ರಾಜಕೀಯ
ಸಂವಿಧಾನ ಸಂಭಾಷಣೆ ಮತ್ತು ದಲಿತ ಸಂವೇದನೆ
ಸಮಾಜ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಸಂವಿದಾನ ಸಂಭಾಷಣೆ ಕಾರ್ಯಕ್ರಮಕ್ಕೆ ರಣಧೀರ ಪಡೆ ಪ್ರತಿಭಟನೆಯ ಮೂಲಕ ತಡೆಯೊಡ್ಡಿತು. ಇದು ನಮ್ಮ ಸಮಾನ ಮನಸ್ಕ ಗೆಳೆಯರ ಮಧ್ಯೆ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷನಾಗಿ, ದಲಿತ ಚಳುವಳಿ, ಸಂವಿದಾನ ಉಳಿಸಿ ಚಳುವಳಿ, ಮಾನವ ಹಕ್ಕು ಚಳುವಳಿಯ ಸಾಮಾನ್ಯ ಕಾರ್ಯಕರ್ತನಾಗಿ ಈ ಹೋರಾಟವನ್ನು ಯಾಕೆ ಮಾಡಿದೆವು ಎಂದು ಹೇಳಬೇಕಿದೆ. ಅದಕ್ಕಾಗಿ ಈ ಲೇಖನ….
ಸಂವಿಧಾನ ಸಂಭಾಷಣೆ ಎಂಬ ಕಾರ್ಯಕ್ರಮ ಸಮಾಜ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಕಾರ್ಯಕ್ರಮ ಎಂದು ಹೊರಗಿನ ಪ್ರಪಂಚ ಭಾವಿಸಿದೆ. ಆದರೆ ಅದು ಪೂರ್ಣ ಸತ್ಯವಲ್ಲ. ನಾಲ್ಕು ಕೋಟಿ ವೆಚ್ಚದ ಇಲಾಖೆಯ ಅನುದಾನದ ಎನ್ ಡಿಟಿವಿ ಮತ್ತು ಸಮೃದ್ದ ಭಾರತ ಟಿವಿ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮವದು. ಖಾಸಗಿ ಟಿವಿ ವಾಹಿನಿಯ ಚರ್ಚಾ ಕಾರ್ಯಕ್ರಮಕ್ಕೆ ಕನ್ನಡ ಜನಗಳ ತೆರಿಗೆ ಹಣ ಬಳಸಲಾಗಿತ್ತು.
ನಿಮಗೆ ನೆನಪಿರಬಹುದು. ಕೆಲವೇ ಕೆಲವು ತಿಂಗಳ ಹಿಂದೆ ಲಕ್ಷಾಂತರ ಜನರನ್ನು ಸೇರಿಸಿ ಐಶಾರಾಮಿಯಾಗಿ ಅಂಬೇಡ್ಕರ್ 150 ಕಾರ್ಯಕ್ರಮ ವನ್ನು ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿತ್ತು. ಅದರ ಫಲಿತಾಂಶ ಏನು ಎಂಬುದನ್ನು ಈಗ ಪ್ರಶ್ನಿಸೋದು ಬೇಡ. ಅದಕ್ಕಾಗಿ ಖರ್ಚಾದ ನೂರಾರು ಕೋಟಿಯ ಲೆಕ್ಕ ಕೇಳೋದೂ ಬೇಡ. ಅಂದು ಅತಿಥಿಗಳ ಆಯ್ಕೆಯಲ್ಲಿ ಕನಿಷ್ಠ ನ್ಯಾಯ ಪಾಲಿಸಲಾಗಿತ್ತು. ದೇಶ ವಿದೇಶದ ಉಪನ್ಯಾಸಕರ ಜೊತೆಗೆ ಕನ್ನಡ ಸಾಹಿತಿ, ಚಿಂತಕರು, ಹೋರಾಟಗಾರರಿಗೆ ವೇದಿಕೆಯಲ್ಲಿ ಸಮಾನಾವಕಾಶ ಒದಗಿಸಲಾಗಿತ್ತು. ಸಾವಿರಾರು ದಲಿತರು, ಯುವಕರು, ಮಹಿಳೆಯರು ಅವರ ಉಪನ್ಯಾಸದಿಂದ ಜ್ಞಾನ ಪಡೆದುಕೊಂಡಿದ್ದರು.
ಅದರ ದುಂದುವೆಚ್ಚವನ್ನು ನಾವು ವಿರೋಧಿಸಿದ್ದರೂ ಎಲ್ಲರ ಒಳಗೊಳ್ಳುವಿಕೆಯ ಕಾರಣಕ್ಕೆ ಸ್ವಾಗತಿಸಿದ್ದೆವು. ಕೆಲ ತಿಂಗಳ ಹಿಂದೆ ನಡೆದಿದ್ದ ಈ ಕಾರ್ಯಕ್ರಮವನ್ನು ಯೂನಿವರ್ಸಿಟಿ ಸಹಯೋಗದಲ್ಲಿ ಮಾಡಲಾಗಿತ್ತು. ಅತಿಥಿಗಳ ಆಯ್ಕೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳಿಗೆ ಸಮಿತಿ ರಚಿಸಿ ನಡೆಸಲಾಗಿತ್ತು. ಇವತ್ತು ನಡೆಯುತ್ತಿದ್ದ ಸಂವಿಧಾನ ಸಂಭಾಷಣೆಗೆ ಅತಿಥಿಗಳನ್ನು ಯಾವ ಮಾನದಂಡದಲ್ಲಿ ಅಂತಿಮಗೊಳಿಸಲಾಯಿತು ? ಟಿವಿ ಕಾರ್ಯಕ್ರಮಕ್ಕೆ ಬೇಕಾದ ರೀತಿಯ ಟಿಆರ್ ಪಿ ವ್ಯಕ್ತಿಗಳನ್ನು ಮಾತ್ರ ಕರೆಯಲಾಗಿತ್ತು. ಕನ್ನಡ ನೆಲದ ಸಾಹಿತಿಗಳು, ಹೋರಾಟಗಾರರು, ದಲಿತ ಚಿಂತಕರಿಗೆ ವೇದಿಕೆಯಿರಲಿಲ್ಲ.
ಕನ್ನಡದ ದಲಿತ ಹೋರಾಟ, ಸಂವಿದಾನ ಉಳಿಸಿ ಹೋರಾಟದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ದೇವನೂರು ಮಹಾದೇವ, ಮಾವಳ್ಳಿ ಶಂಕರ್, ಡಾ ಸಿ ದ್ವಾರಕನಾಥ್, ದಿನೇಶ್ ಅಮಿನ್ ಮಟ್ಟು, ಕೆ ಎಲ್ ಅಶೋಕ್, ಡಾ ವಾಸು, ದು ಸರಸ್ವತಿ, ಎನ್ ಮಹೇಶ್, ಮಾರಸಂದ್ರ ಮುನಿಯಪ್ಪ, ಹರಿರಾಮ್, ಮಾರುತಿ ಮಾನ್ಪಡೆ, ಬರಗೂರು ರಾಮಚಂದ್ರ ಸೇರಿದಂತೆ ಯಾರೂ ಸಮಾಜ ಕಲ್ಯಾಣ ಇಲಾಖೆಗೆ ಗೊತ್ತೇ ಇಲ್ಲವೇ ? ಉತ್ತರ ಭಾರತದ ಸೊಫೆಸ್ಟಿಕೇಟೆಡ್ ಭಾಷಣಕಾರರು ಮತ್ತು ಬಿಜೆಪಿಗರನ್ನು ಕರೆಸಿ ಪ್ಯಾನಲ್ ಡಿಸ್ಕಷನ್ ಮಾಡಿ ಅರಚಾಟ ಮಾಡಿಸಲು ನಮ್ಮ ಸಮಾಜ ಕಲ್ಯಾಣ ಇಲಾಖೆಯ ಕೋಟಿ ಕೋಟಿ ಹಣವನ್ನು ನೀಡಬೇಕೇ ?
ಇವತ್ತು ನಮ್ಮ ಹೋರಾಟವನ್ನು ವಿರೋಧಿಸುವವರಿಗೆ ಇಂತಹ ಒಂದು ಕಾರ್ಯಕ್ರಮ ನಡೆಯುವುದಿತ್ತು ಎಂದು ಗೊತ್ತಾಗಿದ್ದು ಕಾರ್ಯಕ್ರಮ ರದ್ದಾದಾಗಲೇ ! ಹೊಟೇಲ್ ಅಶೋಕಾ ಎಂಬ ಸೆವೆನ್ ಸ್ಟಾರ್ ಹೊಟೆಲ್ ನಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮಕ್ಕೆ “ನನ್ನ ಜನಕ್ಕೆ” ಪ್ರವೇಶವಿರಲಿಲ್ಲ. ಸೂಟು ಬೂಟಿನ ಮಂದಿಗೆ ಮಾತ್ರ ಪ್ರವೇಶವಿತ್ತು. ಅದೂ 600 ಜನರಿಗೆ ಮಾತ್ರ. ಆನ್ ಲೈನ್ ನಲ್ಲಿ ನೊಂದಣಿ ಮಾಡಿಕೊಂಡು ಪ್ರವೇಶ ಪತ್ರವನ್ನು ಪಡೆಯಬೇಕಿತ್ತು. ನನ್ನ ಜನಗಳು ಆನ್ ಲೈನ್ ಪರಿಣತರಲ್ಲ. ನನ್ನ ಜನಗಳ ವೇಷಭೂಷನ ನೋಡಿದರೆ ಹೊಟೇಲ್ ಅಶೋಕದ ಸೂಟುದಾರಿ ವಾಚ್ ಮೆನ್ ಗೇಟು ತೆರೆಯಲ್ಲ. ಇದನ್ನೇ ಆಧುನಿಕ ಭಾರತದ ಬ್ರಾಹ್ಮಣ್ಯ ಎನ್ನುತ್ತಾರೆ.
ಸಮಾಜ ಕಲ್ಯಾಣ ಇಲಾಖೆಗೆ ಭ್ರಷ್ಟಾಚಾರದ ಹೊರತಾದ ಕಾರಣವಿದ್ದರೆ ಈ ಕಾರ್ಯಕ್ರಮವನ್ನು ವಸಂತನಗರದ ಅಂಬೇಡ್ಕರ್ ಭವನದಲ್ಲೋ, ಟೌನ್ ಹಾಲ್ ನಲ್ಲೋ, ಅರಮನೆ ಮೈದಾನದಲ್ಲೋ ನಡೆಸಬಹುದಿತ್ತು. ಅಥವಾ ಯಾವುದಾದರೂ ಯೂನಿವರ್ಸಿಸಿ ಮೂಲಕವಾದರೂ ಮಾಡಬಹುದು. ಒಂದಷ್ಟು ವಿದ್ಯಾರ್ಥಿಗಳು, ಯುವಕರು ಈ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ತೊಡಗಿಕೊಂಡು ಸಂವಿದಾನ ಉಳಿಸುವ ಹೋರಾಟಗಾರರಾಗುತ್ತಿದ್ದರು. ಆದರೆ ಈ ಕಾರ್ಯಕ್ರಮದ ಪ್ರತಿಯೊಂದು ವ್ಯವಸ್ಥೆಯನ್ನು ಬಹುರಾಷ್ಟ್ರೀಯ ಕಾರ್ಪೋರೇಟ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ರಿಜಿಸ್ಟ್ರೇಷನ್, ಊಟ, ಅತಿಥಿ ಸತ್ಕಾರ ಎಲ್ಲವೂ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಗುತ್ತಿಗೆ. ಅವರಿಗೆ ದಲಿತ ಸಾಹಿತಿಯೂ ಗೊತ್ತಿಲ್ಲ, ಹೋರಾಟ ಅಂದರೇನು ಎಂದೇ ತಿಳಿದಿಲ್ಲ.
ಪ್ರತಿಯೊಬ್ಬರಿಗೂ 2500 ಬೆಲೆಯ ಊಟ, 350 ಬೆಲೆಯ ಟೀ ಕಾಫಿ, 700 ರೂಪಾಯಿ ಸಂಜೆಯ ಕಾಫಿ ಮತ್ತು ಲಘುಉಪಹಾರ, 1500 ರೂಪಾಯಿ ಬೆಲೆಯ ಬೆಳಗಿನ ಉಪಹಾರದ ವ್ಯವಸ್ಥೆಯನ್ನು 600 ಜನರಿಗೆ ಮಾಡಲಾಗಿತ್ತು. 35 ಸಾವಿರ ರೂಪಾಯಿ ಬೆಲೆಯ ಸೂಟ್ ರೂಂ, ಪ್ರತೀ ಗೆಸ್ಟ್ ಗೆ ಅತಿಥಿ ಸತ್ಕಾರಕ್ಕೆ ಕೆಎಎಸ್ ಅಧಿಕಾರಿ… ಈ ರೀತಿ ಒಟ್ಟು ನಾಲ್ಕು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತೆ. ಅಲ್ಲೆಲ್ಲೂ ಕನ್ನಡ ದಲಿತರಿಗೆ ಬಿಡಿ, ಕನ್ನಡದ ಸಾಹಿತಿ ಚಿಂತಕ, ದಲಿತ ಹೋರಾಟಗಾರರಿಗೂ ಪ್ರವೇಶವಿಲ್ಲ. ಟಿವಿ ಟಿಆರ್ ಪಿ ಹೊಂದಿರುವ ಪ್ಯಾನಲ್ ಡಿಸ್ಕಷನ್ ನಲ್ಲಿ ಅರಚಾಡುವ ಭಾಷಣಕಾರರಿಗೆ ಮಾತ್ರ ಪ್ರವೇಶ ! ಈ ಕಾರ್ಯಕ್ರಮಕ್ಕೆ ನಮ್ಮ ಸರಕಾರದ ತೆರಿಗೆ ಹಣ ಬಳಸಬೇಕೇ ? ಈ ಆಧುನಿಕ ಬ್ರಾಹ್ಮಣ್ಯದ ಭ್ರಷ್ಟಾಚಾರದ ಕಾರ್ಯಕ್ರಮವನ್ನು ನೋಡಿಯೂ ಸುಮ್ಮನಿರಬೇಕೇ ?
ಬಸವಣ್ಣನ ಅನುಯಾಯಿ, ಲಕ್ಷಾಂತರ ಬಡವರ ಬದುಕು ಬೆಳಗಿಸಿದ ಸಂತ ಶಿವಕುಮಾರ ಸ್ವಾಮಿಗಳ ನಿಧನದ ಹಿನ್ನಲೆಯಲ್ಲಿ ರಾಜ್ಯ ಸರಕಾರದ ಶೋಕಾಚರಣೆಯ ಆದೇಶವನ್ನು ಉಲ್ಲಂಘಿಸಿ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಕನ್ನಡದ ಜನಗಳಿಗೆ ಉಪಯೋಗವಿಲ್ಲದ, ಕನ್ನಡದ ದಲಿತರಿಗೆ ಪ್ರವೇಶವಿಲ್ಲದ, ದಲಿತ ಸಂವೇದನೆಯಿಲ್ಲದ, ಚಳುವಳಿ ಸಂವೇದನೆ ಇಲ್ಲದ ಈ ಕಾರ್ಯಕ್ರಮಕ್ಕೆ ಕನ್ನಡದ ಸಂವೇದನೆಯೂ ಇರಲಿಲ್ಲ. ಆದ್ದರಿಂದ ಪ್ರತಿಭಟಿಸಿ ಕಾರ್ಯಕ್ರಮ ನಿಲ್ಲಿಸಿದೆವು. ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ. ನಮ್ಮ ಜನಗಳ ಕಾರ್ಯಕ್ರಮವಲ್ಲದ ಈ ಕಾರ್ಯಕ್ರಮಕ್ಕೆ ಬಿಡುಗಡೆಯಾದ ನಮ್ಮ ಜನಗಳ ತೆರಿಗೆ ಹಣವಾದ ಇಲಾಖಾ ಅನುದಾನವನ್ನು ತಡೆ ಹಿಡಿಯಬೇಕು. ಅದು ಕನ್ನಡದ ದಲಿತೋದ್ದಾರಕ್ಕೆ ಮೀಸಲಾದ ಹಣ. ಅದು ನಮಗೇ ಸೇರಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಚಾಲ್ತಿಯಲ್ಲಿರುತ್ತದೆ.
-ಬಿ.ಹರೀಶ್ ಕುಮಾರ್
ರಾಜ್ಯಾಧ್ಯಕ್ಷ
ಕರ್ನಾಟಕ ರಣಧೀರ ಪಡೆ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಡಾ. ಶಾಮನೂರು ಶಿವಶಂಕರಪ್ಪ ನಿಧನ ; ವೀರಶೈವ ವಿಧಿವಿಧಾನದಂತೆ ಕಲ್ಲೇಶ್ವರ ಮಿಲ್ನಲ್ಲಿ ಅಂತ್ಯ ಸಂಸ್ಕಾರ
ಸುದ್ದಿದಿನ,ದಾವಣಗೆರೆ:ಮಾಜಿ ಸಚಿವರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪನವರು ನಿಧನರಾಗಿದ್ದು ಅವರ ಅಂತ್ಯ ಸಂಸ್ಕಾರವು ಸರ್ಕಾರಿ ಸಕಲ ಗೌರವಗಳೊಂದಿಗೆ ಹಾಗೂ ವೀರಶೈವ ಸಂಪ್ರದಾಯದಂತೆ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಅಪಾರ ಜನಸ್ತೋಮದೊಂದಿಗೆ ಸೋಮವಾರ ಸಂಜೆ ಜರುಗಿತು.
ಡಾ; ಶಾಮನೂರು ಶಿವಶಂಕರಪ್ಪನವರಿಗೆ 95 ವರ್ಷವಾಗಿದ್ದು ವಯೋಸಹಜ ಅನಾರೋಗ್ಯದಿಂದ ಡಿಸೆಂಬರ್ 14 ರಂದು ನಿಧನ ಹೊಂದಿದ್ದರು. 6 ಭಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಸುಧೀರ್ಘ ರಾಜಕೀಯ ಸೇವೆಯಲ್ಲಿದ್ದ ಇವರು ರಾಜ್ಯ ಸೇರಿದಂತೆ ದಾವಣಗೆರೆಗೆ ಹೊಸ ರೂಪಕೊಟ್ಟಿದ್ದರು.
ಸೋಮವಾರ ಬೆಳಗ್ಗೆ 7.30 ಗಂಟೆಯಿಂದ ಪಾರ್ಥಿವ ಶರೀರಕ್ಕೆ ಸ್ವಗೃಹದಲ್ಲಿ ಕುಟುಂಬಸ್ಥರ ವಿವಿಧ ಪೂಜೆ ಪುನಸ್ಕಾರಗಳೊಂದಿಗೆ ವಿಧಿ ವಿಧಾನಗಳು ನಡೆದು, ಮಧ್ಯಾಹ್ನದಿಂದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಸಾವಿರಾರು ಜನರು ಆಗಮಿಸಿ ಸರತಿ ಸಾಲಿನಲ್ಲಿ ಅಂತಿಮ ದರ್ಶನ ಪಡೆದರು.
ಮಧ್ಯಾಹ್ನ 3.30 ರಿಂದ ಹೈಸ್ಕೂಲ್ ಮೈದಾನದಿಂದ ಹೊರಟು ಹಳೇ ದಾವಣಗೆರೆ ಮಂಡಿಪೇಟೆ, ಕಾಯಿಪೇಟೆ, ಅರಳಿವೃತ್ತದ ಮೂಲಕ ಕಲ್ಲೇಶ್ವರ ಮಿಲ್ಗೆ ಪಾರ್ಥಿವ ಶರೀರ ತಲುಪಿತು. ಸಂಜೆ 4.30 ರಿಂದ ಅಂತಿಮ ವಿಧಿ ವಿಧಾನಗಳು ನಡೆದವು.
ಅಂತಿಮ ಸಂಸ್ಕಾರದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಉಪ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್ ಅವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಬೃಹತ್ ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್ ಅವರು, ಇಂಧನ ಸಚಿವರಾದ ಕೆ.ಜೆ.ಜಾರ್ಜ್ರವರು, ಸಮಾಜ ಕಲ್ಯಾಣ ಸಚಿವರಾದ ಡಾ; ಹೆಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ, ಅಲ್ಪಸಂಖ್ಯಾತರ ಕಲ್ಯಾಣ, ವಸತಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ ಪಾಟೀಲ, ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ.ಎಸ್.ಪಾಟೀಲ, ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ್ ಸೇರಿದಂತೆ ಶಾಸಕರು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು.
ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ರಾಷ್ಟ್ರಧ್ವಜವನ್ನು ಪಾರ್ಥಿವ ಶರೀರಕ್ಕೆ ಹೊದಿಸಿ ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ಗೌರವ ಸಲ್ಲಿಸಲಾಯಿತು. ನಂತರ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿ ಅಂತಿಮವಾಗಿ ಶೋಕ ವ್ಯಕ್ತಪಡಿಸಲಾಯಿತು. ರಾಷ್ಟ್ರಧ್ವಜವನ್ನು ಅವರ ಪುತ್ರರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಸ್ತಾಂತರಿಸಿದರು. ನಂತರ ಸಾಂಪ್ರದಾಯಿಕ ಪೂಜೆ, ವಿಧಿ, ವಿಧಾನಗಳೊಂದಿಗೆ ಪಾರ್ಥಿವ ಶರೀರವನ್ನು ಐಕ್ಯ ಮಂಟಪದಲ್ಲಿ ಇಡಲಾಯಿತು.
ಡಾ; ಶಾಮನೂರು ಶಿವಶಂಕರಪ್ಪನವರ ಪುತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಸೊಸೆ ಹಾಗೂ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್, ಇನ್ನಿಬ್ಬರು ಪುತ್ರರಾದ ಎಸ್.ಎಸ್.ಬಕ್ಕೇಶ್, ಎಸ್.ಎಸ್.ಗಣೇಶ್ ಸೇರಿದಂತೆ ಶಾಮನೂರು ಶಿವಶಂಕರಪ್ಪನವರ ಕುಟುಂಬಸ್ಥರು ಅಂತಿಮ ವಿಧಿ ವಿಧಾನದಲ್ಲಿ ಭಾಗವಹಿಸಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಸ್.ಆರ್.ಬೊಮ್ಮಾಯಿ, ಗೃಹ ಸಚಿವರಾದ ಜಿ.ಪರಮೇಶ್ವರ್, ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಕೃಷಿ ಸಚಿವರಾದ ಚಲುವರಾಯಸ್ವಾಮಿ, ಬಿ.ಜೆ.ಪಿ.ಪಕ್ಷದ ರಾಜ್ಯಾದ್ಯಕ್ಷರಾದ ಬಿ.ವೈ.ವಿಜಯೇಂದ್ರ ಸೇರಿದಂತೆ ಅನೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು ಅಂತಿಮ ದರ್ಶನ ಪಡೆದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್ಪಿಯನ್ನು ಕ್ವಿಂಟಲ್ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್ಆರ್ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ6 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ4 days agoಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ4 days ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
-
ದಿನದ ಸುದ್ದಿ5 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ5 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ1 day agoಡಾ. ಶಾಮನೂರು ಶಿವಶಂಕರಪ್ಪ ನಿಧನ ; ವೀರಶೈವ ವಿಧಿವಿಧಾನದಂತೆ ಕಲ್ಲೇಶ್ವರ ಮಿಲ್ನಲ್ಲಿ ಅಂತ್ಯ ಸಂಸ್ಕಾರ

