ಲೈಫ್ ಸ್ಟೈಲ್
ಸ್ಟಿರಾಯ್ಡುಗಳು : ಜೀವರಕ್ಷಕಗಳೋ ? ಜೀವ ನಾಶಕಗಳೋ ?

- ಡಾ: ಎನ್.ಬಿ.ಶ್ರೀಧರ
ಘಟನೆ 1
“ಸಾರ್.. ಇಲ್ಲೊಂದು ಬೆಲೆಬಾಳುವ ಎತ್ತಿಗೆ ಸಿಕ್ಕ ಪಟ್ಟೆ ಜೇನುನೊಣ ಕಚ್ಚಿ ಎತ್ತು ಸಾಯುವ ಸ್ಥಿತಿಯಲ್ಲಿದೆ. ಇದನ್ನು ಬದುಕಿಸಲು ಚಿಕಿತ್ಸೆ ಸೂಚಿಸಿ”. ಇದು ಉತ್ತರ ಕರ್ನಾಟಕ ಭಾಗದಲ್ಲಿನ ನನ್ನ ವಿದ್ಯಾರ್ಥಿ ಪಶುವೈದ್ಯರ ಕೋರಿಕೆ. ಅದಕ್ಕೆ ಸ್ಟಿರಾಯ್ಡ್ ಅವಶ್ಯಕತೆ ಇದೆ. ಇಂತಿಷ್ಟು ಪ್ರಮಾಣದಲ್ಲಿ ಚುಚ್ಚುಮದ್ದಿನ ರೂಪದಲ್ಲಿ ನೀಡಿ ಹಾಗೂ ಉಳಿದಂತೆ ಇತರ ಚಿಕಿತ್ಸೆ ನೀಡಿ ಎಂದು ಸಲಹೆ ನೀಡಿದೆ. ಮರು ದಿನ ಎತ್ತು ಚೇತರಿಸಿಕೊಂಡಿತು ಸಾರ್.. ಧನ್ಯವಾದ ಅಂದು ಅನುಸರಣಾ ವರದಿ ಬಂತು.
ಘಟನೆ 2
ನಮ್ಮ ಸ್ನೇಹಿತರನ್ನು ಅವರ ಕಾಯಿಲೆಯೊಂದಕ್ಕೆ ಚಿಕಿತ್ಸೆಗಾಗಿ ತಜ್ಞರೊಬ್ಬರ ಬಳಿ ಕರೆದೊಯ್ದಿದ್ದೆ. ಎಲ್ಲಾ ಪರೀಕ್ಷೆಗಳಾದ ಮೇಲೆ ಚಿಕಿತ್ಸಾ ಚೀಟಿಯನ್ನು ವೈದ್ಯರು ವಿವರಿಸಿದರು. ನೀಡಿ… ಇವರೆ.. ನಿಮ್ಮ ಕಾಯಿಲೆ ಇಂತಹದು. ಇದರ ಚಿಕಿತ್ಸೆಗಾಗಿ ಸಣ್ಣ ಪ್ರಮಾಣದಲ್ಲಿ ಸ್ಟಿರಾಯ್ಡ್ ಒಂದನ್ನು ಬರೆದಿದ್ದೇನೆ. ಇದು ನಿಮ್ಮ ಕಾಯಿಲೆಯಲ್ಲಿ ಬಹಳ ಅನಿವಾರ್ಯ.
ಇಂತಿಷ್ಟು ದಿನ ತೆಗೆದುಕೊಳ್ಳಿ ಎನ್ನುತ್ತಿದ್ದಂತೆ ನನ್ನ ಸ್ನೇಹಿತರು ಪಕ್ಕದಲ್ಲಿ ಹಾವು ಹಾದು ಹೋದಂತೆ ಹಾರಿಬಿದ್ದರು. ಛೆ.. ಛೆ.. ಸ್ಟಿರಾಯ್ಡುಗಳೇ? ನಾನು ತೆಗೆದುಕೊಳ್ಳಲು ಸಾಧ್ಯವೇ ಇಲ್ಲ !!. ಈ ಡಾಕ್ಟ್ರೇ ಸರಿ ಇಲ್ಲ. ಸ್ಟಿರಾಯ್ಡುಗಳನ್ನು ಬರ್ದು ಕೊಡ್ತಾರೆ. ಇವರಿಗೆ ಅವರ ಕಾಯಿಲೆಗಳಲ್ಲಿ ಸ್ಟಿರಾಯ್ಡುಗಳ ಬಗ್ಗೆ ಅವರ ಕಾಯಿಲೆಯಲ್ಲಿ ಅನಿವಾರ್ಯತೆಯನ್ನು ವಿವರಿಸಿ ಅವರು ಅದನ್ನು ಸ್ವಲ್ಪ ದಿನ ತೆಗೆದುಕೊಳ್ಳುವಂತೆ ಮಾಡಲು ಸಾಕು ಸಾಕಾಯಿತು!!
ಘಟನೆ 3
ಸುಮಾರು ವರ್ಷಗಳ ಹಿಂದಿನ ಕಥೆ. ನಮ್ಮ ಪ್ರಯೋಗಶಾಲೆಯಲ್ಲಿರುವ ಒಬ್ಬರಿಗೆ ” ಸೋರಿಯಾಸಿಸ್” ಕಾಯಿಲೆ ಇತ್ತು. ಈ ಕಾಯಿಲೆಗೆ ಉತ್ತಮ ಔಷಧಿ ಇಲ್ಲ. ಇದಕ್ಕೆ ಅಲೋಪತಿಯಲ್ಲಿ ಇರುವ ಔಷಧಗಳನ್ನು ತೆಗೆದುಕೊಳ್ಳುತ್ತಾ ದಿನ ದೂಡುತ್ತಿದ್ದರು. ಕೈ ಮೇಲೆ ತುರಿಕೆಯ ಕಲೆಗಳು ಎದ್ದು ಕಾಣುತ್ತಿದ್ದವು.
ಸ್ವಲ್ಪ ದಿನ ಬಿಟ್ಟು ನೋಡಿದರೆ ಏನಾಶ್ಚರ್ಯ !! ಕಲೆಗಳೆಲ್ಲಾ ಮಾಯ !! ಔಷಧಶಾಸ್ತ್ರ ತಜ್ಞರೆಂದು ಹೇಳಿಕೊಳ್ಳುವ ನಮಗೇ ಗೊತ್ತಾಗದ ಹಾಗೇ ಹೊಸ ಔಷಧಿ ಬಂದು ಬಿಟ್ಟಿತೇ ಎಂದು ಆಶ್ಚರ್ಯ ಪಟ್ಟೆ!. ಕೇಳಿದರೂ ನಿಮಗೆ ಆ ಔಷಧದ ವಿಷಯ ಬೇಡ ಸಾರ್. ನೀವು ಅದನ್ನೆಲ್ಲಾ ನಂಬಲ್ಲ ಎಂದು ನುಣುಚಿಕೊಂಡು ಬಿಟ್ಟರು. ವಿಷಯ ಮರೆತು ಹೋಯಿತು.
ಸ್ವಲ್ಪ ದಿನದ ನಂತರ ಅವರಿಂದ ದೂರವಾಣಿ ಕರೆ!. ಸಾರ್. ಸ್ವಲ್ಪ ಮೈಗೆ ಹುಶಾರಿಲ್ಲ.. ನಾಲ್ಕು ದಿನ ರಜೆ ಬೇಕು.. ಸರಿ. ರಜೆ ಮುಗಿಸಿ ಬಂದ ನಂತರ ಅವರಲ್ಲಿ ಏನೋ ಬದಲಾವಣೆ ಗಮನಿಸಿದೆ. ಮುಖವೆಲ್ಲಾ ಸ್ವಲ್ಪ ದಪ್ಪವಾಗಿತ್ತು. ದೇಹದ ತೂಕವೂ ಜಾಸ್ತಿಯಾದ ಹಾಗೇ ಕಾಣಿಸಿತು. ಅಲ್ರೀ… ಯಾಕೋ ದಪ್ಪ ಆದ ಹಾಗೇ ಕಾಣ್ತೀರಲ್ಲ!! ಯಾಕೆ ? ಅಂದೆ. ಇಲ್ಲ ಸಾರ್. ಒಂದು ಹತ್ತು ದಿನದಿಂದ ಆಲಸ್ಯ. ಬೆಳಿಗ್ಗೆ ವಾಕ್ ನಿಲ್ಲಿಸಿ ಬಿಟ್ಟೆ. ಅದಕ್ಕೆ ತೂಕ ಜಾಸ್ತಿಯಾಗಿ ಬಿಟ್ಟಿದೆ ಅಂದರು.
ನನಗೆ ಸಂಶಯವಾಗಿ ಏನಾದ್ರೂ ಔಷಧ ತೆಗೆದುಕೊಳ್ತಾ ಇದ್ದೀರೇನ್ರಿ ?? ಅಂದೆ. ಹೌದು ಸಾರ್. ಈ ಸೋರಿಯಾಸಿಸ್” ಗೆ ಹಳ್ಳಿ ಔಷಧಿ ತಗೋಳ್ತಾ ಇದ್ದೀನಿ ಸಾರ್. ಅದ್ರಿಂದ್ಲೇ ನನಗೆ ಹುಶಾರಾಗಾದೆ. ಅದೇನೂ ತೊಂದ್ರೆ ಇಲ್ಲ ಸಾರ್. ಅಯುರ್ವೇದಿಕ್ ಔಷಧಿ. ಸೈಡ್ ಇಫೆಕ್ಟ್ ಇಲ್ವಂತೆ ಸಾರ್.. ಅಂದ್ರು.
“ಸರಿ. ಔಷಧಿ ತಗೊಂಡು ಬನ್ನಿ ನೋಡೋಣ” ಅಂದೆ. ಕಾಗದದ ಪೊಟ್ಟಣದಲ್ಲಿ ಕಟ್ಟಿದ ಕಂದು ಬಣ್ಣದ ಪುಡಿಯಂತಹ ವಸ್ತುವೊಂದನ್ನು ತಂದು ಕೊಟ್ಟರು. ಅದನ್ನು ನಮ್ಮ ಪ್ರಯೋಗಾಲಯದಲ್ಲಿ ತಪಾಸಣೆಗೆ ಒಳಪಡಿಸಿದೆ. ಅದರಲ್ಲಿ ಸ್ಟಿರೋಯ್ಡ್ ಇರುವುದು ಪತ್ತೆ ಆಯ್ತು.
ನಂತರ ಗೊತ್ತಾಗಿರುವುದು ಆ ಪಂಡಿತ ಆಯುರ್ವೇದದ ಹೆಸರಿನಲ್ಲಿ ಸ್ಟಿರೋಯ್ಡ್ಗಳನ್ನು ಪುಡಿಯಲ್ಲಿ ಬೆರೆಸಿ ಜನರಿಗೆ ನೀಡಿ ಮಂಕು ಬೂದಿ ಎರಚಿ ಹಣ ಕೀಳುತ್ತಿದ್ದ. ಈ ಸ್ಟಿರೋಯ್ಡ್ ಗಳು ಶರೀರದ ರೋಗ ನಿರೋಧಕ ಕಣಗಳನ್ನು ಹತ್ತಿಕ್ಕಿ ತಾತ್ಕಾಲಿಕ ಉಪಶಮನ ನೀಡಿದರೂ ಅವುಗಳ ಅಡ್ಡಪರಿಣಾಮದಿಂದ ಶರೀರದಲ್ಲಿ ನೀರು ತುಂಬಿಕೊಂಡು ದೇಹದ ತೂಕ ಹೆಚ್ಚಿಸಿ ಆಲಸ್ಯವನ್ನುಂಟು ಮಾಡಿದೆ ಅಂತ ಗೊತ್ತಾಯ್ತು. ಔಷಧ ನಿಲ್ಲಿಸಿದ ಮೇಲೆ ಅವರ ಆರೋಗ್ಯ ಸುಧಾರಿಸಿತು.
ಘಟನೆ 4
ಕುದುರೆಗಳು ಚೆನ್ನಾಗಿ ಓಡಲು ಮತ್ತು ಜಾನುವಾರುಗಳು ಚೆನ್ನಾಗಿ ಕೊಬ್ಬಲು ಸ್ಟಿರಾಯ್ಡುಗಳ ಬಳಕೆ ಅತಿಯಾಗಿ ಅವುಗಳಿಗೆ “ಡೋಪಿಂಗ್ ಪರೀಕ್ಷೆ” ಈಗ ಕಡ್ಡಾಯವಾಗಿದೆ. ದೇಹ ಹುರಿಗೊಳಿಸುವ ಸಲುವಾಗಿ ತನ್ನ ಜಿಮ್ ಗ್ರಾಹಕರಿಗೆ ಸ್ಟಿರಾಯ್ಡ್ ಸಹಿತ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಜಿಮ್ ತರಬೇತುದಾರನನ್ನು ಬಂಧಿಸಲಾಗಿದೆ ಮತ್ತು ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಸ್ಟಿರಾಯ್ಡ್ಸ್ ಉಪಯೋಗಿಸುತ್ತಿದ್ದ ಮತ್ತು ಸಿಕ್ಕಿ ಬಿದ್ದು ಕಂಬಿ ಎಣಿಸಿದ ಇತ್ಯಾದಿ.. ಸುದ್ಧಿಗಳು ಮಾಧ್ಯಮಗಳಲ್ಲಿ ಹರಿದಾಡಿ ಜನರಲ್ಲಿ ಸ್ಟಿರಾಯ್ಡುಗಳ ಬಗ್ಗೆ ಭಯನ್ನು ಹುಟ್ಟಿಸಿದವು. ಇವುಗಳಿಗೆ “ಉದ್ಧೀಪನ ಔಷಧಿಗಳು” ಎಂದೂ ಕರೆಯುತ್ತಾರೆ.
ಈ ಘಟನೆಗಳು ಸ್ಟಿರಾಯ್ಡುಗಳ ಉಪಯುಕ್ತತೆ ಮತ್ತು ಅವುಗಳ ದುಷ್ಪರಿಣಾಮ ಇವುಗಳ ಕುರಿತು ನನ್ನ ಗಮನಕ್ಕೆ ಬಂದ ಚಿಕ್ಕ ಪುಟ್ಟ ಉದಾಹರಣೆಗಳು ಅಷ್ಟೆ.. ಇಂತಹ ಸಹಸ್ರಾರು ಜನರು ಈ ತರಹದ ಸುಳ್ಳು ಔಷಧಗಳಿಗೆ ಬಲಿಯಾಗಿರಬಹುದೇನೋ?
ಹಾಗಿದ್ದರೆ ಏನಿದು ಸ್ಟಿರೋಯ್ಡ್? ಯಾಕೆ ಇದನ್ನು ಬಳಸುತ್ತಾರೆ? ಏನಿದರ ಪರಿಣಾಮ ಮತ್ತು ಅಡ್ಡಪರಿಣಾಮ? ಅನ್ನುವ ಬಗ್ಗೆ ತಿಳಿಯೋಣವೇ?
ಮೆದುಳಿನಿಂದ ಸ್ರವಿಸಲ್ಪಡುವ ಎಸಿಟಿಹೆಚ್ ಹಾರ್ಮೋನಿನಿಂದ ಪ್ರಚೋದಿತವಾಗಿ ಅಡ್ರಿನಲ್ ಗ್ರಂಥಿಯ ಕಾರ್ಟೆಕ್ಸ್ ಭಾಗದಿಂದ “ಕಾರ್ಟಿಕೋಸ್ಟಿರೋಯ್ಡ್” ರಕ್ತದಲ್ಲಿ ಸ್ರವಿಸಲ್ಪಡುತ್ತದೆ. ಪ್ರಸಕ್ತ ಮಾರುಕಟ್ಟೆಯಲ್ಲಿ ಇರುವ ಅನೇಕ ಸ್ಟಿರಾಯ್ಡುಗಳಿಗೆ ಇದೇ ಮೂಲ ಸೌಧ. ಇದರ ಪರಿಣಾಮವನ್ನು ಎರಡು ಮುಖ್ಯ ಘಟ್ಟದಲ್ಲಿ ವಿಭಜಿಸಬಹುದು.
ಅದೆ ಗ್ಲುಕೋಕಾರ್ಟಿಕಾಯ್ಡ್ ಪರಿಣಾಮ ಮತ್ತು ಮಿನೆರಲೋ ಕಾರ್ತಿಕಾಯ್ಡ್ ಪರಿಣಾಮಗಳು. ಶರೀರ ಹೆಚ್ಚಿನ ಕೆಲಸ ಮಾಡಬೇಕಾದರೆ ಅವಶ್ಯವಿರುವ ಗ್ಲುಕೋಸ್ ಬೇಕಾದಾಗ ಗ್ಲುಕೋಕಾರ್ಟಿಕಾಯ್ಡ್ ಪರಿಣಾಮವೆಂದರೆ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ಪಿತ್ತಜನಕಾಂಗ, ಮಾಂಸಖಂಡಗಳು ಮತ್ತು ಕೊಬ್ಬಿನ ಕಣಗಳ ವಿಭಜನೆಯಿಂದ ಹೆಚ್ಚಿಸುವುದು.ಈ ವರ್ಗಕ್ಕೆ ಕೆಲವು ಉದಾಹರಣೆಗಳೆಂದರೆ ಕಾರ್ಟಿಸೊಲ್, ಪ್ರೆಡ್ನಿಸೋನ್, ಪ್ರೆಡ್ನಿಸೋಲೊನ್, ಮೆಥೈಲ್ ಪ್ರೆಡ್ನಿಸೋಲೊನ್,ಡೆಕ್ಸಾಮಿಥಸೋನ್, ಬೆಟಾಮಿಥಸೋನ್ ಇತ್ಯಾದಿ.
ಇನ್ನು ಮಿನೆರಲೋಕಾರ್ಟಿಕಾಯ್ಡ್ ಪರಿಣಾಮವೆಂದರೆ ಶರೀರದಲ್ಲಿ ಹೆಚ್ಚಿನ ಪೊಟ್ಯಾಸಿಯಂ ಅಂಶವನ್ನು ಅಲ್ಡೋಸ್ಟಿರೋನ್ ಅಂಶದ ಮೂಲಕ ಉಳಿಸಿಕೊಳ್ಳುವುದು. ಇದಕ್ಕೆ ಉದಾಹರಣೆಗಳೆಂದರೆ ಅಲ್ಡೋಸ್ಟಿರೋನ್ ಪ್ಲುಡ್ರೋಕಾರ್ಟಿಸೋನ್ ಇತ್ಯಾದಿ.
ಇದಲ್ಲದೇ “ಅನಾಬೋಲಿಕ್ ಸ್ಟಿರಾಯ್ಡ್” ಎಂಬ ಮತ್ತೊಂದು ವರ್ಗವಿದ್ದು ಇದನ್ನು ವಯಸ್ಸಾದ ವ್ಯಕ್ತಿಗಳಲ್ಲಿ ಮಾಂಸಖಂಡಗಳು ದುರ್ಬಲವಾದಾಗ ಉಪಯೋಗಿಸುತ್ತಾರೆ. ಆದರೆ ಬಹಳ ಸಲ ಇದನ್ನು ಕ್ರೀಡಾಪಟುಗಳು ದುರ್ಬಳಕೆ ಮಾಡಿ, ಹಿಂಬಾಗಿಲಿನಿಂದ ಕ್ರೀಡೆಯನ್ನು ಗೆಲ್ಲುವ ಹುನ್ನಾರ ಮಾಡುತ್ತಾರೆ.
“ಅನಾಬೋಲಿಕ್ ಸ್ಟಿರಾಯ್ಡ್” ಇವು ಗಂಡು ಹಾರ್ಮೊನಾದ ಟೆಸ್ಟೋಸ್ಟಿರಾನ್ ಇದರ ಪ್ರತಿರೂಪವಾಗಿದ್ದು ಮಾಂಸಖಂಡಗಳಲ್ಲಿ ಪ್ರೋಟೀನುಗಳ ಬಳಕೆ ಜಾಸ್ತಿ ಮಾಡುತ್ತವೆ. ಇದರಿಂದ ಮಾಂಸಖಂಡಗಳು ಹಿಗ್ಗಿ, ಕುಸ್ತಿ ಮತ್ತು ಬಾಕ್ಸಿಂಗ್ ಪಟುಗಳು ಮತ್ತು ಅನೇಕ ಕ್ರೀಡಾಪಟುಗಳು ಇದರ ದುರ್ಬಳಕೆ ಮಾಡಿ “ಉದ್ಧೀಪನ ಔಷಧಿ” ಪತ್ತೆಯ ಸಮಯದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಇದಕ್ಕೆ ಉದಾಹರಣೆಯೆಂದರೆ ಆಂಡ್ರೋಸ್ಟೆನೆಡಿಯೋನ್, ಸ್ಟಾನಜೋಲೋಲ್, ನಾಂಡ್ರೋಲೋನ್ ಇತ್ಯಾದಿ.
ಮತ್ತೊಂದು ಮುಖ್ಯವಾದ ಅಂಶವೆಂದರೆ ಕಾರ್ಟಿಕೋಸ್ಟಿರಾಯ್ಡುಗಳು ಶರೀರದಲ್ಲಿ ಉರಿಯೂತವನ್ನುಂಟು ಮಾಡಬಲ್ಲ ಸೈಟೊಕೈನ್ ಮತ್ತಿತರ ಪದಾರ್ಥಗಳ ಉತ್ಪಾದನೆ ಮತ್ತು ಅವುಗಳ ಕಾರ್ಯವನ್ನು ಕುಂಠಿತಗೊಳಿಸಿ ಉರಿಯೂತವನ್ನು ಕಡಿಮೆ ಮಾಡುತ್ತವೆ. ಕಾರಣ ಇವುಗಳನ್ನು “ ಜೀವ ರಕ್ಷಕ” ಔಷಧಗಳ ಪಟ್ಟಿಯಲ್ಲಿ ಸೇರಿಸುತ್ತಾರೆ.
ಈ ಔಷಧಿ ಇರದಿದ್ದರೆ ಅಪಘಾತ, ಹಾವು ಕಡಿತ, ಜೇನು ಹುಳ ಕಡಿತದಂತ ಅನೇಕ ಜೀವ ತೆಗೆಯುವ ಸ್ಥಿತಿಗಳಿಗೆ “ಜೀವ ರಕ್ಷಕ” ಔಷಧಗಳೇ ಇಲ್ಲವಾಗಿದ್ದವು. ನಮ್ಮ ದೇಹಕ್ಕೆ ಅತಿಯಾದ ಉರಿಯೂತವನ್ನುಂಟು ಮಾಡಬಲ್ಲ ಈ ಸ್ಥಿತಿಗಳಿಗೆ ಗ್ಲುಕೊಕಾರ್ಟಿ ಕಾಯ್ಡುಗಳು ರಾಮಬಾಣವಾಗಿ ಪರಿಣಮಿಸಿವೆ.
ಸ್ಟಿರಾಯ್ಡುಗಳು ಜನ ಹೆದರುವ ಹಾಗೇ “ಭಯಾನಕ” ಔಷಧಿಗಳೇನೂ ಅಲ್ಲ. ಸಾಕಷ್ಟು ಎಚ್ಚರ ವಹಿಸಿಯೇ ಅವುಗಳನ್ನು ಕಂಡು ಹಿಡಿಯಲಾಗಿದೆ. ಸ್ಟಿರಾಯ್ಡುಗಳು ಅಥವಾ ಅನಾಬೊಲಿಕ್ ಸ್ಟಿರಾಯ್ಡುಗಳ ದುರ್ಬಳಕೆಯಿಂದ ಕೆಟ್ಟ ಹೆಸರು ಪಡೆದಿವೆಯೇ ಹೊರತು ಇವುಗಳು ವೈದ್ಯರ ಸಲಹೆಯಂತೆ ಉಪಯೋಗಿಸಿದಲ್ಲಿ ಉತ್ತಮ ಪರಿಣಾಮ ಬೀರಬಲ್ಲ ಔಷಧಗಳು.
ಯಾವುದೇ ಔಷಧವನ್ನು ವೈದ್ಯರ ಸಲಹೆಯಂತೆ ನಿಯಮಿತ ಅವಧಿಗೆ ಬಳಸಿದರೆ ಏನೂ ತೊಂದರೆ ಇಲ್ಲ. ವೈದ್ಯರಿಗೆ ಪ್ರತಿ ಔಷಧಿಯ ಪರಿಣಾಮ ಮತ್ತು ಅಡ್ಡಪರಿಣಾಮ ತಿಳಿದಿರುತ್ತದೆ. ಅವಶ್ಯವಾಗಿದ್ದಾಗ ಮಾತ್ರ ಅವರು ಬಳಸುತ್ತಾರೆ. ಸುಮ್ಮನೆ ಪೂರ್ವಾಗೃಹ ಪೀಡೆಯಿಂದ ಒಂದು ಔಷಧಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ತರವಲ್ಲ. ಅಲ್ಲದೇ ಕೆಲವರು ಸ್ವಯಂ ವೈದ್ಯದಿಂದಲೂ ಹಾಗೂ ಕೆಲ ಹಣಬಾಕ ಕೊಟ್ಟಿ ವೈದ್ಯರುಗಳು ಸಹ ಈ ಔಷಧಿಗಳನ್ನು ದುರುಪಯೋಗ ಮಾಡುವುದನ್ನು ತಡೆಯುವುದು ಒಳ್ಳೆಯದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನಡೆಸ್ಕ್:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರಡ್ಸೆಟ್ ಸಂಸ್ಥೆ ವತಿಯಿಂದ ಮೊಬೈಲ್ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿ ಆಯೋಜಿಸಲಾಗಿದೆ, ಅರ್ಜಿ ಸಲ್ಲಿಸಲು ಮಾರ್ಚ್ 28 ಕೊನೆಯ ದಿನವಾಗಿದೆ.
ತರಬೇತಿ ಏಪ್ರಿಲ್ 17 ರಿಂದ ಪ್ರಾರಂಭವಾಗಲಿದ್ದು, ಆಸಕ್ತ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ತರಬೇತಿ ವಸತಿಯುತವಾಗಿದ್ದು, ಉಚಿತ ಊಟ, ವಸತಿ ನೀಡಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9740982585 ಗೆ ಸಂಪರ್ಕಿಸಬಹುದು ಎಂದು ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ರವಿಕುಮಾರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅತ್ಮಕತೆ | ನೀರು ಸಾಬರೂ – ಎಸಿ ಮದನಗೋಪಾಲರೂ..

- ರುದ್ರಪ್ಪ ಹನಗವಾಡಿ
ಈ ಮಧ್ಯೆ ನಂಜನಗೂಡು ಪಕ್ಕದ ತಾಲ್ಲೂಕಾದ ಗುಂಡ್ಲುಪೇಟೆಯಿಂದ ರಾಜಕಾರಣಿಯಾಗಿದ್ದ ಅಬ್ದುಲ್ ನಜೀರ್ ಸಾಬ್ ಅವರು ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದರು. ಗ್ರಾಮೀಣ ಪ್ರದೇಶದಲ್ಲಿ ಬೋರ್ವೆಲ್ ತೆಗೆಸಿ ಗ್ರಾಮೀಣ ಜನರಿಗೆ ಸ್ವಚ್ಛ ಕುಡಿಯುವ ನೀರು ಕೊಡುವಲ್ಲಿ ಯಶಸ್ವಿಯಾಗಿದ್ದರು. ಜನಪರ ಮಂತ್ರಿಗಳೂ ಆಗಿದ್ದರು.
ಗುಂಡ್ಲುಪೇಟೆಯಲ್ಲಿ ಭೂಸ್ವಾಧೀನ ಪ್ರಕರಣದಲ್ಲಿ ತಮ್ಮ ಸಂಬಂಧಿಕರೊಬ್ಬರ ಜಮೀನಿಗೆ ತಿರುಗಾಡಲು ದಾರಿಗಾಗಿ ಭೂಸ್ವಾಧೀನಪಡಿಸಲು ಹಿಂದಿನ ಎಸಿ ಅವರ ಅಳಿಯಂದಿರೇ ಆಗಿದ್ದ ಎಸ್.ಎ. ಸಾದಿಕ್ ಅವರು ಭೂಸ್ವಾಧೀನಕ್ಕಾಗಿ ಪ್ರಸ್ತಾವನೆಯನ್ನು ರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ಪುನಃ ಅದು ವಿಚಾರಣೆಗೆ ಬಂದಾಗ ಈ ಭೂಸ್ವಾಧೀನವು ಸಾರ್ವಜನಿಕರ ಹಿತ ಕಾಯುತ್ತಿಲ್ಲವೆಂದು ಮದನ್ ಗೋಪಾಲ್ ಅವರು ಆ ಪ್ರಸ್ತಾವನೆಯನ್ನು ರದ್ದುಗೊಳಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಭೂಸ್ವಾಧೀನ ಪ್ರಕರಣವನ್ನು ಮಂತ್ರಿಗಳ ಸಲಹೆ ಮೇರೆಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದು, ನಂತರ ಅದನ್ನು ಕೈಬಿಟ್ಟ ಬಗ್ಗೆ ನಜೀರ್ ಸಾಬ್ ಅವರು ಎಸಿ ಮದನ್ ಗೋಪಾಲ್ ಮೇಲೆ ಕೆಂಡಾಮಂಡಲವಾಗಿದ್ದರು. ಎಷ್ಟೇ ಅನುಭವೀ, ನಿಸ್ಪೃಹ ರಾಜಕಾರಣಿಯಾಗಿದ್ದರೂ ನಜೀರ್ ಸಾಬ್ ಅವರು ತಾವು ಹೇಳಿದ ಕೆಲಸ ಮಾಡದ ನೌಕರ ಎಸಿ ಮದನ್ ಗೋಪಾಲ್ ಮೇಲೆ ಕಂದಾಯ ಮಂತ್ರಿ ಮತ್ತು ಜಿಲ್ಲಾಧಿಕಾರಿಗಳ ಎದುರು ತಮ್ಮ ಅಸಮಾಧಾನವನ್ನು ಹೊರಹಾಕಿ ಕೂಗಾಡಿದ್ದರು.
ಇದೇ ಕಾರಣಕ್ಕಾಗಿ ಮದನ್ ಗೋಪಾಲ್ ಅವರನ್ನು ಕೆಲವೇ ದಿನಗಳಲ್ಲಿ ನಂಜನಗೂಡು ಉಪ ವಿಭಾಗದಿಂದ ಬೇರೆಡೆಗೆ ರ್ಗಾವಣೆ ಕೂಡ ಮಾಡಲಾಗಿತ್ತು. ಅವರ ವರ್ಗಾವಣೆಯನ್ನು ವಿರೋಧಿಸಿ ಸರ್ವಜನಿಕರು, ನಂಜಗೂಡು, ಗುಂಡ್ಲುಪೇಟೆಗಳಲ್ಲಿ ಯಶಸ್ವಿ ಬಂದ್ ಮಾಡಿ ಪ್ರತಿಭಟಿಸಿದ್ದರು. ಅವರ ವರ್ಗಾವಣೆ ಆಗಿ ನಂತರ ಮೂರು ತಿಂಗಳಲ್ಲಿ ಯೋಗೇಂದ್ರ ತ್ರಿಪಾಠಿ ಬಂದರು. ಈ ನಡುವೆ ನಾನು, ನಂತರ ಮಂಜುನಾಥ್ ನಾಯಕ್ ಹಾಗೂ ಶಿಕ್ಷಣರ್ಥಿ ಎಸಿಯಾಗಿದ್ದ ಕೆ. ಶಿವರಾಂ ಅವರು ಸುಮಾರು ಮೂರು ತಿಂಗಳ ಕಾಲ ಚಾರ್ಜ್ನಲ್ಲಿದ್ದೆವು. ಮದನ್ ಗೋಪಾಲ್ ಅವರು ವೈಯಕ್ತಿಕವಾಗಿ ಕಷ್ಟಪಟ್ಟು ದುಡಿಯುವ ವ್ಯಕ್ತಿಯಾಗಿದ್ದರು. ಆದರೆ ಚುನಾಯಿತ ಪ್ರತಿನಿಧಿಗಳ ಜೊತೆ ಅತಿರೇಕದ ನೇರ ನೇರ ಹಣಾಹಣಿ ಮಾಡಿಕೊಂಡು ಅವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳು ಹಿನ್ನೆಲೆಗೆ ಸರಿಯುತ್ತಿದ್ದವು.
ಯೋಗೇಂದ್ರ ತ್ರಿಪಾಠಿಯವರು ಬರುವ ವೇಳೆಗಾಗಲೇ ನನ್ನ ನಂಜನಗೂಡು ತಾಲ್ಲೂಕ್ ಆಡಳಿತದಲ್ಲಿ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದ್ದೆ. ಹಾಗಾಗಿ ತ್ರಿಪಾಠಿಯವರ ಜೊತೆ ಕೆಲಸ ಕಾರ್ಯಗಳು ಸಲೀಸಾಗಿ ಸಾಗುತ್ತಿದ್ದವು. ಈ ಮೊದಲು ಎಸಿ ಶಿಕ್ಷಣರ್ಥಿಯಾಗಿದ್ದ ಕೆ. ಶಿವರಾಂ ಅವರು ಅನೇಕ ಮೌಖಿಕ ಆದೇಶಗಳನ್ನು ಹೇಳಿ ಮಾಡುವಂತೆ ನನಗೆ ನಿರ್ದೇಶನ ನೀಡುತ್ತಿದ್ದರು. ನಾನು ಖುದ್ದು ಭೇಟಿ ಮಾಡಿ ಅವರು ಹೇಳಿದ ಕೆಲಸಗಳನ್ನು ಮಾಡಲಿಕ್ಕಾಗದ ಕಾರಣದ ವಿವರ ನೀಡಿದರೂ ಸಮಾಧಾನಗೊಳ್ಳದೆ, ಜನರೆದುರಿಗೆ ಎಸಿ ಮಾಡಲು ಹೇಳಿದರೂ ತಹಸೀಲ್ದಾರ್ ಮಾಡದೆ ತಮ್ಮ ವಿರುದ್ಧವಿದ್ದಾರೆಂಬ ಆಭಾವನೆ ಬರುವಂತೆ ನಡೆದುಕೊಳ್ಳುತಿದ್ದರು. ಅವರಿನ್ನೂ ಶಿಕ್ಷಣರ್ಥಿಗಳಾಗಿದ್ದರೂ ಆಗಲೇ ತನಗೆಲ್ಲ ಗೊತ್ತು ಎಂಬ ಅಹಂನಿಂದ ವರ್ತಿಸುತ್ತಿದ್ದ ಕಾರಣ ಬಹುಬೇಗ ನನ್ನ ಅವರ ನಡುವೆ ವಿಶ್ವಾಸದ ಕೊರತೆಯಾಗಿ, ಏನಾದರೂ ಮಾಡಬೇಕೆಂದರೆ ಲಿಖಿತ ಆದೇಶ ಕಳಿಸಲು ಅವರ ಮ್ಯಾನೇಜರ್ ಅವರಿಗೆ ನಾನು ದೂರವಾಣಿ ಮುಖಾಂತರ ಹೇಳುತ್ತಿದ್ದೆ. ಆ ನಂತರ ಮತ್ತೆ ಕೆಲವು ದಿನಗಳಲ್ಲಿ ಅವರನ್ನು ಬೇರೆ ತಾಲ್ಲೂಕಿಗೆ ತರಬೇತಿಗಾಗಿ ಕಳಿಸಿದ ಕಾರಣ ನನ್ನ ಮನಸ್ತಾಪ ಅಲ್ಲಿಗೆ ಮುಗಿದಿತ್ತು. ಆದರೆ ಮುಂದೆ ಅನೇಕ ಬಾರಿ ಅವರೊಡನೆ ಒಡನಾಡುವ ಸಂರ್ಭದಲ್ಲಿ ಇದ್ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಸರಳವಾಗಿ ನಡೆಸಿಕೊಂಡ ಕಾರಣದಿಂದಾಗಿ ಅವರ ಬಗ್ಗೆ ನನ್ನಲ್ಲಿದ್ದ ಕಹಿ ಕರಗಿ ಸಹಜತೆ ಮೂಡಿದೆ.
ನನ್ನ ಕಛೇರಿ ಕೆಲಸಗಳ ಜೊತೆ ಆಚರಿಸುತ್ತಿದ್ದ ರಾಷ್ಟ್ರೀಯ ಹಬ್ಬಗಳ ಸಮಯದಲ್ಲಿ ಮುಖ್ಯ ಅತಿಥಿಗಳಾಗಿ ನಮ್ಮ ಮೈಸೂರಿನ ಸಮಾಜವಾದಿ ಗೆಳೆಯರ ಜೊತೆ ಚರ್ಚಿಸಿ ಡಾ. ಎಲ್. ಬಸವರಾಜ್, ಸುಜನಾ, ಕೆ.ಎಸ್. ಭಗವಾನ್, ಕೆ. ರಾಮದಾಸ್ ಅವರನ್ನು ಕರೆಸಿ ನಮ್ಮ ತಾಲ್ಲೂಕಿನಲ್ಲಿ ಭಾಷಣ ಮಾಡಿಸುತ್ತಿದ್ದೆ. ಡಿಎಸ್ಎಸ್, ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳ ಅನೇಕ ಮಿತ್ರರು ನನ್ನ ಒಡನಾಟದಲ್ಲಿದ್ದರು.
ಈಗ ಹೆಸರಾಂತ ಸಾಹಿತಿ ಮತ್ತು ನನ್ನ ಮಿತ್ರನಾಗಿದ್ದ ಮಾದೇವನ ಊರಾದ ದೇವನೂರಿಗೂ ಹೋದಾಗ ಅವರ ಮನೆಗೂ ಹೋಗಿ ಬಂದಿದ್ದೆ. ಕೃಷ್ಣಪ್ಪ – ಇಂದಿರಾ ಅವರು ಮಕ್ಕಳಾದ ಶಾಲಿನಿ, ಸೀಮಾ ಅವರುಗಳ ಜೊತೆ ನಂಜನಗೂಡಿಗೆ ಬಂದು ಉಳಿದು ನಂಜುಂಡೇಶ್ವರ ದೇವಸ್ಥಾನದ ಹಬ್ಬದಲ್ಲಿ ಭಾಗವಹಿಸಿದ ನೆನಪು ಈಗಲೂ ಹಸಿರಾಗಿದೆ.
ಡಿಎಸ್ಎಸ್ನ ರಾಜ್ಯ ಮಟ್ಟದ ಕಲಿಕಾ ಸಮಾವೇಶವನ್ನು (study camp ) ನಂಜನಗೂಡು ತಾಲ್ಲೂಕಿನಲ್ಲಿನ ವಿದ್ಯಾಪೀಠದಲ್ಲಿ ಕೃಷ್ಣಪ್ಪನವರು ಸುಮಾರು ಒಂದು ವಾರದ ಕಾಲ ನಡೆಸಿದ್ದರು. ಆಗ ರಾಜ್ಯದ ಮೂಲೆಮೂಲೆಗಳಿಂದ ಬಂದು ಡಿಎಸ್ಎಸ್ನ ಹೋರಾಟದ ರೂಪುರೇಷೆಗಳನ್ನು ಚರ್ಚಿಸುತ್ತಿದ್ದುದನ್ನು ನಾನು ಭಾಗವಹಿಸದಿದ್ದರೂ ತಿಳಿದುಕೊಳ್ಳುತ್ತಿದ್ದೆ.
ಡಿಎಸ್ಎಸ್ನ ಅಂದಿನ ಬಹುತೇಕ ರ್ಚೆಗಳು ರ್ಕಾರದ ನಿಷ್ಕಿçಯತೆ, ದಲಿತ ಶಾಸಕರುಗಳ ಗುಲಾಮಿತನ, ದಲಿತರ ಮೇಲಿನ ದರ್ಜನ್ಯ, ದಲಿತರ ಕರ್ಯಕ್ರಮಗಳಲ್ಲಿನ ನಿಧಾನಗತಿ ಅನುಷ್ಠಾನ, ಇಂತಹವೇ ರ್ಚೆಯಾಗುತ್ತಿದ್ದವು. ಅಂತಹ ಸಂಘಟನೆಗೆ ತಹಸೀಲ್ದಾರನಾಗಿ ಭಾಗಿಯಾಗುವುದು, ಸಹಕಾರ ನೀಡುವುದು ಸರಿಯಲ್ಲವೆಂದು ನನಗೆ ನಮ್ಮ ಹಿರಿಯ ಸಿಬ್ಬಂದಿ ಹೇಳುತ್ತಿದ್ದರೂ ನಾನು ನನ್ನ ಇತರೆ ಸಾಮಾನ್ಯ ಕೆಲಸಗಳಲ್ಲಿ ಹಿಂದೆ ಬೀಳದೆ ಮತ್ತು ಇತರೆ ಸಾರ್ವಜನಿಕರಲ್ಲೂ ಯಾವುದೇ ತಗಾದೆ ಬಾರದಂತೆ ಕೆಲಸ ನಿರ್ವಹಿಸಿದ್ದರಿಂದ ಬೇರಾರೂ ಆಕ್ಷೇಪಿಸುತ್ತಿರಲಿಲ್ಲ. ಆದರೆ ಆಗ ನಂಜನಗೂಡಿನವರೇ ಆಗಿದ್ದ ಡಿಎಸ್ಎಸ್ನಲ್ಲಿ ಇದ್ದವನೊಬ್ಬ ಮಾದೇವ, ಕೃಷ್ಣಪ್ಪನವರನ್ನು ವೈಯಕ್ತಿಕವಾಗಿ ದ್ವೇಷಿಸುವ ಮನಸ್ಸಿನ ವ್ಯಕ್ತಿ. ನಮ್ಮ ಕಛೇರಿಯ ಸರ್ವೆಯರ್ ನೌಕರನನ್ನು ಸಹಾಯ ಪಡೆದು, ನಮ್ಮ ಕಛೇರಿಯ ಬಗ್ಗೆ ಕರಪತ್ರ ಹಾಕಿ `ಭ್ರಷ್ಟಾಚಾರದ ಕೂಪ ತಾಲ್ಲೂಕು ಕಛೇರಿ’ ಎಂದೆಲ್ಲ ದೂರಿದ್ದರು. ಆದರೆ ಅದಕ್ಕೆಲ್ಲ ಕುಮ್ಮಕ್ಕು ಕೊಟ್ಟವನು ನನ್ನ ಕಛೇರಿಯ ಸರ್ವೆಯರ್ ಸಂಬಂಧಿ ಡಿ.ಎಸ್.ಎಸ್.ನಲ್ಲಿಯೇ ಇದ್ದವನೊಬ್ಬ ಎಂದು ನನಗೆ ತಿಳಿದು ಬಂತು.
ಜೊತೆಗೆ ನಮ್ಮ ಕಚೇರಿಯ ರ್ವೇಯರ್ ದೈನಂದಿನ ಕೆಲಸದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದ ಕಾರಣದಿಂದ ನಾನು ಮೊದಲೇ ಅವನನ್ನು ಅಮಾನತ್ತುಗೊಳಿಸಿದ್ದೆ. ಆ ಕಾರಣ ಅವನು ನನ್ನ ಬಗ್ಗೆ ಮೊದಲೇ ಅಸಮಾಧಾನಗೊಂಡಿದ್ದ. ನಂತರದ ದಿನಗಳಲ್ಲಿ ನಾನೇನೂ ಹೇಳದಿದ್ದರೂ ಕರಪತ್ರ ಹಾಕಿದ ಬಗ್ಗೆ ಬಂದು ತನ್ನ ನಡವಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ. ಇದಕ್ಕೆಲ್ಲ ತನ್ನ ಭಾವ ಡಿಎಸ್ಎಸ್ನಲ್ಲಿರುವವನು ಕಾರಣ ಎಂದು ಹೇಳಿ ನನಗೆ ದಂಗುಬಡಿಸಿದ್ದ. ಇಂತಹ ವಿಷಯಗಳನ್ನೆಲ್ಲ ನಿಭಾಯಿಸುವ ಅನುಭವ ನನಗೆ ಇದ್ದುದರಿಂದ ಮತ್ತೇನು ಅದು ಬೆಳೆಯಲಿಲ್ಲ.
ನಂಜನಗೂಡಿನಲ್ಲಿ ನಾನಿರುವಾಗ ಪೋಲೀಸ್ ಇಲಾಖೆಯಲ್ಲಿ ಡಿ.ವೈ.ಎಸ್.ಪಿಯಾಗಿ ಪಿ.ಹೆಚ್. ರಾಣೆ, ಇಬ್ಬರು ಇನ್ಸ್ಪೆಕ್ಟರ್ ಮತ್ತು ನಾಲ್ಕು-ಐದು ಜನ ಸಬ್ ಇನ್ಸ್ಪೆಕ್ಟರ್ಗಳು ಇದ್ದರು. ನಾವೆಲ್ಲ ಊರಿನಲ್ಲಿರುವ ಯಾವುದೇ ಪ್ರತಿಷ್ಠಿತ ಮನರಂಜನೆಯ ಕ್ಲಬ್ಗಳಿಗೆ ಹೋಗುತ್ತಿರಲಿಲ್ಲ. ಅದರ ಬದಲು, ಪೋಲೀಸ್ ಸ್ಟೇಷನ್ ಬಳಿ ಇದ್ದ ವಿಶಾಲವಾದ ಮೈದಾನದಲ್ಲಿ ಬೆಳಗಿನ ಜಾವದಲ್ಲಿ ಬ್ಯಾಟ್ಮಿಂಟನ್, ಷಟಲ್ ಕಾಕ್ ಆಟ ಪ್ರಾರಂಭಿಸಿದ್ದೆವು. ಅಲ್ಲಿಗೆ ಕಂದಾಯ ಇಲಾಖೆಯಲ್ಲಿನ ವಿಎ, RI & ಸಬ್ ಇನ್ಸ್ಸ್ಪೆಕ್ರ್ಸ್ ಮತ್ತು ನನ್ನ ಬಿ.ಎ. ತರಗತಿಯ ಕ್ಲಾಸ್ ಮೇಟ್ ಆಗಿದ್ದ ನರಸಿಂಹಸ್ವಾಮಿ ಸೇರಿ ಒಂದೆರಡು ಘಂಟೆಗಳ ಕಾಲ ಆಟದಲ್ಲಿ ಕಳೆಯುತ್ತಿದ್ದೆವು. ಆಗಲೇ ತಾಲ್ಲೂಕಿನಲ್ಲಿನ ಸಮಸ್ಯೆಗಳನ್ನು ಸಾಂಧರ್ಭಿಕವಾಗಿ ಚರ್ಚಿಸಿ, ಶಾಂತಿ ಕಾಪಾಡಲು ಬೇಕಾದ ಕ್ರಮವಾಗಿ ಕೆಲವರನ್ನು ಒಂದೆರಡು ವಾರಗಳ ಕಾಲ ಸಬ್ ಜೈಲಿಗೆ ಕಳಿಸಲು ಕೋರುತ್ತಿದ್ದರು. ಇಲ್ಲವೇ ಪ್ರತಿ ವಾರವೂ ಹಾಜರಿರಲು ನೋಟಿಸ್ ನೀಡಿ ಬಾರದಿದ್ದಾಗ ದಸ್ತಗಿರಿ ಮಾಡಿ ತರಲು ನನ್ನಿಂದ ಅದೇಶ ಪಡೆದು ಕರೆತರುತ್ತಿದ್ದರು. ನಂತರ ವಿಚಾರಣೆ ಮಾಡಿ, ಒಳ್ಳೆಯ ನಡೆವಳಿಕೆಯ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡುತ್ತಿದ್ದೆವು. ಇನ್ನು ಕೆಲವು ಭಾರಿ ಈ ಎಲ್ಲ ಅಖPಅ 107 ಪ್ರಕರಣದಲ್ಲಿದ್ದ ಆಪಾದಿತರನ್ನು, ಗ್ರಾಮ ಸಹಾಯಕರನ್ನು ಒಟ್ಟುಗೂಡಿಸಿ ನಮ್ಮ ಕಛೇರಿಯ ಆವರಣದಲ್ಲಿದ್ದ ಜಾಗದಲ್ಲಿ ಗಿಡ ನೆಡಲು ಬೇಕಾದ ಗುಂಡಿ ತೆಗೆಯಲು ತೊಡಗಿಸಿ ದಿನದ ಕೊನೆಯಲ್ಲಿ ಕೇಸು ಕರೆದು ಕೇಸನ್ನು ಮುಂದೂಡುತ್ತಿದ್ದೆನು. ಹೀಗಾಗಿ ತಾಲ್ಲೂಕಿನಲ್ಲಿ, ಜಾತಿ ಜಗಳಗಳಾಗಲೀ, ದೊಂಬಿಗಳಾಗಲೀ ಮಾಡಲು ಪುಂಡ ಪೋಕರಿಗಳಿಗೆ ಅವಕಾಶವಿರುತ್ತಿರಲಿಲ್ಲ.
ತಾಲ್ಲೂಕು ಮಟ್ಟದ ನಾಯಕರು
1986ರ ನಂತರ ಶಾಸಕರುಗಳ ಜೊತೆ ಜಿಲ್ಲಾ ಪರಿಷತ್ ಚುನಾವಣೆಗಳು ಮುಕ್ತಾಯಗೊಂಡು ತಾಲ್ಲೂಕುಮಟ್ಟದಲ್ಲಿ ಹೆಜ್ಜಿಗೆ ರಾಮಯ್ಯ, ದೇವನೂರ ಸಿದ್ದಪ್ಪ, ಬಸವರಾಜ್, ಕಳಲೆ ಸಿದ್ದ ನಾಯಕ್, ಶಶಿಕಲಾ ನಾಗರಾಜ್ ಮತ್ತು ಶಶಿಕಲಾ ಬಾಲರಾಜ್ ಜೊತೆಗೆ ನಂಜನಗೂಡು ಟೌನ್ನಲ್ಲಿ ಪುರಸಭೆಯ ಅಧ್ಯಕ್ಷ – ಉಪಾಧ್ಯಕ್ಷರೂ ಇರುತ್ತಿದ್ದರು. ಇವರೆಲ್ಲ ಸಣ್ಣಪುಟ್ಟ ಕೆಲಸಗಳಿಗೆ ಶಿಫಾರಸ್ಸು ಮಾಡಲು ತಾಲ್ಲೂಕು ಕಛೇರಿಗೆ ಬರುತ್ತಿದ್ದರು. ಆಗುವ ಕೆಲಸ ಮಾಡುವುದರಲ್ಲಿ ವಿಳಂಬವಾಗದಂತೆ, ಆಗದಿರುವ ಕೆಲಸಗಳಿಗೂ ನನ್ನ ಮಟ್ಟದಲ್ಲೇ ಅವರಿಗೆ ವಿವರಿಸಿ ಹೇಳುತ್ತಿದ್ದೆ. ಅವರುಗಳು ಒಮ್ಮೊಮ್ಮೆ ಅದೇ ವಿಷಯಗಳನ್ನು ಶಾಸಕರುಗಳ ಹತ್ತಿರವೂ ಪ್ರಸ್ತಾಪಿಸಿ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು. ನನ್ನ ವಿವರಣೆ ಶಾಸಕರುಗಳಿಗೂ ಅದೇ ಆಗಿರುತ್ತಿತ್ತು. ಹಾಗಾಗಿ ಆಗುವ ಕೆಲಸಗಳಿಗೆ ಯಾವ ಶಿಫಾರಸ್ಸು ತಂದರೂ ಆಗುವುದಿಲ್ಲ ಎಂಬ ನಂಬಿಕೆ ಅವರಿಗೆಲ್ಲ ತಿಳಿದು ಬಂದಿತ್ತು.
ಗೃಹಮಂತ್ರಿಯಾಗಿದ್ದ ರಾಚಯ್ಯನವರು ಕರ್ನಾಟಕ ಕಂಡ ಹಿರಿಯ ಸಜ್ಜನ ರಾಜಕಾರಣಿ. ಅವರು ತಾಲ್ಲೂಕಿನಲ್ಲಿ ಪ್ರವಾಸ ಇರುವಾಗ, `ಇತರೆ ಇಬ್ಬರು ಶಾಸಕರುಗಳು ಯುವಕರಾಗಿದ್ದ ಕಾರಣ ಏನಾದರೂ ನಿನ್ನಿಂದ ತಪ್ಪು ಮಾಡಿಸಿ, ಮುಂದೆ ನೀನಿನ್ನು ಎಸಿ, ಡಿಸಿ ಆಗಬೇಕಾದವನು, ಎಚ್ಚರದಿಂದ ಕೆಲಸ ನರ್ವಹಿಸಬೇಕೆಂದು’ ಸಲಹೆ ನೀಡುತ್ತಿದ್ದರು. ನನಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ಸುಮಾರು 20 ವರ್ಷಗಳ ಅಂತರವಿದ್ದ ಅವರ ಮಾತು ನನಗೆ ನಿಜವಾದ ಕಳಕಳಿಯಿಂದ ಕೂಡಿದ ಮಾತಾಗಿತ್ತು. ಅವರಿಗೆ ಜನರಿಗೆ ಒಳ್ಳೆಯ ಆಡಳಿತ ನೀಡಿದರೆ ಸಾಕಾಗಿತ್ತು. ಮತ್ತಾವ ಒಳ ಒಪ್ಪಂದಗಳ ಮಾತು ಅವರ ಆಡಳಿತದಲ್ಲಿ ಸುಳಿಯುತ್ತಿರಲಿಲ್ಲ.
ಕಂದಾಯ ನೌಕರರ ದಿನಾಚರಣೆ
ವಿಧಾನಸಭೆ ಚುನಾವಣೆ ಆಗಿ ಮೂರು ರ್ಷವಾಗಿತ್ತು. ಜಿಲ್ಲಾ ಪರಿಷತ್ ಆಗತಾನೆ ಚುನಾವಣೆಗಳಾಗಿ ಹೊಸ ಸದಸ್ಯರುಗಳು ಆಯ್ಕೆಯಾಗಿದ್ದರು. ಮಾಮೂಲಿ ಕಂದಾಯ ಮತ್ತು ತಾಲ್ಲೂಕು ದಂಡಾಧಿಕಾರಿಯ ಕೆಲಸಗಳನ್ನು ಬಿಟ್ಟರೆ ಮತ್ತಾವ ಒತ್ತಡದ ಕೆಲಸಗಳು ಇರಲಿಲ್ಲ. ಹೀಗಿರುವಾಗ ಕಂದಾಯ ಅಧಿಕಾರಿಗಳು ರ್ಷಪರ್ತಿ ದುಡಿತದಲ್ಲೇ ಇದ್ದು, ಕಲೆ ಸಂಸ್ಕೃತಿ, ಸಂಗೀತದ ಬಗ್ಗೆ ಮುಖ ಮಾಡುವುದೇ ಇಲ್ಲ. ಈ ಬಗ್ಗೆ ನಾವ್ಯಾಕೆ ಇಡೀ ಜಿಲ್ಲೆಯ ನೌಕರರನ್ನು ಒಳಗೊಂಡಂತೆ 1-2ದಿನ ನಮ್ಮ ಕಂದಾಯ ನೌಕರರ ದಿನಾಚರಣೆ ಆಚರಿಸಬಾರದು ಎಂದು ನಮ್ಮ ಎಸಿ ತ್ರಿಪಾಠಿಯವರ ಜೊತೆ ಚರ್ಚಿಸಿ, ನಂತರ ಡಿಸಿಗೂ ಹೇಳಿದೆ.
ಎಲ್ಲ ತಹಸೀಲ್ದಾರ್ ಮಿತ್ರರೊಡನೆ ಕೂಡ ಮೌಖಿಕವಾಗಿ ಚರ್ಚಿಸಿ ಅವರ ಸಹಕಾರವನ್ನು ಕೋರಿದೆ. ಅದರಂತೆ, ವಿವಿಧ ಆಟಗಳ ಸ್ಪರ್ಧೆ, ಹಾಡುಗಾರಿಕೆ, ಕೊನೆಯ ದಿನದಲ್ಲಿ ಮಹಾಭಾರತದ ಕುರುಕ್ಷೇತ್ರದ ನಾಟಕ ಎಂದೆಲ್ಲ ತಯಾರಿಗಳು ನಡೆದವು. ಹುಣಸೂರು, ಮೈಸೂರು ಮತ್ತು ನಂಜನಗೂಡು ಉಪ ವಿಭಾಗಗಳ ಉಪ ವಿಭಾಗಾಧಿಕಾರಿಗಳು, ಎಲ್ಲಾ ತಾಲ್ಲೂಕು ತಹಸೀಲ್ದಾರರು, ವಿಎ, ಆರ್ಐ ಹಾಗೂ ಕಛೇರಿ ಸಿಬ್ಬಂದಿ ಎಲ್ಲರೂ ಎಲ್ಲ ಆಟ ಪಾಠಗಳಲ್ಲಿ ಭಾಗವಹಿಸಿದ್ದರು. ಆಟಗಳಲ್ಲಿ ಕಬಡ್ಡಿ, ಬ್ಯಾಟ್ ಮಿಂಟನ್, ಷಟಲ್ ಕಾಕ್, ವಾಲಿಬಾಲ್, ಚೆಸ್ ಹೀಗೆಲ್ಲ ಸ್ರ್ಧೆಗಳನ್ನು ನರ್ವಹಿಸಲು ಎಇಓ ಅವರನ್ನು ಸಂರ್ಕಿಸಿ ಒಬ್ಬ ಕ್ರೀಡಾ ಅಧಿಕಾರಿಯನ್ನು ಕೋರಿದ್ದೆ. ಅವರು ಎಲ್ಲಾ ಕ್ರೀಡೆಗಳನ್ನು ವ್ಯವಸ್ಥೆಗೊಳಿಸಿ, ಆಡಿಸಿ ಬಹುಮಾನಿತರ ಪಟ್ಟಿ ನೀಡಿದ್ದರು. ನಿಯಮಿತ ಅಭ್ಯಾಸಗಳು ಇಲ್ಲದ ಆಟಗಾರರೊಬ್ಬರು ಕಬ್ಬಡಿ ಆಟದಲ್ಲಿ ಬಿದ್ದು ಅವರ ಕೈ ಮುರಿದಿತ್ತು. ಸದ್ಯ ಅವರನ್ನು ನಂಜನಗೂಡಿನಲ್ಲಿಯೇ ಉಪಚರಿಸಿ ಸುಧಾರಿಸುವಂತಾಯಿತು.
ಈ ಸಮಾರಂಭಕ್ಕೆ ಮೊದಲ ದಿನ ಎಲ್ಲಾ ಸ್ಪರ್ಧೆಗಳನ್ನು ನಡೆಸಿ ಎರಡನೇ ದಿನ ಸಮಾರೋಪ ಸಮಾರಂಭ ಮತ್ತು ನಾಟಕವಿತ್ತು. ಆಗ ಮೈಸೂರು ವಿಭಾಗಕ್ಕೆ ವಿಭಾಗಾಧಿಕಾರಿಗಳಾಗಿದ್ದ ನೀಲಕಂಠರಾಜು, ಡಿಸಿ ವಿ.ಪಿ. ಬಳಿಗಾರ್, ಹುಣಸೂರು ಎಸಿಯಾಗಿದ್ದ ಶಿವಲಿಂಗಮರ್ತಿ, ಮೈಸೂರು ಎಸಿ ಈಶ್ವರ್ ನಮ್ಮ ಎಸಿ ಯೋಗೇಂದ್ರ ತ್ರಿಪಾಠಿ ಎಲ್ಲ ಸಂತೋಷದಿಂದ ಭಾಗವಹಿಸಿದ್ದರು. ನಮ್ಮಲ್ಲಿದ್ದ 80 ಜನ ಗ್ರಾಮ ಸಹಾಯಕರಿಗೆ ವಿಶೇಷವಾದ ಸಮವಸ್ತ್ರ ಹೊಲಿಸಿ ಹೊಸ ಬೂಟುಗಳನ್ನು ಕೊಡಿಸಿ, ಅವರಿಗೆ ಪೋಲೀಸ್ ಪೇದೆಗಳಂತೆ ತರಬೇತಿಯನ್ನು ನೀಡಲು ನಮಲ್ಲಿಯೇ ಇದ್ದ ಕಸಬಾ ವಿಎ – ರಾಧಾಕೃಷ್ಣನಿಗೆ ಜವಾಬ್ದಾರಿ ನೀಡಿದ್ದೆ. ರಾಧಾಕೃಷ್ಣ VA ಆಗಿದ್ದರೂ ಒಬ್ಬ DSPಯಂತೆ ಪೊಲೀಸ್ ನಡವಳಿಕೆಗಳನ್ನು ರೂಢಿಸಿಕೊಂಡಿದ್ದ. ಅವನ ಕೆಳಗೆ ತರಬೇತಿಗೊಂಡ ನಮ್ಮ ಗ್ರಾಮ ಸಹಾಯಕರು ಶಿಸ್ತಿನ ಪೊಲೀಸ್ ಪೇದೆಗಳಂತೆ ನಡೆದುಕೊಳ್ಳುತ್ತಿದ್ದರು.
ಸಮಾರಂಭ ಪ್ರಾರಂಭವಾಗುವ ಮುನ್ನ ನಮ್ಮ ಗ್ರಾಮ ಸಹಾಯಕರೆಲ್ಲ ಒಟ್ಟಿಗೆ ಸಮವಸ್ತ್ರದಲ್ಲಿದ್ದು, ಪೋಲೀಸ್ ಇಲಾಖೆ ನೀಡುವ ‘ಗಾರ್ಡ್ ಆಫ್ ಆನರ್’ನಂತೆ ಎಲ್ಲ ಅತಿಥಿಗಳಿಗೂ ಗೌರವ ವಂದನೆ ನೀಡಿದಾಗ ‘you have summoned police personnel also here’ ಎಂದು ಡಿವಿಸಿ ಉದ್ಘಾರ ತೆಗೆದರು. ‘ನೋ ಸರ್, ಇವರೆಲ್ಲ ನಮ್ಮ ತಾಲ್ಲೂಕಿನ ಗ್ರಾಮ ಸಹಾಯಕರು’ ಎಂದಾಗ ಅವರು ಅಚ್ಚರಿ ವ್ಯಕ್ತಪಡಿಸಿ, ಪ್ರಶಂಸೆ ಕೂಡ ಮಾಡಿದ್ದರು. ಇಂತಹ ಕಂದಾಯ ದಿನಾಚರಣೆಯನ್ನು ನಾನು ಆಯೋಜಿಸಲು ಮುಂದಾಗಿದ್ದಕ್ಕೆ, ನರ್ವಹಿಸಿದ್ದಕ್ಕೆ ಡಿವಿಸಿ ಮೊದಲ್ಗೊಂಡು ಎಲ್ಲರೂ ಆಗ ನನ್ನನ್ನು ಪ್ರಶಂಸಿದರು.
ಎಲ್ಲರಿಗಿಂತಲೂ ಹೆಚ್ಚಾಗಿ ನಮ್ಮ ಎಸಿ ಯಾಗಿದ್ದ ತ್ರಿಪಾಠಿ ಅವರು ತುಂಬಾ ಖುಷಿಯಲ್ಲಿದ್ದರು. ಜೊತೆಗೆ ನಮ್ಮ ತಾಲ್ಲೂಕಿನ ಎಲ್ಲಾ ಸಿಬ್ಬಂದಿ ನಾವೆಲ್ಲ ಒಂದು ಕುಟುಂಬ ಎಂಬ ಭಾವನೆ ಮತ್ತು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಏನು ಬೇಕಾದರೂ ಸಾಧಿಸಬಹುದೆಂಬ ಸದ್ಭಾವನೆ ಮೂಡುವಂತಾಗಿತ್ತು. ಕೊನೆಯಲ್ಲಿ ಕಲಿತು ಪ್ರರ್ಶಿಸಿದ ನಾಟಕದ ಪ್ರಥಮ ದೃಶ್ಯದಲ್ಲಿ ನಾನು ಕೃಷ್ಣನ ಪಾತ್ರಧಾರಿಯಾಗಿ ಹಾಡೊಂದನ್ನು ಹಾಡಿ ಪ್ರಾರಂಭವಾಗುವಂತೆ ನಾಟಕದ ನರ್ದೇಶನ ಮಾಡಿದ್ದ ಮೇಷ್ಟರು ವ್ಯವಸ್ಥೆ ಮಾಡಿದ್ದರು. ನಾನು ಕೃಷ್ಣನ ಪಾತ್ರದ ಪೋಷಾಕಿನಲ್ಲಿ ಹಾಡಿ ಸಂತೋಷಪಟ್ಟಿದ್ದು ಈಗ 35 ವರ್ಷಗಳ ನಂತರವೂ ಹಸಿರಾಗಿದೆ.(ಬರಹ:ರುದ್ರಪ್ಪ ಹನಗವಾಡಿ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಮಾರ್ಚ್ 15 ರಂದು ಬೃಹತ್ ಉದ್ಯೋಗ ಮೇಳ ; ಸಂಜೆ ಬಿಐಇಟಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತ ಪ್ರಭ
-
ದಿನದ ಸುದ್ದಿ6 days ago
ಖಾತ್ರಿ ಯೋಜನೆಯ ಅನುಷ್ಟಾನ ಸಮಿತಿಗಳಿಂದ, ಶಾಸಕರ ಘನತೆಗೆ ಕುಂದಿಲ್ಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ6 days ago
ದಾವಣಗೆರೆಯಲ್ಲಿ ಉದ್ಯೋಗ ಮೇಳ | ಬನ್ನಿ ಭಾಗವಹಿಸಿ, ಉದ್ಯೋಗ ಪಡೆಯಿರಿ
-
ದಿನದ ಸುದ್ದಿ6 days ago
ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ದಾವಣಗೆರೆ | ಮನೆ ಬೋರ್ ವೆಲ್ ನೀರು ವಾಣಿಜ್ಯ ಉದ್ದೇಶಕ್ಕೆ ಬಳಕೆ ; ಕ್ರಮ ಕೈಗೊಳ್ಳಲು ಸರಸ್ವತಿ ಬಡಾವಣೆ ನಿವಾಸಿಗಳ ಆಗ್ರಹ
-
ದಿನದ ಸುದ್ದಿ6 days ago
ದಾವಣಗೆರೆ | ಪೊಲೀಸ್ ಪಬ್ಲಿಕ್ ಶಾಲೆಗೆ ನುರಿತ ಶಿಕ್ಷಕರಿಂದ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’
-
ದಿನದ ಸುದ್ದಿ5 days ago
2 ಕೋಟಿ 20 ಲಕ್ಷ ಜನ, ಪಡಿತರ ಚೀಟಿಯ ಪ್ರಯೋಜನ ಪಡೆಯುತ್ತಿಲ್ಲ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ