Connect with us

ದಿನದ ಸುದ್ದಿ

ರಿವರ್ ಕ್ರಾಸಿಂಗ್ ತರಬೇತಿ ; ಬೋಟ್ ಮುಳುಗಿ ಇಬ್ಬರು ಕಮಾಂಡೋಗಳು ಸಾವು

Published

on

ಸುದ್ದಿದಿನಡೆಸ್ಕ್:ನೆರೆಯ ಮಹಾರಾಷ್ಟ್ರದ ತಿಲಾರಿ ಡ್ಯಾಂ ನಲ್ಲಿ ರಿವರ್ ಕ್ರಾಸಿಂಗ್ ತರಬೇತಿಗೆ ಹೋಗಿದ್ದ ಬೆಳಗಾವಿ ಕಮಾಂಡೋ ಸೆಂಟರ್ ನ ಇಬ್ಬರು ಕಮಾಂಡೋಗಳು ಬೋಟ್ ಮುಳುಗಿ ಮೃತಪಟ್ಟ ಘಟನೆ ನಿನ್ನೆ ಸಂಜೆ ಸಂಭವಿಸಿದೆ.

ಬೆಳಗಾವಿ ಜೆಎಲ್ ವಿಂಗ್ ಕಮಾಂಡೋ ತರಬೇತಿ ಕೇಂದ್ರದ ರಾಜಸ್ಥಾನ ಮೂಲದ ವಿಜಯಕುಮಾರ ದಿನವಾಲ್ ಹಾಗೂ ಪಶ್ಚಿಮ ಬಂಗಾಲದ ದಿವಾಕರ ರಾಯ್ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನ್ಯಾಕ್ ಗ್ರೇಡ್ ನೀಡಲು ಲಂಚ ಸ್ವೀಕಾರ ; ದಾವಣಗೆರೆ ವಿವಿ ಪ್ರಾಧ್ಯಾಪಕಿ ಬಂಧನ

Published

on

ಸುದ್ದಿದಿನ,ದಾವಣಗೆರೆ: ಆಂಧ್ರಪ್ರದೇಶದ ಗುಂಟೂರಿನಲ್ಲಿ ಕೆಎಲ್‌ಇಎಫ್‌ ವಿವಿಗೆ ನ್ಯಾಕ್ ಕಮಿಟಿಯಿಂದ ಎ++ ಗ್ರೇಡ್ ನೀಡುವಲ್ಲಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಸೇರಿದಂತೆ 10 ಜನರನ್ನು ಸಿಬಿಐ ಬಂಧಿಸಿದೆ.

ನ್ಯಾಕ್ ತಂಡದ ಅಧ್ಯಕ್ಷರು ಮತ್ತು ಜೆ ಎನ್ ಯು ಪ್ರೊಫೆಸರ್ ಸೇರಿದಂತೆ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಸೇರಿದಂತೆ 10 ಸದಸ್ಯರನ್ನು ಬಂಧಿಸಲಾಗಿದೆ.

ಗಾಯತ್ರಿ ದೇವರಾಜ್ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮೈಕ್ರೋ ಬಯೋಲಜಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮೇಲೆ ಭ್ರಷ್ಟಾಚಾರ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಂದುವರಿದಿದೆ.

ಪ್ರಕರಣದ ತನಿಖೆ ನಡೆಸುತ್ತಿರುವಾಗ, ಚೆನ್ನೈ, ಬೆಂಗಳೂರು, ವಿಜಯವಾಡ, ಪಲಮು, ಸಂಬಲ್‌ಪುರ, ಭೋಪಾಲ್, ಬಿಲಾಸ್‌ಪುರ, ಗೌತಮ್ ಬುದ್ಧ ನಗರ ಮತ್ತು ನವದೆಹಲಿ ಸೇರಿದಂತೆ ದೇಶಾದ್ಯಂತ 20 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತು. ಈ ವೇಳೆ 37 ಲಕ್ಷ ರೂಪಾಯಿ ನಗದು, 6 ಲ್ಯಾಪ್‌ಟಾಪ್‌ಗಳು, ಐಫೋನ್ 16 ಪ್ರೊ, ಚಿನ್ನದ ನಾಣ್ಯ ಸೇರಿದಂತೆ ಹಲವು ದಾಖಲೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂತಾರಾಷ್ಟ್ರೀಯ, ನವೋದಯ ಮಟ್ಟದ ಉತ್ಕೃಷ್ಟ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿಯೂ ಸಿಗಬೇಕು: ಜಿ. ಬಿ. ವಿನಯ್ ಕುಮಾರ್

Published

on

ಸುದ್ದಿದಿನ,ದಾವಣಗೆರೆ:ಅಂತಾರಾಷ್ಟ್ರೀಯ, ನವೋದಯ ಶಾಲೆಗಳಲ್ಲಿ ಸಿಗುವಂಥ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿಯೂ ಸಿಗುವಂತಾಗಬೇಕು ಎಂಬ ದೊಡ್ಡ ಕನಸು ಹೊಂದಿದ್ದೇನೆ. ಇದಕ್ಕಾಗಿ ಸಾಕಷ್ಟು ಪ್ರಯತ್ನಪಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಬೇಕು ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್ ಆಶಯ ವ್ಯಕ್ತಪಡಿಸಿದರು.

ದಾವಣಗೆರೆ ತಾಲೂಕಿನ ಕಕ್ಕರಗೊಳ್ಳದಲ್ಲಿ ಏರ್ಪಡಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಗಳು ಮೇಲ್ದರ್ಜೆಗೇರಬೇಕು. ಸರ್ಕಾರವು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉತ್ಕೃಷ್ಟದ ಶಿಕ್ಷಣ ಸಿಗಬೇಕು ಎಂದು ಹೇಳಿದರು.

ಉನ್ನತ ಸ್ಥಾನಕ್ಕೆ ಹೋಗಬೇಕೆಂಬುದು ಪ್ರತಿಷ್ಠೆಯ ವಿಚಾರ ಅಲ್ಲ. ದೊಡ್ಡಮಟ್ಟದಲ್ಲಿ ಜನರಿಗೆ ಸೇವೆ ಮಾಡಲು. ಕರ್ನಾಟಕದಲ್ಲಿ ಇನ್ ಸೈಟ್ಸ್ ಸಂಸ್ಥೆಯ ಆರು ವಿದ್ಯಾರ್ಥಿಗಳು ಡಿಸಿ, ಸಿಇಒ ಆಗಿದ್ದಾರೆ. ಎಸ್ಪಿ, ಎಎಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಸಂಸ್ಥೆಗೆ ಐಎಎಸ್, ಐಪಿಎಸ್ ತಯಾರಿಸುವ ಶಕ್ತಿ ಇದೆ. ಜೀವನ ಸಾರ್ಥಕಗೊಳಿಸಬೇಕಾದರೆ ಉನ್ನತ ಸ್ಥಾನಕ್ಕೆ ಹೋಗಬೇಕು. ಇದಕ್ಕೆ ಸತತ ಪರಿಶ್ರಮ, ಅಧ್ಯಯನ, ಪುಸ್ತಕ ಓದುವ ಹವ್ಯಾಸ, ಸಂಸ್ಕಾರ ಬೇಕು ಎಂದು ಕಿವಿಮಾತು ಹೇಳಿದರು.

ಪೋಷಕರು ಯಾವುದೇ ಕಾರಣಕ್ಕೂ ಮನೆಯಲ್ಲಿನ ಸಮಸ್ಯೆಗಳ ಬಗ್ಗೆ ಮಕ್ಕಳ ಹೇಳಬೇಡಿ. ಬಡತನವಿದೆ, ಹಣವಿಲ್ಲ ಎನ್ನಬೇಡಿ. ಸಾಧ್ಯವಾದಷ್ಟು ಒಳ್ಳೆಯ ಶಿಕ್ಷಣ ನೀಡುವ ಕಡೆಗೆ ಗಮನ ಕೊಡಿ. ಪಠ್ಯ ಶಿಕ್ಷಣ ಮಾತ್ರವಲ್ಲ, ಪಠ್ಯೇತರ ಶಿಕ್ಷಣದತ್ತಲೂ ಕಾಳಜಿ ವಹಿಸಿ. ಪುಸ್ತಕ ಓದುವ ಹವ್ಯಾಸ ನೀವೂ ಬೆಳೆಸಿಕೊಳ್ಳಿ. ಮಕ್ಕಳಲ್ಲಿಯೂ ರೂಢಿಸಿ. ಆಗ ಭಾರೀ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ. ನಾನು ಹತ್ತನೇ ತರಗತಿಯವರೆಗೆ ಸಾಮಾನ್ಯ ವಿದ್ಯಾರ್ಥಿ. ಐಎಎಸ್ ಎರಡು ಅಂಕಗಳಲ್ಲಿ ತಪ್ಪಿ ಹೋಯಿತು. ಪಿಡಿಒ ಆಗಿದ್ದೆ, ಕೆಎಎಸ್ ಪಾಸಾಗಿದ್ದೆ. ಸೋತಾಗ ಸುಮ್ಮನೆ ಕೂರುತ್ತಿರಲಿಲ್ಲ. ದೊಡ್ಡ ಪ್ರಯತ್ನ ಮಾಡುತ್ತಿದೆ. ಸೋತಾಗ ಕೆಲವರು ಸುಮ್ಮನಾಗಿಬಿಡುತ್ತಾರೆ. ಆದ್ರೆ, ಸುಮ್ಮನಾಗದೇ ದೊಡ್ಡ ಕನಸು ಕಾಣಬೇಕು. ಆಗ ಜೀವನದಲ್ಲಿ ಅಂದುಕೊಂಡಿದ್ದನ್ನು
ಸಾಧಿಸಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.

ಮಕ್ಕಳಿಗೆ ಬೈಯ್ಯಬೇಡಿ. ಜೀವನದಲ್ಲಿ ಸವಾಲು ಎದುರಿಸುವ ಗುಣ ಬೆಳೆಸಿ. ಭವಿಷ್ಯದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಅವರಲ್ಲಿ ಬರುತ್ತದೆ. ಪ್ರತಿಯೊಬ್ಬರೂ ಮೊದಲ ಪ್ರಯತ್ನದಲ್ಲಿ ಯಶಸ್ವಿ ಆಗುವುದು ಕಡಿಮೆ. ಸೋತಾಗ ಧೈರ್ಯ ತುಂಬಿ. ಮರಳಿ ಪ್ರಯತ್ನವ ಮಾಡು ಎಂಬ ಧೈರ್ಯ ಹೇಳಿ. ಡಾಕ್ಟರ್, ಎಂಜಿನಿಯರ್ ಆಗಿ ಎಂಬ ಒತ್ತಡ ಹೇರಬೇಡಿ. ಒಳ್ಳೆಯ ವ್ಯಕ್ತಿಯಾಗು, ಒಳ್ಳೆಯ ಮಾನವನಾಗು ಎಂಬ ಸಂದೇಶ ಹೇಳಿಕೊಡಿ. ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಮೂಡಿಸಿದರೆ ಭವಿಷ್ಯದಲ್ಲಿ ಅತ್ಯುತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ತಿಳಿಸಿದರು.

ಶಾಲೆಯ ಮುಖ್ಯೋಪಾಧ್ಯಾಯರು ಹಲವು ಸಮಸ್ಯೆಗಳಿದ್ದು, ಮನವಿ ನೀಡಿದ್ದಾರೆ. ಶಾಲೆಗೆ ಸುಣ್ಣಬಣ್ಣ ಬಳಿಸುವುದು, ಸ್ಮಾರ್ಟ್ ಕ್ಲಾಸ್, ಧ್ವನಿವರ್ಧಕ ಬದಲಾವಣೆ, ಆಟದ ಮೈದಾನ ಸೇರಿದಂತೆ ಇತರೆ ಬೇಡಿಕೆ ನೀಡಿದ್ದಾರೆ. ನಾನು ಎರಡು ಪ್ರಮುಖ ವಿಚಾರಗಳನ್ನು ಆಯ್ಕೆ ಮಾಡಿಕೊಂಡು ಆದಷ್ಟು ಬೇಗ ಈಡೇರಿಸುತ್ತೇನೆ. ಮಕ್ಕಳಿಗೆ ಕೈಯಲ್ಲಾದಷ್ಟು ಸಹಾಯ ಮಾಡುತ್ತೇನೆ. ಮಕ್ಕಳು ದೊಡ್ಡ ಕನಸು ಕಾಣುವುದನ್ನು ರೂಢಿಸಿಕೊಳ್ಳಬೇಕು. ಕಕ್ಕರಗೊಳ್ಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾವುದೇ ಶಾಲೆಗೂ ಕಡಿಮೆ ಇಲ್ಲ ಎಂಬಂತೆ ವಾರ್ಷಿಕೋತ್ಸವ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.

ಮಕ್ಕಳೂ ಚಿಕ್ಕ ವಯಸ್ಸಿನಿಂದಲೇ ಐಎಎಸ್, ಐಪಿಎಸ್, ದೊಡ್ಡ ಉದ್ಯಮಿಗಳಾಗುತ್ತೇವೆ ಎಂಬ ಕನಸು ಕಂಡರೆ ಮುಂದೊಂದು ದಿನ ನನಸಾಗುವ ಸಮಯ ಬರುತ್ತದೆ. ಇಂದಿನಿಂದಲೇ ದೃಢ ನಿಶ್ಚಯ ಮಾಡಿಕೊಳ್ಳಿ. ಸತತವಾಗಿ ಪ್ರಯತ್ನ ಮಾಡಿ. ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡು ಹೆಚ್ಚಾಗಿ ಪುಸ್ತಕ ಅಧ್ಯಯನ ಮಾಡಿದರೆ ಕಷ್ಟವಾಗದು ಎಂದು ಜಿ. ಬಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟರು.

ಆವರಗೊಳ್ಳದ ಪುರವರ್ಗ ಹಿರೇಮಠ ಶ್ರೀಕ್ಷೇತ್ರದ ಶ್ರೀ ಓಂಕಾರೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸನಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಲೋಕೇಶ್ ಒಡೆಯರ್, ಕೆ. ಜಿ. ಶಾಂತರಾಜ್, ಪುಷ್ಪ ಕೆ. ಎನ್. ಸದಾಶಿವಪ್ಪ, ಆಶಾ ಸಿದ್ದೇಶ್, ಗುತ್ಯಪ್ಪ, ಆರ್. ಡಿ. ಕುಲಕರ್ಣಿ, ಹದಡಿ ಯಲ್ಲಪ್ಪ, ಹಂಪನೂರು ಪಾಲಾಕ್ಷಪ್ಪ, ಅಂಗಡಿ ಚಮನ್ ಸಾಬ್, ಮುಸ್ತು ಎಸ್. ಮತ್ತಿತರರು ಹಾಜರಿದ್ದರು.

ಸೋತಿದ್ದೇನೆ, ಧೃತಿಗೆಟ್ಟಿಲ್ಲ

ಲೋಕಸಭೆ ಚುನಾವಣೆಯಲ್ಲಿ ಸೋತಿರಬಹುದು. ಹಾಗೆಂದ ಮಾತ್ರಕ್ಕೆ ಧೃತಿಗೆಟ್ಟಿಲ್ಲ. ಮುಂದೊಂದು ದಿನ ಎಂಎಲ್ ಆ ಆಗಬಹುದು. ಸಚಿವರಾಗಬಹುದು. ಆಗುತ್ತೋ ಇಲ್ಲವೋ ಗೊತ್ತಿಲ್ಲ. ಇದು ಸಾಧ್ಯವಾಗುತ್ತದೆ ಎಂಬ ಆತ್ಮವಿಶ್ವಾಸ ಇದೆ. ಶಿಕ್ಷಣ ಸಚಿವರಾಗಬೇಕೆಂಬ ಆಸೆ ಇದೆ. ಎಲ್ಲವನ್ನೂ ಕಾಲವೇ ನಿರ್ಧರಿಸಲಿದೆ ಎಂದು ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಬೈಕ್ ರ್ಯಾಲಿ

Published

on

  • ವರದಿ : ಸಿ ಜಗದೀಶ್ ಕೂಲಂಬಿ

ಸುದ್ದಿದಿನ,ದಾವಣಗೆರೆ:ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ಇದೆ ಫೆಬ್ರವರಿ 04 ರಿಂದ 12 ರವರೆಗೆ ನಡೆಯಲಿರುವ 76 ನೇ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ಭರಮಸಾಗರದವರೆಗೆ ಬೃಹತ್ ಬೈಕ್ ರ್ಯಾಲಿಯ ಮೂಲಕ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾದೀಶ ಶ್ರೀ ತರಳಬಾಳು ಜಗದ್ಗುರು 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಕರೆತರಲಾಗುವುದು.

ಇಂದು ಭರಮಸಾಗರದ ನಿರಂಜನ ಮೂರ್ತಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ತರಳಬಾಳು ಶಿವಸೈನ್ಯ ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯಲ್ಲಿ 76ನೇ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಬೈಕ್ ರ್ಯಾಲಿಯನ್ನು ಶ್ರೀ ತರಳಬಾಳು ಶಿವಸೈನ್ಯ ರಾಜ್ಯ ಘಟಕದ ನೇತೃತ್ವದಲ್ಲಿ ಹಮ್ಮಿಕೊಂಡು ಆ ಮೂಲಕ ಹುಣ್ಣಿಮೆಗೆ ಶುಭ ಕೋರಬೇಕೆಂದು ತೀರ್ಮಾನಿಸಲಾಯಿತು.

ಬೈಕ್ ರ್ಯಾಲಿಯು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆಯಿಂದ ಫೆ 4 ರ ಬೆಳಗ್ಗೆ 10 ಗಂಟೆಗೆ ಪ್ರಾರಂಭಗೊಂಡು ಭರಮಸಾಗರ ಹೋಬಳಿಯ ಸುಮಾರು 30 ಹಳ್ಳಿಗಳ ಮೂಲಕ ಸಾಗಿ ಸುಮಾರು 5000 ಬೈಕ್ ರ್ಯಾಲಿಯ ಮೂಲಕ ಸಂಜೆ ನಾಲ್ಕು ಗಂಟೆಗೆ ಭರಮಸಾಗರದಲ್ಲಿ ನಡೆಯಲಿರುವ ಶ್ರೀ ತರಳಬಾಳು ಹುಣ್ಣಿಮೆ ಮಹೋತ್ಸವದ ಮಹಾ ಮಂಟಪಕ್ಕೆ ತಲುಪುವುದು.

ಭರಮಸಾಗರ ಹೋಬಳಿಯ ಭಕ್ತರ ಆಶಯದಂತೆ ಅಂದು ಸಂಜೆ ನಾಲ್ಕು ಗಂಟೆಗೆ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ತೆಪ್ಪೋತ್ಸವ ಕಾರ್ಯಕ್ರಮವನ್ನು ಭರಮಸಾಗರದ ಕೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಸರ್ವ ಸಮಾಜದ ಬಾಂಧವರು ಭಾಗವಹಿಸಿ ಬೈಕ್ ರ್ಯಾಲಿಯನ್ನು ಹಾಗೂ 76ನೇ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ತರಳಬಾಳು ಶಿವಸೈನ್ಯ ರಾಜ್ಯ ಘಟಕ ದಾವಣಗೆರೆ ಇವರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿಕೊಂಡಿದ್ದಾರೆ.

ಸಭೆಯಲ್ಲಿ ಶಶಿಧರ ಹೆಮ್ಮನ ಬೇತೂರು, ಮೋಹನ್ ಸಿರಿಗೆರೆ, ಕುಮಾರ್ ಮೆಳ್ಳೆ ಕಟ್ಟೆ, ಬಸವರಾಜ್ ಸಿರಿಗೆರೆ, ಶೈಲೇಶ್ ಚೌಲಹಳ್ಳಿ, ಶ್ರೀನಿವಾಸ್ ರಾಮಘಟ್ಟ, ಸಿದ್ದೇಶ್ ನಂದಿ ಕಂಬ, ರಾಕೇಶ್ ಸಾತಿ, ಲಿಂಗರಾಜ್ ನಾಗನೂರು, ಅಶೋಕ್ ಹೊನ್ನ ನಾಯಕನಹಳ್ಳಿ, ಮಲ್ಲಿಕಾರ್ಜುನ್ ಮೆಳ್ಳೆಕಟ್ಟೆ, ಸಂತೋಷ್ ಗಂಗನಕಟ್ಟೆ, ಮತ್ತಿತರ ಪದಾಧಿಕಾರಿಗಳು ಹಾಗೂ ಗಣ್ಯರು ಹಾಜರಿದ್ದರು.

ವಿಶೇಷ ಸೂಚನೆ : ಫೆಬ್ರವರಿ 4 ರಿಂದ 12 ರವರೆಗೆ ನಡೆಯುವ ತರಳಬಾಳು ಹುಣ್ಣಿಮೆಗೆ ದಾವಣಗೆರೆಯಿಂದ ಭರಮಸಾಗರಕ್ಕೆ ತೆರಳುವ ಭಕ್ತಾದಿಗಳಿಗೆ ಹೆಬ್ಬಾಳು ಟೋಲ್ ನಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿರುತ್ತದೆ. ಭಕ್ತರು ತಮ್ಮ ವಾಹನಗಳಿಗೆ ಶಿವ ಧ್ವಜ ಕಟ್ಟಿಕೊಂಡವರಿಗೆ ಉಚಿತ ಪ್ರವೇಶವಿರುತ್ತದೆ.

ದಾವಣಗೆರೆ ಜಿಲ್ಲಾ ಪತ್ರಿಕಾ ಹಾಗೂ ಮಾಧ್ಯಮದ ಎಲ್ಲಾ ವರದಿಗಾರ ಮಿತ್ರರು ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮದ ಸುದ್ದಿಯನ್ನು ಮಾಡುವುದರ ಮೂಲಕ ನಾಡಿನಾದ್ಯಂತ ಜನರಿಗೆ ತಲುಪಿಸಬೇಕೆಂದು ಕೋರಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending