Connect with us

ದಿನದ ಸುದ್ದಿ

ಇವರ ವಿವೇಕವಿಲ್ಲದ ವಿದ್ಯೆಗೆ ಬೆಂಕಿ ಬಿತ್ತು….‌ಛೇ !

Published

on

  • ಹಿರಿಯೂರು ಪ್ರಕಾಶ್

ವಿದ್ಯೆಗೂ ವಿವೇಕಕ್ಕೂ ಸಂಬಂಧವಿಲ್ಲವೆನ್ನುವುದು ಆಗಾಗ್ಗೆ ಸಾಬೀತಾಗುತ್ತಲೇ ಬಂದಿದೆ. ಅತ್ಯುನ್ನತ ಶ್ರೇಣಿಯಲ್ಲಿ ಡಿಗ್ರಿಗಳನ್ನು ಪಡೆದು ವಿದ್ಯಾವಂತರಾದರಷ್ಟೇ ಸಾಲದು , ಅದಕ್ಕೆ ಪೂರಕವಾದ ಕಾಮನ್ ಸೆನ್ಸ್ ಹಾಗೂ ಸ್ವಲ್ಪಮಟ್ಟಿಗೆ ವಿವೇಕವನ್ನೂ ಬೆಳೆಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ಡಿಗ್ರಿ ಸರ್ಟಿಫಿಕೇಟ್ ಒಂಥರಾ ವೇಸ್ಟ್ ಪೇಪರ್ ಇದ್ದಂತೆ ಕಸದ ಬುಟ್ಟಿಗೂ ಅನ್ ಫ಼ಿಟ್ !

ಈ ವಿಷಯ ಈಗ್ಯಾಕೆ ಬಂತು ಅಂತೀರಾ..??

ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಇಬ್ಬರು ಸುಶಿಕ್ಷಿತ ಭೋಧಕ ದಂಪತಿಗಳು ಪರಾಕಾಷ್ಠೆಯ ಮೂಢನಂಬಿಕೆಗೆ ಮರುಳಾಗಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನವೇ ವಯಸ್ಸಿಗೆ ಬಂದ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭೀಭತ್ಸ ಘಟನೆಯನ್ನು ನೋಡಿದಾಗ ನಾನು ಮೇಲೆ ಉಲ್ಲೇಖಿಸಿರುವ ಮಾತುಗಳ ಸತ್ಯಾಸತ್ಯತೆ ತಿಳಿಯುತ್ತದೆ.

ಎಂತಹಾ ಪರಮ ನೀಚರು ಈ ಜನ ! ತಂದೆಯಾದ ಪುರುಷೋತ್ತಮ್ ನಾಯ್ಡು ಮದನಪಲ್ಲಿಯ ಮಹಿಳಾ ಪದವಿ ಕಾಲೇಜಿನಲ್ಲಿ ಪ್ರೊಫೆಸರ್ ಹಾಗೆಯೇ ತಾಯಿಯಾದ ಪದ್ಮಜಾ ಸಹಾ ಗಣಿತದಲ್ಲಿ ಗೋಲ್ಡ್ ಮೆಡಲ್ ಪಡೆದ ಶಿಕ್ಷಕಿ ಹಾಗೂ ವೈಸ್ ಪ್ರಿನ್ಸಿಪಾಲ್ ಅಂತೆ. ಈ ನರಾಧಮರ ನೀಚ ಕೃತ್ಯಕ್ಕೆ ಕಾರಣವೆಂದರೆ, ಮೊನ್ನೆ‌ ಭಾನುವಾರದಂದು ಕಲಿಯುಗ ಅಂತ್ಯವಾಗಿ ಮಾರನೆಯ ದಿನವೇ ಸತ್ಯಯುಗ ಆರಂಭವಾಗಿ ಆ ದಿನವೇ ತಮ್ಮ ಮಕ್ಕಳು‌ ಮರುಹುಟ್ಟು ಪಡೆಯಲಿದ್ದಾರೆಂದು ಯಾವನೋ ನಫ಼್ತಟಾಲ್ ನಾಲಾಯಕ್ ನನ್ಮಗ ಹೇಳಿದ್ದ ಮೂಢನಂಬಿಕೆಯ ಭವಿಷ್ಯವನ್ನು ನಂಬಿದ ಈ ಅಯೋಗ್ಯ ಪೇರೆಂಟ್ಸ್ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಮನೆಯ ದೇವರಕೋಣೆಯಲ್ಲಿ ವಿವಸ್ತ್ರಗೊಳಿಸಿ ತ್ರಿಶೂಲದಿಂದ ಹಾಗೂ ಡಂಬಲ್ಸ್‌ನಿಂದ ಕೊಚ್ಚಿ ಕೊಂದಿದ್ದಾರೆಂದು ಆನಂತರ ಶವಗಳ ಮುಂದೆ ಅವರ ತಾಯಿ ನರ್ತಿಸಿದ್ದಾರೆಂದೂ ವರದಿಯಾಗಿದೆ. ಇಷ್ಟಾದ ಮೇಲೂ ಕಿಂಚಿತ್ತೂ ಪಾಪ ಪ್ರಜ್ಞೆ ಯಿರದ ಈ ಪಾಪಿಗಳು ಪೋಲೀಸರ ಮುಂದೆಯೂ ತಮ್ಮ ಮಕ್ಕಳಿಬ್ಬರೂ ಮರುಹುಟ್ಟು ಪಡೆದು ಬರುತ್ತಾರೆಂದು ಹೇಳಬೇಕಾದರೆ ಹಾಗೂ ಪೋಲೀಸರು ಇನ್ನರ್ಧ ಘಂಟೆ ತಡವಾಗಿ ಬಂದಿದ್ದರೆ ಮಕ್ಕಳು ಬದುಕಿಬರುತ್ತಿದ್ದರೆಂದೂ ತಾನು ಶಿವನ ಅವತಾರವೆಂದೂ ಬಡಬಡಿಸಬೇಕಾದಲ್ಲಿ ಇವರು ಇನ್ನೆಂತಹಾ ಮೂಢನಂಬಿಕೆಯ ಜಗ ಭಂಡರಿರಬಹುದು ?? ಎಲ್ಲಕ್ಕಿಂತ ವಿಪರ್ಯಾಸವೆಂದರೆ ತಂದೆಯಾದವನು ವಿಜ್ಞಾನದ ವಿಷಯ ಭೋದಿಸುವವನಾದರೆ ತಾಯಿ ಗಣಿತದ ಶಿಕ್ಷಕಿ !ಈ ದಂಪತಿಗಳು ಅಲ್ಲಿನ ಆಧ್ಯಾತ್ಮಿಕ ಗುರು ಮೆಹರ್ ಬಾಬಾನ‌ ‘ಅನುನಾಯಿ”ಗಳಂತೆ !

ಈ ಘೋರ ಕೃತ್ಯಕ್ಕೆ ಬಲಿಯಾದ ಅಮಾಯಕ ಹೆಣ್ಣುಮಕ್ಕಳಾದ ಅಲೆಖ್ಯಾ ಹಾಗೂ ಸಾಯಿ ದಿವ್ಯಾ ಉದ್ಯೋಗ ನಿಮಿತ್ತ ಬೇರೆ ಊರುಗಳಲ್ಲಿದ್ದರೂ ಲಾಕ್ ಡೌನ್ ಕಾರಣದಿಂದ ತಂದೆ ತಾಯಿ ಜೊತೆಯಲ್ಲಿ ಇರಬೇಕಾಗಿದ್ದೇ ಮುಂದೆ ಅವರ ಹೀನಾಯ ಸಾವಿಗೆ ಕಾರಣವಾಗಬಹುದೆಂಬ ಅರಿವು ಅವರಿಗೆ ಇರಲಿಲ್ಲ ! ಈ ಜನ್ಮದಲ್ಲೇ ಅವರನ್ನು ಸುಖವಾಗಿರಿಸುವಂತಹಾ ಹೊಟ್ಟೆಗೆ ಅನ್ನ ತಿನ್ನುವವರು ಮಾಡುವ ಸಹಜ ಯೋಚನೆ‌ ಬಿಟ್ಟು, ಇಲ್ಲದ ಸತ್ಯಯುಗದ ಹಿಂದೆ ಬಿದ್ದು ಇಂತಹಾ ಬರ್ಬರ ಕೃತ್ಯವೆಸಗಿರುವ ಈ ನರರಕ್ಕಸರ ತಲೆಯೊಳಗೆ ಅವನ್ಯಾವನೋ ಬೇಕೂಫ಼ಾ ಇನ್ನೆಂತಹಾ ನಂಬಿಕೆಯ ವಿಷ ತುಂಬಿದ್ದಿರಬಹುದು..??

ಈಗ ಹೇಳಿ ! ಕಲಿಯುಗದಲ್ಲಿ ಇಂತಹಾ ಘನಕಾರ್ಯ ಮಾಡಿದ ವಿದ್ಯಾವಂತ ದಂಪತಿಗಳನ್ನು ಯಾವ ವರ್ಗಕ್ಕೆ ಸೇರಿಸುತ್ತೀರಿ ?? ಇವರಂತಹಾ ಅವಿವೇಕಿಗಳು, ಮೂಢರು, ದುಷ್ಟರು, ಅಯೋಗ್ಯರು, ಕ್ರೂರಿಗಳು, ನಿಷ್ಕರುಣಿಗಳು, ಪಾಪಿಗಳು, ಸ್ವಾರ್ಥಿಗಳು, ಎಜುಕೇಟೆಡ್ ಫ಼ೂಲ್ ಗಳು, ಪರಮ ಪಾಪಿಷ್ಠರು…. ಮತ್ತಾರಾದರೂ ಇದ್ದಾರೆಯೇ ?? ತಾವೇ ಜನ್ಮಕೊಟ್ಟು ಸಾಕಿ ಬೆಳೆಸಿದ ಮಕ್ಕಳನ್ನು, ಅದರಲ್ಲೂ ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಈ ರೀತಿ ಮೂಢನಂಬಿಕೆಗೆ‌ ಬಲಿಯಾಗಿ ಅಮಾನವೀಯವಾಗಿ ಬಲಿ ತೆಗೆದುಕೊಂಡಿರುವ ಘಟನೆಯನ್ನು ಹಿಂದೆ ಎಂದಾದರೂ ಕೇಳಿದ್ದೀರಾ… ನೋಡಿದ್ದಿರಾ..! ಇದು ನನಗೆ ತಿಳಿದಂತೆ ‌ಇಡೀ ನಾಡಿನಲ್ಲೇ ಅಪರೂಪದಲ್ಲಿ ಅಪರೂಪದ್ದು !

ಇವರ ಮನೆ ಕಾಯ್ ಹೋಗ ! ಕಲಿಯುಗ ಮುಗಿದು‌ ಮತ್ತೇ ಸತ್ಯಯುಗದಲ್ಲಿ ಅದೇ ಮಕ್ಕಳು‌ ಹುಟ್ಟುತ್ತಾರೆಂಬ ಇವರ ಕ್ಷುದ್ರ ನಂಬಿಕೆಯೇ ಅತ್ಯಂತ ಡೆಂಜರಸ್ ! ಹೇಳುವ ಮುಂಡೆಗಂಡರಿಗಂತೂ ಮೂರುಕಾಸಿನ ಬುದ್ದಿ ಇಲ್ಲ. ಕಾಸಿಗಾಗಿ ಏನೆಲ್ಲಾ ಕಥೆ ಹೇಳುತ್ತಾರೆ. ಆದರೆ ಕಾಲೇಜಿನಲ್ಲಿ‌ ಪಾಠ ಮಾಡುವ, ಅದರಲ್ಲೂ ವಿಜ್ಞಾನ ಭೋಧಿಸುವ , ಅತ್ಯಂತ ಸುಶಿಕ್ಷಿತ ವರ್ಗಕ್ಕೆ ಸೇರಿದ ದಂಪತಿಗಳು ಇಂತಹವರ ಮಾತುಗಳನ್ನು ಕೇಳಿ ಈ ರೀತಿಯ ಭೀಭತ್ಸ ಕೃತ್ಯಕ್ಕೆ ಕೈ ಹಾಕುತ್ತಾರೆಂದರೆ ಅದಕ್ಕಿಂತ ದುರಂತ ಮತ್ತೊಂದಿದೆಯೇ ? ಅಲ್ಲಿಗೆ ಕಲಿತ ವಿದ್ಯೆಗೂ ತಲೆಯೊಳಗಿರಬೇಕಾದ ಕನಿಷ್ಠ ವಿವೇಕಕ್ಕೂ ಸಂಬಂಧವೇ ಇಲ್ಲದಂತಾಯಿತು !

ಮರೆಯುವ ಮುನ್ನ 

ಮನುಷ್ಯ ಏನೆಲ್ಲಾ ಓದಿರಬಹುದು, ಎಷ್ಟೆಷ್ಟು ಡಿಗ್ರಿಗಳನ್ನು ಮೈಗೆಲ್ಲಾ ಮೆತ್ತಿಕೊಂಡಿರಬಹುದು, ಆಕಾಶದಲ್ಲೇ ಸದಾ ಹಾರಾಡುತ್ತಿರಬಹುದು, ಕರಗದಷ್ಟು ಆಸ್ತಿಯನ್ನೇ ಸಂಪಾದಿಸಿರಬಹುದು ಆದರೆ ಮನುಷ್ಯ ಅಂದಮೇಲೆ ಇರಲೇಬೇಕಾದ ಕಾಮನ್ ಮಿನಿಮಮ್ ಕಾಮನ್ ಸೆನ್ಸ್ ಅವನಲ್ಲಿ ಇಲ್ಲವೆಂದಮೇಲೆ ಅವನ ಓದಿಗೆ ವಿದ್ಯೆಗೆ ಬೆಂಕಿ‌ಬಿತ್ತು ! ಹೆತ್ತಮಕ್ಕಳನ್ನೇ ಈ ಲೆವೆಲ್ ನಲ್ಲಿ ಭಯಂಕರವಾಗಿ ಕೊಲೆ ಮಾಡುವ ಮನಸ್ಥಿತಿಯಿರುವವರು ತಮ್ಮ ವಿಧ್ಯಾರ್ಥಿಗಳಿಗೆ ಯಾವ ನೈತಿಕತೆಯ ಪಾಠವನ್ನು ಹೇಳಿಕೊಡಬಲ್ಲರು.? ಓದಿದ ಓದಿಗೂ, ಕಲಿತ ವಿದ್ಯೆಗೂ, ಮಾಡುವ ವೃತ್ತಿಗೂ ಈಗ ಅವರು ಎಸಗಿರುವ ಹೀನ ಕೃತ್ಯಕ್ಕೂ ಏನಾದರೂ ತಾಳೆ ಇದೆಯೇ ? ಇಂತಹಾ ಘಟನೆಗಳನ್ನೆಲ್ಲಾ ನೋಡಿದಾಗ ಮನುಷ್ಯನಷ್ಟು ವಿಷಕಾರಿ ಅಪಾಯಕಾರಿ ಜಂತು ಈ ಭೂಮಿಯಲ್ಲೇ ಇಲ್ಲವೇನೋ ಅನಿಸುತ್ತದೆ.

ಇಂತಹಾ ವಿಕ್ಷಿಪ್ತ ಮನಸ್ಥಿತಿಗೆ ಏನು ಕಾರಣವೋ ಗೊತ್ತಿಲ್ಲ. ಆದರೆ ಯಾವ್ಯಾವುದೋ ಹೆಸರಿನಲ್ಲಿ ಹುದುಗಿರುವ ಅತಿಯಾದ ಮೂಢನಂಬಿಕೆ , ಭ್ರಮಾತ್ಮಕ ಲೋಕ, ಮಾನವೀಯ ಮೌಲ್ಯಗಳ ಬೆಲೆಯರಿಯದ ಬದುಕು,
ಸ್ವಯಂಘೋಷಿತ ದೇವಮಾನವರು, ಬಾಬಾಗಳು , ಮಾಟ ಮಂತ್ರ ಮಾಡುವವರ ಮೇಲಿನ ಕುರುಡು ನಂಬಿಕೆ ಹಾಗೂ ಅಂತಹವರು ಹೇಳಿದ್ದೇ ವೇದವಾಕ್ಯವೆಂದು ನಂಬುವ ಅಜ್ಞಾನ…. ಈ ಎಲ್ಲವೂ ಕೆಲಮಟ್ಟಿಗೆ ಕಾರಣವಿರಲೂಬಹುದು..!

ಏನಾದರೂ ಇರಲಿ ! ಹೆತ್ತವರಿಂದಲೇ ಬರ್ಬರವಾಗಿ ಹತ್ಯೆಗೊಳಗಾಗಿ ನೆತ್ತರ ಮಡುವಲ್ಲಿ ಕೊನೆಯುಸಿರೆಳೆದ ಆ ಅಮಾಯಕ ಹೆಣ್ಣುಮಕ್ಕಳ ಆತ್ಮಕ್ಕೆ ಶಾಂತಿ ಕೋರುವುದು ಹಾಗೂ ಇಂತಹಾ ದುರ್ಘಟನೆಗಳು ಮತ್ತೇ ನೆಡೆಯದಿರಲಿ ಎಂದು ಪ್ರಾರ್ಥಿಸುವುದೊಂದೇ ಉಳಿದಿರುವ ದಾರಿ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ದೇಸಾಯಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದಿಂದ ವಿತರಣೆಯಾದ ಟೂಲ್‌ಕಿಟ್‌ಗಳನ್ನು ನಿಯಮಾನುಸಾರ ವಿತರಣೆ ಮಾಡದೆ ವಂಚಿಸಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ಮಾಹಿತಿ ಕೋರಲಾಗಿತ್ತು.

ಪ್ರಾಚಾರ್ಯರು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿ ಫಾರ್ ಸಹಿಯೊಂದಿಗೆ ಹಿಂಬರಹ ನೀಡಲಾಗಿರುತ್ತದೆ. ಮಾಹಿತಿ ಅಧಿಕಾರಿ, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿರುವ ಫಾರ್ ಸಹಿಯೇ ಪ್ರಾಚಾರ್ಯರ ಹೆಸರಿನ ಪತ್ರದಲ್ಲಿ ನಮೂದಾಗಿರುತ್ತದೆ. ಸದರಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾಚಾರ್ಯರೇ ಆಗಿರುತ್ತಾರೆ.

ಹೀಗಿರುವಾಗ ಪಾಚಾರ್ಯರ ಮುದ್ರೆ ಇರುವಲ್ಲಿ ಫಾರ್ ಎಂಬುದಾಗಿ ನಮೂದಿಸಿ ಸಹಿ ಮಾಡಿ, ಮಾಹಿತಿ ಅಧಿಕಾರಿ ಎಂಬ ಮುದ್ರೆಗೆ ಫಾರ್ ಬಳಸದೆ ಸಹಿ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.

ಆದರೆ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳ್ಳಿ ಇವರಿಗೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್‌ನಾಥ್ ಜೈನ್ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಇಲಾಖಾ ತನಿಖೆ ನಡೆಸದೆ ಕಾಲ ವಿಳಂಬ ಮಾಡುತ್ತಿರುವ ಚಿತ್ರದುರ್ಗ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ 06 ಅರ್ಜಿ ಸಲ್ಲಿಸಿ, ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಉಪವಿಭಾಗಗಳಿಗೆ ಬಿಡುಗಡೆಯಾದ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿದ್ದರು.

ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ಸದರಿ ಪ್ರಕರಣವನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿದ್ದರು.

ನಿಯಮಾನುಸಾರ ಇಲಾಖೆ ತನಿಖೆ ನಡೆಸದೆ ಕಾಲ ವಿಳಂಬ ಮಾಡುವ ಉದ್ದೇಶದಿಂದ 6 ತಾಲ್ಲೂಕು ಉಪ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಆದೇಶ ಹೊರಡಿದ್ದು, ಇದರಂತೆ ವಕೀಲ ಡಾ.ಕೆ.ಎ.ಓಬಳಪ್ಪ ಇವರು ಎಲ್ಲಾ ಉಪವಿಭಾಗಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿದಾಗ ದಾಖಲೆಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ.

ಈ ಬಗ್ಗೆ ಕಾರ್ಯಪಾಲಕ ಅಭಿಯಂತರರಿಗೆ ದೂರು ನೀಡಿದರೂ ನಿರ್ಲಕ್ಷö್ಯ ತೋರಿದ ಕಾರಣ, ಕರ್ತವ್ಯ ಲೋಪದ ಅಡಿಯಲ್ಲಿ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending