ದಿನದ ಸುದ್ದಿ
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಜಗಳೂರು ಕಾಟಮ್ಮ ; ಸಾಧನೆಯ ಹೆಗ್ಗುರುತುಗಳು
- ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು
ದಾವಣಗೆರೆ ಜಿಲ್ಲೆಯ ಜಗಳೂರು ಸೀಮೆ ಬುಡಕಟ್ಟು ಸಮುದಾಯಗಳ ನೆಲೆವೀಡು, ತಾಜಾ ಜಾನಪದ ಸಂಸ್ಕೃತಿಯು ಹಾಸು ಹೊಕ್ಕಾದ ಸಮೃದ್ಧ ಹೊನ್ನ ಕಣಜ.
ಜಗಳೂರು ತಾಲೂಕಿನ ಹೆಗ್ಗುರುತಿನ ಊರಾದ ತೋರಣಗಟ್ಟೆಯ ಗೌಡ್ರ ಚಿಕ್ಕಪ್ಪ ಮತ್ತು ಗೌರಮ್ಮ ಇವರ ಪುತ್ರಿಯಾದ ಕಾಟಮ್ಮ ತನ್ನ ಬಾಲ್ಯದಲ್ಲೇ ಊರಿನ ಪರಿಸರಕ್ಕನುಗುಣವಾಗಿ ಹೊಲಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ, ಊರ ದೇವರುಗಳ ಪರುವು ಉತ್ಸವಗಳನ್ನು ಕಣ್ಣುತುಂಬಿಸಿಕೊಳ್ಳುವಾಗ ವಾರಗಟ್ಟಲೆ ಜರುಗುತಿದ್ದ ಮದುವೆ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುವಾಗ ಊರಿನ ಹಿರಿಯರು ಹಾಡುತಿದ್ದ ಸೋಬಾನೆ ಪದಗಳು ದೇವರ ಪದಗಳು ಕುಣಿತ ಮಣಿತಗಳ ಪದಗಳನ್ನು ಚಿತ್ತವಿಟ್ಟು ಆಲಿಸುತ್ತಲೇ ತಾನೂ ಅವುಗಳನ್ನು ಅಸ್ವಾದಿಸಿಕೊಂಡು ಸಹವರ್ತಿಯಾಗಿ ದನಿ ಸೇರಿಸಲು ಆರಂಭಿಸಿದರು.
ಹುಟ್ಟಿದ ಊರಿನಲ್ಲಿಯೇ ಬಾಲಪ್ಪನವರನ್ನು ವಿವಾಹವಾದ ಕಾಟಮ್ಮ ನಾಲ್ಕು ಮಕ್ಕಳ ತಾಯಿಯಾಗಿ ತುಂಬು ಸಂಸಾರವನ್ನು ನಿರ್ವಹಿಸುತ್ತಲೇ ತನ್ನ ಎದೆಯೊಳಗಿನ ಪದಗಳಿಗೆ ದನಿಯಾಗುತ್ತಾ ಬಂದರು. ತನ್ನ ಸೋದರಿ ಶಾಂತ ವೀರಮ್ಮ ಹಾಗೂ ಸಮೀಪದ ಬಂದುಗಳಾದ ಬಾಲಮ್ಮ, ಬಡಮ್ಮ ಮುಂತಾದವರ ತಂಡ ಕಟ್ಟಿಕೊಂಡು ಮದ್ಯ ಕರ್ನಾಟಕದ ಪ್ರಸಿದ್ಧ ಜಾನಪದ ಸಾಂಸ್ಕೃತಿಕ ವೀರರಾದ ಕಾಟಣ್ಣ, ದೊಡ್ಡಣ್ಣ, ಬಡಣ್ಣ, ಚಿಕ್ಕಣ್ಣ ಇವರ ಬಗ್ಗೆ ಸುದೀರ್ಘ ಕಥನ ಕಾವ್ಯಗಳನ್ನು ಕಟ್ಟಿ ನಿರರ್ಗಳವಾಗಿ ಹಾಡಬಲ್ಲವರಾಗಿದ್ದಾರೆ. ವಿಶೇಷವಾಗಿ ದಾವಣಗೆರೆ ಸೀಮೆಯಲ್ಲಿ ‘ಮಳೆ ಮಲ್ಲಪ್ಪ’ ನೆಂದೇ ಖ್ಯಾತನಾಮರಾಗಿ ಆರಾಧನೆಗೆ ಒಳಗಾಗಿರುವ ಅವಧೂತ ಪರಂಪರೆಯ ‘ಮೆಲ್ಲಜ್ಜಿ’ ನ ಬಗ್ಗೆ ಈ ತಾಯಿ ಕಟ್ಟಿಕೊಡುವ ಪದಗಳು ಬಹು ಪ್ರಸಿದ್ದಿ ಪಡೆದಿವೆ.
ಮೆಲ್ಲಜ್ಜ ಸುಮಾರು ನೂರಾ ಐವತ್ತು ವರ್ಷಗಳ ಹಿಂದೆ ತೋರಣಗಟ್ಟೆಯಲ್ಲಿ ಎಲ್ಲರಂತೆ ಬದುಕಿ ಬಾಳಿದ ವ್ಯಕ್ತಿ. ಆದರೆ ತನ್ನ ವಿಶಿಷ್ಟ ಆಧ್ಯಾತ್ಮಿಕ ಮನೋಪ್ರವೃತ್ತಿಯ ಅವಧೂತನಾಗಿ, ಹವಮಾನ ತಜ್ಞನಾಗಿ ‘ ಮಳೆ ಮೆಲ್ಲಜ್ಜ ‘ ಎಂದು ಪ್ರಸಿದ್ದಿ ಪಡೆದು ಮರಣೋತ್ತರದಲ್ಲಿ ಜನ ಸಮುದಾಯದಿಂದ ಸಂಗತಿಯಾಗಿದೆ.ಗಾಗುತ್ತಾನೆ. ಇಂತಹ ಅಸಾಮಾನ್ಯ ವ್ಯಕ್ತಿತ್ವದ ಮೆಲ್ಲಜ್ಜನ ಕುರಿತಂತೆ ಪದಗಾತಿ ಕಾಟಮ್ಮ ಸುಧೀರ್ಘವಾಗಿ ಕಥನ ಕಟ್ಟಿ ಹಾಡುವ ಸೋಪಜ್ಞ ಕಲೆಗಾರಿಕೆಯನ್ನು ಹೊಂದಿದವರಾಗಿದ್ದಾರೆ. ಜಗಳೂರು ಸೀಮೆಯಲ್ಲಿ ಈ ಕಥನ ಮನೆಮಾತಾಗಿದೆ.
ಜಗಳೂರು ಸೀಮೆಯಲ್ಲಿ ಯಾರದೇ ಮದುವೆ ಸಂಬಂದಿತ ಕಾರ್ಯಗಳಲ್ಲಿ ಶ್ರೀಮತಿ ಕಾಟಮ್ಮ ನವರ ಉಪಸ್ಥಿತಿ, ಸೋಬಾನೆ ಪದಗಾರಿಕೆ ಇರಲೇಬೇಕು. ಅಷ್ಟರಮಟ್ಟಿಗೆ ಇವರು ಸುಪ್ರಸಿದ್ಧರಾಗಿದ್ದಾರೆ.
ಮದುವೆಯ ಹಸೆ ಚಿತ್ತಾರ ಬಿಡಿಸುವಲ್ಲಿ ಸಿದ್ಧ ಹಸ್ತರು. ಬುಡಕಟ್ಟು ಸಮುದಾಯಗಳ ಮದುವೆಗಳಲ್ಲಿ ಹಾಕಲಾಗುವ ಹಾಲಸ್ತ್ರ ಹಸೆ, ಒಳ್ಳಕ್ಕಿ ಹಸೆ, ದೇವರ ಹಸೆ, ಬೂವದ ಹಸೆ . ಅರಿಣಿ ಹಸೆ . ಅಂದ್ರದ ಹಸೆ ಮುಂತಾದ ಹಸೆಗಳನ್ನು ಕರಿಕಂಬಳಿಹಾಸು ಮೇಲೆ ತಾನೇ ಬಿಡಿಸಿ ಆಯಾ ಸಂದರ್ಭಗಳನ್ನು ಮಧುರವಾಗಿ ಹಾಡುವ ನಿಪುಣೆಯಾಗಿದ್ದಾರೆ.
ಸಾಮಾನ್ಯವಾಗಿ ಹಸೆ ಬಿಡಿಸುವವರಿಗೆ ಹಾಡಲು ಬರುವುದಿಲ್ಲ. ಹಾಡುವವರು ಹಸೆ ಬಿಡಿಸುವುದಿಲ್ಲ. ಆದರೆ ಕಾಟಮ್ಮ ಇದಕ್ಕೆ ಭಿನ್ನ. ಎರಡನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಕಲಾಚತುರೆ. ಸುದೀರ್ಘ ನಲವತ್ತು ವರ್ಷಗಳಿಂದ ನಿರಂತರವಾಗಿ ಪದಗಂಗೆಯನ್ನು ಹರಿಸುತ್ತಿರುವ ಎಲೆಮರೆಯ ಪ್ರತಿಭೆ ಕಾಟಮ್ಮನವರನ್ನು ಯಾವ ಸಂಘ ಸಂಸ್ಥೆಗಳು ಗುರುತಿಸದೆಹೋದ ಈ ಹೊತ್ತಿನಲ್ಲಿ ಮೊದಲ ಬಾರಿಗೆ ಕರ್ನಾಟಕ ಜಾನಪದ ಅಕಾಡೆಮಿ ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ(ಬರಹ: ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ “ಕುಕಿಂಗ್ ವಿಥೌಟ್ ಫೈರ್” ಎಂಬ ಬೆಂಕಿ ರಹಿತ ಆಹಾರ ತಯಾರಿ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹಲವಾರು ತಂಡಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಅಂಗವಾಗಿ ಆಹಾರ ಮೇಳವೂ ಏರ್ಪಡಿಸಲಾಯಿತು. ವಿದ್ಯಾರ್ಥಿನಿಯರು ಕಾರಟ್ ಹಲ್ವಾ, ಫ್ರೂಟ್ ಸಲಾಡ್, ಚುರಿ ಮುರಿ, ಮೊಸರು ಅವಲಕ್ಕಿ, ವಿವಿಧ ರುಚಿಯ ಜ್ಯೂಸ್ಗಳು, ಕೊಕೊನೆಟ್ ಬರ್ಫಿ, ಕುಕುಂಬರ್ ಬೋಟ್, ಟೊಮೇಟೊ ಚಾಟ್, ಆಪಲ್ ಪೇಡ ಮತ್ತು ಅವಲಕ್ಕಿ ಚಿತ್ರಾನ್ನ ಸೇರಿದಂತೆ ಹಲವಾರು ಪೌಷ್ಟಿಕ ಹಾಗೂ ರುಚಿಕರ ಆಹಾರಗಳನ್ನು ತಯಾರಿಸಿ ಪ್ರದರ್ಶನೆ ಮತ್ತು ಮಾರಾಟ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡು ಯಶಸ್ವಿ ಕಾರ್ಯಕ್ರಮವನ್ನಾಗಿ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
ಸುದ್ದಿದಿನ,ದಾವಣಗೆರೆ: ಜಿಲ್ಲೆಯ 5 ರಿಂದ 7 ವರ್ಷ ಹಾಗೂ 15 ರಿಂದ 17 ವರ್ಷದ ವಯೋಮಿತಿಯ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ ಅಪ್ಡೇಟ್ (Mandatory Biometric Update) ಮಾಡಿಸಲು ಜಿಲ್ಲಾಡಳಿತವು ವಿಶೇಷ ಅವಕಾಶ ಕಲ್ಪಿಸಿದೆ. ಜಿಲ್ಲೆಯ ಎಲ್ಲಾ ಆಧಾರ್ ಕೇಂದ್ರಗಳಲ್ಲಿ ಸೆಪ್ಟೆಂಬರ್ 30, 2026 ರವರೆಗೆ ಈ ಸೇವೆಯು ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ.
ಆಧಾರ್ ನಿಯಮಗಳ ಪ್ರಕಾರ, ಮಕ್ಕಳಿಗೆ 5 ಮತ್ತು 15 ವರ್ಷ ತುಂಬಿದಾಗ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ. ಈ ನವೀಕರಣದಿಂದ ಶಾಲಾ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ವಿದ್ಯಾರ್ಥಿ ವೇತನ ಹಾಗೂ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ.
ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಮತ್ತು ಪೂರಕ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜಿಲ್ಲೆಯ ಎಲ್ಲಾ ಪೋಷಕರು ಈ ಜವಾಬ್ದಾರಿಯನ್ನು ಅರಿತು, ನಿಗದಿತ ಅವಧಿಯೊಳಗೆ ತಮ್ಮ ಮಕ್ಕಳ ಆಧಾರ್ ನವೀಕರಿಸುವ ಮೂಲಕ ಸರ್ಕಾರದ ಯೋಜನೆಗಳು ತಲುಪಲು ಸಹಕರಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
ಸುದ್ದಿದಿನ,ದಾವಣಗೆರೆ: ನಗರದ ಎನ್ಆರ್ಎಚ್ ಸೈಕಲ್ ಮಾರ್ಟ್ ಮಾಲೀಕ, ದಾವಣಗೆರೆ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ನ ನಾಯಕನಾಗಿದ್ದ ಎನ್.ಆರ್.ಎಚ್.ರಮೇಶ ಇಲ್ಲಿನ ಕೆಟಿಜೆ ನಗರದ 15ನೇ ಕ್ರಾಸ್, 2ನೇ ಮೇನ್ನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಸಂಜನೆ ನಿಧನರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಓರ್ವ ಸಹೋದರ, ಮೂವರು ಸಹೋದರಿಯರು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ. ದಾವಣಗೆರೆ ಗಾಂಧಿ ನಗರ ಸಮೀಪದ ವೀರಶೈವ ರುದ್ರಭೂಮಿಯಲ್ಲಿ ಮೇ.7ರಂದು ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
90ರ ದಶಕದಲ್ಲಿ ದಾವಣಗೆರೆ ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯ, ಪಂದ್ಯಾವಳಿಗಳಲ್ಲಿ ಭರ್ಜರಿ ಸಿಕ್ಸರ್ ಭಾರಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಆಟಗಾರನಾಗಿ ರಮೇಶ ಸಾಧನೆ ಮಾಡಿದ್ದರು. ಎನ್ಆರ್ಎಚ್ ರಮೇಶ ನಿಧನಕ್ಕೆ ಎಫ್ಸಿಸಿ ತಂಡದ ಹಿರಿಯ ಆಟಗಾರರು, ದಾವಣಗೆರೆ ಕ್ರಿಕೆಟ್ ಕ್ಲಬ್ ಸೇರಿದಂತೆ ವಿವಿಧ ಕ್ರಿಕೆಟ್ ಕ್ಲಬ್ಗಳ ಹಿರಿಯ ಆಟಗಾರರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ4 days agoಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು
-
ದಿನದ ಸುದ್ದಿ7 days agoದಾವಣಗೆರೆ | ದೇಗುಲಗಳಲ್ಲಿ ನಿಧಿ ಶೋಧನೆ ಯತ್ನ ; ಆರು ಜನರ ಬಂಧನ
-
ದಿನದ ಸುದ್ದಿ3 days agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ
-
ದಿನದ ಸುದ್ದಿ2 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ2 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ಕ್ರೀಡೆ2 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ

