ದಿನದ ಸುದ್ದಿ
ಕೋವಿಡ್ ಮಾರ್ಗಸೂಚಿ ಪಾಲಿಸದ ವ್ಯಾಪಾರ-ವಹಿವಾಟು ನಡೆಸುವ ಮಾಲೀಕರ ವಿರುದ್ದ ಕಠಿಣ ಕ್ರಮ : ಡಿಸಿ ಮಹಾಂತೇಶ ಬೀಳಗಿ
ಸುದ್ದಿದಿನ,ದಾವಣಗೆರೆ:ದೊಡ್ಡ ದೊಡ್ಡ ಅಂಗಡಿಗಳು, ವ್ಯಾಪಾರ ವಹಿವಾಟು ಕೇಂದ್ರಗಳು, ಮದುವೆ ಮಂಟಪಗಳು, ಎಪಿಎಂಸಿ ಮಾರುಕಟ್ಟೆ, ಥಿಯೇಟರ್, ವಸತಿ ಶಾಲೆಗಳು ಸೇರಿದಂತೆ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.
ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ವ್ಯಾಪಾರ ವಹಿವಾಟು, ಕಲ್ಯಾಣ ಮಂಟಪ, ಶೈಕ್ಷಣಿಕ ಸಂಸ್ಥೆ ಒಟ್ಟಾರೆ ಆರ್ಥಿಕ ಚಟುವಟಿಕೆ ನಡೆಸುವ ಮಾಲೀಕರುಗಳಿಗೆ ಕೋವಿಡ್ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಸರಣೆ ಕುರಿತು ತಿಳಿಸಲು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈ ರೀತಿ ಜನ ಸೇರುವ ಅಂಗಡಿಗಳು, ಕೇಂದ್ರಗಳನ್ನೇ ‘ಸೂಪರ್ ಸ್ಪ್ರೆಡರ್’ ಎಂದು ಕರೆಯಲಾಗುತ್ತಿದ್ದು, ಇಲ್ಲಿ ನಿಯಂತ್ರಣ ಅಗತ್ಯವಾಗಿದೆ. ಆದ ಕಾರಣ ಈ ವಹಿವಾಟು, ಕೇಂದ್ರಗಳ ಮಾಲೀಕರು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕೆಂದರು.
ಕಳೆದ ಸಾಲಿನ ಮಾರ್ಚ್ ಮಾಹೆಯಲ್ಲಿ ಕೇವಲ 02 ಪ್ರಕರಣಗಳಿದ್ದು ಮಾರ್ಚ್ 23 ಕ್ಕೆ ಲಾಕ್ಡೌನ್ ತಯಾರಿಯಾಗಿತ್ತು. ಜೊತೆಗೆ ಜನರು ಅತ್ಯಂತ ಎಚ್ಚರಿಕೆಯಿಂದ ಇದ್ದರು. ಆದರೆ ಪ್ರಸ್ತುತ 156 ಪ್ರಕರಣಗಳಿದ್ದರೂ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಉಡಾಫೆಯಿಂದ ಎಲ್ಲಿ ಬೇಕೆಂದರಲ್ಲಿ ಓಡಾಡುತ್ತಿದ್ದು, ಮಾಸ್ಕ್ ಧರಿಸುತ್ತಿಲ್ಲ, ಅಂತರ ಕಾಪಾಡುತ್ತಿಲ್ಲ.
ಪರಿಸ್ಥಿತಿ ಇಂದು ಅತ್ಯಂತ ಗಂಭೀರವಾಗಿದೆ. ಕೋವಿಡ್ ವೈರಾಣು ರೂಪಾಂತರಗೊಂಡಿದ್ದು ಎರಡನೇ ಅಲೆಯಲ್ಲಿ ವೈರಾಣು ಅತ್ಯಂತ ವೇಗವಾಗಿ ಹರಡುತ್ತಿದೆಯಾದ್ದರಿಂದ ಯಾರೂ ಕೋವಿಡ್ನ್ನು ಹಗುರವಾಗಿ ತೆಗೆದುಕೊಳ್ಳಬಾರದು. ವ್ಯಾಪಾರ, ವಹಿವಾಟು, ಮದುವೆ ಮನೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದಾರೆ. ಜನ ಸಾಯ್ತಾ ಇದ್ದರೂ ಜನರು ಮೈಮರೆತಿರುವುದು ಸಲ್ಲದು.
ಈ ಹಿನ್ನಲೆಯಲ್ಲಿ ವ್ಯಾಪಾರ ವಹಿವಾಟು ಮಾಡುವ ಎಲ್ಲ ಆರ್ಥಿಕ ಚಟುವಟಿಕೆಯ ಕೇಂದ್ರಗಳು ಮತ್ತು ಶೈಕ್ಷಣಿಕ ಸಂಸ್ಥೆಯವರು ಸರ್ಕಾರದ ಕೋವಿಡ್ ಸಮುಚಿತ ವರ್ತನೆಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕರಿಸಬೇಕು. ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಂತೂ ಖಚಿತವಾಗಿದ್ದು, ಉಲ್ಲಂಘನೆ ಮಾಡಿದವರ ವಿರುದ್ದ ಕಾಯ್ದೆ, ನಿಯಮಗಳನ್ವಯ ಅತ್ಯಂತ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಕಳೆದ ಸಾಲಿನ ಮಾರ್ಚ್ 4 ರಿಂದ ಕೋವಿಡ್ ನಿಯಂತ್ರಣ ಚಟುವಟಿಕೆಯನ್ನು ಸರ್ಕಾರ ಅತ್ಯಂತ ಕಟ್ಟುನಿಟ್ಟಾಗಿ ಆರಂಭಿಸಿದ್ದು, ಇಲ್ಲಿಯವರೆಗೆ ಮುಂದುವರೆದಿದೆ. ಇದುವರೆಗೆ 27605 ಪಾಸಿಟಿವ್ ಪ್ರಕರಣ ಬಂದಿದ್ದು, ಒಟ್ಟು 264 ಸಾವು ಸಂಭವಿಸಿದೆ. ಕಳೆದ ಆಗಸ್ಟ್ನಲ್ಲಿ ಅತಿ ಹೆಚ್ಚು ಪಾಸಿಟಿವಿಟಿ ದರ ಅಂದರೆ ಶೇ16.30 ಇತ್ತು. ಸೋಂಕು ಹರಡುವ ಕೊಂಡಿ ತುಂಡು ಮಾಡುವ ಕಾರ್ಯವನ್ನು ಮಾಡುತ್ತಾ ಬಂದಿದ್ದು, ಈ ಮಾರ್ಚ್ನಲ್ಲಿ ಪಾಸಿಟಿವಿಟಿ ದರ 0.29 ಇದೆ. ಪ್ರಸ್ತುತ 160 ಪಾಸಿಟಿವ್ ಪ್ರಕರಣ ಇದ್ದು ಇದರಲ್ಲಿ ದಾವಣಗೆರೆ ತಾಲ್ಲೂಕಿನದ್ದೇ 124 ಪ್ರಕರಣ ಇದೆ ಹಾಗೂ ನಗರದ್ದೇ 106 ಪ್ರಕರಣ ಇದ್ದು ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಎಲ್ಲ ಖಾಸಗಿ ಆಸ್ಪತ್ರೆ, ಕ್ಲಿನಿಕ್ಗಳು ಐಎಲ್ಐ ಮತ್ತು ಎಸ್ಎಆರ್ಐ ಪ್ರಕರಣಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಬೇಕು. ಹಾಗೂ ಎಲ್ಲ ಹೋಟೆಲ್, ಛತ್ರ, ವಸತಿ ಶಾಲೆ ಸೇರಿದಂತೆ ಹೆಚ್ಚು ಜನರು ಕೆಲಸ ಮಾಡುವ ಅಂಗಡಿಗಳು, ಹೋಟೆಲ್, ಶಾಲೆಗಳಲ್ಲಿ 15 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಕೋವಿಡ್ ನಿಯಂತ್ರಣ ಹಿನ್ನೆಲೆಯ ಸರ್ಕಾರದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಸ್ವಯಂ ನಿಯಂತ್ರಣ ಇಂದು ಅತಿ ಮುಖ್ಯವಾಗಿದೆ. ವೈಯಕ್ತಿಕವಾಗಿ ಕೋವಿಡ್ ವಿರುದ್ದ ಹೋರಾಡಬೇಕಿರುವ ಇಂದಿನ ಸ್ಥಿತಿಯಲ್ಲಿ ವ್ಯಾಪಾರು ವಹಿವಾಟು ಇತರೆ ಸಂಸ್ಥೆಗಳು ಸಹಕರಿಸಬೇಕು.
ಕೋವಿಡ್ ಬಗ್ಗೆ ಎಲ್ಲರಲ್ಲಿ ಜಾಗೃತಿ ಇದ್ದು, ಮಾರ್ಗಸೂಚಿ ಉಲ್ಲಂಘಿಸಿದರೆ ಕ್ರಮ ನಿಶ್ಚಿತ ಎಂದ ಅವರು ಕೋವಿಡ್ ನಿಯಮಗ ಪರಿಣಾಮಕಾರಿ ಜಾರಿಗೆ ಶೀಘ್ರದಲ್ಲೇ ವಾರ್ಡುವಾರು ಮಾರ್ಷಲ್ಗಳನ್ನು ನೇಮಕ ಮಾಡಿ ಮಾಸ್ಕ್ ಧರಿಸದಿದ್ದರೆ ರೂ.250, ನಿಗದಿತ ಜನರಿಗಿಂತ ಹೆಚ್ಚು ಸೇರಿದರೆ ಹಾಲ್, ಮಂದಿರಗಳ ಮಾಲೀಕರಿಗೆ, ಆಯೋಜಕರಿಗೆ ರೂ.5 ರಿಂದ 10 ಸಾವಿರ ದಂಡ ಜೊತೆಗೆ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಕ್ರಮ ವಹಿಸಲಾಗುವುದು ಎಂದ ಎಚ್ಚರಿಕೆ ನೀಡಿದರು.
ಮೊನ್ನೆವರೆಗೆ ಸಿಂಗಲ್ ಡಿಜಿಟ್ನಲ್ಲಿದ್ದ ಪ್ರಕರಣ ಇಂದು ಡಬಲ್ ಡಿಜಿಟ್ ಆಗಿದ್ದು ಮೂರಂಕಿಗೆ ತಲುಪುವ ಸಮಯ ದೂರವಿಲ್ಲ. ಆದ ಕಾರಣ ಎಲ್ಲರೂ ಎಚ್ಚೆತ್ತುಕೊಂಡು ಕೋವಿಡ್ ನಿಯಮ ಪಾಲಿಸಬೇಕು ಎಂದರು.
ಜಿ.ಪಂ ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಗಡಿ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ ಹಾಗೂ ಸಾವುಗಳೂ ಸಂಭವಿಸುತ್ತಿವೆ. ಮಧ್ಯ ಕರ್ನಾಟಕದಲ್ಲಿ ಇನ್ನೂ ಅಷ್ಟು ಪ್ರಕರಣ ಇಲ್ಲ. ಮೊದಲನೇ ನಮಗೆ ಸೂಚನೆ ಸಿಕ್ಕಿದೆ.
ಹಾಗಾಗಿ ನಾವೆಲ್ಲ ಎಚ್ಚೆತ್ತಕೊಳ್ಳಬೇಕು. ಕೇವಲ ವ್ಯಾಪಾರ ವಹಿವಾಟು, ಕೆಲಸದ ಸ್ಥಳಗಳಲ್ಲಿ ಮಾತ್ರವಲ್ಲ ಮನೆಗಳಲ್ಲೂ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ರೂಪಾಂತರಿ ವೈರಾಣು ವೇಗವಾಗಿ ಹರಡುತ್ತಿದ್ದು, ಸ್ವಯಂ ನಿಯಂತ್ರಣದಲ್ಲಿ ನಮ್ಮ ಪಾತ್ರ ದೊಡ್ಡದಿದೆ ಎಂದರು.
ಜಿಲ್ಲಾಧಿಕಾರಿಗಳು ಮಾತನಾಡಿ, ಕಲ್ಯಾಣ ಮಂಟಪದ್ಲಿ 200 ಕ್ಕಿಂತ ಹೆಚ್ಚು ಜನ ಸೇರಿದ್ರೆ ಮಂಟಪದ ಮಾಲೀಕರು, ಹೆಣ್ಣು ಮತ್ತು ಗಂಡಿನ ಕಡೆಯವರಿಂದ ಸಹ ದಂಡವನ್ನು ಪಾಲಿಕೆಯವರು ಮಾಡುತ್ತಾರೆ. ಜನ ಸೇರುವಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮಾರ್ಷಲ್ ನೇಮಕ ಮಾಡಲಾಗುವುದು.
ಸೂಪರ್ ಸ್ಪ್ರೆಡರ್ಗಳಾದ ಕಲ್ಯಾಣ ಮಂಟಪ, ವಸತಿ ಶಾಲೆ, ಅಂಗಡಿಗಳಲ್ಲಿ, ಥಿಯೇಟರ್ ಇತರೆಡೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು. ಕೆಪಿಎಂಇ ಅಡಿ ಬರುವ ಎಲ್ಲ ಖಾಸಗಿ ಆಸ್ಪತ್ರೆ ಕ್ಲಿನಿಕ್ನವರು ಕೆಮ್ಮು, ಶೀತ ಜ್ವರ ಇದ್ದರೆ ಕೋವಿಡ್ ಟೆಸ್ಟ್ ಆದರೆ ಮಾತ್ರ ಚಿಕಿತ್ಸೆ ಎಂದು ಕಡ್ಡಾಯಗೊಳಿಸಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಕೇಂದ್ರಗಳಲ್ಲಿ ಫಿವರ್ ಕ್ಲಿನಿಕ್ ಇದ್ದು ಅಲ್ಲಿಗೆ ಕಳುಹಿಸಬೇಕು.
ಹಾಗೂ ಆರ್ಥಿಕ ಚಟುವಟಿಕೆ ನಡೆಸುವವರು ಸರ್ಕಾರ ಹೊರಡಿಸಿರುವ ಎಸ್ಓಪಿ ಪ್ರಕಾರ ಕಾರ್ಯ ನಿರ್ವಹಿಸಬೇಕು. ನಿರ್ಲಕ್ಷ್ಯ ಭಾವ ಸಲ್ಲದು. ಏಪ್ರಿಲ್ 1 ರಿಂದ 45 ವರ್ಷ ತುಂಬಿದವರೆಲ್ಲ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಹಳೇ ದಾವಣಗೆರೆ ಭಾಗದಲ್ಲೇ ಹೆಚ್ಚು ಪ್ರಕರಣಗಳು ಇತ್ತು. ಇಲ್ಲಿಯ ಜನರೇ ಲಸಿಕೆಗೆ ಮುಂದಾಗುತ್ತಿಲ್ಲ. ಅಲ್ಲಿನ ಸ್ಥಳೀಯ ನಾಯಕರು ಲಸಿಕೆ ಪಡೆಯಲು ಜನರ ಮನವೊಲಸಿಬೇಕು ಎಂದರು.
ವಿವಿಧ ಕಲ್ಯಾಣ ಮಂಟಪಗಳ ಮಾಲೀಕರು ಜನರಿಗೆ ನಿಯಮಗಳನ್ನು ತಿಳಿಸಿ ಹೇಳಿದರೂ ಕೇಳುತ್ತಿಲ್ಲವೆಂದಾಗ ಡಿಸಿ, ನಿಮ್ಮ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ನೀವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಒಂದು ಪಕ್ಷ ಸಹಾಯ ಬೇಕಾದಲ್ಲಿ ಎಸ್ಪಿ ಹಾಗೂ ಪಾಲಿಕೆ ಸಹಾಯ ಪಡೆದುಕೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಹೆಚ್ಓ ಡಾ.ನಾಗರಾಜ್, ಜಿಲ್ಲಾ ವರ್ತಕರ ಸಂಘದ, ಐಎಂಎ, ಛೇಂಬರ್ ಆಫ್ ಕಾಮರ್ಸ್, ಸಿನೆಮಾ ಥಿಯೇಟರ್, ವಸತಿ ಶಾಲೆಗಳ, ಬಟ್ಟೆ ಅಂಗಡಿಗಳ ಸಂಘ, ಎಪಿಎಂಸಿ ವರ್ತಕರ ಸಂಘದ, ಲಿಕ್ಕರ್ ಮತ್ತು ವೈನ್ಸಂಘದ, ಬೀದಿ ಬದಿ ವ್ಯಾಪಾರಿಗಳ ಸಂಘ ಸೇರಿದಂತೆ ವಿವಿಧ ರೀತಿಯ ಆರ್ಥಿಕ ಚಟುವಟಿಕೆ ಮಾಡುವಂತಹ ಸಂಸ್ಥೆಗಳ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವದಾಸಿ ಪುನರ್ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ
ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.


