ಸಿನಿ ಸುದ್ದಿ
ಹಿಟ್ಲರನ ಸರ್ವಾಧಿಕಾರದ ವಿರುದ್ಧ ‘ಚಾರ್ಲಿ ಚಾಪ್ಲಿನ್’ ಭಾಷಣ
“ಕ್ಷಮಿಸಿ! ನಾನು ಸರ್ವಾಧಿಕಾರಿಯಾಗಲು ಬಯಸಲಾರೆ, ಅದು ನನ್ನ ಕೆಲಸವೂ ಅಲ್ಲ. ನಾನು ಯಾರನ್ನೂ ಕೂಡಾ ಗೆಲ್ಲಲು ಅಥವಾ ಆಳಲು ಬಯಸುವುದಿಲ್ಲ. ಸಾಧ್ಯವಾದರೆ ನಾವು ಯಹೂದಿ, ನಾಝಿ, ಕರಿಯರು, ಬಿಳಿಯರು ಹೀಗೆ ಎಲ್ಲರಿಗೂ ಸಹಾಯ ಮಾಡುವಂತಾಗಬೇಕು. ಎಲ್ಲರೂ ಪರಸ್ಪರ ಸಹಾಯ ಮಾಡಿಕೊಳ್ಳಬೇಕು. ಮನುಷ್ಯರೆಂದರೆ ಹಾಗೆ. ನಾವು ಪರಸ್ಪರ ಸಂತೋಷದಿಂದ ಬದುಕಬೇಕೇ ಹೊರತು ಇತರರ ದುಃಖಕ್ಕಾಗಿ ಅಲ್ಲ. ಯಾರನ್ನೂ ದ್ವೇಷಿಸಲೇ ಕೂಡದು. ಈ ಭೂಮಿಯಲ್ಲಿ ಎಲ್ಲರಿಗೂ ಜಾಗವಿದೆ. ಮತ್ತೆ ಈ ಭೂಮಿಯು ಎಲ್ಲರ ಅಗತ್ಯಗಳನ್ನೂ ಪೂರೈಸುವಷ್ಟು ಸಮೃದ್ಧವಾಗಿದೆ. ಜೀವನದ ಹಾದಿ ಸುಂದರವೂ ಮುಕ್ತವೂ ಆಗಿರಲು ಸಾಧ್ಯ. ಆದರೆ ನಾವು ಆ ಹಾದಿಯನ್ನೇ ಕಳೆದುಕೊಂಡಿದ್ದೇವೆ.
ಸ್ವಾರ್ಥವು ಮನುಷ್ಯನ ಆತ್ಮವನ್ನೇ ಕಲುಷಿತಗೊಳಿಸಿದೆ, ಜಗತ್ತನ್ನು ದ್ವೇಷವೆಂಬ ಬೇಲಿಯಿಂದ ಬಂಧಿಸಿದೆ, ದುಃಖ ಮತ್ತು ರಕ್ತಪಾತದೆಡೆಗೆ ಸಾಗಿಸುತ್ತಿದೆ. ನಾವು ವೇಗವನ್ನು ಅಭಿವೃದ್ಧಿಪಡಿಸಿದ್ದೇವೆ. ಆದರೆ ನಮ್ಮನ್ನು ನಾವು ಬಂಧಿಸಿದ್ದೇವೆ. ನಮ್ಮನ್ನು ಮುಕ್ತಗೊಳಿಸಿರುವ ಯಂತ್ರಗಳು ನಮ್ಮನ್ನು ಆಸೆಯ ಕೂಪದಲ್ಲಿರಿಸಿವೆ. ಜ್ಞಾನವು ನಮ್ಮನ್ನು ಸಿನಿಕರನ್ನಾಗಿಸಿದೆ. ನಮ್ಮ ಜಾಣ್ಮೆಯು ಕಠಿಣವೂ ನಿರ್ದಯಿಯೂ ಆಗಿದೆ. ನಾವು ತುಂಬಾ ಯೋಚಿಸುತ್ತೇವೆ ಆದರೆ ಕಡಿಮೆ ಪ್ರೀತಿಸುತ್ತೇವೆ.
ಯಂತ್ರಗಳಿಗಿಂತ ನಮಗೆ ಹೆಚ್ಚು ಮಾನವೀಯತೆಯ ಅಗತ್ಯವಿದೆ. ಜಾಣ್ಮೆಗಿಂತ ಹೆಚ್ಚು ದಯೆ , ಸಭ್ಯತೆಯ ಅವಶ್ಯಕತೆಯಿದೆ. ಈ ಗುಣಗಳಿಲ್ಲದೆ ಹೋದರೆ, ಬದುಕು ಹಿಂಸಾಮಯವಾಗುವುದು ಮತ್ತು ವಿನಾಶವಾಗುವುದು.
ವಿಮಾನ ಮತ್ತು ರೇಡಿಯೋಗಳು ನಮ್ಮನ್ನು ಹತ್ತಿರಕ್ಕೆ ತಂದಿವೆ. ಈ ಸಂಶೋಧನೆಗಳ ತಥ್ಯವೇ ಮನುಷ್ಯನ ಒಳ್ಳೆಯತನವನ್ನು ಕೂಗಿ ಹೇಳುತ್ತಿವೆ, ನಮ್ಮೆಲ್ಲರ ಸಹೋದರೆತೆಗಾಗಿ, ಒಗ್ಗಟ್ಟಿಗಾಗಿ ಮೊರೆಯಿಡುತ್ತಿದೆ. ಈಗಲೂ ಸಹ ನನ್ನ ಧ್ವನಿಯು ಮಿಲಿಯಗಟ್ಟಲೆ ಜನರನ್ನು ತಲುಪುತ್ತಿದೆ. ನಿರ್ಗತಿಕ ಗಂಡಸರು, ಹೆಂಗಸರು, ಪುಟ್ಟ ಪುಟ್ಟ ಮಕ್ಕಳು – ವ್ಯವಸ್ಥೆಯ ಬಲಿ ಪಶುಗಳು, ಮುಗ್ಧ ಜನರನ್ನು ಚಿತ್ರಹಿಂಸೆ ನೀಡಿ ಬಂಧನದಲ್ಲಿರಿಸುವ ವ್ಯವಸ್ಥೆ!
ಯಾರಿಗೆ ನನ್ನ ಮಾತುಗಳು ಕೇಳಿಸುತ್ತಿವೆಯೋ
ಕೇಳಿರಿ. ಧೃತಿಗೆಡದಿರಿ
ನಮ್ಮ ಮೇಲಿರುವ ಈ ವಿಷಾದ ಸ್ವಾರ್ಥ ಸಾಗುತ್ತಿರುವ ಈ ಹೊತ್ತು
ಮಾನವ ಪ್ರಗತಿಯ ಬಗ್ಗೆ ಭಯ ಪಟ್ಟ ಮನುಷ್ಯರ ಕಹಿ ಭಾವನೆಗಳಿವು
ಮಾನವ ದ್ವೇಷವು ಕೊನೆಗೊಳ್ಳಲಿದೆ.
ಸರ್ವಾಧಿಕಾರಿಯ ಅಂತ್ಯವಾಗಲಿದೆ
ಜನರ ಕೈಗಳಿಂದ ಕಿತ್ತುಕೊಂಡ ಅಧಿಕಾರವು
ಮರಳಿ ಜನರ ಕೈಗಳಿಗೆ ಮರಳಲಿದೆ
ಎಲ್ಲಿಯವರೆಗೆ ಮನುಷ್ಯರು ಸಾಯುತ್ತಿರುವರೋ
ಸ್ವಾತಂತ್ರ್ಯವೆಂದೂ ನಾಶವಾಗದು…
ಸೈನಿಕರೇ! ನಿಮ್ಮತನವನ್ನು ದುಷ್ಟರಿಗೆ ಬಿಟ್ಟು ಕೊಡದಿರಿ. ನಿಮ್ಮನ್ನು ಶೋಷಿಸುವವರಿಗೆ
ನಿಮ್ಮನ್ನು ದಾಸ್ಯಕ್ಕೆ ದೂಡಿದವರಿಗೆ
ನಿಮ್ಮ ಬದುಕುಗಳನ್ನು ನಿಯಂತ್ರಿಸುವವರಿಗೆ
ನೀವು ಯಾವುದನ್ನು ಯೋಚಿಸಬೇಕು
ಯಾವುದನ್ನು ಪ್ರೀತಿಸಬೇಕು
ನಿಮ್ಮನ್ನು ದುಡಿಸಿದವರಿಗೆ
ನಿಮ್ಮನ್ನು ಪಶುಗಳಂತೆ ನಡೆಸಿಕೊಂಡವರಿಗೆ
ನಿಮ್ಮನ್ನು ಫಿರಂಗಿಗಳ ಮದ್ದಾಗಿ ಬಳಸಿದವರಿಗೆ
ಮನುಷ್ಯರಲ್ಲದವರಿಗೆ
ನಿಮ್ಮತನವನ್ನು ಬಿಟ್ಟು ಕೊಡದಿರಿ
ಯಾಂತ್ರಿಕ ಮನುಷ್ಯರಿಗೆ
ಯಾಂತ್ರಿಕ ಮನಸ್ಸುಗಳಿಗೆ
ಯಾಂತ್ರಿಕ ಹೃದಯಗಳಿಗೆ
ನೀವು ಯಂತ್ರಗಳಲ್ಲ!
ನೀವು ದನಗಳಲ್ಲ!!
ನೀವು ಮನುಷ್ಯರು!!
ನಿಮ್ಮ ಹೃದಯದಲ್ಲಿ ಮಾನವತೆಯ ಪ್ರೇಮವಿದೆ!
ನೀವು ದ್ವೇಷಿಸಲಾರಿರಿ!
ಕೇವಲ ಪ್ರೀತಿಸಲ್ಪಡವನು ಮಾತ್ರ ದ್ವೇಷಿಸುತ್ತಾನೆ.
ಪ್ರೀತಿಸಲ್ಪಡದ ಅಸಹಜ ವ್ಯಕ್ತಿ!!
ಸೈನಿಕರೆ! ದಾಸ್ಯಕ್ಕಾಗಿ ಹೋರಾಡಬೇಡಿ!
ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿ!
ಸಂತ ಲೂಕ ನ 17 ನೆಯ ಅಧ್ಯಾಯದಲ್ಲಿ ಹೀಗಿದೆ
” ದೇವರ ಸಾಮ್ರಾಜ್ಯವು ಮಾನವನ ಹೃದಯದಲ್ಲಿದೆ”
ಒಬ್ಬನ ಹೃದಯದಲ್ಲಲ್ಲ
ಯಾವುದೋ ಗುಂಪಿನ ಹೃದಯದಲ್ಲಲ್ಲ
ಎಲ್ಲರ ಹೃದಯದಲ್ಲಿಯೂ..
ನಿಮ್ಮ ಹೃದಯದಲ್ಲಿಯೂ
ನಿಮ್ಮಲ್ಲಿ ಶಕ್ತಿಯಿದೆ
ಯಂತ್ರಗಳನ್ನು ತಯಾರಿಸುವ ಶಕ್ತಿ
ಸಂತೋಷಗಳನ್ನು ತಯಾರಿಸುವ ಶಕ್ತಿ
ಈ ಬದುಕನ್ನು ಮುಕ್ತವೂ ಸುಂದರವೂ ಆಗಿಸುವ ಶಕ್ತಿ ನಿಮಗಿದೆ.
ಈ ಬದುಕನ್ನೊಂದು ಅದ್ಭುತ ಸಾಹಸವನ್ನಾಗಿಸಿ.
ಆಮೇಲೆ – ಪ್ರಜಾ ಪ್ರಭುತ್ವದ ಹೆಸರಿನಲ್ಲಿ
ಆ ಶಕ್ತಿಯನ್ನು ಬಳಸೋಣ
ಒಗ್ಗಟ್ಟಾಗೋಣ
ಹೊಸ ವಿಶ್ವಕ್ಕಾಗಿ ಹೋರಾಡೋಣ.
ಸಭ್ಯ ಜಗತ್ತಿಗಾಗಿ…
ಎಲ್ಲಾ ಜನರಿಗೆ ಉದ್ಯೋಗ ನೀಡುವ
ಯುವ ಜನರಿಗೆ ಭವಿಷ್ಯವನ್ನೂ
ವೃದ್ಧರಿಗೆ ರಕ್ಷಣೆಯನ್ನೂ ನೀಡುವ ಆ ಜಗತ್ತಿಗೋಸ್ಕರ!
ಈ ಸುಳ್ಳು ಆಶ್ವಾಸನೆಗಳ ಮೂಲಕವೇ ಭೃಷ್ಟರು ಅಧಿಕಾರಕ್ಕೆ ಬಂದಿದ್ದಾರೆ. ಅದು ಸುಳ್ಳು! ಅವರು ಆ ಆಶ್ವಾಸನೆಗಳನ್ನು ಈಡೇರಿಸಲಾರರು. ಎಂದೆಂದಿಗೂ!!
ಸರ್ವಾಧಿಕಾರಿಯು ತನ್ನನ್ನು ತಾನು ಮುಕ್ತಗೊಳಿಸಿ ಜನರನ್ನು ಗುಲಾಮರನ್ನಾಗಿಸುತ್ತಾನೆ. ನಾವು ಆ ಆಶ್ವಾಸನೆಗಳಿಗೋಸ್ಕರ ಹೋರಾಡೋಣ.
ಮುಕ್ತ ಜಗತ್ತಿಗೋಸ್ಕರ!
ರಾಷ್ಟ್ರಬಂಧಗಳ ವಿಮುಕ್ತಿಗೋಸ್ಕರ!!
ಸ್ವಾರ್ಥ, ದ್ವೇಷ, ಅಸಹನೆಗಳ ಅಳಿವಿಗೋಸ್ಕರ!!
ವೈಚಾರಿಕ ಜಗತ್ತಿಗಾಗಿ ಹೋರಾಡೋಣ
ಎಲ್ಲಿ ವಿಜ್ಞಾನ ಮತ್ತು ಅಭಿವೃದ್ಧಿಯು ಎಲ್ಲಾ ಮನುಷ್ಯರ ಸಂತೋಷದೆಡೆಗೆ ಸಾಗಿಸುವುದೋ ಆ ಜಗತ್ತಿಗಾಗಿ
ಸಂಗಾತಿಗಳೇ ! ಪ್ರಜಾಪ್ರಭುತ್ವದ ಹೆಸರಿನಲ್ಲಿ ! ನಾವೆಲ್ಲರೂ ಒಂದಾಗೋಣ!
ಚಾರ್ಲಿ ಚಾಪ್ಲಿನ್ ನಟಿಸಿದ ‘ದ ಗ್ರೇಟ್ ಡಿಕ್ಟೇಟರ್’ ನ ಭಾಷಣ
-ಅನುವಾದ: ಪುನೀತ್ ಅಪ್ಪು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
ವಿದ್ಯಾನಾಯ್ಕ್ ಅರೇಹಳ್ಳಿ
ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ.
ಮುಖ್ಯ ಪಾತ್ರದಲ್ಲಿ ಅರ್ಜುನ್ ಚೌಹಾಣ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವತ್ಥ್ ಮತ್ತು ಇತರರು ಕಾಣಿಸಿಕೊಂಡಿದ್ದು, ಮೈಸೂರು ರಾಜು ಅವರು ಕಥೆ, ಚಿತ್ರಕಥೆ, ನೃತ್ಯ, ನಿರ್ದೇಶನದಲ್ಲಿ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.
ನಾಗರತ್ನಮ್ಮ ಚಿತ್ರದ ನಿರ್ಮಾಪಕರು ಆಗಿದ್ದು, ಲಕ್ಷ್ಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಎ. ಟಿ. ರವೀಶ್ ಸಂಗೀತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳಲಿದೆ, ಅರವಿಂದ್ ರಾಜ್ ಅವರ ಸಂಕಲನ, ರಾಮನಾಥ್ ರಾಜ್ ಛಾಯಾಗ್ರಹಣಾವಿದೆ ಎನ್ನುತ್ತಾರೆ ಚಿತ್ರದ ನಾಯಕ ಅರ್ಜುನ್ ಚೌಹಾಣ್.
ಅರ್ಜುನ್ ಚೌಹಾಣ್ ಕೇವಲ ಸಿನಿಮಾಗಳಲ್ಲದೆ, ಬಂಜಾರ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಂಜಾರ ಹವೇಲಿ ಎಂಬ ರಿಯಾಲಿಟಿ ಶೋ ಅನ್ನು ಕೂಡ ಯಶಸ್ವಿಯಾಗಿ ನಡೆಸಿ, ನಿರ್ದೇಶಿಸಿದ್ದಾರೆ. ಅದಲ್ಲದೆ ಈ ಹಿಂದೆ ರುದ್ರಾಕ್ಷಿಪುರ, ಸ್ವಚ್ಛ ಕರ್ನಾಟಕ, ಉತ್ತರ, ನಾಕುತಂತಿ, ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದು, ಉತ್ತರ ಮತ್ತು ನಾಕುತಂತಿ ರಿಲೀಸ್ ಆಗಬೇಕಿದೆ.
ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿರುವ ಅರ್ಜುನ್ ಚೌಹಾಣ್ ಚಿಕ್ಕ ವಯಸ್ಸಿನಿಂದಲೇ ಬೆಳ್ಳಿಪರದೆಯ ಮೇಲೆ ಹೀರೊ ಆಗಬೇಕೆಂಬ ದೊಡ್ಡ ಕನಸನ್ನು ಹೊತ್ತು ಸಿನಿರಂಗಕ್ಕೆ ಬಂದ ಬಂಜಾರ ಸಮುದಾಯದ ಪ್ರತಿಭೆ. ತಾವೊಬ್ಬ ನಟನಾಗಬೇಕು ಎಂಬ ಹಂಬಲದಿಂದ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.
ನಾಯಕ ನಟನಾಗಿ ರುದ್ರಾಕ್ಷಿಪುರ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಇವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.
ಇನ್ನು 2022ರಲ್ಲಿ ಸ್ವಚ್ಛ ಕರ್ನಾಟಕ ಎಂಬ ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರಂತಹ ಗಣ್ಯರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದದ್ದು ಇವರ ಪ್ರತಿಭೆಗೆ ರಹದಾರಿ ಸೃಷ್ಟಿಸಿದಂತಾಗಿತ್ತು. ಇದೀಗ ಕುಚುಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪರಿಶ್ರಮ ಮತ್ತು ಫಿಟ್ನೆಸ್
ಪರಿಶ್ರಮ ಮತ್ತು ಫಿಟ್ನೆಸ್ ಗೆ ಮಹತ್ವ ಕೊಡುವ ಅರ್ಜುನ್ ಸಿನಿಮಾಗಳಲ್ಲಿ ಹೀರೊ ಆಗಲು ಬೇಕಾದ ದೈಹಿಕ ಕಸರತ್ತು, ಸಿಕ್ಸ್ ಪ್ಯಾಕ್ ಬಾಡಿ ಟ್ರಾನ್ಸ್ಫಾರ್ಮೇಶನ್ ಮತ್ತು ನಟನಾ ಕೌಶಲಗಳಿಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ.
ಆಲ್ಬಮ್ ಸಾಂಗ್ಸ್ ಮತ್ತು ಶಾರ್ಟ್ ಫಿಲ್ಮ್ಸ್
ಕೇವಲ ಬೆಳ್ಳಿಪರದೆ ಮಾತ್ರವಲ್ಲದೆ, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ‘ಸೇ ನೋ ಟು ಗಾಂಜಾ’ದಂತಹ ಜಾಗೃತಿ ಮೂಡಿಸುವ ಆಲ್ಬಮ್ ಹಾಡುಗಳು ಮತ್ತು ಕಿರುಚಿತ್ರಗಳಲ್ಲೂ ಭಾಗಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸಬರಾಗಿ ಬಂದು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಸಿದ್ದಗಂಗಾ ಶಾಲೆಯಲ್ಲಿ ಅರಳಿದ ಪ್ರತಿಭೆ
ಸಿದ್ದಗಂಗಾ ಶಾಲೆಯಲ್ಲಿ ತಮ್ಮ ನಟನೆಯ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಅರ್ಜುನ್ ಚೌಹಾಣ್. ಶಾಲೆಯಲ್ಲಿ ಓದುತ್ತಿರುವ ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲಿ ಕಥೆ, ಕವನ ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಇದು ನಮಗೆ ವರದಾನವಾಗಿ ನಮ್ಮ ಸ್ನೇಹಿತರೆಲ್ಲ ಸೇರಿ ನಾವೇ ನಾಟಕ, ಕಥೆ ಕವನ ರಚಿಸಿ ಪ್ರದರ್ಶನ ಮಾಡುತ್ತಿದ್ದೆವು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.
ಬಂಜಾರ ಹವೇಲಿಯ ಹರಿಕಾರ
ಬಂಜಾರ ಹವೇಲಿ ಅನ್ನೋದು ಬಂಜಾರ (ಲಂಬಾಣಿ) ಸಮುದಾಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮೊದಲ ರಿಯಾಲಿಟಿ ಶೋ. ಇದು ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋ ಆಗಿದ್ದು, ವಿವಿಧ ಕ್ಷೇತ್ರಗಳ (ಸಿನಿಮಾ, ಟಿವಿ ಮತ್ತು ಸಾಮಾನ್ಯ ಜೀವನ) ಸ್ಪರ್ಧಿಗಳು ಒಂದೇ ಸೂರಿನಡಿ ವಾಸಿಸುತ್ತಾ ವಿವಿಧ ಆಟಗಳು ಮತ್ತು ಸವಾಲುಗಳಲ್ಲಿ ಸ್ಪರ್ಧಿಸುತ್ತಾರೆ.
ಬಂಜಾರ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಶೋನ ಮುಖ್ಯ ಉದ್ದೇಶವಾಗಿದೆ.
ಒಟ್ಟಾರೆಯಾಗಿ ಹಲವು ಅಡೆತಡೆಗಳನ್ನು ತಮ್ಮ ಜೀವನದಲ್ಲಿ ಎದುರಿಸಿ ತಾನು ಕಂಡ ಕನಸನ್ನು ನನಸು ಮಾಡಿಕೊಂಡು ತನ್ನೊಟ್ಟಿಗೆ ಇತರರನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಬಂಜಾರ ಸಮುದಾಯದ ಅರ್ಜುನ್ ಚೌಹಾಣ್ ಅವರಿಗೆ ಪ್ರೇಕ್ಷಕರ ಬೆಂಬಲ ಮತ್ತು ಆಶೀರ್ವಾದ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ. ಕುಟುಂಬ ಪರಿಹಾರ ಸಮೇತ ಚಿತ್ರಮಂದಿರಕ್ಕೆ ಬಂದು ಹಾರೈಸಿ ಎಂದು ವಿನಂತಿದ್ದಾರೆ ಕುಚುಕು ಚಿತ್ರದ ನಾಯಕ ನಟ ಅರ್ಜುನ್ ಚೌಹಾಣ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ6 days agoದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
-
ದಿನದ ಸುದ್ದಿ4 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ2 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ3 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ



