ಭಾವ ಭೈರಾಗಿ
ಅಮ್ಮನಿಗೂ ಚೂರು ಅಟೆನ್ಷನ್ ಕೊಡಬಹುದಾ?
ನಿನಗ್ಯಾಕಮ್ಮ? ಇದೆಲ್ಲ ನಿನಗೆ ಅರ್ಥವಾಗಲ್ಲ ಸುಮ್ಮನಿರು… ನಾವು ನೀವು ಸೇರಿದಂತೆ ಬಹುತೇಕ ಮಕ್ಕಳು ಅವರಮ್ಮ ಕೇಳುವ ಎಲ್ಲಾ ಪ್ರಶ್ನೆಗಳಿಗೆ ನೀಡುವ ಕಾಮನ್ ಉತ್ತರ ಇದು.
ಹೌದು ಅವಳಿಗೇನು ತಿಳಿಯುತ್ತೆ ಅಲ್ವಾ, ಟೈಮ್ ಟು ಟೈಮ್ ಅಡುಗೆ ಮಾಡೋದು, ಮನೆಯವರನ್ನೆಲ್ಲ ಕರೆದು ಬಡಿಸೋದು ನೀವು ಬೇಡ ಅಂದ್ರು ನಿಮ್ಮಿಂದ ಬೈಸಿಕೊಂಡಾದರೂ ನಿಮಗೆ ತಿನ್ನಿಸೋದು ಇಷ್ಟೆ ತಾನೆ ಅವಳಿಗೆ ಗೊತ್ತಿರೋದು. ಮನೆಯವರೆಲ್ಲ ಹಬ್ಬ ಮಾಡ್ತಿದ್ರೆ ಅವಳು ಅದೇನು ಮಾಡ್ತಿರ್ತಾಳೋ ಯಾರು ಗಮನಿಸಿರಲ್ಲ, ಅಸಲಿಗೆ ಅವಳು ಅಡುಗೆಗೆ ತರಕಾರಿ ಹೆಚ್ಚೋದು ಒಬ್ಬಳೆ ಕಷ್ಟ ಪಟ್ಟು ಅಡುಗೆ ಮಾಡೋದು ಕೊನೆಗೆ ಸರಿಯಾದ ಸಮಯಕ್ಕೆ ನಮಗೆಲ್ಲ ತಂದು ಬಡಿಸೋದು ಮಾಡ್ತಿರ್ತಾಳೆ.
ಅದಾದ ನಂತರ ಮತ್ತೆ ನಾವು ಎಂಜಾಯ್ ಮಾಡೋ ದಾರಿ ಯಾವುದು ಅಂತ ಹುಡುಕುವ ಸಮಯಕ್ಕೆ ಅವಳು ಪಾತ್ರೆ ತೊಳೆದು ನೀರು ತುಂಬಿಸಲು ಓಡಾಡ್ತಿರ್ತಾಳೆ. ಅವಳಿಗೆ ಹಬ್ಬಕ್ಕಾಗಿ ಕಾಯಲು ಇರುವ ಒಂದೇ ದಾರಿ ಅಂದ್ರೆ ಮಕ್ಕಳನ್ನೆಲ್ಲಾ ಒಮ್ಮೆ ನೋಡಿಬಿಡಬಹುದಲ್ಲ ಎಂಬ ಆಸೆ ಅಷ್ಟೆ.
ನೆನಪಿದ್ಯಾ ನಿಮಗೆ ಅವತ್ತು ನಾವಿನ್ನು ಚಿಕ್ಕವರಾಗಿದ್ವಿ, ಇದೇ ಹಬ್ಬಗಳು ಆಗ ಬಂದ್ರೆ ಅಮ್ಮ ಹೊಸ ಬಟ್ಟೆ ತರಲು ಹಣ ಹೊಂದಿಸುವ ಬಗ್ಗೆ ಚಿಂತಿಸ್ತಿದ್ಲು. ಅದು ಅವಳಿಗಾಗಿ ಅಲ್ಲ ನಮಗಾಗಿ. ಅವತ್ತು ನೀನು ಹೊಸ ಬಟ್ಟೆ ತಗೊಳಮ್ಮಾ ಅಂತ ಹೇಳುವಷ್ಟು ನಾವಿನ್ನು ಬೆಳದಿರಲಿಲ್ಲ. ಇವತ್ತು ಬೆಳೆದಿದ್ರೂ ಹೇಳಲ್ಲ. ಒಂದು ವೇಳೆ ನಾವು ಹಾಗೆ ಕೇಳಿದ್ರು ಅವಳು ಹೇಳ್ತಿದ್ದ ಉತ್ತರ ನನಗ್ಯಾಕಪ್ಪಾ ತುಂಬಾ ಇದಾವೆ, ನೀನು ಚೆನ್ನಾಗಿರ್ಬೇಕು ಅಷ್ಟೆ ಅಂತ ಹೇಳ್ತಿದ್ಲು. ಹೀಗೆ ಅವಳು ನಂದಿನ್ನೇನು ನನ್ನ ಮಗ ಚೆನ್ನಾಗಿರಬೇಕು ಅಂತ ನಮಗಾಗಿ ತನ್ನ ಖುಷಿಗಳನ್ನ ತ್ಯಾಗ ಮಾಡುವಾಗ ಅವಳಿಗೆ ವಯಸ್ಸೆಷ್ಟಾಗಿತ್ತು ಗೊತ್ತಾ, ಕೇವಲ ಇಪ್ಪತ್ತೈದರಿಂದ ಮುವತ್ತು. ಅಂದರೆ ಯಾವ ವಯ್ಯಸ್ಸನ್ನ ನಾವೆಲ್ಲ ಎಂಜಾಯ್ ಮಾಡೋಕೆ ಸರಿಯಾದ ವಯಸ್ಸು ಅಂತ ಸುತ್ತುತ್ತಿದ್ದೇವೋ ಅದೇ ವಯಸ್ಸು.
ಹೌದು ಅವಳಿಗೇನು ಗೊತ್ತಾಗುತ್ತೆ ಅಲ್ವಾ,,, ಓದಿರೋದು ಅಷ್ಟಕ್ಕಷ್ಟೆ, ಫೀಲಿಂಗ್ಸ್ ಅಂತು ಅರ್ಥವಾಗೋ ವಯಸ್ಸಲ್ಲ. ಆದರೆ ಇದೇ ಇಪ್ಪತ್ತೈದು , ಮೂವತ್ತು ವರ್ಷಗಳ ಹಿಂದೆ ನಮಗೇನು ಗೊತ್ತಾಗ್ತಿತ್ತು. ತೀರಾ ಮರ,ಗಿಡ, ಬಸ್ಸು, ವಿಮಾನಗಳನ್ನ ನೋಡಿ ಅಮ್ಮ ಅದೇನು ಅಂತ ಕೇಳುವ ಮಟ್ಟದಲ್ಲಿದ್ವಿ. ಅಮ್ಮ ನಮಗೆ ಊಟ ಮಾಡು ಅಂದಾಗ ಮಾಡದೇ ಇದ್ರೆ ಏನಾಗುತ್ತೆ ಅಂತ ಕೇಳುವಷ್ಟು ದಡ್ಡರಾಗಿದ್ವಿ. ಗೊತ್ತಿರಲಿ ಗೆಳೆಯರೆ ಅವತ್ತೆಲ್ಲ ಅಮ್ಮ ಅದನ್ನು ನಮಗೆ ವಿವರಿಸ್ಲಿಕ್ಕೆ ಬೇಜಾರೇ ಮಾಡಿಕೊಂಡಿರಲಿಲ್ಲ. ಇದಕ್ಕೆ ಕೆರೆ ಅಂತಾರೆ ಇಲ್ಲಿ ತಗ್ಗಿರೋದರಿಂದ ಇಲ್ಲಿ ನೀರು ತುಂಬಿಕೊಳ್ಳುತ್ತೆ, ಮಳೆಯಲ್ಲಿ ನೆನೆದರೆ ನಿನಗೆ ಹುಷಾರು ತಪ್ಪತ್ತೆ.
ದೀಪ ಮುಟ್ಟಿದರೆ ಕೈಸುಡುತ್ತೆ ಅಂತೆಲ್ಲ ತಾಳ್ಮೆಯಿಂದ ಹೇಳಿಕೊಟ್ಟ ಅವಳಿಗೆ ನಾವು ಇವತ್ತು ಹೇಳೋ ಒಂದೇ ಮಾತು ನಿನಗೇನು ಗೊತ್ತಾಗಲ್ಲಮ್ಮ ಅಂತ.
ಅಸಲಿಗೆ ನಮಗೆ ಅಂತನೇ ಕೆಲವು ದಿನಗಳಿವೆ. ನಮ್ಮ ಹುಟ್ಟುಹಬ್ಬದ ದಿನ, ಮದುವೆ ದಿನ, ಹೊಸವರ್ಷದ ದಿನ, ಹಬ್ಬ-ಜಾತ್ರೆಗಳಲ್ಲಿ ನಾವೆ ಸೆಂಟರ್ ಆಫ್ ಅಟ್ರಾಕ್ಷನ್. ಅಮ್ಮ ಯಾವಾಗಲೂ ಸೈಡ್ಲೈನ್. ಅವಳು ಹುಟ್ಟಿರೋದೇ ಸೈಡ್ ಲೈನ್ ನಲ್ಲಿರೋಕೆ ಅಂದುಕೊಂಡಿದ್ದೇವೆ, ಅವಳಿಗೂ ಒಂದು ಮನಸಿದೆ. ಆಸೆ ಆಕಾಂಕ್ಷೆಗಳು ಅವಳಲ್ಲೂ ಇರಬಹುದು ಅನ್ನೋ ಸಣ್ಣ ಯೋಚನೆಯನ್ನೂ ನಾವು ಯಾವತ್ತೂ ಮಾಡಿಲ್ಲ.
ಅವಳ ಹುಟ್ಟು ಹಬ್ಬ ಯಾರಿಗಾದರೂ ನೆನಪಿದ್ಯಾ,,, ಅಜ್ಜಿ ಹತ್ರ ಕೇಳಿದ್ರೆ ಅದೇ ನಮ್ಮೂರಲ್ಲಿ ದೊಡ್ಡ ಕಾಲರ ಬಂದಿತ್ತಲ್ಲ ಅವಾಗ ಹುಟ್ಟಿದ್ಲು, ಇಂದಿರಾಗಾಂಧಿ ಚಿಕ್ಕಮಗಳೂರಲ್ಲಿ ಎಲೆಕ್ಷನ್ ನಿಂತಾಗ ನಿಮ್ಮಮ್ಮ ಹುಟ್ಟಿದ್ದು, ಪ್ಲೇಗ್ ಬಂದು ಊರಿಗೂರೆ ಸತ್ತಾಗ ನಿಮ್ಮಮ್ಮನ ಬಾಣಂತಿ ನಾನು ಅಂತ ಬೇರೆ ಬೇರೆ ಕತೆ ಹೇಳ್ತಾರೆ. ಅಲ್ಲಿಗೆ ಅಮ್ಮನ ಬರ್ತಡೆ ಕತೆ ಮುಗಿದೋಯ್ತು. ಮದುವೆಯಂತು ಆ ಬಡತನದಲ್ಲಿ ಹೇಗೆ ಆಯ್ತು ಅಂತ ಯಾರಿಗೂ ಗೊತ್ತಿಲ್ಲ. ಅಲ್ಲಿಗೆ ನಾವು ಹುಟ್ಟಿದ್ವಿ, ಅಲ್ಲಿಂದ ಅವರ ಜೀವನ ಜೀವ ಎರಡೂ ನಾವೆ. ಅವಳ ಕನಸುಗಳೆಲ್ಲ ನಮ್ಮ ಮೇಲೆಯೇ ಕಟ್ಟಿದವಾಗಿವೆ, ಆದರೆ ಇವತ್ತು ನಾವು ಏನಾದರೂ ಸಾಧಿಸಿದ್ರೆ ಹೇಳೋ ಮಾತು ನಮಗ್ಯಾರು ಸಪೋರ್ಟ್ ಮಾಡೋರಿರಲಿಲ್ಲ, ನಮ್ಮಪ್ಪ ಅಮ್ಮನಿಗೆ ಏನು ತಿಳಿಯಲ್ಲ ಅಂತ. ನಮ್ಮನ್ನ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ಸೇರಿಸಿಲ್ಲ ನಿಜ ಆದರೆ ನಾವು ಹೋಗೋ ಸರ್ಕಾರಿ ಶಾಲೆಗೆ ಬಿಷಪ್ ಕಾಟನ್ ಲೆವೆಲ್ ಗೆ ಕನಸು ಕಾಣ ್ತದ್ಲು. ಅಸಲಿಗೆ ಜಗತ್ತಿನ ಶಿಕ್ಷಣ ಪದ್ದತಿಗಳೆಲ್ಲ ಹೀಗೇ ಇರೋದು ಅಂತ ಅವಳು ನಂಬಿದ್ಲು.
ಇಷ್ಟೆಲ್ಲ ಮಾಡಿದ ನಂತರವೂ ಅವಳು ಕನಸು ಕಂಡ ಆ ದಿನಗಳು ಬಾರಲೇ ಇಲ್ಲ. ಮಕ್ಕಳು ದೊಡ್ಡವರಾದ್ರೆ ಕಷ್ಟ ಎಲ್ಲಾ ತೀರುತ್ತೆ ಅನ್ನೋ ಅವಳ ಕನಸು ಮಣ್ಣಾಯ್ತು ಯಾಕಂದ್ರೆ ನಾವು ಟ್ರಿಪ್ ಹೋಗುವಾಗ ಅವಳಿದ್ರೆ ನಮಗೆ ಕಿರಿಕಿರಿ, ಎಂಜಾಯ್ ಮಾಡೋಕೆ ಬರಲ್ಲ ಅವಳಿಗೆ. ಮನೆಯಲ್ಲೋ ಅವಳಿದ್ರೆ ನಮ್ಮ ಪ್ರೈವೆಸಿಗೆ ಧಕ್ಕೆಯಾಗಬಹುದು. ಅವಳಿಗೆ ಏನಾದ್ರು ಕೊಡಿಸೋಣ ಅಂದ್ರೆ ನಮಗೆ ಗೆಳೆಯರಿಗೆ ಕೊಡೋಕೆ ಟೈಮಿಲ್ಲ ಅವಳಿಗ್ಯಾವಾಗ ಕೊಡೋದು. ನಿನ್ನೆ ಮೊನ್ನೆ ಪರಿಚಯವಾದ ಗೆಳೆಯನಿಗೆ ದಿನಕ್ಕೆ ಮೂರುಬಾರಿ ಕರೆ ಮಾಡ್ಲೇಬೇಕು, ಅವಳೊಬ್ಬಳು ಪದೇ ಪದೇ ನೆನಪಾಗ್ತಾಳೆ ಅವಳ ಮಾತು ಕೇಳದಿದ್ರೆ ನಿದ್ರೆ ಬರಲ್ಲ ಅದಕ್ಕೆ ಗೆಳತಿಯೊಬ್ಬಳಿಗೆ ಕರೆ ಮಾಡದೇ ನಾವು ಮಲಗೋದೆ ಇಲ್ಲ. ಆದರೆ ಇಷ್ಟೆಲ್ಲದರ ನಡುವೆ ಅಮ್ಮನಿಗೆ ಯಾವಾಗ ಕಾಲ್ ಮಾಡೋದು. ಯಾವಾಗ ಗಿಫ್ಟ್ ಕೊಡಿಸೋದು.
ಎಂಥಾ ಪಾಪ ಅಲ್ವ ಅವಳು. ಒಮ್ಮೆ ಮನಸಾರೆ ಹೇಗಿದ್ದೀಯಮ್ಮಾ ಅಂದ್ರೆ ಕರಗಿಬಿಡ್ತಾಳೆ. ತೊಡೆಮೇಲೆ ಮಲಗಿದ್ರೆ ಅತ್ತೇಬಿಡ್ತಾಳೆ. ಗಿಫ್ಟ್ ಕೊಟ್ರೆ ಹೇಗೆ ರಿಸೀವ್ ಮಾಡ್ತಾಳೋ ನಮಗೆ ಗೊತ್ತೇ ಇಲ್ಲ. ಯಾಕಂದ್ರೆ ನಾವು ಯಾವತ್ತು ಕೊಟ್ಟೆ ಇಲ್ಲ. ಒಮ್ಮೆ ಟ್ರೈ ಮಾಡಿ ನೋಡಿ ಅಲ್ವಾ ಪಾಪ ಆ ಜೀವ ಅದು ಹೇಗೆ ರಿಯಾಕ್ಟ್ ಮಾಡುತ್ತೋ ನೋಡೇಬಿಡೋಣ.
ಮರ್ಯಾದೆ ಕಡಿಮೆಯಾದ್ರೂ ಪರವಾಗಿಲ್ಲ ಅಮ್ಮನಿಗೆ ಒಂದು ಸಾರಿ ಕೇಳಿ, ನಮ್ಮ ದೊಡ್ಡತನ ಬಿಟ್ಟು ಅಮ್ಮಾ ಐ ಲವ್ ಯೂ ಅಂದುಬಿಡೋಣ ಅಲ್ವಾ,,,,
(ಲೇಖಕರು : ದರ್ಶನ್ ಆರಾಧ್ಯ. ಮೊಬೈಲ್-8495980857)


ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಮ್ಮ ಪೂರ್ವಿಕ ಶಿವನೂ ; ಅವರ ಡುಬಾಕು ಸನಾತನವೂ..

- ಹರ್ಷಕುಮಾರ್ ಕುಗ್ವೆ
ಲಿಂಗವು ದೇವರಲ್ಲ ಶಿವನು ದೇವರಲ್ಲ
ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ ಇಲ್ಲ.
ಶಿವನು ನಮ್ಮ ಪೂರ್ವಿಕ, ಗೌರಿ ಅತವಾ ಶಕ್ತಿ ನಮ್ಮ ಪೂರ್ವಿಕಳು. ಗಂಗೆ ನಮ್ಮ ಬದುಕು. ಶಿವನ ಕೊರಳಿನ ನಾಗ ನಮ್ಮ ಕುಲ. ಲಿಂಗ ಫಲವಂತಿಕೆಯ ಸಂಕೇತವೂ ಹೌದು, ಶಿವ ಶಕ್ತಿಯರ ಸಮಾಗಮದ ಸಂಕೇತವೂ ಹೌದು. ನಮ್ಮ ಜನರಿಗೆ ಸಂಕೇತಗಳು ಶಕ್ತಿಯಾಗಿದ್ದವು, ಪ್ರೇರಣೆಯಾಗಿದ್ದವು. ಡೊಳ್ಳು ಹೊಡೆದು ಕೇಕೆ ಹಾಕಿದಾಗ ಮಳೆ ಬಂದರೆ, ನಮ್ಮ ಡೊಳ್ಳಿನ ಸದ್ದಿನ ಶಕ್ತಿಯಿಂದಲೇ, ನಮ್ಮ ಕೇಕೆಯಿಂದಲೇ ಮಳೆ ಬಂತು ಎಂದು ನಂಬಿದರು. ಇದನ್ನು primitive magic ಪರಿಕಲ್ಪನೆ ಎನ್ನಲಾಗಿದೆ. ನಮ್ಮ ಬಳ್ಳಾರಿಯ ಸಂಗನಕಲ್ಲಿನಲ್ಲಿ 3000 ವರ್ಷಗಳ ಹಿಂದೆ ಕಲ್ಲು ಬಂಡೆಗಳ ಮೇಲೆ ಕೆತ್ತಿದ ಹೋರಿ ಮತ್ತು ಉದ್ದ ಕೊಂಬಿನ ಕೆತ್ತನೆಗಳು ಸಹ ಇಂತಹ ಒಂದು ಆದಿಮ ಮಾಂತ್ರಿಕ ಶಕ್ತಿಯ ಆಚರಣೆಯಾಗಿದೆ.
ನಂಬಿಕೆಗಳನ್ನು ಸಂಸ್ಕೃತಿಯಾಗಿ, ಪರಂಪರೆಯಾಗಿ ಗ್ರಹಿಸಬೇಕೇ ಹೊರತು ದೇವರಾಗಿ ಅಲ್ಲ. ದೇವ ಎಂಬ ಕಲ್ಪನೆಯೇ ದ್ರಾವಿಡರಲ್ಲಿ ಇರಲಿಲ್ಲ. 50 ಸಾವಿರ ವರ್ಷಗಳಿಂದ ಬಂದ ಲಿಂಗ- ಯೋನಿ ಪೂಜೆ, ಗೌರಿ ಪೂಜೆ, 9,000 ವರ್ಷಗಳಿಂದ ಬಂದ ಬೂಮ್ತಾಯಿ ಪೂಜೆ, ಅರಳಿ ಮರದ ಪೂಜೆ, ಐದು ಸಾವಿರ ವರ್ಷಗಳಿಂದ ಬಂದ ಶಿವನ ಪೂಜೆ, ಗಣಪತಿ ಪೂಜೆ, ನಾಗನ ಪೂಜೆ, 4000 ವರ್ಷಗಳಿಂದ ಬಂದ ಗತಿಸಿದ ಹಿರೀಕರ ಪೂಜೆ, ಇದರ ಮುಂದುವರಿಕೆಯಾಗಿಯೇ 2600 ವರ್ಷಗಳ ಹಿಂದೆ ಬುದ್ದ ಗುರುವು ತೀರಿದ ಬಳಿಕ ಅವನ ಅಸ್ತಿಯನ್ನು ಇಟ್ಟ ಸ್ತೂಪಗಳನ್ನು ಪೂಜಿಸಿದೆವು, ದೂಪ ಹಾಕಿದೆವು... ಇದುವೇ ಈ ನೆಲದ ಪೂಜನ ಸಂಸ್ಕತಿಯಾಗಿತ್ತು.
‘ದೇವ’ ಮತ್ತು ಅಸುರ ಇಬ್ಬರೂ ಬಂದಿದ್ದು ಮಧ್ಯ ಏಷ್ಯಾದಿಂದ ಹೊರಟಿದ್ದ ಆರ್ಯರಿಂದಲೇ. ಅವರಿಗೆ ಪೂಜೆ ಗೊತ್ತಿರಲಿಲ್ಲ. ಯಜ್ಞ ಗೊತ್ತಿತ್ತು, ಹೋಮ ಗೊತ್ತಿತ್ತು. ‘ದೇವ’ ಅತವಾ “ದ-ಏವ” ಕೂಡಾ ಮೂಲದಲ್ಲಿ ಆರ್ಯರ ಪೂರ್ವಿಕ ಕುಲ ನಾಯಕರೇ ಆಗಿದ್ದಾರು... ಹೀಗಾಗಿಯೇ ಆರ್ಯ ವೈದಿಕರ ದೇವ ಎಂದರೆ ಅವರ ದಾಯಾದಿಗಳಾಗಿದ್ದ ಪಾರ್ಸಿಯನ್ (ಜೊರಾಸ್ಟ್ರಿಯನ್) ಆರ್ಯ ಅವೆಸ್ತನ್ನರಿಗೆ ಕೆಡುಕಿನ ಸಂಕೇತವಾಗಿತ್ತು. ಹಾಗೇ ಆರ್ಯ ವೈದಿಕರು ಕೆಡುಕು ಎಂದ ಅಸುರ (ಅಹುರ) ಆರ್ಯ ಅವೆಸ್ತನ್ನರ ಪಾಲಿಗೆ “ನಾಯಕ”ನಾಗಿದ್ದ. ಅವರನ್ನು ಅಹುರ ಮಜ್ದಾ ಎಂದು ಕರೆದು ಆರಾದಿಸಿದರು.
ಭಾರತಕ್ಕೆ ಪ್ರವೇಶಿಸಿದ ಬಳಿಕ ಆರ್ಯ ವೈದಿಕರಿಗೆ ಈ ನೆಲದ ಮೊದಲ ನಿವಾಸಿಗಳ ಮೇಲೆ ಯಜಮಾನಿಕೆ ಸ್ತಾಪಿಸಬೇಕಿತ್ತು. ಅದಕ್ಕಾಗಿ ನಮ್ಮಿಂದ ಪೂಜೆಗೊಳ್ಳುತ್ತಿದ್ದ ಪೂರ್ವಿಕರನ್ನು ತಮ್ಮ “ದೇವರು” ಮಾಡಿದರು. ಆ ದೇವರ ಪೂಜೆಗೆ ಅವರೇ ನಿಂತರು. ತಮ್ಮ ಜುಟ್ಟು ಬಿಟ್ಟುಕೊಂಡು ನಮ್ಮ ಜುಟ್ಟು ಹಿಡಿದರು. ನಾವು ಪೂರ್ವಿಕರನ್ನು ಬಿಟ್ಟು ಕೊಟ್ಟು, ಅವರ ಕೈಯಲ್ಲಿ ದೇವರುಗಳ ಪೂಜೆ ನಡೆಯುವಾಗ ನಮ್ಮ ಪೂರ್ವಿಕರಿಗೆ ಗೊತ್ತೇ ಇರದಿದ್ದ ವೇದ ಮಂತ್ರಗಳನ್ನ ಕೇಳಿ ಪುನೀತರಾದೆವು. ಈ ಮಂತ್ರ ಭಾಷೆಯೇ ದೇವರಿಗೆ ಅರ್ಥವಾಗುವುದು ಎಂದು ಪುಂಗಿದ್ದಕ್ಕೆ ತಲೆಯಾಡಿಸಿ ಕೈಮುಗಿದು ಗರ್ಭಗುಡಿಯ ಹೊರಗೆ ಸಾಲಿನಲ್ಲಿ ನಿಂತೆವು. ಮುಂದಿನ 2000 ವರ್ಷಗಳ ಕಾಲ ಗುಲಾಮರಾದೆವು. ಪುರಾಣಗಳನ್ನು ಕೇಳಿದೆವು, ನಂಬಿದೆವು ಮತಿಗೆಟ್ಟೆವು, ಗತಿಗೆಟ್ಟೆವು.
ಇನ್ನೂ ಉಳಿದಿರುವುದೇನು?
ನಾವು ಶಿವನ ವಕ್ಕಲು, ಗೌರಿ- ಗಂಗೆಯರ ಒಕ್ಕಲು. ಅವರು ಇಂದ್ರ ಅಗ್ನಿಯರ ವಕ್ಕಲಾಗಿದ್ದವರು ತಮ್ಮ ದೇವರಿಗೆ ಕಿಮ್ಮತ್ತಿಲ್ಲ ಎಂದರಿತು ಅವರನ್ನೇ ಬಿಟ್ಟರು. ಈಗ ಹೇಳುತ್ತಾರೆ ನಾವೇ ಸನಾತನರು ಎಂದು! ಅವರ ಡುಬಾಕು ಸನಾತನದಲ್ಲಿ ನಮ್ಮತನ ಕಳೆದುಕೊಂಡ “ಶೂದ್ರ ಮುಂಡೇಮಕ್ಕಳಾಗಿ”, ಅವರಿಗಾಗಿ ಬಾಳು ಬದುಕು ಹಾಳುಮಾಡಿಕೊಂಡು, ಅವರ ಹೋಮ ಹವನ ಮಾಡಿಸಿ, ನಮ್ಮ ಉಳಿಕೆ ಕಾಸು ಕಳೆದುಕೊಂಡು, ಗೌರವ ಗನತೆ ಕಳೆದುಕೊಳ್ಳುವುದೇ ಇವತ್ತಿನ ಸನಾತನ!
– ಹರ್ಷಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಗಾಯದ ಬೆಳಕು

- ಕಾವ್ಯ ಎಂ ಎನ್, ಶಿವಮೊಗ್ಗ
ನೋವ ಹಾಡುವುದನ್ನೇ ಕಲಿತೆ
ಬದುಕು ಬಿಕ್ಕಿತು..
ಗಾಯದ ಬೆಳಕು
ಹೊತ್ತಿ ಉರಿದು
ತಮವೆಲ್ಲ ತಣ್ಣಗಾದಾಗ
ಚುಕ್ಕಿಬೆರಳಿಗೆ ಮುಗಿಲು ತೋರಿದೆ
ಕೆಂಡದಂತ ಹಗಲು ನೆತ್ತಿಪೊರೆಯಿತು.
ಅದ್ಯಾವ ಕಾಡು ಮಲ್ಲಿಗೆಯ
ಹಾಡು ಕರೆಯಿತೊ ಏನೊ
ಎದೆ ಹಾದಿಯ ತುಂಬೆಲ್ಲಾ ಬೇಸಿಗೆ.
ಒಡಲು ತುಂಬಿ ಕಡಲು
ಜೀಕಿ ದಡ ಮುಟ್ಟಿದ
ಕಪ್ಪೆಚಿಪ್ಪಿನೊಳಗೆಲ್ಲಾ
ಸ್ವಾತಿ ಮುತ್ತು…
ಓಡುವ ಆಮೆಯಂತ ಗಡಿಯಾರ
ಮೈತುಂಬ ಮುಳ್ಳ ಹೊತ್ತು
ಸಾಗಿಸುತ್ತಿದೆ ಭವದ ಭಾರ.
ನನ್ನ ನಿನ್ನ ರೂಹು ತಿಳಿದ
ಕಾಡು ಗಿಡ ಮರ ಬೆಟ್ಟ ಬಯಲೆಲ್ಲಾ
ಕಥೆ ಕಟ್ಟಿ ಪಿಸುಗುಡುತ್ತಿವೆ
ಉಟ್ಟ ಉಸಿರಿನ ಬಟ್ಟೆ ಕಳಚಿದ ಮೇಲೆ
ಎಲ್ಲವೂ ಬೆತ್ತಲೆ…
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
2 ಕೋಟಿ 20 ಲಕ್ಷ ಜನ, ಪಡಿತರ ಚೀಟಿಯ ಪ್ರಯೋಜನ ಪಡೆಯುತ್ತಿಲ್ಲ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ
-
ದಿನದ ಸುದ್ದಿ5 days ago
ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಿದ ಶಾಸಕ ಕೆ.ಎಸ್.ಬಸವಂತಪ್ಪ
-
ದಿನದ ಸುದ್ದಿ7 days ago
ಅನ್ನಭಾಗ್ಯ ಯೋಜನೆ | ನೇರ ನಗದು ವರ್ಗಾವಣೆ ಬದಲು ಅಕ್ಕಿ ವಿತರಣೆ
-
ದಿನದ ಸುದ್ದಿ2 days ago
ನೆಲಮಂಗಲ ಸಮೀಪದ ದಾಸನಪುರದಲ್ಲಿ 306 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕೃಷಿ ಮಾರುಕಟ್ಟೆ ನಿರ್ಮಾಣ : ಸಚಿವ ಶಿವಾನಂದಪಾಟೀಲ್
-
ದಿನದ ಸುದ್ದಿ5 days ago
ಬೆಂವಿವಿ | ಸಂವಹನ ವಿದ್ಯಾರ್ಥಿಗಳಿಂದ ಹೋಳಿ ಸಂಭ್ರಮ
-
ದಿನದ ಸುದ್ದಿ1 day ago
ಮಾಸಾಶನ ಪಡೆಯುತ್ತಿರುವ ಕಲಾವಿದರು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ
-
ದಿನದ ಸುದ್ದಿ2 days ago
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ರಾಜ್ಯದ ಶಿಲಾ ಶಾಸನಗಳು ಸೇರ್ಪಡೆ
-
ದಿನದ ಸುದ್ದಿ4 days ago
ಕವಿತೆ | ಮತ್ತಿನ ಕುಣಿಕೆ