ಲೈಫ್ ಸ್ಟೈಲ್
ಸ್ಟಿರಾಯ್ಡುಗಳು : ಜೀವರಕ್ಷಕಗಳೋ ? ಜೀವ ನಾಶಕಗಳೋ ?
- ಡಾ: ಎನ್.ಬಿ.ಶ್ರೀಧರ
ಘಟನೆ 1
“ಸಾರ್.. ಇಲ್ಲೊಂದು ಬೆಲೆಬಾಳುವ ಎತ್ತಿಗೆ ಸಿಕ್ಕ ಪಟ್ಟೆ ಜೇನುನೊಣ ಕಚ್ಚಿ ಎತ್ತು ಸಾಯುವ ಸ್ಥಿತಿಯಲ್ಲಿದೆ. ಇದನ್ನು ಬದುಕಿಸಲು ಚಿಕಿತ್ಸೆ ಸೂಚಿಸಿ”. ಇದು ಉತ್ತರ ಕರ್ನಾಟಕ ಭಾಗದಲ್ಲಿನ ನನ್ನ ವಿದ್ಯಾರ್ಥಿ ಪಶುವೈದ್ಯರ ಕೋರಿಕೆ. ಅದಕ್ಕೆ ಸ್ಟಿರಾಯ್ಡ್ ಅವಶ್ಯಕತೆ ಇದೆ. ಇಂತಿಷ್ಟು ಪ್ರಮಾಣದಲ್ಲಿ ಚುಚ್ಚುಮದ್ದಿನ ರೂಪದಲ್ಲಿ ನೀಡಿ ಹಾಗೂ ಉಳಿದಂತೆ ಇತರ ಚಿಕಿತ್ಸೆ ನೀಡಿ ಎಂದು ಸಲಹೆ ನೀಡಿದೆ. ಮರು ದಿನ ಎತ್ತು ಚೇತರಿಸಿಕೊಂಡಿತು ಸಾರ್.. ಧನ್ಯವಾದ ಅಂದು ಅನುಸರಣಾ ವರದಿ ಬಂತು.
ಘಟನೆ 2
ನಮ್ಮ ಸ್ನೇಹಿತರನ್ನು ಅವರ ಕಾಯಿಲೆಯೊಂದಕ್ಕೆ ಚಿಕಿತ್ಸೆಗಾಗಿ ತಜ್ಞರೊಬ್ಬರ ಬಳಿ ಕರೆದೊಯ್ದಿದ್ದೆ. ಎಲ್ಲಾ ಪರೀಕ್ಷೆಗಳಾದ ಮೇಲೆ ಚಿಕಿತ್ಸಾ ಚೀಟಿಯನ್ನು ವೈದ್ಯರು ವಿವರಿಸಿದರು. ನೀಡಿ… ಇವರೆ.. ನಿಮ್ಮ ಕಾಯಿಲೆ ಇಂತಹದು. ಇದರ ಚಿಕಿತ್ಸೆಗಾಗಿ ಸಣ್ಣ ಪ್ರಮಾಣದಲ್ಲಿ ಸ್ಟಿರಾಯ್ಡ್ ಒಂದನ್ನು ಬರೆದಿದ್ದೇನೆ. ಇದು ನಿಮ್ಮ ಕಾಯಿಲೆಯಲ್ಲಿ ಬಹಳ ಅನಿವಾರ್ಯ.
ಇಂತಿಷ್ಟು ದಿನ ತೆಗೆದುಕೊಳ್ಳಿ ಎನ್ನುತ್ತಿದ್ದಂತೆ ನನ್ನ ಸ್ನೇಹಿತರು ಪಕ್ಕದಲ್ಲಿ ಹಾವು ಹಾದು ಹೋದಂತೆ ಹಾರಿಬಿದ್ದರು. ಛೆ.. ಛೆ.. ಸ್ಟಿರಾಯ್ಡುಗಳೇ? ನಾನು ತೆಗೆದುಕೊಳ್ಳಲು ಸಾಧ್ಯವೇ ಇಲ್ಲ !!. ಈ ಡಾಕ್ಟ್ರೇ ಸರಿ ಇಲ್ಲ. ಸ್ಟಿರಾಯ್ಡುಗಳನ್ನು ಬರ್ದು ಕೊಡ್ತಾರೆ. ಇವರಿಗೆ ಅವರ ಕಾಯಿಲೆಗಳಲ್ಲಿ ಸ್ಟಿರಾಯ್ಡುಗಳ ಬಗ್ಗೆ ಅವರ ಕಾಯಿಲೆಯಲ್ಲಿ ಅನಿವಾರ್ಯತೆಯನ್ನು ವಿವರಿಸಿ ಅವರು ಅದನ್ನು ಸ್ವಲ್ಪ ದಿನ ತೆಗೆದುಕೊಳ್ಳುವಂತೆ ಮಾಡಲು ಸಾಕು ಸಾಕಾಯಿತು!!
ಘಟನೆ 3
ಸುಮಾರು ವರ್ಷಗಳ ಹಿಂದಿನ ಕಥೆ. ನಮ್ಮ ಪ್ರಯೋಗಶಾಲೆಯಲ್ಲಿರುವ ಒಬ್ಬರಿಗೆ ” ಸೋರಿಯಾಸಿಸ್” ಕಾಯಿಲೆ ಇತ್ತು. ಈ ಕಾಯಿಲೆಗೆ ಉತ್ತಮ ಔಷಧಿ ಇಲ್ಲ. ಇದಕ್ಕೆ ಅಲೋಪತಿಯಲ್ಲಿ ಇರುವ ಔಷಧಗಳನ್ನು ತೆಗೆದುಕೊಳ್ಳುತ್ತಾ ದಿನ ದೂಡುತ್ತಿದ್ದರು. ಕೈ ಮೇಲೆ ತುರಿಕೆಯ ಕಲೆಗಳು ಎದ್ದು ಕಾಣುತ್ತಿದ್ದವು.
ಸ್ವಲ್ಪ ದಿನ ಬಿಟ್ಟು ನೋಡಿದರೆ ಏನಾಶ್ಚರ್ಯ !! ಕಲೆಗಳೆಲ್ಲಾ ಮಾಯ !! ಔಷಧಶಾಸ್ತ್ರ ತಜ್ಞರೆಂದು ಹೇಳಿಕೊಳ್ಳುವ ನಮಗೇ ಗೊತ್ತಾಗದ ಹಾಗೇ ಹೊಸ ಔಷಧಿ ಬಂದು ಬಿಟ್ಟಿತೇ ಎಂದು ಆಶ್ಚರ್ಯ ಪಟ್ಟೆ!. ಕೇಳಿದರೂ ನಿಮಗೆ ಆ ಔಷಧದ ವಿಷಯ ಬೇಡ ಸಾರ್. ನೀವು ಅದನ್ನೆಲ್ಲಾ ನಂಬಲ್ಲ ಎಂದು ನುಣುಚಿಕೊಂಡು ಬಿಟ್ಟರು. ವಿಷಯ ಮರೆತು ಹೋಯಿತು.
ಸ್ವಲ್ಪ ದಿನದ ನಂತರ ಅವರಿಂದ ದೂರವಾಣಿ ಕರೆ!. ಸಾರ್. ಸ್ವಲ್ಪ ಮೈಗೆ ಹುಶಾರಿಲ್ಲ.. ನಾಲ್ಕು ದಿನ ರಜೆ ಬೇಕು.. ಸರಿ. ರಜೆ ಮುಗಿಸಿ ಬಂದ ನಂತರ ಅವರಲ್ಲಿ ಏನೋ ಬದಲಾವಣೆ ಗಮನಿಸಿದೆ. ಮುಖವೆಲ್ಲಾ ಸ್ವಲ್ಪ ದಪ್ಪವಾಗಿತ್ತು. ದೇಹದ ತೂಕವೂ ಜಾಸ್ತಿಯಾದ ಹಾಗೇ ಕಾಣಿಸಿತು. ಅಲ್ರೀ… ಯಾಕೋ ದಪ್ಪ ಆದ ಹಾಗೇ ಕಾಣ್ತೀರಲ್ಲ!! ಯಾಕೆ ? ಅಂದೆ. ಇಲ್ಲ ಸಾರ್. ಒಂದು ಹತ್ತು ದಿನದಿಂದ ಆಲಸ್ಯ. ಬೆಳಿಗ್ಗೆ ವಾಕ್ ನಿಲ್ಲಿಸಿ ಬಿಟ್ಟೆ. ಅದಕ್ಕೆ ತೂಕ ಜಾಸ್ತಿಯಾಗಿ ಬಿಟ್ಟಿದೆ ಅಂದರು.
ನನಗೆ ಸಂಶಯವಾಗಿ ಏನಾದ್ರೂ ಔಷಧ ತೆಗೆದುಕೊಳ್ತಾ ಇದ್ದೀರೇನ್ರಿ ?? ಅಂದೆ. ಹೌದು ಸಾರ್. ಈ ಸೋರಿಯಾಸಿಸ್” ಗೆ ಹಳ್ಳಿ ಔಷಧಿ ತಗೋಳ್ತಾ ಇದ್ದೀನಿ ಸಾರ್. ಅದ್ರಿಂದ್ಲೇ ನನಗೆ ಹುಶಾರಾಗಾದೆ. ಅದೇನೂ ತೊಂದ್ರೆ ಇಲ್ಲ ಸಾರ್. ಅಯುರ್ವೇದಿಕ್ ಔಷಧಿ. ಸೈಡ್ ಇಫೆಕ್ಟ್ ಇಲ್ವಂತೆ ಸಾರ್.. ಅಂದ್ರು.
“ಸರಿ. ಔಷಧಿ ತಗೊಂಡು ಬನ್ನಿ ನೋಡೋಣ” ಅಂದೆ. ಕಾಗದದ ಪೊಟ್ಟಣದಲ್ಲಿ ಕಟ್ಟಿದ ಕಂದು ಬಣ್ಣದ ಪುಡಿಯಂತಹ ವಸ್ತುವೊಂದನ್ನು ತಂದು ಕೊಟ್ಟರು. ಅದನ್ನು ನಮ್ಮ ಪ್ರಯೋಗಾಲಯದಲ್ಲಿ ತಪಾಸಣೆಗೆ ಒಳಪಡಿಸಿದೆ. ಅದರಲ್ಲಿ ಸ್ಟಿರೋಯ್ಡ್ ಇರುವುದು ಪತ್ತೆ ಆಯ್ತು.
ನಂತರ ಗೊತ್ತಾಗಿರುವುದು ಆ ಪಂಡಿತ ಆಯುರ್ವೇದದ ಹೆಸರಿನಲ್ಲಿ ಸ್ಟಿರೋಯ್ಡ್ಗಳನ್ನು ಪುಡಿಯಲ್ಲಿ ಬೆರೆಸಿ ಜನರಿಗೆ ನೀಡಿ ಮಂಕು ಬೂದಿ ಎರಚಿ ಹಣ ಕೀಳುತ್ತಿದ್ದ. ಈ ಸ್ಟಿರೋಯ್ಡ್ ಗಳು ಶರೀರದ ರೋಗ ನಿರೋಧಕ ಕಣಗಳನ್ನು ಹತ್ತಿಕ್ಕಿ ತಾತ್ಕಾಲಿಕ ಉಪಶಮನ ನೀಡಿದರೂ ಅವುಗಳ ಅಡ್ಡಪರಿಣಾಮದಿಂದ ಶರೀರದಲ್ಲಿ ನೀರು ತುಂಬಿಕೊಂಡು ದೇಹದ ತೂಕ ಹೆಚ್ಚಿಸಿ ಆಲಸ್ಯವನ್ನುಂಟು ಮಾಡಿದೆ ಅಂತ ಗೊತ್ತಾಯ್ತು. ಔಷಧ ನಿಲ್ಲಿಸಿದ ಮೇಲೆ ಅವರ ಆರೋಗ್ಯ ಸುಧಾರಿಸಿತು.
ಘಟನೆ 4
ಕುದುರೆಗಳು ಚೆನ್ನಾಗಿ ಓಡಲು ಮತ್ತು ಜಾನುವಾರುಗಳು ಚೆನ್ನಾಗಿ ಕೊಬ್ಬಲು ಸ್ಟಿರಾಯ್ಡುಗಳ ಬಳಕೆ ಅತಿಯಾಗಿ ಅವುಗಳಿಗೆ “ಡೋಪಿಂಗ್ ಪರೀಕ್ಷೆ” ಈಗ ಕಡ್ಡಾಯವಾಗಿದೆ. ದೇಹ ಹುರಿಗೊಳಿಸುವ ಸಲುವಾಗಿ ತನ್ನ ಜಿಮ್ ಗ್ರಾಹಕರಿಗೆ ಸ್ಟಿರಾಯ್ಡ್ ಸಹಿತ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಜಿಮ್ ತರಬೇತುದಾರನನ್ನು ಬಂಧಿಸಲಾಗಿದೆ ಮತ್ತು ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಸ್ಟಿರಾಯ್ಡ್ಸ್ ಉಪಯೋಗಿಸುತ್ತಿದ್ದ ಮತ್ತು ಸಿಕ್ಕಿ ಬಿದ್ದು ಕಂಬಿ ಎಣಿಸಿದ ಇತ್ಯಾದಿ.. ಸುದ್ಧಿಗಳು ಮಾಧ್ಯಮಗಳಲ್ಲಿ ಹರಿದಾಡಿ ಜನರಲ್ಲಿ ಸ್ಟಿರಾಯ್ಡುಗಳ ಬಗ್ಗೆ ಭಯನ್ನು ಹುಟ್ಟಿಸಿದವು. ಇವುಗಳಿಗೆ “ಉದ್ಧೀಪನ ಔಷಧಿಗಳು” ಎಂದೂ ಕರೆಯುತ್ತಾರೆ.
ಈ ಘಟನೆಗಳು ಸ್ಟಿರಾಯ್ಡುಗಳ ಉಪಯುಕ್ತತೆ ಮತ್ತು ಅವುಗಳ ದುಷ್ಪರಿಣಾಮ ಇವುಗಳ ಕುರಿತು ನನ್ನ ಗಮನಕ್ಕೆ ಬಂದ ಚಿಕ್ಕ ಪುಟ್ಟ ಉದಾಹರಣೆಗಳು ಅಷ್ಟೆ.. ಇಂತಹ ಸಹಸ್ರಾರು ಜನರು ಈ ತರಹದ ಸುಳ್ಳು ಔಷಧಗಳಿಗೆ ಬಲಿಯಾಗಿರಬಹುದೇನೋ?
ಹಾಗಿದ್ದರೆ ಏನಿದು ಸ್ಟಿರೋಯ್ಡ್? ಯಾಕೆ ಇದನ್ನು ಬಳಸುತ್ತಾರೆ? ಏನಿದರ ಪರಿಣಾಮ ಮತ್ತು ಅಡ್ಡಪರಿಣಾಮ? ಅನ್ನುವ ಬಗ್ಗೆ ತಿಳಿಯೋಣವೇ?
ಮೆದುಳಿನಿಂದ ಸ್ರವಿಸಲ್ಪಡುವ ಎಸಿಟಿಹೆಚ್ ಹಾರ್ಮೋನಿನಿಂದ ಪ್ರಚೋದಿತವಾಗಿ ಅಡ್ರಿನಲ್ ಗ್ರಂಥಿಯ ಕಾರ್ಟೆಕ್ಸ್ ಭಾಗದಿಂದ “ಕಾರ್ಟಿಕೋಸ್ಟಿರೋಯ್ಡ್” ರಕ್ತದಲ್ಲಿ ಸ್ರವಿಸಲ್ಪಡುತ್ತದೆ. ಪ್ರಸಕ್ತ ಮಾರುಕಟ್ಟೆಯಲ್ಲಿ ಇರುವ ಅನೇಕ ಸ್ಟಿರಾಯ್ಡುಗಳಿಗೆ ಇದೇ ಮೂಲ ಸೌಧ. ಇದರ ಪರಿಣಾಮವನ್ನು ಎರಡು ಮುಖ್ಯ ಘಟ್ಟದಲ್ಲಿ ವಿಭಜಿಸಬಹುದು.
ಅದೆ ಗ್ಲುಕೋಕಾರ್ಟಿಕಾಯ್ಡ್ ಪರಿಣಾಮ ಮತ್ತು ಮಿನೆರಲೋ ಕಾರ್ತಿಕಾಯ್ಡ್ ಪರಿಣಾಮಗಳು. ಶರೀರ ಹೆಚ್ಚಿನ ಕೆಲಸ ಮಾಡಬೇಕಾದರೆ ಅವಶ್ಯವಿರುವ ಗ್ಲುಕೋಸ್ ಬೇಕಾದಾಗ ಗ್ಲುಕೋಕಾರ್ಟಿಕಾಯ್ಡ್ ಪರಿಣಾಮವೆಂದರೆ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ಪಿತ್ತಜನಕಾಂಗ, ಮಾಂಸಖಂಡಗಳು ಮತ್ತು ಕೊಬ್ಬಿನ ಕಣಗಳ ವಿಭಜನೆಯಿಂದ ಹೆಚ್ಚಿಸುವುದು.ಈ ವರ್ಗಕ್ಕೆ ಕೆಲವು ಉದಾಹರಣೆಗಳೆಂದರೆ ಕಾರ್ಟಿಸೊಲ್, ಪ್ರೆಡ್ನಿಸೋನ್, ಪ್ರೆಡ್ನಿಸೋಲೊನ್, ಮೆಥೈಲ್ ಪ್ರೆಡ್ನಿಸೋಲೊನ್,ಡೆಕ್ಸಾಮಿಥಸೋನ್, ಬೆಟಾಮಿಥಸೋನ್ ಇತ್ಯಾದಿ.
ಇನ್ನು ಮಿನೆರಲೋಕಾರ್ಟಿಕಾಯ್ಡ್ ಪರಿಣಾಮವೆಂದರೆ ಶರೀರದಲ್ಲಿ ಹೆಚ್ಚಿನ ಪೊಟ್ಯಾಸಿಯಂ ಅಂಶವನ್ನು ಅಲ್ಡೋಸ್ಟಿರೋನ್ ಅಂಶದ ಮೂಲಕ ಉಳಿಸಿಕೊಳ್ಳುವುದು. ಇದಕ್ಕೆ ಉದಾಹರಣೆಗಳೆಂದರೆ ಅಲ್ಡೋಸ್ಟಿರೋನ್ ಪ್ಲುಡ್ರೋಕಾರ್ಟಿಸೋನ್ ಇತ್ಯಾದಿ.
ಇದಲ್ಲದೇ “ಅನಾಬೋಲಿಕ್ ಸ್ಟಿರಾಯ್ಡ್” ಎಂಬ ಮತ್ತೊಂದು ವರ್ಗವಿದ್ದು ಇದನ್ನು ವಯಸ್ಸಾದ ವ್ಯಕ್ತಿಗಳಲ್ಲಿ ಮಾಂಸಖಂಡಗಳು ದುರ್ಬಲವಾದಾಗ ಉಪಯೋಗಿಸುತ್ತಾರೆ. ಆದರೆ ಬಹಳ ಸಲ ಇದನ್ನು ಕ್ರೀಡಾಪಟುಗಳು ದುರ್ಬಳಕೆ ಮಾಡಿ, ಹಿಂಬಾಗಿಲಿನಿಂದ ಕ್ರೀಡೆಯನ್ನು ಗೆಲ್ಲುವ ಹುನ್ನಾರ ಮಾಡುತ್ತಾರೆ.
“ಅನಾಬೋಲಿಕ್ ಸ್ಟಿರಾಯ್ಡ್” ಇವು ಗಂಡು ಹಾರ್ಮೊನಾದ ಟೆಸ್ಟೋಸ್ಟಿರಾನ್ ಇದರ ಪ್ರತಿರೂಪವಾಗಿದ್ದು ಮಾಂಸಖಂಡಗಳಲ್ಲಿ ಪ್ರೋಟೀನುಗಳ ಬಳಕೆ ಜಾಸ್ತಿ ಮಾಡುತ್ತವೆ. ಇದರಿಂದ ಮಾಂಸಖಂಡಗಳು ಹಿಗ್ಗಿ, ಕುಸ್ತಿ ಮತ್ತು ಬಾಕ್ಸಿಂಗ್ ಪಟುಗಳು ಮತ್ತು ಅನೇಕ ಕ್ರೀಡಾಪಟುಗಳು ಇದರ ದುರ್ಬಳಕೆ ಮಾಡಿ “ಉದ್ಧೀಪನ ಔಷಧಿ” ಪತ್ತೆಯ ಸಮಯದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಇದಕ್ಕೆ ಉದಾಹರಣೆಯೆಂದರೆ ಆಂಡ್ರೋಸ್ಟೆನೆಡಿಯೋನ್, ಸ್ಟಾನಜೋಲೋಲ್, ನಾಂಡ್ರೋಲೋನ್ ಇತ್ಯಾದಿ.
ಮತ್ತೊಂದು ಮುಖ್ಯವಾದ ಅಂಶವೆಂದರೆ ಕಾರ್ಟಿಕೋಸ್ಟಿರಾಯ್ಡುಗಳು ಶರೀರದಲ್ಲಿ ಉರಿಯೂತವನ್ನುಂಟು ಮಾಡಬಲ್ಲ ಸೈಟೊಕೈನ್ ಮತ್ತಿತರ ಪದಾರ್ಥಗಳ ಉತ್ಪಾದನೆ ಮತ್ತು ಅವುಗಳ ಕಾರ್ಯವನ್ನು ಕುಂಠಿತಗೊಳಿಸಿ ಉರಿಯೂತವನ್ನು ಕಡಿಮೆ ಮಾಡುತ್ತವೆ. ಕಾರಣ ಇವುಗಳನ್ನು “ ಜೀವ ರಕ್ಷಕ” ಔಷಧಗಳ ಪಟ್ಟಿಯಲ್ಲಿ ಸೇರಿಸುತ್ತಾರೆ.
ಈ ಔಷಧಿ ಇರದಿದ್ದರೆ ಅಪಘಾತ, ಹಾವು ಕಡಿತ, ಜೇನು ಹುಳ ಕಡಿತದಂತ ಅನೇಕ ಜೀವ ತೆಗೆಯುವ ಸ್ಥಿತಿಗಳಿಗೆ “ಜೀವ ರಕ್ಷಕ” ಔಷಧಗಳೇ ಇಲ್ಲವಾಗಿದ್ದವು. ನಮ್ಮ ದೇಹಕ್ಕೆ ಅತಿಯಾದ ಉರಿಯೂತವನ್ನುಂಟು ಮಾಡಬಲ್ಲ ಈ ಸ್ಥಿತಿಗಳಿಗೆ ಗ್ಲುಕೊಕಾರ್ಟಿ ಕಾಯ್ಡುಗಳು ರಾಮಬಾಣವಾಗಿ ಪರಿಣಮಿಸಿವೆ.
ಸ್ಟಿರಾಯ್ಡುಗಳು ಜನ ಹೆದರುವ ಹಾಗೇ “ಭಯಾನಕ” ಔಷಧಿಗಳೇನೂ ಅಲ್ಲ. ಸಾಕಷ್ಟು ಎಚ್ಚರ ವಹಿಸಿಯೇ ಅವುಗಳನ್ನು ಕಂಡು ಹಿಡಿಯಲಾಗಿದೆ. ಸ್ಟಿರಾಯ್ಡುಗಳು ಅಥವಾ ಅನಾಬೊಲಿಕ್ ಸ್ಟಿರಾಯ್ಡುಗಳ ದುರ್ಬಳಕೆಯಿಂದ ಕೆಟ್ಟ ಹೆಸರು ಪಡೆದಿವೆಯೇ ಹೊರತು ಇವುಗಳು ವೈದ್ಯರ ಸಲಹೆಯಂತೆ ಉಪಯೋಗಿಸಿದಲ್ಲಿ ಉತ್ತಮ ಪರಿಣಾಮ ಬೀರಬಲ್ಲ ಔಷಧಗಳು.
ಯಾವುದೇ ಔಷಧವನ್ನು ವೈದ್ಯರ ಸಲಹೆಯಂತೆ ನಿಯಮಿತ ಅವಧಿಗೆ ಬಳಸಿದರೆ ಏನೂ ತೊಂದರೆ ಇಲ್ಲ. ವೈದ್ಯರಿಗೆ ಪ್ರತಿ ಔಷಧಿಯ ಪರಿಣಾಮ ಮತ್ತು ಅಡ್ಡಪರಿಣಾಮ ತಿಳಿದಿರುತ್ತದೆ. ಅವಶ್ಯವಾಗಿದ್ದಾಗ ಮಾತ್ರ ಅವರು ಬಳಸುತ್ತಾರೆ. ಸುಮ್ಮನೆ ಪೂರ್ವಾಗೃಹ ಪೀಡೆಯಿಂದ ಒಂದು ಔಷಧಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ತರವಲ್ಲ. ಅಲ್ಲದೇ ಕೆಲವರು ಸ್ವಯಂ ವೈದ್ಯದಿಂದಲೂ ಹಾಗೂ ಕೆಲ ಹಣಬಾಕ ಕೊಟ್ಟಿ ವೈದ್ಯರುಗಳು ಸಹ ಈ ಔಷಧಿಗಳನ್ನು ದುರುಪಯೋಗ ಮಾಡುವುದನ್ನು ತಡೆಯುವುದು ಒಳ್ಳೆಯದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ ಹಣ ಜಮೆಯಾಗಿಲ್ಲ, ಹಾಗಾದರೆ ನನ್ನ ಖಾತೆಗೆ ಇನ್ನೂ ಬಡ್ಡಿ ಸಿಗುತ್ತದೆಯೇ ಅಥವಾ ನನ್ನ ಹಣ ಹಾಗೆಯೇ ಉಳಿದುಕೊಳ್ಳುತ್ತದೆಯೇ?’ ಎಂಬುದು ಆ ಪ್ರಶ್ನೆ. ಈ ಪ್ರಶ್ನೆಗೆ ಇಪಿಎಫ್ಒ ನೇರವಾಗಿ ನೀಡಿರುವ ಉತ್ತರ – ಹೌದು, ಖಂಡಿತವಾಗಿಯೂ ಬಡ್ಡಿ ಸಿಗುತ್ತದೆ’.ಪಿಎಫ್ಗೆ ಹಣ ಜಮಾ ಮಾಡುವುದು ನಿಂತ ತಕ್ಷಣವೇ ಬಡ್ಡಿ ಬರುವುದು ನಿಂತುಹೋಗುತ್ತದೆ ಎಂಬುದು ಹಲವರಲ್ಲಿರುವ ತಪ್ಪು ಕಲ್ಪನೆ. ಆದರೆ ವಾಸ್ತವವೇ ಬೇರೆ.
http://Visit : www.suddidina.com
3 ವರ್ಷಗಳ ಹಳೆಯ ನಿಯಮದ ಅಸಲಿ ಸತ್ಯವೇನು?
ಈ ಗೊಂದಲಕ್ಕೆ ಕಾರಣ 2016ಕ್ಕಿಂತ ಮೊದಲು ಇದ್ದ ನಿಯಮ. ಹಳೆಯ ನಿಯಮದ ಪ್ರಕಾರ, ಒಂದು ಪಿಎಫ್ ಖಾತೆಗೆ ಸತತ 36 ತಿಂಗಳು (3 ವರ್ಷ) ಯಾವುದೇ ವಂತಿಗೆ ಜಮೆಯಾಗದಿದ್ದರೆ, ಅದನ್ನು `ನಿಷ್ಕ್ರಿಯ ಖಾತೆ’ (Inoperative Account) ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಅಂತಹ ಖಾತೆಗೆ ಬಡ್ಡಿ ನೀಡುವುದನ್ನು ತಡೆಹಿಡಿಯಲಾಗುತ್ತಿತ್ತು. ಇದರಿಂದಾಗಿ ಲಕ್ಷಾಂತರ ಖಾತೆದಾರರ ಹಣಕ್ಕೆ ಬಡ್ಡಿ ಸಿಗದೆ ನಷ್ಟವಾಗುತ್ತಿತ್ತು.ಆದರೆ ಚಂದಾದಾರರ ಹಿತದೃಷ್ಟಿಯಿಂದ ಇಪಿಎಫ್ಒ 2016 ರಲ್ಲಿ ಈ ನಿಯಮಕ್ಕೆ ಮಹತ್ವದ ತಿದ್ದುಪಡಿ ತಂದಿದೆ. ಹೊಸ ಮತ್ತು ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ನಿಯಮಿತವಾಗಿ ಚಕ್ರಬಡ್ಡಿ (Compounding Interest) ಜಮೆಯಾಗುತ್ತಲೇ ಇರುತ್ತದೆ. ನೀವು ಕೆಲಸದಲ್ಲಿದ್ದರೂ, ಇಲ್ಲದಿದ್ದರೂ ಇದು ಅನ್ವಯಿಸುತ್ತದೆ.
ಉದಾಹರಣೆ:
ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. ಒಬ್ಬ ವ್ಯಕ್ತಿ ತಮ್ಮ 40ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ತಮ್ಮ ಪಿಎಫ್ ಖಾತೆಯಲ್ಲಿದ್ದ 10 ಲಕ್ಷ ರೂಪಾಯಿಯನ್ನು ಹಿಂಪಡೆಯದೆ ಹಾಗೆಯೇ ಬಿಡುತ್ತಾರೆ ಎಂದುಕೊಳ್ಳಿ. ಅವರು ಮುಂದಿನ 5 ವರ್ಷಗಳ ಕಾಲ ಅಂದರೆ 45ನೇ ವಯಸ್ಸಿನವರೆಗೆ ಯಾವುದೇ ಹಣವನ್ನು ಜಮೆ ಮಾಡದಿದ್ದರೂ, ಅವರ ಖಾತೆಯಲ್ಲಿರುವ ಆ 10 ಲಕ್ಷ ರೂಪಾಯಿಗೆ ಇಪಿಎಫ್ಒ ಪ್ರತಿ ವರ್ಷ ಘೋಷಿಸುವ ಬಡ್ಡಿ ದರದಂತೆ (ಪ್ರಸ್ತುತ 8.25%) ಬಡ್ಡಿ ಸೇರ್ಪಡೆಯಾಗುತ್ತಲೇ ಹೋಗುತ್ತದೆ. ಇದು ಅವರಿಗೆ 58 ವರ್ಷ ತುಂಬುವವರೆಗೆ ಅಂದರೆ ಇನ್ನೂ 13 ವರ್ಷಗಳ ಕಾಲ ನಿರಂತರವಾಗಿ ಸಿಗುತ್ತದೆ. ಅದೇ ರೀತಿ 50ನೇ ವಯಸ್ಸಿನಲ್ಲಿ ಕೆಲಸ ಬಿಟ್ಟವರಿಗೆ 58 ವರ್ಷದವರೆಗೆ 8 ವರ್ಷಗಳ ಕಾಲ ಬಡ್ಡಿ ಸಿಗುತ್ತದೆ.
ಈ ಒಂದು ತೆರಿಗೆ ನಿಯಮವನ್ನು ಮಾತ್ರ ಮರೆಯಬೇಡಿ!
ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತದೆ ಎಂಬುದು ಖುಷಿಯ ವಿಚಾರವೇ, ಆದರೆ ಇಲ್ಲಿ ಒಂದು ಪ್ರಮುಖ ತೆರಿಗೆ ಎಚ್ಚರಿಕೆಯಿದೆ. ನೀವು ಕೆಲಸ ಮಾಡುತ್ತಿರುವಾಗ ನಿಮ್ಮ ಪಿಎಫ್ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ನೀವು ಕೆಲಸ ಬಿಟ್ಟ ನಂತರ ನಿಮ್ಮ ಖಾತೆಗೆ ಜಮೆಯಾಗುವ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆಯು `ಇತರ ಮೂಲಗಳಿಂದ ಬಂದ ಆದಾಯ’ (Income from Other Sources) ಎಂದು ಪರಿಗಣಿಸುತ್ತದೆ. ಆದ್ದರಿಂದ ಆ ಬಡ್ಡಿಯ ಮೊತ್ತವನ್ನು ನೀವು ನಿಮ್ಮ ವಾರ್ಷಿಕ ಆದಾಯದಲ್ಲಿ ತೋರಿಸಿ, ನಿಮ್ಮ ತೆರಿಗೆ ಸ್ಲ್ಯಾಬ್ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.
ಖಾತೆದಾರರು ಏನು ಮಾಡಬೇಕು?
1. ಕೆಲಸ ಬದಲಾಯಿಸಿದ್ದರೆ: ಹಳೆಯ ಕಂಪನಿಯ ಪಿಎಫ್ ಹಣವನ್ನು ವಿತ್ಡ್ರಾ ಮಾಡುವ ಬದಲು, ನಿಮ್ಮ ಯುಎಎನ್ (UAN) ಮೂಲಕ ಹೊಸ ಕಂಪನಿಯ ಖಾತೆಗೆ ವರ್ಗಾವಣೆ (Transfer) ಮಾಡಿಕೊಳ್ಳಿ. ಇದರಿಂದ ನಿಮ್ಮ ಸೇವಾ ಅವಧಿ ನಿರಂತರವಾಗಿರುತ್ತದೆ.
2. ವೃತ್ತಿ ವಿರಾಮದಲ್ಲಿದ್ದರೆ: 58 ವರ್ಷದವರೆಗೆ ಹಣ ಸುರಕ್ಷಿತವಾಗಿ ಬೆಳೆಯುತ್ತದೆ. ಆದರೆ ನಿಮಗೆ ತುರ್ತು ಅಗತ್ಯವಿಲ್ಲದಿದ್ದರೆ, ಹೆಚ್ಚಿನ ಆದಾಯಕ್ಕಾಗಿ ಬೇರೆಡೆ ಹೂಡಿಕೆ ಮಾಡುವ ಬಗ್ಗೆಯೂ ಯೋಚಿಸಬಹುದು.
3. 58 ವರ್ಷದ ನಂತರ: ಖಾತೆದಾರನಿಗೆ 58 ವರ್ಷ ತುಂಬಿದ ನಂತರವೂ ಹಣವನ್ನು ಹಿಂಪಡೆಯದಿದ್ದರೆ ಮಾತ್ರ ಆ ಖಾತೆಯನ್ನು ಮತ್ತೆ `ನಿಷ್ಕ್ರಿಯ’ ಎಂದು ಪರಿಗಣಿಸಿ ಬಡ್ಡಿ ನೀಡುವುದನ್ನು ಶಾಶ್ವತವಾಗಿ ನಿಲ್ಲಿಸಲಾಗುತ್ತದೆ.ಆದ್ದರಿಂದ 5 ವರ್ಷದಿಂದ ಹಣ ಜಮೆಯಾಗದಿದ್ದರೂ ಚಿಂತಿಸಬೇಕಿಲ್ಲ, ನಿಮ್ಮ ಪಿಎಫ್ ಹಣ ಇಪಿಎಫ್ಒ ನಲ್ಲಿ ಸುರಕ್ಷಿತವಾಗಿ ಬಡ್ಡಿಯೊಂದಿಗೆ ಬೆಳೆಯುತ್ತಿದೆ.

ದಿನದ ಸುದ್ದಿ
ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
ಸುದ್ದಿದಿನ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಷಾಂತರ ಬಿಎಂಟಿಸಿ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಬಸ್ಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಇರುವುದಿಲ್ಲ. ಖಾಸಗಿ ರೈಡ್-ಹೇಲಿಂಗ್ ಆ್ಯಪ್ಗಳಾದ ಓಲಾ, ಉಬರ್, ರ್ಯಾಪಿಡೋ ನಂತಹ ಆ್ಯಪ್ಗಳಲ್ಲೇ ನೇರವಾಗಿ ಬಿಎಂಟಿಸಿ ಬಸ್ಗಳ ಲೈವ್ ಲೋಕೇಶನ್ ಟ್ರ್ಯಾಕ್ ಮಾಡಲು ಮತ್ತು ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಮಹತ್ವದ ಸೇವೆಯು ಇದೇ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
http://Visit : www.suddidina.com
ಈ ಕುರಿತು ಮಾಹಿತಿ ನೀಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ, ನಾವು ಹಲವು ಖಾಸಗಿ ರೈಡ್ ಅಗ್ರಿಗೇಟರ್ ಕಂಪನಿಗಳ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ಇದಕ್ಕಾಗಿ ಶೀಘ್ರದಲ್ಲೇ ಒಂದು ಸಾಮಾನ್ಯ ಮಾನದಂಡದ ಒಪ್ಪಂದವನ್ನು (Standard Agreement) ಜಾರಿಗೆ ತರಲಿದ್ದೇವೆ. ಈ ಒಪ್ಪಂದದ ನಿಯಮಗಳಿಗೆ ಬದ್ಧರಾಗುವ ಯಾವುದೇ ಖಾಸಗಿ ಕಂಪನಿಯು ಬಿಎಂಟಿಸಿಯ ಲೈವ್ ಡೇಟಾವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಇದರಿಂದ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಿಲ್ಲ. ಕ್ಯಾಬ್ ಅಥವಾ ಆಟೋಗಳಿಂದ ಇಳಿದು ಮುಂದಿನ ಪ್ರಯಾಣಕ್ಕೆ ಬಸ್ ಹಿಡಿಯುವವರಿಗೆ ಇದು ಅತ್ಯಂತ ಸಹಕಾರಿಯಾಗಲಿದೆ ಎಂದು ಹೇಳಿದರು.
ನಮ್ಮ ಬಿಎಂಟಿಸಿ 2.0′ ಆ್ಯಪ್ನಲ್ಲಿ ಏನಿದೆ ಹೊಸತು?
ಖಾಸಗಿ ಆ್ಯಪ್ಗಳ ಜೊತೆ ಡೇಟಾ ಹಂಚಿಕೊಳ್ಳುವುದರ ಜೊತೆಗೆ, ಬಿಎಂಟಿಸಿ ತನ್ನ ಸ್ವಂತ ಮೊಬೈಲ್ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸುತ್ತಿದೆ. ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0′ ಅನ್ನು ಮುಂದಿನ ವಾರದ ಅಂತ್ಯದೊಳಗೆ ಲೋಕಾರ್ಪಣೆಗೊಳಿಸಲಾಗುವುದು. ಈ ಹಿಂದೆ ಆ್ಯಪ್ ಕುರಿತು ಪ್ರಯಾಣಿಕರು ನೀಡಿದ್ದ ದೂರುಗಳು ಮತ್ತು ತಾಂತ್ರಿಕ ದೋಷಗಳನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ. ಹೊಸ ಆ್ಯಪ್ನಲ್ಲಿ ಬಿಎಂಟಿಸಿ ನೆಟ್ವರ್ಕ್ನಲ್ಲಿ ಸಂಚರಿಸುವ ಪ್ರತಿಯೊಂದು ಬಸ್ನ ಲೈವ್ ಲೋಕೇಶನ್ ಅತ್ಯಂತ ನಿಖರವಾಗಿ ಲಭ್ಯವಾಗಲಿದೆ. ಪ್ರಸ್ತುತ ಬಿಎಂಟಿಸಿ ಬಳಿ 1,771 ಎಲೆಕ್ಟ್ರಿಕ್ ಬಸ್ಗಳು ಸೇರಿದಂತೆ ಒಟ್ಟು 6,938 ಬಸ್ಗಳಿವೆ. ಪ್ರತಿದಿನ ಸರಾಸರಿ 6,200 ಬಸ್ಗಳು ನಗರದಾದ್ಯಂತ ಕಾರ್ಯಾಚರಣೆ ನಡೆಸುತ್ತಿವೆ.
ಸಾರಿಗೆ ಸಚಿವರ ಮಹತ್ವದ ಸಭೆ ಮತ್ತು ನಿರ್ದೇಶನ:
ವಿಧಾನಸೌಧದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಇಲಾಖೆ, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
200 ಹೊಸ ಮಿನಿ ಬಸ್ಗಳ ಖರೀದಿ:
ಮೆಟ್ರೋ ಫೀಡರ್ ಸೇವೆ ಹಾಗೂ ನಗರದ ಕಿರಿದಾದ ರಸ್ತೆಗಳ ಸಂಪರ್ಕಕ್ಕಾಗಿ 200 ಹೊಸ 7 ಮೀಟರ್ ಉದ್ದದ ಮಿನಿ ಡೀಸೆಲ್ ಬಸ್ಗಳನ್ನು ಖರೀದಿಸಲು ಬಿಎಂಟಿಸಿ ನಿರ್ಧರಿಸಿದೆ. ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಕಿರಿದಾದ ರಸ್ತೆಗಳಲ್ಲಿ ಈ ಚಿಕ್ಕ ಬಸ್ಗಳು ಸುಲಭವಾಗಿ ಸಂಚರಿಸಬಲ್ಲವು. ಸದ್ಯ 9 ಮತ್ತು 12 ಮೀಟರ್ ಉದ್ದದ 255 ಬಸ್ಗಳು ಮೆಟ್ರೋ ಫೀಡರ್ ಆಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಬಜೆಟ್ನಲ್ಲಿ ಘೋಷಿಸಲಾದ ನಾಲ್ಕು ನಿಗಮಗಳಿಗೆ 1,000 ಬಸ್ ಖರೀದಿ ಯೋಜನೆಯ ಭಾಗವಾಗಿ ಈ ಖರೀದಿ ನಡೆಯಲಿದೆ. ಮುಂದಿನ 6 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಬನ್ನೇರುಘಟ್ಟ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಪಿಂಕ್ ಲೈನ್ನ 6 ನಿಲ್ದಾಣಗಳು ಸೇರಿದಂತೆ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆ ವಿಸ್ತರಿಸಲು ಬಿಎಂಆರ್ಸಿಎಲ್ ಮತ್ತು ಸಂಚಾರ ಪೊಲೀಸರ ಜೊತೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ.
ಎಸಿ ಬಸ್ ಸೇವೆ ಹೆಚ್ಚಳಕ್ಕೆ ಸೂಚನೆ:
ಪಿಎಂ ಇ-ಡ್ರೈವ್ ಯೋಜನೆಯಡಿ ಬರಲಿರುವ 4,500 ಎಲೆಕ್ಟ್ರಿಕ್ ಬಸ್ಗಳ ಪೈಕಿ 200 ಮಿನಿ ಎಸಿ ಇ-ಬಸ್ಗಳನ್ನು ಎಲ್ಲಾ ಮೆಟ್ರೋ ನಿಲ್ದಾಣಗಳ 5 ಕಿ.ಮೀ ವ್ಯಾಪ್ತಿಯಲ್ಲಿ ಓಡಿಸುವಂತೆ ಸಚಿವರು ಸೂಚಿಸಿದ್ದಾರೆ. ಐಟಿ ಕಂಪನಿ ಉದ್ಯೋಗಿಗಳು ಖಾಸಗಿ ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೇರೇಪಿಸಲು ಐಟಿ ಪಾರ್ಕ್ಗಳ ಮಾರ್ಗಗಳಲ್ಲಿ ಎಸಿ ಬಸ್ ಸೇವೆ ಹೆಚ್ಚಿಸಲು ಮತ್ತು ಐಟಿ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಎಲ್ಲಾ ನಿಗಮಗಳಲ್ಲಿ ಆದಾಯ ಸೋರಿಕೆ ತಡೆದು ಅನಗತ್ಯ ವೆಚ್ಚ ಕಡಿತಗೊಳಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವರು ಸೂಚಿಸಿದ್ದಾರೆ.

ದಿನದ ಸುದ್ದಿ
EV ನೋಂದಣಿಯಲ್ಲಿ ಕರ್ನಾಟಕದ ಸಾಧನೆ – ಶುದ್ಧ ಚಲನೆಗೆ ಬೆಸ್ಕಾಂ ಮುನ್ನಡೆ
ಸುದ್ದಿದಿನ,ಬೆಂಗಳೂರು: ರಾಜ್ಯವು ಇವಿ ನೋಂದಣಿಯಲ್ಲಿ ದೇಶದಲ್ಲೇ ಪ್ರಮುಖ ಸ್ಥಾನ ಪಡೆದಿದ್ದು, ಶುದ್ಧ ಚಲನೆಗೆ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಹಾಗೂ ವಿಶ್ವ ಇವಿ ದಿನದ ಸಂದರ್ಭದಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಮುನ್ನಡೆ ಸಾಧಿಸಿರುವುದು ಶ್ಲಾಘನೀಯ.
http://Visit : www.suddidina.com
ಕರ್ನಾಟಕವು ಒಟ್ಟು ಇವಿ ನೋಂದಣಿಯಲ್ಲಿ 3ನೇ ಸ್ಥಾನ ಪಡೆದಿದ್ದು, e-2W (ಎಲೆಕ್ಟ್ರಿಕ್ ಎರಡು ಚಕ್ರ ವಾಹನ) ಮತ್ತು e-4W (ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನ) ನೋಂದಣಿಯಲ್ಲಿ 2ನೇ ಸ್ಥಾನ ಪಡೆದಿದೆ. ಇದು ರಾಜ್ಯದ ಜನರು ಎಲೆಕ್ಟ್ರಿಕ್ ವಾಹನಗಳನ್ನು ಸ್ವೀಕರಿಸುವ ಪ್ರಮಾಣ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. 2027 ಹಣಕಾಸು ವರ್ಷದಲ್ಲಿ EV ಪ್ರವೇಶ ಪ್ರಮಾಣ 14.67% ಆಗಿದ್ದು, ಇದು ದೇಶದ ಮಟ್ಟದಲ್ಲಿ ಗಮನಾರ್ಹ ಸಾಧನೆಯಾಗಿದೆ.
ರಾಜ್ಯದ ಇವಿ ಮೂಲಸೌಕರ್ಯ ಅಭಿವೃದ್ಧಿಗೆ ಬೆಸ್ಕಾಂ ನೊಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವಿ ಚಾರ್ಜಿಂಗ್ ಸ್ಟೇಷನ್ಗಳ ಸ್ಥಾಪನೆ, ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಚಾರ್ಜಿಂಗ್ ಸೌಲಭ್ಯ, ಹಾಗೂ ಶುದ್ಧ ಚಲನೆಗೆ ಅಗತ್ಯವಾದ ತಂತ್ರಜ್ಞಾನವನ್ನು ಒದಗಿಸುವಲ್ಲಿ ಬೆಸ್ಕಾಂ ಪ್ರಮುಖ ಪಾತ್ರವಹಿಸಿದೆ.
ಕರ್ನಾಟಕ ಸರ್ಕಾರವು ಶುದ್ಧ ಚಲನೆಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವಿ ಖರೀದಿಗೆ ಪ್ರೋತ್ಸಾಹಕ ಯೋಜನೆಗಳು, ಚಾರ್ಜಿಂಗ್ ಮೂಲಸೌಕರ್ಯ ವಿಸ್ತರಣೆ, ಹಾಗೂ ಹಸಿರು ತಂತ್ರಜ್ಞಾನವನ್ನು ಉತ್ತೇಜಿಸುವ ಕ್ರಮಗಳು ಇವಿ ಕ್ರಾಂತಿಗೆ ಬಲ ನೀಡಿವೆ.
ಇವಿ ಬಳಕೆಯ ಹೆಚ್ಚಳದಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದು, ಇಂಧನ ಅವಲಂಬನೆ ಕಡಿಮೆಯಾಗುವುದು ಹಾಗೂ ಶುದ್ಧ ಶಕ್ತಿಯ ಬಳಕೆ ಹೆಚ್ಚಾಗುವುದು. ಇದು ಕರ್ನಾಟಕವನ್ನು ಹಸಿರು ರಾಜ್ಯವಾಗಿ ರೂಪಿಸುವತ್ತ ಪ್ರಮುಖ ಹೆಜ್ಜೆಯಾಗಿದೆ.
ವಿಶ್ವ ಇವಿ ದಿನದ ಅಂಗವಾಗಿ, ಕರ್ನಾಟಕವು ತನ್ನ ಸಾಧನೆಗಳನ್ನು ಹಂಚಿಕೊಂಡು, ಮುಂದಿನ ದಿನಗಳಲ್ಲಿ ಶುದ್ಧ ಚಲನೆಗೆ ಇನ್ನಷ್ಟು ಬಲ ನೀಡಲು ಬದ್ಧವಾಗಿದೆ. ಇವಿ ಕ್ರಾಂತಿಯ ಮೂಲಕ ಕರ್ನಾಟಕವು ಭಾರತದ ಭವಿಷ್ಯವನ್ನು ಹಸಿರು ಮತ್ತು ಶಾಶ್ವತ ದಿಕ್ಕಿನಲ್ಲಿ ಮುನ್ನಡೆಸುತ್ತಿದೆ.

-
ದಿನದ ಸುದ್ದಿ3 days agoಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ
-
ದಿನದ ಸುದ್ದಿ3 days agoರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
-
ದಿನದ ಸುದ್ದಿ3 days agoಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
-
ದಿನದ ಸುದ್ದಿ3 days agoಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
-
ದಿನದ ಸುದ್ದಿ3 days agoಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
-
ದಿನದ ಸುದ್ದಿ3 days ago5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
-
ದಿನದ ಸುದ್ದಿ3 days agoಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
-
ದಿನದ ಸುದ್ದಿ3 days agoವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್


