Connect with us

ಲೈಫ್ ಸ್ಟೈಲ್

ಡಾಕ್ಟ್ರೇ… ಸೈಡ್ ಇಫೆಕ್ಟ್ ಇಲ್ಲದ ಔಷಧಿ ಬರ್ದು ಕೊಡಿ..!

Published

on

  • ಡಾ: ಎನ್.ಬಿ.ಶ್ರೀಧರ

ಡಾಕ್ಟ್ರೇ… ದನಕ್ಕೆ ಸೈಡ್ ಎಫ಼ೆಕ್ಟ್ ಇರದ ಮೆಡಿಸಿನ್ ಬರ್ದು ಕೊಡಿ. ಅದಕ್ಕೆ ಹೀಟಾಗುತ್ತೆ… ಬೇಡವೇ ಬೇಡ” ಇದು ನಮ್ಮ ಗೋಪಾಲಕರೊಬ್ಬರ ವಿನಂತಿ.

“ನಮ್ಮನೇ ದನಕ್ಕೆ ಯಾವುದೂ ಇಂಗ್ಲಿಷ್ ಔಷಧೀನೇ ಕೊಡಿಸಲ್ಲ. ಎಲ್ಲಾನೂ ನೈಸರ್ಗಿಕ.. ಯಾವುದೇ ಸೈಡ್ ಇಫ಼ೆಕ್ಟ್ ಇಲ್ವಂತೆ.

ದನಾ ಕಟ್ಲೇ ಇಲ್ಲ. ಎಲ್ಲಾ ಔಷಧೀನೂ ಮಾಡಿಸ್ದೆ… ಏನೂ ಪ್ರಯೋಜನಾ ಆಗ್ಲೇ ಇಲ್ಲ. ಹಳ್ಳಿ ಔಷಧಿ ಮಾಡಿಸಿದೆ. ಈಗ ನೋಡಿ ಕಟ್ಬಿಟ್ಟಿದೆ.

“ಈ ಇಂಗ್ಲಿಷ್ ಮೆಡಿಸಿನ್ ಬಿಟ್ಬಿಟ್ಟೆ.. ಭಾರಿ ವಿಷ ಅಂತೆ ಕಣ್ರೀ.. ಈ ಹಳ್ಳಿ ಔಷಧೀನೆ ಸೈ.. ಒಂಚೂರು ಸೈಡ್ ಇಫ಼ೇಕ್ಟ್ ಇಲ್ಲವಂತೆ.. ಅದನ್ನೇ ದನಕ್ಕೆ ಹಾಕೋದು ಅಂತ ಅಂದ್ಕಂಡಿದ್ದೀನಿ”..ನೋಡ್ಬೇಕು” ಇದು ಮತ್ತೊಬ್ಬರ ಅಂಬೋಣ.

“ಅಯ್ಯೋ.. ಈ ಇಂಗ್ಲಿಷ್ ಆಸ್ಪತ್ರೆಗಳೇ ಇಷ್ಟು.. ಅದೂ ಇದೂ ಟೆಸ್ಟ್ ಅಂತ ದುಡ್ಡಿಗಾಗಿ ಮಾಡಿಸ್ತಾರೆ.. ಎಲ್ಲಾ ದುಡ್ಡು ಸುಲಿಯುವ ಕೇಂದ್ರಗಳು ಕಣ್ರೀ… ಇದು ಮತ್ತೊಬ್ಬರ ಹೇಳಿಕೆ.

“ನಾನೆಂತೂ ಇಂಗ್ಲಿಷ್ ಔಷಧಿ ತಗೊಳ್ಳೋದೇ ಇಲ್ಲ. ಹಳ್ಳಿ ಔಷಧೀನೇ ತಗಳ್ಳೋದು.. ಇಂಗ್ಲಿಷ್ ಔಷಧಿ ಒಂದು ದೊಡ್ಡ ದಂಧೆ.. ಡಾಕ್ಟರುಗಳೆಲ್ಲಾ ಮಾಡೋದು ಬ್ಯುಸಿನೆಸ್”…ಇದು ಇನ್ನೊಬ್ಬರ ಅನಿಸಿಕೆ.

“ದಿನಕ್ಕೆ 4-5 ಲೀಟರ್ ನೀರು ಕುಡಿದರೆ ಸಾಕು. ಯಾವ ಕಾಯಿಲೆನೂ ಬರಲ್ಲ. ಇಂಗ್ಲಿಷ್ ಮೆಡಿಸಿನ್ ತಗೊಳ್ಳೋದೇ ಬೇಡ” ಮತ್ತೋರ್ವರ ಅಭಿಪ್ರಾಯ.

ಇಂಗ್ಲಿಷ್ ಔಷಧಿ ಒಳ್ಳೇದಲ್ಲ. ಹೋದ ತಕ್ಷಣ ಆಂಟಿಬಯೋಟಿಕ್ ಬರ್ದು ಕೊಡ್ತಾರೆ.. ಇದ್ರಿಂದ ಹೀಟು..ಸಿಕ್ಕಾಪಟ್ಟೆ ಸೈಡ್ ಎಫೆಕ್ಟ್..ಅದಕ್ಕೆ ಹಳ್ಳಿ ಔಷಧ ತಗಳ್ತಿದ್ದೀನಿ..

ಹೀಗೆ ಔಷಧಗಳ ಬಗ್ಗೆ ವೈರುಧ್ಯಗಳ ಪಟ್ಟೀಯೇ ಬೆಳೆಯುತ್ತಾ ಹೋಗುತ್ತದೆ. ಒಂದರ್ಥದಲ್ಲಿ ಹೇಳಬೇಕೆಂದರೆ ಆಂಗ್ಲ ಅಥವಾ ಪಾಶ್ಚ್ಯಾತ್ಯ ಅಥವಾ ಆಧುನಿಕ ಔಷಧಿಗಳ ಬಗ್ಗೆ ಜನರಿಗೆ ಅಸಹನೆ ಬೆಳೆಯುತ್ತಲೇ ಇದೆ. ಇದರ ಬಗ್ಗೆ ಸ್ವಲ್ಪ ಬೆಳಕು ಚೆಲ್ಲೋಣವೇ?

ಒಂದು ಕಾಯಿಲೆಯ ಬಗ್ಗೆ ಔಷಧಿಯನ್ನು ಕಂಡು ಹಿಡಿಯಲು ಸಹಸ್ರಾರು ವಿಜ್ಞಾನಿಗಳ ಮಾನವ ಘಂಟೆಗಳ ಪರಿಶ್ರಮ ಇರಲೇ ಬೇಕು. ಕಾಯಿಲೆ ಅಂದ ಮೇಲೆ ಅದಕ್ಕೊಂದು ಕಾರಣ ಇರಬೇಕು.ಆ ಕಾರಣ ಕಂಡು ಹಿಡಿಯಲೂ ಸಹ ಪ್ರಯತ್ನ ಬೇಕು. ಅದಾದ ನಂತರ ಅದಕ್ಕೊಂದು ಸೂಕ್ತ ಔಷಧ ಕಂಡು ಹಿಡಿಯಬೇಕು. ಅದು ಸುಲಭವೇ? ಖಂಡಿತಾ ಅಲ್ಲ.

ಹೊಸದೊಂದು ಔಷಧಿ ಕಂಡು ಹಿಡಿಯಬೇಕಾದರೆ ಲಕ್ಷಗಟ್ಟಲೇ ರಾಸಾಯನಿಕಗಳ ವಿಶ್ಲೇಷಣೆ ನಡೆಸಬೇಕು. ಈ ಸಹಸ್ರ ಸಂಖ್ಯೆಯ ರಾಸಾಯನಿಕಗಳಲ್ಲಿ ಕೇವಲ 100-200 ಮಾತ್ರ ಪರಿಣಾಮಕಾರಿಯಾಗಿ ಹೊರಹೊಮ್ಮುತ್ತವೆ. ಈ ಪ್ರಕ್ರಿಯೆಗೆ ಸುಮಾರು 3-4 ವರ್ಷ ಬೇಕು. ಇದಕ್ಕೆ ಸಾಮಾನ್ಯವಾಗಿ 10-15 ಬಿಲಿಯ ಡಾಲರುಗಳ ವೆಚ್ಚವಾಗುತ್ತದೆ. ಔಷಧದ ಕಣ ಕಂಡು ಹಿಡಿಯಬೇಕಾದರೆ ಅದಕ್ಕೆ ಅತ್ಯುತ್ತಮ ಪರಿಣಾಮ ಮತ್ತು ಅತೀ ಕಡಿಮೆ ಅಡ್ಡ ಪರಿಣಾಮ ವಿರಬೇಕೆಂಬುದು ಒಂದು ಕಠಿಣ ನಿಯಮ.

ಅದಕ್ಕೆಂದೇ ಇವುಗಳನ್ನು ಮೊದಲು ಇಲಿಗಳ ಮೇಲೆ ಪ್ರಯೋಗಿಸಬೇಕಾಗುತ್ತದೆ. ಏಕೆಂದರೆ ಇವುಗಳನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಸಾಧ್ಯವಿಲ್ಲವಲ್ಲ!!. ಇಲಿಗಳನ್ನು ನಮಗಾಗಿ ಶೋಷಣೆ ಮಾಡಬಾರದೆಂಬ ಅರಿವು ಇದ್ದರೂ ಸಹ ಅವುಗಳ ಮೇಲೆ ಅಥವಾ ಇತರ ಪ್ರಯೋಗಶಾಲಾ ಪ್ರಾಣಿಗಳಾದ ಮೊಲ, ಗಿನಿ ಹಂದಿ, ಚಿಕ್ಕಿಲಿ, ಕೋತಿ ಅಥವಾ ನಾಯಿಗಳ ಮೇಲೆ ಪ್ರಯೋಗ ಮಾಡಿ ಅವುಗಳ ಪರಿಣಾಮ ಮತ್ತು ಅಡ್ಡ ಪರಿಣಾಮಗಳನ್ನು ಪತ್ತೆ ಮಾಡಬೇಕಾಗುತ್ತದೆ. ಇದಕ್ಕೆ ಕ್ಲಿನಿಕಲ್ ಪೂರ್ವ ಪ್ರಯೋಗವೆನ್ನುತ್ತಾರೆ. ಇದಕ್ಕೆ ಮನುಷ್ಯರನ್ನು ಉಪಯೋಗಿಸಬೇಕಾದ ಪ್ರಸಂಗ ಬಂದರೆ ಸಹಸ್ರಾರು ಮನುಜರೇ ಬೇಕಾಗಿದ್ದರೇನೋ??!!. ಇತ್ತೀಚೆಗೆ ಪ್ರಾಣಿಗಳನ್ನು ಬಹಳಷ್ಟು ಕಡಿಮೆ ಉಪಯೋಗಿಸಬೇಕೆಂಬ ಕಟ್ಟು ನಿಟ್ಟಾದ ನಿಯಮಗಳು, ಹೇಗೆ ಪ್ರಯೋಗ ಮಾಡಬೇಕೆಂಬ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ನಿಯಮಗಳು ಬಂದಿವೆ. ಈ ಹಂತದಲ್ಲೇ ಹಲವಾರು ಔಷಧಿಗಳು ಬಿದ್ದು ಹೋಗುತ್ತವೆ.

ಯಾವುದೇ ಒಂದು ಹಂತದಲ್ಲಿ ಔಷಧಿ ಕಣವು ಬ್ರೂಣಕ್ಕೆ ಧಕ್ಕೆ ಮಾಡುವಂತಿದ್ದರೆ, ಗರ್ಭಪಾತ ಮಾಡುವಂತಿದ್ದರೆ, ನರಮಂಡಳಕ್ಕೆ ತೊಂದರೆ ಉಂಟು ಮಾಡುತ್ತಿದ್ದರೆ ಅಥವಾ ಹೃದಯ, ಮೂತ್ರಜನಕಾಂಗ, ಪಿತ್ತಜನಕಾಂಗ, ಮೇದೋಜೀರಕಾಂಗ, ಉದರ, ಮೆದುಳು ಅಥವಾ ಯಾವುದೇ ಅಂಗಕ್ಕೆ ಸೂಕ್ಷ್ಮದರ್ಶಕದಲ್ಲಿ ಮಾತ್ರ ನೋಡಬಹುದಾದ ಸ್ವಲ್ಪ ತೊಂದರೆಯುಂಟುಮಾಡುತ್ತಿದ್ದರೂ ಸಹ ಈ ಔಷಧಿಯ ಕಣವನ್ನು ಮುಲಾಜಿಲ್ಲದೇ ಬದಿಗೊತ್ತಲಾಗುತ್ತದೆ. ಅಂದರೆ ಸುಮಾರು 3-5 ವರ್ಷಗಳ ಸತತ ಪ್ರಯತ್ನ ಮತ್ತು 10-20 ಬಿಲಿಯ ಡಾಲರುಗಳು ಹೋಮವಾದ ಹಾಗೇ!!.

ಇದೆಲ್ಲ ಪರೀಕ್ಷೆಗಳನ್ನು ಪಾಸು ಮಾಡಿ ಬಂದರೆ ಅದನ್ನು ಔಷಧಿಯೆಂದು ಪರಿಗಣಿಸಲಾಗುತ್ತದೆ. ಇದಾದ ನಂತರ ಮನುಷ್ಯರ ಮೇಲೆ ನಾಲ್ಕು ಹಂತದ ಪ್ರಯೋಗಗಳು ಅಥವಾ ಕ್ಲಿನಿಕಲ್ ಪರೀಕ್ಷೆಗಳನ್ನು ಅವರ ಒಪ್ಪಿಗೆ ಪಡೆದು ಮಾಡಲಾಗುತ್ತದೆ.

ಮೊದಲ ಹಂತ

ಇದರಲ್ಲಿ 10-15 ಅರೋಗ್ಯಕರ ಸ್ವಯಂ ಪ್ರೇರಣೆಯಿಂದ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಆರೋಗ್ಯವಂತ ಜನರ ಮೇಲೆ ಔಷಧಿಯನ್ನು ಪ್ರಯೋಗಿಸಲಾಗುತ್ತದೆ. ಈ ಹಂತದಲ್ಲಿ ಔಷಧಿಯು ಇಲಿಗಳ ಮೇಲೆ ಮಾಡಿದ ಪರಿಣಾಮ ಮನುಷ್ಯನಲ್ಲೂ ಪುನರಾವರ್ತನೆಯಾಗುತ್ತದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುತ್ತದೆ. ಅದರಲ್ಲೂ ಔಷಧಿಯು ಎಷ್ಟು ಪ್ರಮಾಣದಲ್ಲಿ ದೇಹಕ್ಕೆ ಸೇರಿತು? ಎಷ್ಟು ಪ್ರಮಾಣದಲ್ಲಿ ರಕ್ತದಲ್ಲಿ ಪ್ರಸರಣವಾಯಿತು, ಎಷ್ಟು ನಿರ್ವಿಷಗೊಂಡಿತು? ಎಷ್ಟು ದೇಹದಿಂದ ವಿಸರ್ಜಿಸಲ್ಪಟ್ಟಿತು ಎಂಬುದನ್ನು ಪರಿಶೀಲಿಸಲಾಗುತ್ತದೆ. ಅಲ್ಲದೇ ಅವಶ್ಯಕ ಪರಿಣಾಮವನ್ನು ಅದು ಮನುಷ್ಯ ದೇಹದ ಮೇಲೆ ಅವಶ್ಯಕ ಪರಿಣಾಮ ಮಾಡಿತೇ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತಾರೆ.ಅಲ್ಲದೇ ಬಾಯಿಯಿಂದ ನೀಡಬೇಕಾದ ಔಷಧವಾದರೆ ಅಹಾರದ ಪರಿಣಾಮವನ್ನು ಸಹ ಪರಿಶೀಲಿಸಿ ನೀಡಲಾಗುತ್ತದೆ. ಈ ಅಧ್ಯಯನಕ್ಕೆ 2-4 ವರ್ಷ ಬೇಕಾಗಿದ್ದು ಸುಮಾರು 10-20 ಬಿಲಿಯನ್ ಡಾಲರ್ ಖರ್ಚಾಗಬಹುದು.

ಎರಡನೇ ಹಂತ

ಈ ಹಂತದಲ್ಲಿ ಔಷಧಿಯನ್ನು ಮೇಲಿನ ಎಲ್ಲಾ ಸಂಶೋಧನೆಗಳನ್ನು ಜಾಸ್ತಿ ಜನ ಅಂದರೆ ಸುಮಾರು 100-1000 ಜನರ ಮೇಲೆ ಪ್ರಯೋಗಿಸಿ ಅದರ ಪರಿಣಾಮ ಮತ್ತು ಅಡ್ಡಪರಿಣಾಮ ಎರಡನ್ನೂ ಅಭ್ಯಾಸ ಮಾಡಲಾಗುತ್ತದೆ. ಇದಕ್ಕೆ 2-4 ವರ್ಷಗಳ ಪರಿಶ್ರಮದ ಅವಶ್ಯಕತೆ ಇದೆ.ಹಂತ 1 ಮತ್ತು 2 ರ ಅಧ್ಯಯನವನ್ನು ಆರೋಗ್ಯವಂತ ಮನುಷ್ಯರ ಮೇಲೆ ಮಾಡಲಾಗುತ್ತದೆ.

ಮೂರನೇ ಹಂತ

ಈ ಹಂತದಲ್ಲಿ ಅಧ್ಯಯನವನ್ನು 1000-3000 ರೋಗ ಪೀಡಿತ ಮನುಷ್ಯರ ಮೇಲೆ ಮಾಡಲಾಗುತ್ತದೆ. ಇಲ್ಲಿಯೂ ಸಹ ಹಂತ 1 ರಲ್ಲಿನ ಅಧ್ಯಯನವನ್ನೇ ಮುಂದುವರೆಸಲಾಗುತ್ತಿದ್ದು, ಔಷಧಿಯ ಸುರಕ್ಷತೆಯ ಬಗ್ಗೆ ಸಂಪೂರ್ಣ ಗಮನ ನೀಡಲಾಗುತ್ತದೆ.

ರೋಗ ಪೀಡಿತ ವ್ಯಕ್ತಿಯ ಮೇಲೆ ಅಡ್ಡ ಪರಿಣಾಮವಾಗುತ್ತಿದ್ದರೆ ಔಷಧಿಯ ಪ್ರಯೋಗವನ್ನು ನಿಲ್ಲಿಸಿ ಅದನ್ನು ಹಿಂಪಡೆಯಲಾಗುತ್ತದೆ. ಈ ಅಧ್ಯಯನಕ್ಕೂ ಸಹ 2-4 ವರ್ಷ ಅವಧಿ ಬೇಕಾಗಿದ್ದು 20-30 ಬಿಲಿಯನ್ ಡಾಲರ್ ಖರ್ಚು ಬರುತ್ತದೆ. ಇದಾದ ನಂತರ ವಿವಿಧ ದೇಶಗಳಲ್ಲಿ ಆಯಾ ದೇಶಗಳ ನಿಯಮಗಳಂತೆ ಅರ್ಜಿ ಸಲ್ಲಿಸಿ ರಹದಾರಿ ಪಡೆಯಲಾಗುತ್ತದೆ.

ಇಲ್ಲಿ ಪ್ಲಾಸೆಬೋ ಪರಿಣಾಮವನ್ನೂ ಸಹ ಗಮನಿಸಲಾಗುತ್ತದೆ. ಪ್ಲಾಸೆಬೋ ಅಂದರೆ “ಹುಸಿ ಔಷದಿ” ಅಥವಾ “ಸುಳ್ಳೌಷಧಿ” ಅನ್ನಬಹುದೇನೋ? ಈ ಹಂತದಲ್ಲಿ ಔಷಧಿಯ ಪರಿಣಾಮವನ್ನು ಗಮನಿಸಲು “ಹುಸಿ ಔಷಧಿ” ಯನ್ನು ಗುಳಿಗಳ ಒಳಗೆ ಹಾಕಿ ಅದನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿದ ರೋಗಿಗಳ ಮೇಲೆ ಪ್ರಯೋಗಿಸಲಾಗುತ್ತದೆ.

ಇದು ವೈದ್ಯರಿಗೆ ಅಥವಾ ಕಂಪನಿಗೆ ಅಥವಾ ರೋಗಿಗೆ ಗೊತ್ತಿರುವುದಿಲ್ಲ. ಮನುಷ್ಯನಲ್ಲಿ ಶೇ: 65-70 ರೋಗಗಳು ಮನಸ್ಸಿನ ಮೇಲಿನ ಪರಿಣಾಮದಿಂದ ಉದ್ಭವವಾಗುವುದರಿಂದ ನಂಬಿಕೆ ಅಥವಾ ಭರವಸೆ ಅಥವಾ ಗುಣವಾಗಿಯೇ ಆಗುತ್ತದೆ ಎಂಬ ನಿರೀಕ್ಷೆಯಿಂದ ಹಲವಾರು ರೋಗಗಳು ಗುಣವಾಗುತ್ತವೆ. ಆದರೆ ಈ ಪರಿಣಾಮ ಪ್ರಾಣಿಗಳಲ್ಲಿ ಇರದು.

ಇದಕ್ಕೊಂದು ಚಿಕ್ಕ ಉದಾಹರಣೆಯೆಂದರೆ ಒಂದು ಕಂಪನಿ ಜಿಮ್ ಮಾಡುವ ಜನಗಳಿಗಾಗಿ ಶಕ್ತಿ ಜಾಸ್ತಿ ಮಾಡುವ ಔಷಧಿಯನ್ನು ನೀಡುತ್ತಿದೆಯೆಂದರೆ ಅಲ್ಲಿ ಶೇ:75ರಷ್ಟು ಜನರಿಗೆ ಶಕ್ತಿ ಬರಬಹುದು. ಆದರೆ ನಿಜವಾಗಿ ಗುಳಿಗೆಯಿಂದ ಎಷ್ಟು ಜನರಿಗೆ ಶಕ್ತಿ ಬಂದಿದೆ ಎಂಬುದು ಎರಡು ಗುಂಪುಗಳಲ್ಲಿ ಒಂದು ಗುಂಪಿಗೆ ಹುಸಿ ಔಷಧಿ ಮತ್ತೊಂದು ಗುಂಪಿಗೆ ನಿಜವಾದ ಔಷಧಿಯನ್ನು ಹೊಂದಿದ ಗುಳಿಗೆಯನ್ನು ನೀಡುತ್ತಾರೆ.

ಹುಸಿ ಔಷಧಿ ನೀಡಿದ ಗುಂಪು ಮತ್ತು ನಿಜವಾದ ಔಷಧ ನೀಡಿದ ಗುಂಪಿನಲ್ಲಿ ಶಕ್ತಿ ಜಾಸ್ತಿ ಆದರೆ ಔಷಧಿಯ ಪರಿಣಾಮ ಇಲ್ಲ ಎನ್ನಬಹುದು. ಕೇವಲ ಎರಡನೇ ಗುಂಪಿನಲ್ಲಿ ಶಕ್ತಿ ಜಾಸ್ತಿಯಾಗಿದ್ದರೆ ಮಾತ್ರ ಔಷಧಿ ಪರಿಣಾಮಕಾರಿ ಎನ್ನಬಹುದು.

ಈ “ಪ್ಲಾಸೆಬೋ” ಪರಿಣಾಮ ಔಷಧಿಯ ನಿರೀಕ್ಷಿತ ಪರಿಣಾಮಕ್ಕಿಂತ ಜಾಸ್ತಿಯಾದರೆ ಔಷಧಿ ಮಾರುಕಟ್ಟೆಗೆ ಬರದು.

ನಾಲ್ಕನೇ ಹಂತ

ಈ ಹಂತವನ್ನು ಮಾರುಕಟ್ಟೆಯ ನಂತರದ ಸರ್ವೇಕ್ಷಣೆ ಅನ್ನಬಹುದು. ವಿವಿಧ ದೇಶಗಳಲ್ಲಿ ರಹದಾರಿ ದೊರೆತ ನಂತರ ಆಯಾ ದೇಶಗಳಲ್ಲಿ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, ವೈದ್ಯರಿಗೆ ಈ ಬಗ್ಗೆ ಮಾಹಿತಿ ನೀಡಿ, ರೋಗಿಗಳಿಗೆ ಅವರು ಔಷಧಿಯನ್ನು ನೀಡಿದಾಗ ಏನಾದರೂ ಅಡ್ಡಪರಿಣಾಮಗಳು ಇರುವವೇ ಎಂಬುದನ್ನು ಪತ್ತೆ ಹಚ್ಚಲು ತಂಡವೊಂದು ಕಾರ್ಯ ನಿರ್ವಹಿಸುತ್ತದೆ. ಯಾವ ಹಂತದಲ್ಲಿಯಾದರೂ ಸಹ ಔಷಧಿಯನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಬೇಕಾಗಬಹುದು.

ಅಂದರೆ ಇಂಗ್ಲಿಷ್ ಔಷಧ ಕಂಡು ಹಿಡಿಯುವ ಪದ್ಧತಿ ಇಡೀ ಪ್ರಪಂಚದಲ್ಲಿ ಏಕರೂಪದಲ್ಲಿದೆ. ಏಕೆಂದರೆ ಒಂದು ಔಷಧಿಯನ್ನು ಕಂಡು ಹಿಡಿದರೆ ಅದು ಪ್ರಪಂಚದಲ್ಲಿರುವ ಕೋಟ್ಯಾನುಕೋಟಿ ಜನರ ಮೇಲೆ ಒಂದೇ ರೂಪದಲ್ಲಿರಬೇಕು. ಅದಕ್ಕೆಂದೇ ವಿಶ್ವ ಆರೋಗ್ಯ ಸಂಸ್ಥೆಯ ಆಧೀನದ ಆಹಾರ ಮತ್ತು ಔಷಧ ಆಡಳಿತ ಪ್ರಾಧಿಕಾರ (FDA-Food and Drug Administration) ವು ಕಾರ್ಯ ನಿರ್ವಹಿಸುತ್ತಿದ್ದು, ವಿಶ್ವದ ಯಾವುದೇ ಭಾಗದಲ್ಲಿ ಹೊಸ ಔಷಧ ಕಂಡು ಹಿಡಿದರೂ ಇದರ ಕಠಿಣ ನಿಯಮಗಳನ್ನು ಪಾಲಿಸಿ ಇದರ ತಜ್ಞರ ಹದ್ದಿನ ಕಣ್ಣಿನ ಅಡಿ ಲೈಸನ್ಸ್ ಪಡೆಯಬೇಕಾಗುತ್ತದೆ.

ಇದಕ್ಕೆ ಕೋಟ್ಯಾಂತರ ಡಾಲರ್ ವೆಚ್ಚ ಮತ್ತು ಸಹಸ್ರಾರು ಮಾನವ ಘಂಟೆಗಳ ಪರಿಶ್ರಮವಿರುತ್ತದೆ. ನಂತರ ಇದಕ್ಕೆ ಕಂಡು ಹಿಡಿದ ಕಂಪನಿಯವರು ಪೇಟಂಟ್ ಪಡೆಯುತ್ತಾರೆ. ಯಾವುದೇ ವ್ಯವಸ್ಥೆ ನೂರಕ್ಕೆ ನೂರರಷ್ಟು ಪರಿಪೂರ್ಣವಲ್ಲ. ಆದರೂ ಆ ದಿಶೆಯೆಡೆಗೆ ಎಷ್ಟು ಪ್ರಾಮಾಣಿಕ ಪ್ರಯತ್ನ ನಡೆದಿದೆ ಎನ್ನುವುದು ಮುಖ್ಯ.

ಆಧುನಿಕ ಅಥವಾ ಇಂಗ್ಲಿಷ್ ಅಥವಾ ಅಲೋಪತಿ ಔಷಧಿ ಕಂಡು ಹಿಡಿಯುವ ಪದ್ಧತಿಯಲ್ಲಿ ಇಷ್ಟೆಲ್ಲಾ ಕಟ್ಟು ನಿಟ್ಟು ಇದೆ. ಇದು ಯಾಕೆಂದರೆ ಮನುಷ್ಯರಲ್ಲಿ ಬಹಳ ಬೇಗ ಜಾಸ್ತಿ ಉತ್ತಮ ಪರಿಣಾಮವನ್ನು ಬೀರಿ , ಅತಿ ಕಡಿಮೆ “ಸೈಡ್ ಇಫೆಕ್ಟ್” ಇರಬೇಕು ಅಂತ. ಬಹುತೇಕ ಫಾರ್ಮಾಕಾಲಜಿ ಪುಸ್ತಕಗಳಲ್ಲಿ ಮತ್ತು ಜರ್ನಲ್ಲುಗಳಲ್ಲಿ ನಂತರ ಇದು ಪ್ರಕಟವಾಗುತ್ತದೆ.

ಪ್ರತಿ ಗುಳಿಗೆ, ಚುಚ್ಚುಮದ್ದು ಅಥವಾ ಮಾತ್ರೆಗಳ ಜೊತೆ ಒಂದು ಮಾಹಿತಿ ಚೀಟಿಯನ್ನೂ ಸಹ ಇಟ್ಟಿರುತ್ತಾರೆ. ಅದರಲ್ಲಿ ಔಷಧಿಯ ವಿವರ, ಅದರ ಜೊತೆ ಬೆರೆಸಿರುವ ಬಣ್ಣ, ಇತರ ದ್ರವಗಳು ಅಥವಾ ಘನಗಳು, ಕೊನೆ ದಿನಾಂಕ, ಕಂಪನಿಯ ಹೆಸರು, ವಿಳಾಸ, ರಹದಾರಿ ಸಂಖ್ಯೆ, ಉಪಯೋಗದ ವಿಧಾನ, ಅಡ್ಡ ಪರಿಣಾಮ ಇತ್ಯಾದಿಗಳನ್ನು ವಿವರವಾಗಿ ಆಂಗ್ಲ ಭಾಷೆಯಲ್ಲಿ ಹಾಕುತ್ತಾರೆ. ಇಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಮಾಡುವಂತೆಯೂ ಇಲ್ಲ.

ಆದರೆ ಬಹುತೇಕ ಜನರು ಗೂಗಲ್ಲಿನಲ್ಲಿಯೋ ಅಥವಾ ಔಷಧಿಯ ಜೊತೆ ಇರುವ ಚೀಟಿಯನ್ನು ಓದಿಯೋ, ಕೇವಲ “ಸೈಡ್ ಇಫೆಕ್ಟ್” ಓದಿ ಎಲ್ಲಾ ಇಂಗ್ಲಿಷ್ ಔಷಧಿಗಳಿಗೆ “ಸೈಡ್ ಇಫೆಕ್ಟ್” ಮಾತ್ರ ಇದೆ ಎಂದು ಭಾವಿಸುತ್ತಾರೆ ಮತ್ತು ಅದನ್ನು ಅನುಭವಿಸುತ್ತಾರೆ ಕೂಡಾ. ಇದಕ್ಕೆ “ನೋಸೆಬೋ” ಪರಿಣಾಮ ಅನ್ನುತ್ತಾರೆ. ಈ ಪರಿಣಾಮವನ್ನು ಅನುಭವಿಸುವವರ ಬಹು ದೊಡ್ಡ ಗುಂಪೇ ಇದೆ.

ಈ ಪ್ಲಾಸೆಬೋ ಮತ್ತು ನೋಸೆಬೋ ಪರಿಣಾಮಗಳಿಗೆ ಮೆದುಳಿನಲ್ಲಿರುವ ಡೋಪಮಿನ್, ಎಂಡೋರ್ಫ್ಹಿನ್ ಮತ್ತು ಎನ್ಕೆಫಾಲಿನ್ ಎಂಬ ವಸ್ತುಗಳು ಮತ್ತು ಇನ್ನೂ ಅನೇಕ ಹಾರ್ಮೋನುಗಳು ಕಾರಣ ಎಂದು ವಿಜ್ಞಾನ ಹೇಳುತ್ತಿದೆ. ಯಾವ ಔಷಧಿಗೆ ಪರಿಣಾಮ ಇದೆಯೋ ಅದಕ್ಕೆ ಅಡ್ಡ ಪರಿಣಾಮ ಇದ್ದೇ ಇದೆ. ಅಡ್ಡ ಪರಿಣಾಮ ಇರದಿದ್ದರೆ ಅದಕ್ಕೆ ಪರಿಣಾಮವು ಇರುವುದಿಲ್ಲ. ಇದು ನೆನಪಿರಲಿ.

ಬೇರೆ ಪದ್ದತಿಯ ಔಷಧಗಳಿಗೆ ಅಡ್ಡ ಪರಿಣಾಮಗಳು ಇಲ್ಲ ಎಂದು ಮನಸ್ಸಿನಲ್ಲಿ ಆಳವಾಗಿ ಬೇರೂರಿರುವುದರಿಂದ ಇಂಗ್ಲಿಷ್ ಔಷಧಿಗಳಿಗೆ ಮಾತ್ರ ಅದು ಇದೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿ ಇದೆ. ಇತರೇ ಪದ್ದತಿಯ ಯಾವ ಔಷಧಗಳೂ ಸಹ ಈ ರೀತಿಯ ಕಠಿಣ ಪರೀಕ್ಷೆ ತಪಾಸಣೆಯ ಮೂಲಕ ಬಂದಿಲ್ಲ. ಪರಂಪರೆಯಿಂದ ಬಂದವುಗಳೆಲ್ಲಾ ಸುರಕ್ಷಿತ ಎನ್ನುವುದು ತಪ್ಪು ಕಲ್ಪನೆ. ಯಾಕೆಂದರೆ ಈಗ ಎಲ್ಲವೂ ವಾಣಿಜ್ಯಿಕರಣಗೊಂಡಿವೆ.

ಕೆಲವೊಮ್ಮೆ ಹೀಗೂ ಇರುವುದು ಸಹಜ. ಕೆಲವೊಮ್ಮೆ ವೈದ್ಯಕೀಯ ನೀತಿಶಾಸ್ತ್ರವನ್ನು ಉಲ್ಲಂಘಿಸಿ, ಈಗಾಗಲೇ ಕೆಲವೊಂದು ಪ್ರಯೋಗಶಾಲಾ ಪರೀಕ್ಷೆಗಳು ಮತ್ತೊಂದು ಆಸ್ಪತ್ರೆಗಳಲ್ಲಿ ಮಾಡಲ್ಪಟ್ಟಿದ್ದರೂ ಸಹ ಅವರಿಗೆ ಬೇಕಾದ ಮತ್ತೊಂದು ಪ್ರಯೋಗಶಾಲೆಯಲ್ಲಿ ಅಥವಾ ಅವರದೇ ಪ್ರಯೋಗಶಾಲೆಯಲ್ಲಿ ರೋಗಿಗಳ ಹತ್ತಿರ ಹಣ ಪೀಕಿಸಿ ಮಾಡಿಸುತ್ತಾರೆ ಎಂಬ ಅಪವಾದ ಇದೆ. ಅಲ್ಲದೇ ಅವಶ್ಯಕತೆ ಇಲ್ಲದಿದ್ದರೂ ಸಹ ಹಣ ಮಾಡಲೆಂದು ಶಸ್ತ್ರಚಿಕಿತ್ಸೆ ಮಾಡುತ್ತಾರೆ ಎಂಬ ಅಪವಾದವೂ ಇದೆ.

ಉತ್ತಮ ವಿಭಾಗಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆಯಲು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ಮತ್ತು ದುಬಾರಿ ವೈದ್ಯಕೀಯ ಉಪಕರಣಗಳು ಸಹ ದುಬಾರಿ ವೈದ್ಯಕೀಯ ವೆಚ್ಚಕ್ಕೆ ಕಾರಣವಿರಬಹುದು. ಅಲ್ಲದೇ ಸಾರ್ವಜನಿಕ ವಲಯದಲ್ಲಿರುವ ವೈದ್ಯರುಗಳ ಕಾರ್ಯಕ್ಷಮತೆ ಅನೇಕ ಕಾರಣಗಳಿಂದ ಕಡಿಮೆಯಾಗಿರುವುದೂ ಸಹ ಜನರು ದುಬಾರಿಯಾದರೂ ಸಹ ಖಾಸಗಿಯೆಡೆಗೆ ಓಡುವಂತೆ ಮಾಡಿವೆ ಎನ್ನೆಬಹುದು.

ಒಬ್ಬ ಖ್ಯಾತ ವೈದ್ಯರು ಸಾರ್ವಜನಿಕವಾಗಿ ಹೇಳುವ ಹಾಗೇ ಔಷಧ ಕಂಪನಿಗಳು ಜನರನ್ನು ದರೋಡೆ ಮಾಡಲು ಹುಟ್ಟಿವೆ ಮತ್ತು ಚಿಕಿತ್ಸೆ ಮಾಡುವವರು ಹಣ ಪಿಪಾಸುಗಳಾಗಿದ್ದಾರೆ ಎನ್ನುವುದನ್ನು ಪರಾಮರ್ಷೆಗೆ ಒಳಪಡಿಸುವುದು ಸೂಕ್ತ. ಏಕೆಂದರೆ ಈ ರೀತಿಯಾಗಲು ಯಾರು ಕಾರಣ ಎನ್ನುವುದೂ ಒಂದು ವಿಮರ್ಷೆಗೊಳಪಡಬೇಕಲ್ಲವೇ?

ವೈದ್ಯಕೀಯ ಪದವಿ ಪಡೆಯಲು ಕಡಿಮೆ ವೆಚ್ಚ ಮತ್ತು ಔಷಧಗಳನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಮಾಡುವ ವಾತಾವರಣ ಸೃಷ್ಟಿಯಾಗಬೇಕು. ಇದನ್ನು ಜವಾಬ್ಧಾರಿ ಜಾಗದಲ್ಲಿರುವವರು ಸಂಬಂಧಿಸಿದವರಿಗೆ ವಿವಿಧ ಮಾಧ್ಯಮಗಳ ಮೂಲಕ ಹೇಳಬೇಕು ಮತ್ತು ಆಧುನಿಕ ಔಷಧಿಗಳ ಬಗ್ಗೆ ಜನರ ತಪ್ಪು ನಂಬಿಕೆ ಹೋಗಲಾಡಿಸಬೇಕು.

ಪಶುವೈದ್ಯಕೀಯದಲ್ಲೂ ಹೊಸ ಔಷಧ ಪತ್ತೆ ಮತ್ತು ಸಂಶೋಧನೆ ಬಹುತೇಕ ಇದೇ ರೀತಿ ನಡೆಯುತ್ತದೆ. ಆದರೆ ಅವುಗಳಲ್ಲಿ “ಪ್ಲಾಸೆಬೋ” ಮತ್ತು “ನೋಸೆಬೋ” ಪರಿಣಾಮಗಳು ಇರದಿದ್ದರೂ ಅವುಗಳ ಮಾಲಕರಲ್ಲಿ ಇವೆಯಲ್ಲ?!!!
ಈ ಕುರಿತು “ಅಡ್ಡಪರಿಣಾಮ” ಗಳಿಲ್ಲದ ಆರೋಗ್ಯಕರ ಚರ್ಚೆಯಾಗಲಿ…

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!

Published

on

3 ವರ್ಷದ ನಂತರ ಬಡ್ಡಿ ನಿಲ್ಲುತ್ತದೆ ಎಂಬುದು ಹಳೆಯ ನಿಯಮ; 58 ವರ್ಷದವರೆಗೆ ಬಡ್ಡಿ ಗ್ಯಾರಂಟಿ, ಆದರೆ ಈ ತೆರಿಗೆ ನಿಯಮ ಗೊತ್ತಿರಲಿ

ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ ಹಣ ಜಮೆಯಾಗಿಲ್ಲ, ಹಾಗಾದರೆ ನನ್ನ ಖಾತೆಗೆ ಇನ್ನೂ ಬಡ್ಡಿ ಸಿಗುತ್ತದೆಯೇ ಅಥವಾ ನನ್ನ ಹಣ ಹಾಗೆಯೇ ಉಳಿದುಕೊಳ್ಳುತ್ತದೆಯೇ?’ ಎಂಬುದು ಆ ಪ್ರಶ್ನೆ. ಈ ಪ್ರಶ್ನೆಗೆ ಇಪಿಎಫ್‌ಒ ನೇರವಾಗಿ ನೀಡಿರುವ ಉತ್ತರ – ಹೌದು, ಖಂಡಿತವಾಗಿಯೂ ಬಡ್ಡಿ ಸಿಗುತ್ತದೆ’.ಪಿಎಫ್‌ಗೆ ಹಣ ಜಮಾ ಮಾಡುವುದು ನಿಂತ ತಕ್ಷಣವೇ ಬಡ್ಡಿ ಬರುವುದು ನಿಂತುಹೋಗುತ್ತದೆ ಎಂಬುದು ಹಲವರಲ್ಲಿರುವ ತಪ್ಪು ಕಲ್ಪನೆ. ಆದರೆ ವಾಸ್ತವವೇ ಬೇರೆ.

http://Visit : www.suddidina.com

3 ವರ್ಷಗಳ ಹಳೆಯ ನಿಯಮದ ಅಸಲಿ ಸತ್ಯವೇನು?

ಈ ಗೊಂದಲಕ್ಕೆ ಕಾರಣ 2016ಕ್ಕಿಂತ ಮೊದಲು ಇದ್ದ ನಿಯಮ. ಹಳೆಯ ನಿಯಮದ ಪ್ರಕಾರ, ಒಂದು ಪಿಎಫ್ ಖಾತೆಗೆ ಸತತ 36 ತಿಂಗಳು (3 ವರ್ಷ) ಯಾವುದೇ ವಂತಿಗೆ ಜಮೆಯಾಗದಿದ್ದರೆ, ಅದನ್ನು `ನಿಷ್ಕ್ರಿಯ ಖಾತೆ’ (Inoperative Account) ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಅಂತಹ ಖಾತೆಗೆ ಬಡ್ಡಿ ನೀಡುವುದನ್ನು ತಡೆಹಿಡಿಯಲಾಗುತ್ತಿತ್ತು. ಇದರಿಂದಾಗಿ ಲಕ್ಷಾಂತರ ಖಾತೆದಾರರ ಹಣಕ್ಕೆ ಬಡ್ಡಿ ಸಿಗದೆ ನಷ್ಟವಾಗುತ್ತಿತ್ತು.ಆದರೆ ಚಂದಾದಾರರ ಹಿತದೃಷ್ಟಿಯಿಂದ ಇಪಿಎಫ್‌ಒ 2016 ರಲ್ಲಿ ಈ ನಿಯಮಕ್ಕೆ ಮಹತ್ವದ ತಿದ್ದುಪಡಿ ತಂದಿದೆ. ಹೊಸ ಮತ್ತು ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ನಿಯಮಿತವಾಗಿ ಚಕ್ರಬಡ್ಡಿ (Compounding Interest) ಜಮೆಯಾಗುತ್ತಲೇ ಇರುತ್ತದೆ. ನೀವು ಕೆಲಸದಲ್ಲಿದ್ದರೂ, ಇಲ್ಲದಿದ್ದರೂ ಇದು ಅನ್ವಯಿಸುತ್ತದೆ.

ಉದಾಹರಣೆ:

ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. ಒಬ್ಬ ವ್ಯಕ್ತಿ ತಮ್ಮ 40ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ತಮ್ಮ ಪಿಎಫ್ ಖಾತೆಯಲ್ಲಿದ್ದ 10 ಲಕ್ಷ ರೂಪಾಯಿಯನ್ನು ಹಿಂಪಡೆಯದೆ ಹಾಗೆಯೇ ಬಿಡುತ್ತಾರೆ ಎಂದುಕೊಳ್ಳಿ. ಅವರು ಮುಂದಿನ 5 ವರ್ಷಗಳ ಕಾಲ ಅಂದರೆ 45ನೇ ವಯಸ್ಸಿನವರೆಗೆ ಯಾವುದೇ ಹಣವನ್ನು ಜಮೆ ಮಾಡದಿದ್ದರೂ, ಅವರ ಖಾತೆಯಲ್ಲಿರುವ ಆ 10 ಲಕ್ಷ ರೂಪಾಯಿಗೆ ಇಪಿಎಫ್‌ಒ ಪ್ರತಿ ವರ್ಷ ಘೋಷಿಸುವ ಬಡ್ಡಿ ದರದಂತೆ (ಪ್ರಸ್ತುತ 8.25%) ಬಡ್ಡಿ ಸೇರ್ಪಡೆಯಾಗುತ್ತಲೇ ಹೋಗುತ್ತದೆ. ಇದು ಅವರಿಗೆ 58 ವರ್ಷ ತುಂಬುವವರೆಗೆ ಅಂದರೆ ಇನ್ನೂ 13 ವರ್ಷಗಳ ಕಾಲ ನಿರಂತರವಾಗಿ ಸಿಗುತ್ತದೆ. ಅದೇ ರೀತಿ 50ನೇ ವಯಸ್ಸಿನಲ್ಲಿ ಕೆಲಸ ಬಿಟ್ಟವರಿಗೆ 58 ವರ್ಷದವರೆಗೆ 8 ವರ್ಷಗಳ ಕಾಲ ಬಡ್ಡಿ ಸಿಗುತ್ತದೆ.

ಈ ಒಂದು ತೆರಿಗೆ ನಿಯಮವನ್ನು ಮಾತ್ರ ಮರೆಯಬೇಡಿ!

ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತದೆ ಎಂಬುದು ಖುಷಿಯ ವಿಚಾರವೇ, ಆದರೆ ಇಲ್ಲಿ ಒಂದು ಪ್ರಮುಖ ತೆರಿಗೆ ಎಚ್ಚರಿಕೆಯಿದೆ. ನೀವು ಕೆಲಸ ಮಾಡುತ್ತಿರುವಾಗ ನಿಮ್ಮ ಪಿಎಫ್ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ನೀವು ಕೆಲಸ ಬಿಟ್ಟ ನಂತರ ನಿಮ್ಮ ಖಾತೆಗೆ ಜಮೆಯಾಗುವ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆಯು `ಇತರ ಮೂಲಗಳಿಂದ ಬಂದ ಆದಾಯ’ (Income from Other Sources) ಎಂದು ಪರಿಗಣಿಸುತ್ತದೆ. ಆದ್ದರಿಂದ ಆ ಬಡ್ಡಿಯ ಮೊತ್ತವನ್ನು ನೀವು ನಿಮ್ಮ ವಾರ್ಷಿಕ ಆದಾಯದಲ್ಲಿ ತೋರಿಸಿ, ನಿಮ್ಮ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.

ಖಾತೆದಾರರು ಏನು ಮಾಡಬೇಕು?

1. ಕೆಲಸ ಬದಲಾಯಿಸಿದ್ದರೆ: ಹಳೆಯ ಕಂಪನಿಯ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವ ಬದಲು, ನಿಮ್ಮ ಯುಎಎನ್ (UAN) ಮೂಲಕ ಹೊಸ ಕಂಪನಿಯ ಖಾತೆಗೆ ವರ್ಗಾವಣೆ (Transfer) ಮಾಡಿಕೊಳ್ಳಿ. ಇದರಿಂದ ನಿಮ್ಮ ಸೇವಾ ಅವಧಿ ನಿರಂತರವಾಗಿರುತ್ತದೆ.

2. ವೃತ್ತಿ ವಿರಾಮದಲ್ಲಿದ್ದರೆ: 58 ವರ್ಷದವರೆಗೆ ಹಣ ಸುರಕ್ಷಿತವಾಗಿ ಬೆಳೆಯುತ್ತದೆ. ಆದರೆ ನಿಮಗೆ ತುರ್ತು ಅಗತ್ಯವಿಲ್ಲದಿದ್ದರೆ, ಹೆಚ್ಚಿನ ಆದಾಯಕ್ಕಾಗಿ ಬೇರೆಡೆ ಹೂಡಿಕೆ ಮಾಡುವ ಬಗ್ಗೆಯೂ ಯೋಚಿಸಬಹುದು.

3. 58 ವರ್ಷದ ನಂತರ: ಖಾತೆದಾರನಿಗೆ 58 ವರ್ಷ ತುಂಬಿದ ನಂತರವೂ ಹಣವನ್ನು ಹಿಂಪಡೆಯದಿದ್ದರೆ ಮಾತ್ರ ಆ ಖಾತೆಯನ್ನು ಮತ್ತೆ `ನಿಷ್ಕ್ರಿಯ’ ಎಂದು ಪರಿಗಣಿಸಿ ಬಡ್ಡಿ ನೀಡುವುದನ್ನು ಶಾಶ್ವತವಾಗಿ ನಿಲ್ಲಿಸಲಾಗುತ್ತದೆ.ಆದ್ದರಿಂದ 5 ವರ್ಷದಿಂದ ಹಣ ಜಮೆಯಾಗದಿದ್ದರೂ ಚಿಂತಿಸಬೇಕಿಲ್ಲ, ನಿಮ್ಮ ಪಿಎಫ್ ಹಣ ಇಪಿಎಫ್‌ಒ ನಲ್ಲಿ ಸುರಕ್ಷಿತವಾಗಿ ಬಡ್ಡಿಯೊಂದಿಗೆ ಬೆಳೆಯುತ್ತಿದೆ.

Continue Reading

ದಿನದ ಸುದ್ದಿ

ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್‌ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!

Published

on

ಸೆಪ್ಟೆಂಬರ್ ಅಂತ್ಯಕ್ಕೆ ಹೊಸ ಸೇವೆ ಜಾರಿ; ಮುಂದಿನ ವಾರವೇ `ನಮ್ಮ ಬಿಎಂಟಿಸಿ 2.0' ಆ್ಯಪ್ ಲೋಕಾರ್ಪಣೆ, 200 ಹೊಸ ಮಿನಿ ಡೀಸೆಲ್ ಬಸ್ ಖರೀದಿಗೆ ಸಿದ್ಧತೆ

ಸುದ್ದಿದಿನ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಷಾಂತರ ಬಿಎಂಟಿಸಿ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಇರುವುದಿಲ್ಲ. ಖಾಸಗಿ ರೈಡ್-ಹೇಲಿಂಗ್ ಆ್ಯಪ್‌ಗಳಾದ ಓಲಾ, ಉಬರ್, ರ‍್ಯಾಪಿಡೋ ನಂತಹ ಆ್ಯಪ್‌ಗಳಲ್ಲೇ ನೇರವಾಗಿ ಬಿಎಂಟಿಸಿ ಬಸ್‌ಗಳ ಲೈವ್ ಲೋಕೇಶನ್ ಟ್ರ್ಯಾಕ್ ಮಾಡಲು ಮತ್ತು ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಮಹತ್ವದ ಸೇವೆಯು ಇದೇ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

http://Visit : www.suddidina.com

ಈ ಕುರಿತು ಮಾಹಿತಿ ನೀಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ, ನಾವು ಹಲವು ಖಾಸಗಿ ರೈಡ್ ಅಗ್ರಿಗೇಟರ್ ಕಂಪನಿಗಳ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ಇದಕ್ಕಾಗಿ ಶೀಘ್ರದಲ್ಲೇ ಒಂದು ಸಾಮಾನ್ಯ ಮಾನದಂಡದ ಒಪ್ಪಂದವನ್ನು (Standard Agreement) ಜಾರಿಗೆ ತರಲಿದ್ದೇವೆ. ಈ ಒಪ್ಪಂದದ ನಿಯಮಗಳಿಗೆ ಬದ್ಧರಾಗುವ ಯಾವುದೇ ಖಾಸಗಿ ಕಂಪನಿಯು ಬಿಎಂಟಿಸಿಯ ಲೈವ್ ಡೇಟಾವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಇದರಿಂದ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಿಲ್ಲ. ಕ್ಯಾಬ್ ಅಥವಾ ಆಟೋಗಳಿಂದ ಇಳಿದು ಮುಂದಿನ ಪ್ರಯಾಣಕ್ಕೆ ಬಸ್ ಹಿಡಿಯುವವರಿಗೆ ಇದು ಅತ್ಯಂತ ಸಹಕಾರಿಯಾಗಲಿದೆ ಎಂದು ಹೇಳಿದರು.

ನಮ್ಮ ಬಿಎಂಟಿಸಿ 2.0′ ಆ್ಯಪ್‌ನಲ್ಲಿ ಏನಿದೆ ಹೊಸತು?

ಖಾಸಗಿ ಆ್ಯಪ್‌ಗಳ ಜೊತೆ ಡೇಟಾ ಹಂಚಿಕೊಳ್ಳುವುದರ ಜೊತೆಗೆ, ಬಿಎಂಟಿಸಿ ತನ್ನ ಸ್ವಂತ ಮೊಬೈಲ್ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸುತ್ತಿದೆ. ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0′ ಅನ್ನು ಮುಂದಿನ ವಾರದ ಅಂತ್ಯದೊಳಗೆ ಲೋಕಾರ್ಪಣೆಗೊಳಿಸಲಾಗುವುದು. ಈ ಹಿಂದೆ ಆ್ಯಪ್ ಕುರಿತು ಪ್ರಯಾಣಿಕರು ನೀಡಿದ್ದ ದೂರುಗಳು ಮತ್ತು ತಾಂತ್ರಿಕ ದೋಷಗಳನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ. ಹೊಸ ಆ್ಯಪ್‌ನಲ್ಲಿ ಬಿಎಂಟಿಸಿ ನೆಟ್‌ವರ್ಕ್‌ನಲ್ಲಿ ಸಂಚರಿಸುವ ಪ್ರತಿಯೊಂದು ಬಸ್‌ನ ಲೈವ್ ಲೋಕೇಶನ್ ಅತ್ಯಂತ ನಿಖರವಾಗಿ ಲಭ್ಯವಾಗಲಿದೆ. ಪ್ರಸ್ತುತ ಬಿಎಂಟಿಸಿ ಬಳಿ 1,771 ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ ಒಟ್ಟು 6,938 ಬಸ್‌ಗಳಿವೆ. ಪ್ರತಿದಿನ ಸರಾಸರಿ 6,200 ಬಸ್‌ಗಳು ನಗರದಾದ್ಯಂತ ಕಾರ್ಯಾಚರಣೆ ನಡೆಸುತ್ತಿವೆ.

ಸಾರಿಗೆ ಸಚಿವರ ಮಹತ್ವದ ಸಭೆ ಮತ್ತು ನಿರ್ದೇಶನ: 

ವಿಧಾನಸೌಧದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಇಲಾಖೆ, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

200 ಹೊಸ ಮಿನಿ ಬಸ್‌ಗಳ ಖರೀದಿ:

ಮೆಟ್ರೋ ಫೀಡರ್ ಸೇವೆ ಹಾಗೂ ನಗರದ ಕಿರಿದಾದ ರಸ್ತೆಗಳ ಸಂಪರ್ಕಕ್ಕಾಗಿ 200 ಹೊಸ 7 ಮೀಟರ್ ಉದ್ದದ ಮಿನಿ ಡೀಸೆಲ್ ಬಸ್‌ಗಳನ್ನು ಖರೀದಿಸಲು ಬಿಎಂಟಿಸಿ ನಿರ್ಧರಿಸಿದೆ. ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಕಿರಿದಾದ ರಸ್ತೆಗಳಲ್ಲಿ ಈ ಚಿಕ್ಕ ಬಸ್‌ಗಳು ಸುಲಭವಾಗಿ ಸಂಚರಿಸಬಲ್ಲವು. ಸದ್ಯ 9 ಮತ್ತು 12 ಮೀಟರ್ ಉದ್ದದ 255 ಬಸ್‌ಗಳು ಮೆಟ್ರೋ ಫೀಡರ್ ಆಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ನಾಲ್ಕು ನಿಗಮಗಳಿಗೆ 1,000 ಬಸ್ ಖರೀದಿ ಯೋಜನೆಯ ಭಾಗವಾಗಿ ಈ ಖರೀದಿ ನಡೆಯಲಿದೆ. ಮುಂದಿನ 6 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಬನ್ನೇರುಘಟ್ಟ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಪಿಂಕ್ ಲೈನ್‌ನ 6 ನಿಲ್ದಾಣಗಳು ಸೇರಿದಂತೆ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆ ವಿಸ್ತರಿಸಲು ಬಿಎಂಆರ್‌ಸಿಎಲ್ ಮತ್ತು ಸಂಚಾರ ಪೊಲೀಸರ ಜೊತೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ.

ಎಸಿ ಬಸ್ ಸೇವೆ ಹೆಚ್ಚಳಕ್ಕೆ ಸೂಚನೆ:

ಪಿಎಂ ಇ-ಡ್ರೈವ್ ಯೋಜನೆಯಡಿ ಬರಲಿರುವ 4,500 ಎಲೆಕ್ಟ್ರಿಕ್ ಬಸ್‌ಗಳ ಪೈಕಿ 200 ಮಿನಿ ಎಸಿ ಇ-ಬಸ್‌ಗಳನ್ನು ಎಲ್ಲಾ ಮೆಟ್ರೋ ನಿಲ್ದಾಣಗಳ 5 ಕಿ.ಮೀ ವ್ಯಾಪ್ತಿಯಲ್ಲಿ ಓಡಿಸುವಂತೆ ಸಚಿವರು ಸೂಚಿಸಿದ್ದಾರೆ. ಐಟಿ ಕಂಪನಿ ಉದ್ಯೋಗಿಗಳು ಖಾಸಗಿ ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೇರೇಪಿಸಲು ಐಟಿ ಪಾರ್ಕ್‌ಗಳ ಮಾರ್ಗಗಳಲ್ಲಿ ಎಸಿ ಬಸ್ ಸೇವೆ ಹೆಚ್ಚಿಸಲು ಮತ್ತು ಐಟಿ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಎಲ್ಲಾ ನಿಗಮಗಳಲ್ಲಿ ಆದಾಯ ಸೋರಿಕೆ ತಡೆದು ಅನಗತ್ಯ ವೆಚ್ಚ ಕಡಿತಗೊಳಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವರು ಸೂಚಿಸಿದ್ದಾರೆ.

Continue Reading

ದಿನದ ಸುದ್ದಿ

EV ನೋಂದಣಿಯಲ್ಲಿ ಕರ್ನಾಟಕದ ಸಾಧನೆ – ಶುದ್ಧ ಚಲನೆಗೆ ಬೆಸ್ಕಾಂ ಮುನ್ನಡೆ

Published

on

ಕರ್ನಾಟಕ – ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಮುನ್ನಡೆ

ಸುದ್ದಿದಿನ,ಬೆಂಗಳೂರು: ರಾಜ್ಯವು ಇವಿ ನೋಂದಣಿಯಲ್ಲಿ ದೇಶದಲ್ಲೇ ಪ್ರಮುಖ ಸ್ಥಾನ ಪಡೆದಿದ್ದು, ಶುದ್ಧ ಚಲನೆಗೆ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಹಾಗೂ ವಿಶ್ವ ಇವಿ ದಿನದ ಸಂದರ್ಭದಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಮುನ್ನಡೆ ಸಾಧಿಸಿರುವುದು ಶ್ಲಾಘನೀಯ.

http://Visit : www.suddidina.com

ಕರ್ನಾಟಕವು ಒಟ್ಟು ಇವಿ ನೋಂದಣಿಯಲ್ಲಿ 3ನೇ ಸ್ಥಾನ ಪಡೆದಿದ್ದು, e-2W (ಎಲೆಕ್ಟ್ರಿಕ್ ಎರಡು ಚಕ್ರ ವಾಹನ) ಮತ್ತು e-4W (ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನ) ನೋಂದಣಿಯಲ್ಲಿ 2ನೇ ಸ್ಥಾನ ಪಡೆದಿದೆ. ಇದು ರಾಜ್ಯದ ಜನರು ಎಲೆಕ್ಟ್ರಿಕ್ ವಾಹನಗಳನ್ನು ಸ್ವೀಕರಿಸುವ ಪ್ರಮಾಣ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. 2027 ಹಣಕಾಸು ವರ್ಷದಲ್ಲಿ EV ಪ್ರವೇಶ ಪ್ರಮಾಣ 14.67% ಆಗಿದ್ದು, ಇದು ದೇಶದ ಮಟ್ಟದಲ್ಲಿ ಗಮನಾರ್ಹ ಸಾಧನೆಯಾಗಿದೆ.

ರಾಜ್ಯದ ಇವಿ ಮೂಲಸೌಕರ್ಯ ಅಭಿವೃದ್ಧಿಗೆ ಬೆಸ್ಕಾಂ ನೊಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ, ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಚಾರ್ಜಿಂಗ್ ಸೌಲಭ್ಯ, ಹಾಗೂ ಶುದ್ಧ ಚಲನೆಗೆ ಅಗತ್ಯವಾದ ತಂತ್ರಜ್ಞಾನವನ್ನು ಒದಗಿಸುವಲ್ಲಿ ಬೆಸ್ಕಾಂ ಪ್ರಮುಖ ಪಾತ್ರವಹಿಸಿದೆ.

ಕರ್ನಾಟಕ ಸರ್ಕಾರವು ಶುದ್ಧ ಚಲನೆಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವಿ ಖರೀದಿಗೆ ಪ್ರೋತ್ಸಾಹಕ ಯೋಜನೆಗಳು, ಚಾರ್ಜಿಂಗ್ ಮೂಲಸೌಕರ್ಯ ವಿಸ್ತರಣೆ, ಹಾಗೂ ಹಸಿರು ತಂತ್ರಜ್ಞಾನವನ್ನು ಉತ್ತೇಜಿಸುವ ಕ್ರಮಗಳು ಇವಿ ಕ್ರಾಂತಿಗೆ ಬಲ ನೀಡಿವೆ.

ಇವಿ ಬಳಕೆಯ ಹೆಚ್ಚಳದಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದು, ಇಂಧನ ಅವಲಂಬನೆ ಕಡಿಮೆಯಾಗುವುದು ಹಾಗೂ ಶುದ್ಧ ಶಕ್ತಿಯ ಬಳಕೆ ಹೆಚ್ಚಾಗುವುದು. ಇದು ಕರ್ನಾಟಕವನ್ನು ಹಸಿರು ರಾಜ್ಯವಾಗಿ ರೂಪಿಸುವತ್ತ ಪ್ರಮುಖ ಹೆಜ್ಜೆಯಾಗಿದೆ.

ವಿಶ್ವ ಇವಿ ದಿನದ ಅಂಗವಾಗಿ, ಕರ್ನಾಟಕವು ತನ್ನ ಸಾಧನೆಗಳನ್ನು ಹಂಚಿಕೊಂಡು, ಮುಂದಿನ ದಿನಗಳಲ್ಲಿ ಶುದ್ಧ ಚಲನೆಗೆ ಇನ್ನಷ್ಟು ಬಲ ನೀಡಲು ಬದ್ಧವಾಗಿದೆ. ಇವಿ ಕ್ರಾಂತಿಯ ಮೂಲಕ ಕರ್ನಾಟಕವು ಭಾರತದ ಭವಿಷ್ಯವನ್ನು ಹಸಿರು ಮತ್ತು ಶಾಶ್ವತ ದಿಕ್ಕಿನಲ್ಲಿ ಮುನ್ನಡೆಸುತ್ತಿದೆ.

Continue Reading

Trending