Connect with us

ಲೈಫ್ ಸ್ಟೈಲ್

ಹಾಲು ಸಸ್ಯಾಹಾರವೇ !? ಮಾಂಸಾಹಾರವೇ!? : ಮಿಸ್ ಮಾಡ್ದೆ ಈ ಲೇಖನ ಓದಿ

Published

on

  • ಡಾ: ಎನ್.ಬಿ.ಶ್ರೀಧರ

ಹಾಲು ಕುಡಿಯುವವರು ಈ ಶಿರ್ಷಿಕೆ ನೋಡಿ ನಮಗ್ಯಾಕೆ ಈ ಪ್ರಶ್ನೆ? ಎಂದು ಹೌಹಾರುವುದು ಸಹಜ. ಹಾಲನ್ನು ಅಹಾರವಾಗಿ ಸೇವಿಸುವವರು ತಲೆ ಕೆಟ್ಟಿದೆ ಈ ಮನುಷ್ಯನಿಗೆ ಎಂದುಕೊಂಡರೆ ಮಾಂಸಾಹಾರಿಗಳು ಹಾಲು ಸಸ್ಯಾಹಾರ ಅಂದು ಕೊಂಡು ಸೇವಿಸುತ್ತಿದ್ದೀರಲ್ಲಾ !! ಬನ್ನಿ ನಮ್ಮ ಸಾಲಿಗೆ ಅಂದು ಒಳಗೊಳಗೇ ಖುಷಿ ಪಡುತ್ತಾರೆ..

ವೃತ್ತಿಯಲ್ಲಿ ಪಶುವೈದ್ಯನಾದರೂ ಸಹ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿರುವುದರಿಂದ ಪಾಠ ಮಾಡುವುದು ನನ್ನ ದೈನಂದಿನ ಚಟುವಟಿಕೆ. ಮೊನ್ನೆ ತರಗತಿಯಲ್ಲಿ ಪಾಠ ಮಾಡುತ್ತಾ ಸಾಂಧರ್ಭಿಕವಾಗಿ ವಿದ್ಯಾರ್ಥಿಗಳಿಗೆ ಈ ಪ್ರಶ್ನೆ ಹಾಕಿದೆ. ಸ್ವಲ್ಪ ಹೊತ್ತು ಗಲಿಬಿಲಿಗೊಂಡ ಅವರಲ್ಲಿ ಕೆಲವರು ಸಸ್ಯಾಹಾರವೇ ಸಾರ್..!! ಸಂಶಯವೇಕೆ? ಅಂದರು.

ಸಸ್ಯಾಹಾರವೆಂದರೆ ಸಸ್ಯಮೂಲದಿಂದ ಬಂದ ವಸ್ತುವಲ್ಲವೇ !? ಇದು ಕ್ಯಾರೇಟ್, ಟೊಮ್ಯಾಟೋ.. ಮೂಲಂಗಿ, ಮಾವು, ಬೇವು, ಸೊಪ್ಪು ಈ ರೀತಿ ಭೂಮಿಯಿಂದ ಬೆಳೆದ ವಸ್ತುಗಳೇ? ಎಂದು ಕೇಳಿದೆ. ಹೌದಲ್ಲ ಸಾರ್. ಸಸ್ಯಾಹಾರ ಅಲ್ಲ.!! ಹಾಗಿದ್ರೆ ಮಾಂಸಾಹಾರವೇ? ಎಂದು ಮುಂದುವರೆದೆ. ವಿದ್ಯಾರ್ಥಿಗಳು ಒಕ್ಕೊರಳಿನಿಂದ ಅಲ್ಲ. ಎಲ್ಲಾ….. ಸಾರ್ ಅಂದ್ರು. ಅಲ್ಲಪ್ಪಾ!!.. ಹಾಲು ಸಸ್ಯಾಹಾರ ಅಲ್ಲ.

ಅಂದರೆ ಅದು ಪ್ರಾಣಿಯ ಜೀವಂತ ಜೀವಕೋಶಗಳು ಅದರಲ್ಲಿ ಇಲ್ಲವೇ? . ಪ್ರಾಣಿಯ ದೇಹದ ಕೆಚ್ಚಲಿನಲ್ಲಿ ಉತ್ಪನ್ನವಾದ ಮತ್ತು ಪ್ರಾಣಿಯ ದೇಹದಿಂದ ಬಂದಿದ್ದು ಅಂದರೆ ಅದು ಮಾಂಸಾಹಾರ! ಅಲ್ಲವೇ ? ಎಂದು ಪ್ರಶ್ನಿಸಿದೆ. ತಲ ತಲಾಂತರದಿಂದ ಬಂದ ನಂಬಿಕೆಯ ಬುಡಕ್ಕೆ ಕೊಡಲಿ ಪೆಟ್ಟು ಬಿದ್ದ ಹಾಗೇ ಕೆಲವು “ಹಾಲಾಹಾರಿಗಳು” ಹೌಹಾರಿ ಬಿದ್ದರು.

ಮೂಲತ: ಮಾಂಸಾಹಾರಿಯಾದ ಮತ್ತು ಮನೆಯಲ್ಲಿ ಸಸ್ಯಾಹಾರಿಯಾಗಿದ್ದು ಹಾಸ್ಟೆಲ್ನಲ್ಲಿ ಕಾಲಕಾಲಕ್ಕೆ ತಕ್ಕಂತೆ “ಸೀಸನಲ್” ಮಾಂಸಾಹಾರಿಯಾದ ಕೆಲವು ವಿದ್ಯಾರ್ಥಿಗಳು ಈ “ಹಾಲಾಹಾರಿ” ಗಳನ್ನು ಮನಸ್ಸಿಗೆ ಬಂದಂತೆ ಟೀಕಿಸತೊಡಗಿದರು.

ನಮ್ಮ ಸಮಾಜದಲ್ಲೂ ಸಹ ಮನೆಯವರಿಗೆ, ಸಂಪ್ರದಾಯಕ್ಕೆ, ಹೆಂಡತಿಗೆ ಹೆದರಿ ಸಭೆ ಸಮ್ಮೇಳನದಲ್ಲಿ ಗುಟ್ಟಾಗಿ “ಸೀಸನಲ್” ಮಾಂಸಾಹಾರಿಯಾಗುವ ಮತ್ತು ಅಲ್ಕೋಹಾಲ್ ಸಹವಾಸ ಮಾಡುವ ಎಲ್ಲರಿಗೂ ಸಹ ಈ ಮಾತು ಅನ್ವಯ. ಹಾಗಿದ್ರೆ ಹಾಲು ಸಸ್ಯಾಹಾರವೂ ಅಲ್ಲಾ.. ಮಾಂಸಾಹಾರವೂ ಅಲ್ಲ. ಮತ್ತೇನು ಇದು? ಎಂದು ಪ್ರಶ್ನೆ ಹಾಕಿದೆ.

ಮಾಂಸವೆಂದರೆ ಬಹುಜೀವಕೋಶಗಳ ಗುಚ್ಚವನ್ನು ಹೊಂದಿದ, ಅಸ್ಥಿಪಂಜರಕ್ಕೆ ಅಂಟಿಕೊಂಡ ಒಂದು ಅಂಗಾಂಶ. ಅದನ್ನು ಪ್ರಾಣಿಗಳಿಂದ ತೆಗೆದು ತಿಂದರೆ ಅದು ಮಾಂಸಾಹಾರ. ಹಾಲು ಅಂತಹ ವಸ್ತುವೇ? ಎಂದು ಪ್ರಶ್ನಿಸಿದೆ. ಖಂಡಿತಾ ಅಲ್ಲ ಸಾರ್ ಎಂದು ಒಕ್ಕೊರಳ ಉತ್ತರ ಬಂದಿತು.

ಮಾಂಸವೆಂದರೆ ಪ್ರಾಣಿ ಸತ್ತ ಮೇಲೆ ಅಥವಾ ಪ್ರಾಣಿಯನ್ನು ಸಾಯಿಸಿ ಅದರ ಅಂಗಗಳನ್ನು ಉಪ್ಪು ಕಾರ ಹಾಕಿ ಬೇಯಿಸಿ ತಿನ್ನುವುದಲ್ಲವೇ? ಸತ್ತ ಮೇಲೆ ಪ್ರಾಣಿಯು ಶರೀರವನ್ನು ಶವ ಅಥವಾ ಕಳೆಬರಹ ಅಥವಾ ಹೆಣ ಅಂತ ಕರೆಯಬಹುದಲ್ಲವೇ? ಹಾಗಿದ್ದರೆ ಮಾಂಸಾಹಾರಿಗಳು “ಶವ ಮಾಂಸ ಭಕ್ಷಕರೆ ? ಹೆಣ ತಿನ್ನುವವರೆ? ಕಳೆಬರಹ ಬೇಯಿಸಿ ತಿನ್ನುವವರೇ? ಇತ್ಯಾದಿ ತರಲೆ ಪ್ರಶ್ನೆಗಳು ತೂರಿ ಬಂದವು.

ಮಾಂಸಾಹಾರಿಗಳನ್ನು ಈವತ್ತಿನ ” ಕೋಳಿ ಶವ ಮಾಂಸ ಭಕ್ಷಣೆ” ಕಾರ್ಯ ಸಸೂತ್ರವಾಗಿ ಮುಗಿಯಿತೆ!? ಎಂದು ಕೇಳಿದರೆ ಗೂಸಾ ಖಚಿತ. ಅಥವಾ ಚಿಕನ್ ಮಂಚೂರಿಯನ್ನು “ಮಸಾಲೆ ಪೂರಿತ ಕೋಳಿ ಶವ ಮಾಂಸದ ಖಾದ್ಯ” ಎನ್ನಬಹುದಾದರೆ ಮಟನ್ ಬಿರ್ಯಾನಿಯನ್ನು “ ಬೇಯಿಸಿದ ಕುರಿ ಶವ ಮಾಂಸದ ಅನ್ನ ಖಾದ್ಯ” ಅನ್ನಬಹುದೇನೋ? ಇತ್ಯಾದಿ ಸಲಹೆಗಳು “ಸಸ್ಯಾಹಾರಿ” ವಿದ್ಯಾರ್ಥಿಗಳಿಂದ ಬಂದು “ಮಾಂಸಾಹಾರಿ” ವಿದ್ಯಾರ್ಥಿಗಳನ್ನು ಕೆರಳಿಸಿದವು.

ಮೊಟ್ಟೆ ಸಸ್ಯಾಹಾರವೇ? ಮಾಂಸಾಹಾರವೇ? ಎಂದು ಇನ್ನೂ ಗಲಿಬಿಲಿಗೊಳಿಸಿದೆ. ಹೌದಲ್ಲ !!. ಮೊಟ್ಟೆಯೂ ಸಹ ಸಸ್ಯಾಹಾರಿ ಅಥವಾ ಮಾಂಸಾಹಾರಿ ವಸ್ತು ಅಲ್ಲ.. ಮತ್ತೇನಿದು? ಸ್ವಲ್ಪ ಹೊತ್ತು ತರಗತಿಯಲ್ಲಿ ನೀರವ ಮೌನ. ಅವರಲ್ಲೇ ಗುಜು..ಗುಜು.. ಚರ್ಚೆ ಪ್ರಾರಂಭವಾಯ್ತು.

ಹಾಲು ಮತ್ತು ಮೊಟ್ಟೆ ಸಸ್ಯಾಹಾರವೂ ಅಲ್ಲ.. ಮಾಂಸಾಹಾರವೂ ಅಲ್ಲ.. “ಪ್ರಾಣಿಜನ್ಯ ಶಾಖಾಹಾರಿ” ವಸ್ತು ಅನ್ನಬಹುದೇ? ಅಂದೆ. ಇದು ಸರಿ ಸಾರ್ ಅಂದ್ರು. ಎರಡೂ ಪಾರ್ಟಿಗಳಿಗೂ ತಾತ್ಕಾಲಿಕ ಮಾತಿನ ಸಮರ ನಿಂತು ತರಗತಿ ತಹಬಂದಿಗೆ ಬಂತು.

ಸ್ವಲ್ಪ ವೈಜ್ಞಾನಿಕ ವಿಚಾರಕ್ಕೆ ಬರೋಣ. ಒಂದು ಲೀಟರ್ ಹಾಲಿನಲ್ಲಿ ಸರಾಸರಿ 850 ಗ್ರಾಂ ನೀರು, 50 ಗ್ರಾಂ ಲ್ಯಾಕ್ಟೋಸ್, 50 ಗ್ರಾಮ್ ಕೊಬ್ಬು, 40 ಗ್ರಾಂ ಪ್ರೋಟೀನ್, 10 ಗ್ರಾಂ ಖನಿಜಗಳು, ಜೀವಸತ್ವಗಳು ಮತ್ತಿತರ ಘನ ವಸ್ತುಗಳಿರುತ್ತವೆ. ಈ ಒಂದು ಲೀಟರ್ ಹಾಲನ್ನು ಉತ್ಪಾದಿಸಲು ಕೆಚ್ಚಲಿನ ಹಾಲು ಉತ್ಪಾದಿಸಲೆಂದೇ ಇರುವ ವಿಶೇಷ ಜೀವಕೋಶದ ಮೂಲಕ ಸುಮಾರು 400 ಲೀಟರ್ ರಕ್ತದ ಪರಿಚಲನೆಯಾಗಿ ಈ ಎಲ್ಲ ವಸ್ತುಗಳನ್ನು ಪೂರೈಸಬೇಕಾಗುತ್ತದೆ.

ಅಂದರೆ ಪ್ರತಿದಿನ ಸುಮಾರು 20ಲೀಟರ್ ಹಾಲು ಉತ್ಪಾದಿಸುವ ಹಸುವಿನ ಕೆಚ್ಚಲಿನಲ್ಲಿ 8000 ಲೀಟರ್ ರಕ್ತದ ಪರಿಚಲನೆಯಾಗುತ್ತದೆ. ಪ್ರತಿ ಮಿಲಿ ಹಾಲಿನಲ್ಲಿ ಸುಮಾರು 2 ಲಕ್ಷ ಕೆಚ್ಚಲಿನ ಪದರದ ಜೀವಂತ ಜೀವಕೋಶಗಳು ಬರುತ್ತವೆ ಎಂದರೆ ಕೆಲವರಿಗೆ ಆಶ್ಚರ್ಯವಾದರೂ ಸಹ ಸತ್ಯ. ಇವುಗಳಿಗೆ ಸೊಮ್ಯಾಟಿಕ್ ಸೆಲ್ ಗಳೆಂದೂ ಕರೆಯುತ್ತಾರೆ.

ಕೆಚ್ಚಲು ಬಾವಿನಂತಹ ಖಾಯಿಲೆಗಳನ್ನು ಪತ್ತೆ ಮಾಡುವಾಗ ಇವುಗಳ ಸಂಖ್ಯೆ 10 ಪಟ್ಟು ಜಾಸ್ತಿಯಾಗುವುದರಿಂದ ಇವುಗಳನ್ನು ಮಾಪಕವಾಗಿಯೂ ಸಹ ಬಳಸುತ್ತಾರೆ.ಹಾಲನ್ನು ಸೇವಿಸಿದಾಗ ಇವುಗಳ ಸೇವನೆಯೂ ಅನಿವಾರ್ಯ. ಭಾರತದಲ್ಲಿ ಹಾಲನ್ನು ಬಿಸಿಮಾಡಿ ಅಥವಾ ಕುದಿಸಿ ಕುಡಿಯುವುದರಿಂದ ಇದನ್ನು “ಶಾಖಾಹಾರ” ಅಂದರೆ ಬೇಯಿಸಿ ತಿನ್ನುವ ಅಹಾರವೆನ್ನಬಹುದು. ಅಂದರೆ ಹಾಲಿಗೆ “ಪ್ರಾಣಿಜನ್ಯ ಶಾಖಾಹಾರ”ವೆನ್ನಬಹುದೇ ಹೊರತು ಸಸ್ಯಾಹಾರವಾಗಲು ಸಾಧ್ಯವೇ ಇಲ್ಲ!!.

ಇನ್ನೂ ಮುಂದಕ್ಕೆ ಹೋಗಿ ಹೇಳಬೇಕೆಂದರೆ, ಹಾಲಿನಲ್ಲಿ ಲಕ್ಷಾಂತರ ಪ್ರಾಣಿ ಜೀವಕೋಶಗಳಿದ್ದರೆ, ಕೋಳಿಯಿಂದ ಸಿಗುವ ಮೊಟ್ಟೆ ಏಕಜೀವಕೋಶದಿಂದ ಬಂದಿರುವ ವಸ್ತು. ಮೊಟ್ಟೆಯನ್ನು ಗಂಡುಕೋಳಿಯ ಸಂಪರ್ಕವಿಲ್ಲದೇ ಪಡೆಯುವುದರಿಂದ ಈ ಏಕಜೀವಕೋಶದ ವಸ್ತುವನ್ನು “ಪಕ್ಷಿಜನ್ಯ ಶಾಖಾಹಾರ” ವೆಂದು ಕರೆಯಬಹುದೇನೋ? ಇದು ವಿಚಾರ ಮಾಡುವ ವಿಷಯ.

ತಿನ್ನುವ ವಸ್ತುವಿನ ಆಯ್ಕೆ ಆಯಾ ಮನುಜನ ಹಕ್ಕು ಮತ್ತು ಆತನ ಸಂಪ್ರದಾಯದಂತೆ ಇಚ್ಚೆ ಕೂಡಾ. ಹಾಲನ್ನು ಸಸ್ಯಾಹಾರಿ ಪದಾರ್ಥ ಎನ್ನುವವರು ಅದೇ ಅರ್ಥದಲ್ಲಿ ಮೊಟ್ಟೆಯನ್ನೂ ಸಹ ಸಸ್ಯಾಹಾರ ಎಂದು ಅನಿವಾರ್ಯವಾಗಿ ಒಪ್ಪಲೇ ಬೇಕು.

ಹೊಟೇಲುಗಳಲ್ಲಿ ಗೋಬಿ ಮಂಚೂರಿಯನ್ನು ಇಷ್ಟ ಪಟ್ಟು ಚಪ್ಪರಿಸಿಕೊಂಡು ತಿನ್ನುವ ಅನೇಕರು ಅಣಬೆಯಿಂದ ಮಾಡಿದ “ಮಶ್ರೂಮ್ ಮಂಚೂರಿ”ಯನ್ನು ಸಸ್ಯಾಹಾರವಲ್ಲ ಎಂದು ತಿನ್ನುವುದಿಲ್ಲ. ಅಣಬೆ ತಿಂದರೆ ಮಾಂಸ ತಿಂದಂತೆ ಎಂದು ಅವರ ಅಂಬೋಣ. ಅಣಬೆ ಒಂದು ಶಿಲೀಂದ್ರ ವರ್ಗಕ್ಕೆ ಸೇರಿದ ವಸ್ತು. ಶಿಲೀಂದ್ರ ಸಸ್ಯವಲ್ಲ. ಹಾಗೆಯೇ ಅದು ಪ್ರಾಣಿಣಿಜನ್ಯವೂ ಅಲ್ಲ ಅಥವಾ ಈ ಮೊದಲು ತಿಳಿಸಿದಂತೆ ಮಾಂಸಾಹಾರವೂ ಅಲ್ಲ. ಇದನ್ನು “ಶಾಖಾಹಾರ” ಎಂದು ಕರೆಯಬಹುದು.

ಮುಂದಿನ ಪ್ರಶ್ನೆ ಜೇನುತುಪ್ಪ ಸಸ್ಯಾಹಾರಿಯೇ? ಮೇಲ್ನೋಟಕ್ಕೆ ಇದು ಸಸ್ಯಗಳ ಮಕರಂದದ ಮೂಲದ ವಸ್ತುವಾಗಿ ನಿಜ ಅನ್ನಿಸಿದರೂ ಸಹ, ಜೇನು ತುಪ್ಪ ಜೇನುಹುಳಗಳು ಕಷ್ಠಪಟ್ಟು ಹೂವಿನ ಮಕರಂದವನ್ನು ಅವುಗಳ ಬಾಯಿಯಲ್ಲಿ ಹೀರಿಕೊಂಡು ಬಂದು ಜೇನುಗೂಡಿನಲ್ಲಿ ಇರುವ ಇದಕ್ಕೆಂದೇ ಸಿದ್ಧ ಪಡಿಸಿರುವ ಕೋಶದಲ್ಲಿ ಹಾಕುತ್ತವೆ.

ಇದಕ್ಕೆ ಸತತವಾಗಿ ಅವುಗಳ ರೆಕ್ಕೆಗಳ ಮೂಲಕ ಹಾಕುವ ಗಾಳಿಯ ಮೂಲಕ ಮಕರಂದವನ್ನು ಸಿಹಿಯಾದ ಸುವಾಸನಾ ಯುಕ್ತ ಜೇನುತುಪ್ಪವಾಗಿ ಪರಿವರ್ತಿಸುತ್ತವೆ. ಜೇನುಹುಳಗಳ ಎಂಜಲಿನಿಂದ ಕಲುಷಿತವಾದ ವಸ್ತು ಸಸ್ಯಾಹಾರಿ ಆಗಲು ಸಾಧ್ಯವೇ? ಸಾಧ್ಯವಿಲ್ಲ ಅಲ್ಲವೇ?.

ಇತ್ತೀಚೆಗೆ ಕೆಲವರಲ್ಲಿ “ವೆಗಾನ್” ಪದ್ದತಿಯ ಅಹಾರ ಪದ್ಧತಿ ರೂಢಿಯಲ್ಲಿದೆ. ವೆಗಾನ್ ಅಂದರೆ ಪ್ರಾಣಿ ಅಥವಾ ಕೀಟಮೂಲದ ಯಾವುದೇ ವಸ್ತುಗಳನ್ನು ಹಿಂಸಿಸಿ ಪಡೆಯುವ ಅಹಾರವನ್ನು ತಿನ್ನದೇ ಇರುವುದು. ಇದರಲ್ಲಿ ಹಾಲು, ಮೊಟ್ಟೆ, ಮಾಂಸ, ಜೇನು ತುಪ್ಪ ಇತ್ಯಾದಿ ಅನೇಕ ವಸ್ತುಗಳು ಸೇರುತ್ತವೆ. ಕಠಿಣ ಸಸ್ಯಾಹಾರಿಗಳಾದ ದಿಗಂಬರ ಜೈನ ಮುನಿಗಳು ಸಹ ಈ ರೀತಿಯ ಆಹಾರ ಪದ್ಧತಿ ಅನುಸರಿಸುತ್ತಾರೆ ಎನ್ನುತ್ತಾರೆ.

ಅಹಾರ ಪದ್ದತಿ ಅವರವರ ಪರಂಪರೆ, ಜಾತಿ, ಕುಲ ಇನ್ನೂ ಅನೇಕ ಸಂಕಿರಣ ಸಾಮಾಜಿಕ ಹಿನ್ನೆಲೆಯಲ್ಲಿ ಜೀವನದಲ್ಲಿ ಅಡಕವಾಗಿರುವ ಅಂಶ ಮತ್ತು ತೀರಾ ವೈಯಕ್ತಿಕ ವಿಷಯ. ಯಾವ ಅಹಾರ ಪದ್ದತಿಯಾದರೇನು? ಸರಿಯಾದ ಸಮಯದಲ್ಲಿ, ಶುಚಿಯಾದ, ರುಚಿಯಾದ, ಕಡಿಮೆ ಮಸಾಲೆ, ಕಡಿಮೆ ಕೊಬ್ಬು ಇರುವ ಆರೋಗ್ಯಕಾರಿ ಅಹಾರವನ್ನೇ ಹಿತಮಿತವಾಗಿ ಸೇವಿಸಿ ಆರೋಗ್ಯವಂತರಾಗಿರುವುದೇ ಮುಖ್ಯ. ಏನಂತೀರಿ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಆತ್ಮಕತೆ | ಅನಾಗರಿಕ ಆಚರಣೆಯ ವಿರುದ್ಧ

Published

on

  • ರುದ್ರಪ್ಪ ಹನಗವಾಡಿ

ಸೊರಬ ತಾಲ್ಲೂಕಿನಲ್ಲಿ ಇನ್ನೊಂದು ಮುಖ್ಯ ಘಟನೆಯನ್ನು ಹೇಳಿ ಮುಂದೆ ಹೋಗುತ್ತೇನೆ. ಸೊರಬ ತಾಲ್ಲೂಕಿನಲ್ಲಿ ತಹಸೀಲ್ದಾರರಾಗಿ ರಾಮನಾಥ್ ಎಂಬ ಹಿರಿಯರಿದ್ದರು. ಅವರು ತಾಲ್ಲೂಕಿನಲ್ಲಿ ಎಲ್ಲಾ ಆಡಳಿತ ನೋಡಿಕೊಳ್ಳುತ್ತಿದ್ದರು.

ವಿಶೇಷ ತಹಸೀಲ್ದಾರರು ಸಾಮಾನ್ಯವಾಗಿ ಯಾವ ಉದ್ದೇಶಕ್ಕೆ ನಿಯೋಜಿಸಿದ್ದರೋ ಅದನ್ನು ಬಿಟ್ಟು ಇತರೆ ಸಾಮಾನ್ಯ ವಿಷಯಗಳಲ್ಲಿ ಅವರಿಗೆ ಸಂಬಂಧಿಸಿರುವುದಿಲ್ಲ. ಹಾಗಾಗಿ ನಾನು ನನ್ನ ಕೆಲಸಗಳನ್ನು ಬಿಟ್ಟು ತಾಲ್ಲೂಕು ಕಛೇರಿ ಕೆಲಸಗಳಲ್ಲಿ ತೊಡಗಿಕೊಂಡಿರಲಿಲ್ಲ. ಆದರೆ ಇದೇ ಸಮಯದಲ್ಲಿ ಸೊರಬ ತಾಲ್ಲೂಕಿನ ಚಂದ್ರಗುತ್ತಿ ಜಾತ್ರೆಯ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ವಿಶೇಷ ಸಭೆ ನಡೆಸಿ ಅಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆಯ ಆಚರಣೆಯನ್ನು ತಡೆಯಲು ಸೂಚನೆ ನೀಡಿತ್ತು.

ಬೆತ್ತಲೆಸೇವೆಯ ಈ ಅನಾಗರಿಕ ಆಚರಣೆಯ ಬಗ್ಗೆ ಪ್ರೊ. ಬಿ. ಕೃಷ್ಣಪ್ಪನವರು, ನಾನು ಸೊರಬಕ್ಕೆ ಬರುವ ಒಂದು ವರ್ಷ ಮುಂಚಿನಿAದ ಬೆತ್ತಲೆ ಸೇವೆಯ ಆಚರಣೆ ಒಂದು ಅನಾಗರಿಕ ಆಚರಣೆ ಎನ್ನುವ ಬಗ್ಗೆ ಅನೇಕ ಲೇಖನಗಳನ್ನು ಬರೆದು ಇದನ್ನು ತಡೆಗಟ್ಟಬೇಕೆಂದು ಅಂದಿನ ರಾಜ್ಯ ಸರ್ಕಾರಕ್ಕೆ ಆಗ್ರಹಿಸುವ ಪತ್ರ ಬರೆದು ಈ ವಿಷಯಗಳೆಲ್ಲಾ ದಿನಪತ್ರಿಕೆ ಮತ್ತು ಆಗ ಜಾಣಜಾಣೆಯರ ಪತ್ರಿಕೆ ಎಂದು ಹೇಳಿ ತರುತ್ತಿದ್ದ ಲಂಕೇಶ್ ಪತ್ರಿಕೆಯಲ್ಲೂ ಪ್ರಕಟಗೊಂಡಿತ್ತು.

1986ರ ಜಾತ್ರೆ ಸಮಯದಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ತಂಗರಾಜ್ ಅವರು ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಭೆ ನಡೆಸಿ ಬೆತ್ತಲೆ ಹೋಗುವ ಜನರನ್ನು ಜಾಗೃತಗೊಳಿಸಿ ತಡೆಯಬೇಕೆಂದು ಜಿಲ್ಲಾಡಳಿತ ತೀರ್ಮಾನಿಸಿತ್ತು. ಕೃಷ್ಣಪ್ಪನವರ ಡಿಎಸ್‌ಎಸ್ ಸಂಘಟನೆಯ ಹೋರಾಟದ ಜೊತೆಗೆ ಶಿವಮೊಗ್ಗ-ಸಾಗರ-ಸೊರಬದಲ್ಲಿನ ಎಲ್ಲ ಪ್ರಗತಿಪರ ಸಂಘಟನೆಗಳು, ಕನ್ನಡ ಸಂಘ, ಪ್ರಗತಿಪರ ಮಹಿಳಾ ಲೇಖಕಿಯರ ಸಂಘಟನೆಗಳು ಕೈಜೋಡಿಸಿದ್ದವು. ಭದ್ರಾವತಿಯಿಂದ ಪ್ರೊ. ಚಂದ್ರಶೇಖರಯ್ಯ, ಡಿಎಸ್‌ಎಸ್ ಚಂದ್ರು, ತೋರಣಗಟ್ಟಿ ಚಂದ್ರಶೇಖರ್, ಬಿದರಳ್ಳಿ ನರಸಿಂಹಮೂರ್ತಿ, ಇನ್ನೂ ಅನೇಕ ಪ್ರಗತಿಪರ ಹೋರಾಟಗಾರರು ಭಾಗವಹಿಸಿದ್ದರು.

ನಾನು ಸರ್ಕಾರದ ಭಾಗವಾಗಿ ಸಂಜೆ ಹಳ್ಳಿಗಳಿಗೆ ಕರಪತ್ರಗಳನ್ನು ಹಂಚಿ, ‘ಯಾವ ದೇವರಿಗೂ ಬೆತ್ತಲೆ ಪೂಜೆ ಸಲ್ಲಿಸುವುದು ಇಷ್ಟವಾಗದು. ಇದೆಲ್ಲ ಹಿಂದುಳಿದವರನ್ನೂ, ದಲಿತರನ್ನೂ ಶೋಷಣೆ ಮಾಡುವ ಕ್ರೂರ ಪದ್ಧತಿ, ಇವನ್ನು ನಿವಾರಣೆಮಾಡಬೇಕೆಂದು ಭಾಷಣ ಮಾಡುತ್ತಾ ತಾಲ್ಲೂಕು ಕಛೇರಿಯ ಸಿಬ್ಬಂದಿಯನ್ನು ಹಲವು ತಂಡಗಳಾಗಿ ಮಾಡಿಕೊಂಡು ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದ್ದೆವು. ಸರ್ಕಾರದ ನಿರ್ದೇಶನವಿದ್ದುದರ ಜೊತೆಗೆ ಈ ವಿಷಯಗಳು ನನಗೆ ಇಷ್ಟವಾದ ಕೆಲಸವಾಗಿದ್ದರಿಂದ ಹೆಚ್ಚಿನ ಆಸಕ್ತಿಯಿಂದ ಬೆತ್ತಲೆ ಸೇವೆ ವಿರುದ್ಧ ಪ್ರಚಾರ ಮಾಡುತ್ತಿದ್ದೆವು. ಹೀಗೆ ಎಲ್ಲಾ ಕಡೆ ಪ್ರಚಾರ ಮಾಡಿದ ಮೇಲೆ ಪ್ರೊ.ಬಿ.ಕೆ ಮತ್ತು ಶಿವಪ್ಪ ಮಾಸ್ತರು ಇನ್ನು ಕೆಲವು ಗೆಳೆಯರು ನಮ್ಮಲ್ಲಿ ಊಟ ಉಪಚಾರ ಮಾಡಿ ಹೋಗುತ್ತಿದ್ದರು. ಇದರ ಸಂಪೂರ್ಣ ಘಟನೆಯ ವಿವರವನ್ನು ಈಗಾಗಲೇ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ 2010ರಲ್ಲಿ ಪ್ರಕಟಿಸಿರುವ ‘ಬಯಲು.. ಬೆತ್ತಲೆ..ಚಂದ್ರಗುತ್ತಿ’ ಎಂಬ ಪುಸ್ತಕದಲ್ಲಿನ ಮಾಹಿತಿಯನ್ನು ಇಲ್ಲಿ ಮುಂದುವರೆಸಲಾಗಿದೆ.

ಬೆತ್ತಲೆ ಸೇವೆ ನಡೆಯುವ ಒಂದು ವಾರ ಮುಂಚಿತವಾಗಿಯೇ ಕೃಷ್ಣಪ್ಪನವರ ನೇತೃತ್ವದಲ್ಲಿ ಡಿ.ಎಸ್.ಎಸ್. ಕಾರ್ಯಕರ್ತರು ಮತ್ತು ಪ್ರಗತಿಪರ ಸಂಘಟನೆಗಳೊಡನೆ ಸಂಜೆ ಹಳ್ಳಿಗಳಿಗೆ ಹೋಗಿ ಭಾಷಣಗಳ ಮುಖಾಂತರ ಬೆತ್ತಲೆ ಸೇವೆಯನ್ನು ವಿರೋಧಿಸುವ ಪ್ರಚಾರದಲ್ಲಿ ನಾನೂ ತೊಡಗಿಸಿಕೊಂಡಿದ್ದೆ. ಚಂದ್ರಗುತ್ತಿ ದೇವಸ್ಥಾನ ಸಮಿತಿಯ ಸಂಚಾಲಕರಾಗಿದ್ದ ಈಡೂರು ಪರಶುರಾಮಪ್ಪ ಮತ್ತು ಅವರ ಸ್ನೇಹಿತರು ವೈಯಕ್ತಿಕವಾಗಿ ಬೆತ್ತಲೆ ಸೇವೆಯನ್ನು ವಿರೋಧಿಸುವ ಹೋರಾಟಕ್ಕೆ ನಮ್ಮ ಬಳಿ ಸಮ್ಮತಿಸಿದ್ದರೂ ಇದನ್ನು ವಿರೋಧಿಸುವುದು ಹೇಗೆ ಎಂಬುದರ ಬಗ್ಗೆ ಅವರಲ್ಲಿ ದುಗುಡ ತುಂಬಿತ್ತು. ಆಗಿನ ಜನಪ್ರತಿನಿಧಿಗಳು ಯಾರೂ ಈ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ಇದೊಂದು ಅತಿ ಸೂಕ್ಷ್ಮ ವಿಚಾರವೆಂದೂ- ಏನಾದರೂ ಮಾತನಾಡಿದರೆ ಜನರಿಂದ ದೂರ ಆಗುವ ಆತಂಕ ರಾಜಕಾರಣಿಗಳ ಒಳ ಇಂಗಿತವಾಗಿತ್ತು. ಚುನಾವಣಾ ರಾಜಕೀಯದ ದೃಷ್ಟಿಯಿಂದ ಅವರಿಗೆ ಇದೆಲ್ಲ ಬೇಡದ ವಿಚಾರವಾಗಿತ್ತು.

ಈ ಹಿನ್ನೆಲೆಯಲ್ಲಿ ಬೆತ್ತಲೆಸೇವೆ ನಡೆಸುವ ಮೊದಲ ದಿನ ಸರ್ಕಾರವು ಸೂಚಿಸಿದಂತೆ ಡಿ.ಎಸ್.ಎಸ್. ಮತ್ತು ಇತರೆ ಸಂಘಟನೆಯ ಕಾರ್ಯಕರ್ತರು- ಬೆತ್ತಲೆ ಹೋಗುತ್ತಿದ್ದವರನ್ನು ತಡೆದು ಅವರಿಗಾಗಿ ಹೊಸ ಬಟ್ಟೆ ತಂದಿದ್ದ ಮಹಿಳಾ ಕಾರ್ಯಕರ್ತರು ಅವರಿಗೆ ಸುತ್ತಿ- ಕಳುಹಿಸುತ್ತಿದ್ದರು. ಅವರು ಸುತ್ತಿಕೊಂಡು ಮುಂದೆ ಹೋಗುತ್ತಿದ್ದಾಗ ಮತ್ತೆ ಬಿಚ್ಚಿಕೊಂಡು ಓಡುತ್ತಿದ್ದುದು ನಡೆಯುತ್ತಲೂ ಇತ್ತು. ಮೊದಲ ದಿನದ ಈ ಕರ‍್ಯ ಸಂಪೂರ್ಣವಾಗಿ ಶಾಂತಿಯುತವಾಗಿ ನಡೆಯಿತು. ಸರ್ಕಾರ ಮತ್ತು ಡಿಎಸ್‌ಎಸ್ ಕರ‍್ಯಕರ್ತರು ಕೂಡ ಇದು ಸಂಪೂರ್ಣ ಯಶಸ್ವಿಯಾಯಿತೆಂದೇ ಭಾವಿಸಿದೆವು.

ಆದರೆ ಎರಡನೇ ದಿನ ಅಂದರೆ, 20-3-1986ರಂದು ಬೆಳಿಗ್ಗೆಯಿಂದಲೇ ಜನಸಾಗರ ವಿವಿಧ ಕಡೆಗಳಿಂದ ಹರಿದು ಬರುತ್ತಿತ್ತು. ನಾನು ನನ್ನ ಸಿಬ್ಬಂದಿಯೊಡನೆ ಮಾಮೂಲಿನಂತೆ ಜಾತ್ರೆ ನಡೆಯುವ ಸ್ಥಳಕ್ಕೆ ಹೋಗುತ್ತಿದ್ದಾಗ ಬೆತ್ತಲೆ ಸೇವೆ ಮಾಡೋ ಹೆಂಗಸಿನ ಫೋಟೋ ತೆಗೆಯುತ್ತಿದ್ದ ಇನ್ನೊಬ್ಬ ಮಹಿಳಾ ಫೋಟೋಗ್ರಾಫರ್‌ನನ್ನು ನಮ್ಮ ಎದುರಿಗೆ ಅಡ್ಡಹಾಕಿ ಅವಳು ತೆಗೆದಿದ್ದ ಫೋಟೋ ರೀಲುಗಳನ್ನು ಹೊರತೆಗೆದು ಅವಳನ್ನು ನಮ್ಮ ಎದುರಿಗೆ ಥಳಿಸಲು ಮುಂದಾಗಿ, ಅವಳನ್ನು ನಗ್ನಗೊಳಿಸಿದರು. ಆಗ ಜೋಗಿತಿಯರನ್ನು ನಾನು ತಡೆಯಲು ಹೋದಾಗ ವಾಗ್ವಾದ-ತಳ್ಳಾಟ ಪ್ರಾರಂಭವಾಯಿತು.

ಸರ್ಕಾರ ಮತ್ತು ವಿವಿಧ ಸಂಘಟನೆಗಳನ್ನು ಜೋಗತಿಯರು ಎದುರು ಹಾಕಿಕೊಳ್ಳುವುದನ್ನು ಊಹಿಸದಿದ್ದ ನಮಗೆ ಇದೆಲ್ಲ ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ಜನರು ಅಲ್ಲಿ ಡಿ.ಎಸ್.ಎಸ್. ಕಾರ್ಯಕರ್ತರನ್ನ ಹೊಡೆದರಂತೆ. ಇಲ್ಲಿ ಬಟ್ಟೆ ಬಿಚ್ಚಿದರಂತೆ, ಎಂಬ ವದಂತಿಗಳನ್ನ ಹಬ್ಬಿಸಿ ಸರ್ಕಾರದ ವ್ಯವಸ್ಥೆಯಲ್ಲಾಗಲೀ, ಡಿಎಸ್ ಎಸ್ ಮತ್ತಿತರ ಹೋರಾಟಗಾರರಾಗಲೀ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಏನೂ ತಿಳಿಯದಂತಾಗಿದ್ದರು. ನನ್ನೊಡನೆ ಇದ್ದ ಸಿಬ್ಬಂದಿ ಚದುರಿ ಹೋಗಿ ನಾನು ರಕ್ಷಣೆಗಾಗಿ ಪೋಲೀಸ್ ವ್ಯಾನಿಗೆ ಹತ್ತಿಕೊಂಡಿದ್ದೆ. ನಾವು ತಂದಿದ್ದ ಜೀಪಿಗೆ ಬೆಂಕಿ ಹಚ್ಚಿಟ್ಟು ಜೋಗತಿಯರು ಅಟ್ಟಹಾಸ ಮೆರೆದಿದ್ದರು. ನಾವು ವ್ಯಾನಿನ ಒಳಗೆ ಇದ್ದು, ಇನ್ನು ಮುಂದೆ ಏನಾಗುವುದೋ ಅನ್ನೋ ಆತಂಕದಲ್ಲಿದ್ದಾಗ ನನಗೆ ಪರಿಚಿತ ವ್ಯಕ್ತಿಯೊಬ್ಬ ಓಡಿಬಂದು ನನ್ನ ಪರಿಚಯ ಗುರುತು ಸಿಗದಂತೆ ಭಂಡಾರ ಹಾಕಿ ಅಲ್ಲಿಂದ ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ಪಂಚೆ ನೀಡಿ ಪ್ಯಾಂಟ್ ಷರಟು ತೆಗೆಸಿ ನಾನು ಯಾರೋ ಅನ್ನೋ ರೀತಿ ಮಾಡಿಕೊಂಡು ತನ್ನ ರಾಜದೂತ್ ಮೋಟಾರ್‌ಬೈಕ್‌ನಲ್ಲಿ ಸೊರಬಕ್ಕೆ ತಂದುಬಿಟ್ಟರು.

ಅಲ್ಲಿಂದ ಎಲ್ಲರಿಗೂ ಫೋನ್ ಮಾಡಿ ಆಗಿದ್ದ ಅನಾಹುತವನ್ನು ತಿಳಿಸಿದೆ. ಇದು ಸುಮಾರು ಮಧ್ಯಾಹ್ನ 3.00 ಘಂಟೆಯ ತನಕ ಜೋಗತಿಯರ ಅಟ್ಟಹಾಸಕ್ಕೆ ಗುರಿಯಾದ ಡಿ.ಎಸ್.ಎಸ್. ಮತ್ತು ಇತರೆ ಕರ‍್ಯಕರ್ತರು ತಮಗೆ ಸಿಕ್ಕ ಸಿಕ್ಕ ಕಡೆ ಚದುರಿ ಪ್ರಾಣ ಉಳಿಸಿಕೊಳ್ಳಲು ತಪ್ಪಿಸಿಕೊಂಡು ಪರಾರಿಯಾದರು. ಈ ಸಂದರ್ಭದಲ್ಲಿ ಕೃಷ್ಣಪ್ಪನವರೇನಾದರೂ ಈ ಜೋಗತಿಯರ ಕೈಗೆ ಸಿಕ್ಕಿದ್ದರೆ ಬಹುಶಃ ಅಂದೇ ಅವರ ಕೊಲೆ ಮಾಡಲು ಹೇಸುತ್ತಿರಲಿಲ್ಲ.

ಸುಮಾರು 4.00 ಘಂಟೆಯ ಸುಮಾರಿಗೆ ಹೆಚ್ಚಿನ ಪೋಲೀಸ್ ಬಂದು ಇಡೀ ಜೋಗತಿಯರ ಸಮೂಹವನ್ನು ಬೆತ್ತಲೆಯಾಗಿಯೇ ಅರೆಸ್ಟ್ ಮಾಡಿ ಸೊರಬ ಪೋಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದರು. ಸುಮಾರು 5-6 ಘಂಟೆಯ ಸುಮಾರಿಗೆ ಪೋಲೀಸ್ ಬಂದು ಇವರಲ್ಲಿ ಯಾರು ನಿಮ್ಮ ಮೇಲೆ ಹಲ್ಲೆ ಮಾಡಿದರು ಗುರ್ತಿಸಿ ಎಂದು ಹೇಳಿದರು.

ಪೊಲೀಸರೊಡನೆ ಹೋಗಿ ನೋಡುತ್ತೇನೆ, ಅದೊಂದು ಭಯಂಕರ ದೃಶ್ಯ. ಪೀಚಲು ದೇಹಗಳ ಅನಾರೋಗ್ಯವೇ ಮೂರ್ತಿವೆತ್ತ- ಕುಡಿತದ ಅಮಲಿನಲ್ಲಿದ್ದ ಅವರಿಗೆ ತಾವೇನು ಮಾಡಿದ್ದೆವು ಅನ್ನುವುದೇ ಅವರಿಗೆ ಗೊತ್ತಿರಲಿಲ್ಲ. ಯಾವುದೋ ಕಾಡಿನ ಪ್ರಾಣಿಗಳಂತೆ ಪಿಳಿಪಿಳಿ ಕಣ್ಣು ಬಿಡುತ್ತಾ ಆ ರೂಮಿಗೆ ಬಂದವರನ್ನು ನೋಡುತ್ತಿದ್ದರು. ನನಗೆ `ಯಾರು ಏನು ಮಾಡಿದರು ಎನ್ನುವುದನ್ನ ಯಾರ ಮೇಲೆ ಹೇಳಲಿ’ ಎನ್ನುತ್ತಾ ಈಚೆಗೆ ಬಂದೆ. ಆದರೆ ಈ ಜೋಗತಿಯರು ಅಂತಹ ಸ್ಥಿತಿಯಲ್ಲೂ ತಮ್ಮ ಬಳಿ ಬೆಳಗಿನಿಂದ ದೋಚಿದ ಒಡವೆಗಳು ಮತ್ತು ಹಣ ಇರುವುದು ಸಣ್ಣ ಸಣ್ಣ ಚೀಲಗಳಲ್ಲಿರುವುದು ಪರಿಶೀಲಿಸಿದಾಗ ಕಂಡು ಬಂತು.

ಈ ಘಟನೆಯ ನಂತರ ಆದ ಮಾರನೇ ದಿನ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಗಿ ವರದಿಗಳು ಪ್ರಕಟಗೊಂಡವು. ನಾನು ಆತಂಕದಿAದ ನನ್ನ ಹೆಂಡತಿಗೆ ‘I ಚಿm Sಚಿಜಿe’ ಎಂದು ತಂತಿ ನೀಡಿದಾಗ ಅವಳು ಗಲಿಬಿಲಿಗೊಂಡು ಫೋನ್ ಮಾಡಿದಳು. ಇತ್ತ ನನ್ನ ಹಳ್ಳಿ ಹನಗವಾಡಿಯಿಂದ ಬಂದಿದ್ದ ಜೋಗತಿಯರಿಂದಲೇ ರೋಚಕವಾಗಿ ತಲುಪಿದ್ದ ಸುದ್ದಿಯಿಂದ, ವರದಿಗಳನ್ನು ಕೇಳಿಕೊಂಡ ನಮ್ಮ ಊರಿನ ಜನರು ಮತ್ತು ನಮ್ಮ ಅವ್ವ, ಅಣ್ಣ-ತಮ್ಮಂದಿರು ಮತ್ತು ಮಿತ್ರರ ದಂಡು ಸೊರಬಕ್ಕೆ ನನ್ನನ್ನು ನೋಡಲು ಬಂದಿದ್ದರು. ಅವರು ನಾನು ಮಾಮೂಲಿನಂತೆ ಇದ್ದುದನ್ನು ನೋಡಿ ನೆಮ್ಮದಿಗೊಂಡರು. ನನ್ನ ತಮ್ಮನೊಬ್ಬ ನಿನ್ನನ್ನು ಆಸ್ಪತ್ರೆಯಲ್ಲಿ ಬ್ಯಾಂಡೇಜ್ ಸಮೇತ ನೋಡುವ ಕಲ್ಪನೆಯಲ್ಲಿಯೆ ಓಡಿ ಬಂದೆವು ಎಂದಾಗ ನಾನು ಕೂದಲೆಳೆಯಲ್ಲಿ ಸಾವು ತಪ್ಪಿದ್ದನ್ನು ವಿವರಿಸಲಿಲ್ಲ.

ನಾನು ತಹಶೀಲ್ದಾರನಾಗಿ ಹೊಸದರಲ್ಲಿ ಆಗಿದ್ದ ಈ ಘಟನೆ ಇಂದಿಗೂ ನನಗೆ ಎಚ್ಚರಿಕೆಯ ಮಾರ್ಗ ಸೂಚಿಯಾಗಿದೆ. ಒಂದು ವಿಷಾದದ ಸಂಗತಿಯೆAದರೆ ನಮ್ಮ ಪೋಲೀಸರು ಇಂದಿಗೂ ಯಥಾಸ್ಥಿತಿಯ ರಕ್ಷಕರಾಗಿಯೇ ಉಳಿದಿದ್ದಾರೆ. ಅವರನ್ನು ಬದಲಾಗುತ್ತಿರುವ ಕಾಲಮಾನದ ಜೊತೆಗೆ ಬದಲಾವಣೆಯ ರೂವಾರಿಗಳಾಗುವಂತೆ ತರಬೇತಿ ನೀಡುವಲ್ಲಿ ಸರ್ಕಾರವು ಒತ್ತು ನೀಡುವುದು ಇಂದಿನ ಅಗತ್ಯವಾಗಿದೆ.

ಈ ಘಟನೆಯ ನಂತರದ ಆದ ಬೆಳವಣಿಗೆಯ ಹಿನ್ನೆಲೆಯಲ್ಲಿ ಒಂದು ಮಹತ್ತರ ಬದಲಾವಣೆ ಆ ಪ್ರದೇಶದಲ್ಲಿ ಆಗಿದೆ. ಬೆತ್ತಲೆ ಸೇವೆಯನ್ನು ಸರ್ಕಾರ ನಿಷೇಧಿಸಿದೆ. ಅದರೊಟ್ಟಿಗೆ ಅನೇಕ ಸಾಮಾಜಿಕ ಅನಿಷ್ಟಗಳ ಬಗ್ಗೆ ಸಾಮಾನ್ಯ ಜನರ ಮಧ್ಯದಲ್ಲಿ ಚರ್ಚೆಗಳಾಗಿವೆ. ಕೃಷ್ಣಪ್ಪನವರ ಹೋರಾಟ ಹೊಸ ದಿಕ್ಕಿನೆಡೆಗೆ ಸಮಾಜವನ್ನು ಮುಖ ಮಾಡಿಸಿದೆ. ಇದು ಅವರ ಆತ್ಮಕ್ಕೆ ನೆಮ್ಮದಿಯನ್ನು ನೀಡಿದೆ ಎಂದರೆ ತಪ್ಪಾಗಲಾರದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಂಬ್ರಾಯ್ಡರಿ ಮತ್ತು ಆರಿ ವರ್ಕ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ

Published

on

ಫೋಟೋ | ವಿಜಿಯಾ ಶೆಟ್ಟಿ, ಮೇಕಪ್ ಆರ್ಟಿಸ್ಟ್, ಬೆಂಗಳೂರು

ಸುದ್ದಿದಿನ,ಬೆಂಗಳೂರು:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‍ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‍ಸೆಟ್ ಸಂಸ್ಥೆಯ ವತಿಯಿಂದ ಎಂಬ್ರಾಯ್ಡರಿ, ಆರಿ ವರ್ಕ್ & ಫ್ಯಾಬ್ರಿಕ್ ಪೇಟಿಂಗ್ ಕುರಿತ 30 ದಿನಗಳ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಆಧಾರ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರ ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 8 ಕೊನೆ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ರುಡ್‍ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ದೂ.ಸಂ. 9740982585, 9380162042 ಗೆ ಸಂಪರ್ಕಿಸಬಹುದಾಗಿದೆ ಎಂದು ರುಡ್‍ಸೆಟ್ ಸಂಸ್ಥೆಯ ಶಾಖೆಯ ನಿರ್ದೇಶಕರಾದ ರವಿಕುಮಾರ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜೀವನಶೈಲಿಯಲ್ಲಾದ ಬದಲಾವಣೆಯೇ ಹೃದಯ ಸಂಬಂಧಿ ಖಾಯಿಲೆಗಳಿಗೆ ಕಾರಣ : ಸಂಸದ ಡಾ. ಸಿ.ಎನ್. ಮಂಜುನಾಥ್

Published

on

ಸುದ್ದಿದಿನಡೆಸ್ಕ್:ಜಗತ್ತಿನಾದ್ಯಂತ ಇಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತಿದೆ. ಜಾಗತಿಕವಾಗಿ ಹೃದಯದ ಆರೋಗ್ಯದ ಬಗ್ಗೆ ಮತ್ತು ಹೃದಯ ಸಂಬಂಧಿ ಖಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ 29 ಅನ್ನು ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ದಿನ ಜಗತ್ತಿನಾದ್ಯಂತ ಅತಿ ಹೆಚ್ಚಿನ ಪ್ರಮಾಣದ ಜನರ ಸಾವಿಗೆ ಕಾರಣವಾಗಿರುವ ಹೃದ್ರೋಗದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರಗಳು, ಆರೋಗ್ಯ ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ವರ್ಷದ ಘೋಷವಾಕ್ಯ ಕ್ರಿಯೆಗಾಗಿ ಹೃದಯವನ್ನು ಬಳಸಿ ಎಂಬುದಾಗಿದೆ.

ದೇಶದಲ್ಲಿ ವರ್ಷಕ್ಕೆ ಸುಮಾರು 30 ಲಕ್ಷದಷ್ಟು ಜನರು ಹೃದಯ ಸಂಬAದಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ ಇದಕ್ಕೆ ಪ್ರಮುಖ ಕಾರಣ ಜೀವನ ಶೈಲಿಯಲ್ಲಾದ ಬದಲಾವಣೆ ಎಂದು ಹೃದ್ರೋಗತಜ್ಞ ಹಾಗು ಸಂಸದ ಡಾ: ಸಿ.ಎನ್ ಮಂಜುನಾಥ್ ಹೇಳಿದ್ದಾರೆ.

ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆ ಆವರಣದಲ್ಲಿ ನಡೆದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇಶದಲ್ಲಿ 1960 ರಲ್ಲಿ ಶೇಕಡ 4 ರಷ್ಟು ಇದ್ದ ಹೃದಯ ಸಂಬಂದಿ ಕಾಯಿಲೆಗಳು ಶೇಕಡ ಈಗ 10ರಷ್ಟು ಏರಿಕೆಯಾಗಿದೆ. ಇತ್ತೀಚೆಗೆ 50 ಕ್ಕಿಂತ ಕಡಿಮೆ ವಯಸಿನವರಲ್ಲಿ ಹೆಚ್ಚಾಗಿ ಈ ಸಮಸ್ಯೆಗಳು ಕಂಡು ಬರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಹೆಚ್. ಡಿ ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ, ನಗರದ ಹೃದ್ರೋಗ ತಜ್ಞ ಡಾ: ವಿಜಯ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಿಶ್ವ ಹೃದಯ ದಿನದ ಅಂಗವಾಗಿ ಶಿವಮೊಗ್ಗದಲ್ಲಿಂದು ಸಹ್ಯಾದ್ರಿ ಸ್ನೇಹ ಸಂಘ, ಐಎಂಎ ಮತ್ತು ಮೆಟ್ರೋ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಡಾ ಶಿವಶಂಕರ್ ಹೃದಯ ರೋಗ ತಜ್ಞರು ಮೆಟ್ರೋ ಆಸ್ಪತ್ರೆ, ಐಎಂಎ ಜಿಲ್ಲಾ ಶಾಖೆ ಅಧ್ಯಕ್ಷ ಡಾ ಶ್ರೀಧರ್, ಕಾರ್ಯದರ್ಶಿ ಡಾ ವಿನಯಾ ಶ್ರೀನಿವಾಸ್, ಮೆಟ್ರೋ ಆಸ್ಪತ್ರೆಯ ಆಡಳಿತಾಧಿಕಾರಿ ರೆಹಮತ್ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending