ಭಾವ ಭೈರಾಗಿ
ಸೋಲೆಂಬ ಸ್ನೇಹಿತನ ಸಾಂಗತ್ಯವೀರಬೇಕು ನೀವೇನಂತೀರಿ..!
ನಾನು ಕೂಡ ಒಬ್ಬ ಓದುಗ,ವಿದ್ಯಾರ್ಥಿ ಈ ಲೇಖನದಲ್ಲಿ ಹೇಳಹೊರಟಿರುವುದು ಸಾಧನೆಗೆ ಸಾಕ್ಷಿ ಆಗಬಲ್ಲ ಸೋಲಿನ ಸಾಂಗತ್ಯದ ಸಹವಾಸದ ಬಗ್ಗೆ.ಏನಿದು ಸೋಲಿನ ಸಹವಾಸ ಬಯಸಬೇಕು ಎನ್ನುತ್ತಿದ್ದಾರೆ,ಅಂತ ಆಶ್ಚರ್ಯವಾಗುತ್ತಿದ್ದಿರಾ…..! ಹೌದು ಪ್ರತಿ ಸೋಲು ಕೂಡ ಸಾಧಕನಿಗೆ ಸಾಹಸದ ಮಾರ್ಗ ಕಲ್ಪಿಸಿ ಕೊಡುವಂತಹದ್ದು.ಅದನ್ನು ನಾವೆಲ್ಲರೂ ಒಪ್ಪಲೇಬೇಕು ಯಾಕೆಂದರೆ, ನೆನಪಿರಲಿ ಯಾವ ಗುರಿಸಾಧನೆಯೂ ಮನುಷ್ಯನ ಪ್ರಯತ್ನಕ್ಕಿಂತ ಮುಗಿಲಿಲ್ಲ. ಯಾವ ಪ್ರಯತ್ನ ಅಥವಾ ಸಾಧನೆಯು ಸತತ ಅಭ್ಯಾಸವಿಲ್ಲದೆ ಯಶಸ್ವಿಯಾಗಲಾರದು. ಹಾಗೆಯೇ ಈ ಮಾತನ್ನು ಕೂಡಾ ಗಮನಿಸಬೇಕು ನಮ್ಮೆಲ್ಲರಿಗೂ ಇಂದು ಬೇಕಾಗಿರುವುದು, ಸೋಲುಗಳಿಲ್ಲದ ಸಾಧನೆ ಆದರೆ ಪ್ರಯತ್ನ ಮಾತ್ರ ಕಡಿಮೆಯೇ ಹೀಗಾಗಿ ಅದು ಅಸಾಧ್ಯ ಎಂದು ಗೊತ್ತಿದ್ದರೂ,ನಾವು ನಮಗೆ ಬಂದ ಸೋಲನ್ನು ಇಷ್ಟಪಡುವುದಿಲ್ಲವೇಕೇ? ಆದರೆ ನನ್ನ ಈ ಪುಟ್ಟ ಜೀವನದಲ್ಲಿ ಅನುಭವಕ್ಕೆ ಬಂದಿರುವ ಪ್ರಕಾರ ಸೋಲುಗಳು ಸಮಸ್ಯೆಗಳು ಮಾರುವೇಷದಲ್ಲಿ ಬಂದು ನಿಲ್ಲುವ ಸುವರ್ಣ ಅವಕಾಶಗಳು ಎನಿಸುತ್ತದೆ.
ಆದರೆ ನೆನಪಿರಲಿ ಸೋಲುಗಳನ್ನು ಸಮಸ್ಯೆಗಳನ್ನು ಅವಕಾಶ ಎಂದು ನೋಡಿದವರು ಇಂದು ಜಗತ್ತಿನಲ್ಲಿ ಸಾಧಕರಾಗಿದ್ದಾರೆ,ಯಶಸ್ವಿ ವ್ಯಕ್ತಿಗಳಾಗಿದ್ದಾರೆ. ಸೋಲುಗಳನ್ನು ಶಪಿಸುತ್ತಲೇ ಕುಳಿತರೆ ಸಾಧನೆಗೆ ಸಮಾಧಿ ಸೃಷ್ಟಿಸಿದಂತಾಗುತ್ತದೆ. ಅದರ ಬದಲಾಗಿ ಸೋಲುಗಳನ್ನು ಪ್ರೀತಿಸಿ ಅದಕ್ಕೆ ಕಾರಣ ಗುರುತಿಸಿ ಮತ್ತೆ ಸಾಧನೆಗೆ ಸಿದ್ಧವಾದರೆ ಅದಕ್ಕಿಂತ ಮಿಗಿಲಾದ ಸಾಧನೆ ಸಂತೋಷ ಸಾಧಕನಿಗೆ ಬೇರೊಂದಿಲ್ಲ. ನಮ್ಮೆಲ್ಲರಲ್ಲೂ ಅಪಾರವಾದ ಸಾಮರ್ಥ್ಯ ಅಡಗಿದೆ ಎಂಬ ಮಾತನ್ನು ಬಹಳ ಹಿಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ.ಈ ಸಾಮರ್ಥ್ಯದ ಬಲದಿಂದ ನಮಗೇನು ಬೇಕೋ ಅದನ್ನು ಸಾಧಿಸಲು ಸಾಧ್ಯ. ಬದುಕಿನಲ್ಲಿ ಯಾವುದೋ ಒಂದು ಸೋಲು ಸಮಸ್ಯೆ ನಮ್ಮನ್ನ ಕಾಡುತ್ತಿದ್ದರೆ, ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದವರಂತೆ ಕೂಡುವ ಅಗತ್ಯವೇ ಇಲ್ಲ.ಕಾರಣ ಅದೊಂದು ವೇಷಮರೆಸಿಕೊಂಡು ಬಂದಂತಹ ಸುವರ್ಣಾವಕಾಶ ಎಂದುಕೊಳ್ಳಬೇಕಷ್ಟೇ.. ನಿಜ ಅದೊಂದು ಸಮಸ್ಯೆ ಎಂದು ಆರಂಭದಲ್ಲಿ ಎನಿಸಿಕೊಳ್ಳುತ್ತದೆ ಅನಿಸುತ್ತದೆ ನಿಜ.ಆ ಸಮಯಕ್ಕೆ ಬಂದ ಇದೊಂದು ಅನಿವಾರ್ಯ ಸ್ಥಿತಿ ಎಂದುಕೊಂಡು ಮರೆತು ಬಿಡಬೇಕು. ಬದುಕಿನಲ್ಲಿ ಸೋಲುಗಳೇ ಇಲ್ಲದೆ ಹೋದರೆ ಸಾಧನೆಗೆ ಬೆಲೆ ಇರುವುದಿಲ್ಲವಲ್ಲ. ಬದುಕಿಗೆ ಅರ್ಥವೇ ಇರುವುದಿಲ್ಲ ಎಂಬುವುದನ್ನು ಗಮನಿಸಬೇಕು.
ಬದುಕಿನಲ್ಲಿ ಸೋಲಿನ ಭಯ ಯಾವತ್ತೂ ಬೇಡ ಒಂದು ವೇಳೆ ನಿಮಗೆ ಆ ಭಯವಿದ್ದರೆ ಸೋಲಿಗೆ ಒಂದು ಮಾತನ್ನು ಹೇಳಿಬಿಡಿ “ನನ್ನ ಹಿಂದೆ ನಡೆಯಬೇಡ ನಾನು ನಿನ್ನನ್ನು ಮುನ್ನಡೆಸದಿರಬಹುದು, ಹಾಗೆ ನನ್ನ ಮುಂದೆ ನಡೆಯಬೇಡ ನಾನು ನಿನ್ನನ್ನು ಹಿಂಬಾಲಿಸದೆ ಇರಬಹುದು ನನ್ನ ಜೊತೆಯಲ್ಲಿಯೇ ನಡೆ ಮತ್ತು ನನ್ನ ಸ್ನೇಹಿತನಾಗು ಸಾಧನೆಗೆ ಸಾಕ್ಷಿಯಾಗು” ಆಗಲಾದರೂ ಸೋಲು ನಿಮ್ಮ ಸ್ನೇಹಿತನೇಂಬ ಬಲವಾದ ನಂಬಿಕೆ ಬರಬಹುದು ನಿಮಗೆ.ಅದರಿಂದಾಗಿಯಾದರು ನಿಮ್ಮ ಸತತ ಸಾಧನೆ ಸಾಗಬಲ್ಲದು ಅಲ್ವೇ….!
ಈ ಲೇಖನ ಬರೆಯಲು ಕಾರಣವೊಂದಿದೆ ಇತ್ತೀಚಿಗೆ ನಡೆದ ಕೆಲವು ಪರೀಕ್ಷೆಗಳಲ್ಲಿ ಗೆಲುವಿನ ದಡದಿಂದ ದೂರ ಉಳಿದ ಸ್ನೇಹಿತನೊಬ್ಬ ಕರೆ ಮಾಡಿ ಸೋಲು ತಂದ ಸಂಕಷ್ಟಗಳ ಬಗೆಗೆ ಸಂವಾದ ನಡೆಸಿಯೇ ಬಿಟ್ಟ ನಮ್ಮಿಬ್ಬರ ಮಾತುಗಳು ಮುಂದುವರೆದು ಕೊನೆಗೆ ಮೌನ ಆವರಿಸಿಬಿಟ್ಟಿತ್ತು. ತದನಂತರ ಏಕಾಂಗಿಯಾಗಿ ಮೌನ ತಾಳಿದ ನನ್ನ ಮನಸ್ಸು ಸೋತು ಸಾಧನೆಗೈದ ಸಾಧಕರತ್ತ ಚಿತ್ತ ಹರಿಸಿ ಸಾಧನೆಗೆ ಪ್ರತಿ ಸೋಲು ಕೂಡ ಸಾಕ್ಷಿ ಆಗಬಲ್ಲದು ಎಂಬ ಬರಹಕ್ಕೆ ಮುನ್ನುಡಿ ಹಾಡಿತ್ತು ಅದರದೇ ಆದ ಒಂದು ಪುಟ್ಟ ಸಂದೇಶವನ್ನು ನಿಮಗೆ ತಲುಪಿಸುವ ಹಂಬಲದಿಂದ ಇದನ್ನು ಅಕ್ಷರ ಪುಟಕ್ಕೆ ಆಹ್ವಾನ ನೀಡಿ ಬಿಟ್ಟೆ.ಕೊನೆಯಲ್ಲಿ ಹೇಳುವುದು ಇಷ್ಟೇ “ನಿನ್ನನ್ನು ನೀನು ನಂಬದೆ ಹೋದರೆ ಮುಕ್ಕೋಟಿ ದೇವತೆಗಳನ್ನು ನಂಬಿದರು ಪ್ರಯೋಜನವಿಲ್ಲ”.ಹಾಗಾಗಿ ನಿಮ್ಮ ಪ್ರಯತ್ನದ ಮೇಲೆ ನಂಬಿಕೆ ಇರಲಿ ಪ್ರತಿ ನಿಮ್ಮ ಸೋಲು ಕೂಡ ಹೊಸದೊಂದು ಸಾಧನೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.ಹಾಗೆಯೇ ಸೋತು ಸಾಧಿಸುವ, ಸಾಧಿಸಿದ ಸಾಧನೆಗೆ ಸಿದ್ಧವಾದ ಹೃದಯಗಳಿಗೆ, ಮನಸ್ಸುಗಳಿಗೆ ನನದಿಷ್ಟು ಸಲಾಂ ಇದಕ್ಕೆ ನೀವೇನಂತೀರಿ ಅನುಭವಕ್ಕೋಂದಿಷ್ಟು ನೆನಪುಗಳು ಇರಲಿ ಅದು ನಮಗೂ ನಿಮಗೂ ಬದುಕಿಗೆ ಬೆಳಕು ನೀಡುವಂತಿರಲಿ ಮತ್ತೆ ಭೇಟಿಯಾಗೋಣ…….
ಸಂಗಮೇಶ.ಹತ್ತರಕಿಹಾಳ
ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಮಣ್ಣ ಮಕ್ಕಳು
- ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.
ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.
ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು
ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.
ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.
- ಬಸವರಾಜ ಹೂಗಾರ
ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.
ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.
- ಡಾ.ರಹಮತ್ ತರೀಕೆರೆ
ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.
- ಬಿ.ಶ್ರೀನಿವಾಸ,ಕೃತಿ ಲೇಖಕ
ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.
ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.
“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.
ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.
ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.
ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ
- ಡಾ.ರಾಮಚಂದ್ರ ಹಂಸನೂರು, ಬೆಟಗೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು