Connect with us

ದಿನದ ಸುದ್ದಿ

ಪ್ರಬುದ್ಧರೆನ್ನುವ ಪ್ರಭುಗಳಿಗೆ ಅತೀವ ನಮನ..!

Published

on

ಹರ್ಷಿತಾ ಕೆರೆಹಳ್ಳಿ
  • ಹರ್ಷಿತಾ ಕೆರೆಹಳ್ಳಿ

ಅದೆಷ್ಟೇ ತಪ್ಪಿಸಿದರೂ ಬೆಂಬಿಡದೆ ಬೆನ್ನೆತ್ತಿದೆ ಈ ವಿಚಾರ. ಸ್ವಚ್ಛಂದ ಆಕಾಶ, ನಿರ್ಮಲ ಗಾಳಿ, ಶುದ್ಧ ಜಲ, ಇರಲೊಂದು ಗೂಡು, ಬಂಧು ಮಿತ್ರರ ಒಡನಾಟ, ನಮ್ಮವರು , ತಮ್ಮವರು ಎಂಬ ವಿಶ್ವಾಸ ಎಲ್ಲವು ಸುಗಮವಾಗಿ ಸಾಗುತ್ತಲೇ ಇತ್ತು. ಅದೆಲ್ಲಿಂದ ಬಂದಿತೋ? ಮಹಾಮಾರಿ. ತಂಬೆಲರು ತುಳುಕುವ ಜಾಗದಲ್ಲೆಲ್ಲಾ ನೋವ ಹನಿ, ಜೀವ ಹಾನಿ. ಬೇಡೆಂದರು ಬಿಡುತ್ತಿಲ್ಲ ಸಾಕೆಂದರು ನಿಲ್ಲುತ್ತಿಲ್ಲ ಆಕ್ರಂದನ.

ಹಳ್ಳಿಯ ಜೀವನ ನೆಮ್ಮದಿಯ ಜೀವನ, ಅದೊಂದು ಸ್ವರ್ಗವೇ ಸರಿ ಎಂಬಂತಿದ್ದ ದಿನ ಈಗ ಮರುಭೂಮಿಯಂತಾಗಿದೆ. ಇಲ್ಲಿನ ಹಾಡು , ಹರಟೆ ,ಮೋಜು ಎಲ್ಲವು ಮುಸುಕು ಹಾಕಿಕೊಂಡು ತಮ್ಮ ತಮಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿಕೊಂಡಿರುವಂತೆ ಭಾಸವಾಗುತ್ತಿದೆ.

ಚಂದದೊಂದು ಸಂಸಾರ ಹೆಂಡತಿ, ಗಂಡ, ಇಬ್ಬರು ಮಕ್ಕಳು. ದಿಢೀರನೆ ಕರೋನ ಎಂಬ ಬರಸಿಡಿಲು ಆ ಸಂಸಾರಕ್ಕೆ ಬಡಿದಾಗ ಮನಸ್ಸೇ ಅಯೋಮಯವಾದಂತಾಯಿತು. ಮೊದಲು ಅಷ್ಟೇನು ಸ್ಥಿತಿ ಗಂಭೀರವಾಗಿರಲಿಲ್ಲ ಏಕೆಂದರೆ ಆ ವ್ಯಕ್ತಿಗೆ ಯಾವುದೇ ಬೇರೆ ರೀತಿಯ ಖಾಯಿಲೆಯಾಗಲಿ, ತೊಂದರೆಯಾಗಲಿ ಇರಲಿಲ್ಲ. ಮೂರು ದಿನ ಚಿಕಿತ್ಸೆ ಪಡೆದು ಮೊದಲಿನಂತೆ ಹಿಂತಿರುಗಿ ಬಂದರು.

ಧಡಕ್ಕನೆ ಅದೇ ರಾತ್ರಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲತೊಡಗಿದರು ತಕ್ಷಣವೇ ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರು. ಆ ವ್ಯಕ್ತಿಗೆ ಅದೇನು ನೋವೋ ಏನೋ? ತಿಳಿಯದು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗುತ್ತಿರಲಿಲ್ಲವೆಂದು ನನ್ನ ಭಾವನೆ. ಕೃತಕ ಉಸಿರಾಟದ ವ್ಯವಸ್ಥೆಯಿದ್ದರೂ ಅವರ ಸ್ಥಿತಿ ಗಂಭೀರವಾಗಿಯೇ ಇದೆ. ಅದೆಷ್ಟೋ ದಿನಗಳು ಆಸ್ಪತ್ರೆಯಲ್ಲಿ ಕಳೆಯಿತು. ದಿಢೀರನೆ ಆಸ್ಪತ್ರೆಯಿಂದ ಕರೆ ಬಂದಿತು.

ನಿಮ್ಮ ಮನೆಯವರಿಗೆ ಚಿಕಿತ್ಸೆ ಫಲಿಸುತ್ತಿಲ್ಲ , ಸ್ಥಿತಿ ಚಿಂತಾಜನಕವಾಗಿದೆ ತಕ್ಷಣವೇ ಪ್ಲಾಸ್ಮ ಬೇಕಾಗಿದೆ ಶೀಘ್ರವಾಗಿ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದರು.
ಪಾಪ! ಆ ವ್ಯಕ್ತಿಯ ಹೆಂಡತಿಗೆ ದಿಕ್ಕೇ ತೋಚದಂತಾಗಿ ಗೋಳಾಡಲಾರಂಭಿಸಿದರು. ನಿಜಕ್ಕೂ ಆ ಸ್ಥಿತಿ ಯಾರಿಗೂ ಬರಬಾರದೆಂದಷ್ಟೇ ಕೇಳಿಕೊಳ್ಳಲು ಸಾಧ್ಯವಾಗಿದ್ದು, ಏಕೆಂದರೆ ಎಷ್ಟೇ ಸಮಾಧಾನದ ಮಾತು ಅವರ ಜೀವ ಉಳಿಸಲು ಸಾಧ್ಯವಾಗದು. ಪರಿಸ್ಥಿತಿ ಬಿಗುಡಾಯಿಸುತ್ತಲೇ ಇದೆ ಆದರೆ ಪ್ಲಾಸ್ಮಾದ ವ್ಯವಸ್ಥೆ ಆಗುತ್ತಿಲ್ಲ .

ನಾನು ಎಲ್ಲರನ್ನು ಸಂಪರ್ಕಿಸಿದೆ ಆದರೆ ಎಲ್ಲರಿಂದಲೂ ಬಂದ ಉತ್ತರ ಒಂದೇ. ಇಲ್ಲ ಮೇಡಂ ನಮ್ಮ ಮನೆಯವರಿಗೆ ಬೇಕು, ನಮ್ಮ ಸ್ನೇಹಿತರಿಗೆ ಬೇಕು ಕೊಡಲಾಗುವುದಿಲ್ಲವೆಂದು. ಆ ತಾಯಿಯ ರೋಧನೆ ನೋಡಲಾಗುತ್ತಿಲ್ಲ . ಅವರ ಮಕ್ಕಳಿಗಂತೂ ಇದರ ಪರಿವೇ ಇಲ್ಲ . ಆಟವಾಡುವ ವಯಸ್ಸು ಅವಕ್ಕೆ. ಆಗ ನನಗನಿಸಿದ್ದು ಇಷ್ಟೇ . ಎಲ್ಲಿಯ ಜೀವನ? ಎಲ್ಲಿಯ ಹಣ? ಎಲ್ಲಿಯ ಸೌಂದರ್ಯ? ಎಲ್ಲವು ಶೂನ್ಯ. ಜೀವ ಉಳಿಸಲಾಗದ ನಿಧಿ ಇದ್ದರೇನು? ಜೀವಕ್ಕೆ ಬೆಲೆಯೆ ಇಲ್ಲ.

ಹೇಗೋ ದೇವರ ನಿಮಿತ್ತವೋ ಏನೋ ಅವರ ತೊಳಲಾಟಕ್ಕೆ ಮರುಗಿಯೋ ಏನೋ ಪ್ಲಾಸ್ಮ ದೊರಕಿತು. ಚಿಕಿತ್ಸೆ ಕೊಂಚ ಫಲಕಾರಿಯಾದಂತಾಗಿ ಅವರ ಮನೆಯವರೆಲ್ಲಾ ನಿಟ್ಟುಸಿರು ಬಿಟ್ಟರು. ಆದರೂ ಅವರಿನ್ನು ಸುಧಾರಿಸಿಲ್ಲ . ಆ ತಾಯಿಗೆ ಅಷ್ಟಾಗಿ ಪ್ರಪಂಚದ ಬಗ್ಗೆ ಅರಿವಿರಲಿಲ್ಲ ನಮಗೆ ಕರೆ ಮಾಡಿ ಏನದರೂ ಗೊತ್ತಾಯಿತ? ಡಿಸ್ಚಾರ್ಜ್ ಯಾವಾಗ? ಹೇಗಿದ್ದಾರೆ? ಎಂದು ಕೇಳಿದರೆ ಮನ ಕಲಕುವಂತಿರುತ್ತದೆ. ಆ ವ್ಯಕ್ತಿಯನ್ನು ಸಂಪರ್ಕಿಸಲು ಯಾವುದೇ ಮಾರ್ಗವಿಲ್ಲ . ನೋಡಿ ಎಂತಹ ಸ್ಥಿತಿ ತಮ್ಮವರಿಂದ ಸಾಂತ್ವಾನ ಕೇಳುವ ಭಾಗ್ಯ ಆ ವ್ಯಕ್ತಿಗಿಲ್ಲ. ಇಲ್ಲಿ ಹೆಂಡತಿಯ ತೊಳಲಾಟ ತಪ್ಪುತ್ತಿಲ್ಲ.

ಎಲ್ಲಿ ನೋಡಿದರೂ ಪಾಸಿಟಿವ್ ಕೇಸ್ಗಳು , ಸೀಲ್ಡೌನ್, ಕಂಟೈನ್ಮೆಂಟ್ ಜೋನ್ಗಳು . ಒಂದು ಕ್ಷಣ ಜೀವನವನ್ನೇ ತಬ್ಬಿಬ್ಬಾಗಿಸಿ ಬಿಡುತ್ತದೆ. ಇನ್ನೂ ಆ ಹೆಂಡತಿ ತನ್ನ ಗಂಡನ ದಾರಿಯನ್ನೇ ಎದುರು ನೋಡುತ್ತ ತನ್ನ ಆರೋಗ್ಯವನ್ನು ಹದಗೆಡಿಸಿಕೊಂಡಿದ್ದಾರೆ. ಇಂತಹ ಸ್ಥಿತಿ ನಿಮಗು ಎದುರಾಗಬಹುದು ನೀವು ನಿರ್ಲಕ್ಷ್ಯ ತೋರಿದರೆ. ಒಂದು ಕ್ಷಣ ಯೋಚಿಸಿ ಆ ಸ್ಥಿತಿ ನಿಮ್ಮದಾಗಿದ್ದರೇ? ನಿಮ್ಮ ಜೊತೆಗೆ ನಿಮ್ಮ ಮನೆಯವರ ಜೀವನವು ಹಾಳಾಗುತ್ತದೆ. ಒಮ್ಮೆಯಾದರೂ ನಿಮ್ಮವರ ಖುಷಿಗಾಗಿ ಒಳಿತು ಮಾರ್ಗದಲ್ಲಿ ನಡೆಯಿರಿ.

ಈ ಚಿಂತಾಜನಕ ಸ್ಥಿತಿಯಲ್ಲಿ ನಮ್ಮವರೆ ನಮ್ಮ ಬಳಿ ಬರಲು ಹಿಂಜರಿಯುತ್ತಾರೆ ಅಂತಹುದರಲ್ಲಿ ಯಾವುದೇ ರಕ್ತ ಸಂಬಂಧವಿಲ್ಲ , ಮಿತ್ರರಲ್ಲ. ತಮ್ಮ ಜೀವನವನ್ನು ಲೆಕ್ಕಿಸದೆ ತಮ್ಮವರಿಂದ ದೂರ ಸರಿದು ಹಗಲಿರುಳೆನ್ನದೆ ಅದೆಷ್ಟೋ ಸರ್ಕಾರಿ ನೌಕರರು ಹೊತ್ತೊತ್ತಿಗೆ ಊಟ, ತಿಂಡಿ, ನೀರು , ನಿದಿರೆ ಇಲ್ಲದೆ ಆಸ್ಪತ್ರೆ ಸಿಬ್ಬಂದಿಗಳು, ಆರಕ್ಷಕರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಿಗರು ಹೀಗೆ ಹಲವಾರು ಮಂದಿ ತಮ್ಮ ಜೀವದ ಹಂಗು ತೊರೆದು ನಮ್ಮಗಳ ಹಿತಕ್ಕಾಗಿ ಪರಿಶ್ರಮಿಸುತ್ತಿದ್ದಾರೆ.

ಅದೆಲ್ಲ ಒಂದೆಡೆಯಾದರೆ ದೇಶಕ್ಕಾಗಿ ನೆತ್ತರನ್ನು ಲೆಕ್ಕಿಸದೆ ಮಳೆ , ಬಿಸಿಲು, ಚಳಿ ಯೆನ್ನದೆ ದೇಶ ಕಾಯುವ ವೀರ ಯೋಧರಿಗೆಲ್ಲರಿಗು ಅನಂತ ಕೋಟಿ ನಮನ. ಅವರೆನಾದರೂ ನನ್ನಿಂದ ಆಗದು ದೇಶ ಕಾಯಲು ಎಂದು ಕೈ ಚೆಲ್ಲಿ ಕುಳಿತ್ತಿದ್ದರೆ ಈ ದಿನ ನಾವ್ಯಾರು ದಿನ ಉದಯಿಸೋ ಸೂರ್ಯನನ್ನ ನೋಡುವಂತಾಗುತ್ತಿರಲಿಲ್ಲ. ಅವರೆಲ್ಲರು ತಮ್ಮ ಮನೆಯವರಿಂದ ದೂರವಿದ್ದೂ, ಹೆಂಡತಿ , ಗಂಡ, ಮಕ್ಕಳು, ಅಪ್ಪ, ಅಮ್ಮ , ಬಂಧು ಬಳಗ, ಮಿತ್ರರೊಡನೆ ಕಾಲ ಕಳೆಯಲು ಸಮಯವಿಲ್ಲ.

ಆದರೆ ರಾಜ್ಯದ ಜನತೆಗೆಲ್ಲ ಜನತಾ ಕರ್ಫ್ಯೂ ಆದೇಶಿಸಿ ಎಲ್ಲರನ್ನೂ ಮನೆಯಲ್ಲಿಯೇ ಇದ್ದೂ ಕೊರೋನ ಸರಪಳಿಯನ್ನು ಮುರಿಯಲು ಸಹಕರಿಸೆಂದು ಬೇಡಿಕೊಳ್ಳುತ್ತಿದ್ದರು ಸಹ, ಈ ಜನತೆ ನನಗಲ್ಲ ಹೇಳುತ್ತಿರುವುದು ನನಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ನಿಜಕ್ಕೂ ಈ ಘಟನೆಯನ್ನೂ ನೋಡಿದ ಬಳಿಕ ಕರುನಾಡ ಜನರ ಮೇಲಿದ್ದ ಪೂಜ್ಯ ಭಾವನೆ ಬೇಸರ ತರಿಸಿದೆ.

ನೀರು ಕೇಳಿದರೆ ಅಮೃತವನ್ನೇ ಕೊಡುತ್ತೇವೆಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಪಿಸುವ ಬದಲು ದಯಮಾಡಿ ದೇಶಕ್ಕಾಗಲಿ, ನಾಡಿಗಾಗಲಿ ಏನನ್ನು ಕೊಡದಿದ್ದರು ಸರಿಯೇ . ನಿಮ್ಮ ನಿಮ್ಮ ಮನೆಯಲ್ಲಿರಿ, ನಿಮ್ಮವರೊಂದಿಗೆ ಕಾಲ ಕಳೆಯಿರಿ. ಯಾರೊಬ್ಬರು ಕೊರೋನ ಪಾಸಿಟಿವ್ ರಿಪೋರ್ಟ್ ಕೊಡದಂತೆ ಸಹಕರಿಸಿ. ಇದು ನಿಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಂದು ಜೀವಕ್ಕೂ ಅಮೂಲ್ಯವಾದ ಬೆಲೆಯಿದೆ. ದಯಮಾಡಿ ನಿಮ್ಮ ಜೀವದ ಜೊತೆ ನಿಮ್ಮವರ ಜೀವವನ್ನು ಕಾಪಾಡಿ.

ಈ ಮುಂದಿನ ೧೫ ದಿನಗಳಲ್ಲಿ ಕಟ್ಟು ನಿಟ್ಟಾಗಿ ನಿಯಮ ಪಾಲನೆ ಮಾಡಿದ್ದೇ ಆಗಿದ್ದಲ್ಲಿ ಕೋರೋನ ಸರಪಳಿಯನ್ನೂ ಖಂಡಿತವಾಗಿಯೂ ಮುರಿಯುವಲ್ಲಿ ಯಶಸ್ವಿಯಾಗುತ್ತೇವೆ .
ನನ್ನ ಮಾತಿಗಾದರೂ ಬೇಡ ಕನಿಷ್ಠ ದೇಶಕಾಯುವ ಯೋಧರಿಗಾಗಿ, ಕೊರೋನ ವಾರಿಯರ್ಸ್ ಗಳ ಪರಿಶ್ರಮಕ್ಕಾದರು ಬೆಲೆ ಕೊಟ್ಟು ಪ್ರಜ್ಞಾಪೂರಕವಾಗಿ, ವಿವೇಚನೆಯಿಂದ ನಡೆದುಕೊಳ್ಳಿ. ಭಾರತೀಯರಾದ ನಾವು ಪ್ರಬುದ್ಥರಾಗಿ ಆಲೋಚನೆಯಿಂದ ನಡೆಯಬೇಕಾಗಿದೆ.

ಅಷ್ಟೇನೂ ಸುಸಜ್ಜಿತ ವ್ಯವಸ್ಥೆಯಿಲ್ಲ , ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ , ವೆಂಟಿಲೇಟರ್ಗಳ ಕೊರತೆ, ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ , ನೀಡಿದ ಚಿಕಿತ್ಸೆ ಫಲಿಸುತ್ತಿಲ್ಲ. ಬೆಡ್ಗಳು ಸಿಗದೆ ಆಸ್ಪತ್ರೆಯ ಮುಂಬಾಗಿಲಲ್ಲೇ ಚಿಕಿತ್ಸೆಗಾಗಿ ಹಾತೊರೆತು ನಿಂತ ಅದೆಷ್ಟೋ ಜೀವಗಳು. ಯಾರ್ಯಾರ ಕೈ ಕಾಲಿಡಿದು ಚಿಕಿತ್ಸೆಗಾಗಿ ಹೋರಾಡುತ್ತಿರು ಜೀವಗಳು. ಅದೆಂಥಾ ಕ್ರೂರ ವಿಧಿಯಿರಬೇಕು. ಸಾಯುವಾಗ ನಮ್ಮವರ ಅಪ್ಪುಗೆ ಇಲ್ಲ , ಒಂದು ತೊಟ್ಟು ನೀರು ಕೊಡುವವರಿಲ್ಲ, ವಿಧಿ ವಿಧಾನಗಳ ಸಮಾಧಿಯಿಲ್ಲ, ಬಂಧು ಮಿತ್ರರ ಕಂಬನಿಯಿಲ್ಲ, ನಮ್ಮವರಿಂದ ಮಣ್ಣು ಮಾಡಿಸಿಕೊಳ್ಳುವಂತ ಪುಣ್ಯವೂ ಇಲ್ಲ.

ಯಾರ ಕೈಯಿಂದಲೋ ತೂದೆಸೆದು ಹಿಂತಿರುಗಿಯು ನೋಡದೆ ಬರುವವರಿಂದ ಅಂತಿಮ ಕಾರ್ಯವೂ ಇಲ್ಲದೆ ಪರಲೋಕ ಯಾನ ಮಾಡುವ ಜೀವ ಅದೇನು ಪಾಪ ಮಾಡಿತ್ತು? ಮೂಟೆಯ ಹಾಗೆ ಬಿಸಾಡಿ ಬೆಂಕಿ ಹೊತ್ತಿಸಿ ಕೈ ತೊಳೆದುಕೊಳುವರು. ಈ ಜನ ಇದಕ್ಕಾದರು ಎಚ್ಚೆತ್ತುಕೊಳ್ಳಬೇಕು.

ಮಾಧ್ಯಮಗಳಲ್ಲಿ ಇಂತಹ ನೈಜ್ಯ ಘಟನೆಗಳ ಅನಾವರಣ ಮಾಡುವುದಿಲ್ಲ. ಕೆಲಸಕ್ಕೆ ಬಾರದ ಮಾಹಿತಿಯನ್ನು ಪದೇ ಪದೇ ಹೇಳಿ ಹುಚ್ಚೆಬ್ಬಿಸುತ್ತಾರಷ್ಟೇ. ತಕ್ಷಣದ ವದಂತಿಯೆಂದರೆ ಆಮ್ಲಜನಕದ ಕೊರತೆಯಿಂದಾಗಿ 24 ಮಂದಿಯ ದುರ್ಮರಣ ಎಂದು ಒಂದೊಂದು ಚಾನಲ್ ನವರು ಒಂದೊಂದು ರೀತಿ ಚಿತ್ರಿಸುತ್ತಿದಾದರೆಯೆ ವಿನಃ ಪರಿಹಾರ ಮಾರ್ಗೋಪಾಯ ತೋರಿಸುತ್ತಿಲ್ಲ.

ಅವರಿಗೇನು ಬೇಕಾಗಿದ್ದು ವದಂತಿಯಷ್ಟೇ ಸಿಕ್ಕಿದ್ದನ್ನು 4 ದಿನವಾದರೂ ಬಿಡದೆ ಅದದೇ ವಿಚಾರವನ್ನು ಬೇರೆಯೇ ರೀತಿ ಚಿತ್ರಿಸುವುದನ್ನು ಬಿಟ್ಟು ಯಾವ ಆಸ್ಪತ್ರೆಯಲ್ಲಿ ಏನು ಕೊರತೆಯಿದೆ ? ಎಷ್ಟು ಬೆಡ್ ಖಾಲಿಯಿದೆ? ಎಲ್ಲೆಲ್ಲಿ ಪ್ಲಾಸ್ಮ ದೊರಕುತ್ತದೆ? ಈತರಹದ ಮಾಹಿತಿ ಬಿಟ್ಟು ಜನರ ಮಧ್ಯೆ ಬೆಂಕಿಯಿಲ್ಲದಿದ್ದರೂ ಇವರೇ ಕಿಡಿ ಹೊತ್ತಿಸಿ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡುತ್ತಾರಷ್ಟೇ. ನಿಮ್ಮ ನೆರವಿಗೆ ಯಾರು ಬರುವುದಿಲ್ಲ . ನಿಮ್ಮ ಹಿತ ನಿಮ್ಮ ಕೈಯಲ್ಲೇಯಿದೆ.

ನಿಮ್ಮವರ ಜೀವ ಹೋದ ಮೇಲೆ ಎಲ್ಲರನ್ನೂ ದೂರುವ ಬದಲು ಅರಿತು ನಡೆಯಿರಿ. ಅದೆಲ್ಲವೂ ಅಧಿಕಾರಿಗಳ ನಿರ್ಲಕ್ಷವೋ? ಆಸ್ಪತ್ರೆಗಳವರ ನಿರ್ಲಕ್ಷವೋ? ಅಥವಾ ರೋಗಿಗಳ ನಿರ್ಲಕ್ಷವೋ? ತಿಳಿಯದು. ನನ್ನ ಪ್ರಕಾರ ಇದಕ್ಕೆ ಯಾವ ರಾಜ್ಯ ಸರ್ಕಾರವಾಗಲಿ , ಮಂತ್ರಿಗಳಾಗಲಿ , ಅಧಿಕಾರಿಗಳಾಗಲಿ ಹೊಣೆಯಾಗುವುದಿಲ್ಲ. ಏಕೆಂದರೆ
ಅವರು ನಮ್ಮ ಒಳಿತಿಗಾಗೇ ಲಾಕ್ಡೌನ್ ಮಂತ್ರ ಪಠಿಸುತ್ತಿರುವುದು.

ಅವರ ಆದೇಶವನ್ನು ಕಟ್ಟುನಿಟ್ಟಿನಿಂದ ಪಾಲಿಸಿದ್ದರೆ ಇಂದು ಇಷ್ಟೆಲ್ಲಾ ಸಾವು ನೋವು ಜೀವ ಹಾನಿಯಾಗುತ್ತಿರಲಿಲ್ಲ. ಪ್ರಜ್ಞಾವಂತರಾಗಿ ನಡೆದಿದ್ದರೆ ಅದೆಂದೋ ಈ ಮಹಾಮಾರಿಗೆ ವಿದಾಯ ಹೇಳಬಹುದಿತ್ತು, ದುರದೃಷ್ಠ ವಶಾ ಕೋರೊನವೆ ನಮ್ಮೆಲ್ಲರಿಗು ವಿದಾಯ ಹೇಳುತ್ತಿದೆ. ಇದೆಲ್ಲದ್ದಕ್ಕೂ ನೇರವಾಗಿ ನಾವೇ ಹೊಣೆಯಾಗುತ್ತೇವೆ. ಸತ್ತ ನಂತರ ಅವರಿವರಿಗೆ ಶಪಿಸಿ ನೋವನುಭವಿಸುವ ಬದಲು ರೋಗಕ್ಕೆ ತುತ್ತಾದದಂತೆ ಎಚ್ಚರದಿಂದಿರೋಣ.

ದಯಮಾಡಿ ಈಗಲಾದರೂ ಅರಿತು ನಡೆಯಿರಿ. ಸತ್ತ ಮೇಲೆ ಯಾವುದು ಮರಳಿ ಬರುವುದಿಲ್ಲ. ಮನುಕುಲ ಉಳಿಸಿ , ಗಿಡ ಬೆಳೆಸಿ . ಸುಂದರ ಪರಿಸರ ನಿರ್ಮಾಣ ಮಾಡೋಣ . ಇಲ್ಲವಾದಲ್ಲಿ ನಿಮ್ಮವರ ಜೀವ ಕಳೆದುಕೊಳ್ಳುವ ಸ್ಥಿತಿ ಬರುವ ಸಮಯ ದೂರವೇನು ಇಲ್ಲ. ಎಲ್ಲರಿಗೂ ಸಮಸ್ಯೆ ಇದ್ದೇ ಇದೆ ಹಾಗಂತ ಅದನ್ನೇ ದೊಡ್ಡದಾಗಿ ಮಾಡಿ ವರ್ತಿಸುವುದಲ್ಲ. ಮೊದಲು ಜವಬ್ದಾರಿಯುತ ನಾಗರೀಕರಾಗಿ ನಡೆಯಿರಿ. ಕೊರೊನಾದ ಬಗ್ಗೆ ಭಯಬೇಡ ಎಚ್ಚರಿಕೆಯಿರಲಿ.
ಮಾಸ್ಕ್ ಧರಿಸಿ , ತೀರ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ , ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅಗತ್ಯ ಸುರಕ್ಷಾ ಕ್ರಮ ಪಾಲಿಸಿ.

“ಸ್ವರ್ಗ ನರಕ ಎಲ್ಲ ಮೇಲಿಲ್ಲ ಕೇಳು ಎಲ್ಲವೂ ಇಲ್ಲಿಯೆ ನಾವು ಮಾಡಿದ್ದನ್ನು ನಾವೆ ಅನುಭವಿಸಿ ತೀರಬೇಕು. ನಾನು ಎಂಬ ಅಹಃ ಮಣ್ಣು ಕೇಳು.”

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.

ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಸತಿ ಯೋಜನೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.

ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..

Published

on

1. ಸಮತೋಲಿತ ಆಹಾರ (Balanced Diet): ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ (fiber) ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ. ಕಾರ್ಬೋಹೈಡ್ರೇಟ್ ಹಾಗೂ ಎಣ್ಣೆಯಂಶವಿರುವ ಆಹಾರವನ್ನು ಕಡಿಮೆ ಮಾಡಿ.

2. ಸಿಹಿ ಪದಾರ್ಥಗಳ ನಿಯಂತ್ರಣ (Avoid Sweets): ಸಕ್ಕರೆ, ಬೆಲ್ಲ, ಬೇಕರಿ ತಿಂಡಿಗಳು, ಐಸ್‌ಕ್ರೀಮ್ ಮತ್ತು ಕೃತಕ ಸಕ್ಕರೆ ಇರುವ ತಂಪು ಪಾನೀಯಗಳ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ ಅಥವಾ ದೂರವಿಡಿ.

3. ದಿನನಿತ್ಯದ ವ್ಯಾಯಾಮ (Regular Exercise): ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ವೇಗದ ನಡಿಗೆ (brisk walking), ಸೈಕ್ಲಿಂಗ್, ಈಜು ಅಥವಾ ಯೋಗ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

4. ದೇಹದ ತೂಕದ ನಿರ್ವಹಣೆ (Weight Management): ಅತಿಯಾದ ದೇಹದ ತೂಕವು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ತೂಕವನ್ನು ಆರೋಗ್ಯಕರ ಮಿತಿಯಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.

5. ನಿಯಮಿತ ರಕ್ತದ ಪರೀಕ್ಷೆ (Regular Blood Sugar Check): ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Fasting ಮತ್ತು Post Prandial) ಹಾಗೂ ಮೂರು ತಿಂಗಳ ಸರಾಸರಿ ತಿಳಿಸುವ HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳಿ.

6. ಸಮಯಕ್ಕೆ ಸರಿಯಾಗಿ ಔಷಧಿ ಸೇವನೆ (Timely Medication): ವೈದ್ಯರು ಸೂಚಿಸಿದ ಮಾತ್ರೆಗಳನ್ನು ಅಥವಾ ಇನ್ಸುಲಿನ್ ಅನ್ನು ನಿಗದಿತ ಸಮಯಕ್ಕೆ ತೆಗೆದುಕೊಳ್ಳಿ. ಸ್ವಂತ ನಿರ್ಧಾರದಿಂದ ಔಷಧಿಯನ್ನು ನಿಲ್ಲಿಸಬೇಡಿ.

7. ಮಾನಸಿಕ ಒತ್ತಡದ ನಿರ್ವಹಣೆ (Stress Management): ಅತಿಯಾದ ಮಾನಸಿಕ ಒತ್ತಡವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ (Meditation) ಅಥವಾ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ.

8. ಪೂರಕ ನೀರು ಕುಡಿಯುವುದು (Stay Hydrated): ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಇದು ದೇಹದಲ್ಲಿರುವ ಹೆಚ್ಚುವರಿ ಗ್ಲೂಕೋಸ್ ಮೂತ್ರದ ಮೂಲಕ ಹೊರಹೋಗಲು ಸಹಾಯ ಮಾಡುತ್ತದೆ.

9. ಉತ್ತಮ ನಿದ್ರೆ (Good Sleep): ಪ್ರತಿದಿನ ರಾತ್ರಿ 7 ರಿಂದ 8 ಗಂಟೆಗಳ ಕಾಲ ಶಾಂತಿಯುತವಾದ ನಿದ್ರೆ ಮಾಡುವುದು ದೇಹದ ಚಯಾಪಚಯ ಕ್ರಿಯೆ (Metabolism) ಮತ್ತು ಹಾರ್ಮೋನ್‌ಗಳ ಸಮತೋಲನಕ್ಕೆ ಬಹಳ ಮುಖ್ಯ.

10. ದುರಭ್ಯಾಸಗಳಿಂದ ದೂರವಿರಿ (Avoid Smoking and Alcohol): ಧೂಮಪಾನ ಮತ್ತು ಮದ್ಯಪಾನವು ಸಕ್ಕರೆ ಕಾಯಿಲೆಯ ತೊಂದರೆಗಳನ್ನು (ಹೃದಯ ಮತ್ತು ನರಗಳ ಸಮಸ್ಯೆ) ಮತ್ತಷ್ಟು ಹೆಚ್ಚು ಮಾಡುವುದರಿಂದ ಇವುಗಳಿಂದ ದೂರವಿರುವುದು ಒಳ್ಳೆಯದು.

ಗಮನಿಸಿ: ಈ ಮೇಲಿನ ಮಾಹಿತಿ ರೋಗದ ನಿರ್ವಹಣೆಗೆ ಸಾಮಾನ್ಯ ಮಾರ್ಗದರ್ಶನವಾಗಿದೆ. ಪ್ರತಿಯೊಬ್ಬರ ದೇಹ ಪ್ರಕೃತಿ ವಿಭಿನ್ನವಾಗಿರುವುದರಿಂದ, ನಿಮ್ಮ ವೈದ್ಯರ ವೈಯಕ್ತಿಕ ಸಲಹೆ ಮತ್ತು ಚಿಕಿತ್ಸೆಯ ಕ್ರಮವೇ ಅಂತಿಮ ಹಾಗೂ ಸುರಕ್ಷಿತ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending