ದಿನದ ಸುದ್ದಿ
ಸಾಮಾಜಿಕ ಜಾಲತಾಣ ಬಳಸುವ ಪ್ರತಿಯೊಬ್ಬರು ಅಧ್ಯಯನ ನಡೆಸಬೇಕಾದ ದಿಶಾ ಕೇಸ್..! ದೆಹಲಿ ಹೈಕೋರ್ಟ್ ನಲ್ಲಿ ನಡೆದ ವಾದದ ಇಂಚಿಂಚೂ ಮಾಹಿತಿ..!
- ನವೀನ್ ಸೂರಿಂಜೆ
ಪಬ್ಲಿಕ್ ಪ್ರಾಸಿಕ್ಯೂಟ್ ಇರ್ಫಾನ್ : ಸಹಾಯಕ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಮಧ್ಯಾಹ್ನ 2 ಗಂಟೆಗೆ ಈ ವಿಷಯದಲ್ಲಿ ವಾದ ಮಂಡಿಸುತ್ತಾರೆ
ಕೋರ್ಟ್ : ನನಗೆ ಅದನ್ನು ಮೊದಲೇ ಹೇಳಬೇಕಿತ್ತು. ನಾನು ಈ ಕೇಸ್ ಗಾಗಿ ಬಂದೆ
ಆನ್ ಲೈನ್ ಮೂಲಕ ಸಹಾಯಕ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಕೋರ್ಟ್ ಸಂಪರ್ಕಕ್ಕೆ ಬಂದರು.
ಕೋರ್ಟ್ : ಒಕೆ. ನಾವು ಇದನ್ನು ಮದ್ಯಾಹ್ನ 2 ಗಂಟೆ ಇಟ್ಟುಕೊಳ್ಳೋಣಾ
ಕಲಾಪ ಮದ್ಯಾಹ್ನ 2 ಗಂಟೆಗೆ ಮುಂದೂಡಲಾಯ್ತು
ಮದ್ಯಾಹ್ನ 2.05 ಕ್ಕೆ ಕಲಾಪ ಮತ್ತೆ ಪ್ರಾರಂಭವಾಯ್ತು
ವಕೀಲ ಸಿದ್ದಾರ್ಥ್ ಅಗರ್ವಾಲ್ ದಿಶಾ ಪರವಾಗಿ ವಾದ ಮಂಡಿಸಲು ಹಾಜರಾಗಿದ್ದರು.
ಪಬ್ಲಿಕ್ ಪ್ರಾಸಿಕ್ಯೂಟರ್ ಇರ್ಫಾನ್ ಅಹಮ್ಮದ್ : ನನಗೆ ಒಂದು ಲೀಗಲ್ ಸಬ್ಮೀಷನ್ ಮಾಡಲಿಕ್ಕಿದೆ. ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಸಹ ಆರೋಪಿಗಳನ್ನು ವಿಚಾರಣೆ ನಡೆಸಬೇಕಿದೆ. ಆರೋಪಿಗಳನ್ನು ಪರಸ್ಪರ ಸಮ್ಮುಖದಲ್ಲಿ ವಿಚಾರಣೆ ನಡೆಸಬೇಕಿದೆ. ಆರೋಪಿ ಶಾಂತನುಗೆ ನೋಟಿಸ್ ನೀಡಲಾಗಿದೆ. ಹಾಗಾಗಿ ನ್ಯಾಯಾಂಗ ಬಂಧನವನ್ನು ಫೆಬ್ರವರಿ 22 ರವರೆಗೆ ಮುಂದುವರೆಸಬೇಕು
ಪಿಪಿ ಇರ್ಫಾನ್ ಅಹಮ್ಮದ್ : ಫೆಬ್ರವರಿ 22 ಕ್ಕೆ ಮತ್ತೆ ನಾವು ಪೊಲೀಸ್ ಕಸ್ಟಡಿ ಕೇಳಲಿದ್ದೇವೆ. ನಮ್ಮ ಮನವಿ ಪುರಸ್ಕೃತಗೊಂಡಿದೆ ಮತ್ತು ಆ ಆದೇಶವನ್ನು ಪ್ರಶ್ನಿಸಲಾಗಿಲ್ಲ.
ಪಿಪಿ ಇರ್ಫಾನ್ ಅಹಮ್ಮದ್ : ಆದ್ದರಿಂದ ಈ ಜಾಮೀನು ಅರ್ಜಿಯ ಅಕಾಲಿಕ ಅಥವಾ ಆತುರದ್ದಾಗಿದೆ.
ಕೋರ್ಟ್ : ಹಾಗಂತ ಯಾವ ಕಾನೂನು ಹೇಳುತ್ತದೆ ?
ಕೋರ್ಟ್ : ನೀವು ಹೇಳಿದ ವಿಷಯಗಳು ಯಾವ ಕಾನೂನಿನ ಅಂಶದಲ್ಲಿ ಬರುತ್ತೆ ?
ಪಿಪಿ ಇರ್ಫಾನ್ ಅಹಮ್ಮದ್ : ನಮ್ಮ ಸಬ್ಮೀಷನ್ ಏನೆಂದರೆ, ಈ ಜಾಮೀನು ಅರ್ಜಿಯೇ ಆತುರದ್ದಾಗಿದೆ (ಪ್ರಿ ಮೇಚೂರ್). ನಮ್ಮ ಪ್ರಾಥಮಿಕ ಮನವಿಯೇನೆಂದರೆ ಆರೋಪಿಯನ್ನು ದಯವಿಟ್ಟು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ.
ಕೋರ್ಟ್ : ನಿಮ್ಮ ಸಬ್ಮೀಷನ್ ಅನ್ನು ಕೋರ್ಟ್ ದಾಖಲಿಸಿಕೊಂಡಿದೆ.
ಪಿಪಿ ಇರ್ಫಾನ್ ಅಹಮ್ಮದ್ : ಕೆಲವು ರಹಸ್ಯವಾದ ಸಾಕ್ಷ್ಯಗಳು ನಮ್ಮ ಬಳಿ ಇದೆ. ಅದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ
ಕೋರ್ಟ್ : ಮುಚ್ಚಿದ ಲಕೋಟೆಯಲ್ಲಿ ಕೊಡಬಹುದಲ್ವೇ ?
ಪಿಪಿ ಇರ್ಫಾನ್ ಅಹಮ್ಮದ್ : ಯೆಸ್
ಕೋರ್ಟ್ : ಅಫಿದಾವಿತ್ ಹಾಕುತ್ತೇವೆ ಅಂತ ಹೇಳಿದ್ರಿ. ಎಲ್ಲಿದೆ ಅಫಿದಾವಿತ್ ?
ಎಎಸ್ ಜಿ ರಾಜು : ನಾವು ಅಫಿದಾವಿತ್ ಹಾಕುತ್ತೇವೆ
ಕೋರ್ಟ್ : ಇವತ್ತೇ ಅಫಿದಾವಿತ್ ಹಾಕಿ ಬಿಡಿ
ಕೋರ್ಟ್ : ನನಗೆ ಮೂರು ವಿಷಯದಲ್ಲಿ ನೀವು ವಾದ ಮಂಡಿಸಬೇಕು. ತನಿಖೆಯ ವಿವರ, ಆರೋಪಗಳು ಮತ್ತು ಸಾಕ್ಷ್ಯಗಳ ಮೇಲೆ ವಾದ ಮಾಡಿ
ಎಎಸ್ ಜಿ ರಾಜು : ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಅನ್ನೋ ಸಂಘಟನೆ ಇದೆ. ಧಲಿವಾಲ್ ಮತ್ತು ಅಮಿತಾಲಾಲ್ ಅದರ ಸ್ಥಾಪಕರು. ಈ ಸಂಘಟನೆ ಖಲೀಸ್ಥಾನ ಪ್ರತ್ಯೇಕತೆಗಾಗಿ ಹೋರಾಡುತ್ತೆ. ಅದರ ಟ್ವೀಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದೆ.
ಎಎಸ್ ಜಿ ರಾಜು : ಈ ಸಂಘಟನೆಯು ಅದಕ್ಕಾಗಿ ಜನರನ್ನು ಒಟ್ಟುಗೂಡಿಸುತ್ತದೆ. ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಸಂಘಟನೆಯು ರೈತರ ಹೋರಾಟವನ್ನು ಬಳಸಿಕೊಂಡು ಅದರ ಚಟುವಟಿಕೆಯನ್ನು ವಿಸ್ತರಿಸಲು ಸಂಚು ಮಾಡಿತ್ತು. ( ದೆಹಲಿ ಪೊಲೀಸರ ಉತ್ತರವನ್ನು ಓದಿ ಹೇಳಲಾಯ್ತು)
ಎಎಸ್ ಜಿ ರಾಜು : ಈ ವಾಕ್ಯದಲ್ಲಿ ಪ್ರಸ್ತುತ ಅರ್ಜಿದಾರ ಆರೋಪಿಯೂ ಇದ್ದಾರೆ. ಈ ಟೂಲ್ ಕಿಟ್ ಉದ್ದೇಶ ಸಂಚು. ಕೆನಡಾದಲ್ಲಿ ಆರೋಪಿ ಜೊತೆ ಸೇರಿಕೊಂಡು ಈ ಸಂಚು ರೂಪಿಸಿರುವುದರಿಂದ 124A ಈ ಕೇಸ್ ನಲ್ಲಿ ಸೇರಿಕೊಂಡಿದೆ.
ಎಎಸ್ ಜಿ ರಾಜು : ಅವರು ಒಂದು ವಾಟ್ಸಪ್ ಗ್ರೂಪ್ ಮಾಡಿಕೊಳ್ಳುತ್ತಾರೆ. ಇಂಟರ್ ನ್ಯಾಶನಲ್ ಫಾರ್ಮರ್ಸ್ ಸ್ಟ್ರೈಕ್ ಎಂದು ವಾಟ್ಸಪ್ ಗ್ರೂಪ್ ಗೆ ಹೆಸರಿಡುತ್ತಾರೆ.ಅದರ ಮೂಲಕ ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಅನ್ನು ಸಂಪರ್ಕಿಸುತ್ತಾರೆ.
ಎಎಸ್ ಜಿ ರಾಜು : 11.01.2021 ರಂದು ಧಲಿವಾಲ್ ಮತ್ತು ಇತರ ಆರೋಪಿಗಳು ಜೂಮ್ ಕಾಲ್ ಮೂಲಕ ಮಾತನಾಡಿಕೊಳ್ಳುತ್ತಾರೆ. ಈ ಅರ್ಜಿದಾರಳು ಆ ಆರೋಪಿಗಳ ಸಹವರ್ತಿಗಳು. ಅದು ಇವರಿಗೆ ಅಗತ್ಯ ಇರಲಿಲ್ಲ.
ಎಎಸ್ ಜಿ ರಾಜು : ಮೀಟಿಂಗ್ ಬಳಿ ಒಬ್ಬ ಸಂಚುಕೋರ, ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಗೆ ಧನ್ಯವಾದ ಹೇಳಿ ಮೆಸೇಜ್ ರವಾನಿಸಿದ್ದಾನೆ.
ಎಎಸ್ ಜಿ ರಾಜು : ದಿಶಾ ಇವರ ಜೊತೆ ನಿಕಟ ಸಂಬಂಧ ಹೊಂದಿದ್ದಾಳೆ. ಮತ್ತೆ ಝೂಮ್ ಮೀಟಿಂಗ್ ಮಾಡಲು ದಿಶಾ ಮನವಿ ಮಾಡಿದ್ದಾಳೆ. ಎರಡರಿಂದ ಮೂರು ಬಾರಿ ಇಂತಹ ಮೀಟಿಂಗ್ ಆಗುತ್ತೆ.
ಎಎಸ್ ಜಿ ರಾಜು : ಕೆಲವು ವಿಷಯಗಳನ್ನು ವೆಬ್ ಸೈಟ್ ನಲ್ಲಿ ನೋಡಬಹುದು. ಟೂಲ್ ಕಿಟ್ ನೋಡಲು ಅಪಾಯಕಾರಿ ಅಲ್ಲದಂತೆ ಕಾಣಬಹುದು. ಆದರೆ ಅದು ಹಾಗಿಲ್ಲ. ಟೂಲ್ ಕಿಟ್ ಡ್ರಾಫ್ಟ್ ಮಾಡಿದ ಬಳಿಕ ಅದನ್ನು ಅಭಿಪ್ರಾಯ ಸಂಗ್ರಹಿಸಲು ವಾಟ್ಸ್ ಅಪ್ ಗ್ರೂಪಲ್ಲಿ ಹಾಕಲಾಯ್ತು. ಅದು ಕೊನೆಗೆ ತಲುಪಿದ್ದು ಪೊಯೆಟಿಕ್ ಜಸ್ಟಿಸ್ ಫೌಂಡೇಶನ್. ಇದರ ಅಗತ್ಯ ಇರಲಿಲ್ಲ.
ಕೋರ್ಟ್ : ಈ ಟೂಲ್ ಕಿಟ್ ಅಂದ್ರೆ ಏನು ?
ಎಎಸ್ ಜಿ ರಾಜು : ಅದನ್ನು ಲಗತ್ತಿಸಲಾಗಿದೆ. ಪೇಜ್ 21 ರಿಂದ ಟೂಲ್ ಕಿಟ್ ಬಗ್ಗೆ ಶುರುವಾಗುತ್ತೆ.
ಸಿದ್ದಾರ್ಥ್ ಅಗರ್ವಾಲ್ : ಟೂಲ್ ಕಿಟ್ ಅಂದ್ರೆ ಕರಪತ್ರ ಎನ್ನಬಹುದು
ಎಎಸ್ ಜಿ ರಾಜು : ಸಿಖ್ ಫಾರ್ ಜಸ್ಟಿಸ್ ಎಂಬ ಸಂಘಟನೆ ಯುಎಪಿಎ ಅಡಿಯಲ್ಲಿ ನಿಷೇಧಕ್ಕೊಳಗಾಗಿರೋ ಸಂಘಟನೆ.
ಎಎಸ್ ಜಿ ರಾಜು : ಈ ಖಲೀಸ್ತಾನ್ ದುಷ್ಕರ್ಮಿಗಳು ಇದರ ಹಿಂದೆ ಇದ್ದಾರೆ. ದ್ವಜವನ್ನು ಹಾರಿಸಿದ್ದು ಅವರೇ. ಅದರ ಇನ್ನೊಂದು ಮುಖವೇ ಪೊಯೆಟಿಕ್ ಜಸ್ಟಿಸ್. ಟೂಲ್ ಕಿಟ್ ಇಲ್ಲೇ ಸಿದ್ದವಾಗುತ್ತೆ.
ಎಎಸ್ ಜಿ ರಾಜು : ಅವರು ಹ್ಯಾಶ್ ಟ್ಯಾಗ್ ಸೃಷ್ಟಿಸಿದರು. ಸಾಮಾಜಿಕ ಜಾಲತಾಣದ ಮೂಲಕ ಅದನ್ನು ಕೆಲವೇ ವ್ಯಕ್ಯಿಗಳ ಮಧ್ಯೆ ಮಾತ್ರ ಹಂಚಲಾಯಿತು. ಆದರೆ ಅದು ಲೀಕ್ ಆಯ್ತು. ಇದರಿಂದ ಬಚಾವಾಗಲು ಕಸರತ್ತು ನಡೆಸಲಾಯ್ತು. ಹಾಗಾಗಿ ಅದನ್ನು ಡಿಲೀಟ್ ಮಾಡಲಾಯ್ತು.
ಎಎಸ್ ಜಿ ರಾಜು : ಹ್ಯಾಶ್ ಟ್ಯಾಗ್ ಮಾಡಿದ್ದು ತಪ್ಪು ಅಲ್ಲವೆಂದಾದರೆ ಅದನ್ನು ಡಿಲೀಟ್ ಮಾಡುವ ಅಗತ್ಯ ಏನಿತ್ತು ?
ಎಎಸ್ ಜಿ ರಾಜು : ಅವರು ರೈತರ ಹೋರಾಟವನ್ನು ಬಳಸಿಕೊಂಡು ಅವರ ಅಜೆಂಡಾ ಜಾರಿಗೆ ಮುಂದಾಗಿದ್ದರು. ಆ ಇಮೇಲ್ ಕೂಡಾ ಡಿಲೀಟ್ ಮಾಡಲಾಗಿದೆ. ಅದರಲ್ಲಿ ಅರ್ಜಿದಾರಳ ಪಾತ್ರವೂ ಬಯಲಾಗಿದೆ. ಅರ್ಜಿದಾರಳ ಅದರ ಹಿಂದೆ ಇದ್ದಾಳೆ. ( ಟೂಲ್ ಕಿಟ್ ಎಡಿಟ್ ವಿಚಾರ )
ಫಾರ್ಮರ್ಸ್ ಪ್ರೊಟೆಸ್ಟ್ ಚೀಟ್ ಶೀಟ್, ಕರೆಂಟ್ ಜೆನೊಸೈಡ್ ಅಲರ್ಟ್, ಆಸ್ಕ್ ಇಂಡಿಯಾ ಹ್ಯಾಶ್ ಟ್ಯಾಗ್ ಬಗ್ಗೆ ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ರಾಜು ಮಾತನಾಡುತ್ತಾ..
ಎಎಸ್ ಜಿ ರಾಜು : ಭಾರತದ ಸೈನ್ಯವನ್ನು ಅವಹೇಳನ ಮಾಡುವ ಸೈಟ್ ಗೂ ಈ ಟೂಲ್ ಕಿಟ್ ಹ್ಯಾಶ್ ಟ್ಯಾಗ್ ಸಂಪರ್ಕಿಸುತ್ತೆ. ಹೇಗೆ ಭಾರತದ ಸೇನೆ ಕಾಶ್ಮೀರದಲ್ಲಿ ಹತ್ಯಾಕಾಂಡ ಮಾಡಿತ್ತು ಎಂಬ ಬಗ್ಗೆಯೂ ಇದೆ. ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಪಿತೂರಿ ಮಾಡಿ ದೆಹಲಿಗೆ ನುಗ್ಗಿದ್ದರು. ಅವರು ರೈತ ಹೋರಾಟವನ್ನು ತಮ್ಮ ಅಜೆಂಡಾ ಜಾರಿಗೆ ಬಳಸಿದ್ದರು. ಅದಕ್ಕೆ ಇವರ ಟೂಲ್ ಕಿಟ್ ಬಳಕೆ ಆಗಿತ್ತು. ಅವರು ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದರು. ಇಮೇಲ್ ಮಾಡಿದ್ದರು. ನಂತರ ಇಮೇಲ್ ಡಿಲೀಟ್ ಮಾಡಿದ್ದಾರೆ. ಎಲ್ಲವೂ ಸರಿ ಇದ್ದರೆ ಡಿಲೀಟ್ ಯಾಕೆ ಮಾಡಬೇಕಿತ್ತು ?
ಕೋರ್ಟ್ : ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡಿ. ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ನಿಷೇಧಿತ ಸಂಘಟನೆಯೇ ?
ಎಎಸ್ ಜಿ ರಾಜು : ಅಲ್ಲ
ಕೋರ್ಟ್ : ಅದರ ಸ್ಥಾಪಕರ ಮೇಲೆ ಯಾವುದಾದರೂ ಎಫ್ ಐಆರ್ ದಾಖಲಾಗಿದೆಯೆ ?
ಎಎಸ್ ಜಿ ರಾಜು : ಈವರೆಗೂ ಆಗಿಲ್ಲ
ಕೋರ್ಟ್ : ಮತ್ತೆ ಹೇಗೆ ನೀವು ಅವರ ಮೇಲೆ ಕೆಟ್ಟ ಅಭಿಪ್ರಾಯ ದಾಖಲಿಸುತ್ತಿರಿ ?
ಎಎಸ್ ಜಿ ರಾಜು : ಅವರ ಟ್ವೀಟ್ ಗಳ ಆಧಾರದ ಮೇಲೆ
ಕೋರ್ಟ್ – ಏನಾದರೂ ದಾಖಲೆ ಇದ್ಯಾ ?
ಪಿಪಿ ಇರ್ಫಾನ್ ಅಹಮ್ಮದ್ – ಪೊಯೆಟಿಕ್ ಜಸ್ಟಿಸ್ ಮತ್ತು ಸಿಖ್ ಫಾರ್ ಜಸ್ಟಿಸ್ ಎರಡೂ ಒಂದೇ. ಅದಕ್ಕೆ ಸಂಬಂಧಿಸಿದ ವಿಡಿಯೋ ಕೂಡಾ ಇದೆ. ನಾನು ಖಲೀಸ್ಥಾನಿ ಎಂಬ ಹೆಮ್ಮೆ ಇದೆ ಎಂದು ದಲೀವಾಲ್ ಹೇಳುವ ವಿಡಿಯೋ ಕೂಡಾ ಇದೆ.
ಪಿ ಪಿ ಇರ್ಫಾನ್ ಅಹಮ್ಮದ್ – ಇವರೆಲ್ಲರ ಉದ್ದೇಶ ಖಲೀಸ್ಥಾನವನ್ನು ಬೆಂಬಲಿಸುವುದು.
ಕೋರ್ಟ್ : ನಾನೇನಾದರೂ ಯಾವುದಾದರೂ ಚಳುವಳಿಯಲ್ಲಿದ್ದು, ವೈಯುಕ್ತಿಕವಾಗಿ ಯಾವುದೋ ಉದ್ದೇಶಕ್ಕೆ ಯಾರನ್ನೋ ಸಂಪರ್ಕಿಸಿದರೆ ನಾನೂ ಅವರ ಉದ್ದೇಶಗಳ ಭಾಗ ಎಂದು ಅರ್ಥವೇ ?
ಎಎಸ್ ಜಿ ರಾಜು : ಆದರೆ ಇವರು ಯಾರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ
ಕೋರ್ಟ್ : ಹಾಗೇನಿಲ್ಲ. ಎಲ್ಲರಿಗೂ ಗೊತ್ತಿರಬೇಕೆಂದೇನಿಲ್ಲ
ಎಎಸ್ ಜಿ ರಾಜು : ಈ ಅರೋಪಿಗಳು ಅನಕ್ಷರಸ್ಥರಲ್ಲ. ಯಾವ ಸಂಘಟನೆ ಯಾವ ಉದ್ದೇಶ ಹೊಂದಿದೆ ಎಂಬುದು ಆಕೆಗೆ ತಿಳಿದಿದೆ. ಹಾಗಿಲ್ಲದಿದ್ದರೆ ಪ್ರಕರಣ ಹೊರ ಬರುತ್ತಿದ್ದಂತೆ ಆಕೆ ಹೆದರಿದ್ದು ಯಾಕೆ ?
ಕೋರ್ಟ್ : ನಾನು ದೇವಸ್ಥಾನಕ್ಕೆ ದಾನ ಕೊಡಿ ಎಂದು ದರೋಡೆಕೋರನನ್ನು ಸಂಪರ್ಕಿಸುತ್ತೇನೆ. ಆಗ ನಾನು ದರೋಡೆಯ ಭಾಗವಾಗುತ್ತೇನೆಯೇ ? ಆಕೆಯ ವಿರುದ್ದ ಇರೋ ಸಾಕ್ಷ್ಯಗಳನ್ನು ತೋರಿಸಿ.
ಎಎಸ್ ಜಿ ರಾಜು : ಅದು ಅಷ್ಟು ಸರಳವಲ್ಲ. ಆಕೆ ಉದ್ದೇಶಪೂರ್ವಕವಾಗಿಯೇ ಅವರ ಸಂಪರ್ಕ ಹೊಂದಿದ್ದಾಳೆ
ಕೋರ್ಟ್ – ಟೂಲ್ ಕಿಟ್ ಗೂ ಹಿಂಸಾಚಾರಕ್ಕೂ ಏನು ಸಂಬಂಧ ? ಅದಕ್ಕೆ ಸಂಬಂಧಿಸಿದ ದಾಖಲೆ ಏನಿದೆ ?
ಎಎಸ್ ಜಿ ರಾಜು : ಅದೊಂದು ಪಿತೂರಿ. ಹಲವರು ಹಲವು ಪಾತ್ರ ವಹಿಸಿದ್ದಾರೆ. ಹಿಂಸಾಚಾರದ ಹಿಂದೆ ಟೂಲ್ ಕಿಟ್ ಪ್ರಚೋದನೆ ಇದೆ
ಎಎಸ್ ಜಿ ರಾಜು : ಟೂಲ್ ಕಿಟ್ ಮೂಲಕ ಪ್ರಚೋದನೆ ಪಡೆದುಕೊಂಡು ಜನ ದೆಹಲಿಗೆ ಬಂದರು. ದೆಹಲಿಗೆ ಹೋಗಿ, ಅದು ಮಾಡಿ, ಇದು ಮಾಡಿ ಎಂದು ಟೂಲ್ ಕಿಟ್ ಮೂಲಕ ಸೂಚಿಸಲಾಗಿತ್ತು ?
ಕೋರ್ಟ್ : ಅದು ಮಾಡಿ, ಇದು ಮಾಡಿ ಅಂದ್ರೆ ಏನು ? ಸರಿಯಾದ ಲಿಂಕ್ ಕೊಡಿ. ಸರಿಯಾದ ದಾಖಲೆ ಕೊಡಿ.
ಕೋರ್ಟ್ : ನನ್ನ ಆತ್ಮಸಾಕ್ಷಿಗೆ ಮನವರಿಕೆಯಾಗದೆ ನಾನು ಮುಂದುವರೆಯಲಾರೆ.
ಎಎಸ್ ಜಿ ರಾಜು : ಟೂಲ್ ಕಿಟ್ ಅನ್ನು ಇನ್ನೊಮ್ಮೆ ಗಮನಿಸಿ. ಅದರ ಮೂಲಕವೇ ಹಿಂಸಾಚಾರಕ್ಕೆ ಪ್ರಚೋದನೆ ನೀಡಲಾಗಿದೆ.
ಕೋರ್ಟ್ : ಈ ಪ್ರಕರಣಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಕೊಡ್ತೀರಾ ? ಅಥವಾ ಊಹೆಗಳನ್ನೇ ಮಾಡಿಕೊಂಡಿರಬೇಕಾ ?
ಎಎಸ್ ಜಿ ರಾಜು : ಸನ್ನಿವೇಶದ ಆಧಾರದ ಮೇಲೆ ನೋಡಬೇಕು
ಕೋರ್ಟ್ : ನಿಮ್ಮ ವಾದ ಮುಗಿಯಿತೇ ? ನಾನು ಸಿದ್ದಾರ್ಥ್ ಅಗರ್ ವಾಲ್ ಗೆ ಸಮಯ ನೀಡಬೇಕಿದೆ.
ಸುಪ್ರಿಂ ಕೋರ್ಟ್ ಮತ್ತು ಕೇರಳ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶ/ತೀರ್ಪುಗಳನ್ನು ಎಎಸ್ ಜಿ(ಅಸಿಸ್ಟೆಂಟ್ ಸಾಲಿಸಿಟರ್ ಜನರಲ್) ರಾಜು ಓದಿ ಹೇಳಿದರು. ಬಳಿಕ…
ಎಎಸ್ ಜಿ ರಾಜು : ನ್ಯಾಯಾಲಯ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಟೂಲ್ ಕಿಟ್ ತಿದ್ದುವಿಕೆಯಲ್ಲಿ ಈಕೆಯ ಪಾತ್ರವಿದೆ. ಅದು ಪಿತೂರಿಯ ಭಾಗ. ಜೊತೆಗೆ ದಲೀವಾಲ್ ಪ್ರತ್ಯೇಕ ಖಲೀಸ್ಥಾನಿ ಎಂದು ಹೇಳಿಕೆ ನೀಡಿರುವ ವಿಡಿಯೋ ಕೂಡಾ ಇದೆ.
ಕೋರ್ಟ್ : ಅದೇನು ಚರ್ಚೆಯ ವಿಷಯವೇ ಅಲ್ಲ. ಈಗಾಗಲೇ ಪಬ್ಲಿಕ್ ಪ್ರಾಸಿಕ್ಯೂಟರ್ ನಮ್ಮ ಗಮನಕ್ಕೆ ತಂದಿದ್ದಾರೆ.
ಕೋರ್ಟ್ : ದೆಹಲಿ ಹಿಂಸಾಚಾರಕ್ಕೂ ಈ ಹುಡುಗಿಗೂ ಇರುವ ನೇರ ಸಂಬಂಧದ ಸಾಕ್ಷ್ಯಾಧಾರಗಳು ಇದ್ದರೆ ಹೇಳಿ
ಕೋರ್ಟ್ : ದಯವಿಟ್ಟು ಖಲೀಸ್ಥಾನ ಗುಂಪುಗಳ ಬಗ್ಗೆ ಪುನರಾವರ್ತಿಸಬೇಡಿ. ಬೇರೆ ನಿಖರ ಸಾಕ್ಷ್ಯಗಳಿದ್ದರೆ ಹೇಳಿ
ಎಎಸ್ ಜಿ ರಾಜು : ಇಲ್ಲಿ ಪಿತೂರಿಯ ಜಾರಿ ಮತ್ತು ಪಿತೂರಿ ಎರಡೂ ಬೇರೆ ಬೇರೆಯಾಗಿ ನಡೆದಿದೆ.
ಕೋರ್ಟ್ : ಹಾಗಾದರೆ ನಾನು ಈ ಆರೋಪಿಗೆ ನೇರ ಸಂಪರ್ಕ ಇಲ್ಲ ಎಂದು ಭಾವಿಸಲೇ ?
ಎಎಸ್ ಜಿ ರಾಜು : ತನಿಖೆ ಮುಂದುವರೆಯುತ್ತಿದೆ
ಕೋರ್ಟ್ : ನೀವು ಆ ನಟನನ್ನು ಅರೆಸ್ಟ್ ಮಾಡಿದ್ದಾರೆ.
ಡಿಸಿಪಿ : ಹೌದು.
ಕೋರ್ಟ್ : ಅವನಿಗೂ ಈ ಆರೋಪಿಗೂ ನೇರ ಲಿಂಕ್ ಇದ್ಯಾ ?
ಡಿಸಿಪಿ : ತನಿಖೆ ನಡೆಸುತ್ತಿದ್ದೇವೆ
ಕೋರ್ಟ್ : ಒಂದೋ ನಾನು ಸರಿಯಾಗಿ ಪ್ರಶ್ನೆ ಕೇಳುತ್ತಿಲ್ಲ. ಅಥವಾ ನಿಮಗೆ ಉತ್ತರಿಸಲು ಮನಸ್ಸಿಲ್ಲ. ನೀವು ಹೇಳುವ ಪಿತೂರಿಗೂ ಈ ಘಟನೆಗೂ ಏನ್ ಸಂಬಂಧ ? ಏನಾದರೂ ಸಾಕ್ಷಿ ಇದ್ಯಾ?
ದಿಶಾ ಪರ ವಕೀಲ ಸಿದ್ದಾರ್ಥ್ ಅಗರ್ವಾಲ್ ವಾದ ಶುರು ಮಾಡಿದ್ರು.
ಸಿದ್ದಾರ್ಥ್ ಅಗರ್ವಾಲ್ : ತನಿಖೆಯನ್ನೇ ನಿಲ್ಲಿಸಿ ಎಂದು ನಾನು ಹೇಳುತ್ತಿಲ್ಲ. ತನಿಖೆ ನಡೆಯಲಿ. 21 ವರ್ಷ ವಯಸ್ಸಿನ ಬೆಂಗಳೂರು ನಿವಾಸಿ ದಿಶಾ, ಈವರೆಗೂ ಖಲಿಸ್ತಾನ್ ಜೊತೆ ಸಂಪರ್ಕ ಹೊಂದಿರೋ ಇತಿಹಾಸ ಹೊಂದಿಲ್ಲ. ಅವರ ಜೊತೆಗಿನ ಹಣಕಾಸು ವ್ಯವಹಾರವೂ ಆಕೆಗೆ ಇಲ್ಲ.
ಕೋರ್ಟ್ : ಮೂರನೇ ಅ್ಯಂಗಲ್ ಕೂಡಾ ಇರಬಹುದಲ್ವೇ ? ಶತ್ರುವಿನ ಶತ್ರು ಮಿತ್ರ ಎಂಬಂತೆ…
ಸಿದ್ದಾರ್ಥ್ ಅಗರ್ವಾಲ್ : ಅಂತಹ ಯಾವುದೇ ಪ್ರವೃತ್ತಿ ಆಕೆಯಲ್ಲಿ ಇಲ್ಲ. ಕಾರಣವಿಲ್ಲದೆ ಆಕೆ ಬಂಡಾಯವೆದ್ದಿಲ್ಲ. ಆಕೆಯದ್ದು ಪರಿಸರ ಮತ್ತು ಕೃಷಿ, ರೈತರ ಕುರಿತಾದ ಹೋರಾಟ.
ಕೋರ್ಟ್ : ಅವರು ಪೊಯೆಟಿಕ್ ಜಸ್ಟಿಸ್ ಬಗ್ಗೆ ಆರೋಪಿಸುತ್ತಾರೆ.
ಸಿದ್ದಾರ್ಥ್ ಅಗರ್ವಾಲ್ : ದಿಶಾ ಅದರ ಭಾಗವಲ್ಲ. ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಗಾಗಲೀ, ಸಿಖ್ ಫಾರ್ ಜಸ್ಟಿಸ್ ಗಾಗಲೀ ದಿಶಾ ಜೊತೆ ಇರೋ ಸಂಪರ್ಕದ ಆರೋಪದ ಬಗ್ಗೆ ಯಾವ ದಾಖಲೆಗಳೂ ಇಲ್ಲ. ಅಂತಹ ಸಂಪರ್ಕವೇ ಇಲ್ಲ. ಸಂಬಂಧವೂ ಇಲ್ಲ.
ಸಿದ್ದಾರ್ಥ್ ಅಗರ್ವಾಲ್ : ಒಂದು ವೇಳೆ ನಾನೇನಾದರೂ ಯಾರನ್ನಾದರೂ ಬೇಟಿಯಾದರೆ ಆತ ಪ್ರತ್ಯೇಕತಾವಾದಿ ಹೌದೋ ಅಲ್ಲವೋ ಎಂದು ನನಗೆ ಹೇಗೆ ತಿಳಿಯಬೇಕು ? ಆತನಿಗೂ ನನಗೂ ಸಂಬಂಧವೇ ಇರುವುದಿಲ್ಲ.
ಡಿಸಿಪಿ : ನಿಮ್ಮ ಗಮನಕ್ಕೆ. ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಅಕ್ಟೋಬರ್ 2020 ಕ್ಕೆ ಶುರುವಾಯಿತು.
ಸಿದ್ದಾರ್ಥ್ ಅಗರ್ವಾಲ್ : ನನಗೆ ಅದರಲ್ಲಿ ಆಸಕ್ತಿ ಇಲ್ಲ. ನೀವೇ ಹೇಳಿದಂತೆ ನಿನ್ನೆ ಮೊನ್ನೆ ಹುಟ್ಟಿದ ಸಂಘಟನೆ ಎಲ್ಲರಿಗೂ ಗೊತ್ತಿರಲು ಸಾಧ್ಯವಿಲ್ಲ
ಸಿದ್ದಾರ್ಥ್ ಅಗರ್ವಾಲ್ : ನಿಖಿತಾ ಮತ್ತು ಶಂತನೂ 60-70 ಜನರ ಝೂಮ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದರು. ದಿಶಾ ಭಾಗಿಯಾಗಿಲ್ಲ.
ಸಿದ್ದಾರ್ಥ್ ಅಗರ್ವಾಲ್ : ರೈತರ ಹೋರಾಟವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಕೊಡಿಸುವುದು ದೇಶದ್ರೋಹವಾದರೆ, ಹೌದು ನಾನು(ದಿಶಾ) ತಪ್ಪಿತಸ್ಥೆ.
ಸಿದ್ದಾರ್ಥ್ ಅಗರ್ವಾಲ್ : ನಾನು ಝೂಮ್ ಮೀಟಿಂಗ್ ಗೆ ಹಾಜರಾಗಿದ್ದೇನೆ ಎಂದು ಯಾರದರೂ ದಾಖಲೆಯಿಲ್ಲದೇ ಊಹಿಸಿಕೊಂಡರೆ ನಾನು ಏನು ಮಾಡಲಿ? ನಾನು ಎಲ್ಲೂ ದೇಶದ ವಿರುದ್ದ ಭಾಷಣ ಮಾಡಿಲ್ಲ. ಟೂಲ್ಕಿಟ್ ಎಂಬುದು ಆಕ್ರಮಣಕಾರಿಯೇ? ಅಥವಾ ಅದರ ಹೊರಗಡೆ ಪಿತೂರಿ ನಡೆದಿತ್ತೇ ?. ದಯವಿಟ್ಟು ಸೆಕ್ಷನ್ 124 ಎ ನೋಡಿ. ನಾನು(ದಿಶಾ) ದೇಶದ್ರೋಹಿಯಲ್ಲ.
ಅಗರ್ವಾಲ್ ಸೆಕ್ಷನ್ 124 ಎ ಐಪಿಸಿ ಓದುತ್ತಾರೆ.
ಸಿದ್ದಾರ್ಥ್ ಅಗರ್ವಾಲ್ : ದೇಶದ್ರೋಹ ಪ್ರಕರಣಕ್ಕೆ ದಾಖಲೆಗಳು ಬೇಕು. ಮಾತು, ಹೇಳಿಕೆ, ಬರಹ, ಕೃತ್ಯ ಇರಬೇಕು. ಸಂವಹನವು ದೇಶದ ವಿರುದ್ದ ಸಮಾದಾನವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರಬೇಕು. ಟೂಲ್ಕಿಟ್ಗೆ ಅಂತಹ ಯಾವುದೇ ಸಾಮರ್ಥ್ಯ ಇಲ್ಲ. ಪ್ರಾಸಿಕ್ಯೂಷನ್ ಕೂಡಾ ಅದನ್ನು ಸ್ಪಷ್ಟಪಡಿಸಿದೆ. ಆದರೆ ಟೂಲ್ ಕಿಟ್ ಕೆಟ್ಟ ಜನರ ಕೈ ಸೇರಿದೆ ಎನ್ನುವುದು ಆರೋಪ. ಅದು ದೇಶದ್ರೋಹವಲ್ಲ.
ಇಡೀ ಪ್ರಕರಣ ಊಹೆಯನ್ನು ಆಧರಿಸಿದ್ದಾಗಿದೆ. ನ್ಯಾಯಾಲಯವು ಜಾಮೀನು ಅರ್ಜಿ ಪರಿಶೀಲಿಸುವಾಗ ದಯವಿಟ್ಟು ಇದನ್ನು ಪರಿಗಣಿಸಿ. ಎಲ್ಲಾ ವಿಚಾರಣೆ ಮುಗಿಸಿ ದಂಡ ಕಟ್ಟಿ ಹೊರಬರಬಹುದಾದ ಪ್ರಕರಣವಷ್ಟೆ. ನನ್ನನ್ನು(ದಿಶಾರನ್ನು) ಐದು ದಿನಗಳ ಪೊಲೀಸ್ ಕಸ್ಟಡಿ ಕೊಟ್ಟಿದ್ರು. ಹೆಚ್ಚಿನ ತನಿಖೆ ಮಾಡಲು ಇದೆ ಅಂದ್ರು. ಸರ್ಚ್ ಮಾಡಲು ನೀವು ಒಂದು ಬಾರಿಯೂ ನನ್ನನ್ನು ಬೆಂಗಳೂರಿಗೆ ಕರೆದೊಯ್ಯಲಿಲ್ಲ. ಮತ್ಯಾಕೆ ಕಸ್ಟಡಿ ತಗೊಂಡ್ರಿ ? ಇನ್ನೂ ಮೂರು ದಿನ ಏನಾಗುತ್ತೆ? ಫೆಬ್ರವರಿ 22 ರಂದು ಮತ್ತೆ ಯಾಕೆ ಕಸ್ಟಡಿ ಕೇಳುತ್ತಿದ್ದಾರೆ? ಇದೆಂತ ತನಿಖೆ ?
ಸಿದ್ದಾರ್ಥ್ ಅಗರ್ವಾಲ್ : ನಾನು ಮೆರಿಟ್ ಆಧಾರದಲ್ಲಿ ಕೇಸ್ ನ ಚರ್ಚೆಗೆ ಹೋಗುವುದಿಲ್ಲ. ಪಿಜೆಎಫ್ ಅನ್ನು ನಿಷೇಧಿಸಲಾಗಿಲ್ಲ. ಧಲಿವಾಲ್ ಮತ್ತು ಲಾಲ್ ಅನ್ನು ಕೂಡಾ ನಿಷೇಧಿಸಲಾಗಿಲ್ಲ. ಅವರು ಇಲ್ಲಿ, ಅಲ್ಲಿ ಅಂತ ಸುಖಾಸುಮ್ಮನೆ ವಿಷಯಗಳನ್ನು ಲಿಂಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೆಂಪು ಕೋಟೆಯಲ್ಲಿ ಧ್ವಜವನ್ನು ಹಾರಿಸಿದ ಅಥವಾ ಹಿಂಸಾಚಾರದಲ್ಲಿ ಪಾಲ್ಗೊಂಡ ವ್ಯಕ್ತಿಗಳಲ್ಲಿ ನಿಮಗೆ ಟೂಲ್ಕಿಟ್ ಏನಾದ್ರೂ ಪತ್ತೆಯಾಯ್ತೆ ? ಪೊಲೀಸರ ಹೊರತಾಗಿ ಬೇರೆ ಯಾರೂ ಕೂಡಾ ಈ ಆರೋಪಗಳಿಗೆ ಸಾಕ್ಷಿ ಇಲ್ಲ. ಹಿಂಸಾಚಾರ ಸಂಬಂಧ 149 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ನನ್ನೊಂದಿಗೆ ಮಾತನಾಡಿದ ಯಾರಾದರೂ ಇದ್ದಾರೆಯೇ?
ಸಿದ್ದಾರ್ಥ್ ಅಗರ್ವಾಲ್ : ಕೆಂಪುಕೋಟೆಯ ಮೇಲೆ ಧ್ವಜವನ್ನು ಹಾರಿಸಿರೋ ಬಗ್ಗೆ, ಅಥವಾ ಹಿಂಸಾಚಾರದ ಬಗ್ಗೆ ನಾನೇನೂ ಹೇಳಲ್ಲ. ಕೆಂಪುಕೋಟೆಗೆ ಮೆರವಣಿಗೆ ಹೋಗಿದ್ದೇ ತಪ್ಪಾಗಿರಬಹುದು. ಮೆರವಣಿಗೆಗೆ ಅವಕಾಶ ಕೊಟ್ಟಿದ್ದು ಯಾರು ? ದೆಹಲಿ ಪೊಲೀಸರು ಅವಕಾಶ ಕೊಟ್ಟವರು ತಾನೆ ?
ಸಿದ್ದಾರ್ಥ್ ಅಗರ್ವಾಲ್ : ದೆಹಲಿ ನಗರದಲ್ಲಿ ಮೆರವಣಿಗೆ ನಡೆಸಲು ಅವಕಾಶ ಕೊಡೋ ವಿವಾದ ಸುಪ್ರೀಂ ಕೋರ್ಟ್ ಮುಂದೆ ಇತ್ತು. ದೆಹಲಿ ಪೊಲೀಸರು ತೀರ್ಮಾನ ತೆಗೆದುಕೊಳ್ಳಬೇಕೆಂದು ಸುಪ್ರಿಂ ಕೋರ್ಟ್ ಹೇಳಿತ್ತು. ದೆಹಲಿ ಪೊಲೀಸರು ಮೆರವಣಿಗೆಗೆ ಅನುಮತಿ ನೀಡಿದರು. ಆಗ ನಾನು ( ದಿಶಾ) ಜನರಿಗೆ ಅದರ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದರೆ, ಅದು ದೇಶದ್ರೋಹವೇ? ನಾನು ಪ್ರತಿಭಟನೆಯ ಅಥವಾ ಮೆರವಣಿಗೆಯ ಸಂಘಟಕಿಯಲ್ಲ. ಸಂಘಟಕರು ದೇಶದ್ರೋಹವನ್ನು ಎದುರಿಸುತ್ತಿದ್ದಾರೆ? ರ್ಯಾಲಿಯು ನ್ಯಾಯಸಮ್ಮತವಾಗಿದ್ದರೆ, ಅದಕ್ಕಾಗಿ ಕೆಲಸ ಮಾಡಿದ ನಾನು ಯಾವುದೇ ತಪ್ಪು ಮಾಡಿಲ್ಲ.
ಕೋರ್ಟ್ : ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ರವರೇ,
ನೀವು ಇನ್ನೂ ಹೆಚ್ಚಿನದನ್ನು ಹೇಳಲಿಕ್ಕಿದೆಯೋ? ಏನಾದರೂ ಸಾಕ್ಷ್ಯ ಕೊಡುವುದಿದೆಯೋ ಅಥವಾ ಆದೇಶಕ್ಕಾಗಿ ನಾನು ಲಿಸ್ಟ್ ಮಾಡಲೇ ?
ಎಎಸ್ ಜಿ ರಾಜು : ಇಲ್ಲಿ ಅವಳ ಇತಿಹಾಸ ಅಪ್ರಸ್ತುತ. ನೀವು ಯಾರೊಂದಿಗೆ ಸಂವಹನ ನಡೆಸುತ್ತೀರೋ ಅವರು ಖಲಿಸ್ತಾನಿ. ಟೂಲ್ಕಿಟ್ ಅನ್ನು ಪ್ರತ್ಯೇಕವಾಗಿ ನೋಡಬಾರದು. ಖಂಡಿತವಾಗಿಯೂ ಹಿಂಸಾಚಾರದಲ್ಲಿ ಟೂಲ್ ಕಿಟ್ ಕಂಡುಬರುವುದಿಲ್ಲ. ಆದರೆ ನೀವು ಅವರನ್ನು ಪ್ರಚೋದಿಸಿದ್ದೀರಿ. ಅದಕ್ಕೆ ಸಾಕ್ಷ್ಯಚಿತ್ರವಿದೆ.
ಕೋರ್ಟ್ : ಈ ಸಾಕ್ಷ್ಯಚಿತ್ರ ಪುರಾವೆ ಎಲ್ಲಿದೆ?
ಎಎಸ್ ಜಿ ರಾಜು : ಲಿಂಕ್ ಇದೆ. ನೀವು ಲಿಂಕ್ ಅನ್ನು ಕ್ಲಿಕ್ ಮಾಡಿ, ಅದು ಖಲಿಸ್ತಾನಿ ಚಳುವಳಿ ಲಿಂಕ್ ಎಂದು ನಿಮಗೆ ತಿಳಿಯುತ್ತದೆ.
ಸಿದ್ದಾರ್ಥ್ ಅಗರ್ವಾಲ್ : ಐಟಿ ಕಾಯ್ದೆಯಡಿ, ವೆಬ್ಸೈಟ್ಗಳನ್ನು ನಿರ್ಬಂಧಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಆದರೆ ಈ ವೆಬ್ಸೈಟ್ಗಳನ್ನು ಏಕೆ ನಿರ್ಬಂಧಿಸಲಾಗಿಲ್ಲ?
ಕೋರ್ಟ್ : ಟೂಲ್ಕಿಟ್ ಚಹಾ ಮತ್ತು ಯೋಗವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದೀರಿ. ಅದಕ್ಕೇನು ದಾಖಲೆ ಇದೆ ?
ಡಿಸಿಪಿ : ನಿರ್ಧಿಷ್ಟ ದಾಖಲೆ ಇಲ್ಲ. ಟೆಂಪ್ಲೇಟ್ಗಳು, ವೆಬ್ಸೈಟ್ಗಳು ಇತ್ಯಾದಿಗಳಿವೆ. ಕೆಲವು ನಿರ್ದಿಷ್ಟ ಕೆಲಸಗಳು ಭಾರತದ ಚಿಹ್ನೆಗಳನ್ನು ಗುರಿಯಾಗಿಸಿಕೊಂಡವು. ಇದು ಕೇವಲ ಯೋಗ ಮತ್ತು ಚಹಾ ಎಂದಲ್ಲ.
ದಿಶಾ ಜಾಮೀನು ಅರ್ಜಿ ಆದೇಶವನ್ನು ಫೆಬ್ರವರಿ 22 ರಂದು ಪ್ರಕಟಿಸಲಿದೆ.
(ಮಾಹಿತಿ ಮೂಲ : www.barandbench.com)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
ಸುದ್ದಿದಿನ,ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ ಆತಂಕ ವ್ಯಕ್ತಪಡಿಸಿದ್ದಾರೆ.
ಎಸಿ, ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು, ಗ್ರಾಮದ ಮುಖಂಡರೊಂದಿಗೆ ಐಮಂಗಲ ಸಮೀಪದ ಹರಳಯ್ಯ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿಕ ಮಠಕ್ಕೆ ಶ್ರೀಗಳು ಬಂದಿದ್ದಾರೆಂದು ಭಾವಿಸಿ ಧೈರ್ಯ ಹೇಳಲು ಬಂದಿದ್ದೇನೆ. ಆದರೆ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದು ಅವರ ಆರೋಗ್ಯ ಸ್ಥಿತಿ ಕುರಿತು ಕಳವಳ ವ್ಯಕ್ತವಾಗಿದೆ ಎಂದರು.
ಮುರುಘ ಮಠದ ಡಾ. ಶ್ರೀ ಶಿವಮೂರ್ತಿ ಮುರುಘ ಶರಣರು ಎಲ್ಲ ಶೋಷಿತ, ದಲಿತ, ಹಿಂದುಳಿದ ವರ್ಗಗಳಿಗೆ ಧಾರ್ಮಿಕ ಸ್ಥಾನ ನೀಡಲು ಹಲವರಿಗೆ ದೀಕ್ಷೆ ನೀಡಿ, ಜಮೀನು ಸೇರಿ ಅಗತ್ಯ
ಸಹಕಾರ ನೀಡಿದ್ದು ಸ್ಮರಣೀಯ. ಆ ಸಂದರ್ಭದಲ್ಲಿ ಹರಳಯ್ಯ ಮಠ ಸ್ಥಾಪನೆಗಾಗಿ ಜಮೀನು ಖರೀದಿಸಲು ಹಣ ಕೊಟ್ಟಿದ್ದರು. ಆ ಹಣದಲ್ಲಿ ಭೂಮಿ ಖರೀದಿಸಿ ಮಠ, ಶಾಲೆ ನಿರ್ಮಿಸಲು ಬಸವ ಹರಳಯ್ಯ ಸ್ವಾಮೀಜಿ ಶ್ರಮಿಸಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ಮಠ-ಮಾನ್ಯಗಳು ಮಾಡಬೇಕಾದ ಕಾರ್ಯವನ್ನು ಅತ್ಯಂತ ಶ್ರದ್ಧೆ, ಸವಾಲುಗಳ ಮಧ್ಯೆ, ಹಗಲು-ರಾತ್ರಿ ಶ್ರಮಪಟ್ಟು ಹರಳಯ್ಯ ಸ್ವಾಮೀಜಿ ಮಾಡಿದ್ದಾರೆ. ಸಮಾಜ ಕಲ್ಯಾಣ
ಸಚಿವನಾಗಿದ್ದ ವೇಳೆ 1 ಕೋಟಿ ರೂ. ಅನುದಾನ ಕೊಡಿದ್ದೇ. ಬಳಿಕ ಅಸ್ಥಿತ್ವಕ್ಕೆ ಬಂದ ಸರ್ಕಾರ ಹಾಗೂ ಭಕ್ತರು, ಜನರಿಗೆ ದೇಣಿಗೆ ಸಂಗ್ರಹಿಸಿ ಭವ್ಯವಾದ ಮಠ ನಿರ್ಮಿಸಿದ್ದಾರೆ.
ಸುತ್ತಮುತ್ತಲ ಬಡ ಮಕ್ಕಳಿಗಾಗಿ ಶಾಲೆ, ಸತ್ ಚಿಂತನೆ ಮೂಡಿಸಲು ಧಾರ್ಮಿಕ ಕಾರ್ಯಕ್ಕಾಗಿ ಸಭಾಂಗಣ ನಿರ್ಮಿಸಿದ್ದಾರೆ ಎಂದರು.
ಈ ಸಂದರ್ಭ ತಗ್ಗುಗುಂಡಿ ಆಗಿದ್ದ ಅನುಪಯುಕ್ತ ಎರಡು ಗುಂಟೆ ಜಮೀನು ಗೊಂದಲದಿಂದ ಒತ್ತುವರಿ ಆಗಿದೆ. ಈ ವಿಷಯಕ್ಕಾಗಿ ಹಲವು ಬಾರಿ ವ್ಯಕ್ತಿಯೊರ್ವ ಗಲಾಟೆ ಮಾಡಿದ್ದಾನೆ. ಗೊತ್ತಿಲ್ಲದೆ ಎರಡು ಗುಂಟೆ ಜಾಗ ಒತ್ತುವರಿ ಆಗಿದ್ದು, ತಪ್ಪು ನನ್ನಿಂದಲೇ ಆಗಿದೆಯೆಂದು ಶ್ರೀಗಳು ಒಪ್ಪಿಕೊಂಡಿದ್ದಾರೆ. ಜತೆಗೆ ಆ ಜಾಗಕ್ಕೆ ಈಗಿನ ಮಾರುಕಟ್ಟೆ ಮೌಲ್ಯದಷ್ಟು ಹಣ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ವ್ಯಕ್ತಿ ನಿರಾಕರಿಸಿದಾಗ ಒತ್ತುವರಿ ಜಾಗದಲ್ಲಿ ಕಟ್ಟಿದ್ದ ಕಾಂಪೌಂಡನ್ನು ಸ್ವಾಮೀಜಿ ಕೆಡವಿಸಿದ್ದಾರೆ. ಆದರೂ ಆ ವ್ಯಕ್ತಿ ದ್ವೇಷ ಮುಂದುವರಿಸಿದ್ದು ಏಕಾಏಕಿ ಮಠಕ್ಕೆ ನುಗ್ಗಿ ಸ್ವಾಮೀಜಿ ಮೇಲೆ
ಮಾರಾಣಾಂತಿಕ ಹಲ್ಲೆ ನಡೆಸಿದ್ದು, ದೂರು ಕೊಡಲು ಠಾಣೆಗೆ ತೆರಳಿರುವ ವಿಷಯ ತಿಳಿದು ಅಲ್ಲಿಗೆ ತೆರಳಿ ಕಾಲಿನಿಂದ ಸ್ವಾಮೀಜಿ ಎದೆಗೆ ಒದ್ದಿದ್ದಾನೆ ಎಂದರು.
ಧಾರ್ಮಿಕ ನೇತಾರರನ್ನು ಗೌರವಿಸುವ ನಾಡು ಭಾರತ. ಇಂತಹ ಸಂದರ್ಭ ಖಾವಿಧಾರಿಯೊಬ್ಬರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂಧಿಸಿರುವುದು ಎಚ್ಚರಿಕೆ
ಗಂಟೆಯಾಗಿದೆ. ಈ ದುಷ್ಕೃತ್ಯವನ್ನು ನಾಡಿನ ಎಲ್ಲ ಮಠಾಧೀಶರು ಖಂಡಿಸಬೇಕು, ಸ್ವಾಮೀಜಿಗೆ ನೈತಿಕವಾಗಿ ಬೆಂಬಲಿಸಬೇಕು. ಇಲ್ಲದಿದ್ದರೇ ಇಂತಹ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದರು.
ಹಲ್ಲೆ ನಡೆಸಿದ ಮೂವರನ್ನು ಮಟ್ಟಹಾಕುವ ಶಕ್ತಿ ನಮ್ಮಲ್ಲೂ ಇದೆ. ಆದರೆ, ನಾವು ವಾಮಮಾರ್ಗದಲ್ಲಿ ಸಾಗುವವರಲ್ಲ, ಕಾನೂನು ಪರಿಪಾಲಕರು. ನಮ್ಮ ಹಕ್ಕೋತ್ತಾಯ ಬಸವ
ತತ್ವದಡಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆ ಭೀತಿ ಹುಟ್ಟಿಸುವಂತದ್ದಾಗಿದೆ. ಈ ಕುರಿತು ತಕ್ಷಣವೇ ಎಲ್ಲ ಮಠಾಧೀಶರು, ಧರ್ಮಗಳ ಪ್ರತಿಪಾದಕರು ಖಂಡಿಸಬೇಕು ಎಂದು ಕೋರಿದರು.
ಈಗ ಯಾವುದೇ ಕಾರಣಕ್ಕೂ ಸಂಧಾನ-ಚರ್ಚೆ ಅಗತ್ಯವಿಲ್ಲ. ಮಠದ ಸಾಮಾಜಿಕ ಕಾರ್ಯಕ್ಕಾಗಿ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ಅದಕ್ಕೆ ತಗಲುವ ವೆಚ್ಚವನ್ನು ನಾನೇ ಸ್ವಂತವಾಗಿ ಭರಿಸುತ್ತೇನೆ. ತಕ್ಷಣ ಅಧಿಕಾರಿಗಳು ಈ ಸಂಬಂಧ ಕಾರ್ಯಪ್ರವೃತ್ತರಾಗಬೇಕೆಂದು ಆಂಜನೇಯ ಆಗ್ರಹಿಸಿದರಲ್ಲದೇ ಒಂದು ವೇಳೆ ಭೂಮಿ ಯಾರದ್ದಾಗಿದ್ದರೇ ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪರಿಹಾರ ನೀಡಬಹುದು. ಈ ನಿಟ್ಟಿನಲ್ಲಿ ನಾನು ತಗಲುವ ಸಂಪೂರ್ಣ ವೆಚ್ಚ ಭರಿಸುವೆ ಎಂದು ತಿಳಿಸಿದರು.
ಐಮಂಗಲ ಸುತ್ತಮುತ್ತಲ ಗ್ರಾಮಗಳ ಬಡ ಮಕ್ಕಳಿಗೆ ಶಿಕ್ಷಣ ನೀಡುವುದು, ಅನಾಥಾಲಯ ಸ್ಥಾಪನೆಯ ಸದುದ್ದೇಶ ಹೊಂದಿರುವ ಶ್ರೀಗಳ ಮೇಲೆ ಹಲ್ಲೆ ಇಡೀ ಧಾರ್ಮಿಕ ಮುಖಂಡರಿಗೆ ಮಾಡಿರುವ ಅಪಮಾನ ಮತ್ತು ಅವರಲ್ಲಿ ಭೀತಿ ಸೃಷ್ಠಿಸುವಂತದ್ದಾಗಿದೆ. ಆದ್ದರಿಂದ ಮಾರಾಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ತಕ್ಷಣವೇ ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಜೊತೆಗೆ ಕಠಿಣ ಶಿಕ್ಷೆ ಆಗುವ ರೀತಿ ಕಾನೂನು ಪ್ರಕ್ರಿಯೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸಿ ಕಾಂತರಾಜ್, ಡಿವೈಎಸ್ಪಿ ಶಿವಕುಮಾರ್, ಸಿಪಿಐ ಗುಡ್ಡಪ್ಪ ಹಾಗೂ ಗ್ರಾಮದ ಹಿರಿಯರು
ಉಪಸ್ಥಿತರಿದ್ದರು.
*ಪೋಟೊ ಕ್ಯಾಪ್ಷನ್* ಐಮಂಗಲದ ಹರಳಯ್ಯ ಗುರುಪೀಠಕ್ಕೆ ಶುಕ್ರವಾರ ಸಂಜೆ ಮಾಜಿಸಚಿವ ಎಚ್.ಆಂಜನೇಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ದಿನದ ಸುದ್ದಿ
ದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
ಮುಖ್ಯಾಂಶಗಳು
ಟೆಂಡರ್ ಇಲ್ಲದೆ ಸಾಮಗ್ರಿ ಖರೀದಿ ಆರೋಪ
ಜುಲೈ 10ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ತಪಾಸಣೆ
ತನಿಖಾಧಿಕಾರಿಗಳ ಮುಂದೆ ಹಾಜರಾಗಲು ದೂರುದಾರರಿಗೆ ನೋಟಿಸ್
ಸುದ್ದಿದಿನ,ದಾವಣಗೆರೆ: ತಾಲೂಕು ಪಂಚಾಯಿತಿಯ 2022-23ನೇ ಸಾಲಿನ ಅನಿರ್ಬಂಧಿತ ಅನುದಾನದಡಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಖರೀದಿ ವ್ಯವಹಾರದಲ್ಲಿ ನಿಯಮ ಉಲ್ಲಂಘಿಸಿ, ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡಿರುವ ಗಂಭೀರ ಆರೋಪದ ಬೆನ್ನತ್ತಿರುವ ಲೋಕಾಯುಕ್ತ ಸಂಸ್ಥೆಯು ತನಿಖೆಯನ್ನು ತೀವ್ರಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ಅಧಿಕಾರಿಗಳು ಜುಲೈ 7 ರಿಂದ 10 ರವರೆಗೆ ಜಿಲ್ಲೆಯಲ್ಲಿ ಬೀಡುಬಿಡಲಿದ್ದು, ಸ್ಥಳ ತನಿಖೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ.
ನಿಯಮ ಗಾಳಿಗೆ: ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ– ಕರ್ನಾಟಕ’ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎ. ಓಬಳೇಶ್ ಅವರು 2025ರ ಜನೆವರಿ 21ರಂದು ಲೋಕಾಯುಕ್ತಕ್ಕೆ ಈ ಕುರಿತು ಅಧಿಕೃತ ದೂರು ನೀಡಿದ್ದರು. 2022-23ನೇ ಸಾಲಿನಲ್ಲಿ ದಾವಣಗೆರೆ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಸಾಮಗ್ರಿಗಳನ್ನು ಖರೀದಿಸುವಾಗ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸಿಲ್ಲ. ಅಧಿಕೃತ ಮಾರಾಟಗಾರರಿಂದ ದರಪಟ್ಟಿ (ಕೊಟೇಷನ್) ಪಡೆಯದೆ, ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಸರ್ಕಾರದ ಹಣ ಪೋಲು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ತನಿಖೆ ಎದುರಿಸುತ್ತಿರುವವರು
ಶ್ರೀ ಎನ್.ಜೆ. ಆನಂದ್, ಕಾರ್ಯನಿರ್ವಾಹಕ ಅಧಿಕಾರಿ (ಇಒ), ತಾಲೂಕು ಪಂಚಾಯಿತಿ, ದಾವಣಗೆರೆ.
ಶ್ರೀ ನಾಗರಾಜ್ ನಾಯ್ಕ್, ಸಹಾಯಕ ಲೆಕ್ಕಾಧಿಕಾರಿ, ತಾಲೂಕು ಪಂಚಾಯಿತಿ, ದಾವಣಗೆರೆ.
ಶ್ರೀ ಚನ್ನಪ್ಪ ಎ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಜಿಲ್ಲಾ ಪಂಚಾಯತ್, ದಾವಣಗೆರೆ.
ಕಚೇರಿಯಲ್ಲಿ ತಪಾಸಣೆ
ದೂರಿನ ಅನ್ವಯ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ತನಿಖಾಧಿಕಾರಿ ಟಿ.ಸಿ. ಜಯರಾಮಯ್ಯ ಅವರು ತನಿಖಾ ವೇಳಾಪಟ್ಟಿ ಸಿದ್ಧಪಡಿಸಿದ್ದಾರೆ. ಜುಲೈ 7 ರಂದು ಬೆಳಗ್ಗೆ 11.30ಕ್ಕೆ ದಾವಣಗೆರೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತನಿಖಾ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 10 ರವರೆಗೆ ಸರಣಿ ದಾಖಲೆಗಳ ಪರಿಶೀಲನೆ ನಡೆಯಲಿದೆ. ಸ್ಥಳ ತನಿಖೆಯ ಸಂದರ್ಭದಲ್ಲಿ ಖುದ್ದಾಗಿ ಹಾಜರಿದ್ದು, ಪೂರಕ ದಾಖಲೆಗಳೊಂದಿಗೆ ಸಹಕರಿಸುವಂತೆ ದೂರುದಾರರಿಗೂ ನೋಟಿಸ್ ನೀಡಲಾಗಿದೆ.
ಜಿಲ್ಲೆಯ ಪ್ರಭಾವಿ ಅಧಿಕಾರಿಗಳೇ ಲೋಕಾಯುಕ್ತ ತನಿಖೆಯ ಬಿಸಿಗೆ ಸಿಲುಕಿರುವುದು ಆಡಳಿತ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
ಸುದ್ದಿದಿನ,ದಾವಣಗೆರೆ: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ತಿಳಿಸಿದರು.
ಅವರು ಸೋಮವಾರ, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಎಲ್ಲೂ ಕೂಡ ಸಾಮೂಹಿಕವಾಗಿ ಫಾರಂ ವಿತರಣೆ ಮಾಡುತ್ತಿಲ್ಲ ಮತ್ತು ಮಾಡುವುದೂ ಇಲ್ಲ, ಕೆಲವು ಬೂತ್ಗಳಲ್ಲಿ ಸಾರ್ವಜನಿಕರೇ ಗುಂಪುಗೂಡಿ ಇಲ್ಲೇ ಫಾರಂ ನೀಡಿ ಎಂದು ಕೇಳಿರುವ ಉದಾಹರಣೆಗಳು ಇವೆಯೇ ಹೊರತು, ಇಲಾಖೆಯಿಂದ ಸಾಮೂಹಿಕ ವಿತರಣೆ ನಡೆದಿಲ್ಲ ಎಂದರು.
ಪ್ರತಿಯೊಬ್ಬ ಬೂತ್ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಲಿಖಿತ ಸೂಚನೆ ಹಾಗೂ ಸೂಕ್ತ ತರಬೇತಿಯನ್ನು ನೀಡಲಾಗಿದೆ. ಅವರು ಕಡ್ಡಾಯವಾಗಿ ಪ್ರತಿಯೊಬ್ಬರ ಮನೆ ಮನೆಗೆ ಭೇಟಿ ನೀಡಿ ಫಾರಂಗಳನ್ನು ವಿತರಿಸುವರು. ಭೇಟಿ ನೀಡಿದ ನಂತರ ಮನೆಯ ಬಾಗಿಲಿನ ಮೇಲೆ ಕಡ್ಡಾಯವಾಗಿ ಸ್ಟಿಕ್ಕರ್ ಅಂಟಿಸಬೇಕೆಂದು ಆದೇಶಿಸಲಾಗಿದೆ. ಹಳ್ಳಿಗಳಲ್ಲಿ ಹಾಗೂ ಕೆಲವು ಕಡೆ ಸಾರ್ವಜನಿಕರು ತಮ್ಮ ಫಾರಂಗಳನ್ನು ಬೇಗ ಮಾಡಿಕೊಡಿ ಎಂದು ಬಿ.ಎಲ್.ಓಗಳ ಬಳಿ ಗುಂಪುಗೂಡುತ್ತಿರುವುದು ಕಂಡುಬಂದಿದೆ. ಆದರೆ, ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲು ನಮ್ಮ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸಂಪೂರ್ಣ ತಂಡವು ಬಿ.ಎಲ್.ಓ.ಗಳಿಗೆ ನೆರವಾಗಲಿದ್ದಾರೆ ಎಂದು ತಿಳಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 40 ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ನೇರವಾಗಿ ಈ ಸಹಾಯ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಫಾರಂಗಳನ್ನು ಭರ್ತಿ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಫಾರಂಗಳನ್ನು ಕಡ್ಡಾಯವಾಗಿ ಬಿ.ಎಲ್.ಓ.ಗಳಿಗೆ ಹಸ್ತಾಂತರಿಸಬೇಕು ಎಂದರು
ರಾಷ್ಟ್ರೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿ.ಎಲ್.ಎ (ಬೂತ್ ಮಟ್ಟದ ಏಜೆಂಟ್ಗಳು) ಸಾರ್ವಜನಿಕರಿಗೆ ಫಾರಂ ಭರ್ತಿ ಮಾಡಲು ಸಹಾಯ ಮಾಡಬಹುದು. ಅವರು ಮೊದಲ ಹಂತದಲ್ಲಿ ತಲಾ 50 ಫಾರಂಗಳನ್ನು ಸಂಗ್ರಹಿಸಿ, ಭರ್ತಿ ಮಾಡಿ ನಮ್ಮ ಬಿ.ಎಲ್.ಓ.ಗಳಿಗೆ ತಂದುಕೊಡಲು ಅವಕಾಶ ಕಲ್ಪಿಸಲಾಗಿದೆ. ಇದು ಗುಂಪಾಗಿ ಮಾಡುವುದಲ್ಲ, ಬದಲಿಗೆ ಮನೆ ಮನೆಗೆ ಹೋಗಿ ಬಿ.ಎಲ್.ಓಗಳ ಸಹಯೋಗದೊಂದಿಗೆ ಮಾಡುವ ಕಾರ್ಯವಾಗಿದೆ ಎಂದರು.
ಸಹಿ ಮಾಡುವ ಪ್ರಕ್ರಿಯೆಯು ಮತದಾರರದ್ದೇ ಆಗಿರುತ್ತದೆ. ಮೊಬೈಲ್ ಬಳಸಲು ಬಾರದ ಅನಕ್ಷರಸ್ಥರಿಗೆ ಅಥವಾ ತಾಂತ್ರಿಕ ತೊಂದರೆ ಇರುವವರಿಗೆ ಬಿ.ಎಲ್.ಓ ಹಾಗೂ ಬಿ.ಎಲ್.ಎ.ಗಳು ಸಹಾಯ ಮಾಡಲಿದ್ದಾರೆ. ಭಾರತೀಯ ಚುನಾವಣಾ ಆಯೋಗದ ನಿರ್ದೇಶನದ ಅಡಿಯಲ್ಲೇ ನಮ್ಮ ಇಡೀ ತಂಡ ಕೆಲಸ ಮಾಡುತ್ತಿದೆ ಎಂದರು.
ಒಂದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಶಿಫ್ಟ್ ಮಾಡಿಕೊಂಡಿರುವ ಮತದಾರರು, ತಮ್ಮ ಹೆಸರು ಕೈಬಿಟ್ಟು ಹೋಗುವ ಆತಂಕ ಪಡಬೇಕಾಗಿಲ್ಲ. ಅಂತಹ ಮತದಾರರು ‘ಫಾರಂ-8’ ಅನ್ನು ಸಲ್ಲಿಸುವ ಮೂಲಕ ತಮ್ಮ ವಿಳಾಸವನ್ನು ಸುಲಭವಾಗಿ ಬದಲಾಯಿಸಿಕೊಳ್ಳಬಹುದು ಎಂದರು.
ಈಗಾಗಲೇ ಮ್ಯಾಪಿಂಗ್ ಆಗಿರುವ ಮತದಾರರು ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿರುವುದಿಲ್ಲ. ಒಂದು ವೇಳೆ ತಪ್ಪಾಗಿ ಮ್ಯಾಪಿಂಗ್ ಆಗಿದ್ದರೆ ಅಥವಾ ತಂದೆ-ತಾಯಿಯ ಹೆಸರುಗಳಲ್ಲಿ ತಪ್ಪುಗಳಾಗಿದ್ದರೆ, 2002ರ ಹಳೆಯ ವೋಟರ್ ಐಡಿ ವಿವರಗಳ ಆಧಾರದ ಮೇಲೆ ಬಿ.ಎಲ್.ಓ ಮೊಬೈಲ್ ಆಪ್ (BLO Mobile App) ಮೂಲಕ ತಿದ್ದುಪಡಿ ಹಾಗೂ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
18 ವರ್ಷ ತುಂಬಿರುವ ಅರ್ಹ ಯುವ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಿಗದಿಪಡಿಸಿದ ಫಾರಂಗಳನ್ನು ಪಡೆದು ಭರ್ತಿ ಮಾಡಬಹುದಾಗಿದೆ. ಇದಕ್ಕಾಗಿ ಸಾರ್ವಜನಿಕರು ಯಾರೂ ಮತಗಟ್ಟೆಗಳನ್ನಾಗಲಿ ಅಥವಾ ಬಿ.ಎಲ್.ಓಗಳನ್ನಾಗಲಿ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ, ನಾವೇ ನಿಮ್ಮ ಮನೆ ಬಾಗಿಲಿಗೆ ಬರುತ್ತೇವೆ ಎಂದು ತಿಳಿಸಿದರು.
ಅನಾಥಾಶ್ರಮಗಳಲ್ಲಿರುವ ಹಾಗೂ ತಂದೆ-ತಾಯಿಯರ ಮಾಹಿತಿ ಇಲ್ಲದವರಿಗೂ ಸಹ ಮತದಾನದ ಹಕ್ಕನ್ನು ಕಲ್ಪಿಸಲು ಚುನಾವಣಾ ಆಯೋಗವು ವಿಶೇಷ ಕ್ರಮ ಕೈಗೊಂಡಿದೆ. ಸರ್ಕಾರಿ ಅನಾಥಾಶ್ರಮವೊಂದರಲ್ಲಿರುವ 43 ಯುವಕರು 2025ನೇ ಇಸವಿಯಲ್ಲೂ ಮತದಾರರ ಪಟ್ಟಿಯಲ್ಲಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸರ್ಕಾರವೇ ಅವರಿಗೆ ಪೋಷಕರಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರೆ ಅವರ ಅಧಿಕೃತ ಪೋಷಕರಾಗಿರುತ್ತಾರೆ ಎಂದರು.
ದೇವದಾಸಿಯರಂತಹ ಪ್ರಕರಣಗಳಲ್ಲಿ ತಂದೆಯ ವಿವರಗಳು ಲಭ್ಯವಿಲ್ಲದಿದ್ದರೆ, ತಾಯಿಯ ವಿವರಗಳನ್ನು ನೀಡಿ ಹೆಸರು ನಮೂದಿಸಲು ಅವಕಾಶವಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ತಂದೆ-ತಾಯಿ ಇಬ್ಬರೂ ಇಲ್ಲದಿದ್ದರೆ, ಅಂತವರು ತಮ್ಮ ಅಜ್ಜ ಅಥವಾ ಅಜ್ಜಿಯ ಹೆಸರನ್ನು ಸಂಬಂಧದ ಕಾಲಂನಲ್ಲಿ ನಮೂದಿಸಿ ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಚುನಾವಣಾ ಆಯೋಗವು ಇಂತಹ ಎಲ್ಲಾ ಸವಾಲುಗಳಿಗೂ ಕಾನೂನಾತ್ಮಕವಾಗಿ ಹಾಗೂ ecinet ಮೊಬೈಲ್ ಆಪ್ ಮತ್ತು https://voters.eci.gov.in ಮೂಲಕ ಸೂಕ್ತ ಪರಿಹಾರವನ್ನು ಕಲ್ಪಿಸಿದೆ. ಹೀಗಾಗಿ ಯಾವುದೇ ಮತದಾರರು ಆತಂಕ ಪಡುವ ಅಗತ್ಯವಿಲ್ಲ. ಬಿ.ಎ.ಲ್.ಓ ಗಳು ಮನೆಗೆ ಬಂದಾಗ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸಾರ್ವಜನಿಕರು ಸ್ಪಂದಿಸಿ, ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಫಾರಂ ಹಂಚಿಕೆಯಲ್ಲಿ ರಾಜ್ಯದಲ್ಲೇ ದಾವಣಗೆರೆ ಜಿಲ್ಲೆಗೆ 2ನೇ ಸ್ಥಾನ; ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ಪ್ರಗತಿಯಲ್ಲಿದ್ದು, ಜಿಲ್ಲಾದ್ಯಂತ ಒಟ್ಟಾರೆ ಶೇ. 94 ರಷ್ಟು ಎನ್ಯುಮರೇಷನ್ ಫಾರ್ಮ್ಗಳನ್ನು (Enumeration Forms) ಫಾರಂಗಳನ್ನು ಹಂಚಿಕೆ ಮಾಡುವ ಮೂಲಕ ದಾವಣಗೆರೆ ಜಿಲ್ಲೆಯು ರಾಜ್ಯದಲ್ಲಿಯೇ 2ನೇ ಸ್ಥಾನ ಪಡೆದು ಅಭೂತಪೂರ್ವ ಸಾಧನೆ ಮಾಡಿದೆ. ಇದೇ ವೇಳೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಶೇ. 99.81 ರಷ್ಟು ದಾಖಲೆ ಪ್ರಮಾಣದ ಎನ್ಯುಮರೇಷನ್ ಫಾರ್ಮ್ಗಳನ್ನು (Enumeration Forms) ಪಾರಂಗಳನ್ನು ಅತ್ಯಂತ ಯಶಸ್ವಿಯಾಗಿ ಹಂಚಿಕೆ ಮಾಡಲಾಗಿದ್ದು, ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ. ಹಾಗೂ ಶೇ. 10.8 ರಷ್ಟು ಗಣಕೀಕರಣವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮನೆ ಮನೆ ಭೇಟಿ ಹಾಗೂ ಮಾಹಿತಿ ಸಂಗ್ರಹ ಪ್ರಗತಿಯಲ್ಲಿ
ದಾವಣಗೆರೆ ಜಿಲ್ಲೆಯಲ್ಲಿ ಜೂನ್ 16 ರ ವೇಳೆಗೆ ಒಟ್ಟು 14,99,282 ಮತದಾರರಿದ್ದು, ಇವರಿಗೆ ಸಂಬಂಧಿಸಿದ ಎನ್ಯುಮರೇಷನ್ ಫಾರ್ಮ್ಗಳನ್ನು (Enumeration Forms) ಮುದ್ರಿಸಿ ಬಿಎಲ್ಓಗಳಿಗೆ ವಿತರಿಸಲಾಗಿದೆ. ಜಿಲ್ಲಾದ್ಯಂತ ಜೂನ್ 06 ರಿಂದ ಜುಲೈ 29 ರ ಅವಧಿಯಲ್ಲಿ ಬಿಎಲ್ಓಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದು, ಇದೇ ಅವಧಿಯಲ್ಲಿ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಕಾರ್ಯವೂ ಪ್ರಗತಿಯಲ್ಲಿದೆ.
ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮತ್ತು ಪ್ರಗತಿ ವಿವರ
ಜಿಲ್ಲೆಯ ಒಟ್ಟು 14,99,282 ಮತದಾರರ ಪೈಕಿ ಬಿಎಲ್ಓಗಳು ಇದುವರೆಗೆ ಒಟ್ಟು 14,06,472 ಎನ್ಯುಮರೇಷನ್ ನಮೂನೆಗಳನ್ನು ವಿತರಿಸಿದ್ದು, 1,54,504 ನಮೂನೆಗಳನ್ನು ಗಣಕೀಕರಿಸಿದ್ದಾರೆ.
103-ಜಗಳೂರು: ಒಟ್ಟು 2,00,836 ಮತದಾರರಿದ್ದು, 1,88,446 ನಮೂನೆಗಳನ್ನು ವಿತರಿಸಲಾಗಿದ್ದು, 18,003 ನಮೂನೆಗಳನ್ನು ಗಣಕೀಕರಿಸಲಾಗಿದೆ. 105-ಹರಿಹರ: ಒಟ್ಟು 2,11,023 ಮತದಾರರಿದ್ದು, 2,06,550 ನಮೂನೆಗಳನ್ನು ವಿತರಿಸಲಾಗಿದ್ದು, 32,630 ನಮೂನೆಗಳನ್ನು ಗಣಕೀಕರಿಸಲಾಗಿದೆ. 106-ದಾವಣಗೆರೆ ಉತ್ತರ: ಒಟ್ಟು 2,58,718 ಮತದಾರರಿದ್ದು, 2,44,948 ನಮೂನೆಗಳನ್ನು ವಿತರಿಸಲಾಗಿದ್ದು, 7,120 ನಮೂನೆಗಳನ್ನು ಗಣಕೀಕರಿಸಲಾಗಿದೆ. 107-ದಾವಣಗೆರೆ ದಕ್ಷಿಣ : ಒಟ್ಟು 2,27,996 ಮತದಾರರಿದ್ದು, 194,785 ನಮೂನೆಗಳನ್ನು ವಿತರಿಸಲಾಗಿದ್ದು, 5,085 ನಮೂನೆಗಳನ್ನು ಗಣಕೀಕರಿಸಲಾಗಿದೆ. 108-ಮಾಯಕೊಂಡ: ಒಟ್ಟು 197,048 ಮತದಾರರಿದ್ದು, 196,486 ನಮೂನೆಗಳನ್ನು ವಿತರಿಸಲಾಗಿದ್ದು, 42,785 ನಮೂನೆಗಳನ್ನು ಗಣಕೀಕರಿಸಲಾಗಿದೆ. 109-ಚನ್ನಗಿರಿ ಒಟ್ಟು 2,03,628 ಮತದಾರರಿದ್ದು, 192,838 ನಮೂನೆಗಳನ್ನು ವಿತರಿಸಲಾಗಿದ್ದು, 36,531 ನಮೂನೆಗಳನ್ನು ಗಣಕೀಕರಿಸಲಾಗಿದೆ. 110- ಹೊನ್ನಾಳಿ ಒಟ್ಟು 2,00,033 ಮತದಾರರಿದ್ದು, 182,419 ನಮೂನೆಗಳನ್ನು ವಿತರಿಸಲಾಗಿದ್ದು, 12,350 ನಮೂನೆಗಳನ್ನು ಗಣಕೀಕರಿಸಲಾಗಿದೆ.
ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಮತದಾರರ ಗುರುತಿಸುವಿಕೆ ಪ್ರಗತಿ
ಜೂನ್ 6 ರಿಂದ ಜಿಲ್ಲೆಯಲ್ಲಿ ಮತದಾರರ ಎನ್ಯುಮರೇಷನ್ ಫಾರ್ಮ್ಸ್ ಹಂಚಿಕೆ ಹಾಗೂ ಮಾಹಿತಿ ಸಂಗ್ರಹಣೆಯ ವೇಳೆ ಒಟ್ಟು 1,707 ವಿವಿಧ ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ ಒಟ್ಟು 30 ನಮೂನೆಗಳು ಸಂಗ್ರಹವಾಗದ/ಗೈರು ಹಾಜರಿ ಪ್ರಕರಣಗಳಾಗಿದ್ದು, 641 ಶಾಶ್ವತ ವಲಸೆ, 751 ಮರಣ ಹಾಗೂ 271 ದ್ವಿಪ್ರತಿ (Duplicate) ಪ್ರಕರಣಗಳಾಗಿವೆ.
ಜಗಳೂರು ಕ್ಷೇತ್ರದಲ್ಲಿ 122 ಪ್ರಕರಣಗಳನ್ನು ಗುರುತಿಸಲಾಗಿದ್ದು (2 ಗೈರು, 31 ಶಾಶ್ವತ ವಲಸೆ, 47 ಮರಣ, 40 ದ್ವಿಪ್ರತಿ, 2 ಇತರೆ), ಹರಿಹರ ಕ್ಷೇತ್ರದಲ್ಲಿ 149 ಪ್ರಕರಣಗಳು (2 ಗೈರು, 48 ಶಾಶ್ವತ ವಲಸೆ, 71 ಮರಣ, 26 ದ್ವಿಪ್ರತಿ, 2 ಇತರೆ), ದಾವಣಗೆರೆ ಉತ್ತರ ಕ್ಷೇತ್ರದಲ್ಲಿ 246 ಪ್ರಕರಣಗಳು (5 ಗೈರು, 98 ಶಾಶ್ವತ ವಲಸೆ, 112 ಮರಣ, 31 ದ್ವಿಪ್ರತಿ), ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 235 ಪ್ರಕರಣಗಳು (6 ಗೈರು, 123 ಶಾಶ್ವತ ವಲಸೆ, 60 ಮರಣ, 44 ದ್ವಿಪ್ರತಿ, 2 ಇತರೆ), ಮಾಯಕೊಂಡ ಕ್ಷೇತ್ರದಲ್ಲಿ 337 ಪ್ರಕರಣಗಳು (4 ಗೈರು, 113 ಶಾಶ್ವತ ವಲಸೆ, 174 ಮರಣ, 45 ದ್ವಿಪ್ರತಿ,1 ಇತರೆ), ಚನ್ನಗಿರಿ ಕ್ಷೇತ್ರದಲ್ಲಿ 386 ಪ್ರಕರಣಗಳು (10 ಗೈರು, 139 ಶಾಶ್ವತ ವಲಸೆ, 167 ಮರಣ, 63 ದ್ವಿಪ್ರತಿ, 7 ಇತರೆ) ಹಾಗೂ ಹೊನ್ನಾಳಿ ಕ್ಷೇತ್ರದಲ್ಲಿ ಒಟ್ಟು 232 ಪ್ರಕರಣಗಳ (1 ಗೈರು, 89 ಶಾಶ್ವತ ವಲಸೆ, 120 ಮರಣ, 22 ದ್ವಿಪ್ರತಿ) ಗುರುತಿಸಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಗೂ ಮುನ್ನ ವಿವಿಧ ರಾಷ್ಟ್ರೀಯ ಪಕ್ಷಗಳೊಂದಿಗೆ ಸಭೆ ನಡೆಸಿದ್ದು, ರಾಷ್ಟ್ರೀಯ ಪಕ್ಷಗಳು ಮತದಾರರ ಪಟ್ಟಿ ಪರಿಷ್ಕರಣೆಗೆ ಬಿ.ಎಲ್.ಎ ಗಳನ್ನು ನೇಮಕ ಮಾಡಿದ್ದು ಎನ್ಯುಮರೇಷನ್ ಫಾರ್ಮ್ಗಳನ್ನು (Enumeration Forms) ಪಾರಂಗಳನ್ನು ನಮೂದಿಸಿ ಬಿ.ಎಲ್.ಓ ಗಳಿಗೆ ನೀಡಲು ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕಾರ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಉಪ ಕಾರ್ಯದರ್ಶಿ ಮಮತ ಹಸ ಗೌಡರ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಪಾಲಿಕೆ ಆಯುಕ್ತ ಮಹಾಂತೇಶ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ7 days agoದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
-
ದಿನದ ಸುದ್ದಿ4 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ2 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ4 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ7 hours agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ

