಗನ್ನಿಸುತ್ತಲೇ ಅವನು ತನ್ನೂರಿನ ಗಂಗೆಯೆಡೆಗೆ ಬಂದುಬಿಡುತ್ತಿದ್ದ. ಒಂದಷ್ಟು ಚೇತರಿಸಿಕೊಂಡು ಮತ್ತೆ ಮಹಾನಗರದ ಸಂತೆಗೆ ಮರಳಿಬಿಡುತ್ತಿದ್ದ.

ಎಲ್ಲವೂ ಸರಿಯಿಲ್ಲ ಎನ್ನುವ ನೋವುಗಳ ಮಧ್ಯೆಯೇ ಇವನು ಮಧುರ ಭಾವಗಳ ತೆಕ್ಕೆಗೀಡಾಗಿ ಕವಿತೆ ಗೀಚುವುದನ್ನು ಬಿಟ್ಟಿರಲಿಲ್ಲ. ವರದಿಗಾರ ಕವಿಯಾಗಬಾರದು ಎಂಬ ಕಠಿಣ ಕಾನೂನೇನೂ ಇಲ್ಲವಲ್ಲ ಎಂಬ ಹುಮ್ಮಸ್ಸಿನೊಂದಿಗೇ ಇವನ ಕಾವ್ಯನಿನಾದ ಹೊರಹೊಮ್ಮುತ್ತಿತ್ತು…….. ಗಗನಕ್ಕೆ ಈಗ ಚಿತ್ರ ಬರೆಯುವಾಸೆ; ಕಾರಣ ಕೆದಕಿದರೆ ಅದು ನಿನ್ನ ಕಡೆಗೇ ನೋಟ ನೆಡುತ್ತಿದೆ…. ತಣ್ಣನೆಯ ಗಾಳಿಗೆ ತರುಣನಾಗುವ ಕನಸು; ವಿಚಾರಿಸಿದರೆ ಅದು ನಿನ್ನದೇ ಧ್ಯಾನದಲ್ಲಿದೆ… ನೀರಿಗೆ ನಿನ್ನ ಸ್ಪರ್ಶದ ತವಕ; ಕೇಳಿದರೆ ಅದು ನಿನ್ನ ನೆರವಿನಿಂದ ಶುದ್ಧವಾಗುವ ಹಂಬಲದಲ್ಲಿದೆ.

ಹೂವಿಗೆ ನಿನ್ನನ್ನೇ ತನ್ನ ಬಣ್ಣವಾಗಿಸಿಕೊಳ್ಳುವ ಉತ್ಸಾಹ; ಸಕಾರಣ ಹುಡುಕಿದರೆ ಅದರ ತುಂಬ ನಿನ್ನದೇ ಪ್ರತಿಬಿಂಬ…ಬೇರು ಮರವಾಗುವ ಬದಲು ಮನುಜನಾಗಲು ಪಟ್ಟು ಹಿಡಿದಿದೆ; ಅದಕ್ಕೆ ನಿನ್ನ ಇರುವಿನ ಉಳಿವು ಸಿಕ್ಕಿದೆ… ಹಸಿರ ಸಿರಿ ನಿನ್ನನ್ನೇ ತನ್ನ ಆಭರಣವಾಗಿಸುವ ಆತುರದಲ್ಲಿದೆ; ನೋಡಿದರೆ ಅದರ ಕಣ್ಣಲ್ಲಿ ನಿನ್ನದೇ ಗುನುಗು…. ಸದಾ ನಿನ್ನವನಾಗುವ ಪ್ರೀತಿ; ಅದರ ಪ್ರಭೆ ಕಾರಣ ಕೇಳುವ ಮನಸ್ಸುಗಳನ್ನು ಸುಮ್ಮನಾಗಿಸಿದೆ.. ಅದ್ಯಾವುದೋ ಅಮೃತಘಳಿಗೆಯಲ್ಲಿ ಇವನಿಂದ ಬರೆಸಿಕೊಂಡಿದ್ದ ಕವಿತೆಯನ್ನು ಓದಿದ ಕ್ಷಣದಿಂದಲೇ ತುಂಗೆಯ ಮಾಧುರ್ಯದ ಸುಳಿವು ಸಿಕ್ಕಿಬಿಟ್ಟಿತ್ತು. ತುಂಗೆಗಾಗಿಯೇ ಈ ಸಾಲುಗಳು ಹೊಳೆದಿದ್ದವು ಎಂಬುದನ್ನು ಆಕೆಯ ಫೋಟೋ ನೋಡಿದ ತಕ್ಷಣ ರಾಮುವೇ ಸ್ವತಃ ಸ್ಪಷ್ಟಪಡಿಸಿಕೊಂಡಿದ್ದ.

ಈ ಸಾಲುಗಳನ್ನು ಓದಿದ ತಕ್ಷಣವೇ ತುಂಗೆಯು ಇವನನ್ನು ಭೇಟಿಯಾಗುವ ಹಂಬಲವನ್ನು ವ್ಯಕ್ತಪಡಿಸಿದ್ದಳು. ರಾಮುವಿಗೆ ಇದು ಆಧುನಿಕ ಕಾಲದ ಅತ್ಯದ್ಭುತ ರಮ್ಯ ಪವಾಡ ಎನ್ನಿಸಿಬಿಟ್ಟಿತ್ತು. ಭೇಟಿಯಾದಾಗಲಂತೂ ಮತ್ತೂ ಖುಷಿಯಾಗಿತ್ತು.
ಅವಳು ತನ್ನೆಡೆಗೆ ಎಸೆದ ಮೊದಲ ಪ್ರಶ್ನೆ ಘಾಸಿಗೊಳಿಸಿತ್ತಾದರೂ ಅದರ ಹಿಂದಿನ ಉದ್ದೇಶ ತಿಳಿದುಕೊಂಡ ನಂತರ ಇವನು ನಿರಾಳವಾಗಿದ್ದ. ಹೆತ್ತವರು ಮನುಷ್ಯರಲ್ಲದವರು ರೂಪಿಸಿದ ಕಟ್ಟು-ಕಟ್ಟಳೆಗಳ ಭಯದಲ್ಲಿ, ಮರ್ಯಾದೆ ಹೋಗುತ್ತದೆ ಎಂಬ ಅಳುಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ತನ್ನನ್ನು ಅನಾಥಳನ್ನಾಗಿಸಿದ ವೇದನೆಯ ಕಥೆಯನ್ನು ನಿವೇದಿಸಿಕೊಂಡಾಗಲಂತೂ ತನ್ನ ಕಥೆಯೂ ಅಂಥದ್ದನ್ನೇ ಹೋಲುತ್ತದಲ್ಲ ಎಂದುಕೊಂಡಿದ್ದ.

ಜಗಕ್ಕೆ ಹೆದರಬಾರದು, ನಾವೂ ಬದುಕಿ, ಮಗುವನ್ನೂ ಉಳಿಸಿ ಮನುಷ್ಯತ್ವದ ಮೌಲ್ಯ ಸಾರಬೇಕು ಎಂಬ ಅವಳೊಳಗಿನ ಸಂಕಲ್ಪ ಇವನೊಳಗೆ ಅದಮ್ಯ ಚೈತನ್ಯವನ್ನು ಮಿಂಚಿಸಿತು. ಇಬ್ಬರೂ ಒಂದಾಗುವ ಸಂಕಲ್ಪ ತೊಟ್ಟರು. ಅಷ್ಟರಲ್ಲಾಗಲೇ ತನ್ನನ್ನು ಯಾವತ್ತೂ ತೊಡವಿಕೊಳ್ಳುತ್ತಿದ್ದ ಯುವಕರ ಗುಂಪೊಂದು ತಮ್ಮೆಡೆಗೆ ಬರುತ್ತಿರುವುದು ಕಂಡಿತು.

ನೋಡಿದ ತಕ್ಷಣವೇ ರಾಮುವಿಗೆ ಹಿಂದಿನ ಕಹಿಪ್ರಸಂಗಗಳು ನೆನಪಾದವು. ತನ್ನ ಬರಹಗಳ ಕಾರಣಕ್ಕಾಗಿಯೇ ತನ್ನನ್ನು ಕೊಲ್ಲಿಸುವ ಪ್ರಯತ್ನಗಳು ನಡೆದಿದ್ದವು. ಹೇಗೋ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದ. ಈಗ ಅದೇ ಗುಂಪು ತಮ್ಮೆಡೆಗೆ ಬರುತ್ತಿರುವುದನ್ನು ನೋಡಿದ. ಗುಂಪಿನಲ್ಲಿದ್ದವನು ಜಾತಿ, ಧರ್ಮದ ಗೊಡವೆಯಿಲ್ಲದ ಇಂಥ ನಾಯಿಗಳಿಗೆ ಪಾಠ ಕಲಿಸಬೇಕು ಎಂದು ಕೂಗಿ ಹೇಳುತ್ತಾ ಕತ್ತಿ ಝಳಪಿಸುತ್ತಾ ಉಳಿದವರಿಗೆ ಕುಮ್ಮಕ್ಕು ನೀಡುತ್ತಿದ್ದ. ಅದನ್ನು ನೋಡಿದ ತುಂಗೆಗೆ ಸ್ಪಷ್ಟವಾಗಿ ಹೋಯಿತು. ತನ್ನ ಬಂಧುಗಳೂ ಇವರೊಂದಿಗೆ ಸೇರಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಯಿತು.

ಇಬ್ಬರೂ ಆ ಕ್ಷಣಕ್ಕೆ ಗಂಗೆಯ ಮಡಿಲಿಗೆ ಧುಮುಕಿದರು. ಅವರು ದುಂಬಾಲು ಬಿದ್ದಿದ್ದರು. ಇವರಿಬ್ಬರ ನಡುವಿನ ಪ್ರೇಮದ ಜೀವಕಾರುಣ್ಯ ಕೊಲೆಗೈಯ್ಯುವವರಿಗೆ ಸವಾಲೆನ್ನಿಸಬಿಟ್ಟಿತ್ತು. ಇಬ್ಬರೂ ಬದುಕುವ ಪಣ ತೊಟ್ಟಿದ್ದರು. ನೀವು ಕೊಲ್ಲುವ ಹಠ ತೊಟ್ಟ ಮಾತ್ರಕ್ಕೆ ನಾವು ಸಾಯಲು ಸಿದ್ಧರಿಲ್ಲ ಎನ್ನುವುದನ್ನು ನಿರೂಪಿಸಲು ಸನ್ನದ್ಧವಾದಂತಿತ್ತು ಇಬ್ಬರ ಜೋಡಿ. ಅವರ ಬದುಕಿನ ಪ್ರೀತಿಯ ಉತ್ಸಾಹಕ್ಕೆ ಸಾಕುತಾಯಿ ಗಂಗೆ ಸಾಥಿಯಾಗಿದ್ದಳು. ತನ್ನ ಮಡಿಲಿಗೆ ಬಿದ್ದ ಈ ಎರಡೂ ಜೀವಗಳು ತನ್ನ ಬೆಂಬಲದ ಬಲದಲ್ಲಿ ಅರಳಿಕೊಳ್ಳಬೇಕು.

ಹಾಗೆ ಅರಳಿಕೊಳ್ಳುತ್ತಲೇ ಜಗಕ್ಕೆ ಮಾದರಿಯಾಗಬೇಕು. ಒಂದಾಗುವ ಜೀವಗಳನ್ನು ಇಲ್ಲವಾಗಿಸುವ ಜಗದ ಕ್ರೌರ್ಯ ಇಲ್ಲವಾಗಿಬಿಡಬೇಕು. ಹಾಗಂತ ತಾನು ಹರಿಯುವ ವ್ಯಾಪ್ತಿಯ ನೆಲದ ಹಾದಿಯಲ್ಲೆಲ್ಲಾ ಸಾರುತ್ತಾ ಕರೆದೊಯ್ದಳು. ಹಿಂದೆಂದಿಗಿಂತಲೂ ಹೆಚ್ಚಿನ ವೇಗದಲ್ಲಿ ಹರಿದಳು. ದೂರದೂರಕ್ಕೆ ಬಹುದೂರದವರೆಗೆ ಇವರಿಬ್ಬರನ್ನು ತೇಲಿಸಿಕೊಂಡು ಹರಿಯುತ್ತಲೇ ಇದ್ದಳು. ಮನುಷ್ಯಲೋಕದ ಯಾವ ಬಗೆಯ ಕ್ರೌರ್ಯವೂ ಇಲ್ಲದ ಆವರಣಕ್ಕೆ ಇವರನ್ನು ಸೇರಿಸಿಬಿಡಬೇಕು ಎಂಬ ಛಲ ಅವಳೊಳಗೆ ಎಲ್ಲಿಲ್ಲದ ಶಕ್ತಿಯನ್ನು ನೆಲೆಗೊಳಿಸಿತ್ತು. ಇಬ್ಬರನ್ನೂ ಜೋಡಿಯಾಗಿಸಿ ದಡಕ್ಕೆ ತಂದು ಮಲಗಿಸಿಬಿಟ್ಟಳು.

ಆ ಕ್ಷಣಕ್ಕೆ ನಿಸರ್ಗ ಮರುಕಪಟ್ಟಿತು. ಈ ಎರಡೂ ಜೀವಗಳು ಇಲ್ಲವಾದರೆ ಹೇಗೆ? ಎಂದು ಅದು ಕೊರಗುತ್ತಿದೆಯೇನೋ ಎನ್ನುವ ಹಾಗೆ ಸ್ತಬ್ಧವಾಗಿತ್ತು. ಅಷ್ಟರಲ್ಲಿ ರಾಮುವಿನ ಕೈಯ ಮೇಲಿದ್ದ ತುಂಗೆಯ ಕೈ ಸಣ್ಣಗೆ ಅಲುಗಾಡಿತು. ಅವರಿಬ್ಬರ ಕಣ್ಣರೆಪ್ಪೆಗಳು ಮಿಟುಕಿದವು. ಅವರಿಗೆ ನೀರಿಗೆ ಧುಮುಕಿದ್ದಷ್ಟೇ ನೆನಪು. ಇವರ ಮುಂದೆ ದಂಡೆಯ ಬಹುದೊಡ್ಡ ಪ್ರದೇಶ ಅನಂತವಾಗಿ ವ್ಯಾಪಿಸಿಕೊಂಡಂತೆ ಭಾಸವಾಯಿತು. ಅಲ್ಲಿ ಯಾವುದೇ ಬಗೆಯ ಚೌಕಟ್ಟುಗಳಿಲ್ಲ ಎಂಬುದನ್ನು ನೀಲಾಕಾಶ ದೃಢಪಡಿಸುತ್ತಿತ್ತು.

ಅದರೆಡೆಗೆ ನೋಡುತ್ತಲೇ ಇವರಿಬ್ಬರೊಳಗಿನ ಜೀವನೋತ್ಸಾಹ ಚಿಗುರಿಕೊಂಡಿತು. ಎದ್ದು ನಡೆಯಲಾರಂಭಿಸಿದರು. ಈ ಎರಡೂ ಜೀವಗಳು ಜೊತೆಯಾಗಿ ನಡೆಯುತ್ತಿರುವ ಸಂಭ್ರಮವನ್ನು ನಿಸರ್ಗ ಕಣ್ಣುತುಂಬಿಕೊಂಡಿತು. ಅವರ ಹೆಜ್ಜೆಗುರುತುಗಳ ಒಳಗೇ ತನ್ನ ಸೌಂದರ್ಯ ವಿಸ್ತಾರವಾಗುವ ಪರಿಯ ಸೊಬಗನ್ನು ಕಲ್ಪಿಸಿಕೊಂಡಿತು. ಇದಕ್ಕೆ ಸಮ್ಮತಿ ಸೂಚಿಸುವಂತೆ ಅಲ್ಲಿದ್ದ ಹೂವುಗಳೆಲ್ಲವೂ ತಮ್ಮ ಅಂದವನ್ನು ಹೆಚ್ಚಿಸಿಕೊಂಡಿದ್ದವು. ಗಂಗೆ ನಕ್ಕಳು. ಅವಳೊಳಗೆ ನೀರಿನಲೆಗಳ ಮಾಧುರ್ಯದ ನಿನಾದ ಹೊಮ್ಮುತ್ತಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending