ಲೈಫ್ ಸ್ಟೈಲ್
ಕಂತ್ರಿ ನಾಯಿಯಲ್ಲ, ಡೊಂಕು ಬಾಲದ “ಕಂಟ್ರಿ” ನಾಯಿ..!
- ಡಾ.ಎನ್.ಬಿ.ಶ್ರೀಧರ
ಹೋಗಯ್ಯ.. ನಿನ್ ಕಂತ್ರಿ ಬುದ್ಧಿ ತೋರಿಸ್ಬೇಡ..!! ಇದು ಒಂದು ಸಾಮಾನ್ಯ ಬೈಗುಳ. ಈ “ಕಂತ್ರಿ” ಶಬ್ದ ಎಲ್ಲಿಂದ ಬಂತು ಅಂದರೆ “ಶುದ್ಧ ದೇಶಿ” ಅಂತಲೋ ಅಥವಾ ಸ್ಥಳೀಯವಾಗಿ ತಯಾರಾಗಿರುವುದು ಅಂತ ಇರಬಹುದು. ನಮ್ಮ ಬೀದಿ ನಾಯಿಗಳಿಗೆ ಇದೊಂದು ವಿಶೇಷಣವಾಗಿ ಸೇರಿಕೊಂಡು ಬಿಟ್ಟಿದೆ!. ಪಕ್ಕಾ ನಮ್ಮ “ಸ್ವದೇಶಿ ಮೇಕ್” ಆದ ಇವು ಇನ್ನೂ ಸ್ವದೇಶಿ ಪ್ರೇಮಿಗಳ ಕಣ್ಮಣಿ ಆಗದೇ ಇರುವುದು ಅವುಗಳ ದುರಂತವೇ ಸರಿ.
ನಾಯಿಯು ತೋಳದ ಜಾತಿಗೆ ಸೇರಿದ ಒಂದು ಪ್ರಾಣಿ. ಆದರೆ ನಾಯಿಯು ತನ್ನ ಗೆಳೆಯ ಸಮಾನನಾದ ಮಾಲೀಕನ ಮಾತನ್ನು ಕೇಳುವ, ಆಜ್ಞೆಯನ್ನು ಪಾಲಿಸುವ ನಿಯತ್ತಿನ ಸಾಕು ಪ್ರಾಣಿ. ಮನೆ ನಾಯಿಗೂ, “ಬೀದಿ ನಾಯಿ” ಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಶಿಕಾರಿಗಾಗಿಯೂ, ಮನೆಯನ್ನು ರಕ್ಷಿಸಲು, ಹೊಲ-ಗದ್ದೆಗಳನ್ನು ಕಾಯಲು ನಾಯಿಯನ್ನು ಸಾಕಲಾಗುತ್ತದೆ. ನಾಯಿಯಲ್ಲೂ ಹಲವು ವಿಧಗಳಿವೆ. ಅವೆಂದರೆ “ಜಾತಿ” ನಾಯಿ ಮತ್ತು “ನಾಯಿ” ಜಾತಿ. ವಿದೇಶಿ ನಾಯಿಗಳಾದ ಡಾಬರ್ಮೆನ್, ಡಾಶ್ ಹಂಡ್, ಲಾಬ್ರಡಾರ್ ಇವೆಲ್ಲಾ “ಜಾತಿ”ನಾಯಿಗಳು.. ನಮ್ಮ ಕಥಾ”ನಾಯಕ”ರಾದ “ಕಂತ್ರಿ” ನಾಯಿಗಳು ಶ್ವಾನ ಪ್ರೇಮಿಗಳ ಪ್ರಕಾರ “ನಾಯಿ” ಜಾತಿ!
“ಡೊಂಕು ಬಾಲದ ನಾಯಕರೆ, ನೀವೇನೂಟವ ಮಾಡಿದಿರಿ?… ಕಣಕವ ಕುಟ್ಟುವ ಅಲ್ಲಿಗೆ ಹೋಗಿ;ಹಣಿಕೀ ಹಣಿಕೀ ನೋಡುವಿರಿ; ಕಣಕವ ಕುಟ್ಟುವ ಒನಕೆಲಿ ಹೊಡೆದರೆ ಕಂಯ್ ಕುಂಯ್ ರಾಗವ ಮಾಡುವಿರಿ! ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ ತಗ್ಗೀ ಬಗ್ಗೀ ನೋಡುವಿರಿ;ಹುಗ್ಗಿಯ ಮಾಡುವ ಸವಟಲಿ ಹೊಡೆದರೆ ಕಂಯ್ ಕುಂಯ್ ರಾಗವ ಮಾಡುವಿರಿ! ಹಿರಿ ಬೀದಿಯಲಿ ಓಡುವಿರಿ,ಕರಿ ಬೂದಿಯಲಿ ಹೊರಳುವಿರಿ; ಪುರಂದರ ವಿಠ್ಠಲರಾಯನು ಹೇಳಿದ ಪರಿಪರಿ ಆಟದಿ ಚರಿಸುವಿರಿ!” ಇದೊಂದು ಪುರಂಧರ ದಾಸರ ಜನಪ್ರಿಯ ಕೀರ್ತನೆ.
ಇದರಲ್ಲಿ ನಮ್ಮ “ಕಂತ್ರಿ” ನಾಯಿಗಳ ಸಂಪೂರ್ಣ ಗುಣಗಾನ ಮಾಡಲಾಗಿದೆ. ಪುರಂದರದಾಸರ ಮೊದಲ ಹೆಸರು ”ಶ್ರೀನಿವಾಸ ನಾಯ” ಎನ್ನುವದು ಎಲ್ಲರಿಗೂ ತಿಳಿದ ಸಂಗತಿ. ಈ ಹಾಡಿನ ಪಲ್ಲವಿಯಲ್ಲಿ ‘ಡೊಂಕು ಬಾಲದ ನಾಯಕರೆ’ ಎನ್ನುವ ಪದಪುಂಜವನ್ನು ಗಮನಿಸಿ. ಈ ಸಂಬೋಧನೆಯು ನಾಯಿಯನ್ನು ಉದ್ದೇಶಿಸಿರುವದು ಎನ್ನುವದು ಸಾಮಾನ್ಯ ಅರ್ಥ. ಅದರ ಜೊತೆಗೇ ದಾಸರು ‘ನಾಯಕರೆ’ ಎಂದು ಶ್ರೀನಿವಾಸ ನಾಯಕರನ್ನು ಅಂದರೆ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿರುವದು ಇಲ್ಲಿಯ ವಿಶೇಷಾರ್ಥ. ಬಹುಶಃ ದಾಸರು ತಮಗೆ ತಾವೇ ಹೀಗೆ ಹೇಳಿಕೊಳ್ಳುತ್ತಿರಬಹುದು.
ಈ ನಾಯಿಗಳೂ ಅಷ್ಟೇ.. ಹಸಿವಿನಿಂದ ಬಳಲಿ ಎಲ್ಲೆಲ್ಲಿ ಅಹಾರ ಸಿಗುತ್ತದೆಯೋ ಆಲ್ಲಲ್ಲಿ ನುಗ್ಗಿ ಸಿಕ್ಕ ಸಿಕ್ಕವರಿಂದ ಹೊಡೆಸಿಕೊಂಡು “ಕಂಯ್.. ಕಂಯ್. ಎನ್ನುತ್ತಾ ಮತ್ತೆ ಮತ್ತೆ ಅದೇ ಸ್ಥಳಕ್ಕೆ ನುಗ್ಗಿ ದೀನ ದ್ರಷ್ಟಿಯಿಂದ ನೋಡುತ್ತಾ ದಯೆ ಬರುವ ಹಾಗೇ ಮಾಡಿ ಅಹಾರ ಗಿಟ್ಟಿಸುತ್ತವೆ. ಇದು ಅವುಗಳ ಚಾಕಚಕ್ಯತೆ.ಹಸಿವಾದಾಗ ಅಹಾರ ನೀಡದಿದ್ದರೆ ಎರಡೂ ತುಟಿಗಳನ್ನು ಹಿಸಿದು ದಂತಪಂಕ್ತಿಗಳನ್ನು ತೋರಿಸುತ್ತಾ ಹೆದರಿಸಿ ಅಹಾರ ಗಿಟ್ಟಿಸುವುದಿದೆ.
‘ನಾಯಿಯ ಬಾಲ ಲಳಿಗೆಯಲ್ಲಿ ಹಾಕಿದರೂ ಡೊಂಕೇ’ ಎನ್ನುವ ಗಾದೆ ಮಾತು ಇದೆಯಲ್ಲ! ಇದಕ್ಕೆ ತಕ್ಕ ಹಾಗೇ ನಮ್ಮ ಕಂತ್ರಿ ನಾಯಿಗಳು. ಸುರುಳಿ ಸುತ್ತಿಕೊಂಡು ಅವುಗಳ “ದ್ವಾರ”ವನ್ನೆಲ್ಲಾ ಜಗಕ್ಕೆಲ್ಲಾ ಹೆಮ್ಮೆಯಿಂದ ತೋರಿಸಿಕೊಂಡು ಓಡಾಡುವುದು ಪ್ರಾಣಿಸಹಜ ಧರ್ಮ ಎಂದು ಚರ್ಚೆಗೊಳಪಡಿಸದೇ ಸುಮ್ಮನಾಗುವುದು ಒಳಿತು. ನನ್ನ ಸ್ನೇಹಿತನೊಬ್ಬ ತಮಾಷೆಯಾಗಿ “ಈ ಕಂತ್ರಿ ನಾಯಿ ಮುಂಡೆವಕ್ಕೆ ಚಡ್ಡಿ ಹೊಲಿಸ್ತೀವಿ ಅಂತ ಯಾರೂ ಮುಂದೆ ಬಂದಿಲ್ವೇ?! ಅಸಹ್ಯ ಕಣಪ್ಪಾ.. ನವದ್ವಾರಗಳನ್ನೆಲ್ಲಾ ಜಗತ್ತಿಗೇ ತೋರಿಸ್ಕೊಂಡು ಓಡಾತ್ವಲ್ಲಾ” ಅಂತ ಅಲವತ್ತುಕೊಂಡಿದ್ದ..
“ರೀ ಅವೆಲ್ಲಾ ಕಂತ್ರಿ ನಾಯಿಗಳಲ್ಲ ಕಣ್ರೀ .. ಕಂಟ್ರಿ ನಾಯಿಗಳು..ಹೀಗೆಂದು ಹೇಳಿದ್ದು ನನ್ನ ಸ್ನೇಹಿತ.. ಸಂಜೆ ವಾಕಿಂಗ್ ಹೋಗುವಾಗ ಈ ಕಂತ್ರಿ ನಾಯಿಗಳ ವರ್ತನೆಯನ್ನೇ ಗಮನಿಸುವುದು ನನ್ನ ಕಾಯವಾಗಿತ್ತು. ಒಂದರ ಹಿಂದೆ ಒಂದರಂತೆ ಏನೋ “ಮಹತ್ಕಾರ್ಯ” ಸಾಧಿಸಲು ಕಿವಿ ಕತ್ತು ನೇರ ಮಾಡಿ ಗಂಬೀರವದನ ಮಾಡಿಕೊಂಡು ಆಗಾಗ ಅಲ್ಪ ಸ್ವರದಲ್ಲಿ ಗುರ್ರೆನ್ನುತ್ತಾ ಅವು ಹೋಗುವುದನ್ನು ನೋಡಿದರೆ ವಿಧಾನ ಸೌಧದಲ್ಲಿ ಮಾನ್ಯಮಂತ್ರಿಗಳು ಸಭೆ ಕರೆದಾಗ ತರತರದ ಕಡತಗಳನ್ನು ಬಗಲಲ್ಲಿಟ್ಟುಕೊಂಡು ಮೊಬೈಲಿನಲ್ಲಿ ಯಾರ ಜೊತೆಯೋ ಮಾತನಾಡುತ್ತಾ ಅನ್ಯಮನಸ್ಕರಾಗಿ ಹೋಗುತ್ತಿರುವ ಅಧಿಕಾರಿಗಳಂತೆ ಕಾಣುತ್ತಿದ್ದವು.
ದೀನ ವದನದಿಂದ ಮನೆ ಮುಂದೆ ನಿಂತು ಬಾಲ ಅಲ್ಲಾಡಿಸುತ್ತಾ ಪರಮ ಸ್ನೇಹಿತರಂತೆ ವರ್ತಿಸಿ ತಿಂಡಿಗಾಗಿ ಭಿಕ್ಷೆ ಕೋರುವ ನಾಯಿಗಳ ಸ್ವಭಾವವೇ ಬೇರೆ. ಮನೆಯೊಡತಿಗೆ ಕರುಣೆ ಉಕ್ಕಿ ತಿಂಡಿಯನ್ನು ನೀಡದಿದ್ದರೆ ಜಪ್ಪಯ್ಯ ಅಂದರೂ ಸಹ ಒಂದಿನಿತೂ ಮುಂದೆ ಹೋಗದ ನಾಯಿಗಳೆಷ್ಟೋ?. ಅಲ್ಪ ದಯೆ ಬಂದು ಅಹಾರ ಹಾಕಿದರೆ ಅಲ್ಲಿಯೇ ಜಾಂಡಾ ಊರಿಯೇ ಬಿಡುತ್ತವೆ. ಕ್ರಮೇಣ ಅವುಗಳ ಸ್ನೇಹಪರ ನಡುವಳಿಕೆಯಿಂದ ವಿಶ್ವಾಸ ಗಳಿಸಿ ಮನೆಗೆ ಎಂಟ್ರಿ ಹೊಡದು ಮನೆಯ ಕಾಯಂ ಸದಸ್ಯನಾದರೂ ಸಹ ಆಶ್ಚರ್ಯವಿಲ್ಲ!!
ನನ್ನ ಸ್ನೇಹಿತನ ಕಾಕರ್ ಸ್ಪಾನಿಯಲ್ ಜಾತಿಯ ಶ್ವಾನವೊಂದನ್ನು ಕರೆದು ಕೊಂಡು ವಾಕಿಂಗ್ ಹೋಗುತ್ತಿದ್ದೆವು. ಒಮ್ಮೆ ದಾರಿಯ ಪಕ್ಕ ಒಂದು ಕಂತ್ರಿ ನಾಯಿಯೊಂದು ತನ್ನ ಪಕ್ಕೆಲೆಬುಗಳನ್ನು ಬಿಟ್ಟುಕೊಂಡು ನೆಲಕ್ಕೆ ಮೆತ್ತಿಕೊಂಡಂತೆ ಚಪ್ಪಟೆಯಾಗಿ ಬಿದ್ದುಕೊಂಡಿತ್ತು. ನಮ್ಮ ಇರುವನ್ನು ಸಂಪೂರ್ಣವಾಗಿ ಅಲಕ್ಷಿಸಿ ತನ್ನ ಕಿವಿಗಳೆರಡನ್ನು ತಟಪಟ ಕೊಡಗಿ ಹಾಗೇ ಸತ್ತು ಹೋದಂತೆ ಬಿದ್ದುಕೊಂಡಿತು.
ನಮ್ಮ ನಾಯಿಯ ವಾಸನೆ ಸಿಕ್ಕೊಡನೆ ಶವದಂತೆ ಬಿದ್ದಿದ್ದ ಅದಕ್ಕೆ ತಟಕ್ಕನೆ ಪ್ರಾಣ ಸಂಚಾರವಾಗಿ ಪ್ರಾಣ ಸಂಚಾರವಾಗಿ ಸ್ಪ್ರಿಂಗಿನಂತೆ ನೆಗೆದು ಗುರ್ರೆನ್ನುತ್ತಾ ದಂತ ಪಂಕ್ತಿಗಳನ್ನು ತೋರಿಸುತ್ತಾ ಏರಿಹೋಯ್ತು. ಆದರೆ ನಮ್ಮ ನಾಯಿ ಒಳ್ಳೆ ಪಳಗಿದ ರಾಜಕಾರಣಿಯಂತೆ ತನ್ನ ಎರಡೂ ತುಟಿಗಳನ್ನು ಸಾಧ್ಯವಾದಷ್ಟು ಮೇಲೆತ್ತಿ ಒಳ್ಳೆ ಹೊಳಪು ಕೊಟ್ಟ ಗರಗಸದಂತಿದ್ದ ಎರಡೂ ದಂತ ಪಂಕ್ತಿಗಳ ಸಂಪೂರ್ಣ ಪ್ರದರ್ಶನ ಮಾಡಿತು.
ತನ್ನ ಆಯುದ ಖಜಾನೆಗಳಲ್ಲಿ ಇರುವ ವಿವಿಧ ತರಹೇವಾರಿ ಆಯುಧೋಪಕರಣಗಳ ವಿವರಗಳನ್ನು ಅವುಗಳ ಉಪಯೋಗದಿಂದ ಮುಂದೊದಗುವ ದುಷ್ಪರಿಣಾಮಗಳನ್ನೂ ಅದಕ್ಕೆ ಮನದಟ್ಟಾಗುವಂತೆ ಎಷ್ಟು ಸಾಧ್ಯವೋ ಅಷ್ಟು ಅಕರಾಳ ವಿಕರಾಳತೆಯಿಂದ ತೋರಿಸಿತು.
ನಮ್ಮ ಮಿತ್ರನ ಗಂಭೀರವಾದ “ಜಾತಿ” ನಾಯಿಯ ಬಳಿ ಇರಬಹುದಾದ ಯುದ್ದೋಪಕರಣಗಳನ್ನು ನೋಡಿದ ಕೂಡಲೇ ಕಾರ್ಗಿಲ್ ಯುದ್ಧದಲ್ಲಿ ಸೋತ ಪಾಕಿಸ್ತಾನದಂತೆ ಸೋಲು ಖಚಿತವಾಗಿ ಕಂತ್ರಿ ನಾಯಿಗೆ ಕೊಂಚ ದಿಗಿಲಾಯ್ತು. ತಕ್ಷಣ ತನ್ನ ರಕ್ಷಣಾ ನೀತಿಯನ್ನು ಬದಲಿಸಿ ಕೇವಲ ಮಾನ ಮರ್ಯಾದೆ ಉಳಿಸಿಕೊಳ್ಳಲು ದೂರದಿಂದಲೇ ವೊವ್.. ವೊವ್.. ಎಂದು “ನಾನೇನು ನಿನ್ನ ವೈರಿಯಲ್ಲ, ಸ್ನೇಹಾ ಮಾಡೋಣವೇ?” ಎಂಬಂತೆ ಬೊಗಳಿತು.
ನಮ್ಮ ನಾಯಿ ಜಾತಿ ನಾಯಿಯಾದ ಕಾರಣ ತುಸು ಮರ್ಯಾದೆಯನ್ನು ಬಿಂಕವನ್ನು ಜಾಸ್ತಿ ತೊರಿಸಿ ತನ್ನ ಗಂಬೀರತೆಯನ್ನು ಮೆರೆಯಿತು. ಪೊಗದಸ್ತಾದ ಕಾಯ, ಸುಂದರ ನುಣುಪಾದ ಕೇಶರಾಶಿಯ ಉದ್ದ ಕಿವಿಗಳ “ಜಾತಿ” ನಾಯಿಯನ್ನು ನೋಡಿ ಅದನ್ನು ನೋಡಿ ಬೊಗಳಿದ ಬಗ್ಗೆ ಆ ಕಂತ್ರಿ ನಾಯಿ ಅಪರಾಧಿ ಮನೋಭಾವ ಹೊಂದಿ ಅದಕ್ಕೆ ಅರಿವಿಲ್ಲದಂತೆ ಅದರ ಮೋಟು ಬಾಲ ಅದರ ಹಿಂಗಾಲುಗಳ ನಡುವೆ ತನ್ನಷ್ಟಕ್ಕೆ ತಾನೇ ಮಡಚಿಕೊಳ್ಳತೊಡಗಿತು.
ನಮ್ಮ ನಾಯಿ ಇದೇ ಸಂದರ್ಭವೆಂದು ಅದರ ಮನಸ್ಥೈರ್ಯವನ್ನು ಪೂರ್ತಿಯಾಗಿ ಕಲಕಲು “ಏನೆಂದು ಬಯ್ದೆ?.ಇನ್ನೊಂದು ಸಾರಿ ಬೊಗಳು ನೋಡೋಣ!!” ಎಂಬಂತೆ ಅದರ ಹತ್ತಿರ ಏರಿ ಹೋಯ್ತು. ಆ ಕಂತ್ರಿ ನಾಯಿ ಮಕಾಡೆ ಮಲಗಿ ನಾಲ್ಕೂ ಕಾಲುಗಳನ್ನು ಮೇಲೆತ್ತಿಕೊಂಡು ಅಂಗಾತ ಬಿದ್ದು ತನ್ನ ಪರಮ ಶರಣಾಗತಿಯನ್ನು ವ್ಯಕ್ತಬಿಟ್ಟಿತು !!.
ಇದೇ ಸಂದರ್ಭವೆಂದು ನಮ್ಮ ನಾಯಿ ಅದರ ಹತ್ತಿರ ಹೋಗಿ ಅದರ “ಮರ್ಮಸ್ಥಳ” ದ “ಸುವಾಸನೆ” ಯನ್ನು ಅಘ್ರಾಣಿಸಿ ಅದೂ ತನ್ನ ಜಾತಿಯ ಗಂಡು ನಾಯಿಯೇ ಎಂದು ತಿಳಿದು “ತತ್ತೆರೆಕಿ.. ಯೂಸ್ಲೆಸ್!” ಎಂಬಂತೆ ಬಯ್ದು ಪರಮ ನಿರಾಸಕ್ತಿಯಿಂದ ನಮ್ಮೆಡೆ ರಾಜಗಾಂಭೀರ್ಯದ ನಡೆಯಿಂದ ಬಂದಿತು. ಅದರ ಜಾಗದಲ್ಲಿ ಹೆಣ್ಣು ಕಂತ್ರಿ ನಾಯಿ ಇದ್ದರೆ ಮಜಾ ಬೇರೆ ಇತ್ತು ಎಂದು ನನ್ನ ಸ್ನೇಹಿತ ನಕ್ಕ !!.
ಈ ಕಂತ್ರಿ ನಾಯಿಗಳು ಹೀಟಿಗೆ ಬಂದರಂತೂ ಮುಗಿಯಿತು !! ಒಂದಿನಿತೂ ಮಾನ ಮರ್ಯಾದೆ ಇಲ್ಲದೆಯೇ “ನಾಯಿ” ಕಾದಾಡಿದಂತೆ ಕಾದಾಡುತ್ತವೆ. ಹತ್ತಾರು ಗಂಡು ನಾಯಿಗಳೆಲ್ಲಾ ಸೇರಿಕೊಂಡು ಒಂದಕ್ಕಿಂತ ಒಂದು ಮೇಲು ಎಂಬಂತೆ ತಮ್ಮ ತಮ್ಮೊಳಗೇ ಗುದ್ದಾಡುತ್ತವೆ. ಗೆದ್ದ ನಾಯಿಗೆ ಮಿಲನ ಮಹೋತ್ಸವದ ಸಂತಸವಾದರೆ ಸೋತ ಗಂಡು ನಾಯಿಗಳೆಲ್ಲಾ ಮೊಗ ಸೋತ ಸ್ವರವನ್ನು ಕುಂಯಿ .. ಕುಂಯಿ ಎಂದು ಹೊರಡಿಸುತ್ತಾ ಸೊಪ್ಪಗೇ ಮೊಗ ಮಾಡಿಕೊಂಡು ಬಂದ ದಾರಿಗೆ ಸುಂಕವಿಲ್ಲದಂತೆ ಮತ್ತೊಂದೆಡೆ ತೆರಳುತ್ತವೆ.
ಮುಂದುವರೆಯುತ್ತದೆ….
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ ಹಣ ಜಮೆಯಾಗಿಲ್ಲ, ಹಾಗಾದರೆ ನನ್ನ ಖಾತೆಗೆ ಇನ್ನೂ ಬಡ್ಡಿ ಸಿಗುತ್ತದೆಯೇ ಅಥವಾ ನನ್ನ ಹಣ ಹಾಗೆಯೇ ಉಳಿದುಕೊಳ್ಳುತ್ತದೆಯೇ?’ ಎಂಬುದು ಆ ಪ್ರಶ್ನೆ. ಈ ಪ್ರಶ್ನೆಗೆ ಇಪಿಎಫ್ಒ ನೇರವಾಗಿ ನೀಡಿರುವ ಉತ್ತರ – ಹೌದು, ಖಂಡಿತವಾಗಿಯೂ ಬಡ್ಡಿ ಸಿಗುತ್ತದೆ’.ಪಿಎಫ್ಗೆ ಹಣ ಜಮಾ ಮಾಡುವುದು ನಿಂತ ತಕ್ಷಣವೇ ಬಡ್ಡಿ ಬರುವುದು ನಿಂತುಹೋಗುತ್ತದೆ ಎಂಬುದು ಹಲವರಲ್ಲಿರುವ ತಪ್ಪು ಕಲ್ಪನೆ. ಆದರೆ ವಾಸ್ತವವೇ ಬೇರೆ.
http://Visit : www.suddidina.com
3 ವರ್ಷಗಳ ಹಳೆಯ ನಿಯಮದ ಅಸಲಿ ಸತ್ಯವೇನು?
ಈ ಗೊಂದಲಕ್ಕೆ ಕಾರಣ 2016ಕ್ಕಿಂತ ಮೊದಲು ಇದ್ದ ನಿಯಮ. ಹಳೆಯ ನಿಯಮದ ಪ್ರಕಾರ, ಒಂದು ಪಿಎಫ್ ಖಾತೆಗೆ ಸತತ 36 ತಿಂಗಳು (3 ವರ್ಷ) ಯಾವುದೇ ವಂತಿಗೆ ಜಮೆಯಾಗದಿದ್ದರೆ, ಅದನ್ನು `ನಿಷ್ಕ್ರಿಯ ಖಾತೆ’ (Inoperative Account) ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಅಂತಹ ಖಾತೆಗೆ ಬಡ್ಡಿ ನೀಡುವುದನ್ನು ತಡೆಹಿಡಿಯಲಾಗುತ್ತಿತ್ತು. ಇದರಿಂದಾಗಿ ಲಕ್ಷಾಂತರ ಖಾತೆದಾರರ ಹಣಕ್ಕೆ ಬಡ್ಡಿ ಸಿಗದೆ ನಷ್ಟವಾಗುತ್ತಿತ್ತು.ಆದರೆ ಚಂದಾದಾರರ ಹಿತದೃಷ್ಟಿಯಿಂದ ಇಪಿಎಫ್ಒ 2016 ರಲ್ಲಿ ಈ ನಿಯಮಕ್ಕೆ ಮಹತ್ವದ ತಿದ್ದುಪಡಿ ತಂದಿದೆ. ಹೊಸ ಮತ್ತು ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ನಿಯಮಿತವಾಗಿ ಚಕ್ರಬಡ್ಡಿ (Compounding Interest) ಜಮೆಯಾಗುತ್ತಲೇ ಇರುತ್ತದೆ. ನೀವು ಕೆಲಸದಲ್ಲಿದ್ದರೂ, ಇಲ್ಲದಿದ್ದರೂ ಇದು ಅನ್ವಯಿಸುತ್ತದೆ.
ಉದಾಹರಣೆ:
ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. ಒಬ್ಬ ವ್ಯಕ್ತಿ ತಮ್ಮ 40ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ತಮ್ಮ ಪಿಎಫ್ ಖಾತೆಯಲ್ಲಿದ್ದ 10 ಲಕ್ಷ ರೂಪಾಯಿಯನ್ನು ಹಿಂಪಡೆಯದೆ ಹಾಗೆಯೇ ಬಿಡುತ್ತಾರೆ ಎಂದುಕೊಳ್ಳಿ. ಅವರು ಮುಂದಿನ 5 ವರ್ಷಗಳ ಕಾಲ ಅಂದರೆ 45ನೇ ವಯಸ್ಸಿನವರೆಗೆ ಯಾವುದೇ ಹಣವನ್ನು ಜಮೆ ಮಾಡದಿದ್ದರೂ, ಅವರ ಖಾತೆಯಲ್ಲಿರುವ ಆ 10 ಲಕ್ಷ ರೂಪಾಯಿಗೆ ಇಪಿಎಫ್ಒ ಪ್ರತಿ ವರ್ಷ ಘೋಷಿಸುವ ಬಡ್ಡಿ ದರದಂತೆ (ಪ್ರಸ್ತುತ 8.25%) ಬಡ್ಡಿ ಸೇರ್ಪಡೆಯಾಗುತ್ತಲೇ ಹೋಗುತ್ತದೆ. ಇದು ಅವರಿಗೆ 58 ವರ್ಷ ತುಂಬುವವರೆಗೆ ಅಂದರೆ ಇನ್ನೂ 13 ವರ್ಷಗಳ ಕಾಲ ನಿರಂತರವಾಗಿ ಸಿಗುತ್ತದೆ. ಅದೇ ರೀತಿ 50ನೇ ವಯಸ್ಸಿನಲ್ಲಿ ಕೆಲಸ ಬಿಟ್ಟವರಿಗೆ 58 ವರ್ಷದವರೆಗೆ 8 ವರ್ಷಗಳ ಕಾಲ ಬಡ್ಡಿ ಸಿಗುತ್ತದೆ.
ಈ ಒಂದು ತೆರಿಗೆ ನಿಯಮವನ್ನು ಮಾತ್ರ ಮರೆಯಬೇಡಿ!
ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತದೆ ಎಂಬುದು ಖುಷಿಯ ವಿಚಾರವೇ, ಆದರೆ ಇಲ್ಲಿ ಒಂದು ಪ್ರಮುಖ ತೆರಿಗೆ ಎಚ್ಚರಿಕೆಯಿದೆ. ನೀವು ಕೆಲಸ ಮಾಡುತ್ತಿರುವಾಗ ನಿಮ್ಮ ಪಿಎಫ್ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ನೀವು ಕೆಲಸ ಬಿಟ್ಟ ನಂತರ ನಿಮ್ಮ ಖಾತೆಗೆ ಜಮೆಯಾಗುವ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆಯು `ಇತರ ಮೂಲಗಳಿಂದ ಬಂದ ಆದಾಯ’ (Income from Other Sources) ಎಂದು ಪರಿಗಣಿಸುತ್ತದೆ. ಆದ್ದರಿಂದ ಆ ಬಡ್ಡಿಯ ಮೊತ್ತವನ್ನು ನೀವು ನಿಮ್ಮ ವಾರ್ಷಿಕ ಆದಾಯದಲ್ಲಿ ತೋರಿಸಿ, ನಿಮ್ಮ ತೆರಿಗೆ ಸ್ಲ್ಯಾಬ್ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.
ಖಾತೆದಾರರು ಏನು ಮಾಡಬೇಕು?
1. ಕೆಲಸ ಬದಲಾಯಿಸಿದ್ದರೆ: ಹಳೆಯ ಕಂಪನಿಯ ಪಿಎಫ್ ಹಣವನ್ನು ವಿತ್ಡ್ರಾ ಮಾಡುವ ಬದಲು, ನಿಮ್ಮ ಯುಎಎನ್ (UAN) ಮೂಲಕ ಹೊಸ ಕಂಪನಿಯ ಖಾತೆಗೆ ವರ್ಗಾವಣೆ (Transfer) ಮಾಡಿಕೊಳ್ಳಿ. ಇದರಿಂದ ನಿಮ್ಮ ಸೇವಾ ಅವಧಿ ನಿರಂತರವಾಗಿರುತ್ತದೆ.
2. ವೃತ್ತಿ ವಿರಾಮದಲ್ಲಿದ್ದರೆ: 58 ವರ್ಷದವರೆಗೆ ಹಣ ಸುರಕ್ಷಿತವಾಗಿ ಬೆಳೆಯುತ್ತದೆ. ಆದರೆ ನಿಮಗೆ ತುರ್ತು ಅಗತ್ಯವಿಲ್ಲದಿದ್ದರೆ, ಹೆಚ್ಚಿನ ಆದಾಯಕ್ಕಾಗಿ ಬೇರೆಡೆ ಹೂಡಿಕೆ ಮಾಡುವ ಬಗ್ಗೆಯೂ ಯೋಚಿಸಬಹುದು.
3. 58 ವರ್ಷದ ನಂತರ: ಖಾತೆದಾರನಿಗೆ 58 ವರ್ಷ ತುಂಬಿದ ನಂತರವೂ ಹಣವನ್ನು ಹಿಂಪಡೆಯದಿದ್ದರೆ ಮಾತ್ರ ಆ ಖಾತೆಯನ್ನು ಮತ್ತೆ `ನಿಷ್ಕ್ರಿಯ’ ಎಂದು ಪರಿಗಣಿಸಿ ಬಡ್ಡಿ ನೀಡುವುದನ್ನು ಶಾಶ್ವತವಾಗಿ ನಿಲ್ಲಿಸಲಾಗುತ್ತದೆ.ಆದ್ದರಿಂದ 5 ವರ್ಷದಿಂದ ಹಣ ಜಮೆಯಾಗದಿದ್ದರೂ ಚಿಂತಿಸಬೇಕಿಲ್ಲ, ನಿಮ್ಮ ಪಿಎಫ್ ಹಣ ಇಪಿಎಫ್ಒ ನಲ್ಲಿ ಸುರಕ್ಷಿತವಾಗಿ ಬಡ್ಡಿಯೊಂದಿಗೆ ಬೆಳೆಯುತ್ತಿದೆ.

ದಿನದ ಸುದ್ದಿ
ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
ಸುದ್ದಿದಿನ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಷಾಂತರ ಬಿಎಂಟಿಸಿ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಬಸ್ಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಇರುವುದಿಲ್ಲ. ಖಾಸಗಿ ರೈಡ್-ಹೇಲಿಂಗ್ ಆ್ಯಪ್ಗಳಾದ ಓಲಾ, ಉಬರ್, ರ್ಯಾಪಿಡೋ ನಂತಹ ಆ್ಯಪ್ಗಳಲ್ಲೇ ನೇರವಾಗಿ ಬಿಎಂಟಿಸಿ ಬಸ್ಗಳ ಲೈವ್ ಲೋಕೇಶನ್ ಟ್ರ್ಯಾಕ್ ಮಾಡಲು ಮತ್ತು ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಮಹತ್ವದ ಸೇವೆಯು ಇದೇ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
http://Visit : www.suddidina.com
ಈ ಕುರಿತು ಮಾಹಿತಿ ನೀಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ, ನಾವು ಹಲವು ಖಾಸಗಿ ರೈಡ್ ಅಗ್ರಿಗೇಟರ್ ಕಂಪನಿಗಳ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ಇದಕ್ಕಾಗಿ ಶೀಘ್ರದಲ್ಲೇ ಒಂದು ಸಾಮಾನ್ಯ ಮಾನದಂಡದ ಒಪ್ಪಂದವನ್ನು (Standard Agreement) ಜಾರಿಗೆ ತರಲಿದ್ದೇವೆ. ಈ ಒಪ್ಪಂದದ ನಿಯಮಗಳಿಗೆ ಬದ್ಧರಾಗುವ ಯಾವುದೇ ಖಾಸಗಿ ಕಂಪನಿಯು ಬಿಎಂಟಿಸಿಯ ಲೈವ್ ಡೇಟಾವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಇದರಿಂದ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಿಲ್ಲ. ಕ್ಯಾಬ್ ಅಥವಾ ಆಟೋಗಳಿಂದ ಇಳಿದು ಮುಂದಿನ ಪ್ರಯಾಣಕ್ಕೆ ಬಸ್ ಹಿಡಿಯುವವರಿಗೆ ಇದು ಅತ್ಯಂತ ಸಹಕಾರಿಯಾಗಲಿದೆ ಎಂದು ಹೇಳಿದರು.
ನಮ್ಮ ಬಿಎಂಟಿಸಿ 2.0′ ಆ್ಯಪ್ನಲ್ಲಿ ಏನಿದೆ ಹೊಸತು?
ಖಾಸಗಿ ಆ್ಯಪ್ಗಳ ಜೊತೆ ಡೇಟಾ ಹಂಚಿಕೊಳ್ಳುವುದರ ಜೊತೆಗೆ, ಬಿಎಂಟಿಸಿ ತನ್ನ ಸ್ವಂತ ಮೊಬೈಲ್ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸುತ್ತಿದೆ. ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0′ ಅನ್ನು ಮುಂದಿನ ವಾರದ ಅಂತ್ಯದೊಳಗೆ ಲೋಕಾರ್ಪಣೆಗೊಳಿಸಲಾಗುವುದು. ಈ ಹಿಂದೆ ಆ್ಯಪ್ ಕುರಿತು ಪ್ರಯಾಣಿಕರು ನೀಡಿದ್ದ ದೂರುಗಳು ಮತ್ತು ತಾಂತ್ರಿಕ ದೋಷಗಳನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ. ಹೊಸ ಆ್ಯಪ್ನಲ್ಲಿ ಬಿಎಂಟಿಸಿ ನೆಟ್ವರ್ಕ್ನಲ್ಲಿ ಸಂಚರಿಸುವ ಪ್ರತಿಯೊಂದು ಬಸ್ನ ಲೈವ್ ಲೋಕೇಶನ್ ಅತ್ಯಂತ ನಿಖರವಾಗಿ ಲಭ್ಯವಾಗಲಿದೆ. ಪ್ರಸ್ತುತ ಬಿಎಂಟಿಸಿ ಬಳಿ 1,771 ಎಲೆಕ್ಟ್ರಿಕ್ ಬಸ್ಗಳು ಸೇರಿದಂತೆ ಒಟ್ಟು 6,938 ಬಸ್ಗಳಿವೆ. ಪ್ರತಿದಿನ ಸರಾಸರಿ 6,200 ಬಸ್ಗಳು ನಗರದಾದ್ಯಂತ ಕಾರ್ಯಾಚರಣೆ ನಡೆಸುತ್ತಿವೆ.
ಸಾರಿಗೆ ಸಚಿವರ ಮಹತ್ವದ ಸಭೆ ಮತ್ತು ನಿರ್ದೇಶನ:
ವಿಧಾನಸೌಧದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಇಲಾಖೆ, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
200 ಹೊಸ ಮಿನಿ ಬಸ್ಗಳ ಖರೀದಿ:
ಮೆಟ್ರೋ ಫೀಡರ್ ಸೇವೆ ಹಾಗೂ ನಗರದ ಕಿರಿದಾದ ರಸ್ತೆಗಳ ಸಂಪರ್ಕಕ್ಕಾಗಿ 200 ಹೊಸ 7 ಮೀಟರ್ ಉದ್ದದ ಮಿನಿ ಡೀಸೆಲ್ ಬಸ್ಗಳನ್ನು ಖರೀದಿಸಲು ಬಿಎಂಟಿಸಿ ನಿರ್ಧರಿಸಿದೆ. ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಕಿರಿದಾದ ರಸ್ತೆಗಳಲ್ಲಿ ಈ ಚಿಕ್ಕ ಬಸ್ಗಳು ಸುಲಭವಾಗಿ ಸಂಚರಿಸಬಲ್ಲವು. ಸದ್ಯ 9 ಮತ್ತು 12 ಮೀಟರ್ ಉದ್ದದ 255 ಬಸ್ಗಳು ಮೆಟ್ರೋ ಫೀಡರ್ ಆಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಬಜೆಟ್ನಲ್ಲಿ ಘೋಷಿಸಲಾದ ನಾಲ್ಕು ನಿಗಮಗಳಿಗೆ 1,000 ಬಸ್ ಖರೀದಿ ಯೋಜನೆಯ ಭಾಗವಾಗಿ ಈ ಖರೀದಿ ನಡೆಯಲಿದೆ. ಮುಂದಿನ 6 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಬನ್ನೇರುಘಟ್ಟ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಪಿಂಕ್ ಲೈನ್ನ 6 ನಿಲ್ದಾಣಗಳು ಸೇರಿದಂತೆ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆ ವಿಸ್ತರಿಸಲು ಬಿಎಂಆರ್ಸಿಎಲ್ ಮತ್ತು ಸಂಚಾರ ಪೊಲೀಸರ ಜೊತೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ.
ಎಸಿ ಬಸ್ ಸೇವೆ ಹೆಚ್ಚಳಕ್ಕೆ ಸೂಚನೆ:
ಪಿಎಂ ಇ-ಡ್ರೈವ್ ಯೋಜನೆಯಡಿ ಬರಲಿರುವ 4,500 ಎಲೆಕ್ಟ್ರಿಕ್ ಬಸ್ಗಳ ಪೈಕಿ 200 ಮಿನಿ ಎಸಿ ಇ-ಬಸ್ಗಳನ್ನು ಎಲ್ಲಾ ಮೆಟ್ರೋ ನಿಲ್ದಾಣಗಳ 5 ಕಿ.ಮೀ ವ್ಯಾಪ್ತಿಯಲ್ಲಿ ಓಡಿಸುವಂತೆ ಸಚಿವರು ಸೂಚಿಸಿದ್ದಾರೆ. ಐಟಿ ಕಂಪನಿ ಉದ್ಯೋಗಿಗಳು ಖಾಸಗಿ ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೇರೇಪಿಸಲು ಐಟಿ ಪಾರ್ಕ್ಗಳ ಮಾರ್ಗಗಳಲ್ಲಿ ಎಸಿ ಬಸ್ ಸೇವೆ ಹೆಚ್ಚಿಸಲು ಮತ್ತು ಐಟಿ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಎಲ್ಲಾ ನಿಗಮಗಳಲ್ಲಿ ಆದಾಯ ಸೋರಿಕೆ ತಡೆದು ಅನಗತ್ಯ ವೆಚ್ಚ ಕಡಿತಗೊಳಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವರು ಸೂಚಿಸಿದ್ದಾರೆ.

ದಿನದ ಸುದ್ದಿ
EV ನೋಂದಣಿಯಲ್ಲಿ ಕರ್ನಾಟಕದ ಸಾಧನೆ – ಶುದ್ಧ ಚಲನೆಗೆ ಬೆಸ್ಕಾಂ ಮುನ್ನಡೆ
ಸುದ್ದಿದಿನ,ಬೆಂಗಳೂರು: ರಾಜ್ಯವು ಇವಿ ನೋಂದಣಿಯಲ್ಲಿ ದೇಶದಲ್ಲೇ ಪ್ರಮುಖ ಸ್ಥಾನ ಪಡೆದಿದ್ದು, ಶುದ್ಧ ಚಲನೆಗೆ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಹಾಗೂ ವಿಶ್ವ ಇವಿ ದಿನದ ಸಂದರ್ಭದಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಮುನ್ನಡೆ ಸಾಧಿಸಿರುವುದು ಶ್ಲಾಘನೀಯ.
http://Visit : www.suddidina.com
ಕರ್ನಾಟಕವು ಒಟ್ಟು ಇವಿ ನೋಂದಣಿಯಲ್ಲಿ 3ನೇ ಸ್ಥಾನ ಪಡೆದಿದ್ದು, e-2W (ಎಲೆಕ್ಟ್ರಿಕ್ ಎರಡು ಚಕ್ರ ವಾಹನ) ಮತ್ತು e-4W (ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನ) ನೋಂದಣಿಯಲ್ಲಿ 2ನೇ ಸ್ಥಾನ ಪಡೆದಿದೆ. ಇದು ರಾಜ್ಯದ ಜನರು ಎಲೆಕ್ಟ್ರಿಕ್ ವಾಹನಗಳನ್ನು ಸ್ವೀಕರಿಸುವ ಪ್ರಮಾಣ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. 2027 ಹಣಕಾಸು ವರ್ಷದಲ್ಲಿ EV ಪ್ರವೇಶ ಪ್ರಮಾಣ 14.67% ಆಗಿದ್ದು, ಇದು ದೇಶದ ಮಟ್ಟದಲ್ಲಿ ಗಮನಾರ್ಹ ಸಾಧನೆಯಾಗಿದೆ.
ರಾಜ್ಯದ ಇವಿ ಮೂಲಸೌಕರ್ಯ ಅಭಿವೃದ್ಧಿಗೆ ಬೆಸ್ಕಾಂ ನೊಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವಿ ಚಾರ್ಜಿಂಗ್ ಸ್ಟೇಷನ್ಗಳ ಸ್ಥಾಪನೆ, ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಚಾರ್ಜಿಂಗ್ ಸೌಲಭ್ಯ, ಹಾಗೂ ಶುದ್ಧ ಚಲನೆಗೆ ಅಗತ್ಯವಾದ ತಂತ್ರಜ್ಞಾನವನ್ನು ಒದಗಿಸುವಲ್ಲಿ ಬೆಸ್ಕಾಂ ಪ್ರಮುಖ ಪಾತ್ರವಹಿಸಿದೆ.
ಕರ್ನಾಟಕ ಸರ್ಕಾರವು ಶುದ್ಧ ಚಲನೆಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವಿ ಖರೀದಿಗೆ ಪ್ರೋತ್ಸಾಹಕ ಯೋಜನೆಗಳು, ಚಾರ್ಜಿಂಗ್ ಮೂಲಸೌಕರ್ಯ ವಿಸ್ತರಣೆ, ಹಾಗೂ ಹಸಿರು ತಂತ್ರಜ್ಞಾನವನ್ನು ಉತ್ತೇಜಿಸುವ ಕ್ರಮಗಳು ಇವಿ ಕ್ರಾಂತಿಗೆ ಬಲ ನೀಡಿವೆ.
ಇವಿ ಬಳಕೆಯ ಹೆಚ್ಚಳದಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದು, ಇಂಧನ ಅವಲಂಬನೆ ಕಡಿಮೆಯಾಗುವುದು ಹಾಗೂ ಶುದ್ಧ ಶಕ್ತಿಯ ಬಳಕೆ ಹೆಚ್ಚಾಗುವುದು. ಇದು ಕರ್ನಾಟಕವನ್ನು ಹಸಿರು ರಾಜ್ಯವಾಗಿ ರೂಪಿಸುವತ್ತ ಪ್ರಮುಖ ಹೆಜ್ಜೆಯಾಗಿದೆ.
ವಿಶ್ವ ಇವಿ ದಿನದ ಅಂಗವಾಗಿ, ಕರ್ನಾಟಕವು ತನ್ನ ಸಾಧನೆಗಳನ್ನು ಹಂಚಿಕೊಂಡು, ಮುಂದಿನ ದಿನಗಳಲ್ಲಿ ಶುದ್ಧ ಚಲನೆಗೆ ಇನ್ನಷ್ಟು ಬಲ ನೀಡಲು ಬದ್ಧವಾಗಿದೆ. ಇವಿ ಕ್ರಾಂತಿಯ ಮೂಲಕ ಕರ್ನಾಟಕವು ಭಾರತದ ಭವಿಷ್ಯವನ್ನು ಹಸಿರು ಮತ್ತು ಶಾಶ್ವತ ದಿಕ್ಕಿನಲ್ಲಿ ಮುನ್ನಡೆಸುತ್ತಿದೆ.

-
ದಿನದ ಸುದ್ದಿ3 days agoಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ
-
ದಿನದ ಸುದ್ದಿ3 days agoರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
-
ದಿನದ ಸುದ್ದಿ3 days agoಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
-
ದಿನದ ಸುದ್ದಿ2 days agoಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
-
ದಿನದ ಸುದ್ದಿ3 days agoಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
-
ದಿನದ ಸುದ್ದಿ3 days ago5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
-
ದಿನದ ಸುದ್ದಿ3 days agoಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
-
ದಿನದ ಸುದ್ದಿ3 days agoವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್


