ಅಂತರಂಗ
ಒಡಲುಗೊಂಡವ ಹುಸಿಯ: ಜಿ. ರಾಜಶೇಖರ
- ಎಚ್ ಪಟ್ಟಾಭಿರಾಮ ಸೋಮಯಾಜಿ, ಮಂಗಳೂರು
Beneath those rugged elms, that yew tree’s shade,
Where heaves the turf in many a moldering heap,
Each in his narrow cell forever laid,
The rude forefathers of the hamlet sleep.
…
Oft did the harvest to their sickle yield,
Their furrow oft the stubborn glebe has broke;
How jocund did they drive their team afield!
How bowed the woods beneath their sturdy stroke!
Let not Ambition mock their useful toil,
Their homely joys, and destiny obscure;
Nor Grandeur hear with a disdainful smile
The short and simple annals of the poor.
The boast of heraldry, the pomp of power,
And all that beauty, all that wealth e’er gave,
Awaits alike the inevitable hour.
The paths of glory lead but to the grave….
Full many a gem of purest ray serene,
The dark unfathomed caves of ocean bear:
Full many a flower is born to blush unseen,
And waste its sweetness on the desert air.
Yet even these bones from insult to protect
Some frail memorial erected nigh,
With uncouth rhymes and shapeless sculpture decked,
Implores the passing tribute of a sigh.
-(Thomas Gray: “Elegy Written in a Country Churchyard”; 1754/1751)
” ಬೋಳಿಮಗನೆ, ಬಹುವಚನ ಅಂತೆ ಬಹುವಚನ. ಏಕವಚನ ಮಾಡ್ತೇವೆ ನೋಡ್ತಾ ಇರು, ಸೂಳೆಮಗನೆ. ಇದು ಮಡಿಕೇರಿ, ತಿಳ್ಕೊ” ಎಂದು ವಿಕಾರವಾಗಿ ಕಿರುಚುತ್ತಾ ಸುಮಾರು ಮೂವತ್ತರಿಂದ ನಲವತ್ತರಷ್ಟು ಜನ ಸ್ಟೇಜಿಗೆ ನುಗ್ಗಿ ಕೈಯಲ್ಲಿದ್ದ ಟಿಪ್ಪಣಿ ಕಾಗದಗಳ ಕಟ್ಟನ್ನು ಬಲಾತ್ಕಾರದಿಂದ ಕಸಿದು ಹರಿದು ಬಿಸಾಡಿ, ಮೈಕನ್ನು ಕಿತ್ತು, ಕಾಲರನ್ನು ಹಿಡಿದು ಎಳೆದಾಡಿ ನನ್ನ ಮೇಲೆ ಏಕಾಏಕಿ ನುಗ್ಗಿದರು. ವಿವರವಾದ ಸುದೀರ್ಘ ಟಿಪ್ಪಣಿಗಳ ಆ ಕಾಗದದ ಕಟ್ಟಿನಲ್ಲಿ ಆ ಕಾಲದ ನನ್ನ ಯೋಚನೆಗಳನ್ನು ಭಟ್ಟಿಯಿಳಿಸುವ ಪ್ರಯತ್ನವಿತ್ತು; ಮಹಾತ್ಮಾ ಗಾಂಧಿ, ಮಾರ್ಟಿನ್ ಹೈಡೆಗರ್, ಸಾದತ್ ಹಸನ್ ಮಾಂಟೋ, ರಾಮಕೃಷ್ಣ ಪರಮಹಂಸ ಮುಂತಾದವರಿಂದ ನಾನು ತಯಾರಿಸಿಕೊಂಡ ಟಿಪ್ಪಣಿಗಳೂ ತರ್ಜುಮೆಗಳೂ ಅದರಲ್ಲಿ ಸೇರಿದ್ದವು; ಅದನ್ನು ಕಳೆದುಕೊಂಡ ನೋವು ಈಗಲೂ ನನ್ನನ್ನು ಮಾಯದ ಹಳೆಯ ಗಾಯದಂತೆ ಬಾಧಿಸುವುದು.
ಇದು ಈಗ ಇಪ್ಪತ್ತು ವರ್ಷಗಳ ಹಿಂದಿನ ಮಾತು. ಸ್ಥಳ, ಮಡಿಕೇರಿಯ ಕೋಟೆಯ (ಕೋಟೆ ಎಂದರೆ ನಿಜಕ್ಕೂ ಕೋಟೆಯೇ) ಆವರಣದೊಳಗಿರುವ ಜಿಲ್ಲಾಧಿಕಾರಿ ಕಛೇರಿಯ ಸೆನೆಟ್ ಸಭಾಂಗಣ. ಅಂದು ಭಾನುವಾರ. “ಬಹುವಚನ ಕೊಡಗು” ಎಂಬ ಹೆಸರಿನ ನಮ್ಮ ಪುಟ್ಟ ಬಳಗದಿಂದ ಆಯೋಜಿತವಾಗಿದ್ದ ಮಹತ್ವಾಕಾಂಕ್ಷೆಯ ಇಡೀ ಒಂದು ದಿನದ ನಿಬಿಡ ವಿಚಾರ ಸಂಕಿರಣ. “ಕೋಮುವಾದದ ಕರಾಳ ಮುಖಗಳು” ಎಂಬ ಶೀರ್ಷಿಕೆಯಲ್ಲಿ ನಡೆಯಬೇಕಾಗಿದ್ದ ಈ ಸಂಕಿರಣದ ಶೀರ್ಷಿಕೆಯ ಕುರಿತು ಆರಂಭದಲ್ಲೇ, ನಮ್ಮ ಪುಟ್ಟ ಬಳಗದ ಒಳಗೆಯೇ, ಒಬ್ಬರಿಂದ ಎದ್ದ ಅಪಸ್ವರದ ಕಾರಣದಿಂದಾಗಿ “ಕೋಮುವಾದದ ಹಲವು ಅವತಾರಗಳು” ಎಂದು ಮರುನಾಮಕರಣಗೊಂಡಿತ್ತು; ಆ ಕುರಿತು ನನಗೆ ಅಷ್ಟೇನೂ ಸಮಾಧಾನವಿರಲಿಲ್ಲ ಎಂಬುದು ಬೇರೆ ಮಾತು. ಜಿ ರಾಜಶೇಖರ, ರಹಮತ್ ತರೀಕೆರೆ ಮುಂತಾಗಿ ರಾಜ್ಯದ ಮುಂಚೂಣಿ ಚಿಂತಕ-ಹೋರಾಟಗಾರರು ನಮ್ಮ ಸಂಪನ್ಮೂಲ ವ್ಯಕ್ತಿಗಳು. ಹಾಗಾಗಿ, ಸಹಜವಾಗಿಯೇ ಈ ವಿಚಾರ ಸಂಕಿರಣಕ್ಕೆ ಬಹಳ ದೊಡ್ಡ ಸಂಖ್ಯೆಯ ಜನರು ಹಾಜರಾಗುವವರಿದ್ದರು. ಸಂಪನ್ಮೂಲ ವ್ಯಕ್ತಿಗಳು ಬಂದು ಅದಾಗಲೇ ಸಭಾಂಗಣದ ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಮಡಿಕೇರಿ ಮತ್ತು ಸುತ್ತಮುತ್ತಲಿನ ಪತ್ರಕರ್ತ ಬಳಗ ಕೂಡಾ ಅದಾಗಲೇ ಹಾಜರಿತ್ತು.
ಸಭಿಕರು ಕೇವಲ ಬೆರಳೆಣಿಕೆಯಷ್ಟಿದ್ದರು; ಅವರಿನ್ನೂ ಬರುವುದರಲ್ಲಿದ್ದರು (ದೊಡ್ಡ ಸಂಖ್ಯೆಯಲ್ಲಿ ಆ ಮೇಲೆ ಬಂದರು ಕೂಡಾ). ಆದರೆ ಸಂಕಿರಣದ ಸುದೀರ್ಘ ಚರ್ಚೆಯು ಒತ್ತಡಕ್ಕೊಳಗಾಗಬಾರದು, ಹಾಗಾಗಿ ಸಮಯ ವ್ಯರ್ಥಮಾಡಬಾರದು ಎಂದು, “ಬಹುವಚನ ಕೊಡಗು” ಕುರಿತು, ದಿನದ ಕಾರ್ಯಕ್ರಮದ ಸ್ವರೂಪದ ಕುರಿತು, ಹಾಗೂ ಮುಖ್ಯವಾಗಿ ವಿಚಾರ ಸಂಕಿರಣದ ಆಶಯದ ಕುರಿತು– ಹತ್ತು ಗಂಟೆಗೆ ಸರಿಯಾಗಿ ನಾನು ವೇದಿಕೆಯಿಂದ ಮಾತನಾಡಲು ಪ್ರಾರಂಭ ಮಾಡಿದೆ. ಆಗ ಇದ್ದಕಿದ್ದಂತೆ ಸಾಲು ಸಾಲಾಗಿ ಆ ಮೂವತ್ತು ನಲವತ್ತರಷ್ಟು ಧಾಂಡಿಗರು ಸಭಾಂಗಣದೊಳಕ್ಕೆ ಲಗುಬಗೆಯಿಂದ ಬಂದರು. ಅವರ ವರ್ತನೆ ಹಾವಭಾವಗಳಾಗಲೀ ವೇಷಭೂಷಣಗಳಾಗಲೀ ಉತ್ತೇಜನಕಾರಿಯಾಗಿ ಕಂಡುಬರದಿದ್ದರೂ ಬಂದವರು ಕುಳಿತುಕೊಳ್ಳಲಿ ಎಂದು ಮಾತುಗಳನ್ನು ಅರ್ಧಕ್ಕೇ ನಿಲ್ಲಿಸಿ ನಾನು ಕಾದೆ. ಅವರು ಕೆಂಡದ ಮೇಲೆ ಕೂತವರಂತೆ ಕುರ್ಚಿಗಳಲ್ಲಿ ಕೂತರು. “ಬಹುವಚನ ಕೊಡಗು…” ಎಂದು ನಾನು ಮಾತುಗಳನ್ನು ಪುನರಾರಂಭಿಸುತ್ತಿದ್ದಂತೆ, ಅಷ್ಟೂ ಜನ ಏಕಾಏಕಿಯಾಗಿ ರಭಸದಿಂದ ನನ್ನ ಮೇಲೆ ನುಗ್ಗಿ ಬಂದರು.
ಆ ಕಾಲಕ್ಕೆ ಆ ರೀತಿ ಸಭೆಗಳಿಗೆ ಅನಾಗರಿಕವಾಗಿ ನುಗ್ಗಿ ನಿರ್ಲಜ್ಜವಾಗಿ ದಾಳಿ ಮಾಡುವುದು ಈಗಿನಷ್ಟು ವ್ಯಾಪಕವಾಗಲೀ, ಸಹಜವಾಗಲೀ, ಸುಲಭವಾಗಲೀ ಆಗಿರಲಿಲ್ಲ. ನಮ್ಮಂತೆ ಆ ಪುಂಡರಿಗೂ ಅದು ಹೊಸತೇ ಅನುಭವ. ನಮ್ಮ ಬಹುವಚನದ ಪುಟ್ಟ ಬಳಗದವರಿಗಂತೂ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಈ ಅನಾಹುತ ಶುರುವಾಗಿತ್ತು. ಇದ್ದಬದ್ದ ವಿವೇಕವನ್ನು ಒಗ್ಗೂಡಿಸಿಕೊಂಡು, ಸಂಪನ್ಮೂಲ ವ್ಯಕ್ತಿಗಳ ಸುರಕ್ಷತೆಯೇ ತಮ್ಮ ತುರ್ತು ಆದ್ಯ ಕರ್ತವ್ಯವೆಂದು ಬಗೆದು ಸಂಪನ್ಮೂಲ ವ್ಯಕ್ತಿಗಳನ್ನು ಕ್ಷಿಪ್ರವಾಗಿ ಕರೆದುಕೊಂಡು ಅವರು ಕೋಟೆಯ ಆಚೆಗೆ ಹೊರಟುಹೋದರು. ಪತ್ರಕರ್ತರಿಗೆ ಈ ದಾಂಧಲೆಕೋರರ ಗುರುತು ಹತ್ತಿತು; ಸಂಭಾವ್ಯ ಘಟನಾವಳಿಗಳನ್ನು ಅವರು ಕ್ಷಣಮಾತ್ರದಲ್ಲಿ ಊಹಿಸಿ, ಅದನ್ನು ವರದಿ ಮಾಡಲೆಂದು ಅವರೂ ಎದ್ದು ಹೊರಟು ಹೋದರು. ಆಗಲೇ ಹೇಳಿದಂತೆ, ಸಭಿಕರು ಇನ್ನೂ ಅಷ್ಟಾಗಿ ಬಂದಿರಲಿಲ್ಲ, ಬಂದಿದ್ದವರೂ ಕಂಗಾಲಾಗಿ ದಿಕ್ಕಾಪಾಲಾಗಿ ಚದುರಿ ಹೋದರು; ಕೋಟೆಯ ಹೊರಬಾಗಿಲ ಬಳಿ ನಿಂತುಕೊಂಡು ನಮ್ಮ ಬಳಗದವರೊಬ್ಬರು ಸಂಕಿರಣಕ್ಕಾಗಿ ಒಳಗೆ ಬರುತ್ತಿದ್ದ ಜನರನ್ನು ತಡೆದು, “ಒಳಗೆ ದಾಂಧಲೆ ನಡೆಯುತ್ತಿದೆ, ಹೋಗಬೇಡಿ, ಸುರಕ್ಷಿತವಲ್ಲ” ಎಂದು ಹಿಂದೆ ಕಳುಹಿಸುತ್ತಿದ್ದರು. ಸರಿ ಸುಮಾರು ಮೂವತ್ತರಿಂದ ನಲವತ್ತು ನಿಮಿಷ ಒಳಾಂಗಣ-ಸಭಾಂಗಣ ರಣಾಂಗಣವಾಗಿ ಮಾರ್ಪಟ್ಟಿತ್ತು. ನಾನು ಒಬ್ಬಂಟಿ, ಆದರೆ ವಿಚಲಿತನಾಗಿರಲಿಲ್ಲ.
ಮಡಿಕೇರಿಯಲ್ಲಿ ಆಗ ‘ಪ್ರಜಾವಾಣಿ’ ಪತ್ರಿಕೆಯ ಮುಖ್ಯ ವರದಿಗಾರರಾಗಿದ್ದ, ಆರಡಿಗಿಂತ ಎತ್ತರದ ಆಜಾನುಬಾಹು ರಾಜೇಂದ್ರಪ್ರಸಾದ್ ರವರು, ಯಾರೂ ನನ್ನ ಮೈ ಮುಟ್ಟದಂತೆ ಧೀರೋದಾತ್ತವಾಗಿ ನನ್ನ ರಕ್ಷಣೆಗೆ ನಿಂತರು; ಅವರ ಪತ್ರಿಕಾ ವೃತ್ತಿ ವರ್ಚಸ್ವಿಯಾದುದಾಗಿತ್ತು; ಅಲ್ಲದೇ ದಿನಂಪ್ರತಿ ಎದುರು ಸಿಗುವ ಇಂಥ ಪ್ರಮುಖ ಪತ್ರಕರ್ತರೊಬ್ಬರನ್ನು ಕಡೆಗಣಿಸಿ ನನ್ನ ಮೇಲೆ ದೈಹಿಕ ಹಲ್ಲೆ ಮಾಡುವಷ್ಟು ಭಂಡ ಧೈರ್ಯವಾಗಲೀ ತರಬೇತಿಯಾಗಲೀ ಅಯಾಚಿತ ಸಾರ್ವಜನಿಕ ಬೆಂಬಲವಾಗಲೀ ಆ ಪುಂಡರಿಗೆ ಇರಲಿಲ್ಲ. ನಮ್ಮ ಮಾಧ್ಯಮಲೋಕದಲ್ಲಿ ರಾಜೇಂದ್ರಪ್ರಸಾದರಂಥ ವಿವೇಕಿಗಳಿದ್ದರೆ ಹೇಗೆ ಸಾಮಾಜಿಕ ದುಸ್ಥಿತಿ ಮತ್ತು ಅರಾಜಕತೆಗಳನ್ನು ಸ್ವಲ್ಪಕಾಲವಾದರೂ ತಹಬಂದಿಗೆ ತರಬಹುದು ಎಂಬುದು ಒಂದು ವಿರಳ ರೂಪಕದಂತೆ, ಈ ಘಟನೆಯಿಂದಾಗಿ, ನನ್ನ ಮನಸ್ಸಿನಲ್ಲಿ ಇವತ್ತಿಗೂ ನಾಟಿದೆ.ಇಷ್ಟೂ ಹೊತ್ತು, ಈ ದಾಂಧಲೆಕೋರ ಹುಳಪಾರ್ಟಿಗಳು ನನ್ನನ್ನು ಜಿ ರಾಜಶೇಖರ ಎಂದೇ ತಿಳಿದಿದ್ದರು.
ದಾಂಧಲೆ ಮಾಡುತ್ತಿರುವವರು ಯಾರು, ದಾಂಧಲೆಗೆ ಒಳಗಾಗುತ್ತಿರುವವರು ಯಾರು, ಯಾಕೆ? ಇದನ್ನು ತಡೆಯಬಲ್ಲವರು ಯಾರು, ಹೇಗೆ? ಎಂಬ ಗೆರೆಗಳೆಲ್ಲ ತೆಳುವಾಗುತ್ತ ಅಳಿಸಿಹೋಗಿ ಕಲಸುಮೇಲೋಗರವಾಗಿರುವ ದುರಂತಕ್ಕೆ ಈಗಂತೂ ನಾವೆಲ್ಲರೂ ಅಸಹಾಯಕ ಸಾಕ್ಷಿಗಳು. ಅದೇನಿದ್ದರೂ, ಕರಾವಳಿ ಕರ್ನಾಟಕದಲ್ಲಿ ಆಗಷ್ಟೇ ಉಲ್ಬಣಕ್ಕೆ ಬರುತ್ತಿದ್ದ ಹಿಂದೂತ್ವವಾದೀ ಹಿಂಸಾಚಾರವನ್ನು ಕ್ಲಿನಿಕಲ್ ಅಚ್ಚುಕಟ್ಟುತನದಿಂದ, ಇಲ್ಲಿನ ಕ್ರೂರ ಸತ್ಯವನ್ನು ಮುಕ್ಕಾಗದಂತೆ ವರದಿ ಮಾಡಿ ಆಗ ತಿಳಿಸುತ್ತಿದ್ದ ಏಕಮಾತ್ರ ವ್ಯಕ್ತಿ ಜಿ ರಾಜಶೇಖರ. ಕೋರೈಸುವ ಸತ್ಯ ಮತ್ತು ತರ್ಕಶುದ್ಧತೆಗಳ ಕಾರಣದಿಂದಾಗಿಯೇ ಅವರ ವರದಿಗಳು, ಹುಟ್ಟಾ ಅಜ್ಞಾನಿಗಳಾದ ಹಿಂದೂತ್ವವಾದಿಗಳಿಗೂ ಅಷ್ಟರಮಟ್ಟಿಗೆ ಅರ್ಥವಾಗುವಂತಿತ್ತು. ಆ ಕಾಲದ ವಿಷಯ ಸದ್ಯ ಒತ್ತಟ್ಟಿಗಿರಲಿ, ಕರಾವಳಿ ಕರ್ನಾಟಕದಲ್ಲಿ ಈಗ ಮೂರು ದಶಕಗಳಿಂದ ಹಗಲೂರಾತ್ರಿ ನಡೆಯುತ್ತಿರುವ ಹಿಂದೂತ್ವವಾದೀ ಬರ್ಬರ ಹಿಂಸಾಚಾರದ ಕುರಿತು ನಾನೋ ನೀವೋ ಆಡುವ ಮಾತುಗಳನ್ನು ಕರ್ನಾಟಕದ ಉಳಿದ ಕಡೆಯ ಜನರು, “ಇವರದ್ದೊಂದು ಉತ್ಪ್ರೇಕ್ಷಿತ ಕಟ್ಟುಕತೆ; ಕರ್ನಾಟಕವು ಲಾಗಾಯ್ತಿನಿಂದಲೂ ಸರ್ವಜನಾಂಗದ ಶಾಂತಿಯ ತೋಟ” ಎಂಬ ದೃಢ ನಂಬಿಕೆಯಲ್ಲೇ ಇತ್ತೀಚಿನವರೆಗೂ ವ್ಯವಹರಿಸುತ್ತ ಬಂದದ್ದಿದೆ. ಆ ಉದಾಸಿನಕ್ಕೆ ಮದ್ದಿಲ್ಲ. ಇದನ್ನು ನೆನೆದರೆ ಜಿ ರಾಜಶೇಖರ ಏಕಾಂಗಿಯಾಗಿ ನಡೆಸುತ್ತ ಬಂದ ಹೋರಾಟ ಇಮ್ಮಖವಾದುದು ಎಂಬುದೂ ತಿಳಿದೀತು: ಎದುರಾಳಿಗಳೂ, ಸಹಚರರೂ– ಇಬ್ಬಣಗಳೂ– ಅವರಿಗೆ ಎಡೆಬಿಡದ ಗಮನಕೇಂದ್ರಗಳು.
1998ರಲ್ಲಿ ಮಡಿಕೇರಿಯಲ್ಲಿ ನಾನು ಕೆಲಸಕ್ಕೆ ಸೇರಿದ ಹೊಸದರಲ್ಲಿ ಸುರತ್ಕಲ್ ನಲ್ಲಿ ನಡೆದ ಹಿಂದೂತ್ವವಾದೀ ಭೀಕರ ಹಿಂಸಾಚಾರದಿಂದಾಗಿ ನನಗೆ ಜಿ ರಾಜಶೇಖರರ ನಿಕಟ ಸಂಪರ್ಕ ಬೇಕೆನ್ನಿಸಿತು, ಉಂಟಾಯಿತು. ಆ ಕಾಲದಲ್ಲಿ ಅತ್ಯಂತ ಪ್ರಭಾವಶಾಲಿ ರಾಷ್ಟ್ರೀಯ ನಾಯಕಿಯಾಗಿದ್ದ ಶ್ರೀಮತಿ ಸೋನಿಯಾ ಗಾಂಧಿಯವರೇ ಸ್ವತಃ ಸುರತ್ಕಲ್ ಗೆ ಭೇಟಿಕೊಡಬೇಕಾಗಿ ಬರುವಷ್ಟು ಆ ಹಿಂಸಾಚಾರ ಢಾಳಾಗಿತ್ತು, ಕ್ರೂರವಾಗಿತ್ತು, ದೇಶದ ಗಮನ ಸೆಳೆದಿತ್ತು. ಗೊತ್ತಿರುವವರಿಗೆ ಗೊತ್ತಿರುವಂತೆ, ಈ ಹಿಂದೂತ್ವವಾದೀ ಭೀಕರ ಹಿಂಸಾಚಾರವನ್ನು “ಸುರತ್ಕಲ್ ಗಲಭೆ” ಎಂಬ ರಂಗಿನ ರಂಗೋಲಿಯ ಕೆಳಗೆ ಅಡಗಿಸುವ ಹೊಸ ಭಾಷೆ, ವ್ಯಾಪಕ ವ್ಯಾಕರಣ ಮತ್ತು ಮೀಮಾಂಸೆ ಹುರಿಗಟ್ಟುತ್ತಿದ್ದ ಕಾಲ ಅದು. ಇಲ್ಲಿ ನಡೆದಿರುವುದು ಸಾಂದರ್ಭಿಕ ಕೋಮು ಗಲಭೆಯಲ್ಲ, ಇವತ್ತು ಕಂಡು ನಾಳೆ ಮರೆಯಾಗುವ ಕ್ಷಣಿಕ ಅಪಭ್ರಂಶವಲ್ಲ, ಎರಡೂ ಕಡೆಯವರು ಸೇರಿ ನಡೆಸಿದ ಜೋಡಾಟವೋ ಜುಗಲ್ಬಂದಿಯೋ ಅಲ್ಲ; ಬದಲಾಗಿ, ವ್ಯವಸ್ಥಿತವಾದ, ವ್ಯಾಪಕವಾದ ಹಿಂದೂತ್ವವಾದೀ ದುಷ್ಟಕೂಟದ ಪ್ರಯೋಗವಾಗಿರುವ ಕ್ರೌರ್ಯ ಮತ್ತು ವಿಷ ಎಂದು ಸಾಧಾರವಾಗಿ, ನಿಖರವಾಗಿ, ವಿವರವಾಗಿ ದಾಖಲಿಸಿದವರು ಜಿ ರಾಜಶೇಖರ. ಹಾವನ್ನು ಹಗ್ಗ ಎಂದು ಅವರು ಎಂದೂ ಹೇಳಲಿಲ್ಲ: He had called the spade, the spade. ಎರಡಕ್ಕೆ ಎರಡು ಕೂಡಿಸಿದರೆ ನಾಲ್ಕು, ಎಂಬ ಸರಳಸತ್ಯವನ್ನು ಹೇಳುವುದು ಕೂಡಾ ಒಂದು ದಿಟ್ಟತನವೂ ಹೌದು, ಕಲೆಯೂ ಹೌದು.
ನಾನೊಬ್ಬ ಸಾಹಿತ್ಯದ ಅಧ್ಯಾಪಕ ಹಾಗೂ ವಿದ್ಯಾರ್ಥಿ. ವಿದ್ಯಾರ್ಥಿಯಾಗಿರುವಾಗಲೇ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ್ದ, ಈಗಲೂ ಸ್ಫೂರ್ತಿದಾಯಕವಾಗಿ ಉಳಿದುಬಂದಿರುವ ಬರಹಗಳಲ್ಲಿ ಬಹುಮುಖ್ಯವಾದ ಒಂದು ಕೃತಿ ಆಲ್ಬರ್ಟ್ ಕಮೂ ಬರೆದ “ದಿ ಔಟ್ ಸೈಡರ್” (1942). ಭಾಷೆ ಎಂಬುದು ಬರಿಯ ಪದವೋ ಪದಾರ್ಥವೋ ಅಲ್ಲ, ಎದುರು ಹರಡಿರುವ ವಸ್ತುಗಳಿಗೆ ಅಚ್ಚುಕಟ್ಟಾಗಿ ಮಾಡಿರುವ ನಾಮಕರಣವೂ ಅಲ್ಲ, ಅದು ಗರಗಸದಂತೆ ಹೋಗುತ್ತ ಕುಯ್ವುದು ಬರುತ್ತ ಕುಯ್ವುದು; ಭಾಷೆ ಎಂಬುದು, ಪ್ರಭುತ್ವವು ಹಲವು ಹೊಂಚುಗಳಲ್ಲಿ ಸ್ಥಿತಗೊಂಡಿರುವ, ಪ್ರಕಟಗೊಳ್ಳುವ, ಸ್ಥಿರೀಕರಣಗೊಳ್ಳುವ, ಬಗೆಬಗೆಯಾಗಿ ಪುನರಾವರ್ತನೆಗೊಳ್ಳುವ, ಏನನ್ನು ಬೇಕಾದರೂ ಲೋಕಜ್ಞಾನವೆಂಬಂತೆ– ಉಸಿರಾಡುವ ಗಾಳಿ, ನೋಟ ಒದಗಿಸುವ ಬೆಳಕಿನಂತೆ– ಸಹಜವಾದದ್ದು ಎಂದು ಯಶಸ್ವಿಯಾಗಿ ನಂಬಿಸಬಲ್ಲ ವ್ಯಾಪಕವಾದ ಜಾಲ. ಸ್ಥೂಲವಾಗಿ ಹೇಳುವುದಾದರೆ, ಇದು ಆ ಕೃತಿಯಲ್ಲಿ ಕಾಣುವ ಹೊಳಹು. ಇದು, ಯೂರೊಪ್ ಕಂಡ ಮಹಾಯುದ್ಧಗಳು ಹಾಗೂ ಫ್ಯಾಶಿಸ್ಮ್ ನ ವಿಕರಾಳ ಕ್ರೌರ್ಯಗಳ ಮೂಸೆಯಲ್ಲಿ ತಯಾರಾದ ಹೊಸ ತಿಳುವಳಿಕೆಯಾಗಿತ್ತು. ಕಮೂ ತನ್ನ ಈ ಕಾದಂಬರಿಯಲ್ಲಿ ನಮ್ಮ ದಿನನಿತ್ಯದ, ಸರ್ವಸಾಮಾನ್ಯವೆಂಬಂತೆ ಕಾಣುವ, ಭಾಷೆಯನ್ನು ಹಾಗೂ ವಿದ್ಯಮಾನಗಳನ್ನು ಸಂಪೂರ್ಣ ಬೆತ್ತಲೆಗೊಳಿಸಿ ನಿರ್ಭಾವುಕವಾಗಿ ಅದರ ಹುನ್ನಾರಗಳನ್ನು ಜಗಜ್ಜಾಹೀರು ಮಾಡಿದವನು.
ಮಡಿಕೇರಿಯಲ್ಲಿ ಕೆಲಸಕ್ಕೆ ಸೇರಿದ್ದ ಹೊಸತರಲ್ಲಿ, ಸುರತ್ಕಲ್ ನ ಹಿಂದೂತ್ವವಾದೀ ಹಿಂಸಾಚಾರದ ಕುರಿತು ಸುದೀರ್ಘವಾದ, ಸಣ್ಣಪುಟ್ಟ ವಿವರಗಳನ್ನೂ ಬಿಡದಂತೆ ಅಚ್ಚುಕಟ್ಟಾಗಿ ಒಳಗೊಂಡ ವರದಿಯನ್ನು ನಾನು ‘ಲಂಕೇಶ್ ಪತ್ರಿಕೆ’ಯಲ್ಲಿ ಓದಿದೆ. ಹಲವು ಕಂತುಗಳಲ್ಲಿ ಪ್ರಕಟವಾದ ಆ ವರದಿ ಈಗಲೂ ನನಗೆ ಕಣ್ಣಿಗೆ ಕಟ್ಟಿದಂತಿದೆ. ಅದರಲ್ಲಿ ಲೇಖಕನ ಸ್ವಂತ ಮಾತುಗಳಾಗಲೀ, ಅಭಿಪ್ರಾಯಗಳಾಗಲೀ, ವಾದಗಳಾಗಲೀ, ಸಮರ್ಥನೆ ಖಂಡನೆ ಮಂಡನೆಗಳಾಗಲೀ ಇರಲಿಲ್ಲ. ಬಲಿಪಶುಗಳಾದ, ಬಲಿ ತೆಗೆದುಕೊಂಡ, ನಮಗ್ಯಾಕೆ ಎಂದು ಕೈಚೆಲ್ಲಿ ಸಾಕ್ಷಿ ನಿಂತ ನಿರ್ಲಿಪ್ತ ವ್ಯಕ್ತಿಗಳ ಹೆಸರು, ವಯಸ್ಸು, ವರಮಾನ, ಉದ್ಯೋಗ, ಮನೆ, ಊರು, ನೆರೆಹೊರೆ, ದೈನಿಕ ಜೀವನ, ಈಗ ಅವರ ಕಣ್ಣೆದುರು ನಡೆದ ಘಟನೆಗಳು ಮುಂತಾಗಿ ಕರಾರುವಾಕ್ಕಾದ ಕ್ಲಿನಿಕಲ್ ವಿವರಗಳಷ್ಟೇ ಇದ್ದವು. ಲೇಖಕ ಸಂಪೂರ್ಣ ಮರೆಗೆ ಸಂದು, ಪಾತ್ರಗಳೇ ಮೈ ತಳೆದು ನಿಂತಿದ್ದವು. ಆ ಪಾತ್ರಗಳು ತಮಗೆ ಕಂಡಷ್ಟನ್ನೇ ಕಂಡಂತೆಯೇ ಭಯ ದಿಗಿಲು ಭರವಸೆಗಳ ಗೋಜಲಿನಲ್ಲಿ ಹೇಳಿದ್ದವು. ಕಮೂ ಕಾದಂಬರಿಯಲ್ಲಿ ನಾನು ಅಚ್ಚರಿಯಲ್ಲಿ ಏನನ್ನು ಕತೆಯಾಗಿ ಕಂಡಿದ್ದೆನೋ ಅದು ಇಲ್ಲಿ ನಮ್ಮದೇ ಕಾಲಬುಡದಲ್ಲಿ ಜೀವನವಾಗಿ ಮರುಕಳಿಸಿದ್ದನ್ನು ಕಂಡು ನಾನು ನಡುಗಿ ಹೋದೆ. ಈ ವರದಿ ಬರೆದವರು ಜಿ ರಾಜಶೇಖರ.
ತಾನು ಸಾಯುವ ಕಾಲಕ್ಕೆ ಬರೆದ ಕೊನೆಯ ಸಂಪಾದಕೀಯದಲ್ಲಿ ಲಂಕೇಶರು ಜಿ ರಾಜಶೇಖರರ ಕುರಿತು ಅಭಿಮಾನ ತೋರಿದ್ದು ಸುಖಾಸುಮ್ಮನೆ ಅಲ್ಲ. ಆ ಹೊತ್ತಲ್ಲಿ ಕೆ ಎನ್ ಫಣಿಕ್ಕರ್ ಸಂಪಾದಕರಾಗಿ ಪ್ರಕಟಿಸಿದ “ಕಾಮನ್ ಮ್ಯಾನ್ಸ್ ಗೈಡ್ ಟು ಕಮ್ಯೂನಲಿಸ್ಮ್” ಎಂಬ ಹೊಸ ಪುಸ್ತಕವನ್ನೂ ನಾನು ಓದಿದ್ದೆ; ಅದು ಬಹಳ ಪ್ರಭಾವಶಾಲಿಯಾದ ಪುಸ್ತಕ. ಈ ಕಾಕತಾಳೀಯಗಳು ಸೇರಿದ್ದರಿಂದಾಗಿ, “ಬಹುವಚನ ಕೊಡಗು” ಎಂಬ ಬಳಗ ಮತ್ತು ಅದರಿಂದ ಹಲವು ಕಾರ್ಯಕ್ರಮಗಳು ಘಟಿಸಿದವು. ಜಿ ರಾಜಶೇಖರ, ಹಾಗೂ ಅವರನ್ನು ಬಗ್ಗುಬಡಿಯುವ ಉದ್ದೇಶದ ಪುಂಡ ಪಟಾಲಂ ಮಡಿಕೇರಿಗೆ ಅವರನ್ನು ಹಿಂಬಾಲಿಸಿ ಬಂದದ್ದು ಹೀಗೆ.
2003ರಲ್ಲಿ ನಾನು ತಿರುಗಿ ಮಂಗಳೂರಿಗೆ ಬಂದು ಕೆಲಸಕ್ಕೆ ಸೇರಿದೆ. ದೂರದ ಗೋದ್ರಾ-ಗುಜರಾತ್ ಮಾತ್ರವಲ್ಲದೇ ಇಲ್ಲೇ ಆದಿ ಉಡುಪಿಯಲ್ಲೂ ಹಿಂದೂತ್ವವಾದೀ ಹಿಂಸಾಚಾರದ ಅಟ್ಟಹಾಸ ಉಲ್ಬಣಾವಸ್ಥೆಗೆ ಏರಿದ್ದ ಉಚ್ಛ್ರಾಯ ಕಾಲ. ಹಾಗಾಗಿ, ಕರಾವಳಿಯಾದ್ಯಂತ, ಮುಖ್ಯವಾಗಿ ಮಂಗಳೂರು ಉಡುಪಿಗಳಲ್ಲಿ, ಜಿ ರಾಜಶೇಖರ ಮತ್ತು ನಾನು ಹಲವು ಪ್ರತಿಭಟನಾ ಸಭೆಗಳಲ್ಲಿ ಪದೇಪದೇ, ಮತ್ತು ತನಿಖಾ ವರದಿಗಳಿಗಾಗಿ ಆಗಾಗ ಜೊತೆಯಾಗುವ ಸಂದರ್ಭಗಳು ಉಂಟಾದವು. ನಮ್ಮ ಈ ಒಡನಾಟಕ್ಕೆ ಸಂಬಂಧಿಸಿ, ಸಂಕ್ಷಿಪ್ತವಾಗಿ ನಾಲ್ಕು ವಿವರಗಳನ್ನಾದರೂ ನಾನಿಲ್ಲಿ ನೆನೆಯಬೇಕು: 2006ರ ಹಿಂದೂತ್ವವಾದೀ ಹಿಂಸಾಕಾಂಡ; ಉಡುಪಿಯ ಸೌಹಾರ್ದ ಸಾಹಿತ್ಯ ಸಮ್ಮೇಳನ; ಹತ್ತು ವರ್ಷಗಳ ಹಿಂದೆ ಮಂಗಳೂರಲ್ಲಿ ನನ್ನ ಮೇಲೆ ನಡೆದ ದೈಹಿಕ ಹಲ್ಲೆ; ಹಾಗೂ, ಮುಸ್ಲಿಮರು ಸಂಘಟಿತರಾಗಲು ಮಾಡಿದ ಪ್ರಯತ್ನದಲ್ಲಿ ನನ್ನ ಮತ್ತು ಜಿ ರಾಜಶೇಖರರ ಪಾಲುದಾರಿಕೆ.
2006ರಲ್ಲಿ, ಮುಖ್ಯವಾಗಿ ಮಂಗಳೂರು ನಗರ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ವಾರಗಟ್ಟಲೆ ಹಿಂದೂತ್ವವಾದೀ ಹಿಂಸಾಚಾರ ನಡೆಯಿತು. ಇಬ್ಬರು ಮುಸ್ಲಿಮರ ಕೊಲೆಯಾಯಿತು. ಪ್ರಭುತ್ವ ಕಳ್ಳರಂತೆ ಅಡಗಿ ಕೂತು ಚಳಿ ಕಾಯಿಸಿಕೊಳ್ಳುತ್ತಿತ್ತು. ಮನುಷ್ಯತ್ವವೇ ಹೊತ್ತಿ ಹೋಗಿ ದಕ್ಷಿಣಕನ್ನಡ ರಕ್ತಸಿಕ್ತ ರಣರಂಗವಾಗಿತ್ತು. ಅಳಿದುಳಿದವರ ಆರ್ತನಾದದ ಆ ದಿನಗಳನ್ನು ನೆನೆಸಿಕೊಂಡರೆ ಈಗಲೂ ಮೈ ನಡುಗುತ್ತದೆ. ಒಂದು ದಿನ, ಜಿ ರಾಜಶೇಖರರವರು ಫೋನ್ ಮಾಡಿ, ಹಿಂಸಾಚಾರಕ್ಕೆ ಈಡಾದ ಪ್ರದೇಶಗಳು ಮತ್ತು ವ್ಯಕ್ತಿಗಳ ಕುರಿತು ವಿವರವಾದ ಮಾಹಿತಿ ಮತ್ತು ಸಂಪರ್ಕಗಳಿರುವ ಒಬ್ಬ ತರುಣನಿದ್ದಾನೆ; ಸಾಧ್ಯವಿದ್ದರೆ ಕೆಲಸಕ್ಕೆ ರಜೆ ಹಾಕಿ ಬಿಡುವು ಮಾಡಿಕೊಂಡು ಬನ್ನಿ, ಏನು ನಡೆದಿದೆ ಎಂಬುದನ್ನು ನೋಡಬೇಕು ಎಂದರು. ಹಾಗೆ, ನಾವಿಬ್ಬರು ಹರ್ಷದ್ ವರ್ಕಾಡಿ ಎಂಬ ತರುಣನ ಮಾರ್ಗದರ್ಶನದಲ್ಲಿ ಜೊತೆಯಾಗಿ, ಆದಷ್ಟೂ ಕೂಲಂಕಷವಾಗಿ ಭೇಟಿ, ಸಂದರ್ಶನ, ಸುತ್ತಾಟ, ಮಾಹಿತಿ ಸಂಗ್ರಹಣೆ ಮಾಡಿದೆವು. ಅಗತ್ಯ ಕಂಡ ಕಡೆಗಳಿಗೆ ಹಲವು ಬಾರಿ ಹೋಗಬೇಕಾಗಿ ಬಂತು. ಸಂತ್ರಸ್ತರು ಮತ್ತು ಅಪರಾಧಿಗಳು ಒಬ್ಬರ ದಾರಿ ಮತ್ತೊಬ್ಬರು ತೋರಿಸಿ ಈ ಕಗ್ಗಂಟಿನ ಹಿಂದೆ ಮುಂದೆ ಒಳಹೊರಗೆ ಸುತ್ತಿ ಸುದೀರ್ಘವಾದ ವರದಿಯನ್ನು ತಯಾರಿಸಿದೆವು. ಆ ವರದಿ ಕಂತು ಕಂತುಗಳಾಗಿ ‘ಲಂಕೇಶ್ ಪತ್ರಿಕೆ’ಯಲ್ಲಿ ಪ್ರಕಟವಾಯಿತು. ‘ಕರ್ನಾಟಕ ಕೋಮು ಸೌಹಾರ್ದ ವೇದಿಕೆ’ ಅದನ್ನು ಒಂದು ಪುಸ್ತಕವಾಗಿ ಪ್ರಕಟಿಸಿತು. ಅದನ್ನು ನನ್ನಿಂದ ಇಂಗ್ಲಿಷ್ ಗೆ ಅನುವಾದಿಸಿ ತೀಸ್ತಾ ಸೆಟಲ್ ವಾಡ್ ತಮ್ಮ ‘ಕಮ್ಯೂನಲಿಸ್ಮ್ ಕಾಂಬ್ಯಾಟ್’ ಪತ್ರಿಕೆಯಲ್ಲಿ ಪ್ರಕಟಿಸಿದರು. ಈ ಸಂಬಂಧವಾಗಿ ತೀಸ್ತಾ ಸೆಟಲ್ ವಾಡ್ ಸ್ವತಃ ಮಂಗಳೂರಿಗೆ ಬಂದು (ಮಾಧ್ಯಮಲೋಕ ಅದಾಗಲೇ ಕುಲಗೆಟ್ಟು ಹಿಂದೂತ್ವವಾದಿಯಾಗಿ ಮತಾಂತರಗೊಂಡಿದ್ದಾಗಲೂ) ಪತ್ರಿಕಾಗೋಷ್ಠಿ ಕರೆದು, ವಿವರಗಳನ್ನು ಸಾರ್ವಜನಿಕರ ಎದುರು ತೆರೆದಿಟ್ಟರು.
ಈ ವರದಿಯ ಉಳಿದ ಫಲಿತಗಳೇನೇ ಇರಲಿ, ನಾನು ಜಿ ರಾಜಶೇಖರರಿಂದ ಆಗ ಕಲಿತದ್ದು ಬಹಳ. ಅದು ಬಹಳ ಅಮೂಲ್ಯ ಕೂಡಾ. ಅಪರಾಧಿಗಳಿರಲಿ, ತಟಸ್ಥರಿರಲಿ, ಸಂತ್ರಸ್ತರಿರಲಿ, ಪ್ರಭುತ್ವವಿರಲಿ– ನಾವು ಭಾವಾವೇಶಕ್ಕೆ ಎಡೆಯಾಗದಂತೆ, ಸಣ್ಣಪುಟ್ಟದು ಎಂಬ ಅಸಡ್ಡೆಯಲ್ಲಿ ಯಾವ ವಿವರಗಳೂ ಕೈ ಜಾರದಂತೆ, ಸಂದರ್ಭದ ಕಗ್ಗಂಟಾದ ಮಗ್ಗುಲುಗಳಿಗೂ ಸಂಕೀರ್ಣತೆ ಸಂದಿಗ್ಧಗಳಿಗೂ ಕುರುಡಾಗದಂತೆ, ಹುಂಬ ಪಕ್ಷಪಾತಿಗಳಾಗದಂತೆ, ಆದರೆ ಸತ್ಯಕ್ಕೆ ಧಕ್ಕೆ ಬರದಂತೆ, ಪ್ರಭುತ್ವದ ಅಟ್ಟಹಾಸದಿಂದ ಕೊಂಕದಂತೆ ನಡೆದ ಈ ತನಿಖೆಯನ್ನು, ಅದರ ಒಂದು ಉದಾಹರಣೆಯ ಮುಖಾಂತರ ಹೇಳುವುದಾದರೆ: ಈ ವರದಿ ತಯಾರಾದ ನಂತರ ದೇಶದ ಬೇರೆ ಭಾಗಗಳಿಂದ ಹಾಗೂ ಹೊರದೇಶಗಳಿಂದ ಕೆಲವು ವರದಿಗಾರರು ಮತ್ತು ಮಾಧ್ಯಮ ಅಧ್ಯಯನ ವಿದ್ಯಾರ್ಥಿಗಳು ಆಗಾಗ ನನ್ನ ಬಳಿ ಬರುತ್ತಿದ್ದರು; ಅವರನ್ನು ಪದೇಪದೇ ನಾನೊಬ್ಬನೇ ಕರೆದುಕೊಂಡು ಹೋಗಬೇಕಾದ ಸಂದರ್ಭಗಳು ಬರುತ್ತಿದ್ದವು. ಆಗ ನನ್ನ ಬಳಿ, ನಾವು ತಯಾರಿಸಿದ ವರದಿಯ ಪುಸ್ತಕಗಳ ಪ್ರತಿಗಳು ಇರುತ್ತಿದ್ದವು. ಗೂಡಂಗಡಿಗಳು, ಬಟ್ಟೆ ಚಪ್ಪಲಿ ತರಕಾರಿ ಅಂಗಡಿಗಳು, ದೂರದೂರದ ಒಂಟಿ ಮನೆಗಳು– ಮುಂತಾದ ಎಲ್ಲ ಕಡೆ ಈ ಪುಸ್ತಕ ನೋಡಿ, ಅದರಲ್ಲಿ ತಮ್ಮ ಹೆಸರು ಮತ್ತು ನಡೆದ ಘಟನೆಗಳ ವಿವರಗಳನ್ನು ನೋಡಿ ಆ ನತದೃಷ್ಟ ಅಮಾಯಕರು ಸಂತಸಗೊಳ್ಳುತ್ತಿದ್ದರು. ಅವರ ಕಣ್ಣಂಚಲ್ಲಿ ತಮ್ಮ ಅಳಲು ನಿರರ್ಥಕವಲ್ಲವೇನೋ ಎಂಬ ಮಿಂಚು ಒಮ್ಮೊಮ್ಮೆ ಮೂಡುತ್ತಿತ್ತು. ಕ್ರೂರ ವ್ಯಂಗ್ಯವೋ ಎಂಬಂತೆ ನನಗೆ ಬೇಂದ್ರೆಯವರ “ಸಾಯೋ ಆಟ” ನಾಟಕದ ಈ ಸಾಲುಗಳು ಬೇಡಬೇಡವೆಂದರೂ ನೆನಪಾಗುತ್ತಿದ್ದವು: “ನಾಲ್ಕು ಜನ ನೋಡುವವರಿದ್ದರೆ ಅತ್ತರೂ ಚೆಂದ, ಸತ್ತರೂ ಚೆಂದ.” ಮನುಷ್ಯರು ಕಡೆಗೂ ಬದುಕಿ ಉಳಿಯುವುದು ಗೋಡೆಗಳಿಗಾದರೂ ಹೇಳಲ್ಪಡುವ ಕತೆಗಳಲ್ಲಿ. (ಹಾಗೊಂದು ಜನಪದ ಕತೆಯೂ– Tell It To The Walls: ಎ ಕೆ ರಾಮಾನುಜನ್– ಇದೆ). ಈ ಅಮಾಯಕರು ಯಾರೋ, ಜಿ ರಾಜಶೇಖರ ಯಾರೋ; ಒಂದರ್ಥದಲ್ಲಿ ಪರಸ್ಪರ ಅವರು ಅಪರಿಚಿತ ಅನಾಮಧೇಯರು. ರಾಜಶೇಖರರಂತೆ, ಅಳಿಸಿ ಹೋಗುವ ನಮ್ಮ ಹೆಜ್ಜೆ ಗುರುತಿಗೂ ಗುರುತು ಬರುವಂತೆ, ಮರೆಯಾಗುವುದು ಸುಲಭವಲ್ಲ.
ಪ್ರಭುತ್ವ ಮತ್ತು ಮಠಮಾನ್ಯಗಳ ಕೃಪೆಯಲ್ಲೂ, ಜಾಗತೀಕರಣವು ಮಂಗಳೂರಿನ ವಿಶೇಷ ಆರ್ಥಿಕ ವಲಯದ ಅವತಾರದಲ್ಲಿ ಸೃಷ್ಟಿಸುತ್ತಿರುವ ದುರಂತಗಳಲ್ಲೂ, ಇವುಗಳ ಹೆಣಿಗೆಯಾಗಿರುವ ದಿವ್ಯ ನಿರ್ಲಕ್ಷ್ಯಗಳ ಹಾಸುಹೊಕ್ಕಿನಲ್ಲೂ– ಕರಾವಳಿ ಕರ್ನಾಟಕದ ಹಿಂದೂತ್ವವಾದೀ ಅಟ್ಟಹಾಸವನ್ನು ಅದೃಶ್ಯಗೊಳಿಸಿ, ಸಾಹಿತ್ಯ-ಸಂಸ್ಕೃತಿ ಎಂಬ ಸುವರ್ಣ ಚೌಕಟ್ಟನ್ನು ಸಾಹಿತ್ಯ ಪರಿಷತ್ತು ಸಿದ್ಧಪಡಿಸುತ್ತಿರುವಾಗಲೇ, ಅದಕ್ಕೆ ಎದುರಾಗಿ ಉತ್ತರವಾಗಿ ಸವಾಲಾಗಿ ಉಡುಪಿಯಲ್ಲಿ ಸೌಹಾರ್ದ ಸಾಹಿತ್ಯ ಸಮ್ಮೇಳನ ನಡೆಯಿತು. ಅದು ಬಹಳ ಅರ್ಥಪೂರ್ಣವೂ ಆಗಿತ್ತು. ಜಿ ರಾಜಶೇಖರ ಮೆಚ್ಚಿಕೊಂಡ ನನ್ನ ಆಶಯ ಭಾಷಣ ಕೂಡಾ ಅದರ ಭಾಗವಾಗಿತ್ತು. ಮಂಗಳೂರಲ್ಲಿ ನನ್ನ ಮೇಲೆ ದೈಹಿಕ ಹಲ್ಲೆ ನಡೆದುದನ್ನು ಖಂಡಿಸಿ ಜಿ ರಾಜಶೇಖರ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯ ಎದುರು ಸಾರ್ವಜನಿಕ ಭಾಷಣ ಮಾಡಿದರು. ‘ಲಂಕೇಶ್ ಪತ್ರಿಕೆ’ಗಾಗಿ ನನ್ನ ಕುರಿತು ಬರೆದರು. ಜೀವಂತ ಇರುವಾಗಲೇ ಶೃದ್ಧಾಂಜಲಿ ಲೇಖನ ಓದಿದಷ್ಟು ಸಂತೋಷವಾಯಿತು ಎಂಬ ನನ್ನ ಪ್ರತಿಕ್ರಿಯೆಗೆ ಮನಃಪುರ್ವಕವಾಗಿ ಅಪರೂಪದ ನಗೆ ನಕ್ಕರು.
ಮುಸ್ಲಿಮರು ಹಲವರು ತಾವು ಸಂಘಟಿತರಾಗಲು ಬಯಸಿ ನಡೆಸಿದ ಪ್ರಯತ್ನಗಳ ಕುರಿತು ಕೆಲವಾದರೂ ಮಾತುಗಳನ್ನು ನಾನು ಹೇಳುವುದಿದೆ. ಧರ್ಮವು ಉತ್ಸವಮೂರ್ತಿಯಾಗಿ, ಆರ್ಥಿಕತೆ ಬೇಕಾಬಿಟ್ಟಿ ಜಾಗತೀಕರಣವಾಗಿ ನಿರ್ದಯವಾಗಿ ಎದುರು ನಿಂತಿರುವ ಕಾಲ ನಮ್ಮದು. ಯಾವ ಕಡೆ ತಿರುಗಿದರೂ ಮನುಷ್ಯತ್ವದ ಪಸೆ ಕಾಣದಂತಾಗಿದೆ. ಸಂಘಪರಿವಾರದ ಅಟ್ಟಹಾಸ ಮೇರೆ ಮೀರಿದೆ. ಪ್ರಭುತ್ವವು ಹಿಂದೂತ್ವವಾದದಲ್ಲಿ ಪರೋಕ್ಷವಾಗಿಯಷ್ಟೇ ಅಲ್ಲದೇ ನೇರವಾಗಿ ಪಾಲುದಾರವಾಗಿದೆ. ಉಳಿದ ರಾಜಕೀಯ ಪಕ್ಷಗಳೂ ಜಾತ್ಯತೀತತೆ ಎಂಬುದನ್ನು ಅನುಕೂಲ ಶಾಸ್ತ್ರವನ್ನಾಗಿ ಮಾರ್ಪಡಿಸಿವೆ. ಒಂದು ಕಾಲಕ್ಕೆ ಬಹಳ ಪ್ರಭಾವಶಾಲಿಯಾಗಿದ್ದ ಎಡಪಕ್ಷಗಳ ವರ್ಚಸ್ಸು ಜಾಗತೀಕರಣದ ಬಂಡವಾಳಶಾಹಿಯ ದಾಳಿಗೆ ಪೇಲವಗೊಳ್ಳುತ್ತಿದೆ. ಕೋಮುವಾದ ಮತ್ತು ನವ ಬಂಡವಾಳಶಾಹಿಗಳ ನಾಗಾಲೋಟದ ಎದುರು, ಚಳುವಳಿಗಳು ಏದುಸಿರುಬಿಡುತ್ತಿವೆ. ನನ್ನನ್ನೇ ಉದಾಹರಣೆಯಾಗಿಟ್ಟು ಆತ್ಮಮರುಕವಿಲ್ಲದೇ ಇಷ್ಟಂತೂ ಹೇಳಬಲ್ಲೆ: ನಾನು ಉದ್ಯೋಗ ಮಾಡುತ್ತಿದ್ದ ಸಂಸ್ಥೆಗಳ ಆಡಳಿತ, ಬಹುಪಾಲು ನನ್ನ ವಿದ್ಯಾರ್ಥಿಗಳು, ಸಂಘಪರಿವಾರದ ಬೀದಿ ಪುಂಡರು ನೇತಾರರು, ಅಷ್ಟೇ ಏಕೆ ಬಸ್ಸು ರಿಕ್ಷಾ ಅಂಗಡಿ ಹೊಟೇಲು ನೆರೆಹೊರೆಯವರು ನನ್ನನ್ನು ಕಂಡದ್ದು ಒಬ್ಬ ಕ್ರಿಮಿನಲ್ ಮತ್ತು ಜನ ಶತ್ರು ಎಂಬಂತೆ. ಅವು ಅಸುರಕ್ಷಿತತೆಯ ಬೇತಾಳ ಹೆಗಲೇರಿದ ದಿನರಾತ್ರಿಗಳು. ಸವಲತ್ತುಗಳ ನಡುವೆಯೂ ನನ್ನ ಪರಿಸ್ಥಿತಿಯೇ ಹೀಗನ್ನಿಸಿದರೆ, ಉಳಿದವರ ಪಾಡು ಕರುಣಾಜನಕ. ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ ಹುಟ್ಟಿದ್ದು ಈ ಸಂಧಿಕಾಲದಲ್ಲಿ. ಆ ಆರಂಭದ ದಿನಗಳಿಂದಲೂ ನಾನು ಮತ್ತು ಜಿ ರಾಜಶೇಖರ ಹೆಚ್ಚೂಕಡಿಮೆ ಅವರ ಎಲ್ಲ ಕಾರ್ಯಕ್ರಮಗಳಲ್ಲೂ ಭಾಷಣಕಾರರು ಮತ್ತು ಬೆಂಬಲಿಗರು. ಕೋಮುಸೌಹಾರ್ದ ವೇದಿಕೆಯಲ್ಲಿ ಎಡೆಬಿಡದೇ ಸಕ್ರಿಯರಾಗಿದ್ದುಕೊಂಡೇ ಕೆ ಎಫ್ ಡಿ/ಪಿ ಎಫ್ ಐಗೆ ನಾವು ಜೊತೆಯಾದವರು. ನಮ್ಮದೇ ಸ್ನೇಹಿತರು ನಮ್ಮನ್ನು ಮುಸ್ಲಿಮ್ ಸಂಘಟನೆಗಳಿಂದ ಹೊರಗೆಳೆಯಲು ಮಾಡಿದ ಪ್ರಯತ್ನಗಳ ದೊಡ್ಡ ಕತೆಯೇ ಇದೆ. ಅದೇನೇ ಇದ್ದರೂ, ನನ್ನ ಮತ್ತು ರಾಜಶೇಖರರ ನಿಲುವು ಆಗಲೂ ಈಗಲೂ ಬದಲಾಗದೇ ಉಳಿಯಿತು.
ಕಾರಣ ಇಷ್ಟೇ. ನನ್ನ ವಾದ ಸರಳವಾದದ್ದು, ಆದರೆ ದೃಢವಾದದ್ದು. ಭೋಳೆ ಎನ್ನುವವರ ಬಾಯಿ ಮುಚ್ಚಿಸುವ ದರ್ದು ಅದಕ್ಕಿಲ್ಲ: (೧) ಉದಾರವಾದೀ ಪ್ರಜಾತಂತ್ರ ವ್ಯವಸ್ಥೆಯಲ್ಲಿ, ಎಲ್ಲ ವ್ಯಕ್ತಿಗಳೂ ವ್ಯಕ್ತಿಗಳಾಗಿ ಕೇವಲ ಒಂದು ವೋಟು ಮಾತ್ರ; ಅವರು ಸಂಘಟಿತ ಸ್ವರವಾಗದಿದ್ದರೆ ಅವರನ್ನು ಕೇಳುವವರಿಲ್ಲ. ಕೇಳಿದರೂ, ಕೇಳುವವರು ತೋರಿಸುವ ಕೃಪೆ-ಔದಾರ್ಯ ಬಹಳ ಉಪಯುಕ್ತವೂ ಅಲ್ಲ, ಬಾಳಿಕೆ ಬರುವಂಥದ್ದೂ ಅಲ್ಲ, ಪಡೆಯುವವರ ಘನತೆಗೆ ಹೊಂದುವಂಥದ್ದೂ ಅಲ್ಲ. ಹಾಗಾಗಿ, ಸಂಘಟಿತರಾದರೆ ಉಂಟಾಗಬಹುದಾದ ವಿಕಾರಗಳು ಮತ್ತು ಅಪಾಯಗಳನ್ನು ವಾದಗಳನ್ನಾಗಿ ಸದಾ ಕಾಲ ಚಾಲ್ತಿಯಲ್ಲಿಡಲು ಅವಕಾಶಗಳೂ ಇಲ್ಲ. (೨) ಎರಡನೆಯ ಆರೋಪ ಹೆಚ್ಚು ತೀಕ್ಷ್ಣವಾದದ್ದು, ಕಟುವಾದದ್ದು: ಇದು ಕೇವಲ ಮುಸ್ಲಿಮರ ಸಂಘಟನೆ; ಇದು ಸಂಘಪರಿವಾರದ್ದೇ ಪಡಿಯಚ್ಚು; ಇವರೂ ಕೋಮುವಾದಿಗಳು; ಇವರೂ ಹಲ್ಲೆ ದೊಂಬಿ ದಾದಾಗಿರಿ ನಡೆಸುತ್ತಾರೆ; ಮುಸ್ಲಿಮ್ ಹೆಣ್ಣುಮಕ್ಕಳನ್ನು ಸಂಘಟನೆಯಲ್ಲಿ ಸೇರಿಸಿಕೊಳ್ಳುವುದಿಲ್ಲ, ಅವರು ಸಮಾನತೆಯ ಹಕ್ಕುಗಳನ್ನು ಮಾನ್ಯಮಾಡುವುದಿಲ್ಲ, ಮುಂತಾಗಿ.
ಈ ವಿವರಗಳು ನನಗೆ ಅಷ್ಟು ಮುಖ್ಯವೆಂದು ಅನ್ನಿಸುವುದಿಲ್ಲ. ಅವರ ಘೋಷಿತ ನಿಲುವುಗಳೇನು ಎಂಬುದಷ್ಟೇ ನನಗೆ ಮುಖ್ಯವಾದುದು. ಏಕೆಂದರೆ, ತಪ್ಪುಗಳು ಸಂಭವಿಸಿದ ಸಂದರ್ಭಗಳಲ್ಲಿ ಅದೇ ಘೋಷಿತ ನಿಲುವುಗಳ ಮೂಲಕ ಅವರ ಜೊತೆ ವಾಗ್ವಾದ-ಸಂವಾದ ನಡೆಸಬಹುದಾದ ಬಾಗಿಲು ತೆರೆದೇ ಇದೆ. ಇದನ್ನು ಸಂಘಪರಿವಾರದ ವಿಷಯದಲ್ಲಿ ಹೇಳುವಂತಿಲ್ಲ. ಸಾವರ್ಕರ್, ಗೋಳ್ವಲ್ಕರ್ ಅಥವಾ ಇನ್ನಾವುದೇ ಸಂಘಪರಿವಾರದ ಮುಖವಾಣಿಗಳಾದ ಜನರನ್ನು ಹಾಗೂ ಅವರ ಘೋಷಿತ ನಿಲುವುಗಳನ್ನು ಯಾವ ನಾಗರಿಕ ಸಮಾಜವೂ ಸಮರ್ಥಿಸುವುದು ಸಾಧ್ಯವಿಲ್ಲ. ಅಲ್ಲದೇ, ಬಹುಸಂಖ್ಯಾತ ಕೋಮುವಾದವನ್ನು ಮಾಮೂಲು ತಕ್ಕಡಿಯಲ್ಲಿ ತೂಗುವುದು ಸರ್ವಥಾ ಸಾಧುವಲ್ಲ. ಇದು ನನ್ನ ಖಡಾಖಂಡಿತವಾದ ಲಾಗಾಯ್ತಿನ ನಿಲುವು. ನನಗೆ ತಿಳಿದಮಟ್ಟಿಗೆ ರಾಜಶೇಖರರ ನಿಲುವು ಕೂಡಾ ಇದೇ ಸ್ವರೂಪದ್ದು. ಹಾಗಲ್ಲದೇ, ಮುಸ್ಲಿಮರು ರಾಜಶೇಖರರನ್ನು ತಮ್ಮ ಆಪತ್ಬಾಂಧವ ಎಂದು ತಿಳಿಯಲು ವಿಶೇಷ ಕಾರಣಗಳಿಲ್ಲ.
ರಾಜಶೇಖರರು ಪಡೆಯಬಹುದಾಗಿದ್ದ ಪ್ರಶಸ್ತಿಗಳು ಸನ್ಮಾನಗಳು ಹಲವು. ಕಿರುಚು ಕಂಠದ ಕುಲಗೆಟ್ಟ ಮುಂಚೂಣಿ ಜನರು ಅದನ್ನು ತಡೆದರು. ಅದರಿಂದ ರಾಜಶೇಖರರಿಗೇನೂ ನಷ್ಟವಾಗಲಿಲ್ಲ. ಅಂಥ ಹಲವು ಪ್ರಶಸ್ತಿ ಸನ್ಮಾನಗಳು ಕೂಡಾ ಅವರು ಎದುರಾಳಿಯಾಗಿ ನಿಂತು ಹೋರಾಡಿದ ರಿವಾಜುಗಳ ಕೂಸುಗಳೇ ಆಗಿರುವುದರಿಂದ, ಅಪ್ಪಿ ತಪ್ಪಿ ಅಂಥದ್ದೊಂದು ಪ್ರಶಸ್ತಿ ಬಂದಾಗಲೂ ಅವರು ಅದನ್ನು ನಿರಾಕರಿಸಿದರು. ಆದರೆ ಉಡುಪಿಯಲ್ಲಿ ಮುಸ್ಲಿಮ್ ಸಂಘಟನೆಗಳವರು, ಮಂಗಳೂರಲ್ಲಿ ‘ಪ್ರಸ್ತುತ ಬಳಗ’ದವರು ಕೊಟ್ಟ ಪ್ರಶಸ್ತಿ-ಸನ್ಮಾನಗಳನ್ನು ತನ್ನ ಹೋರಾಟಗಳ ಮುಂದುವರಿಕೆಯಾಗಿಯೇ ಅವರು ಸಂತೋಷದಿಂದ ಸ್ವೀಕರಿಸಿದರು. ಪ್ರಶಸ್ತಿಯನ್ನು ಸ್ವೀಕರಿಸುವುದೂ ಪ್ರಶಸ್ತಿಯನ್ನು ನಿರಾಕರಿಸುವಷ್ಟೇ ಅರ್ಥಪೂರ್ಣವಾದುದು ಎಂಬುದನ್ನು, ಪ್ರಶಸ್ತಿ ಸ್ವೀಕರಿಸುವಾಗ ಅವರು ಆಡಿದ ಮಾತುಗಳು ಕೂಡಾ ಸ್ಪಷ್ಟಪಡಿಸಿವೆ. ಈ ನಿಸ್ಪೃಹತೆ ವಿರಳಾತಿವಿರಳವಾದುದು. ನಿಜವಾಗಿಯೂ ದೊಡ್ಡವರಾಗಿರುವ ನಮ್ಮ ನಡುವಿನ ಹಲವು ಹಿರಿಯರಲ್ಲಿ ಕೂಡಾ ಈ ಗುಣ ದುರ್ಲಭವಾದುದು. ಈ ವಿಷಯದಲ್ಲಿ ದಾಕ್ಷಿಣ್ಯಕ್ಕೆ ಬಸುರಾಗದೇ ಉಳಿದವರ ಸಂಖ್ಯೆ ಬಹಳ ಕಡಿಮೆ.
ಆದರೆ, ಅದಕ್ಕಿಂತ ಮುಖ್ಯವಾದ ವಿಶೇಷವೊಂದಿದೆ. ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಾನು ಆರಂಭಿಸಿದ್ದು, ಮುಖ್ಯವಾಗಿ ನೃತ್ಯ, ಸಂಗೀತ ಮುಂತಾದ ಶಾಸ್ತ್ರೀಯ ಕಲೆಗಳ ಅತ್ಯುತ್ತಮ ವಕ್ತಾರರ ಮುಖಾಂತರ. ಆದರೆ ಅದು ಕೇವಲ “ಕಲೆಗಾಗಿ ಕಲೆ” ಎಂಬಂತಾಗುವ ಅಪಾಯಗಳನ್ನು ತಪ್ಪಿಸುವ ಕಷ್ಟಗಳೇನು ಎಂಬುದು ಅನುಭವದಿಂದ ನನ್ನ ತಿಳುವಳಿಕೆಗೆ ಬಂದಿದೆ. ಆದರೆ ನಾನು ಭಾಗವಹಿಸುವ ಸಾರ್ವಜನಿಕ ಹೋರಾಟ ಪ್ರತಿಭಟನೆ ಮುಂತಾದವು ಢಾಳಾಗಿ ರಾಜಕೀಯ ನಿಲುವುಗಳನ್ನು ಹೊಂದಿರುವಂಥವು. ಇಲ್ಲಿನ ಕೊರತೆಯೆಂದರೆ ಕಲೆಯ ನಯ ನವಿರು ನಾಜೂಕು ಸೂಕ್ಷ್ಮಗಳ ಗೈರುಹಾಜರಿ. ಸೂಕ್ಷ್ಮಗಳಿಗೆ ಒಡ್ಡಿಕೊಳ್ಳದೇ, ಎದುರಾಳಿಯ ಸಂಕಟ-ತಲ್ಲಣಗಳನ್ನು ಗ್ರಹಿಸದೇ, ಅದದೇ ಜನರೆದುರು ಅದದೇ ಮಾತುಗಳನ್ನಾಡುತ್ತ, ಘೋಷಣೆಗಳ ಬುರುಗು ಗೀಳಿನಲ್ಲಿ ಕರಗುತ್ತ ಹೋಗುವ ಅಪಾಯದಿಂದ ತಪ್ಪಿಸಿಕೊಂಡು ಸ್ತಿಮಿತದಲ್ಲಿ ಉಳಿಯುವುದು ಇಂಥಲ್ಲಿ ಕಡುಕಷ್ಟ. ರಾಜಶೇಖರರು ಈ ಇರುಸುಮುರುಸನ್ನು ಮೇಲಿಂದ ಮೇಲೆ ಅನುಭವಿಸಿದ್ದಾರೆ ಎಂದೇ ನನ್ನ ಭಾವನೆ. ಹೀಗಿದ್ದೂ ಗೊಡ್ಡಾಗದೇ ಉಳಿದದ್ದು ಅವರ ಇನ್ನೊಂದೇ ಅಂತರಂಗದ ಹೋರಾಟವಿದ್ದೀತು. ಏಕೆಂದರೆ, ನಿಜಕ್ಕಾದರೆ ದಿನನಿತ್ಯದ ಏಕತಾನದ ಬುರ್ನಾಸು ಸಾಮಾನ್ಯತೆಯಲ್ಲಿ ಕರಗಿಹೋಗದ ಸೂಕ್ಷ್ಮವೇ ಅವರ ಅಡಿಪಾಯ– langue. ದೈನಿಕದ ರಾಜಕೀಯ ಹೋರಾಟ ಮತ್ತು ನಿಲುವುಗಳಾಗಿ ಬೀದಿಗಳಲ್ಲಿ ಅವರು ನಮಗೆ ಕಾಣಿಸಿದ್ದು ಆ ಅಭಿಜಾತ ಅಭಿರುಚಿಯ ಒಂದು ಝಲಕ್– parole. ವಿಪರ್ಯಾಸವೆಂದರೆ, ಜಾರ್ಜ್ ಲುಕಾಕ್ಸ್ ಹೇಳುವಂತೆ, ಉಪಯುಕ್ತವಾದ ಒಂದು ಸರ್ವಸಾಮಾನ್ಯ ಮೇಜನ್ನು ತಯಾರಿಸುವುದಕ್ಕೂ, ನಮ್ಮ ಈ ದುಷ್ಕಾಲದಲ್ಲಿ, ಮೈಖೆಲ್ ಏಂಜೆಲೋನ ಪ್ರತಿಭೆಯೇ ಬೇಕು.
ಸಾಮಾನ್ಯರ ನಡುವೆ ಸಾಮಾನ್ಯರಾಗಿ ಇರುವುದೂ ಒಂದು ಅಸಾಮಾನ್ಯ ಸಾಧನೆ. ನನಗೆ ತಿಳಿದಮಟ್ಟಿಗೆ ರಾಜಶೇಖರರ ಜೀವನಪೂರ್ತಿಯ ಪ್ರಜ್ಞಾಪೂರ್ವಕ ಹುಡುಕಾಟವಿದ್ದುದು ಸಾಮಾನ್ಯ ಜೀವನದ ಸಹಜ ಅಸಾಮಾನ್ಯತೆಯಲ್ಲಿ. ಅನಾಮಧೇಯನಾಗಿ ಉಳಿಯಬೇಕೆಂಬ ಹಠದಲ್ಲಿ.
1992ರ ಡಿಸೆಂಬರ್ ಕೊನೆಯ ಭಾಗದ ಒಂದು ಭಾನುವಾರ. ‘ಸಾಪ್ತಾಹಿಕ ಪ್ರಭ’ದಲ್ಲಿ “ಅಕ್ಕರೆಯ ರಾಮಲಾಲನಿಗೆ ಅಕಾಲ ಮುಪ್ಪು” ಎಂಬ ನನ್ನ ಲೇಖನ ಪ್ರಕಟವಾಗಿತ್ತು. ಮಹಾತ್ಮಾ ಗಾಂಧಿ, ಮಾರ್ಟಿನ್ ಹೈಡೆಗರ್, ಸಾದತ್ ಹಸನ್ ಮಾಂಟೋ ಮತ್ತು ರಾಮಕೃಷ್ಣ ಪರಮಹಂಸರ ವಿಚಾರಗಳಿಗೆ ನಾನು ಮರುಳಾಗಿದ್ದ ಕಾಲ. ಧ್ವಂಸಗೊಂಡ ಬಾಬರೀ ಮಸೀದಿಯ ಕಲ್ಲು ಇಟ್ಟಿಗೆಗಳ ಸಂದಿಯಲ್ಲಿ ಅನಾಥವಾಗಿ ಬಿದ್ದಿದ್ದ ಅಯೋಧ್ಯೆಯ ರಾಮಲಲ್ಲಾನ ಚಿತ್ರವೊಂದನ್ನು ‘ಫ್ರಂಟ್ ಲೈನ್’ ಪತ್ರಿಕೆಯಲ್ಲಿ ಕಂಡಿದ್ದೆ. ರಾಮಕೃಷ್ಣ ಪರಮಹಂಸರ ರಾಮ, ರಾಮಲಾಲ, ಮುದ್ದಿನ ಹಸುಗೂಸು. ಬಿಲ್ಲುಬಾಣ ಹೆದೆಯೇರಿಸಿ, ಇಲ್ಲದ ಶತ್ರುವನ್ನು ನಿರ್ನಾಮ ಮಾಡಬೇಕೆನ್ನುವ ವ್ಯಗ್ರ ಉಮೇದಿನ ಸೆಟೆದು ನಿಂತ ರಾಮನಲ್ಲ. ಹಾಗೆಂದು ಬರೆದಿದ್ದೆ. ಎರಡೇ ದಿನದಲ್ಲಿ ರಾಜಶೇಖರರಿಂದ ಮೆಚ್ಚುಗೆಯ ಪತ್ರ ಹಾಗೂ ಇಂಗ್ಲಿಷ್ ಲೇಖನವೊಂದರ ಛಾಯಾಪ್ರತಿ ಅಂಚೆಯಲ್ಲಿ ಬಂತು. ಇಂಗ್ಲಿಷ್ ಲೇಖನದ ಛಾಯಾಪ್ರತಿ ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯಲ್ಲಿ ಮರುದಿನ ಮಹಾತ್ಮಾ ಗಾಂಧಿಯವರ ಮೊಮ್ಮಗ ರಾಮಚಂದ್ರ ಗಾಂಧಿ ಬರೆದದ್ದು. ರಾಮಕೃಷ್ಣ ಪರಮಹಂಸರ ರಾಮಲಲ್ಲಾನ ಸುತ್ತ ನಾನು ಬರೆದಿದ್ದ ಅದದೇ ವಿವರಗಳು ಅದರಲ್ಲಿದ್ದವು. ರಾಜಶೇಖರರು ತಮ್ಮ ಪತ್ರದಲ್ಲಿ, “ಇಲ್ಲಿ ನೋಡಿ, ನಿಮ್ಮ ಲೇಖನ ಒಂದು ದಿನ ತಡವಾಗಿ ಪ್ರಿಂಟಾಗಿದ್ದರೆ ನೀವು ರಾಮಚಂದ್ರ ಗಾಂಧಿಯವರ ಲೇಖನವನ್ನು ನಕಲು ಮಾಡಿದ್ದೀರಿ ಎಂಬ ಅಪವಾದವನ್ನು ಹೊರಬೇಕಾಗುತ್ತಿತ್ತು.”
ಮಾರ್ಟಿನ್ ಹೈಡೆಗರ್ ಹೇಳುವಂತೆ, “One is ready to die as soon as one is born.” ಸಾವೆಂಬುದು ಹುಟ್ಟಿನೊಂದಿಗೇ ಅಂಟಿಬರುವ ಮಾರಣಾಂತಿಕ ಶಾಪ ಎಂಬುದನ್ನು ತಿಳಿಯದವರು ಯಾರು? ತಿಳಿದು ನಡೆದವರು ಯಾರು? ಈ ಜೀವಜಗತ್ತು ಆಸೆಗಳ ಸ್ವರ್ಗವನ್ನೇ ನಮ್ಮೆದುರು ಹರಡಿದೆ. ಆದರೆ ಸಾವು ಎಲ್ಲ ಸಂಭ್ರಮಗಳನ್ನೂ ಕಸಿಯಲು ಅಲ್ಲೇ ಹೊಂಚಿ ಕೂತಿದೆ. ನಮ್ಮ ಅದಮ್ಯ ಆಸೆಗಳನ್ನು ನಿಷ್ಕರುಣ ಅಸಡ್ಡೆಯಿಂದ ತಿರಸ್ಕರಿಸುತ್ತದೆ ಎಂದಾದರೆ ಈ ಬದುಕಿಗೆ ಏನು ಅರ್ಥ? ಸಾವಿನಿಂದ ಶಪಿತವಾದ ಜೀವ ಸ್ವಹತ್ಯೆ ಮಾಡಿಕೊಳ್ಳದೇ ಬದುಕಿರಬೇಕಾದದ್ದಾದರೂ ಯಾಕೆ ಎಂಬುದೇ ಮೂಲಭೂತ ಪ್ರಶ್ನೆ ಎಂದು ಕಮೂ ಹೇಳುತ್ತಾನೆ. ಗುಡ್ಡದ ಬುಡದಿಂದ ಹಲ್ಲುಕಚ್ಚಿ ಪ್ರಯಾಸಪಟ್ಟು ಬಂಡೆಯೊಂದನ್ನು ದೂಡಿ ತುದಿ ಮುಟ್ಟಿಸಿ ಅದು ಉರುಳಿಬೀಳುವುದನ್ನು ಅಸಹಾಯಕತೆಯಲ್ಲಿ ನೋಡುವ, ಪುನರಪಿ ಬಂಡೆಯನ್ನು ಮೇಲಕ್ಕೆ ತಳ್ಳುವ ಸಿಸಿಫಸ್ ಪುರಾಣವೇ ಕಮೂವಿನ ಪ್ರಕಾರ ನಮ್ಮ ಜೀವನ. ಆದರೆ ಸಿಸಿಫಸ್-ಕಮೂ ಸಿನಿಕರಂತೆ ಕೈಚೆಲ್ಲುವುದಿಲ್ಲ. ಬಂಡೆಯನ್ನು ಮೇಲಕ್ಕೆ ದೂಡುವ ಅವಿರತ ಪ್ರಯಾಸ ಹಾಗೂ ಬಂಡೆ ಉರುಳಿ ಕೆಳಕ್ಕೆ ಬೀಳುವುದನ್ನು ನೋಡುತ್ತ ನಿಂತ ಅಸಹಾಯಕ ಸಾಕ್ಷಿತ್ವದ ನಡುವೆ ಸಂದು ಕಡಿಯುವ ಬೆಳ್ಳಿಯ ಗೆರೆಯೊಂದಿದೆ. ಇನ್ನೊಮ್ಮೆ ಬಂಡೆಯನ್ನು ಮೇಲಕ್ಕೆ ದೂಡಲು ಕೆಳಗಿಳಿಯುವ ಕ್ಷಿಪ್ರ ಬಿಡುವೊಂದಿದೆ. ಅದು ನಿರಾಳ ಕಾಲ. ಅದು ಶಾಪದಿಂದ ಕಸಿದ ನಮ್ಮದೇ ಪಾಲು. ಬಂಡೆಯ ನೂಕಾಟದ ನಡುವೆ ಅರ್ಥ ಹೀಗೆ ಹಠಾತ್ತನೆ ಜಿನುಗುವುದು. ಹಾಗಲ್ಲದೇ, ಪರರ ನೋವು ಸಂಕಟ ಸಾವುಗಳ ಸತತ ಧ್ಯಾನ ರಾಜಶೇಖರರಿಗೆ ಒದಗಲು ಸಾಧ್ಯವಿತ್ತೇ?
(ಎಚ್ ಪಟ್ಟಾಭಿರಾಮ ಸೋಮಯಾಜಿ
104ಸಿ, 4ನೇ ಅಡ್ಡರಸ್ತೆ, ಗಿರಿನಗರ
ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್
ದೇರೇಬೈಲ್ ಕೊಂಚಾಡಿ
ಮಂಗಳೂರು, 575008
ಫೋನ್:9448325705
ಇಮೆಯ್ಲ್:somayajihp@gmail.com)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂತರಂಗ
ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ
~ ಡಾ. ಸುಜಾತಾ ಚಲವಾದಿ
ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.
ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.
ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.
ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.
ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.
ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.
ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.
ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.
1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.
ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.
ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.
26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.
ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು
ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.
ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.
ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.
ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.
ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.
——————————————————————-
ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.
ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)
ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)
ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.
ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243




