Connect with us

ಲೈಫ್ ಸ್ಟೈಲ್

ಮೊಬೈಲ್ ಜಗತ್ತು ; ಸಹನೆಗೆ‌ ಕುತ್ತು..!

Published

on

  • ಹಿರಿಯೂರು ಪ್ರಕಾಶ್

ನಿಮ್ಮ ಕೈಯ್ಯಲ್ಲಿ ಮೊಬೈಲ್ ಇಲ್ಲದೇ ಅಥವಾ ಅದನ್ನು ಉಪಯೋಗಿಸದೇ ಎಷ್ಟು ಸಮಯ ಹಾಗೇ ಸುಮ್ಮನೇ ಇರಬಲ್ಲಿರಿ ? ಎಲ್ಲಾದರೂ ಹೊರಗೆ ಹೋದಾಗ, ಯಾರಿಗಾದರೂ ಕಾಯುತ್ತಾ ಕುಳಿತಾಗ, ಪ್ರಯಾಣಿಸುವಾಗ ಅಥವಾ ಸ್ವಲ್ಪ ಬಿಡುವಿನ ಸಮಯದಲ್ಲಿ ಮೊಬೈಲ್ ಗೆ ಕೈ ಹಾಕದೇ ಇರಲು ಸಾಧ್ಯವೇ ?

ಬಹುಶಃ ಯಾರನ್ನು ಬಿಟ್ಟಿರಬಹುದಿದ್ದರೂ ಇದನ್ನು ಬಿಡಲು ಸಾಧ್ಯವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಇದು ನಮ್ಮ ಮೈ ಮನವನ್ನಾವರಿಸಿಕೊಂಡು ಬಿಟ್ಟಿದೆ. ಹೀಗಾಗಿ ಮೊಬೈಲ್ ಅನ್ನೋದು ನಮ್ಮ‌ ಜೀವನಕ್ಕೆ ಒಂದು “Some ಗತಿ ” ಕಾಣಿಸುವವರೆಗೂ ಅದು ನಮ್ಮ “ಸಂಗಾತಿ” ಯೇ ! ನೋ ಡೌಟ್.

ಭೂಗತ ಜಗತ್ತು ಅಂತ ಇದೆಯಂತೆ ! ಆದರೆ ಆ ಬಗ್ಗೆ ಎಲ್ಲರಿಗೂ ಅಷ್ಟು ಗೊತ್ತಿರಲಿಕ್ಕಿಲ್ಲ. ಆದರೆ ಈ ಮೊಬೈಲ್ ಜಗತ್ತು ಮಾತ್ರ ಎಲ್ಲರನ್ನೂ ತನ್ನ ತೆಕ್ಕೆಯೊಳಗೆ ಎಳೆದುಕೊಂಡು ಮನುಷ್ಯನ ಗುಣ, ಸ್ವಭಾವ ,ವರ್ತನೆ ಹಾಗೂ ನಿತ್ಯ ಚಟುವಟಿಕೆಗಳ ಮೇಲೆ ಸಕತ್ ಪ್ರಭಾವ ಬೀರಿ ಅಟ್ಟಹಾಸಗೈಯ್ಯುತ್ತಿರುವುದಂತೂ ದಿಟ.

ಮೊಬೈಲ್ ಬಳಕೆ ಕುರಿತಂತೆ ಅದರ ಉಪಯೋಗ, ದುರುಪಯೋಗ_ ಅನುಕೂಲ- ಅನಾನುಕೂಲ ಇತ್ಯಾದಿಗಳ ಬಗ್ಗೆ ಪ್ರಬಂಧ ಅಥವಾ ಟಿಪ್ಪಣಿ ಬರೆದು ಬೋರ್ ಹೊಡೆಸೊಲ್ಲ. ಅದು ಎಲ್ಲರಿಗೂ ಗೊತ್ತಿರೋದೇ ! ಆದರೆ ಬಹುತೇಕ ಮೊಬೈಲ್ ಬಳಕೆದಾರರಲ್ಲಿ ನಾನು ಕಂಡುಕೊಂಡ ಒಂದು ವಿಷಾದನೀಯ ಸತ್ಯವೆಂದರೆ, ಅತಿಯಾದ ಮೊಬೈಲ್ ಸಹವಾಸದಲ್ಲಿ‌ ಮನುಷ್ಯನ ತಾಳ್ಮೆ, ಸಹನೆ ದಿನೇ ದಿನೇ ಅಧೋಗತಿಗಿಳಿಯುತ್ತಿರುವುದು !.

ಮೊಬೈಲ್ ನಲ್ಲಿ ತನ್ಮಯರಾಗಿ ಬೆರಳಾಡಿಸುವಾಗ , ನೆಟ್ ನಲ್ಲಿ ದೃಷ್ಟಿ ನೆಟ್ಟು ಮುಳುಗಿರುವಾಗ ಯಾರಾದರೂ ಮಾತನಾಡಿಸಿದರೂ ಸಡನ್ನಾಗಿ ನಮ್ಮೊಳಗಿನ‌ ಅಸಹನೆ ಭುಗಿಲೇಳುತ್ತದೆ ; ಇಲ್ಲವೇ ಅತಿಯಾದ ಕರೆಗಳಿಂದ‌ ಸಹನೆಯ ಕಟ್ಟೆಯೊಡೆದು ಮಾತನಾಡುವುದೇ ಬೇಡವೆನಿಸಿ ಒಂಥರಾ Frustrated ಮೂಡ್ ಗೆ ಮನಸು ವಾಲಿಬಿಡುತ್ತೆ. ‌

ಅಷ್ಟೆಲ್ಲಾ ಯಾಕೆ ! ನೀವು ಫೇಸ್ ಬುಕ್ ನಲ್ಲೋ ವಾಟ್ಸಪ್ ನಲ್ಲೋ ಸಿಕ್ಕಾಪಟ್ಟೆ ಬಿಜ಼ಿಯಾಗಿದ್ದಾಗ ನಿಮ್ಮ ಸ್ವಂತದವರೇ ಕರೆ ಮಾಡಿದರೂ ಅದು‌ ನಿಮಗೆ ಆ ಕ್ಷಣಕ್ಕೆ ಸಹ್ಯವೆನಿಸದು ! ಒಂದು ವೇಳೆ ಕರೆ ಸ್ವೀಕರಿಸಿದರೂ ಅದಕ್ಕೆ ಮನಸಿಟ್ಟು ಉತ್ತರಿಸದೇ ಬ್ರೌಸ್ ಮಾಡುತ್ತಲೇ ಮಾತನಾಡುವ ಅಸಡ್ಡೆತನವೂ ಗೊತ್ತಿಲ್ಲದೇ ಬೆಳೆದುಬಂದಿದೆ.

ಯಾರ ಸಹವಾಸವನ್ನೂ ಬೇಡದೇ ಒಬ್ಬನೇ‌ ಕೂತು ಇಡೀ ದಿನ ನೆಟ್ಟಗಿರದೇ ನೆಟ್ಟಿಗನಾಗಿ ಕಾಲ ಕಳೆಯೋದೇ ಹೆಚ್ಚು ಆಪ್ಯಾಯವಾಗಿ ಕಾಣಿಸುತ್ತದೆ. ಅದರಲ್ಲೂ ಈ ಲಾಕ್ ಡೌನ್ ಸಮಯದಲ್ಲಿ ಮೊಬೈಲ್ ನಮ್ಮ ಅತ್ಯಂತ ಆಪ್ತ ಸಂಗಾತಿಯಾಗಿ ಹೊರಹೊಮ್ಮಿದ್ದು ಅದರ ಸೆಳೆತದಿಂದ ಬಿಡಿಸಿಕೊಳ್ಳೋದೇ ಸಮಸ್ಯೆಯಾಗಿ ತೋರುತ್ತಿದೆ. ಸೋ…… ಮನಸಿನ‌ ‘ಉದ್ವೇಗ’ ಕ್ಕೂ ಮೊಬೈಲ್ ನ ‘ವೇಗ’ ಕ್ಕೂ ಒಂಥರಾ ಕೆಮಿಸ್ಟ್ರಿ ಲಾಕ್ ಆಗಿರಲೇಬೇಕಲ್ಲವೇ ?

ನಮ್ಮಲ್ಲಿರಬೇಕಾದ ಅತಿ ಮೌಲ್ಯಯುತವಾದ ಗುಣಗಳಲ್ಲಿ ತಾಳ್ಮೆ ಹಾಗೂ ಸಹನೆ ಬಹು ಮುಖ್ಯ. ನಮ್ಮ‌ ಬಹುತೇಕ ಸಮಸ್ಯೆಗಳನ್ನು ಮನಸಿನ ಮೇಲೆ‌ ಹತೋಟಿ ಇಟ್ಟುಕೊಳ್ಳುವುದರಿಂದ ಸಮರ್ಥವಾಗಿ ಎದುರಿಸಬಹುದು ಎಂಬುದು ಸಾರ್ವಕಾಲಿಕ ಸತ್ಯ. ಆದರೆ ಈ ಮೊಬೈಲ್ ಮೇನಕೆಯೆಂಬ ಮಾಯಾಂಗಿನಿಯ ಮೋಹಪಾಶದಲ್ಲಿ ನಮ್ಮ ವಿಶ್ವಾಮಿತ್ರನಂತಹಾ ಮನಸಿನ ನಿಯಂತ್ರಣ ತಪ್ಪಿ ಅನಾಹುತವಾಗುತ್ತಲೇ ಬಂದಿದೆ .

ಮಾಯೆಯ ಬಗೆಗಿನ ನಿರ್ಮೋಹಿಗಳನ್ನು ಪುರಾಣ ಕಾಲದಿಂದಲೂ ಅಲ್ಲಲ್ಲಿ ಕಂಡಿದ್ದೇವೆಯಾದರೂ, ಮೊಬೈಲ್ ನಿರ್ಮೋಹಿಗಳನ್ನು ಕಾಣುವುದು ದುಸ್ತರವಾಗಿದೆ. ಹೀಗಾಗಿ ನೆಟ್ಟಿಗರಲ್ಲಿನ ಮನಸು ನೆಟ್ಟಗಿರಲು ಸಾಧ್ಯವಾಗದೇ ಸಹನೆ ಎನ್ನುವುದು ನಮ್ಮಿಂದ‌ ನಿಧಾನಕ್ಕೆ ‌ನಿಧನವಾಗುತ್ತಲಿದೆ. ಸಹನೆಯ ಜಾಗದಲ್ಲಿ ಅಸಹನೆ ಒಳಗೊಳಗೇ ಬುಸುಗುಟ್ಟುತ್ತಾ ನಮ್ಮ‌ ವ್ಯಕ್ತಿತ್ವಕ್ಕೇ ಮಾರಕವಾಗಿ ಕಿರಿಕ್ ಜಗತ್ತನ್ನೇ ಸೃಷ್ಟಿಸಿದೆ.

ಕೊನೇಪಕ್ಷ ಹೆಂಡತಿ ಮಕ್ಕಳೊಂದಿಗೂ ಆಪ್ಯಾಯವಾಗಿ, ಆನಂದವಾಗಿ ಸಮಯ ಕಳೆಯಲು, ಬಂಧು ಬಳಗ, ಸ್ನೇಹಿತರೊಂದಿಗೆ ಮುಕ್ತವಾಗಿ ಹರಟಲು ಆಗದಂತಹಾ ವಿಚಿತ್ರ ವಿಷವ್ಯೂಹದ ವಾತಾವರಣವನ್ನು ಮೊಬೈಲ್ ಜಗತ್ತು ಕ್ರಿಯೇಟ್ ಮಾಡಿ ಬದುಕಿನ ಸುಂದರ ಕ್ಷಣಗಳನ್ನು ಆಪೋಷನ ತೆಗೆದುಕೊಂಡಿದೆ. ಈ ವಸ್ತು ಸದಾ ನಮ್ಮೊಂದಿಗಿರುವುದರಿಂದ ಏನೋ ಒಂಥರಾ ತಳಮಳ, ಜುಗುಪ್ಸೆ, ಅಸಹನೆ, ಬೇಸರ, ತಾತ್ಸಾರ, ಒಂಟಿತನ, ಸಿಡುಕುತನ, ಸಿನಿಕತನ….ಈ ಎಲ್ಲದರ ಸಹವಾಸವೂ ಬೋನಸ್ ರೂಪದಲ್ಲಿ ಬಂದು ವಕ್ಕರಿಸಿ ಬಿಟ್ಟಿವೆ.

ನಿಮ್ಮಲ್ಲಿ ಕೆಲವರು ನನ್ನ ಬರಹಕ್ಕೆ ಈ ರೀತಿ ಪ್ರತಿಕ್ರಿಯಿಸಲೂ ಬಹುದು .

” ಯಾವುದಾದರೂ ಅತಿಯಾದರೆ ಹೀಗೇನೇ ಆಗೋದು. ಎಷ್ಟು ಬೇಕೋ ಅಷ್ಟು ಬಳಸಬೇಕು. ಹಗಲೂ ರಾತ್ರಿ ಅದಕ್ಕೆ ದಾಸರಾಗಬಾರದು, ನಮ್ಮ‌ಬುದ್ದಿ ನಮ್ಮ‌ ಕೈಯ್ಯಲ್ಲಿರಬೇಕು . ಆಗ ಯಾವ ತೊಂದರೆಯೂ ಇರೋಲ್ಲ “… ಎಂಬ‌ ಉಪದೇಶದಲ್ಲೋ, ಅಥವಾ ” ಈಗ ನೀವು ಬರೆದ ಬರಹ ಮೊಬೈಲ್ ನಲ್ಲಿ ತಾನೇ ??? ಎಂತಲೋ ಕಾಮೆಂಟಿಸಲೂ ಬಹುದು. ಆದರೆ ಅಂಥವರ ವ್ಯಕ್ತಿತ್ವದಲ್ಲೂ ಅನೇಕ ಬದಲಾವಣೆಗಳು ಅವರಿಗೆ ಗೊತ್ತಿಲ್ಲದಂತೆಯೇ ಈ ಮಾಯಾಂಗಿನಿ ತಂದು ಬಿಟ್ಟಿರುತ್ತದೆ. ಒಮ್ಮೆ ಕೇಳಿನೋಡಿ‌ !

ಈ ಜಂಗಮವಾಣಿ ನಮ್ಮ ವ್ಯಕ್ತಿತ್ವದಲ್ಲಿ ನಕಾರಾತ್ಮಕ ‌ಬದಲಾವಣೆಗಳನ್ನು ತಂದೊಡ್ಡುವ ಮುನ್ನ ಸ್ವಲ್ಪ ಜಾಗರೂಕರಾಗೋದು ಒಳ್ಳೆಯದು. ಯಾಕೋ ಇತ್ತೀಚೆಗೆ ಬಹುತೇಕ ಮಂದಿ ಮಾತನಾಡಿಸಿದರೆ ಸಾಕು ಮೈಮೇಲೆ ಎಗರಿ ಬೀಳುತ್ತಾರೆ, ಶಾರ್ಟ್ ಟೆಂಪರ್ ಗಳ ಬಂಪರ್ ಗಳಂತೆ ರೇಗಿ ಬೀಳುತ್ತಿದ್ದಾರೆ, ಸುಖಾಸುಮ್ಮನೇ ಸಿಡಿದು ಸಿಟ್ಟಿಗೇಳುತ್ತಿದ್ದಾರೆ…!

ಇದಕ್ಕೆಲ್ಲಾ ಅತಿಯಾದ ಅಹರ್ನಿಶಿ ಮೊಬೈಲ್‌ ಬಳಕೆ ಕಾರಣವೆಂದು ಸಾರಾಸಗಟಾಗಿ ಆರೋಪಿಸಲಾಗದಿದ್ದರೂ ಅದರ ಪ್ರಭಾವ ಮಾತ್ರ ಸಾಕಷ್ಟಿದೆ ಎನ್ನಬಹುದು. ಜೀವನದಲ್ಲಿನ ಚಿಕ್ಕ‌ಚಿಕ್ಕ ಸಂತೋಷಗಳನ್ನು ಕಿತ್ತುಕೊಂಡು ನಮ್ಮೆಲ್ಲರನ್ನೂ ಭ್ರಮಾಲೋಕದ ಭಾವನೆಗಳ ಸಾಗರದಲ್ಲಿ ತೇಲಾಡಿಸುತ್ತಾ , ಆಕರ್ಷಕ ‌ಜಗತ್ತಿನಲ್ಲಿ‌ ಅಮಲೇರಿಸುತ್ತಾ ಸಾಗಿರುವ ಮೊಬೈಲ್ ಜಗತ್ತು ಸಂಪರ್ಕ ಕ್ರಾಂತಿಯ ಜೊತೆ ಜೊತೆಗೇ ‘ಸಂ‌ ‘ ಕಿರಿಕ್ ಭ್ರಾಂತಿಯನ್ನೂ ನಮಗೆ ತಗಲು ಹಾಕಿಬಿಟ್ಟಿದೆ.

ಮರೆಯುವ ಮುನ್ನ

ಬರೀ ಮೊಬೈಲ್‌ನ‌ ನೆಗೆಟಿವಿಟಿ ಬಗ್ಗೆ ಹೇಳಿದ ಮಾತ್ರಕ್ಕೇ , ಸಂಪರ್ಕ ಕ್ಷೇತ್ರದಲ್ಲಿ ಅದರ ಮಹೋನ್ನತ ಕೊಡುಗೆಯನ್ನು ಸ್ಮರಿಸದೇ ಇರಲಾಗದು . ಅದರದ್ದು ಪದಗಳಿಗೆ‌ ನಿಲುಕದ ಕೊಡುಗೆ. ಆದರೂ ಮನುಷ್ಯನ ವ್ಯಕ್ತಿತ್ವದಲ್ಲಿ , ಅವನ ಧೋರಣೆಯಲ್ಲಿ, ಮಾನವೀಯ ಮೌಲ್ಯಗಳಲ್ಲಿ, ಮನುಷ್ಯ ಸಂಬಂಧಗಳಲ್ಲಿ , ಗುಣ‌ ವಿಶೇಷಣಗಳಲ್ಲಿ ಮೊಬೈಲ್ ನ ಸುಧೀರ್ಘ ಬಳಕೆ ದುಷ್ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕಾದದ್ದು ಇಂದಿನ ತುರ್ತು ಅಗತ್ಯವೆಂದು ಅನಿಸುತಿದೆ.

ಆಪ್ತರಿಂದ ಫೋನ್ ಬಂದರೂ ಅದರತ್ತ ವಿಶೇಷ ಲಕ್ಷ್ಯ ಹರಿಸದೇ ಅಂತರ್ಜಾಲದ ಅಂತಃಪುರದಲ್ಲಿಯೇ ಸದಾ ಮುಳುಗಿ ಅಸಡ್ಡೆಯಿಂದ ಉತ್ತರಿಸುವ ಕ್ಯಾರೆಕ್ಟರ್ ಒಂದರ ಕರೆ ಈಗಷ್ಟೇ ಬಂದು ಅವನ ನೆನಪಾಗಿ ಇಷ್ಟೆಲ್ಲಾ ಕೊರೆತಕ್ಕೆ ಕಾರಣವಾಯಿತು ನೋಡಿ !

ನಿರ್ಜೀವ ವಸ್ತುವಿನ ಮುಂದೆ ನಿರ್ಮೋಹಿಯಾಗದಿದ್ದರೂ ಪರವಾಗಿಲ್ಲ ಆದರೆ ಅದಕ್ಕೆ ಶರಣಾಗಿ ಬಾಗದಿರಲಿ ಎನ್ನ‌ ಕಾಯ…. ಶಿವಾ…!!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

ಅಂಕಣ

Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?

Published

on

indian birthwort, Aristolochia tagala

‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.

ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:

ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.

ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?

ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್‌ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.

‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?

ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.

ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.

ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

Continue Reading

ದಿನದ ಸುದ್ದಿ

ಗೃಹಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ

Published

on

ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.

ಗೃಹ ಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.

ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending