Connect with us

ದಿನದ ಸುದ್ದಿ

ಕೊರೋನ ಕಾಲದಲ್ಲಿ ಹೃದಯವನ್ನು ಕಾಪಾಡಿ..!

Published

on

  • ಶ್ರೀನಿವಾಸ ಕಕ್ಕಿಲಾಯ

ಕೊರೋನ ಸೋಂಕಿನ ನೆಪದಲ್ಲಿ ಆಗಿರುವ ಸಮಸ್ಯೆಗಳಿಗೆ ಲೆಕ್ಕವಿಲ್ಲ. ಕೊರೋನ ಸೋಂಕಿಗೆ ಹೊರತಾದ ಇತರ ಸಮಸ್ಯೆಗಳನ್ನು ಹೊಂದಿರುವವರಿಗೆ, ಅದರಲ್ಲೂ, ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್ ಆದವರಿಗೆ, ತುರ್ತು ಸಮಸ್ಯೆಗಳಾದವರಿಗೆ ಹಾಗೂ ಗರ್ಭಿಣಿಯರಿಗೆ, ಕ್ಲಪ್ತ ಸಮಯದಲ್ಲಿ ಸೂಕ್ತ ಆರೋಗ್ಯ ಸೇವೆಗಳನ್ನು ಪಡೆಯುವುದಕ್ಕೆ ಬಹಳಷ್ಟು ಕಷ್ಟಗಳಾಗಿವೆ.

ಕೊರೋನ ಸೋಂಕನ್ನು ನಿಯಂತ್ರಿಸುವ ಹೆಸರಲ್ಲಿ ಅತಿ ಕಠಿಣ ದಿಗ್ಬಂಧನ ವಿಧಿಸಿದ್ದರಿಂದ ಜನರು ಆಸ್ಪತ್ರೆಗೆ ಹೋಗುವುದಕ್ಕೆ ಅಡ್ಡಿಗಳಾದವು. ಎಲ್ಲಾ ಆಸ್ಪತ್ರೆಗಳಲ್ಲೂ ಕೊರೋನ ಪೀಡಿತರಿಗೆ ಹೊರರೋಗಿ, ಒಳರೋಗಿ ಚಿಕಿತ್ಸೆ ನೀಡುವಂತೆ ಕಡ್ಡಾಯ ನಿಯಮಗಳನ್ನು ಮಾಡಿದ್ದರಿಂದ, ಅನ್ಯ ರೋಗಿಗಳ ಚಿಕಿತ್ಸೆಗೆ ಸಮಸ್ಯೆಗಳಾದವು.

ಕೊರೋನ ಬಗ್ಗೆ ವಿಪರೀತವಾದ ಭೀತಿಯನ್ನು ಹುಟ್ಟಿಸಿದ್ದರಿಂದ ಅನ್ಯ ಸಮಸ್ಯೆಗಳುಳ್ಳವರು ವೈದ್ಯರ ಬಳಿಗೆ, ಆಸ್ಪತ್ರೆಗಳಿಗೆ ಹೋಗುವುದಕ್ಕೆ ಅಂಜುವಂತೆ ಆಯಿತು. ಅನ್ಯ ರೋಗಗಳಿಗಾಗಿ ಆಸ್ಪತ್ರೆಗಳಿಗೆ ಬಂದವರೆಲ್ಲರಿಗೆ, ಹೆರಿಗೆಗಾಗಿ ಬಂದ ಎಲ್ಲಾ ಗರ್ಭಿಣಿಯರಿಗೆ ಕೊರೋನ ಲಕ್ಷಣಗಳಿಲ್ಲದಿದ್ದರೂ ಕಡ್ಡಾಯವಾಗಿ ಕೊರೋನ ಪರೀಕ್ಷೆ ಮಾಡಿ, ಆ ಬಳಿಕವೇ ಚಿಕಿತ್ಸೆ ನೀಡುವುದೆಂಬ ವ್ಯವಸ್ಥೆ ಮಾಡಿದ್ದು ಇನ್ನಷ್ಟು ಆತಂಕ, ಹೆದರಿಕೆ, ಗೊಂದಲಗಳಿಗೆ ಕಾರಣವಾಯಿತು.

ಕೊರೋನ ಒಂದೇ ಮಹಾವ್ಯಾಧಿ ಎಂಬಂತೆ ಎಲ್ಲವನ್ನೂ ಮುಚ್ಚಿ ಹಾಕಿದ ನಂತರದ ಈ ಆರು ತಿಂಗಳಲ್ಲಿ ಅನೇಕರು ತಮ್ಮ ಬಂಧುಮಿತ್ರರನ್ನು ಹೃದಯಾಘಾತದ ಕಾರಣಕ್ಕೆ ಕಳೆದುಕೊಂಡಿದ್ದಾರೆ. ಈ ಕೊರೋನ ಕಾಲದಲ್ಲಿ ಹೃದ್ರೋಗದ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ 35% ಇಳಿಕೆಯಾಗಿದೆ.

ಆದರೆ ಹೃದ್ರೋಗಗಳಿಂದ ಸಾವುಂಟಾಗುವ ಪ್ರಮಾಣದಲ್ಲಿ 4% ಏರಿಕೆಯಾಗಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕರೂ, ಹಿರಿಯ ಹೃದ್ರೋಗ ತಜ್ಞರೂ ಆಗಿರುವ ಡಾ|| ಸಿ.ಎನ್. ಮಂಜುನಾಥ್ ಹೇಳಿರುವುದು, ಇನ್ನೊಂದೆಡೆ, ಹಲವರು ತಮ್ಮ ಮನೆಗಳಲ್ಲೇ ಹೃದಯಾಘಾತದಿಂದ ಮೃತರಾದರು ಎಂಬ ವರದಿಗಳಾಗುತ್ತಿರುವುದು, ಹೃದ್ರೋಗದ ಲಕ್ಷಣಗಳಿರುವವರು ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಿದ್ದಾರೆ, ಅಥವಾ ಹೋಗಲು ಸಾಧ್ಯವಾಗುತ್ತಿಲ್ಲ, ಅಥವಾ ತೀರಾ ತಡವಾಗಿ ಹೋಗುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತವೆ.

ಇದಲ್ಲದೆ, ಕೊರೋನ ಸೋಂಕು ಕೂಡ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ, ರಕ್ತವು ಹೆಪ್ಪುಗಟ್ಟುವುದನ್ನು ಪ್ರಚೋದಿಸುತ್ತದೆ. ಆದ್ದರಿಂದ ಅದಾಗಲೇ ರಕ್ತನಾಳಗಳಲ್ಲಿ ಸಮಸ್ಯೆಯಿದ್ದವರಿಗೆ ಕೊರೋನ ಸೋಂಕು ತಗಲಿದರೆ ಹೃದಯಾಘಾತವಾಗುವುದಕ್ಕೆ, ಹೃದಯದ ಸ್ನಾಯುಗಳಿಗೆ ಸಮಸ್ಯೆಯಾಗುವುದಕ್ಕೆ ಕಾರಣವಾಗಬಹುದು.

ಒಟ್ಟಿನಲ್ಲಿ, ಹೃದಯದ ರಕ್ತನಾಳಗಳಲ್ಲಿ ಸಮಸ್ಯೆಗಳಿರುವವರಿಗೆ ಈ ಕೊರೋನ ಸೋಂಕು ಕಷ್ಟಕರವಾಗಿ ಪರಿಣಮಿಸಿದೆ. ಆದ್ದರಿಂದ ಅವರೆಲ್ಲರೂ ವಿಶೇಷ ಎಚ್ಚರಿಕೆಗಳನ್ನು ವಹಿಸಬೇಕು, ರಕ್ತನಾಳಗಳ ಸಮಸ್ಯೆಯಿಂದ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆಯಲ್ಲಿ ಕೊರತೆಯಾಗುತ್ತಿರುವ ಯಾವುದೇ ಲಕ್ಷಣಗಳು ಗೋಚರಿಸಿದರೆ ತಕ್ಷಣವೇ ಅದಕ್ಕೆ ತಕ್ಕ ಪರೀಕ್ಷೆಗಳನ್ನು ಮತ್ತು ಚಿಕಿತ್ಸೆಯನ್ನು ಪಡೆಯಬೇಕು.

ವ್ಯಕ್ತಿಯು ಯಾವುದೇ ಕೆಲಸವನ್ನು ಮಾಡುವಾಗ ಹೃದಯದ ಸ್ನಾಯುಗಳಿಗೆ ಇನ್ನಷ್ಟು ರಕ್ತವು ಹರಿಯಬೇಕಾಗುತ್ತದೆ. ಹೃದಯದ ರಕ್ತನಾಳಗಳಲ್ಲಿ ಸಮಸ್ಯೆಯಾಗಿ, ಅವುಗಳಲ್ಲಿ ರಕ್ತಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೆ ಹೆಚ್ಚುವರಿಯಾಗಿ ರಕ್ತವನ್ನು ಹರಿಯುವುದಕ್ಕೆ ಸಾಧ್ಯವಾಗುವುದಿಲ್ಲ.

ಆದ್ದರಿಂದ, ಹೃದಯದ ರಕ್ತನಾಳಗಳಲ್ಲಿ ಸಮಸ್ಯೆಯಿದ್ದವರು ಯಾವುದೇ ಕೆಲಸವನ್ನು ಹೆಚ್ಚು ಮಾಡತೊಡಗಿದಾಗ ಕಷ್ಟವೆನಿಸತೊಡಗುತ್ತದೆ. ಈ ಕಷ್ಟವು ಹಲವು ಬಗೆಯಲ್ಲಿ ವ್ಯಕ್ತವಾಗಬಹುದು. ಹೃದಯದ ಸಮಸ್ಯೆಯುಳ್ಳವರಿಗೆ ಎದೆ ನೋವುಂಟಾಗುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆಯಾದರೂ ಅದು ಸಂಪೂರ್ಣ ಸತ್ಯವಲ್ಲ; ಹೃದ್ರೋಗವುಳ್ಳವರಿಗೆ ಎದೆ ನೋವು ಇಲ್ಲದಿರಬಹುದು, ಅದರ ಬದಲಿಗೆ ಇತರ ಲಕ್ಷಣಗಳಿರಬಹುದು, ಎದೆ ನೋವು ಹೃದ್ರೋಗವಲ್ಲದೆ ಇತರ ಹಲವು ಕಾರಣಗಳಿಂದಲೂ ಉಂಟಾಗಬಹುದು. ಹಾಗಾಗಿ, ಹೃದ್ರೋಗವು ಹೆಚ್ಚು ಸಾಮಾನ್ಯವಾಗುತ್ತಿರುವಾಗ, ಯುವಜನರಲ್ಲೂ ಕಾಣಿಸಿಕೊಳ್ಳುತ್ತಿರುವಾಗ, ಹೃದ್ರೋಗದ ಲಕ್ಷಣಗಳ ಬಗ್ಗೆ ಎಲ್ಲರಲ್ಲೂ ಸ್ಪಷ್ಟವಾದ ಅರಿವಿರುವುದು ಒಳ್ಳೆಯದು.

ಹೃದಯದ ರಕ್ತನಾಳಗಳ ಕಾಯಿಲೆಯಿದ್ದರೆ, ಹೃದ್ರೋಗದ ಸಮಸ್ಯೆಯಿದ್ದರೆ, ವ್ಯಕ್ತಿಯು ಶ್ರಮ ವಿನಿಯೋಗಿಸಿದಾಗ ಹೃದಯಕ್ಕೆ ಅದನ್ನು ನಿಭಾಯಿಸುವುದಕ್ಕೆ ಕಷ್ಟವಾಗುತ್ತದೆ, ಅದು ಬೇರೆ ಬೇರೆ ರೀತಿಗಳಲ್ಲಿ ಪ್ರಕಟಗೊಳ್ಳಬಹುದು. ವ್ಯಕ್ತಿಯು ನಿತ್ಯದಂತೆ ನಡೆದಾಡುವಾಗ, ಮೆಟ್ಟಲುಗಳನ್ನೇರುವಾಗ, ಕೆಲಸಗಳನ್ನು ಮಾಡುವಾಗ ಅಥವಾ ತುಂಬು ಊಟವನ್ನು ಮಾಡಿದಾಗ ದೇಹದ ಆಯಾ ಭಾಗಗಳಿಗೆ ಹೆಚ್ಚಿನ ರಕ್ತ ಪೂರೈಕೆಯ ಅಗತ್ಯವುಂಟಾಗುವುದರಿಂದ ಇಂಥ ಸಂದರ್ಭಗಳಲ್ಲಿ ಹೃದ್ರೋಗವನ್ನು ಸೂಚಿಸುವ ಲಕ್ಷಣಗಳು ಅನುಭವಕ್ಕೆ ಬರುತ್ತವೆ.

ಹೃದಯದ ಸ್ನಾಯುಗಳಲ್ಲಿ ನೋವನ್ನು ಗ್ರಹಿಸುವ ನರಗಳಿಲ್ಲದಿರುವುದರಿಂದ ನಮ್ಮ ಕೈಕಾಲುಗಳಿಗೆ ಗಾಯವಾದಾಗ ಉಂಟಾಗುವಂಥ ನೋವು ಹೃದಯದ ಸಮಸ್ಯೆಗಳಲ್ಲಿ ಉಂಟಾಗುವುದಿಲ್ಲ. ಬದಲಿಗೆ ಹೃದಯದ ಸುತ್ತುಮುತ್ತಲಿನ ಅಂಗಗಳಲ್ಲಿ ಬಗೆಬಗೆಯ ವೇದನೆಗಳು, ಅಥವಾ ‘ಕಷ್ಟಗಳು’, ಕಂಡುಬರಬಹುದು.

ನಡೆದಾಡುವಾಗ ಅಥವಾ ದುಡಿಯುವಾಗ ಅಥವಾ ತುಂಬು ಊಟ ಮಾಡಿದಾಗ ಕುತ್ತಿಗೆ ಅಥವಾ ಗಂಟಲು ಅಥವಾ ಎದೆ ಬಿಗಿದಂತಾಗುವುದು ಅಥವಾ ಭಾರವೆನಿಸುವುದು, ಎದೆ ಅಥವಾ ಗಂಟಲು ಅಥವಾ ಹೊಟ್ಟೆಯ ಮೇಲ್ಭಾಗದಲ್ಲಿ ಉಬ್ಬಿ ಬಂದಂತಾಗುವುದು (‘ಗ್ಯಾಸ್’ ತುಂಬಿದಂತಾಗುವುದು), ಎದೆ ಹಿಂಡಿದಂತಾಗುವುದು ಅಥವಾ ನೋವಾಗುವುದು (ಎದೆಯ ಎಡ, ಬಲ, ಮಧ್ಯ, ಎಲ್ಲೇ ಆಗಿರಬಹುದು), ಭುಜ, ತೋಳು, ದವಡೆ, ಕತ್ತಿನ ಬದಿಗಳು, ಬೆನ್ನಿನ ಮೇಲ್ಭಾಗಗಳಲ್ಲಿ ಸೆಳೆದಂತಾಗುವುದು ಅಥವಾ ನೋಯುವುದು, ಆಯಾಸವಾಗುವುದು, ಉಸಿರಾಡಲು ಕಷ್ಟವೆನಿಸುವುದು, ಎದೆ ಬಡಿತ ಹೆಚ್ಚುವುದು, ತಲೆ ಸುತ್ತುವುದು, ಇತ್ಯಾದಿಗಳೆಲ್ಲವೂ ಹೃದ್ರೋಗದ ಲಕ್ಷಣಗಳಾಗಿರಬಹುದು.

ಆದ್ದರಿಂದ ಯಾರಲ್ಲೇ ಆಗಲಿ, ಯಾವುದೇ ಶ್ರಮವುಳ್ಳ ಕೆಲಸಗಳಲ್ಲಿ ತೊಡಗಿದಾಗ ಹೊಕ್ಕಳಿಂದ ಮೇಲಕ್ಕೆ ಯಾವುದೇ ಅನುಭವಗಳಾದರೆ, ಮತ್ತು ಪ್ರತೀ ಬಾರಿ ಅದೇ ಕೆಲಸವನ್ನು ಮಾಡುವಾಗ ಆ ತೊಂದರೆಯು ಮರುಕಳಿಸುತ್ತಿದ್ದರೆ, ಅದನ್ನು ಹೃದ್ರೋಗದ ಸೂಚನೆಯೆಂದು ಪರಿಗಣಿಸುವುದೇ ಒಳ್ಳೆಯದು.

ಯಾವುದೇ ಶ್ರಮದ ಕೆಲಸವನ್ನು ಮಾಡುವಾಗ ಇಂತಹ ಲಕ್ಷಣಗಳುಳ್ಳವರು ಕೂಡಲೇ ತಜ್ಞ ವೈದ್ಯರನ್ನು ಕಾಣಲೇ ಬೇಕು ಮತ್ತು ಹೃದ್ರೋಗಕ್ಕೆ ಪರೀಕ್ಷೆಗಳನ್ನು ನಡೆಸುವಂತೆ ಒತ್ತಾಯಿಸಬೇಕು. ಕೆಲವೊಮ್ಮೆ ವೈದ್ಯರು ಕೂಡ ಈ ಲಕ್ಷಣಗಳನ್ನು ಲಘುವಾಗಿ ಪರಿಗಣಿಸಿ, ‘ಗ್ಯಾಸಿಗೋ’, ನೋವಿಗೋ ಮಾತ್ರೆಗಳನ್ನು ಕೊಟ್ಟು ಕಳುಹಿಸಬಹುದು, ಅದರಿಂದ ಹೃದ್ರೋಗದ ಪರೀಕ್ಷೆಗಳು ನಡೆಯದೆ ಸಮಸ್ಯೆಗಳಾಗಬಹುದು.

ಇಂಥ ಲಕ್ಷಣಗಳಿದ್ದವರು ಈ ಕೊರೋನ ಕಾಲದಲ್ಲಿ ಪರೀಕ್ಷೆಗೆ ಹೋಗಲು ಹಿಂಜರಿದಿರುವುದು, ವೈದ್ಯರು ಲಭ್ಯವಾಗದಿರುವುದು, ಹಾಗೊಮ್ಮೆ ದೊರೆತರೂ ಕೊರೋನ ಕಳೆಯಲಿ ಎಂದು ಮುಂದಕ್ಕೆ ಹಾಕಿರುವುದು, ಹೃದಯದ ಪರೀಕ್ಷೆಗೆ ಮುನ್ನ ಕೊರೋನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದಾಗ ಒಪ್ಪದೆ ವಿಮುಖರಾಗಿರುವುದು ಎಲ್ಲವೂ ಘಟಿಸಿವೆ, ಅದರಿಂದ ಕೆಲವರಿಗೆ ಅಪಾಯಗಳಾಗಿರುವ ಸಾಧ್ಯತೆಗಳು ಇದ್ದೇ ಇವೆ.

ಆದ್ದರಿಂದ ಯಾರಿಗೇ ಆಗಲಿ, ಮೇಲೆ ಹೇಳಿದ ಲಕ್ಷಣಗಳಿದ್ದರೆ ಕೂಡಲೇ ಇಸಿಜಿ, ಅಥವಾ ಇನ್ನೂ ಒಳ್ಳೆಯದಾಗಿ, ಹೃದಯತಜ್ಞರನ್ನು ಕಂಡು ಟ್ರೆಡ್ ಮಿಲ್ ಪರೀಕ್ಷೆ ಇತ್ಯಾದಿ ಮಾಡಿಸಿಕೊಳ್ಳಬೇಕು, ಅದರಲ್ಲೇನಾದರೂ ಹೃದ್ರೋಗದ ಸೂಚನೆಗಳು ಕಂಡುಬಂದು ಇನ್ನಷ್ಟು ಉನ್ನತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕೆಂದು ವೈದ್ಯರು ಹೇಳಿದರೆ ಹಿಂಜರಿಯದೆ ಮಾಡಿಸಿಕೊಳ್ಳಬೇಕು.

ಹೃದಯದ ರಕ್ತನಾಳಗಳ ಕಾಯಿಲೆಗೆ ನಮ್ಮ ಆಧುನಿಕ ಆಹಾರವೇ ಅತಿ ಮುಖ್ಯ ಕಾರಣವಾಗಿದೆ. ಅದರ ಜೊತೆಗೆ, ವ್ಯಾಯಾಮವಿಲ್ಲದ ಜೀವನ, ಧೂಮಪಾನ, ಮದ್ಯಪಾನಗಳು ಕೂಡ ಕಾರಣಗಳಾಗಿವೆ. ಸಕ್ಕರೆ, ಎಲ್ಲಾ ಸಿಹಿ ತಿನಿಸುಗಳು, ಹಣ್ಣು ಮತ್ತು ಹಣ್ಣಿನ ರಸಗಳು (ಹಣ್ಣು – ತರಕಾರಿ ಸೇವಿಸಿದರೆ ಒಳ್ಳೆಯದು ಎಂದೇ ಹೆಚ್ಚಿನ ವೈದ್ಯರು ಹೇಳುತ್ತಿರುತ್ತಾರೆ, ಆದರೆ ಹಣ್ಣು ಮತ್ತು ತರಕಾರಿ ಒಂದೇ ಅಲ್ಲ, ಬೇರೆ ಬೇರೆಯೇ ಆಗಿವೆ ಎಂಬುದನ್ನು ಗಮನಿಸಿ, ಹಣ್ಣು ಅಂದರೆ ಸಕ್ಕರೆ, ಅಷ್ಟೇ), ಸಂಸ್ಕರಿತ ತಿನಿಸುಗಳು (ಮೈದಾ, ಬ್ರೆಡ್ಡು, ಬಿಸ್ಕತ್ತು ಇತ್ಯಾದಿ), ರಿಫೈನ್ಡ್ ಎಣ್ಣೆ, ಕರಿದ ತಿನಿಸುಗಳು ಮತ್ತು ವಿಪರೀತ ಪ್ರಮಾಣದಲ್ಲಿ ಧಾನ್ಯಗಳ ಸೇವನೆ ಹೃದ್ರೋಗವೂ ಸೇರಿದಂತೆ ಎಲ್ಲಾ ಆಧುನಿಕ ರೋಗಗಳಿಗೆ ಮುಖ್ಯ ಕಾರಣಗಳಾಗಿವೆ. ಇವೆಲ್ಲವನ್ನು ತ್ಯಜಿಸಿ, ನಿಯತವಾಗಿ ವ್ಯಾಯಾಮ ಮಾಡಿದರೆ ಈ ರೋಗಗಳನ್ನು ದೂರವಿಡಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕೀಲು ಮತ್ತು ಮೂಳೆ ಚಿಕಿತ್ಸೆ ; ರೋಬೋಟಿಕ್ ಮತ್ತು ಮಿನಿಮಲಿ ಇನ್ನೇಸಿವ್ ಸರ್ಜರಿಗಳಲ್ಲಿ‌ ಮಹತ್ವದ ಬದಲಾವಣೆ : ಡಾ.ಲೋಕೇಶ್ ಎ. ವೀರಪ್ಪ

Published

on

ಸುದ್ದಿದಿನ,ದಾವಣಗೆರೆ:ವಯೋಸಹಜವಾಗಿ ಕಂಡುಬರುವ ಮೊಣಕಾಲು, ಸೊಂಟ, ಭುಜ ಮತ್ತು ಕ್ರೀಡಾ ಸಂಬಂಧಿತ ಸಂಧಿ ಸಮಸ್ಯೆಗಳಿಗೆ ಸಮಯೋಚಿತ ಚಿಕಿತ್ಸೆ ಮತ್ತು ನೂತನ ಶಸ್ತ್ರಚಿಕಿತ್ಸಾ ತಂತ್ರಜ್ಞಾನಗಳು ಹೇಗೆ ಸಹಾಯವಾಗುತ್ತಿವೆ ಹಾಗೂ ಈ ಚಿಕಿತ್ಸೆಗಳು ನೋವು ಕಡಿಮೆ ಮಾಡುವುದರ ಜೊತೆಗೆ, ರೋಗಿಗಳು ಮತ್ತೆ ಸ್ವತಂತ್ರವಾಗಿ ನಡೆಯಲು, ದಿನನಿತ್ಯದ ಚಟುವಟಿಕೆಗಳಿಗೆ ಮರಳಲು ಮತ್ತು ಆತ್ಮವಿಶ್ವಾಸದಿಂದ ಬದುಕಲು ನೆರವಾಗುತ್ತಿವೆ ಎಂದು ಮಣಿಪಾಲ್ ಆಸ್ಪತ್ರೆಯ ಮೂಳೆ ಮತ್ತು ಕೀಲು ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಟೆಂಟ್ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಲೋಕೇಶ್ ಎ. ವೀರಪ್ಪ ತಿಳಿಸಿದರು.

ಬುಧವಾರ ಸುದ್ದಿಗೋಷ್ಟಿ ಉದ್ದೇಶಿಸಿ‌ ಮಾತನಾಡಿದ ಅವರು
‘ಆರೋಗ್ಯಕರ ವಯೋವೃದ್ಧತೆ: ಅಸ್ತಿ ಸಮಸ್ಯೆಗಳ ನಿರ್ವಹಣೆ ಮತ್ತು ಪರಿಣಾಮಕಾರಿ ಚಿಕಿತ್ಸಾ ವಿಧಾನಗಳು ಕುರಿತು ಮೂಳೆ ಆರೋಗ್ಯದ ಮಹತ್ವವನ್ನು ಒತ್ತಿ ಹೇಳಿದರು.

ಇಂದಿನ ದಿನಗಳಲ್ಲಿ ಮೊಣಕಾಲು, ಸೊಂಟ ಮತ್ತು ಭುಜ ಸಂಧಿ ಸಮಸ್ಯೆಗಳು, ವಿಶೇಷವಾಗಿ ವಯೋವೃದ್ಧರಲ್ಲಿ ಹೆಚ್ಚುತ್ತಿವೆ. ‘ಇಂದು ಜನರು ಕೇವಲ ನೋವು ನಿವಾರಣೆಯನ್ನು ಮಾತ್ರ ಬಯಸುವುದಿಲ್ಲ. ಅವರು ಸುಲಭವಾಗಿ ನಡೆಯಲು, ಮೆಟ್ಟಿಲೇರಲು, ಮತ್ತೆ ಕೆಲಸಕ್ಕೆ ಹೋಗಲು, ಪ್ರವಾಸ ಮಾಡಲು ಮತ್ತು ಚುರುಕಿನ ಜೀವನವನ್ನು ಮುಂದುವರಿಸಲು ಬಯಸುತ್ತಾರೆ,” ಎಂದು ಹೇಳಿದರು.

“ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಟೆಂಟ್ ಶಸ್ತ್ರಚಿಕಿತ್ಸೆ ಅಸ್ತಿ ಚಿಕಿತ್ಸೆಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ರೋಗಿಯ ದೇಹರಚನೆಗೆ ಅನುಗುಣವಾಗಿ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ನಿಖರವಾಗಿ ಯೋಜಿಸಲು ಈ ತಂತ್ರಜ್ಞಾನ ಸಹಕಾರಿಯಾಗಿದೆ. ಇದರಿಂದ ಇಂಪ್ಲಾಂಟ್‌ಗಳ ಸರಿಯಾದ ಅಳವಡಿಕೆ, ಉತ್ತಮ ಜಾಯಿಂಟ್ ಅಲೈನ್‌ಮೆಂಟ್ ಮತ್ತು ಸಹಜ ಚಲನೆಯ ಸಾಧ್ಯತೆ ಹೆಚ್ಚುತ್ತದೆ. ರೋಗಿಗಳಿಗೆ ಕಡಿಮೆ ರಕ್ತಸ್ರಾವ, ಕಡಿಮೆ ಶಸ್ತ್ರಚಿಕಿತ್ಸೆತರ ನೋವು, ವೇಗವಾದ ಚೇತರಿಕೆ ಹಾಗೂ ಬೇಗನೆ ಸಾಮಾನ್ಯ ಜೀವನಕ್ಕೆ ಮರಳುವ ಅವಕಾಶ ದೊರೆಯುತ್ತದೆ. ಮೊಣಕಾಲು ಮತ್ತು ಸೊಂಟದ ಸಂಪೂರ್ಣ ಅಥವಾ ಭಾಗಶಃ ಜಾಯಿಂಟ್ ಬದಲಾವಣೆ (TKR/PKR) ಶಸ್ತ್ರ ಚಿಕಿತ್ಸೆಗಳಲ್ಲಿ ಈ ತಂತ್ರಜ್ಞಾನ ಉತ್ತಮ ಫಲಿತಾಂಶ ನೀಡುತ್ತಿದೆ,” ಎಂದರು.

“ಇದರ ಜೊತೆಗೆ ಭುಜದ ಆರ್ಥೋಸ್ಕೋಪಿ ಅಥವಾ ‘ಕೀಹೋಲ್ ಸರ್ಜರಿ’ಯಂತಹ ಅತ್ಯಾಧುನಿಕ ಚಿಕಿತ್ಸೆಗಳಲ್ಲಿಯೂ ಉತ್ತಮ ಫಲಿತಾಂಶಗಳನ್ನು ಕಾಣುತ್ತಿದ್ದೇವೆ. ಭುಜದ ಡಿಪ್ಲೊಕೇಶನ್ (ಭುಜದ ಕೀಲಿನ ಸರಿತ) ರೋಟೇಟರ್ ಕಫ್ (ಹರಿದ ಭುಜದ ಮಾಂಸ ಖಂಡ) ಗಾಯಗಳು, ಫೋಜನ್ ಶೋಲ್ಡರ್ (ಭುಜದ ಬಿಗಿತ) ಮೊದಲಾದ ಸಮಸ್ಯೆಗಳು ಬಹಳ ಸಾಮಾನ್ಯವಾಗಿದ್ದು, ಸಮಯಕ್ಕೆ ಚಿಕಿತ್ಸೆ ಪಡೆಯದೇ ಇದ್ದರೆ ದೈನಂದಿನ ಚಟುವಟಿಕೆಗಳ ಮೇಲೆಯೇ ಪರಿಣಾಮ ಬೀರುತ್ತವೆ. ಈಗ ಮಿನಿಮಲ್ಲಿ ಇನ್ನೇಸಿವ್ ಸರ್ಜರಿಸ್ ಅಂದರೆ ಅತಿ ಸಣ್ಣ ಕಟ್ ಮೂಲಕ ಮಾಡುವ ಈ ಶಸ್ತ್ರಚಿಕಿತ್ಸೆಗಳು ರೋಗಿಗಳಿಗೆ ಕಡಿಮೆ ನೋವು ಹಾಗೂ ವೇಗವಾದ ಚೇತರಿಕೆಯನ್ನು ನೀಡುತ್ತಿವೆ, ಎಂದು ತಿಳಿಸಿದರು.

ಇದೇ ವೇಳೆ, ಸಂಕೀರ್ಣ ಪೆಲ್ವಿಕ್ ಟ್ರಾಮಾ ಶಸ್ತ್ರಚಿಕಿತ್ಸೆಗಳು, ‘ಕಪ್ ಅಂಡ್ ಬಾಲ್’ ಜಾಯಿಂಟ್ ಸಂಬಂಧಿತ ಪ್ರೊಸೀಜರ್‌ಗಳು, ಹಾಗು ಮೊಣಕಾಲು, ಅಂಕಲ್ ಮತ್ತು ಮೊಣಕೈಗೆ ಸಂಬಂಧಿಸಿದ ಮಿನಿಮಲಿ ಇನ್ನೇಸಿವ್ ಕೀಹೋಲ್ ಶಸ್ತ್ರಚಿಕಿತ್ಸೆಗಳ ಕುರಿತು ಕೂಡ ಅವರು ಮಾಹಿತಿ ಹಂಚಿಕೊಂಡರು.

ಇವುಗಳ ಪ್ರಮುಖ ಉದ್ದೇಶ ರೋಗಿಗಳ ಚಲನವಲನವನ್ನು ಪುನಃಸ್ಥಾಪಿಸಿ, ಅವರನ್ನು ಆತ್ಮವಿಶ್ವಾಸದಿಂದ ದಿನನಿತ್ಯದ ಬದುಕಿಗೆ ಮರಳಿಸುವುದಾಗಿದೆ ಎಂದು ಹೇಳಿದರು.

ಸಂವಾದದ ವೇಳೆ ವೈದ್ಯರು, ದಾವಣಗೆರೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಅನೇಕ ರೋಗಿಗಳು ಸಂಕೀರ್ಣ ಅಸ್ಥಿ ಚಿಕಿತ್ಸೆಗಳು ಹಾಗೂ ಅತ್ಯಾಧುನಿಕ ಜಾಯಿಂಟ್ ಕೇರ್‌ಗಾಗಿ ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ನಿರಂತರವಾಗಿ ಭೇಟಿ ನೀಡುತ್ತಿರುವುದಾಗಿ ತಿಳಿಸಿದರು.

ಈ ದೀರ್ಘಕಾಲದ ವಿಶ್ವಾಸವನ್ನು ಗುರುತಿಸಿಕೊಂಡಿರುವ ಆಸ್ಪತ್ರೆ, ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳು, ವಿಶೇಷ ಅಸ್ಥಿ ತಜ್ಞರ ಸೇವೆಗಳು ಮತ್ತು ಪುನಶ್ವೇತನ ಚಿಕಿತ್ಸೆಯನ್ನು ಮಧ್ಯ ಕರ್ನಾಟಕದ ಜನರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಬದ್ಧತೆಯನ್ನು ಪುನರುಚ್ಛರಿಸಿತು. “ನಮ್ಮ ಉದ್ದೇಶ ಕೇವಲ ಶಸ್ತ್ರಚಿಕಿತ್ಸೆ ನಡೆಸುವುದಲ್ಲ; ಜನರು ಮತ್ತೆ ಸ್ವತಂತ್ರವಾಗಿ ನಡೆಯಲು, ತಮ್ಮ ಜೀವನಶೈಲಿಗೆ ಮರಳಲು ಮತ್ತು ಸುಖಕರ ವಯೋವೃದ್ಧತೆಯನ್ನು ಅನುಭವಿಸಲು ಸಹಾಯ ಮಾಡುವುದಾಗಿದೆ,” ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಇದೇ 22 ರಂದು ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026 ಕಾರ್ಯಕ್ರಮ

Published

on

ಸುದ್ದಿದಿನ,ದಾವಣಗೆರೆ:ಬೆಂಗಳೂರಿನ ಜಿಎಂಕೆ ಎಡು ಟೆಕ್ ರಾಜ್ಯದ ಸಮಸ್ತ ಖಾಸಗಿ ಅನುದಾನರಹಿತ ಶಾಲಾ ಮುಖ್ಯಸ್ಥರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಣ ಕ್ಷೇತ್ರದ ಆಸಕ್ತರಿಗಾಗಿ ನಾಳೆ (ಮೇ22) ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ “ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026″ ಎಂಬ ವಿಶಿಷ್ಟ ಮತ್ತು ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷ ಕೊಟ್ರೇಶ್ ಅವರು ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು ಎದುರಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳು ಹಾಗೂ ಆಡಳಿತಾತ್ಮಕ ಸವಾಲುಗಳಿಗೆ ಪರಿಹಾರ ಮತ್ತು ಕಾನೂನುಬದ್ದ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಕಡ್ಡಾಯ ಭೂ-ಪರಿವರ್ತನೆ, ಕಟ್ಟಡ ಮತ್ತು ಅಗ್ನಿ ಸುರಕ್ಷತಾ ನಿಯಮಗಳು, RTE ಸಂಬಂಧಿತ ವಿಷಯಗಳು, ಶಾಲಾ ಕಟ್ಟಡಗಳಿಗೆ ಆಸ್ತಿ ತೆರಿಗೆ, ESI, PF, GRATUITY, LWF ಹಾಗೂ ಕಾರ್ಮಿಕ ಕಾನೂನುಗಳನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುತ್ತದೆ ಎಂದರು.

ಇದಲ್ಲದೆ, ರಾಜ್ಯದಲ್ಲಿ ಯಶಸ್ವಿಯಾಗಿ 10 ವರ್ಷ ಹಾಗೂ 25 ವರ್ಷ ಪೂರೈಸಿರುವ ಖಾಸಗಿ ಶಾಲೆಗಳಿಗೆ ಅಭಿನಂದನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದ ಹೊಸ ತಂತ್ರಜ್ಞಾನಗಳು, ಆಡಳಿತಾತ್ಮಕ ಪರಿಹಾರಗಳು, ಕಾನೂನು ಸಲಹೆಗಳು ಹಾಗೂ ಶಿಕ್ಷಣ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಕುರಿತು ತಿಳಿದುಕೊಳ್ಳಲು ಇದು ಅತ್ಯುತ್ತಮ ವೇದಿಕೆಯಾಗಿದ್ದು, ರಾಜ್ಯದ ಎಲ್ಲಾ ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಣಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ Ours ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ ಮತ್ತು ನಿಸಾರ್ ಅಹಮದ್ ಬಿನ್ ಮಹಮ್ಮದ್ ಅಬಿದ್ ಮತ್ತು ಇನ್ನೊಬ್ಬರು, ಬೇತೂರು ರೋಡ್, ಸಿದ್ಧರಾಮೇಶ್ವರ ಬಡಾವಣೆ ಇವರು ತಮ್ಮ ಮಗ ತಾಜು @ ತಾಜುದ್ದೀನ್ ಇವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುವ ಸಂಧರ್ಭದಲ್ಲಿ ಮರಣ ಹೊಂದಿರುತ್ತಾರೆ.

ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 4ನೇ ಎದುರುದಾರರಾದ ಸದಾನಂದ ವಗಲೆ ಹಾಗೂ 1 ರಿಂದ 3ನೇ ಎದುರುದಾರರ ವಿರುದ್ಧ, ತಮ್ಮ ಸೇವೆಯಲ್ಲಿನ ನಿರ್ಲಕ್ಷತೆಯಿಂದ ಘಟನೆ ಸಂಭವಿಸಿದ್ದು ಎಂಬ ತೀರ್ಮಾನಕ್ಕೆ ಆಯೋಗವು ಬಂದಿದ್ದು, ಈಗಾಗಲೇ, 1 ರಿಂದ 3ನೇ ಎದುರುದಾರರು, ದೂರುದಾರರಿಗೆ ರೂ.500,000/- ಲಕ್ಷವನ್ನು ಪರಿಹಾರವಾಗಿ ಈಗಾಗಲೆ ಕೊಟ್ಟಿದ್ದು, ಆದ್ದರಿಂದ 1 ರಿಂದ 3ನೇ ಎದುರುದಾರರ ವಿರುದ್ಧ ಪ್ರಕರಣವನ್ನು ವಜಾ ಮಾಡಿದೆ.

4ನೇ ಎದುರುದಾರರಾದ ಸದಾನಂದ ವಗಲೆ, ಕಾಂಟ್ರಕ್ಟರ್, ಇವರು ಈ ಎರಡು ಪ್ರಕರಣದ ದೂರುದಾರರಿಗೆ ಆದೇಶಿಸಿದ ದಿನದಿಂದ ಒಂದು ತಿಂಗಳೊಳಗೆ ಆದೇಶದ ಪ್ರಕಾರ ಪಾವತಿಸುವಂತೆ ಮೇ.19 ರಂದು ಆದೇಶಿಸಿ ರೂ. 5 ಲಕ್ಷಗಳನ್ನು ಶೇಕಡಾ 6 ವಾರ್ಷಿಕ ಬಡ್ಡಿಯೊಂದಿಗೆ ಹಾಗೂ ದೂರು ಖರ್ಚು ಹಾಗೂ ಮಾನಸಿಕ ಯಾತನೆಗೆ ತಲಾ ರೂ.5 ಸಾವಿರದಂತೆ, ಒಟ್ಟು ರೂ.10,000/-ಗಳನ್ನು ಪರಿಹಾರ ರೂಪವಾಗಿ ದೂರುದಾರರಿಗೆ ನೀಡುವಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಹೆಚ್.ಎನ್.ಮೀನಾ ಮತ್ತು ಸದಸ್ಯರಾದ ಸಿ.ಎಸ್. ತ್ಯಾಗರಾಜನ್ ಆದೇಶಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending