Connect with us

ಲೋಕಾರೂಢಿ

ಅರ್ಥವ್ಯವಸ್ಥೆ ಗಂಭೀರ ಸ್ಥಗಿತತೆಯತ್ತ ಜಾರುತ್ತಿದೆ : ಮೋದಿ ಅಂಡ್ ಕೊ ಗೆ ಇದರ ಪರಿವೆಯೂ ಇಲ್ಲ

Published

on

  • ಸರಕಾರ ಅಂಕಿ-ಅಂಶಗಳಲ್ಲಿ ಏನೇ ಕಸರತ್ತು ಮಾಡಿದರೂ, 2019-20ರ ಹಣಕಾಸು ವರ್ಷದ ಜಿಡಿಪಿ ವೃದ್ಧಿದರ 5ಶೇ.ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇಲ್ಲ ಎಂದು ಈಗ ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ (ಎನ್‌ಎಸ್‌ಒ) ಹೇಳುತ್ತಿದೆ. ಇದು ಕಳೆದ 11 ವರ್ಷಗಳಲ್ಲೇ ಅತೀ ಕಡಿಮೆ ವೃದ್ಧಿದರ. ವಿವಿಧ ಹಣಕಾಸು ಸಂಸ್ಥೆಗಳ ಈ ಕುರಿತ ಅಂದಾಜುಗಳು ಇನ್ನೂ ಕೆಳಮಟ್ಟದಲ್ಲಿ ಇವೆ. ನಮ್ಮ ಮೇಲೀಗ ಒಂದು ಗಂಭೀರ ಆರ್ಥಿಕ ಸ್ಥಗಿತತೆಯ ಹೊರೆ ಬಿದ್ದಿದೆ. ಇದನ್ನು ನಿವಾರಿಸಿಕೊಳ್ಳಬೇಕಾದರೆ, ನವ-ಉದಾರವಾದದ ಒಪ್ಪಿಗೆಯನ್ನು ಲೆಕ್ಕಿಸದೆ, ಅದನ್ನು ಮೀರಿ ಬಹಳ ದೂರ ಹೋಗುವ ಒಂದು ಶಕ್ತಿಶಾಲೀ ಹಣಕಾಸು ಮಧ್ಯಪ್ರವೇಶವನ್ನು ಮಾಡಬೇಕಾಗುತ್ತದೆ. ಬೇಸರದ ಸಂಗತಿಯೆಂದರೆ ಮೋದಿ ಮತ್ತು ಕಂಪನಿಗೆ ಇದರ ಯೋಚನೆಯೂ ಇಲ್ಲ.

ಪ್ರೊ. ಪ್ರಭಾತ್ ಪಟ್ನಾಯಕ್
ಅನುವಾದ : ಕೆ.ವಿ

ಭಾರತೀಯ ಅರ್ಥವ್ಯವಸ್ಥೆಯನ್ನು ಕುರಿತ ಅಂಕಿ-ಅಂಶಗಳು ಅವನ್ನು ಅಂದಾಜು ಮಾಡುವ ವಿಧಾನಗಳಲ್ಲಿ ಮಾಡುತ್ತಿರುವ ಬದಲಾವಣೆಗಳಿಂದಾಗಿ ಹೆಚ್ಚೆಚ್ಚು ತಬ್ಬಿಬ್ಬುಗೊಳಿಸುವಂತದ್ದಾಗಿ ಬಿಡುತ್ತಿವೆ. ಅಲ್ಲದೆ, ಈ ಅಂಕಿ-ಅಂಶಗಳು ಅರ್ಥವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ತೋರಿಸಿದಾಗಲೆಲ್ಲ ಬಿಜೆಪಿ ಸರಕಾರ ಅದನ್ನು ಬಚ್ಚಿಟ್ಟು ಬಿಡುತ್ತದೆ. ಆದರೆ ಭಾರತದ ಅರ್ಥವ್ಯವಸ್ಥೆ ಒಂದು ಗಂಭೀರ ಸ್ಥಗಿತತೆಯ ಸ್ಥಿತಿಗೆ ಜಾರುತ್ತಿದೆ ಎಂಬುದನ್ನು ಕಾಣದಂತೆ ಮಾಡುವುದು ಯಾವುದರಿಂದಲೂ ಸಾಧ್ಯವಿಲ್ಲ.

ಈ ಹಣಕಾಸು ವರ್ಷದ 3ನೇ ತ್ರೈಮಾಸಿಕದ(ಅಕ್ಟೋಬರ್-ಡಿಸೆಂಬರ್) ಜಿಡಿಪಿ ಕಳೆದ ವರ್ಷದಲ್ಲಿ ಈ ಅವಧಿಯಲ್ಲಿನ ಬೆಳವಣಿಗೆಗೆ ಹೋಲಿಸಿದರೆ 4.7ಶೇ.ದಷ್ಟು ಮಾತ್ರ ಬೆಳೆದಿದೆ. ಎರಡನೇ ತ್ರೈಮಾಸಿಕದಲ್ಲಿ ಈ ಬೆಳವಣಿಗೆ ದರ 4.5ಶೇ. ಇತ್ತು. 2019-20ರ ಹಣಕಾಸು ವರ್ಷದ ಜಿಡಿಪಿ ವೃದ್ಧಿದರ 5ಶೇ.ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇಲ್ಲ ಎಂದು ಈಗ ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ (ಎನ್‌ಎಸ್‌ಒ)ಯ ನಂಬಿಕೆ. ವಿವಿಧ ಹಣಕಾಸು ಸಂಸ್ಥೆಗಳ ಈ ಕುರಿತ ಅಂದಾಜುಗಳು ಇನ್ನೂ ಕೆಳಮಟ್ಟದಲ್ಲಿ ಇವೆ.

5ಶೇ. ಎಂದೇ ಇಟ್ಟುಕೊಂಡರೂ, ಇದು ಕಳೆದ 11 ವರ್ಷಗಳಲ್ಲೇ ಅತೀ ಕಡಿಮೆ ವೃದ್ಧಿದರ. ಜಿಡಿಪಿಯನನು ಅಂದಾಜು ಮಾಡುವ ಹೊಸ ವಿಧಾನ ವೃದ್ಧಿದರವನ್ನು ಗಂಭೀರವಾಗಿ ಮೇಲಂದಾಜು ಮಾಡುತ್ತದೆ ಎಂಬುದೀಗ ಬಹಳ ಸ್ಪಷ್ಟವಾಗಿರುವ ಸಂಗತಿ. ನಿಜ ಹೇಳಬೇಕೆಂದರೆ, ಆರ್ಥಿಕ ಮಂದಗತಿ ಆರಂಭವಾಗುವ ಮೊದಲಿನ ಅವಧಿಯಲ್ಲಿ 7ಶೇ. ವೃದ್ಧಿದರ ಇತ್ತು ಎಂದು ಹೇಳಿಕೊಂಡಿದ್ದರೂ ನಿಜವಾದ ವೃದ್ಧಿದರ ಸುಮಾರು 4.5ಶೇ.ದಷ್ಟು ಇದ್ದಿರಬಹುದು ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರರೊಬ್ಬರು ಸೂಚಿಸಿದ್ದರು. ಇದರ ಅರ್ಥ,5ಶೇ. ಅಧಿಕೃತ ವೃದ್ಧಿದರ ವಾಸ್ತವವಾಗಿ ಅದಕ್ಕಿಂತ ಕಡಿಮೆ, ಬಹುಶಃ ಸುಮಾರು 3ರಿಂದ 3.5ಶೇ. ದಾಟಲಾರದ ದರವನ್ನು ಸೂಚಿಸುತ್ತಿರಬಹುದು. ಇದನ್ನು ಈ ಹಿಂದಿನ ದಿನಗಳಲ್ಲಿ ‘ಹಿಂದೂ ವೃದ್ಧಿ ದರ’ ಎಂದು ಕುಚೋದ್ಯ ಮಾಡಲಾಗುತ್ತಿತ್ತು.

ಹಿಂದುತ್ವ ಶಕ್ತಿಗಳ ಉಚ್ಛ್ರಾಯ ವೃದ್ಧಿದರವನ್ನೂ ಕೂಡ ಹಿಂದೂಕರಿಸಿದಂತೆ ಕಾಣುತ್ತದೆ! ಆದರೆ ಈ 3.5ಶೇ. ವೃದ್ಧಿ ಮತ್ತು ಆ ಹಳೆಯ ದಿನಗಳ 3.5ಶೇ.ದ ನಡುವೆ ಕೆಲವು ಮಹತ್ವದ ವ್ಯತ್ಯಾಸಗಳಿವೆ. ಅವುಗಳಲ್ಲಿ ಕನಿಷ್ಟ ಮೂರನ್ನು ಗಮನಿಸಲೇ ಬೇಕಾಗಿದೆ.

ಮೊದಲನೆಯದಾಗಿ, ಆ ಹಳೆಯ ದಿನಗಳ 3.5ಶೇ. ಜಿಡಿಪಿ ವೃದ್ಧಿದರದೊಂದಿಗೆ ಅದಕ್ಕಿಂತ ಬಹಳ ಹೆಚ್ಚಿನ ಉದ್ಯೋಗ ವೃದ್ಧಿ ದರಗಳು ಇರುತ್ತಿದ್ದವು. ಏಕೆಂದರೆ ಆಗ ಶ್ರಮವನ್ನು ಹೊರಹಾಕುವ ತಂತ್ರಜ್ಞಾನ-ಸಂರಚನಾ ಬದಲಾವಣೆಗಳನ್ನು ತರುವುದರ ಮೇಲೆ ನಿರ್ಬಂಧಗಳಿದ್ದವು.

ಎರಡನೆಯದಾಗಿ, ಆದಾಯ ವಿತರಣೆಯಲ್ಲಿನ ಅಸಮಾನತೆ ಈ ದಿನಗಳಲ್ಲಿ ಹೆಚ್ಚುತ್ತಿರುವಂತೆ ಆ ಕಾಲದಲ್ಲಿ ಇರಲಿಲ್ಲ. ನಿಜಸಂಗತಿಯೆಂದರೆ, ಪಿಕೆಟಿ ಮತ್ತು ಚಾನ್ಸೆಲ್ ಆದಾಯ ತೆರಿಗೆ ದತ್ತಾಂಶಗಳ ಆಧಾರದಲ್ಲಿ ಅಂದಾಜು ಮಾಡಿರುವಂತೆ 1980ರ ದಶಕದ ಆರಂಭದಲ್ಲಿ ಅತ್ಯಂತ ಮೇಲಿನ 1ಶೇ. ಕುಟುಂಬಗಳ ಪಾಲು ೬ಶೇ.ದಷ್ಟು ಕಡಿಮೆ ಮಟ್ಟದಲ್ಲಿತ್ತು. ಅದೀಗ 2013-14 ರವೇಳೆಗೆ 22ಶೇ.ಕ್ಕೆ ಜಿಗಿದಿದೆ. 1922ರಲ್ಲಿ ಭಾರತದಲ್ಲಿ ಆದಾಯ ತೆರಿಗೆಯನ್ನು ಆರಂಭಿಸಿದ ನಂತರ ಎಂದೂ ಅದು ಈ ಮಟ್ಟಕ್ಕೆ ಏರಿರಲಿಲ್ಲ.

ಮೂರನೆಯದಾಗಿ, ಕೃಷಿಯಲ್ಲಿ, ಅದರಲ್ಲೂ ಆಹಾರಧಾನ್ಯಗಳ ಗಮನಾರ್ಹ ವೃದ್ಧಿದರ ಒಟ್ಟಾರೆ ವೃದ್ಧಿದರವನ್ನು ಉಳಸಿಕೊಂಡು ಬರುತ್ತಿತ್ತು. ಈ ಮೂಲಕ ವಸಾಹತುಶಾಹೀ ಆಳ್ವಿಕೆಯ ಕೊನೆಯ ಅರ್ಧ ಶತಮಾನದಲ್ಲಿದ್ದ ತೀವ್ರ ಬರದ ಪ್ರವೃತ್ತಿ ಬದಲಾಗಿ ತಲಾ ಆಹಾರ ಧಾನ್ಯಗಳ ಉತ್ಪಾದನೆ ಮತ್ತು ಲಭ್ಯತೆ ಗಮನಾರ್ಹವಾಗಿ ಹೆಚ್ಚಿದ್ದವು. ತಲಾ ಲಭ್ಯತೆ 1900ರಲ್ಲಿ 200 ಕೆ.ಜಿ. ಇದ್ದದ್ದು ಸ್ವಾತಂತ್ರ್ಯದ ವೇಳೆಗೆ 140 ಕೆ.ಜಿ.ಗೆ ಇಳಿದಿತ್ತು. 1980ರ ದಶಕದ ವೇಳೆಗೆ ಅದು 180 ಕೆ.ಜಿ. ಬಳಿ ತಲುಪಿತ್ತು. ಆನಂತರ ಮತ್ತೆ ಇಳಿದಿದೆ.

ಬೇರೆ ಮಾತುಗಳಲ್ಲಿ ಹೇಳುವುದಾದರೆ, ಉದಾರೀಕರಣದ ಹಿಂದಿನ ಅವಧಿಯಲ್ಲಿ ಜಿಡಿಪಿ ವೃದ್ಧಿದರ ಕಡಿಮೆಯಿದ್ದರೂ, ವಿತರಣೆಯಲ್ಲಿನ ಅಸಮಾನತೆ ಕಡಿಮೆಯಿತ್ತು, ಮತ್ತು ಹಸಿವನ್ನು, ನವ-ಉದಾರವಾದ ಶಿಖರಕ್ಕೇರಿದ್ದ ಅವಧಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಶಮನ ಗೊಳಿಸಿತ್ತು. ಈಗ ಮಂದಗತಿಯನ್ನು ಕಾಣುತ್ತಿರುವಾಗಲಂತೂ ಹೇಳುವಂತೆಯೆ ಇಲ್ಲ.

2018-19ರಲ್ಲಿ ವೃದ್ಧಿ ದರ 6.1ಶೇ. ಎಂದು ಅಂದಾಜು ಮಾಡಲಾಗಿತ್ತು. ಇದಕ್ಕೆ ಹೋಲಿಸಿದರೆ 2019-20ರ ಮಂದಗತಿಯ ಬೆಳವಣಿಗೆಗೆ ಮುಖ್ಯವಾಗಿ ಕಾರಣ ಕೃಷಿಯೇತರ ವಲಯದಲ್ಲಿನ ಮಂದಗತಿ. ಕೃಷಿವಲಯದಲ್ಲಿನ ವೃದ್ಧಿ ದರ 2019-20ರಲ್ಲಿ ಹಿಂದಿನ ವರ್ಷದಲ್ಲಿ ಇದ್ದಷ್ಟೇ ಇರುತ್ತದೆ ಎಂದು ಅಂದಾಜು ಮಾಡಲಾಗಿದೆ. ಅಂದರೆ ಕಳೆದ ವರ್ಷ 2.88ಶೇ. ಇದ್ದರೆ ಈ ವರ್ಷ 2.9ಶೇ. ಇರಬಹುದು. ಅಂದರೆ ಸುಮಾರಾಗಿ ಸ್ಥಿರವಾಗಿದೆ. ಬೇರೆ ವಲಯಗಳಲ್ಲಿ ಮಾತ್ರ ವೃದ್ಧಿದರ ಮಂದಗತಿಗಿಳಿದಿದೆ, ಇದರಿಂದಾಗಿ ಒಟ್ಟಾರೆ ವೃದ್ಧಿದರ 5ಶೇ.ಕ್ಕೆ ಇಳಿಯಬಹುದೆಂದು ಹೇಳಲಾಗುತ್ತಿದೆ. ವಿಶೇಷವಾಗಿ ಎದ್ದು ಕಾಣುತ್ತಿರುವ ಸಂಗತಿಯೆಂದರೆ ಕೈಗಾರಿಕಾ ವೃದ್ಧಿ, ಅದರಲ್ಲೂ ತಯಾರಿಕಾ ವಲಯದ ಬೆಳವಣಿಗೆ ನಿಧಾನಗೊಳ್ಳುತ್ತಿದೆ.

ಸರಕಾರ ಕೈಗಾರಿಕಾ ವೃದ್ಧಿ ದರ ಸುಮಾರು 2ಶೇ.ದಷ್ಟಿರಬಹುದು ಎಂದು ನಿರೀಕ್ಷಿಸುತ್ತಿದೆ. ಆದರೆ ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ವಾಸ್ತವವಾಗಿ ವೃದ್ಧಿದರ ನಕಾರಾತ್ಮಕವಾಗಿತ್ತು. ಹೀಗಿರುವಾಗ 2ಶೇ. ವೃದ್ಧಿಯ ಸಂಭವವೂ ಬಹಳ ಕಡಿಮೆ. ಕೃಷಿ ವಲಯದ ವೃದ್ಧಿದರ ಬದಲಾಗದಿರುವಾಗ ಕೈಗಾರಿಕಾ ವಲಯದಲ್ಲಿ ಮಂದಗತಿ ಮೇಲ್ನೋಟಕ್ಕೆ ವಿಚಿತ್ರವೆನಿಸಬಹುದು. ಆದರೆ ಇದಕ್ಕೆ ಮೂರು ಮೂಲ ಕಾರಣಗಳಿವೆ.

ಒಂದು, ಕೃಷಿ ವೃದ್ಧಿ ದರ ಮತ್ತು ಗ್ರಾಮೀಣ ಬಳಕೆ ಖರ್ಚುಗಳ ವೃದ್ಧಿ ದರ ಎರಡೂ ಒಂದೇ ಅಲ್ಲ. ಕೃಷಿ ವೃದ್ಧಿ ದರ ಹೆಚ್ಚಿದ್ದಾಗಲೂ ಗ್ರಾಮೀಣ ಬಳಕೆ ಖರ್ಚುಗಳ ಏರಿಕೆಯಲ್ಲಿ ಮಂದಗತಿ ಕಾಣ ಬಹುದು. ಇದಕ್ಕೆ 2017-18 ಒಂದು ಒಳ್ಳೆಯ ಉದಾಹರಣೆ. ಅದು ಬಂಪರ್ ಬೆಳೆ ಬಂದ ವರ್ಷವಾಗಿತ್ತು. ಆದರೂ ರಾಷ್ಟ್ರೀಯ ಸ್ಯಾಂಪಲ್ ಸರ್ವೆ ದತ್ತಾಂಶಗಳ ಪ್ರಕಾರ ಆ ವರ್ಷ ಗ್ರಾಮೀಣ ಭಾರತದಲ್ಲಿ ತಲಾ ನಿಜ ವೆಚ್ಚ 2011-12ಕ್ಕೆ ಹೋಲಿಸಿದಾಗ ಬಹಳ ಕಮ್ಮಿಯಿತ್ತು, ಸುಮಾರು ೮ಶೇ.ದಷ್ಟು. ಇದು ಕೃಷಿ ವೃದ್ಧಿ ಅಂದಾಜುಗಳಲ್ಲಿನ ದೌರ್ಬಲ್ಯಗಳಿಂದ ಆಗಿರಬಹುದು, ಅಥವ ಹೆಚ್ಚು ಮಹತ್ವದ್ದೆಂದರೆ, ರೈತರು ಮತ್ತು ಕೃಷಿ ಕೂಲಿಕಾರರ ಜೀವನ ವೆಚ್ಚ ಸೂಚ್ಯಂಕ ನಿಜ ಚಿತ್ರವನ್ನು ಇದ್ದುದಕ್ಕಿಂತ ಬಹಳ ಕೆಳಗಿನ ಮಟ್ಟದಲ್ಲಿ ಲೆಕ್ಕ ಹಾಕಿರುವುದರಿಂದಾಗಿ ಇರಬಹುದು. ಏಕೆಂದರೆ ಅದು ಶಿಕ್ಷಣ ಮತ್ತು ಆರೋಗ್ಯಪಾಲನೆಯ ಖಾಸಗೀಕರಣದಿಂದಾಗುವ ವೆಚ್ಚದ ಹೆಚ್ಚಳದ ಪರಿಣಾಮಗಳನ್ನು ಗಮನಕ್ಕೆ ತಗೊಂಡಿಲ್ಲ.

ಎರಡು, ಒಂದು ನವ-ಉದಾರವಾದಿ ಅರ್ಥವ್ಯವಸ್ಥೆಯಲ್ಲಿ ಹೊರಗಣ ಮಾರುಕಟ್ಟೆಯ ಪಾತ್ರ ಆಂತರಿಕ ಮಾರುಕಟ್ಟೆಗೆ ಹೋಲಿಸಿದರೆ ಬಹಳಷ್ಟು ಹೆಚ್ಚುತ್ತದೆ. ಏಕೆಂದರೆ, ಅಂತರ್ರಾಷ್ಟ್ರೀಯ ಸ್ಪರ್ಧಾತ್ಮಕತೆಯನ್ನು ಉತ್ತಮ ಪಡಿಸುವುದಕ್ಕಾಗಿ ಕೂಲಿ/ಸಂಬಳಗಳನ್ನು ಕೆಳಮಟ್ಟದಲ್ಲಿ ಇಡುವುದರ ಪರಿಣಾಮವಾಗಿ ಆಂತರಿಕ ಮಾರುಕಟ್ಟೆಯ ಮೇಲೆ ಉದ್ದೇಶಪೂರ್ವಕವಾಗಿಯೇ ನಿರ್ಬಂಧ ಉಂಟಾಗುತ್ತದೆ. ಇದು ಭಾರತೀಯ ಅರ್ಥವ್ಯವಸ್ಥೆಯಲ್ಲಿ ಚಟುವಟಿಕೆಯ ಮಟ್ಟದ ಮೇಲೆ ವಿಶ್ವ ಆರ್ಥಿಕ ಬಿಕ್ಕಟ್ಟು ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ದಾರಿ ಒದಗಿಸುತ್ತದೆ. ರಫ್ತು ವೃದ್ಧಿ ನಿಜವಾಗಿಯೂ ನಿಧಾನಗೊಂಡಿದೆ. ಇದು ಕೈಗಾರಿಕಾ ವಲಯವೂ ಸೇರಿದಂತೆ ಒಟ್ಟು ಅರ್ಥ ವ್ಯವಸ್ಥೆಯ ಮೇಲೆ ಹಲವಾರು ರೀತಿಗಳಲ್ಲಿ ಪರಿಣಾಮ ಬೀರಿದೆ.

ಇಲ್ಲಿ ಭಾರತದ ಅರ್ಥವ್ಯವಸ್ಥೆಯ ಒಂದು ವಿಲಕ್ಷಣತೆಯನ್ನು ಗಮನಿಸಬೇಕು. ಜಾಗತಿಕ ಸರಕು ಮತ್ತು ಬಂಡವಾಳ ಹರಿವಿಗೆ ತನ್ನನ್ನು ‘ತೆರೆದು’ಕೊಳ್ಳುವ ಮೂಲಕ ಭಾರತದ ಹಲವಾರು ಸೇವಾವಲಯದ ಉತ್ಪನ್ನಗಳ, ವಿಶೇಷವಾಗಿ ಐಟಿ-ಸಂಬಂಧಿತ ಸೇವೆಗಳ ರಫ್ತುಗಳು ಹೆಚ್ಚುವುದು ನಿಜವಾಗಿಯೂ ಸಾಧ್ಯವಾಗಿದೆ. ಆದರೆ ಕೈಗಾರಿಕಾ ವಲಯಕ್ಕೆ ಸಂಬಂಧಿಸಿದಂತೆ ಈ ರೀತಿ ‘ತೆರೆದಿಟ್ಟಿದ್ದ’ರಿಂದ ಭಾರತೀಯ ಅರ್ಥವ್ಯವಸ್ಥೆಗೆ ಯಾವುದೇ ನಿವ್ವಳ ಪ್ರಯೋಜನ ಆಗಿಲ್ಲ, ತದ್ವಿರುದ್ಧವಾಗಿ, ನಿವ್ವಳವಾಗಿ ನಕಾರಾತ್ಮಕ ಪರಿಣಾಮವೇ ಉಂಟಾಗಿರಬಹುದು. ನಿಜ ಹೇಳಬೇಕೆಂದರೆ ಕೈಗಾರಿಕಾ ವೃದ್ಧಿದರ ಇಡೀ ನವ-ಉದರವಾದೀ ಅವಧಿಯಲ್ಲಿ, ಅದಕ್ಕೆ ಮೊದಲಿದ್ದ ನಿರ್ಬಂಧಗಳ ಅವಧಿಗಿಂತ ಹೆಚ್ಚೇನೂ ಇರಲಿಲ್ಲ.

ಭಾರತೀಯ ಕೈಗಾರಿಕೆಗಳಿಗೆ ಆಂತರಿಕ ಮಾರುಕಟ್ಟೆಯಲ್ಲಿ, ಪೂರ್ವ ಏಷ್ಯಾದ, ಅದರಲ್ಲೂ ಚೀನಾದ ಸ್ಪರ್ಧೆಯನ್ನು ಎದುರಿಸಿ ನಿಲ್ಲಲು ಕಷ್ಟವೆನಿಸಿದ್ದು ಒಂದೆಡೆಯಾದರೆ, ರಫ್ತು ಮಾರುಕಟ್ಟೆಯಲ್ಲೂ ಬಹಳೇನೂ ಮುಂದೊತ್ತಲು ಆಗಲಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅರ್ಥವ್ಯವಸ್ಥೆಯನ್ನು ತೆರೆದಿಟ್ಟ ಪರಿಣಾಮವಾಗಿ ಕೆಲವು ಸೇವೆಗಳಿಗೆ ಉತ್ತೇಜನೆ ಸಿಕ್ಕಿದರೂ, ಕೈಗಾರಿಕಾ ಬೆಳವಣಿಗೆಯನ್ನು ದಬಾಯಿಸಿಟ್ಟಂತಾಯಿತು.

ಈಗ ನವ-ಉದಾರವಾದಕ್ಕೆ ಮುಂದೆ ದಾರಿಗಾಣದೆ ಜಾಗತಿಕ ಆರ್ಥಿಕ ವ್ಯವಸ್ಥೆ ಒಂದು ಮಂದಗತಿಯ ಅವಧಿಯನ್ನು ಪ್ರವೇಸಿಸಿರುವಾಗ, ಈ ಕೈಗಾರಿಕಾ ದಬಾವಣೆ, ಒಂದು ಕೈಗಾರಿಕಾ ಹಿನ್ನಡೆಯಾಗಿ ಪರಿವರ್ತನೆಗೊಂಡಿದೆ, ಅತ್ತ ಸೇವಾವಲಯಕ್ಕಿದ್ದ ಉತ್ತೇಜನೆ ಕೊನೆಗೊಳ್ಳುತ್ತಿದೆ. ಇದು ಒಟ್ಟು ಅರ್ಥವ್ಯವಸ್ಥೆಯನ್ನು ಒಂದು ಸುದೀರ್ಘವಾದ ಸ್ಥಗಿತತೆಯ ಅವಧಿಯತ್ತ ನೂಕುತ್ತಿದೆ. ಇಲ್ಲಿಯೇ ಕೈಗಾರಿಕಾ ಸ್ಥಗಿತತೆಯ ಮೂರನೆಯ ಅಂಶ ಕೆಲಸ ಮಾಡಲಾರಂಭಿಸಿರುವುದು. ಇದು ಹೂಡಿಕೆಯಲ್ಲಿ ಕಡಿತಕ್ಕೆ ಸಂಬಂಧಪಟ್ಟ ಅಂಶ. ಈ ಹೂಡಿಕೆ ಇಳಿಕೆ ಕೈಗಾರಿಕಾ ಸ್ಥಗಿತತೆಯ ಕಾರಣವೂ ಹೌದು, ಪರಿಣಾಮವೂ ಹೌದು. ಈ ಹೂಡಿಕೆ ಕಡಿತ ಬಂಡವಾಳ ಸರಕು ವಲಯವನ್ನಂತೂ ಬಹಳವಾಗಿ ತಟ್ಟಿದೆ.

ಭಾರತದ ಅರ್ಥವ್ಯವಸ್ಥೆಗೆ ಹೇಗೆ ಮತ್ತೆ ಜೀವ ತುಂಬುವುದು ಎಂಬುದರ ಒಂದೇ ಒಂದು ಹೊಳಹು ಕೂಡ ಬಿಜೆಪಿ ಸರಕಾರಕ್ಕೆ ಇಲ್ಲ ಎಂದು ಬೇರೆ ಹೇಳಬೇಕಾಗಿಲ್ಲ. ಅದು ಕೊಟ್ಟ ಕಾರ್ಪೊರೇಟ್ ತೆರಿಗೆಗಳ ಕಡಿತ, ಮೊದಲೇ ನಿರೀಕ್ಷಿಸದಂತೆ, ಖಾಸಗಿ ಕಾರ್ಪೊರೇಟ್ ಹೂಡಿಕೆಯಲ್ಲಿ ಒಂದಿನಿತೂ ವ್ಯತ್ಯಾಸವನ್ನು ತಂದಿಲ್ಲ. ಏಕೆಂದರೆ, ಇಂತಹ ಹೂಡಿಕೆಗಳು ಮಾರುಕಟ್ಟೆಯ ಬೆಳವಣಿಗೆ ಎಷ್ಟರ ಮಟ್ಟಿಗೆ ಆಗುತ್ತದೆ ಎಂಬ ನಿರೀಕ್ಷೆಯನ್ನು ಅವಲಂಬಿಸಿರುತ್ತವೆ. ಮಾರುಕಟ್ಟೆಯ ವೃದ್ಧಿಯನ್ನು ಚುರುಕುಗೊಳಿಸದೇ ಇರುವ ವರೆಗೆ, ಎಷ್ಟೇ ತೆರಿಗೆ ಕಡಿತಗಳನ್ನೂ ಕೊಟ್ಟರೂ, ಹೆಚ್ಚಿನ ಹೂಡಿಕೆಗಳೇನೂ ಆಗುವುದಿಲ್ಲ. ತದ್ವಿರುದ್ಧವಾಗಿ, ಇಂತಹ ಕಡಿತಗಳಿಂದಾಗಿ ಹಣಕಾಸು ಕೊರತೆಯ ಗುರಿಯನ್ನು ತಲುಪುವುದಕ್ಕಾಗಿ ಸರಕಾರದ ವೆಚ್ಚಗಳಲ್ಲಿ ಇಳಿಕೆಯಾದರೆ, ಆಗ ಉತ್ಪಾದನಾ ಸಾಮರ್ಥ್ಯದಬಳಕೆಯೂ ಇಳಿಯುತ್ತದೆ, ಖಾಸಗಿ ಕಾರ್ಪೊರೇಟ್ ಹೂಡಿಕೆಗಳೂ ಇಂತಹ ಕಡಿತಗಳಿಂದಾಗಿ ಇಳಿಯುತ್ತವೆ.

ಅದರ ಇತರ ಕ್ರಮಗಳು, ಜಿಎಸ್‌ಟಿ ದರಗಳಲ್ಲಿ ಕೈಯಾಡಿಸುವುದು, ಮತ್ತು ಮೇಕ್ ಇನ್ ಇಂಡಿಯಾ ಪ್ರಚಾರ ಕೂಡ ಅಷ್ಟೇ ದೋಷಪೂರ್ಣವಾಗಿವೆ. ಇದರಿಂದೇನೂ ನೆರವು ಸಿಗುವುದಿಲ್ಲ. ಮತ್ತು ಇದರಿಂದ ರೆವಿನ್ಯೂ ಆದಾಯಗಳು ಕಡಿಮೆಯಾದರೆ ಮತ್ತು ಅದರಿಂದಾಗಿ, ಮತ್ತೆ ಹಣಕಾಸು ಕೊರತೆಯ ಗುರಿಯನ್ನು ತಲುಪಲಿಕ್ಕಾಗಿ ವೆಚ್ಚಗಳಲ್ಲಿ ಕಡಿತವಾದರಂತೂ, ನೆರವಿನ ಬದಲು ತೊಂದರೆಯೇ ಉಂಟಾಗುತ್ತದೆ.

ಇನ್ನು, ‘ಮೇಕ್ ಇನ್ಇಂಡಿಯಾ’ದ ಬಗ್ಗೆ ಹೇಳುವುದಾದರೆ, ಜಾಗತಿಕ ಅರ್ಥಿಕ ಬಿಕ್ಕಟ್ಟಿನಿಂದಾಗಿ ಹೆಚ್ಚೇನೂ ಹೂಡಿಕೆಗಳು ನಡೆಯದೇ ಇರುವಾಗ, ಭಾರತದೊಳಕ್ಕೆ ಹೆಚ್ಚಿನ ಹೂಡಿಕೆಗಳನ್ನು ಪಡೆಯುವ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಈಗ ಸಿಎಎ ಮತ್ತು ಎನ್‌ಆರ್‌ಸಿ ಉಂಟು ಮಾಡಿರುವ ಸಾರ್ವತ್ರಿಕ ಸಾಮಾಜಿಕ ಅಸಂತೃಪ್ತಿ, ಅದಕ್ಕೂ ಮೇಲಾಗಿ ಮುಸ್ಲಿಮರ ವಿರುದ್ಧ ಹತ್ಯಾಕಾಂಡ, ಇಂತಹ ಹೂಡಿಕೆಗಳನ್ನು ಆಕರ್ಷಿಸುವ ಬದಲು, ಹೊಡೆದೋಡಿಸುತ್ತದಷ್ಟೇ.

(‘ಜನಶಕ್ತಿ’ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ

Published

on

ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ಜವಾಬ್ದಾರಿಯನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿದೆ.

ಈ ನೇಮಕ ಕೇವಲ ಸಂಘಟನಾತ್ಮಕ ಬದಲಾವಣೆಯಲ್ಲ. ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ದಿಕ್ಕು, ಪಕ್ಷದ ಒಳಾಂಗಣ ಸಮತೋಲನ ಮತ್ತು ಭವಿಷ್ಯದ ಚುನಾವಣಾ ತಂತ್ರಗಳಿಗೆ ಇದು ಪ್ರಮುಖ ಸೂಚನೆಯಾಗಿದೆ. ಹಲವು ದಶಕಗಳ ರಾಜಕೀಯ ಅನುಭವ, ಸಂಘಟನಾ ಕೌಶಲ್ಯ ಮತ್ತು ಹೈಕಮಾಂಡ್‌ಗೆ ನಿಕಟ ಸಂಪರ್ಕ ಹೊಂದಿರುವ ಹರಿಪ್ರಸಾದ್ ಅವರು ಈಗ ರಾಜ್ಯ ಕಾಂಗ್ರೆಸ್‌ನ ನೂತನ ಸಾರಥಿಯಾಗಿ ಹೊರಹೊಮ್ಮಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ

ಬಿ.ಕೆ. ಹರಿಪ್ರಸಾದ್ ಅವರು 1954ರ ಜುಲೈ 29ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎ. ಕೆಂಪಯ್ಯ ಹಾಗೂ ತಾಯಿ ಕೆ. ಗುಣಾವತಿ. ಬಾಲ್ಯದಿಂದಲೇ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳತ್ತ ಆಸಕ್ತಿ ಹೊಂದಿದ್ದ ಅವರು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಯೇ ಕಾಂಗ್ರೆಸ್ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡ ಅವರು ಮುಂದೆ ಪೂರ್ಣಾವಧಿ ರಾಜಕಾರಣಿಯಾಗಿ ಬೆಳೆದರು.

ವಿದ್ಯಾರ್ಥಿ ರಾಜಕಾರಣದಿಂದ ರಾಷ್ಟ್ರೀಯ ಮಟ್ಟದ ನಾಯಕತ್ವದವರೆಗೆ

ಹರಿಪ್ರಸಾದ್ ಅವರ ರಾಜಕೀಯ ಬದುಕು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳಿಂದ ಆರಂಭವಾಯಿತು. ಸಂಘಟನಾ ರಾಜಕಾರಣದಲ್ಲಿ ತೋರಿದ ಸಾಮರ್ಥ್ಯದಿಂದ ಅವರು ಶೀಘ್ರದಲ್ಲೇ ಪಕ್ಷದ ಹಿರಿಯ ನಾಯಕರ ಗಮನ ಸೆಳೆದರು.

ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ಹಲವು ರಾಜ್ಯಗಳ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಹೈಕಮಾಂಡ್‌ನೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನಾಯಕರಲ್ಲಿ ಹರಿಪ್ರಸಾದ್ ಪ್ರಮುಖರು ಎಂದು ಪರಿಗಣಿಸಲಾಗುತ್ತದೆ.

ಬಿ.ಕೆ. ಹರಿಪ್ರಸಾದ್ ಅವರು ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1990ರಿಂದಲೇ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಬಂದಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಹಲವು ವಿಷಯಗಳ ಬಗ್ಗೆ ಧ್ವನಿ ಎತ್ತಿದ ಅವರು ಸಂಸತ್ತಿನ ಚರ್ಚೆಗಳಲ್ಲಿ ಗಮನ ಸೆಳೆದಿದ್ದರು.

ಅವರು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪೈಪೋಟಿ ನಡೆಸಿದ್ದರು. ಸೋಲು ಕಂಡಿದ್ದರೂ ರಾಷ್ಟ್ರೀಯ ರಾಜಕೀಯದಲ್ಲಿ ಅವರ ಸ್ಥಾನಮಾನ ಮತ್ತಷ್ಟು ಬಲವತ್ತಾಯಿತು.

1999ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಜಯ ಸಾಧಿಸಲು ಸಾಧ್ಯವಾಗದಿದ್ದರೂ ಅವರು ಕಾಂಗ್ರೆಸ್‌ನ ಪ್ರಮುಖ ಮುಖವಾಗಿ ಗುರುತಿಸಿಕೊಂಡರು.

ಸಂಘಟನಾ ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಕಾರಣ, ಚುನಾವಣಾ ಗೆಲುವಿಗಿಂತ ಪಕ್ಷ ನಿರ್ಮಾಣದಲ್ಲಿ ಅವರ ಪಾತ್ರವೇ ಹೆಚ್ಚು ಗಮನ ಸೆಳೆಯಿತು.

ಕಾಂಗ್ರೆಸ್ ಸಂಘಟನೆಯಲ್ಲಿ ‘ಟಾಸ್ಕ್ ಮಾಸ್ಟರ್’

ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ಅವರನ್ನು ಸಂಘಟನಾ ತಜ್ಞ ಎಂದು ಕರೆಯಲಾಗುತ್ತದೆ. ಪಕ್ಷ ಎದುರಿಸಿದ ಸಂಕಷ್ಟದ ಸಂದರ್ಭಗಳಲ್ಲಿ ಹಲವು ರಾಜ್ಯಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘಟನೆಯನ್ನು ಬಲಪಡಿಸಿದ ಅನುಭವ ಅವರಿಗೆ ಇದೆ.

ಇತ್ತೀಚಿನ ಅವಧಿಯಲ್ಲಿ ಅವರು ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ರಾಜಕೀಯದ ಸೂಕ್ಷ್ಮ ಸಮೀಕರಣಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸುವ ಶೈಲಿ ಅವರ ವಿಶೇಷತೆ ಎಂದು ಪಕ್ಷದ ನಾಯಕರು ಹೇಳುತ್ತಾರೆ.

ಕರ್ನಾಟಕ ಕಾಂಗ್ರೆಸ್‌ನಲ್ಲಿ ಹರಿಪ್ರಸಾದ್ ಅವರು ಹಲವು ದಶಕಗಳಿಂದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಸಂದರ್ಭದಲ್ಲೂ ಅವರು ಸಮತೋಲನ ಸಾಧಿಸುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರು, 2022 ರಿಂದ 2023ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ನೀತಿಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಮೂಲಕ ಅವರು ಗಮನ ಸೆಳೆದಿದ್ದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ

2026ರಲ್ಲಿ ಕರ್ನಾಟಕ ರಾಜಕೀಯದಲ್ಲಿ ನಡೆದ ನಾಯಕತ್ವ ಬದಲಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡರು. ಇದರ ಪರಿಣಾಮವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪಕ್ಷದೊಳಗೆ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದರೂ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿತು.

ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ಸಂಘಟನಾ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಿದೆ. ಪಕ್ಷದ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಹರಿಪ್ರಸಾದ್ ಅವರ ಅನುಭವ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಿಂದೆ ಹಲವು ರಾಜಕೀಯ ಕಾರಣಗಳಿವೆ. ಮೊದಲನೆಯದಾಗಿ, ಅವರು ಯಾವುದೇ ಒಂದು ಗುಂಪಿಗೆ ಸೀಮಿತವಾಗದ ನಾಯಕ ಎಂಬ ಚಿತ್ರಣ ಹೊಂದಿದ್ದಾರೆ. ಎರಡನೆಯದಾಗಿ, ಸಂಘಟನಾ ಅನುಭವ ಅಪಾರವಾಗಿದೆ. ಮೂರನೆಯದಾಗಿ, ಹೈಕಮಾಂಡ್‌ಗೆ ಅತ್ಯಂತ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು. ನಾಲ್ಕನೆಯದಾಗಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಾಮರ್ಥ್ಯ ಅವರಿಗಿದೆ ಎಂದು ಕಾಂಗ್ರೆಸ್ ನಾಯಕತ್ವ ನಂಬಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅವರ ಮುಂದಿರುವ ಸವಾಲುಗಳು ಸಣ್ಣದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸಂಘಟನೆಯನ್ನು ಸದೃಢವಾಗಿಡುವುದು ದೊಡ್ಡ ಜವಾಬ್ದಾರಿ. ಕಾರ್ಯಕರ್ತರ ಅಸಮಾಧಾನ, ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡ, ಪ್ರಾದೇಶಿಕ ಸಮೀಕರಣಗಳು ಮತ್ತು ಜಾತಿ ಆಧಾರಿತ ರಾಜಕೀಯ ಬೇಡಿಕೆಗಳನ್ನು ಸಮತೋಲನಗೊಳಿಸಬೇಕಾಗಿದೆ.

ಇದರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಸಂಘಟನೆಯನ್ನು ನಿರಂತರ ಚಟುವಟಿಕೆಯಲ್ಲಿ ಇರಿಸುವುದು ಅವರ ಪ್ರಮುಖ ಗುರಿಯಾಗಲಿದೆ.

ಹರಿಪ್ರಸಾದ್ ಅವರು ಹೆಚ್ಚು ಪ್ರಚಾರಪ್ರಿಯ ರಾಜಕಾರಣಿಯಲ್ಲ. ಸಂಘಟನೆಯೊಳಗೆ ಕೆಲಸ ಮಾಡುವ ನಾಯಕ ಎಂಬ ಹೆಗ್ಗಳಿಕೆ ಅವರಿಗೆ ಇದೆ. ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಮತ್ತು ತಾಳ್ಮೆಯ ರಾಜಕೀಯ ಅವರ ಕಾರ್ಯಶೈಲಿಯ ಮುಖ್ಯ ಲಕ್ಷಣಗಳು.

ಅವರ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳು ಬಂದಿದ್ದರೂ ಪಕ್ಷದ ಮೇಲಿನ ನಿಷ್ಠೆ ಪ್ರಶ್ನಾತೀತವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ.

ರಾಜಕೀಯದ ಜೊತೆಗೆ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿರುವ ಹರಿಪ್ರಸಾದ್ ಅವರು ಉಷಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಬ್ಬ ಪುತ್ರಿಯಿದ್ದಾರೆ. ಕುಟುಂಬ ಜೀವನವನ್ನು ರಾಜಕೀಯದಿಂದ ಸಾಧ್ಯವಾದಷ್ಟು ದೂರ ಇಡುವ ನಾಯಕ ಎಂಬ ಹೆಸರನ್ನು ಅವರು ಗಳಿಸಿದ್ದಾರೆ.

ಭವಿಷ್ಯದ ರಾಜಕೀಯ ಪಾತ್ರ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಹರಿಪ್ರಸಾದ್ ಅವರ ರಾಜಕೀಯ ಜೀವನದ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮನ್ವಯ ಸಾಧಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ತಂತ್ರ ರೂಪಿಸುವುದು, ಕಾರ್ಯಕರ್ತರ ಬಲವರ್ಧನೆ, ಚುನಾವಣಾ ಸಿದ್ಧತೆ ಮತ್ತು ಹೈಕಮಾಂಡ್‌ನೊಂದಿಗೆ ಸಮನ್ವಯ ಸಾಧಿಸುವ ಪ್ರಮುಖ ಹೊಣೆಗಾರಿಕೆ ಅವರ ಮೇಲಿದೆ. ಈ ಎಲ್ಲ ಸವಾಲುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ಭವಿಷ್ಯ ಬಹುಮಟ್ಟಿಗೆ ಅವಲಂಬಿತವಾಗಿದೆ.

ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಸಂಘಟನೆಯಲ್ಲಿ ದುಡಿದಿರುವ ಬಿ.ಕೆ. ಹರಿಪ್ರಸಾದ್ ಇಂದು ಕರ್ನಾಟಕ ಕಾಂಗ್ರೆಸ್‌ನ ಅತ್ಯುನ್ನತ ಸಂಘಟನಾ ಹುದ್ದೆಯನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿ ರಾಜಕಾರಣದಿಂದ ಆರಂಭವಾದ ಅವರ ಪಯಣ ರಾಜ್ಯಸಭೆ, ರಾಷ್ಟ್ರೀಯ ಸಂಘಟನೆ, ವಿಧಾನ ಪರಿಷತ್ ಮತ್ತು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನವರೆಗೆ ತಲುಪಿದೆ.

ಅನುಭವ, ಸಂಘಟನಾ ಕೌಶಲ್ಯ, ರಾಜಕೀಯ ಪ್ರೌಢಿಮೆ ಮತ್ತು ಪಕ್ಷದ ಮೇಲಿನ ನಿಷ್ಠೆ ಎಂಬ ನಾಲ್ಕು ಅಂಶಗಳು ಅವರ ರಾಜಕೀಯ ವ್ಯಕ್ತಿತ್ವದ ಪ್ರಮುಖ ಗುರುತುಗಳಾಗಿವೆ. ಕರ್ನಾಟಕ ಕಾಂಗ್ರೆಸ್ ಹೊಸ ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ, ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವ ಪಕ್ಷಕ್ಕೆ ಹೊಸ ಶಕ್ತಿ ತುಂಬುತ್ತದೆಯೇ ಎಂಬುದನ್ನು ರಾಜ್ಯದ ರಾಜಕೀಯ ಕುತೂಹಲದಿಂದ ಗಮನಿಸುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಮುನ್ನೋಟ: ಜೀವನಕ್ರಮವಾಗಿ ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವವು ಕೇವಲ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲ; ಅದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವ ಒಂದು ಉದಾತ್ತ ಜೀವನಕ್ರಮ. ಸೈದ್ಧಾಂತಿಕವಾಗಿ ಪ್ರಜಾಪ್ರಭುತ್ವವು ‘ನಿಷ್ಪಕ್ಷಪಾತ’ ಮನೋಭಾವವನ್ನು ಪ್ರತಿಪಾದಿಸುತ್ತದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವು ಕೇವಲ ಕಾಗದದ ಮೇಲಿನ ವಾಕ್ಯವಾಗದೆ, ಹುಟ್ಟಿನಿಂದ ಹೇರಲ್ಪಟ್ಟ ಶ್ರೇಣೀಕೃತ ವ್ಯವಸ್ಥೆಯ ಗೋಡೆಗಳನ್ನು ಕೆಡವುವ ಶಕ್ತಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ದೇಶದ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನಕ್ಕೇರಲು ಸಾಧ್ಯವಿರುವುದು ಈ ವ್ಯವಸ್ಥೆಯ ಅತಿದೊಡ್ಡ ಯಶಸ್ಸು.

ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಬಲ

ಸಾಮಾಜಿಕ ನ್ಯಾಯವು ಪ್ರಜಾಪ್ರಭುತ್ವದ ಅಂತರಾತ್ಮವಿದ್ದಂತೆ. ಐತಿಹಾಸಿಕವಾಗಿ ಶೋಷಣೆಗೆ ಒಳಗಾದ ಸಮುದಾಯಗಳಿಂದ ಬಂದ ವ್ಯಕ್ತಿಗಳು ನಾಯಕತ್ವದ ಸ್ಥಾನಕ್ಕೇರುವುದು ಹೊರನೋಟಕ್ಕೆ ಒಂದು ಪವಾಡದಂತೆ ಭಾಸವಾಗಬಹುದು. ಆದರೆ, ವಾಸ್ತವದಲ್ಲಿ ಇದು ಸಂವಿಧಾನ ನೀಡಿರುವ ‘ಮತದಾನದ ಹಕ್ಕು’ ಮತ್ತು ‘ಪ್ರಾತಿನಿಧ್ಯದ ಅವಕಾಶ’ಗಳ ಫಲಶೃತಿಯಾಗಿದೆ. ಪ್ರಜಾಪ್ರಭುತ್ವವು ಕೇವಲ ಬಹುಮತದ ಆಡಳಿತವಲ್ಲ, ಬದಲಿಗೆ ಅಲ್ಪಸಂಖ್ಯಾತ ಮತ್ತು ದಮನಿತ ಧ್ವನಿಗಳಿಗೂ ನೀತಿ ನಿರೂಪಣೆಯಲ್ಲಿ ಸಮಾನ ವೇದಿಕೆ ಕಲ್ಪಿಸುವ ಒಳಗೊಳ್ಳುವಿಕೆಯ (Inclusion) ಪ್ರಕ್ರಿಯೆಯಾಗಿದೆ. ಅಧಿಕಾರವು ಕೆಲವೇ ಜನರ ಕೈಯಲ್ಲಿ ಕೇಂದ್ರಿಕೃತವಾಗದೆ, ವಿಕೇಂದ್ರೀಕರಣದ ಮೂಲಕ ಸಾಮಾನ್ಯ ಜನರಿಗೂ ತಲುಪಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳುತ್ತದೆ.

ನಾಯಕತ್ವದ ನೈತಿಕತೆ ಮತ್ತು ಸಾಂವಿಧಾನಿಕ ಬದ್ಧತೆ

ಪ್ರಜಾಪ್ರಭುತ್ವದ ಅತ್ಯಂತ ನಿರ್ಣಾಯಕ ಅಂಶವೆಂದರೆ ಅಧಿಕಾರವನ್ನು ಪಡೆದವರ ನೈತಿಕ ನಡೆ. ಪ್ರಜಾಪ್ರಭುತ್ವದ ಒತ್ತಾಸೆಯಿಂದ ಅವಕಾಶ ಮತ್ತು ಅಧಿಕಾರವನ್ನು ಪಡೆಯುವ ಪ್ರತಿಯೊಬ್ಬರೂ ಪ್ರಜಾಸತ್ತಾತ್ಮಕ ನಿಲುವುಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುವ ನೈತಿಕತೆಯನ್ನು ಹೊಂದಿರಬೇಕಾಗುತ್ತದೆ. ಅಧಿಕಾರವು ಒಂದು ಸೌಲಭ್ಯವಲ್ಲ, ಅದೊಂದು ಜವಾಬ್ದಾರಿ. ಯಾವ ವ್ಯವಸ್ಥೆಯು ಒಬ್ಬ ವ್ಯಕ್ತಿಯನ್ನು ಸಾಮಾನ್ಯ ಸ್ಥಿತಿಯಿಂದ ನಾಯಕತ್ವದ ಸ್ಥಾನಕ್ಕೆ ಏರಿಸುತ್ತದೆಯೋ, ಅದೇ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಆ ನಾಯಕನ ಪರಮ ಧರ್ಮ. ಸಾಂವಿಧಾನಿಕ ಆಶಯಗಳಿಗೆ ದ್ರೋಹ ಬಗೆಯದೆ, ವೈಯಕ್ತಿಕ ಹಿತಾಸಕ್ತಿಗಿಂತ ಜನಹಿತವೇ ದೊಡ್ಡದು ಎಂಬ ನಿಲುವು ತಳೆದಾಗ ಮಾತ್ರ ಅಧಿಕಾರಕ್ಕೆ ಸಾರ್ಥಕತೆ ದೊರೆಯುತ್ತದೆ.

ಐತಿಹಾಸಿಕ ಪ್ರೇರಣೆ: ಅಬ್ರಹಾಂ ಲಿಂಕನ್ ಎಂಬ ಮಾದರಿ

ಪ್ರಜಾಪ್ರಭುತ್ವದ ಇತಿಹಾಸವನ್ನು ಚರ್ಚಿಸುವಾಗ ಅಬ್ರಹಾಂ ಲಿಂಕನ್ ಅವರ ಹೆಸರು ಅನಿವಾರ್ಯ. “ಜನರಿಗಾಗಿ, ಜನರಿಂದ, ಜನರಿಗೋಸ್ಕರ” ಎಂಬ ಅವರ ಸರಳ ವ್ಯಾಖ್ಯಾನವು ಜಗತ್ತಿನಾದ್ಯಂತ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಭದ್ರ ಬುನಾದಿ ಹಾಕಿತು. ಒಬ್ಬ ಸಾಮಾನ್ಯ ಹಿನ್ನೆಲೆಯ ವ್ಯಕ್ತಿ ಅಮೆರಿಕದ ಅಧ್ಯಕ್ಷನಾಗಿ ಗುಲಾಮಗಿರಿಯ ವಿರುದ್ಧ ಹೋರಾಡಿದ್ದು, ಪ್ರಜಾಪ್ರಭುತ್ವದ ಗುಣಕ್ಕೆ (Flexibility) ಸಾಕ್ಷಿಯಾಗಿದೆ. ಲಿಂಕನ್ ಅವರ ಹೋರಾಟವು ಮಾನವೀಯತೆ ಮತ್ತು ಸಮಾನತೆಯನ್ನು ಪ್ರಜಾಪ್ರಭುತ್ವದ ಅನಿವಾರ್ಯ ಅಂಗವನ್ನಾಗಿಸಿತು, ಇದು ಇಂದಿಗೂ ಜಾಗತಿಕ ರಾಜಕೀಯಕ್ಕೆ ದಾರಿದೀಪವಾಗಿದೆ.

ಸಿನಿಮಾ, ಸಮಾಜ ಮತ್ತು ರಾಜಕೀಯ ನಾಯಕತ್ವದ ಮನ್ವಂತರ

ತಮಿಳುನಾಡಿನಂತಹ ರಾಜ್ಯಗಳಲ್ಲಿ ರಾಜಕೀಯವು ಯಾವಾಗಲೂ ಸಾಮಾಜಿಕ ನ್ಯಾಯದ ಪ್ರಯೋಗಶಾಲೆಯಾಗಿ ಕಾರ್ಯನಿರ್ವಹಿಸಿದೆ. ದ್ರಾವಿಡ ಚಳವಳಿಯ ಹಿನ್ನೆಲೆಯಲ್ಲಿ ಬೆಳೆದು ಬಂದ ಇಲ್ಲಿನ ರಾಜಕೀಯ ಸಂಸ್ಕೃತಿಯಲ್ಲಿ, ಸಿನಿಮಾ ರಂಗದ ವ್ಯಕ್ತಿಗಳನ್ನು ಕೇವಲ ನಟರನ್ನಾಗಿ ನೋಡದೆ, ತಮ್ಮ ಸಾಮಾಜಿಕ ಆಶೋತ್ತರಗಳನ್ನು ಈಡೇರಿಸುವ ‘ಪ್ರತಿನಿಧಿ’ಗಳಾಗಿ ಜನರು ಸ್ವೀಕರಿಸುತ್ತಾ ಬಂದಿದ್ದಾರೆ. ಇತ್ತೀಚಿನ ವಿದ್ಯಮಾನಗಳಲ್ಲಿ ಸಿ. ಜೋಸೆಫ್ ವಿಜಯ್ (ನಟ ವಿಜಯ್) ಅವರಂತಹ ವ್ಯಕ್ತಿಗಳು ರಾಜಕೀಯ ಪ್ರವೇಶದ ಹಾದಿಯಲ್ಲಿರುವುದು ಈ ಪರಂಪರೆಯ ಮುಂದುವರಿಕೆಯಾಗಿದೆ. ಜನರು ಇಂತಹ ನಾಯಕರಲ್ಲಿ ಒಬ್ಬ ‘ಸ್ಟಾರ್’ಗಿಂತ ಹೆಚ್ಚಾಗಿ, ಶೋಷಿತರ ಪರವಾಗಿ ಧ್ವನಿ ಎತ್ತುವ ಮತ್ತು ಅಧಿಕಾರದ ವಿಕೇಂದ್ರೀಕರಣಕ್ಕೆ ಶ್ರಮಿಸುವ ನಾಯಕತ್ವವನ್ನು ನಿರೀಕ್ಷಿಸುತ್ತಾರೆ.

ಭವಿಷ್ಯದ ಆಶಯ

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಜಾಪ್ರಭುತ್ವವು ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ತನ್ನನ್ನು ತಾನು ರೂಪಿಸಿಕೊಳ್ಳುತ್ತಿದೆ. ಅಧಿಕಾರವು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ಸಾಧನವಾಗಬೇಕೇ ಹೊರತು, ಅದು ಕೇವಲ ಆಡಳಿತ ನಡೆಸುವ ಅಧಿಕಾರವಲ್ಲ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಅಧಿಕಾರಸ್ಥರ ನೈತಿಕ ಬದ್ಧತೆಯ ಮೂಲಕ ಮಾತ್ರ ಒಂದು ಸಮಾಜವು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದ ಯಶಸ್ಸನ್ನು ಸಂಭ್ರಮಿಸಲು ಸಾಧ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending