ದಿನದ ಸುದ್ದಿ
ಸ್ಪರ್ಧಾತ್ಮಕ ಪರೀಕ್ಷಾ ಓದುಗರ ತಲ್ಲಣಗಳು..!
- ಪರಶುರಾಮ್. ಎ
ಅದೇನೊ ಗೊತ್ತಿಲ್ಲ ಎಲ್ಲರೂ ಬಿಸಿಲು ಕುದುರೆ ಹಿಡಿಯೋ ರೀತಿ ನೋಡಿದ್ರೆ ನಂಗೆ ನಗು ಬರುತ್ತೆ.. ಅವರ ಪರಿಪಾಟಲು ಅವರ ಅವಸ್ಥೆ ಇದೆಲ್ಲಾ ನೆನೆಸಿಕೊಂಡರೆ ನನಗೆ ತಲೆ ಚಿಟ್ಟು ಹಿಡಿದು ರೇಜಿಗೆ ಹೋಗುತ್ತೆ. ಕೆಲವೊಮ್ಮೆ ನಾನೂ ಸಹ ಅದರ ಹಿಂದೆ ಓಡಿದ್ದೂ ಉಂಟು. ಈ ಕುದುರೆ ಸವಾರಿ ಎಲ್ಲರಿಗೂ ಸುಲಭದ ಮಾತು ಖಂಡಿತ ಅಲ್ಲವೇ ಅಲ್ಲ. ಎಲ್ಲೋ ಲಕ್ಷಕ್ಕೆ ನೂರು ಮಂದಿ ಎಂದರೂ ಹೆಚ್ಚು ಏನೂಂತ ಗೊತ್ತಾಗಿಲ್ಲ ಅನ್ಸುತ್ತೆ ನಿಮಗೆ?? ಅದೇ ರೀ ಸರ್ಕಾರಿ ಕೆಲಸ ಗಿಟ್ಟಿಸೊ ಪರೀಕ್ಷೆಗಳ ಓದು.!
ಒಮ್ಮೊಮ್ಮೆ ಸರ್ಕಾರಿ ಕೆಲಸ ಪಡೆಯಲು ಅಭ್ಯರ್ಥಿಗಳು ನಡೆಸುವ ಪೂರ್ವ ಸಿದ್ದತೆ ನೆನೆಸಿಕೊಂಡರೆ ಭಯ ಆಗುತ್ತೆ. ಬೇಕಾದರೆ ಯಾವುದಾದರೂ ನಿಮ್ಮ ಸ್ಥಳೀಯ ಗ್ರಾಮದ ಗ್ರಂಥಾಲಯಕ್ಕೆ ಭೇಟಿ ಕೊಡಿ ಅಲ್ಲಿನ ಪ್ರಶಾಂತ ವಾತವರಣ ಬಯಸಿ ವಿದ್ಯಾವಂತರು ಎಷ್ಟು ಇರುತ್ತಾರೆ. ಹಾಗೂ ಸಿದ್ದತೆಯಲ್ಲಿ ಹೇಗೆ ಮಗ್ನರಾಗಿರುತ್ತಾರೆ ಎಂಬುದು ಮನವರಿಕೆಯಾಗುತ್ತದೆ.
ಅವರ ಪ್ರಜ್ವಲಿಸುವ ಕಣ್ಣುಗಳಲ್ಲಿ ಅವರ ಭವಿಷ್ಯದ ಕನಸು ಅವರ ಕುಟುಂಬದ ಏಳ್ಗೆ ಹೊಳೆಯುತ್ತಿರುತ್ತದೆ. ಅವರ ಆರ್ಥಿಕ ಸಂಕಷ್ಟಕ್ಕೆ ವಿಮೋಚನೆ ಇದರಿಂದ ಸಿಗುತ್ತದೆ ಎಂಬ ಭರವಸೆಯನ್ನು ಮನಸಿನ ತೇರಿನಲ್ಲಿ ಹೊತ್ತು ಜ್ಞಾನದ ಕಳಸದೊಂದಿಗೆ ಸಾಕ್ಷಾತ್ಕರಿಸಿದ ಮೂರ್ತಿಗಳಾಗಿ ಹೋಗಿರುತ್ತಾರೆ.ಬೆಳಗ್ಗೆ ಬಿಟ್ಟು ಬಂದ ಮನೆ ಐದೊ ಆರೊ ಸ್ಪರ್ಧಾತ್ಮಕ ಪುಸ್ತಕಗಳು, ವಾಟರ್ ಕ್ಯಾನ್, ಮೊಬೈಲ್ ಈಯರ್ ಪೋನ್, ಹಳದಿ ಸ್ಕೆಚ್ ಪೆನ್, ಟಿಫನ್ ಬಾಕ್ಸ್, ಹಲವಾರು ಬಿಳಿ ಹಾಳೆ. ಒಂದು ಜಾಮಿಟ್ರಿ ಬಾಕ್ಸ್ ಅದರ ತುಂಬಾ ಭವಿಷ್ಯದ ಕನಸುಗಳು.
ಇನ್ನೂ ಇವರನ್ನು ಕೈ ಬಿಡದ ದೇವರ ಪೋಟೊಗಳು ಮತ್ತು ವಿಭೂತಿ ಪ್ರಸಾದಗಳು. ದೇವರನ್ನು ಹೇಗಾದರೂ ಒಲಿಸಿಕೊಂಡು ಈ ಕೆಲಸ ಗಿಟ್ಟಿಸಿಕೊಬೇಕು ಅನ್ನುವವರು ಬೆಳಿಗ್ಗೆ ಬೇಗ ಎದ್ದು ಕನಿಷ್ಟ ಮೂರು ಅಥವಾ ಹೆಚ್ಚು ದೇವಸ್ಥಾನ ಪ್ರದಕ್ಷಿಣೆ ಹಾಕಿ ಕುಂಕುಮ ನಾಮ ಬಳಿದುಕೊಂಡು ಬಂದಿರುತ್ತಾರೆ.ಗ್ರಂಥಾಲಯದಲ್ಲಿ ಕೆಲವೊಮ್ಮೆ ಫ್ಯಾನ್ ಹಾಕಿರುತ್ತಾರೆ ಒಮ್ಮೊಮ್ಮೆ ಹಾಕಿರುವುದಿಲ್ಲ.ಆಗ ಅಲ್ಲಿ ಕುಳಿತು ಅಭ್ಯಾಸ ಮಾಡುವ ಅಭ್ಯರ್ಥಿಗಳ ಹಣೆಯನ್ನು ನೋಡಿದ್ರೆ ಸೆಕೆಗೆ ಬೆವತು ಕುಂಕುಮ ರಕ್ತದ ರೂಪದಲ್ಲಿ ನೆತ್ತಿಯಿಂದ ಇಳಿದು ಹೋಗುವಾಗ ಇವರು ಯುದ್ದದಲ್ಲಿ ಹೋರಾಡಿ ಇದೀಗ ಮನೆಗೆ ಬಂದ ಗಾಯಾಳು ಸೈನಿಕರಂತೆ ಭಾಸವಾಗುತ್ತದೆ.
ಉಸ್ಸೆಂದು ನಿಟ್ಟುಸಿರು ಇವರಿಗೆ ಒಮ್ಮೊಮ್ಮೆ ಓದೇ ಬೇಡ ಅನ್ನಿಸಿ ಜಿಗುಪ್ಸೆ ತರಿಸುತ್ತದೆ.ಇವರಿಗೆ ಮರೆವು ದೊಡ್ಡ ಶಾಪವಾಗಿರುತ್ತದೆ. ಪರಶುರಾಮ ವಿದ್ಯಾರ್ಥಿಗಳಿಗೆ ನೇರವಾಗಿ ಶಾಪ ಕೊಟ್ಟನೇನೋ ಎಂಬಂತೆ?
ಸುಮ್ಮನೆ ಅವರ ಮಧ್ಯೆ ನೀವೂ ಕುಳಿತರೆ ನಿಮಗೂ ಟಿಪ್ಸ್ ಸಿಗೋದು ಖಂಡಿತ. ಅದಕ್ಕೆ ನಾವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಅದಷ್ಟು ಸುಲುಭದ ಮಾತಲ್ಲ.!! ಮನರಂಜನೆ, ಕ್ರೀಡೆ, ಸ್ನೇಹಿತರು, ಬಂಧುಗಳ ಕಾರ್ಯಕ್ರಮ,.ಮನುಷ್ಯನಿಗೆ ಮುಖ್ಯವಾಗಿ ಬೇಕಾದ ನಿದ್ದೆ ಹೀಗೆ ಮುಂದುವರೆಸಿದರೆ ಇದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.. ನಿಜವಾಗಿ ಹೇಳಬೇಕೆಂದರೆ ಇವರ ತ್ಯಾಗ ಅಪಾರ ಇದಕ್ಕಾಗಿಯಾದರೂ ಇವರನ್ನು ಪ್ರಶಂಸಿಸಲೇಬೇಕು. ಅವರಿಗೆ ಅವರ ಭವಿಷ್ಯದ ಕನಸಿನ ಮುಂದೆ ಇವೆಲ್ಲವೂ ತುಂಬಾ ಸಣ್ಣದಾಗಿ ಕಾಣುತ್ತವೆ.
ಇನ್ನೂ ಕೆಲವು ವಿದ್ಯಾರ್ಥಿಗಳು ಇರುತ್ತಾರೆ ಓದಲೆಂದು ಬಂದು ಕುಳಿತವರು ಅತ್ತಿತ್ತ ಕಣ್ಣು ಹಾಯಿಸಿ ಅಯ್ಯೊ ಇಷ್ಟೊತ್ತಿಗೆ ಎದುರಿನ ಕುರ್ಚಿಯಲ್ಲಿ ಕೂರಲು ಬರಬೇಕಿದ್ದ ಹುಡುಗಿ ಇನ್ನೂ ಬಂದೆ ಇಲ್ಲ ಎಂಬ ಚಡಪಡಿಕೆ. ಅದರಿಂದ ಓದಲು ಗಮನ ಇಲ್ಲದೆ ಯಾವ್ಯಾವುದೊ ಖಯಾಲಿ ಗೀಳುಗಳು ಅಲ್ಲಿ ಪ್ರದರ್ಶನವಾಗುತ್ತದೆ. ಇವನು ಕಾಯುತ್ತಿದ್ದ ಹುಡುಗಿ ಅಲ್ಲಿಗೆ ಬರುವವರೆಗೂ ಇನ್ನೊಬ್ಬಳ ಹುಡುಕಾಟ. ಅವಳೂ ಕಾಣಿಸಿಲ್ಲವೆಂದರೆ ಡಬಲ್ ಕಾತುರ ಹಾಗೂ ಮಂಗಾಟದ ಮನಸಿನಿಂದ ಓದಿಗೆ ತಿಲಾಂಜಲಿ.
ಎಷ್ಟೋ ಬಾರಿ ಪ್ರಯತ್ನಿಸಿ ಅನುತ್ತಿರ್ಣವಾದರೂ ಮರು ಪ್ರಯತ್ನಗಳು ನಿಲ್ಲದೆ ಸಾಗಿರುತ್ತವೆ.ಇನ್ನೂ ದೈಹಿಕ ಸಿದ್ದತಾ ಪರೀಕ್ಷೆಗಳ ಬಗ್ಗೆ ಹೇಳೋದೆ ಬೇಡ ಅದೊಂದು ವ್ರತವಿದ್ದಂತೆ ಅದನ್ನು ಸರಿಯಾಗಿ ಪಾಲಿಸಿದರೆ ಮಾತ್ರ ದೇವರು ಕರುಣಿಸಿ ವರ ಕೊಟ್ಟ ಹಾಗೆ ಯಶಸ್ಸು.ಇಲ್ಲವಾದರೆ ಒಂದೇ ಪ್ರಯತ್ನಕ್ಕೆ ಅವರು ತಿರಸ್ಕೃತರಾಗುವರು.ಅಷ್ಟೆ ಅಲ್ಲದೆ ಮೊಬೈಲ್ ವಿಚಾರಕ್ಕೆ ಬಂದರೆ ಒಂದೈದು ನಿಮಿಷ ವಾಟ್ಸಪ್ ಫೇಸ್ಬುಕ್ ನೋಡೋಣಾಂತ ಕೈಗೆತ್ತಿ ಕೊಂಡವನ ಕತೆ ಮುಗಿತು ಅದೆಷ್ಟೊ ಗಂಟೆಗಳ ಕಾಲ ಕೈಯಿಂದ ಬಿಡರು.
ಸ್ವಲ್ಪ ಸಮಯದ ನಂತರ ಅಯ್ಯೊ ಈಗ ತಾನೆ ಹಿಡಿದಿದ್ದು ಆಗಲೇ ಕೈಗೆ ಬಂದು ಮೂರು ಗಂಟೆಯಾಯ್ತು ಯಪ್ಪಾ ಈ ಮೊಬೈಲ್ ಸಹವಾಸವೇ ಬೇಡ ಎಂದವರು ಮತ್ತೆ ಅದಕ್ಕೆ ಅಂಟಿದವರು ಇದ್ದಾರೆ.!! ಮೊಬೈಲ್ ಕಂಡರೆ ಕೆಂಡವಾಗುವವರೂ ತೀರ ಕಡಿಮೆ ಎಂದೇ ಹೇಳಬಹುದು.ಮೊಬೈಲ್ ಒಂದು ಅಪ್ಸರೆ ಯಂತೆ ಧ್ಯಾನಸ್ಥ ವಿದ್ಯಾರ್ಥಿಯ ಶತೃ.ಕೆಲವರು ಕೆಲಸ ಪಡೆದ ನಂತರ ಮದುವೆ ಯೋಚನೆ ಮಾಡಿದರೆ.ಇನ್ನೂ ಕೆಲವರಂತು ಮದುವೆ ಆಗಿ ಮಕ್ಕಳಿದ್ದರೂ ಈ ಸಾಲಿನಲ್ಲಿ ಮೊದಲಿಗರಾಗಿರುತ್ತಾರೆ.
ವಯಸ್ಸು ಕಳೆದಷ್ಟೂ ಇವರಿಗೆ ಆತಂಕ ಹೆಚ್ಚು ಸರ್ಕಾರಿ ಕೆಲಸ ಸಿಗುತ್ತೋ ಇಲ್ಲವೋ ನಮ್ಮ ಹಣೆಬರಹದಲ್ಲಿ ಇದಿಯೋ ಇಲ್ಲವೋ ಈ ಜನ್ಮದಲ್ಲಿ ಸರ್ಕಾರದ ಅನ್ನ ತಿಂತಿವೊ ಇಲ್ಲವೋ ಎಂಬ ಒಂದು ರೀತಿಯ ವೈರಾಗ್ಯ ಅವರಲ್ಲಿ ಅನುರಣಿಸಿರುತ್ತದೆ. ಇನ್ನೂ ಹೆಚ್ಚು ಹೇಳಬೇಕೆಂದರೆ ಈ ಹುಡುಗರು ಚಿತ್ರದಲ್ಲಿ ಪುನೀತ್ ರಾಜಕುಮಾರ್ರಿಗೆ ಅವರ ಮಾವ ಬಲಗೈಯಲ್ಲಿ ಸರ್ಕಾರಿ ಕೆಲಸದ ಆರ್ಡರ್ ಕಾಫಿ ಮತ್ತು ಎಡಗೈಲ್ಲಿ ನಮ್ಮ ಮಗಳ ಕಿರುಬೆರಳು ಹಿಡಿದು ಎಲ್ಲಿಗಾದರೂ ಕರೆದುಕೊಂಡು ಹೋಗು ಎನ್ನುವ ರೀತಿಯ ಮಾವಂದಿರು ನೈಜ ಜೀವನಗಳಲ್ಲಿ ಇದ್ದಾರೆ ಎಂದರೆ ಊಹಿಸಿ ಸರ್ಕಾರಿ ಕೆಲಸ ದ ಅವಶ್ಯಕತೆ ಎಷ್ಟಿದೆ ಅಂತಾ!ಇಂತ ಕಾಂಪಿಟೇಷನ್ ನಡುವೆ ಎಳಸುಗಳೆಲ್ಲಾ ಇರುತ್ತಾರೆ.
ಎಂಥವರೆಂದರೆ ತನ್ನ ಹೆಸರನ್ನು ಅಥವಾ ತನ್ನ ತಂದೆ ತಾಯಿಯ ಹೆಸರನ್ನು ಇಂಗ್ಲಿಷ್ ನಲ್ಲಿ ಬರೆಯಲು ಬಾರದ ದಡ್ಡರೂ ಸರ್ಕಾರಿ ಕೆಲಸದ ಆಕಾಂಕ್ಷಿಗಳು. ಅಪ್ಲಿಕೇಷನ್ ಭರ್ತಿ ಮಾಡಲು ಬಾರದಂತವರೂ ಇದ್ದಾರೆ.ಅವನ ಅಪ್ಲಿಕೇಷನ್ ಇನ್ಯಾರೋ ಭರ್ತಿ ಮಾಡಿರುತ್ತಾರೆ ಎಂಬುದನ್ನು ನೀವು ನಂಬಲೇಬೇಕು.ಕೆಲವೊಮ್ಮೆ ಡಿಗ್ರಿ ಸರ್ಟಿಫೀಕೇಟ್ ಇರುತ್ತೆ. ಆದರೆ ಡಿಗ್ರಿಗೆ ತಕ್ಕನಾದ ಜ್ಞಾನದ ಕೊರತೆ ಇರುತ್ತದೆ.ಅಂಥವರೇ ಸರ್ಕಾರಿ ಕೆಲಸ ಮಾಹಿತಿ ಪ್ರಕಟವಾದ ಮಾಹಿತಿ ನೋಡಿ ಅರ್ಜಿ ಸಲ್ಲಿಸುವುದು. ಆದರೆ ಪರೀಕ್ಷೆ ಯ ನಂತರ ಅವರ ಮುಖ ನೋಡಬೇಕು ನಮಗೆ ಈ ಜನ್ಮದಲ್ಲಿ ಸರ್ಕಾರಿ ಕೆಲಸ ಸಿಗಲ್ಲ ಬಿಡ್ರೋ ಅಧಿಕಾರಿಗಳು ಮೊದಲೇ ಫಿಕ್ಸಿಂಗ್ ಮಾಡ್ಕೊಂಡು ಸುಮ್ಮನೆ ಜನರ ಕಣ್ಣೊರೆಸಲು ಈ ಪರೀಕ್ಷೆ ನಡೆಸೋದು ತಗಿರಲೇ.
ಇದ್ಯಾವುದು ಸರಿ ಇಲ್ಲ. ವ್ಯವಸ್ಥೆ ಚೇಂಜ್ ಆಗಬೇಕಲೇ ಎಂಬ ಬೊಂಬಡ ಕೇಳಬೇಕು.ಒಳ್ಳೆ ಆಧ್ಯಾತ್ಮಿಕ ಚಿಂತನೆಯ ಮಟ್ಟಕ್ಕೆ ಇಳಿದಿರುತ್ತದೆ ಅವರ ಮಾತುಗಳು. ಅಂತವರ ಮುಂದೆ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವವರು ಒಂದು ರೀತಿ ಮಂತ್ರೋಪದೇಶಕರಾಗಿರುತ್ತಾರೆ. ಇಂತಿರುವ ಸಮಾಜದಲ್ಲಿ ಒಂದು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡವರು ಮದುವೆ ಸಮಯದಲ್ಲಿ ವರದಕ್ಷಿಣೆ ಸಹ ಹೆಚ್ಚು ದೋಚುವವರಿದ್ದಾರೆ. ಐ ಎ ಎಸ್ ಅಧಿಕಾರಿಯಾದವರೂ ಸಹ ಇದರಿಂದ ಹೊರತಾಗಿಲ್ಲ.
ಕಳೆದ ಡಿಸೆಂಬರ್ ಜನವರಿ ಯಲ್ಲಿ ಹತ್ತಕ್ಕಿಂತ ಹೆಚ್ಚು ಸರ್ಕಾರಿ ಕೆಲಸಗಳು ಪ್ರಕಟವಾಗಿವೆ.ಈ ಸಮಯದಲ್ಲಿ ಯಾವುದೇ ಸೈಬರ್ ಅಂಗಡಿ,ಜೆರಾಕ್ಸ್ ಅಂಗಡಿ ನೋಡಿದರೆ ಕೆಲಸಕ್ಕಾಗಿ ಕಾದಿರುವ ಕಾತುರರು ಎಷ್ಟು ಎಂಬುದು ಗೊತ್ತಾಗುತ್ತದೆ. ಒಂದು ಮಾಹಿತಿ ಪ್ರಕಾರ ಒಂದು ಸಾವಿರ ಹುದ್ದೆಯ ಕೆಲಸಗಳಿಗೆ ಹದಿನಾರು ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರಂತೆ.ಅದು ಎಸ್ಸೆಸ್ಸೆಲ್ಸಿ ಅರ್ಹತೆ ಅನುಸಾರವಾಗಿ ಆದರೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಹೆಚ್ಚಿನದಾಗಿ ಮಾಸ್ಟರ್ ಡಿಗ್ರಿ ಹಾಗೂ ಪಿ ಎಚ್ಡಿ ಪಡೆದವರು ಇದ್ದರಂತೆ!!
ಭಾರತದಲ್ಲಿ ಸರ್ಕಾರಿ ಕೆಲಸದ ಅವಶ್ಯಕತೆ ಮತ್ತು ಸ್ಪರ್ಧೆ ಎಷ್ಟಿದೆ ಎಂಬುದು ಸಾಬೀತಾಗಿದೆ. ಇದಿಷ್ಟೆ ಅಲ್ಲದೆ ಸರ್ಕಾರ ಕಾಲ ಕಾಲಕ್ಕೆ ಸರ್ಯಾಗಿ ಇಲಾಖೆಯ ಹುದ್ದೆ ಭರ್ತಿ ಕಾರ್ಯ ಮಾಡದೆ ಇರುವುದು ಒಂದು ದೋಷವಾಗಿದೆ. ಎಂತಹ ಅತಂತ್ರತೆಯಲ್ಲಿ ಅಭ್ಯರ್ಥಿಗಳು ಇದ್ದಾರೆಂದರೆ ಊಹಿಸುವುದೂ ಕಷ್ಟ. ಇಷ್ಟೊಂದು ಕಷ್ಟಗಳ ನಡುವೆ ಸರ್ಕಾರಿ ಕೆಲಸ ಸಿಕ್ಕೆ ಬಿಡ್ತು ಎಂದರೆ ಅವನೇ ಅವತ್ತಿನಿಂದ ಕುಬೇರ.ಹೋಗ್ಲಿ ಬಿಡ್ರಿ ಈ ಅಂಕಣ ಓದುವಷ್ಟರಲ್ಲಿ ಬೇರೆ ಇನ್ಯಾವುದಾದರು ಸರ್ಕಾರಿ ಕೆಲಸದ ಪ್ರಕಟಣೆ ನಿಮ್ಮ ಕಿವಿಗೆ ಬೀಳಬಹುದು. ಅದಕ್ಕೂ ಒಂದು ಅರ್ಜಿ ಹಾಕಿಬಿಡಿ.
ಸರ್ಕಾರಿ ಕೆಲಸ ಬಯಸಿ ಸ್ಪರ್ಧಾತ್ಮಕ ಪರೀಕ್ಷೆಗೆ ರೆಡಿಯಾಗುತ್ತಿರುವ ಅಭ್ಯರ್ಥಿಗಳೆಲ್ಲರಿಗೆ ಅವರ ಕನಸು ನನಸಾಗಲೆಂದು ಹರಸುತ್ತಾ. ನಿಮ್ಮ ಸ್ನೇಹಿತರು ಯಾರಾದರೂ ಈ ಸರ್ಕಾರಿ ಕೆಲಸದ ಪ್ರಯತ್ನದಲ್ಲಿದ್ದರೆ ಅವರಿಗೂ ಈ ಹರಕೆ ಮುಟ್ಟಲಿ ಅವರಿಗೂ ಒಮ್ಮೆ ನೀವು ಶುಭ ಕೋರಿಬಿಡಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ದಿನದ ಸುದ್ದಿ
ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.
ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.
ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.
“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.
ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.
ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.
ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ನೂತನ ವಿಜ್ಞಾನ ಸಭಾಂಗಣದಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಮ್.ಸಿ.ಎ) ಹಾಗೂ ಕಂಪ್ಯೂಟರ್ ಸೈನ್ಸ್ (ಎಮ್.ಎಸ್ಸಿ) ವಿಭಾಗಗಳ ಸಂಯುಕ್ತಾಶ್ರಯದಲ್ಲಿ “ಸಂಶೋಧನಾ ಸಮಸ್ಯೆಯನ್ನು ಗುರುತಿಸುವ ವಿವಿಧ ವಿಧಾನಗಳು, ಹೊಸ ಸಂಶೋಧನಾ ಕಲ್ಪನೆಗಳ ಸೃಷ್ಟಿ ಹಾಗೂ ಟೈಯರ್-1 ಸಂಶೋಧನಾ ಲೇಖನಗಳ ಬರಹದ ಪ್ರಮುಖ ಅಂಶಗಳು” ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ, ಗುಣಮಟ್ಟದ ಸಂಶೋಧನೆಯೇ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿ ಮತ್ತು ಜಾಗತಿಕ ಮಾನ್ಯತೆಯ ಮೂಲಾಧಾರವಾಗಿದೆ ಎಂದು ಹೇಳಿದರು.
ಸಂಶೋಧನೆ ಕೇವಲ ಪದವಿ ಪಡೆಯುವ ಪ್ರಕ್ರಿಯೆಯಾಗಬಾರದು, ಅದು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವ ದಿಕ್ಕಿನಲ್ಲಿ ಸಾಗಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಪ್ರಕಟಣೆಗಳು ವಿಶ್ವವಿದ್ಯಾಲಯದ ಸಂಶೋಧನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯು ಕೆ ಮಾಂಚೆಸ್ಟರ್ನ ‘ಯೂನಿವರ್ಸಿಟಿ ಆಫ್ ಸ್ಯಾಲ್ಫೋರ್ಡ್’ನ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ಡಾ. ಶಿವಕುಮಾರ ಪಿ. ಮಾತನಾಡಿ, ಸಂಶೋಧನಾ ಸಮಸ್ಯೆ ಗುರುತಿಸುವಿಕೆ, ಸಂಶೋಧನಾ ಅಂತರ (Research Gap) ಪತ್ತೆ, ಸಾಹಿತ್ಯ ಸಮೀಕ್ಷೆ, ಪ್ರಯೋಗಾತ್ಮಕ ವಿನ್ಯಾಸ (Experimental Design), ಟೈಯರ್-1 ಜರ್ನಲ್ ಲೇಖನ ಬರಹ, ಪ್ರಕಟಣಾ ನೈತಿಕತೆ ಹಾಗೂ ವಿಮರ್ಶಕರ ಅಭಿಪ್ರಾಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
“ಒಂದು ಉತ್ತಮ ಸಂಶೋಧನಾ ಲೇಖನದ ಯಶಸ್ಸು ಅದರ ಹೊಸತನ, ವೈಜ್ಞಾನಿಕ ವಿಧಾನ ಮತ್ತು ಸ್ಪಷ್ಟವಾದ ಪ್ರಸ್ತುತೀಕರಣದಲ್ಲಿ ಅಡಗಿದೆ. ಸಂಶೋಧಕರು ಗುಣಮಟ್ಟದ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದ ಪ್ರಕಟಣೆಗೆ ಸಿದ್ಧರಾಗಬೇಕು,” ಎಂದು ಅವರು ಕರೆ ನೀಡಿದರು.
ಕಾರ್ಯಾಗಾರದಲ್ಲಿ 250ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳ ಅಧ್ಯಾಪಕರು ಭಾಗವಹಿಸಿದ್ದರು. ಪೋಸ್ಟರ್ ಪ್ರಸೆಂಟೇಷನ್ಗಳು, ಸಂವಾದಾತ್ಮಕ ಚರ್ಚೆಗಳು ಮತ್ತು ಸಂಶೋಧನಾ ಲೇಖನ ಬರಹದ ಪ್ರಾಯೋಗಿಕ ಮಾರ್ಗದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಭವಿಷ್ಯದಲ್ಲೂ ಇಂತಹ ಕಾರ್ಯಾಗಾರಗಳ ಸರಣಿಯನ್ನು ಆಯೋಜಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಲಸಚಿವ ಶ್ರೀ ಎಸ್. ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಡಾ. ಸಿ. ಕೆ. ರಮೇಶ್, ಡಾ. ಬಸವಣ್ಣ ಎಮ್. ಅಧ್ಯಕ್ಷರು, ಎಮ್.ಸಿ.ಎ ವಿಭಾಗ, ಡಾ. ಚಂದ್ರಕಾಂತ ಎನ್. ಅಧ್ಯಕ್ಷರು, ಕಂಪ್ಯೂಟರ್ ಸೈನ್ಸ್ ವಿಭಾಗ, ಹಣಕಾಸು ಅಧಿಕಾರಿ ಡಾ. ಆರ್. ಶಶಿಧರ್ ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ4 days agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ5 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
-
ದಿನದ ಸುದ್ದಿ6 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ

