ರಾಜಕೀಯ
ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ‘ಜಿ.ಎಂ. ಸಿದ್ದೇಶ್ವರ್’ ಸಂದರ್ಶನ : ಮಿಸ್ ಮಾಡ್ದೆ ಓದಿ..!
- ಸಂದರ್ಶನ: ಗಣೇಶ್ ಕಮ್ಲಾಪುರ
ಅಲೆ, ಅನುಕಂಪ, ಆಶೀರ್ವಾದದಿಂದ ಗೆದ್ದಿಲ್ಲ, ಅಭಿವೃದ್ಧಿಯಿಂದ ಗೆದ್ದಿದ್ದೇನೆ
ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲವಿಗೆ ಶ್ರೀರಕ್ಷೆ
ಮೈತ್ರಿಪಕ್ಷಕ್ಕೆ ಚೌಕಿದಾರ್ ಮಣಿಯಲ್ಲ
ಮೂರು ಬಾರಿ ಸಂಸದನಾಗಿ ಕಳೆದ 15 ವರ್ಷಗಳಿಂದ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿದ್ದು, ನನ್ನ ಅಭಿವೃದ್ಧಿ ಕಾರ್ಯಗಳು ಗೆಲವಿಗೆ ಕಾರಣವಾಗಿವೆಯೇ ಹೊರತು ನನ್ನ ರಾಜಕೀಯ ವಿರೋಧಿಗಳು ಹೇಳುವಂತೆ ಯಾವುದೇ ಅಲೆ, ಅನುಕಂಪ, ಆಶೀರ್ವಾದದಿಂದ ನಾನು ಗೆದ್ದಿಲ್ಲ. ಸಂಸತ್ತಿನ ಒಳ, ಹೊರಗೆ ಜನರ ಸಮಸ್ಯೆ, ಸಂಕಷ್ಟದ ಕುರಿತು ದನಿ ಎತ್ತುವ ಮೂಲಕ ಕಳೆದ 5 ವರ್ಷದಲ್ಲಿ ಸುಮಾರು 10 ಸಾವಿರ ಕೋಟಿ ಅನುದಾನ ತಂದು ಜಿಲ್ಲೆಯನ್ನು ಅಭಿವೃದ್ಧಿಪಡಿಸಿ ಜನದನಿಯಾಗಿದ್ದೇನೆ. ಈ ಬಾರಿಯೂ ನಾನು ಮಾಡಿದ ಅಭಿವೃದ್ಧಿ, ಜನಪರ ಕಾರ್ಯಗಳೇ ಗೆಲವಿಗೆ ಕಾರಣವಾಗಲಿವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ ಮೂರು ಬಾರಿ ಸಂಸದರಾಗಿ ನಾಲ್ಕನೇ ಬಾರಿ ಬಿಜೆಪಿ ದಾವಣಗೆರೆ ಲೋಕಸಭಾ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಜಿ.ಎಂ. ಸಿದ್ದೇಶ್ವರ್. ಈ ಕುರಿತು ಅವರು “ಸುದ್ದಿದಿನ”ಕ್ಕೆ ನೀಡಿದ ಸಂದರ್ಶನ ಪೂರ್ಣಪಾಠ ಇಲ್ಲಿದೆ.
ಚುನಾವಣಾ ಪ್ರಚಾರದ ಭರಾಟೆ ಹೇಗಿದೆ?
ಚುನಾವಣಾ ಘೋಷಣೆಗೂ ಮುನ್ನವೇ ಶೇ. 60ರಷ್ಟು ಭಾಗ ಜಿಲ್ಲೆಯ ತಾಲೂಕು, ಗ್ರಾಮಗಳನ್ನು ಸುತ್ತಿದ್ದೇನೆ. ಈಗಾಗಲೇ ಹೊನ್ನಾಳಿ ತಾಲೂಕಿನ 80 ಹಳ್ಳಿಗಳು, ಮಾಯಕೊಂಡ ಕ್ಷೇತ್ರದ 60 ಹಳ್ಳಿಗಳು, ಹರಪನಹಳ್ಳಿ ಕ್ಷೇತ್ರದಲ್ಲಿ ಶೇ. 75ರಷ್ಟು ಭಾಗ ಹಾಗೂ ಹರಿಹರ, ಜಗಳೂರಿನ ನೂರಾರು ಹಳ್ಳಿಗಳಿಗೆ ತಲುಪಿದ್ದೇನೆ. ಇನ್ನೊಮ್ಮೆ ಎಲ್ಲಾ ತಾಲೂಕು, ಗ್ರಾಮಕ್ಕೆ ತೆರಳಲಿದ್ದೇನೆ. ಎಲ್ಲೆಡೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಭದ್ರ ಆಡಳಿತ, ದಿಟ್ಟ ನಿರ್ಧಾರ ಕೈಗೊಳ್ಳುವಂತಹ ನಾಯಕತ್ವವನ್ನು ಜನರು ಪ್ರಧಾನಿ ಮೋದಿ ಅವರಲ್ಲಿ ಕಂಡಿದ್ದು, ಈ ಬಾರಿಯೂ ಕಮಲದ ಕೈಹಿಡಿಯಲು ಜನತೆ ನಿರ್ಧರಿಸಿಯಾಗಿದೆ.
3 ಬಾರಿ ಸಂಸದರಾಗಿ ಜಿಲ್ಲೆಗೆ ನಿಮ್ಮ ಕೊಡುಗೆ ಏನು?
ಕಳೆದ 5 ವರ್ಷದ ಅವಧಿಯಲ್ಲಿಯೇ ಕೇಂದ್ರದಿಂದ ಜಿಲ್ಲೆಗೆ ನಾನು ತಂದಿರುವ ಅನುದಾನ ಬರೋಬ್ಬರಿ 10 ಸಾವಿರ ಕೋಟಿ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೇಲ್ವೆ ಅಭಿವೃದ್ಧಿ, ಸ್ಮಾರ್ಟ್ಸಿಟಿ, ತುಂಗಾನಾಲಾ ಆಧುನೀಕರಣ, ಅಮೃತ್ ಯೋಜನೆ, ಸಂಸದರ ಸ್ಥಳೀಯಾಭಿವೃದ್ಧಿ, ಇಎಸ್ಐ ಆಸ್ಪತ್ರೆ ಮೇಲ್ದರ್ಜೆಗೆ ಯೋಜನೆ ಸೇರಿದಂತೆ ನೂರಾರು ಯೋಜನೆ ಜಿಲ್ಲೆಗೆ ಒತ್ತುತಂದಿದ್ದೇನೆ. ಇದರಲ್ಲಿ ಕೆಲ ಯೋಜನೆಗಳು ಪೂರ್ಣಗೊಂಡಿದ್ದು, ಮತ್ತೊಂದಿಷ್ಟು ಪ್ರಗತಿಯಲ್ಲಿವೆ. ಅಲ್ಲದೆ, ಜಿಲ್ಲೆಯ ಕಟ್ಟಕಡೆ ಗ್ರಾಮ ತಲುಪಿ, ಅಲ್ಲಿನ ಕಷ್ಟಕಾರ್ಪಣ್ಯ ಅರಿತಿದ್ದೇನೆ. ತಪ್ಪದೇ ನನ್ನ ಕಚೇರಿಯಲ್ಲಿ ಜನಸಂಪರ್ಕ ಸಭೆ ಆಯೋಜಿಸಿ ಸಾರ್ವಜನಿಕರಿಂದ ಆಹವಾಲು ಸ್ವೀಕಾರ, ಸಮಸ್ಯೆ ಶೀಘ್ರ ಪರಿಹಾರ ಕಾರ್ಯ ನಡೆಸುತ್ತಾ ಬಂದಿದ್ದೇನೆ.
ಜೆಡಿಎಸ್, ಕಾಂಗ್ರೆಸ್ ಮೈತ್ರಿಯಿಂದ ನಿಮಗೆ ಗೆಲವು ಕಷ್ಟ ಸಾಧ್ಯವೇ?
ಯಾವ ಮಹಾಘಟಬಂದನ್ ಏರ್ಪಟ್ಟರೂ, ಎಷ್ಟೇ ಎದುರಾಳಿಗಳು ಹುಟ್ಟಿಕೊಂಡರೂ ದೇಶದಲ್ಲಿ ಬಿಜೆಪಿ ಈ ಬಾರಿ 300ಕ್ಕೂ ಅಧಿಕ, ರಾಜ್ಯದಲ್ಲಿ 22ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಮೋದಿ ಅಲೆ ಸುನಾಮಿಯಂತಿದೆ. ನಮ್ಮ ಜಿಲ್ಲೆಯಲ್ಲಿ ಈ ಬಾರಿ 1.20 ಲಕ್ಷ ನೂತನ ಮತದಾರರಲ್ಲಿ ಶೇ. 80ರಷ್ಟು ಯುವಮತದಾರರು ಮೋದಿ ಸುಭದ್ರ ಆಡಳಿತ, ದೇಶದ ಭದ್ರತೆ ವಿಷಯದಲ್ಲಿ ಅವರು ತೆಗೆದುಕೊಂಡ ದಿಟ್ಟ ನಿರ್ಧಾರ ಬೆಂಬಲಿಸಿದ್ದಾರೆ. ಆದ್ದರಿಂದ ಯಾರು ಎಷ್ಟೇ ಒಗ್ಗಟ್ಟಾದರೂ ಬಿಜೆಪಿ ಚೌಕಿದಾರ್ರನ್ನು ಮಣಿಸಲು ಸಾಧ್ಯವೇ ಇಲ್ಲ. ಇನ್ನು, ಜಿಲ್ಲೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿಗೆ ಗೆಲವಿಗೆ ಯಾವುದೇ ತೊಂದರೆ ಇಲ್ಲ. ಮೂರು ಬಾರಿ ಸಂಸದನಾಗಿ ಮಾಡಿರುವ ಅಭಿವೃದ್ಧಿ ಕಾರ್ಯ ನನ್ನ ಗೆಲವಿನ ಅಂತರವನ್ನು ಈ ಬಾರಿ ಮತ್ತಷ್ಟು ಹೆಚ್ಚಿಸಲಿವೆ.
ನಿಮ್ಮ ಎದುರಾಳಿಯ ನಕಾರಾತ್ಮಕ ಅಂಶಗಳು ಗೆಲವಿಗೆ ಸಹಾಯಕವೇ?
ಖಂಡಿತಾ ಇಲ್ಲ. ಎದುರಾಳಿ ಎಷ್ಟೇ ಪ್ರಭಲ ಅಥವಾ ದುರ್ಬಲನಾಗಿದ್ದರೂ ಅದು ನನಗೆ ಲೆಕ್ಕಕ್ಕಿಲ್ಲ. ನಾನು ಯಾವುದೇ ಯಾರದ್ದೋ ಅಲೆ, ಮತ್ಯಾರದ್ದೋ ಅನುಕಂಪ, ಇನ್ಯಾರದ್ದೋ ಆಶೀರ್ವಾದದಿಂದಲೇ ಗೆದ್ದುಬಂದಿಲ್ಲ. ನಾನು ಜನತೆಯ ಆಶೀರ್ವಾದಿಂದ ಗೆದ್ದಿದ್ದೇನೆ. ನಾನು ಮತ್ತು ನಮ್ಮ ಬಿಜೆಪಿ ಪಕ್ಷ ಮಾಡಿದ ಅಭಿವೃದ್ಧಿ ಕಾರ್ಯಗಳು, ಜನಸಾಮಾನ್ಯರಿಗೆ ತಕ್ಷಣಕ್ಕೆ ಸ್ಪಂದಿಸುವ, ಅವರ ಸಮಸ್ಯೆಗೆ ಮುಕ್ತಿ ಕಾಣಿಸುವಂತ ಜನಪರ ಖಾಳಜಿ, ನಿಲುವುಗಳು, ದಿಟ್ಟ ನಿರ್ಧಾರ ಗೆಲವಿಗೆ ಸಹಾಯಕವಾಗಿವೆಯೇ ವಿನಾ ಎದುರಾಳಿ ಸ್ಪರ್ಧಿಗಳ ನಕಾರಾತ್ಮಕ ಅಂಶ, ವೈಫಲ್ಯ ಕಾರಣವಲ್ಲ. ಈ ಬಾರಿಯು ಜಿಲ್ಲೆಯಲ್ಲಿ ಮೈತ್ರಿ ಪಕ್ಷಗಳು ನಮ್ಮೊಂದಿಗೆ ಪೈಪೋಟಿ ನಡೆಸಲು ಸಜ್ಜಾಗಿವೆ. ಆದರೆ, ನಾನು ಮಾಡಿದ ಅಭಿವೃದ್ಧಿ ಕಾರ್ಯ ನನ್ನ ಕೈ ಹಿಡಿಯಲಿದ್ದು, ಗೆಲವು ನಿಶ್ಚಿತ.
ಗೆದ್ದರೆ, ಮುಂದಿನ ನಿಮ್ಮ ಯೋಜನೆಗಳೇನು?
ಗೆದ್ದರೇ. ಎಂಬುದು ಬೇಡ, ಗೆದ್ದೆ ಗೆಲ್ಲುವೆ. ಮುಖ್ಯವಾಗಿ, 3 ದಶಕಗಳ ಬೇಡಿಕೆಯಾದ ದಾವಣಗೆರೆಯ ಅಶೋಕ ಥೇಟರ್ ಮೇಲ್ಸೆತುವೆ ನಿರ್ಮಾಣಕ್ಕೆ ಮುಂದಾಗುವೆ. 2014ರಲ್ಲೇ ಬಜೆಟ್ನಲ್ಲಿ 35 ಕೋಟಿ ಮೇಲ್ಸೇತುವೆ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಆದರೆ, ರಾಜ್ಯ ಸರ್ಕಾರ, ಜಿಲ್ಲಾಡಳಿತದ ನಿರ್ಲಕ್ಷ್ಯ, ಅಸಹಕಾರದಿಂದ ನೆನೆಗುದಿಗೆ ಬಿದ್ದಿದೆ. ಲೋಕಾ ಚುನಾವಣೆ ನಂತರ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಮತ್ತೆ ಅಧಿಕಾರಕ್ಕೇರಿ, ಕೇಂದ್ರ, ರಾಜ್ಯಗಳೆರೆಡು ಬಿಜೆಪಿ ಅಧಿಕಾರದಲ್ಲಿರುವುದರಿಂದ ಮೇಲ್ಸೆತುವ ಖಂಡಿತಾ ಪೂರ್ಣಗೊಳ್ಳುತ್ತದೆ. ಅಲ್ಲದೆ, ಜಿಲ್ಲೆಯಲ್ಲಿ ಕಾರ್ಖಾನೆಗಳ ಸಂಖ್ಯೆ ಕಡಿಮೆ ಇದೆ ಎಂಬ ಕೊರಗು ಹೋಗಲಾಡಿಸುವ ನಿಟ್ಟಿನಲ್ಲಿ ರಾಸಾಯನಿಕ ಕಾರ್ಖಾನೆಗಳ ಘಟಕಗಳ ಅಭಿವೃದ್ಧಿ, ದೇಶದಲ್ಲಿಯೇ ಅತಿದೊಡ್ಡದಾದ 2ಜಿ ಎಥೆನಾಲ್ ಘಟಕ 2 ಲಕ್ಷ ಮಿಲಿಯನ್ ಟನ್ ಸಾಮಾಥ್ರ್ಯವಿದ್ದು, ಇದರಿಂದ ಪ್ರತ್ಯಕ್ಷ, ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗವಕಾಶ ಸಿಗಲಿದೆ. ಅಲ್ಲದೆ, ಶೀಘ್ರವೇ ರಾಷ್ಟ್ರೀಯ ಹೆದ್ದಾರಿ ಮುಂದಿನ ವರ್ಷದೊಳಗೆ ಪೂರ್ಣಗೊಳಿಸುವುದು ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಯತ್ನಿಸುವೆ.
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ
ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್ರಾಮ್ ಅನುಯಾಯಿಗಳು ಭಾಗವಹಿಸಿದ್ದರು.
ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದು ಚುನಾವಣಾ ಆಯೋಗ ಸಮಾವೇಶ
ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.
ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.
ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243