ರಾಜಕೀಯ
ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ‘ಜಿ.ಎಂ. ಸಿದ್ದೇಶ್ವರ್’ ಸಂದರ್ಶನ : ಮಿಸ್ ಮಾಡ್ದೆ ಓದಿ..!
- ಸಂದರ್ಶನ: ಗಣೇಶ್ ಕಮ್ಲಾಪುರ
ಅಲೆ, ಅನುಕಂಪ, ಆಶೀರ್ವಾದದಿಂದ ಗೆದ್ದಿಲ್ಲ, ಅಭಿವೃದ್ಧಿಯಿಂದ ಗೆದ್ದಿದ್ದೇನೆ
ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲವಿಗೆ ಶ್ರೀರಕ್ಷೆ
ಮೈತ್ರಿಪಕ್ಷಕ್ಕೆ ಚೌಕಿದಾರ್ ಮಣಿಯಲ್ಲ
ಮೂರು ಬಾರಿ ಸಂಸದನಾಗಿ ಕಳೆದ 15 ವರ್ಷಗಳಿಂದ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿದ್ದು, ನನ್ನ ಅಭಿವೃದ್ಧಿ ಕಾರ್ಯಗಳು ಗೆಲವಿಗೆ ಕಾರಣವಾಗಿವೆಯೇ ಹೊರತು ನನ್ನ ರಾಜಕೀಯ ವಿರೋಧಿಗಳು ಹೇಳುವಂತೆ ಯಾವುದೇ ಅಲೆ, ಅನುಕಂಪ, ಆಶೀರ್ವಾದದಿಂದ ನಾನು ಗೆದ್ದಿಲ್ಲ. ಸಂಸತ್ತಿನ ಒಳ, ಹೊರಗೆ ಜನರ ಸಮಸ್ಯೆ, ಸಂಕಷ್ಟದ ಕುರಿತು ದನಿ ಎತ್ತುವ ಮೂಲಕ ಕಳೆದ 5 ವರ್ಷದಲ್ಲಿ ಸುಮಾರು 10 ಸಾವಿರ ಕೋಟಿ ಅನುದಾನ ತಂದು ಜಿಲ್ಲೆಯನ್ನು ಅಭಿವೃದ್ಧಿಪಡಿಸಿ ಜನದನಿಯಾಗಿದ್ದೇನೆ. ಈ ಬಾರಿಯೂ ನಾನು ಮಾಡಿದ ಅಭಿವೃದ್ಧಿ, ಜನಪರ ಕಾರ್ಯಗಳೇ ಗೆಲವಿಗೆ ಕಾರಣವಾಗಲಿವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ ಮೂರು ಬಾರಿ ಸಂಸದರಾಗಿ ನಾಲ್ಕನೇ ಬಾರಿ ಬಿಜೆಪಿ ದಾವಣಗೆರೆ ಲೋಕಸಭಾ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಜಿ.ಎಂ. ಸಿದ್ದೇಶ್ವರ್. ಈ ಕುರಿತು ಅವರು “ಸುದ್ದಿದಿನ”ಕ್ಕೆ ನೀಡಿದ ಸಂದರ್ಶನ ಪೂರ್ಣಪಾಠ ಇಲ್ಲಿದೆ.
ಚುನಾವಣಾ ಪ್ರಚಾರದ ಭರಾಟೆ ಹೇಗಿದೆ?
ಚುನಾವಣಾ ಘೋಷಣೆಗೂ ಮುನ್ನವೇ ಶೇ. 60ರಷ್ಟು ಭಾಗ ಜಿಲ್ಲೆಯ ತಾಲೂಕು, ಗ್ರಾಮಗಳನ್ನು ಸುತ್ತಿದ್ದೇನೆ. ಈಗಾಗಲೇ ಹೊನ್ನಾಳಿ ತಾಲೂಕಿನ 80 ಹಳ್ಳಿಗಳು, ಮಾಯಕೊಂಡ ಕ್ಷೇತ್ರದ 60 ಹಳ್ಳಿಗಳು, ಹರಪನಹಳ್ಳಿ ಕ್ಷೇತ್ರದಲ್ಲಿ ಶೇ. 75ರಷ್ಟು ಭಾಗ ಹಾಗೂ ಹರಿಹರ, ಜಗಳೂರಿನ ನೂರಾರು ಹಳ್ಳಿಗಳಿಗೆ ತಲುಪಿದ್ದೇನೆ. ಇನ್ನೊಮ್ಮೆ ಎಲ್ಲಾ ತಾಲೂಕು, ಗ್ರಾಮಕ್ಕೆ ತೆರಳಲಿದ್ದೇನೆ. ಎಲ್ಲೆಡೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಭದ್ರ ಆಡಳಿತ, ದಿಟ್ಟ ನಿರ್ಧಾರ ಕೈಗೊಳ್ಳುವಂತಹ ನಾಯಕತ್ವವನ್ನು ಜನರು ಪ್ರಧಾನಿ ಮೋದಿ ಅವರಲ್ಲಿ ಕಂಡಿದ್ದು, ಈ ಬಾರಿಯೂ ಕಮಲದ ಕೈಹಿಡಿಯಲು ಜನತೆ ನಿರ್ಧರಿಸಿಯಾಗಿದೆ.
3 ಬಾರಿ ಸಂಸದರಾಗಿ ಜಿಲ್ಲೆಗೆ ನಿಮ್ಮ ಕೊಡುಗೆ ಏನು?
ಕಳೆದ 5 ವರ್ಷದ ಅವಧಿಯಲ್ಲಿಯೇ ಕೇಂದ್ರದಿಂದ ಜಿಲ್ಲೆಗೆ ನಾನು ತಂದಿರುವ ಅನುದಾನ ಬರೋಬ್ಬರಿ 10 ಸಾವಿರ ಕೋಟಿ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೇಲ್ವೆ ಅಭಿವೃದ್ಧಿ, ಸ್ಮಾರ್ಟ್ಸಿಟಿ, ತುಂಗಾನಾಲಾ ಆಧುನೀಕರಣ, ಅಮೃತ್ ಯೋಜನೆ, ಸಂಸದರ ಸ್ಥಳೀಯಾಭಿವೃದ್ಧಿ, ಇಎಸ್ಐ ಆಸ್ಪತ್ರೆ ಮೇಲ್ದರ್ಜೆಗೆ ಯೋಜನೆ ಸೇರಿದಂತೆ ನೂರಾರು ಯೋಜನೆ ಜಿಲ್ಲೆಗೆ ಒತ್ತುತಂದಿದ್ದೇನೆ. ಇದರಲ್ಲಿ ಕೆಲ ಯೋಜನೆಗಳು ಪೂರ್ಣಗೊಂಡಿದ್ದು, ಮತ್ತೊಂದಿಷ್ಟು ಪ್ರಗತಿಯಲ್ಲಿವೆ. ಅಲ್ಲದೆ, ಜಿಲ್ಲೆಯ ಕಟ್ಟಕಡೆ ಗ್ರಾಮ ತಲುಪಿ, ಅಲ್ಲಿನ ಕಷ್ಟಕಾರ್ಪಣ್ಯ ಅರಿತಿದ್ದೇನೆ. ತಪ್ಪದೇ ನನ್ನ ಕಚೇರಿಯಲ್ಲಿ ಜನಸಂಪರ್ಕ ಸಭೆ ಆಯೋಜಿಸಿ ಸಾರ್ವಜನಿಕರಿಂದ ಆಹವಾಲು ಸ್ವೀಕಾರ, ಸಮಸ್ಯೆ ಶೀಘ್ರ ಪರಿಹಾರ ಕಾರ್ಯ ನಡೆಸುತ್ತಾ ಬಂದಿದ್ದೇನೆ.
ಜೆಡಿಎಸ್, ಕಾಂಗ್ರೆಸ್ ಮೈತ್ರಿಯಿಂದ ನಿಮಗೆ ಗೆಲವು ಕಷ್ಟ ಸಾಧ್ಯವೇ?
ಯಾವ ಮಹಾಘಟಬಂದನ್ ಏರ್ಪಟ್ಟರೂ, ಎಷ್ಟೇ ಎದುರಾಳಿಗಳು ಹುಟ್ಟಿಕೊಂಡರೂ ದೇಶದಲ್ಲಿ ಬಿಜೆಪಿ ಈ ಬಾರಿ 300ಕ್ಕೂ ಅಧಿಕ, ರಾಜ್ಯದಲ್ಲಿ 22ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಮೋದಿ ಅಲೆ ಸುನಾಮಿಯಂತಿದೆ. ನಮ್ಮ ಜಿಲ್ಲೆಯಲ್ಲಿ ಈ ಬಾರಿ 1.20 ಲಕ್ಷ ನೂತನ ಮತದಾರರಲ್ಲಿ ಶೇ. 80ರಷ್ಟು ಯುವಮತದಾರರು ಮೋದಿ ಸುಭದ್ರ ಆಡಳಿತ, ದೇಶದ ಭದ್ರತೆ ವಿಷಯದಲ್ಲಿ ಅವರು ತೆಗೆದುಕೊಂಡ ದಿಟ್ಟ ನಿರ್ಧಾರ ಬೆಂಬಲಿಸಿದ್ದಾರೆ. ಆದ್ದರಿಂದ ಯಾರು ಎಷ್ಟೇ ಒಗ್ಗಟ್ಟಾದರೂ ಬಿಜೆಪಿ ಚೌಕಿದಾರ್ರನ್ನು ಮಣಿಸಲು ಸಾಧ್ಯವೇ ಇಲ್ಲ. ಇನ್ನು, ಜಿಲ್ಲೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿಗೆ ಗೆಲವಿಗೆ ಯಾವುದೇ ತೊಂದರೆ ಇಲ್ಲ. ಮೂರು ಬಾರಿ ಸಂಸದನಾಗಿ ಮಾಡಿರುವ ಅಭಿವೃದ್ಧಿ ಕಾರ್ಯ ನನ್ನ ಗೆಲವಿನ ಅಂತರವನ್ನು ಈ ಬಾರಿ ಮತ್ತಷ್ಟು ಹೆಚ್ಚಿಸಲಿವೆ.
ನಿಮ್ಮ ಎದುರಾಳಿಯ ನಕಾರಾತ್ಮಕ ಅಂಶಗಳು ಗೆಲವಿಗೆ ಸಹಾಯಕವೇ?
ಖಂಡಿತಾ ಇಲ್ಲ. ಎದುರಾಳಿ ಎಷ್ಟೇ ಪ್ರಭಲ ಅಥವಾ ದುರ್ಬಲನಾಗಿದ್ದರೂ ಅದು ನನಗೆ ಲೆಕ್ಕಕ್ಕಿಲ್ಲ. ನಾನು ಯಾವುದೇ ಯಾರದ್ದೋ ಅಲೆ, ಮತ್ಯಾರದ್ದೋ ಅನುಕಂಪ, ಇನ್ಯಾರದ್ದೋ ಆಶೀರ್ವಾದದಿಂದಲೇ ಗೆದ್ದುಬಂದಿಲ್ಲ. ನಾನು ಜನತೆಯ ಆಶೀರ್ವಾದಿಂದ ಗೆದ್ದಿದ್ದೇನೆ. ನಾನು ಮತ್ತು ನಮ್ಮ ಬಿಜೆಪಿ ಪಕ್ಷ ಮಾಡಿದ ಅಭಿವೃದ್ಧಿ ಕಾರ್ಯಗಳು, ಜನಸಾಮಾನ್ಯರಿಗೆ ತಕ್ಷಣಕ್ಕೆ ಸ್ಪಂದಿಸುವ, ಅವರ ಸಮಸ್ಯೆಗೆ ಮುಕ್ತಿ ಕಾಣಿಸುವಂತ ಜನಪರ ಖಾಳಜಿ, ನಿಲುವುಗಳು, ದಿಟ್ಟ ನಿರ್ಧಾರ ಗೆಲವಿಗೆ ಸಹಾಯಕವಾಗಿವೆಯೇ ವಿನಾ ಎದುರಾಳಿ ಸ್ಪರ್ಧಿಗಳ ನಕಾರಾತ್ಮಕ ಅಂಶ, ವೈಫಲ್ಯ ಕಾರಣವಲ್ಲ. ಈ ಬಾರಿಯು ಜಿಲ್ಲೆಯಲ್ಲಿ ಮೈತ್ರಿ ಪಕ್ಷಗಳು ನಮ್ಮೊಂದಿಗೆ ಪೈಪೋಟಿ ನಡೆಸಲು ಸಜ್ಜಾಗಿವೆ. ಆದರೆ, ನಾನು ಮಾಡಿದ ಅಭಿವೃದ್ಧಿ ಕಾರ್ಯ ನನ್ನ ಕೈ ಹಿಡಿಯಲಿದ್ದು, ಗೆಲವು ನಿಶ್ಚಿತ.
ಗೆದ್ದರೆ, ಮುಂದಿನ ನಿಮ್ಮ ಯೋಜನೆಗಳೇನು?
ಗೆದ್ದರೇ. ಎಂಬುದು ಬೇಡ, ಗೆದ್ದೆ ಗೆಲ್ಲುವೆ. ಮುಖ್ಯವಾಗಿ, 3 ದಶಕಗಳ ಬೇಡಿಕೆಯಾದ ದಾವಣಗೆರೆಯ ಅಶೋಕ ಥೇಟರ್ ಮೇಲ್ಸೆತುವೆ ನಿರ್ಮಾಣಕ್ಕೆ ಮುಂದಾಗುವೆ. 2014ರಲ್ಲೇ ಬಜೆಟ್ನಲ್ಲಿ 35 ಕೋಟಿ ಮೇಲ್ಸೇತುವೆ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಆದರೆ, ರಾಜ್ಯ ಸರ್ಕಾರ, ಜಿಲ್ಲಾಡಳಿತದ ನಿರ್ಲಕ್ಷ್ಯ, ಅಸಹಕಾರದಿಂದ ನೆನೆಗುದಿಗೆ ಬಿದ್ದಿದೆ. ಲೋಕಾ ಚುನಾವಣೆ ನಂತರ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಮತ್ತೆ ಅಧಿಕಾರಕ್ಕೇರಿ, ಕೇಂದ್ರ, ರಾಜ್ಯಗಳೆರೆಡು ಬಿಜೆಪಿ ಅಧಿಕಾರದಲ್ಲಿರುವುದರಿಂದ ಮೇಲ್ಸೆತುವ ಖಂಡಿತಾ ಪೂರ್ಣಗೊಳ್ಳುತ್ತದೆ. ಅಲ್ಲದೆ, ಜಿಲ್ಲೆಯಲ್ಲಿ ಕಾರ್ಖಾನೆಗಳ ಸಂಖ್ಯೆ ಕಡಿಮೆ ಇದೆ ಎಂಬ ಕೊರಗು ಹೋಗಲಾಡಿಸುವ ನಿಟ್ಟಿನಲ್ಲಿ ರಾಸಾಯನಿಕ ಕಾರ್ಖಾನೆಗಳ ಘಟಕಗಳ ಅಭಿವೃದ್ಧಿ, ದೇಶದಲ್ಲಿಯೇ ಅತಿದೊಡ್ಡದಾದ 2ಜಿ ಎಥೆನಾಲ್ ಘಟಕ 2 ಲಕ್ಷ ಮಿಲಿಯನ್ ಟನ್ ಸಾಮಾಥ್ರ್ಯವಿದ್ದು, ಇದರಿಂದ ಪ್ರತ್ಯಕ್ಷ, ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗವಕಾಶ ಸಿಗಲಿದೆ. ಅಲ್ಲದೆ, ಶೀಘ್ರವೇ ರಾಷ್ಟ್ರೀಯ ಹೆದ್ದಾರಿ ಮುಂದಿನ ವರ್ಷದೊಳಗೆ ಪೂರ್ಣಗೊಳಿಸುವುದು ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಯತ್ನಿಸುವೆ.
ದಿನದ ಸುದ್ದಿ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ | ರೈತರ ಖಾತೆಗೆ ನಾಳೆ ಪ್ರಧಾನಿ ಹಣ ವರ್ಗಾವಣೆ ; ಎಷ್ಟು ಕೋಟಿ..?
ಸುದ್ದಿದಿನಡೆಸ್ಕ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ ’ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯಡಿ 9 ಕೋಟಿ 3 ಲಕ್ಷ ರೈತರ ಖಾತೆಗೆ 20 ಸಾವಿರ ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಲಿದ್ದಾರೆ.
ವಾರಾಣಸಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು, ಮೂರನೇ ಬಾರಿಗೆ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಹಣ ವರ್ಗಾವಣೆ ಮಾಡಲಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ, ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸಹಿ ಹಾಕಿದ್ದರು.
2019ರಲ್ಲಿ ದೇಶದ ರೈತರ ಹಿತದೃಷ್ಟಿಯಿಂದ ಈ ಯೋಜನೆ ಜಾರಿಗೆ ಬಂದಿತ್ತು. ವರ್ಷಕ್ಕೆ ಆರು ಸಾವಿರ ರೂಪಾಯಿಯನ್ನು ತಲಾ 2 ಸಾವಿರದಂತೆ ಮೂರು ಕಂತುಗಳ ಮೂಲಕ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಧ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಇಲ್ಲ : ಸಿಎಂ ಸಿದ್ದರಾಮಯ್ಯ
ಸುದ್ದಿದಿನಡೆಸ್ಕ್: ರಾಜ್ಯದಲ್ಲಿ ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದ ಬಳಿಕವೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಇಂಧನ ಬೆಲೆ ಕಡಿಮೆ ಇದೆ ಅಂಕಿ ಅಂಶಗಳ ಸಮೇತ ವಿವರಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತೆರಿಗೆ ಹೆಚ್ಚಳದ ಅನಿವಾರ್ಯತೆಯನ್ನು ಹಾಗೂ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಹಣವನ್ನು ಕೊಡದೇ ಇರುವುದರಿಂದ ಸೃಷ್ಟಿ ಆಗಿರುವ ಪರಿಸ್ಥಿತಿಯನ್ನು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 60 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಇಷ್ಟೂ ಹಣ ರಾಜ್ಯದ ಎಲ್ಲಾ ಜಾತಿ-ಸಮುದಾಯಗಳ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೋಗುತ್ತದೆ. ಅಲ್ಪ ಪ್ರಮಾಣದ ಡೀಸೆಲ್-ಪೆಟ್ರೋಲ್ ತೆರಿಗೆ ಹೆಚ್ಚಳದಿಂದ ನಮಗೆ ಹೆಚ್ಚುವರಿಯಾಗಿ ಸಂಪನ್ಮೂಲ ಸಂಗ್ರಹ ಆಗುವುದು ಕೇವಲ 3 ಸಾವಿರ ಕೋಟಿ ರೂಪಾಯಿ ಮಾತ್ರ ಎಂದು ಹೇಳಿದರು.
ಬರಗಾಲದ ಬಗ್ಗೆ ಪರಿಹಾರ ತೆಗೆದುಕೊಳ್ಳಲು ಕೋರ್ಟಿಗೆ ಹೋಗಬೇಕಾಗಿ ಬಂತು. ಕೋರ್ಟು ಸೂಚನೆ ನೀಡಿದ ನಂತರ 18 ಸಾವಿರ ಕೋಟಿ ಕೇಳಿದರೆ 3,454 ಕೋಟಿ ರೂ. ಪರಿಹಾರ ನೀಡಿದ್ದಾರೆ.
ಬಿಜೆಪಿಯವರು ಬಡವರು, ದಲಿತರು, ಜನಸಾಮಾನ್ಯರ ಕಾರ್ಯಕ್ರಮಗಳ ಕಲ್ಯಾಣ ಕಾರ್ಯಕ್ರಮಗಳಿಗೆ ವಿರುದ್ಧವಿದ್ದಾರೆ. ಬಸ್ನಲ್ಲಿ ಉಚಿತ ಪ್ರಯಾಣ, ತಿಂಗಳಿಗೆ ಎರಡು ಸಾವಿರ ನೀಡಿದರೆ…— Siddaramaiah (@siddaramaiah) June 17, 2024
GST ಯಲ್ಲಿ ಕೇಂದ್ರ ಸರ್ಕಾರ ಏಕಸ್ವಾಮ್ಯ ಮಾಡಿಕೊಂಡಿರುವುದರಿಂದ ರಾಜ್ಯಗಳ ಪರಮಾಧಿಕಾರವಾಗಿದ್ದ ತೆರಿಗೆ ಸಂಗ್ರಹದ ಅವಕಾಶಗಳು ಇಲ್ಲವಾಗಿದೆ ಎಂದು ದೂರಿದರು. ರಾಜ್ಯದ ಜನರ ಪಾಲಿನ ಹಣವನ್ನು ಕೇಂದ್ರ ಸರ್ಕಾರ ಕೊಟ್ಟಿದ್ದರೆ ನಮಗೆ ತೆರಿಗೆ ಹೆಚ್ವಿಸುವ ಅಗತ್ಯವೇ ಬೀಳುತ್ತಿರಲಿಲ್ಲ ಎಂದು ಸಮರ್ಥಿಸಿಕೊಂಡರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ
ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.
ಭಾರತೀಯ ದಂಡ ಸಂಹಿತೆ 1860, ಭಾರತೀಯ ಸಾಕ್ಷ್ಯ ಕಾಯ್ದೆ 1872 ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ 1973 ಅನ್ನು ಬದಲಿಸುವ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.
“ಐಪಿಸಿ, ಸಿಆರ್ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ಬದಲಾಗುತ್ತಿವೆ. ಸೂಕ್ತ ಸಮಾಲೋಚನೆ ಪ್ರಕ್ರಿಯೆ ಅನುಸರಣೆ ಹಾಗೂ ಕಾನೂನು ಆಯೋಗದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಕಾನೂನುಗಳನ್ನು ಬದಲಾಯಿಸಲಾಗಿದೆ” ಎಂದು ಮೇಘವಾಲ್ ತಿಳಿಸಿದರು.”
ಈ ಮೂರು ಕಾನೂನುಗಳನ್ನು ಜುಲೈ 1 ರಿಂದ ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುವುದು. ಮೂರು ಹೊಸ ಕಾನೂನುಗಳ ತರಬೇತಿ ಸೌಲಭ್ಯಗಳನ್ನು ಎಲ್ಲಾ ರಾಜ್ಯಗಳಿಗೂ ಒದಗಿಸಲಾಗುತ್ತಿದೆ” ಎಂದು ಮೇಘವಾಲ್ ವಿವರಿಸಿದ್ದಾರೆ.”
ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಬಗ್ಗೆ ತರಬೇತಿ ನೀಡುತ್ತಿವೆ. ಎಲ್ಲವೂ ಜೊತೆಜೊತೆಯಾಗಿ ಸಾಗುತ್ತಿದೆ ಮತ್ತು ಜುಲೈ 1 ರಿಂದ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ನಿರ್ಣಾಯಕವಾದ ಈ ಎಲ್ಲಾ ಮೂರು ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.
ದೇಶದಲ್ಲಿ ಅಪರಾಧ ನ್ಯಾಯ ಸುಧಾರಣೆಯು ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇದು ಸೂಚಿಸುತ್ತದೆ. ಮಹಿಳೆಯರು, ಮಕ್ಕಳು ಮತ್ತು ರಾಷ್ಟ್ರದ ವಿರುದ್ಧದ ಅಪರಾಧಗಳನ್ನು ಇದು ಮುಂಚೂಣಿಯಲ್ಲಿರಿಸುತ್ತದೆ. ಅಲ್ಲದೆ ಇದು ವಸಾಹತುಶಾಹಿ ಯುಗದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಕೊಲೆ ಕೇಸ್ ; ನಾಳೆ ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಪ್ರತಿಭಟನೆ
-
ದಿನದ ಸುದ್ದಿ7 days ago
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ಮಸ್ಕಿ | ಬಿಜೆಪಿ ಕಚೇರಿಯಲ್ಲಿ ಆತ್ಮಾವಲೋಕನ ಸಭೆ
-
ದಿನದ ಸುದ್ದಿ6 days ago
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಇನ್ನಿಲ್ಲ
-
ದಿನದ ಸುದ್ದಿ6 days ago
ಭಾರೀ ಮಳೆ ; ಡ್ಯಾಂಗಳಿಗೆ ಹರಿದು ಬಂದ ನೀರೆಷ್ಟು..? ಇಲ್ಲಿದೆ ಸಂಪೂರ್ಣ ಮಾಹಿತಿ
-
ಅಂತರಂಗ5 days ago
ದಾವಣಗೆರೆ | ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿ ಪ್ರಶಸ್ತಿ ಪ್ರದಾನ
-
ದಿನದ ಸುದ್ದಿ5 days ago
ನಕಲಿ ವೈದ್ಯರ ಹಾವಳಿಗೆ ಬ್ರೇಕ್ ಹಾಕಲು ಸರ್ಕಾರ ಕಟ್ಟುನಿಟ್ಟಿನ ಕ್ರಮ
-
ದಿನದ ಸುದ್ದಿ7 days ago
SC – ST | ಕುರಿ,ಮೇಕೆ ಹಾಗೂ ಕೋಳಿ ಸಾಕಾಣಿಕೆ ತರಬೇತಿ