ಸಿನಿ ಸುದ್ದಿ
ಹಿಟ್ಲರನ ಸರ್ವಾಧಿಕಾರದ ವಿರುದ್ಧ ‘ಚಾರ್ಲಿ ಚಾಪ್ಲಿನ್’ ಭಾಷಣ
“ಕ್ಷಮಿಸಿ! ನಾನು ಸರ್ವಾಧಿಕಾರಿಯಾಗಲು ಬಯಸಲಾರೆ, ಅದು ನನ್ನ ಕೆಲಸವೂ ಅಲ್ಲ. ನಾನು ಯಾರನ್ನೂ ಕೂಡಾ ಗೆಲ್ಲಲು ಅಥವಾ ಆಳಲು ಬಯಸುವುದಿಲ್ಲ. ಸಾಧ್ಯವಾದರೆ ನಾವು ಯಹೂದಿ, ನಾಝಿ, ಕರಿಯರು, ಬಿಳಿಯರು ಹೀಗೆ ಎಲ್ಲರಿಗೂ ಸಹಾಯ ಮಾಡುವಂತಾಗಬೇಕು. ಎಲ್ಲರೂ ಪರಸ್ಪರ ಸಹಾಯ ಮಾಡಿಕೊಳ್ಳಬೇಕು. ಮನುಷ್ಯರೆಂದರೆ ಹಾಗೆ. ನಾವು ಪರಸ್ಪರ ಸಂತೋಷದಿಂದ ಬದುಕಬೇಕೇ ಹೊರತು ಇತರರ ದುಃಖಕ್ಕಾಗಿ ಅಲ್ಲ. ಯಾರನ್ನೂ ದ್ವೇಷಿಸಲೇ ಕೂಡದು. ಈ ಭೂಮಿಯಲ್ಲಿ ಎಲ್ಲರಿಗೂ ಜಾಗವಿದೆ. ಮತ್ತೆ ಈ ಭೂಮಿಯು ಎಲ್ಲರ ಅಗತ್ಯಗಳನ್ನೂ ಪೂರೈಸುವಷ್ಟು ಸಮೃದ್ಧವಾಗಿದೆ. ಜೀವನದ ಹಾದಿ ಸುಂದರವೂ ಮುಕ್ತವೂ ಆಗಿರಲು ಸಾಧ್ಯ. ಆದರೆ ನಾವು ಆ ಹಾದಿಯನ್ನೇ ಕಳೆದುಕೊಂಡಿದ್ದೇವೆ.
ಸ್ವಾರ್ಥವು ಮನುಷ್ಯನ ಆತ್ಮವನ್ನೇ ಕಲುಷಿತಗೊಳಿಸಿದೆ, ಜಗತ್ತನ್ನು ದ್ವೇಷವೆಂಬ ಬೇಲಿಯಿಂದ ಬಂಧಿಸಿದೆ, ದುಃಖ ಮತ್ತು ರಕ್ತಪಾತದೆಡೆಗೆ ಸಾಗಿಸುತ್ತಿದೆ. ನಾವು ವೇಗವನ್ನು ಅಭಿವೃದ್ಧಿಪಡಿಸಿದ್ದೇವೆ. ಆದರೆ ನಮ್ಮನ್ನು ನಾವು ಬಂಧಿಸಿದ್ದೇವೆ. ನಮ್ಮನ್ನು ಮುಕ್ತಗೊಳಿಸಿರುವ ಯಂತ್ರಗಳು ನಮ್ಮನ್ನು ಆಸೆಯ ಕೂಪದಲ್ಲಿರಿಸಿವೆ. ಜ್ಞಾನವು ನಮ್ಮನ್ನು ಸಿನಿಕರನ್ನಾಗಿಸಿದೆ. ನಮ್ಮ ಜಾಣ್ಮೆಯು ಕಠಿಣವೂ ನಿರ್ದಯಿಯೂ ಆಗಿದೆ. ನಾವು ತುಂಬಾ ಯೋಚಿಸುತ್ತೇವೆ ಆದರೆ ಕಡಿಮೆ ಪ್ರೀತಿಸುತ್ತೇವೆ.
ಯಂತ್ರಗಳಿಗಿಂತ ನಮಗೆ ಹೆಚ್ಚು ಮಾನವೀಯತೆಯ ಅಗತ್ಯವಿದೆ. ಜಾಣ್ಮೆಗಿಂತ ಹೆಚ್ಚು ದಯೆ , ಸಭ್ಯತೆಯ ಅವಶ್ಯಕತೆಯಿದೆ. ಈ ಗುಣಗಳಿಲ್ಲದೆ ಹೋದರೆ, ಬದುಕು ಹಿಂಸಾಮಯವಾಗುವುದು ಮತ್ತು ವಿನಾಶವಾಗುವುದು.
ವಿಮಾನ ಮತ್ತು ರೇಡಿಯೋಗಳು ನಮ್ಮನ್ನು ಹತ್ತಿರಕ್ಕೆ ತಂದಿವೆ. ಈ ಸಂಶೋಧನೆಗಳ ತಥ್ಯವೇ ಮನುಷ್ಯನ ಒಳ್ಳೆಯತನವನ್ನು ಕೂಗಿ ಹೇಳುತ್ತಿವೆ, ನಮ್ಮೆಲ್ಲರ ಸಹೋದರೆತೆಗಾಗಿ, ಒಗ್ಗಟ್ಟಿಗಾಗಿ ಮೊರೆಯಿಡುತ್ತಿದೆ. ಈಗಲೂ ಸಹ ನನ್ನ ಧ್ವನಿಯು ಮಿಲಿಯಗಟ್ಟಲೆ ಜನರನ್ನು ತಲುಪುತ್ತಿದೆ. ನಿರ್ಗತಿಕ ಗಂಡಸರು, ಹೆಂಗಸರು, ಪುಟ್ಟ ಪುಟ್ಟ ಮಕ್ಕಳು – ವ್ಯವಸ್ಥೆಯ ಬಲಿ ಪಶುಗಳು, ಮುಗ್ಧ ಜನರನ್ನು ಚಿತ್ರಹಿಂಸೆ ನೀಡಿ ಬಂಧನದಲ್ಲಿರಿಸುವ ವ್ಯವಸ್ಥೆ!
ಯಾರಿಗೆ ನನ್ನ ಮಾತುಗಳು ಕೇಳಿಸುತ್ತಿವೆಯೋ
ಕೇಳಿರಿ. ಧೃತಿಗೆಡದಿರಿ
ನಮ್ಮ ಮೇಲಿರುವ ಈ ವಿಷಾದ ಸ್ವಾರ್ಥ ಸಾಗುತ್ತಿರುವ ಈ ಹೊತ್ತು
ಮಾನವ ಪ್ರಗತಿಯ ಬಗ್ಗೆ ಭಯ ಪಟ್ಟ ಮನುಷ್ಯರ ಕಹಿ ಭಾವನೆಗಳಿವು
ಮಾನವ ದ್ವೇಷವು ಕೊನೆಗೊಳ್ಳಲಿದೆ.
ಸರ್ವಾಧಿಕಾರಿಯ ಅಂತ್ಯವಾಗಲಿದೆ
ಜನರ ಕೈಗಳಿಂದ ಕಿತ್ತುಕೊಂಡ ಅಧಿಕಾರವು
ಮರಳಿ ಜನರ ಕೈಗಳಿಗೆ ಮರಳಲಿದೆ
ಎಲ್ಲಿಯವರೆಗೆ ಮನುಷ್ಯರು ಸಾಯುತ್ತಿರುವರೋ
ಸ್ವಾತಂತ್ರ್ಯವೆಂದೂ ನಾಶವಾಗದು…
ಸೈನಿಕರೇ! ನಿಮ್ಮತನವನ್ನು ದುಷ್ಟರಿಗೆ ಬಿಟ್ಟು ಕೊಡದಿರಿ. ನಿಮ್ಮನ್ನು ಶೋಷಿಸುವವರಿಗೆ
ನಿಮ್ಮನ್ನು ದಾಸ್ಯಕ್ಕೆ ದೂಡಿದವರಿಗೆ
ನಿಮ್ಮ ಬದುಕುಗಳನ್ನು ನಿಯಂತ್ರಿಸುವವರಿಗೆ
ನೀವು ಯಾವುದನ್ನು ಯೋಚಿಸಬೇಕು
ಯಾವುದನ್ನು ಪ್ರೀತಿಸಬೇಕು
ನಿಮ್ಮನ್ನು ದುಡಿಸಿದವರಿಗೆ
ನಿಮ್ಮನ್ನು ಪಶುಗಳಂತೆ ನಡೆಸಿಕೊಂಡವರಿಗೆ
ನಿಮ್ಮನ್ನು ಫಿರಂಗಿಗಳ ಮದ್ದಾಗಿ ಬಳಸಿದವರಿಗೆ
ಮನುಷ್ಯರಲ್ಲದವರಿಗೆ
ನಿಮ್ಮತನವನ್ನು ಬಿಟ್ಟು ಕೊಡದಿರಿ
ಯಾಂತ್ರಿಕ ಮನುಷ್ಯರಿಗೆ
ಯಾಂತ್ರಿಕ ಮನಸ್ಸುಗಳಿಗೆ
ಯಾಂತ್ರಿಕ ಹೃದಯಗಳಿಗೆ
ನೀವು ಯಂತ್ರಗಳಲ್ಲ!
ನೀವು ದನಗಳಲ್ಲ!!
ನೀವು ಮನುಷ್ಯರು!!
ನಿಮ್ಮ ಹೃದಯದಲ್ಲಿ ಮಾನವತೆಯ ಪ್ರೇಮವಿದೆ!
ನೀವು ದ್ವೇಷಿಸಲಾರಿರಿ!
ಕೇವಲ ಪ್ರೀತಿಸಲ್ಪಡವನು ಮಾತ್ರ ದ್ವೇಷಿಸುತ್ತಾನೆ.
ಪ್ರೀತಿಸಲ್ಪಡದ ಅಸಹಜ ವ್ಯಕ್ತಿ!!
ಸೈನಿಕರೆ! ದಾಸ್ಯಕ್ಕಾಗಿ ಹೋರಾಡಬೇಡಿ!
ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿ!
ಸಂತ ಲೂಕ ನ 17 ನೆಯ ಅಧ್ಯಾಯದಲ್ಲಿ ಹೀಗಿದೆ
” ದೇವರ ಸಾಮ್ರಾಜ್ಯವು ಮಾನವನ ಹೃದಯದಲ್ಲಿದೆ”
ಒಬ್ಬನ ಹೃದಯದಲ್ಲಲ್ಲ
ಯಾವುದೋ ಗುಂಪಿನ ಹೃದಯದಲ್ಲಲ್ಲ
ಎಲ್ಲರ ಹೃದಯದಲ್ಲಿಯೂ..
ನಿಮ್ಮ ಹೃದಯದಲ್ಲಿಯೂ
ನಿಮ್ಮಲ್ಲಿ ಶಕ್ತಿಯಿದೆ
ಯಂತ್ರಗಳನ್ನು ತಯಾರಿಸುವ ಶಕ್ತಿ
ಸಂತೋಷಗಳನ್ನು ತಯಾರಿಸುವ ಶಕ್ತಿ
ಈ ಬದುಕನ್ನು ಮುಕ್ತವೂ ಸುಂದರವೂ ಆಗಿಸುವ ಶಕ್ತಿ ನಿಮಗಿದೆ.
ಈ ಬದುಕನ್ನೊಂದು ಅದ್ಭುತ ಸಾಹಸವನ್ನಾಗಿಸಿ.
ಆಮೇಲೆ – ಪ್ರಜಾ ಪ್ರಭುತ್ವದ ಹೆಸರಿನಲ್ಲಿ
ಆ ಶಕ್ತಿಯನ್ನು ಬಳಸೋಣ
ಒಗ್ಗಟ್ಟಾಗೋಣ
ಹೊಸ ವಿಶ್ವಕ್ಕಾಗಿ ಹೋರಾಡೋಣ.
ಸಭ್ಯ ಜಗತ್ತಿಗಾಗಿ…
ಎಲ್ಲಾ ಜನರಿಗೆ ಉದ್ಯೋಗ ನೀಡುವ
ಯುವ ಜನರಿಗೆ ಭವಿಷ್ಯವನ್ನೂ
ವೃದ್ಧರಿಗೆ ರಕ್ಷಣೆಯನ್ನೂ ನೀಡುವ ಆ ಜಗತ್ತಿಗೋಸ್ಕರ!
ಈ ಸುಳ್ಳು ಆಶ್ವಾಸನೆಗಳ ಮೂಲಕವೇ ಭೃಷ್ಟರು ಅಧಿಕಾರಕ್ಕೆ ಬಂದಿದ್ದಾರೆ. ಅದು ಸುಳ್ಳು! ಅವರು ಆ ಆಶ್ವಾಸನೆಗಳನ್ನು ಈಡೇರಿಸಲಾರರು. ಎಂದೆಂದಿಗೂ!!
ಸರ್ವಾಧಿಕಾರಿಯು ತನ್ನನ್ನು ತಾನು ಮುಕ್ತಗೊಳಿಸಿ ಜನರನ್ನು ಗುಲಾಮರನ್ನಾಗಿಸುತ್ತಾನೆ. ನಾವು ಆ ಆಶ್ವಾಸನೆಗಳಿಗೋಸ್ಕರ ಹೋರಾಡೋಣ.
ಮುಕ್ತ ಜಗತ್ತಿಗೋಸ್ಕರ!
ರಾಷ್ಟ್ರಬಂಧಗಳ ವಿಮುಕ್ತಿಗೋಸ್ಕರ!!
ಸ್ವಾರ್ಥ, ದ್ವೇಷ, ಅಸಹನೆಗಳ ಅಳಿವಿಗೋಸ್ಕರ!!
ವೈಚಾರಿಕ ಜಗತ್ತಿಗಾಗಿ ಹೋರಾಡೋಣ
ಎಲ್ಲಿ ವಿಜ್ಞಾನ ಮತ್ತು ಅಭಿವೃದ್ಧಿಯು ಎಲ್ಲಾ ಮನುಷ್ಯರ ಸಂತೋಷದೆಡೆಗೆ ಸಾಗಿಸುವುದೋ ಆ ಜಗತ್ತಿಗಾಗಿ
ಸಂಗಾತಿಗಳೇ ! ಪ್ರಜಾಪ್ರಭುತ್ವದ ಹೆಸರಿನಲ್ಲಿ ! ನಾವೆಲ್ಲರೂ ಒಂದಾಗೋಣ!
ಚಾರ್ಲಿ ಚಾಪ್ಲಿನ್ ನಟಿಸಿದ ‘ದ ಗ್ರೇಟ್ ಡಿಕ್ಟೇಟರ್’ ನ ಭಾಷಣ
-ಅನುವಾದ: ಪುನೀತ್ ಅಪ್ಪು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
ವಿದ್ಯಾನಾಯ್ಕ್ ಅರೇಹಳ್ಳಿ
ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ.
ಮುಖ್ಯ ಪಾತ್ರದಲ್ಲಿ ಅರ್ಜುನ್ ಚೌಹಾಣ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವತ್ಥ್ ಮತ್ತು ಇತರರು ಕಾಣಿಸಿಕೊಂಡಿದ್ದು, ಮೈಸೂರು ರಾಜು ಅವರು ಕಥೆ, ಚಿತ್ರಕಥೆ, ನೃತ್ಯ, ನಿರ್ದೇಶನದಲ್ಲಿ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.
ನಾಗರತ್ನಮ್ಮ ಚಿತ್ರದ ನಿರ್ಮಾಪಕರು ಆಗಿದ್ದು, ಲಕ್ಷ್ಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಎ. ಟಿ. ರವೀಶ್ ಸಂಗೀತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳಲಿದೆ, ಅರವಿಂದ್ ರಾಜ್ ಅವರ ಸಂಕಲನ, ರಾಮನಾಥ್ ರಾಜ್ ಛಾಯಾಗ್ರಹಣಾವಿದೆ ಎನ್ನುತ್ತಾರೆ ಚಿತ್ರದ ನಾಯಕ ಅರ್ಜುನ್ ಚೌಹಾಣ್.
ಅರ್ಜುನ್ ಚೌಹಾಣ್ ಕೇವಲ ಸಿನಿಮಾಗಳಲ್ಲದೆ, ಬಂಜಾರ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಂಜಾರ ಹವೇಲಿ ಎಂಬ ರಿಯಾಲಿಟಿ ಶೋ ಅನ್ನು ಕೂಡ ಯಶಸ್ವಿಯಾಗಿ ನಡೆಸಿ, ನಿರ್ದೇಶಿಸಿದ್ದಾರೆ. ಅದಲ್ಲದೆ ಈ ಹಿಂದೆ ರುದ್ರಾಕ್ಷಿಪುರ, ಸ್ವಚ್ಛ ಕರ್ನಾಟಕ, ಉತ್ತರ, ನಾಕುತಂತಿ, ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದು, ಉತ್ತರ ಮತ್ತು ನಾಕುತಂತಿ ರಿಲೀಸ್ ಆಗಬೇಕಿದೆ.
ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿರುವ ಅರ್ಜುನ್ ಚೌಹಾಣ್ ಚಿಕ್ಕ ವಯಸ್ಸಿನಿಂದಲೇ ಬೆಳ್ಳಿಪರದೆಯ ಮೇಲೆ ಹೀರೊ ಆಗಬೇಕೆಂಬ ದೊಡ್ಡ ಕನಸನ್ನು ಹೊತ್ತು ಸಿನಿರಂಗಕ್ಕೆ ಬಂದ ಬಂಜಾರ ಸಮುದಾಯದ ಪ್ರತಿಭೆ. ತಾವೊಬ್ಬ ನಟನಾಗಬೇಕು ಎಂಬ ಹಂಬಲದಿಂದ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.
ನಾಯಕ ನಟನಾಗಿ ರುದ್ರಾಕ್ಷಿಪುರ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಇವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.
ಇನ್ನು 2022ರಲ್ಲಿ ಸ್ವಚ್ಛ ಕರ್ನಾಟಕ ಎಂಬ ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರಂತಹ ಗಣ್ಯರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದದ್ದು ಇವರ ಪ್ರತಿಭೆಗೆ ರಹದಾರಿ ಸೃಷ್ಟಿಸಿದಂತಾಗಿತ್ತು. ಇದೀಗ ಕುಚುಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪರಿಶ್ರಮ ಮತ್ತು ಫಿಟ್ನೆಸ್
ಪರಿಶ್ರಮ ಮತ್ತು ಫಿಟ್ನೆಸ್ ಗೆ ಮಹತ್ವ ಕೊಡುವ ಅರ್ಜುನ್ ಸಿನಿಮಾಗಳಲ್ಲಿ ಹೀರೊ ಆಗಲು ಬೇಕಾದ ದೈಹಿಕ ಕಸರತ್ತು, ಸಿಕ್ಸ್ ಪ್ಯಾಕ್ ಬಾಡಿ ಟ್ರಾನ್ಸ್ಫಾರ್ಮೇಶನ್ ಮತ್ತು ನಟನಾ ಕೌಶಲಗಳಿಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ.
ಆಲ್ಬಮ್ ಸಾಂಗ್ಸ್ ಮತ್ತು ಶಾರ್ಟ್ ಫಿಲ್ಮ್ಸ್
ಕೇವಲ ಬೆಳ್ಳಿಪರದೆ ಮಾತ್ರವಲ್ಲದೆ, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ‘ಸೇ ನೋ ಟು ಗಾಂಜಾ’ದಂತಹ ಜಾಗೃತಿ ಮೂಡಿಸುವ ಆಲ್ಬಮ್ ಹಾಡುಗಳು ಮತ್ತು ಕಿರುಚಿತ್ರಗಳಲ್ಲೂ ಭಾಗಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸಬರಾಗಿ ಬಂದು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಸಿದ್ದಗಂಗಾ ಶಾಲೆಯಲ್ಲಿ ಅರಳಿದ ಪ್ರತಿಭೆ
ಸಿದ್ದಗಂಗಾ ಶಾಲೆಯಲ್ಲಿ ತಮ್ಮ ನಟನೆಯ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಅರ್ಜುನ್ ಚೌಹಾಣ್. ಶಾಲೆಯಲ್ಲಿ ಓದುತ್ತಿರುವ ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲಿ ಕಥೆ, ಕವನ ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಇದು ನಮಗೆ ವರದಾನವಾಗಿ ನಮ್ಮ ಸ್ನೇಹಿತರೆಲ್ಲ ಸೇರಿ ನಾವೇ ನಾಟಕ, ಕಥೆ ಕವನ ರಚಿಸಿ ಪ್ರದರ್ಶನ ಮಾಡುತ್ತಿದ್ದೆವು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.
ಬಂಜಾರ ಹವೇಲಿಯ ಹರಿಕಾರ
ಬಂಜಾರ ಹವೇಲಿ ಅನ್ನೋದು ಬಂಜಾರ (ಲಂಬಾಣಿ) ಸಮುದಾಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮೊದಲ ರಿಯಾಲಿಟಿ ಶೋ. ಇದು ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋ ಆಗಿದ್ದು, ವಿವಿಧ ಕ್ಷೇತ್ರಗಳ (ಸಿನಿಮಾ, ಟಿವಿ ಮತ್ತು ಸಾಮಾನ್ಯ ಜೀವನ) ಸ್ಪರ್ಧಿಗಳು ಒಂದೇ ಸೂರಿನಡಿ ವಾಸಿಸುತ್ತಾ ವಿವಿಧ ಆಟಗಳು ಮತ್ತು ಸವಾಲುಗಳಲ್ಲಿ ಸ್ಪರ್ಧಿಸುತ್ತಾರೆ.
ಬಂಜಾರ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಶೋನ ಮುಖ್ಯ ಉದ್ದೇಶವಾಗಿದೆ.
ಒಟ್ಟಾರೆಯಾಗಿ ಹಲವು ಅಡೆತಡೆಗಳನ್ನು ತಮ್ಮ ಜೀವನದಲ್ಲಿ ಎದುರಿಸಿ ತಾನು ಕಂಡ ಕನಸನ್ನು ನನಸು ಮಾಡಿಕೊಂಡು ತನ್ನೊಟ್ಟಿಗೆ ಇತರರನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಬಂಜಾರ ಸಮುದಾಯದ ಅರ್ಜುನ್ ಚೌಹಾಣ್ ಅವರಿಗೆ ಪ್ರೇಕ್ಷಕರ ಬೆಂಬಲ ಮತ್ತು ಆಶೀರ್ವಾದ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ. ಕುಟುಂಬ ಪರಿಹಾರ ಸಮೇತ ಚಿತ್ರಮಂದಿರಕ್ಕೆ ಬಂದು ಹಾರೈಸಿ ಎಂದು ವಿನಂತಿದ್ದಾರೆ ಕುಚುಕು ಚಿತ್ರದ ನಾಯಕ ನಟ ಅರ್ಜುನ್ ಚೌಹಾಣ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು
ಸುದ್ದಿದಿನ ಡೆಸ್ಕ್:ಆರಂಭಿಕ ಜೀವನ – 1978ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್ ಅವರು ಕಾಲೇಜು ದಿನಗಳಿಂದಲೇ ಕಲೆಯತ್ತ ಒಲವು ಹೊಂದಿದ್ದರು.
ಚಲನಚಿತ್ರ ರಂಗ – 2005ರಲ್ಲಿ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಅವರು, 2007ರಲ್ಲಿ ಪುನೀತ್ ರಾಜ್ಕುಮಾರ್ ಅವರ ‘ಮಿಲನ’ ಚಿತ್ರದಲ್ಲಿ ಹೇಮಂತ್ ಎಂಬ ವಿಲನ್ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದರು.
ಇತ್ತೀಚಿನ ಜನಪ್ರಿಯತೆ – ‘ಲವ್ ಮಾಕ್ಟೇಲ್’ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟ-ನಿರ್ಮಾಪಕರಾಗಿ ದೊಡ್ಡ ಹೆಸರು ಮಾಡಿದ್ದರು.
ದಿಲೀಪ್ ರಾಜ್ ಅವರ ಸಾವು ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟ. ಇವರ ಈ ಹಠಾತ್ ನಿಧನವು ಒತ್ತಡದ ಜೀವನಶೈಲಿ ಮತ್ತು ಆರೋಗ್ಯದ ಕಡೆಗೆ ನಾವು ನೀಡಬೇಕಾದ ಹೆಚ್ಚಿನ ಗಮನದ ಬಗ್ಗೆ ಎಚ್ಚರಿಕೆ ನೀಡುವಂತಿದೆ.

ದಿನದ ಸುದ್ದಿ
ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು
ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ ಕಲಾವಿದ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಈ ಸಾವಿನ ಹಿಂದೆ ಒಂದು ಬೇಸರದ ಸಂಗತಿಯೂ ಅಡಗಿದೆ, ಅದೇನೆಂದರೆ ಅವರ ಆರೋಗ್ಯದ ಕುರಿತು ತೋರಿದ ಒಂದು ನಿರ್ಲಕ್ಷ್ಯ!
ನಟ ನಿರ್ಮಾಪಕ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ಸ್ಯಾಂಡಲ್ವುಡ್ ದಿಗ್ಭ್ರಮೆಗೊಂಡಿದೆ. ಕೆಲವು ದಿನಗಳ ಹಿಂದೆ ಗೋವಾ ಪ್ರವಾಸದಲ್ಲಿದ್ದಾಗಲೇ ಅವರಿಗೆ ಆಗಾಗ ಎದೆನೋವು ಕಾಣಿಸಿಕೊಂಡಿತ್ತು, ಆದರೆ ಪ್ರವಾಸದ ಖುಷಿಯಲ್ಲಿದ್ದ ಅವರು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.. ಬೆಂಗಳೂರಿಗೆ ಮರಳಿದ ನಂತರ ಇಂದು ವೈದ್ಯಕೀಯ ತಪಾಸಣೆಗೆ ಅಪಾಯಿಂಟ್ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು;
ತಪಾಸಣೆಗೆ ಹೋಗುವ ಮುನ್ನವೇ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಕುಮಾರಸ್ವಾಮಿ ಲೇಔಟ್ನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೆ ಇಂದು ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ನಟ ದಿಲೀಪ್ ರಾಜ್ ಅವರು ಕೆಲವೇ ದಿನಗಳ ಹಿಂದೆ ಗೋವಾಗೆ ಪ್ರವಾಸ ತೆರಳಿದ್ದರು.
ಅಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಅಂದೇ ಹೃದಯವು ಅಪಾಯದ ಮುನ್ಸೂಚನೆ ನೀಡಿದ್ದರೂ, ದಿಲೀಪ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದರು. ಗೋವಾ ಟ್ರಿಪ್ನಲ್ಲಿದ್ದಾಗಲೇ ಆಗಾಗ ನೋವು ಕಾಣಿಸಿಕೊಂಡರೂ, ಅವರು ಅದನ್ನು ಕೇರ್ ಮಾಡಿರಲಿಲ್ಲ.
ಬೆಂಗಳೂರಿಗೆ ಮರಳಿದ ನಂತರ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ವಿಪರ್ಯಾಸವೆಂದರೆ, ಇಂದು ಅವರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು ಮತ್ತು ಅದಕ್ಕಾಗಿ ವೈದ್ಯರ ಅಪಾಯಿಂಟ್ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ನಿನ್ನೆ ರಾತ್ರಿ ಕೂಡ ಧಾರಾವಾಹಿ ಕಲಾವಿದರ ಜೊತೆ ಫೋನ್ನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ನಟನಿಗೆ, ಮಧ್ಯರಾತ್ರಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಏಕಾಏಕಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಪಂಚಪಾಡಿ ಪದ್ಧತಿಯಲ್ಲಿ ವಿದ್ಯಾಭ್ಯಾಸ | ತ್ಯಾವಣಿಗೆಯ ಮಂದಾರ ಶಾಲೆಯಲ್ಲಿ ಪ್ರವೇಶ ಪ್ರಾರಂಭ
-
ದಿನದ ಸುದ್ದಿ6 days agoಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ
-
ದಿನದ ಸುದ್ದಿ4 days agoಬಳ್ಳಾರಿ ಗಾಂಧಿನಗರ ಠಾಣೆಯ ವ್ಯಾಪ್ತಿ ಜೂಜಾಟ | ಠಾಣೆಯ ಅಧಿಕಾರಿಗಳು ಮೌನ ; ಕ್ರಮ ಕೈಗೊಳ್ತಾರಾ ಎಸ್ ಪಿ..?
-
ಅಂಕಣ4 days agoಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
-
ದಿನದ ಸುದ್ದಿ3 days agoಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದಾವಣಗೆರೆ | ಇದೇ 22 ರಂದು ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026 ಕಾರ್ಯಕ್ರಮ
-
ದಿನದ ಸುದ್ದಿ5 days agoಕೀಲು ಮತ್ತು ಮೂಳೆ ಚಿಕಿತ್ಸೆ ; ರೋಬೋಟಿಕ್ ಮತ್ತು ಮಿನಿಮಲಿ ಇನ್ನೇಸಿವ್ ಸರ್ಜರಿಗಳಲ್ಲಿ ಮಹತ್ವದ ಬದಲಾವಣೆ : ಡಾ.ಲೋಕೇಶ್ ಎ. ವೀರಪ್ಪ
-
ದಿನದ ಸುದ್ದಿ1 hour agoದಾವಣಗೆರೆ | ಇಂದು ಕರೆಂಟ್ ಇರಲ್ಲ


