ಲೈಫ್ ಸ್ಟೈಲ್
ಡಾಕ್ಟ್ರೇ… ಸೈಡ್ ಇಫೆಕ್ಟ್ ಇಲ್ಲದ ಔಷಧಿ ಬರ್ದು ಕೊಡಿ..!
- ಡಾ: ಎನ್.ಬಿ.ಶ್ರೀಧರ
“ಡಾಕ್ಟ್ರೇ… ದನಕ್ಕೆ ಸೈಡ್ ಎಫ಼ೆಕ್ಟ್ ಇರದ ಮೆಡಿಸಿನ್ ಬರ್ದು ಕೊಡಿ. ಅದಕ್ಕೆ ಹೀಟಾಗುತ್ತೆ… ಬೇಡವೇ ಬೇಡ” ಇದು ನಮ್ಮ ಗೋಪಾಲಕರೊಬ್ಬರ ವಿನಂತಿ.
“ನಮ್ಮನೇ ದನಕ್ಕೆ ಯಾವುದೂ ಇಂಗ್ಲಿಷ್ ಔಷಧೀನೇ ಕೊಡಿಸಲ್ಲ. ಎಲ್ಲಾನೂ ನೈಸರ್ಗಿಕ.. ಯಾವುದೇ ಸೈಡ್ ಇಫ಼ೆಕ್ಟ್ ಇಲ್ವಂತೆ.
ದನಾ ಕಟ್ಲೇ ಇಲ್ಲ. ಎಲ್ಲಾ ಔಷಧೀನೂ ಮಾಡಿಸ್ದೆ… ಏನೂ ಪ್ರಯೋಜನಾ ಆಗ್ಲೇ ಇಲ್ಲ. ಹಳ್ಳಿ ಔಷಧಿ ಮಾಡಿಸಿದೆ. ಈಗ ನೋಡಿ ಕಟ್ಬಿಟ್ಟಿದೆ.
“ಈ ಇಂಗ್ಲಿಷ್ ಮೆಡಿಸಿನ್ ಬಿಟ್ಬಿಟ್ಟೆ.. ಭಾರಿ ವಿಷ ಅಂತೆ ಕಣ್ರೀ.. ಈ ಹಳ್ಳಿ ಔಷಧೀನೆ ಸೈ.. ಒಂಚೂರು ಸೈಡ್ ಇಫ಼ೇಕ್ಟ್ ಇಲ್ಲವಂತೆ.. ಅದನ್ನೇ ದನಕ್ಕೆ ಹಾಕೋದು ಅಂತ ಅಂದ್ಕಂಡಿದ್ದೀನಿ”..ನೋಡ್ಬೇಕು” ಇದು ಮತ್ತೊಬ್ಬರ ಅಂಬೋಣ.
“ಅಯ್ಯೋ.. ಈ ಇಂಗ್ಲಿಷ್ ಆಸ್ಪತ್ರೆಗಳೇ ಇಷ್ಟು.. ಅದೂ ಇದೂ ಟೆಸ್ಟ್ ಅಂತ ದುಡ್ಡಿಗಾಗಿ ಮಾಡಿಸ್ತಾರೆ.. ಎಲ್ಲಾ ದುಡ್ಡು ಸುಲಿಯುವ ಕೇಂದ್ರಗಳು ಕಣ್ರೀ… ಇದು ಮತ್ತೊಬ್ಬರ ಹೇಳಿಕೆ.
“ನಾನೆಂತೂ ಇಂಗ್ಲಿಷ್ ಔಷಧಿ ತಗೊಳ್ಳೋದೇ ಇಲ್ಲ. ಹಳ್ಳಿ ಔಷಧೀನೇ ತಗಳ್ಳೋದು.. ಇಂಗ್ಲಿಷ್ ಔಷಧಿ ಒಂದು ದೊಡ್ಡ ದಂಧೆ.. ಡಾಕ್ಟರುಗಳೆಲ್ಲಾ ಮಾಡೋದು ಬ್ಯುಸಿನೆಸ್”…ಇದು ಇನ್ನೊಬ್ಬರ ಅನಿಸಿಕೆ.
“ದಿನಕ್ಕೆ 4-5 ಲೀಟರ್ ನೀರು ಕುಡಿದರೆ ಸಾಕು. ಯಾವ ಕಾಯಿಲೆನೂ ಬರಲ್ಲ. ಇಂಗ್ಲಿಷ್ ಮೆಡಿಸಿನ್ ತಗೊಳ್ಳೋದೇ ಬೇಡ” ಮತ್ತೋರ್ವರ ಅಭಿಪ್ರಾಯ.
ಇಂಗ್ಲಿಷ್ ಔಷಧಿ ಒಳ್ಳೇದಲ್ಲ. ಹೋದ ತಕ್ಷಣ ಆಂಟಿಬಯೋಟಿಕ್ ಬರ್ದು ಕೊಡ್ತಾರೆ.. ಇದ್ರಿಂದ ಹೀಟು..ಸಿಕ್ಕಾಪಟ್ಟೆ ಸೈಡ್ ಎಫೆಕ್ಟ್..ಅದಕ್ಕೆ ಹಳ್ಳಿ ಔಷಧ ತಗಳ್ತಿದ್ದೀನಿ..
ಹೀಗೆ ಔಷಧಗಳ ಬಗ್ಗೆ ವೈರುಧ್ಯಗಳ ಪಟ್ಟೀಯೇ ಬೆಳೆಯುತ್ತಾ ಹೋಗುತ್ತದೆ. ಒಂದರ್ಥದಲ್ಲಿ ಹೇಳಬೇಕೆಂದರೆ ಆಂಗ್ಲ ಅಥವಾ ಪಾಶ್ಚ್ಯಾತ್ಯ ಅಥವಾ ಆಧುನಿಕ ಔಷಧಿಗಳ ಬಗ್ಗೆ ಜನರಿಗೆ ಅಸಹನೆ ಬೆಳೆಯುತ್ತಲೇ ಇದೆ. ಇದರ ಬಗ್ಗೆ ಸ್ವಲ್ಪ ಬೆಳಕು ಚೆಲ್ಲೋಣವೇ?
ಒಂದು ಕಾಯಿಲೆಯ ಬಗ್ಗೆ ಔಷಧಿಯನ್ನು ಕಂಡು ಹಿಡಿಯಲು ಸಹಸ್ರಾರು ವಿಜ್ಞಾನಿಗಳ ಮಾನವ ಘಂಟೆಗಳ ಪರಿಶ್ರಮ ಇರಲೇ ಬೇಕು. ಕಾಯಿಲೆ ಅಂದ ಮೇಲೆ ಅದಕ್ಕೊಂದು ಕಾರಣ ಇರಬೇಕು.ಆ ಕಾರಣ ಕಂಡು ಹಿಡಿಯಲೂ ಸಹ ಪ್ರಯತ್ನ ಬೇಕು. ಅದಾದ ನಂತರ ಅದಕ್ಕೊಂದು ಸೂಕ್ತ ಔಷಧ ಕಂಡು ಹಿಡಿಯಬೇಕು. ಅದು ಸುಲಭವೇ? ಖಂಡಿತಾ ಅಲ್ಲ.
ಹೊಸದೊಂದು ಔಷಧಿ ಕಂಡು ಹಿಡಿಯಬೇಕಾದರೆ ಲಕ್ಷಗಟ್ಟಲೇ ರಾಸಾಯನಿಕಗಳ ವಿಶ್ಲೇಷಣೆ ನಡೆಸಬೇಕು. ಈ ಸಹಸ್ರ ಸಂಖ್ಯೆಯ ರಾಸಾಯನಿಕಗಳಲ್ಲಿ ಕೇವಲ 100-200 ಮಾತ್ರ ಪರಿಣಾಮಕಾರಿಯಾಗಿ ಹೊರಹೊಮ್ಮುತ್ತವೆ. ಈ ಪ್ರಕ್ರಿಯೆಗೆ ಸುಮಾರು 3-4 ವರ್ಷ ಬೇಕು. ಇದಕ್ಕೆ ಸಾಮಾನ್ಯವಾಗಿ 10-15 ಬಿಲಿಯ ಡಾಲರುಗಳ ವೆಚ್ಚವಾಗುತ್ತದೆ. ಔಷಧದ ಕಣ ಕಂಡು ಹಿಡಿಯಬೇಕಾದರೆ ಅದಕ್ಕೆ ಅತ್ಯುತ್ತಮ ಪರಿಣಾಮ ಮತ್ತು ಅತೀ ಕಡಿಮೆ ಅಡ್ಡ ಪರಿಣಾಮ ವಿರಬೇಕೆಂಬುದು ಒಂದು ಕಠಿಣ ನಿಯಮ.
ಅದಕ್ಕೆಂದೇ ಇವುಗಳನ್ನು ಮೊದಲು ಇಲಿಗಳ ಮೇಲೆ ಪ್ರಯೋಗಿಸಬೇಕಾಗುತ್ತದೆ. ಏಕೆಂದರೆ ಇವುಗಳನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಸಾಧ್ಯವಿಲ್ಲವಲ್ಲ!!. ಇಲಿಗಳನ್ನು ನಮಗಾಗಿ ಶೋಷಣೆ ಮಾಡಬಾರದೆಂಬ ಅರಿವು ಇದ್ದರೂ ಸಹ ಅವುಗಳ ಮೇಲೆ ಅಥವಾ ಇತರ ಪ್ರಯೋಗಶಾಲಾ ಪ್ರಾಣಿಗಳಾದ ಮೊಲ, ಗಿನಿ ಹಂದಿ, ಚಿಕ್ಕಿಲಿ, ಕೋತಿ ಅಥವಾ ನಾಯಿಗಳ ಮೇಲೆ ಪ್ರಯೋಗ ಮಾಡಿ ಅವುಗಳ ಪರಿಣಾಮ ಮತ್ತು ಅಡ್ಡ ಪರಿಣಾಮಗಳನ್ನು ಪತ್ತೆ ಮಾಡಬೇಕಾಗುತ್ತದೆ. ಇದಕ್ಕೆ ಕ್ಲಿನಿಕಲ್ ಪೂರ್ವ ಪ್ರಯೋಗವೆನ್ನುತ್ತಾರೆ. ಇದಕ್ಕೆ ಮನುಷ್ಯರನ್ನು ಉಪಯೋಗಿಸಬೇಕಾದ ಪ್ರಸಂಗ ಬಂದರೆ ಸಹಸ್ರಾರು ಮನುಜರೇ ಬೇಕಾಗಿದ್ದರೇನೋ??!!. ಇತ್ತೀಚೆಗೆ ಪ್ರಾಣಿಗಳನ್ನು ಬಹಳಷ್ಟು ಕಡಿಮೆ ಉಪಯೋಗಿಸಬೇಕೆಂಬ ಕಟ್ಟು ನಿಟ್ಟಾದ ನಿಯಮಗಳು, ಹೇಗೆ ಪ್ರಯೋಗ ಮಾಡಬೇಕೆಂಬ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ನಿಯಮಗಳು ಬಂದಿವೆ. ಈ ಹಂತದಲ್ಲೇ ಹಲವಾರು ಔಷಧಿಗಳು ಬಿದ್ದು ಹೋಗುತ್ತವೆ.
ಯಾವುದೇ ಒಂದು ಹಂತದಲ್ಲಿ ಔಷಧಿ ಕಣವು ಬ್ರೂಣಕ್ಕೆ ಧಕ್ಕೆ ಮಾಡುವಂತಿದ್ದರೆ, ಗರ್ಭಪಾತ ಮಾಡುವಂತಿದ್ದರೆ, ನರಮಂಡಳಕ್ಕೆ ತೊಂದರೆ ಉಂಟು ಮಾಡುತ್ತಿದ್ದರೆ ಅಥವಾ ಹೃದಯ, ಮೂತ್ರಜನಕಾಂಗ, ಪಿತ್ತಜನಕಾಂಗ, ಮೇದೋಜೀರಕಾಂಗ, ಉದರ, ಮೆದುಳು ಅಥವಾ ಯಾವುದೇ ಅಂಗಕ್ಕೆ ಸೂಕ್ಷ್ಮದರ್ಶಕದಲ್ಲಿ ಮಾತ್ರ ನೋಡಬಹುದಾದ ಸ್ವಲ್ಪ ತೊಂದರೆಯುಂಟುಮಾಡುತ್ತಿದ್ದರೂ ಸಹ ಈ ಔಷಧಿಯ ಕಣವನ್ನು ಮುಲಾಜಿಲ್ಲದೇ ಬದಿಗೊತ್ತಲಾಗುತ್ತದೆ. ಅಂದರೆ ಸುಮಾರು 3-5 ವರ್ಷಗಳ ಸತತ ಪ್ರಯತ್ನ ಮತ್ತು 10-20 ಬಿಲಿಯ ಡಾಲರುಗಳು ಹೋಮವಾದ ಹಾಗೇ!!.
ಇದೆಲ್ಲ ಪರೀಕ್ಷೆಗಳನ್ನು ಪಾಸು ಮಾಡಿ ಬಂದರೆ ಅದನ್ನು ಔಷಧಿಯೆಂದು ಪರಿಗಣಿಸಲಾಗುತ್ತದೆ. ಇದಾದ ನಂತರ ಮನುಷ್ಯರ ಮೇಲೆ ನಾಲ್ಕು ಹಂತದ ಪ್ರಯೋಗಗಳು ಅಥವಾ ಕ್ಲಿನಿಕಲ್ ಪರೀಕ್ಷೆಗಳನ್ನು ಅವರ ಒಪ್ಪಿಗೆ ಪಡೆದು ಮಾಡಲಾಗುತ್ತದೆ.
ಮೊದಲ ಹಂತ
ಇದರಲ್ಲಿ 10-15 ಅರೋಗ್ಯಕರ ಸ್ವಯಂ ಪ್ರೇರಣೆಯಿಂದ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಆರೋಗ್ಯವಂತ ಜನರ ಮೇಲೆ ಔಷಧಿಯನ್ನು ಪ್ರಯೋಗಿಸಲಾಗುತ್ತದೆ. ಈ ಹಂತದಲ್ಲಿ ಔಷಧಿಯು ಇಲಿಗಳ ಮೇಲೆ ಮಾಡಿದ ಪರಿಣಾಮ ಮನುಷ್ಯನಲ್ಲೂ ಪುನರಾವರ್ತನೆಯಾಗುತ್ತದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುತ್ತದೆ. ಅದರಲ್ಲೂ ಔಷಧಿಯು ಎಷ್ಟು ಪ್ರಮಾಣದಲ್ಲಿ ದೇಹಕ್ಕೆ ಸೇರಿತು? ಎಷ್ಟು ಪ್ರಮಾಣದಲ್ಲಿ ರಕ್ತದಲ್ಲಿ ಪ್ರಸರಣವಾಯಿತು, ಎಷ್ಟು ನಿರ್ವಿಷಗೊಂಡಿತು? ಎಷ್ಟು ದೇಹದಿಂದ ವಿಸರ್ಜಿಸಲ್ಪಟ್ಟಿತು ಎಂಬುದನ್ನು ಪರಿಶೀಲಿಸಲಾಗುತ್ತದೆ. ಅಲ್ಲದೇ ಅವಶ್ಯಕ ಪರಿಣಾಮವನ್ನು ಅದು ಮನುಷ್ಯ ದೇಹದ ಮೇಲೆ ಅವಶ್ಯಕ ಪರಿಣಾಮ ಮಾಡಿತೇ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತಾರೆ.ಅಲ್ಲದೇ ಬಾಯಿಯಿಂದ ನೀಡಬೇಕಾದ ಔಷಧವಾದರೆ ಅಹಾರದ ಪರಿಣಾಮವನ್ನು ಸಹ ಪರಿಶೀಲಿಸಿ ನೀಡಲಾಗುತ್ತದೆ. ಈ ಅಧ್ಯಯನಕ್ಕೆ 2-4 ವರ್ಷ ಬೇಕಾಗಿದ್ದು ಸುಮಾರು 10-20 ಬಿಲಿಯನ್ ಡಾಲರ್ ಖರ್ಚಾಗಬಹುದು.
ಎರಡನೇ ಹಂತ
ಈ ಹಂತದಲ್ಲಿ ಔಷಧಿಯನ್ನು ಮೇಲಿನ ಎಲ್ಲಾ ಸಂಶೋಧನೆಗಳನ್ನು ಜಾಸ್ತಿ ಜನ ಅಂದರೆ ಸುಮಾರು 100-1000 ಜನರ ಮೇಲೆ ಪ್ರಯೋಗಿಸಿ ಅದರ ಪರಿಣಾಮ ಮತ್ತು ಅಡ್ಡಪರಿಣಾಮ ಎರಡನ್ನೂ ಅಭ್ಯಾಸ ಮಾಡಲಾಗುತ್ತದೆ. ಇದಕ್ಕೆ 2-4 ವರ್ಷಗಳ ಪರಿಶ್ರಮದ ಅವಶ್ಯಕತೆ ಇದೆ.ಹಂತ 1 ಮತ್ತು 2 ರ ಅಧ್ಯಯನವನ್ನು ಆರೋಗ್ಯವಂತ ಮನುಷ್ಯರ ಮೇಲೆ ಮಾಡಲಾಗುತ್ತದೆ.
ಮೂರನೇ ಹಂತ
ಈ ಹಂತದಲ್ಲಿ ಅಧ್ಯಯನವನ್ನು 1000-3000 ರೋಗ ಪೀಡಿತ ಮನುಷ್ಯರ ಮೇಲೆ ಮಾಡಲಾಗುತ್ತದೆ. ಇಲ್ಲಿಯೂ ಸಹ ಹಂತ 1 ರಲ್ಲಿನ ಅಧ್ಯಯನವನ್ನೇ ಮುಂದುವರೆಸಲಾಗುತ್ತಿದ್ದು, ಔಷಧಿಯ ಸುರಕ್ಷತೆಯ ಬಗ್ಗೆ ಸಂಪೂರ್ಣ ಗಮನ ನೀಡಲಾಗುತ್ತದೆ.
ರೋಗ ಪೀಡಿತ ವ್ಯಕ್ತಿಯ ಮೇಲೆ ಅಡ್ಡ ಪರಿಣಾಮವಾಗುತ್ತಿದ್ದರೆ ಔಷಧಿಯ ಪ್ರಯೋಗವನ್ನು ನಿಲ್ಲಿಸಿ ಅದನ್ನು ಹಿಂಪಡೆಯಲಾಗುತ್ತದೆ. ಈ ಅಧ್ಯಯನಕ್ಕೂ ಸಹ 2-4 ವರ್ಷ ಅವಧಿ ಬೇಕಾಗಿದ್ದು 20-30 ಬಿಲಿಯನ್ ಡಾಲರ್ ಖರ್ಚು ಬರುತ್ತದೆ. ಇದಾದ ನಂತರ ವಿವಿಧ ದೇಶಗಳಲ್ಲಿ ಆಯಾ ದೇಶಗಳ ನಿಯಮಗಳಂತೆ ಅರ್ಜಿ ಸಲ್ಲಿಸಿ ರಹದಾರಿ ಪಡೆಯಲಾಗುತ್ತದೆ.
ಇಲ್ಲಿ ಪ್ಲಾಸೆಬೋ ಪರಿಣಾಮವನ್ನೂ ಸಹ ಗಮನಿಸಲಾಗುತ್ತದೆ. ಪ್ಲಾಸೆಬೋ ಅಂದರೆ “ಹುಸಿ ಔಷದಿ” ಅಥವಾ “ಸುಳ್ಳೌಷಧಿ” ಅನ್ನಬಹುದೇನೋ? ಈ ಹಂತದಲ್ಲಿ ಔಷಧಿಯ ಪರಿಣಾಮವನ್ನು ಗಮನಿಸಲು “ಹುಸಿ ಔಷಧಿ” ಯನ್ನು ಗುಳಿಗಳ ಒಳಗೆ ಹಾಕಿ ಅದನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿದ ರೋಗಿಗಳ ಮೇಲೆ ಪ್ರಯೋಗಿಸಲಾಗುತ್ತದೆ.
ಇದು ವೈದ್ಯರಿಗೆ ಅಥವಾ ಕಂಪನಿಗೆ ಅಥವಾ ರೋಗಿಗೆ ಗೊತ್ತಿರುವುದಿಲ್ಲ. ಮನುಷ್ಯನಲ್ಲಿ ಶೇ: 65-70 ರೋಗಗಳು ಮನಸ್ಸಿನ ಮೇಲಿನ ಪರಿಣಾಮದಿಂದ ಉದ್ಭವವಾಗುವುದರಿಂದ ನಂಬಿಕೆ ಅಥವಾ ಭರವಸೆ ಅಥವಾ ಗುಣವಾಗಿಯೇ ಆಗುತ್ತದೆ ಎಂಬ ನಿರೀಕ್ಷೆಯಿಂದ ಹಲವಾರು ರೋಗಗಳು ಗುಣವಾಗುತ್ತವೆ. ಆದರೆ ಈ ಪರಿಣಾಮ ಪ್ರಾಣಿಗಳಲ್ಲಿ ಇರದು.
ಇದಕ್ಕೊಂದು ಚಿಕ್ಕ ಉದಾಹರಣೆಯೆಂದರೆ ಒಂದು ಕಂಪನಿ ಜಿಮ್ ಮಾಡುವ ಜನಗಳಿಗಾಗಿ ಶಕ್ತಿ ಜಾಸ್ತಿ ಮಾಡುವ ಔಷಧಿಯನ್ನು ನೀಡುತ್ತಿದೆಯೆಂದರೆ ಅಲ್ಲಿ ಶೇ:75ರಷ್ಟು ಜನರಿಗೆ ಶಕ್ತಿ ಬರಬಹುದು. ಆದರೆ ನಿಜವಾಗಿ ಗುಳಿಗೆಯಿಂದ ಎಷ್ಟು ಜನರಿಗೆ ಶಕ್ತಿ ಬಂದಿದೆ ಎಂಬುದು ಎರಡು ಗುಂಪುಗಳಲ್ಲಿ ಒಂದು ಗುಂಪಿಗೆ ಹುಸಿ ಔಷಧಿ ಮತ್ತೊಂದು ಗುಂಪಿಗೆ ನಿಜವಾದ ಔಷಧಿಯನ್ನು ಹೊಂದಿದ ಗುಳಿಗೆಯನ್ನು ನೀಡುತ್ತಾರೆ.
ಹುಸಿ ಔಷಧಿ ನೀಡಿದ ಗುಂಪು ಮತ್ತು ನಿಜವಾದ ಔಷಧ ನೀಡಿದ ಗುಂಪಿನಲ್ಲಿ ಶಕ್ತಿ ಜಾಸ್ತಿ ಆದರೆ ಔಷಧಿಯ ಪರಿಣಾಮ ಇಲ್ಲ ಎನ್ನಬಹುದು. ಕೇವಲ ಎರಡನೇ ಗುಂಪಿನಲ್ಲಿ ಶಕ್ತಿ ಜಾಸ್ತಿಯಾಗಿದ್ದರೆ ಮಾತ್ರ ಔಷಧಿ ಪರಿಣಾಮಕಾರಿ ಎನ್ನಬಹುದು.
ಈ “ಪ್ಲಾಸೆಬೋ” ಪರಿಣಾಮ ಔಷಧಿಯ ನಿರೀಕ್ಷಿತ ಪರಿಣಾಮಕ್ಕಿಂತ ಜಾಸ್ತಿಯಾದರೆ ಔಷಧಿ ಮಾರುಕಟ್ಟೆಗೆ ಬರದು.
ನಾಲ್ಕನೇ ಹಂತ
ಈ ಹಂತವನ್ನು ಮಾರುಕಟ್ಟೆಯ ನಂತರದ ಸರ್ವೇಕ್ಷಣೆ ಅನ್ನಬಹುದು. ವಿವಿಧ ದೇಶಗಳಲ್ಲಿ ರಹದಾರಿ ದೊರೆತ ನಂತರ ಆಯಾ ದೇಶಗಳಲ್ಲಿ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, ವೈದ್ಯರಿಗೆ ಈ ಬಗ್ಗೆ ಮಾಹಿತಿ ನೀಡಿ, ರೋಗಿಗಳಿಗೆ ಅವರು ಔಷಧಿಯನ್ನು ನೀಡಿದಾಗ ಏನಾದರೂ ಅಡ್ಡಪರಿಣಾಮಗಳು ಇರುವವೇ ಎಂಬುದನ್ನು ಪತ್ತೆ ಹಚ್ಚಲು ತಂಡವೊಂದು ಕಾರ್ಯ ನಿರ್ವಹಿಸುತ್ತದೆ. ಯಾವ ಹಂತದಲ್ಲಿಯಾದರೂ ಸಹ ಔಷಧಿಯನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಬೇಕಾಗಬಹುದು.
ಅಂದರೆ ಇಂಗ್ಲಿಷ್ ಔಷಧ ಕಂಡು ಹಿಡಿಯುವ ಪದ್ಧತಿ ಇಡೀ ಪ್ರಪಂಚದಲ್ಲಿ ಏಕರೂಪದಲ್ಲಿದೆ. ಏಕೆಂದರೆ ಒಂದು ಔಷಧಿಯನ್ನು ಕಂಡು ಹಿಡಿದರೆ ಅದು ಪ್ರಪಂಚದಲ್ಲಿರುವ ಕೋಟ್ಯಾನುಕೋಟಿ ಜನರ ಮೇಲೆ ಒಂದೇ ರೂಪದಲ್ಲಿರಬೇಕು. ಅದಕ್ಕೆಂದೇ ವಿಶ್ವ ಆರೋಗ್ಯ ಸಂಸ್ಥೆಯ ಆಧೀನದ ಆಹಾರ ಮತ್ತು ಔಷಧ ಆಡಳಿತ ಪ್ರಾಧಿಕಾರ (FDA-Food and Drug Administration) ವು ಕಾರ್ಯ ನಿರ್ವಹಿಸುತ್ತಿದ್ದು, ವಿಶ್ವದ ಯಾವುದೇ ಭಾಗದಲ್ಲಿ ಹೊಸ ಔಷಧ ಕಂಡು ಹಿಡಿದರೂ ಇದರ ಕಠಿಣ ನಿಯಮಗಳನ್ನು ಪಾಲಿಸಿ ಇದರ ತಜ್ಞರ ಹದ್ದಿನ ಕಣ್ಣಿನ ಅಡಿ ಲೈಸನ್ಸ್ ಪಡೆಯಬೇಕಾಗುತ್ತದೆ.
ಇದಕ್ಕೆ ಕೋಟ್ಯಾಂತರ ಡಾಲರ್ ವೆಚ್ಚ ಮತ್ತು ಸಹಸ್ರಾರು ಮಾನವ ಘಂಟೆಗಳ ಪರಿಶ್ರಮವಿರುತ್ತದೆ. ನಂತರ ಇದಕ್ಕೆ ಕಂಡು ಹಿಡಿದ ಕಂಪನಿಯವರು ಪೇಟಂಟ್ ಪಡೆಯುತ್ತಾರೆ. ಯಾವುದೇ ವ್ಯವಸ್ಥೆ ನೂರಕ್ಕೆ ನೂರರಷ್ಟು ಪರಿಪೂರ್ಣವಲ್ಲ. ಆದರೂ ಆ ದಿಶೆಯೆಡೆಗೆ ಎಷ್ಟು ಪ್ರಾಮಾಣಿಕ ಪ್ರಯತ್ನ ನಡೆದಿದೆ ಎನ್ನುವುದು ಮುಖ್ಯ.
ಆಧುನಿಕ ಅಥವಾ ಇಂಗ್ಲಿಷ್ ಅಥವಾ ಅಲೋಪತಿ ಔಷಧಿ ಕಂಡು ಹಿಡಿಯುವ ಪದ್ಧತಿಯಲ್ಲಿ ಇಷ್ಟೆಲ್ಲಾ ಕಟ್ಟು ನಿಟ್ಟು ಇದೆ. ಇದು ಯಾಕೆಂದರೆ ಮನುಷ್ಯರಲ್ಲಿ ಬಹಳ ಬೇಗ ಜಾಸ್ತಿ ಉತ್ತಮ ಪರಿಣಾಮವನ್ನು ಬೀರಿ , ಅತಿ ಕಡಿಮೆ “ಸೈಡ್ ಇಫೆಕ್ಟ್” ಇರಬೇಕು ಅಂತ. ಬಹುತೇಕ ಫಾರ್ಮಾಕಾಲಜಿ ಪುಸ್ತಕಗಳಲ್ಲಿ ಮತ್ತು ಜರ್ನಲ್ಲುಗಳಲ್ಲಿ ನಂತರ ಇದು ಪ್ರಕಟವಾಗುತ್ತದೆ.
ಪ್ರತಿ ಗುಳಿಗೆ, ಚುಚ್ಚುಮದ್ದು ಅಥವಾ ಮಾತ್ರೆಗಳ ಜೊತೆ ಒಂದು ಮಾಹಿತಿ ಚೀಟಿಯನ್ನೂ ಸಹ ಇಟ್ಟಿರುತ್ತಾರೆ. ಅದರಲ್ಲಿ ಔಷಧಿಯ ವಿವರ, ಅದರ ಜೊತೆ ಬೆರೆಸಿರುವ ಬಣ್ಣ, ಇತರ ದ್ರವಗಳು ಅಥವಾ ಘನಗಳು, ಕೊನೆ ದಿನಾಂಕ, ಕಂಪನಿಯ ಹೆಸರು, ವಿಳಾಸ, ರಹದಾರಿ ಸಂಖ್ಯೆ, ಉಪಯೋಗದ ವಿಧಾನ, ಅಡ್ಡ ಪರಿಣಾಮ ಇತ್ಯಾದಿಗಳನ್ನು ವಿವರವಾಗಿ ಆಂಗ್ಲ ಭಾಷೆಯಲ್ಲಿ ಹಾಕುತ್ತಾರೆ. ಇಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಮಾಡುವಂತೆಯೂ ಇಲ್ಲ.
ಆದರೆ ಬಹುತೇಕ ಜನರು ಗೂಗಲ್ಲಿನಲ್ಲಿಯೋ ಅಥವಾ ಔಷಧಿಯ ಜೊತೆ ಇರುವ ಚೀಟಿಯನ್ನು ಓದಿಯೋ, ಕೇವಲ “ಸೈಡ್ ಇಫೆಕ್ಟ್” ಓದಿ ಎಲ್ಲಾ ಇಂಗ್ಲಿಷ್ ಔಷಧಿಗಳಿಗೆ “ಸೈಡ್ ಇಫೆಕ್ಟ್” ಮಾತ್ರ ಇದೆ ಎಂದು ಭಾವಿಸುತ್ತಾರೆ ಮತ್ತು ಅದನ್ನು ಅನುಭವಿಸುತ್ತಾರೆ ಕೂಡಾ. ಇದಕ್ಕೆ “ನೋಸೆಬೋ” ಪರಿಣಾಮ ಅನ್ನುತ್ತಾರೆ. ಈ ಪರಿಣಾಮವನ್ನು ಅನುಭವಿಸುವವರ ಬಹು ದೊಡ್ಡ ಗುಂಪೇ ಇದೆ.
ಈ ಪ್ಲಾಸೆಬೋ ಮತ್ತು ನೋಸೆಬೋ ಪರಿಣಾಮಗಳಿಗೆ ಮೆದುಳಿನಲ್ಲಿರುವ ಡೋಪಮಿನ್, ಎಂಡೋರ್ಫ್ಹಿನ್ ಮತ್ತು ಎನ್ಕೆಫಾಲಿನ್ ಎಂಬ ವಸ್ತುಗಳು ಮತ್ತು ಇನ್ನೂ ಅನೇಕ ಹಾರ್ಮೋನುಗಳು ಕಾರಣ ಎಂದು ವಿಜ್ಞಾನ ಹೇಳುತ್ತಿದೆ. ಯಾವ ಔಷಧಿಗೆ ಪರಿಣಾಮ ಇದೆಯೋ ಅದಕ್ಕೆ ಅಡ್ಡ ಪರಿಣಾಮ ಇದ್ದೇ ಇದೆ. ಅಡ್ಡ ಪರಿಣಾಮ ಇರದಿದ್ದರೆ ಅದಕ್ಕೆ ಪರಿಣಾಮವು ಇರುವುದಿಲ್ಲ. ಇದು ನೆನಪಿರಲಿ.
ಬೇರೆ ಪದ್ದತಿಯ ಔಷಧಗಳಿಗೆ ಅಡ್ಡ ಪರಿಣಾಮಗಳು ಇಲ್ಲ ಎಂದು ಮನಸ್ಸಿನಲ್ಲಿ ಆಳವಾಗಿ ಬೇರೂರಿರುವುದರಿಂದ ಇಂಗ್ಲಿಷ್ ಔಷಧಿಗಳಿಗೆ ಮಾತ್ರ ಅದು ಇದೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿ ಇದೆ. ಇತರೇ ಪದ್ದತಿಯ ಯಾವ ಔಷಧಗಳೂ ಸಹ ಈ ರೀತಿಯ ಕಠಿಣ ಪರೀಕ್ಷೆ ತಪಾಸಣೆಯ ಮೂಲಕ ಬಂದಿಲ್ಲ. ಪರಂಪರೆಯಿಂದ ಬಂದವುಗಳೆಲ್ಲಾ ಸುರಕ್ಷಿತ ಎನ್ನುವುದು ತಪ್ಪು ಕಲ್ಪನೆ. ಯಾಕೆಂದರೆ ಈಗ ಎಲ್ಲವೂ ವಾಣಿಜ್ಯಿಕರಣಗೊಂಡಿವೆ.
ಕೆಲವೊಮ್ಮೆ ಹೀಗೂ ಇರುವುದು ಸಹಜ. ಕೆಲವೊಮ್ಮೆ ವೈದ್ಯಕೀಯ ನೀತಿಶಾಸ್ತ್ರವನ್ನು ಉಲ್ಲಂಘಿಸಿ, ಈಗಾಗಲೇ ಕೆಲವೊಂದು ಪ್ರಯೋಗಶಾಲಾ ಪರೀಕ್ಷೆಗಳು ಮತ್ತೊಂದು ಆಸ್ಪತ್ರೆಗಳಲ್ಲಿ ಮಾಡಲ್ಪಟ್ಟಿದ್ದರೂ ಸಹ ಅವರಿಗೆ ಬೇಕಾದ ಮತ್ತೊಂದು ಪ್ರಯೋಗಶಾಲೆಯಲ್ಲಿ ಅಥವಾ ಅವರದೇ ಪ್ರಯೋಗಶಾಲೆಯಲ್ಲಿ ರೋಗಿಗಳ ಹತ್ತಿರ ಹಣ ಪೀಕಿಸಿ ಮಾಡಿಸುತ್ತಾರೆ ಎಂಬ ಅಪವಾದ ಇದೆ. ಅಲ್ಲದೇ ಅವಶ್ಯಕತೆ ಇಲ್ಲದಿದ್ದರೂ ಸಹ ಹಣ ಮಾಡಲೆಂದು ಶಸ್ತ್ರಚಿಕಿತ್ಸೆ ಮಾಡುತ್ತಾರೆ ಎಂಬ ಅಪವಾದವೂ ಇದೆ.
ಉತ್ತಮ ವಿಭಾಗಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆಯಲು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ಮತ್ತು ದುಬಾರಿ ವೈದ್ಯಕೀಯ ಉಪಕರಣಗಳು ಸಹ ದುಬಾರಿ ವೈದ್ಯಕೀಯ ವೆಚ್ಚಕ್ಕೆ ಕಾರಣವಿರಬಹುದು. ಅಲ್ಲದೇ ಸಾರ್ವಜನಿಕ ವಲಯದಲ್ಲಿರುವ ವೈದ್ಯರುಗಳ ಕಾರ್ಯಕ್ಷಮತೆ ಅನೇಕ ಕಾರಣಗಳಿಂದ ಕಡಿಮೆಯಾಗಿರುವುದೂ ಸಹ ಜನರು ದುಬಾರಿಯಾದರೂ ಸಹ ಖಾಸಗಿಯೆಡೆಗೆ ಓಡುವಂತೆ ಮಾಡಿವೆ ಎನ್ನೆಬಹುದು.
ಒಬ್ಬ ಖ್ಯಾತ ವೈದ್ಯರು ಸಾರ್ವಜನಿಕವಾಗಿ ಹೇಳುವ ಹಾಗೇ ಔಷಧ ಕಂಪನಿಗಳು ಜನರನ್ನು ದರೋಡೆ ಮಾಡಲು ಹುಟ್ಟಿವೆ ಮತ್ತು ಚಿಕಿತ್ಸೆ ಮಾಡುವವರು ಹಣ ಪಿಪಾಸುಗಳಾಗಿದ್ದಾರೆ ಎನ್ನುವುದನ್ನು ಪರಾಮರ್ಷೆಗೆ ಒಳಪಡಿಸುವುದು ಸೂಕ್ತ. ಏಕೆಂದರೆ ಈ ರೀತಿಯಾಗಲು ಯಾರು ಕಾರಣ ಎನ್ನುವುದೂ ಒಂದು ವಿಮರ್ಷೆಗೊಳಪಡಬೇಕಲ್ಲವೇ?
ವೈದ್ಯಕೀಯ ಪದವಿ ಪಡೆಯಲು ಕಡಿಮೆ ವೆಚ್ಚ ಮತ್ತು ಔಷಧಗಳನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಮಾಡುವ ವಾತಾವರಣ ಸೃಷ್ಟಿಯಾಗಬೇಕು. ಇದನ್ನು ಜವಾಬ್ಧಾರಿ ಜಾಗದಲ್ಲಿರುವವರು ಸಂಬಂಧಿಸಿದವರಿಗೆ ವಿವಿಧ ಮಾಧ್ಯಮಗಳ ಮೂಲಕ ಹೇಳಬೇಕು ಮತ್ತು ಆಧುನಿಕ ಔಷಧಿಗಳ ಬಗ್ಗೆ ಜನರ ತಪ್ಪು ನಂಬಿಕೆ ಹೋಗಲಾಡಿಸಬೇಕು.
ಪಶುವೈದ್ಯಕೀಯದಲ್ಲೂ ಹೊಸ ಔಷಧ ಪತ್ತೆ ಮತ್ತು ಸಂಶೋಧನೆ ಬಹುತೇಕ ಇದೇ ರೀತಿ ನಡೆಯುತ್ತದೆ. ಆದರೆ ಅವುಗಳಲ್ಲಿ “ಪ್ಲಾಸೆಬೋ” ಮತ್ತು “ನೋಸೆಬೋ” ಪರಿಣಾಮಗಳು ಇರದಿದ್ದರೂ ಅವುಗಳ ಮಾಲಕರಲ್ಲಿ ಇವೆಯಲ್ಲ?!!!
ಈ ಕುರಿತು “ಅಡ್ಡಪರಿಣಾಮ” ಗಳಿಲ್ಲದ ಆರೋಗ್ಯಕರ ಚರ್ಚೆಯಾಗಲಿ…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
-
ದಿನದ ಸುದ್ದಿ3 days agoನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ
-
ದಿನದ ಸುದ್ದಿ2 days agoಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ


