Connect with us

ದಿನದ ಸುದ್ದಿ

ಸಕ್ಕರೆ ಕಾಯಿಲೆ ಸುತ್ತ ಮುತ್ತ..! ; ಹುಷಾರಾಗಿರಿ..!

Published

on

ಪ್ರಪಂಚದಲ್ಲಿ ಅತಿ ಹೆಚ್ಚು ಸಕ್ಕರೆ ಕಾಯಿಲೆ ಇರುವ ನಂಬರ್ ಒನ್ ದೇಶ ಚೀನಾ, ಭಾರತ ಎರಡನೇ ಸ್ಥಾನದಲ್ಲಿದೆ. 2025 ರಲ್ಲಿ ಭಾರತವೇ ನಂಬರ್ ಒನ್ ಆಗಲಿದೆ ಎಂದು ವೈದ್ಯಕೀಯ ಜಗತ್ತು ಹೇಳುತ್ತಿದೆ. ನಮ್ಮ ದೇಶದಲ್ಲಿ ಸಾಕಷ್ಟು ಆಸ್ಪತ್ರೆಗಳಿವೆ. ಸಾಕಷ್ಟು ವೈದ್ಯರಿದ್ದಾರೆ. ಪ್ರತಿಯೊಂದು ಕಾಯಿಲೆಗೂ ಉತ್ತಮವಾದ ಔಷಧಿಗಳೂ ಇವೆ.

ಒಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರ ಅತ್ಯಂತ ಮುಂದುವರೆದಿದೆ. ಆದರೂ ಬಿಪಿ ಶುಗರ್ ನಿಯಂತ್ರಣ ಏಕೆ ಸಾಧ್ಯವಾಗುತ್ತಿಲ್ಲ. ಇಂದಿಗೂ ಅನೇಕ ವೈದ್ಯರು ಬಿಪಿ ಶುಗರ್ ಕಾಯಿಲೆಗೆ ಔಷಧಿ ಜೀವನ ಪರ್ಯಂತರ ತೆಗೆದುಕೊಳ್ಳಲೇಬೇಕೆಂದು ಏಕೆ ಹೇಳುತ್ತಿದ್ದಾರೆ? ಈ ಬಗ್ಗೆ ಆಳವಾಗಿ ನೋಡಿದಾಗ ಪ್ರಮುಖವಾಗಿ ಇಂದಿನ ಅಧಿಕ ಜನರು ಅಧಿಕ ಆಹಾರ ಸೇವಿಸುತ್ತಿದ್ದಾರೆ. ಪದೇ ಪದೇ ಆಹಾರ ಸೇವಿಸುತ್ತಿದ್ದಾರೆ. ಪ್ರತಿದಿನ ಮೂರು ಹೊತ್ತು ಊಟ ಮಾಡಲೇಬೇಕು. ಹಸಿವೆ ಇರಲಿ ಇಲ್ಲದಿರಲಿ ಆಹಾರ ಸೇವಿಸುತ್ತಿದ್ದಾರೆ. ಅದರಲ್ಲೂ ಪ್ರಕೃತಿಯಿಂದ ಗಿಡ ಮರಗಳಿಂದ ಬರುವ ಆಹಾರವನ್ನು ನೇರವಾಗಿ ಸೇವಿಸುತ್ತಿಲ್ಲ. ಪ್ರತಿಯೊಂದು ಆಹಾರವೂ ಪ್ರೊಸೆಸ್ಡ್ ಪ್ಯಾಕ್ಡ್ ಆಗಿ ಬರುತ್ತಿದೆ. ಅದರಲ್ಲೂ ಎಣ್ಣೆಯಲ್ಲಿ ಕರಿದ, ಮಸಾಲೆಯಿಂದ ರುಚಿಕರವಾದ ಆಹಾರವೇ ಬೇಕು. ಉಪವಾಸ ಮಾಡುವವರು ಅತಿ ಕಡಿಮೆಯಾಗಿದ್ದಾರೆ. ಇದಕ್ಕೆಲ್ಲ ಕಾರಣ ಇಂದಿನ ಜನರಲ್ಲಿ ಅಧಿಕ ಹಣವಿದೆ. ಆಹಾರದ ಕೊರತೆಯಿಲ್ಲ. ಮನೆಯಲ್ಲಿ ಊಟವಿಲ್ಲವೆಂದರೆ ಹೋಟೆಲ್ಗೆ ಹೋಗಿ ಊಟ ಮಾಡುತ್ತಾರೆ. ಖಾಲಿ ಹೊಟ್ಟೆಯಲ್ಲಿ ಮಾತ್ರ ಇರುವುದಿಲ್ಲ.

ದೇಶದ ಶೇಕಡ 20 ರಷ್ಟು ಜನರಿಗೆ ತಮಗೆ ಬಿಪಿ ಮತ್ತು ಸಕ್ಕರೆ ಕಾಯಿಲೆ ಇರುವ ಬಗ್ಗೆ ಅರಿವೆಯೇ ಇರುವುದಿಲ್ಲ. ಶೇ.20 ರಷ್ಟು ಜನರು ತಮಗೆ ಬಿಪಿ ಅಥವಾ ಶುಗರ್ ಕಾಯಿಲೆ ಇಲ್ಲದೆ ಇದ್ದರೂ ಮಾತ್ರೆ ಸೇವಿಸುತ್ತಿದ್ದಾರೆ. ಶೇಕಡ 50 ರಷ್ಟು ಜನರು ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದೇ ಬಿಪಿ ಸಕ್ಕರೆ ಕಾಯಿಲೆಗೆ ಮಾತ್ರೆ ಸೇವಿಸುತ್ತಿದ್ದಾರೆ. ಶೇಕಡ 30 ರಷ್ಟು ಜನರು ಅನವಶ್ಯಕ ಅತಿಯಾದ ನಿರಂತರ ಔಷಧಿಗಳ ಸೇವನೆಯಿಂದ ಹೈಬಿಪಿ ಮತ್ತು ಶುಗರ್ ಕಾಯಿಲೆಗೆ ಈಡಾಗುತ್ತಿದ್ದಾರೆ. ಬಿಪಿ ಮತ್ತು ಶುಗರ್ ಕಾಯಿಲೆ ಇವೆರಡೂ ಅಣ್ಣ ತಮ್ಮಂದಿರಿದ್ದಂತೆ. ಒಂದು ಬಂದರೆ ಇನ್ನೊಂದು ಬರಲೇಬೇಕು. ಇವೆರಡೂ ಬಂದಾಗ ಇತರೆ ಎಲ್ಲಾ ಕಾಯಿಲೆಗಳು ಒಂದೊಂದಾಗಿ ಬರುತ್ತವೆ.

ನಮ್ಮ ದೇಹದಲ್ಲಿರುವ ಮೇದೋಜೀರಕ ಗ್ರಂಥಿಯು (pancreatitis) ಶುಗರ್ ಕಾಯಿಲೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಮೆದೋಜೀರಕ ಗ್ರಂಥಿಯು ಆಹಾರ ಜೀರ್ಣಗೊಳಿಸಲು ಕೆಲವು ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತದೆ. ಜೊತೆಗೆ ಇನ್ಸುಲಿನ್ ಉತ್ಪಾದಿಸುವ ಕೆಲಸವನ್ನೂ ಇದು ಮಾಡುತ್ತದೆ. ನಾವು ಸೇವಿಸುವ ಕೆಟ್ಟ ಆಹಾರದಿಂದ, ಕೆಟ್ಟ ಜೀವನ ಶೈಲಿಯಿಂದ ಈ ಮೆದೋಜೀರಕ ಗ್ರಂಥಿಯು ಬಲಹೀನಗೊಂಡು ಇನ್ಸುಲಿನ್ ಅನ್ನು ಕಡಿಮೆ ಉತ್ಪಾದಿಸುತ್ತದೆ ಅಥವಾ ಉತ್ಪಾದಿಸುವದನ್ನೇ ನಿಲ್ಲಿಸಿ ಬಿಡುತ್ತದೆ. ಆಗಲೇ ಶುಗರ್ ಕಾಯಿಲೆ ನಮಗೆ ಬರುತ್ತದೆ.

ನಾನು ಈ ಲೇಖನದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ಮಾಹಿತಿ ಒದಗಿಸಿರುತ್ತೇನೆ. ನಾನು ತಿಳಿಸಿರುವ ಈ ಚಿಕಿತ್ಸಾ ಪದ್ಧತಿಯು ವಿಶ್ವದಲ್ಲಿಯೇ ಶ್ರೇಷ್ಠ ಚಿಕಿತ್ಸಾ ಪದ್ದತಿಯಾಗಿದೆ. ಇದನ್ನು 100% ಪಾಲಿಸುವ ಮೂಲಕ ನಿಮ್ಮ ಶುಗರ್ ಕಾಯಿಲೆಯನ್ನು 100% ಕಂಟ್ರೋಲ್ನಲ್ಲಿ ಇಡಬಹುದು. ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದಲ್ಲಿ ನಿಮ್ಮ ಅನುಭವಕ್ಕೆ ಬರುತ್ತದೆ. ಅವರವರ ದೇಹ ಪ್ರಕೃತಿಗೆ ಅನುಗುಣವಾಗಿ ನಿಯಂತ್ರಣ ಹೊಂದಲು, ಗುಣಮುಖ ಹೊಂದಲು ಹೆಚ್ಚು ಕಡಿಮೆ ಸಮಯ ತೆಗೆದುಕೊಳ್ಳಬಹುದು. ಆದರೆ, ಶಾಶ್ವತ ಪರಿಹಾರ ಸಿಗುತ್ತದೆ.

ಸಕ್ಕರೆ ಕಾಯಿಲೆ ಎಂದರೇನು?

ಅಧಿಕ ಸಕ್ಕರೆ ಸೇವನೆಯಿಂದ ಸಕ್ಕರೆ ಕಾಯಿಲೆ ಬರುತ್ತದೆ ಎಂದು ಅನೇಕರು ತಿಳಿದುಕೊಂಡಿದ್ದಾರೆ. ಆದರೆ, ಇದು ತಪ್ಪು. ಏಕೆಂದರೆ ನಾವು ಪ್ರತಿ ದಿನ ಬೆಳಿಗ್ಗೆಯಿಂದ ರಾತ್ರಿಯವರೆಗೂ ಸೇವಿಸುವ ಎಲ್ಲಾ ಆಹಾರಗಳು ಕಾರ್ಬೋಹೈಡ್ರೇಟ್ ಎಂಬ ಸಕ್ಕರೆ ಅಂಶವನ್ನು ಹೊಂದಿರುತ್ತವೆ. ಅಂದರೆ, ನಾವು ಪ್ರತಿ ದಿನ ಸೇವಿಸುವ ಅನ್ನ, ಚಪಾತಿ, ಇಡ್ಲಿ, ವಡಾ, ದೋಸೆ ಇತರೆ ಎಲ್ಲವುಗಳಲ್ಲೂ ಶೇ.50 ಕ್ಕಿಂತ ಹೆಚ್ಚು ಸಕ್ಕರೆ ಅಂಶವಿರುತ್ತದೆ. ಈ ಆಹಾರ ಸೇವಿಸಿದಾಗ ಜೀರ್ಣಗೊಂಡು ಗ್ಲುಕೋಸ್ ರೂಪದಲ್ಲಿ ಪರಿವರ್ತನೆ ಹೊಂದಿ ರಕ್ತ ಸೇರುತ್ತದೆ. ರಕ್ತ ಸೇರಿದ ಈ ಗ್ಲುಕೋಸನ್ನು ಮೆದೋಜೀರಕ ಗ್ರಂಥಿ ಬಿಡುಗಡೆ ಮಾಡುವ ಇನ್ಸುಲಿನ್ ಎಂಬ ಹಾರ್ಮೋನು ರಕ್ತದ ಮೂಲಕ ಶರೀರದ ಎಲ್ಲಾ ಜೀವಕೋಶಗಳಿಗೆ ತಲುಪಿಸುತ್ತದೆ. ಆಗಲೇ ನಮಗೆ ಶಕ್ತಿ ಬರುತ್ತದೆ. ಈ ಗ್ಲುಕೋಸ್ ಜೀವಕೋಶಗಳಿಗೆ ತಲುಪದೇ ರಕ್ತದಲ್ಲಿಯೇ ಅಧಿಕವಾಗಿ ಸಂಗ್ರಹವಾಗುವುದನ್ನು ಸಕ್ಕರೆ ಕಾಯಿಲೆ ಎನ್ನುವರು.

ಟೈಪ್-1 ಮತ್ತು ಟೈಪ್-2 ಡಯಾಬಿಟೀಸ್ ಎಂದರೇನು?

ಕೆಲವು ಕಾರಣಗಳಿಂದ ಮೆದೋಜೀರಕ ಗ್ರಂಥಿಯು ಇನ್ಸುಲಿನ್ ಕಡಿಮೆ ಉತ್ಪಾದಿಸುತ್ತದೆ ಅಥವಾ ಉತ್ಪಾದಿಸುವುದನ್ನೆ ನಿಲ್ಲಿಸಿಬಿಡುತ್ತದೆ. ಆಗ ರಕ್ತದಲ್ಲಿರುವ ಗ್ಲುಕೋಸ್ ಉಪಯೋಗವಾಗದೆ ರಕ್ತದಲ್ಲಿಯೇ ಅಧಿಕವಾಗಿ ಉಳಿದುಬಿಡುತ್ತದೆ. ಇದನ್ನು ಟೈಪ್-1 ಡಯಾಬಿಟೀಸ್ ಎನ್ನುವರು. ಇದು ಮಕ್ಕಳಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತದೆ. ಕೆಲವರಲ್ಲಿ ಮೇದೋಜೀರಕ ಗ್ರಂಥಿ ಅಗತ್ಯ ಇನ್ಸುಲಿನ್ ಉತ್ಪಾದಿಸಿದರೂ ಗ್ಲುಕೋಸ್ ಉಪಯೋಗಿಸಿಕೊಳ್ಳಲು ಜೀವಕೋಶಗಳು ವಿಫಲವಾಗುತ್ತವೆ. ಇದರಿಂದಲೂ ರಕ್ತದಲ್ಲಿ ಅಧಿಕ ಗ್ಲುಕೋಸ್ ಸಂಗ್ರಹವಾಗುತ್ತದೆ. ಇದನ್ನೇ ಟೈಪ್-2 ಡಯಾಬಿಟೀಸ್ ಎನ್ನುವರು. ಇದು ಇಂದು ಎಲ್ಲರಲ್ಲೂ ಅತೀ ಹೆಚ್ಚಾಗಿ ಕಂಡುಬರುತ್ತಿದೆ.

ಸಕ್ಕರೆ ಕಾಯಿಲೆಯ ಲಕ್ಷಣಗಳು

ಅತಿಯಾದ ಹಸಿವು, ಪದೇ ಪದೇ ಮೂತ್ರ ವಿಸರ್ಜನೆ, ತೂಕ ಕಡಿಮೆಯಾಗುವುದು, ಗಾಯ ವಾಸಿಯಾಗಲು ವಿಳಂಬ, ಕಣ್ಣು ಮಂಜಾಗುವುದು, ಇವು ಸಕ್ಕರೆ ಕಾಯಿಲೆಯ ಪ್ರಮುಖ ಲಕ್ಷಗಳಾಗಿವೆ. ಇವುಗಳಲ್ಲಿ ಕೆಲವು ಲಕ್ಷಣಗಳು ಕಾಣದೇ ಇರಬಹುದು. ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದಲ್ಲಿ ಶುಗರ್ ಪರೀಕ್ಷೆ ಮಾಡಿಸಿಕೊಳ್ಳಿ.

ಸಕ್ಕರೆ ಕಾಯಿಲೆ ಬರಲು ಕಾರಣವೇನು?

ಪ್ರಮುಖವಾಗಿ ಎರಡು ಕಾರಣಗಳಿಂದ ಸಕ್ಕರೆ ಕಾಯಿಲೆ ಬರುತ್ತದೆ. ತಪ್ಪಾದ ಆಹಾರ ಸೇವನೆ ಮತ್ತು ತಪ್ಪಾದ ಜೀವನ ಶೈಲಿಯಿಂದ ಸಕ್ಕರೆ ಕಾಯಿಲೆ ಬರುತ್ತದೆ. ಪ್ರೊಸೆಸ್ಡ್ ಪ್ಯಾಕ್ಡ್ ಫುಡ್ ಸೇವನೆ, ಕರಿದ ಹುರಿದ ಆಹಾರ, ಅತಿಯಾದ ಆಹಾರ, ಪದೇ ಪದೇ ಆಹಾರ ಸೇವನೆ, ತೂಕ ಹೆಚ್ಚಳ, ಅನವಶ್ಯಕ ಅತಿಯಾದ ಔಷಧಿಗಳ ಸೇವನೆ, ರೋಗ ನಿರೋಧಕ ವ್ಯವಸ್ಥೆಯ ಅಸಮತೋಲನ, ಅನುವಂಶಿಕ, ಮಾನಸಿಕ ಒತ್ತಡ, ಮತ್ತು ದೈಹಿಕ ಶ್ರಮ ಇಲ್ಲದೇ ಇರುವುದು ಈ ಎಲ್ಲಾ ಕಾರಣಗಳಿಂದಲೂ ಸಕ್ಕರೆ ಕಾಯಿಲೆ ಬರುತ್ತದೆ.

ಸಕ್ಕರೆ ಕಾಯಿಲೆಯ ನಾರ್ಮಲ್ ರೇಂಜ್

ಖಾಲಿ ಹೊಟ್ಟೇಲಿ 100 ರೊಳಗೆ ಇದ್ದಲ್ಲಿ ನಾರ್ಮಲ್, ಊಟದ ನಂತರ 140 ರೊಳಗಿದ್ದಲ್ಲಿ ನಾರ್ಮಲ್ ಎಂದು ವೈದ್ಯಕೀಯ ಕ್ಷೇತ್ರವು ಪರಿಗಣಿಸಿದೆ. ನಿಮಗೆ ಖಾಲಿ ಹೊಟ್ಟೇಲಿ 100 ರಿಂದ 126 ರೊಳಗಿದ್ದಲ್ಲಿ ಮತ್ತು ಊಟದ ನಂತರ 140 ರಿಂದ 200ರ ರೊಳಗಿದ್ದಲ್ಲಿ ನಿಮಗೆ ಸಕ್ಕರೆ ಖಾಯಿಲೆ ಬರುವ ಸಂಭವವಿರುತ್ತದೆ. ಮುಂಜಾಗ್ರತೆಯಾಗಿ ನಿಮ್ಮ ಆಹಾರದಲ್ಲಿ ಬದಲಾವಣೆ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಆದರೆ, ಶುಗರ್ ಮಾತ್ರೆ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ಖಾಲಿ ಹೊಟ್ಟೇಲಿ 126ರ ಮೇಲಿದ್ದಲ್ಲಿ ಮತ್ತು ಊಟದ ನಂತರ 200 ಕ್ಕಿಂತ ಮೇಲಿದ್ದಲ್ಲಿ ನಿಮಗೆ ಸಕ್ಕರೆ ಕಾಯಿಲೆ ಇದ್ದು, ನಿಮ್ಮ ಆಹಾರದಲ್ಲಿ ಬದಲಾವಣೆ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ಜೊತೆಗೆ ಅಲ್ಪ ಪ್ರಮಾಣದ ಶುಗರ್ ಔಷಧ ತೆಗೆದುಕೊಳ್ಳಲೇಬೇಕು. (ಬರಹ :ಸೂರ್ಯಕಾಂತ ಸಜ್ಜನ್)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಎಸ್ ಎಸ್ ಎಲ್ ಸಿ ಫಲಿತಾಂಶ | ಭರತ್ ಜಿ ರಾಜ್ಯಕ್ಕೆ ಪ್ರಥಮ ; ನನ್ನ ಕ್ಷೇತ್ರದ ವಿದ್ಯಾರ್ಥಿ ಸಾಧನೆಗೆ ಸಲ್ಯೂಟ್ ಶಾಸಕ ಕೆ.ಎಸ್.ಬಸವಂತಪ್ಪ ಹರ್ಷ

Published

on

ಸುದ್ದಿದಿನ,ದಾವಣಗೆರೆ:ಇವತ್ತು ನನಗೆ ಬಹಳ ಸಂತೋಷದ ದಿನ. ನನ್ನ ಕ್ಷೇತ್ರದ ಕಬ್ಬಳ ಗ್ರಾಮದ ಒಬ್ಬ ರೈತ ಕುಟುಂಬದಿಂದ ಬಂದ ಜಿ.ಭರತ್ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 625ಕ್ಕೆ 625 ಅಂಕ ಪಡೆದಿರುವುದು ನನಗೆ ಬಹಳ ಹೆಮ್ಮೆ ತಂದಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಶಾಲೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಜಿ.ಭರತ್ ಮತ್ತು ಪೋಷಕರನ್ನು ಅಭಿನಂದಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ವಿದ್ಯಾರ್ಥಿ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಸಂತಸದ ವಿಷಯ. ವಿದ್ಯಾ ಲಕ್ಷ್ಮಿ ಶಾಲೆಯವರು ಬಹಳ ಪ್ರಾಮಾಣಿಕವಾಗಿ ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸಿ ಅವರನ್ನು ಉನ್ನತ ಮಟ್ಟಕ್ಕೆ ತರಲು ಶ್ರಮಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

ನಮಗೆ ಮೊದಲ ಆದ್ಯತೆ ದೇಗುಲಗಳಿಗಿಂತ ಶಾಲೆಗಳಿಗೆ ಇರಬೇಕು. ಇಂತಹ ಶಾಲೆಯೆಂಬ ದೇಗುಲದಿಂದ ಹೊರ ಬರುವ ಭರತ್‌ನಂತಹ ಮಕ್ಕಳು ಮುಂದಿನ ದಿನಗಳಲ್ಲಿ ಈ ದೇಶದ ಉನ್ನತ ಅಧಿಕಾರಿಗಳಾಗಿ ಅಥವಾ ವಿಜ್ಞಾನಿಗಳಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಏ 25 ರಂದು ಅಗ್ರಿಕಲ್ಚರ್ ಪ್ರಾಕ್ಟಿಕಲ್ ಪರೀಕ್ಷೆಗೆ ಉಚಿತ ತರಬೇತಿ

Published

on

ಸುದ್ದಿದಿನ,ದಾವಣಗೆರೆ : ನಗರದ ಧವನ್ ಕಾಲೇಜಿನಲ್ಲಿ Viksit47 ಅಕಾಡೆಮಿ ವತಿಯಿಂದ ಉಚಿತ ತರಬೇತಿ ಕಾರ್ಯಗಾರವನ್ನು ಇದೇ 25 ರಂದು ಆಯೋಜಿಸಲಾಗಿದೆ ಎಂದು ಮುಖ್ಯಸ್ಥರಾದ ತೇಜಸ್ ಹೆಚ್.ಎನ್ ಅವರು ತಿಳಿಸಿದ್ದಾರೆ.

ವೆಟರ್ನರಿ, ಬಿಎಸ್ಸಿ ಕೃಷಿ, ಬಿಎಸ್ಸಿ ತೋಟಗಾರಿಕೆ ಮುಂತಾದ 12 ಕೋರ್ಸುಗಳ ಪ್ರವೇಶಕ್ಕೆ ಕೃಷಿಕರ ಕೋಟಾದ ಅಡಿಯಲ್ಲಿ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ 50% ಮೀಸಲಾತಿ ಇರುತ್ತದೆ,ಈ ಮೀಸಲಾತಿಯನ್ನು ಪಡೆಯಲು KCET ಪರೀಕ್ಷೆಯ ಜೊತೆಗೆ ಕೃಷಿ ವಿಶ್ವವಿದ್ಯಾಲಯಗಳಲ್ಲಿ ನಡೆಸುವ ಪ್ರಾಯೋಗಿಕ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಈ ಉಚಿತ ಕಾರ್ಯಗಾರದಲ್ಲಿ ಅಗ್ರಿ ಪ್ರಾಕ್ಟಿಕಲ್ ಪರೀಕ್ಷೆಯ ಕುರಿತು ಸಂಪೂರ್ಣ ತರಬೇತಿಯನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ದ್ಬಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಈ ಸದುಪಯೋಗ ಪಡಿಸಿಕೊಳ್ಳಬೇಕು. ಅಕ್ಕ ಪಕ್ಕದ ಜಿಲ್ಲೆಯ ವಿದ್ಯಾರ್ಥಿಗಳು ಸಹ ಇದರ ಸದುಪಯೋಗ ಪಡಿಸಿಕೊಳ್ಳಬಹುದು,ಮತ್ತು ಕಾಲೇಜುಗಳ ಆಡಳಿತ ಮಂಡಳಿಯವರು ತಮ್ಮ ವಿದ್ಯಾರ್ಥಿಗಳನ್ನು ಈ ಉಚಿತ ಕಾರ್ಯಗಾರದಲ್ಲಿ ಭಾಗವಹಿಸುವಂತೆ ವಿನಂತಿಸಿದ್ದಾರೆ.

ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು ಮೊಬೈಲ್ ನಂ: 8217413646 ಗೆ ಕರೆಮಾಡಲು ಸೂಚಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚನ್ನಗಿರಿ | ಎಸ್ ಎಸ್ ಎಲ್ ಸಿ ಫಲಿತಾಂಶ ; ಕಬ್ಬಳ ಶಾಲೆಯ ವಿದ್ಯಾರ್ಥಿ ಭರತ್ ಜಿ ರಾಜ್ಯಕ್ಕೆ ಟಾಪರ್

Published

on

ಸುದ್ದಿದಿನ,ದಾವಣಗೆರೆ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಣಿವೆಬಿಳಚಿ ಗ್ರಾಮದ ವಿದ್ಯಾರ್ಥಿ ಭರತ್ ಜಿ. ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

625ಕ್ಕೆ 625 ಅಂಕಗಳನ್ನು ಪಡೆದ ಭರತ್ ಅವರು ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ವಿದ್ಯಾರ್ಥಿ. ರಾಜ್ಯದ ಇತರ ಐದು ವಿದ್ಯಾರ್ಥಿಗಳೊಂದಿಗೆ ಅಗ್ರಸ್ಥಾನವನ್ನು ಭರತ್ ಅವರು ಹಂಚಿಕೊಂಡಿದ್ದಾರೆ. ಭರತ್ ಅವರ ತಂದೆ ಗಿರೀಶ್ ಕೃಷಿ ಹಾಗೂ ಗುತ್ತಿಗೆ ದಾರರು, ತಾಯಿ ಶಿಲ್ಪ ಗೃಹಿಣಿ.

ಗ್ರಾಮೀಣ ಭಾಗದಿಂದ ಬಂದ ಭರತ್ ರಾಜ್ಯಕ್ಕೆ ಟಾಪರ್ ಆಗಿ ದೊಡ್ಡ ಸಾಧನೆ ಮಾಡಿದ್ದಾರೆ.ನಮ್ಮ ಶಾಲೆಯು ಎರಡು ಬಾರಿ ಜಿಲ್ಲೆಗೆ ಹಾಗೂ ಎರಡು ಬಾರಿ ತಾಲ್ಲೂಕಿಗೆ ಟಾಪ‌ರ್ ಆಗಿತ್ತು. ಇದೀಗ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯು ನಿರಂತರವಾಗಿ ಸಾಧನೆ ಮಾಡುತ್ತಿದ್ದು ಈ ಬಾರಿಯೂ ಶೇ 100ರಷ್ಟು ಫಲಿತಾಂಶ ನೀಡಿದೆ ಎಂದು ಮುಖ್ಯ ಶಿಕ್ಷಕಿ ಲಕ್ಷ್ಮೀದೇವಿ ಎ.ಎನ್ ಹರ್ಷ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending