ದಿನದ ಸುದ್ದಿ
ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಹೋರಾಟಗಾರರಿಗೆ ಕೊಲೆ ಬೆದರಿಕೆ ; ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ದೂರು
ಸುದ್ದಿದಿನ,ಬಳ್ಳಾರಿ : ನಾಯಕ ಪಂಗಡದ ಮ್ಯಾಸಬೇಡ ಬುಡಕಟ್ಟು ಜನರ ಸಂವಿಧಾನ ಬದ್ದ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವವರ ಮೇಲೆ ಕಿರುಕುಳ ಮತ್ತು ಮಾನಸಿಕ ಹಿಂಸೆ ದೌರ್ಜನ್ಯ ಮಾಡಿ ಕೊಲೆ ಬೆದರಿಕೆಯ ಸುಪಾರಿಯನ್ನು ನೀಡಲಾಗಿದ್ದು, ಮೂಲ ಬುಡಕಟ್ಟು ಸಮುದಾಯದ ಮ್ಯಾಸ ಬೇಡರಿಗೆ ಮೋಸ ಮಾಡಿರುವ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮತ್ತು ಸ್ವಾಮೀಜಿಯ ಸಹಚರರನ್ನು ಕೊಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಕೋರಿ ದೂರು ಮತ್ತು ಮ್ಯಾಸ ಬೇಡ ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರರಿಗೆ ರಕ್ಷಣೆ ಕೊಡಲುಕೋರಿ ಮ್ಯಾಸ ಬೇಡ (ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯು ಸೋಮವಾರ ನಗರದ ಐಜಿಪಿ ಎಂ.ನಂಜುಂಡಸ್ವಾಮಿ ಅವರಿಗೆ ದೂರು ಸಲ್ಲಿಸಿತು.
ದೂರಿನಲ್ಲೇನಿದೆ..!
ನಾವು ನಾಯಕ ವಾಲ್ಮೀಕಿ ಪಂಗಡದ ಮ್ಯಾಸ ನಾಯಕ ಬುಡಕಟ್ಟು ಜನಾಂಗಕ್ಕೆ ಸೇರಿರುತ್ತೇವೆ. ಮ್ಯಾಸ ಬೇಡ (ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ(ರಿ)ಯಿಂದ ತಮಗೆ ಸಲ್ಲಿಸುತ್ತಿರುವ ದೂರು ಏನಂದರೆ, ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣೆ ಮತ್ತು ಬುಡಕಟ್ಟು ಜನರ ಸಂವಿಧಾನ ಬದ್ಧ ಹಕ್ಕುಗಳ ರಕ್ಷಣೆಗಾಗಿ ನಮ್ಮ ಸಮುದಾಯದ ಹಿರಿಯರು ಸಂಘಟನೆಯನ್ನು ಕಟ್ಟಿರುತ್ತಾರೆ.
ಈ ಸಂಘಟನೆಯಲ್ಲಿ ದೊಡ್ಡಮನಿ ಪ್ರಸಾದ್, ಕಾರ್ಯದರ್ಶಿ ಇರುತ್ತಾರೆ. ಮ್ಯಾಸ ಬೇಡರಿಗೆ ಆಗಿರುವ ಅನ್ಯಾಯದ ವಿರುದ್ಧ ಮತ್ತು ಮ್ಯಾಸ ಬೇಡರ ಸಂವಿಧಾನ ಬದ್ಧ ಹಕ್ಕುಗಳಿಗಾಗಿ ನಮ್ಮ ಸಮಿತಿಯ ವತಿಯಿಂದ ಕಾನೂನು ಚೌಕಟ್ಟಿನ ಅಡಿಯಲ್ಲಿ ಹೋರಾಟಗಳನ್ನು ಮಾಡುತ್ತಿರುವ ನಮ್ಮ ಸಮಿತಿಯ ಸದಸ್ಯರ ಮೇಲೆ ವಾಲ್ಮೀಕಿ ಎಂದು ಹೇಳಿಕೊಳ್ಳುವ ಹರಿಹರ ತಾಲ್ಲೂಕು, ರಾಜನಹಳ್ಳಿ, ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಯು ತನ್ನ ಸಮುದಾಯದ ಸಹಚರರಿಗೆ ಕುಮ್ಮಕ್ಕು ನೀಡಿ ಮ್ಯಾಸ ಬೇಡರ ಹಕ್ಕುಗಳನ್ನು ಹರಣ ಮಾಡುವ ದುರುದ್ದೇಶದಿಂದ ನಮ್ಮ ಮುಖಂಡರ ಮೇಲೆ ಸುಳ್ಳು ದೂರುಗಳನ್ನು ನೀಡುವುದರ ಮೂಲಕ ಬೆದರಿಸಿ ಮಾನಸಿಕ ಮತ್ತು ದೈಹಿಕವಾಗಿ ನಿರಂತರವಾಗಿ ಹಿಂಸೆ ನೀಡುತ್ತಾ ಬಂದಿರುತ್ತಾರೆ.
ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಈಗಾಗಲೇ ನಾವು ಸರ್ಕಾರಕ್ಕೂ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ದೂರನ್ನು ನೀಡಿರುತ್ತೇವೆ. ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಪಣಿಯಾಪುರ ಲಿಂಗರಾಜ, ಬಾಲೆನಹಳ್ಳಿ ಕೆಂಚನಗೌಡ, ದಾವಣಗೆರೆಯ ಆಂಜನೇಯ ಗುರುಜೀ, ಗುಮ್ಮನೂರು ಮಲ್ಲಿಕಾರ್ಜುನ, ಇನ್ನೂ ಇತರರು ನಮ್ಮ ಸಮಿತಿಯ ಮುಖಂಡರಿಗೆ ಮಾನಸಿಕ ಹಿಂಸೆಯನ್ನು ನೀಡಿ ದೊಡ್ಡಮನಿ ಪ್ರಸಾದ್ ರವರನ್ನು ಕೊಲೆ ಮಾಡಲು ಸುಫಾರಿ ಕೊಟ್ಟಿರುವ ಗುಮಾನಿಗಳು ಇರುತ್ತವೆ.
ಹಾಗಾಗಿ ಇವರನ್ನು ಕೂಡಲೇ ಬಂಧಿಸಿ ತನಿಖೆಗೆ ಒಳಪಡಿಸಬೇಕು. ಒಂದು ವೇಳೆ ಮ್ಯಾಸ ಬೇಡ ಬುಡಕಟ್ಟು ಸಮುದಾಯದ ಹೋರಾಟಗಾರರಿಗೆ ಜೀವಕ್ಕೆ ಹಾನಿ ಆದಲ್ಲಿಇವರೆ ಕಾರಣರಾಗಿರುತ್ತಾರೆ. ನಾಯ್ಕಡ ಸಮಾನಾರ್ಥಕ ನಾಯಕ ಬೇಡ ವಾಲ್ಮೀಕಿ ಪಂಗಡದ ಹೆಸರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಮೂಲತ: ಮ್ಯಾಸ ಬ್ಯಾಡ್ರ ಅಥವಾ ಮ್ಯಾಸ ಬೇಡ ಅಥವಾ ಮ್ಯಾಸ ನಾಯಕರು ಅಥವಾ ಮ್ಯಾಸರನ್ನು ಮಾತ್ರ. ‘ನಾಯಕ’ ಎಂಬ ಪದದ ಮೂಲಕ ಕೆಲವು ಜಾತಿಯ ಜನರು ತಮ್ಮನ್ನು ತಳವಾರ, ಊರುನಾಯಕ, ಪರಿವಾರ, ಬಾರ್ಕಿ ಮುಂತಾದ ಹೆಸರುಗಳಿಂದ ಕರೆಯಿಸಿಕೊಳ್ಳುತ್ತಿದ್ದರೂ ಇವರು ಮೂಲತ: ಗಂಗಾಮತ ಅಥವಾ ಅಂಬಿಗ ಅಥವಾ ಬೆಸ್ತ ಜಾತಿಯವರು.
ಇವರಿಗೂ ನಾಯಕ, ಬೇಡ, ವಾಲ್ಮೀಕಿ ಎಂದು ಕರೆಯಿಸಿಕೊಳ್ಳುತ್ತಿರುವ ಮ್ಯಾಸ ನಾಯಕ/ಮ್ಯಾಸ ಬೇಡ/ಮ್ಯಾಸ ಬ್ಯಾಡ್ರು ಪಂಗಡಕ್ಕೂ ಯಾವುದೇ ಸಂಬಂಧವಿಲ್ಲ.D.O. Letter No.8/1/93-SS(Gen) ದಿನಾಂಕ: 29.1.1993 ರಂದು ರಿಜಿಸ್ಟ್ರರ್ ಜನರಲ್ ಆಫ್ ಇಂಡಿಯಾ ವರದಿಯ ಪ್ರಕಾರ ಈ ‘ನಾಯಕ’ ಪಂಗಡದವರು ಮಧ್ಯ ಪ್ರದೇಶದ (ಗೋಂಡವಾನ) ‘ಬಿಲ್’ ಜನಾಂಗವನ್ನು ಹೋಲುತ್ತದೆ ಅವರನ್ನು ಈಗಾಗಲೇ ಎಸ್ ಟಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ ಎಂದು ಹೇಳಿದ್ದಾರೆ. ಮತ್ತು ಕರ್ನಾಟಕದಲ್ಲಿ ನಾಯಕ ಪಂಗಡ, ಮತ್ತು ನಾಯಕ ಜಾತಿ ಎಂದು ಎರಡು ವಿಧವಾದ ನಾಯಕ ಜನಾಂಗಗಳಿವೆ ಎಂದು ಹೇಳಿರುವುದು ಸತ್ಯದ ಸಂಗತಿ.
ಮ್ಯಾಸ ನಾಯಕರು ಇರುವ ಪ್ರದೇಶಗಳಲ್ಲಿ ತಳವಾರರು ತಮ್ಮನ್ನು ಊರುನಾಯಕರು ಎಂದು ಕರೆಯಿಸಿಕೊಳ್ಳುತ್ತಾರೆ. ಆದರೆ ಊರುನಾಯಕ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಇವರ ಮೂಲ ತಳವಾರ ಎಂದು ಇರುತ್ತದೆ. ಇದಕ್ಕೆ ಪೂರಕವಾಗಿ ತಳವಾರ ಮತ್ತು ಮ್ಯಾಸ ನಾಯಕರು ಇರುವ ಊರುಗಳ ಬ್ರಿಟಿಷ್ ಲ್ಯಾಂಡ್ ಸೇಟಲ್ ಮೆಂಟ್ ರಿಜಿಸ್ಟ್ರರ್ 1926 ರಲ್ಲಿ ಸ್ಪಷ್ಟವಾಗಿ ತಳವಾರರು ಮತ್ತು ಮ್ಯಾಸ ಬ್ಯಾಡರ ,ಮ್ಯಾಸರು ಎಂದು ಮತ್ತು ಮ್ಯಾಸ ಬ್ಯಾಡ್ರ ಇಲ್ಲದ ಊರುಗಳಲ್ಲಿ ತಳವಾರರು, ತಲಾರಿ ಎಂದು ಸ್ಪಷ್ಟವಾಗಿ ನಮೂದಾಗಿದೆ. ನಂತರ ಬಳ್ಳಾರಿ ಜಿಲ್ಲೆಯಲ್ಲಿ 1950ರಿಂದ 1963ನೇ ಸಾಲಿನಲ್ಲಿ ಶಾಲಾ ದಾಖಲಾತಿಗಳಲ್ಲಿ ತಳವಾರರು ಮತ್ತು ಮ್ಯಾಸ ನಾಯ್ಕರು ಎಂದು ನಮೂದು ಇರುತ್ತವೆ.
ವಾಲ್ಮೀಕಿ ಎಂದು ಬರೆಯುಸುವಂತೆ ಹೇಳಿರುವುದರ ಕುತಂತ್ರದ ಸಲಹೆ ಮೇರೆಗೆ ಮ್ಯಾಸ ನಾಯ್ಕರು ತಮ್ಮ ಜಾತಿ ಕಾಲಂನಲ್ಲಿ ವಾಲ್ಮೀಕಿ ಎಂದು ನಮೂದಿಸಲು ಪ್ರಾರಂಭಿಸಿದರು. ಮ್ಯಾಸ ನಾಯಕರ ರೀತಿಯಲ್ಲಿ ತಳವಾರರು ಸಹ ತಮ್ಮ ಜಾತಿ ಕಾಲಂನಲ್ಲಿ ತಳವಾರ ಬದಲಾಗಿ ವಾಲ್ಮೀಕಿ ಎಂದು ಬರೆಯಿಸುತ್ತಾರೆ. ಮತ್ತು ಮೂಲ ದಾಖಲಾತಿಯಲ್ಲಿ ತಳವಾರ ಎಂದು ಇರುವುದನ್ನು ತಿದ್ದಿ ವಾಲ್ಮೀಕಿ ಎಂದು ಬರೆಸುತ್ತಾರೆ. ಈ ರೀತಿ ದ್ವಂದ್ವ ಮತ್ತು ಗೊಂದಲವನ್ನು ಸೃಷ್ಟಿ ಮಾಡಿರುತ್ತಾರೆ.
1993 ರಿಜಿಸ್ಟ್ರರ್ ಜನರಲ್ ಆಫ್ ಇಂಡಿಯಾ ಯವರ ವರದಿಯಲ್ಲಿ ಪರಿವಾರದವರು ಮೈಸೂರು ಮಹಾರಾಜರ ಕಾಲದಲ್ಲಿ ಸೇವಕಾರಾಗಿದ್ದರು ಮತ್ತು ಇದೊಂದು ಜಾತಿಯಾಗಿರಲಿಲ್ಲ ಕಸುಬು ಆಗಿರುತ್ತದೆ. ತಳವಾರರ ಬಗ್ಗೆಯೂ ಸಹ ತಳವಾರರು ನಾಯಕ ಜನಾಂಗದ ಗುಣಲಕ್ಷಣಗಳನ್ನು ಹೊಂದಿರುವುದಿಲ್ಲ ಇವರು ಗ್ರಾಮದಲ್ಲಿ ಕಾವಲುಗಾರರಾಗಿದ್ದರು ಇವರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಲು ಅರ್ಹವಿರುವ ಯಾವುದೇ ಬುಡಕಟ್ಟು ಲಕ್ಷಣಗಳು ಇರುವುದಿಲ್ಲ ಎಂದು ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು 2004 ರಲ್ಲಿ ಹಿಂದಿರುಗಿಸಿರುತ್ತಾರೆ.
ನಂತರ ರಾಜಕೀಯ ಅಧೀಕಾರವನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ವರದಿಯ ಆಧಾರದ ಮೇಲೆ 2020ರಲ್ಲಿ ಪರಿವಾರ, ತಳವಾರ ಜಾತಿಗಳನ್ನು ನಾಯಕ ಸಮಾನಾರ್ಥಕ ಪದಗಳೆಂದು ಎಸ್ ಟಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಅಂದರೆ ಇದರ ಅರ್ಥ ನಾಯಕ ಪಂಗಡದವರಿಗೆ ತಳವಾರ ಮತ್ತು ಪರಿವಾರ ಎಂದು ಕರೆಯುತ್ತಾರೆ ಅಷ್ಟೇ. ಇದು ಮೂಲ ತಳವಾರ ಮತ್ತು ಪರಿವಾರ ಜಾತಿಯವರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆಂದು ಪರಿಗಣಿಸಲು ಆಗುವುದಿಲ್ಲ.
ಇದು ಹೊಸದಾಗಿ ಒಂದು ಜಾತಿಯವರನ್ನು ಎಸ್.ಟಿ. ಪಟ್ಟಿಯಲ್ಲಿ ಸೇರಿಸಿದಂತೆ ಆಗುವುದಿಲ್ಲ. ಇದು ಮೂಲ ತಳವಾರ ಪರಿವಾರ ಜಾತಿಯವರಿಗೆʼ ನಾಯಕ ಬುಡಕಟ್ಟಿನವರೆಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಲು ಅನುಕೂಲವಾಗುತ್ತದೆ ಅಷ್ಟೇ. ಈಗಾಗಲೇ ಪರಿಶಿಷ್ಟ ಪಂಗಡದ ನಾಯಕರಿಗೆ ತಳವಾರ ಪರಿವಾರದವರೆಂದು ಕರೆಯುತ್ತಾರೆ ಎಂದು ಶಾಸನ ಮಾಡಿದರೆ ಈ ಹೆಸರುಗಳು ಮಾತ್ರ ಎಸ್ ಟಿ ಪಟ್ಟಿಯಲ್ಲಿರುತ್ತವೆ ಆದರೆ ಈ ಜಾತಿಯವರಲ್ಲ.
ಉದಾಹರಣೆ:- ತಿಮ್ಮಪ್ಪ ಎಂಬ ಧನಿಕನಿಗೆ ಮೂರು ಜನ ಮಕ್ಕಳಿರುತ್ತಾರೆ. ಕಲ್ಲಪ್ಪ ಎಂಬಇನ್ನೊಬ್ಬನಿಗೂ ಮೂರು ಜನ ಮಕ್ಕಳಿರುತ್ತಾರೆ. ತಿಮ್ಮಪ್ಪನಿಗೆ ಕಲ್ಲಪ್ಪ ಎಂದೂ ಕರೆಯುತ್ತಾರೆ ಎಂದರೆ, ತಿಮ್ಮಪ್ಜನ ಆಸ್ತಿಯಲ್ಲಿ ಕಲ್ಲಪ್ಪನ ಮಕ್ಕಳಿಗೆ ಪಾಲುಸಿಗುತ್ತದೆಯೇ? ಇದು ತಳವಾರ ಪರಿವಾರ ಜಾತಿಯವರ ಪರಿಸ್ಥಿತಿ. ಆದ್ದರಿಂದ ಮೂಲ ತಳವಾರ ಪರಿವಾರ ಜಾತಿ ಜನಾಂಗವು ಎಸ್ಟಿ ಪಟ್ಟಿಯಲ್ಲಿ ಇಲ್ಲ. ತಳವಾರ ಪರಿವಾರ ಜಾತಿಯವರು ಬುಡಕಟ್ಟು ಜನರೇ ಅಲ್ಲ.
ಕನ್ನಡ ವಿಶ್ವ ವಿದ್ಯಾಲಯದಲ್ಲಿರುವ ತಳವಾರ ಅಥಾವ ತಲಾರಿ ಜಾತಿಯ ಪ್ರಧ್ಯಾಪಕ ಮಂಜುನಾಥ ಬೇವಿನಕಟ್ಟಿ ಮ್ಯಾಸ ನಾಯಕರನ್ನು ಅವಹೇಳನ ಮಾಡುವ ಪುಸ್ತಕಗಳನ್ನು ಬರೆಯಿಸುತ್ತಾರೆ. ಎಂ.ಪಿ.ವೀಣಾ ಎಂಬುವರು ಮನೆ ಸಮಾಜ ಸಂಸ್ಕೃತಿ ಮ್ಯಾಸ ನಾಯಕರು ಹಾಗೂ ಊರುನಾಯಕರು ಅಧ್ಯಾಯನ ಎಂಬ ತಮ್ಮ ಎಂಪಿಲ್ ಪ್ರಬಂಧದಲ್ಲಿ ಈ ರೀತಿ ಬರೆದಿರುತ್ತಾರೆ:-ವಾಲ್ಮೀಕಿಯು ಒಮ್ಮೆ ಬೇಟೆಗೆ ಹೋಗಿದ್ದಾಗ ಕಾಡಿನಲ್ಲಿ ಸುಂದರವಾದ ಬೇಡತಿಯನ್ನು ಮೋಹಿಸಿದನಂತೆ. ಈ ಬೇಡತಿಗೆ ಅಡವಿಯಲ್ಲಿ ಹುಟ್ಟಿದ ಮಕ್ಕಳು ಮ್ಯಾಸರಂತೆ.
ಊರಿನಲ್ಲಿ ವಾಲ್ಮೀಕಿ ಹೆಂಡತಿಗೆ ಹುಟ್ಟಿದ ಮಕ್ಕಳು ಊರುನಾಯಕರಂತೆ“ (ಒಂದೆ ತಂದೆಗೆ ಹೆಂಡತಿಯಲ್ಲಿ ಹುಟ್ಟಿದವರು ಊರ ಬೇಡರು, ಸೂಳೆಗೆ ಹುಟ್ಟಿದವರು ಮ್ಯಾಸ ಬೇಡರು) ಎಂದು ಅವಹೇಳನ ಮಾಡಿ ನಮ್ಮ ಮ್ಯಾಸ ಬೇಡ ಬುಡಕಟ್ಟು ಜನಾಂಗವನ್ನು ಶೋಷಣೆ ಮಾಡಿರುತ್ತಾರೆ. ಅವಹೇಳನ ಮಾಡಿರುವದರ ವಿರುದ್ದವಾಗಿ ಸರ್ಕಾರಕ್ಕೆ ಮತ್ತು ಕನ್ನಡ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಕೋರಿರುತ್ತೇವೆ. ಕನ್ನಡ ವಿಶ್ವವಿದ್ಯಾಲಯವು ಇವರ ಮೇಲೆ ಕ್ರಮಕೈಗೊಂಡಿರುತ್ತದೆ.
ನಂತರ ಮೂಲ ಲೇಖಕರು ಮ್ಯಾಸ ಬೇಡ ಸಮುದಾಯಕ್ಕೆ ವಿಷಾದವನ್ನು ವ್ಯಕ್ತಪಡಿಸಿ ಕನ್ನಡ ವಿವಿಗೆ ಪತ್ರ ಬರೆದಿರುತ್ತಾರೆ. ಮೂಲ ಬುಡಕಟ್ಟು ಹಿನ್ನೆಲೆಯನ್ನು ಹೊಂದಿರುವ ಮ್ಯಾಸ ಬೇಡರನ್ನು ಒಗ್ಗೂಡದಂತೆ ಮಾಡಲು ಮತ್ತು ಅವರನ್ನು ತಳವಾರ ಪರಿವಾರದ ಜೊತೆ ಹೊಂದಾಣಿಕೆ ಮಾಡಲು ಮತ್ತು ಮ್ಯಾಸ ಬೇಡರ ಅನಾದಿಕಾಲದಿಂದ ಉಳಿಸಿಕೊಂಡು ಬಂದಿರುವ ಬುಡಕಟ್ಟು ಸಂಸ್ಕೃತಿಯನ್ನು ನಾಶ ಮಾಡಲು ಹಾಗೂ ಮ್ಯಾಸ ಬೇಡರ ಹಕ್ಕುಗಳನ್ನು ಕದಿಯುವ ವಂಚಿಸುವ ಉದ್ದೇಶದಿಂದ ತಳವಾರರು 1998 ರಲ್ಲಿ ರಾಜನಹಳ್ಳಿಯಲ್ಲಿ ಶ್ರೀ ಮಹರ್ಷ ವಾಲ್ಮೀಕಿ ಮಠವನ್ನು ಮ್ಯಾಸ ನಾಯಕರ ಹಿರಿಯರಾದ ಮಾಜಿ ಮಂತ್ರಿಗಳು ದಿ.ಶ್ರೀತಿಪ್ಪೇಸ್ವಾಮಿ, ಚಳ್ಳಕೆರೆ ಮತ್ತು ಮಾಜಿ ಶಾಸಕರುಗಳಾದ ಎನ.ಟಿ.ಬೊಮ್ಮಣ್ಣ, ಎಂ.ಬಸಪ್ಪರವರು ನೇತೃತ್ವದಲ್ಲಿ ಸ್ಥಾಪಿಸಿಕೊಂಡು ಮಠ ಅಭಿವೃದ್ದಿಯಾಗುವವರೆಗೂ ಮ್ಯಾಸ ಬೇಡ ಮುಖಂಡರ ನಿಯಂತ್ರಣದಲ್ಲಿ ಇದ್ದ ವಾಲ್ಮೀಕಿ ಮಠ ಈಗ ಮಠದ ಸಂಪೂರ್ಣ ಆಡಳಿತ ತಳವಾರ ಪರಿವಾರದವರ ನಿಯಂತ್ರಣದಲ್ಲಿರುತ್ತದೆ.
ಈ ರಾಜನಹಳ್ಳಿ ವಾಲ್ಮೀಕಿ ಮಠ ಮ್ಯಾಸ ಬೇಡರ ಹಕ್ಕುಗಳನ್ನು ಕದಿಯಲು ಹಾಕಿರುವ ಬಲೆಯಾಗಿದೆ. ದಿನಾಂಕ:-28-04-2016ರಂದು ಶ್ರೀಪ್ರಸನ್ನಾನಂದಪುರಿಸ್ವಾಮೀಜಿ ಹೊಂಬಳಗಟ್ಟಿಗ್ರಾಮಕ್ಕೆ ಬಂದಾಗ ಬೇವಿನಕಟ್ಟಿಯವರು ಮ್ಯಾಸಬೇಡರ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ ಅದರ ಬಗ್ಗೆ ನೀವು ಏನು ಕ್ರಮ ಕೈಗೊಂಡಿರುವಿರಿ ಎಂದು ನಮ್ಮ ಮ್ಯಾಸ ಬೇಡರು ಕೇಳಿರುತ್ತಾರೆ. ಆಗ ಸ್ವಾಮೀಜಿ ಇದು ನನಗೆ ಗೊತ್ತಿಲ್ಲ, ಇದರ ಬಗ್ಗೆ ಯಾರು ನನಗೆ ಹೇಳಿಲ್ಲ ಎಂದು ಹಾರಿಕೆಯ ಉತ್ತರವನ್ನು ನೀಡಿದ್ದು ಇರುತ್ತದೆ.
ನಂತರ ಮ್ಯಾಸ ನಾಯಕರ ಐತಿಹಾಸಿಕ ಹಿನ್ನೇಲೆಯನ್ನು ಹೇಳುವುದರ ಮೂಲಕ “ಏ ಇಲ್ಲಿ ಕೇಳ್ರೊ ಇವತ್ತು ಎಸ್ ಟಿ ಗೆ ಸೇರಿದ್ದು ಯಾರಿಂದ ಊರುನಾಯಕರಿಂದ ಅಲ್ಲ, ಮ್ಯಾಸ ನಾಯಕರನ್ನ ಹಿಡುಕೊಂಡು ಊರುನಾಯಕರು ಎಸ್ ಟಿ ಸೇರಿದ್ದುʼ ಎಂದು ಹೇಳಿದ್ದಾರೆ. ಹಾಗಾದರೆ ನಾಯಕ ಪಂಗಡದ ಮೂಲ ಬುಡಕಟ್ಟು ಜನಾಂಗದ ಸಮನಾರ್ಥಕ ಪದವನ್ನುಕೇಂದ್ರ ಸರ್ಕಾರದ ಜಾತಿಪಟ್ಟಿಯಲ್ಲಿ 2011ರ ವರೆಗೂ ಇಲ್ಲದ ಮ್ಯಾಸ ನಾಯಕ ಪದವನ್ನು ದಿನಾಂಕ:16-06-2011ರಂದು ಕೇಂದ್ರದ ಹಿಂದುಳಿದ ಜಾತಿಪಟ್ಟಿಗೆ ಸೇರ್ಪಡೆ ಮಾಡಿ ನಮ್ಮ ಬುಡಕಟ್ಟು ಜನಾಂಗಕ್ಕೆ ಕಾನೂನಿನ ತೊಡಕು ಉಂಟುಮಾಡಿದ್ದು ಈ ರಾಜನಹಳ್ಳಿ ವಾಲ್ಮೀಕಿ ಮಠವೇ.
ಮ್ಯಾಸ ನಾಯಕ ಬುಡಕಟ್ಟಿನ ಕೆಲವು ರಾಜಕಾರಣಿಗಳಿಗೆ ಮತ್ತು ಮುಖಂಡರಿಗೆ ಆಮಿಷ ತೋರಿಸಿ ತಮ್ಮ ಕಡೆ ಸೆಳೆದುಕೊಂಡು ನಮ್ಮಆದಿವಾಸಿಗಳ ಒಗ್ಗಟ್ಟನ್ನು ಹಾಳುಮಾಡಿದ್ದಾರೆ. ಎಲ್ಲಾ ಒಂದೆ ಎಂದು ಸುಳ್ಳು ಹೇಳಿ ನಮಗೆ ಮೋಸ ಮಾಡಿರುತ್ತಾರೆ. 2013ನೇ ಇಸವಿಯ ಕರ್ನಾಟಕ ಬುಡಕಟ್ಟು ಸಚಿತ್ರ ಕೋಶದಲ್ಲಿ ಪರಿವಾರ ತಳವಾರ 1991ರಲ್ಲಿ ಎಸ್ ಟಿ ಸೇರ್ಪಡೆಯಾಗಿದೆ ಎಂದು ಸುಳ್ಳು ಬರೆಸುತ್ತಾರೆ. ವಾಲ್ಮೀಕಿ ಸ್ವಾಮೀಜಿ ಮತ್ತು ಸ್ವಾಮೀಜಿಯ ಸಹಚರರು ಮ್ಯಾಸ ಬೇಡ ಬುಡಕಟ್ಟು ಜನಾಂಗಕ್ಕೆ ಸಂಬಂಧವಿಲ್ಲದವರು.
ಇವರು ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಸಂವಿಧಾನದ ನಿಯಮಗಳನ್ನು ಮಣ್ಣು ಪಾಲು ಮಾಡಿ ನಮ್ಮ ಬುಡಕಟ್ಟು ಜನಾಂಗದ ಹಣ, ಆಸ್ತಿ ಮತ್ತು ಹೆಸರನ್ನು ಅಕ್ರಮವಾಗಿ ಕಬಳಿಸಿ ವಂಚಿಸಿರುತ್ತಾರೆ.
ನಮಗೆ ಬೆದರಿಸಿ ಎಲ್ಲಾ ಒಂದೆ ಎನ್ನುವುದರ ಮೂಲಕ ಈ ಹಿಂದಿನಿಂದಲೂ ಸುಳ್ಳು ಎಸ್ ಟಿ ಪ್ರಮಾಣ ಪತ್ರಪಡೆದು ಸರ್ಕಾರಕ್ಕೆ ಸಾವಿರಾರು ಕೋಟಿ ವಂಚಿಸಿ ಲಪಾಟಯಿಸಿದ್ದಲ್ಲದೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ಮೋಸಮಾಡಿ ನಮ್ಮ ಮೇಲೆ ಗುಂಡಾಗಿರಿ ಮತ್ತು ದಬ್ಬಾಳಿಕೆಯನ್ನು ಮತ್ತು ಕೋಲೆಯಂತಹ ಸಂಚುಗಳನ್ನು ರೂಪಿಸಿ ಸುಪಾರಿ ನೀಡುವುದರ ಮೂಲಕ ಕಿರುಕುಳ ಮತ್ತು ಮಾನಸಿಕ ಹಿಂಸೆಯನ್ನು ನೀಡುವ ಇವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಸೂಕ್ತ ಕಾನೂನು ಕ್ರಮಕೈಗೊಂಡು ಮ್ಯಾಸ ಬೇಡ ಮುಖಂಡರಾದ ದೊಡ್ಡಮನಿ ಪ್ರಸಾದ್ ಮತ್ತು ಸಮಿತಿಯ ಸದಸ್ಯರ ಪ್ರಾಣ ರಕ್ಷಣೆ ಮಾಡಬೇಕೆಂದು ಈ ಮೂಲಕ ತಮಗೆ ಈ ದೂರನ್ನು ಸಲ್ಲಿಸುತ್ತಿದ್ದೇವೆ.
ನಮ್ಮ ಸಂವಿಧಾನ ಬದ್ಧ ಹಕ್ಕನ್ನು ನಮ್ಮ ಬುಡಕಟ್ಟು ಸಮುದಾಯದ ಜನರಿಂದ ವಂಚಿಸಿ ನಮ್ಮ ನಾಯಕ ಪಂಗಡದ ಸಮಾನಾರ್ಥಕ ಮ್ಯಾಸ ನಾಯಕ ಪದವನ್ನು ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡಿ ನಾವೆ ಪರಿಶಿಷ್ಟ ಪಂಗಡದವರೆಂದು ಜಾತಿ ಪ್ರಮಾಣ ಪತ್ರಪಡೆಯುತ್ತಿರುವ ಇವರು ಸಂವಿಧಾನಕ್ಕೆ ವಂಚನೆ ಮಾಡಿದ್ದಾರೆ. ಶೋಷಣೆಯ ಮತ್ತು ಅನ್ಯಾಯದ ವಿರುದ್ಧ ಪ್ರತಿಭಟಿಸುವ ನಮ್ಮ ಸಂವಿಧಾನದ ವಿಧಿ-23, 24 ಮತ್ತು 32 ಪ್ರಕಾರ ನಮಗಿರುವ ಹಕ್ಕುಗಳನ್ನು ಸುಳ್ಳು ದೂರುಗಳನ್ನು ನೀಡಿ ಬೆದರಿಸಿ ಧಮನ ಮಾಡಲು ಪೋಲೀಸ್ ಇಲಾಖೆಯನ್ನು ಮತ್ತು ರಾಜಕೀಯ ಪ್ರಾಭಲ್ಯವನ್ನು ಬಳಸಿಕೊಳ್ಳಲು ಪ್ರಯತ್ನಿಸಿರುತ್ತಾರೆ.
ಆದ್ದರಿಂದ ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮಿ, ಹರಪನಹಳ್ಳಿಯ ಫಣಿಯಾಪುರ ಲಿಂಗರಾಜ, ಬಾಲೆನಹಳ್ಳಿ ಕೆಂಚನಗೌಡ, ದಾವಣಗೆರೆಯ ಆಂಜನೇಯ ಗುರುಜೀ, ಗುಮ್ಮನೂರು ಮಲ್ಲಿಕಾರ್ಜುನ, ಇವರುಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿಸುತ್ತೇವೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಡಾ.ಗೆರೆಗಲ್ಪಾಪಯ್ಯ, ಉಪಾಧ್ಯಕ್ಷರಾದ ಎಂ.ಕೆ.ಬೋಸಪ್ಪ, ಡಾ.ಓಬಳೇಶ್ ಹಾಗೂ ಸಮಿತಿಯ ಸದಸ್ಯರು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ
ಸುದ್ದಿದಿನ,ದಾವಣಗೆರೆ:ಫೆಬ್ರವರಿ 23 ರಿಂದ 27 ರವರೆಗೆ ನಡೆಯುವ ದುರ್ಗಾಂಬಿಕಾದೇವಿ ಜಾತ್ರೆ ಪ್ರಯಕ್ತ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ದೊಡ್ಡಪೇಟೆಯ ನಾಮದೇವ ಸಿಂಪಿ ಕಲ್ಯಾಣ ಮಂಟಪ, ವಿರಕ್ತಮಠ ಮತ್ತು ನಗರ ಕುಟುಂಬ ಕಲ್ಯಾಣ ಕೇಂದ್ರ-1, ಎಸ್.ಕೆ.ಪಿ ರಸ್ತೆಯ ಎಸ್.ವಿ.ಎಸ್.ಶಾಲೆ ಮತ್ತು ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘ, ಮಾರ್ಕಂಡೇಶ್ವರ ಕಲ್ಯಾಣ ಮಂಟಪ, ಈ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿಡಲು ಸಹಕರಿಸಬೇಕೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ -2025ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಗಳಿಗೆ ಆಕ್ಷೇಪಣೆ, ತಕರಾರು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.
ತಿರಸ್ಕೃತಗೊಂಡ ಅರ್ಜಿಗಳ ಅಭ್ಯರ್ಥಿಗಳ ಆಕ್ಷೇಪಣೆಗಳಿದ್ದಲ್ಲಿ, ಮಾರ್ಚ್ 13 ರೊಳಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಪೂರಕ ದಾಖಲಾತಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಗಂಗಾರ್ವಾಮಿ.ಜಿ.ಎಂ.ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.
‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)
AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.
ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.
ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.
ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.
ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ3 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ5 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ3 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
-
ದಿನದ ಸುದ್ದಿ12 hours agoಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ12 hours agoದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ


