ಭಾವ ಭೈರಾಗಿ
ಅಮ್ಮನಿಗೂ ಚೂರು ಅಟೆನ್ಷನ್ ಕೊಡಬಹುದಾ?
ನಿನಗ್ಯಾಕಮ್ಮ? ಇದೆಲ್ಲ ನಿನಗೆ ಅರ್ಥವಾಗಲ್ಲ ಸುಮ್ಮನಿರು… ನಾವು ನೀವು ಸೇರಿದಂತೆ ಬಹುತೇಕ ಮಕ್ಕಳು ಅವರಮ್ಮ ಕೇಳುವ ಎಲ್ಲಾ ಪ್ರಶ್ನೆಗಳಿಗೆ ನೀಡುವ ಕಾಮನ್ ಉತ್ತರ ಇದು.
ಹೌದು ಅವಳಿಗೇನು ತಿಳಿಯುತ್ತೆ ಅಲ್ವಾ, ಟೈಮ್ ಟು ಟೈಮ್ ಅಡುಗೆ ಮಾಡೋದು, ಮನೆಯವರನ್ನೆಲ್ಲ ಕರೆದು ಬಡಿಸೋದು ನೀವು ಬೇಡ ಅಂದ್ರು ನಿಮ್ಮಿಂದ ಬೈಸಿಕೊಂಡಾದರೂ ನಿಮಗೆ ತಿನ್ನಿಸೋದು ಇಷ್ಟೆ ತಾನೆ ಅವಳಿಗೆ ಗೊತ್ತಿರೋದು. ಮನೆಯವರೆಲ್ಲ ಹಬ್ಬ ಮಾಡ್ತಿದ್ರೆ ಅವಳು ಅದೇನು ಮಾಡ್ತಿರ್ತಾಳೋ ಯಾರು ಗಮನಿಸಿರಲ್ಲ, ಅಸಲಿಗೆ ಅವಳು ಅಡುಗೆಗೆ ತರಕಾರಿ ಹೆಚ್ಚೋದು ಒಬ್ಬಳೆ ಕಷ್ಟ ಪಟ್ಟು ಅಡುಗೆ ಮಾಡೋದು ಕೊನೆಗೆ ಸರಿಯಾದ ಸಮಯಕ್ಕೆ ನಮಗೆಲ್ಲ ತಂದು ಬಡಿಸೋದು ಮಾಡ್ತಿರ್ತಾಳೆ.
ಅದಾದ ನಂತರ ಮತ್ತೆ ನಾವು ಎಂಜಾಯ್ ಮಾಡೋ ದಾರಿ ಯಾವುದು ಅಂತ ಹುಡುಕುವ ಸಮಯಕ್ಕೆ ಅವಳು ಪಾತ್ರೆ ತೊಳೆದು ನೀರು ತುಂಬಿಸಲು ಓಡಾಡ್ತಿರ್ತಾಳೆ. ಅವಳಿಗೆ ಹಬ್ಬಕ್ಕಾಗಿ ಕಾಯಲು ಇರುವ ಒಂದೇ ದಾರಿ ಅಂದ್ರೆ ಮಕ್ಕಳನ್ನೆಲ್ಲಾ ಒಮ್ಮೆ ನೋಡಿಬಿಡಬಹುದಲ್ಲ ಎಂಬ ಆಸೆ ಅಷ್ಟೆ.
ನೆನಪಿದ್ಯಾ ನಿಮಗೆ ಅವತ್ತು ನಾವಿನ್ನು ಚಿಕ್ಕವರಾಗಿದ್ವಿ, ಇದೇ ಹಬ್ಬಗಳು ಆಗ ಬಂದ್ರೆ ಅಮ್ಮ ಹೊಸ ಬಟ್ಟೆ ತರಲು ಹಣ ಹೊಂದಿಸುವ ಬಗ್ಗೆ ಚಿಂತಿಸ್ತಿದ್ಲು. ಅದು ಅವಳಿಗಾಗಿ ಅಲ್ಲ ನಮಗಾಗಿ. ಅವತ್ತು ನೀನು ಹೊಸ ಬಟ್ಟೆ ತಗೊಳಮ್ಮಾ ಅಂತ ಹೇಳುವಷ್ಟು ನಾವಿನ್ನು ಬೆಳದಿರಲಿಲ್ಲ. ಇವತ್ತು ಬೆಳೆದಿದ್ರೂ ಹೇಳಲ್ಲ. ಒಂದು ವೇಳೆ ನಾವು ಹಾಗೆ ಕೇಳಿದ್ರು ಅವಳು ಹೇಳ್ತಿದ್ದ ಉತ್ತರ ನನಗ್ಯಾಕಪ್ಪಾ ತುಂಬಾ ಇದಾವೆ, ನೀನು ಚೆನ್ನಾಗಿರ್ಬೇಕು ಅಷ್ಟೆ ಅಂತ ಹೇಳ್ತಿದ್ಲು. ಹೀಗೆ ಅವಳು ನಂದಿನ್ನೇನು ನನ್ನ ಮಗ ಚೆನ್ನಾಗಿರಬೇಕು ಅಂತ ನಮಗಾಗಿ ತನ್ನ ಖುಷಿಗಳನ್ನ ತ್ಯಾಗ ಮಾಡುವಾಗ ಅವಳಿಗೆ ವಯಸ್ಸೆಷ್ಟಾಗಿತ್ತು ಗೊತ್ತಾ, ಕೇವಲ ಇಪ್ಪತ್ತೈದರಿಂದ ಮುವತ್ತು. ಅಂದರೆ ಯಾವ ವಯ್ಯಸ್ಸನ್ನ ನಾವೆಲ್ಲ ಎಂಜಾಯ್ ಮಾಡೋಕೆ ಸರಿಯಾದ ವಯಸ್ಸು ಅಂತ ಸುತ್ತುತ್ತಿದ್ದೇವೋ ಅದೇ ವಯಸ್ಸು.
ಹೌದು ಅವಳಿಗೇನು ಗೊತ್ತಾಗುತ್ತೆ ಅಲ್ವಾ,,, ಓದಿರೋದು ಅಷ್ಟಕ್ಕಷ್ಟೆ, ಫೀಲಿಂಗ್ಸ್ ಅಂತು ಅರ್ಥವಾಗೋ ವಯಸ್ಸಲ್ಲ. ಆದರೆ ಇದೇ ಇಪ್ಪತ್ತೈದು , ಮೂವತ್ತು ವರ್ಷಗಳ ಹಿಂದೆ ನಮಗೇನು ಗೊತ್ತಾಗ್ತಿತ್ತು. ತೀರಾ ಮರ,ಗಿಡ, ಬಸ್ಸು, ವಿಮಾನಗಳನ್ನ ನೋಡಿ ಅಮ್ಮ ಅದೇನು ಅಂತ ಕೇಳುವ ಮಟ್ಟದಲ್ಲಿದ್ವಿ. ಅಮ್ಮ ನಮಗೆ ಊಟ ಮಾಡು ಅಂದಾಗ ಮಾಡದೇ ಇದ್ರೆ ಏನಾಗುತ್ತೆ ಅಂತ ಕೇಳುವಷ್ಟು ದಡ್ಡರಾಗಿದ್ವಿ. ಗೊತ್ತಿರಲಿ ಗೆಳೆಯರೆ ಅವತ್ತೆಲ್ಲ ಅಮ್ಮ ಅದನ್ನು ನಮಗೆ ವಿವರಿಸ್ಲಿಕ್ಕೆ ಬೇಜಾರೇ ಮಾಡಿಕೊಂಡಿರಲಿಲ್ಲ. ಇದಕ್ಕೆ ಕೆರೆ ಅಂತಾರೆ ಇಲ್ಲಿ ತಗ್ಗಿರೋದರಿಂದ ಇಲ್ಲಿ ನೀರು ತುಂಬಿಕೊಳ್ಳುತ್ತೆ, ಮಳೆಯಲ್ಲಿ ನೆನೆದರೆ ನಿನಗೆ ಹುಷಾರು ತಪ್ಪತ್ತೆ.
ದೀಪ ಮುಟ್ಟಿದರೆ ಕೈಸುಡುತ್ತೆ ಅಂತೆಲ್ಲ ತಾಳ್ಮೆಯಿಂದ ಹೇಳಿಕೊಟ್ಟ ಅವಳಿಗೆ ನಾವು ಇವತ್ತು ಹೇಳೋ ಒಂದೇ ಮಾತು ನಿನಗೇನು ಗೊತ್ತಾಗಲ್ಲಮ್ಮ ಅಂತ.
ಅಸಲಿಗೆ ನಮಗೆ ಅಂತನೇ ಕೆಲವು ದಿನಗಳಿವೆ. ನಮ್ಮ ಹುಟ್ಟುಹಬ್ಬದ ದಿನ, ಮದುವೆ ದಿನ, ಹೊಸವರ್ಷದ ದಿನ, ಹಬ್ಬ-ಜಾತ್ರೆಗಳಲ್ಲಿ ನಾವೆ ಸೆಂಟರ್ ಆಫ್ ಅಟ್ರಾಕ್ಷನ್. ಅಮ್ಮ ಯಾವಾಗಲೂ ಸೈಡ್ಲೈನ್. ಅವಳು ಹುಟ್ಟಿರೋದೇ ಸೈಡ್ ಲೈನ್ ನಲ್ಲಿರೋಕೆ ಅಂದುಕೊಂಡಿದ್ದೇವೆ, ಅವಳಿಗೂ ಒಂದು ಮನಸಿದೆ. ಆಸೆ ಆಕಾಂಕ್ಷೆಗಳು ಅವಳಲ್ಲೂ ಇರಬಹುದು ಅನ್ನೋ ಸಣ್ಣ ಯೋಚನೆಯನ್ನೂ ನಾವು ಯಾವತ್ತೂ ಮಾಡಿಲ್ಲ.
ಅವಳ ಹುಟ್ಟು ಹಬ್ಬ ಯಾರಿಗಾದರೂ ನೆನಪಿದ್ಯಾ,,, ಅಜ್ಜಿ ಹತ್ರ ಕೇಳಿದ್ರೆ ಅದೇ ನಮ್ಮೂರಲ್ಲಿ ದೊಡ್ಡ ಕಾಲರ ಬಂದಿತ್ತಲ್ಲ ಅವಾಗ ಹುಟ್ಟಿದ್ಲು, ಇಂದಿರಾಗಾಂಧಿ ಚಿಕ್ಕಮಗಳೂರಲ್ಲಿ ಎಲೆಕ್ಷನ್ ನಿಂತಾಗ ನಿಮ್ಮಮ್ಮ ಹುಟ್ಟಿದ್ದು, ಪ್ಲೇಗ್ ಬಂದು ಊರಿಗೂರೆ ಸತ್ತಾಗ ನಿಮ್ಮಮ್ಮನ ಬಾಣಂತಿ ನಾನು ಅಂತ ಬೇರೆ ಬೇರೆ ಕತೆ ಹೇಳ್ತಾರೆ. ಅಲ್ಲಿಗೆ ಅಮ್ಮನ ಬರ್ತಡೆ ಕತೆ ಮುಗಿದೋಯ್ತು. ಮದುವೆಯಂತು ಆ ಬಡತನದಲ್ಲಿ ಹೇಗೆ ಆಯ್ತು ಅಂತ ಯಾರಿಗೂ ಗೊತ್ತಿಲ್ಲ. ಅಲ್ಲಿಗೆ ನಾವು ಹುಟ್ಟಿದ್ವಿ, ಅಲ್ಲಿಂದ ಅವರ ಜೀವನ ಜೀವ ಎರಡೂ ನಾವೆ. ಅವಳ ಕನಸುಗಳೆಲ್ಲ ನಮ್ಮ ಮೇಲೆಯೇ ಕಟ್ಟಿದವಾಗಿವೆ, ಆದರೆ ಇವತ್ತು ನಾವು ಏನಾದರೂ ಸಾಧಿಸಿದ್ರೆ ಹೇಳೋ ಮಾತು ನಮಗ್ಯಾರು ಸಪೋರ್ಟ್ ಮಾಡೋರಿರಲಿಲ್ಲ, ನಮ್ಮಪ್ಪ ಅಮ್ಮನಿಗೆ ಏನು ತಿಳಿಯಲ್ಲ ಅಂತ. ನಮ್ಮನ್ನ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ಸೇರಿಸಿಲ್ಲ ನಿಜ ಆದರೆ ನಾವು ಹೋಗೋ ಸರ್ಕಾರಿ ಶಾಲೆಗೆ ಬಿಷಪ್ ಕಾಟನ್ ಲೆವೆಲ್ ಗೆ ಕನಸು ಕಾಣ ್ತದ್ಲು. ಅಸಲಿಗೆ ಜಗತ್ತಿನ ಶಿಕ್ಷಣ ಪದ್ದತಿಗಳೆಲ್ಲ ಹೀಗೇ ಇರೋದು ಅಂತ ಅವಳು ನಂಬಿದ್ಲು.
ಇಷ್ಟೆಲ್ಲ ಮಾಡಿದ ನಂತರವೂ ಅವಳು ಕನಸು ಕಂಡ ಆ ದಿನಗಳು ಬಾರಲೇ ಇಲ್ಲ. ಮಕ್ಕಳು ದೊಡ್ಡವರಾದ್ರೆ ಕಷ್ಟ ಎಲ್ಲಾ ತೀರುತ್ತೆ ಅನ್ನೋ ಅವಳ ಕನಸು ಮಣ್ಣಾಯ್ತು ಯಾಕಂದ್ರೆ ನಾವು ಟ್ರಿಪ್ ಹೋಗುವಾಗ ಅವಳಿದ್ರೆ ನಮಗೆ ಕಿರಿಕಿರಿ, ಎಂಜಾಯ್ ಮಾಡೋಕೆ ಬರಲ್ಲ ಅವಳಿಗೆ. ಮನೆಯಲ್ಲೋ ಅವಳಿದ್ರೆ ನಮ್ಮ ಪ್ರೈವೆಸಿಗೆ ಧಕ್ಕೆಯಾಗಬಹುದು. ಅವಳಿಗೆ ಏನಾದ್ರು ಕೊಡಿಸೋಣ ಅಂದ್ರೆ ನಮಗೆ ಗೆಳೆಯರಿಗೆ ಕೊಡೋಕೆ ಟೈಮಿಲ್ಲ ಅವಳಿಗ್ಯಾವಾಗ ಕೊಡೋದು. ನಿನ್ನೆ ಮೊನ್ನೆ ಪರಿಚಯವಾದ ಗೆಳೆಯನಿಗೆ ದಿನಕ್ಕೆ ಮೂರುಬಾರಿ ಕರೆ ಮಾಡ್ಲೇಬೇಕು, ಅವಳೊಬ್ಬಳು ಪದೇ ಪದೇ ನೆನಪಾಗ್ತಾಳೆ ಅವಳ ಮಾತು ಕೇಳದಿದ್ರೆ ನಿದ್ರೆ ಬರಲ್ಲ ಅದಕ್ಕೆ ಗೆಳತಿಯೊಬ್ಬಳಿಗೆ ಕರೆ ಮಾಡದೇ ನಾವು ಮಲಗೋದೆ ಇಲ್ಲ. ಆದರೆ ಇಷ್ಟೆಲ್ಲದರ ನಡುವೆ ಅಮ್ಮನಿಗೆ ಯಾವಾಗ ಕಾಲ್ ಮಾಡೋದು. ಯಾವಾಗ ಗಿಫ್ಟ್ ಕೊಡಿಸೋದು.
ಎಂಥಾ ಪಾಪ ಅಲ್ವ ಅವಳು. ಒಮ್ಮೆ ಮನಸಾರೆ ಹೇಗಿದ್ದೀಯಮ್ಮಾ ಅಂದ್ರೆ ಕರಗಿಬಿಡ್ತಾಳೆ. ತೊಡೆಮೇಲೆ ಮಲಗಿದ್ರೆ ಅತ್ತೇಬಿಡ್ತಾಳೆ. ಗಿಫ್ಟ್ ಕೊಟ್ರೆ ಹೇಗೆ ರಿಸೀವ್ ಮಾಡ್ತಾಳೋ ನಮಗೆ ಗೊತ್ತೇ ಇಲ್ಲ. ಯಾಕಂದ್ರೆ ನಾವು ಯಾವತ್ತು ಕೊಟ್ಟೆ ಇಲ್ಲ. ಒಮ್ಮೆ ಟ್ರೈ ಮಾಡಿ ನೋಡಿ ಅಲ್ವಾ ಪಾಪ ಆ ಜೀವ ಅದು ಹೇಗೆ ರಿಯಾಕ್ಟ್ ಮಾಡುತ್ತೋ ನೋಡೇಬಿಡೋಣ.
ಮರ್ಯಾದೆ ಕಡಿಮೆಯಾದ್ರೂ ಪರವಾಗಿಲ್ಲ ಅಮ್ಮನಿಗೆ ಒಂದು ಸಾರಿ ಕೇಳಿ, ನಮ್ಮ ದೊಡ್ಡತನ ಬಿಟ್ಟು ಅಮ್ಮಾ ಐ ಲವ್ ಯೂ ಅಂದುಬಿಡೋಣ ಅಲ್ವಾ,,,,
(ಲೇಖಕರು : ದರ್ಶನ್ ಆರಾಧ್ಯ. ಮೊಬೈಲ್-8495980857)
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಮಣ್ಣ ಮಕ್ಕಳು
- ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.
ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.
ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು
ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.
ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.
- ಬಸವರಾಜ ಹೂಗಾರ
ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.
ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.
- ಡಾ.ರಹಮತ್ ತರೀಕೆರೆ
ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.
- ಬಿ.ಶ್ರೀನಿವಾಸ,ಕೃತಿ ಲೇಖಕ
ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.
ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.
“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.
ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.
ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.
ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ
- ಡಾ.ರಾಮಚಂದ್ರ ಹಂಸನೂರು, ಬೆಟಗೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು