Connect with us

ಲೈಫ್ ಸ್ಟೈಲ್

ಇದು ಬೆಲ್ಲದ ತಾಕತ್ತು..!

Published

on

  • ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ ಜಿಲ್ಲೆ

ಬೆಲ್ಲ ಬಹುತೇಕ ಜನರಿಗೆ ಗೊತ್ತು. ಇದನ್ನು ನಾವೆಲ್ಲರೂ ಸಿಹಿ ಖಾದ್ಯಗಳ ತಯಾರಿಕೆಯಲ್ಲಿ ಬಳಸುತ್ತೇವೆ ಅಂತಾ.ಹಾಗಾಗಿ ಸಕ್ಕರೆಯ ಬದಲಾಗಿ ಬೆಲ್ಲವನ್ನು ಅನೇಕ ಕಡೆಗಳಲ್ಲಿ ಬಳಸಲಾಗುತ್ತದೆ. ಹಬ್ಬದ ದಿನಗಳಂದು ವಿಶೇಷ ಸಿಹಿ ತಿಂಡಿ ತಯಾರಿಕೆಯಲ್ಲಿ ಬಹುತೇಕ ಬೆಲ್ಲವನ್ನೇ ಬಳಸುವುದು ಹಿಂದಿನಿಂದಲೂ ಬಂದಿರುವ ಸಂಪ್ರದಾಯವಾಗಿದೆ.

ಸಾಮಾನ್ಯವಾಗಿ ಜನರು ಊಟವಾದ ಮೇಲೆ ಬೆಲ್ಲ ತಿನ್ನುತ್ತಾರೆ. ಆದರೆ ಅದೇಕೆ ಎನ್ನುವುದು ಹಲವರಿಗೆ ಗೊತ್ತಿಲ್ಲ. ಚಳಿಗಾಲದಲ್ಲಿ ಬೆಲ್ಲ ತಿಂದರೆ ವಿಟಮಿನ್ ಗಳು ಮತ್ತು ಲವಣಗಳು ಹೊಟ್ಟೆ ಸೇರುತ್ತವೆ. ಜೊತೆಯಲ್ಲಿಯೇ ನಿರೋಧಕ ಶಕ್ತಿಯನ್ನು ಸೃಷ್ಟಿಸಿ ದೇಹವನ್ನು ಬೆಚ್ಚಗಿಡುತ್ತದೆ. ಶೀತ ಮತ್ತು ಕೆಮ್ಮು ಇದ್ದರೆ ನಿವಾರಿಸುವುದಲ್ಲದೆ, ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದೇ ಕಾರಣದಿಂದ ಈ ಸಹಜ ಸಿಹಿ ಭಾರತದಲ್ಲಿ ಅತೀ ಜನಪ್ರಿಯ ಹಾಗಾಗಿ ನಮ್ಮ ಹಿರಿಯರು ಊಟ ಮುಗಿಸಿ ಬೆಲ್ಲ ಬಾಯಿಗಿಡುವುದು ನಾವೆಲ್ಲರೂ ಕಂಡಿದ್ದೇವೆ.ವಿಶೇಷವೆಂದರೆ ಬೆಲ್ಲದಲ್ಲಿ ಸಕ್ಕರೆಗಿಂತ ಹೆಚ್ಚಿನ ಆರೋಗ್ಯಕಾರಿ ಉಪಯೋಗಳು ಇರುವುದರಿಂದ ಅದು ಸಕ್ಕರೆಗಿಂತ ವಿಶೇಷ ಎನಿಸಿದೆ. ಹಾಗಾದರೆ ಬೆಲ್ಲದ ತಾಕತ್ತಿನ ಪ್ರಾಮುಖ್ಯತೆ ಹಾಗೂ ಅದರಿಂದಾಗುವ ಪ್ರಯೋಜನ ಏನೆಂಬುದನ್ನು ನಾವೆಲ್ಲರೂ ತಿಳಿಯಲೇಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಬೆಲ್ಲವು ಯಾವ ರೀತಿಯಲ್ಲಿ ಮಾನವರಿಗೆ ಸಹಕಾರಿ ಮತ್ತು ಉಪಯೋಗವಾಗುತ್ತದೆ ಎಂಬುದು ಇಲ್ಲಿ ತಿಳಿಸಲು ಸಣ್ಣ ಪ್ರಯತ್ನ ಮಾಡಲಾಗಿದೆ.

ಜೀರ್ಣಕ್ರಿಯೆಗೆ ಸಹಕಾರಿ ಬೆಲ್ಲದ ತಾಕತ್ತು

ಮನುಷ್ಯನ ಜೀರ್ಣಕ್ರಿಯೆ ಚನ್ನಾಗಿಯಾಗಿ ಸಾಗಿದರೆ, ಆ ಮನುಷ್ಯನಿಗೆ ಖಂಡಿತಾವಾಗಿಯೊ ಯಾವುದೇ ರೋಗ ಬರುವುದಿಲ್ಲ ಎನ್ನುವ ಮಾತು ಸತ್ಯವಾದರೆ. ಇನ್ನೊಂದು ಕಡೆಯಲ್ಲಿ ಒಂದು ವೇಳೆ ಆ ಮಾನವನಿಗೆ ಪಚನ ಕ್ರೀಯೇ ಸರಿಯಾಗಿ ಆಗದೇ ಹೋದರೆ, ಆ ವ್ಯಕ್ತಿಗೆ ನೂರಾರು ಕಾಯಿಲೆಗಳು ಖಂಡಿತಾ ಆವರಿಸಿಕೊಳ್ಳುತ್ತವೆ – ಆವರಿಸಿಕೊಳ್ಳಬಹುದಾಗಿದೆ ಎಂಬ ಮಾತು ನಿಜ. ಆದರಿಂದ ಈ ದಿಸೆಯಲ್ಲಿ ಬೆಲ್ಲದ ತಾಕತ್ತಿನ ಅಂಶಗಳನ್ನು ನಾವು ಇಲ್ಲಿ ಗಮನಿಸಿದಾಗ ಇದರ ಶಕ್ತಿ ಸಾಮರ್ಥ್ಯ ಎಂತಹದು ಎನ್ನುವುದು ನಮಗೆ ಅರಿವಾಗುತ್ತದೆ.

ಬೆಲ್ಲದ ಬಳಕೆ ಇಂದು, ನಿನ್ನೆಯದಲ್ಲ ಪ್ರಾಚೀನ ಕಾಲದಿಂದಲೂ ಸಹಾ ಬೆಲ್ಲವನ್ನು ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.ಬೆಲ್ಲ ರುಚಿಯಲ್ಲಿ ಎಷ್ಟು ಸಿಹಿ ಇದಿಯೋ ಅಷ್ಟೇ ಇದರ ಸರಿಯಾದ ಬಳಕೆಯು ಪ್ರಾಮುಖ್ಯತೆ ಪಡೆದಿದೆ.ನಮ್ಮ ದೇಹದ ಆರೋಗ್ಯ ದೃಷ್ಟಿಯಿಂದ ಸುಮಧುರವೆಂದರೆ ತಪ್ಪಿಲ್ಲ. ಏಕೆಂದರೆ ಬೆಲ್ಲ ದೇಹದಲ್ಲಿನ ರಕ್ತವನ್ನು ಶುದ್ಧೀಕರಣ ಮಾಡಲು ನೆರವು ನೀಡುತ್ತದೆ. ಬೆಲ್ಲ ಸೇವನೆಯು ಜೀರ್ಣ ಸಮಸ್ಯೆಯನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ನೆರವು ನೀಡುತ್ತದೆ.

ಅಜೀರ್ಣ ಎನಿಸಿದಾಗ ಸ್ವತ ಬೆಲ್ಲವನ್ನು ಈರುಳ್ಳಿ ಜೊತೆ ಸೇರಿಸಿ ತಿನ್ನುವುದರಿಂದ, ಉಪಶಮನ ದೊರೆಯುತ್ತದೆ. ಬೆಲ್ಲ ನಮ್ಮ ಹೊಟ್ಟೆಯನ್ನು ಕೂಡಾ ತಂಪಾಗಿಡಲು ನೆರವಾಗಿತ್ತದೆ. ಬೆಲ್ಲದಲ್ಲಿ ಕಬ್ಬಿಣದ ಅಂಶ ಇರುವುದರಿಂದ, ರಕ್ತ ಹೀನತೆಯ ಸಮಸ್ಯೆ ಎದುರಿಸುತ್ತಿರುವ ಬಹು ಜನರಿಗೆ ಇದು ಖಂಡಿತಾ ಉಪಯೋಗಕ್ಕೆ ಬರುತ್ತದೆ.ಕೆಮ್ಮು ಅಥವಾ ಗಂಟಲಿನಲ್ಲಿ ನವೆ ಅಥವಾ ಕೆರೆತ ಉಂಟಾದಲ್ಲಿ ಆಗ ಸ್ವಲ್ಪ ಈರುಳ್ಳಿಯನ್ನು ಸುಟ್ಟು ಅದರೊಂದಿಗೆ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಕೆಮ್ಮಿನಿಂದ ಉಪಶಮನ ನೀಡುತ್ತದೆ. ಬೆಲ್ಲದ ಚೂರನ್ನು ಬಾಯಿಯಲ್ಲಿ ಹಾಕಿಕೊಳ್ಳುವುದರಿಂದ ಉಸಿರಾಟದ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಹದಿಹರೆಯದ ಹೆಣ್ಣು – ಗಂಡು ಮಕ್ಕಳಲ್ಲಿ ಉಂಟಾಗುವ ರಕ್ತ ಹೀನತೆ ಸಮಸ್ಯೆಯನ್ನು ಶಮನಗೊಳಿಸಲು ಬೆಲ್ಲವು ಸಹಾಯಕವಾಗುತ್ತದೆ ಮತ್ತೆ ಬೆಲ್ಲದ ಸೇವನೆಯು ಮುಖದ ಛಾಯೆಯನ್ನು ಹೆಚ್ಚಿಸುತ್ತದೆ ಎನ್ನುವುದು ಸತ್ಯ ಹಾಗೂ ರಾತ್ರಿ ಮಲಗುವ ಮುನ್ನ ಹಾಲಿಗೆ ಬೆಲ್ಲ ಸೇರಿಸಿ ಕುಡಿಯುವುದರಿಂದ ಸುಗಮವಾಗಿ ಜೀರ್ಣಕ್ರಿಯೆಯು ಸರಿಯಾಗಿ ನಡೆಯುತ್ತದೆ ಹೀಗೆ ಜೀರ್ಣಕ್ರಿಯೆ ಸಮಸ್ಯೆಯ ಪರಿಹಾರದ ಜೊತೆಗೆ ಇನ್ನೂ ನಮ್ಮ ನೂರಾರು ಆರೋಗ್ಯ ಸಮಸ್ಯೆಗಳಿಗೆ ಬೆಲ್ಲ ತಿನ್ನುವುದರಿಂದ ಪರಿಹಾರ ದೊರೆಯುತ್ತದೆ.

ಹಲವು ಉಪಯೋಗಗಳ ಆಗರ ಬೆಲ್ಲದ ತಾಕತ್ತು

ಅತಿಯಾದ ರಕ್ತಹೀನತೆಯಿಂದ ನಿತ್ರಾಣವಾಗುವವರಿಗೆ ಬೆಲ್ಲ ಸೇವನೆ ಅತ್ಯುತ್ತಮ ಪರಿಹಾರ ಮಾರ್ಗ, ಇದರಲ್ಲಿ ಕಬ್ಬಿಣದಂಶ ಅತ್ಯಧಿಕವಾಗಿದೆ. ಬೆಲ್ಲದಲ್ಲಿ ಪೊಟಾಶಿಯಂ ಮತ್ತು ಸೋಡಿಯಂ ಇರುವ ಕಾರಣ ದೇಹದಲ್ಲಿ ಆಮ್ಲೀಯ ತತ್ವಗಳನ್ನು ನಿಭಾಯಿಸುತ್ತದೆ. ಹೀಗಾಗಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.ಹಾಲು ಮತ್ತು ಬೆಲ್ಲ ಸೇರಿದರೆ, ಎರಡರಲ್ಲಿನ ಉತ್ತಮ ಗುಣಗಳು ದೇಹಕ್ಕೆ ಸೇರ್ಪಡೆಯಾಗುತ್ತವೆ ಇದರಿಂದ ನಮ್ಮ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಜೊತೆಗೆ ಪ್ರತಿದಿನ ಒಂದು ತುಂಡು ಬೆಲ್ಲವನ್ನು ಕುಟ್ಟಿ ಪುಡಿಮಾಡಿ ಹಾಲಿನ ಜತೆ ಬೆರೆಸಿ ಕುಡಿದರೆ ಆರೋಗ್ಯ ಸುಧಾರಣೆಯುತ್ತ ಸಾಗುತ್ತದೆ ಹಾಗೆ ಅತ್ಯುತ್ತಮ ಪರಿಣಾಮ ಸಹ ಬೀರಲಿದೆ.

ಬೆಲ್ಲ ಸೇರಿಸಿದ ಹಾಲನ್ನು ಕುಡಿಯುವುದರಿಂದ ರಕ್ತ ಶುದ್ಧೀಕರಣಕ್ಕೆ ನೆರವಾಗಲಿದೆ ಇದರಿಂದ ರಕ್ತದಲ್ಲಿ ಇರುವ ವಿಷ ಅಂಶವನ್ನು ನಾಶ ಮಾಡಲು ಸಾಧ್ಯವಾಗುತ್ತದೆ.( ಬೆಲ್ಲದ ಅತೀ ಲಾಭವೆಂದರೆ ರಕ್ತ ಶುದ್ಧೀಕರಣ,ನಿತ್ಯವೂ ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತ ಶುದ್ಧವಾಗಿ ದೇಹವನ್ನು ಆರೋಗ್ಯವಾಗಿಡುತ್ತದೆ.)
ಇದಲ್ಲದೆ ಬೆಲ್ಲ ಬೆರೆಸಿದ ಹಾಲು ಸೇವನೆಯಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳಲಿದೆ.ಬೆಲ್ಲವನ್ನು ನೀರಿನೊಂದಿಗೆ ಸೇವಿಸುವ ಬದಲಿಗೆ ಹಾಲಿನೊಂದಿಗೆ ಸೇವಿಸಿದರೆ ಉತ್ತಮ ಎಂಬ ಅಂಶವನ್ನು ಆಯುರ್ವೇದ ವಿಜ್ಞಾನ ಪ್ರತಿಪಾದಿಸುತ್ತದೆ. ಸಕ್ಕರೆ ಸೇವನೆಯಿಂದ ದೇಹದ ತೂಕ ಹೆಚ್ಚುವುದು ಖಚಿತ.

ಆದರೆ, ಬೆಲ್ಲ ಸೇವನೆಯಿಂದ ಈ ರೀತಿಯ ಪ್ರಮಾದ ಆಗುವುದಿಲ್ಲ.ಇದಲ್ಲದೆ ಬೆಲ್ಲ ಮಿಶ್ರಿತ ಹಾಲಿನ ಜತೆಗೆ ಚಿಕ್ಕದೊಂದು ಶುಂಠಿ ತುಂಡನ್ನು ಸೇರಿಸಿ ಕುಡಿದರೆ, ಮೂಳೆಗಳ ಸಂದುಗಳಲ್ಲಿ ಆಗುವ ನೋವನ್ನು ಕ್ರಮೇಣ ನಿವಾರಿಸಲಿದೆ. ಪ್ರತಿನಿತ್ಯ ಈ ಅಭ್ಯಾಸವನ್ನು ರೂಢಿಸಿಕೊಂಡರೆ ಒಳ್ಳೆಯದು ಜೊತೆಗೆ ಬೆಲ್ಲ ಸೇರಿಸಿದ ಹಾಲು ಕುಡಿದರೆ ಚರ್ಮದ ಕಾಂತಿ ವೃದ್ಧಿಯಾಗಲಿದೆ. ತುಂಡು ಬೆಲ್ಲವನ್ನು ಪ್ರತಿದಿನ ನಾವು ತೆಗೆದುಕೊಳ್ಳುವ ಆಹಾರದೊಂದಿಗೆ ಸೇವಿಸಿದರೆ ಮುಖದಲ್ಲಿ ಮೊಡವೆಗಳಾಗುವ ಸಾಧ್ಯತೆಗಳು ಕಡಿಮೆಯಿರುತ್ತವೆ. ಜೊತೆಗೆ ಬೆಲ್ಲ ಸೇವನೆಯಿಂದ ಚಳಿಗಾಲದಲ್ಲಿ ಬ್ಯಾಕ್ಟೀರಿಯಾದ ಜೊತೆ ಹೋರಾಡಲು ವಿನಾಯಿತಿ ನೀಡುವಂತಹ ಶಕ್ತಿಯನ್ನು ನೀಡುತ್ತದೆ. ಹೆಚ್ಚಿನ ವ್ಯಕ್ತಿಗಳಿಗೆ ಜೀರ್ಣಕ್ರಿಯೆ ಸಾಮಾನ್ಯ ಸಮಸ್ಯೆಯಾಗಿದೆ.

ಜಂಕ್ ಫುಡ್ ಅನಿಯಮಿತ ಜೀವನಶೈಲಿ ಅಥವಾ ಕಡುಬಯಕೆಯ ಕಾರಣದಿಂದಾಗಿ ಅಜೀರ್ಣ ಉಂಟಾಗುವುದು. ಅಜೀರ್ಣ ಸಮಸ್ಯೆ ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ವ್ಯಕ್ತಿಯ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ನಾವೆಲ್ಲರೂ ಅಜೀರ್ಣ, ಮಲಬದ್ಧತೆ, ಅನಿಯಮಿತ ಕರುಳಿನ ಚಲನೆ, ಇತ್ಯಾದಿಗಳಿಂದ ಬಳಲುತ್ತಿದ್ದರೆ ಅಂತಹ ಸಮಯದಲ್ಲಿ ಬೆಲ್ಲ ಸೇವಿಸುವುದು ನಮ್ಮ ಆರೋಗ್ಯಕ್ಕೆ ಅನುಕೂಲಕರವಾಗುತ್ತದೆ ಎನ್ನುವುದು ದಯವಿಟ್ಟು ಮರಿಯಬೇಡಿ. ಹಾಗೂ ನಮ್ಮ ಮೂಳೆ ಗಟ್ಟಿಮುಟ್ಟಾಗಿರಲು ಹಾಲಿನ ಜೊತೆ ಬೆಲ್ಲ ಸೇವನೆಯನ್ನು ದಿನ ನಿತ್ಯ ಮಾಡುವುದು ಒಳ್ಳೆಯದು ಇದರಿಂದ ನಮ್ಮ ಆರೋಗ್ಯ – ಮೂಳೆಗಳು ಸುಸ್ಥಿತಿಯಲ್ಲಿ ಇರುತ್ತದೆ. ಹಾಗೆ ಸುಸ್ತು ನಿವಾರಿಸುತ್ತದೆ ಎನ್ನುವುದು ಸುಳ್ಳಲ್ಲ.

ಬೆಲ್ಲದಲ್ಲಿ ಹಲವು ಆಂಟಿ ಆಕ್ಸಿಡಂಟ್‌ಗಳು ಮತ್ತು ಲವಣಗಳಾದ ಸತು ಮತ್ತು ಸೆಲೆನಿಯಂ ಇವೆ. ಇವು ಸ್ವತಂತ್ರ ಕಣಗಳಿಗೆ ಹಾನಿಯಾಗದಂತೆ ನೆರವಾಗುತ್ತದೆ. ಸೋಂಕುಗಳ ವಿರುದ್ಧವೂ ನೆರವಾಗುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಏರಿಸಲೂ ಬೆಲ್ಲ ಸಹಕಾರಿಯಾಗಿದೆ.

ಇಂತಹ ಅನೇಕ ರೋಗಗಳ ಆಗಾರಕ್ಕೆ ಬೆಲ್ಲಾ ಮಾಹಾ ಮದ್ದಾಗಿ,ನಮ್ಮಲ್ಲರ ಆರೋಗ್ಯವನ್ನು ಕಾಪಾಡುತ್ತದೆ. ಆದರಿಂದ ಬೆಲ್ಲದ ಬಗ್ಗೆ ಉದಾಸೀನ ಮಾಡದೇ, ದಿನನಿತ್ಯದ ನಮ್ಮ ಅಡಿಯಲ್ಲಿ ಬಳಕೆ ಮಾಡುವ ಮೂಲಕ ಅದರ ಸದುಪಯೋಗ ಪಡೆದುಕೊಳ್ಳೋಣ.

ವಯಸ್ಕರ/ಹೆಣ್ಣುಮಕ್ಕಳ ಆರೋಗ್ಯ ಸಮಸ್ಯೆಗಳಿಗೆ – ಪರಿಹಾರ ಬೆಲ್ಲ

ಹದಿಹರೆಯದ ಹೆಣ್ಣು ಮಕ್ಕಳು ಮತ್ತು ಗರ್ಭಿಣಿಯರು ಬೆಲ್ಲವನ್ನು ತಿನ್ನುವುದರಿಂದ ರಕ್ತಹೀನತೆ ಸಮಸ್ಯೆಯನ್ನು
ಪರಿಣಾಮಕಾರಿಯಾಗಿ(ಅನೀಮಿಯದಿಂದ ರಕ್ಷಣೆ ಪಡೆಯಲು ಸಾಧ್ಯ.- ಗರ್ಭಿಣಿಯರು ರಕ್ತಹೀನತೆಯಿಂದ ಬಳಲುವುದು ಸಾಮಾನ್ಯ ಸಂಗತಿ. ಇದರ ಪರಿಹಾರಕ್ಕೆ ನಿತ್ಯವೂ ಬೆಲ್ಲ ಸೇರಿಸಿದ ಹಾಲು ಕುಡಿದರೆ, ಈ ಕೊರತೆ ನಿವಾರಣೆಯಾಗಲಿದೆ.) ತಡೆಗಟ್ಟಬಹುದು.ಬೆಲ್ಲ ತಿನ್ನುವುದರಿಂದ ಹಲವು ಪೌಷ್ಠಿಕಾಂಶಗಳನ್ನು ದೇಹಕ್ಕೆ ನೀಡುವ ಮೂಲಕ ದೇಹದ ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇಡುತ್ತದೆ.

ಹಾಗೂ ಋತುಸ್ರಾವದ ಸಮಯದಲ್ಲಿ ಮನೋಸ್ಥಿತಿಯಲ್ಲಿ ಬದಲಾವಣೆಯಾಗುತ್ತಿದ್ದಲ್ಲಿ ಬೆಲ್ಲ ತಿನ್ನಿ{ಮಹಿಳೆಯರು ಮಾಸಿಕ ದಿನಗಳಲ್ಲಿ ಅನುಭವಿಸುವ ನೋವನ್ನು ತಡೆಯಲು ಬೆಲ್ಲದಷ್ಟು ಸಮರ್ಥವಾಗಿ ಕಡಿಮೆಗೊಳಿಸುವ ಔಷಧಿ ಇನ್ನೊಂದಿಲ್ಲ ಎಂಬ ಮಾತಿದೆ ಆದ್ದರಿಂದ ಬೆಲ್ಲವನ್ನು ತಿನ್ನುವುದು ಸೊಕ್ತ -ಮಾಸಿಕ ದಿನಗಳ ಹಿಂದಿನ ಮತ್ತು ನಂತರದ ದಿನಗಳಲ್ಲಿ ಎದುರಾಗುವ ಕೆಳಹೊಟ್ಟೆಯ ನೋವಿನಿಂದ ಪಾರಾಗಲು ಚಿಕ್ಕಚಮಚದಷ್ಟು ಬೆಲ್ಲದ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ, ದಿನಕ್ಕೆರೆಡು ಬಾರಿ ಕುಡಿದರೆ, ನೋವು ಕ್ರಮೇಣ ಕಡಿಮೆಯಾಗಲಿದೆ.} ಇದು ಪಿಎಂಎಸ್ ಚಿಹ್ನೆಗಳ ಜೊತೆಗೆ ಹೋರಾಡಿ ಎಂಡೋರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಎಂಡೋರ್ಫಿನ್‌ಗಳು ದೇಹಕ್ಕೆ ಆರಾಮ ಕೊಡುತ್ತದೆ.

ಬೆಲ್ಲದಲ್ಲಿ ಕಬ್ಬಿಣ ಮತ್ತು ಫೊಲೇಟ್ ಇರುವ ಕಾರಣ ರಕ್ತದ ಕೋಶಗಳ ಪ್ರಮಾಣವನ್ನು ಸಾಮಾನ್ಯ ಸ್ಥಿತಿಯಲ್ಲಿ ಇಡುತ್ತದೆ. ಇವುಗಳಲ್ಲದೆ
ಸಂಧಿವಾತ, ಅಸ್ತಮಾಗಳಿಗೂ ಬೆಲ್ಲ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.ಜೊತೆಗೆ
ಮೊಡವೆ ಇದ್ದರೆ ಬೆಲ್ಲವನ್ನು ತಿನ್ನಿ. ಇದು ಮೊಡವೆಯನ್ನು ಕಡಿಮೆಗೊಳಿಸುತ್ತದೆ. ತ್ವಚೆಯ ಹೊಳಪನ್ನೂ ಹೆಚ್ಚಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಮತ್ತು ಬೆಲ್ಲ ಒಂದು ಅತೀ ಸಹಜವಾದ ದೇಹ ಸ್ವಚ್ಛಗೊಳಿಸುವ ಸಾಧನ. ಹೀಗಾಗಿ ಬೆಲ್ಲ ಸೇವಿಸುವುದು ದೇಹದಿಂದ ಅನಗತ್ಯ ಕಣಗಳನ್ನು ನಿವಾರಿಸುತ್ತದೆ.

ಶ್ವಾಸಕೋಶ, ಶ್ವಾಸನಾಳ, ಕರುಳು, ಹೊಟ್ಟೆ ಮತ್ತು ಅನ್ನನಾಳವನ್ನು ಸ್ವಚ್ಛಗೊಳಿಸುತ್ತದೆ. ಅತೀ ಮಾಲಿನ್ಯವಿರುವ ಜಾಗದಲ್ಲಿ ಕೆಲಸ ಮಾಡುವವರು ಬೆಲ್ಲ ತಿನ್ನುವುದು ಉತ್ತಮ.ಬೆಲ್ಲ ಸಾಮಾನ್ಯ ದೇಹದ ಉಷ್ಣತೆ ಕಾಪಿಡಲು ನೆರವಾಗುತ್ತದೆ. ಬೆಲ್ಲದ ತಂಪು ನೀರು ಕುಡಿಯುವುದರಿಂದ ಬೇಸಿಗೆಗೆ ಯಲ್ಲಿ ಪ್ರಯೋಜನಕಾರಿ ಯಾಗಲಿದೆ ಜೊತೆಗೆ ಹೊಟ್ಟೆಗೆ ತಂಪು ನೀಡುತ್ತದೆ.ಹೀಗೆ ಹತ್ತು ಹಲವು ರೀತಿಯ ಆರೋಗ್ಯ ಸಮಸ್ಯಗಳಿಗೆ ಪರಿಹಾರ ಖಂಡಿತಾ ನೀಡುತ್ತದೆ ಹಾಗೂ ವಿಶೇಷವಾಗಿ ಮಹಿಳೆಯರಿಗೆ/ವಯಸ್ಕರರಿಗೆ ಮತ್ತು ಮಕ್ಕಳ ಆರೋಗ್ಯಕ್ಕೆ ಬೆಲ್ಲವು ಅತ್ಯುತ್ತಮ ಮನೆಯ ಸಂಪ್ರದಾಯಿಕ ಮದ್ದಾಗಿದೆ.

ವಿವಿಧ ಕಾಯಿಲೆಗಳ ಸಂಹಾರಕ್ಕೆ ಬೇಕೇ ಬೇಕು ಬೆಲ್ಲ

ಬೆಲ್ಲದಲ್ಲಿ ಮೆಗ್ನೇಶಿಯಂ ಹೆಚ್ಚಿರುವ ಕಾರಣ ಕರುಳಿನ ಆರೋಗ್ಯಕ್ಕೆ ಉತ್ತಮ ಸಹಕಾರಿಯಾಗಿದೆ 10 ಗ್ರಾಂ ಬೆಲ್ಲದಲ್ಲಿ 16 ಮಿಲಿಗ್ರಾಂ ಮೆಗ್ನೇಶಿಯಂ ಇರುತ್ತದೆ ಇದರಿಂದ ಕರುಳಿನ ಕೆಲಸಕ್ಕೆ ಪ್ರಯೋಜನವಾಗುತ್ತದೆ ಮತ್ತು ಶ್ವಾಸಕೋಶದ ಸಮಸ್ಯೆಗೆ ಬೆಲ್ಲವನ್ನು ನಿತ್ಯವೂ ಸೇವಿಸುವುದರಿಂದ ಆಸ್ತಮಾ, ಬ್ರೋನ್ಷಿಟಿಸ್ ಸಮಸ್ಯೆ ನಿವಾರಣೆಯಾಗಲಿದೆ. ಎಳ್ಳು – ಬೆಲ್ಲ ಬೆರೆಸಿ ಸೇವಿಸಿದರೆ ಶ್ವಾಸಕೋಶ ಸಮಸ್ಯೆಗೆ ಉತ್ತಮ ಪರಿಹಾರವಾಗುತ್ತದೆ ಹಾಗೆ ಸಂಧಿ ನೋವಿದ್ದರೆ ಬೆಲ್ಲ ಉತ್ತಮ ನೋವು ನಿವಾರಕ ಔಷಧಿ ಶುಂಠಿ ಜೊತೆ ಬೆಲ್ಲ ಸೇವಿಸಿ
ತಿನ್ನಬಹುದು ತಿನ್ನುವುದರಿಂದ ಸಂಧಿ ನೋವು ಖಂಡಿತಾ ವಾಸಿಯಾಗುತ್ತದೆ.

ಮಂಡಿ ನೋವು, ಕೈಕಾಲು ನೋವು ಇವುಗಳನ್ನು ಕಮ್ಮಿ ಮಾಡುವಲ್ಲಿ ಬೆಲ್ಲ ಪ್ರಯೋಜನಕಾರಿಯಾಗಿದೆ ಜೊತೆಗೆ
ತಲೆನೋವು ಕಾಣಿಸಿಕೊಂಡಾಗ ಒಂದು ಚೂರು ಬೆಲ್ಲ ತಿಂದು ಆರಾಮವಾಗಿರಿ ಹಾಗೂ ತೂಕ ಇಳಿಸಲು ಬೆಲ್ಲ ಅತ್ಯುತ್ತಮ ಅಂಶ, ಪೊಟಾಶಿಯಂ ಹೆಚ್ಚಾಗಿರುವ ಕಾರಣ ಎಲೆಕ್ಟ್ರೊಲೈಟ್ ಗಳನ್ನು ಸಮತೋಲನ ಮಾಡಿ ಚಯಾಪಚಯ ಚೆನ್ನಾಗಿರಲು ಬೆಲ್ಲ ನೆರವಾಗುತ್ತದೆ.

ಹೀಗಾಗಿ ತೂಕ ಇಳಿಸುವಲ್ಲಿ ಉತ್ತಮ ಜೊತೆಗೆ
ಕಾರ್ಬೋಹೈಡ್ರೇಟ್ ದೇಹಕ್ಕೆ ಕೊಟ್ಟರೆ, ಬೆಲ್ಲ ದೇಹಕ್ಕೆ ಧೀರ್ಘ ಕಾಲದ ಶಕ್ತಿ ಕೊಡುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಸುವುದಿಲ್ಲ. ಸುಸ್ತು ಮತ್ತು ನಿಶ್ಶಕ್ತಿ ಇರುವವರಿಗೂ ಉತ್ತಮ – ಸಹಕಾರಿ ಎನ್ನುವುದು ನಾವ್ಯಾರು ಅಲ್ಲಗಳೆಯುವಂತಿಲ್ಲ ಹಾಗೂ ಶೀತ ಮತ್ತು ಕಫ, ಜ್ವರ ಇದ್ದಾಗ ಬೆಲ್ಲ ತಿನ್ನಬೇಕು. ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಿರಿ ಅಥವಾ ಚಹಾಗೆ ಸಕ್ಕರೆ ಬದಲು ಬೆಲ್ಲ ಹಾಕಿ ಕುಡಿಯುವ ಮೂಲಕ ಈ ರೋಗಗಳಿಗೆ
ಕಡಿವಾಣ ಹಾಕಬಹುದಾಗಿದೆ. ಕೆಮ್ಮು ಕಾಣಿಸಿದರೆ ಮತ್ತು ಕೋಲೆಸ್ಟ್ರಾಲ್ ಅತಿಯಾದಾಗ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಸುಟ್ಟು ಅದನ್ನು ಬೆಲ್ಲದ ಜೊತೆ ತಿನ್ನುವುದು ಒಳ್ಳೆಯದು ಇದರಿಂದ ಕೆಮ್ಮು,‌ಕೋಲೆಸ್ಟ್ರಾಲ್ ತಡೆಗಟ್ಟಲು ಸಹಕಾರವಾಗುತ್ತದೆ.

ಖಂಡಿತ ಗುಣವಾಗುವುದರಲ್ಲಿ ಅನುಮಾನವೇ ಬೇಡ ಹಾಗೂ ಉಸಿರಾಟ ತೊಂದರೆ ಇದ್ದರೆ ಬೆಲ್ಲದ ಚೂರನ್ನು ಬಾಯಿಗೆ ಹಾಕಿಕೊಂಡರೆ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ ಮತ್ತೆ ಅಸ್ತಮಾ ಕಾಯಿಲೆ ಇರುವವರು ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ತಿನ್ನುವುದರಿಂದ ಈ ರೋಗ ಹತೋಟಿಯಲ್ಲಿ ಇಡಬಹುದು. ಇದಲ್ಲದೆ ಬೆಲ್ಲ ದೇಹದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಎನ್‌ಜೈಮ್‌ಗಳನ್ನು ಸಕ್ರಿಯಗೊಳಿಸುತ್ತದೆ. ಜಠರದ ಚಲನೆಗೆ ನೆರವಾಗಿ ಮಲಬದ್ಧತೆಯಿಂದ ರಕ್ಷಿಸುತ್ತದೆ ಹಾಗೂ ಬೆಲ್ಲವು ಮೂತ್ರಪಿಂಡದಲ್ಲಿರುವ ವಿಷಕಾರಿ ರಾಸಾಯನಿಕಗಳನ್ನು ಹೊರ ಹಾಕಲು ನೆರವಾಗುತ್ತದೆ. ದೇಹದಿಂದ ಪರಿಣಾಮಕಾರಿಯಾಗಿ ವಿಷನಿವಾರಿಸಬೇಕೆಂದಲ್ಲಿ ಖಂಡಿತಾ ಬೆಲ್ಲ ತಿನ್ನಿ.ತಿನ್ನುವ ಮೂಲಕ ವಿವಿಧ ಕಾಯಿಲೆಗಳಿಗೆ ಖಂಡಿತಾ ಬೆಲ್ಲವು ಪರಿಹಾರ ನೀಡುತ್ತದೆ. ಎನ್ನುವುದರಲ್ಲಿ ಎರಡು ಮಾತಿಲ್ಲ.

ಆಶಯ ಮಾತು

ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವ ನಾವುಗಳು ಇದಾದರೂ ನಮ್ಮ ಆರೋಗ್ಯ ರಕ್ಷಣೆಯ ಕಡೆಗೆ ಹೆಚ್ಚು ಒಲವು – ಸಮಯ ನೀಡುವುದು ಅವಶ್ಯವಾಗಿದೆ. ಯಾಕೆಂದರೆ ನಾವೆಲ್ಲರೂ ದಿನನಿತ್ಯ ಬಳಕೆ ಮಾಡಿಕೊಳ್ಳುತ್ತಿರುವ ರಾಸಾಯನಿಕ ಪದಾರ್ಥಗಳು,ತಿಂಡಿ ತಿನಿಸುಗಳನ್ನು ನಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ಹಾಳುಮಾಡುತ್ತಿವೆ ಹಾಗೆ ವಯಸ್ಸು ಕ್ಷೀಣಿಸುತ್ತಿದೆ ಎನ್ನುವುದು ನಮ್ಮಗೆಲ್ಲರಿಗೂ ಗೊತ್ತಿರುವ ಸಂಗತಿ ಅಲ್ಲವೇ ?

ಆದಕಾರಣ ಇಂತಹ ಭಯಂಕರ ಜೀವ ಹಾನಿ ಅಂಶಗಳ ಪದಾರ್ಥಗಳನ್ನು ಕೊಡಲೇ ನಿಲ್ಲಿಸುವ ಮೂಲಕ ನಮ್ಮ ಪೂರ್ವಜರು ಹಾಕಿ ಕೊಟ್ಟ ಸಂಪ್ರದಾಯದ ಸಾವಯವದ ಪದ್ಧತಿಯನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವ ದಿಸೆಯಲ್ಲಿ ಹೆಜ್ಜೆ ಹಾಕೋಣ.ಬೆಲ್ಲವನ್ನು ದಿನನಿತ್ಯ ತಿನ್ನಲು ಪ್ರಮಾಣಿಕವಾಗಿ ಪ್ರಯತ್ನ ಮಾಡೋಣ, ನಮ್ಮ ಆರೋಗ್ಯದ ಜೊತೆಗೆ ಇತರರ ಆರೋಗ್ಯವನ್ನು ಕಾಪಾಡಿಕೊಂಡು, ನೆಮ್ಮದಿಯಾಗಿ ಬಾಳೋಣ.

ಕೊನೆಯ ಮಾತು

ಇಂದು ಸಧ್ಯ ಬೆಲ್ಲ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಏಕೆಂದರೆ ಬಹುತೇಕ ಮಂದಿ ಸಕ್ಕರೆಯತ್ತ ವಾಲುತ್ತಿರುವುದೇ ಇದಕ್ಕೆ ಕಾರಣ. ಆದರೆ, ಬೆಲ್ಲದಿಂದಾಗುವ ಉಪಯೋಗಗಳ ಬಗ್ಗೆ ಬಲ್ಲವರಿಗೆ ಮಾತ್ರವೇ ತಿಳಿದಿರುತ್ತದೆ. ಉಳಿದವರೂ ಇದರ ಸದುಪಯೋಗ ಪಡೆಲೇಬೇಕು ಜೊತೆಗೆ ಬೆಲ್ಲ ದಿನಾಲೂ ತಿನ್ನಲು ಹಾಗೂ ಊಟದಲ್ಲಿ ಸೇರಿಸಿ ಊಟ ಮಾಡಲು ಯತ್ನಿಸುವುದು ನಮ್ಮ ಆರೋಗ್ಯ ಹಿತದೃಷ್ಟಿಯಿಂದ ಒಳ್ಳೆಯದು ಶರಣ ಬಂಧುಗಳೆ.ಬೆಲ್ಲ ಕೇವಲ ಸಿಹಿ ಪದಾರ್ಥವಾಗಿರದೆ, ಔಷಧಿಯುಕ್ತ ಸಿಹಿಯಾಗಿದೆ.

ನೋಡಲಿಕೆ ಕಂದು ಅಥವಾ ಕಪ್ಪಗಿರುವ ಕಾರಣ ಯುವಪೀಳಿಗೆಯವರು ಬೆಲ್ಲ ತಿನ್ನಲು ಹಿಂದೇಟು ಹಾಕುತ್ತಿರಬಹುದು. ಆದರೆ, ಬೆಳ್ಳಗೆ ಕಾಣುವ ಸಕ್ಕರೆಗಿಂತಲೂ ಬೆಲ್ಲ ಅತ್ಯುತ್ತಮ ಎಂಬುದನ್ನು ಮರೆಯಬಾರದು. ಪ್ರತಿಯೊಬ್ಬರ ಮನೆಗಳಲ್ಲೂ ಲಭ್ಯವಾಗುವ ಬೆಲ್ಲವನ್ನು ಮನೆಮದ್ದಿನ ರೂಪದಲ್ಲಿ ಉಪಯೋಗಿಸುವ ಮೂಲಕ, ಹಲವು ಬಗೆಯ ಸಮಸ್ಯೆಗಳನ್ನು ದೂರವಿಡಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

Published

on

ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.

23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.

ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending