Connect with us

ಲೈಫ್ ಸ್ಟೈಲ್

ಅಪ್ಪ ಎಂದರೆ..!

Published

on

  • ಫರ್ಹಾನಾಜ್ ಮಸ್ಕಿ, ಸಹಾಯಕ ಪ್ರಾಧ್ಯಾಪಕರು ನೆಲಮಂಗಲ, ಬೆಂಗಳೂರು

ಅಪ್ಪ ಎಂದರೆ ಬರೀ ಆಕಾಶವಲ್ಲ, ಅಪರಿಮಿತ ಬ್ರಹ್ಮಾಂಡ. ಅಪ್ಪ ಎಂದರೆ ಬರೀ ಮರವಲ್ಲ ಹೆಮ್ಮರ! ತಾನೇ ದುಡಿದು ತಾನೇ ತಂದು, ತನ್ನ ಹೊಟ್ಟೆ ತುಂಬದಿದ್ದರೂ ಕುಟುಂಬದ ಎಲ್ಲಾ ಪ್ರಭಾರಗಳನ್ನೂ ವಹಿಸಿಕೊಳ್ಳುವ ಅಪ್ಪ ಅಪ್ರತಿಮ ಸಾಧಕ!. ಅಪ್ಪ ಎಂದರೆ ಎಲ್ಲವನ್ನೂ ಎದುರಿಸಿ ಮತ್ತೇ ನಿಲ್ಲಬಲ್ಲ ಪರ್ವತ! ಅಪ್ಪ ಇದ್ದರೆ ಮನೆಯಲ್ಲಿ ಒಂಥರಾ ನೆಮ್ಮದಿ, ತೃಪ್ತಿ, ಸಡಗರ, ಸಮಾಧಾನ.

ಅಪ್ಪ ಇದ್ದಾರೆಂಬುದೇ ಬದುಕಿಗೊಂದು ಛಲ! ಅಪ್ಪನ ಬಗೆಗೆ ಅದೆಷ್ಟು ಹೇಳಿಕೊಂಡರೂ ಸಾಲದು. ಇಂಥ ಅಪ್ಪನ ಗುಣಗಳಲ್ಲಿ ಗಂಡಿನ ಗಡಸುತನ, ಸಿಟ್ಟು, ಅಸಹನೆ, ಕೋಪ, ಮುನಿಸು, ದರ್ಪ, ಗರ್ವಗಳೂ ಇರುವುದನ್ನು ನೋಡಿದ್ದೇವೆ. ಆದರೆ ನಮ್ಯ ನಡತೆ, ಮೃದು ಮನಸ್ಸು, ಮೌನ ಮನೋಭಾವ, ಅನುರಾಗ, ಅನುಕಂಪ, ತಾಯಿಯ ಮನೋಧರ್ಮಗಳನ್ನೇ ಹೋಲುವ ಅಪ್ಪಂದಿರೂ ಇದ್ದಾರೆ. ಜಗತ್ತಿಗೆ ಅದೆಷ್ಟು ಬರಡು ಬರಡಾಗಿದ್ದರೂ ಮಕ್ಕಳಿಗಾಗಿ ಮಾತ್ರ ಅಪ್ಪ, ಬಲಿಷ್ಠರೇ!!

ಮಕ್ಕಳ ವಿಕಸನಕ್ಕಾಗಿ ಅಪ್ಪ ಅದೇನೇನೋ ಮಾಡುತ್ತಾರಂತೆ. ನಮ್ಮಪ್ಪ ವಿಭಿನ್ನ, ವೈವಿಧ್ಯಮಯ ವ್ಯಕ್ತಿತ್ವ ಹೊಂದಿದವರು, ಎಂದೂ ತಿದ್ದಿ ತೀಡಿ ಬುದ್ಧಿ ಹೇಳಲು ಬಲ ಪ್ರಯೋಗ ಮಾಡಲೇ ಇಲ್ಲ. ಇದಕ್ಕೊಂದು‌‌ ನಿದರ್ಶನ ಎಂದರೆ ಒಮ್ಮೆ ನಮ್ಮ ಅಣ್ಣ ತಮ್ಮ ತರಗತಿಯ ಹುಡುಗರೊಂದಿಗೆ ಜಗಳವಾಡಿ ಮನೆಗೆ ಬಂದು ಅಪ್ಪರವರನ್ನು ಕರೆದುಕೊಂಡು ಹೋಗಿ ಆ ಹುಡುಗರನ್ನು ಬೈಯ್ಯಲು ಹೇಳಿದ್ದರಂತೆ, ಆಗ ಅಪ್ಪ ಅಣ್ಣನೊಂದಿಗೆ ಹೋಗಿ, ಆ ಹುಡುಗರನ್ನು ಕರೆದು ತನ್ನ ಜೇಬಿನಲ್ಲಿದ್ದ ಚಾಕಲೇಟುಗಳನ್ನು ಕೊಟ್ಟು “ಮಕ್ಕಳೇ ನೀವೆಲ್ಲಾ ಒಂದೇ! ಹಿಂಗಿಲ್ಲಾ ಜಗಳವಾಡಬಾರದು” ಎಂದು ಮುದ್ದು ಮುದ್ದಾಗಿ ಮಾತಾಡಿ ಬಂದಿದ್ದರಂತೆ.

ಅಣ್ಣನವರು, “ನಮ್ಮಪ್ಪ ಅಂದರೆ ಹಂಗೆ ಹಿಂಗೆ ಬಂದು ನಿಮ್ಮೆಲ್ಲರಿಗೊಂದು ಗತಿ ಕಾಣಿಸುತ್ತಾರೆ” ಎಂದು ಹೇಳಿಕೊಂಡಿದ್ದು ಅಪ್ಪನ ಮೃದು ಸ್ವಭಾವ ದಿಂದಾಗಿ ಮುಜುಗರಕ್ಕೀಡಾಗಿದ್ದರಂತೆ. ಇದಕ್ಕಾಗಿಯೇ ಇರಬಹುದು ನಮ್ಮೂರಿನ ಜನ ನಮ್ಮಪ್ಪರವರಿಗೆ ದೇವರಂಥ ಮನುಷ್ಯ ಎಂದು ಹೇಳುತ್ತಿದ್ದರು. ಇಂಥ ಅಪರೂಪದ ಸ್ವಭಾವ ಹೊಂದಿದ್ದ ಅಪ್ಪ ತಮ್ಮ ಸಿಟ್ಟನ್ನು ನಮ್ಮ ಮೇಲೆ ತೋರಿಸಲೇ ಇಲ್ಲ. ಪ್ರಶಾಂತ ಸಾಗರದಂತಿದ್ದ ಅಪ್ಪ ನಿಜಕ್ಕೂ ಅಂತರ್ಗತ ಅಮೂಲ್ಯ, ಅಮೋಘ, ಅಸಿಮ ಜ್ಞಾನಿ.

ನಮ್ಮ ಬದುಕಿನಲ್ಲಿ ನಡೆವ ಪ್ರತಿಯೊಂದು ಆಗುಹೋಗುಗಳನ್ನು ವಿವರಿಸಲು ಅವರಲ್ಲೊಂದು ನೀತಿ ಕಥೆ ಇದ್ದೇ ಇರುತ್ತಿತ್ತು. ಕಥೆಗಳ ಮೂಲಕವೇ ಜೀವನ ಪಾಠ ಕಲಿಸಿಕೊಟ್ಟಿದ್ದು ಅಪ್ಪ. ಮಕ್ಕಳನ್ನು ತನ್ನ ಕುಡಿಗಳೆಂದಷ್ಟೇ ಅಲ್ಲದೇ ಸಮಾಜದ ಭಾವಿ ಪ್ರಜೆಗಳೆಂದೇ ತಿಳಿದು ಎಲ್ಲಾ ಥರದ ನೈತಿಕತೆ, ಹೊಣೆಗಾರಿಕೆ, ಜವಾಬ್ದಾರಿಗಳನ್ನೂ ಹೇಳಿಕೊಟ್ಟವರು. ಆದ್ದರಿಂದ ಮಕ್ಕಳೊಂದಿಗೆ ಗೆಳೆಯನಂತೆಯೇ ವರ್ತಿಸುತ್ತಿದ್ದರು. ಅದೆಷ್ಟೋ ಜನರು ಹೇಳುತ್ತಾರೆ ಅಪ್ಪ ಅಂದರೆ ಭಯ ಅಂತ. ಆದರೆ ನಮಗೆ ಅಂಥ ಅನುಭವವೇ ಇಲ್ಲ. ನಮ್ಮ ಅಪ್ಪ ಅದೆಷ್ಟು ಪ್ರೀತಿ‌ ನೀಡುತ್ತಿದ್ದರೆಂದರೆ ನಾವೆಲ್ಲಾ ಚಿಕ್ಕವರಿದ್ದಾಗ ಒಮ್ಮೆ ಅಪ್ಪನ ಕಾಲಿಗೆ ಅದೇನೋ ಪೆಟ್ಟಾಗಿ ರಕ್ತ ಬರುತ್ತಿತ್ತು. ಅಮ್ಮ ತುಂಬಾ ಗಾಬರಿಯಿಂದ ಅಪ್ಪನ ಕಾಲಿಗೆ ಔಷಧಿ ಲೇಪಿಸುತ್ತಿದ್ದರು.

ಅಮ್ಮನ ಮುಖದಲ್ಲಿ ನೋವು, ಸಂಕಷ್ಟ ಎದ್ದು ಕಾಣುತ್ತಿದ್ದವು. ಆದರೆ ಮಕ್ಕಳಾದ ನಾವೆಲ್ಲಾ ತುಂಬಾ ಸಂತಸ ಪಡುತ್ತಿದ್ದೆವು. ಅದನ್ನರಿತ ಅಮ್ಮ “ ನೀವೆಲ್ಲಾ ಹುಚ್ಚರಾಗಿದ್ದೀರಿಯೇ ನಿಮ್ಮ ಅಪ್ಪನವರಿಗೆ ಗಾಯ ಆಗಿದೆ. ಅವರು ನೋವಿನಲ್ಲಿದ್ದಾರೆ, ನೀವ್ಯಾಕೆ ಸಂತಸ ಪಡುತ್ತಿದ್ದೀರಾ?” ಎಂದು ಬೈಯ್ಯಲಾರಂಭಿಸಿದರು, ಆಗ ನಾವೆಲ್ಲಾ “ಇಲ್ಲಮ್ಮ, ಅಪ್ಪನವರಿಗೆ ಗಾಯ ಆಗಿದೆ ಅಲ್ವಾ? ನಾಳೆ ಅಪ್ಪ ಮನೆಯಲ್ಲೇ ಇರುತ್ತಾರೆ, ನಮ್ಮೊಂದಿಗೆಯೇ ಕಾಲ ಕಳೆಯುತ್ತಾರೆ ಅಲ್ವಾ” ಎಂದು ಹೇಳಿದಾಗ ಅಪ್ಪ ಅಮ್ಮ ಇಬ್ಬರೂ ನಗಲಾರಂಭಿಸಿದ್ದರು. ಹೀಗೆ ಅಪ್ಪ ಮನೆಯಲ್ಲಿ ನಮ್ಮೊಟ್ಟಿಗೆಯೇ ಇದ್ದರೆ ಅದುವೇ ಸ್ವರ್ಗ.

ಆ ಸ್ವರ್ಗಾನುಭವ ನೀಡುವ ಅಪ್ಪನವರ ಹರಸಾಹಸ ನಮಗೆಲ್ಲಾ ಅಂದು ತಿಳಿಯುತ್ತಿರಲಿಲ್ಲ. ಮಕ್ಕಳನ್ನು ಒಳ್ಳೆಯ ಬದುಕು ಕಟ್ಟಿಕೊಡಲು ಅವರು ಮಾಡಿದ ತ್ಯಾಗ ಬಲಿದಾನಗಳೇನು ನಮಗೆ ಅರಿವಾಗಲೇ ಇಲ್ಲ. ಅದೆಷ್ಟು ತೊಂದರೆಗಳಿದ್ದರೂ ನಮಗೆ ಮಾತ್ರ ಅಪ್ಪನಲ್ಲಿ ಬದುಕುವ ಛಲ, ನಮ್ಮ ಬಗೆಗೆ ಇರುವ ಪ್ರೀತಿ ಮಾತ್ರ ಕಂಡಿದ್ದವು. ಬೆಳೆದು ದೊಡ್ಡವರಾದ ಮೇಲೂ ನಾವೆಲ್ಲಾ ಮಕ್ಕಳು ಅಪ್ಪನವರ ಸುತ್ತ ಕೂತುಕೊಂಡು ಅವರ ಬಾಲ್ಯದ ಕಥೆಗಳು ಮತ್ತು ಅನುಭವಗಳನ್ನು ಕೇಳುತ್ತಿದ್ದೆವು. ಅಪ್ಪ ಅದೆಷ್ಟು ಕಷ್ಟ ಪಟ್ಟು ನಮ್ಮನ್ನೆಲ್ಲಾ ಬೆಳೆಸಿದ್ದಾರೆಂದು ದೊಡ್ಡವರಾದ ಮೇಲೆ ತಿಳಿದಂತಾಯಿತು.

ಈ ಕೊರೊನಾ ಮಹಾಮಾರಿಗೆ ತುತ್ತಾಗಿ ಎಪ್ಪತ್ತೆರಡರ ಜೀವ ಸತತ ಹತ್ತು ಹನ್ನೆರಡು ದಿನಗಳ ವರೆಗೆ ಜೀವನ್ಮರಣದ ಹೋರಾಟದಲ್ಲಿ ಹೊರಟೇ ಹೋಯಿತು. ಅದೆಷ್ಟು ಕಷ್ಟಗಳು ಬಂದರೂ ನಗು ಮುಖ ಬೀರುತ್ತಿದ್ದ ಅಪ್ಪನವರು ಈ ಪಿಶಾಚಿ ಕೊರೊನಾದಿಂದಾಗಿ ನಗುವುದನ್ನೇ ಬಿಟ್ಟಿದ್ದರು. ಅದೆಷ್ಟು ತೊಂದರೆ ಆದರೂ ಹೇಳಿಕೊಳ್ಳದ ಅಪ್ಪ ಕೊರೊನಾ ದಿಂದಾಗುತ್ತಿದ್ದ ಉಸಿರಾಟದ ತೊಂದರೆಯನ್ನೂ ಹೇಳಲೇ ಇಲ್ಲ. ತಾನಾಗಿಯೇ ಐದಾರು ದಿನಗಳ ವರೆಗೆ ಒಬ್ಬಂಟಿಯಾಗಿ ಅದನ್ನು ನಿಭಾಯಿಸಿಕೊಂಡು ಹೋದರು.

ನಮ್ಮ ಬದುಕಿನ ಹೀರೋ ಹೀಗೆ ನಮ್ಮ ಮುಂದೆ ಪ್ರಾಣ ಬಿಡುತ್ತಿರುವ ಸಂದರ್ಭ ಬರುತ್ತದೆ ಎಂದು, ಅಂದುಕೊಂಡಿರಲೇ ಇಲ್ಲ! ಅಪ್ಪರವರ ಪ್ರಾಣ ಉಳಿಸಲು ಬೆಂಗಳೂರಿನ ಬೀದಿ ಬೀದಿಗೆ ರಾತ್ರಿ ಒಂದು ಎರಡು ಗಂಟೆಗಳೆನ್ನದೇ ಬೈಕ್ ಮೇಲೆ ಆಸ್ಪತ್ರೆ ಆಸ್ಪತ್ರೆ ಸುತ್ತಾಡಿದೆವು. ಮನೆಗೆ ಬಂದು ಬಿರಿಯಾನಿ ತಿಂದು ಹೋದ ಅದೆಷ್ಟೋ ಗೆಳೆಯರೂ ಮೂಕರಾಗಿಬಿಟ್ಟಿದ್ದರು. ತಮ್ಮ ಕಷ್ಟಗಳಿಗಾಗಿ, ಹೆಣ್ಣು ಮಕ್ಕಳ ಮದುವೆಗಳಿಗಾಗಿ, ಹಬ್ಬ ಹರಿದಿನಗಳಲ್ಲಿ ಖುಷಿ ಅಂತ ಹಣ ಕೇಳಲು ಮನೆಗೆ ಬರುತ್ತಿದ್ದ, ಕರೆ ಮಾಡುತ್ತಿದ್ದ ಗೆಳೆಯರು, ಸಂಬಂಧಿಗಳು ಕುಶಲ, ಕ್ಷೇಮ ವಿಚಾರಿಸಲೂ ಬಡವರಾಗಿ ಬಿಟ್ಟಿದ್ದರು.

ಕೊನೆಗೆ ಮನುಷ್ಯತ್ವ ಉಳಿದಿದೆ ಎಂಬಂತೆ ಅನೇಕ ಅಪರಿಚಿತರು ನಮಗೆ ಸಹಕಾರ ನೀಡಿದರು. ನಮಗೆ ಒಂದ್ಚೂರು ನೋವಾಗದಂತೆ ನೋಡಿಕೊಳ್ಳುತ್ತಿದ್ದ ಅಪ್ಪರವರನ್ನು ಉಳಿಸಲು ಅಣ್ಣಂದಿರೂ ಹಗಲಿರುಳು ಎನ್ನದೆ ಜೊತೆಯಾಗಿಯೇ ಉಪಚರಿಸಿದರು. ಸಿಕ್ಕ ಸಿಕ್ಕವರನ್ನು ಬೇಡಿಕೊಂಡಾಗ ಕೊನೇ ಕ್ಷಣಗಳಲ್ಲಿ ಆಸ್ಪತ್ರೆ ವ್ಯವಸ್ಥೆ ಮಾಡಲಾಯಿತು. ಆದರೆ ನಮ್ಮ ಪ್ರಾರ್ಥನೆಗಳೆಲ್ಲಾ ವ್ಯರ್ಥವಾದವು ದೇವರಿಗೆ ಮಾತ್ರ ನಮ್ಮ ಮೇಲೆ ಕರುಣೆ ಬರಲೇ ಇಲ್ಲ!! ಅಪ್ಪರವರಿಗೆ ಉಳಿಸುವ ನಮ್ಮ ಪ್ರಯತ್ನದ ಮುಂದೆ ದೇವರು ತೋರಿಸಿದ ಪ್ರೀತಿ ಗೆದ್ದು ಬಿಟ್ಟಿತು. ಅಪ್ಪ ನಮ್ಮನ್ನಗಲಿ ದೇವರತ್ತ ಹೋರಟು ಬಿಟ್ಟರು.

ನಿತ್ಯ ಚಾಚು ತಪ್ಪದೇ ಬಾಗಿಲು ತೆರೆದು ನನ್ನ ಬೀಳ್ಕೊಡುತ್ತಿದ್ದ ಅಪ್ಪ ದಿಢೀರನೇ ಹೊಗಿಬಿಟ್ಟಿದ್ದಾರೆ. ಕೆಲಸಕ್ಕಾಗಿ ಹೊರಡಲು ರೆಡಿಯಾಗಿ ನಿಂತರೆ ನೀರಿನ ಬಾಟಲ್ ತುಂಬಿ ಕೈಗೆ ಕೊಡುತ್ತಿದ್ದ ಅಪ್ಪ ಈಗ ಇಲ್ಲದಿದ್ದರಿಂದ ಆ ಬಾಟಲಿನ ನೀರೂ ಸಹ ಗಂಟಲಿನಿಂದ ಇಳಿಯುವಾಗ ಅಪ್ಪನಿಲ್ಲದ ಕಟು ಸತ್ಯವನ್ನು ಮತ್ತೇ ಮತ್ತೇ ನೆನಪಿಸುತ್ತಿದೆ. ಒಂದು ದಿನವೂ ಮನೆಯ ಹೊಸ್ತಿಲು ಒಬ್ಬಂಟಿಯಾಗಿ ದಾಟಲೂ ಬಿಡದೇ ಜೊತೆಯಲ್ಲಿ ಕಾವಲುಗಾರನಾಗಿದ್ದ ಅಪ್ಪ ಈಗಿಲ್ಲದಿರುವಾಗ ಪ್ರತಿ ಹೆಜ್ಜೆ ಹೆಜ್ಜೆಗೂ ತಾಗುವ ಕವಲುದಾರಿಗಳು ತೊಂದರೆಯನ್ನುಂಟುಮಾಡುತ್ತಿವೆ.

“ಅದೆಷ್ಟು ದೊಡ್ಡವರಾದರೂ ಅಪ್ಪ ಅಮ್ಮರನ್ನು ಮರೆಯುವಷ್ಟು ಬಲಿಷ್ಠತೆ ಬರೋದೇ ಇಲ್ಲ!!
ಅದೆಷ್ಟು ಮುಂದೆ ನೆಡದರೂ ಅಪ್ಪ ಅಮ್ಮನ ಕೈ ಹಿಡಿದು ಹಿಂದೆ ಸಾಗಿದ ದಾರಿ ಮರೆಯಕಾಗಲ್ಲ!!
ಅದೆಷ್ಟು ಧೈರ್ಯದಿಂದ ಹಿಗ್ಗಿದರೂ,
ಅಪ್ಪ ಅಮ್ಮನ ಅಗಲಿಕೆ, ಕುಗ್ಗಿಸದೇ ಬಿಡೋದಿಲ್ಲ”!!
ಆದರೂ ವಿಧಿಯಾಟ ನಾವೆಲ್ಲರೂ ಎದುರಿಸಲೇ ಬೇಕು.

ಏನೇ ನೋವು ಬಂದರೂ ಬಾಗದ ಅಪ್ಪನ ಗುಣ,ಛಲ ಮಾತ್ರ ಇಂದಿಗೂ ನಮ್ಮಲ್ಲಿದೆ. ಎಲ್ಲವನ್ನೂ ನಿಭಾಯಿಸುವ ಆತ್ಮವಿಶ್ವಾಸ, ಅಪ್ಪ ಕಲಿಸಿಕೊಟ್ಟ ಅಮೂಲ್ಯ ಸಂಸ್ಕಾರಗಳು ನಮ್ಮೊಟ್ಟಿಗಿವೆ. ಅಪ್ಪ ದೈಹಿಕವಾಗಿಲ್ಲದಿದ್ದರೂ ಮಾನಸಿಕವಾಗಿ ಎಂದಿಗೂ ನಮ್ಮೊಟ್ಟಿಗಿದ್ದಾರೆಂದೇ ಬದುಕುತ್ತಿದ್ದೇವೆ. ಬಾಲ್ಯದಿಂದಲೂ ಅಪ್ಪಂದಿರ ದಿನವನ್ನು ತುಂಬಾ ಸಡಗರದಿಂದ ಆಚರಿಸುತ್ತಿದ್ದೆವು. ಇಂದು ಈ ದಿನ ಅಪ್ಪ ಜೊತೆಗಿಲ್ಲ ಎಂಬ ಕಟು ಸತ್ಯದೊಂದಿಗೆ ಬದುಕುವುದು‌ ಸ್ವಲ್ಪ, ಇಲ್ಲ ಇಲ್ಲ ಬಲೂ ಭಾರ ಅನ್ನಿಸುತ್ತಿದೆ!!! ಆದರೂ ಬದುಕಬೇಕು, ಬದುಕುತ್ತಿದ್ದೇವೆ!!!

(ಫರ್ಹಾನಾಜ್ ಮಸ್ಕಿ (ತಂದೆ- ಖ್ವಾಜಾ ಗೇಸುದರಾಜ್ ಹುಸೇನ್ ಕಿರನ್ ಬ್ಯಾಟರೀಸ್ ಮಸ್ಕಿ), ಸಹಾಯಕ ಪ್ರಾಧ್ಯಾಪಕರು ನೆಲಮಂಗಲ, ಬೆಂಗಳೂರು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!

Published

on

ರೋಗ್ಯಕರ ಆಹಾರ ಮತ್ತು ನೈಸರ್ಗಿಕ ಚಿಕಿತ್ಸೆಯಲ್ಲಿ ತೆಂಗಿನ ಎಣ್ಣೆಯು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆರೋಗ್ಯದ ದೃಷ್ಟಿಯಿಂದ ತೆಂಗಿನ ಎಣ್ಣೆಗಳಲ್ಲಿ ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆ ಅತಿ ಉತ್ತಮ. ಇದನ್ನು ಕೊಬ್ಬರಿ (ಒಣಗಿದ ತೆಂಗಿನಕಾಯಿ) ಯಿಂದ ಮಾಡಲಾಗುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ದೈನಂದಿನ ಜೀವನದಲ್ಲಿ ತೆಂಗಿನ ಎಣ್ಣೆ ಉಪಯೋಗಿಸಿ ಅದರ ಪ್ರಯೋಜನಗಳನ್ನು ಪಡೆಯಿರಿ :

ತೆಂಗಿನೆಣ್ಣೆಯಲ್ಲಿ ಲಾರಿಕ್ ಆಮ್ಲದಂಶವನ್ನು ಹೊಂದಿರುತ್ತದೆ. ತೆಂಗಿನೆಣ್ಣೆಯ ಬಳಕೆಯಿಂದ ಶಕ್ತಿ ದೊರಕುತ್ತದೆ ಮತ್ತು ತೂಕ ನಿರ್ವಹಣೆಯಲೂ ಸಹಾಯಮಾಡುತ್ತದೆ.

ಹೃದಯದ ಆರೋಗ್ಯ: ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ HDL (ಉತ್ತಮ) ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಮೂಲಕ ಲಿಪಿಡ್ ಆರೋಗ್ಯವನ್ನು ಸುಧಾರಿಸಬಹುದು ಎಂದು ಕೆಲವು ಅಧ್ಯಯನಗಳು ಸಾಬೀತುಪಡಿಸಿದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಜೀರ್ಣಕಾರಿ ಆರೋಗ್ಯ: ತೆಂಗಿನ ಎಣ್ಣೆಯು ಕೊಬ್ಬು-ಕರಗಬಲ್ಲ ಜೀವಸತ್ವಗಳು ಮತ್ತು ಖನಿಜಗಳ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಇರಿಟಬಲ್ ಬೋವೆಲ್ ಸಿಂಡ್ರೋಮ್ (IBS) ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಉರಿಯೂತದ ಗುಣಲಕ್ಷಣಗಳು: ತೆಂಗಿನ ಎಣ್ಣೆಯು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚರ್ಮ ಮತ್ತು ಕೂದಲ ರಕ್ಷಣೆ: ತೆಂಗಿನೆಣ್ಣೆ ತಿನ್ನುವುದರಿಂದ ಆರೋಗ್ಯಕರ ಚರ್ಮ ಮತ್ತು ಕೂದಲನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ಅಗತ್ಯವಾದ ಪೋಷಕಾಂಶಗಳು ಮತ್ತು ತೇವಾಂಶವನ್ನು ಒದಗಿಸುತ್ತದೆ. ತೆಂಗಿನ ಎಣ್ಣೆಯು ನಿಮ್ಮ ಕೂದಲಿಗೆ ಆಳವಾಗಿ ತೂರಿಕೊಂಡು, ಒಳಗಿನಿಂದ ಅವುಗಳನ್ನು ಪೋಷಿಸುತ್ತದೆ ಮತ್ತು ಆರೋಗ್ಯವನ್ನು ಹೊರಸೂಸುವ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆಯ ಪೋಷಕಾಂಶಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಅದೇ ಸಮಯದಲ್ಲಿ ಕೂದಲು ಒಡೆಯುವಿಕೆ ಮತ್ತು ವಿಭಜಿತ ತುದಿಗಳನ್ನು ತಡೆಯುತ್ತದೆ.

ರೋಗನಿರೋಧಕ ಬೆಂಬಲ: ತೆಂಗಿನೆಣ್ಣೆಯು ಲಾರಿಕ್ ಆಮ್ಲ ಮತ್ತು ಕ್ಯಾಪ್ರಿಲಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ರೋಗನಿರೋಧಕ-ಉತ್ತೇಜಿಸುವ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ದೇಹವು ಸೋಂಕುಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.

ತೂಕ ನಿರ್ವಹಣೆ: ತೆಂಗಿನ ಎಣ್ಣೆಯು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಸಮತೋಲಿತ ಆಹಾರದಲ್ಲಿ ಬಳಸಿದಾಗ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು: ತೆಂಗಿನಕಾಯಿಯಲ್ಲಿ ಲಾರಿಕ್ ಆಮ್ಲವಿದೆ ಆದ್ದರಿಂದ ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಶಿಲೀಂಧ್ರಗಳಿಂದ ಉಂಟಾಗುವ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆ ನಿಮ್ಮ ಅಡಿಗೆ ಮನೆಯ ಸಂಗಾತಿಯಾಗಲಿ.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು

Published

on

  • ರುದ್ರಪ್ಪ ಹನಗವಾಡಿ

ದೆಲ್ಲ ಹೊರಗಿನದಾದರೆ ನಮ್ಮ ವಿಭಾಗದಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ನಮ್ಮ ಜೊತೆಗಿದ್ದ ಡಾ. ಕೆ.ಎಂ. ನಾಯ್ಡು ಅವರು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದ ಹೊಸ ಸ್ನಾತಕೋತ್ತರ ಕೇಂದ್ರಕ್ಕೆ ಮುಖ್ಯಸ್ಥರಾಗಿ ಆಯ್ಕೆಯಾಗಿ ಹೋಗಿದ್ದರು.

ನಾನು ಎಂ.ಎ. ಓದುವಾಗ ನನಗೆ ಪ್ರಾಧ್ಯಾಪಕರಾಗಿದ್ದ ಡಾ. ಬಿ.ಎಸ್. ಶ್ರೀಕಂಠಾರಾಧ್ಯರು ಇಲಾಖೆಗೆ ಮುಖ್ಯಸ್ಥರಾಗಿ ಬಂದಿದ್ದರು. ನನ್ನ ಬಗ್ಗೆ ನಮ್ಮ ವಿಭಾಗದಲ್ಲಿ ಮತ್ತು ಮೈಸೂರಿನ ಗಂಗೋತ್ರಿ ವಿಭಾಗದಲ್ಲಿ ನಾನು ಮದುವೆಯಾಗಿರುವ ಬಗ್ಗೆ ಅಸಮಾಧಾನವಿತ್ತು. ಅದನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ಬಂದಿದ್ದ ಬಿಎಸ್‌ಎಸ್ ಗುರುಗಳು ಕೂಡ ನನ್ನ ಬಗ್ಗೆ ಅಸಮಾಧಾನಗೊಂಡವರಂತೆ ತೋರುತ್ತಿದ್ದರು.

ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶ್ರೀಕಂಠಾರಾಧ್ಯರು ಅಧ್ಯಾಪಕರೆಲ್ಲರಿಗೂ ತೆಗೆದುಕೊಳ್ಳುವ ತರಗತಿಗಳ ವೇಳಾಪಟ್ಟಿ ತಯಾರಿಸಿಕೊಟ್ಟಿದ್ದರು. ನನಗೆ ಆಶ್ಚರ್ಯವಾಗುವಂತೆ ನನಗೆ ಯಾವುದೇ ಸಾಮಾನ್ಯ ತರಗತಿಗೆ ಪಾಠ ಮಾಡುವ ಅವಕಾಶವಿರದಂತೆ ತರಗತಿಗಳನ್ನು ಹಂಚಿಕೆ ಮಾಡಿದ್ದರು. ಐಚ್ಛಿಕವಾಗಿದ್ದ ಎರಡು ವಿಷಯಗಳಾದ ಪ್ರಾದೇಶಿಕ ಅರ್ಥಶಾಸ್ತ್ರ ಮತ್ತು ಕೃಷಿ ಅರ್ಥಶಾಸ್ತ್ರಗಳನ್ನು ಹಂಚಿಕೆ ಮಾಡಿ ಮುಗಿಸಿದ್ದರು. ನನಗೆ ವಿದ್ಯಾ ಗುರುಗಳು ಹೆಚ್ಚು ಸಲಿಗೆ ಇಲ್ಲದೆ ಇದ್ದ ಅವರೊಡನೆ ಇದು ಸರಿ ಇಲ್ಲ. ಇದನ್ನು ಸರಿಯಾಗಿ ಹಂಚಿಕೆಯಾಗಬೇಕೆಂದು ನನ್ನ ಅಸಮಾಧಾನ ತೋರಿ ಅವರ ಟೇಬಲ್ ಮೇಲೆ ತಾತ್ಸಾರದಿಂದಲೇ ಆದೇಶದ ಪ್ರತಿಯನ್ನು ಬಿಟ್ಟು ಬಂದಿದ್ದೆ. ಅತ್ಯಂತ ಮಿತಭಾಷಿ, ಸರಳ ಮತ್ತು ಆಳ ಅಧ್ಯಯನದಿಂದ ಗಳಿಸಿದ ಗಂಭೀರತೆಯಲ್ಲಿದ್ದ ಅವರಿಗೆೆ ನನ್ನ ಬಗ್ಗೆ, ನಾನು ಮದುವೆಯಾದ ಬಗ್ಗೆ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ ಅವರಿಗೆ ಹೇಳಿ ನನಗೆ ಈ ರೀತಿಯ ಅನಾದರಣೆ ತೋರಿಸುವಂತೆ ನಮ್ಮವರೇ ಆಗಿದ್ದ ಕೆಲವು ಅಧ್ಯಾಪಕರು ಹೊಸಬರಾಗಿ ಬಂದಿದ್ದ ಇವರಿಗೆ ಹೇಳಿದ್ದರು.

ಆರಾಧ್ಯರೂ ಕೂಡ ಮೈಸೂರಿನ ಗಂಗೋತ್ರಿಯಲ್ಲಿ ಪಾಠ ಮಾಡುತ್ತಿದ್ದವರು, ಅಲ್ಲಿಯೇ ಪ್ರಾಧ್ಯಾಪಕರಾಗಬೇಕಾಗಿದ್ದವರನ್ನು ಬಿಆರ್‌ಪಿಗೆ ಒಬ್ಬ ಹಿರಿಯ ಪ್ರಾಧ್ಯಾಪಕರು ಬೇಕೆಂಬ ನೆಪವೊಡ್ಡಿ ಅವರನ್ನು ವರ್ಗಾವಣೆ ಮಾಡಿ ಇಲ್ಲಿಗೆ ಕಳಿಸಿದ್ದರು. ಇಲ್ಲಿಗೆ ಬರುವ ಬಗ್ಗೆ ಮನಸ್ಸಿಲ್ಲದ ಕಾರಣ ಅಸಮಾಧಾನವೂ ಅವರಲ್ಲಿ ಮನೆಮಾಡಿತ್ತು. ಬಂದಾಕ್ಷಣ ಇಲ್ಲಿನವರ ಚಾಡಿ ಮಾತು ಕೇಳಿ ನನ್ನ ಬಗ್ಗೆ ಈ ರೀತಿ ನಡೆದುಕೊಂಡಿದ್ದರು. ಆ ನಂತರ ಎಲ್ಲರೂ ಚರ್ಚಿಸಿ ಸಮಾನ ವಿಷಯಗಳ ಮತ್ತು ತರಗತಿಗಳನ್ನು ಹಂಚಿಕೆ ಮಾಡಿಕೊಂಡು ಎಂದಿನಂತೆ ತರಗತಿಗಳು ನಡೆಯಲಾರಂಭಿಸಿದವು. ಪ್ರಾರಂಭದಲ್ಲಿ ಆಗಿದ್ದ ನನ್ನ ಮತ್ತು ನನ್ನ ಗುರುಗಳಾಗಿದ್ದ ಶ್ರೀಕಂಠಾರಾಧ್ಯರ ನಡುವೆ ನಡೆದ ಸಣ್ಣ ಅಸಮಾಧಾನ ಕರಗಿ ಎಂದಿನ ಲವಲವಿಕೆಯಿಂದ ವಿಭಾಗದಲ್ಲಿ ಚಟುವಟಿಕೆಗಳು ಪ್ರಾರಂಭವಾದವು. ( ಸುದ್ದಿದಿನ.ಕಾಂ|ವಾಟ್ಸಾಪ್|9980346243)

Continue Reading

ದಿನದ ಸುದ್ದಿ

ಮಕ್ಕಳಿಗೆ ದೈನಂದಿನ ಆಹಾರದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಸೇರಿಸಿ: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ .ಪಿ ಗಡಾದ್ ಸಲಹೆ

Published

on

ಸುದ್ದಿದಿನ,ಕುಂದಾಪುರ: ದೈನಂದಿನ ಆಹಾರ ಪದ್ಧತಿಯಲ್ಲಿ ತರಕಾರಿ ಹಣ್ಣುಗಳನ್ನು ಸೇರಿಸುವುದು, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಲಭ್ಯ ಇರುವ ಸರ್ಕಾರಿ ಸವಲತ್ತುಗಳನ್ನು ಬಳಸಿಕೊಳ್ಳುವಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ತಾಯಂದಿರಿಗೆ ಡಾ. ಐ .ಪಿ ಗಡಾದ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಉಡುಪಿ ಜಿಲ್ಲೆ ಇವರು ತಮ್ಮ ಉದ್ಘಾಟನಾ ನುಡಿಗಳಿಂದ ಮನವಿ ಮಾಡಿದರು.

ನಮ್ಮ ಪಿ.ಜಿ.ಡಿ.ಎಚ್.ಪಿ.ಇ 7ನೇ ತಂಡದ ಪ್ರಶಿಕ್ಷಣಾರ್ಥಿ ಶ್ರೀಮತಿ ವೃಂದಾ.ಬಿ.ತಾಮಸೆ ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದಲ್ಲಿ ಅಪೌಷ್ಟಿಕತೆಯ ಕುರಿತು ಸಂಶೋಧನಾತ್ಮಕ ಅಧ್ಯಯನವನ್ನು ಮಾಡಿ ಗ್ರಾಮದ ಎಲ್ಲಾ ಮಕ್ಕಳು ಮತ್ತು ತಾಯಂದಿರನ್ನು ಬೃಹತ್ ಮಹಾ ಮೇಳದ ಮೂಲಕ ಈ ಸಭಾಂಗಣದ ಕಾರ್ಯಕ್ರಮಕ್ಕೆ ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆ ರೋಟರಿ ಕ್ಲಬ್ ಸ್ಥಳೀಯ ಗ್ರಾಮ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಕ್ಷಣ ಇಲಾಖೆ ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದ್ದಾರೆ ಇವರೆಲ್ಲರಿಗೂ ತಮ್ಮ ಧನ್ಯವಾದಗಳನ್ನು ಡಾ. ಮಂಜುನಾಥ್ ಜೆ .ಎ .ಉಪನ್ಯಾಸಕರು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಬೆಂಗಳೂರು ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಶುಭ ಹಾರೈಸಿದರು.

ಮಳೆಗಾಲದಲ್ಲಿ ಮನೆಯ ಅಕ್ಕಪಕ್ಕದಲ್ಲಿ ನೀರು ನಿಲ್ಲುವುದು ಸಹಜ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಮತ್ತು ಮಲೇರಿಯದಂತಹ ಕಾಯಿಲೆಗಳು ಬರುತ್ತವೆ ಹಾಗಾಗಿ ಮಳೆಯ ನೀರು ನಿಲ್ಲದಂತೆ ಹರಿದು ಹೋಗುವ ಹಾಗೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಿಳಿಸುತ್ತಾ ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ನ ಉಪಾಧ್ಯಕ್ಷರು ಶುಭ ಕೋರಿದರು.

ಅಂಗನವಾಡಿಗಳ ಮೂಲಕ ಅಪೌಷ್ಟಿಕ ಮಕ್ಕಳ ದತ್ತು ಪಡೆಯುವ ಯೋಜನೆಯನ್ನು ಅಗತ್ಯತೆ ಇರುವ ಕುಟುಂಬಗಳು ಪಡೆದುಕೊಳ್ಳಬೇಕು ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ರಾಷ್ಟ್ರಧ್ವಜದ ತ್ರಿವರಣವುಳ್ಳ ಹಣ್ಣು ಹಂಪಲು ತರಕಾರಿ ಸೊಪ್ಪು ಬೇಳೆ ಕಾಳುಗಳು ಹಾಲು ಮೊಟ್ಟೆ ಮೀನು ಮಾಂಸ ಹೀಗೆ ಸಮತೋಲನ ಆಹಾರವನ್ನು ರೂಡಿಸಿಕೊಳ್ಳುವಂತೆ ಕುಂದಾಪುರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಉಮೇಶ್ ಟಿ ಎಂ ಕರೆ ನೀಡಿದರು.

ಪ್ರತಿ ಶುಕ್ರವಾರ ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ಡ್ರೈಡೇ ಕಾರ್ಯಕ್ರಮ ಪ್ರಾರಂಭವಾಗಿದ್ದು ಮನೆಯ ಒಳಾಂಗಣ ಮತ್ತು ಹೊರಾಂಗಣದಲ್ಲಿ ನೀರು ತುಂಬಿಟ್ಟುಕೊಳ್ಳುವ ಪರಿಕರಗಳನ್ನು ಸಂಪೂರ್ಣ ಖಾಲಿ ಮಾಡಿ ಹೊಸದಾಗಿ ನೀರನ್ನು ತುಂಬಿಸಿಕೊಳ್ಳಬೇಕೆಂದು ಉಡುಪಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಶಶಿಧರ್ ಅವರು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸ್ಥಳೀಯ ಸರ್ಕಾರೇತರ ಸಂಸ್ಥೆ ರೋಟರಿ ಕ್ಲಬ್‌ನ ಅಧ್ಯಕ್ಷ ಶ್ರೀ ಸತೀಶ್ ಎಂ ನಾಯಕ ಕಾರ್ಯಕ್ರಮದ ಕುರಿತು ಮಾತನಾಡುತ್ತಾ ಆರೋಗ್ಯ ಇಲಾಖೆ ಆಯೋಜಿಸುತ್ತಿರುವ ಹಲವಾರು ಕಾರ್ಯಕ್ರಮಗಳಲ್ಲಿ ರೋಟರಿ ಕ್ಲಬ್ ದೇಶಾದ್ಯಂತ ಸಹಕಾರ ನೀಡುತ್ತಿದೆ ಇದೇ ರೀತಿಯಾಗಿ ನಾವು ಸಹ ಮಕ್ಕಳು ಮತ್ತು ತಾಯಂದಿರಿಗೆ ಲಘುಉಪಹಾರ ವ್ಯವಸ್ಥೆ ಮಾಡಿದ್ದೇವೆ ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಮ್ಮ ಸಹಕಾರ ನೀಡುವುದಾಗಿ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮಕ್ಕಳ ದೈಹಿಕ ಬೆಳವಣಿಗೆಗಾಗಿ ಅಪೌಷ್ಟಿಕತೆ ಪ್ರಮಾಣ ತಿಳಿಯಲು ಮೌಲ್ಯಮಾಪನ ಮಾಡಬೇಕಾಗುತ್ತದೆ ತೋಳಿನ ಮಧ್ಯಭಾಗದ ಸುತ್ತಳತೆ 11.5 cm ಗಿಂತ ಕಡಿಮೆ ಇರುವ ಮಕ್ಕಳನ್ನು ಅಪೌಷ್ಟಿಕ ಮಕ್ಕಳೆಂದು ಗುರುತಿಸಿ ಅವರಿಗೆ ಹೆಚ್ಚಿನ ಪೌಷ್ಟಿಕ ಆಹಾರ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನೀಡುವ ಅವಶ್ಯಕತೆ ಇದೆ. ಅಪೌಷ್ಟಿಕತೆಯು ದೇಹದ ಪ್ರಮುಖ ಅಂಗಗಳ ಕಾರ್ಯಕ್ಕೆ ಹಾನಿ ಉಂಟುಮಾಡುತ್ತದೆ ಹಾಗೂ ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುವ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ಪೌಷ್ಟಿಕ ಸಮತೋಲಿತ ಆಹಾರವನ್ನು ಉಪಯೋಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳುತ್ತಾ ನಮ್ಮ ಜಿಲ್ಲೆಯ ತಾಯಂದಿರಿಗೆ ಆರೋಗ್ಯಕ್ಕೆ ಸಂಬAಧಪಟ್ಟ ಹಾಗೆ ಜ್ಞಾನ ಹೆಚ್ಚಿದ್ದು, ಆದರೆ ಕಾರ್ಯರೂಪಕ್ಕೆ ತರುವಲ್ಲಿ ದೊಡ್ಡ ಪ್ರಮಾಣದ ಯಶಸ್ಸು ಇನ್ನೂ ಆಗಿಲ್ಲ ಅದಕ್ಕಾಗಿ ನಾವೆಲ್ಲರೂ ಅಪೌಷ್ಟಿಕತೆ ವಿರುದ್ಧ ಹೋರಾಡಲು ಇಲ್ಲಿ ಪ್ರಾತ್ಯಕ್ಷಿತೆಯ ಮೂಲಕ ತೋರಿಸಲಾಗಿರುವ ಆಹಾರಗಳನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ರೂಡಿಸಿಕೊಳ್ಳುವುದರೊಂದಿಗೆ ಕಾರ್ಯರೂಪಕ್ಕೆ ತರೋಣ ಎಂದು ತಮ್ಮ ಅಮೂಲ್ಯವಾದ ಮಾಹಿತಿಯಲ್ಲಿ ತಿಳಿಸುತ್ತಾ 0-19 ವರ್ಷದ ಒಳಗಿನ ಮಕ್ಕಳಿಗಾಗಿ ಸರ್ಕಾರದಿಂದ ಜಾರಿ ಇರುವ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಡಾ. ಪ್ರೇಮಾನಂದ.ಕೆ ತಾಲೂಕು ಆರೋಗ್ಯ ಅಧಿಕಾರಿಗಳು ಕುಂದಾಪುರ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಒಂದು ಅಥವಾ ಎರಡು ಮಕ್ಕಳ ಪಡೆಯುವವರ ಸಂಖ್ಯೆ ಅಧಿಕವಾಗಿದ್ದು ಈ ಮಕ್ಕಳ ಪಾಲನೆ ಪೋಷಣೆಗೆ ಎಲ್ಲಾ ಇಲಾಖೆಯವರು ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದು ಕೇವಲ ಮಕ್ಕಳಿಗೆ ಮಾತ್ರ ಪೌಷ್ಟಿಕ ಆಹಾರವನ್ನು ನೀಡುವುದಲ್ಲದೆ ತಾಯಂದಿರು ಕೂಡ ಸಮತೋಲಿತ ಪೌಷ್ಟಿಕ ಆಹಾರವನ್ನು ಗರ್ಭಿಣಿ ಅವಧಿಯಲ್ಲಿಯೇ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ನಾಗರತ್ನ ಅಧ್ಯಕ್ಷರು ಗ್ರಾಮ ಪಂಚಾಯತ್ ಕೋಟೇಶ್ವರ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೂರ್ಣಿಮಾ ಆರ್ ಶೇಟ್, ಜಿಲ್ಲಾ ಆರ್ ಸಿ.ಎಚ್ ಅಧಿಕಾರಿಗಳು ಡಾ.ಜೋತ್ನಾ ಸ್ಥಳೀಯ ಗ್ರಾಮ ಪಂಚಾಯತ್‌ನ ಸರ್ವ ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ನಾಯಕ್, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಶೋಭಾ, ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ತಾಯಂದಿರು, ಮಕ್ಕಳು ಉಪಸ್ಥಿತರಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಆಯುಷ್ಮಾನ್ ಆಭಾಕಾರ್ಡ್ ಮತ್ತು ಅಸಾಂಕ್ರಾಮಿಕ ರೋಗಗಳ ತಪಾಸಣೆಯನ್ನು ಮಾಡಲಾಯಿತು.

ಶ್ರೀಮತಿ ವೃಂದಾ.ಬಿ.ತಾಮಸೆ ಪ್ರಶಿಕ್ಷಣಾರ್ಥಿ ಪಿ.ಪಿ.ಜಿ.ಡಿ.ಎಚ್.ಪಿ.ಇ ವಿಭಾಗ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಬೆಂಗಳೂರು ಸ್ವಾಗತಿಸಿದರು. ಶ್ರೀಮತಿ ಭಾಗ್ಯಲಕ್ಷ್ಮಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕುಂದಾಪುರ ಕಾರ್ಯಕ್ರಮದ ನಿರೂಪಣೆ ಮಾಡಿ ಧನ್ಯವಾದ ಅರ್ಪಿಸಿದರು.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending