ನೆಲದನಿ
ನುಡಿಯ ಒಡಲು – 01 : ನುಡಿಯೆಲ್ಲ ತತ್ವ ನೋಡಾ..!
- ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಲ್ಲಮನ ಈ ಮುಂದಿನ ವಚನವೊಂದರ ಮೂಲಕ ‘ನಮಗೆ ಬೇಕಾಗಿರುವ ಬದುಕಿನ ದಾರಿಗಳು’ ಎಂತಹವು? ಅಂತಹ ದಾರಿಯೊಂದನ್ನು ರೂಪಿಸಿಕೊಳ್ಳಲು ‘ನುಡಿ ಹೇಗೆ ಒತ್ತಾಸೆಯಾಗಬಲ್ಲದು’ ಎಂಬುದನ್ನು ಚರ್ಚಿಸುವುದು ಈ ಟಿಪ್ಪಣಿಯ ಗುರಿಯಾಗಿದೆ.
ಏಕೆಂದರೆ ಬದುಕಿನ ಚಲನಶೀಲತೆಗೆ ನುಡಿ ಕಾರಣವಾಗುವ ಹಾಗೆಯೇ, ಬದುಕಿನ ದಾರಿಗಳನ್ನು ತಪ್ಪಿಸುವಲ್ಲಿಯೂ ಮೊದಲ ಕಾರಣವೇ ನುಡಿ ಆಗಿರುತ್ತದೆ. ಹಾಗಾಗಿ ನುಡಿಯೊಂದು ಯಾವತ್ತಿಗೂ ನಿರ್ಲಿಪ್ತವಾಗಿರುವ ವಿದ್ಯಮಾನವಾಗಿರಲಾರದು. ಆ ಕಾರಣವಾಗಿ ಬದುಕಿನ ಹಲವು ವಿನ್ಯಾಸಗಳನ್ನು ಸೂಚಿಸುವ ಸೂಚಕವಾಗಿ ನುಡಿಯೊಂದು ಮುಂಚೂಣೆಗೆ ಬಂದಿರುತ್ತದೆ ಎಂಬೀ ದಿಟವನ್ನು ಒಪ್ಪಿ ನಾನು ಈ ಬರಹವನ್ನು ಬರೆಯಲು ಮುಂದಾಗಿರುತ್ತೇನೆ.
“ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ!
ತನ್ನ ತಾ ಮರೆದಡೆ ನುಡಿಯೆಲ್ಲ ಮಾಯೆ ನೋಡಾ!
ಅರಿದು ಮರೆದು ಶಿವಯೋಗಿಯ ಶಬ್ದವೆಲ್ಲವು
ಉಪದೇಶವಲ್ಲದೇ ಭಿನ್ನವುಂಟೆ?
ನಿನ್ನ ಮನದ ಕಳವಳವ ತಿಳುಹಲೆಂದು ಮಾತನಾಡಿಸಿ ನೋಡಿದಡೆ,
ಎನ್ನ ಮನದೊಳಗೆ ಕಂದು ಕಲೆ ಎಂಬುದಿಲ್ಲ ನೋಡಾ!
ನಮ್ಮ ಗುಹೇಶ್ವರಲಿಂಗಕ್ಕೆ ನೀನು ಕರುಣದ ಶಿಶುವಾದ ಕಾರಣ
ಬಾಯ್ದೆಗೆದೆನಲ್ಲದೆ, ಭಿನ್ನವುಂಟೆ ಹೇಳಾ!”
–ಅಲ್ಲಮಪ್ರಭು
ಅಲ್ಲಮನನ್ನು ಕುರಿತು ಈಗಾಗಲೆ ಸಾಕಷ್ಟು ಬರೆಹಗಳು ಬಂದಿವೆ. ಅವನ ವಚನಗಳನ್ನೂ ಕುರಿತು ಇನ್ನೂ ಹೆಚ್ಚಿನ ಬರೆಹಗಳು ಬಂದಿರುತ್ತವೆ. ಆದರೂ ಅಲ್ಲಮನ ವಚನವೊಂದನ್ನು ಕುರಿತು ಒಂದಿಷ್ಟು ಚರ್ಚೆಗಳನ್ನು, ನುಡಿಯರಿಮೆ ನೆಲೆಯಿಂದ ಬೆಳೆಸುವುದು ಮಾತ್ರ ಈ ಟಿಪ್ಪಣಿಯ ಗುರಿಯಾಗಿದೆ. ಅಂದರೆ ನುಡಿಯನ್ನೇ ನೆಲೆಯಾಗಿಸಿಕೊಂಡಿರುವ ಅಲ್ಲಮನ ಈ ವಚನವÀನ್ನು ಮಾತ್ರ ಎದುರಿಗೆ ಇಟ್ಟುಕೊಂಡು ಇಲ್ಲಿಯ ಚರ್ಚೆಗಳು ಮೈದಾಳುತ್ತವೆ.
ಇಲ್ಲಿಯ ಯಾವ ಚರ್ಚೆಯು ಕೂಡ ತನ್ನಷ್ಟಕ್ಕೆ ತಾನು ಸ್ವತಂತ್ರವೂ ಅಲ್ಲ ಮತ್ತು ಸ್ವಾಯತ್ತವೂ ಅಲ್ಲ. ಅಂತಹವೊಂದು ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆ ಯಾವುದೆ ತಿಳಿವು ಇಲ್ಲವೇ ಚಿಂತನೆಯೊಟ್ಟಿಗೆ ಪ್ರತ್ಯೇಕವಾಗಿ ನೆಲೆಗೊಳ್ಳಲಾರದು. ತಿಳಿವು ಯಾವತ್ತಿಗೂ ಸಮೂಹಗಳ ಒಡಲಿಂದಲೇ ಹೊರಹೊಮ್ಮುತ್ತದೆ.
ಹೀಗೆ ಹೊರಹೊಮ್ಮುವ ತಾತ್ವಿಕ ಚೌಕಟ್ಟುಗಳು ಎದುರಿಸಬಹುದಾದ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಎಂತಹವು? ಮತ್ತು ಅವುಗಳ ಪರಿಣಾಮದಿಂದ ಸಮೂಹಗಳು ಅನುಭವಿಸುವ ಇಕ್ಕಟ್ಟುಗಳ ಸ್ವರೂಪ ಯಾವ ಬಗೆಯದು? ಎಂಬುದನ್ನು ವಿವರಿಸುವುದು ಈ ವಚನದ ಆಶಯವಾಗಿದೆ. ಇಂತಹ ಆಶಯಗಳನ್ನು ಸಮುದಾಯಗಳ ವಿನ್ಯಾಸಗಳೊಂದಿಗೆ ಮುಖಾಮುಖಿ ಆಗಿಸಿದರೆ, ಹುಟ್ಟಿಕೊಳ್ಳಬಹುದಾದ ಸಾಮಾಜಿಕ ಬಿಕ್ಕಟ್ಟುಗಳು ಎಂತಹವು ಎಂಬುದನ್ನು ಈ ಚರ್ಚೆಗಳು ಎತ್ತಿ ತೋರಿಸುತ್ತವೆ.
ಒಂದು ಸಂಗತಿಯನ್ನು ಮೊದಲೇ ನಿಚ್ಚಳಪಡಿಸಿಕೊಳ್ಳಬೇಕು. ಅದೇನೆಂದರೆ ನುಡಿ ಕುರಿತು ಅಲ್ಲಮನ ಈ ವಚನವು ಕನ್ನಡವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಹೇಳಿರುವ ಮಾತಲ್ಲ. ಒಟ್ಟಾರೆ ನುಡಿಯ ತಾತ್ವಿಕತೆಯನ್ನು, ಮಹತ್ವವನ್ನು ಹಾಗೂ ಮನೋಧರ್ಮವನ್ನು ಕಂಡರಿಸುವ ನಿಲುವುಗಳು ಇದರಲ್ಲಿ ಅಡಕವಾಗಿವೆ. ಇದೊಂದು ರೀತಿಯಲ್ಲಿ ನುಡಿಯನ್ನು ಕುರಿತು, ಆ ನುಡಿ ಮೂಲಕವೇ ಬಿಡಿಸಿ ಹೇಳುವ ಬಗೆಯಾಗಿದೆ.
ಇಂತಹ ಮೆಟಾಲಿಂಗ್ವಿಸ್ಟಿಕ್ ಸ್ವರೂಪದ ವಿವರಗಳನ್ನು ತಾತ್ವಿಕಗೊಳಿಸುವುದು ಅಷ್ಟೊಂದ ಸುಳುವಾದ ಸಂಗತಿಯಲ್ಲ. ಭಾಷಾಶಾಸ್ತ್ರದಲ್ಲಿ ಇಂತಹ ಚಿಂತನೆಯನ್ನು ನುಡಿ ತತ್ವಶಾಸ್ತ್ರವೆಂದು ಕರೆಯುತ್ತಾರೆ.
ಈ ನುಡಿ ತತ್ವಶಾಸ್ತ್ರವು ಕನ್ನಡದಲ್ಲಿ ಒಂದು ಶಾಸ್ತ್ರೀಯ ನೆಲೆಯಾಗಿ ಇದುವರೆಗೂ ಬೆಳೆದು ಬರಲಿಲ್ಲ (ಕೆಲವು ಅಪವಾದಗಳನ್ನು ಹೊರತುಪಡಿಸಿ ಈ ಮಾತನ್ನು ಹೇಳುತ್ತೇನೆ). ಆದರೆ ಸಾಹಿತ್ಯದಲ್ಲಿ ಹಾಗೂ ನುಡಿ ಮತ್ತು ಸಂಸ್ಕ್ರುತಿ ಕುರಿತ ಬರೆಹಗಳಲ್ಲಿ ಈ ನುಡಿ ತತ್ವಶಾಸ್ತ್ರೀಯ ಚಿಂತನೆಗಳು ಪ್ರಕಟಗೊಂಡಿರುವುದನ್ನು ಕಾಣಬಹುದು.
ಇಂತಹ ಮೆಟಾಲಿಂಗ್ವಿಸ್ಟಿಕ್ ಚಿಂತನೆಗಳ ಹಿಂದೆ ಸಮೂಹಗಳ ಏಳ್ಗೆಯನ್ನು ಕಾಣುವ ಇರಾದೆಯು ಅಂತಸ್ಥವಾಗಿರುತ್ತದೆ. ಇಂತಹ ಚಿಂತನೆಗಳು, ಪ್ರಜಾಪ್ರಭುತ್ವದ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಅಂದರೆ ಆಯಾ ಸಮಾಜಿಕರ ಅಭಿವ್ಯಕ್ತಿಗಳ ನಂಬಿಕೆಯನ್ನು ವೈಚಾರಿಕಗೊಳಿಸುವ ನೆಲೆಯಾಗಿರುತ್ತವೆ. ಸಮೂಹಗಳ ಒಡಲಲ್ಲಿ ಹುದುಗಿರುವ ಅಸಮಾನ ರಚನೆಗಳ ವಿನ್ಯಾಸಗಳನ್ನು ವೈಚಾರಿಕವಾಗಿ ಸರಿಪಡಿಸುವ ಮಾದರಿಗಳು ನುಡಿಯ ಇಂತಹ ತಾತ್ವಿಕ ಚೌಕಟ್ಟುಗಳಲ್ಲಿ ಸಿಗುತ್ತವೆ.
ಮನುಷ್ಯ ತನ್ನ ಬುದ್ಧಿಯನ್ನು ಯಥಾವತ್ತಾಗಿ ಬಳಸುವುದಕ್ಕೆ ಮತ್ತು ಆ ಹೊತ್ತಿನ ವಾಸ್ತವವನ್ನು ಅರಿವುದಕ್ಕೆ ಮಾತ್ರ ಸೀಮಿತನಾಗದೇ, ಇಂತಹ ಯಥಾಸ್ಥಿತಿ ಮತ್ತು ವಾಸ್ತವವನ್ನು ಬದಲಾಯಿಸುವ ನಿಲುವುಗಳನ್ನು ಹೊಂದಿರುತ್ತಾನೆ. ಗ್ರಹಿಕೆಯ ಮೂಲತತ್ವಗಳ ಬೆಳವಣಿಗೆ, ಬದಲಾವಣೆ ಹಾಗೂ ವೈಚಾರಿಕಗೊಳಿಸುವ ಮಾದರಿಗಳು ನುಡಿಯಿಂದಲೇ ಮೊದಲಾಗುತ್ತವೆ.
ಸಾಂಸ್ಕ್ರುತಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ರಾಂತಿಗಳನ್ನು ನಿರಂತರಗೊಳಿಸಲು ನುಡಿಯ ಈ ವೈಚಾರಿಕ ಮಾದರಿಗಳು ಯಾವತ್ತಿಗೂ ನೆರವಾಗುತ್ತವೆ. ಅರವತ್ತರ ದಶಕದಲ್ಲಿ ಯುರೋಪಿನ ಚಿಂತನೆಯ ಮಾದರಿಗಳಲ್ಲಿ ತಲೆಯೆತ್ತಿದ ಇಂತಹ ಪ್ರಕ್ರಿಯೆಯನ್ನೇ ಭಾಷಿಕ ತಿರುವು (ಲಿಂಗ್ವಿಸ್ಟಿಕ್ ಟರ್ನ್) ಎಂದು ಗುರುತಿಸಿರುವುದನ್ನು ಕಾಣಬಹುದು.
ಮಾನವ ಇಲ್ಲವೇ ಸಮೂಹಗಳು ಚರಿತ್ರೆಯ ಉತ್ಪನ್ನ ಹಾಗೂ ಚರಿತ್ರೆಗಳೇ ಸಮೂಹಗಳನ್ನು ರೂಪಿಸುತ್ತವೆ ಎಂಬ ಸರಳವಾದ ನಂಬಿಕೆಯನ್ನು, ಬದಲಾಯಿಸುವ ನೆಲೆಗಳು ಇಂತಹ ಭಾಷಿಕ ತಿರುವಿನಲ್ಲಿ ಹುದುಗಿರುತ್ತವೆ. ಪರಿಣಾಮವಾಗಿ ಚರಿತ್ರೆ ಮತ್ತು ಚರಿತ್ರೆಯ ತಾತ್ವಿಕ ಚೌಕಟ್ಟುಗಳನ್ನು ಮರುಕಟ್ಟಲು ಸಾಧ್ಯವಾಗುತ್ತದೆ.
ಸಾಮಾಜಿಕ ಮತ್ತು ರಾಜಕೀಯ ಪಲ್ಲಟವನ್ನು ನೆಲೆಗೊಳಿಸುವ ಬಗೆಯೇ ಈ ಭಾಷಿಕ ತಿರುವುಗಳ ಮುಖ್ಯ ಗುರಿಯಾಗಿರುತ್ತದೆ. ಅಲ್ಲಮನ ಈ ಮೇಲಿನ ವಚನವು ಕೂಡ ಇಂತಹ ತಿಳಿವನ್ನೇ ಮಂಡಿಸುತ್ತದೆ. ಆದರೆ ಈ ಬಗೆಯ ಸಾಹಿತ್ಯಕ ಪರಿಕರಗಳು ಅರಿವಿನ ಆಕರಗಳಾಗಿ ಮಾನ್ಯತೆ ಪಡೆಯದೆ ಇರುವುದರಿಂದ, ಅವುಗಳೊಳಗಿನ ಚಿಂತನೆ ಮತ್ತು ಚಿಂತನೆಯನ್ನು ಕಟ್ಟುವ ಪರಿಕರಗಳು ಕೇವಲ ರಸಾನುಭವಕ್ಕೆ ಸೀಮಿತವಾಗಿವೆ.
ಜ್ಞಾನಮೀಮಾಂಸೆ ಎಂಬುದು ಸಮುದಾಯಗಳ ವಿವೇಕಕ್ಕೆ ಹೊರತಾದ ಚೌಕಟ್ಟು ಎಂಬ ನಂಬಿಕೆಯೇ ಸಾಮಾಜಿಕ-ಮಾನಸಿಕ ಬಿರುಕುಗಳಿಗೆ ಕಾರಣವಾಗುತ್ತದೆ. ಒಂದೊಂದು ನುಡಿ ಸಮುದಾಯದ ಲಾಂಗ್ವೇಜ್ ಸೈಕಾಲಜಿ ಮತ್ತು ಲಾಂಗ್ವೇಜ್ ಸೋಶಿಯಾಲಜಿಯನ್ನು ಆಳವಾದ ಓದಿಗೆ ಒಗ್ಗಿಸದೇ ಹೋದರೆ, ಅಂತಹ ಸಮುದಾಯ ಯಾವುದೇ ಏಳ್ಗೆಯನ್ನು ಕಾಣಲಾರದು ಹಾಗೂ ಬದುಕಿನ ಮುಂಗಾಣ್ಕೆಯನ್ನೂ ಹೊಂದಲು ಸಾಧ್ಯವಾಗಲಾರದು. ಇಂತಹ ಇಕ್ಕಟ್ಟುಗಳಿಂದ ಬಿಡಿಸಿಕೊಳ್ಳಲು ನುಡಿ ಮತ್ತು ನುಡಿಯ ಓದುಗಳನ್ನು ನಾವೆಲ್ಲರೂ ನಂಬಬೇಕಿದೆ.
ಯಾವುದೇ ವಿದ್ಯಮಾನವು ರಾಜಕೀಯ ಮಹತ್ವವನ್ನು ಪಡೆದುಕೊಳ್ಳುತ್ತದೆ ಅಂದರೆ, ಅದೊಂದು ಸಾಮಾಜಿಕ ಆದ್ಯತೆಯ ಬಗೆಯಾಗಿ ಮಾತ್ರವೇ ಹೊರತು, ಬೇರೆ ಯಾವುದೇ ಸಾಮಾಜಿಕ ಬೇಡಿಕೆಗಳನ್ನು ಈಡೇರಿಸುವ ಇರಾದೆಯಿಂದಲ್ಲ. ಎತ್ತುಗೆಗಾಗಿ ಕನ್ನಡ ಮಾಧ್ಯಮವನ್ನು ಕುರಿತ ಚರ್ಚೆಗಳು ರಾಜಕೀಯ ಮಹತ್ವವನ್ನು ಗುರಿಯಾಗಿಟ್ಟುಕೊಂಡು ಮುಂಚೂಣೆಗೆ ಬರುತ್ತವೆ. ಇಲ್ಲವಾದರೆ ಕೇವಲ ರಾಜಕೀಯ ಸರಿತನವನ್ನು ತೋರಿಸುವ ತುಡಿತದಿಂದ ಕೂಡಿರುತ್ತವೆ.
ಆದರೆ ಕನ್ನಡ ಮಾಧ್ಯಮವನ್ನು ನೆಲೆಗೊಳಿಸುವ ಮೂಲಕ ಯಾವ ಬಗೆಯ ಸಾಮಾಜಿಕ ಮಹತ್ವ, ಪರಿಣಾಮ ಮತ್ತು ಪ್ರಭಾವವನ್ನು ಉಂಟುಮಾಡಬಹುದು ಎಂಬ ಸಂಗತಿಯು ಈ ಚರ್ಚೆಗಳಲ್ಲಿ ಕಾಣೆಯಾಗಿರುತ್ತದೆ. ನುಡಿಯೆಂಬುದೇ ಬದುಕಿನ ವಿನ್ಯಾಸವೆಂದು ತಿಳಿದವರಿಗೆ ನುಡಿಯ ಮಹತ್ವದ ಅರಿವು ಬೇರೆಯಾಗಿರುತ್ತದೆ. ಆದರೆ ಬದುಕಿನ ಹಲವು ವಿದ್ಯಮಾನಗಳಲ್ಲಿ ನುಡಿಯೂ ಒಂದು ಎಂದಾದರೆ, ಈ ಬಗೆಯ ತಿಳಿವಿನ ಪರಿಣಾಮದಿಂದ ನುಡಿಗೆ ಇರುವ ಮಹತ್ವ ಕಳೆದು ಹೋಗುತ್ತದೆ.
ನುಡಿಯ ಮಹತ್ವವನ್ನು ಮಾತ್ರ ಹೇಳುವುದು ನನ್ನ ಗುರಿಯಲ್ಲ ಬದಲಾಗಿ ಬದುಕು ಮಹತ್ವವನ್ನು ಪಡೆಯಬೇಕಾದರೆ, ಅಂತಹ ಮಹತ್ವವೊಂದು ಎಲ್ಲಿ ಅಡಕವಾಗಿರುತ್ತದೆ ಎಂಬುದನ್ನು ಅರಿಯುವುದಾಗಿದೆ. ಇದಕ್ಕೆ ಒತ್ತಾಸೆಯಾಗಿರುವುದು ನುಡಿಯೇ ಆಗಿರುತ್ತದೆ. ಅಂದರೆ ನುಡಿ ಹಾಗೂ ಸಂಸ್ಕ್ರುತಿಗಳನ್ನು ಬೆಸೆಯುವ ಮೂಲತತ್ವಗಳನ್ನು ಅರಿಯುವ ಬಗೆಯೇ ಇಂತಹ ವಿಶ್ಲೇಷಣೆಗಳ ಮೊದಲ ಕಾಳಜಿ ಆಗಿರುತ್ತದೆ.
ತಿಳಿವನ್ನು ಮಂಡಿಸುವ ಹಾಗೂ ತಿಳಿವನ್ನು ವಿಶ್ಲೇಷಿಸುವ ಬಗೆಗಳ ನಡುವೆ ಗೆರೆ ಎಳೆಯಲು ಸಾಧ್ಯವಿಲ್ಲ. ಆದರೆ ಆಯಾ ಸಮುದಾಯದ ತಿಳಿವಿನ ದಾರಿಗಳನ್ನು ಮರೆಸುವ ನೆಲೆಗಳು ಎಂತಹವು ಎಂಬುದನ್ನು ಮಾತ್ರ ಗೆರೆ ಎಳೆದು ತೋರಿಸಬಹುದು ಎಂಬ ದಿಟವನ್ನು ಅಲ್ಲಮನ ಈ ವಚನವು ಗಟ್ಟಿಯಾಗಿ ಹೇಳುತ್ತದೆ. ನುಡಿಯ ಮಹತ್ವವನ್ನು ಮರೆತವರು, ಅದನ್ನು ಮನಗಾಣಬೇಕಾದ ಅನಿವಾರ್ಯ ಎಷ್ಟೊಂದು ಅಗತ್ಯವಿದೆ ಎಂಬುದನ್ನು ಈ ಚರ್ಚೆಗಳು ನೆನಪಿಸುತ್ತವೆ.
ಸಾಂಸ್ಕ್ರುತಿಕ ನೆನಪು ಮತ್ತು ಮರೆವುಗಳ ನಡುವಣ ತಿಕ್ಕಾಟ ಕೇವಲ ಒಂದು ಕಾಲಘಟ್ಟದ ಪ್ರಶ್ನೆ ಮಾತ್ರವಲ್ಲ, ಸಮೂಹಗಳ ಸಾಂಸ್ಕ್ರುತಿಕ ಹಾಗೂ ರಾಜಕೀಯ ಗುರುತಿನ ಚರಿತ್ರೆಯನ್ನು ನಿರ್ನಾಮಗೊಳಿಸುವ ಬಗೆಯೂ ಆಗಿರುತ್ತದೆ. ಮರೆವು, ನೆನಪು ಮತ್ತು ಮಾಯೆಯ ರೂಪಕವಾಗಿ ನುಡಿಯೊಂದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅಲ್ಲಮ ತನ್ನೀ ವಚನದಲ್ಲಿ ಹೇಳುತ್ತಾನೆ.
ಬಹುತೇಕವಾಗಿ ಅಲ್ಲಮನ ವಚನಗಳು ಜನರಲ್ಲಿ ಕೇವಲ ತಿಳಿವನ್ನು ಮೂಡಿಸುವ ಇರಾದೆಯಿಂದ ಹುಟ್ಟಿಕೊಂಡಂತವುಗಳಲ್ಲ. ಬದಲಾಗಿ ತಿಳಿವಿನ ತಿಳಿವನ್ನು, ಅರಿವಿನ ಅರಿವನ್ನು ಕುರಿತು ಚಿಂತಿಸುವ ನೆಲೆಯಲ್ಲಿರುತ್ತವೆ. ಈ ಬಗೆಯ ಆಲೋಚನೆಯ ಕ್ರಮವನ್ನು ಕೇವಲ ಒಂದು ಜಿಜ್ಞಾಸೆಯ ವಿದ್ಯಮಾನವಾಗಿ ನೋಡಲಾಗುತ್ತದೆ.
ಆದರೆ ಅಲ್ಲಮನ ಗುರಿ ಇರುವುದು ಬದುಕಿನ ನೋಟಕ್ರಮದೊಳಗೆಯೇ ಜಿಜ್ಞಾಸೆಯೊಂದು ವಿಕಾಸಗೊಳ್ಳುವ ಹಾಗೂ ಅಂತಹ ಪ್ರಕ್ರಿಯೆಯಿಂದ ಉಂಟಾಗುವ ಪರಿಣಾಮಗಳನ್ನು ಗೊತ್ತುಪಡಿಸುವ ನಿಲುವಾಗಿದೆ. ಯಾವುದೇ ಕ್ರಿಯೆ ನೇರವಾಗಿ ಪರಿಣಾಮವನ್ನು ಸೂಚಿಸಲಾರದು. ಹೊರತಾಗಿ ಒಂದೊಂದು ಕ್ರಿಯೆಯು ಉಂಟಾಗಬಹುದಾದ ವಿದ್ಯಮಾನವೊಂದನ್ನು ಮಾತ್ರ ಸೂಚಿಸುತ್ತದೆ. ಹಾಗಾಗಿ ಪರಿಣಾಮವೆಂಬುದು ಕ್ರಿಯೆಯೊಳಗೆಯೇ ಅಂತಸ್ಥವಾಗಿರುವುದಿಲ್ಲ ಎಂಬ ದಿಟವನ್ನು ಈ ಮಾತುಗಳು ನಿಚ್ಚಳಪಡಿಸುತ್ತವೆ.
ಆದರೆ ಯಾವುದೇ ಕ್ರಿಯೆಯಿಂದ ಹೊರಹೊಮ್ಮಬಹುದಾದ ಪರಿಣಾಮದ ವಿನ್ಯಾಸಗಳನ್ನು, ಗೆರೆಕೊರೆದು ತೋರಿಸುವ ವಿವೇಕ ಅಲ್ಲಮನ ವಚನಗಳಿಗೆ ಇರುತ್ತದೆ. ಎತ್ತುಗೆಗಾಗಿ ‘ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ?’ ಎಂಬೀ ರೂಪಕವನ್ನು ನಿಗಾಯಿಟ್ಟು ನೋಡಿದರೆ, ಅಲ್ಲಮನ ವಚನಗಳ ಕಾಣ್ಕೆಯನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಮಂಜು ಮತ್ತು ಬಿಸಿಲು ಇವುಗಳು ಕೇವಲ ವೈರುಧ್ಯದ ನಿಲುವುಗಳಲ್ಲ. ಬದುಕಿನ ವಿನ್ಯಾಸದೊಳಗಿನ ವಿರೋಧಭಾಸವನ್ನು ಅರಿಯುವ ಮಾದರಿಯೆಂದೇ ಹೇಳಬೇಕು.
ಏಕೆಂದರೆ ಮಂಜು ಮತ್ತು ಬಿಸಿಲುಗಳು ಒಡಗೂಡಿದರೆ, ಪರಿಣಾಮ ಏನಾಗುತ್ತೆ? ಎಂಬುದಷ್ಟನ್ನೇ ಅಲ್ಲಮ ಹೇಳುತ್ತಿಲ್ಲ, ಬದಲಾಗಿ ಇಂತಹ ಪರಿಣಾಮಗಳ ಮೂಲಕ ಆಯಾ ವಸ್ತು ಇಲ್ಲವೇ ವಿದ್ಯಮಾನಗಳ ಅಸ್ತಿತ್ವದ ಗುರುತುಗಳನ್ನು ಮುಂಗಾಣಿಸುವ ಬಗೆಯೂ ಆಗಿರುತ್ತದೆ. ಆದ್ದರಿಂದ ಯಾವುದು ಏನನ್ನು, ಹೇಗೆ ನಿಯಂತ್ರಿಸುತ್ತದೆ ಮತ್ತು ಅವುಗಳ ಅಸ್ತಿತ್ವದ ಚಹರೆಗಳು ಎಂತಹವು ಅನ್ನುವುದು ಅಲ್ಲಮನ ವಚನದ ಈ ಸಾಲವೊಂದು ಎತ್ತಿ ತೋರಿಸುತ್ತದೆ.
ಆದರೆ ನಾನಿಲ್ಲಿ ಅಲ್ಲಮನನ್ನು ಈ ಸೀಮಿತ ತಾತ್ವಿಕ ಚೌಕಟ್ಟಿಗೆ ಕಟ್ಟಿ ಹಾಕಲಾರೆ. ಹೇಗೆ ನುಡಿಯೊಂದು ಅರಿವಿನ ಕುರುಹು ಆಗಬಲ್ಲದು ಎಂಬುದನ್ನು ತಿಳಿಯುವ ಜರೂರಿದೆ. ಆದ್ದರಿಂದ ನುಡಿಗೂ ಮತ್ತು ಬದುಕಿಗೂ ಇರುವ ನಂಟಸ್ತಿಕೆಯನ್ನು ಅಲ್ಲಮನ ಈ ವಚನದ ಮೂಲಕ ತಿಳಿಯುವುದಾಗಿದೆ. ಮತ್ತು ಅಲ್ಲಮನ ಮಾತುಗಳು ಅತ್ಯಂತ ಪರಿಣಾಮಕಾರಿಯಾಗಿ ಏನನ್ನು ಹೇಳುತ್ತವೆ ಎಂಬುದು ಇಲ್ಲಿ ಅಮೂರ್ತವಾಗಿದೆ ದಿಟ.
ಆದರೆ ಈ ಅಮೂರ್ತತೆ ಇಲ್ಲಿ ಒಂದು ಸಾಮಾಜಿಕ ಒತ್ತಡವಾಗಿ ನುಡಿಯೊಂದರ ಇಡೀತನವನ್ನು ಸಾಮಾಜಿಕ ಅಸ್ಮಿತೆಯ ಸಂಕೇತವನ್ನಾಗಿ ಕಾಣಿಸುತ್ತದೆ. ಆದರೆ ಇಂತಹ ಸಮೀಕರಣವನ್ನು ಕೇವಲ ಒಂದು ಸೂಚಕವನ್ನಾಗಿ ಮಾತ್ರ ಇಲ್ಲಿ ಗಮನಿಸಬೇಕಾದ ಅಗತ್ಯವಿದೆ. ಸಾಮಾಜಿಕತೆ ಎಂಬುದನ್ನು ನಾವು ಬಿಡಿಸಿ ನೋಡಬೇಕಾದರೆ ನುಡಿಯನ್ನು ಹಾಗೂ ಅದು ಕಟ್ಟಿಕೊಡುವ ತಾತ್ವಿಕತೆಯನ್ನು ಅರಿಯಲೆಬೇಕಾದ ಜರೂರಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ5 days agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ6 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
-
ದಿನದ ಸುದ್ದಿ7 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
-
ದಿನದ ಸುದ್ದಿ1 day agoಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ


